ಮಕ್ಕಳಸಂಗಾತಿ
ಸುವಿಧಾ ಹಡಿನಬಾಳ
ಮಕ್ಕಳ ಕುರಿತು
ಅತಿಮುದ್ದು ಕಾಳಜಿ
ಅನಾಹುತಕ್ಕೆಕಾರಣವಾಗುತ್ತದೆ-

ಹೆತ್ತವರಿಗೆ ಹೆಗ್ಗಣ ಮುದ್ದು ಎಂಬುದು ಜನಪದ ಗಾದೆ ಮಾತು. ಇದು ಎಲ್ಲಾ ಕಾಲಕ್ಕೂ ಅನ್ವಯವಾಗುವ ಮಾತು ಆದರೆ ಹಿಂದಿಗಿಂತ ಇಂದು ಎಲ್ಲವೂ ತುಸು ಹೆಚ್ಚೇ ಅನ್ನಿಸುತ್ತದೆ ; ಅದಕ್ಕೆ ಕಾರಣವೂ ಇಲ್ಲದಿಲ್ಲ. ಹಿಂದೆ ಹೆತ್ತವರಿಗೆ ಕೈ ತುಂಬಾ ಕೆಲಸಗಳಿದ್ದವು ಮನೆ ತುಂಬಾ ಮಕ್ಕಳಿದ್ದವು. ಹೀಗಾಗಿ ಪ್ರತಿ ಮಗುವಿನ ಬಗೆಗೆ , ಅವರ ಸಣ್ಣ ಸಣ್ಣ ಬೇಕು ಬೇಡ ಗಳಿಗೆ ಸ್ಪಂದಿಸುವಷ್ಟು ಸಮಯ ತಾಳ್ಮೆ ಹೆತ್ತವರಿಗೆ ಇರಲಿಲ್ಲ. ಮಕ್ಕಳು ಹೇಗೋ ಅವರಿವರ ಮನೆಯಲ್ಲಿ ಬೆಳೆದು ದೊಡ್ಡವರಾಗಿ ಬದುಕು ಕಟ್ಟಿಕೊಂಡರು.
ಬದಲಾದ ಕಾಲಘಟ್ಟದಲ್ಲಿ ಪ್ರತಿ ಮನೆಯಲ್ಲಿ ಎರಡು ತಪ್ಪಿದರೆ ಒಂದು ಮಕ್ಕಳಿರುವುದು ಸರ್ವೇಸಾಮಾನ್ಯ. ಇಂದು ಸಾಮಾನ್ಯವಾಗಿ ಎಲ್ಲರ ಜೀವನಮಟ್ಟ ಉನ್ನತೇಕರಿಸಲ್ಪಟ್ಟಿದೆ ಆರ್ಥಿಕವಾಗಿ ತಕ್ಕಮಟ್ಟಿಗಿರುವ ಪಾಲಕರು ತಾವು ಅನುಭವಿಸಿದ ಬಡತನ , ಸಂಕಷ್ಟ ತಮ್ಮ ಮಕ್ಕಳ ಅನುಭವಕ್ಕೆ ಬರಬಾರದು ಎಂದು ಅತಿ ಕಾಳಜಿ ವಹಿಸುವುದು ಒಂದೆಡೆಯಾದರೆ ಮಕ್ಕಳ ಮೇಲೆ ಶೈಕ್ಷಣಿಕವಾಗಿ ನಿರೀಕ್ಷೆಗಳ ಮಹಾಪೂರವನ್ನೇ ಹೊರಿಸಿ ಒತ್ತಡ ಸೃಷ್ಟಿಸುತ್ತಿರುವುದು ಇನ್ನೊಂದು ಬಗೆಯ ಆತಂಕ. ಇದಕ್ಕಿಂತಲೂ ಮಹಾ ಅಪಾಯಕರವಾದದ್ದು ತಮ್ಮ ಮಕ್ಕಳು ಏನು ಮಾಡಿದರೂ ಸರಿ, ಅವರು ಹೇಳಿದ್ದೆ ಕರೆ ಎಂದು ಮಕ್ಕಳು ಮಾಡಿದ ತಪ್ಪನ್ನೂ ಕೂಡ ಸಮರ್ಥನೆ ಮಾಡಿಕೊಂಡು ವಕಾಲತ್ತು ವಹಿಸುವ, ಮಕ್ಕಳು ಮಕ್ಕಳ ನಡುವಿನ ಸಣ್ಣ ಪುಟ್ಟ ಕೋಳಿ ಜಗಳಕ್ಕೂ ಮೂಗು ತೂರಿಸುವ , ತಮ್ಮ ಮಕ್ಕಳದ್ದೇನೂ ತಪ್ಪೇ ಇಲ್ಲ, ಬೇರೆ ಮಗು ಮಾಡಿದ್ದೇ ತಪ್ಪು ಎಂದು ಕಡ್ಡಿಯನ್ನು ಗುಡ್ಡ ಮಾಡುವ ಇತ್ತೀಚಿನ ಪಾಲಕರ ನಡೆ ಮಕ್ಕಳ ದಾರಿ ತಪ್ಪಿಸುತ್ತಿದೆ!! ಮಕ್ಕಳು ಮತ್ತೆ ಒಂದಾಗುತ್ತವೆ; ಇವರು ಕಿತ್ತಾಡುತ್ತಾರೆ!
ಇದಕ್ಕೆ ಒಂದು ಜ್ವಲಂತ ಅನುಭವ ಕಥನ : ಸುಮಾರು 25 ವರ್ಷಗಳ ಹಿಂದೆ ಮದುವೆಯಾದ ಹೊಸದರಲ್ಲಿ ವೃತ್ತಿ ನಿಮಿತ್ತ ಪರ ಊರಲ್ಲಿ ಒಂದು ಮನೆಯಲ್ಲಿ ಬಾಡಿಗೆಗಿದ್ದೆವು. ಆ ಮನೆ ಈಗಿನಂತೆ ಬಂದೋವಸ್ಥಾದ ಬಾಗಿಲು ಕಿಟಕಿಗಳನ್ನು ಹೊಂದಿಲ್ಲದ ಮನೆ. ಹಿಂಬಾಗಿಲು ಕೈ ಹಾಕಿ ಚಿಲಕ ತೆಗೆದು ಒಳಗೆ ಬರಬಹುದಾದಷ್ಟು ಸುಲಲಿತವಾಗಿತ್ತು. ಒಳಬಾಗಿಲು ಬೇರೆ ಇತ್ತು .ಅದೊಂದು ಶನಿವಾರ ಮಧ್ಯಾಹ್ನ ಊಟ ಮಾಡಿ ತುಸು ಅಡ್ಡಾಗಿದ್ದೆವು ಹಿಂಬಾಗಿಲನ್ನು ಸರಿಸಿ ಒಂದು ಮಗು ಒಳಬಂದು ಬ್ಯಾಗನ್ನು ತಡಕಾಡುತ್ತಿತ್ತು! ಗೋಡೆಯ ಮೇಲಿನ ಬಿಸಿಲ ಜಳದಲ್ಲಿ ಆ ಮಗುವಿನ ಪ್ರತಿಬಿಂಬ ಕಾಣಿಸಿತು; ತಕ್ಷಣ ಎದ್ದು ಹಿಂಬಾಲಿಸಿದರೆ ಮಗು ಗುಡ್ಡ ಹತ್ತಿ ಓಡಿಹೋಯಿತು ! ಮಗು ಯಾರೆಂಬುದು ಕೂಡ ನಮ್ಮ ಗಮನಕ್ಕೆ ಬಂತು. ಇಂತಹ ಸಣ್ಣಪುಟ್ಟ ಕಳ್ಳತನಗಳು ಈ ಹಿಂದೆಯೂ ಕೂಡ ಆ ಮನೆಯಲ್ಲಿ ಉಂಟಾಗಿದ್ದವು, ಆದರೆ ಯಾರೆಂದು ಪುರಾವೆ ಸಿಕ್ಕಿರಲಿಲ್ಲ ಈ ಬಾರಿ ಸಾಕ್ಷಿ ಸಮೇತ ಮಗು ಸಿಕ್ಕಿ ಬಿದ್ದಿದ್ದರಿಂದ ಹೆತ್ತವರಿಗೆ ವಿಷಯ ತಿಳಿಸಿ ಬರೋಣ ಎಂದು ಹೋದೆವು; ಆದರೆ ಆಶ್ಚರ್ಯ ! ಆ ಹೆತ್ತವರು ತಮ್ಮ ಮಗುವಿನ ಪರ ವಕಾಲತ್ತು ವಹಿಸಿಕೊಂಡು’ ನಮ್ಮ ಮಕ್ಕಳು ಅಂತವರಲ್ಲ ,ಬೇಕಾದರೆ ನೀವು ರೂಮ್ ಖಾಲಿ ಮಾಡಬಹುದು’ ಎಂದು ಧ್ವನಿ ಏರಿಸಿದರು. ಮುಂದೆ ಮಾತನಾಡಲು ನಮಗೆಲ್ಲಿ ದಾರಿ?? ಇರಲಿ ಬಿಡಿ ಎಂದು ಸುಮ್ಮನಾದೆವು.
ಇದಾಗಿ ಐದಾರು ವರ್ಷ ಕಳೆಯುವುದರೊಳಗೆ ಮಗು ಪ್ರಾಯದ ಹಂತ ತಲುಪಿತ್ತು.ಮಗುವಿನ ಈ ಗುಣ ಬಹುಶಹ ತನ್ನಷ್ಟಕ್ಕೆ ಬೆಳೆಯುತ್ತಲಿತ್ತು. ಅದೊಂದು ದಿನ ಮಗು ಮನೆಯಲ್ಲಿ ಅಪ್ಪನ ಡ್ರಾವರ್ ನಲ್ಲಿದ್ದ ಒಂದಿಷ್ಟು ಹಣ ಕಳ್ಳತನ ಮಾಡಿ ಪಕ್ಕದ ಮನೆ ಮಗುವಿನೊಂದಿಗೆ ಮನೆ ಬಿಟ್ಟು ಓಡಿಹೋಗಿತ್ತು! ಸಂಜೆಯಾಗುತ್ತಲೇ ಮಕ್ಕಳು ಮನೆಯಲ್ಲಿ ಇಲ್ಲದ್ದಕ್ಕೆ ಹೆತ್ತವರ ಆತಂಕ ಹೇಳತೀರದು! ಆ ಕ್ಷಣಕ್ಕೆ ಅದೇ ತಾಯಿಯ ಬಾಯಲ್ಲಿ ಬಂದ ಮಾತು ‘ ಅಕಸ್ಮಾತ್ ಗೋದ್ರೆಜ್ ಬಾಗಿಲು ತೆಗೆದಿದ್ದರೆ ಇದ್ದು ಬಿದ್ದ ಬಂಗಾರವನ್ನೆಲ್ಲಾ ಕದಿದು ಓಡಿ ಹೋಗುತ್ತಿತ್ತು ‘ ಎಂಬ ಮಾತುಗಳು ನನಗೆ ಹಿಂದಿನ ಘಟನೆ ಮತ್ತು ಇದೇ ಹೆತ್ತವರು ಆಡಿದ ಖಾರದ ಮಾತುಗಳನ್ನು ನೆನಪಿಸಿತು! ಆನಂತರ ಮಕ್ಕಳನ್ನು ಹುಡುಕಿ ಮನೆಗೆ ತರುವಲ್ಲಿ ಹೆತ್ತವರ ಪ್ರಾಣವೇ ಹಾರಿ ಹೋದಂತಿತ್ತು ; ಇದು ಸ್ವಯಂಕೃತ ಅಪರಾಧವಲ್ಲದೇ ಮತ್ತೇನು?
ಒಂದು ಕಾಲವಿತ್ತು ಹೆತ್ತವರಿಗೂ ಗುರು ಹಿರಿಯರೆಂದರೆ ವಿಧೇಯತೆ, ಭಯ ಭಕ್ತಿ . ಶಿಕ್ಷಕರು ಏನಾದರೂ ಹೊಡೆಯಲಿ, ಬೈಯಲಿ’ ನೀನು ಮಾಡಿದ್ದೆ ತಪ್ಪು, ಸರಿಯಾಗಬೇಕು ಮತ್ತೆರಡು ಏಟು ಬಾರಿಸಲು ಹೇಳುತ್ತೇನೆ’ ಎಂದು ಮಗುವನ್ನೇ ಗದರುತ್ತಿದ್ದ ಕಾಲ, ಇಂದು ಇದಕ್ಕೆ ತದ್ವಿರುದ್ಧವಾಗಿ ಶಿಕ್ಷಣದಲ್ಲಿನ ಉದಾರೀಕರಣ, ಶಿಶು ಕೇಂದ್ರಿತ ವ್ಯವಸ್ಥೆಯಲ್ಲಿ ಮಗುವಿಗೆ ನೀಡಲಾಗುತ್ತಿರುವ ಅತಿಯಾದ ಸ್ವಾತಂತ್ರ್ಯ ಮನೆಯಲ್ಲಿನ ಅತೀ ಸಲುಗೆ,, ಸೌಲಭ್ಯಗಳು, ಯಾವ ಮಟ್ಟಕ್ಕೆ ಶಿಕ್ಷಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರೆ ಮಕ್ಕಳನ್ನು ನಿಭಾಯಿಸುವುದು ಬಹಳ ದೊಡ್ಡ ಸವಾಲಾಗಿದೆ. ಮನೆಯಲ್ಲಿ ಅತಿ ಮುದ್ದು, ಕೇಳಿದ್ದನ್ನೆಲ್ಲ ತಕ್ಷಣವೇ ತಂದು ಕೊಡುವ ಅಪ್ಪಂದಿರು, ತಾವೇನು ಮಾಡಿದರು ಅಮ್ಮಂದಿರು ಬಂದು ಶಿಕ್ಷಕರನ್ನೇ ಪ್ರಶ್ನಿಸುತ್ತಾರೆ ಎಂಬ ಒಳಸುಳಿವು ಇವೆಲ್ಲವುಗಳಿಂದಾಗಿ ಮಕ್ಕಳು ಒಂದು ಅರ್ಥದಲ್ಲಿ ಶಿಕ್ಷಕರ ವಿರುದ್ಧವೇ ಗೂಬೆ ಕೂರಿಸುವ ಮನಸ್ಥಿತಿಗಳಿದಿದ್ದಾರೆ! ಚಿಕ್ಕ ಚಿಕ್ಕ ವಿಷಯವನ್ನು ಕೂಡ ಮನೆಗೆ ಹೋಗಿ ಅಪ್ಪ ಅಮ್ಮನ ಬಳಿ ಹೇಳಿಕೊಳ್ಳುತ್ತವೆ ; ಕೆಲವೊಮ್ಮೆ ಶಾಲೆಗೆ ಬರಲು ಇಷ್ಟವಿಲ್ಲದ್ದಕ್ಕೆ ,ಓದು ಬರಹ ರುಚಿಸದ್ದಕ್ಕೆ , ಮೊಬೈಲ್ ಗೀಳಿನಿಂದ ಶಾಲೆಗೆ ಬರಲು, ಓದಲು ಬರೆಯಲು ಇಚ್ಛಿಸದ ಮಕ್ಕಳು ಸುಳ್ಳು ಹೇಳುವ ಕೆಟ್ಟ ಅಭ್ಯಾಸವನ್ನೂ ರೂಢಿಸಿಕೊಂಡು ಪಾಲಕರನ್ನು ಯಾಮಾರಿಸುತ್ತವೆ!! ಆದರೆ ಇಂಥ ಮಕ್ಕಳನ್ನು ತಿದ್ದಿ ತೀಡಬೇಕಾದ ಪಾಲಕರೆ ಬಂದು ವಿದ್ಯೆ ಕಲಿಸುವ ಗುರುಗಳನ್ನು ತರಾಟೆಗೆ ತೆಗೆದುಕೊಳ್ಳುವ, ಅಸಭ್ಯವಾಗಿ ವರ್ತಿಸುತ್ತಿರುವ ಘಟನೆಗಳು ಅಲ್ಲಲ್ಲಿ ದಾಖಲಾಗುತ್ತಿರುವುದನ್ನು ಕಾಣುತ್ತಿದ್ದೇವೆ ; ಅದರಲ್ಲಿಯೂ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿವೆ. ಇದರಲ್ಲಿ ನೂರಕ್ಕೆ 80ರಷ್ಟು ಸತ್ಯಾಂಶದಿಂದ ಕೂಡಿರುರುವುದಿಲ್ಲ ಎಲ್ಲೋ ಕೆಲವೊಂದು ಸತ್ಯವಿರಬಹುದು ಆದರೆ ಈ ರೀತಿಯ ನಡೆಯಿಂದಾಗಿ ಮಕ್ಕಳು ಶಿಕ್ಷಣ, ಶಿಕ್ಷಕರನ್ನು ಗೌರವಿಸುವುದಾದರೂ ಹೇಗೆ?? ಸಂಸ್ಕಾರವಂತರಾಗುವುದು ಹೇಗೆ??
ಸರ್ಕಾರಿ ಶಾಲೆಗಳು ಇಂದು ಹಲವು ಸಮಸ್ಯೆಗಳಿಂದ ಕೂಡಿವೆ. ಶಿಕ್ಷಕರ ಬಹುತೇಕ ಪ್ರಶ್ನೆ, ಸವಾಲುಗಳಿಗೆ ಯಾವ ಉತ್ತರವೂ ಇಲ್ಲ! ಮಕ್ಕಳನ್ನು ಗದರಬಾರದು; ಸ್ವಚ್ಛತೆ ಮಾಡಿಸಬಾರದು ಹೀಗೆ …. ಮತ್ತೆ ಯಾರು ಮಾಡಬೇಕು ಯಕ್ಷಪ್ರಶ್ನೆ! ಇಂತಹ ಎಲ್ಲ ಸಮಸ್ಯೆಗಳಿಗೆ ಕಾರಣರಾದವರು ಒಮ್ಮೆ ತಮ್ಮ ಬಾಲ್ಯವನ್ನು ತಿರುಗಿ ನೋಡಬಾರದೆ? ನಾವು, ನೀವುಗಳೆಲ್ಲ ಶಾಲೆಯಲ್ಲಿ ಶಿಕ್ಷಕರು ಹೇಳಿದ ಕೆಲಸವನ್ನು ಅದೆಷ್ಟು ಶ್ರದ್ಧೆ, ಖುಷಿಯಿಂದ ಮಾಡುತ್ತಿದ್ದೆವು. ಈಗಲೂ ಶಿಕ್ಷಕರು ಹೇಳಿದ ಕೆಲಸವನ್ನು ಮಕ್ಕಳು ಖುಷಿಯಿಂದಲೇ ಮಾಡುತ್ತಾರೆ ಆದರೆ ಶಾಲೆ ಪ್ರಾರಂಭವಾದ ದಿನ ಸ್ವಚ್ಛತೆ ಮಾಡಿಸುತ್ತಾರೆ ಎಂದು ಮಕ್ಕಳನ್ನು ಶಾಲೆಗೆ ಕಳುಹದೇ ಮನೆಯಲ್ಲಿ ಬಚ್ಚಿಡುವ , ಆರು ಏಳನೇ ತರಗತಿಗೆ ಬರುವ ಮಕ್ಕಳ ಬ್ಯಾಗ್ ಹೊರಲು ಬರುವ ತಾಯಂದಿರು ! ಮತ್ತೆ ಮಕ್ಕಳು ಶ್ರಮ ಸಂಸ್ಕೃತಿಯನ್ನು ಗೌರವಿಸಲು, ಒಪ್ಪಿಕೊಳ್ಳಲು ಹೇಗೆ ಸಾಧ್ಯ??? ಇವೆಲ್ಲವೂ ಮಕ್ಕಳ ಭವಿಷ್ಯದ ಮೇಲೆ ಕಾಣದ ಬಹುದೊಡ್ಡ ದುಷ್ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ…
ಇಂತಹ ನೂರಾರು ಸವಾಲುಗಳು, ಒತ್ತಡಗಳು, ಕೆಲವು ಪಾಲಕರ ಅತಿರೇಕದ ನಡೆ, ಕಿರಿಕಿರಿ ಶಿಕ್ಷಕರ ಆತ್ಮವಿಶ್ವಾಸ, ಬದ್ಧತೆಯ ಬುಡವನ್ನೇ ಅಲುಗಾಡಿಸುತ್ತಿವೆ… ಪರಿಣಾಮ ಶಿಕ್ಷಕರಿಗೆ ಬಿ ಪಿ , ಶುಗರ್ ಬಳುವಳಿ , ಹೃದಯಾಘಾತದ ಆತಂಕ, ಗುಮ್ಮ ಕಾಡಲಾರಂಭಿಸಿದರೂ ಉತ್ಪ್ರೇಕ್ಷೆಯಲ್ಲ!! ಮಕ್ಕಳು ಸೋಮ್ಬೇರಿಗಳಾಗುವ, ದಾರಿ ತಪ್ಪುವ ಸಾಧ್ಯತೆಗಳೂ ಇಲ್ಲದಿಲ್ಲ….
ಸುವಿಧಾ ಹಡಿನಬಾಳ

ಮಕ್ಕಳ ಬಗ್ಗೆ ಕುರಿತು ತುಂಬ ಚೆನ್ನಾಗಿ ಬರೆದಿದ್ದೀರ ಮೇಡಂ
ಸಂತೋಷ…