ಮಹಿಳಾ ಸಂಗಾತಿ
ಡಾ.ಸುಮತಿ ಪಿ
“ಸ್ತ್ರೀ ಅಂದರೆ ಅಷ್ಟೇ ಸಾಕೆ “

ಭಾರತದ ಸಂಪ್ರದಾಯದಲ್ಲಿ ಸ್ತ್ರೀಗೆ ಬಹಳ ಉನ್ನತ ಸ್ಥಾನಮಾನವನ್ನು ಕೊಟ್ಟಿದ್ದಾರೆ. ಅದೇ ರೀತಿಯಲ್ಲಿ ಇನ್ನೊಂದು ಮಗ್ಗುಲಲ್ಲಿ ಸ್ತ್ರೀಯನ್ನು ಶೋಷಣೆ ಮಾಡುತ್ತಲೇ ಬಂದಿದ್ದಾರೆ .ಸ್ತ್ರೀ ಜೀವ ಸೃಷ್ಟಿಯ ಮೂಲವೆಂದೇ ಹೇಳಬಹುದು. ಜಗದ ಸೃಷ್ಟಿಯನ್ನು ಮಾಡಿದಂತಹ ಜಗಜ್ಜನನಿಯು ಸ್ತ್ರೀ ಆಗಿದ್ದಾಳೆ . ಪಾಲನೆ ,ಪೋಷಣೆ, ವೃದ್ಧಿ, ಸಮೃದ್ಧಿಯಲ್ಲಿಯೂ ಕೂಡ ಸ್ತ್ರೀಯ ಪಾತ್ರ ಬಹಳಷ್ಟು ಮಹತ್ತರವಾದದ್ದು. ಹೆಣ್ಣಿಲ್ಲದೆ ಜೀವವಿಲ್ಲ, ಹೆಣ್ಣಿಲ್ಲದೆ ಜೀವನವಿಲ್ಲ. ಹೆಣ್ಣಿಂದಲೇ ಸಂಸಾರ. ಹೆಣ್ಣಿನಿಂದಲೇ ಬಾಳು ಬಂಗಾರ.
ಹೆಣ್ಣು ಮೃದು ಸ್ವಭಾವ ಹೊಂದಿರಬೇಕು, ಕೋಪ ಮಾಡಿಕೊಳ್ಳಬಾರದು, ಹಠ ಮಾಡಬಾರದು, ಯಾವುದಕ್ಕೂ ಕೂಡ ಎದುರು ಮಾತನಾಡಬಾರದು, ಹೇಳಿದಂತೆ ಕೇಳಬೇಕು, ತಲೆ ಬಗ್ಗಿಸಿ ನಡೆಯಬೇಕು ಅನ್ನೋ ಕಟ್ಟುಪಾಡುಗಳನ್ನೆಲ್ಲಾ ನಾವು ಇಂದು ಮುರಿಯಬೇಕಿದೆ. ಅವಳು ಕೂಡ ಮನುಷ್ಯಳೇ ಅವಳಿಗೂ ಕೂಡ ಆಸೆ ಕನಸುಗಳು ಇರುತ್ತವೆ ಎಂದು ಪ್ರತಿಯೊಬ್ಬರೂ ಕೂಡ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಆಕೆಯನ್ನು ಕೇವಲ ಸ್ತ್ರೀ ಅಂದರೆ ಅಷ್ಟೇ ಸಾಕೆ ?ಅವಳಿಗೆ ಬೇರೆ ಯಾವುದೇ ರೀತಿಯ ಗುರುತಿಸುವಿಕೆ ಬೇಡವೇ ?ಎಂದು ಆಲೋಚಿಸಿದರೆ ಸ್ತ್ರೀಯ ಬಹುತ್ವದ ಮುಖಗಳು ಕಣ್ಣೆದುರಿಗೆ ಬರುತ್ತವೆ. ಆಕೆ ಕೇವಲ ಮಗುವಿಗೆ ಜನ್ಮ ಕೊಡುವುದು ಮಾತ್ರವಲ್ಲ ಆ ಮಗುವಿನ ಲಾಲನೆ,ಪಾಲನೆ ಪೋಷಣೆಯನ್ನು ಮಾಡುವುದು, ಉತ್ತಮ ಸಂಸ್ಕಾರವನ್ನು ನೀಡುವುದು, ಜೀವನದ ಹಾದಿಯನ್ನು ತೋರಿಸುವುದು, ಇವುಗಳ ಜೊತೆಗೆ ಕುಟುಂಬ ನಿರ್ವಹಣೆಯಲ್ಲಿ ಕೂಡ ಅವಳ ಜವಾಬ್ದಾರಿ ಬಹಳಷ್ಟು ಇದೆ .ಒಂದು ಕುಟುಂಬದ ಅಭಿವೃದ್ಧಿ ಮತ್ತು ವಿನಾಶ ಎರಡೂ ಆ ಕುಟುಂಬದ ಸ್ತ್ರೀ ಯರ ಕೈಯಲ್ಲಿದೆ ಎಂದೇ ಹೇಳಬಹುದು. ಮಹಿಳೆ ಕುಟುಂಬದ ಸರ್ವತೋಮುಖ ಅಭಿವೃದ್ಧಿಯಲ್ಲಿ ಸರ್ವ ಪಾತ್ರಗಳನ್ನು ಮಾಡಲು ಪ್ರಯತ್ನಿಸುತ್ತಾಳೆ. ಪ್ರಸ್ತುತ ಬದಲಾವಣೆಯ ಯುಗದಲ್ಲಿ ಕೂಡ ಮಹಿಳೆ ನಾಲ್ಕು ಗೋಡೆಯ ಮಧ್ಯದಿಂದ ಹೊರಗೆ ಬಂದು,ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುವಂತಹ ಸಂದರ್ಭದಲ್ಲಿಯೂ ಕೂಡ ಮನೆಯ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಹಿಂದೆ ಬೀಳಲಿಲ್ಲ. ಒಂದು ಕುಟುಂಬದಲ್ಲಿ ತಾಯಿಯಾಗಿ,ಮಗಳಾಗಿ ತಂಗಿಯಾಗಿ ,ಅಕ್ಕನಾಗಿ, ಅಜ್ಜಿಯಾಗಿ, ದೊಡ್ಡಮ್ಮನಾಗಿ, ಸೊಸೆಯಾಗಿ ಹೀಗೆ ವಿವಿಧ ಪಾತ್ರಗಳನ್ನು ನಿರ್ವಹಿಸುವಂತಹ ಸ್ತ್ರೀ ಸಮಾಜದಲ್ಲಿ ಕೂಡ ವಿವಿಧ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ .ಹಾಗಾಗಿ ಅವಳು ಕೇವಲ ಸ್ತ್ರೀ ಮಾತ್ರವಲ್ಲ ಅವಳನ್ನು ದೇಶೋದ್ಧಾರಕಿ, ಸಮಾಜೋದ್ಧಾರಕಿ
ರಾಜಕಾರಣಿ,ವಿಜ್ಞಾನಿ ಹೀಗೆ ಬೇರೆ ಬೇರೆ ರೀತಿಯಲ್ಲಿ ಪುರುಷನಿಗೆ ಸಮಾನಳಾಗಿ ನಿಂತಿದ್ದಾಳೆ.
ಸ್ತ್ರೀಯನ್ನು “ಸ್ತ್ರೀ” ಎಂದರೆ ಸಾಕಾಗದು. ಏಕೆಂದರೆ ಸ್ತ್ರೀ ಎಂದಾಕ್ಷಣ ನಮ್ಮ ಮನಸ್ಸಿಗೆ ಮೂಡುವುದು ‘ಅಬಲೆ’ಎಂಬ ಚಿತ್ರಣ .ಆದರೆ ಸ್ತ್ರೀ ಅಬಲೆಯಲ್ಲ. ಬಹುಮುಖ ಪ್ರತಿಭೆ ಅವಳು. ಧೈರ್ಯ ಸ್ಥೈರ್ಯ, ಶೌರ್ಯದ ಸಂಕೇತ .ಸಹನೆ ಸಹಾನುಭೂತಿ ತಾಳ್ಮೆಯ ದ್ಯೋತಕ. ಸರಸ,ಸಾಮರಸ್ಯದ ಕೌತುಕ.ಅಬಲರನ್ನು ಸಬಲರು ದುರ್ಬಳಕೆ ಮಾಡುವುದು ನಡೆದು ಬಂದಿದೆ.ಅಬಲೆ ಎಂಬ ದೃಷ್ಟಿ ಕೋನದಿಂದ ಸ್ತ್ರೀ ಲೈಂಗಿಕ ದೌರ್ಜನ್ಯಕ್ಕೂ ಒಳಗಾಗುವುದನ್ನು ನಾವು ನೋಡಿದ್ದೇವೆ.
ಆದರೆ ಇತ್ತೀಚೆಗೆ ಮಹಿಳೆಯರನ್ನು ಕೀಳಾಗಿ ನೋಡುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಮಹಿಳೆಯರು ಕೂಡ ಪುರುಷರಂತೆ ರಾಜಕೀಯ, ಉದ್ಯೋಗ ಇನ್ನಿತರ ಯಾವುದೇ ಕ್ಷೇತ್ರದಲ್ಲಿಯೂ ಸೇರಿದಂತೆ ಸಮಾನ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ಅವರಿಗೂ ಘನತೆ, ಗೌರವಯುತ, ಸ್ವಾಭಿಮಾನದ ಮತ್ತು ಸ್ವಾತಂತ್ರ್ಯದ ಬದುಕನ್ನು ಕಲ್ಪಿಸಿಕೊಡುವ ಪ್ರಯತ್ನ ನಡೆಯುತ್ತಿದೆ.
ಬೇರೆಯವರ ಮೇಲೆ ಅವಲಂಭಿತವಾಗಿರದೇ ತನ್ನ ಆತ್ಮಗೌರವವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ಮಹಿಳೆ ಇಂದು ಸಾಹಸವನ್ನು ಪಡುತ್ತಿದ್ದಾಳೆ. ಹೀಗಾಗಿ ಇಂತಹ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲುವ ಸಮಾಜ ನಮ್ಮದಾಗಬೇಕು. ಹೆಣ್ಣಾಗಿ ಹುಟ್ಟಿರುವುದೇ ಒಂದು ಮಹಾಸೌಭಾಗ್ಯ ಮತ್ತು ಮಹಾಶಕ್ತಿ. ಹೀಗಾಗಿ ಅದನ್ನು ನಾವು ಸಂತಸ, ಸಂಭ್ರಮದಿಂದ ಕಾಣಬೇಕು.
“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರದೇವತಾ:” ಎಲ್ಲಿ ನಾರಿಯರು ಪೂಜಿಸಲ್ಪಡುವರೊ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬುದನ್ನು ಅನಾದಿಕಾಲದಿಂದಲೂ ನಂಬಿಕೊಂಡು ಬಂದವರು ನಾವು. ಹೆಣ್ಣು ಮನೆಯ ಮಹಾಲಕ್ಷ್ಮಿ ,ಭಾಗ್ಯಲಕ್ಷ್ಮಿ ಎಂದೆಲ್ಲಾ ಕರೆಯುತ್ತಾರೆ. ಯಾವುದೇ ಒಂದು ಮನೆ ಬೆಳಗುವುದೂ ಹೆಣ್ಣಿನಿಂದಲೇ ನಾಶವಾಗುವುದು ಹೆಣ್ಣಿನಿಂದಲೇ. ಹಾಗಾಗಿ ಮನೆಯ ಆಗುಹೋಗುಗಳಲ್ಲಿ ಆ ಮನೆಯ ಹೆಣ್ಣು ಮಗಳ ಪಾತ್ರ ಬಹಳಷ್ಟಿರುತ್ತದೆ .ಹೆಣ್ಣು ಮಗಳು ಖುಷಿಖುಷಿಯಾಗಿ ನಗುತ್ತಾ ಇದ್ದರೆ ಆ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸಿರುವಷ್ಟು ನೆಮ್ಮದಿ , ಶಾಂತಿ,ಸಂತಸ ಉಂಟಾಗುತ್ತದೆ .
ಮಗುವಿಗೆ ಜನ್ಮ ಕೊಡುವವಳು ಹೆಣ್ಣು,ಪಾಲನೆ ಪೋಷಣೆ ಮಾಡುವವಳೂ ಹೆಣ್ಣು.ಸಂಸ್ಕಾರವನ್ನು ನೀಡುವವಳೂ ಹೆಣ್ಣು,ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವವಳೂ ಹೆಣ್ಣು . ಹೆಣ್ಣು ಮಗಳಾಗಿ,ತಂಗಿಯಾಗಿ,ಅಕ್ಕನಾಗಿ, ಹೆಂಡತಿಯಾಗಿ, ಸೊಸೆಯಾಗಿ, ತಾಯಿಯಾಗಿ,ಅತ್ತೆಯಾಗಿ ಸಂಸಾರದ ಹೊಣೆಯನ್ನ ಹೊತ್ತು, ಮನೆಯನ್ನು ಬೆಳಗಿಸುವವಳು . ಒಂದು ಮನೆಯ ಸರ್ವಾಂಗೀಣ ಪ್ರಗತಿ ಆ ಮನೆಯ ಹೆಣ್ಣನ್ನು ಅವಲಂಬಿಸಿರುತ್ತದೆ.
ಹೆಣ್ಣು ಮನೆಯ ಭಾಗ್ಯಲಕ್ಷ್ಮಿ .ಒಂದು ಮನೆಯನ್ನು ನೋಡುವಾಗ ಆ ಮನೆಯಲ್ಲಿ ಹೆಣ್ಣು ಮಗಳು ಇದ್ದಾಳೋ ಇಲ್ಲವೋ ಎಂಬುದು ತಿಳಿಯುತ್ತದೆ ಎಂದು ಹಿರಿಯರು ಹೇಳುತ್ತಿದ್ದರು.ಹೆಣ್ಣುಮಗಳಿದ್ದ ಮನೆಯಲ್ಲಿ ಸ್ವಚ್ಛತೆಯಿದ್ದು ಸಂತಸವು ನೆಲೆಸಿದ್ದು ,ಸದಾ ನಗುನಗುತ್ತಾ ಜೀವನವನ್ನು ನಡೆಸುವಂತಹ ವಾತಾವರಣ ಇರುತ್ತದೆ.
“ಹೆಣ್ಣು ಸಂಸಾರದ ಕಣ್ಣು”ಎಂಬಂತೆ ಒಂದು ಸಂಸಾರವನ್ನು ಸರಿದೂಗಿಸಿಕೊಂಡು ಸಾಗುವಲ್ಲಿ ಹೆಣ್ಣಿನ ಪಾತ್ರ್ಯ ಬಹಳಷ್ಟಿರುತ್ತದೆ ಹೆಣ್ಣನ್ನು ಸಹನಾಮಯಿ, ಕ್ಷಮಯಾಧರಿತ್ರಿ ಎಂದೆಲ್ಲಾ ಕರೆಯುತ್ತಾರೆ. ಅಂದರೆ ಹೆಣ್ಣು ಸಂಸಾರಕ್ಕಾಗಿ ಸರ್ವತ್ಯಾಗಗಳನ್ನು ಮಾಡಿಕೊಂಡು, ಸಂಸಾರವನ್ನು ಸರಿ ತೂಗಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಾಳೆ.
“ಯಶಸ್ವಿ ಪುರುಷನ ಹಿಂದೆ ಹೆಣ್ಣೊಬ್ಬಳು ಇರುತ್ತಾಳೆ” ಎಂಬಂತೆ ಸಂಸಾರದ ಬಂಡಿಯನ್ನು ಎಳೆದುಕೊಂಡು ಹೋಗುವಲ್ಲಿ ಗಂಡನ ಜೊತೆ ಕೂಡಿಕೊಂಡು, ಗಂಡನ ಯಶಸ್ಸಿಗೆ ಹೆಣ್ಣು ಕಾರಣಕರ್ತಳಾಗುತ್ತಾಳೆ .ಹೆಣ್ಣನ್ನು ಗೌರವದಿಂದ ಕಾಣುವುದು ನಮ್ಮ ಸನಾತನ ಧರ್ಮದ ಸಂಪ್ರದಾಯ.ಈ ಜಗತ್ತಿನ ಸೃಷ್ಟಿಗೆ ಕಾರಣಳು ಆದಿಮಾಯೆ ಜಗನ್ಮಾತೆ ಹೆಣ್ಣು. ಹಾಗಾಗಿ ಎಲ್ಲದರ ಮೂಲ ಸ್ವರೂಪವೇ ಹೆಣ್ಣಾಗಿರುವುದರಿಂದ ಈ ಭವದ ಸಂಸಾರದಲ್ಲಿ ಹೆಣ್ಣು ಮಹಾಲಕ್ಷ್ಮಿ, ಭಾಗ್ಯಲಕ್ಷ್ಮಿ, ಧನಲಕ್ಷ್ಮಿ ಮುಂತಾದ ರೂಪದಲ್ಲಿ ತನ್ನ ಹಿರಿಮೆಯನ್ನು ಪ್ರತಿಪಾದಿಸಿಕೊಳ್ಳುತ್ತಾ, ತನ್ನತನವನ್ನು ಉಳಿಸಿ ಬೆಳೆಸಿಕೊಂಡು ಸಾಗಿ ಬಂದವಳು
“ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು” ಎನ್ನುವ ಮಾತು ಹೆಣ್ಣಿನ ಸಾಮರ್ಥ್ಯವನ್ನು ವಿವರಿಸುವಂತಹ, ನೆನಪಿಸುವಂತಹ ನುಡಿಮುತ್ತಾಗಿದೆ.ಹೆಣ್ಣಿಗೆ ಅವಕಾಶಕೊಟ್ಟರೆ ಅಸಾಧ್ಯವಾದುದನ್ನು ಸಾಧ್ಯವಾಗಿಸುವಳು.”ಸಿಕ್ಕರೆ ಅವಳಿಗೆ ಅವಕಾಶ ಮುಟ್ಟಿಯೇ ಬಿಡುವಳು ಆಕಾಶ” ಎಂಬ ಮಾತು ಹೆಣ್ಣಿಗಿರುವ ಛಲ,ಬಲವನ್ನು ಸಾಧನೆಯ ಹಠವನ್ನೂ ಸೂಚಿಸುತ್ತದೆ.
ಹಿಂದಿನ ಕಾಲದಲ್ಲಿ ಹೆಣ್ಣು ಮನೆಯ ನಾಲ್ಕು ಗೋಡೆಗಳ ಒಳಗಡೆ ಮನೆಯ ಕೆಲಸಕ್ಕೆ ಸೀಮಿತವಾಗಿದ್ದಳು. ಮನೆಯ ಮಕ್ಕಳ ಲಾಲನೆ,ಪಾಲನೆ, ಪೋಷಣೆ ಅವಳ ಮುಖ್ಯ ಧ್ಯೇಯವಾಗಿತ್ತು .ತೊಟ್ಟಿಲು ತೂಗುವ ಕೆಲಸ ಅವಳದಾಗಿತ್ತು. ಆದರೆ ಇಂದು ಹಾಗಿಲ್ಲ.ಪರಿಸ್ಥಿತಿಯೆಲ್ಲ ಬಹಳಷ್ಟು ಬದಲಾವಣೆಯನ್ನು ಕಂಡಿದೆ. ತೊಟ್ಟಿಲು ತೂಗುವ ಹೆಣ್ಣಿನ ಕೈಗೆ ಅಧಿಕಾರ ನಡೆಸುವ ಶಕ್ತಿಯನ್ನು ಕೊಟ್ಟಾಗ,ಹೆಣ್ಣು ಮಾಡಿದ ಅದ್ಭುತ ಸಾಧನೆಯನ್ನು ನಾನೀಗಾಗಲೇ ಕಂಡಿದ್ದೇವೆ.ಕಾಣುತ್ತಿದ್ದೇವೆ.ಹೆಣ್ಣಿಗೆ ಅಧಿಕಾರ ,ಅವಕಾಶ ಕೊಟ್ಟರೆ ಎಲ್ಲವನ್ನು ಚೆನ್ನಾಗಿ ನಿಭಾಯಿಸಬಲ್ಲಳು .ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಲ್ಲ
ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರದೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಇನ್ನಿತರ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.
ಸಮಾಜದಲ್ಲಿ ಹೆಣ್ಣಿಗೆ ಇಂದು ಬಹಳಷ್ಟು ಸ್ಥಾನಮಾನ, ಗೌರವ ಆದರಗಳು ದೊರೆತು, ಸಮಾಜದ ಉನ್ನತ ಸ್ಥಾನವನ್ನು ಅಲಂಕರಿಸುತ್ತಿದ್ದಾಳೆ.ರಾಜಕೀಯಕ್ಕೆ ಪ್ರವೇಶ ಮಾಡಿದ್ದಲ್ಲದೆ ಜಗತ್ತನ್ನೇ ತನ್ನ ಅಧಿಕಾರದ ತೆಕ್ಕೆಯಲ್ಲಿ ಇರಿಸಿ ಆಳುವಂತಹ ಶಕ್ತಿ ಸಾಮರ್ಥ್ಯವನ್ನೂ ಹೆಣ್ಣು ಪಡೆದುಕೊಂಡಿದ್ದಾಳೆ .ಮನಸ್ಸು ಮಾಡಿದರೆ ತನಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಇಂದು ಹೆಣ್ಣು ಗಂಡು ಎಂಬ ಭೇದವಿಲ್ಲದೆ ಹೆಣ್ಣು ಮಗಳು ಪುರುಷರು ಮಾಡುವಂತಹ ಎಲ್ಲಾ ಕೆಲಸಗಳನ್ನು ಮಾಡುವುದಕ್ಕೆ ಸೈ ಎನಿಸಿಕೊಂಡಿದ್ದಾಳೆ. ಒಂದು ಕಾಲದಲ್ಲಿ ತೊಟ್ಟಿಲು ತೂಗುವುದಕ್ಕೆ ಮಾತ್ರ ಸೀಮಿತವಾಗಿದ್ದ ಹೆಣ್ಣು ಇಂದು ಜಗತ್ತನ್ನೇ ಆಳುತ್ತಿದ್ದಾಳೆ. ಹೆಣ್ಣಿಗೆ ಸಮಯ ಸಂದರ್ಭ ಒದಗಿ ಬಂದಾಗ, ಸಾಕಷ್ಟು ಅವಕಾಶಗಳನ್ನು ನೀಡಿದಾಗ ಅವಳು ತನ್ನಲ್ಲಿರುವ ಅದ್ಭುತ ಶಕ್ತಿಯಿಂದ ಸಾಧನ ಪಥದಲ್ಲಿ ಸಾಗುತ್ತಾ ವಿಶೇಷವಾದುದನ್ನು ಸಾಧಿಸಿಬಿಡುತ್ತಾಳೆ.
ಹೆಣ್ಣು ಮಗಳು ” ಅಡುಗೆ ಮನೆಯ ಮೂದೇವಿಯಾಗಿ ಉಳಿಯದೆ ,ಆರ್ಯವರ್ತದ ಮಹದೇವಿ”ಯಾಗಿ ಬೆಳೆದಿದ್ದಾಳೆ, ಒಂದು ಕಾಲಕ್ಕೆ ಮಕ್ಕಳನ್ನು ಹೆರುವುದಕ್ಕೆ ,ಪಾಲನೆ ಪೋಷಣೆ ಮಾಡುವುದಕ್ಕೆ ಸೀಮಿತವಾಗಿದ್ದ ಅವಳ ಜೀವನ ನಾಲ್ಕು ಗೋಡೆಯನ್ನು ಭೇದಿಸಿ,ಹೊರಗಿನ ಪ್ರಪಂಚಕ್ಕೆ ಕಾಲಿಟ್ಟು, ಪ್ರಪಂಚದಲ್ಲೆಲ್ಲಾ ನಡೆಯುವ ಅಚ್ಚರಿಯನ್ನು ಅರಿತುಕೊಂಡು, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತಾನು ಸಮಾಜದಲ್ಲಿ ಯಾವುದಕ್ಕೂ ಹಿಂಜರಿಯುವವಳಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.
ಪುರುಷ ಪ್ರಧಾನವಾದ ಸಮಾಜದಲ್ಲಿ ಮನೆಯ ಒಳಗೆ ಸೀಮಿತವಾಗಿದ್ದ ಅವಳು ತನ್ನ ಪೊರೆಯನ್ನು ಕಳಚಿಕೊಂಡು ಸ್ವತಂತ್ರ ಜೀವನ ನಡೆಸುವತ್ತ ಮನಸ್ಸು ಮಾಡಿಕೊಂಡು, ಸ್ವಾಭಿಮಾನದಿಂದ ಪುರುಷರೊಡನೆ ಪ್ರತಿಸ್ಪರ್ಧಿಸುತ್ತಾ, ತನ್ನತನವನ್ನು ಹೊರಗೆಡಹುತ್ತಾ, ಶಕ್ತಿಯಲ್ಲಾಗಲಿ, ಯುಕ್ತಿಯಲ್ಲಾಗಲಿ, ಭಕ್ತಿಯಲ್ಲಾಗಲಿ, ದುಡಿಮೆಯಲ್ಲಾಗಲಿ ಸಹನೆಯಲ್ಲಾಗಲಿ ಯಾವುದರಲ್ಲಿಯೂ ತಾನು ಸಮರ್ಥಳೆ ಎಂಬುದನ್ನು ಜಗಕ್ಕೆ ಸಾರಿ ಹೇಳುತ್ತಿದ್ದಾಳೆ .
“ಮನಸ್ಸು ಮಾಡಿದರೆ ಸಬಳವನ್ನಾದರೂ ನುಂಗಬಹುದು” ಎಂಬ ಗಾದೆಯಂತೆ ಹೆಣ್ಣು ಇಂದು ಮನಸ್ಸು ಮಾಡಿ ಅದ್ಭುತ ಸಾಧನೆಯನ್ನು ಮಾಡಿದ್ದಾಳೆ ,ಮಾಡುತ್ತಿದ್ದಾಳೆ. ಒಂದು ಕಾಲದಲ್ಲಿ ತೊಟ್ಟಿಲು ತೂಗುತ್ತಿದ್ದ ಕೈ ಇಂದು ಜಗತ್ತನ್ನೇ ಆಳಬಲ್ಲಂತಹ ಸಾಮರ್ಥ್ಯವನ್ನು ಪಡೆದಿದೆ ಎಂದರೆ ಅದರ ಹಿಂದೆ ಎಷ್ಟೊಂದು ಸ್ವಾಭಿಮಾನದ ಸೆಳೆತ, ನಿಯತ್ತಿನ ದುಡಿತ, ಸಮರಸದ ಬೆರೆತ ಅಡಗಿದೆ ಎಂಬುದನ್ನು ಮಾತಿನಲ್ಲಿ ಹೇಳುವುದಕ್ಕೆ ಕಷ್ಟ. ಹೆಣ್ಮಗಳಿಗೆ ಅವಕಾಶ ಕೊಟ್ಟರೆ,ಸಿಕ್ಕರೆ ಸದುಪಯೋಗವಾದಾಗ ಪ್ರತಿಯೊಬ್ಬರ ಸಾಮಾರ್ಥ್ಯ ಅನಾವರಣಗೊಳ್ಳುತ್ತದೆ.
ಮಹಿಳೆಯರದ್ದು ಗೃಹಿಣಿಯಾಗಿ ಅಪೇಕ್ಷೆ ಇಲ್ಲದ ಬದುಕು,ಜೀವನ. ಎಲ್ಲರಿಗೂ ವಾರಕ್ಕೆ ಒಂದು ದಿನವಾದರೂ ರಜೆ ಇರುತ್ತದೆ. ಆದರೆ ನಮ್ಮ ಸಲುವಾಗಿ ದುಡಿಯುವ ನಮ್ಮ ತಾಯಿಗೆ ಯಾವುದೇ ರಜೆ ಇರುವುದಿಲ್ಲ. ಇಂತಹ ನಿಸ್ವಾರ್ಥ ಮಹಿಳೆ ಮನೆಯಲ್ಲಿ ಸೈನಿಕನಂತೆ .ಒಬ್ಬ ಸೈನಿಕ ಹೇಗೆ ದೇಶದ ಸೇವೆಗೆ ಸದಾ ಸಿದ್ದನಾಗಿರುತ್ತಾನೋ ಹಾಗೆಯೇ ಪ್ರತಿ ಮನೆಯಲ್ಲಿ ಮಹಿಳೆ ತನ್ನ ಕುಟುಂಬದ ಒಳಿತಿಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾಳೆ.
ಸ್ತ್ರೀ ಪುರುಷರಲ್ಲಿ ಸಮಾನತೆಯ ಪ್ರಶ್ನೆ ಬರಬಾರದು.ಸ್ತ್ರೀ ಪುರುಷ ಇಬ್ಬರಲ್ಲೂ ತಾಳ್ಮೆ ಬೇಕು, ಜೊತೆಗೆ ಗೌರವ ತೋರಬೇಕು.ಆಗ ಬದುಕು ಸುಖೀ ಸಂಸಾರ ವಾಗಿ ಪರಿಣಮಿಸುತ್ತದೆ. “ಮನ್ನಿಸು, ಮರೆ, ಮತ್ತು ಮುನ್ನಡೆ” ಎಂಬ ಸೂತ್ರದ ಪ್ರಾಮಾಣಿಕ ಅನುಷ್ಠಾನ ಮಾಡಬೇಕು. ಇದು ಕಷ್ಟಕರವಾದ ಕೆಲಸ, ಆದರೆ ಪ್ರಯತ್ನ ಮಾಡಿದರೆ ಕಷ್ಟ ಸಾಧ್ಯವಲ್ಲ . ಸ್ತ್ರೀ ಪುರುಷರು ಕುಟುಂಬ ತನ್ಮೂಲಕ ಸಮುದಾಯ ಸಮಾಜ ದೇಶದ ಪ್ರಗತಿಯ ಚಕ್ರದ ಬಂಡಿಯ ಎರಡು ಚಕ್ರಗಳಂತೆ ಜೊತೆ ಜೊತೆಯಾಗಿ ಸಾಗಿದರೆ ಸರಿದೂಗಿಸಿ ಕೊಂಡು ಪ್ರಗತಿಯನ್ನು ಸಾಧಿಸುವುದರಲ್ಲಿ ಎರಡು ಮಾತಿಲ್ಲ ಅಂತರಾ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸಕಲರ ಉನ್ನತಿಗಾಗಿ ಶ್ರಮಿಸುವಂತಹ ಸ್ತ್ರೀ ಶಕ್ತಿಗೆ ಅವಳ ಯುಕ್ತಿಗೆ ದೊಡ್ಡದೊಂದು ಸಲಾಂ ……
ಡಾ.ಸುಮತಿ ಪಿ

ಡಾ.ಸುಮತಿ ಪಿ