ಕಾವ್ಯ ಸಂಗಾತಿ
ಪುಸ್ತಕ ಸಂಗಾತಿ
ವಿಜಯಲಕ್ಷ್ಮೀ ಕೊಟಗಿ
ಡಾ.ಸಿದ್ಧರಾಮ ಹೊನ್ಕಲ್
“ನಿನ್ನ ಜೊತೆ ಜೊತೆಯಲಿ”
ನಿನ್ನ ಜೊತೆ ಜೊತೆಯಲಿ… ಲೇಖಕ ಡಾ.ಸಿದ್ಧರಾಮ ಹೊನ್ಕಲ್ ರ ಮಧುರಾನುಭೂತಿಯ ಸಮಗ್ರ ಗಜಲ್ ಸಂಕಲನ.ಇದೊಂದು ಪ್ರೇಮಕಾವ್ಯದ ರಸದೌತಣ
“ಆಡು ಮುಟ್ಟದ ಸೊಪ್ಪಿಲ್ಲ, ಹೊನ್ಕಲ್ ರು ಕೈಯಿಡದ ಸಾಹಿತ್ಯ ಪ್ರಕಾರಗಳಿಲ್ಲ” ಎಂಬ ಮಾತನ್ನು ಇಲ್ಲಿನೆನೆಯಲೇಬೇಕು.ಯಾಕೆಂದರೆ,ನಾಡಿನ ಹಿರಿಯ ಸಾಹಿತಿ, ಮೇರು ಸಾಹಿತ್ಯ ಕೃಷಿಕಾರರಾದ ಡಾ.ಸಿದ್ದರಾಮ ಹೊನ್ಕಲ್ ರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ನಾವಂತೂ ಅವರಿಗೆ ಅಭಿನಂದನೆ ಅಥವಾ ಶುಭಾಶಯ ಹೇಳಿ ಹೇಳಿ ಸುಸ್ತಾಗಿದ್ದೇವೆ. ಅಷ್ಟು ಅವರ ಸಾಧನೆಯ ಗ್ರಾಫ್ ಏರುತ್ತಲೇ ಇದೆ ಅಂದರೆ ಇದೇನು ಅತಿಶಯೋಕ್ತಿಯಲ್ಲ.
ಸುಮಾರು ಎಪ್ಪತ್ತು ಕೃತಿಗಳ ಬಿಡುಗಡೆಯೋ, ನೂರಾರು ಪ್ರಶಸ್ತಿಗಳ ಸ್ವೀಕಾರವೋ, ಸಾವಿರಾರು ಉಪನ್ಯಾಸ, ಕವಿಗೋಷ್ಠಿ /ವಿಚಾರ ಗೋಷ್ಠಿ ಕಾರ್ಯಕ್ರಮಗಳ ಭಾಗವಹಿಸುವಿಕೆಯೋ, ಅವರ ಹಲವು ಬರಹಗಳು ವಿವಿಧ ವಿಶ್ವವಿದ್ಯಾಲಯಗಳಲ್ಲಿ ,ಶೈಕ್ಷಣಿಕ ಸಂಸ್ಥೆಗಳಲ್ಲಿ ಪಠ್ಯವಾಗಿರುವುದಕೋ, ಹತ್ತಾರು ಸಂಘ ಸಂಸ್ಥೆಗಳ ಅಧ್ಯಕ್ಷತೆ- ಸದಸ್ಯತ್ವಗಳ ನಿಭಾಯಿಸುವಿಕೆಯೋ, ಹಲವಾರು ಕಾರ್ಯಕ್ರಮಗಳ ಆಯೋಜನೆಯೋ, ಸದಾ ಸಂಚಾರವೋ, ಸಮಾಜಮುಖಿ ಕಾರ್ಯಕಾರಣವೋ ಯಾವುದಕ್ಕಂತ ಅಭಿನಂದನೆ, ಧನ್ಯವಾದ, ಅಥವಾ ಲೈಕ್ಸ್ ಕೊಡುವುದು , ಅಬ್ಬಬ್ಭಾ! ಇವರಿಗೆ ಅಷ್ಟೊಂದು ಎನರ್ಜಿ ಸಿಗುವುದಾದರೂ ಎಲ್ಲಿಂದ ಎನ್ನುವುದೇ ಯಕ್ಷಪ್ರಶ್ನೆ.
ಕಥೆ, ಕಾವ್ಯ, ಕವಿತೆ, ಗಜಲ್, ಹೈಕು, ಶಾಯರಿ, ಹನಿಗಳು, ಚುಟುಕು, ವಚನ, ಪ್ರವಾಸಕಥನ, ಲಲಿತ ಪ್ರಬಂಧ, ಲೇಖನ, ವ್ಯಕ್ತಿ ಚರಿತ್ರೆ, ಸಂಪಾದಿತ ಕೃತಿ, ಹೊನ್ನುಡಿಗಳು, ಮುನ್ನುಡಿ, ಬೆನ್ನುಡಿ, ಸಹಜ ಪುಸ್ತಕ ವಿಮರ್ಶೆ, ಎಲ್ಲದರಲ್ಲೂ ಇವರದು ಮೌಲಿಕ ಬರಹ.
ಇರಲಿ ಬಿಡಿ ಈಗ ನೇರವಾಗಿ ವಿಷಯಕ್ಕೆ ಬರೋಣ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಕ್ರೀಯ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಅವರು ಬಹಳ ಪ್ರೀತಿ ವಿಶ್ವಾಸದಿಂದ ತಮ್ಮ ಸಮಗ್ರ ಗಜಲ್ ಸಂಕಲನ ನಿನ್ನ ಜೊತೆ ಜೊತೆಯಲಿ ನನ್ನ ಕೈಗಿತ್ತರು. ಸುಮಾರು 495 ಪುಟಗಳ ರೂಂ. 500/- ಮುಖಬೆಲೆಯ 319 ಶ್ರೇಷ್ಠ ಗಜಲಗಳನ್ನೊಳಗೊಂಡ ಹೊತ್ತಿಗೆಯಿದು. ಮಲ್ಲಿಗೆ ದಂಡೆ ಮುಡಿದ ಲಲನೆಯ ಮುಖಪುಟ ನೋಡಿದ ಕ್ಷಣವೇ ಎಂಹವರಿಗಾದರೂ ಮನ ಮುದಗೊಳ್ಳುವುದು ಸಹಜ. ಪ್ರತಿ ಸುಂದರ ಗಜಲಿಗೊಂದೊಂದರಂತೆ ಅಷ್ಟೇ ಅಂದವಾಗಿ ಒಳಚಿತ್ರ ರಚಿಸಿದ ಕಲಾವಿದರಾದ ಪುಂಡಲಿಕ್ , ಹಾದಿಮನಿ, ಅರುಣಕುಮಾರ್ ಅವರುಗಳಿಗೆ ಅಭಿನಂದನೆ ಹೇಳಲೇಬೇಕು.
ಈ ಪುಸ್ತಕ ಕೊಟ್ಟು ಬಹಳ ದಿನಗಳೇ ಆದವು. ಆದರೆ ನನ್ನ ಕಾರ್ಯ ಒತ್ತಡದಿಂದ ಓದಿ ಬರೆಯುವುದು ಆಗಿರಲಿಲ್ಲ. ಆದರೆ ಒಂದು ಸಾರಿ ಕೈಗೆತ್ತಿಕೊಂಡರೆ ಮುಗಿಸದೆ ಕೆಳಗಿಡುವಂತಿಲ್ಲ. ಹಾಗಿದೆ ಈ ಕೃತಿ. ” ಹೊನ್ನಸಿರಿ ” ಎಂಬುದು ವಿಶೇಷ ಮತ್ತು ಸುಂದರ ಕಾವ್ಯನಾಮ. ಗಜಲ್ ರಚನಾ ನಿಯಮಗಳ ಸ್ಥೂಲ ವಿವರಣೆ ನೀಡಿದ್ದಲ್ಲದೇ ಅನೇಕ ಉದಾಹರಣೆ ನೀಡುವ ಮೂಲಕ ಇನ್ನೂ ಕಲಿಕೆಯ ಹಂತದಲ್ಲಿರುವ ಹೊಸಬರಿಗೆ ಪ್ರೋತ್ಸಾಹ ನೀಡಿದ್ದಾರೆ.ಅದರ ಬಳಕೆಗೂ ಅನುಮತಿ ನೀಡಿದ ದೊಡ್ಡತನ ಅವರದು.
ಹುಚ್ಚು ಹೊಳೆಯಾಗಿ ಬಂದವಳ ಬರಸೆಳೆದ ಹೊನ್ನಸಿರಿ
ಮನದಣಿಯೇ ಮುದ್ದಾಡಿ ಕಥೆಯಾಗಿಸಿ ಕಾಯುತ್ತೇನೆ”
ಗಜಲವೊಂದರ ಈ ಮಿಶ್ರಾ ಓದಿದಾಗ ಕಾವ್ಯ ಕನ್ನಿಕೆಯೊಡನೆ ಹೊನ್ನಸಿರಿಯ ಪ್ರೇಮಾಲಾಪದ ಚಿಕ್ಕ ಝಲಕ್ ಕಣ್ಣಿಗೆ ಕಟ್ಟುತ್ತದೆ . ಇಲ್ಲಿಯ ಬಹಳಷ್ಟು ಗಜಲ್ಗಳು ನಿರ್ಮಲವಾದ ಜುಳುಜುಳು ಮಂಜುಳ ನಿನಾದದಿ ಹರಿಯುವ ನದಿಯಂತೆ ಭಾಸವಾಗುತ್ತವೆ.
“ ಜಂಜಡದ ಬದುಕಿನಲಿ ಯಾರು ಕೈ ಹಿಡಿಯದಿರಬಹುದು
ಸೋತೆನೆಂದು ಎಂದೆಂದಿಗೂ ನೀ ಹಿಂಜರಿಯಬೇಡ ಗೆಳೆಯ“
ಬೇರೆಯವರ ಮೆಚ್ಚುಗೆಗೆ ಕಾಯದೇ ಮುನ್ನುಗ್ಗು , ಅವ್ಯಕ್ತ ವಿಚಾರಗಳ ಭ್ರಮನಿರಸನ ತೊರೆದು ಭರವಸೆಯ ತೊರೆಯ ಹರಿವನ್ನು ಕಾಣಬಹುದು.
ಕತ್ತಲೆ ಕಳೆದು ಬೆಳಕು ಮೂಡಿಸಿದವರೆ ಸಂತ ಸೂಫಿಗಳು ಬಸವಾದಿ ಶರಣರು”
ಇದೊಂದು ಅದ್ಭುತ ಆಧ್ಯಾತ್ಮಿಕ ನೆಲೆಯ ಭಾವವನ್ನು ಹೊರಸೂಸುತ್ತದೆ. ಆ ಸಾಂಸ್ಕೃತಿಕ ನೆಲೆಯನ್ನು ಅವರು ಅಪ್ಪಿಕೊಂಡಿರುವ ರೀತಿ ಅನನ್ಯ. “ಲಿಂಗ ಪತಿ ಶರಣ ಸತಿ” ಎಂಬ ಔನ್ನತ್ಯ ಭಾವವಿದು.
ನಡೆದಷ್ಟೆ ದಾರಿ ಪಡೆದಷ್ಟೆ ಫಲ ಜಗದ ರಂಗಮಂದಿರದಿ,
ಹೊನ್ನಸಿರಿ ಬೇಸರಿಸದಿರು ಈ ಭವಕೆ ಬಂದಿರಲು
ಮುಕ್ತಾಯಕ್ಕನವರ ಸಾನಿಮಿಶ್ರಾ ಪಡೆದು ರಚಿಸಿದ ತರಹಿ ಗಜಲಿನ ಈ ಶೇರ್ ಅತ್ಯಂತ ಮಾರ್ಮಿಕವಾಗಿದೆ. ಕಾಯಕ ನಿನ್ನ ಕೆಲಸ ಅದರ ಫಲಾಫಲ ಕರ್ತನಿಗೆ ಬಿಡು ಎಂಬ ಉದಾತ್ತ ಭಾವ ಬಿಂಬಿತವಾಗಿದೆ.
ಹೆಜ್ಹೆ ಇಡಲು ಬಾರದವಗೆ ಗೆಜ್ಹೆ ಕಟ್ಟಿ ನಡೆಸಿದರಿಗೆ ನಮಸ್ಕಾರ
ಅದ್ಭುತ ಗಜಲ್ಕಾರ ಈತನೆಂದು ಬೆನ್ನು ತಟ್ಟಿದವರಿಗೆ ನಮಸ್ಕಾರ
ಎನಗಿಂತ ಕಿರಿಯರಿಲ್ಲೆಂಬ ವಿನಯವಂತಿಕೆ ಹಾಗೂ ತನ್ನನ್ನು ಪ್ರೋತ್ಸಾಹಿಸಿದವರಿಗೆ ಧನ್ಯವಾದ ಹೇಳುವ ಈ ಸಾಲುಗಳು ಅನನ್ಯ.. “ಮುಖವಾಡಗಳ ಬದುಕಿನಲಿ ಪ್ರೀತಿ ವಿಶ್ವಾಸ ನಂಬಿಕೆಯ ಕೊರತೆ ಎದ್ದು ಕಾಣುವುದು”
ಹೊನ್ನಸಿರಿ ಕಲ್ಲು ದೇವರ ಹುಡುಕದೆ ಆತ್ಮಸಾಕ್ಷಿಗೆ ಜವಾಬಾಗಿ ಬದುಕಿರುವೆ”
ಇವತ್ತಿನ ಅರಾಜಕತೆಯಲ್ಲಿ ಮುಳುಗಿರುವ ಸಮಾಜದಲ್ಲಿಯ ಕುಂದು ಕೊರತೆಗಳಿಗೆ ಮರುಗದೆ ಆತ್ಮಸಾಕ್ಷಿಗೆ ಅನುವಾಗಿ ಬದುಕು ಎಂಬ ಆಶಯವನ್ನು ಈ ಗಜಲ್ ಸೂಚಿಸುತ್ತದೆ.
ಪ್ರೀತಿ ಎಂಬುದೊಂದು ವಿಷವೆಂದು ಈ ಜಗವೇ ಅನ್ನತೈತಿ ಸಖಿ
ಮಧುವಲ್ಲಿಯ ವಿಷ ನಿನ್ನಧರಗಳಲಿ ಬೆರೆತು ಅಮೃತವಾಗೈತಿ ಸಖಿ
ಮತ್ತು
ಕನಸುಗಣ್ಣಿನ ಹುಡುಗಿ ಕನಸುಗಳ ಮಾರುತ್ತ ಹೊರಟವಳೆ ಬಾ ಕಾದಿರುವೆ
ನಗುವ ಹೂವುಗಳ ಮುಂಗುರುಳ ಮುದ್ದಿಸುತ್ತ ಬರುವೆ ನೀ ಹೂಬನದಲಿ ಬಾ ಕಾದಿರುವೆ“
ಈ ಎರಡು ಶೇರ್ ಗಳನ್ನು ಅವಗಾನಿಸಿದಾಗ
ಅವರ ರಸಿಕತೆ, ಕಾವ್ಯ ರಸಸ್ವಾದದ ಗುಣ ಗ್ರಾಹಕತೆ ಅರಿವಿಗೆ ಬರುತ್ತದೆ.
ಹೀಗೆ ಒಂದೊಂದು ಗಜಲನ್ನು ಓದಿದಾಗ ಒಂದೊಂದು ಭಾವ ಉತ್ಪನವಾಗುತ್ತವೆ. ಬರೆಯುತ್ತ ಹೋದರೆ ಎಷ್ಟು ಬರೆದರೂ ಮುಗಿಯದ ಸಾಹಿತ್ಯ ನಿಧಿ ಈ ಹೊತ್ತಿಗೆ.
ಒಟ್ಟಿನಲ್ಲಿ ಈ ಎಲ್ಲಾ ಗಜಲ್ಗಳಲ್ಲಿ ಪ್ರೇಮ,ಪ್ರಣಯಗಳ ತಲ್ಲಣ, ವಿರಹ ವೇದನೆ, ತೀರದ ಬಯಕೆ, ಹುಚ್ಚು ಕನಸುಗಳು, ಸ್ನೇಹ- ಸಂಬಂಧ, ಮೃದುಲತೆ, ದಾಂಪತ್ಯ, ಸೌಂದರ್ಯ, ನೋವು-ನಲಿವು, ಸುಖ,-ದುಃಖ, ಭರವಸೆ, ಮೌನ-ಧ್ಯಾನ, ಏಕಾಂಗಿತನ, ಶಾಂತಿ-ನೆಮ್ಮದಿ, ಜನನ-ಮರಣ, ಮುನ್ನುಗ್ಗುವಿಕೆ, ಭಾಷೆಯ ಸೊಗಡು , ಕಾವ್ಯದ ಚಲುವು, ಪರಿಸರ ರಕ್ಷಣೆ, ಸಾತ್ವಿಕ ಕೋಪ, ಬಡತನದ ಬೇಗೆ, ಜಾತೀಯತೆಯ ವ್ಯಂಗ್ಯ, ರಾಜಕೀಯ ವಿಡಂಬನೆ, ಸಾಮಾಜಿಕ ಮೂಢನಂಬಿಕೆ, ಧರ್ಮ ಕಲಹ, ಅನಕ್ಷರತೆಯ ಕುತ್ತು, ಸ್ವಾರ್ಥ-ಹೊಟ್ಟೆಕಿಚ್ಚಿನ ಮನಸುಗಳು, ಬದುಕು, ರೈತರ ಸಂಕಷ್ಟಗಳು, ಅಧ್ಯಾತ್ಮಿಕ ಅನುಭಾವ, ಮುಂತಾದ ಬದುಕಿನ ಎಲ್ಲಾ ಆಯಾಮಗಳನ್ನು ಕಾಣಲು ಸಾಧ್ಯ.
ನಿಜವಾಗಿಯೂ ಇಂತಹ ಹಿರಿಯ ಸಾಹಿತಿಗಳ ಒಡನಾಟ ನಮಗೆ ದೊರಕಿರುವುದು ಹೆಮ್ಮೆಯ ವಿಷಯವೇ ಸರಿ. ಮುಂದಿನ ಅವರ ಕೃತಿಗಳಿಗೆ ಇನ್ನೂ ಉನ್ನತಮಟ್ಟದ ಪ್ರಶಸ್ತಿ ಪುರಸ್ಕಾರ ದೊರಕಲೆಂದು ಆಶಿಸುತ್ತ ಅವರಿಗೆ ಮತ್ತೊಮ್ಮೆ ಅಭಿನಂದನೆ ತಿಳಿಸುವೆ.
ವಿಜಯಲಕ್ಷ್ಮಿ ಕೊಟಗಿ
(ಓದಬಯಸುವ ಆಸಕ್ತರು ಕೇವಲ ರೂ.4೦೦/- ಫೋನ್ ಪೇ ಮಾಡಿ 9945922151 ರಜಿಸ್ಟ್ರರ್ ಅಂಚೆಯಲ್ಲಿ ಪುಸ್ತಕ ಪಡೆಯಬಹುದು.ಲೇಖಕರಿಂದ)
————————————————————–