ಜಯಂತಿ ಸುನಿಲ್ ರವರು  ಮಾಲೂರು ತಾಲ್ಲೂಕು ಕೋಲಾರ ಜಿಲ್ಲೆಯ ಮಿಟ್ಟಿಗಾನಹಳ್ಳಿ ಗ್ರಾಮದಲ್ಲಿ ನಾರಾಯಣಪ್ಪ ಮತ್ತು ರತ್ನಮ್ಮ ದಂಪತಿಗಳ ಮಗಳಾಗಿ  2-10-1985 ರಂದು ಜನಿಸಿದರು. ಇವರ ಪತ್ನಿ ಸುನಿಲ್, ಮಕ್ಕಳು ಯತಿನ್ ಕಾರ್ತಿಕ್ ಮತ್ತು ರುತ್ವಿಕ್ ವಿಷ್ಣು ಪ್ರಸ್ತುತ ಇವರು ದೇವನಹಳ್ಳಿ ತಾಲ್ಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ನೆಲೆಸಿದ್ದು, ಎಂ. ಎ ಪದವೀಧರರಾದ ಇವರು ಪ್ರಸ್ತುತ  ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆಯ ಸಮೂಹ ಸಂಪನ್ಮೂಲವ್ಯಕ್ತಿಯಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ. ನಲಿ-ಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ  ಶಿಕ್ಷಕರಿಗೆ ವೃತ್ತಿನಿರತ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.

ಇವರ ಕವನ ಸಂಕಲನ ಹಾಗೂ ಗಜಲ್ ಸಂಕಲನಗಳು ಮುದ್ರಣಕ್ಕೆ ಸಿದ್ಧವಾಗುತ್ತಿದ್ದು.. ಇವರು ಮಾಲೂರು, ಕೋಲಾರ, ಬಂಗಾರಪೇಟೆ, ಹೊಸಕೋಟೆ, ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳು, ಮತ್ತು ರಾಜ್ಯಾದ್ಯಂತ ಅನೇಕ ಕವಿಗೋಷ್ಠಿಗಳು  ಹಾಗೂ ಹಲವಾರು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುತ್ತಾರೆ. ಶೖಕ್ಷಣಿಕ ಮತ್ತು ಸಾಹಿತ್ಯಿಕವಾಗಿ ರಾಜ್ಯಮಟ್ಟದ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುತ್ತಾರೆ.

ಕಾಡುವ ಕಿ. ರಂ ಹೊಸಕಾವ್ಯ,ಸೇರಿದಂತೆ ಹಲವು ದಿನಪತ್ರಿಕೆ, ಶೖಕ್ಷಣಿಕ ಮ್ಯಾಗಝಿನ್ ಗಳಲ್ಲಿ ಇವರ ಲೇಖನ ಹಾಗೂ  ಕವಿತೆಗಳು ಪ್ರಕಟವಾಗಿವೆ. ಹಾಗೂ ಸಾಹಿತ್ಯದ ಬಹುತ್ವದ ನೆಲೆಗಳು ಸಂಗಾತಿ ಸಾಹಿತ್ಯ ಬ್ಲಾಗ್ ಮುಂತಾದವುಗಳಲ್ಲಿ ಇವರ ಕವಿತೆ, ಗಜಲ್ ಗಳು ಪ್ರಕಟಗೊಂಡು ಸಹೃದಯರ ಮತ್ತು ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿದೆ.

**

ಕುಲದ ಬೇರು ಕದಡಲಿಲ್ಲಾ
ಭುವಿಯಡಿಯಲ್ಲಿ ಜಾತಿ ಧರ್ಮವೆಂಬ
ತಾಯಿ ಬೇರುಗಳ ಹಾವಳಿ..
ಅಸಮಾನತೆ, ಅಧರ್ಮವೆಂಬ ತಂತುಬೇರಿನ ತಾಂಡವ..
ಪುನಃ ಪುನಃ ಚಿಗುರೊಡೆವ ಅರಾಜಕತೆಯ ಪ್ರಳಯ..!!

ಬುದ್ಧ ಬಂದು ಬೆಳಕೆನಿಸಿದ
ಬಸವ ಬಂದು ಶರಣನೆನಿಸಿದ
ಅಂಬೇಡ್ಕರ್ ಬಂದು ಸಮಾನತೆಯ ಸಾರಿದ
ಯಾರೇ ಬಂದರು, ಹೋದರೂ ಬದಲಾಗದ ಜನ
ಕೊನೆಮುಟ್ಟದ ಅಜ್ಞಾನ..!!

ಬುದ್ಧನ ಶಾಂತಿಬೀಜ ಬೇರು ಬಿಡಲೇ ಇಲ್ಲಾ..
ಬಸವನ ಕಾಯಕ ತತ್ವದ ಬೀಜ ಮಣ್ಣಲ್ಲಿ ಬೆರೆತು ಮೊಳಕೆಯೊಡೆಯಿತು.. ಸಸಿಯಾಗಲಿಲ್ಲಾ
ಬಾ ಬಾ ಸಾಹೇಬ್ನ ಸಮಾನತೆಯ ಬೀಜ
ಮಣ್ಣಲ್ಲಿ ಅಂಕುರವಾಯಿತು
ಹೆಮ್ಮರವಾಗಲಿಲ್ಲಾ..!!

ಪುಸ್ತಕಗಳ ಒಳಗೆ ಹಲವರು
ಮಹಾತ್ಮರು, ಯೋಗಿಪುರುಷರು
ದೖವೀ ಸಂಭೂತರು
ಅವರ ಆದರ್ಶಗಳು ಓದಲಿಕ್ಕಷ್ಟೇ,
ಪುಸ್ತಕದಿಂದಾಚೆಗಿನ ಪ್ರಪಂಚ
ಸುಡುವ ಬಿಸಿಲು
ಬೀಸುವ ಬಿರುಗಾಳಿ
ಎಲ್ಲವೂ ಇಲ್ಲಿ ನಗಣ್ಯ..!!

***

ಒಂದು ಹಾಲು ಇರುಳಿನಲಿ
ಆಗಸವ ನೋಡುತ್ತೇನೆ
ಹಾಲುಂಡ ತವರು ನೆನಪಾಗಿ
ಮತ್ತೆ ಮತ್ತೆ ಮರಗುತ್ತೇನೆ
ಅಪ್ಪನ ಮಾಸಿದ ಹರಕುಬಟ್ಟೆ
ಅವ್ವನ ಉಪವಾಸಗಳ ಖಾಲಿಹೊಟ್ಟೆ
ಎಲ್ಲವೂ ನೆನಪಾಗುತ್ತದೆ
ಕಣ್ಣಲಿ ಹನಿಯೊಂದು ಜಿನುಗುತ್ತದೆ.!!

ಅಪ್ಪನ ಹರಿತವಾದ ಒಳನೋಟ
ಅವ್ವನ ತುಳುಕುವ ಆತ್ಮವಿಶ್ವಾಸದ ಪಾಠ
ಕೂಡಿಟ್ಟ ನಾಳೆಗಳಿಗೆ ಬಚ್ಚಿಟ್ಟ ಭವಿಷ್ಯದ ಗುಟ್ಟುಗಳು
ನೇತುಬಿದ್ದ ಹಕ್ಕಿಗಳಂತೆ ಹೆತ್ತವರ ಪಾಡುಗಳು
ಎಲ್ಲವೂ ನೆನಪಾಗುತ್ತದೆ
ಗುರುತುಗಳ ಹೊಗೆಯಾಡುತ್ತದೆ..!!

ಮುರಿದ ಪೆನ್ನಲಿ ಬರೆದಿದ್ದು
ನಿದ್ದೆಯಲು ಅಮ್ಮನ ಕೖತುತ್ತು ಸವೆದದ್ದು
ಕಷ್ಟಗಳ ನಿಗಿ ನಿಗಿ ಕೆಂಡ ತುಳಿದದ್ದು
ಕನಸುಗಳ ಸೆರಗೊದ್ದಿ ಮಲಗಿದ್ದು
ಎಲ್ಲವೂ ನೆನಪಾಗುತ್ತದೆ
ನಿನ್ನೆಗಳು ಮರುಕಳಿಸುತ್ತದೆ..!!

ಒಮ್ಮೆ ಹುಲ್ಲುಹಾಸಿನ ಮೇಲೆ
ಕಣ್ಣುಚ್ಚಿ ಕುಳಿತೆ
ದೀಪದಡಿ ಕುಳಿತ ಅಪ್ಪ ನೆನಪಾದ
ಅವನ ಸುತ್ತಲೆಲ್ಲಾ ಕತ್ತಲು
ಬೆಳಕನ್ನು ನಮಗೆ ಬಿಟ್ಟುಹೋದ
ಮತ್ತೊಮ್ಮೆ ಕಣ್ಮುಚ್ಚಿ ಕುಳಿತೆ
ಅವ್ವ ನೆನಪಾಗಿ ನನ್ನೂರಿನ ಬೆಟ್ಟಗಳಂತೆ ಕಂಡಳು
ನಾನೀಗ ಶಿಲೆಯಾಗಲೂ ಅಣಿಯಾಗುತ್ತೇನೆ..!!

ತವರೆಂದರೆ ನಾಲ್ಕುಗೋಡೆ ಒಂದು ಬಾಗಿಲಿನ ಕೋಣೆಯಲ್ಲಾ..
ಅಲ್ಲೇನೋ ತುಡಿತವಿದೆ
ಭಾಷೆಗೂ ನಿಲುಕದ ಮಿಡಿತವಿದೆ
ಅವ್ವನ ಕೂಗಿದೆ
ಅಪ್ಪನ ನೋವಿದೆ
ಬೀಜ-ವೃಕ್ಷಗಳ ಪಳೆಯುಳಿಕೆ ಅಲ್ಲಿಯೇ ಅಡಗಿದೆ
ತವರಲ್ಲಿ ಯಾರೂ ಕದಿಯದ ಸಿರಿಯಿದೆ..!!

***

ಭ್ರಮೆಯ ಮೋಡದಿ ಕೂತು
ನನಸಾಗದ ಕನಸ ಜೋಪಾನ ಮಾಡುತ್ತಾ, ಮಾಡುತ್ತಾ
ಅದೆಷ್ಟು ಹಗಲುಗಳು ದಣಿದವು
ನನ್ನ ಕನಸಿನಲ್ಲಿ ನಿನ್ನ ಮುಖ
ನನ್ನದೇ ಉಸಿರಿನಲ್ಲಿ ಈಜುತ್ತಾ ಈಜುತ್ತಾ…
ಹೆಸರಿಲ್ಲದ ಊರ ದಡ ಮುಟ್ಟುತ್ತದೆ
ನನ್ನೊಳಗೆ ಹೊರಳಿ ನರಳಿಸುವ ನೋವು..
ಆ ಬೆಟ್ಟದ ತುದಿಯ ಬಿಂದಿಗೆಯ ಹೂ
ಎರಡೂ ಒಂದೇ ಇರಬೇಕು
ಸುಲಭವಾಗಿ ಯಾರಿಗೂ ದಕ್ಕುವುದಿಲ್ಲಾ..!!

ಒಡೆದ ಕನ್ನಡಿಯಲ್ಲಿ
ಹಾರಾಡುವ ಗಾಜಿನ ಚೂರುಗಳು
ಮಳೆಮೋಡವನ್ನು ಹಿಂಬಾಲಿಸುವ ಮಿಂಚುಗಳು ನಿನ್ನಲ್ಲಿಗೆ ಹಾರಿ ಬರಬಹುದು..
ಹಿಂತಿರುಗಿ ನೋಡಬೇಡ
ನಿನ್ನ ನಾಲಿಗೆಯಲಿ ನನ್ನೆಸರ ಜಪಿಸಲುಬೇಡ
ಕದ್ದು ಆಲಿಸಿದರೆ…?
ಗೋರಿಯ ಮೇಲೆ ಸೂರ್ಯ ಮೂಡುವುದಿಲ್ಲಾ..
ಗುಲ್ಮೊಹರ ಅರಳುವುದಿಲ್ಲಾ..!!

ಈ ಮೋಹಾನುರಾಗದ ಹಾಳೆಯ ಮೇಲೆ
ಕಣ್ಣಹನಿ ಮರಿ ಹಾಕುತ್ತಾ ಬಂಕುಬಡಿದ ರಾತ್ರಿಗಳಿಗೆ ಕಥೆ ಹೇಳಹೊರಟಿದೆ
ಪ್ರತಿಪದವೂ ನಾಟಕವೆಂದು ಇರುಳಿಗೆ ತಿಳಿಯುತ್ತಿಲ್ಲಾ..
ಹಕ್ಕಿಯನ್ನು ಒಪ್ಪಿಕೊಳ್ಳದ ಆಗಸ
ಕಲ್ಲುಮಳೆ ಸುರಿಸುವುದು ನಿಲ್ಲಿಸುತ್ತಿಲ್ಲಾ..!!

ನೀನೀಗ ಕನಸಿಗೆ ಎದುರಾಗಬೇಡ
ಕಣ್ಣಿಗೂ ಕಾಣದಂತೆ ನನ್ನೊಳಗೆ ಪುನಃ ಹೂ ಅರಳಬಹುದು
ಆಕಾಶಕ್ಕೆ ಕೖ ಚಾಚಿ ನಿಂತ ಭೂಮಿ
ಹಡಗನ್ನು ಅಪ್ಪಿಕೊಳ್ಳುವ ಸಾಗರ
ಅವುಗಳ ಛಾಯೆಯಲಿ ನಮ್ಮ ಕಥೆ
ಗಾಳಿ ಪದರದಲಿ ತೇಲುವ ನಿನ್ನ ನೆರಳು…
ಮತ್ತೆ ನನ್ನ ಕಾಡಬಹುದು
ಇಂಚಿಂಚೇ ಕೊಲ್ಲಬಹುದು..!!


ಕಾವ್ಯ ಸಂಗಾತಿ
ಸಂಗಾತಿಯ ತಿಂಗಳಕವಿ
ಜಯಂತಿ ಸುನೀಲ್
ಆ ಬೆಟ್ಟದ ತುದಿಯ ಬಿಂದಿಗೆಯ ಹೂ
ಎರಡೂ ಒಂದೇ ಇರಬೇಕು
ಸುಲಭವಾಗಿ ಯಾರಿಗೂ ದಕ್ಕುವುದಿಲ್ಲಾ..

Leave a Reply

Back To Top