ಭಾವಯಾನಿ ಹೊಸ ಕವಿತೆ-ಸಾಕ್ಷಿ

ಮುಖವಾಡದ ಬಣ್ಣ ಬಯಲು ಮಾಡಲು
ಗಟ್ಟಿ ಸಾಕ್ಷಿಯೊಂದು ಬೇಕಿತ್ತು
ಸಮಯಕ್ಕೆ ತಕ್ಕ ಹಾಗೆ
ಊಸರವಳ್ಳಿಯ ನಡೆಗೆ
ಬಹುಕಾಲ ಆಯುಷ್ಯವಿಲ್ಲ!
ಸತ್ಯ ಬಯಲಾಗಲೇಬೇಕು ಒಂದು ದಿನ!

ಒಳ್ಳೆತನದ ಮುಖದ ಹಿಂದೆ ಅಡಗಿರುವ
ಗೋಮುಖ ವ್ಯಾಘ್ರಕ್ಕೆ
ಜಿಂಕೆ ಮೊಲದಂತಹ ಬಡಪಾಯಿಗಳನ್ನು ಬೇಟೆಯಾಡುವುದರಲ್ಲೇ ವಿಕೃತ ಖುಷಿ!
ಅದೆಷ್ಟು ದಿನದ ಹಾರಾಟ ಹೋರಾಟ?
ಕಡೆಗೊಮ್ಮೆ ಬೂದಿಯಾಗಲೇಬೇಕು!

ಹಣ,ಅಧಿಕಾರ ಅಂತಸ್ತಿನ ಅಮಲು
ತಲೆಗೇರಿದಂತೆಲ್ಲ
ನಿಂತ ನೆಲದ ಗುರುತು ಕೂಡ ಮರೆಯುವುದು
ಮನುಷ್ಯತ್ವಕ್ಕೆ ಕಪ್ಪು ಚುಕ್ಕೆ!
ಸುಳ್ಳುಗಳನ್ನೇ ಸತ್ಯ ಎಂದು ಅಲಂಕಾರ ಮಾಡಿ ಮೆರವಣಿಗೆ ಹೊರಟರೆ
ಅಡಗಿರುವ ಸತ್ಯಕ್ಕೆ ಉಸಿರು ಗಟ್ಟೀತು!

ಪ್ರಾಮಾಣಿಕತೆಯ ಕಂದೀಲು ಹಿಡಿದು ನಡೆದವರು
ಸೋತಿರಬಹುದು,
ದಾರಿ ಮಸುಕಾದಂತೆ ಅನಿಸಿದರೂ
ಎಡವಿ ಬಿದ್ದ ಪ್ರಸಂಗಳಿಲ್ಲ!
ದರ್ಪ, ಅಹಂಕಾರ ಕ್ಷಣ ಕಾಲ ಮೆರೆದರೂ
ಗೆದ್ದ ಉದಾಹರಣೆ ಇಲ್ಲ,
ಮತ್ತು ಗೆಲ್ಲುವುದೂ ಇಲ್ಲ!!

One thought on “ಭಾವಯಾನಿ ಹೊಸ ಕವಿತೆ-ಸಾಕ್ಷಿ

  1. ಸುಂದರ ಕವನ ರಚನೆ ಮುಖವಾಡದ ಬಣ್ಣ ಬಯಲು
    Sripad Algudkar ✍️
    ಪುಣೆ

Leave a Reply

Back To Top