ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಲವೆಂಬುದು
ಸಿಹಿ ವಿಷ
ಸಿಹಿಯೆಂದೇ ಸವಿಯಬೇಕು
ವಿಷವಿದ್ದರೂ ನುಂಗಬೇಕು
ಬದುಕುವ ಭರವಸೆ
ಒಲವಿಗಿದೆ

ಎದೆಯ ತಂತಿ ಕಿತ್ತರೂ ಸಣ್ಣ ದನಿ
ಮಿಡಿಯುತ್ತಿರಬೇಕು
ಬರಿ ಬೆಲ್ಲ ಎಲ್ಲರಿಗೆಲ್ಲಿದೆ
ಮೈ ತುಂಬಾ ನೋವ ಬೇವ ಘಮವಿದ್ದರೂ
ನಗುವ ಸಿಹಿ
ಧರಿಸಿ ನಡೆವ ಸಿದ್ದರಿಗಿಲ್ಲಿ ಬರವಿಲ್ಲ

ಎದುರಿನವರೆಲ್ಲಾ ನಮ್ಮರೆಂದುಕೊಂಡವ ದಡ್ಡ
ಬಿಳಿ ಮೊಟ್ಟೆಗಳೆಲ್ಲವೂ ಕಾಗೆಯದಲ್ಲ!
ನಂಬು ನಿನ್ನೊಳಗಿನ ಮನುಜಮತದ
ಒಲವ
ಬರಿದೆ ನನದು ನಿನದೆಂಬ ಬಡಿವಾರದಿ
ಬಡಿದಾಡುವ
ಮಣ್ಣರಸ್ತೆಯಿದು ಮನ ; ಗುರಿಯಂತೂ ಒಲವಿನದೆ
ನಡೆದಷ್ಟು ದಾರಿ
ಕಂಡಷ್ಟು ಒಲವು

ಒಂದೆಂಬುದು ಎದೆಯ ಹಾಡಾದರೆ ಜಗದ ಜನರೆಲ್ಲಾ
ಆತ್ಮ ಬಂಧುಗಳು
ಒಲವಿರಲಿ
ಒಲವಿರಲಿ
ಮೊಗೆದಷ್ಟೂ ಮೊಗೆದಷ್ಟೂ
ಹಂಚಿ ಉಳಿಯುವಷ್ಟು
ಒಲವಿರಲಿ
ಸಂಕಟ ಸಾವಿರವಿರಲಿ

ನೀರುಳಿದ ಮೀನಂತೆ ಬದುಕು ಇದ್ದರೂ
ಹೊಳೆದಂಡೆಯ ನಗುವ ಗರಿಕೆಯ ತೆರದಿ
ಕಣ್ಣ ತುಂಬಾ ಒಲವದು
ಚಿರವಿರಲಿ ಅನವರತ….
ಒಲವೇ ಬದಕು ಎಂಬುದು ಎದೆ ಶಾಸನವಾಗಲಿ!

*******

ಬೋತಲಿಯಿಂದ ಒಂಟಿ ಕಾಲಿನ ಬಟ್ಟಲಿಗೆ
ಜಿಗಿದ ದ್ರವ
ಗಂಟಲ ಗುಹೆಗುಂಟ ಬಿದ್ದದ್ದು ನೋವಿನ ಮೇಲೇ!

ನಂದಿದ್ದದ್ದೇ ಅಂತ ನಿರಾಳವಾಗಿ
ಮಲಗಿದ್ದ ನೋವಿನ ಮೇಲೆ ಸುಡ್ ಸುಡೋ
ಹನಿಗಳು ಬಿದ್ದಕೂಡಲೇ ಎದ್ದು ಚಕ್ಕಂಬಕ್ಕಳ
ಹಾಕಿ ಕೂತುಬಿಟ್ಟಿತು.

ದ್ರವದ ಜೊತೆ ಜೊತೆಗೆ ಕ್ಲೋಸಪ್ ಪೇಸ್ಟಿನಂತಹ
ಉಪ್ಪನಕಾಯಿಗೆ ನೋವು
ನಲುಗಿ ಹೋಯಿತು ಒಮ್ಮೆಲೆ ” ತುಟಿ ಮೇಲೆ ಬಂದಂಥ ಮಾತೊಂದೆ ಒಂದು…. ” ಹಾಡು ಗೊತ್ತಿಲ್ಲದಂತೆ
ನೋವಿನ ನಾಲಗೆ ಮೇಲೆ ರಾರಾಜಿಸತೊಡಗಿತು!

ಪಕ್ಕದಲ್ಲೇ ನೆಗ್ಗಿ ಹೋದ ಎದೆ,
ಸನಿಹವೇ ಅದರುತ್ತಿರುವ ಹೃದಯ
ಅದರೊಳಗೆ ಎಂದೋ ಹಾಡಿ ಬಿಟ್ಟ ಹಳೆಯ ಕವಿತೆಗಳ ಸಮಾಧಿ
ಚೂರು ನಿಟ್ಟುಸಿರು….ಎಲ್ಲವೂ ನೋವ
ನರ್ತನಕ್ಕೆ ಸಾಥ್ ನೀಡಲೆದ್ದವು!

ಒಂದೊಂದು ಗುಟುಕು ಒಳ ಬಂದಂತೆ
ನೋವು ಮಧುರ ಮುಲುಕಿನೊಡನೆ ಹೃದಯದ ಹೆಗಲಿಗೆ ಕೈ
ಹಾಕಿ ಬಂದ ದ್ರವವ ಬೈಟು ಮಾಡಿ ಚಿಯರಪ್ ಹೇಳುತ್ತಿದೆ!

ಬಿಕ್ಕಳಿಸ ಹೊರಟ ಹೃದಯಕ್ಕೆ
ಹಗೂರಾಗಿ ಆಲಂಗಿಸಿ
ನಗಿಸಲೆತ್ನಿಸಿ ಸೋತಿತು ಮನಸು
ಎದೆಗುಂದದ ನೋವು ಮರೆತ ಅವಳ ಸಾಲು ಸಾಲು ಹಾಡುಗಳ
ಎದುರೆದುರೇ ಸುರಿಯುತಿದೆ!

ಗಂಟಲ ಗುಹೆ ಬಂದಾಯಿತು
ದ್ರವವೆಲ್ಲಾ ನೋವಿಗೂ ಮತ್ತು ಹೃದಯಕ್ಕೂ
ಸಾಲದಾಗಿ
ಮತ್ತೊಂದಕೆ ಮನವೆಳಸಿ ಕಾತರ;

ಎಂದೋ ಕೈ ಬೀಸಿ ಹೋದ ಅವಳ
ನೆನಪೇ ನೋವು
ಅರ್ಧಂಬರ್ಧ ಕವಿತೆಗಳೇ ನೆನಪು
ದ್ರವ ಬಂದಾಗೆಲ್ಲಾ ಅವಳು ಕಣ್ಮುಂದೆ;
ಉಳಿದ ಸಮಯ ನೆಗ್ಗಿದ ಎದೆಯಲ್ಲಿ
ಮುರಿದ ಹೃದಯದಲ್ಲಿ ಬಂಧಿ!

ನೋವೊಂದೇ…..ಅನವರತ ಜತೆ
ಎಲ್ಲರಿಗೂ!


About The Author

2 thoughts on “ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಎರಡು ಕವಿತೆಗಳು”

Leave a Reply

You cannot copy content of this page

Scroll to Top