ಕಾಡಜ್ಜಿ ಮಂಜುನಾಥ್ಅವರ ಕವಿತೆ-ಅಣ್ಣ ನಗುತಿದ್ದಾನೆ……!!

ಸ್ಥಾವರವು ಅಳಿದು
ಜಂಗಮವ ಉಳಿಸಲು
ಜೀವಿತದ
ಕೊನೆವರೆಗೂ ಯತ್ನಿಸಿದ
ಅಣ್ಣ ;
ತನ್ನೆಸರಿನ ಸ್ಥಾವರವ
ನಿರ್ಮಿಸುವವರನು ಕಂಡು
ಅಣ್ಣ ನಗುತ್ತಿದ್ದಾನೆ…..!!

ಜಾತೀಯತೆಯ ಬೇಲಿಯ
ದಾಟಿ;
ಸಮಾನತೆಯ ಮಂತ್ರವ
ಜಪಿಸಿದ ಅಣ್ಣ
ತನ್ನೆಸರನು ಬಳಸಿ
ಜಾತೀಯ ವಿಷಬೀಜವ
ಬಿತ್ತುವವರನ್ನು ಕಂಡು
ಅಣ್ಣ ನಗುತ್ತಿದ್ದಾನೆ…!!

ಕಾಯಕ ತತ್ವವ
ಅನುಪಾಲಿಸಿ,
ಬೆವರನಿಯಲಿ ಬದುಕು
ನಡೆಸುವ ಸಮಾಜ ಸೃಷ್ಟಿಸಿದ
ಅಣ್ಣ;
ಕಾಯಕವಿಲ್ಲದೇ
ಕುಳಿತು ತಿನ್ನುವ ಜನರು
ಸೃಷ್ಟಿಸುವವರನ್ನು ಕಂಡು
ಅಣ್ಣ ನಗುತ್ತಿದ್ದಾನೆ…!!

ಮೇಲುಕೀಳನು ತುಳಿದು
ಲಿಂಗ ಭೇದವ ತೊಳೆದು
ಸಮ ಸಮಾಜದ
ನಿರ್ಮಾಣಕೆ
ಟೊಂಕಕಟ್ಟಿ ನಿಂತ
ಅಣ್ಣ;
ಇಂದು
ಮೇಲುಕೀಳಿನ ಸೊಂಕು ಬಳಸಿ
ಸಮಾಜವ ಒಡೆಯುವವರನು
ಕಂಡು
ಅಣ್ಣ ನಗುತ್ತಿದ್ದಾನೆ….!!!

ಅನುಭವ ಮಂಟಪದಿ
ಸರ್ವರನೂ ಒಗ್ಗೂಡಿಸಿ
ಅನುಭವಗಳ ಮಾತಿಗೆ
ತಲೆಯಾಡಿಸಿ;
ಪ್ರಜಾಪ್ರಭುತ್ವವನ್ನು
ಜಗಕೆ ಸಾರಿದ
ಅಣ್ಣ;
ಪ್ರಜಾಪ್ರಭುತ್ವದ ಹೆಸರಲಿ
ಜನರನ್ನು ತುಂಡರಿಸುವುದನು
ಕಂಡು
ಅಣ್ಣ ನಗುತ್ತಿದ್ದಾನೆ…..!!!


Leave a Reply

Back To Top