ಸುಜಾತಾ ಪಾಟೀಲ ಅವರ ಕವಿತೆ-ಬಯಲು ಏಣಿ

ಶರಣ ಮೌಲ್ಯದ ಏಣಿ ಏರಿ
ಜಗದಗಲ ಮುಗಿಲಗಲ ಶರಣಮಹಾಮನೆಯ
ಕಟ್ಟಬೇಕೆಂದಿರುವೆ…..
ವರ್ಗರಹಿತ ವರ್ಣರಹಿತ ಜಾತಿರಹಿತ ಶ್ರೇಣಿಕೃತವಲ್ಲದ ಈ ಏಣಿಯ
ಮೆಟ್ಟಿಲುಗಳ
ಬಳಸಬೇಕೆಂದಿರುವೆ…..

ಅನಾಥರ ಶೋಷಿತರ, ನಿರ್ಗತಿಕರ
ಅರೆಹೊಟ್ಟೆಯ ಹಸಿವೆಗೆ
ಅನ್ನವಾಗಬೇಕೆಂದಿರುವೆ…..
ಬಡವರ ದೀನ ದಲಿತರ ಬತ್ತಿದ
ಮುಖಭಾವದಲ್ಲಿಯ ದುಃಖ ಮರೆಸುವ
ನಗೆಹನಿ ಆಗಬೇಕೆಂದಿರುವೆ…..

ಕಷ್ಟಪಡುವ ಕೂಲಿಕಾರ್ಮಿಕರ
ಬಳಲುವ ಕೈಗಳಿಗೆ ಛಲತುಂಬುವ
ಶಕ್ತಿಯಾಗಬೇಕೆಂದಿರುವೆ…..
ಬಡವ ಬಲ್ಲಿದರ ಹ್ರದಯದಲ್ಲಿ
ಎಂದೂ ಕೂಗ್ಗದ ಗಟ್ಟತನದ
ದೈರ್ಯವಾಗಬೇಕೆಂದಿರುವೆ…..

ರಸ್ತೆ ಬದಿಯಲ್ಲಿ ಹರುಕು ಮುರುಕು ಗುಡಿಸಲಲ್ಲಿ
ನರಳುವ ವೃದ್ಧಜೀವಿಗಳಿಗೆ ಆಸರೆಯ
ಊರುಗೋಲಾಗಬೇಕೆಂದಿರುವೆ……
ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುವ
ಅನಕ್ಷರಸ್ಥ ಅಮಾಯಕ ಕಂದಮ್ಮಗಳಿಗೆ
ಶಿಕ್ಷಕಿಯಾಗಬೇಕೆಂದಿರುವೆ…..

ದೇಶದ ಬೆನ್ನೆಲುಬು ಅನ್ನದಾತರು ಕಷ್ಟ ನಷ್ಟಕ್ಕೆ ಹೆದರಿ
ಆತ್ಮಹತ್ಯೆಗೆ ಯತ್ನಿಸಿದಂತೆ ಮುಗ್ಧ ಮನಸ್ಸಿಗೆ ಗೆಲುವಿನ
ಸುವಿಚಾರವಾಗಬೇಕೆಂದಿರುವೆ…..
ಏನು ಅರಿಯದ ಸರಳ ಸಾತ್ವಿಕ ಸ್ವಭಾವವನ್ನು
ಭಯದ ಬಲೆಯಲ್ಲಿ ಸಿಲುಕಿಸಿ ಶೋಷಿಸುವವರ ಪಾಲಿಗೆ
ಬಸವಜ್ಯೋತಿಯಾಗಬೇಕೆಂದಿರುವೆ…..

ಏಣಿ ಏರಿ ಕಲಿಯುಗದ ಕರಾಳ ಕತ್ತಲೆಯ
ಮುಸುಕು ಹರಿದು ಶರಣರ ಸೂಳ್ನುಡಿಗಳ ಅರಿವು ಆಚಾರ
ಸಾಕಾರಗೊಳಿಸಬೇಕೆಂದಿರುವೆ…..
ಯಾರನ್ನೂ ದ್ವೇಷಿಸದೆ, ಯಾರನ್ನೂ ಶೋಷಿಸದೆ,
ಎಲ್ಲರನ್ನೂ ಪ್ರೀತಿಸಿ, ಎಲ್ಲರನ್ನೂ ಸ್ವಾಗತಿಸಿ ಬಯಲಿಗಾಗಿ ಬಯಲು ಏಣಿ
ಏರಬೇಕೆಂದಿರುವೆ…..


2 thoughts on “ಸುಜಾತಾ ಪಾಟೀಲ ಅವರ ಕವಿತೆ-ಬಯಲು ಏಣಿ

  1. ಮಾನವೀಯ ಮೌಲ್ಯಗಳ ವಿಚಾರಗಳು ಸುಂದರವಾಗಿ ವ್ಯಕ್ತವಾಗಿವೆ
    ಸವಿತಾ ದೇಶಮುಖ

Leave a Reply

Back To Top