ರೋಹಿಣಿ ಯಾದವಾಡ ಕವಿತೆ-ಹೆಣ್ಣು ಹತ್ಯೆ

ಪ್ರೀತಿ ಹೆಸರಲಿ ನೆತ್ತರು ಹರಿಸಿ
ವಿಕೃತಿ ಮೆರೆವ ಮನಸ್ಥಿತಿ ಏಕೆ ?
ಹೆಣ್ಣ ಜೀವವದು ಕಾಲ ಕಸವೆ
ಹೇಳಿ ಇದಕೆ ಉತ್ತರವ ನೀವು ?

ಏನು ಬೇಕಾದರೂ ಕೊಂಡು ತರಬಹುದು
ದುಡ್ಡು ಕೊಟ್ಟರೆ ಮತ್ತೆ ಮರಳುವುದೇ ಜೀವ ?
ಮನೆ-ಮನ ಬೆಳಗಬೇಕಿಹ ದೀಪ ಹೆಣ್ಣು
ನಂದಿ ಹೋಗುತಿವೆ ನಿತ್ಯ ದುಷ್ಕೃತ್ಯದಲಿ

ಹೊತ್ತು ಹೆತ್ತು ಮುದ್ದಾಡಿದ ಅಮ್ಮನ ಸಂಕಟ
ತುತ್ತುಣಿಸಿ ಭರವಸೆಯ ಬೆಳೆಸಿದ ಅಪ್ಪನ ರೋಧನ
ರಕ್ತ ಹಂಚಿಕೊಂಡ ಒಡಹುಟ್ಟು ಸಂಬಂಧಗಳ
ಆಕ್ರಂಧನ ಹೇಳಲು ಪದಗಳಿಲ್ಲ ನನ್ನಲಿ

ಹೆಣ್ಣನ್ನು ಬರೀ ಹೆಣ್ಣಾಗಿ ನೋಡಿರೆಲ್ಲರೂ
ಜಾತಿ ಧರ್ಮ ರಾಜಕೀಯ ತರದೆ ಇಲ್ಲಿ
ಕಠಿಣ ಶಿಕ್ಷೆಯಾಗಲಿ ಆರೋಪಿ ಯಾರಾಗಿದ್ದರೂ
ಕಳೆದು ಹೋದ ಜೀವಕೆ ನ್ಯಾಯ ಸಿಗಲಿ

ನ್ಯಾಯ ಸಿಕ್ಕರು ಹೆತ್ತವರಿಗೆ ಸಿಗದು
ಸಮಾಧಾನ, ಅಳಿಯದ ನೋವು ಎಂದಿಗೂ
ಮುಂದೆಂದೂ ಇಂತಹ ಕೃತ್ಯವೆಲ್ಲಿಯೂ
ನಡೆಯದಿರಲೆಂದು ತಕ್ಕ ಶಿಕ್ಷೆಯಾಗಲಿ

ಹುಚ್ಚಾಟಕೆ ಅಂತ್ಯವ ಹಾಕುವಂತಾಗಲಿ
ವಿಕೃತ ಮನಸುಗಳಿಗೆ ಪಾಠವಾಗುವಂತಿರಲಿ
ಹೆಣ್ಣಿಗೆ ರಕ್ಷಣೆ ಇರಲಿ‌
ಇಳೆಯಲಿ
ಹೆಣ್ಣು ಹೆತ್ತವರು ನೆಮ್ಮದಿಯಾಗಿರಲಿ

ಹೆಣ್ಣಿರಲಿ ಗಂಡಿರಲಿ ಮಕ್ಕಳ‌ ಮೇಲೆ
ಹೆತ್ತವರದು ಸದಾ ಒಂದು ಕಣ್ಣಿರಲಿ
ಪ್ರೀತಿಯ ಇನ್ನೊಂದು ಮುಖ ತ್ಯಾಗವೂ ಗೊತ್ತಿರಲಿ
ಸುಸಂಕೃತ ನಾಡಲಿ ಹೆಣ್ಣ ಜೀವಕೆ ಬೆಲೆ ಇರಲಿ.

——————————-

One thought on “ರೋಹಿಣಿ ಯಾದವಾಡ ಕವಿತೆ-ಹೆಣ್ಣು ಹತ್ಯೆ

Leave a Reply

Back To Top