ವಂಶ ಬೆಳಿಲಿಕ್ಕೆ ಮನೆಗೆ ಒಂದು ಗಂಡು ದಿಕ್ಕಿಲ್ಲ, ವರ್ಷಕ್ಕೊಂದರಂತ ಸಾಲು ಸಾಲಾಗಿ ನಾಲ್ಕು ಹೆಣ್ಣು ಮಕ್ಕಳು, ರಾಮ, ರಾಮಾ ಏನೂಂತ ಮದುವೆಯಾದೆ ಇವಳನ್ನು “ಎಂದು ಅಪ್ಪಟ ಸಂಪ್ರದಾಯವಾದಿ ರುಕ್ಮಿಣಿಬಾಯಿ ಸರ್ಕಾರಿ ಕೆಲಸದಲ್ಲಿರುವ ತನ್ನ ಸೊಸೆ ವಿಮಲಳನ್ನು ಕುರಿತು ನಿಂದಿಸುವಾಗ ಕೋಪ ತಡೆಯಲಾಗದೇ ತಾಳ್ಮೆಯ ಕಟ್ಟೆ ಒಡೆದು ಅಂದೇ ಮೊದಲ ಬಾರಿಗೆ ತನ್ನ ನೋವನ್ನು ಹೊರಹಾಕಿದಳು ವಿಮಲ.”ನಾನು ಮದುವೆಯಾದಾಗಿನಿಂದ ನಿಮ್ಮ ಮಾತಿಗೆ ಗೌರವ ಕೊಟ್ಟು ಅನುಸರಿಸಿಕೊಂಡು ಬಂದಿದ್ದೇನೆ.ಗಂಡಿರಲಿ ಹೆಣ್ಣಿರಲಿ ಎರಡೇ ಮಕ್ಕಳು ಸಾಕು.ಅವರನ್ನೇ ಚನ್ನಾಗಿ ಓದಿಸೋಣ ಎಂದಾಗ ನೀವು ಮಗನೊಂದಿಗೆ ಸೇರಿ ಗಂಡು ಮಗು ಬೇಕೆಂದಿರಿ, ಈಗ ನೋಡಿ ನಾಲ್ಕು ಹೆಣ್ಣು ಮಕ್ಕಳು, ಇದರ ನಡುವೆ ನನ್ನ ಆರೋಗ್ಯ,ನನ್ನ ಬಗ್ಗೆ ನನ್ನ ಮಕ್ಕಳ ಬಗ್ಗೆ ವಿಚಾರಿಸಿದ್ದೀರಾ?”ಎಂದಾಗ “ನೋಡೋ ರಂಗ ನಮಗೆ ನೀನೊಬ್ಬನೇ ಮಗ,ನಿನ್ನ ವಂಶ ಬೆಳಗಲು ಒಬ್ಬ ಮಗ ಬೇಕೇ ಬೇಕು,ಅದಕ್ಕೆ ನೀನು,ಇನ್ನೊಂದು ಮದುವೆ ಮಾಡಿಕೋ”ಎಂದು ಮಗನನ್ನು ಪೀಡಿಸುತ್ತಿರುವಾಗ ಮಗನಾದ ರಂಗನಾಥ ತಾಯಿಗೆ ತಿಳಿಸಿ ಹೇಳಲಾರಂಭಿಸಿದ.”ಅಮ್ಮ ನೀನು ಹೇಳಿದಂತೆ ಗಂಡು ಮಗುವನ್ನು ಪಡೆಯಲು ಕಾದು ಈಗ ನಾಲ್ಕು ಹೆಣ್ಣು, ಪಾಪ ವಿಮಲಾ ಕೂಡ ನೌಕರಿ ಮಾಡುತ್ತಿದ್ದಾಳೆ ಅವಳಿಗೂ ತುಂಬಾ ಕಷ್ಟ.ಒಂದು ಮಾತನ್ನು ಚನ್ನಾಗಿ ನೆನಪಿನಲ್ಲಿಟ್ಟುಕೊ ಗಂಡು ಮಗು ಆಗದಿರಲು ಕೇವಲ ವಿಮಲ ಮಾತ್ರ ಕಾರಣಳಲ್ಲ, ಮುಖ್ಯ ಕಾರಣ ಗಂಡು  ಅಂದರೆ ನಾನು ಅದು ನಿನಗರ್ಥವಾಗಲ್ಲ ಬಿಡು!” ಎಂದು ಸಮಾಧಾನಪಡಿಸಿದ.

ವಿಮಲಳ ಮನಸಿಗೆ ತುಸು ಸಮಾಧಾನವಾಯಿತು.ಯಾಕೆಂದರೆ ರಂಗನಾಥನ ಗೆಳೆಯ ರವಿಗೆ ಮೊದಲ ಮಗು ಗಂಡಾದ ಸುದ್ಧಿಯನ್ನು ಫೋನ್ ಮೂಲಕ ತಿಳಿಸಿದಾಗ ಸಂತೋಷಗೊಂಡಂತೆ ರವಿಯೊಡನೆ ಮಾತನಾಡಿ ಫೋನಿಟ್ಟಾಗ ವಿಮಲ’ಯಾರ ಜೊತೆ ಮಾತನಾಡ್ತಾ ಇದ್ರಿ ಯಾಕೆ ಡಲ್ ಆದ್ರಿ”ಅಂದಾಗ ಸುಶೀಕ್ಷಿತನಾಗಿದ್ದ ರಂಗನಾಥನಿಗೆ ಆ ದಿನ ಏನಾಗಿತ್ತೊ ಗೊತ್ತಿಲ್ಲ,ವಿಮಲಳಿಗೆ”ನನ್ನ ಗೆಳೆಯ ರವಿಯಶ ಫೋನು ಕಣೆ, ಗಂಡು ಮಗುವಾಯ್ತಂತೆ, ನೀನು ಇದ್ದಿಯ ಸಾಲು ಸಾಲಾಗಿ ನಾಲ್ಕು ಹೆಣ್ಣು ಮಕ್ಕಳನ್ನು ಹೆತ್ತಿದ್ದಿಯಾ”ಅಂದಾಗ ಅಂದಿನಿಂದ ಮೌನದಿಂದಿದ್ದ ವಿಮಲಳಿಗೆ ಅತ್ತೆಯ ಮಾತಿಗೆ ಕೋಲೆಬಸವನಂತೆ ತಲೆಯಾಡಿಸುವ ವ್ಯಕ್ತಿ ಇವತ್ತು ತನ್ನ ಕುರಿತು ಮಾತನಾಡಿದ ರೀತಿ ಅವಳಲ್ಲಿ ಆನಂದ ತಂದಿತ್ತು.

ನಿಜ, ಎಷ್ಟೋ ಕುಟುಂಬಗಳಲ್ಲಿ ಸಾಕ್ಷರರಾದ ಗಂಡು ಮಕ್ಕಳು ತಮ್ಮ ತಂದೆ ತಾಯಿಯ ಮಾತಿಗೆ ಕಟ್ಟು ಬಿದ್ದು ಎರಡನೇ ಮದುವೆಯಾಗಿ ಮತ್ತೆ ಹೆಣ್ಣು ಮಕ್ಕಳಿಗೆ ತಂದೆಯಾದದ್ದು ಇದೆ.ವಿಜ್ಞಾನ  ತಂತ್ರಜ್ಞಾನ ಮುಂಚೂಣಿಯಲ್ಲಿರುವ ಈ ದಿನಗಳಲ್ಲಿ ಮೂಢನಂಬಿಕೆಯ ಛಾಯೆ ಇನ್ನೂ ತೊಲಗಬೇಕಿದೆ.
ಹೆಣ್ಣು ಗಂಡು ಎಂಬ ತಾರತಮ್ಯ ನೀಗಿ ಸಮಾನತೆ ತರಲು ಯತ್ನಿಸಲಾಗುತ್ತಿದ್ದರೂ ನಾವಂದುಕೊಂಡಂತೆ ಸಂಪೂರ್ಣವಾಗಿ ಸಮಾನತೆಯನ್ನು ತರಲಾಗುತ್ತಿಲ್ಲ.”ಮಗನಿದ್ದರೇ ಮೋಕ್ಷ, ಮರಣ ಹೊಂದಿದ ಮೇಲೇ ಅದರ ಕ್ರಿಯಾ ಕರ್ಮಗಳನ್ನು ಮಗ ಮಾಡಿದರೇ ಮಾತ್ರ ಸಾರ್ಥಕ”ಎಂಬ ಮಾತಿದೆ.ಆದರೆ ಗಂಡು ಸಂತತಿ ಇಲ್ಲದ ಹೆತ್ತವರು ಸುಖವಾಗಿಲ್ಲವೇ? ಅವರನ್ನು ಗಂಡುಮಕ್ಕಳಿಗಿಂತ ಉತ್ತಮವಾಗಿ ಆರೈಕೆ ಮಾಡುವ  ಹೆಣ್ಣು ಮಕ್ಕಳು ವೃದ್ಧಾಶ್ರಮಕ್ಕೆ ಕಳಿಸದೇ ತಮ್ಮ ಒಡಲ ಮಗುವಂತೆ ಪೋಷಿಸುತ್ತಾರೆ.ಇದಕ್ಕಿಂತ ಹೆಚ್ಚಿ ನ ಸೌಭಾಗ್ಯ ಏನಿದೆ?.ಕೆಲವು ದಿನಗಳ ಹಿಂದೆ ಒಂದು ಪತ್ರಿಕೆಯಲ್ಲಿನ ಸುದ್ಧಿಯನ್ನು ಓದಿ ಒಂದುಕ್ಷಣ,ಬಾಯಿಂದ ಮಾತೇ ಬರದೇ ಕಣ್ಣಾಲಿಗಳು ತೇವಗೊಂಡ ಘಟನೆ ನಿಜಕ್ಕೂ ಖೇದಕರ ಸಂಗತಿ.ಕಷ್ಟಪಟ್ಟು ಮಗನನ್ನು ಕಲಿಸಿ  ಒಂದು ಸರ್ಕಾರಿ ಉದ್ಯೋಗಿಯನ್ನಾಗಿಸಿದ ತಂದೆಯ ಪರಿಶ್ರಮ ಮೆಚ್ಚುವಂತದ್ದು. ಆದರೆ ಮಗ ಮಾಡಿದ ನೀಚಕೃತ್ಯವನ್ನು ನೆನೆಸಿಕೊಂಡಾಗ ಮೈ ಉರಿಯುತ್ತೆ.ಅದೇನೆಂದರೆ ವಯಸ್ಸಾದ ತಂದೆಯನ್ನು ನೋಡಿಕೊಳ್ಳಲಾಗದ ಮಗ ಸೊಸೆ ಅವನನ್ನು ಒಂದು ವೃದ್ಧಾಶ್ರಮಕ್ಕೆ ಬಿಟ್ಟು ಬರುತ್ತಾರೆ. ಮನೆಗೆ ಬಂದು ಮಕ್ಕಳಿಗೆ ನಿಮ್ಮ ಅಜ್ಜ ಮನೆ ಬಿಟ್ಟು ಹೋದರು ಎಂದು ನಂಬಿಸುತ್ತಾರೆ.ಅವರು ಯಾವಾಗ ಬರುತ್ತಾರೆಂದು ಕೇಳಿದ ಮಕ್ಕಳಿಗೆ”ನಿಮ್ಮ ಅಜ್ಜ ದೇವರ ಹತ್ತಿರ ಹೋಗಿದ್ದಾರೆ ಮತ್ತೆ ಬರುವದಿಲ್ಲ”ಎಂದಾಗ ಪಾಪ ಮಕ್ಕಳು ಅವರ ಮಾತಿಗೆ ಮರು ಮಾತನಾಡದೇ ಪ್ರೀತಿಯ ಅಜ್ಜನನ್ನು ನೆನೆದು ಕಣ್ಣಿರಿಡುತ್ತಾರೆ.

ಒಮ್ಮೆ ಮೊಮ್ಮಗಳು ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ತಮ್ಮ ಶಾಲೆಯ ಮಕ್ಕಳೊಂದಿಗೆ ಹೋಗುತ್ತಾಳೆ.ಅಲ್ಲಿ ಆಕಸ್ಮಿಕವಾಗಿ ಶಿಕ್ಷಕರು ಎಲ್ಲ ಮಕ್ಕಳನ್ನು ವೃದ್ಧಾಶ್ರಮಕ್ಕೆ ಕರೆದೊಯ್ದಾಗ ಕಾಕತಾಳೀಯ ಎಂಬಂತೆ ತನ್ನ ಅಜ್ಜನನ್ನು ಕಂಡು ಬಿಗಿದಪ್ಪಿ ಮನೆಗೆ ವಾಪಸು ಕರೆತಂದಾಗ ಅವಳ ಅಪ್ಪ ಅಮ್ಮ ಭೂಮಿಗಿಳಿದಂತೆ ತಲೆತಗ್ಗಿಸಿದ ನೈಜ ಘಟನೆ ನಿಜಕ್ಕೂ ಅಮಾನವೀಯ ಅಲ್ಲವೇ?

ಹೆಣ್ಣುಮಗಳು ಎಂದರೆ Tension ಪಡುವ ಮೊದಲು ಅವಳು Ten son ಗೆ ಅಂದರೆ ಹತ್ತು ಗಂಡು ಮಕ್ಕಳಿಗೆ ಸಮ ಎಂದು ತಿಳಿಯಬೇಕು.ಗಂಡು ಮಕ್ಕಳಿದ್ದರೂ ಹೆಣ್ಣು ಮಕ್ಕಳೇ ತನ್ನ ಹೆತ್ತವರನ್ನು ನೋಡಿಕೊಂಡ ಜ್ವಲಂತ ಸಾಕ್ಷಿಗಳಿಗೇನೂ ಕಡಿಮೆ ಇಲ್ಲ.


“ಗಂಡು ಹೆಣ್ಣು ಇಂದು ಸಮಾನ
ಬೇಕಾಗಿಲ್ಲ ಗಂಡಿಲ್ಲವೆಂಬ ಅವಮಾನ
ಸಬಲೆಯಾಗಿ ಸಲಹುತಿಹಳು ಜಗವ
ಕಷ್ಟವಿಲ್ಲ ಅವಳಿಗೆ ಹೊರಲು ಸಂಸಾರದ ನೊಗವ”


ಎಂಬಂತೆ ಗಂಡಾಗಲಿಲ್ಲ ಬರೀ ಹೆಣ್ಣು ಎಂದು ವಿಚಾರಿಸುವ ಮೊದಲು ಮಕ್ಕಳೇ ಇಲ್ಲದವರನ್ನು ಕಂಡು ನಮಗೆ ಹೆಣ್ಣು ಮಕ್ಕಳಾದರೂ ಇದ್ದಾರೆ ಎಂದು ಸಮಾಧಾನ ಪಟ್ಟುಕೊಳ್ಳಬೇಕು.
ಹೆಣ್ಣು ಇದ್ದ ಮನೆಯದು ನಂದ ಗೋಕುಲ ಅಂದರೆ ಗಂಡು ಬೇಡವಂತಲ್ಲ,ಹೆಣ್ಣು ಮಗಳು ತನ್ನ ಹೆತ್ತವರ ಕಷ್ಟ ಅರಿತು ಚಿಕ್ಕಂದಿನಲ್ಲಿಯೇ ಆಸರೆಯಾಗವ ಆಸೆಯನ್ನು ಹೊಂದಿರುತ್ತಾಳೆ. ಒಂದು ಕ್ಷಣ ಯೋಚಿಸಿ ಹಬ್ಬ ಹರಿದಿನಗಳಲ್ಲಿ ಕಾಲ್ಗೆಜ್ಜೆಯೊಂದಿಗೆ ಹೊಸ ಜರೀ ಲಂಗ ತೊಟ್ಟು ಓಡಾಡುತ ಮನೆಯಲಿ ನೆರವಾಗೀತ ತಮ್ಮ ತಂಗಿಯರನು ಮುದ್ದಿಸುತ ಪ್ರೀತಿಯ ಮನೆ ಮಗಳಿದ್ದಾಗ ಮನೆಯೇ ಸ್ವರ್ಗ.


Leave a Reply

Back To Top