ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊಸ ವರ್ಷದ ವಿಶೇಷ-2023

ಗಜ಼ಲ್

ಹಮೀದಾ ಬೇಗಂ ದೇಸಾಯಿ

ಅದೇಕೋ ಜನರ ಭಾವಗಳು ಬಿಕರಿ ಆಗುತ್ತಿವೆ ಈಗೀಗ
ಹತಾಶೆಯ ನೋವು ಮಡುಗಟ್ಟಿ ಮುಳ್ಳಂತೆ ಚುಚ್ಚುತ್ತಿವೆ ಈಗೀಗ

ಕನಸುಗಳು ಕರಗುತ್ತಿವೆ ಮಂಜುಗಡ್ಡೆ ತೆರದಿ ಏಕೋ ಏನೋ
ಬಿದ್ದ ತುಣುಕುಗಳು ಸಿಗದೆ ಜಾರಿ ಹೋಗುತ್ತಿವೆ ಈಗೀಗ

ಭರಾಟೆಯಲಿ ನಡೆದಿದೆ ಅರ್ಧಂಬರ್ಧ ಬೆಂದ ಶಬ್ದಗಳ ವ್ಯಾಪಾರ
ಗರಿಯಾದ ನೋಟುಗಳ ಹಿಂದೆ ಪ್ರತಿಭೆಗಳು ಓಡುತ್ತಿವೆ ಈಗೀಗ

ಅರ್ಥವಿಲ್ಲದ ಮೋಜಿಗಾಗಿ ತನ್ನತನದ ನಿರ್ಲಜ್ಜ ಮಾರಾಟ
ಹಳದಿ ಚಷ್ಮಾದ ರಂಗಿನಲ್ಲಿ ನಿಯತ್ತುಗಳು ಮುಗ್ಗರಿಸಿ ಬೀಳುತ್ತಿವೆ ಈಗೀಗ

ಅಂತರಂಗದ ಬೆಳಕು ಕಾಣದೆ ತಡಕಾಡುವುದು ತರವಲ್ಲ ಬೇಗಂ
ಒಳಗಣ್ಣು ತೆರೆದಾಗ ಭರವಸೆಯ ಕಿರಣಗಳು ಕಾಣುತ್ತಿವೆ ಈಗೀಗ


About The Author

3 thoughts on “”

  1. ಮಮತಾಶಂಕರ್

    ಬಹಳ ಚೆಂದದ ಗಝಲ್ ಹಮೀದಾ ಮೇಡಂ….
    ವಾಸ್ತವದ ವಿಷಾದಭಾವ….

  2. ಅರ್ಚನಾ ಯಳಬೇರು

    ಅದ್ಭುತವಾಗಿ ವಾಸ್ತವದ ಅನಾವರಣ ಮಾಡಿದ್ದೀರಿ

Leave a Reply

You cannot copy content of this page

Scroll to Top