ಕಾವ್ಯ ಸಂಗಾತಿ
ಕಳೆದು ಹೋಗುವ ಮುನ್ನ
ಸುರೇಶ್ ಕಲಾಪ್ರಿಯಾ
ಸತ್ಯಸಂಪನ್ನರಾಗಿ’ ಎಂದ ಸದ್ಗುರುಗಳ ಮಾತು
ಹಿಂದೆ ಸರಿಯದಂತ ವೇದವಾಕ್ಯವಾಗಬೇಕಿತ್ತು…. ಸಕಲರಿಗೂ
ಪಾಲಿಸುವರು ಹಲವು ಮಂದಿ. ಕೆಲವರಿಗದು..? ಅಪಥ್ಯ..!!
ಸ್ವಾರ್ಥವೇನಿದೆ ಗುರುವಾಣಿಯಲ್ಲಿ? ಜನಹಿತವೊಂದನ್ನು ಬಿಟ್ಟು
ಮೊಸರಿನಲ್ಲೇಕೆ ಹುಡುಕಬೇಕು ಕಲ್ಲನು..? ಅನುಮಾನದಿ!
ಎಲ್ಲವೂ ಅಭಾವ ಕೆಲವೇ ಕೆಲವು ವರ್ಷಗಳ ಹಿಂದೆ
ಈಗದು….? ಪ್ರಭಾವಗಳ ಮಂದೆ..!!
ಪತ್ರಿಕೆಯೂ.. ಚಲನಚಿತ್ರವೂ… ಮಾಧ್ಯಮವೂ
ಹೇಳುವುದೇ ಹೇಳುತ್ತಾ ಊದುತ್ತಿವೆ ಪುಂಗಿಯ
ಮರುಳಾದವರ ಪಾಡು..? ಹಳಿಯ ತಪ್ಪಿದ ರೈಲು
ಯುವಪಡೆಯ ನಡೆಯು ಚಿಂತೆಗೆ ದೂಡಿದೆ ಮನವ
ಎತ್ತ ಸಾಗುತ್ತಿದೆ ಸಮೂಹ? ಸತ್ಕಾರ್ಯ ಮರೆತು
ಮೊಬೈಲ್ ದಾಸತ್ವ… ಕಳೆದುಕೊಂಡು ಅಂತಃಸತ್ವ
ನೂರರ ಗಡಿಯತ್ತ ಅಂಕಗಳ ನಾಗಾಲೋಟವಿದೆ
ಸಾಮಾಜಿಕ ಪ್ರಜ್ಞೆ ಹಿಂದಡಿ ಇಟ್ಟು ಮಮ್ಮಲ ಮರುಗುತ್ತಿದೆ
ಬೇಡವಾದವುಗಳೇ ತುಂಬಿ ತುಳುಕುತ್ತಿವೆ ಇಲ್ಲಿ
ನೋಡಬಾರದವೂ ಕೂಡ ರಾರಾಜಿಸುತ್ತಿವೆ ಹಾಗೇ
ಗೀತೆ, ಭಾಗವತದ ಆಲಿಸುವಿಕೆ, ಪಾರಾಯಣ ದೂರ
‘ಮೋಜ್’ ಮಸ್ತಿಗೆ ತುಟಿಯಾಡಿಸಿದರೂ ಸಾಕು ನಟಭಯಂಕರ
ಸಂಸ್ಕೃತಿ….? ಛೇ.. ಮರೆಯಾಗಿ ಮೆರೆಯುತ್ತಿದೆ ವಿಕೃತಿ!!
ತಿದ್ದಬೇಕಾದವರೂ ತಪ್ಪುತ್ತಿದ್ದಾರೆ ಹಾದಿ
ಅನುಸರಿಸುವವನ ಮನಸ್ಸು ಮತ್ತೂ ಚಂಚಲ
ಗುರಿಯ ದಾರಿಯು ನಿಖರವಾಗಿರಬೇಕು ಸದಾ
ನಿರ್ಮಾಣದ ಆದ್ಯತೆಯಾಗಬೇಕಿದೆ ಸುಸಂಸ್ಕೃತ ಸಮಾಜ
ಸೃಷ್ಟಿಯಾಗಬೇಕಿದೆ ಕಾವ್ಯ ಜಗವ ತಿದ್ದುವಂತೆ, ಅದುವೇ ನಿಜವಾಗುವಂತೆ.
ಯುವಸಮುದಾಯದ ಶಕ್ತಿ ಅನಾವಶ್ಯಕವಾಗಿ ಪೋಲಾಗುತ್ತಿರುವುದು ಪ್ರಸ್ತುತತೆಗೆ ಸಾಕ್ಷಿಯಾಗಿದೆ