ಯೋಗೇಂದ್ರಾಚಾರ್ ಎ ಎನ್ ಕವಿತೆ-ಎಚ್ಚರಿಕೆ

ಕಾವ್ಯ ಸಂಗಾತಿ

ಎಚ್ಚರಿಕೆ

ಯೋಗೇಂದ್ರಾಚಾರ್ ಎ ಎನ್

ಎಚ್ಚರಿಕೆ…..

ಹೆಣ್ಣನ್ನು ಪೂಜಿಸುವ
ಹೆಣ್ಣನ್ನು ಗೌರವಿಸುವ
ಹೆಣ್ಣನ್ನು ಹಾಡಿ ಹೊಗಳಿ
ಲಾಲಿತ್ಯಾದಿ ಪದಗಳಿಂದ
ಹೊಗಳುವ ನಾಡಲ್ಲಿ
ಹೆಣ್ಣನ್ನು ತುಂಡು ತುಂಡಾಗಿಸಿ
ಹಲ್ತಿಕ್ಕಿ ಮತ್ಸರ ಮಸೆವ
ಕಾಮಿಷ್ಟ ಸೈಕೋಗಳಿದ್ದಾರೆ
ಎಚ್ಚರಿಕೆ

ಮಣ್ಣನ್ನು ಕಣ್ಗೊತ್ತಿಕೊಳ್ಳುವ
ಮಣ್ಣನ್ನು ಎದೆಗವಚಿಕೊಳ್ಳುವ
ಮಣ್ಣನ್ನು ಉತ್ತಿ ಬಿತ್ತಿ
ಹೊನ್ನ ತೆಗೆಯುವವರ ನಾಡಲ್ಲಿ
ಅಕ್ರಮ ಸಕ್ರಮವೆಂದು
ತಲೆ ಹಿಡಿವ ಲೂಟಿಕೋರರಿದ್ದಾರೆ
ಎಚ್ಚರಿಕೆ

ಮಾತನ್ನು ಹೂರಣವನ್ನಾಗಿಸುವ
ಮಾತನ್ನು ವಚನವನ್ನಾಗಿಸುವ
ಮಾತನ್ನು ಹೂದೋಟವನ್ನಾಗಿಸುವ
ಹೃದಯವಂತರ ನಾಡಲ್ಲಿ
ರಾಜಕೀಯ ಬಣ್ಣವ ಮೆತ್ತಿ
ಕತ್ತಲಲ್ಲಿ ಕೂರಿಸುವ
ಗರಗಸ ಜಿಹ್ವೆಯ
ಭಂಡ ಮಾತಿನ ಮಲ್ಲರಿದ್ದಾರೆ
ಎಚ್ಚರಿಕೆ

ಕಪ್ಪನ್ನು ಜರಿಯುವ
ವಿಷವನ್ನು ಕಕ್ಕುವ
ಹಣವೆಂದರೆ
ತಿಪ್ಪೆ ಗುಂಡಿ ಚರಂಡಿ
ಡಾಂಬಾರು ಸಗಣಿಯನ್ನೂ
ನೆಕ್ಕಿ ಜೇಬಿಗೇರಿಸುವ
ನರ ಹಂತಕರಿದ್ದಾರೆ
ಎಚ್ಚರಿಕೆ
ಎಚ್ಚರಿಕೆ


Leave a Reply

Back To Top