ಕವಿತಾ ಹಿರೇಮಠ-ಗಜಲ್

ಕಾವ್ಯ ಸಂಗಾತಿ

ಗಜಲ್

ಕವಿತಾ ಹಿರೇಮಠ

ಎಳೆಯರಿಗೆ ನಾಡು ನುಡಿಯ ಪ್ರೀತಿ ಮೂಡಿಸೋಣ ನಾವು
ಕನ್ನಡಿಗರೆಂದು ಎದೆತಟ್ಟಿ ಗರ್ವದಿಂದ ಹೇಳೋಣ ನಾವು

ಸಂಸ್ಕೃತಿ, ಶಿಲ್ಪಕಲೆ, ವೀರಪರಂಪರೆಯ ತವರು ಕರುನಾಡು
ಒಂದೇ ಬಳ್ಳಿಯ ಹೂಗಳಂತೆ ಒಟ್ಟಾಗಿ ಬಾಳೋಣ ನಾವು

ಗೆಲ್ಲಲಿ, ಬಾಳಲಿ, ಮೆರೆಯಲಿ, ಉಸಿರಲ್ಲಿ ಬೆರತ ತಾಯ್ನುಡಿ ಕನ್ನಡ
ಭೇದವಿಲ್ಲದೆ ಪೊರೆವ ಭುವನೇಶ್ವರಿಗೆ ನಮಿಸೋಣ ನಾವು

ರನ್ನ ಪೊನ್ನ ಪಂಪರು ಸಂಭ್ರಮಿಸಿದ ನುಡಿಯೇ ಸಿರಿಗನ್ನಡ
ಜ್ಞಾನಪೀಠ ಪುರಸ್ಕೃತರ ಸೇವೆಯನ್ನು ನೆನೆಯೋಣ ನಾವು

ತನುಮನ ಕಂಪಿಸುವ ಕವಿ ಹೃದಯದ ಮಿಡಿತವೇ ಸವಿಗನ್ನಡ
ಜಾತಿ, ಧರ್ಮವೆನ್ನದೇ ಅಭಿವೃದ್ಧಿ ಪಥದತ್ತ ಸಾಗೋಣ ನಾವು


ಕವಿತಾ ಹಿರೇಮಠ

Leave a Reply

Back To Top