ಪುಸ್ತಕಗಳರಿವು
ಜ್ಞಾನದುಳಿವು…..

ಕಾವ್ಯ ಸಂಗಾತಿ

ಪುಸ್ತಕಗಳರಿವು ಜ್ಞಾನದುಳಿವು…..

ಅಭಿಜ್ಞಾ ಪಿ ಎಮ್ ಗೌಡ

ಪುಸ್ತಕವನು ಓದಿದರೆ
ಕಸ್ತೂರಿ ಘಮದಂತೆ
ಮಸ್ತಕದ ತುಂಬೆಲ್ಲ ಬರೀ ಚೆಲುವು.!
ಚಿಮ್ಮುವುದು ಜ್ಞಾನದೊಳೆ
ವಿಸ್ತರಿಸಿ ಪಾಂಡಿತ್ಯ
ಮಸ್ತಾಗಿ ಕಲಿಯುವ ಒಲವು..!!

ಹೊತ್ತಿಗೆಯೊಳು ಮುಳುಗಿದರೆ
ಒಂಟಿತನ ದೂರಾಗಿ
ಸಾಂಗತ್ಯ ಸಂಪ್ರೀತಿಯ
ಜ್ಞಾನದರಿವು ಉಚಿತ…
ಲಾಲಿತ್ಯ ಬೀರಿರಲು
ಸಸ್ತವೆನಿಸುವ ವಿಷಯಧಾರೆ
ಶಿಸ್ತಿನೊಳು ಒಳಹೊಕ್ಕಿ
ಚಿಮ್ಮುವುದು ಅರಿವಿನೊಳೆ ಖಚಿತ…

ಕಲ್ಪನೆಯ ಶಕ್ತಿಯನೀ ವೃದ್ಧಿಸುತ
ಮನೋವಿಕಾಸದ
ವಿಸ್ತರಿಪ ಭಾವಗಳ ಕಸುವಲ್ಲಿ
ಸದ್ಭಾವ ಸದ್ಗುಣಗಳ ಬಲವೆಚ್ಚಿ.!
ಸಂಸ್ಕೃತಿ ಸಂಸ್ಕಾರಗಳ
ರೀತಿ ನೀತಿಗಳ ಜಾಡು
ತಲೆಯೊಕ್ಕಿ ಮೆರೆಸುತಲಿ
ಬಾನಾಡಿಗಳಂತೆ ಗೆಲುವು ಹೆಚ್ಚಿ.!

ಕೋಶವನು ಓದುತ್ತ
ದೇಶವನು ಸುತ್ತಿದೊಡೆ
ಮನೆವೆಂಬ ಮಂದಿರದಿ
ಮಸ್ತಕದ ಭಾಸುರವು ಅದ್ಭುತ.!
ತೋಷದಲಿ ಕಲಿಯುತ್ತ
ಭಾಷೆಯನು ಉಳಿಸುತ
ಓದಿದಂಶಗಳ ಮೆಲುಕಲ್ಲಿ
ಬಲುಚಂದವೀ ಸಂಕಲಿತ..!

ಸದ್ವಿಷಯ ಸದ್ಭಕ್ತಿ
ಹೆಚ್ಚುತಿರೆ ಮನದೊಳಗೆ
ಅರಿವೆಂಬ ಗುಡಿಯನ್ನು
ನೆಲೆಸಿರಲು ಶಿರದೊಳಗೆ .!!
ಏರುತ್ತ ಕುಣಿಯುತ್ತ
ಮನವನು ತಣಿಸುತ
ಪುಸ್ತಕದ ವಿಚಾರಾಂಶ ಹೆಚ್ಚುತಲಿ
ಮಸ್ತಕವೆಂಬ ಗ್ರಂಥಾಲಯದೊಳಗೆ

ಎದೆಯಾಳುವ ವಿದ್ಯೆ
ಭುವಿಗಿಳಿಯುವ ಬೀಜ
ಎಂದೆಂದು ಹಸಿರುಸಿರು
ಈ ಸಾಂಗತ್ಯದಲಿ ಸಂತೃಪ್ತಿ..!
ವಿನಯದಡಿ ಜ್ಞಾನವದು
ವಿಸ್ತರಿಸಿ ವದ್ಯೆಯನು
ಬಿತ್ತರಿಸಿ ನಿಂತಿರಲು
ಎಂದೆಂದು ನಮಗಿದೊ ಆತ್ಮತೃಪ್ತಿ..!!


Leave a Reply

Back To Top