ಶ್ರೀಗಳ ನೆನಪಿಗಾಗಿ
ಸಿದ್ದಗಂಗೆಯ ಬೆಳಕು
ಅನುಸೂಯ ಯತೀಶ್.
ಹಸಿದ ಒಡಲಿಗೆ ತುತ್ತನಿತ್ತು
ಜ್ಞಾನದಾಹಕೆ ವಿದ್ಯೆಯನಿತ್ತು
ದೇಹಿಯೆಂದವಗೆ ಆಸರೆಯನಿತ್ತ
ತ್ರಿವಿಧ ದಾಸೋಹಿ ಮಹಾಪುರುಷರಿವರು
ಮಕ್ಕಳಲ್ಲೆ ದೈವ ಕಾಣುತ
ಪ್ರೀತಿ ಪ್ರೇಮ ಧಾರೆಯೆರೆಯುತ
ಅನಾಥರೆಂಬ ಭಾವ ದೂಡುತ
ಪೊರೆದ ದಿವ್ಯ ಚೇತನಯಿವರು
ನಡೆವ ದಾರಿ ಬೋಧಿಸದೆ
ನಡೆದು ಪಥವ ಸೃಷ್ಟಿಸುತ
ಜಾತಿ ಮತ ಪಂತ ಎಣಿಸದ
ಸರ್ವಜನಾಂಗದ ಕಣ್ಮಣಿಯಿವರು
ತ್ರಿವಿಧ ದಾಸೋಹ ಪಡೆದ ಮಕ್ಕಳಿಂದು
ನಾಡು ನುಡಿಯ ಬೆಳಗುತಿಹರು ಪ್ರಣತಿಯಾಗಿ
ಪ್ರತಿ ಮನೆಯಲು ದೀಪ ಹಚ್ಚುವರು
ಮನೆ ಬೆಳಗಿದ ನೈಜ ದೈವಯಿವರು
ಸೇವೆಯೇ ಸಕಲ ಧರ್ಮಗಳ ಮೂಲವೆನುತ
ಮೃದು ಮಧುರ ಮಾತಿನ ತಪವಗೈಯಿರೆನುತ
ಸಹಜ ಪ್ರೀತಿ ಕಲ್ಲು ಕರಗಿಸುವುದೆನುತ
ಕಟುಕರಲ್ಲೂ ಕರುಣೆ ಪ್ರೀತಿ ಬಿತ್ತಿದ ಕರುಣಾಮಯಿವರು
ಹಸಿದ ಮನಕೆ ಪ್ರಾರ್ಥನೆಯು ಪ್ರಸಾದವೆನುತ
ಆತ್ಮಬಲವೇ ಸಾಕ್ಷಾತ್ಕಾರದ ಮೂಲವೆನುತ
ಶ್ರಮದ ಮೌಲ್ಯ ಎತ್ತಿ ಹಿಡಿಯುತ
ದುಡಿಮೆಯೇ ಜೀವನದ ಪರಮ ಮೌಲ್ಯವೆಂದ ಕಾಯಕ ಯೋಗಿಯಿವರು
ಸಮಾಜದ ಏಳಿಗೆಗಾಗಿ ಜ್ಞಾನದ ಬೀಜ ಬಿತ್ತುತ
ಶಿಕ್ಷಣವನ್ನು ದಾಸೋಹದ ರೀತಿಯಲಿ ಪಸರಿಸುತ
ಜೋಳಿಗೆ ಹಿಡಿದು ಧರ್ಮಸಂಸ್ಥೆ ಕಟ್ಟಿದ
ಲೋಕ ಕಲ್ಯಾಣಕ್ಕಾಗಿ ನಿತ್ಯ ಶ್ರಮಿಸಿದ ಜ್ಯೋತಿಯಿವರು
ಸ್ತ್ರೀಯರು ಸಮಾಜದ ಕಣ್ಣುಗಳೆನುತ
ಹೆಣ್ಣಿನ ಸಂಸ್ಕಾರವೇ ಧರ್ಮತತ್ವವೆನುತ
ಧರ್ಮವು ಗುಡಿ ಗೋಪುರಗಳಲಿಲ್ಲ
ಮನುಷ್ಯನ ಹೃದಯವೇ ಧರ್ಮ ಮಂದಿರವೆಂದ ಜಂಗಮರಿವರು
ಎರಡು ಮನೆಗಳ ಬೆಳಕಿನ ಹಬ್ಬ ವಿವಾಹವೆನುತ
ಅದ್ದೂರಿಗಳಿಲ್ಲದ ಸಮಾರಂಭ ಪ್ರೋತ್ಸಾಹಿಸುತ
ಸೇವೆ ಪ್ರಚಾರದ ಸರಕಲ್ಲ ವೆನುತ
ಎಲೆಮರೆ ಕಾಯಿಯಂತೆ ದುಡಿದ ತ್ಯಾಗಿಯಿವರು
ಸಕಲ ಜೀವಿಗಳಲ್ಲು ಸಿದ್ದೇಶ್ವರರ ಕಾಣುತ
ಭಕ್ತರ ಭಕ್ತಿಯಲ್ಲಿ ಮಿಂದೇಳುತ
ಬಸವ ತತ್ವವ ನಾಡಿನ ತುಂಬೆಲ್ಲ ಪಸರಿಸುತ
ಸೇವೆಗೈದ ಶತಾಯುಷಿ ಸಿದ್ಧಿ ಪುರುಷರಿವರು
ತನುವಿನ ತುಂಬೆಲ್ಲ ವಿಭೂತಿ ದರಿಸುತ
ಇಷ್ಟಲಿಂಗ ಪೂಜೆಯಲಿ ಮೈಮರೆಯುತ
ಗುರು ಲಿಂಗ ಜಂಗಮರನು ಆರಾಧಿಸುತ
ಶಿವನಲ್ಲಿ ಲೀನವಾದ ಶಿವಯೋಗಿಯಿವರು