ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ನಿಮ್ಮೊಂದಿಗೆ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,”ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು.ಡಾ ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಡಾ ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ, “ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು. ಕುರುಬರ ಕುಲಗುರು ಒಡೆಯರ ಶಾಖೆಯೊಂದರ ಪ್ರಮುಖ ಸಿದ್ಧ ಅಮೋಘಸಿದ್ಧ ಅಪ್ಪಟ ಜನಪದರ ದೈವ. ಈತನ ಮಟ್ಟಿಗೆ ಜನಪದರ ನಂಬಿಕೆಯೇ ಚರಿತ್ರೆ; ಭಂಡಾರದ ಮಳೆ ಸುರಿದಲ್ಲೇ ಜಾತ್ರೆ. ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಜನಮಾನಸದಲ್ಲಿ ಕುರುಬರ ಇನ್ನೋರ್ವ ಕುಲಗುರುವಾದ ರೇವಣಸಿದ್ಧರಷ್ಟೇ ಪ್ರಖ್ಯಾತನಾಗಿದ್ದಾನೆ. ಆದರೆ ರೇವಣಸಿದ್ಧನಿಗಿರುವಂತೆ ಈತನ ಕುರಿತು ಶಾಸನಾಧಾರಗಳಾಗಲಿ, ಶಿಷ್ಟಕಾವ್ಯಗಳಾಗಲಿ ಇಲ್ಲ. ಈತನ ಜೀವಂತಿಕೆ ಇರುವುದು ಜನಪದರ ಮೌಖಿಕ ಸಾಮಗ್ರಿಗಳಲ್ಲಿ. ಅಮೋಘಸಿದ್ಧನ ಮೂಲ ನೆಲೆ ವಿಜಯಪುರದಿಂದ ಹತ್ತನ್ನೆರಡು ಕಿಲೋ ಮೀಟರ್ ದೂರದ ಅರಿಕೇರಿ ಸಮೀಪದ ಮುಮ್ಮೆಟಗುಡ್ಡ. ಇವನ ಜಾತ್ರೆಯನ್ನು ಜನ ಇಂದಿಗೂ ಮುಮ್ಮಡಪ್ಪನ ಜಾತ್ರೆ ಎಂದೇ ಕರೆಯುತ್ತಾರೆ. ಅಮೋಘಸಿದ್ಧನನ್ನು ಕೈಲಾಸದಲ್ಲಿ ಉದ್ಭವಿಸಿ ಭೂಲೋಕದಲ್ಲಿ ಅವತರಿಸಿದಂತೆ ಪಾರಂಪರಿಕ ಪುರಾಣ ಕಥನದಲ್ಲಿ ಕಲ್ಪಿಸಿಕೊಂಡಿರುವುದರಿಂದ ಈತ ಕಾಲಾತೀತನಾಗಿ ಗೋಚರಿಸುತ್ತಾನೆ. ಆ ಪ್ರಕಾರ ಈತ ಅವತರಿಸಿದ ನಂತರ ಉತ್ತರ ಭಾರತದ ಹಸ್ತಿನಾವತಿಯಲ್ಲಿ ಕೆಲ ದಿನವಿದ್ದು ಪಾಂಡವರು ಕೈಕೊಂಡ ಯಾಗದಲ್ಲಿ ಪಾಲ್ಗೊಳ್ಳುತ್ತಾನೆ. ಕುಂತಿಯಿಂದ ಸೇವೆ ಪಡೆದು ವಾರದ ಒಡೆಯ ಅನ್ನಿಸಿಕೊಳ್ಳುತ್ತಾನೆ.  ಅಮೋಘಸಿದ್ಧನ ಮಗನಾದ ಬಿಳಿಯಾನಿಸಿದ್ದನು ಕಲ್ಯಾಣಪಟ್ಟಣಕ್ಕೆ ಹೋಗಿ ಅಲ್ಲಿನ ಮಡಿವಂತ ಲಿಂಗಾಯತರಿಗೆ ನೀವೆಲ್ಲ ಕಟ್ಟುಲಿಂಗದವರಾದರೆ ನಾನು ಹುಟ್ಟುಲಿಂಗದವನು ಎಂಬುದನ್ನು ಸಾಬೀತುಪಡಿಸುತ್ತಾನೆ.  ಅಮೋಘಸಿದ್ಧನ ಮೊದಲ ಮಗನಾದ ಅವತಾರ ಅವಧೂಸಿದ್ಧ ವಿಜಾಪುರದ ಶೇಖಾಶಾಹಿಗಳೊಂದಿಗೆ ಕಾದಾಡಿದ್ದು ಹಾಗೂ ಅಮೋಘಸಿದ್ಧನ ಮೊಮ್ಮಗನಾದ ಮಲಕಾರಿಸಿದ್ಧನು ಆನೆಗುಂದಿ ಅರಸರೊಂದಿಗೆ ಹಾಗೂ ಸುರಪುರದ ದೊರೆಗಳೊಂದಿಗೆ ಹಸು ಮೇಯಿಸುವ ಜಾಗೆಯ ವಿಷಯದಲ್ಲಿ ಹಾಕ್ಯಾಡಿದ ವಿವರ ಜನಪದ ಮೌಖಿಕ ಸಾಮಗ್ರಿಗಳಲ್ಲಿ ನೈಜವಾಗಿ ದೊರೆಯುತ್ತವೆ.  …ಹೀಗೆ ತಂದೆ-ಮಗ-ಮೊಮ್ಮಗ ಮೂರು ತಲೆಮಾರುಗಳ ಈ ಕಥನದಲ್ಲಿ ಹಸ್ತಿನಾವತಿಯ ದ್ವಾಪರಯುಗ,  ಕಲ್ಯಾಣದ ಬಸವಯುಗ,  ವಿಜಾಪುರದ ಶಾಹಿಕಾಲ, ಆನೆಗುಂದಿಯ  ವಿಜಯನಗರದ ಕಾಲ ಹಾಗೂ ಸುರಪುರದ ಪಾಳೆಗಾರರ ಕಾಲ  ಸೇರಿದಂತೆ ವಿವಿಧ ಕಾಲಘಟ್ಟದಲ್ಲಿ ಇವರು ಗೋಚರಿಸುತ್ತಾರಾದ್ದರಿಂದ ಯಾವುದೇ ಕಾಲದ ಚೌಕಟ್ಟಿಗೆ ಸಿಗದೆ ಇಡೀ ಪರಂಪರೆ ಕಾಲಾತೀತವಾಗಿ ತೋರುತ್ತದೆ.  ಜನಪದರ ನಾಲಗೆಯ ನಂಬಿಕೆಗಳನ್ನೇ ನೆಚ್ಚಿ ತಲತಲಾಂತರಗಳಲ್ಲಿ ಹರಿದು ಬರುವ ಅಮೋಘಸಿದ್ದನ ಕಥನ ಪುರಾಣೀಕರಣಗೊಂಡು ಕಾಲದ ಹಂಗನ್ನು ಹರಿದುಕೊಳ್ಳುವ ಪರಿಯೇ ವಿಸ್ಮಯಕಾರಿಯಾದದ್ದು. ಈ ವಿಸ್ಮಯಕಾರಿ ಕಥನವನ್ನು ಅಮೋಘಸಿದ್ದ ಪರಂಪರೆಯ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿರುವ ಡಾ.ಚನ್ನಪ್ಪ ಕಟ್ಟಿಯವರು  ಕಟ್ಟಿಕೊಟ್ಟಿದ್ದಾರೆ.  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಶಿವಪ್ಪ-ಕಾಶಿಬಾಯಿ ದಂಪತಿಗಳ ಮಗನಾಗಿ ಶ್ರೀ ಯಲ್ಲಾಲಿಂಗರು ಜನಿಸಿದರು. ಬಾಲ್ಯದಿಂದಲೇ ಶಿವಧ್ಯಾನದಲ್ಲಿದ್ದ ಇವರು, ಮುಗಳಖೋಡದ ಸ್ಮಶಾನಭೂಮಿಯನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು, ಭಿಕ್ಷಾಟನೆ, ಸಮಾಜ ಸೇವೆ ಹಾಗೂ ದಾಸೋಹದ ಮೂಲಕ ಭಕ್ತರಿಗೆ ಮಾರ್ಗದರ್ಶನ ನೀಡಿದ ಮಹಾ ಸಿದ್ಧಿಪುರುಷರು.  ಯಲ್ಲಾಲಿಂಗ ಮಹಾರಾಜರ ಜೀವನದ ಪ್ರಮುಖಾಂಶಗಳು: ಬಾಲ್ಯ ಮತ್ತು ಕಾಯಕ  ಬಾಲ್ಯದಲ್ಲಿ ಕುರಿ ಕಾಯುವ ಕಾಯಕ ಮಾಡುತ್ತಿದ್ದ ಯಲ್ಲಪ್ಪ, ಇಪ್ಪತ್ತರ ಹರೆಯದಲ್ಲಿ ಕುಸ್ತಿಪಟುವಾಗಿದ್ದರು. ವೈವಾಹಿಕ ಜೀವನ:  ಮನೆಯವರ ಒತ್ತಾಯದ ಮೇರೆಗೆ ಹೊನ್ನಮ್ಮ ಎಂಬುವರೊಂದಿಗೆ ವಿವಾಹವಾದರು. ಕರ್ಮಭೂಮಿ:  ಮುಗಳಖೋಡ ಗ್ರಾಮದ ಸ್ಮಶಾನ ಭೂಮಿಯನ್ನು ಮುಕ್ತಿ ಮಂದಿರವನ್ನಾಗಿ ಮಾಡಿಕೊಂಡು, ಅಧ್ಯಾತ್ಮಿಕ ಜೀವನ ನಡೆಸಿದರು. *ಸಿದ್ಧಿ ಮತ್ತು ಸಮಾಜ ಸೇವೆ:  ಸಿದ್ಧಲಿಂಗರ ಆಶೀರ್ವಾದ ಪಡೆದಿದ್ದ ಯಲ್ಲಾಲಿಂಗರು, ಸುತ್ತಮುತ್ತಲಿನ ಗ್ರಾಮದ ಜನರಿಗೆ ಸತ್ಯದ ಮಾರ್ಗ ತೋರಿಸುತ್ತಿದ್ದರು. ಮುಗಳಖೋಡ ಮಠ:  ಯಲ್ಲಾಲಿಂಗ ಮಹಾರಾಜರ ಕರ್ತೃ ಗದ್ದುಗೆ ಮುಗಳಖೋಡದಲ್ಲಿದ್ದು, ಇದು ಭಕ್ತರ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ 24 ಗಂಟೆಗಳ ಕಾಲ ದಾಸೋಹ (ಅನ್ನದಾನ) ನಡೆಯುತ್ತದೆ.  ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾರಾಜರು ಉತ್ತರದ ಕರ್ನಾಟಕದಲ್ಲಿ ಅತ್ಯಂತ ಪೂಜನೀಯರಾಗಿದ್ದು, ಅವರ ಜೀವನ ಸತ್ಯ, ಭಕ್ತಿ ಮತ್ತು ಸೇವಾ ಮನೋಭಾಕ್ಕೆ ಸಾಕ್ಷಿಯಾಗಿದೆ. ಅಮೋಘ ಸಿದ್ಧ ಪರಂಪರೆಯ ಶ್ರೀ ಸಿದ್ಧಲಿಂಗರ ಆಶೀರ್ವಾದ ಕೃಪೆಯಿಂದ ತಮ್ಮ ಬದುಕನ್ನು ಶಿವಯೋಗ ಸಾಧನಕ್ಕೆ ಮೀಸಲಿಟ್ಟವರು ಪೂಜ್ಯರಾದ ಶ್ರೀ ಯಲ್ಲಾಲಿಂಗರು. ಮುಗುಳುಖೋಡ ಮುತ್ಯಾ ಎಂದು ಜನರು ಕರೆಯುತ್ತಿದ್ದರು. ಮೈಲಾರಲಿಂಗ ಎಂದರೆ ಮೈಯಲ್ಲಿ ಆರು ಲಿಂಗ ಗುರು ಲಿಂಗ ಜಂಗಮ ಲಿಂಗ ಹೀಗೆ. ಆದರೆ ಯಲ್ಲಾಲಿಂಗವೆಂದರೆ ಇಡೀ ಕಾಯ ಶರೀರವೇ ಲಿಂಗ ಎಲ್ಲವೂ ಲಿಂಗ ಎಂಬಂತೆ ಬಸವ ತತ್ವಕ್ಕೆ ಅನುಗುಣವಾಗಿ ಬಾಳಿ ಬದುಕಿದ ನಾವು ಕಂಡ ಶ್ರೇಷ್ಠ ಶಿವಯೋಗ ಸಾಧಕರು. ಬಡವರ ಪಾಲಿನ ಆಶಾಕಿರಣ ಭಕ್ತರ ನಂಬಿಕೆಯ ಶ್ರೇಷ್ಠ ಶಿವಯೋಗ ಸಾಧಕರು ಯಲ್ಲಾಲಿಂಗರು. ಬಂದ ಭಕ್ತರಿಗೆ ಅಂಬಲಿ ನೀಡಿ ಪ್ರೀತಿ ಗೌರವ ವಿಶ್ವಾಸದಿಂದ ಮಾತನಾಡಿ ಅವರ ದುಗುಡು ದುಮ್ಮಾನಗಳನ್ನು ದೂರು ಮಾಡುತ್ತಿದ್ದರು. ಜಿಡಗಾ ಮುಗುಳುಖೋಡ ಬೆಳಗಾವಿಯ ಶ್ರೀನಗರದಲ್ಲಿ ಇವರ ಮಠವಿದೆ.  ಯಲ್ಲಾಲಿಂಗರ ನಂತರ ಶ್ರೀ ಸಿದ್ಧರಾಮಸ್ವಾಮಿಗಳು ಮತ್ತೆ ಈಗ ಶ್ರೀ ಡಾ ಮುರುಘರಾಜೇಂದ್ರ ಶ್ರೀಗಳು ತಮ್ಮ ದಿವ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ.ಇಂತಹ ಪೂಜ್ಯರನ್ನು ಹೊಂದಿದ ನಮ್ಮ ಕರ್ನಾಟಕದ ನೆಲವೇ ಪಾವನ ಸುಕ್ಷೇತ್ರ. ಇವರಿಗೆ ಭಕ್ತಿಪೂರ್ವಕ ಶರಣಾರ್ಥಿಗಳು. ________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಸಾವಿಲ್ಲದ ಶರಣರು ಮಾಲಿಕೆ,”ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು.ಡಾ ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಇತರೆ

“ಯಶಸ್ಸಿನ ಪಯಣದ ಹಾದಿ -1” ವೀಣಾ ಹೇಮಂತ್ ಗೌಡ ಪಾಟೀಲ್

ಯಶಸ್ಸಿನ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ “ಯಶಸ್ಸಿನ ಪಯಣದ ಹಾದಿ -1” ಬದುಕಿನಲ್ಲಿ ಏನನ್ನಾದರೂ ಮಹತ್ತರವಾದದನ್ನು ಸಾಧಿಸಬೇಕು, ಯಶಸ್ವಿಯಾಗಬೇಕು, ಸಮಾಜದಲ್ಲಿ ಗಣ್ಯ ಸ್ಥಾನವನ್ನು ಹೊಂದಬೇಕು ಎಂದು ಯಾವ ವ್ಯಕ್ತಿ ಬಯಸುವುದಿಲ್ಲ ಹೇಳಿ? ಬಹುಷಃ ಪ್ರತಿಯೊಬ್ಬ ಮನುಷ್ಯನ ಅಂತರಾಳದಲ್ಲಿ ಈ ಒಂದು ಹಂಬಲ ಇದ್ದೇ ಇರುತ್ತದೆ. ಆದರೆ ಕೇವಲ ಹಂಬಲ ಇದ್ದರೆ ಸಾಲದು ಅದಕ್ಕೆ ತಕ್ಕ ಪ್ರಯತ್ನವು ಬೇಕು.ವ್ಯಾಯಾಮ ಮಾಡಿದರೆ ದೇಹ ಗಟ್ಟಿಮುಟ್ಟಾಗುತ್ತದೆ ಸ್ನಾಯುಗಳು ಬಲಶಾಲಿಯಾಗುತ್ತವೆ ಸರಳವಾಗಿ ರಕ್ತ ಪರಿಚಲನೆ ಆಗುತ್ತದೆ ಆರೋಗ್ಯ ಸುಧಾರಿಸುತ್ತದೆ ನಿಜ ಹಾಗೆಂದು ಆ ವ್ಯಾಯಾಮವನ್ನು ನಾವು ಮಾಡುವುದು ಬಿಟ್ಟು ನಮ್ಮ ಜೊತೆಗಿರುವವರಿಗೆ ಇಲ್ಲವೇ ಕೆಲಸದವರಿಗೆ ಸಂಬಳ ಕೊಟ್ಟು ವ್ಯಾಯಾಮ ಮಾಡಿಸಿದರೆ ನಮ್ಮ ದೇಹ ಗಟ್ಟಿಯಾಗುವುದಿಲ್ಲ ಅಲ್ವೇ ಸ್ನೇಹಿತರೆ ?ನಮ್ಮ ತನು ಮನಗಳು ಗಟ್ಟಿಯಾಗಲು ನಾವೇ ಕಸರತ್ತು ಮಾಡಬೇಕು ಹೊರತು ಬೇರೆಯವರಲ್ಲ ಅಂತೆಯೇ ನಮ್ಮ ಬದುಕಿನ ಯಶಸ್ಸಿಗೆ ನಾವುಗಳು ಪ್ರಯತ್ನ ಪಡಬೇಕೆ ಹೊರತು ಇನ್ನೊಬ್ಬರಲ್ಲ.ನಮ್ಮ ಪಾಲಕರು ನಮಗೆ ಜನ್ಮ ನೀಡಿರುತ್ತಾರೆ ಅವರ ಕನಸಿನ ಕೂಸುಗಳು ನಾವು ನಿಜ ಅವರು ನಮಗೆ ದಾರಿ ತೋರುತ್ತಾರೆ, ಆ ದಾರಿಯಲ್ಲಿ ನಡೆಯಲು ಪ್ರೇರೇಪಿಸುತ್ತಾರೆ ಹಾಗೂ ಆ ದಾರಿಯಲ್ಲಿ ಸಾಗಲು ಬೇಕಾಗುವ ಎಲ್ಲಾ ರೀತಿಯ ಸಹಾಯ, ಸಹಕಾರಗಳನ್ನು ಒದಗಿಸುತ್ತಾರೆ ಆದರೆ ಆ ದಾರಿಯನ್ನು ನಡೆಯಬೇಕಾದವರು ನಾವೇ ಹೊರತು ಬೇರೆಯವರಲ್ಲ.ಯಶಸ್ಸು ನಮ್ಮ ಕನಸಿನ ಕೂಸು. ಒಂದೊಮ್ಮೆ ಸತತ ಪರಿಶ್ರಮದ ನಂತರ ಅದನ್ನು ಪಡೆದ ವ್ಯಕ್ತಿ ಧನ್ಯತಾ ಭಾವದಿಂದ ನನ್ನ ಯಶಸ್ವಿಗೆ ನನ್ನ ಪಾಲಕರು, ಗುರುಗಳು, ಒಡಹುಟ್ಟಿದವರು, ಸ್ನೇಹಿತರು, ಬಂಧುಗಳು, ಸಂಗಾತಿ ಮಕ್ಕಳ ಸಹಕಾರ ಕಾರಣ ಎಂದು ಹೇಳಬಹುದು ಆದರೆ ಖುದ್ದು ಪ್ರಯತ್ನ ಪಟ್ಟಿರುವುದು ಮಾತ್ರ ಅವರೇ ಆಗಿರುತ್ತಾರಲ್ಲವೇ? ಯಶಸ್ಸಿಗೆ ನೂರಾರು ಜನ ಪಾಲುದಾರರು ಆದರೆ ಸೋಲು ಅನಾಥ, ಒಬ್ಬಂಟಿ, ತಬ್ಬಲಿ. ತಮ್ಮದೇ ಬದುಕಿನಲ್ಲಿ ತಾವು ಕೈಗೊಂಡ ನಿರ್ಧಾರಗಳ ಫಲವಾಗಿ ಅನುಭವಿಸುವ ಸೋಲನ್ನು ಯಾರೂ ಕೇವಲ ತಮ್ಮ ಆಯ್ಕೆಯ ಪರಿಣಾಮ ಎಂದು ಖಂಡಿತವಾಗಿಯೂ ಒಪ್ಪಿಕೊಳ್ಳುವುದಿಲ್ಲ…. ಬದಲಾಗಿ ತನ್ನ ಬದುಕಿನ ಎಲ್ಲಾ ಅವಘಡಗಳಿಗೆ ನಾನು ಹುಟ್ಟಿರುವ ದೇಶ ಸರಿ ಇಲ್ಲ, ಬದುಕುತ್ತಿರುವ ಪ್ರದೇಶದ ವ್ಯವಸ್ಥೆ ಸರಿಯಾಗಿಲ್ಲ ತನ್ನ ಹೆತ್ತವರು ತನಗೆ ಬೇಕಾದ ರೀತಿಯ ವ್ಯವಸ್ಥೆಗಳನ್ನು ಒದಗಿಸಿ ಕೊಡಲಿಲ್ಲ, ತನ್ನ ಸಹೋದ್ಯೋಗಿಗಳು, ಸಂಗಾತಿ ಕುಟುಂಬ ಹೀಗೆ ತನ್ನ ಸುತ್ತಲಿನ ಎಲ್ಲರೂ ತನಗೆ ಸಹಾಯ ಸಹಕಾರ ನೀಡಲಿಲ್ಲ ಮನೆಯಲ್ಲಿ ತಾವು ಬಯಸಿದ ಅನುಕೂಲತೆಗಳು ಇಲ್ಲ…. ಆದ್ದರಿಂದಲೇ ನನಗೆ ಗೆಲುವು ಅಸಾಧ್ಯವಾಯಿತು ಎಂದು ಹೇಳುತ್ತಾರೆ.ನನ್ನ ಸೋಲಿಗೆ ಬದುಕಿನಲ್ಲಿ ನನ್ನ ಆಯ್ಕೆಗಳೇ ಕಾರಣ ನನ್ನ ಯೋಜನೆಗಳು ಸರಿಯಾಗಿರಲಿಲ್ಲ. ಮಾಡಬೇಕಾದ ವಯಸ್ಸಿನಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳನ್ನು ನಾನು ಮಾಡಲಿಲ್ಲ ಎಂದು ತಮಗೆ ತಾವೇ ಎಂದೂ ಹೇಳಿಕೊಳ್ಳುವುದಿಲ್ಲ…… ಇಲ್ಲಿಯೇ ಮನುಷ್ಯ ತಪ್ಪುವುದು.ಇಡೀ ಜಗತ್ತಿಗೆ ನಮ್ಮ ಸೋಲು ಗೆಲುವುಗಳ ಪರಿಭಾಷೆಯನ್ನು ನಾವು ಒತ್ತಿ ಹೇಳಬಹುದು. ಆದರೆ ನಮ್ಮದೇ ಆತ್ಮಕ್ಕೆ, ನಮ್ಮ ಮನಸ್ಸಿಗೆ ನಾವು ಸುಳ್ಳು ಹೇಳಲು, ತಪ್ಪು ಉತ್ತರ ಕೊಡಲು, ಸಮಜಾಯಿಷಿ ಕೊಡಲು ಸಾಧ್ಯವಾಗುತ್ತದೆಯೇ? ಒಂದೊಮ್ಮೆ  ಸಾಧ್ಯವಾಗುತ್ತದೆ ಎಂದಾದರೆ ಖಂಡಿತವಾಗಿಯೂ ನಾವು ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದೇವೆ ಎಂದೇ ಅರ್ಥ… ಏಕೆಂದರೆ ನಾವು ಇಡೀ ಜಗತ್ತನ್ನು ಮೋಸ ಮಾಡಬಹುದು, ವಂಚಿಸಬಹುದು ಆದರೆ ವೈಯಕ್ತಿಕವಾಗಿ ನಮ್ಮ ಅಂತರಾತ್ಮವನ್ನು ಎಂದಿಗೂ ವಂಚಿಸಲು ಸಾಧ್ಯವಿಲ್ಲ ಅಲ್ಲವೇ?ಆದ್ದರಿಂದ ಸ್ನೇಹಿತರೆ…ತಮ್ಮ ಸೋಲು ಗೆಲುವುಗಳಿಗೆ ನಾವೇ ಹೊಣೆಗಾರರಾಗೋಣ. ನಮ್ಮ ಬದುಕಿನಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ನಾವು ಹಾಕಿಕೊಳ್ಳುವ ಯೋಜನೆಗಳ ಸಾಧಕ ಬಾಧಕಗಳ ಅರಿವು ನಮಗೆ ಇರಬೇಕು. ನಮ್ಮ ಯೋಜನೆಗಳಲ್ಲಿ ಸತ್ವವಿದ್ದರೆ ಹಾಗೂ ನಮ್ಮ ಪ್ರಯತ್ನವನ್ನು ನಾವು 100 ಶೇಕಡ ಹಾಕಿದಲ್ಲಿ ಖಂಡಿತವಾಗಿಯೂ ಗೆಲುವು ನಮ್ಮದಾಗುತ್ತದೆ ಒಂದೊಮ್ಮೆ ಗೆಲ್ಲದಿದ್ದರೂ ಪರವಾಗಿಲ್ಲ ಸೋಲು ಕಲಿಸುವ ಅನುಭವದ ಪಾಠ ಅದಕ್ಕಿಂತ ದೊಡ್ಡದು. ಮತ್ತೊಂದು ಹೊಸ ಗೆಲುವಿಗೆ ಅದು ನಮ್ಮನ್ನು ತಯಾರು ಮಾಡುತ್ತದೆ… ಆದರೆ ಈ ಬಾರಿ ಹಿಂದಿನ ವಿಫಲತೆಯ ಕಾರಣಗಳು ನಮ್ಮನ್ನು ಜಾಗೃತಗೊಳಿಸಿಹಳೆಯ ತಪ್ಪುಗಳು ಮರುಕಳಿಸದಂತೆ ನಮ್ಮನ್ನು ಎಚ್ಚರಿಸುತ್ತಾ ಹೊಸ ಸಾದ್ಯತೆಗಳ ಕುರಿತು ನಮಗೆ ತಿಳುವಳಿಕೆ ಹೇಳುತ್ತಾ  ಹೊಸ ಗೆಲುವಿಗೆ ದಾರಿ ತೋರುತ್ತವೆ.ಎಷ್ಟೋ ಬಾರಿ ಬದುಕಿನ ಹಾದಿಯಲ್ಲಿ ಏನೆಲ್ಲ ಪ್ರಯತ್ನ ಮಾಡಿಯೂ ಕೂಡ ಯಶಸ್ಸು ದಕ್ಕುವುದಿಲ್ಲ… ಹಾಗೆಂದು ನಿರಾಶರಾಗುವುದು ಬೇಕಿಲ್ಲ. ಯಶಸ್ಸಿನ ಏಣಿಯನ್ನು ಏರುವುದು ಅಷ್ಟು ಸುಲಭವಲ್ಲ ಒಂದೇ ಒಂದು ಹಂತದ ಎಡವುವಿಕೆಯು ಕೂಡ ನಮ್ಮನ್ನು ಇನ್ನಿಲ್ಲದಂತೆ ಕೆಳಗೆ ತಳ್ಳುತ್ತದೆ…. ಆದ್ದರಿಂದ ಬದುಕಿನಲ್ಲಿ ಸದಾ ಜಾಗೃತ ಸ್ಥಿತಿ ನಮ್ಮದಾಗಿರಬೇಕು. ಮತ್ತೆ ಹೊಸ ಉತ್ಸಾಹದಿಂದ ಒಡಗೂಡಿ ಪ್ರಯತ್ನವನ್ನು ಮುಂದುವರಿಸಬೇಕು.ಬದುಕಿನಲ್ಲಿ ನಮಗೆ ಸದಾ ಎರಡು ಆಯ್ಕೆಗಳಿರುತ್ತವೆಮೊದಲನೆಯದ್ದು ಬದುಕು ಬರುವಂತೆಯೇ ಅದನ್ನು ಸ್ವೀಕರಿಸುವುದು ಎರಡನೆಯದ್ದು ಬದುಕಿನಲ್ಲಿ ನಮ್ಮದೇ ಆದ ಕೆಲವು ಗುರಿ ಮತ್ತು ಉದ್ದೇಶಗಳನ್ನು ಹೊಂದಿ ಅವುಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವುದು.ಮೊದಲನೆಯದ್ದು ಅತ್ಯಂತ ಸುಲಭ.. ಬದುಕು ಬಂದ ರೀತಿಯಲ್ಲಿ ಅದನ್ನು ಸ್ವೀಕರಿಸುತ್ತಾ ಮುಂದೆ ಸಾಗುವುದು. ಬೇರೆ ಯಾವುದೇ ಆಯ್ಕೆಗಳು ಇಲ್ಲದೆ ಇದ್ದಾಗಲೂ ಕೂಡ ನಾವು ಮೊದಲ ಆಯ್ಕೆಯನ್ನು ನಮ್ಮದಾಗಿಸಿಕೊಳ್ಳುತ್ತೇವೆ. ಬದುಕಿನಲ್ಲಿ ಯಾವುದೇ ರೀತಿಯ ಏರಿಳಿತಗಳು ಬೇಡ ಎಂದಲ್ಲ ಅದೊಂದು ರೀತಿಯ ಸಂತೃಪ್ತ ಭಾವ ಎಂದು ತೋರಬಹುದು. ಇರುವುದರಿಂದಯೇ ತೃಪ್ತರಾಗುವುದು….ಆದರೆ ಅದೊಂದು ಏಕತಾನತೆಯನ್ನು ಹುಟ್ಟು ಹಾಕುವ ಭಾವ. ಬದುಕಿನ ಒಂದು ಹಂತದಲ್ಲಿ ಈ ರೀತಿಯ ಭಾವ ನಮ್ಮಲ್ಲಿ ನೀರಸತೆಯನ್ನು ಉಂಟು ಮಾಡಿ ನಮ್ಮ ಕುರಿತು ನಮಗೆ ಜಿಗುಪ್ಸೆಯನ್ನು ಹುಟ್ಟಿಸಬಹುದು.ಬದುಕಿನಲ್ಲಿ ನಾನೇನೂ ಮಾಡಲು ಸಾಧ್ಯವಾಗಲಿಲ್ಲ ಎಂದು ತೋರಬಹುದು ಇಲ್ಲವೇ ಬೇರೆಯವರು ತಮ್ಮ ಬದುಕಿನಲ್ಲಿ ಸಾಧಿಸಿದ್ದನ್ನು ಕಂಡು ಹೆಮ್ಮೆಪಡುವುದರ ಜೊತೆಗೆ ತಾವು ಪ್ರಯತ್ನ ಪಡಲಿಲ್ಲ ಎಂಬ ಕುರಿತು ಪಶ್ಚಾತಾಪವಾಗಬಹುದು ಇಲ್ಲವೇ ಅವರ ಕುರಿತು ಅಸೂಯೆ ಪಡುವಂತಾಗಬಹುದು ತಮ್ಮಿಂದ ಸಾಧ್ಯವಾಗದ್ದು ಬೇರೆಯವರಿಗೆ ಸಾಧ್ಯವಾಗಿದೆ ಎಂದಾದರೆ ಅವರು ವಾಮ ಮಾರ್ಗವನ್ನು ಅನುಸರಿಸಿದ್ದಾರೆ ಎಂಬ ಕುತ್ಸಿತ  ಮನೋಭಾವ ಉಂಟಾಗಬಹುದು….. ಇದನ್ನು ಬಿಟ್ಟರೆ ಇವರಲ್ಲಿ ಅಷ್ಟೇನೂ ದೊಡ್ಡ ಪ್ರಮಾದವಿಲ್ಲ.ನಿಜವಾಗಿಯೂ ನೀವು ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಆಶಿಸಿದ್ದರೆ ಸಾಧಿಸಲೇಬೇಕು ಎಂಬ ಹಂಬಲ ನಿಮಗಿದ್ದರೆ ನೀವು ಎರಡನೆಯ ಆಯ್ಕೆಯನ್ನು ನಿಮ್ಮದಾಗಿಸಿಕೊಳ್ಳುತ್ತೀರಿ ಅಂತಹ ಆಯ್ಕೆಯನ್ನು ಕೇವಲ ಬಾಯಿಮಾತಿನ ಇಲ್ಲವೇ ಆ ಕ್ಷಣದಲ್ಲಿ ನೀವು ಮಾಡಿದ ಕ್ಷಣಿಕ ನಿರ್ಧಾರವಾದರೆ ನೀವು ಸೋಲುತ್ತೀರಿ, ಹತಾಶರಾಗಿ ಬೇಗನೆ ಕೈ ಚೆಲ್ಲುತ್ತೀರಿ ಇಲ್ಲವೇ ನಿಮ್ಮ ನಿರ್ಧಾರವನ್ನು ಕೈಬಿಡುತ್ತೀರಿ. ಬದಲಾಗಿ ನಿಮ್ಮ ಗುರಿ ಹಾಗೂ ಉದ್ದೇಶ ನಿಮ್ಮ ಮನದಾಳದ ಭಾವನೆಯಾಗಿ ಪ್ರತಿಕ್ಷಣವೂ ನಿಮ್ಮನ್ನು ಆ ಉದ್ದೇಶಕ್ಕಾಗಿ ತುಡಿಯುವಂತೆ ಕಾರ್ಯಪ್ರವೃತ್ತರಾಗುವಂತೆ ಮಾಡಿದರೆ ಖಂಡಿತವಾಗಿಯೂ ನೀವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತೀರಿ. ಆ ಸಾಧನೆಗಾಗಿ ತುಡಿಯುವಂತೆ  ಕಾರ್ಯ ಪ್ರವೃತ್ತರಾಗುವಂತೆ ಸದಾ ನಿಮ್ಮನ್ನು ನೀವು ಹುರಿದುಂಬಿಸಿಕೊಳ್ಳುತ್ತೀರಿ.ಸೋಲುಗಳನ್ನು ಸವಾಲುಗಳಾಗಿ ಸ್ವೀಕರಿಸಿ ಬರುವ ಎಲ್ಲಾ ಎಡರು ತೊಡರುಗಳನ್ನು ಸಾಧನೆಯ ಹಾದಿಯ ಕಲ್ಲು ಮುಳ್ಳುಗಳು ಎಂಬಂತೆ ಸಕಾರಾತ್ಮಕವಾಗಿ ಭಾವಿಸಿ ಅವುಗಳನ್ನು ನಿವಾರಿಸಿಕೊಳ್ಳುತ್ತಾ ಮುಂದೆ ಸಾಗುವಿರಿ.ಗುರಿಯ ಉದ್ದೇಶ ಹಾಗೂ ಸಾಧನೆಗೆ ಕೇವಲ ಬಾಹ್ಯ ಚಟುವಟಿಕೆಗಳು ಮಾತ್ರ ಕಾರಣವಾಗುವುದಿಲ್ಲ ನಮ್ಮ ವೈಯುಕ್ತಿಕ ಬದುಕಿನಲ್ಲಿ ನಾವು ರೂಢಿಸಿಕೊಳ್ಳುವ ಕೆಲಸಗಳು ಕೂಡ ನಮ್ಮ ಯಶಸ್ಸಿನ ಬದುಕಿಗೆ ತಮ್ಮ ಪಾಲನ್ನು ಸಲ್ಲಿಸುತ್ತವೆ. (ಈ ಕುರಿತು ಮತ್ತಷ್ಟು ಮಾತುಕತೆಗಳು ಮುಂದಿನ ಲೇಖನದಲ್ಲಿ) ವೀಣಾ ಹೇಮಂತ್ ಗೌಡ ಪಾಟೀಲ್

“ಯಶಸ್ಸಿನ ಪಯಣದ ಹಾದಿ -1” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಕಾವ್ಯಯಾನ

ಚಂದ್ರು ಪಿ ಹಾಸನ್ “ಪ್ರೇಮಗಂಗೆ”

ಕಾವ್ಯ ಸಂಗಾತಿ ಚಂದ್ರು ಪಿ ಹಾಸನ್ “ಪ್ರೇಮಗಂಗೆ” ಪ್ರೇಮಗಂಗೆ ಓ  ನನ್ನೊಲವಗಂಗೆ ಎನ್ನೆದೆಯಾಳದಿ ಜನ್ಮಿಸಿದ ಪ್ರೇಮಗಂಗೆನಿನ್ನ ಚಲನವಲನ ನನ್ನವಳ ಕೂಗಿದೆ ನೀ ಮಿಡಿದ ಬಡಿತದ ಕಲರವಒಮ್ಮೆ ಕಾಣುವ ಹಂಬಲ ತಂದಿದೆ ಬಂಜರು ಭೂಮಿಯಲ್ಲಿ ಮಳೆಗರೆದು ಹಸಿರು ಹಸನಾಗಿ ಹರಡುವಂತೆನಿನ್ನ ನವಿರಾದ ಹರಿವಿನ ಅರಿವು ಮನದಲ್ಲಿ ಸೊಗಸಾದ ಆಸೆ ಚಿಗುರಿಸಿಪ್ರೇಮದ ಕಾರಂಜಿಯನ್ನು ಚಿಮ್ಮುತ್ತಿದೆ. ನೀರಿನ ಜುಳುಜುಳು ನಾದ ಕೇಳಿ ಹಕ್ಕಿಪಿಕ್ಕಿಗಳು ಚಿಲಿಪಿಲಿ ಎನ್ನುವಂತೆಹೃದಯದ ಅರಗಿಣಿ ಬಡಿತವ ಎಬ್ಬಿಸಿಭಾವ ಅಲೆಗಳು ನರನಾಡಿಯಲ್ಲಿ ಹರಡಿನಿನ್ನ ಹೆಸರಿನ ತುಡಿತವ ಮಿಡಿಯುತ್ತಿದೆ ಸ್ವಚ್ಛಂದದ ನೀರಿನ ಕಣಕಣದ ಹರಿವು ಧರೆಗೆ ಸೇರಿ ಘಮಘಮಿಸುವಂತೆಎನ್ನ ನೀರೆಯ ಒಲವು ತನುವೆಲ್ಲ ಹರಡಿ ಮುಖಕಮಲ ಮಿನುಗಿಸಿ ಅಡಗಿದೆಯೇ ಅಂತರಗಂಗೆ ಓ ನನ್ನ ಪ್ರೇಮಗಂಗೆ ಚಂದ್ರು ಪಿ ಹಾಸನ್

ಚಂದ್ರು ಪಿ ಹಾಸನ್ “ಪ್ರೇಮಗಂಗೆ” Read Post »

ಪುಸ್ತಕ ಸಂಗಾತಿ

ವಾಣಿ ಭಂಡಾರಿ ಅವರ ಕೃತಿ “ಮಲ್ನಾಡು ಕವಳ” ಅವಲೋಕನ ಗಣೇಶ್ ವಂದಗದ್ದೆ

ಪುಸ್ತಕ ಸಂಗಾತಿ ಗಣೇಶ್ ವಂದಗದ್ದೆ ವಾಣಿ ಭಂಡಾರಿ “ಮಲ್ನಾಡು ಕವಳ”       ಮಲೆನಾಡಿನ ಮೂಲೆಯಾದ ರಿಪ್ಪನ್ ಪೇಟೆಯಲ್ಲಿ ಜನಿಸಿದ ಶ್ರೀಮತಿ ವಾಣಿ ಭಂಡಾರಿ ಅವರು ಬಹುಮುಖ ಪ್ರತಿಭೆಯ ಸಾಹಿತಿ. ತಮ್ಮ ಶಾಲಾ ದಿನಗಳಿಂದಲೂ ಸಾಹಿತ್ಯ,ಸಂಸ್ಕೃತಿ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಆಸಕ್ತಿ ವಹಿಸುತ್ತಿದ್ದ ಶ್ರೀಮತಿ ವಾಣಿಯವರು  ಕನ್ನಡದ ಹೆಸರಾಂತ ಲೇಖಕಿಯಾಗಿ ಹೊರಬಂದಿರುವುದಲ್ಲಿ ಆಶ್ಚರ್ಯವೇನಿಲ್ಲ. ಈಗಾಗಲೇ ಇವರ ಲೇಖನಿಯಿಂದ ಕಥೆ, ಕವನ,ಚುಟುಕು, ಗಜಲ್ ,ಭಾವಗೀತೆ ಮುಂತಾದ ಅನೇಕ ಪ್ರಕಾರದ  ಕೃತಿಗಳು ಹೊರಬಂದಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಮನೆ ಮಾತಾಗಿದ್ದಾರೆ. ಈಗ ಹೊರ ತರುತ್ತಿರುವ “ಮಲೆನಾಡು ಕವಳ” ಪ್ರಬಂಧ ಸಂಕಲನದಲ್ಲಿ ತಾವು ಕಂಡು, ಕೇಳಿದ ಅನುಭವಿಸಿದ ಘಟನೆಗಳನ್ನು ರಸವತ್ತಾಗಿ ಹೊರ ಚೆಲ್ಲುತ್ತಾ ಹೋಗಿದ್ದಾರೆ.      . ” ಮಲೆನಾಡು ಕವಳ” ಕೃತಿಯನ್ನು ಈಗ ತಾನೇ ಓದಿ ಮುಗಿಸಿದೆ. ಈ ಕೃತಿಯಲ್ಲಿ ಮಲೆನಾಡಿನ ಕವಳದ ತರ ತರದ ಸವಿಯನ್ನು  ತರತರವಾಗಿ ಚಿತ್ರಿಸುತ್ತಾ ಹೋಗಿದ್ದಾರೆ.  ಅವರಂತೆ ನಾನು ಕೂಡ ಮಲೆನಾಡಿನಿಂದಲೇ ಬಂದಿರುವುದರಿಂದ ನನಗೂ ಕೂಡ ಆ ಕವಳದ ಸವಿ, ಏನು ಎಂಬುದು ಚೆನ್ನಾಗಿ ಅನುಭವ ವಾಗುತ್ತಿದೆ. ಈ ದಿಸೆಯಲ್ಲಿ ಡಾ ಶಂಕರ್ ಶಾಸ್ತ್ರಿ ಎನ್ನುವವರು ಒಂದು “ಕವಳ” ಎಂಬ ಕವನ ಸಂಕಲನವನ್ನು ಹೊರತಂದಿರುತ್ತಾರೆ. ಎರಡು ಕೃತಿಗಳ ಹೂರಣವೂ ಒಂದೇ ತರನಾಗಿದ್ದರು ಡಾ. ಶಾಸ್ತ್ರೀಯವರ ಅನುಭವ ಪದ್ಯ ರೂಪದಲ್ಲಿದ್ದರೆ ಈ ಲೇಖಕಿಯ ಅನುಭವ ಗದ್ಯ ರೂಪದಲ್ಲಿದೆ.     ಸರಿಸುಮಾರು 25 ವಿಷಯಗಳು ಆರಿಸಿಕೊಂಡಿರುವ ಈ ಸಂಕಲನದಲ್ಲಿ ಎಲ್ಲಾ ಘಟನೆಗಳು ಚಿರಪರಿಚಿತವಾದದ್ದೆ. ಎಲ್ಲೂ ಬೇಸರವಾಗುವಂತೆ  ಲೇಖನಗಳನ್ನು ಎಳೆದುಕೊಂಡು ಹೋಗಿಲ್ಲ. ಹೇಳಬೇಕಾದ ವಿಷಯಗಳನ್ನು ಚಿಕ್ಕದಾಗಿ ಚೊಕ್ಕದಾಗಿ ನಿರೂಪಿಸುತ್ತಾ ಹೋಗಿರುತ್ತಾರೆ. ಹಾಗಾಗಿ ಕೃತಿ ಮುಂದುವರಿದಂತೆ ಓದುಗರ ಆಸಕ್ತಿ ಹೆಚ್ಚುತ್ತಾ ಹೋಗುತ್ತದೆ.  ಒಂದೆರಡು ಘಟನೆಗಳನ್ನು ಇಲ್ಲಿ ಮೆಲುಕು ಹಾಕಲು ಪ್ರಯತ್ನಿಸುತ್ತೇನೆ.        ಸಂತೃಪ್ತ ದಾಂಪತ್ಯಕ್ಕೆ ತಾಳ್ಮೆ, ಶ್ರಮ,ತ್ಯಾಗ, ಸಮಾಧಾನ ಮುಂತಾದವು ತುಂಬಾ ಅವಶ್ಯಕ ಎಂಬ  ಸೂತ್ರಗಳನ್ನು ಒಪ್ಪುತ್ತಾ ಅದಕ್ಕೆ ನನ್ನ ತಂದೆ ತಾಯಿಯಂದಿರೆ ಉದಾಹರಣೆ ಎನ್ನುತ್ತಾರೆ. ತಮ್ಮ ಅಪ್ಪ ಅಮ್ಮ ಅದೆಷ್ಟು ಅನ್ಯೋನ್ಯವಾಗಿದ್ದರು ಎಂದರೆ ಅಪ್ಪ ಹೋದ ಮೂರೇ ತಿಂಗಳಿಗೆ ಅಮ್ಮನೂ ತನ್ನ ಬದುಕಿನ ಯಾತ್ರೆಯನ್ನು ಮುಗಿಸಿಬಿಟ್ಟಳು ಎನ್ನುತ್ತಾರೆ. ಬಕೆಟ್ ಹಿಡಿಯುವುದರ ಬಗ್ಗೆ ಬರೆಯುತ್ತಾ ಅದು ಜೀವನದ ಒಂದು ಭಾಗವೋ ಎಂಬಂತೆ  ಸ್ಪಷ್ಟವಾಗಿ  ಹೇಳುತ್ತಾರೆ. ತಾವು ಸೈಕಲ್ ಕಲಿತ ಅನುಭವವನ್ನು  ಹಂಚಿಕೊಳ್ಳುತ್ತಾ ಅದೆಷ್ಟು ತಾನು ಅದರೊಂದಿಗೆ ಹೊಂದಿಕೊಂಡಿದ್ದೆ ಎಂಬುದನ್ನು ಹೇಳುತ್ತಾ ನಿರ್ಜೀವ ವಸ್ತುಗಳೇ ಆದರೂ ಅವು ಹೇಗೆ ನಮ್ಮೊಂದಿಗೆ ಸಜೀವ ವಸ್ತುಗಳಂತೆ ಹೊಂದಿಕೊಳ್ಳುತ್ತವೆ ಎಂಬುದನ್ನು ಜೀವಂತವಾಗಿಯೇ ಚಿತ್ರಿಸುತ್ತಾರೆ. ಕೆಲವು ವಸ್ತುಗಳನ್ನು ನಾವು ತುಂಬಾ ಹಚ್ಚಿಕೊಂಡರೆ ಅವು ಜೀವ ಇರುವ ವಸ್ತುಗಳಂತೆ ನಮಗೆ ಕಾಣಿಸುತ್ತದೆ ಅಷ್ಟೇ ಅಲ್ಲ ಅವು ನಮ್ಮ ಜೀವನದ ಒಂದು ಭಾಗವೇ ಆಗಿಬಿಡುತ್ತವೆ ಎನ್ನುತ್ತಾರೆ.        “ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ”ಎಂಬ ಅಭಿಪ್ರಾಯವನ್ನು ಸಾರಾ ಸಗಟಾಗಿ ತಿರಸ್ಕರಿಸುತ್ತಾ ಮಾನವ ಹೆಣ್ಣಿಗೆ ಎರಡನೇ ಸ್ಥಾನ ಕೊಟ್ಟು, ದೂರ ತಳ್ಳುತ್ತಿರುವುದು ಖಂಡಿತ ಸಾಧುವಲ್ಲ ಎಂದು ವಾದಿಸುತ್ತಾರೆ. ಇವರ ಬರಹಗಳೇ ಹಾಗೆ, ಹೆಚ್ಚಾಗಿ ಹೆಣ್ಣಿನ ಪರವಾಗಿಯೇ ವಾದಿಸುತ್ತಾ  ಹೋಗುತ್ತಾರೆ.     ಒಟ್ಟಿನಲ್ಲಿ ಅವರು ವಸ್ತುಗಳಿಗಾಗಿ ಪರದಾಡಲೇ ಇಲ್ಲ ಕೈಗೆ ಸಿಕ್ಕಿದ ವಸ್ತುಗಳನ್ನು ಆರಿಸಿಕೊಂಡು ಅದಕ್ಕೆ ಉಡುಗೆ ತೊಡುಗೆಗಳನ್ನು ತೊಡಿಸಿ ತಮ್ಮ ಹಾಸ್ಯಲೇಪನವನ್ನು ಸವರುತ್ತಾ ನಮ್ಮ ಮುಂದೆ ನೈಜ ಘಟನೆಗಳೋ ಎಂಬಂತೆ ತೆರೆದಿಡುತ್ತಾ ಹೋಗುತ್ತಾರೆ. ಅದು ಗೊರಕೆ ಹೊಡೆಯುವವರ ಕಾಟ, ಬೀದಿ ನಾಯಿಯ ಪುರಾಣ ಮುಯಿಗೆ ಮುಯಿ ತೋರಿಸುವ ಛಲ, ಪಂಕ್ತಿ ಊಟದಲ್ಲಿ ಆಗುವ ತೊಂದರೆ,  ಕಟ್ಟೆಯ ಬುಡದಲ್ಲಿ ಪಾರತಕ್ಕನಂತವರ  ಹರಟೆ ಪುರಾಣ ಮುಂತಾದವುಗಳನ್ನು ಕಾಣಬಹುದು. ಒಟ್ಟಿನಲ್ಲಿ ಜೀವನದಲ್ಲಿ ನಾವು ಅನುಭವಿಸಿದ, ಎದುರಿಸಿದ ಅನೇಕ ಘಟನೆಗಳನ್ನು ಅವರು ಮೆಲುಕು ಹಾಕುವಂತೆ ಮಾಡಿದ್ದಾರೆ. ಹಾಗಾಗಿ ಈ ಲೇಖನಗಳು ನಮ್ಮನ್ನು ಜೀವಂತವಾಗಿ ಇಡುತ್ತವೆ ಎಂಬ ಮಾತುಗಳು ಖಂಡಿತ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. ಇಂತಹ ಕೃತಿಗಳು ಇವರಿಂದ ಇನ್ನಷ್ಟು ಮಗದಷ್ಟು ಹೊರಬರಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ. ಗಣೇಶ್ ವಂದಗದ್ದೆ

ವಾಣಿ ಭಂಡಾರಿ ಅವರ ಕೃತಿ “ಮಲ್ನಾಡು ಕವಳ” ಅವಲೋಕನ ಗಣೇಶ್ ವಂದಗದ್ದೆ Read Post »

ಕಾವ್ಯಯಾನ

ಸುತ (ಸುರೇಶ ತಂಗೋಡ) ಅವರ ಕವಿತೆ “ಸಿಹಿಸುಳ್ಳುಗಳು”

ಕಾವ್ಯ ಸಂಗಾತಿ ಸುತ (ಸುರೇಶ ತಂಗೋಡ) “ಸಿಹಿಸುಳ್ಳುಗಳು” ಸಾವಿರಾರು ರೂಪಾಯಿಖರ್ಚು ಮಾಡಿಬಾಂಡು ತಂದೆನಂದ್ರ್ಅವ್ವ ಬೈತಾಳೆಂದು,ನೂರು ರೂಪಾಯಿಗೆ ತಂದೆನವ್ವಎಂದದ್ದು ನಾ ಹೇಳಿದ ಸುಳ್ಳು.. ಹೆಂಡತಿಗೆ  ಒಡವಿ ಕೊಡಿಸಿನೀವು ಹಬ್ಬಕ್ಕ ಏನು ತಗೋದಿಲ್ಲ ಏನ್?ಎಂದು ಕೇಳಿದಾಗನಂಗ್ಯಾಕ ಬಟ್ಟೆ ಬಹಳ ಅದಾವಅಂದದ್ದು ನಾ ಹೇಳಿದ ಸುಳ್ಳು… ಮಗ ಬೈಕ್ ಬೇಕು ಎಂದಾಗಬೈಕ್ ಹೋಡಿದ್ರೆ ಬೆನ್ನು ನೋಯಿತ್ತೆಎಂದು,ಸೈಕಲ್ ಕೊಡಿಸಿದ್ದುಮಗನಿಗೆ ನಾ ಹೇಳಿದ ಮೊದಲ ಸುಳ್ಳು.. ಮಗಳಿಗೆ ಮದುವೆ ಮಾಡುವಾಗಇರೋ ಬರೋ ಆಸ್ತಿ-ಹಣಕೂಡಿಸಿ ಒಂದೊಳ್ಳೆ ಸಂಬಂಧ ನೋಡಿಇನ್ನೇನು ಗಂಡನ ಮನೆಗೆ ಕಳುಹಿಸುವಾಗತನ್ನಿಂದ ತಾನೇ ಗೊತ್ತಿಲ್ಲದೇಜಾರಿದ ಕಣ್ಣೀರು ಯಾಕೆ?ಎಂದ ಮಗಳಿಗೆಕಣ್ಣಾಗ ಧೂಳ್ ಬಿದ್ದೀರಬೇಕೆಂದಿದ್ದುನಾ ಹೇಳಿದ ಸಿಹಿ ಸುಳ್ಳು… ಕ್ಷಮಿಸಿ ನನ್ನ ಸುಳ್ಳುಗಳುನನ್ನವರ ಸಂತೋಷಕ್ಕೆಬೇರೆವರ ನೋವಿಗಲ್ಲ. ಸುತ (ಸುರೇಶ ತಂಗೋಡ)

ಸುತ (ಸುರೇಶ ತಂಗೋಡ) ಅವರ ಕವಿತೆ “ಸಿಹಿಸುಳ್ಳುಗಳು” Read Post »

ಪುಸ್ತಕ ಸಂಗಾತಿ

“ಡಾ.ಶೇಖರ.ಡಿ.ಸಜ್ಜನರ ಕೃತಿ “ಮಾಹಿತಿ ಹಕ್ಕು ಅಧಿನಿಯಮ-2005ಒಂದು ವಿಶ್ಲೇಷಣೆ ( ತಿದ್ದುಪಡಿ 2019 ಸಹಿತ)” ಕೃತಿ ಪರಾಮರ್ಶೆ, ಪ್ರೊ ಶಕುಂತಲಾ. ಸಿಂಧೂರ ಗದಗ

ಪುಸ್ತಕ ಸಂಗಾತಿ ಪ್ರೊ ಶಕುಂತಲಾ. ಸಿಂಧೂರ ಗದಗ “ಡಾ.ಶೇಖರ.ಡಿ.ಸಜ್ಜನರ ಕೃತಿ “ಮಾಹಿತಿ ಹಕ್ಕು ಅಧಿನಿಯಮ-2005ಒಂದು ವಿಶ್ಲೇಷಣೆ ( ತಿದ್ದುಪಡಿ 2019 ಸಹಿತ)” ಕೃತಿ ಪರಾಮರ್ಶೆ,   ‘ಮಾಹಿತಿ ಹಕ್ಕು ಅಧಿನಿಯಮ-2005 ಒಂದು ವಿಶ್ಲೇಷಣೆ ‘ (The Right to Information Act-2005 An Analysis) ಇದು ಕಾನೂನಿನ ಅರಿವು ಮೂಡಿಸುವ ಗ್ರಂಥಪುಷ್ಪ. ಈ ಕ್ರೃತಿಯು ಸಾರ್ವಜನಿಕ ನಾಗರಿಕರ ಮನಪರಿವರ್ತಿಸಿ, ಪ್ರಚಲಿತ ಕಾಯ್ದೆ ಕಾನೂನುಗಳ ಬಗ್ಗೆ ತಿಳುವಳಿಕೆ ಸ್ಪುರಿಸಿ ಜಾಗ್ರತರನ್ನಾಗಿಸುವಂತಿದೆ. ಮನುಕುಲದವರಲ್ಲಿ ಜಾತ್ಯಾತೀತ ವರ್ಗ-ವರ್ಣರಹಿತ ಭಾವೖಕ್ಯತಾ ಬಾಂಧವ್ಯ ವರ್ಧಿಸುವ, ಭ್ರಷ್ಟಾಚಾರ ಮುಕ್ತವಾದ ದಟ್ಟ ಪರಿಸರ ಹುಟ್ಟುಹಾಕುವ ಸದಾಶಯವುಳ್ಳ ವಸ್ತುವಿಷಯವನ್ನು ತುಂಬಾ ಪರಿಣಾಮಕಾರಿಯಾಗಿ ಲೇಖಕರು ವಿಶ್ಲೇಷಿಸಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮವನ್ನು ಕಾನೂನುಬದ್ಧವಾಗಿ, ಪಾರದರ್ಶಕವಾಗಿ ಪರಿಪಾಲಿಸುವ, ಧ್ಯೇಯೋದ್ದೇಶಗಳಿಂದೊಡಗೂಡಿರುವ ಕೖದೀವಿಗೆಯಂತಿದೆ.                     ವಿಶ್ರಾಂತ ಮಾನ್ಯ ಮಾಹಿತಿ ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗದ ಡಾ.ಶೇಖರ.ಡಿ.ಸಜ್ಜನರ ಅವರು ಈ ಕ್ರೃತಿರತ್ನದ ಕರ್ತೃ.ಲೇಖಕರು  ಗದಗನಲ್ಲಿ 40 ವರ್ಷಗಳಿಂದ ಖ್ಯಾತ ವೖದ್ಯಕೀಯ ವ್ರತ್ತಿ ಪ್ರೀಯರಾಗಿದ್ದರೂ ಕೂಡ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡವರು.  ಕರ್ನಾಟಕ ಮಾಹಿತಿ ಆಯುಕ್ತರಾಗಿಯಲ್ಲದೇ ಪ್ರಭಾರಿ ಮುಖ್ಯ ಮಾಹಿತಿ ಆಯುಕ್ತರಾಗಿಯೂ ನೇಮಕಗೊಂಡು ಸೇವೆ ಸಲ್ಲಿಸಿದ್ದು ಅಭಿನಂದನಾರ್ಹವಾದುದಲ್ಲದೆ “ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ”ಎಂಬ ಶರಣರ ವಾಣಿಗೆ ಸಾಕ್ಷಿಯಂತಿದೆ.            ಮೂಲತಃ ವೖದ್ಯರಾದ ಶ್ರೀಯುತರಿಗೆ ಕಾನೂನು ಪರಿಭಾಷೆಯ ಪರಿಚಯ ಅಷ್ಟಾಗಿ ಇರದಿದ್ದರೂ ಕೂಡಾ ವಕೀಲರು, ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳವರಿಗಿಂತ ಮಿಗಿಲಾಗಿ ಆಸಕ್ತರಾಗಿರುವ ಡಾ.ಶೇಖರವರು ಸತತ ಪರಿಶ್ರಮದಿಂದ ಅಧ್ಯಯನಶೀಲರಾಗಿ ಈ ಕಾನೂನನ್ನು ಸುಲಿದ ಬಾಳೆಯಹಣ್ಣಿನಂದದಿ ಆರ್ಥೖಸಿಕೊಂಡು ಆತ್ಯುತ್ತಮವೆನ್ನಬಹುದಾದ ಅನೇಕ ಮಹತ್ವದ ತೀರ್ಪುಗಳನ್ನಿತ್ತಲ್ಲದೇ ಈ ಕಾನೂನು ಹೆಬ್ಬೊತ್ತಿಗೆಯನ್ನು ಪ್ರಕಟಿಸಿ ಸರ್ವರ ಕೖಗೆಟಕುವಂತೆ ಪರಿಶ್ರಮಿಸಿರುವದು ಕಾನೂನು ಪರಿಪಾಲಿಸುವಂತಹ ಜ್ಞಾನತ್ರಷೆಯುಳ್ಳವರಿಗೆ ಅನುಕರಣೀಯವಾದುದು.ಅವರ ಅನುಭವ ಅಧ್ಯಯನದ ಮೂಸೆಯಲ್ಲಿ ಸಮರ್ಪಕವಾಗಿ ಸ್ರಜಿಸಲ್ಪಟ್ಟಿರುವ ಉತ್ತಮ ದಾರಿದೀಪದಂತಹ ಕ್ರೃತಿಯಿದಾಗಿದೆಯೆಂಬುದರಲ್ಲಿ ಉತ್ಪ್ರೆಕ್ಷೆಯೇನಿಲ್ಲ.                         ” ಈ ಕ್ರೃತಿಯಲ್ಲಿ ಮಾಹಿತಿ ಎಂದರೇನು ಎನ್ನುವುದರಿಂದ ಪ್ರಾರಂಭವಾಗಿ ಈ ಕಾನೂನಿನ ವ್ಯಾಪ್ತಿ ನಿಯಮಗಳು ನಾಗರಿಕರು ಮಾಹಿತಿ ಪಡೆಯುವ ವಿಧಾನ, ಅಧಿಕಾರಿಗಳ ಕರ್ತವ್ಯಗಳು, ವಿನಾಯಿತಿಯ ಸಂದರ್ಭಗಳು, ಕಡತಗಳ ಸಂರಕ್ಷಣೆ, ಇವುಗಳ ಸಮರ್ಪಕ ವಿವರಣೆಯನ್ನು ಕೊಟ್ಟಿರುವುದಲ್ಲದೆ ರಾಜ್ಯ ಮಾಹಿತಿ ಆಯೋಗ ಕೇಂದ್ರ, ಮಾಹಿತಿ ಆಯೋಗ ಹಾಗೂ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದ ಮಹತ್ವದ ತೀರ್ಪುಗಳ ಸಾರಾಂಶಗಳನ್ನು ಉಲ್ಲೇಖಿಸಿದ್ದಾರೆ ಅಲ್ಲದೆ ಸಂಪೂರ್ಣ ಕಾನೂನನ್ನು ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿಯೂ ಬರೆದಿರುವರಲ್ಲದೆ  ಟಿಪ್ಪಣಿಗಳನ್ನು ಬರೆಯುವಾಗ ಅವಶ್ಯವಿದ್ದಲ್ಲಿ ಕನ್ನಡವನ್ನು ಬಳಸಿರುವುದು ಇಂಗ್ಲಿಷ್ ಭಾಷೆಯ ಜ್ಞಾನ ಹೆಚ್ಚಿಗೆ ಇಲ್ಲದವರಿಗೆ ಉಪಯುಕ್ತವಾಗಿದೆ. ಹೀಗಾಗಿ ಇದು ಜನಸಾಮಾನ್ಯರ ಅಳವಿಗೆ ನಿಲುಕುವ ಜನಸ್ನೇಹಿ ಕೃತಿ ಎಂದರೆ ಅತಿಶಯೋಕ್ತಿಯಾಗಲಾರದು” ಎಂಬುದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ.ಅರಳಿ ನಾಗರಾಜ ಅವರ ಅಭಿಪ್ರಾಯವಾಗಿರುತ್ತದೆ.           ರಾಜ್ಯ ಮಾಹಿತಿ ಹಕ್ಕು ಕಾಯ್ದೆ ಕುರಿತು ಬೆಳಗಾಂವಿಯಲ್ಲಿ ಅಧಿಕಾರಿಗಳಿಗೆ ಲೇಖಕರುತರಬೇತುದಾರರಾಗಿದ್ದರು.ಈ ಸಂದರ್ಭದಲ್ಲಿ ಡಾ.ಶೇಖರ ಸಜ್ಜನರವರು ನೀಡುತ್ತಲಿರುವ ತರಬೇತಿಯಲ್ಲಿ ಪಾಲ್ಗೊಂಡ ಅಧಿಕಾರಿಯೊಬ್ಬರು ತರಬೇತಿಯ ಪ್ರೇರಣೆಯಿಂದ ಪ್ರಭಾವಿತರಾದುದರ ಫಲಶ್ರತಿಯಾಗಿ,ತಾವೇ ಈ ಕಾಯ್ದೆಗಳ ಮಾಹಿತಿ ಕುರಿತು ಸವಿಸ್ತಾರವಾಗಿ ಗ್ರಂಥ ರಚಿಸಿದರೆ ಸಾರ್ವಜನಿಕರಿಗಷ್ಟೇ ಅಲ್ಲದೇ ಕಾನೂನು ವಿದ್ಯಾರ್ಥಿಗಳಿಗೆ,ನ್ಯಾಯವಾದಿಗಳಿಗೆ,ಆಡಳಿತಾಧಿಕಾರಿಗಳಿಗೆ,ಜನಪ್ರತಿನಿಧಿಗಳಿಗೆ,ಎಲ್ಲ ವರ್ಗಗಳ ಅಧ್ಯಯನಾಸಕ್ತರಿಗೆ ಅತ್ಯುಪಯುಕ್ತವಾದ ಮಾರ್ಗದರ್ಶಕ ಪುಸ್ತಕವಾಗುತ್ತದೆ ಎಂದು ತಮ್ಮಪ್ರಶಂಸಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದುದರಿಂದ, ಈ ಅಮೂಲ್ಯ ಸತ್ಪ್ರೇರಣೆಯ ನುಡಿಗಡಣದಂತೆ,ಮಾಹಿತಿ ಹಕ್ಕು ಕಾಯ್ದೆ 2005 ರ ಒಂದು ವಿಶ್ಲೇಷಣೆ ಹೊತ್ತಿಗೆಯು ಈಗ ನಾಲ್ಕನೆಯ ಆವ್ರೃತ್ತಿಗಳನ್ನು ಯಶಸ್ವಿಯಾಗಿ ಮುದ್ರಿಸಿ ಲೋಕಾರ್ಪಣೆಗೊಳಿಸಿರುವ ಸಂತ್ರೃಪ್ತಿ ನನಗಿದೆ ಎಂಬುದು ಈ ಕ್ರೃತಿಯ ಲೇಖಕರ ಅಭಿಪ್ರಾಯವಾಗಿರುತ್ತದೆ.                 ನಮ್ಮ ದೇಶ ಸ್ವಾತಂತ್ರ್ಯ ನಂತರ ಅಂಗೀಕರಿಸಿದ ಸಂವಿಧಾನದನ್ವಯ ನಮ್ಮಲ್ಲಿರುವುದು ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ.ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಹಳ್ಳಿಯಿಂದ ದಿಲ್ಲಿಯವರೆಗೆ ಆಡಳಿತದ ಸೂತ್ರವನ್ನು ಹಿಡಿದರು. ಆಡಳಿತದ ಸಂಬಂಧ ಜನಪ್ರತಿನಿಧಿಗಳು, ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಣಯಗಳು, ಹೊರಡಿಸುವ ಆದೇಶಗಳು, ಜನಸಾಮಾನ್ಯರ ಮೇಲೆ ವಿವಿಧ ರೀತಿಯ ಪರಿಣಾಮವನ್ನುಂಟು ಮಾಡುತ್ತವೆ. ಆದ್ದರಿಂದ ಆಡಳಿತದಲ್ಲಿ ಪಾರದರ್ಶಕತೆ ಉತ್ತರದಾಯಿತ್ವ ಹಾಗೂ ನಾಗರೀಕರ ಪಾಲ್ಗೊಳ್ಳುವಿಕೆಯನ್ನು ತರುವ ಮೂಲಕ ಭ್ರಷ್ಟಾಚಾರವನ್ನು ತಡೆಗಟ್ಟುವ ಸದುದ್ದೇಶದಿಂದ ನಮ್ಮ ಕೇಂದ್ರ ಸರಕಾರವು  ಆತ್ಯುಪಯುಕ್ತವಾದ, ಬ್ರಹ್ಮಾಸ್ತ್ರ ಸ್ವರೂಪವಾದ ಶಾಸನ ” ಮಾಹಿತಿ ಹಕ್ಕು ಅಧಿನಿಯಮ 2005″ ನ್ನು ಅಕ್ಟೋಬರ್ 25 ರಂದು ಜಾರಿಗೆ ತಂದಿತು. ಜಾರಿಗೊಂಡ ಎರಡು ದಶಕಗಳ ಅವಧಿಯಲ್ಲಿ ಈ ಕಾನೂನಿನ ಸದುಪಯೋಗಪಡಿಸಿಕೊಂಡ ನಾಗರಿಕರು ಆಡಳಿತದಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆ ತಂದು ಭ್ರಷ್ಟ ಆಡಳಿತಗಾರರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಅವರಿಗೆ ಶಿಕ್ಷೆಯಾಗುವಂತೆ ಮಾಡಿದ್ದು ಸರ್ವ ವಿಧಿತ ಸಂಗತಿ.                  ನಮ್ಮ ರಾಜ್ಯದ ಹಾಗೂ ದೇಶದ ನಾಗರಿಕರಿಗೆ ಈ ಕಾಯ್ದೆಯ ಉಪಯೋಗ ಪಡೆದುಕೊಳ್ಳುವವರಿಗೆ ಮತ್ತು ಈ ಕಾಯ್ದೆಯಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸಾರ್ವಜನಿಕ ಅಧಿಕಾರಿಗಳಿಗೆ ಈ ಕಾಯ್ದೆಯ ಪರಿಚಯ ಮಾಡಿಕೊಳ್ಳುವುದು ಸುಲಭಸಾಧ್ಯವಾಗಿರುವ ನಿಟ್ಟಿನಲ್ಲಿ ಅತ್ಯುಪಯುಕ್ತ ಮಾಹಿತಿ ಗ್ರಂಥವಿದಾಗೀದೆವೆಂಬುದರಲ್ಲಿ ಎರಡು ಮಾತಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವವರಿಗೆ ರಾಮಬಾಣ ಬ್ರಹ್ಮಾಸ್ತ್ರಗಳಂತೆ ಉಪಯೋಗಿಸಬಹುದಾದ ಪ್ರಸ್ತುತ ಕಾಯ್ದೆಯ ಸಂಪೂರ್ಣ ಪರಿಚಯವನ್ನು ವಿಶ್ಲೇಷಣಾತ್ಮಕವಾಗಿ ಓದುಗರಿಗೆ ಮಾಡಿಕೊಡುವಲ್ಲಿ ಈ ಕೃತಿಯ ಕರ್ತೃ ಡಾ. ಶೇಖರ. ಡಿ.ಸಜ್ಜನರವರು ಯಶಸ್ವಿಯಾಗಿದ್ದಾರೆ ಎಂಬುದು ಮುನ್ನುಡಿ ಬರಹಗಾರರಾದ ನ್ಯಾಯಮೂರ್ತಿ ಶ್ರೀ. ಅರಳಿ ನಾಗರಾಜರ ಅಭಿಪ್ರಾಯ ಈ ಕ್ರೃತಿಗೆ ಕಳಶಪ್ರಾಯದಂತಾಗಿದೆ. ಕಾನೂನಿನ ಅರಿವು ಮೂಡಿಸಲು, ಅರ್ಥೖಸಲು ಕಾನೂನು ಪದವೀಧರರೇ ಆಗಿರಬೇಕೆಂದಿಲ್ಲಾ. ಆ ವ್ಯಕ್ತಿಯಲ್ಲಿ ವಿಷಯದ ಬಗ್ಗೆ ಜ್ಞಾನತ್ರೃಷೆ ಅದನ್ನು ಅರ್ಥೖಸುವ   ಉತ್ಸುಕತೆ,ಬದ್ಧತೆ ಮತ್ತು ಸೇವಾಭಾವನೆಯ ವ್ಯಕ್ತಿತ್ವ ಇದ್ದರೆ ಸಾಕು.ತಮ್ಮಲ್ಲಿರುವ ಸಂಪೂರ್ಣ ಜ್ಞಾನದಾಹವನ್ನು ಸಾರ್ವಜನಿಕರಿಗೆ ತಿಳಿಯಪಡಿಸಿದರೆ, ಅಂತರಾಳದಲ್ಲಿ ಹುದುಗಿರುವಂತಹ ಆ ಅಪೂರ್ವ ಜ್ಞಾನವು ಬಾವಿಯೊಳಗಿರುವ ನೀರಿನ ಸೆಲೆಯಂತೆ ಧಾರಾಕಾರವಾಗಿ ಸುರಿಯುತ್ತಾ ಇಮ್ಮಡಿ ಮುಮ್ಮಡಿಗೊಳ್ಳುತ್ತಲಿರುತ್ತದೆಂಬುದನ್ನರಿತ  ಡಾ.ಸಜ್ಜನರವರು 2011 ರಿಂದ ಐದು ವರ್ಷಗಳವರೆಗೆ ಆಯುಕ್ತರಾಗಿ ರಾಜ್ಯದ ಜನರ ಸೇವೆಯನ್ನು ಮಾಡಿದ್ದುದರ ಪ್ರತೀಕವಾಗಿ ಒಟ್ಟು ಆರು ಅಧ್ಯಾಯಗಳುಳ್ಳ ಈ ಗ್ರಂಥ ಸಾರ್ವಜನಿಕರಿಗೆ ಕೖಗೆಟಕುವಂತಾಗಿರುವದು ಸ್ತುತ್ಯಾರ್ಹವಾದುದು ಎಂಬುದಾಗಿ ಇನ್ನೋರ್ವ ನ್ಯಾಯಮೂರ್ತಿಗಳಾದ ಶ್ರೀ.ಜಿ.ಎಸ್.ಪಲ್ಲೇದ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ರೃತಿಯ ಮೂಲಕ ತಮ್ಮ ಅಪಾರ ಅನುಭವವನ್ನು ಮಾಹಿತಿ ಹಕ್ಕು ಕಾಯ್ದೆ 2005 ರ ಒಂದು ವಿಶ್ಲೇಷಣೆ ಗ್ರಂಥದ ನಾಲ್ಕು ಆವ್ರೃತ್ತಿಗಳನ್ನು ಪ್ರಕಟಿಸಿ ಸಾರ್ವಜನಿಕ ರಂಗದ ಪರವಾಗಿರುವ ತಮ್ಮ ಅನುಪಮ ಬದ್ಧತೆಯನ್ನು ಆಚರಣೆಗೊಳಿಸುವ ಮುಖೇನ ಕ್ರೃತಿಯ ರೂಪದಲ್ಲಿ  ಪ್ರದರ್ಶಿಸಿರುವದು ದಾಖಲಾರ್ಹವೇ ಸರಿ.                 ಸರ್ಕಾರಿ ವ್ಯವಸ್ಥೆಯಲ್ಲಿನ ಆಡಳಿತ ಹಾಗೂ ಅಧಿಕಾರಿಗಳ ಜೊತೆಗೆ ಸಾರ್ವಜನಿಕರು ಕಾನೂನಿನ ಅರಿವುಳ್ಳವರಾಗಬೇಕಾಗಿದೆ.  ಪಾರದರ್ಶಕತೆಯಿಂದ ಕೂಡಿರುವದರ ಮಾಹಿತಿ ಬಗ್ಗೆ ತಿಳುವಳಿಕೆ ಅಧಿಕವಾಗಿಸಿಕೊಳ್ಳುವ ಸದುದ್ದೇಶದಿಂದಾಗಿಯೇ 2005 ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.ಇದಕ್ಕೂ ಮೊದಲು ಬ್ರಿಟೀಷರ ಕಾಲದಲ್ಲಿ ಆಫೀಸಿಯಲ್ ಸಿಕ್ರೇಟ್ Act 1923 ರಲ್ಲಿ ಜಾರಿಯಲ್ಲಿತ್ತು.ಇದು ಆಡಳಿತ ಮತ್ತು ಅಧಿಕಾರ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು.ದೇಶದಲ್ಲಿ ಮಾಹಿತಿ ಹಕ್ಕು ಜಾರಿಯಾದಾಗಿನಿಂದ ದೇಶದ ಅನೇಕ ಹಗರಣಗಳು ಹೊರಗೆ ಬರುವಂತಾಯಿತು.ಇದರ ಪರಿಣಾಮವಾಗಿ ಸರಕಾರ ಬದಲಾವಣೆಯಾದವು.ದೆಹಲಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಾಗ ಮೊದಲ ಬಾರಿಗೆ ಅರ್ಜಿ ಹಾಕಿದವರೇ ಮಾಜಿ ಮುಖ್ಯಮಂತ್ರಿಗಳಾದ ಶ್ರೀ.ಅರವಿಂದ ಕ್ರೇಜಿವಾಲ ಅವರು.ಇದರ ಪರಿಣಾಮದಿಂದಾಗಿ ಕಲ್ಲಿದ್ದಲು 2 ಜಿ ಸ್ಪ್ರೆಕ್ಟ್ರಂ, ಕಾಮನ್ ವೆಲ್ತ್ ಹಗರಣಗಳು ಬಹಿರಂಗಗೊಂಡವು. ‘ಪರಿವರ್ತನೆ ಜಗದ ನಿಯಮ’ ಎಂಬ ಉಕ್ತಿಯಂತೆ ಈ ಸಣ್ಣ ಕಾಯ್ದೆ ಸರಕಾರವನ್ನೇ ಬದಲಾಯಿಸಿತು.               ಇಂದಿನ ದಿನಮಾನದಲ್ಲಿ ಕಾನೂನಿನ ಅರಿವು ಮೂಡಿಸುವದು ತುಂಬಾ ಅತ್ಯವಶ್ಯಕವಾಗಿರುತ್ತದೆ.ಮಾಹಿತಿ ಹಕ್ಕು ಕಾಯ್ದೆ 2005 ಇಲ್ಲದ ಸಂದರ್ಭದ ದೇಶವನ್ನು ನೆನಪಿಸಿಕೊಂಡರೆ ಬೇಜಾರಾಗುವದು ಸರ್ವರ  ಸಹಜಾನುಭವ.ಈ ಕಾಯ್ದೆ ಜಾರಿಯಲ್ಲಿದ್ದರೂ ಕೂಡಾ ಜಾತೀಯತೆ,ಭ್ರಷ್ಟಾಚಾರ ನಿಯಂತ್ರಣಕ್ಕೆ ಬಾರದಂತಾದುದು ಖಂಡನಾರ್ಹ.ಈ ಕಾಯ್ದೆ ಕುರಿತು ಅಪಾರ ಜನತೆಗೆ ತಿಳುವಳಿಕೆಯಿಲ್ಲದಿರುವದು ವಿಷಾದನೀಯ ಸಂಗತಿ.ಪ್ರತಿಯೊಂದು ಜಿಲ್ಲೆ ತಾಲೂಕು ಹೋಬಳಿಗಳ ಶಾಲೆ ಕಾಲೇಜ ಹಾಗೂ ಆಯಾ ಸಂಘಸಂಸ್ಥೆಗಳ ಸಂಘಟನೆಗಳಲ್ಲಿ ಆಗಾಗ ತರಬೇತಿ ಶಿಬಿರ, ಕಾರ್ಯಾಗಾರ,ಉಪನ್ಯಾಸ, ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ‘ಸರ್ವೆ ಜನಃ ಸುಖಿನೋ ಭವಂತು’ ಎಂಬ ಹೇಳಿಕೆಯಂತೆ ಸಾರ್ವಜನಿಕರಲ್ಲಿ ಸ್ನೇಹಿ ಪರಿಸರ ಹುಟ್ಟುಹಾಕುತ್ತಾ ಸರ್ವರಿಗೂ ‘ಸಮಪಾಲು ಸರ್ವರಿಗೂ ಸಮಬಾಳು’ ತತ್ವದಂತೆ ಮುಗ್ಧ ಜನತೆಯಲ್ಲಿ ಜಾಗ್ರತಿ ಬಲಪಡಿಸುತ್ತಾ, ಗಮನ ಸೆಳೆಯುವಂತಾದರೆ ಮಾತ್ರ, ನಮ್ಮ ದೇಶ ನಂಬರ್ ಒನ್ ಸ್ಥಾನ ಪಡೆಯುವದರಲ್ಲಿ ಎಳ್ಳಷ್ಟೂ ಸಂದೇಹವೇ ಇಲ್ಲ.          ಪ್ರಾಮಾಣಿಕತೆಯ ಸದುದ್ದೇಶವುಳ್ಳ ಸಾರ್ವಜನಿಕ ಹಿತಾಸಕ್ತಿ ಹೊಂದಿದ ನಾಗರಿಕರು ಈ ಕಾಯ್ದೆಯನ್ನು ಸದ್ಬಳಕೆ ಮಾಡಿಕೊಂಡಲ್ಲಿ ಆಡಳಿತದಲ್ಲಿ ಪ್ರಾಮಾಣಿಕತೆ ಪಾರದರ್ಶಕತೆ ನಿಷ್ಪಕ್ಷಪಾತತನ ಮುಂತಾದವುಗಳನ್ನು ತರುವುದರ ಮೂಲಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಾ ಹಂತಗಳಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೂ ವ್ಯಾಪಕವಾಗಿರುವ ಅದರ ನಿರ್ಮೂಲನೆ ಸಾಧ್ಯವೇ ಇಲ್ಲ ಎನ್ನುವ ಮಟ್ಟಕ್ಕೆ ಹೋಗಿರುವ, ಭ್ರಷ್ಟಾಚಾರವನ್ನು ಸಮರ್ಪಕವಾಗಿ ನಿಯಂತ್ರಿಸುವುದು ಸಾಧ್ಯ. ನಮ್ಮ ದೇಶವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಮೂಲ ಭ್ರಷ್ಟಾಚಾರ. ಅದೊಂದು ಮಾತ್ರ ನಿರ್ಮೂಲನಗೊಂಡರೆ ಅಥವಾ ಗಣನೀಯವಾಗಿ ನಿಯಂತ್ರಣಕ್ಕೆ ಬಂದರೆ ನಮ್ಮ ದೇಶ ವಿಶ್ವದ ಯಾವ ರಾಷ್ಟ್ರಕ್ಕೂ ಕಡಿಮೆಯಿಲ್ಲದಂತೆ ಸರ್ವತೋಮುಖ ಶ್ರೇಯೋಭಿವ್ರೃದ್ಧಿ ಸಾಧಿಸುವದರಲ್ಲಿ ಎಳ್ಳಷ್ಟೂ ಸಂದೇಹವೇ ಇಲ್ಲ.           ಮಾಹಿತಿ ಹಕ್ಕು ಅಧಿನಿಯಮ-2005 ಕ್ಕೆ 2019 ನೇ ಇಸ್ವಿಯಲ್ಲಿ ತಿದ್ದುಪಡಿ ತರಲಾಗಿದೆ.ಕಲಂ 13,16,27 ಗಳಲ್ಲಿ ಮಾತ್ರ ತಿದ್ದುಪಡಿ ಮಾಡಲಾಗಿದ್ದು,ಸದರ ತಿದ್ದುಪಡಿ-2019(24 OF 2019) ಯು ದಿ.01-08-2019 ರಂದು ಅಂಗೀಕಾರಗೊಂಡು,24-10-2019 ರಂದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆ.ಜಮ್ಮು ಕಾಶ್ಮೀರದಲ್ಲಿ ಚಾಲ್ತಿಯಲ್ಲಿದ್ದ ಸಂವಿಧಾನದ ಅನುಚ್ಛೇದ-370 ನ್ನು, ತೆರವುಗೊಳಿಸಲಾಗಿದ್ದು (34 OF 2019 w.e.f. 31-10-2019), ಇವೆಲ್ಲವುಗಳನ್ನೂ ಈ ಆವ್ರೃತ್ತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆ ದೇಶದಲ್ಲಿ 20 ವರ್ಷಗಳಿಂದ ಜಾರಿಯಲ್ಲಿದ್ದರೂ ಕೂಡಾ ಇನ್ನೂ ಸಾರ್ವಜನಿಕರಲ್ಲಿ ಹಾಗೂ ಮಾಹಿತಿ ಅಧಿಕಾರಿಗಳಲ್ಲಿ ಅನೇಕ ದ್ವಂದ್ವಗಳು ಹಾಗೂ ಕಾಯಿದೆಯ ಬಗ್ಗೆ ಸ್ಪಷ್ಟತೆಯ ಅರಿವು ಇಲ್ಲದೆ ಇರುವುದರಿಂದ ಅವಶ್ಯಕತೆಯಿರುವವರು ಡಾ.ಸಜ್ಜನ ಅವರನ್ನು ಸಂಪರ್ಕಿಸಿ ಅನೇಕ ದ್ವಂದ್ವ ಹಾಗೂ ಸಂದೇಹಗಳಿಗೆ ಮಾಹಿತಿ ಪಡೆಯುತ್ತಲಿರುವಂತೆ ಇಲ್ಲವೇ ಈ ಕ್ರೃತಿಯನ್ನು ಅಧ್ಯಯನಗೖದು ಉಪಯುಕ್ತ ಮಾಹಿತಿವುಳ್ಳವರಾಗುವಂತಾಗಲು ಈ ಹೆಬ್ಬೊತ್ತಿಗೆಯು ತುಂಬಾ ಸಹಾಯಕಾರಿಯಾಗುವದಂತೂ ಖಚಿತ.ಅನೇಕ ಕಾನೂನು ತಜ್ಞರು, ಕರ್ನಾಟಕ ಮಾಹಿತಿ ಆಯೋಗದ ಮಾಜಿ ಹಾಗೂ ಹಾಲಿ ಆಯುಕ್ತರುಗಳು ಈ ಕ್ರೃತಿಯ ಮಾಹಿತಿ ಅಧ್ಯಯನಗೖದು ಮೆಚ್ಚುಗೆ ಅಭಿವ್ಯಕ್ತಪಡಿಸಿರುವರಲ್ಲದೆ,ಕರ್ನಾಟಕದ ರಾಜ್ಯಪಾಲರಾದ ಸನ್ಮಾನ್ಯ ಶ್ರೀ.ವಜುಭಾಯಿ ವಾಲಾರವರೂ ಕೂಡಾ ವೖದ್ಯರಾದ ಡಾ. ಶೇಖರ ಸಜ್ಜನರವರು ಕಾನೂನು ಗ್ರಂಥ ರಚಿಸಿರುವದಕ್ಕೆ ಹ್ರೃತ್ಪೂರ್ವಕವಾಗಿ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಭಿಮಾನದ ಸಂಗತಿಯೇ ಸರಿ.              2005ರಲ್ಲಿ ಜಾರಿಗೊಂಡ ಈ ಮಾಹಿತಿ ಹಕ್ಕನ್ನು ಈ ವರೆಗೂ ಸಂಪೂರ್ಣವಾಗಿ ಯಾರು ಅರ್ಥೈಸಿಕೊಂಡಿಲ್ಲ.ಮಾಹಿತಿ ಕೇಳುವವರು ಮತ್ತು ಪೂರೈಸುವವರು ಇಂದಿಗೂ ಸರಿಯಾದ ಮಾರ್ಗದರ್ಶನ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತುತ ಕೃತಿ ಅವರ ಎಲ್ಲ ಸಂದೇಹಗಳಿಗೆ ನಿವಾರಣೆ ನೀಡಬಲ್ಲ ಉಪಯುಕ್ತ ಕೃತಿಯೆನಿಸಿದೆ. ಅದರಲ್ಲಿಯೂ ಸರ್ವೋಚ್ಛ ಹಾಗೂ ಉಚ್ಚ ನ್ಯಾಯಾಲಯಗಳ ತೀರ್ಪುಗಳ ಉಲ್ಲೇಖ, ಕೇಂದ್ರ- ರಾಜ್ಯ ಮಾಹಿತಿ ಆಯೋಗಗಳ ತೀರ್ಪುಗಳ ಉಲ್ಲೇಖ, ಸರಕಾರದ ಸುತ್ತೋಲೆಗಳು ಇತ್ಯಾದಿ ಸಮಗ್ರ ಮಾಹಿತಿಗಳು ಇಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ಹೀಗಾಗಿ ಇದೊಂದು ಸಮಯೋಚಿತ, ಸಾರ್ವಜನಿಕ ಹಿತಾಸಕ್ತಿ ಹೊಂದಿದ ಉಪಯುಕ್ತ ಕ್ತೃತಿಯಾಗಿದ್ದು, ತನ್ಮೂಲಕ ಕಾಯ್ದೆ ಸದ್ಬಳಕೆಯಾಗುವದರಲ್ಲಿ ಸಂಶಯವಿಲ್ಲ ಎಂಬುದು ಘನ ಕರ್ನಾಟಕ ಉಚ್ಛ ನ್ಯಾಯಾಲಯ,ಮಾಜಿ ಅಧ್ಯಕ್ಷರು,ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ,ಬೆಂಗಳೂರು ಮಾಜಿ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಶ್ರೀ.ಚಂದ್ರಶೇಖರಯ್ಯ (ನಿ)ಅವರ ಅಭಿಪ್ರಾಯವಾಗಿರುತ್ತದೆ.            ವೖದ್ಯಕೀಯ ಕ್ಷೇತ್ರದಿಂದ ಕಾನೂನು ಕ್ಷೇತ್ರಕ್ಕೆ ದಾಪುಗಾಲಿಟ್ಟು ಅಲ್ಲಿಯ ವಿಷಯಗಳನ್ನರಗಿಸಿಕೊಂಡು ಕಾನೂನು ಗ್ರಂಥ ರಚಿಸಿರುವರಲ್ಲದೆ ಇದು ನಾಲ್ಕನೆಯ ಆವ್ರತ್ತಿಯಲ್ಲಿ ಪಾದಾರ್ಪಣೆಗೊಂಡಿರುವದು ಅಂತರ್ಜಾಲದ ಹಾವಳಿಯ ತಂತ್ರಜ್ಞಾನದ ಈ ಯುಗದಲ್ಲಿ ಓದುಗರ ಸಂಖ್ಯೆಯು ಕ್ಷೀಣಿಸುತ್ತಲಿದೆ ಎಂಬ ಹೇಳಿಕೆ ಅಲ್ಲಗಳೆದಿರುವದನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಾಖಲಾರ್ಹ

“ಡಾ.ಶೇಖರ.ಡಿ.ಸಜ್ಜನರ ಕೃತಿ “ಮಾಹಿತಿ ಹಕ್ಕು ಅಧಿನಿಯಮ-2005ಒಂದು ವಿಶ್ಲೇಷಣೆ ( ತಿದ್ದುಪಡಿ 2019 ಸಹಿತ)” ಕೃತಿ ಪರಾಮರ್ಶೆ, ಪ್ರೊ ಶಕುಂತಲಾ. ಸಿಂಧೂರ ಗದಗ Read Post »

ಪುಸ್ತಕ ಸಂಗಾತಿ

ಉಷಾ ರವಿ ಅವರ ಕೃತಿ”ಆತ್ಮಾನುಸಂಧಾನ”ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ

ಪುಸ್ತಕ ಸಂಗಾತಿ ವರದೇಂದ್ರ ಕೆ ಮಸ್ಕಿ ಉಷಾ ರವಿ “ಆತ್ಮಾನುಸಂಧಾನ” “ಆತ್ಮಾವಲೋಕನಕ್ಕೆ ದಾರಿಯಾದ ಆತ್ಮಾನುಸಂಧಾನ”  ಆತ್ಮಾನುಸಂಧಾನಕೃತಿಕಾರರು : ಉಷಾರವಿಬೆಲೆ : 250/- “ಆತ್ಮಾವಲೋಕನಕ್ಕೆ ದಾರಿಯಾದ ಆತ್ಮಾನುಸಂಧಾನ”      ಕೃತಿ ಲೋಕಾರ್ಪಣೆಗೊಂಡು ತಿಂಗಳು ಕಳೆಯುವಷ್ಟರಲ್ಲೇ ಎರಡನೇ ಮುದ್ರಣ ಕಂಡ ಅಪರೂಪದ, ಅನುರೂಪವಾದ ಕಾದಂಬರಿ ಉಷಾರವಿ ಅವರ “ಆತ್ಮಾನುಸಂಧಾನ”.    ಮೊದಲ ಕೃತಿ “ಅಂತರಪಟ” ಕಾದಂಬರಿ ಮೂಲಕ ರಾಜ್ಯದ ಮನೆಮಾತಾಗಿದ್ದ ನನ್ನ ನೆಚ್ಚಿನ ಬರಹಗಾರ್ತಿ ಸಹೋದರಿ ಶ್ರೀಮತಿ ಉಷಾ ರವಿ ಅವರು ಈಗ ಎರಡನೇ ಕೃತಿ ಆತ್ಮಾನುಸಂಧಾನದ ಮುಖೇನ ರಾಜ್ಯದ ಓದುಗರ ಮನಮಾತಾಗಿದ್ದಾರೆ.   ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಆರಾಧಿಸುವ, ಪ್ರೀತಿಸುವ ಮೇರು ವ್ಯಕ್ತಿತ್ವದ ಪಾತ್ರಗಳ ಹೃದಯದೊಂದಿಗಿನ ಸಂಧಾನ ಈ ಕಾದಂಬರಿಯಲ್ಲಿ ಮುನ್ನೆಲೆಗೆ ಬರುತ್ತದೆ. ಇದನ್ನೆಲ್ಲಾ ನಾವು ಓದುತ್ತಾ ಹೋದರೆ ಅಕ್ಷರಶಃ ಪಾತ್ರಗಳೊಂದಿಗೆ ನಾವೂ ಆತ್ಮಾನುಸಂಧಾನ ಬೆಸೆದುಕೊಳ್ಳುತ್ತಾ ಸಾಗುತ್ತೇವೆ.    ನಾವು ಸಂಪೂರ್ಣ ಸಂಧಾನಕ್ಕೊಳಪಡಲು ಕೃತಿಯನ್ನು ತಾಂತ್ರಿಕ ಮನಸಿನಿಂದ ಓದದೆ ಪ್ರಾರ್ಥನೆಯಂತೆ, ತಪಸ್ಸಿನಂತೆ ಓದಬೇಕು. ಆಗ ಮಾತ್ರ ಈ ಸಂಧಾನ ಅನುಭವಕ್ಕೆ ಬಂದು ಸಂತುಷ್ಟತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಹೇಗೆ ಎಂಬುದನ್ನು ಕೃತಿಯ ಭಾವದೊಂದಿಗೆ ನಾನೂ ಸಂಧಾನಕ್ಕೊಳಪಟ್ಟು ಸಾಧ್ಯವಾದಷ್ಟು ತಮ್ಮ ಮುಂದೆ ಅಭಿವ್ಯಕ್ತಿಸಲು ಪ್ರಯತ್ನಿಸುತ್ತೇನೆ‌.                       ***     ಮನಸು ಎಂಬ ಅತ್ಯಮೂಲ್ಯವಾದ ಕಪ್ಪೆ ಚಿಪ್ಪಿನೊಳಗಿನ ಮುತ್ತನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಅದರೊಳಗಿನ ಮುತ್ತನ್ನು ಕೇವಲ ಕಾಮದ, ಧನದ ಮತ್ತಿರುವವರಿಗೆ ಎಟಕುವಂತೆ ಮಾಡಿದರೆ ಆಗುವ ಅನಾಹುತ ತುಂಬಾ ಘೋರವಾದುದು. ಇಂತಹ ಘೋರತೆಯನ್ನು ಜೀವನದಲ್ಲಿ ಅನುಭವಿಸಿದ ಹೆಣ್ಣಿನ ಬದುಕಿನ ಸುತ್ತ ಸುತ್ತಿರುವ ಈ ಆತ್ಮಾನುಸಂಧಾನ ಕಾದಂಬರಿ ವಿಶೇಷತೆಯಿಂದ ಕೂಡಿದೆ.     ಐಶ್ವರ್ಯ ಮತ್ತು ವಿಕಾಸ್ ಎಂಬ ಪಾತ್ರಗಳಿಂದ ಪ್ರಾರಂಭವಾಗುವ ಕಾದಂಬರಿ ನಿಜವಾಗಲೂ ನಮ್ಮೊಳಗೆ ಮೌಲ್ಯಗಳ ಐಶ್ವರ್ಯವನ್ನು ತುಂಬಿ ನಮ್ಮ ವ್ಯಕ್ತಿತ್ವ ವಿಕಸನಗೊಳಿಸಿ ಹೊಸ ಭಾವವನ್ನು ವಿಕಾಸಗೊಳಿಸುತ್ತದೆ.    ವಿಕಾಸ್ ಐಶ್ವರ್ಯಳನ್ನು ಪ್ರೇಮಿಸುತ್ತಿದ್ದರೆ ಐಶ್ವರ್ಯ ಅಜ್ಞಾತ ಕವಿಯ ಸಾಹಿತ್ಯಕ್ಕೆ ಮಾರು ಹೋಗಿ ಅಜ್ಞಾತ ಕವಿಯನ್ನು ಪ್ರೇಮಿಸುತ್ತಾಳೆ. ಪ್ರಾರಂಭದಲ್ಲಿ ಹರ್ಷ(ಐಶ್ವರ್ಯಳ ತಮ್ಮ)ನಿಗೆ ಅನ್ನಿಸಿದಂತೆ ವಿಕಾಸನೇ ಅಜ್ಞಾತ ಕವಿಯಾಗಿರಬಹುದೇ ಎಂದು ಓದುಗನಿಗೂ ಭಾಸವಾಗುತ್ತದೆ. ವಿಕಾಸನ ನಿಷ್ಕಲ್ಮಶ ಪ್ರೇಮದ ಪರಿ ಓದಿದ ನಮಗೆ ಎಲ್ಲಿ ಐಶ್ವರ್ಯ ವಿಕಾಸನಿಂದ ದೂರವಾಗುತ್ತಾಳೋ ಅಜ್ಞಾತ ಕವಿಯನ್ನು ವಿವಾಹವಾಗುತ್ತಾಳೋ ಎಂಬ ಬೇಸರವೂ ಮೂಡುತ್ತದೆ.     ಕಾದಂಬರಿ ಸಾಗಿದಂತೆ ಓದುಗರಿಗೆ ಅಜ್ಞಾತ ಕವಿಯ  ಪರಿಚಯವಾದಂತೆ ಕಾದಂಬರಿಯಲ್ಲಿ ಮುಖ್ಯ ಪಾತ್ರಗಳ  ಬದುಕು ಅನಾವರಣಗೊಳ್ಳುತ್ತದೆ.                   ***     ಹರೆಯದಲ್ಲಿ ಮನಸು ಬೇಡಿದ್ದನ್ನು ನಾವು ನಮ್ಮ ಬುದ್ಧಿಯನ್ನು ಉಪಯೋಗಿಸಿ ನೀಡಬೇಕು. ಅದರಲ್ಲೂ ಮನಸು ಪ್ರೇಮದ ಕಡೆಗೆ ವಾಲಿದರೆ, ನಮ್ಮ ಪ್ರೇಮವನ್ನು ಯೋಗ್ಯರಿಗೆ ಮಾತ್ರ ಧಾರೆ ಎರೆಯಬೇಕು. ಹೀಗೆ ಹರೆಯದಲ್ಲಿ ಈ ಕಾದಂಬರಿಯ ನಾಯಕಿ ಆರುಷಿ ರಶ್ಮಿ ಅನಾಮತ್ತಾಗಿ, ರಾಕ್ಷಸೀ ಪ್ರವೃತ್ತಿವುಳ್ಳ ವ್ಯಕ್ತಿಗೆ ತನ್ನ ಪ್ರೇಮವನ್ನು ಮತ್ತು ತನ್ನನ್ನು ಅರ್ಪಿಸಿದ ಪರಿಣಾಮವಾಗಿ ಎದುರಿಸಿದ ರೌರವ ನರಕದ ಬದುಕಿಗೆ ಸಾಕ್ಷಿಯಾಗಿ ಈ ಆತ್ಮಾನಂಧಾನ ಕೃತಿ ನಮ್ಮ ಕಣ್ಣ ಮುಂದೆ ಗೋಚರಗೊಳ್ಳುತ್ತದೆ.     ಕಾದಂಬರಿಯ ಶೀರ್ಷಿಕೆಗೆ ಸಹಸಂಬಂಧ ಕಲ್ಪಿಸಿಕೊಂಡು ಓದುವ ಓದುಗ ವರ್ಗಕ್ಕೆ, ಇಂತಹ ದುಸ್ಥಿತಿಯಲ್ಲಿ ಸಿಲುಕಿದ ಹೆಣ್ಣಿನ ಕಥೆಗೆ ಆತ್ಮಾನುಸಂಧಾನ ಹೆಸರು ಹೇಗೆ ಸರಿಹೊಂದುತ್ತದೆ? ಎಂಬ ಆಲೋಚನೆ ಹುಟ್ಟುತ್ತದೆ.     ಹೌದು ಇಲ್ಲಿ ಕಥಾ ನಾಯಕಿ ಸೂರ್ಯನೆಂಬ ಧೂರ್ತ ಹುಡುಗನನ್ನು ಮದುವೆಯಾಗಿ ತನ್ನ ವೈವಾಹಿಕ ಬದುಕಲ್ಲಿ ಎದುರುಗೊಂಡ ಎಲ್ಲ ತೊಡರುಗಳಲ್ಲಿ ಸಿಕ್ಕು, ಬಳಲಿ ಅದರಿಂದ ಹೊರಬಂದ ನಂತರ ಒಂದು ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ತಾನಷ್ಟೇ ಹೊಸ ಬದುಕನ್ನು ಕಟ್ಟಿಕೊಂಡಳು ಎಂದರೆ ತಪ್ಪಾದೀತು. ತನ್ನ ಬದುಕನ್ನು ಬರಹದ ರೂಪದಲ್ಲಿ ಲೋಕಾರ್ಪಣೆಗೊಳಿಸಿ ತಪ್ಪು, ಒಪ್ಪುಗಳನ್ನು ಅಕ್ಷರ ರೂಪದಲ್ಲಿ ಬಿತ್ತರಿಸಿ ಅನೇಕ ಓದುಗರ ಮನಃಪರಿವರ್ತನೆಗೆ ದಾರಿಯಾಗುತ್ತಾಳೆ.    ಅಕ್ಕನ ಮಗಳನ್ನೇ ವರಿಸುವ ಬಯಕೆಯಿಂದ ಯಾವಾಗಲೂ ಮಲ್ಲಿಗೆ ಹೂವಿಡಿದು ಬರುತ್ತಿದ್ದ ಕಥಾ ನಾಯಕ ರವಿಗೆ ಕಥಾ ನಾಯಕಿ ಆರುಷಿಯಿಂದ ಆದದ್ದು ಆಘಾತವಲ್ಲ, ಮೋಸವೂ ಅಲ್ಲ ಎಂದು ಓದುಗನಿಗೆ ಅನಿಸುತ್ತದೆಯಾದರೂ ಸೂರ್ಯನ ಬದಲಾಗಿ  ಸೋದರ ಮಾವ ರವಿಯನ್ನು ಕೈ ಹಿಡಿದಿದ್ದರೆ ನಮ್ಮ ಕಥಾ ನಾಯಕಿ ಹೇಗೆ ಸಂತೃಪ್ತಿಯಾಗಿ ಜೀವನ ನಡೆಸುತ್ತಿದ್ದಳು ಎಂದು ಮಧ್ಯೆ ಮಧ್ಯೆ ಅಪೇಕ್ಷಿತವಾಗಿ ಆಲೋಚಿಸುತ್ತಾನೆ.    ರವಿಯೊಂದಿಗೆ ದಾಂಪತ್ಯದ ಭಾವನೆಯನ್ನೇ ಬೆಳೆಸಿಕೊಳ್ಳದ ಆರುಷಿ ಸಹಜವಾಗಿಯೇ ಸೂರ್ಯನೊಂದಿಗೆ ಪ್ರೀತಿಯಲ್ಲಿ ಲೀನವಾಗುತ್ತಾಳೆ.ಆದರೆ ರವಿಗೆ ಆರುಷಿಯಲ್ಲಿ ಪ್ರೇಮವಿತ್ತು, ಅಕ್ಕರೆಯಿತ್ತು, ಕೃತಿಕಾರರೇ ಕೊನೆಯಲ್ಲಿ ಹೇಳುವಂತೆ ತಾಯಿಯ ಮಮಕಾರವೂ ಇತ್ತು. ಇದೆಲ್ಲದಕ್ಕೂ ಮಿಗಿಲಾಗಿ ಆತ್ಮ ಬಂಧನವಿತ್ತು ಎಂಬುದು ನಮ್ಮ ಗಮನಕ್ಕೂ ಬರುತ್ತದೆ.     ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬಂತೆ ಆರುಷಿಗೆ ಮದುವೆಯ ನಂತರವೇ ಸೂರ್ಯನ ನಿಜಮುಖ, ಸಂಸ್ಕಾರವಿಲ್ಲದ ನಡೆ ತಿಳಿಯುತ್ತದೆ. ರವಿ ಆರುಷಿಯನ್ನು ಹೃದಯಕ್ಕೆ ಹತ್ತಿರವಾಗಿಸಿಕೊಳ್ಳಲು ಬಯಸಿದರೆ ಸೂರ್ಯ ದೇಹಕ್ಕೆ ಹತ್ತಿರವಾಗಿಸಿಕೊಳ್ಳಲೆಂದೇ ಅವಳನ್ನು ಮದುವೆಯಾಗಿದ್ದು ಎಂದು ತಿಳಿದಾಗ ಓದುಗನ ರಕ್ತವೇ  ಕುದಿಯುತ್ತದೆ ಎಂದರೆ ಆರುಷಿಯ ಮನಸಿಗೆ ಎಷ್ಟು ಘಾಸಿಯಾಗಿರಬಹುದು ಎಂದು ಊಹಿಸಬಹುದಾಗಿದೆ.         ಈ ಕಾದಂಬರಿಯಲ್ಲಿ ಬರುವ ರವಿ, ಸೂರ್ಯ ಇಬ್ಬರೂ ಸಮಾನಾರ್ಥಕ ಹೆಸರನ್ನು ಹೊಂದಿದ್ದರೂ ಅವರ ವ್ಯಕ್ತಿತ್ವ, ನಡೆ, ನುಡಿ, ಪ್ರೇಮವನ್ನು ವ್ಯಕ್ತಪಡಿಸುವ ಪರಿ ಸಂಪೂರ್ಣ ತದ್ವಿರುದ್ಧವಾಗಿವೆ. ತ್ರಿಕೋನ ಪ್ರೇಮದ ಈ ಕಾದಂಬರಿಯ ನಾಯಕಿ ಆರುಷಿ ರಶ್ಮಿ ವಯೋಸಹಜದ ಆಕರ್ಷಣೆಗೊಳಗಾಗಿ ಅನ್ಯ ಮತದ ಸೂರ್ಯನನ್ನು, ಜಾತಿಯನ್ನೂ ಮೀರಿ ಪ್ರೀತಿಸಿ, ಎಂತದ್ದೇ ಕಷ್ಟ, ನಿಂದನೆ ಬಂದರೂ ಎದುರಿಸಲು ಸನ್ನದ್ಧವಾಗಿ ಮದುವೆಯಾಗುತ್ತಾಳೆ. ತಂದೆ, ತಾಯಿಯ ಪ್ರೀತಿಗಿಂತ ಪಕ್ಕದ ಮನೆಯ ಪ್ರೇಮಿ ಸೂರ್ಯನ ಪ್ರೀತಿಯೇ ಮಿಗಿಲು ಎಂದು ಸೂರ್ಯನನ್ನು ನಂಬಿ ಹಸ್ತ ಜೋಡಿಸುತ್ತಾಳೆ. ಈ ಸಂದರ್ಭದಲ್ಲಿ ಆರುಷಿ ಸೂರ್ಯ ಮದುವೆ ಆಗುವ ಕೊನೆಯ ಕ್ಷಣದವರೆಗೂ ಆರುಷಿ ಸೂರ್ಯನನ್ನು ಮದುವೆ ಆಗದೇ ಇರಲಿ ಎಂದು ಓದುಗ ಪ್ರತಿ ಹಂತದ ಓದಿನಲ್ಲೂ ಪ್ರಾರ್ಥಿಸುತ್ತಲೇ ಸಾಗುತ್ತಾನೆ‌. ಆದರೆ ರವಿ ಆರುಷಿಯ ವ್ಯಕ್ತಿತ್ವ ಲೋಕಕ್ಕೆ ಪರಿಚಯವಾಗಲೆಂದೇ ವಿಧಿ ಸೂರ್ಯ ಆರುಷಿಯ ವಿವಾಹವಾಗುವಂತೆ ಮಾಡಿದೆ ಅನಿಸುತ್ತದೆ.    ಸೂರ್ಯನ ಎಲ್ಲಾ ಆಟಾಟೋಪಗಳನ್ನು ಸಹಿಸಿಕೊಂಡೇ ಆರುಷಿ ಜೀವನ ಸಾಗಿಸುತ್ತಿದ್ದಳು. ಸೂರ್ಯ ಇವತ್ತಲ್ಲಾ ನಾಳೆ ಬದಲಾಗಬಹುದೆಂಬ ಆರುಷಿಯ ನಂಬಿಕೆ, ತಾಳ್ಮೆ ಕೊನೆಯವರೆಗೂ ಗೆಲ್ಲವುದೇ ಇಲ್ಲ. ಬದಲಿಗೆ ಆರುಷಿ ಮೆತ್ತಗಾದಷ್ಟು ಸೂರ್ಯ ಅಡ್ಡದಾರಿಯಲ್ಲಿ ಬಲಿಯುತ್ತಲೇ ಸಾಗುತ್ತಾನೆ. ವೈವಾಹಿಕೇತರ ಸಂಬಂಧದಲ್ಲೂ ಮುಂದುವರೆಯುತ್ತಾನೆ. ಇದನ್ನೆಲ್ಲಾ ಸಹಿಸಿಕೊಂಡ ಆರುಷಿಗೆ ಸೂರ್ಯನ ಅನುಮಾನದ ಮನ ಮಾತ್ರ ಬಹಳ ಬಾಧಿಸುತ್ತದೆ. ಎಲ್ಲಿ ಹೋದರೂ ಪರರ ಜೊತೆ ಸಂಬಂಧ ಕಲ್ಪಿಸಿ ಮಾತನಾಡುತ್ತಿದ್ದ ಸೂರ್ಯನ ನಡೆ ನಿಜಕ್ಕೂ ಓದಗನಿಗೂ ಕೂಡ ಅಸಹನೀಯವೆನಿಸುತ್ತದೆ.      ಅಂತೂ ಒಂದು ಸಮಯದಲ್ಲಿ ಸೂರ್ಯನ ಬದುಕು ಅಂತ್ಯವಾದರೆ, ಆರುಷಿಯ ಬದುಕು ಹೊಸ ಹಂತದತ್ತ ಸಾಗುತ್ತದೆ. ಅವಳ ಲೇಖನಿಯಿಂದ ಬಂದ ಅನೇಕ ಲೇಖನಗಳು ಪರರ ಬದುಕಿಗೆ ದಾರಿದೀಪವಾಗುತ್ತವೆ.     ಸೂರ್ಯ ಸಾಯುವ ಮುನ್ನ ತನ್ನ ಹೆಂಡತಿ, ಮಗಳನ್ನೇ ಮಾರುವಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾನೆ. ಮಾರುತ್ತಾನೆ ಕೂಡ. ಇತ್ತ ಬೆಂಕಿ ಅಪಘಾತದಲ್ಲಿ ಸೂರ್ಯ ಮತ್ತು ಸೂರ್ಯನೊಡನೆ ಅನೈತಿಕ ‌ಸಂಬಂಧ ಇಟ್ಟುಕೊಂಡ ಪರಿಮಳ ಅನ್ನೋ ಹೆಂಗಸು ಸಾಯುತ್ತಾಳೆ. ಲೋಕದ ದೃಷ್ಟಿಯಲ್ಲಿ ಸೂರ್ಯನೋಡನೆ ಆರುಷಿ ಮತ್ತು ಮಗಳು ರಶ್ಮಿಕಾ ಇಬ್ಬರೂ ಬೆಂಕಿಯಲ್ಲಿ ದಹಿಸಿಹೋದರು ಎಂಬಂತೆ ಭಾಸವಾಗುತ್ತದೆ.    ಮಾರಾಟಗೊಂಡು ದುಷ್ಟರ ಕೈಯಿಂದ ತಪ್ಪಿಸಿಕೊಂಡು ಬಂದ ಆರುಷಿ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ರವಿಯಿಂದನೂ ಅನೇಕ ವರ್ಷ ದೂರವಾಗಿ ಉಳಿಯುತ್ತಾಳೆ. ಆರುಷಿಯ ಮಗಳು ಆರುಷಿಗೆ ಸದಾ ಸಹಾಯಕಳಾಗಿದ್ದ ಸಾಕಮ್ಮಜ್ಜಿಯ ಸಹಾಯದಿಂದ ಬದುಕುಳಿದು ಆರುಷಿಯ ಗೆಳತಿ ಬೇಬಿಯ  ಸುಪರ್ದಿಯಲ್ಲಿ ಬೆಳೆಯುತ್ತಾಳೆ.      ರವಿ ಮುಂದೆ ಅಪ್ಪಾಜಿಯಾಗಿ ಎಲ್ಲರಿಗೂ ಬೇಕಾಗುತ್ತಾರೆ, ನಂತರ ಒಂದು ಸಂದರ್ಭದಲ್ಲಿ ಆರುಷಿಗೆ ರವಿಯ ಭೇಟಿ ಆಗುತ್ತದೆ. ಆರುಷಿ, ರವಿ, ವಿಕಾಸ್, ಐಶ್ವರ್ಯ, ಆತ್ಮಾರಾಮ ಎಲ್ಲರ ಒಡನಾಟದಲ್ಲಿ ಎಲ್ಲರಿಗೂ ಆರುಷಿಯ ಇತಿಹಾಸ ತಿಳಿಯುತ್ತದೆ. ಆರುಷಿಯ ತಂದೆ ತಾಯಿ ಎಲ್ಲರೂ ಆರುಷಿ ಸತ್ತಿದ್ದಾಳೆ ಎಂದು ಭಾವಿಸಿದರೆ ರವಿ ಮಾತ್ರ ಅದನ್ನು ನಂಬಿರಲಿಲ್ಲ. ಆರುಷಿ ಇಲ್ಲವಾದ ಸಂದರ್ಭದಲ್ಲಿ ನಾನೂ ಇಲ್ಲವಾಗುತ್ತೇನೆ ಎಂಬಷ್ಟು ಪ್ರೇಮಿಸಿದ್ದ ರವಿಯ ನಂಬಿಕೆ ನಿಜವಾಗುತ್ತದೆ.    ಪ್ರಸ್ತುತ ಆರುಷಿಯ ಎರಡನೇ ಮಗ ಕಿರಣ (ಸೂರ್ಯನಿಂದ ದೂರವಾಗುವ ಸಂದರ್ಭದಲ್ಲಿ ಸೂರ್ಯನಿಂದ ಗರ್ಭಿಣಿಯಾಗಿರುತ್ತಾಳೆ) ಐಶ್ವರ್ಯ, ವಿಕಾಸ ಎಲ್ಲರೂ ರವಿ ಆರುಷಿಗೆ ಮದುವೆ ಮಾಡಿಸಬೇಕೆಂದು ಹವಣಿಸುತ್ತಾರೆ. ಆದರೆ ಆರುಷಿ ರವಿಯ ಸಂಬಂಧ ಮದುವೆಗೂ ಮೀರಿದ್ದು, ದೈಹಿಕ ಸಂಬಂಧಕ್ಕೂ ಮಿಗಿಲಾದುದು ಎಂಬ ಅರಿವು ಎಲ್ಲರಿಗೂ ಕೊನೆಯಲ್ಲಿ ತಿಳಿಯುತ್ತದೆ.   ಅನೇಕ ತಿರುವನ್ನೊಳಗೊಂಡ ಕಾದಂಬರಿಯ ಕೊನೆಯಲ್ಲಿ ಓದುಗನಿಗೆ ಕೃತಿಕಾರರು ಅಚ್ಚರಿಯ ತಿರುವನ್ನು ನೀಡುತ್ತಾರೆ. ಸಾಕಮ್ಮಜ್ಜಿಯ ಸಹಾಯದಿಂದ ಬದುಕುಳಿದ ಆರುಷಿಯ ಮಗಳು ರಶ್ಮಿಕಾಳೇ ಈ ಐಶ್ವರ್ಯ, ಈಗಿನ ಆರುಷಿಯ ತಾಯಿ ಭಾರ್ಗವಿಯೇ ಆರುಷಿಯ ಗೆಳತಿ ಬೇಬಿ ಎಂದು ತಿಳಿದು ಓದುಗ ರೋಮಾಂಚನಗೊಳ್ಳುತ್ತಾನೆ.      ಸೂರ್ಯನ ಸಾವಿಗೆ ಆರುಷಿಯೇ ಕಾರಣ ಎಂದು ತಿಳಿದಿದ್ದ ಸೂರ್ಯನ ತಾಯಿ ‌ಸರೋಜಮ್ಮ ಕೊನೆಯಲ್ಲಿ ಆರುಷಿ ಬೆನ್ನಿಗೆ ಚೂರಿ ಹಾಕುತ್ತಾಳೆ. ರವಿಯ ತೊಡೆಯ ಮೇಲೆಯೇ ಆರುಷಿ ಕೊನೆ ಉಸಿರೆಳೆದರೆ ಆರುಷಿಯನ್ನು ಮಲಗಿಸಿಕೊಂಡ ರವಿ ಆರುಷಿ ಹಣೆಗೆ ಮುತ್ತಿಟ್ಟು ಅಲ್ಲೇ ಪ್ರಾಣ ಬಿಡುತ್ತಾನೆ. ಇಬ್ಬರ ನಡುವಿನ ಪ್ರೇಮದ ಸಂಧಾನ ಆತ್ಮಾನುಸಂಧಾನದಲ್ಲಿ ಮಿಲನವಾಗುತ್ತವೆ ಎನ್ನುವಲ್ಲಿ ಅಲ್ಲಿಯ ಪಾತ್ರಗಳ ಜೊತೆಗೆ ಓದುಗನ ಕಣ್ಣುಗಳೂ ತೇವವಾಗುತ್ತವೆ.     ತನ್ನ ಹೆತ್ತ ತಾಯಿ ಎಂದು ತಿಳಿದುಕೊಂಡ ಕೆಲವೇ ಕ್ಷಣಗಳಲ್ಲಿ ಐಶ್ವರ್ಯ ತಾಯಿಯನ್ನು ಮತ್ತೆ ಶಾಶ್ವತವಾಗಿ ಕಳೆದುಕೊಳ್ಳುತ್ತಾಳೆ.    ಬೇಬಿ ತನ್ನ ಆತ್ಮೀಯ ಗೆಳತಿಯನ್ನು ಕಳೆದುಕೊಂಡು ನೋವು ಪಟ್ಟರೆ, ಕಿರಣನಿಗೆ ತಾಯಿ ದೂರವಾದರೂ ತಾಯಿ ಸ್ಥಾನದಲ್ಲಿ ಒಡಹುಟ್ಟಿದ ಅಕ್ಕ, ಅಜ್ಜ, ಅಜ್ಜಿ ಎಲ್ಲರೂ ಸಿಗುತ್ತಾರೆ.    ರವಿಯ ಆದರ್ಶಗಳನ್ನೇ ತುಂಬಿಕೊಂಡಿದ್ದ ವಿಕ್ಕಿ, ಪ್ರೀತಿಯ ಅಭಿಮಾನದ ಅಪ್ಪಾಜಿಯನ್ನು ಕಳೆದುಕೊಂಡು ದುಃಖಿಸುತ್ತಾನೆ.                    ***   ಈ ಕಾದಂಬರಿಗೆ ಅಂತ್ಯವಿದೆ, ಕೃತಿಕಾರರೇನೋ ಕಾದಂಬರಿಗೆ ಮುಕ್ತಾಯ ಹಾಡಿ ಕಥೆ ಮುಗಿಸಿದರೂ ಕಾದಂಬರಿಯನ್ನು ಓದಿದ ಓದುಗನೆದೆಯಲ್ಲಿ ಪಾತ್ರಗಳು ಜೀವಂತಾವಾಗಿಯೇ ಉಳಿಯುತ್ತವೆ.    ರವಿಯ ಪ್ರೀತಿಸುವ ಪರಿ, ಪ್ರೀತಿ ಕೊಡಬೇಕು ಪ್ರತಿಯಾಗಿ ಬಯಸಬಾರದು ಎಂಬ ಸತ್ಯತೆ, ಆರುಷಿಯ ತಾಳ್ಮೆ, ಆತ್ಮಾರಾಮರ ಜೀವನ ದೃಷ್ಟಿಕೋನ ಎಲ್ಲವೂ ಓದುಗನಲ್ಲಿ ನಿರಂತರವಾಗಿ ಉಳಿಯುತ್ತವೆ.    ಶ್ರೀಮತಿ ಉಷಾ ರವಿ ಅವರ ಬರಹದ ವೈಖರಿ, ಕಥೆ ಕಟ್ಟುವ ವಿಧಾನಕ್ಕೆ ಓದುಗ ಖಂಡಿತ ಶರಣಾಗುತ್ತಾನೆ. ಇಡೀ ಕಾದಂಬರಿ ನನ್ನ ಹೃದಯದಲ್ಲಿದ್ದರೂ ಕೆಲ ಸಂದರ್ಭಗಳನ್ನು ಮಾತ್ರ ನಾನು ಇಲ್ಲಿ ಪರಿಚಯಿಸಲೆತ್ನಿಸಿದ್ದೇನೆ. ಅಜ್ಞಾತ ಕವಿಯನ್ನರಸಿ ಹೊರಟ ಐಶ್ವರ್ಯಳಿಗೆ ಸಿಕ್ಕಿದ್ದು ಯಾರು? ಕೊನೆಗೆ ಐಶ್ವರ್ಯ ಯಾರನ್ನು ಮದುವೆಯಾಗುತ್ತಾಳೆ? ಸೂರ್ಯನನ್ನು ಮದುವೆಯಾದ ಬಳಿಕ ಆರುಷಿ ಅನುಭವಿಸಿದ ಯಾತನೆ, ಮಗಳ ಈ ನಡೆಯಿಂದ ಆರುಷಿಯ ತಂದೆ, ತಾಯಿ, ಅಣ್ಣ ಪಟ್ಟ ಸಂಕಟ, ಆರುಷಿಯ ಜೀವನದ ಪ್ರತಿ ಹೆಜ್ಜೆಯಲ್ಲೂ ಅವಳ ಅರಿವಿಗೆ ಬಾರದಂತೆ ರವಿ ಹೇಗೆ ಸಾತಿಕೊಟ್ಟು ಅವಳ ಬದುಕನ್ನು ಗಟ್ಟಿಗೊಳಿಸುತ್ತಾನೆ. ಈ ಎಲ್ಲವೂ ನನ್ನ ಆತ್ಮದಲ್ಲಿ ಬಂಧನವಾಗಿವೆ ಅಲ್ಲದೆ ಈ ಕೃತಿಯ ಅನೇಕ ಸಾಲುಗಳು ಅನೇಕ ಬಾರಿ ನನ್ನನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆಯೂ ಮಾಡಿವೆ.    ನಿಮಗೂ ಈ ಆತ್ಮಾನುಸಂಧಾನದ

ಉಷಾ ರವಿ ಅವರ ಕೃತಿ”ಆತ್ಮಾನುಸಂಧಾನ”ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ Read Post »

ಕಾವ್ಯಯಾನ

ಎ ಹೇಮಗಂಗಾ ಅವರ ಹೊಸ ತನಗಗಳು

ಕಾವ್ಯ ಸಂಗಾತಿ ಎ ಹೇಮಗಂಗಾ ತನಗಗಳು ಚರ್ಚಿನ ಮುಂದೆ ಮರಗೊಂಚಲ ಹೂ ಪಾದರಿಗಂಧಕ್ಕೆ ಮರುಳಾಗಿಅಲ್ಲೇ ನಿಂತರು ಪಾದ್ರಿ ರೈಲಿನ ಹಳಿಗಳುಎಂದೂ ಸೇರಲಾರವುಮುರಿದ ಮನಗಳುಮತ್ತೆ ಕೂಡಲಾರವು ಗಿಣಿಯಂತೆಯೂ ಇದೆಗೂಬೆಯಂತೆಯೂ ಇದೆಹಕ್ಕಿ ಹಾರಲಾಗದು‘ ಕಾಕಾಪೋ ‘ ಹೆಸರದು ವಿಭಿನ್ನ ಹಕ್ಕಿಯಿದುಗುಂಡು ಗುಂಡಗಿಹುದು‘ ಗೂಬೆಗಿಣಿ ‘ ಹೆಸರುಆಯುಷ್ಯ ವರ್ಷ ನೂರು ನಿಂದನೆಯ ಭಯಕೆಕೈ ಚೆಲ್ಲಿ ಕೂರದಿರುಸಾಧನೆಯತ್ತ ನಿಲ್ಲುಅಡಗುವುದು ಸೊಲ್ಲು ಮರಣಿಸಿದ ವ್ಯಕ್ತಿಮಹಾ ಹೃದಯವಂತಅಂಗಾಂಗ ದಾನದಲಿಆತನಿನ್ನೂ ಜೀವಂತ ಇಣಚಿ ಬೀಜವನುಮಣ್ಣಲಿ ಬಚ್ಚಿಟ್ಟಿತುಮಳೆ ಸುರಿದು ಅಲ್ಲಿಸಸಿಯೊಂದು ಹುಟ್ಟಿತು ಜಾಗತಿಕ ಸಮರಪರಿಣಾಮ ದುರ್ಭರಚಿನ್ನ ಬೆಳ್ಳಿ ಎರಡೂಜೇಬಿಗೆ ಬಲು ಭಾರ ಕೊಳ್ಳಲೆಂದು ಹೋದಾಗನನ್ನವರು ಹೇಳಿದ್ದು“ಹೇಮ ಎಂದರೆ ಚಿನ್ನಬೇಡ ದುಬಾರಿ ಸ್ವರ್ಣ” ಅರವತ್ತರ ವಯಅರಳು ಮರುಳಿದೆಲೆಕ್ಕಿಸದೇ ಮರಳಿನೀ ಅರಳಬೇಕಿದೆ ಎ. ಹೇಮಗಂಗಾ

ಎ ಹೇಮಗಂಗಾ ಅವರ ಹೊಸ ತನಗಗಳು Read Post »

ಪುಸ್ತಕ ಸಂಗಾತಿ

ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ)

ಪುಸ್ತಕ ಸಂಗಾತಿ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) ಹೆಚ್. ಎಸ್.ಪ್ರತಿಮಾ ಹಾಸನ್ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪ್ರತಿ ಬೋಧಪುಸ್ತಕದ ಪ್ರಥಮ ಮುದ್ರಣ-2024ಪುಸ್ತಕದ ಮುಖಪುಟ ವಿನ್ಯಾಸ –ಪ್ರಕಾಶನ -ಅನ್ನಪೂರ್ಣ ಪಬ್ಲಿಷಿಂಗ್ ಹೌಸ್.ಪುಸ್ತಕದ ಬೆಲೆ-250 ರೂ.ಪುಟಗಳ ಸಂಖ್ಯೆ-224ಮುನ್ನುಡಿ -ಖ್ಯಾತ ಹಿರಿಯ ಸಾಹಿತಿಗಳಾದ ಶ್ರೀ.ಹರಿನರಸಿಂಹ ಉಪಾಧ್ಯಾಯ ಅವರು ಈ ಲೇಖನ ಸಂಕಲನ ಕೃತಿಗೆ ಸೊಗಸಾದ ಮುನ್ನುಡಿಯನ್ನು ಬರೆದು ಶುಭ ಕೋರಿರುವರು  ಇತ್ತೀಚಿಗೆ ಎಲ್ಲೆಡೆಯೂ  ರಾಜ್ಯದ್ಯಂತ  ಹೆಸರು ಮಾಡುತ್ತಾ  ಶತಕಕ್ಕಿಂತ ಹೆಚ್ಚಿನ ಪ್ರಶಸ್ತಿಯನ್ನು ಪಡೆದಂತಹ ಹೆಮ್ಮೆಯ ಹಾಸನದ  ಮೂಲದವರಾದ  ಹಾಸನದ  ಹೆಮ್ಮೆಯ ಪುತ್ರಿ  ಶ್ರೀಮತಿ ಹೆಚ್ ಎಸ್ ಪ್ರತಿಮಾ  ಹಾಸನ್ ರವರುಮುಕ್ತಕ ಕವಯಿತ್ರಿ, ಶಿಕ್ಷಕಿ, ಸಮಾಜ ಸೇವಕಿ, ಸಂಘಟಕಿ,  ಪತ್ರಕರ್ತೆ, ಅಂಕಣಗಾರ್ತಿ, ಸಾಮಾಜಿಕ ಚಿಂತಕಿ, ಗಾಯಕಿ, ಸಾಹಿತಿ, ಬರಹಗಾರ್ತಿ,ಯಾಗಿ ಅಷ್ಟೇ ಅಲ್ಲದೆ  ಹಲವಾರು ಸಂಘ ಸಂಸ್ಥೆಗಳಲ್ಲಿ  ಜಿಲ್ಲೆ ಹಾಗೂ ರಾಜ್ಯ ಘಟಕಗಳಲ್ಲಿ ಪದಾಧಿಕಾರವನ್ನು ಪಡೆದು ಕಾರ್ಯ ಕಾರ್ಯನಿರ್ವಹಿಸುತ್ತಾ  ‘ ಬಹುಮುಖ ಪ್ರತಿಭೆ ‘ ಯಾಗಿ ಹೊರಹೊಮ್ಮಿದ್ದಾರೆ. ಇವರ ಬಹುಮುಖ ಪ್ರತಿಭೆಯನ್ನು ಕಂಡಾಗ ಉದಿಸಿ ಬಂದ ನುಡಿಗಳು ಹಲವಾರು.” ಆಗದು ಎಂಬ ಕಾರ್ಯವ ಆಗುವುದೆಂಬುದನ್ನು ತೋರಿದವಳು ಎಲ್ಲೆಡೆಯೂ ಪ್ರಸಿದ್ಧಿಯಾದವಳು   ಇಂದಿನ ಪೀಳಿಗೆಗೆ ಪ್ರೇರಣೆಯಾಗಿರುವಳು ಸದಾ ಕಾಲ ಸಮಾಜದ ಏಳಿಗೆಗಾಗಿ  ತುಡಿಯುವಂತಹ ಹೃದಯವ ಹೊಂದಿರುವ ಮಹಿಳಾ ಸಾಧಕಿ ಇವಳು “ಇವರ ಸಾಹಿತ್ಯ ಲೋಕದಲ್ಲಿನ ಸೇವೆಯು  ಇವರಿಂದ 11 ಕೃತಿಗಳು  ಸಾಹಿತ್ಯ ಲೋಕಕ್ಕೆ ಲೋಕಾರ್ಪಣೆಗೊಂಡಿದೆ. ಅದರಲ್ಲಿ ಪ್ರತಿ ಬೋಧವೂ ಒಂದು 224 ಪುಟಗಳನ್ನು ಒಳಗೊಂಡಿದೆ. 250 ರೂಪಾಯಿಯಾಗಿದ್ದು. ಬೆನ್ನುಡಿಯನ್ನು ಪ್ರೋ. ಸಮತಾ ದೇಶ ಮಾನೆ  ರವರು ಬರೆದಿದ್ದು  ಪ್ರೋತ್ಸಾಹವನ್ನು ನೀಡುತ್ತಾ  ಕಾರ್ಯವನ್ನು ಮಾಡಿದ್ದಾರೆ. ಇದು 2024ರ ಆವೃತ್ತಿಯಾಗಿದ್ದು. ಅರ್ಪಣೆಯನ್ನು ತನ್ನ ತಂದೆಯಾದಂತಹ ದಿವಂಗತ ಸುರೇಶ್ ರವರಿಗೂ ತಾಯಿ ನೀಲಮ್ಮ ಸುರೇಶ್ ರವರಿಗೆ ಹಾಗೂ ಅಚ್ಚುಮೆಚ್ಚಿನ ಪ್ರೋತ್ಸಾಹದಾಯಕರಾಗಿ ತನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಅಣ್ಣನಾದ ಶ್ರೀ ಹೆಚ್. ಎಸ್ ಮಂಜುನಾಥ್( ಆರೋಗ್ಯ ನಿರೀಕ್ಷಣಾಧಿಕಾರಿ ) ರವರಿಗೂ  ಅರ್ಪಿಸಿದ್ದಾರೆ. ಈ ಕೃತಿಯಲ್ಲಿ ನವಳಗುಳಿದವರು ಆಶಯ ನುಡಿಯ ಮೂಲಕ ಆಶೀರ್ವದಿಸಿದ್ದಾರೆ. ಅತ್ಯಂತ ಮುಖ್ಯವಾಗಿ  ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದಂತಹ  ಶ್ರೀ ಉದಯಕುಮಾರ್ ರವರು ಆಶಯ ನುಡಿಯನ್ನು  ಬರೆದಿದ್ದಾರೆ. ಆನಂತರದಲ್ಲಿ ಮನದಾಳದ ಮಾತಿನಲ್ಲಿ ತನ್ನ ಸಾಧನೆಯ ದಾರಿಯಲ್ಲಿ ಅಡೆತಡೆಯನ್ನು ನೀಡಿದಂತಹ ಹಾಗೂ ಪ್ರೋತ್ಸಾಹಿಸಿದಂತಹ  ಎಲ್ಲರಿಗೂ ಧನ್ಯವಾದಗಳನ್ನು ಲೇಖಕಿ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ರವರು  ತಿಳಿಸಿದ್ದಾರೆ. ನಂತರದಲ್ಲಿ ಮುನ್ನುಡಿಯನ್ನು  ಹರಿ ನರಸಿಂಹ ಉಪಾಧ್ಯಾಯರು ಬರೆದಿದ್ದಾರೆ. ಆನಂತರದಲ್ಲಿ ಪರಿವಿಡಿಯಲ್ಲಿ 45 ಲೇಖನಗಳನ್ನು ಒಳಗೊಂಡಂತಹ  ಅ ಲೇಖನಗಳಲ್ಲಿ ಕಥೆ, ಪ್ರಸ್ತುತ ದಿನಮಾನಕ್ಕೆ ಹೋಲಿಕೆ ಮಾಡುವಂತಹ ಲೇಖನಗಳು, ಮಂಗಳಮುಖಿಯರ ಬಗ್ಗೆ  ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಂತಹ ಲೇಖನಗಳು ಇವೆ. ಇದರಲ್ಲಿ ಇರುವಂತಹ  ಪ್ರತಿಯೊಂದು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಕನ್ನಡ ಸಾಹಿತ್ಯವು ಇಂದು ಸೊರಗುತ್ತಿದೆ ಎಂಬ ಕೂಗು ಕೇಳಿ ಬರುವ ಹೊತ್ತಿನಲ್ಲಿ ಅದೆಷ್ಟೋ ಕವಿಗಳು, ಕವಯಿತ್ರಿಯರು, ಲೇಖಕ ಲೇಖಕಿಯರು ಕನ್ನಡದಲ್ಲಿ ಬರೆಯುತ್ತಿರುವುದು ಕಂಡು ಬರುತ್ತಿದೆ. ಇದನ್ನು ನೋಡಿದಾಗ ಕನ್ನಡದ ಜನರು ಕನ್ನಡವನ್ನು ಎಂದಿಗೂ ಹಿಂದೆ ಉಳಿಯಲು ಬಿಡುವ ಮಾತೇ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಅದರಂತೆ ಇಂದು ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬಂದು ತಮ್ಮ ಸಾಹಿತ್ಯ ಅಭಿರುಚಿಯನ್ನು ತೋರಿಸುತ್ತಿರುವುದು ಹೆಮ್ಮೆಯ ವಿಚಾರ. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಕೃಷಿ ಮಾಡುವಲ್ಲಿ  ಹೆಜ್ಜೆ ಹಾಕುವ ಅನೇಕರಲ್ಲಿ ಒಬ್ಬರು ಹಾಸನದ ಶ್ರೀಮತಿ ಪ್ರತಿಮಾ.ಹೆಚ್.ಎಸ್ ರವರು. ಈಗಾಗಲೇ ಹಲವು ಕೃತಿಗಳನ್ನು ಹೊರ ತಂದಿರುವ ಇವರು ಈಗ ಮುಕ್ತಕ ಸಂಕಲನ ಕೃತಿಯನ್ನು ತರುವಲ್ಲಿ ಆಸಕ್ತಿ ತೋರಿರುವುದು ಆ ಸಾಹಿತ್ಯ ಪ್ರಕಾರಕ್ಕೊಂದು ಹೆಚ್ಛಿನ ಗರಿಯಿಟ್ಟಂತಾಗುವುದು. ಶ್ರೀಮತಿ  ಹೆಚ್ ಎಸ್ ಪ್ರತಿಮಾ ಹಾಸನ್ ರವರು  ಈ ಮುಕ್ತಕ ಕೃತಿ *ಅಂತರಂಗ ಪ್ರತಿರವ* ದಲ್ಲಿ ಸುಮಾರು ನೂರು ಮುಕ್ತಕಗಳಿದ್ದು ಜೊತೆಗೆ ಓದಿ ಆರ್ಥೈಸಿಕೊಳ್ಳಲು ಸುಲಭವಾಗುವಂತೆ ಭಾವಾರ್ಥವನ್ನೂ ಬರೆದಿರುವುದನ್ನು ಕಾಣುತ್ತೇವೆ. ಕವಿಭಾವವನ್ನು ಅರ್ಥ ಮಾಡಿಕೊಳ್ಳುವುದು ಕೆಲವೊಮ್ಮೆ ಸುಲಭವಲ್ಲದ ಕಾರಣ ಓದುಗರು ಗೊಂದಲಕ್ಕೆ ಈಡಾಗಬಾರದು, ಓದಿದ ಪ್ರತಿಯೊಂದು ವಿಷಯಗಳೂ ಬೇಗ ಮನನವಾಗಲಿ ಎಂಬ ಉದ್ದೇಶದಿಂದ ಸರಳವಾಗಿ ಕೆಲವು ಸಾಲುಗಳಲ್ಲಿ ಅರ್ಥವನ್ನೂ ಇಲ್ಲಿ ನೀಡಿರುವುದು ಕೃತಿಯ ವಿಶೇಷತೆ.ಇಲ್ಲಿರುವ ಮುಕ್ತಕಗಳಲ್ಲಿ ಕೆಲವನ್ನು ನೋಡುವುದಾದರೆ…ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) ಸದ್ದಿರದೆ ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ ಕಪಿಲನಗರದರಸು ಗೌತಮಬುದ್ಧ ಮನೆಯನು ಬಿಟ್ಟು ಬೋಧಿವೃಕ್ಷದ ಕೆಳಗೆಸಿದ್ಧಿಗಳಿಸಲು ಕುಳಿತ ಲಕ್ಷ್ಮಿದೇವಿ  ಭಾವಾರ್ಥ:  ಪ್ರಪಂಚದಲ್ಲಿ ಎಲ್ಲರೂ  ಯಾವುದೇ ಶಬ್ದ ಮಾಡದೆ ರಾತ್ರಿ ವೇಳೆ ಶಾಂತಿಯಿಂದ ನಿದ್ದೆ ಮಾಡುತ್ತಿರುತ್ತಾರೆ. ಆದರೆ ಗೌತಮ ಕಪಿಲ ನಗರದ  ಅರಸ ಬೋಧಿವೃಕ್ಷದ ಕೆಳಗೆ  ಕುಳಿತು ಧ್ಯಾನ ಮಾಡುತ್ತ ಶಾಂತಿಯನ್ನು ಗಳಿಸುತ್ತಾನೆ . ಅದರಿಂದ ಸಿದ್ಧಿ ಪಡೆಯಬೇಕೆಂದು ಆಶಿಸುತ್ತಾನೆ. ಲೋಕದ ಸಾವು ನೋವುಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ನಡು ರಾತ್ರಿ ಮನೆ ಬಿಟ್ಟು ಹೋಗುತ್ತಾನೆ.  ಬೋಧಿವೃಕ್ಷದ ಕೆಳಗೆ  ಸಿದ್ದಿಗಳಿಸಲು ತಪಸ್ಸಿಗೆ ಕುಳಿತುಬಿಡುತ್ತಾನೆ.ಕನ್ನಡಕೆ ಕೈಯೆತ್ತು ಗೌರಿ ಶಿಖರದ ಹಾಗೆಕನ್ನಡಕೆ ಕೊರಳೆತ್ತು ಪಾಂಚಜನ್ಯಕನ್ನಡವ ನೆನೆಯುತ್ತ ಕನ್ನಡಾಂಬೆಗೆ ನಮಿಸುಕನ್ನಡವೆ ಚೆನ್ನುಡಿಯು ಲಕ್ಷ್ಮಿ ದೇವಿಭಾವಾರ್ಥ: ನಮ್ಮ ಕನ್ನಡ  ನಮ್ಮ ಆಸ್ತಿ. ಅದನ್ನು ಉಳಿಸಿಕೊಳ್ಳುವ ಕೆಲಸ ನಮ್ಮಿಂದಲೇ ಆಗಬೇಕೇ ಹೊರತು ಬೇರೆಯವರು ಅದನ್ನು ಉಳಿಸಲು ಬರುವುದಿಲ್ಲ. ಕನ್ನಡಕ್ಕೆ ಕೈ ಎತ್ತು  ಗೌರಿ ಶಿಖರದ ಹಾಗೆ  ಕನ್ನಡಕ್ಕೆ ಕೊರಳೆತ್ತು  ಪಾಂಚಜನ್ಯದ ರೀತಿಯಲ್ಲಿ ಎಂಬಂತೆ ಕನ್ನಡವನ್ನೇ ಉಸಿರಾಗಿಸಿಕೊಂಡು  ಕನ್ನಡವನ್ನೇ ಬೆಳೆಸಲು  ಹೋರಾಟವನ್ನು ಮಾಡಬೇಕಾಗುತ್ತದೆ. ಕನ್ನಡವ ನೆನೆಸುತಲಿ  ಕನ್ನಡಾಂಬೆಗೆ ನಮಿಸುತ್ತಲಿ  ತಾಯಿಯ ಋಣ ತೀರಿಸಲಾಗದೆಂದು  ನನ್ನ ಕನ್ನಡ ನನಗೆ ಹೆಮ್ಮೆ ಎಂದು ಹೇಳುತ್ತಾ ಸಾಗುವ ದಾರಿಯಲ್ಲಿ ಕನ್ನಡಾಂಬೆಯನ್ನು ನಮಿಸುತ್ತಾ ಕನ್ನಡವೇ ಚೆನ್ನುಡಿಯು ಎಂದು ಹೇಳುತ್ತಾ  ಎಲ್ಲೆಡೆಯೂ ಪ್ರೀತಿ ವಿಶ್ವಾಸದಲ್ಲಿ ಬಾಳಬೇಕಾಗಿದೆ. ಪ್ರತಿ ಮನೆ ಮನೆಗಳಲ್ಲೂ ಕನ್ನಡದ ಕಹಳೆಯನ್ನು ಕೂಗ ಬೇಕಾಗಿದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡವೇ ನಮ್ಮಮ್ಮ, ಅವಳೇ ನಮ್ಮ ಉಸಿರಮ್ಮ ಎಂದು ಜೀವನದಲ್ಲಿ ಸಾಗ ಬೇಕಾಗುತ್ತದೆ.ಕೂಲಿನಾಲಿಯ ಮಾಡಿ ಮಕ್ಕಳಿಗೆ ಮುದನೀಡಿಪಾಲಿಸಿದ ತಾಯ್ತಂದೆ ನಿಜದೇವರುಹಾಲುಣಿಸಿ ತುತ್ತುಣಿಸಿ ಗೌರವವ ಹೆಚ್ಚಿಸಿದನೀಲಮ್ಮನಿಗೆ ಶರಣು ಲಕ್ಷ್ಮಿದೇವಿಭಾವಾರ್ಥ: ಯಾರೇ ಆಗಲಿ ಜನಿಸಿದ ಮಕ್ಕಳನ್ನು ಸಾಕುವಾಗ ತಮ್ಮ ಕುಡಿಗಳೆಂದು ಪ್ರೀತಿಯಿಂದ ಸಾಕುತ್ತಾರೆ.  ಯಾವುದೇ ಕಷ್ಟಗಳನ್ನು ತೋರಿಸಿಕೊಳ್ಳದಂತೆ ಕೂಲಿ ನಾಲಿ ಮಾಡಿ ಮಕ್ಕಳನ್ನು ಸಾಕುತ್ತಾರೆ. ಅವರೇ ನಿಜವಾದ ದೇವರು. ಅವರ ಕಷ್ಟಗಳು ಎಷ್ಟೇ ಇದ್ದರೂ  ನಗುನಗುತ ಪ್ರೀತಿಯಿಂದ ಊಟ ಮಾಡಿಸುತ್ತಾರೆ. ಅಂತಹ ದೇವರುಗಳನ್ನು  ಚೆನ್ನಾಗಿ ನೋಡಿಕೊಳ್ಳುವ ರೀತಿಯಲ್ಲಿ  ಕೃತಜ್ಞತೆಯನ್ನು ತೋರಬೇಕು.  ಅಂತಹ ನನ್ನ ತಾಯಿಯು ಸಹ ಎದೆ ಹಾಲು ನೀಡುತ್ತಾ ಗೌರವ ನೀಡುತ್ತ ಪ್ರೀತಿ ಪ್ರೇಮದಲಿ ಸಾಕು  ಹೂವಂತೆ ಸಂರಕ್ಷಿಸುತ  ನನ್ನ ಎಲ್ಲಾ ಕಾರ್ಯಗಳಲ್ಲಿ ಜೊತೆಯಾಗಿ ನಿಲ್ಲುತ್ತಾ ನನಗೆ ಯಶಸ್ಸನ್ನು ನೀಡುತ್ತಿರುವ  ನನ್ನ ತಾಯಿ ನೀಲಮ್ಮಗೆ ಶರಣು.        ಕೃತಿಯೊಳಗಿನ ಎಲ್ಲಾ ಮುಕ್ತಕಗಳಿಂದ ಆಯ್ದು ಬೆರಳೆಣಿಕೆಯಷ್ಟನ್ನು ಮಾತ್ರ ಇಲ್ಲಿ ಉದಾಹರಿಸಿದ್ದೇನೆ. ಈ ಎಲ್ಲ ರಚನೆಗಳನ್ನು ಕಂಡಾಗ ಕವಯಿತ್ರಿಯು ಎಷ್ಟು ವಿಶಾಲ ಚಿಂತನೆಯುಳ್ಳವರಾಗಿದ್ದಾರೆ ಎಂದು ಅರ್ಥವಾಗುತ್ತದೆ. ಪ್ರತಿಯೊಂದು ಮುಕ್ತಕಗಳಲ್ಲಿಯೂ ವಿವಿದ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಾಹಿತ್ಯದ ವಿಸ್ತಾರವನ್ನು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಪ್ರೀತಿ, ಒಳಿತು ಕೆಡುಕು, ಬುದ್ಧಿವಾದ, ಅಮ್ಮ, ಸ್ನೇಹ ಮೊದಲಾದ ಸಾಕಷ್ಟು ವಿಷಯಗಳು ಹಾಸುಹೊಕ್ಕಾಗಿವೆ. ಬದುಕಿನ ಆಗು ಹೋಗುಗಳಿಗೆ ಸ್ಪಂದಿಸುತ್ತವೆ. ಸಂಬಂಧ, ಪರಿಸರ ಕಾಳಜಿ, ಕನ್ನಡದ ಹಿರಿಮೆ, ದುಃಖ, ಭಕ್ತಿ, ಕಲಿಕೆ, ತಾಳ್ಮೆಯ ಕುರಿತು ಬೆಳಕು ಚೆಲ್ಲುವ ಹಲವು ಮುಕ್ತಕಗಳು ಮನಸ್ಸಿಗೆ ನಾಟುತ್ತವೆ. ಆಧುನಿಕ ವಚನದಂತೆ ಕಂಗೊಳಿಸುವ ನಾಲ್ಕು ಸಾಲಿನ ಮುಕ್ತಕಗಳು ಲಕ್ಷ್ಮಿದೇವಿ ಅಂಕಿತದಿಂದ ಕೊನೆಗೊಳ್ಳುತ್ತವೆ. ಈಗಾಗಲೇ ನೀಲ ಪ್ರತಿಮಾನ ಮಂಜು ಕವನ ಸಂಕಲನ, ಪಂಚ ಮುಕ್ತಕ ಮಾಲೆ, ಹಾಗೂ ಮನದಾಳದ ಪ್ರತಿಬಿಂಬ ಲೇಖನ ಸಂಕಲನ, ಪ್ರತಿಮಾವಲೋಕನ (ಕೃತಿ ವಿಮರ್ಶನ ಸಂಕಲನ), ಭಾವನೆಗಳ ಪ್ರತಿಬಿಂಬ, ಬಣ್ಣದ ಪ್ರತಿ ಡಬ್ಬಿ (ಶಿಶು ಗೀತೆ), ಪ್ರತಿಮಾನತರಂಗ (ಸಮಗ್ರಲೇಖನ ಸಂಗ್ರಹ ), ಪ್ರತಿ ಮುಕ್ತ ಸಿರಿ, ಕೃತಿಗಳನ್ನು ಹೊರತಂದಿರುವ ಇವರು ಪ್ರತಿಮಾ ಸಾಮಾಜಿಕ, ಸಾಂಸ್ಕ್ರತಿಕ ಟ್ರಸ್ಟ್ (ರಿ)ರಾಜ್ಯ ಘಟಕ. ಹಾಸನ ಜಿಲ್ಲೆ. ಯ ಸಂಸ್ಥಾಪಕಿಯೂ ಹೌದು. ಈ ಪ್ರತಿಷ್ಠಾನದ ಮೂಲಕ ಅನೇಕ ಸಮಾಜ ಸೇವೆಯನ್ನು ಮಾಡಿ ಗೌರವಕ್ಕೆ ಪಾತ್ರರಾಗಿರುವುದು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿ. ಸಮಾಜ ಸೇವೆ ಹಾಗೂ ಸಾಹಿತ್ಯ ಸೇವೆಗೆ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ವಿಚಾರ. ಈಗ ಈ ಮತ್ತೊಂದು ಕೃತಿಯೂ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಕೀರ್ತಿ, ಸಮ್ಮಾನಗಳು ಅರಸಿ ಬರಲಿ ಎಂದು ಆಶಿಸುತ್ತಾ ಈ ಕೃತಿಯಲ್ಲಿನ ಉತ್ತಮ ಜೀವನ ಮೌಲ್ಯಗಳನ್ನು ಸಂದೇಶಗಳು ಜನತೆಗೆ ದಾರಿ ದೀಪವಾಗಲಿ. ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ ರವರು ಇನ್ನಷ್ಟು ಹೆಚ್ಚು ವೈವಿಧ್ಯಮಯ ಸಾಹಿತ್ಯ ರಚನೆಯಾಗಲಿ, ತಾಯಿ ಭುವನೇಶ್ವರಿಯ ಆಶೀರ್ವಾದ ಸದಾ ಇವರಿಗೆ ಪ್ರಾಪ್ತವಾಗಲಿ ಎಂದು ಹೃನ್ಮನದಿಂದ ಹಾರೈಸುತ್ತೇನೆ. ಸಿರಿಗನ್ನಡಂ ಗೆಲ್ಗೆಸಿರಿಗನ್ನಡಂ ಬಾಳ್ಗೆ ಸಹೃದಯ ಓದುಗರು ಸಾಹಿತ್ಯಾಸಕ್ತರು ಪ್ರತಿಭೋದ ಲೇಖನ ಸಂಕಲನ ಕೃತಿಯ ಕೊಂಡು ಓದುವ ಮೂಲಕ ಸೃಜನಶೀಲ ಬರಹಗಾರ್ತಿಯಾದ ಬಹುಮುಖ ಪ್ರತಿಭೆಯ ಪ್ರತಿಭಾನ್ವಿತೆಯಾದ ಶ್ರೀಮತಿ ಪ್ರತಿಮಾ ಹಾಸನ ಇವರನ್ನು ಹರಸಿ ಹಾರೈಸಿ ಶುಭ ಕೋರಿ ಈ ಲೇಖನ ಸಂಕಲನ ಕೃತಿಯ ಕೊಂಡು ಕೊಳ್ಳಲು ಸಂಪರ್ಕಿಸಬೇಕಾದ ಲೇಖಕಿಯ ಮೊಬೈಲ್ ಸಂಪರ್ಕ ಸಂಖ್ಯೆ- +91 96115 34526 ಪೂರ್ಣಿಮಾ ರಾಜೇಶ್

ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) Read Post »

ಕಾವ್ಯಯಾನ

ರತ್ನರಾಯ ಮಲ್ಲ ಅವರ “ಗಜಲ್”

ಕಾವ್ಯ ಸಂಗಾತಿ ರತ್ನರಾಯ ಮಲ್ಲ “ಗಜಲ್” ಗುಲಾಬಿ ಪಲ್ಲಂಗದಲಿ ಮಲ್ಲಿಗೆಯ ಸುಮದ ಪಕಳೆ ನಿನಗಾಗಿ ಅರಳುತಿದೆಬೆಳಗಿನ ಹನಿ ಸ್ಪರ್ಶದಂತೆ ನನ್ನೊಳಗೆ ಸುಕನಸು ಮರವಾಗಿ ಹೊನಲುತಿದೆ ನಿನ್ನ ಆಲಿಂಗನದಿ ಹೂದಳದ ತೇವವು ಆಯಸ್ಕಾಂತದಂತೆ ಸೆಳೆಯುತಿದೆಮಳೆ ಮಣ್ಣನು ಅಪ್ಪಿಕೊಳ್ಳುವ ಹೊತ್ತಲಿ ನಿನ್ನ ಸೇರುವ ಆಸೆ ಚಿಗುರುತಿದೆ ಉಸಿರಿನೊಳಗಿನ ತಾಪದಲಿ ಹೃದಯದ ಅಡುಗೆಮನೆ ರಸಪಾಕ ನೀಡಿದೆನಿನ್ನಿಂದ ಹೂ ಅರಳುವುದಕ್ಕೆ ಮುಂಚಿನ ಕಂಪನ ಮನದಲಿ ಹರಡುತಿದೆ ತೆರೆದ ಹೂದೋಟದಂತಹ ಪ್ರೇಮಲೋಕದಲಿ ನಮಗೆ ವಯಸ್ಸು ತಾಗದುಮಧುಚಂದ್ರಕಾಗಿ ಹೂವಿನ ತೊಟ್ಟಿಲಲಿ ಸುಗಂಧದ ಹೊದಿಕೆ ಕಾಯುತಿದೆ ನೀನು ಹೃದಯ ತಣಿಸುವ ರಮಣೀಯ ದೃಶ್ಯ ಕಾವ್ಯ ದಣಿಯುವ ಮಾತಿಲ್ಲನಿನ್ನ ಮಡಿಲಲಿ ದೀಪ ದೀಪಕ್ಕೆ ಬೆಳಕು ನೀಡಲು ಮಲ್ಲಿ ಮನ ಮಿನುಗುತಿದೆ ರತ್ನರಾಯಮಲ್ಲ

ರತ್ನರಾಯ ಮಲ್ಲ ಅವರ “ಗಜಲ್” Read Post »

You cannot copy content of this page

Scroll to Top