ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” ವಿಶೇಷ ಲೇಖನ ಡಾ. ಸುಮತಿ ಪಿ.

ಜೀವನಸಂಗಾತಿ ಡಾ. ಸುಮತಿ ಪಿ. “ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” “ಅತಿಯಾಸೆ ಗತಿ ಕೇಡು”ಎಂಬ ಮಾತಿನಂತೆ ಮನುಷ್ಯನಿಗೆ ಅತಿಯಾದ ಆಸೆಗಳಿದ್ದರೆ, ಒಂದು ಆಸೆ ಅಥವಾ ಬಯಕೆಯ ಈಡೇರಿಕೆಯ ನಂತರ ಇನ್ನೊಂದು ಆಸೆ ಗರಿಗೆದರಿ ಎದ್ದು ನಿಲ್ಲುತ್ತದೆ. ಅಂತಹ ಸಂದರ್ಭದಲ್ಲಿ ಮನುಷ್ಯನಿಗೆ ಸಂತೃಪ್ತಿ ಎನ್ನುವುದು ಸಿಗದೇ ಇರಬಹುದು. ಅದಕ್ಕೆ ಮನುಷ್ಯರಾದ ನಾವು ಸಂತಸದಿಂದ  ಜೀವನ ನಡೆಸಬೇಕಾದರೆ ಇದ್ದದ್ದರಲ್ಲಿ ತೃಪ್ತಿಯನ್ನು ಅನುಭವಿಸುವ ಗುಣ ನಮ್ಮದಾಗಬೇಕು. ಸಂಪತ್ತು ಎಂದರೆ ಶ್ರೇಷ್ಠವಾದದ್ದು,ಮೌಲ್ಯಯುತವಾದದ್ದು ಎಂದರ್ಥ. ಯಾವುದರಿಂದ ನಮಗೆ ಒಳಿತಾಗುತ್ತದೆಯೋ ಅದುವೇ ಸಂಪತ್ತು ಎನಿಸಿಕೊಳ್ಳುತ್ತದೆ.ಸಂತೃಪ್ತಿ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿನ ಪರಿಸ್ಥಿತಿಯಿಂದ ತೃಪ್ತನಾಗುವ ಸ್ಥಿತಿಯಾಗಿದೆ, ಸಂತೃಪ್ತಿ ಇದ್ದವರು ಜೀವನದಲ್ಲಿ ಆಂತರಿಕ ಶಾಂತಿಯನ್ನು ಹೊಂದಿರುತ್ತಾರೆ .ಆಗ ಅವರಲ್ಲಿ ಸಂತೃಪ್ತಿಯೇ ದೊಡ್ಡ ಸಂಪತ್ತಾಗಿ ವಿಜೃಂಭಿಸುತ್ತದೆ.ಸಂತೃಪ್ತಿ ಎಂದರೆ ಇದ್ದಹಾಗೆ ಜೀವನವನ್ನು ಸಾಗಿಸುವುದು ಎಂಬರ್ಥ ಬಂದಿದೆ. ಆದರೆ ನಿಜಾರ್ಥದಲ್ಲಿ ಸಂತೃಪ್ತಿಯೆಂದರೆ, ಸರಿಯಾದುದರಲ್ಲಿ, ಉದಾತ್ತವಾದುದರಲ್ಲಿ ನಾವು ನೆಲೆಗೊಳ್ಳುವುದಾಗಿದೆ.. ಸಂತೃಪ್ತಿಯು ಬಯಕೆಗಳ ಬಿರುಗಾಳಿಯಿಂದ ನಮ್ಮನ್ನು ರಕ್ಷಿಸುತ್ತದೆ. ನಮ್ಮದೇ ಜೀವನವನ್ನು ತೆಗೆದುಕೊಂಡರೆ, ನಾವು ಅನುಭವಿಸುವ ಸಂತೃಪ್ತಿಯೆಂಬುವುದು ನಮ್ಮ ಬದುಕಿನ ಅತ್ಯಂತ ಸಂತೋಷದ ಕ್ಷಣಗಳಾಗಿ , ಮನಸ್ಸು ಶಾಂತಿ ಸಮಾಧಾನದಿಂದ ಇರುತ್ತದೆ. ಕೆಲವರನ್ನು ನಾವು ಸ್ಥಿತಪ್ರಜ್ಞರು ಎನ್ನುತ್ತೇವೆ. ಸ್ಥಿತಪಜ್ಞರು ಶಾಂತವಾಗಿರುತ್ತಾರೆ. ಸಂತೃಪ್ತಿಯನ್ನು ಹೊಂದುವವರಾಗಿರುತ್ತಾರೆ. ಸಾಗರದ ನೀರನ್ನು ಕಲಕಲು ಪ್ರಯತ್ನಿಸಿದರೂ, ಸಾಗರ ತನ್ನದೇ ಲಯದಲ್ಲಿರುತ್ತದೆ. ಹಾಗೆಯೇ ಸ್ಥಿತಪ್ರಜ್ಞೆಯ  ವ್ಯಕ್ತಿಯೂ  ಸಂತೃಪ್ತ  ಮನಸ್ಸಿನಿಂದ ಧನಾತ್ಮಕ ಭಾವನೆ ಹೊಂದಿರುತ್ತಾನೆ. ಪ್ರಾಣಿಗಳಲ್ಲಿ ಮನುಷ್ಯ ಜನ್ಮ ಅತೀ ಶ್ರೇಷ್ಠವಾದದ್ದು.ಮನುಷ್ಯ ಜನ್ಮದಲ್ಲಿ ಬದುಕು ನಡೆಸುವಾಗ ಸುಖ ಕಾಣಬೇಕಾದರೆ ಸಂತೃಪ್ತಿ ಇರಬೇಕು.ಸಂತೃಪ್ತಿ ಎಂಬುದು ಮನುಷ್ಯನ ಜೀವನದಲ್ಲಿ ಮೂಡಬೇಕಾದ ತೃಪ್ತ ಭಾವನೆ. ‘ಪಾಲಿಗೆ ಬಂದದ್ದು ಪಂಚಾಮೃತ’ ಎಂಬಂತೆ ತನಗೆ ಸಿಕ್ಕಿದಷ್ಟು ಪಡೆದು, ತೃಪ್ತಿಯಿಂದ ಜೀವನ ಸಾಗಿಸುವುದು. ಎಲ್ಲಾ ಜನರು ಒಂದೇ ರೀತಿ ಇರುವುದಿಲ್ಲ. ಬೇರೆ ಬೇರೆ ಜನರ ಜೀವನ ರೀತಿ ಬೇರೆ ಬೇರೆ ಇರುತ್ತದೆ .ಆದುದರಿಂದ ತನ್ನನ್ನು ಇನ್ನೊಬ್ಬರೊಂದಿಗೆ ಹೋಲಿಸಿ ಕೀಳರಿಮೆಯಿಂದ ಶಾಂತಿ ನೆಮ್ಮದಿಯನ್ನು ಕಳೆದುಕೊಂಡರೆ ಬದುಕಲ್ಲಿ ಸಂತೃಪ್ತಿಯನ್ನು ಕಾಣಲು ಸಾಧ್ಯವಾಗದು. ಮನುಷ್ಯರು ಎಂದ ಮೇಲೆ ಒಬ್ಬರ ತರಹ ಇನ್ನೊಬ್ಬರು ಇರುವುದಿಲ್ಲ. ಕೆಲವರು ಯಾವಾಗಲೂ ಸಂತೋಷವಾಗಿರುತ್ತಾರೆ. ಇನ್ನು ಕೆಲವರು ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತಾರೆ. ಮತ್ತು ಕೆಲವರು ಹಿಂದೆ ನಡೆದ ಯಾವುದೋ ಕಹಿ ಘಟನೆಯನ್ನು ಮೆಲುಕು ಹಾಕುತ್ತಾ ಕೊರಗುತ್ತಿರುತ್ತಾರೆ. ಆದರೆ ಇರುವಷ್ಟು ದಿನ ನೆಮ್ಮದಿಯಾಗಿ ಬದುಕಬೇಕು ಎಂದರೆ  ಬದುಕಿನಲ್ಲೇ ಸಂತೋಷವನ್ನು ಕಾಣಬೇಕು. ಜೀವನದಲ್ಲಿ ಸಂತೋಷಕ್ಕೆ ಸಂತೃಪ್ತಿಯೇ ಮುಖ್ಯ ಎಂದು ನಾವು ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿಯು ಎಷ್ಟೇ ಸಂಪತ್ತನ್ನು ಹೊಂದಿದ್ದರೂ, ಅವನು ತೃಪ್ತನಾಗದ ಹೊರತು, ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ.ಮನುಷ್ಯ ಜೀವನದಲ್ಲಿ ಸಂತೃಪ್ತಿಯನ್ನು ಕಾಣಬೇಕಾದರೆ ತನ್ನ ಆಸೆಗಳಿಗೆ ಕಡಿವಾಳ ಹಾಕಲೇಬೇಕು “ಆಸೆಯೇ ದುಃಖಕ್ಕೆ ಮೂಲ”ವೆಂದು ಗೌತಮ ಬುದ್ಧ ತಿಳಿಸಿದಂತೆ,ಅತಿ ಆಸೆಯಿಂದ ಮಾನವ ಇತರರನ್ನು ನೋಡಿ, ತಾನು ಅವರಂತೆ ಆಗಬೇಕು ಎಂದು ಏನೇನೋ  ಮಾಡಲು ಸಾಗಿ, ಇರುವ ಸುಖ, ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಪ್ರತಿಯೊಬ್ಬನೂ  ಬೇರೆಯವರ ಸುಖವನ್ನೇ ಅಳೆಯುವುದು ಜಾಸ್ತಿ.ಸ್ವಾರ್ಥ ಮನೋಭಾವದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬದುಕುವ ಕನಸಲ್ಲಿ, ಇರುವ ಸುಖವನ್ನು ನಿರ್ಲಕ್ಷಿಸಿ, ಅತೃಪ್ತಿಯ ಬಾಳು ಸಾಗಿಸುವುದಕ್ಕಿಂತ ನಮಗಿಂತಲೂ ಕಷ್ಟದಲ್ಲಿರುವವರನ್ನು ಕಂಡು “ನಾವೇ ಅವರಿಗಿಂತ ಸುಖಿಗಳು “ಎನ್ನುವ ಭಾವನೆ ತಾಳುವುದೇ ಸಂತೃಪ್ತಿ.ಸಂತೃಪ್ತಿಯೆ ಬದುಕಿನ ಸಂಪತ್ತು. ಬದುಕಿನಲ್ಲಿ  ಸಂತೃಪ್ತಿ ಇದ್ದಾಗ ,ಸಕಾರಾತ್ಮಕ ದೃಷ್ಟಿಕೋನದಿಂದ ಶಾಂತಿ, ಸಹನೆ ,ನೆಮ್ಮದಿ, ತಾಳ್ಮೆ ಮುಂತಾದಂತಹ ಗುಣಗಳು ಬೆಳೆದು ಬದುಕಿನ ಸಂಪತ್ತಾಗಿ ವಿಜೃಂಭಿಸುತ್ತದೆ ಯಮರಾಜ ಯುಧಿಷ್ಠಿರನಿಗೆ ಅದ್ಭುತವಾದ ಪ್ರಶ್ನೆಗಳನ್ನು ಕೇಳಿದಂತಹ ಸಂದರ್ಭದಲ್ಲಿ ರಾಜನು ಅವುಗಳಿಗೆ ಸೂಕ್ತವಾದ ಉತ್ತರವನ್ನು ನೀಡುತ್ತಾನೆ ಎಂಬುವುದನ್ನು ನಾವು ಓದಿದ್ದೇವೆ.ಅದೇ ಅವನು ಕೇಳಿದ ಪ್ರಶ್ನೆಗಳಲ್ಲೊಂದು“ಶ್ರೇಷ್ಠ ಸಂತೋಷ ಯಾವುದು?”. ಯುಧಿಷ್ಠಿರ  ಅದಕ್ಕೆ ಕೊಟ್ಟ ಶ್ರೇಷ್ಠವಾದ ಉತ್ತರ “ತೃಪ್ತಿಯಿಂದ ಪಡೆದ ಸಂತೋಷವೇ ಶ್ರೇಷ್ಠ ಸಂತೋಷ”. ಆದ್ದರಿಂದ ತೃಪ್ತಿಯು ಯಾವುದೇ ಸಮಯದಲ್ಲಿ ಹೊಂದಬಹುದಾದ ಶ್ರೇಷ್ಠ ಸಂಪತ್ತು. ಒಳ್ಳೆಯ ಗುಣವನ್ನು ಅಭಿವೃದ್ಧಿಪಡಿಸುವ ಮೂಲಕ,ಉತ್ಸಾಹ ಮತ್ತು ಅಜ್ಞಾನದ ಗುಣಗಳನ್ನು ನಿಗ್ರಹಿಸುವ ಮೂಲಕ  ತೃಪ್ತರಾಗಿರುತ್ತೇವೆ.ಸಂತೃಪ್ತ ಜೀವನವು ಯಶಸ್ವಿ ಜೀವನವೆಂದರೆ ತಪ್ಪಾಗಲಾರದು ಜೀವನದ ಯಶಸ್ಸಿನ ಅಂಶವೆಂದರೆ ಸಂತೃಪ್ತಿ ಎಂದು ಹೇಳಬಹುದು. ನಮಗೆ ಜೀವನದಲ್ಲಿ ಸಂತೃಪ್ತಿ ಇಲ್ಲದಿದ್ದರೆ, ನಮಗೆ ಯಾವುದೇ ಗೆಲುವಿನ ಸಂತಸ ಸಿಗಲಾರದು. ನಮ್ಮಲ್ಲಿ ಹಣವಿರಬಹುದು, ಆಸ್ತಿಗಳಿರಬಹುದು,ಆದರೆ ಆಂತರಿಕ ತೃಪ್ತಿ ಇಲ್ಲ ಎಂದಾದಲ್ಲಿ. ಅದು ಸಂತಸದ ಯಶಸ್ವಿ ಜೀವನವಲ್ಲ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಕವಿಗಳು ಹೇಳುತ್ತಾರೆ. ಮನುಷ್ಯನಿಗೆ ಇಂದು ಎಷ್ಟೇ ಸುಖ. ಸಮೃದ್ಧಿ, ಸಂಪತ್ತು ಇದ್ದರೂ ಬದುಕಿನಲ್ಲಿ ಸಂತೃಪ್ತಿ ಇಲ್ಲವಾಗಿದೆ. ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ನಮಗೆ ಸಂತೃಪ್ತಿಯೇ ಬದುಕಿನ ದೊಡ್ಡ ಸಂಪತ್ತು ಎಂಬುದು ಒಪ್ಪಿಕೊಂಡು,ಅದನ್ನು ಪಡೆಯುವುದು ಕಷ್ಟವಾದರೂ  ಇಷ್ಟಪಟ್ಟು ಜೀವನದಲ್ಲಿ ಸಂತೃಪ್ತಿಯನ್ನು ಗಳಿಸಬೇಕಾಗುತ್ತದೆ.ಸಂತೃಪ್ತಿಯಿಂದಲೇ ನಾವು ಜೀವನದಲ್ಲಿ ಎದುರಿಸಬೇಕಾದ ಅನೇಕ ಸಮಸ್ಯೆಗಳಿಗೆ ಮುಕ್ತಿಯನ್ನು ಹಾಡಬಹುದು, ಸಂತೃಪ್ತಿ ಇದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು. ಆದುದರಿಂದ ಸಂತೃಪ್ತಿಯೇ ದೊಡ್ಡ ಸಂಪತ್ತು. ಸಂತೃಪ್ತಿ ಅನ್ನೋದು ಬದುಕಿನಲ್ಲಿ ಇರಬೇಕಾದ ಮೂಲಭೂತವಾದ ಅಂಶವಾಗಿದೆ. ಸಂತೃಪ್ತಿಯೇ ಯಶಸ್ವಿ ಬದುಕಿನ ಮೂಲ ಆಧಾರಸ್ತಂಭವೆಂದೇ ಹೇಳಬಹುದು. ಈ ಭೂಮಿಯ ಮೇಲಿನ ಬದುಕೆಂಬ ನಾಲ್ಕು ದಿನದ ಬಾಳು ಅದು ಗೋಳಾಗದೆ ಇರಬೇಕಾದರೆ ಬದುಕಿನಲ್ಲಿ ಸಂತೃಪ್ತಿಯನ್ನು ಕಾಣುವಂತಹ ಮನಸ್ಸು ನಮ್ಮದಾಗಬೇಕು. ಸಂತೃಪ್ತಿಯನ್ನೇ ನಮ್ಮ ಬದುಕಿನ ದೊಡ್ಡ ಸಂಪತ್ತನ್ನಾಗಿಸಬೇಕು. ಬದುಕಿನ ದಿನಗಳನ್ನು ಚಿಂತೆ, ದುಃಖ, ನಿರಾಸೆಯಿಂದ ಅತೃಪ್ತರಾಗಿ ಕಳೆಯದೆ ಶಾಂತಿ ಸಮಾಧಾನದಿಂದತೃಪ್ತ ಜೀವನ ನಡೆಸುವುದು ನಮ್ಮೆಲ್ಲರ ಕೈಯಲ್ಲಿದೆ ಅಲ್ಲವೇ? ಡಾ.ಸುಮತಿ ಪಿ

“ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” ವಿಶೇಷ ಲೇಖನ ಡಾ. ಸುಮತಿ ಪಿ. Read Post »

ಕಾವ್ಯಯಾನ

ಸಂಧ್ಯಾ ರಾಯ್ಕರ ಅವರ ಕವಿತೆ, “ಯುದ್ದ ಬೇಕೇಕೆ”

ಕಾವ್ಯ ಸಂಗಾತಿ ಸಂಧ್ಯಾ ರಾಯ್ಕರ “ಯುದ್ದ ಬೇಕೇಕೆ” ಮನುಜ… ಎಚ್ಚೆತ್ತುಕೋ ವಿನಾಶದತ್ತ ಸಾಗುವ ಮುನ್ನ …ಎಲ್ಲೋ ಹಚ್ಚಿದ ಬೆಂಕಿಯ ಕಾವು ನಿನ್ನ ಸುಡುವ ಮುನ್ನ…ಅದೆಷ್ಟೋ ಜೀವಗಳು ಹೆಣವಾದವು ಕಾಲ ಕಸದಂತೆ…. ತಮ್ಮವರ ಕಳೆದುಕೊಂಡು ಅನಾಥರಾದರು ,ಜೀವ ಇದ್ದು ಇಲ್ಲದಂತೆ…ಸಾಮ್ರಾಜ್ಯ ಕಟ್ಟುವ ನಿನ್ನಾಸೆಗೆ ಮನುಜ ಕುಲದ ವಿನಾಶವೇ…… ಅಲೆಕ್ಸಾಂಡರ್ ನ ಕೊನೆಯ ಸಂದೇಶ ಮರೆತೆಯ …ವಿಶ್ವವನೇ ಗೆದ್ದರೂ ಹೋಗುವೆ  ನೀ ಬರಿ ಕೈಯಲ್ಲಿ…ಸುಧಾರಿಸಿಕೋ …ಬೆಂದು ಹೋಗದಿರು ನೀನು ಈ ತೈಲದ  ಕೂಪದಲ್ಲಿ…….ಇಂದಿರುವವನು ನಾಳೆ ಇಲ್ಲ ಎಂಬಂತಿರುವಾಗ ಯುದ್ಧದ ರಣ ಕಹಳೆಯ ಅನಿವಾರ್ಯತೆ ಏಕೆ…… ..ನಾಲ್ಕು ದಿನದ ಈ ಬದುಕಿನಲ್ಲಿ ಪ್ರೀತಿಯ ಗೋಡೆಯನೇ ಕಟ್ಟಬಾರದೇ…..

ಸಂಧ್ಯಾ ರಾಯ್ಕರ ಅವರ ಕವಿತೆ, “ಯುದ್ದ ಬೇಕೇಕೆ” Read Post »

ನಿಮ್ಮೊಂದಿಗೆ

ಧಾರಾವಾಹಿ ಸಂಗಾತಿ-16 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆ ಕಟ್ಟೆ ಜ್ವಾಲೆಯೊಡಲಿನ ಕ್ರೋಧಜ್ವಾಲೆಯದು ಎನಗೆ ಶಾಪವನುಣಿಸಿತು              ಜ್ವಾಲೆಯೊಡಲಿನ ಕ್ರೋಧಜ್ವಾಲೆಯದು ಎನಗೆ ಶಾಪವನುಣಿಸಿತು ಜ್ವಾಲೆಯನ್ನು ನಿರಾಸೆಗೊಳಿಸಿತು ಕಲಹಕ್ಕೊಪ್ಪದ ಉನ್ಮುಖನ ಮಾತು. ಉನ್ಮುಖ ಯುದ್ಧೋನ್ಮುಖನಾಗಲಿಲ್ಲ. ಹರಿಭಕ್ತಮುಖದವನಾಗಿ ಶಾಂತಭಾವದಿ ಕುಳಿತ. ಶ್ರೀಕೃಷ್ಣನ ಸಹಾಯವನ್ನು ಪಡೆದು ಬಂದಿರುವ ನನ್ನ ಜೊತೆ ಯುದ್ಧವನ್ನು ಮಾಡುವ ಮನಸ್ಸಿರಲಿಲ್ಲ ಅವನಿಗೆ. ಜ್ವಾಲೆಯ ರೀತಿಯದು ಹಿಂದಣ ತ್ರೇತಾಯುಗದ ಶೂರ್ಪನಖಿಯ ನೆನಪನ್ನು ಮೂಡಿಸಿತು ಅವನಿಗೆ. ತನಗೊಲಿಯದೆ ಮೂಗು ಕೊಯ್ದವರ ಮೇಲಿನ ಸೇಡಿಗೆ ರಾಮ ರಾವಣ ಸಂಘರ್ಷವನ್ನು ತಂದಿತ್ತ ಶೂರ್ಪನಖಿಯಂತೆಯೇ ತನ್ನಕ್ಕನ ಕಲಹಪ್ರಿಯವಾದ ನಡೆಯಿದೆ ಎನಿಸಿತು ಅವನಿಗೆ. ಆ ಮಾತನ್ನೇ ಕಟುವಾಗಿ ಆಡಿ ಅವಳನ್ನು ಬೈದು ಅಲ್ಲಿಂದ ಕಳುಹಿಸಿಕೊಟ್ಟ. ಅಕ್ಕನ ರೋಷದ ನೆಪದಲ್ಲಿ ನನ್ನನ್ನು ಎದುರುಹಾಕಿಕೊಳ್ಳುವ ಮನಮಾಡಿ ಅಪಾಯಕ್ಕೆ ಮನೆಮಾಡಿಕೊಡುವ ಆಸಕ್ತಿಯಿರಲಿಲ್ಲ ಉನ್ಮುಖನಿಗೆ.       ತಮ್ಮನಿಂದಲೂ ತಿರಸ್ಕೃತಳಾದ ಜ್ವಾಲೆ ಪಯಣವನ್ನು ಬೆಳೆಸುತ್ತಾ ಹೋದವಳು ಗಂಗಾತೀರವನ್ನು ಸೇರಿದಳು. ಪಾಪ ಪರಿಹಾರ ಪುಣ್ಯಜಲದಂತೆ ಹರಿಹರಿಯುತ್ತಿದ್ದ ಗಂಗೆಯನ್ನು ಕಂಡಳು. ಅಮರನದಿಯದು ಜ್ವಾಲೆಯಲ್ಲಿ ಅಮರಭಾವವನ್ನು ಬಿತ್ತಬೇಕಿತ್ತು. ಆದರೆ ಮೊಳಕೆಯೊಡೆದದ್ದು ಅಸುರಭಾವ. ಕೆಲವರ ವರ್ತನೆ ಹಾಗೆಯೇ. ದಿವ್ಯವಾದದ್ದನ್ನು ದರ್ಶಿಸಿದಾಗಲೂ ದುಷ್ಟಭಾವವೇ ಅವರಲ್ಲಿ ಚಿಗುರೊಡೆಯುತ್ತದೆ. ಆ ಬಗೆಯಲ್ಲಿ ಅವರ ಮನೋಭೂಮಿಕೆ ಸಿದ್ಧಗೊಂಡಿರುತ್ತದೆ. ಗಂಗೆಯನ್ನು ಬಳಸಿಕೊಂಡು ತನ್ನಂತರಂಗದ ಮಾತ್ಸರ್ಯಕ್ಕೊಂದು ಗಮ್ಯವನ್ನು ಕಾಣಿಸುವ ಕುಯೋಚನೆ ಮೂಡಿತು ಜ್ವಾಲೆಯಲ್ಲಿ.       ದೋಣಿ ನಡೆಸುವವರೊಂದಷ್ಟು ಜನ ಗಂಗಾತಟದಲ್ಲಿಯೇ ಕುಳಿತಿದ್ದರು. ಅವರನ್ನು ನೋಡುತ್ತಾ ಜ್ವಾಲೆ “ಗಂಗಾನದಿಯ ಒಂದು ಬಿಂದೂ ನನ್ನ ದೇಹವನ್ನು ಸೋಂಕದಂತೆ ನನ್ನನ್ನು ಈ ದಡದಿಂದ ಆ ದಡದೆಡೆಗೆ ಒಯ್ಯುವವರು ಯಾರಾದರೂ ಇರುವಿರಾ?” ಎಂದಳು.      ಅಂಬಿಗರಿಗೆ ಅಚ್ಚರಿಯಾಯಿತು. ಹನಿ ಹನಿ ಗಂಗಾಜಲವದು ಪರಮ ಪಾವನ ಪುಣ್ಯ ಪವಿತ್ರ ಎಂದು ನಂಬುವ ಅನೇಕಾನೇಕ ಜನರನ್ನವರು ಕಂಡಿದ್ದರು. ಗಂಗೆಯ ನೀರದು ಮೈಯ್ಯನ್ನು ಸ್ಪರ್ಶಿಸಿದರೆ ಘನಮಲಿನವೆಂಬ ಬಗೆಯಲ್ಲಿ ಮಾತನ್ನು ಆಡಿದವರಿರಲಿಲ್ಲ; ವರ್ತಿಸಿದವರಿರಲಿಲ್ಲ. ಜ್ವಾಲೆಯ ರೀತಿಯದು ಹೊಸದೆನಿಸಿತು ಅವರಿಗೆ. “ಬಂದದ್ದಾವ ಉದ್ದೇಶದಿಂದ? ಗಂಗಾಜಲವನ್ನು ಮುಟ್ಟಬಾರದು ಎಂದೆನಲು ಕಾರಣವೇನು?” ಎಂದು ವಿಸ್ಮಯ ಭಾವದಲ್ಲಿ ಕೇಳಿದರು.      ತನ್ನ ಪಾಡಿಗೆ ಹರಿಯುತಿರುವ ಗಂಗೆಗೆ ಕೌತುಕ ಹುಟ್ಟುವಂತೆ ಆ ಜ್ವಾಲೆ “ಗಂಗೆಗೆ ಒಂದು ದೋಷವಿದೆ. ಅದೇನೆಂದು ನಿಮಗೆ ಹೇಳಲಾರೆ. ಆ ಗಂಗೆಯೇ ನನ್ನೆದುರು ಮೈದೋರಲಿ. ಹೇಳುತ್ತೇನೆ” ಎಂದಳು.     ಅಪವಾದದ ಅಪನುಡಿಯದು ಅಂಜಿಸಿತು ಅಮರನದಿಯನ್ನು. ತನಗಿರುವ ದೋಷ ಅದಾವುದು ಎನ್ನುವುದನ್ನು ತಿಳಿಯುವ ಕುತೂಹಲಿಯಾದಳು ಗಂಗೆ. ತಕ್ಷಣವೇ ಪ್ರತ್ಯಕ್ಷಳಾದಳು. “ಇನ್ನೊಬ್ಬರ ದೋಷಗಳನ್ನೂ, ಪಾಪಗಳನ್ನೂ ದೂರ ಮಾಡುವವಳೆಂದು ವೇದಶಾಸ್ತçಗಳು ಗುರುತಿಸಿವೆ ನನ್ನನ್ನು. ಸೋಂಕಬಾರದು ಎನ್ನನ್ನು ಎಂದು ದೂಷಿಸುತ್ತಿರುವವಳು ನೀನು. ಇದಕ್ಕೆ ಕಾರಣವೇನು?” ಎಂದು ಆಶ್ಚರ್ಯದಿಂದ ಕೇಳಿದಳು ಜ್ವಾಲೆಯಲ್ಲಿ.      ಮೋಡಿಯ ಮಾತುಗಳನ್ನಾಡಿದಳು ಜ್ವಾಲೆ. “ನಾನೇನೂ ನಿನ್ನನ್ನು ಬೈದದ್ದಲ್ಲ. ಲೋಕರೂಢಿಯ ಮಾತನ್ನು ಹೇಳಿದ್ದೇನೆ ಅಷ್ಟೇ. ಮಕ್ಕಳಿಲ್ಲದ ಬಂಜೆಯನ್ನು ದೋಷವಿರುವವಳು ಎಂದು ಗುರುತಿಸುವ ಕ್ರಮವುಂಟು ಈ ಲೋಕದೊಳಗೆ” ಎಂದಳು.      ಗಂಗೆಗೆ ಈ ಮೊದಲಿಗಿಂತಲೂ ಹೆಚ್ಚಿನ ಅಚ್ಚರಿಯಾಯಿತು. ಕೋಪ ಬಂತು. “ಇಚ್ಛಾಮರಣಿಯೆಂದು ಹೆಸರು ಪಡೆದು, ತ್ರೆöÊಲೋಕ ವೀರನೆಂದು ಖ್ಯಾತಿ ಗಳಿಸಿದ ಭೀಷ್ಮ ನನ್ನ ಮಗನಾಗಿರುವಾಗ ನನ್ನನ್ನು ಮಕ್ಕಳಿಲ್ಲದವಳೆಂದು ಹಂಗಿಸುವುದು ಸರಿಯಲ್ಲ” ಎಂದು ಜ್ವಾಲೆಯನ್ನು ಬೈದಳು.      ವಾಸ್ತವವಾಗಿ ಜ್ವಾಲೆಗೆ ಬೇಕಿದ್ದುದೂ ಅದೇ, ಗಂಗೆಯ ಮನವನ್ನು ಕೆರಳಿಸುವುದು. ಭೀಷ್ಮ ಗಂಗಾಸುತನೆನ್ನುವುದು ಜ್ವಾಲೆಗೆ ತಿಳಿಯದ ಸಂಗತಿಯೇನಲ್ಲ. ಎಂಟು ಮಕ್ಕಳನ್ನು ಪಡೆದ ಗಂಗೆ ಕೊನೆಯದಾಗಿ ಭೀಷ್ಮನನ್ನು ಮಾತ್ರ ಉಳಿಸಿಕೊಂಡ ಬಗೆ ಜ್ವಾಲೆಗೆ ಗೊತ್ತಿತ್ತು. ಬಿಂದು ಬಿಂದುಗಳನ್ನು ಒಂದೊಂದಾಗಿ ಕ್ರಮಿಸುತ್ತಾ ಜ್ವಾಲೆ ಸಾಗಿಬಂದದ್ದು ಈ ಘನಸಿಂಧುವಿನೆಡೆಗೆ, ಭೀಷ್ಮ ಮರಣವನ್ನು ತಿಳಿಸುವ ಅಂತಿಮ ಗಳಿಗೆಯ ಕಡೆಗೆ. “ಹೌದು! ನಿನ್ನ ಸುತ ಭೀಷ್ಮ ಎನ್ನುವುದು ಗೊತ್ತಿದೆ. ಅವನು ವೀರ ಎನ್ನುವ ಅರಿವೂ ಇದೆ. ಅವನು ಇನ್ನೂ ಹೆಚ್ಚಿನ ಔನ್ನತ್ಯವನ್ನು ಗಳಿಸುತ್ತಿದ್ದನೋ ಏನೋ! ಆದರೆ ಆ ಅರ್ಜುನ ಕುರುಕ್ಷೇತ್ರ ಕದನದಲ್ಲಿ ನಿನ್ನ ತನುಜನನ್ನು ಕೊಂದುಹಾಕಿದ. ಹೀಗಿರುವಾಗ ನೀನು ಮಕ್ಕಳಿಲ್ಲದವಳು ಎಂದೇ ಕರೆಸಿಕೊಳ್ಳಬೇಕಾಗುತ್ತದೆ” ಎಂಬ ನುಡಿಸಿಡಿಲು ಸಿಡಿಯಿತು ಜ್ವಾಲೆಯೊಳಗಿಂದ.      ಒಣಗಿದ ಮರಕ್ಕೆ ಬಿದ್ದ ಕಿಚ್ಚು ಹಸಿಹಸಿಯಾದ ಗಿಡವನ್ನೂ ಸುಟ್ಟುಹಾಕುವಂತೆ, ಈಗಾಗಲೇ ನನ್ನ ಮೇಲಿನ ಮುನಿಸಿನಿಂದ ಉರಿಯುತ್ತಿದ್ದ ಜ್ವಾಲೆಯ ಅಂತರಂಗದ ಕಿಚ್ಚು ಗಂಗೆಯ ಮನವನ್ನೂ ಸುಟ್ಟಿತು. ಮಗ ಭೀಷ್ಮ ಅಳಿದನೆಂಬ ಸುದ್ದಿಯನ್ನು ತಾಳಿಕೊಳ್ಳುವುದಕ್ಕಾಗಲಿಲ್ಲ ಅವಳಿಗೆ. ಭೀಷ್ಮ ಮರಣಕ್ಕೆ ಕಾರಣನೆನಿಸಿದ ನನ್ನ ಮೇಲೆ ಕ್ರೋಧ ಉಕ್ಕಿಬಂತು. “ನನ್ನ ಮಗನನ್ನು ಯುದ್ಧದಲ್ಲಿ ಕೊಂದ ಆ ಅರ್ಜುನನ ತಲೆಯನ್ನು ಅವನ ಮಗನೇ ಇನ್ನು ಆರು ತಿಂಗಳುಗಳಲ್ಲಿ ಯುದ್ಧದಲ್ಲಿ ಕೊಚ್ಚಿ ಕೆಡಹಲಿ” ಎಂದು ಶಾಪ ಕೊಟ್ಟು, ಮತ್ತೆ ಮೊದಲಿನ ಸ್ಥಿತಿಯನ್ನು ಪಡೆದಳು.      ಜ್ವಾಲೆಯ ಕ್ರೋಧಜ್ವಾಲೆಯಿಂದಾಗಿ ನಾನು ಗಂಗೆಯ ಶಾಪಕ್ಕೆ ತುತ್ತಾದೆ. ಅಲ್ಲಿಗೇ ಜ್ವಾಲೆಯ ದ್ವೇಷವದು ತಣಿಯಲಿಲ್ಲ. ನನ್ನನ್ನು ಕೊಲ್ಲುವ ಹರಿತವಾದ ಬಾಣವಾಗುತ್ತೇನೆ ಎಂದು ಬಯಸಿದವಳು ಅಲ್ಲಿಯೇ ಗಂಗೆಯ ತೀರದಲ್ಲಿ ಅಗ್ನಿಪ್ರವೇಶ ಮಾಡಿದಳು. ಮಣಿಪುರದ ಅರಸನಾಗಿದ್ದ ಬಭ್ರುವಾಹನನ ಬತ್ತಳಿಕೆಯಲ್ಲಿನ ಹರಿತ ಬಾಣವಾದಳು.      ಗಂಗೆ ನನಗಿತ್ತ ಶಾಪವದು ಅಶ್ವಮೇಧ ಯಾಗದ ಪೂರ್ಣತೆಗೆ ಸಂಚಕಾರವನ್ನೊಡ್ಡುವ ಘನಶಾಪವಾಗಿತ್ತು. ಶಾಪ ನಿಜವಾಗುವ ಗಳಿಗೆಯನ್ನು ಅದೆಂತು ಮೀರುವೆನೋ! ನನಗೆ ತಿಳಿದಿರಲಿಲ್ಲ.                                          ಡಾ. ವಿಶ್ವನಾಥ ಎನ್ ನೇರಳಕಟ್ಟೆ         

Read Post »

ಕಾವ್ಯಯಾನ

ದಿವ್ಯ ಎಂ ಅವರ ಕವಿತೆ  “ಒಡೆದ ಕನ್ನಡಿಯೊಳಗಿನ ಮಾತು”

ಕಾವ್ಯ ಸಂಗಾತಿ ದಿವ್ಯ ಎಂ “ಒಡೆದ ಕನ್ನಡಿಯೊಳಗಿನ ಮಾತು” ತಪ್ಪು ನನ್ನದ ಅಥವಾ ನಿನ್ನದಾಇಲ್ಲಿ ನನಗೆ ಉತ್ತರವೇ ಸಿಗಲಿಲ್ಲ !ಹೋದವನು ನೀನಾ ಅಥವಾ ಕಳಿಸಿದವಳು ನಾನಾ..!ಇಲ್ಲಿ ನನಗೆ ಸ್ಪಷ್ಟತೆಯೇ ಸಿಗಲಿಲ್ಲ ! ಬಹುಶಃ ಮತ್ತಾರು ನನ್ನನ್ನುನಿನ್ನಷ್ಟು ಅರ್ಥಮಾಡಿಕೊಳ್ಳಲಾರರುಹಾಗೆ  ಮತ್ಯಾರು ನಿನ್ನನ್ನುನನ್ನಷ್ಟು ಪ್ರೇಮಿಸಲಾರರು..! ಅಳಲಾರದಷ್ಟು ನಗಿಸಿದವನೇಮತ್ತೆಂದೂ ನಗಲಾರದಂತೆ ಅಳಿಸಿಬಿಟ್ಟಅಂಗಲಾಚಿ ಬೇಡಿದೆಕೊನೆಗೆ ಅಸಹಾಯಕತೆಯ ನೋಟದಲ್ಲಿ ನಿನ್ನತ್ತ ತಿರುಗಿದೆ..! ಆದರೆ ನೀನುಅರಿವಿಗೆ ಬಾರದ ಜಾಣನಂತೆ ಮತ್ಯಾರಿಗೋ ಪ್ರೇಮಧಾರೆ ಎರೆಯುತ್ತಾ ಮತ್ಯಾರದೋ ಕೈ ಹಿಡಿದು ನಡೆಯುತ್ತಾ ಸಾಗಿಬಿಟ್ಟೆ..! ನಿನಗೆ ನನ್ನಿಂದ ದೂರವಾಗುವ ಇರಾದೆಯೊಂದು ನಿನ್ನೆದೆಯಲ್ಲಿ ಇದಿದ್ದೆ ಆದರೆನಾವು ಬೇರೇನಾದರೂ ದಾರಿಯೊಂದನ್ನು ಹುಡುಕಬಹುದಿತ್ತೇನೋನಮ್ಮನ್ನು ನಾವು ಉಳಿಸಿಕೊಳ್ಳಬಹುದಿತ್ತೇನೋ,ಬೇರಾಗಿ ನಡೆಯಬೇಕಿರೋ ಈ ಕವಲುದಾರಿಗಳ ಬದಲಾಗಿಏಳು ಬೀಳುಗಳೊಂದಿಗೆಒಬ್ಬರನ್ನೊಬ್ಬರು ಕೈ ಹಿಡಿದು ಸಾಗುವ ಗೆಳೆಯರಾಗಬಹುದಿತ್ತುಕಡೆ ತನಕ ನಮ್ಮನ್ನು ನಾವು ಉಳಿಸಿಕೊಳ್ಳಬಹುದಿತ್ತುಯಾವುದಾದರೂ ಒಂದುಮನುಷ್ಯತ್ವದ ರೂಪದಲ್ಲಿ..! ಆದರೂ ಕಾಲ ಮಿಂಚಿ ಹೋಗಿದೆಪ್ರತಿ ಹನಿಯೂ ಕಣ್ಣಿನಿಂದ ಜಾರುವಾಗ ಸುಮ್ಮನೆ ಯೋಚಿಸುತ್ತೇನೆ!ನನ್ನ ನೆನಪುಗಳು ಸಹ ಕಾಡಬಹುದೇ ನಿನ್ನನ್ನು?ನಿನ್ನ ನೆನಪುಗಳು ನನ್ನನ್ನು ಕಾಡುವಷ್ಟೇ ಕಠೋರವಾಗಿ?ಅನ್ನ ನೀರು ನಿದ್ರೆಗಳ ತೊರೆಸಿ, ಹಗಲು ಇರುಳುಗಳ ವ್ಯತ್ಯಾಸವಿರದಂತೆನಿನ್ನ ನೆನಪುಗಳು ನನ್ನನ್ನು ಆವರಿಸಿರುವಷ್ಟೇ ಕ್ರೂರವಾಗಿ ?ಕಾಡಬಹುದೇ ನಿನ್ನನ್ನು ಆ ನನ್ನ ನೆನಪುಗಳು ? ಬಹುಶಃ ನನ್ನ ತಿಳಿಯಾದ ಪ್ರೇಮನಿನ್ನೆದೆಯಲ್ಲಿ ಆಳವಾದ ನೆನಪುಗಳನ್ನು ನೆಟ್ಟಿರಲಿಕ್ಕಿಲ್ಲಆದರೆ ನನ್ನ ಪಾಡು ಹಾಗಿಲ್ಲ ನೋಡು.! ಈ ಅತಿಯಾದ ಪ್ರೇಮ ನನ್ನೊಳಗೊಂದು ಆಲದಮರವನ್ನೇ ಬಿತ್ತಿ ನೀರೆರೆದಿದೆಅಲ್ಲಿ ಮತ್ಯಾರದೋ ಅಪ್ಪುಗೆಯೊಂದರಲ್ಲಿ ನೀನು ಬೆಚ್ಚಗಿರಬಹುದುಆದರೆ ನಿತ್ಯ ನನಗಿಲ್ಲಿ ನಿನ್ನ ನೆನಪುಗಳದ್ದೇ ಧ್ಯಾನ ! ಬಿಡುವಾದರೆನೀನೊಮ್ಮೆ ಇಲ್ಲಿ ಬಂದು ನೋಡಬಾರದೇಕೆ?ನನ್ನನೊಮ್ಮೆ ಚುಂಬಿಸಿ ಚಿವುಟಬಾರದೇಕೆ?ನನ್ನನೊಮ್ಮೆ ಆಲಂಗಿಸಿ ಪೂರ್ತಿಯಾಗಿ ಅಳಿಸಬಾರದೇಕೆ?ನನ್ನನೊಮ್ಮೆ ಸುತ್ತಿಸಿ ಸಂತೈಸಬಾರದೇಕೆ?ಮತ್ತೆಂದೂ ಕಾಡದಂತೆಈ ನೋವನು ಕೊನೆಯಾಗಿಸಬಾರದೇಕೆ?ನಿನ್ನೆಲ್ಲಾ ನೆನಪುಗಳನ್ನು ನೀನೇ ಹೊತ್ತಿ ಹೋಗಬಾರದೇಕೆ ?ಬಿಡಿಸಲಾಗದ ಒಗಟಿನ ಪ್ರಶ್ನೆಗಳು ಬಿಡು..! ನಿನ್ನನ್ನು ಪ್ರೇಮಿಸುವುದನ್ನಷ್ಟೇ ಕಲಿತ ನಾನುದ್ವೇಷಿಸುವುದನ್ನು,ದೂಷಿಸುವುದನ್ನೂಕೊನೆ ಪಕ್ಷ ಮರೆಯುವುದನ್ನು ಕೂಡ ಕಲಿಯಲಾಗಲೇ ಇಲ್ಲ..! ಹೋಗಲಿ ನಿನ್ನ ತೊರೆಯುವುದನ್ನಾದರೂ ಕಲಿಯಬೇಕಿತ್ತು ಎಂದುಕೊಂಡೆ..!ನಿನ್ನ ಪ್ರೇಮ ಪಂಜರದಲ್ಲಿರೆಕ್ಕೆ ಮುರಿದುಕೊಂಡುವೇದನೆಯಲ್ಲಿ ನರಳುತ್ತಿರುವಹಕ್ಕಿಯಂತಾದ ನನಗೆನಿನ್ನ ನೆನಪುಗಳ ಗರಿ ಬಿಚ್ಚದೆಹಾರುವ ಬಲವೊಂದುಈ ಕ್ಷಣಕ್ಕೂನನ್ನೊಳಗೆ ಮೊಳೆಯಲಿಲ್ಲವೆಂಬುದೇಬದುಕಿನ ಒಂದು ದುರಂತ..!  ದಿವ್ಯ ಎಂ

ದಿವ್ಯ ಎಂ ಅವರ ಕವಿತೆ  “ಒಡೆದ ಕನ್ನಡಿಯೊಳಗಿನ ಮಾತು” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ “ಕೆಂಪು ಕಾಶ್ಮೀರ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಕೆಂಪು ಕಾಶ್ಮೀರ” ಹಿಮಾಲಯ ಮಡಿಲಲ್ಲಿಸ್ವರ್ಗ ಮಲಗಿತ್ತು,ಬೆಳ್ಳಿಯ ಹಿಮದ ಹಾಸಿಗೆಯಲ್ಲಿಮೌನ ಮುತ್ತು ಹೊಳೆಯಿತು. ದಾಲ್ ಸರೋವರಸ್ಫಟಿಕ ಕಣ್ಣಾಗಿ,ಆಕಾಶ ತನ್ನ ಮುಖ ನೋಡಿತು;ಶಿಕಾರಾಗಳ ಕನಸು ತೇಲಿತುನೀರಿನ ಎದೆ ಮೇಲೆ, ಮೃದುವಾಗಿ. ಗುಲ್ಮಾರ್ಗ್ ಹಿಮಮಕ್ಕಳ ನಗುವಿನಂತೆ,ಪಹಲ್ಗಾಮ್ ಹುಲ್ಲುತಾಯಿಯ ಮಡಿಲಂತೆ,ಚಿನ್ನಾರ್ ಎಲೆಗಳುಕಾಲದ ಬಣ್ಣ ಹೊತ್ತವು. ಒಂದು ಕ್ಷಣದಲ್ಲಿಸ್ವರ್ಗ ನಡುಗಿತು,ಗುಂಡಿನ ಶಬ್ದಪರ್ವತ ಹೃದಯ ತೂರಿತು,ಹಿಮದ ಬಿಳುಪುರಕ್ತದ ಕೆಂಪು ಕುಡಿದುನೀರಾಗಿ ಹರಿಯಿತು. ಹೂವಲ್ಲ, ಟುಲಿಪ್ ಅಲ್ಲ,ನೆಲ ಮೇಲೆ ಬಿದ್ದಮಾನವ ಉಸಿರಿನ ಗುರುತು. ಪ್ರವಾಸದ ನಗುಮರಣದ ಅಳುವಾಯಿತು,ಗಾಳಿ ಮಾತು ನಿಶ್ಶಬ್ದವಾಗಿ ಕರಗಿತು,ಹೃದಯದ ನೋವುಹಿಮದಲ್ಲಿ ಮಿಶ್ರಿತ. ಕಾಡು ಮೌನವಾಗಿ ತಿಳಿದುಕೊಂಡಿತು,ರಕ್ತದ ಪ್ರತಿಜ್ಞೆಮಣ್ಣಿಗೆ ನೆನೆಸಿತು;ಹೆಜ್ಜೆಗಳ ಶಬ್ದ ಮೌನದಲ್ಲಿ ಹಾರಿತು,ಹೃದಯದ ನೋವು ನದಿಯಲ್ಲಿ ಹರಿಯಿತು. ನದಿಗಳು ಹರಿಯುತ್ತಿವೆ,ಆದರೆ ಹಾಡುತ್ತಿಲ್ಲ,ಹಿಮದ ಶ್ವೇತದಲ್ಲಿ ಕೆಂಪು ನೀರು ಹರಿದು,ಮರುಳು ಹೊಳೆಯುತ್ತದೆ,ನೋವು ಕುಸಿದು,ಆಕ್ರಂದನ ತೇಲಿ. ಕಾಶ್ಮೀರಾ,ನೀನು ಸುಂದರ,ಆದರೆ ನಿನ್ನ ಸೌಂದರ್ಯಸಾವು ನೆರಳಿನಿಂದ ಮಿಶ್ರಿತ. ನಿಲ್ಲಲಿ ಉಗ್ರವಾದ,ಗುಂಡಿಗೆ ಜಾಗ ಬೇಡ;ಹಿಮ ಮತ್ತೆ ಬಿಳಿಯಾಗಲಿ,ನದಿಗಳು ಹಾಡಾಗಲಿ,ಹೃದಯಗಳಲ್ಲಿ ಮರಳಿಮಾನವೀಯತೆ ಆರಾಧನೆಯಾಗಲಿ. ಕೆಂಪು ಅಧ್ಯಾಯಕಣ್ಣೀರಾಗಿ ಒಣಗಿ,ಮಾನವೀಯತೆಇಲ್ಲಿ ಮತ್ತೆಸ್ವರ್ಗವಾಗಲಿ. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ “ಕೆಂಪು ಕಾಶ್ಮೀರ” Read Post »

ಇತರೆ

“ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು”ವೀಣಾ ಹೇಮಂತ್ ಗೌಡ ಪಾಟೀಲ್

ಮಹಿಳಾ ಸಂಗಾತಿ “ವೀಣಾ ಹೇಮಂತ್ ಗೌಡ ಪಾಟೀಲ್ “ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು ಹೆಣ್ಣಿಗೆ ಎಲ್ಲರೂ ಪರಿಚಿತರು ಆದರೆ ಆಕೆಯ ಪರಿಚಯ ಯಾರಿಗೆ ಇದೆ ಅಂತ ಕೇಳಿದರೆ ಬಹುಶಹ ಒಬ್ಬೊಬ್ಬರು ಒಂದೊಂದು ರೀತಿ ಆಕೆಯ ಪರಿಚಯವನ್ನು ಮಾಡಿಕೊಡಬಹುದು. ಸಾಮಾನ್ಯವಾಗಿ ಹೆಣ್ಣು ಎಂದರೆ ತಾಯಿ, ಸಹೋದರಿ, ಪತ್ನಿ, ಮಗಳು ಈ ನಾಲ್ಕು ಹೆಣ್ಣು ಮಕ್ಕಳ ಜೊತೆಗಿನ ನಮ್ಮ ಸಂಬಂಧಗಳು. ಈ ಸಂಬಂಧದ ಹೊರತಾಗಿ ಆಕೆ ಓರ್ವ ಸ್ನೇಹಿತೆಯೂ ಆಗಬಹುದು. ಒಂದು ಹಂತದವರೆಗೆ ಆಕೆಯೊಂದಿಗೆ ನಮ್ಮ ಮನ ಬಿಚ್ಚಿ ನಾವು ಮಾತನಾಡಲು ಸಾಧ್ಯವಾಗುತ್ತದೆ. ಅವರವರು ಕಂಡುಕೊಂಡಂತೆ ಹೆಣ್ಣನ್ನು ಎಲ್ಲರೂ ವರ್ಣಿಸುತ್ತಾರೆ ಹೊರತು ಆಕೆಯ ನಿಜವಾದ ಅಸಲಿಯತ್ತು ಯಾರಿಗೂ ಗೊತ್ತಿಲ್ಲ… ಕೆಲವರಿಗೆ ಹೆಣ್ಣು ಮಾಯೆಯಾದರೆ ಮತ್ತೆ ಕೆಲವರಿಗೆ ಆಕೆ ಮೋಹಿನಿ ಮತ್ತೆ ಕೆಲವರಿಗೆ ಆಕೆ ದೇವತಾ ಸ್ವರೂಪಿಣಿ ಮತ್ತೆ ಕೆಲವರಿಗೆ ಆಕೆ ಜಾರಿಣಿಯು ಆಗಬಹುದು, ಇನ್ನು ಕೆಲವರಿಗೆ ಆಕೆಯ ರಕ್ಕಸಿಯು ಆಗಬಹುದು…. ಅವರವರ ಭಾವಕ್ಕೆ ತಕ್ಕಂತೆ ಅವರು ಹೆಣ್ಣಿನ ಕುರಿತು ಮಾತನಾಡುತ್ತಾರೆಯೇ ಹೊರತು ಖುದ್ದು ಆಕೆ ಯಾರೆಂದು ಅವರಿಗೆ ಗೊತ್ತಿರುವುದಿಲ್ಲ.ಆಕೆ ಯಾರ ಅಂಕೆಗೂ ನಿಲುಕುದ ಸೀಮಾತೀತಳು. ಯಾವ ಉಪಮೆಗೆ ನಿಲುಕದ ಉಪಮಾತೀತಳು.ಹೆಣ್ಣು ಮೌನದಲ್ಲೇ ಸಾವಿರ ಮಾತುಗಳನ್ನು ಹೊತ್ತು ನಡೆಯುವ ಛಾತಿಯುಳ್ಳವಳು.ತನ್ನ ಕರ್ತವ್ಯಕ್ಕೆ ಬದ್ಧಳಾಗಿ ತನ್ನನ್ನು ನಂಬಿದವರನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪೊರೆಯುವವಳು. ಯಾರಿಗೂ ಕೇಡನ್ನು ಬಯಸದ ಆಕೆ ಜನರು ತನ್ನನ್ನು ಕೈಬಿಟ್ಟರೂ ದೇವರು ತನ್ನೊಂದಿಗೆ ಇದ್ದಾನೆ ಎಂಬ ನಂಬಿಕೆಯ ಬಲದಿಂದಲೇ ಬದುಕನ್ನು ನಡೆಸುತ್ತಾಳೆ. ಆಕೆಯ ಪ್ರಕಾರ ಬದುಕು ಪ್ರದರ್ಶನವಲ್ಲ ಅದೊಂದು ಪ್ರಯಾಣ… ಈ ಪ್ರಯಾಣದಲ್ಲಿ ಹೆತ್ತವರು, ಶಿಕ್ಷಕರು ಸಂಗಾತಿ ಮಕ್ಕಳು ಎಲ್ಲವೂ ಆಯಾ ಸಮಯಕ್ಕೆ ಆಕೆಯ ಜೊತೆಗೆ ಸಾಗುತ್ತದೆ ಇದೊಂದು ರೀತಿಯಲ್ಲಿ ಬದುಕಿನ ಪ್ರತಿಯೊಂದು ಕ್ಷಣವನ್ನು ಉಸಿರಾಡುವ ಆನಂದಿಸುವ ಪ್ರಭುದ್ಧತೆಯ ಹಾದಿಯಲ್ಲಿ ಸಾಗಿ ಹೋಗುವ ಪಯಣ. ಇನ್ನೂ ಹೇಳಬೇಕೆಂದರೆ ಆಕೆ ಜೀವನದ ಅರ್ಥ ಏನು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ ಬದಲಾಗಿ ತನ್ನ ಮನದ ಆಳದ ಕತ್ತಲೆಯನ್ನು ಆಕೆ ತಳ್ಳಿ ಹಾಕದೆ ಮರೆ ಮಾಡದೆ ಆ ಕತ್ತಲೆಯ ಒಳಗಿರುವ ಬೆಳಕಿನತ್ತ ಮುಖ ಮಾಡುತ್ತಾಳೆ.ಆಕೆಗೆ ಗೊತ್ತು ಆಕೆ ನಡೆಯುತ್ತಿರುವ ಹಾದಿಯಲ್ಲಿ ಆತ್ಮ ವಿಶ್ವಾಸ ಹಾಗೂ ನಿಶಬ್ದ ಶಕ್ತಿ ಮಾತ್ರ ಆಕೆಯೊಂದಿಗೆ ಇರುತ್ತದೆ ಎಂದು. ಆಕೆ ಪ್ರತಿಭಟನೆಯನ್ನು ಒಂದು ಪಾಠವಾಗಿ ಸ್ವೀಕರಿಸುತ್ತಾಳೆ ಪ್ರತಿ ತಪ್ಪು ಹೆಜ್ಜೆಯನ್ನು ಅನುಭವದ ಬೆಳಕಾಗಿ ಮಾರ್ಪಡಿಸಿಕೊಳ್ಳುತ್ತಾಳೆ. ತನ್ನ ಅಂತರಾಳದಲ್ಲಿ ಮತ್ತಷ್ಟು ದೃಢವಾಗಿ ರೂಪುಗೊಳ್ಳುತ್ತಾಳೆ.ಮನೆಯ ಪ್ರತಿಯೊಬ್ಬರ ಆಗುಹೋಗುಗಳನ್ನು ಅನುಸರಿಸಿ ಅದಕ್ಕೆ ತಕ್ಕಂತೆ ತನ್ನ ಬದುಕನ್ನು ರೂಪಿಸಿಕೊಳ್ಳುವ ಆಕೆ ಒಂದೊಮ್ಮೆ ನಿಜವಾಗಿಯೂ ತನ್ನದೇ ಆದ ಬದುಕನ್ನು ನಡೆಸಬೇಕು ಎಂದು ಇಚ್ಛಿಸಿದರೆ ಖಂಡಿತವಾಗಿಯೂ ಈ ಜೀವ ಜಗತ್ತಿನ ಉಳಿದ ಜೀವಿಗಳು ತಲ್ಲಣಗೊಳ್ಳುತ್ತವೆ ಕಾರಣ ಎಲ್ಲರ ಜೀವನದ ದೈನಂದಿನ ಚಟುವಟಿಕೆಗಳ ಕೇಂದ್ರ ಬಿಂದು ಆಕೆಯೇ. ಇವರೆಲ್ಲರ ಚಟುವಟಿಕೆಗಳಿಗೆ ಪೂರಕವಾಗಿ ತನ್ನ ಇಡೀ ಬದುಕನ್ನು ಮುಡಿಪಾಗಿರುವ ಆಕೆಯ ಪಾಲಿಗೆ ಬದುಕು ಎಂದರೆ ಗಮ್ಯ ಸ್ಥಾನಕ್ಕೆ ಓಡುವ ಓಟವಲ್ಲ ಬದಲಾಗಿ ತಾನಿಡುವ ಪ್ರತಿ ಹೆಜ್ಜೆಯಲ್ಲೂ ಅರ್ಥವನ್ನು ಕಂಡುಕೊಳ್ಳುವ ಪಯಣ. ಆಕೆಯ ಅನುಭವಗಳೇ ಆಕೆಯನ್ನು ಇಂದಿನ ವ್ಯಕ್ತಿಯಾಗಿ ರೂಪಿಸುತ್ತದೆ.ಒಂದೊಮ್ಮೆ ಆಕೆಯನ್ನು ದುರ್ಬಲಗೊಳಿಸಿದ ಘಟನೆಗಳು ಇಂದು ಆಕೆಯನ್ನು ಗಟ್ಟಿಗೊಳಿಸಿರುತ್ತವೆ. ಪ್ರತಿ ಘಟನೆಗೂ ಒಂದು ಅರ್ಥವಿದೆ ಎಂಬ ನಂಬಿಕೆಯಿಂದ ಬದುಕುವ ಆಕೆ ಜೀವನದ ನಿಜವಾದ ಗೆಲುವು ಇತರರನ್ನು ಮೀರಿಸುವುದಲ್ಲ ಬದಲಾಗಿ ತನ್ನ ಅಂತರಂಗದ ಕತ್ತಲೆಯನ್ನು ಹೊಡೆದೋಡಿಸುವುದು ಎಂಬ ಅರಿವನ್ನುಹೊಂದಿರುತ್ತಾಳೆ ಅಂತೆಯೇ ಆಕೆ ಎಲ್ಲರನ್ನು ಕ್ಷಮಿಸಬಲ್ಲಳು ಕೂಡ. ಬದುಕಿನ ಪಯಣದಲ್ಲಿ ವಯೋ ಸಹಜವಾಗಿ ಕೆಲವೊಮ್ಮೆ ಆಕೆಯ ನಡಿಗೆ ನಿಧಾನವಾಗಬಹುದು… ಆದರೆ ನಂಬಿಕೆ ಆಕೆಯನ್ನು ಮುನ್ನಡೆಸುತ್ತದೆ.ಇಷ್ಟೆಲ್ಲ ಇದ್ದರೂ ಕೂಡ ಒಮ್ಮೊಮ್ಮೆ ಹೆಣ್ಣು ಮಕ್ಕಳು ಮಾನಸಿಕವಾಗಿ ನೊಂದು ಬೇಯುತ್ತಾರೆ. ಅಸ್ತಿತ್ವ ರಹಿತತೆಯನ್ನು ಅನುಭವಿಸುತ್ತಾರೆ. ಕಳೆದು ಹೋದವರಂತೆ ಭಾವಿಸುತ್ತಾರೆ. ಬದುಕಿನಲ್ಲಿ ಏನನ್ನು ಸಾಧಿಸಲು ಸಾಧ್ಯ ವಾಗಲಿಲ್ಲ ಎಂಬ ಭಾವದಿಂದ ಹತಾಶೆಯನ್ನು ಹೊಂದುತ್ತಾರೆ.ಅಂತಹ ಹೆಣ್ಣು ಮಕ್ಕಳಿಗೆ ಒಂದು ಕಿವಿಮಾತುಕನ್ನಡಿಯ ಮುಂದೆ ನಿಂತು ತನ್ನ ಬಿಂಬವನ್ನೇ ಪರಿಭಾವಿಸುವುದರಿಂದ ಆತ್ಮ ಸಾಕ್ಷಾತ್ಕಾರ ಇಲ್ಲವೇ ಸ್ವಂತಿಕೆ ಒದಗಿ ಬರುವುದಿಲ್ಲ. ನಾನು ಎಲ್ಲವನ್ನು ಪಡೆದುಕೊಂಡಿದ್ದೇನೆ ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ ಹಾಗೆ ಪಡೆದುಕೊಂಡವರು ಅದನ್ನು ವಿವರಿಸಲು ಕೂಡ ಸಾಧ್ಯವಿಲ್ಲ ಎಲ್ಲವೂ ಅವರವರ ದೃಷ್ಟಿಕೋನದ ಮೇಲೆ ನಿರ್ಧಾರವಾಗಿರುತ್ತದೆ ….ಆದರೆ ಶಿಕ್ಷಣ ಮತ್ತು ಸಮಾಜದ ಕೆಲಸಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.ಹೆಂಗಸರು ತಮ್ಮಲ್ಲಿರುವ ಸಾಮರ್ಥ್ಯವನ್ನು ಬಳಸಲು ಮುಂದಾಗದಿದ್ದರೆ ತಮ್ಮ ಮಾನವೀಯ ನೆಲೆಗಳನ್ನು ಕಳೆದುಕೊಳ್ಳುತ್ತಾರೆ.ಪ್ರಸ್ತುತ ಬದುಕಿನಲ್ಲಿ ಹೆಣ್ಣು ಮಕ್ಕಳಿಗೆ ಗೊತ್ತು ಗುರಿಗಳಿಲ್ಲ ಆಸೆ ಆಕಾಂಕ್ಷೆಗಳಿಲ್ಲ ನಾಳೆಗಾಗಿ ಹಂಬಲಿಸುವುದಿಲ್ಲ ತನ್ನ ದೇಹ ಸಮರ್ಥವಾಗಿರುವ ಹೊತ್ತಿನಲ್ಲಿಯೇ ಏನನ್ನಾದರೂ ಸಾಧಿಸಬೇಕು ಎಂಬ ಛಲವಿಲ್ಲ ಇದೊಂದು ರೀತಿಯ ಆತ್ಮಹತ್ಯೆಯೇ ಸರಿ. ಮಕ್ಕಳನ್ನು ಹೆತ್ತು, ಹೊತ್ತು ಅವರನ್ನು ಶಾಲೆಗೆ ಕಳುಹಿಸಿದ ಹೊತ್ತಿನಲ್ಲಿ ಸುಮ್ಮನೆ ಕುಳಿತುಕೊಂಡ ಹೆಣ್ಣು ಮಕ್ಕಳು ತಮಗೆ ತಾವೇ ಮಿತಿಗಳನ್ನು ಹಾಕಿಕೊಂಡು ತಮ್ಮ ಅನನ್ಯ ಸಾಮರ್ಥ್ಯಗಳ ಅರಿವನ್ನು ಕಳೆದುಕೊಂಡು ಬಿಡುತ್ತಾರೆ.ಕೇವಲ ಎರಡು ದಶಕಗಳ ಹಿಂದೆ ಗೃಹಿಣಿಯರನ್ನು ಸಂದರ್ಶಿಸಿದ ಮಾಧ್ಯಮ ಒಂದು ಹೆಂಗಸಾಗಿ ಕೆಲಸ ಮಾಡುವಾಗನೀವು ಏನೆಲ್ಲಾ ತಳಮಳವನ್ನು ಎದುರಿಸಿದಿರಿ? ನಿಮ್ಮ ಹಿಂದಿನ ಬದುಕಿನಲ್ಲಿ ಮುಖ್ಯ ಸಂತೃಪ್ತಿ ಮತ್ತು ಮುಖ್ಯ ತಳಮಳ ಯಾವುದು?ನಿಮ್ಮೊಳಗೆ ನೀವು ಹೇಗೆ ಬದಲಾಗಿದ್ದೀರಿ ವಯಸ್ಸಾಗುವುದನ್ನು ನೀವು ಹೀಗೆ ಗ್ರಹಿಸುತ್ತಿದ್ದೀರಿ ಹಾಗೂ ಇದಕ್ಕಿಂತ ಭಿನ್ನವಾಗಿ ಬೇರೇನು ಮಾಡಬೇಕೆಂಬ ಆಸೆ ನಿಮ್ಮಲ್ಲಿತ್ತು ಎಂಬ ಪ್ರಶ್ನೆಗಳನ್ನು ಕೇಳಿದಾಗ ಅವರ ನಿಜ ಸಮಸ್ಯೆಗಳಿಗೆ ಶಿಕ್ಷಣ ಕಾರಣವಲ್ಲ ಎಂಬುದು ಸ್ಪಷ್ಟವಾಯಿತು ಅವರೆಲ್ಲರೂ ಶಿಕ್ಷಣವನ್ನು ತಾವು ಗಂಭೀರವಾಗಿ ಪರಿಗಣಿಸಲಿಲ್ಲ ಹಾಗೂ ಅದನ್ನು ಬಳಸಲು ತಕ್ಕ ಯೋಜನೆ ಮಾಡಿಕೊಳ್ಳಲಿಲ್ಲ ಎಂದು ಬೇಸರದಿಂದ ನುಡಿದಿದ್ದರು.ಮದುವೆಯಾದವರಲ್ಲಿ ಬೆರಳೆಣಿಕೆಯ ಜನರು ವಿಚ್ಛೇದಿತರಾಗಿದ್ದರೂ ಮತ್ತೆ ಶೇಕಡ ೯0 ಜನ ಮಕ್ಕಳಿಗೆ ತಾಯಿಯಾಗಿದ್ದರು ಮತ್ತೆ ಕೆಲವರು ತಮಗೂ ಗೃಹಿಣಿ ಎಂದು ಹೇಳಿಕೊಳ್ಳಲು ಸಂತಸವೇನು ಇಲ್ಲ ಎಂಬ ಭಾವವನ್ನು ಹೊಂದಿದ್ದರು.ಇನ್ನೂ ಕೆಲವರಿಗೆ ತಾವು ಪಡೆದ ಶಿಕ್ಷಣ ತಮ್ಮೊಳಗಿನ ತಳಮಳಕ್ಕೆ ಕಾರಣ ಎಂದು ಅರಿವಾಗಿತ್ತು. ತಮಗೆ ಶಿಕ್ಷಣ ಒದಗಿಸಿದ್ದ ಸ್ವಾಯತ್ತತೆ, ಗುರಿ, ಮೌಲ್ಯ ಹಾಗೂ ಬದ್ಧತೆಗಳನ್ನು ತಾವು ಬಳಸಿಕೊಂಡಿಲ್ಲ ಎಂಬುದು ಅವರ ಬೇಸರಕ್ಕೆ ಕಾರಣವಾಗಿತ್ತು.ಮತ್ತೆ ಕೆಲವರು ಸಮುದಾಯದ ಮಿತಿಯಲ್ಲಿ ತಮ್ಮ ಶೈಕ್ಷಣಿಕ ಅರ್ಹತೆಯನ್ನು ಬಳಸುವ ಮೂಲಕ ತಮ್ಮ ಸ್ವಂತಿಕೆಯನ್ನು ಪುನರ್ನವೀಕರಿಸಿಕೊಂಡು ತಮ್ಮ ಬದುಕಿನಲ್ಲಿ ಹೊಸತನವನ್ನು ಕಂಡುಕೊಂಡರು.ಮುಂದೆ ಕೆಲವು ವರ್ಷಗಳ ನಂತರ ಅವರನ್ನು ಈ ಕುರಿತು ಮತ್ತೊಮ್ಮೆ ಪ್ರಶ್ನೆಸಿದಾಗ ಕೆಲವರ ಮನಸ್ಸಿನಲ್ಲಿ ಗೃಹಿಣಣಿಯರಾಗಿದ್ದ ಕಾರಣ ಕಹಿ ಭಾವನೆ ಇಲ್ಲವೇ ನಿರಾಸೆ ಮತ್ತು ಹತಾಶೆಗಳು ಮನೆ ಮಾಡಿದ್ದವು.ಮತ್ತೆ ಕೆಲವರು ಉದ್ಯೋಗ ಮತ್ತು ತಾಯ್ತನಗಳನ್ನು ಒಗ್ಗೂಡಿಸಿಕೊಂಡಿದ್ದರೆ ಚೆನ್ನಾಗಿತ್ತು ಎಂದು ಹೇಳಿದರು .ಇನ್ನೂ ಕೆಲವರು ನಾನ್ಯಾರು ಎಂಬುದೇ ನನಗೆ ಇನ್ನೂ ಅರ್ಥವಾಗಿಲ್ಲ ನನ್ನದೇ ಆದ ಸೃಜನಶೀಲ ಜೀವನವನ್ನು ಕಟ್ಟಲು ತಕ್ಕ ಯೋಚನೆ ಮಾಡಬೇಕಿತ್ತು ಎಂದು ಈಗ ಅನಿಸುತ್ತಿದೆ ಎಂದು ಬೇಸರ ಪಟ್ಟುಕೊಂಡರು.ಜೀವನಪೂರ್ತಿ ಅವರಿವರ ಕೆಲಸಗಳನ್ನು ಮಾಡುತ್ತಾ ತಮ್ಮನ್ನು ತಾವು ಕಡೆಗಣಿಸಿದ ಪರಿಣಾಮವಾಗಿ ಮಾನಸಿಕವಾಗಿ ಕುಸಿದು ಹೋಗುತ್ತಾ, ಕೀಳರಿಮೆಯಿಂದ ಬಳಲುತ್ತಾ ಹೆಣ್ಣುತನ ಎಂಬ ಕಣ್ಕಟ್ಟಿನಿಂದ ತಮ್ಮಂತಹ ಹೆಣ್ಣು ಮಕ್ಕಳು ಬದುಕಿನ ಕುರಿತು ನೂರೆಂಟು ತೊಂದರೆಗಳನ್ನು, ನೋವುಗಳನ್ನು, ನಕಾರಾತ್ಮಕ ಭಾವಗಳನ್ನು ವ್ಯಕ್ತ ಪಡಿಸುತ್ತಾರೆ. ಗಂಡ ಮನೆ ಮತ್ತು ಮಕ್ಕಳಿಗೆ ಮಾಡಿ ಮಾಡಿ ನಾನು ನನ್ನ ಬದುಕನ್ನೇ ಸವೆಸಿದೆ ಎಂದು ಹೇಳುತ್ತಾರೆ ಮಾಡಿದ ಮನೆ ಕೆಲಸಗಳನ್ನೇ ಮತ್ತೆ ಮತ್ತೆ ಮಾಡುತ್ತಾ ಇನ್ನಷ್ಟು ಮತ್ತಷ್ಟು ಉಜ್ಜುತ್ತಾ ಕಾಲ ಕಳೆದಿರುತ್ತಾಳೆ.ಅದರ ಬದಲಾಗಿ ಮನೆವಾರ್ತೆಯೇ ತಮ್ಮ ಉದ್ಯೋಗ ಎಂದು ನಂಬುವುದನ್ನು ನಿಲ್ಲಿಸಿ ತಮ್ಮ ಮನೆ ವಾರ್ತೆಯ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಬೇಕು.. ಮನೆ ಮಕ್ಕಳು ಕುಟುಂಬದ ಹೊರತಾಗಿಯೂ ತಮಗೆ ಒಂದು ಬದುಕಿದೆ ಎಂಬ ಅರಿವನ್ನು ಮೂಡಿಸಿಕೊಂಡು ಹಾಡು ಹೊಲಿಗೆ ಹಸೆ, ಕಂಪ್ಯೂಟರ್ ಕಲಿಕೆ ಚಿತ್ರಕಲೆ ಸಂಗೀತ ಸೌಂದರ್ಯವರ್ಧನ ಚಿಕಿತ್ಸೆಗಳು ಹೀಗೆ ಹತ್ತು ಹಲವು ಕಲಿಕೆಗಳನ್ನು ತಮ್ಮದಾಗಿಸಿಕೊಳ್ಳಬೇಕು. ತಮ್ಮ ಬದುಕಿನಲ್ಲಿ ತಮಗಾಗಿ ತಾವೇ ಒಂದು ಸ್ಥಾನವನ್ನು ಕಲ್ಪಿಸಿಕೊಂಡು ಆ ಸ್ಥಾನದಲ್ಲಿ ಪಟ್ಟಾಗಿ ಕುಳಿತುಕೊಳ್ಳುವ ರೀತಿನಲ್ಲಿ ಕಾರ್ಯ ನಿರ್ವಹಿಸಿದ ಹೆಣ್ಣು ಮಕ್ಕಳು ಬದುಕಿನಲ್ಲಿ ಸಾಕಷ್ಟು ವಿಷಯಗಳಲ್ಲಿ ಸಾಧನೆ ಮಾಡಬಹುದು.ಪ್ರತಿ ಹೆಣ್ಣು ಮಗಳು ಕೂಡ ತಾನು ಕೇವಲ ಮಗಳು ಪತ್ನಿ ತಾಯಿ ಮಾತ್ರವಲ್ಲ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿರುವ ಓರ್ವ ಹೆಣ್ಣುಮಗಳು ಸಮಾಜ ರಚನೆಯ ಭಾಗ ತಾನು ಎಂದು ಅರಿತುಕೊಳ್ಳಬೇಕು.ಪ್ರಸ್ತುತ ವ್ಯವಸ್ಥೆಯು ಹೆಣ್ಣು ಮಕ್ಕಳಿಗೆ ಒಂದು ಹೊರೆ ಎಂಬಂತಾದರೆ ಅದರಿಂದ ಹೊರಬರಲು ಉದ್ಯೋಗವನ್ನು ಜೀವನ ಯೋಜನೆಯ ಭಾಗವಾಗಿಸಿಕೊಂಡು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಮತ್ತು ಮನೋರಂಜನೆಯ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಾತಂತ್ರ್ಯ, ಸಾಮರ್ಥ್ಯ ಮತ್ತು ಆತ್ಮಸ್ಥೈರ್ಯವನ್ನು ಪಡೆದುಕೊಳ್ಳಬಹುದು.ಕೆಲವು ಹೆಣ್ಣು ಮಕ್ಕಳು ಉದ್ಯೋಗಗಳನ್ನು ಪಡೆದುಕೊಂಡರೂ ಅದಕ್ಕೆ ತಕ್ಕ ಹೊಸ ಜೀವನಯೋಜನೆಯನ್ನು ರೂಪಿಸುವುದಿಲ್ಲ. ಉದ್ಯೋಗಗಳು ತಮ್ಮ ಭವಿಷ್ಯದ ಬಾಗಿಲನ್ನು ತೆರೆದು ತನ್ನ ಉದ್ಯೋಗದ ಗಳಿಗೆ ಕುಟುಂಬದ ವೆಚ್ಚಕ್ಕೆ ನೆರವಾದಾಗ ಮಾತ್ರ ತಾನು ದುಡಿದದ್ದು ಸಾರ್ಥಕ ಎಂಬುದು ಹೆಣ್ಣು ಮಕ್ಕಳ ಮನಸ್ಥಿತಿ. ಯಾವುದೇ ವೃತ್ತಿ ಬಯಸುವ ಬದ್ಧತೆಗೆ ಬೇಕಾದ ಶಿಸ್ತು ಮತ್ತು ಪ್ರಯತ್ನಗಳನ್ನು ನೀಡಬಯಸುವ ಹೆಣ್ಣು ಮಕ್ಕಳು ಹೆಣ್ಣುತನ ಎಂಬ ಕಣ್ಕಟ್ಟನ್ನು ದೂರವಿರಿಸಬೇಕು.. ಆ ಹೆಣ್ಣುತನ ಎಂಬ ಕಣ್ಕಟ್ಟು ಆಕೆಯಲ್ಲಿ ಭಯವನ್ನು ಬಿತ್ತಬಹುದು ಪೂರ್ವಾಗ್ರಹಗಳನ್ನು ಹೇರಬಹುದು ಆಕೆಯಲ್ಲಿ ಹಿಂಜರಿಕೆಯನ್ನು ಉಂಟುಮಾಡಬಹುದು ಧಾರ್ಮಿಕ ಸಾಂಪ್ರದಾಯಿಕತೆಯ ಮುಖವಾಡ ಧರಿಸಿ ಪ್ರತಿರೋಧಗಳನ್ನು ಒಡ್ಡಬಹುದು.ಸಂಪ್ರದಾಯಬದ್ಧರಲ್ಲದ ಹೆಣ್ಣು ಮಕ್ಕಳಿಗೂ ಕೂಡ ಮನೆ ಬಿಟ್ಟು ದುಡಿಯಲು ಹೋಗುವುದೆಂದರೆ, ಗಂಡ ಮಕ್ಕಳನ್ನು ಕಡೆಗಣಿಸಿದಂತೆ ಎಂಬ ಭಾವ ಇರುತ್ತದೆ. ಒಂದು ವೇಳೆ ಮಗುವಿಗೆ ಅನಾರೋಗ್ಯವಾದರೆ, ಗಂಡನಿಗೆ ಆತನದ್ದೆ ಆದ ಸಮಸ್ಯೆಗಳು ಎದುರಾದರೆ ಸಮುದಾಯದಲ್ಲಿ ಆಕೆ ಗಂಡನನ್ನು ಕಡೆಗಣಿಸಿದ್ದೇ ಇದಕ್ಕೆ ಕಾರಣ ಎಂಬ ಭಾವ ಮೂಡುವಂತೆ  ಮಾಡುವ ಈ ಕಣ್ಕಟ್ಟು ಆಕೆಯ ಬೆಳವಣಿಗೆಗೆ ಅಡ್ಡಿ ಆತಂಕವನ್ನು ಉಂಟುಮಾಡುತ್ತದೆ ಎಂಬ ಅರಿವನ್ನು ಹೊಂದಿದ್ದರು.ನಿಜ ಹೆಣ್ಣು ಮಕ್ಕಳು ಹೋರಾಡಲು ಕಲಿಯಬೇಕು ಹೆಂಗಸಿನಂತೆ ಅಲ್ಲ ಬದಲಾಗಿ ಓರ್ವ ಮನುಷ್ಯಳಂತೆ. ಹೆಂಗಸರು ಅಂತಿಮವಾಗಿ ತಾವೇ ತಾವಾಗಿದ್ದಾಗ ಏನಾಗಿರುತ್ತಾರೆ ಎಂಬುದನ್ನು ಯಾರು ಬಲ್ಲರು? ಪ್ರೀತಿಯ ಒತ್ತಾಸೆಯನ್ನು ಕಳೆದುಕೊಳ್ಳದೆ ಅವರ ಬುದ್ಧಿವಂತಿಕೆಯು ಪೋಷಣೆ ಪಡೆದಾಗ ಅದು ಏನೆಲ್ಲಾ ಸಾಧನೆಗಳನ್ನು ಮಾಡುತ್ತದೆ ಎಂಬುದನ್ನು ಅರಿತವರಾರು? ಹೆಣ್ಣು ಮಕ್ಕಳ ಬದುಕು ಬದಲಾಗುತ್ತಿದೆ ಆಕೆ ತನ್ನನ್ನು ತಾನು ಅರಿತಂತೆ ಆಕೆಯಲ್ಲಿನ ಸಾಮರ್ಥ್ಯ ಒತ್ತಾಸೆ ಪ್ರೀತಿಗಳು ವೃದ್ಧಿಗೊಳ್ಳುತ್ತಿವೆ. ಆಕೆ ತನ್ನನ್ನು ಪ್ರೀತಿಸಿದಷ್ಟೇ ಇತರರನ್ನು ಪ್ರೀತಿಸಲು ಸಾಧ್ಯವಾಗುತ್ತಿದೆ. ತನ್ನ ಕೆಲಸವನ್ನು ಹೆಂಗಸಾಗಿ ಆಕೆ ಅನುಭವಿಸುತ್ತಿದ್ದಂತೆಯೇ ಅದರ ಅನುಭವದ ಆಧಾರದ ಮೇಲೆ ಇತರರಿಗೆ ಮಾದರಿಯಾಗುತ್ತಿದ್ದಾಳೆ.ಏನಂತೀರಾ ಸ್ನೇಹಿತರೇ ವೀಣಾ ಹೇಮಂತ್ ಗೌಡ ಪಾಟೀಲ್

“ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು”ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ

“ಬಿಟ್ಟುಬಿಡಿ ಬದುಕಿಕೊಳ್ಳುತ್ತೇವೆ”ಮಹಿಳೆಯರ ಬಗ್ಗೆ ವಿಶೇಷ ಬರಹ, ಪ್ರೇಮಾ ಟಿ‌ ಎಂ ಆರ್

ಮಹಿಳಾ ಸಂಗಾತಿ ಪ್ರೇಮಾ ಟಿ ಎಂ ಆರ್ ಬಿಟ್ಟುಬಿಡಿ ಬದುಕಿಕೊಳ್ಳುತ್ತೇವೆ ಮಹಿಳಾ ದಿನಾಚರಣೆ ಹತ್ತಿರ ಬಂದಂತೆ ಎದೆ ಮಿಸುಗುತ್ತದೆ.. ಒಂದಷ್ಟು ಭಾಷಣ ಗಾಯನ ನರ್ತನ ಪಾರ್ಟಿಗಳಲ್ಲಿಯೇ  ಮುಗಿದು ಹೋಗುವ ದಿನವೇಕೋ ನೆಮ್ಮದಿ ಕೆಡಿಸುತ್ತದೆ. ಹೆಣ್ಣು ಸುಖವಾಗಿ ಬದುಕುತ್ತಿದ್ದಾಳೆ, ಯಂತ್ರಗಳ ಬಳಕೆಯಿಂದ ಅವಳ ಶ್ರಮ ಕಡಿಮೆಯಾಗಿದೆ, ಹಾಗೆ ಹೀಗೆ ಅಂತ ಉರುಹೊಡೆದ ಭಾಷಣ ಬಿಗಿವ ನಾವುಗಳು ನೋಡುವದು ನಮ್ಮ ಕಣ್ಣಳತೆಯಲ್ಲಿ ನಡೆವುದನ್ನಷ್ಟೇ .ನಿಜ ಅರ್ಬನ್  ಏರಿಯಾಗಳಲ್ಲಿ ಹೆಣ್ಣು ಆಜಾಶಕ್ಕೆ ಕೈಚಾಚಿ ಪೈಲಟ್ ಆಗಿ ಬಾಹ್ಯಾಕಾಶದಲ್ಲಿಯೂ ತನ್ನ ಕೌಶಲ್ಯ ಮೆರೆಯುವ ಮಟ್ಟಿಗೆ ಬೆಳೆದದ್ದು ಒಪ್ಪಿಕೊಳ್ಳಬೇಕಾದ ವಿಷಯವಾದರೂ, ಎಷ್ಟು ಪ್ರತಿಶತ ಎನ್ನುವದಿಲ್ಲಿ ಪ್ರಶ್ನೆ .ಇರಲಿಬಿಡಿ, ತೀರ ಹಿಂದುಳಿದ ಹಳ್ಳಿಗಳಲ್ಲಿ ಇಂದಿಗೂ ನೀ ಹೆಣ್ಣು ,ಇರುವಾಂಗೇ ಇರು, ಹೆಂಗಿರ್ಬೇಕೋ ಹಾಂಗೇ ಇರು ಎನ್ನುವ ಚೂಪು ಮೊನೆಯ ಮಾತುಗಳು ಅವಳೆದೆಯ ಚುಚ್ಚುವದು ಮಾಮೂಲು .ಹತ್ತು ದಾಟುವದೇ ತಡ ಎದೆಯ ಒಳ ಉಡುಪು ಬಿಗಿಗೊಳ್ಳತೊಡಗುತ್ತವೆ .ಬೆನ್ನು ಬಾಗಿಸಿ ಎದೆ ಹುದುಗಿಸಿ ನಡೆವಂತೆ ಮತ್ತೆ ಮತ್ತೆ ಕತ್ತಿ ಅಲುಗಿನ ಮಾತುಗಳನ್ನು ಎಳೆಕಂದಮ್ಮಗಳು ಸಹಿಸಬೇಕು .ಹೆಣ್ಣು ಬೆಳೆದಂತೆ ಅವಳು ಮನೆಯ ಮರ್ಯಾದೆಯಾಗಿ ಬದಲಾಗುವದು ವಿಪರ್ಯಾಸ . ಹೆಣ್ಣು ಕಂದಮ್ಮಗಳು ಲೈಂಗಿಕ ದೌರ್ಜನ್ಯಕ್ಕೆ, ಅತ್ಯಾಚಾರಕ್ಕೆ ಒಳಗಾದರೂ ಕೂಡ ಅದು ಸುದ್ದಿಯಾಗದಂತೆ ಹೆತ್ತವರೇ ಮುಖ ಮೈಮನಸ್ಸುಗಳ ಮೊಟಕಿ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುತ್ತಾರೆ. “ಮನೆ ಮರ್ಯಾದೆ ಕಳೆದೆಯಲ್ಲೇ ಯಾಕೆ ಹುಟ್ಟಿದೆ ನಮ್ಮ ಹೊಟ್ಟೆಯಲ್ಲಿ ” ಎಂದು ಯಾರದೋ ತಪ್ಪಿಗೆ ಅವಳ ಹುಟ್ಟನ್ನು ಹಳಿಯಲಾಗುತ್ತದೆ. ಒಳಗೊಳಗೇ ಹುದುಗಿ ಹೋಗುವ ಅಂಥ ಹೆಣ್ಣುಗಳ ಅಂತರಾತ್ಮದ ಗಾಯದ  ನೋವು  ಆಗದ ವೈರಿಗೂ ಬೇಡ. ಹತ್ತು ಕಳೆಯಿತೋ ಬಾಲ್ಯದ ಚೇಷ್ಟೆಗಳೆಲ್ಲ ಕಳೆದು ಹೆಣ್ಣು ಕಂದಮ್ಮಗಳು ಕಿರಿಕಿರಿ ಸಂಕೋಚ ವಿಸ್ಮಯ  ಆತಂಕದ ಜೊತೆಗೆ  ಒಳಹೊರಗೂ ವಿಲಕ್ಷಣ ಅನುಭವಗಳೊಂದಿಗೆ ತಮಗೆ ತಾವೇ ಅಪರಿಚಿತ ಲೋಕಕ್ಕೆ ಜಿಗಿದು ನಿಂತಂತೇ ಗಲಿಬಿಲಿಗೊಳ್ಳುವ ಹೊತ್ತು. ಎದೆ ಚಿಗುರತೊಡಗುತ್ತದೆ. ಮೊದಲಮುಟ್ಟು ಕಾಡಿದಷ್ಟು ಬೇರಾವುದೂ ಅವಳನ್ನು ಕಾಡಲಿಕ್ಕಿಲ್ಲ . ಇಂಥ ಹೊತ್ತಲ್ಲಿ ಹೆತ್ತವರ ಹಿತವಾದ ಆರೈಕೆ ಒಂದಷ್ಟು ಸಾಂತ್ವನ ತಿಳುವಳಿಕೆ ವಿಶ್ವಾಸವನ್ನು ತುಂಬುವದು ಅತ್ಯವಶ್ಯ . ಇಲ್ಲದಿದ್ದರೆ ತನ್ನದೇ ಮನೆಯಲ್ಲಿ ಅವಳು ಪರಿತ್ಯಕ್ತೆಯಾಗಿ ನಿಲ್ಲುತ್ತಾಳೆ.     ಜಗತ್ತಿನ ಬಹುತೇಕ ರಾಷ್ಟ್ರಗಳ ಹಳ್ಳಿಗಾಡುಗಳಲ್ಲಿ ಬದುಕುವ ಜನಾಂಗಗಳಲ್ಲಿ, ಕಾಮುಕರೆಂಬ ಕೆಟ್ಟ ಕ್ರಿಮಿಗಳು ಹುಟ್ಟಿಕೊಳ್ಳುವದಕ್ಕೆ, ಹೆಣ್ಣಿನ ಋತುಮತಿಯಾಗುವ ಕ್ರಿಯೆ ಹಾಗೂ ಬೆಳೆಯುವ ಎದೆಯೇ ಕಾರಣವೆಂದು ನಂಬಲಾಗುತ್ತದೆ . ದಕ್ಷಿಣ ಆಫ್ರಿಕಾದ ಕೆಮರೂನ್ ನಲ್ಲಿ, ಕಿಶೋರಿಯರ ಮುಟ್ಟು ಮುಚ್ಚಿಡುವದಕ್ಕಾಗಿಯೇ ಹೆಣ್ಣುಗಳು ಮೈನೆರೆವ ಮೊದಲು, ಅಥವಾ ಮೈನೆರೆದ ತಕ್ಷಣ ಬ್ರೀಸ್ಟ್ ಫ್ಲಾಟನಿಂಗ್ ಅಥವಾ ಬ್ರೀಸ್ಟ್ ಐರನಿಂಗ್ ಎನ್ನುವ ಅಸಾಧ್ಯ ನೋವು ಕೊಡುವ ಅಮಾನುಷ ಪದ್ಧತಿಯಿಂದ, ಅವರ ಚಿಗುರುವ ಎದೆಯನ್ನ ವಿರೂಪಗೊಳಿಸುವ ಪದ್ಧತಿಯೊಂದು ಇಂದಿಗೂ ಜಾರಿಯಲ್ಲಿದೆ ಅಂದರೆ ನೀವು ನಂಬಲೇಬೇಕು. ಯುನೈಟೆಡ್ ನೇಶನ್ಸ್ ಯಾವುದನ್ನು ಫೈವ್ ಫೊರಗೊಟನ್ ಕ್ರೈಮ್ಸ ಎಂದು ಕರೆಯುತ್ತದೆಯೋ ಅದರಲ್ಲಿಯೇ ಒಂದಾದ ಈ ಬ್ರೀಸ್ಟ ಐರನಿಂಗ್ ಗೆ ಪ್ರತಿ ನಾಲ್ಕರಲ್ಲಿ ಒಬ್ಬರಂತೆ ಅಲ್ಲಿ ಶಿಖಾರಿಗಳಾಗುತ್ತಿದ್ದಾರೆ. ಈ ಪದ್ಧತಿ ನಶಿಸುವದರ ಬದಲು ವೃದ್ಧಿಯಾಗುತ್ತಲೇ ಇದೆ. ಪುಟ್ಟಹೆಣ್ಣುಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದಮೇಲೆ ಈ ಕ್ರಿಯೆ ಅತ್ಯಂತ ಗಂಬೀರ ಪರಿಣಾಮವನ್ನು ಉಂಟುಮಾಡುತ್ತದೆ. ಒಬಿಯಾಮಾ ಮರ್ಸಿ ಎಂಬ ನೈಜೀರಿಯಾದ ಯುವ ವೈದೈ ಹೇಳುತ್ತಾಳೆ, “ಕೆಮರೂನ್ ನಲ್ಲಿ ಅದೆಷ್ಟೋ ಹುಡುಗಿಯರು ಈ ಎದೆ ಸಪಾಟು ಮಾಡುವ ಕ್ರಿಯೆಯ ಅಡ್ಡ ಪರಿಣಾಮಗಳಿಂದ ಬಳಲುತ್ತಿರುತ್ತಾರೆ . ಬರೀ ತಾತ್ಕಾಲಿಕವಾಗಲ್ಲ, ಕೆಲವೊಂದು ಪ್ರಕರಣಗಳಲ್ಲಿ  ಇದು ಶಾಶ್ವತವಾದ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಎಷ್ಟೋ ಹುಡುಗಿಯರ ಸ್ಥನಗಳು ಸಂಪೂರ್ಣ ನಾಶವಾಗಿ ಮುಂದೆ ಅವರು ಹುಟ್ಟುವ ಮಕ್ಕಳಿಗೆ ಎದೆಯೂಡಲಾಗದೇ ಹಳಹಳಿಸುತ್ತಾರೆ .ಎದೆಯ ಜೀವಕೋಶಗಳು ಸುಟ್ಟು ವಿಕಲತೆಯನ್ನುಂಟುಮಾಡುತ್ತದೆ. ಕೆಲವರು ಖಿನ್ನತೆಗೆ ಒಳಗಾದರೆ ಇನ್ನು ಕೆಲವರು ಶಾಶ್ವತವಾಗಿ ಮಾನಸಿಕ ರೋಗಿಗಳಾಗಿಯೇ ಇದ್ದುಹೋಗುತ್ತಾರೆ .ಇನ್ನು ಕೆಲವು ಸಂದರ್ಭಗಲ್ಲಿ ಎದೆ ಬಾತು ಕೊಳೆತುಹೋದ ಉದಾಹರಣೆಗಳಿಗೂ ಕೊರತೆಯಿಲ್ಲ.  ಎದೆ ಸಪಾಟುಮಾಡುವಾಗ ಪೈಪಿನಂಥ ಉದ್ದದ ಕಲ್ಲುಗಳನ್ನು ಕಾಯಿಸಿ ಹೆಣ್ಣುಗಳ ಸ್ಥನಗಳನ್ನು ಜಜ್ಜಲಾಗುತ್ತದೆ ಅಥವಾ ಮೆರೆಯಲಾಗುತ್ತದೆ. ಕೆಲವೊಮ್ಮೆ ಕಟ್ಟಿಗೆ ಅಥವಾ ಕಬ್ಬಿಣದ ತುಂಡುಗಳನ್ನು ಬೆಂಕಿಗಿಟ್ಟು ಅದರಿಂದ ಸುಡಲಾಗುತ್ತದೆ. ಕೆಲವೊಮ್ಮೆ ಬಿಸಿ ಕೆಂಡಗಳು ಸುಟ್ಟತೆಂಗಿನ ಚಿಪ್ಪು ಸುಟ್ಟ ಸಾಣೆಕಲ್ಲುಗಳನ್ನು ಬಳಸಲಾಗುತ್ತದೆ.” ಎಂದು   “ಅದರಿಂದ ಅನುಭವಿಸುವ ನೋವು ಅಸಾಧ್ಯ. ಮಾತಿಗೆ  ನಿಲುಕುವದಿಲ್ಲ ಆ ನೋವು. ಅದರ ಜೊತೆಗೆ ನಮ್ಮನ್ನು ನಾವು ನೋಡಿಕೊಂಡರೆ ನಮಗೇ ಹೇಸಿಗೆ ಹುಟ್ಟುವಂತಿರುತ್ತವೆ ನಮ್ಮೆದೆಗಳು” ಎಂದು ಕೆಮರೂನಿನ ಎದೆ ಸಪಾಟು ಮಾಡಿಸಿಕೊಂಡ ಎಳೆಯ ಹೆಣ್ಣುಮಕ್ಕಳು ಅತೀವ ಸಂಕಟದಿಂದ ನುಡಿಯುತ್ತಾರೆ .ಒಂದು ದು:ಖ್ಖದಾಯಕ ವಿಷಯವೆಂದರೆ ಸ್ವತಹ ಹೆತ್ತ ತಾಯಂದಿರೇ ತಮ್ಮ ಮಕ್ಕಳ ಎದೆ ಸಪಾಟು ಮಾಡುವ ಕ್ರಿಯೆಗೆ ಸಂಪೂರ್ಣ ಸಹಮತ ತೋರಿ, ಅವರೇ ಮುಂದೆನಿಂತು ಮಕ್ಕಳ ಎದೆಯನ್ನು ಸುಡಿಸಿ ಮೆರೆಯಿಸಿ ಜಜ್ಜಿಸಿ ಆವರೆದೆಗಳನ್ನು ನಾಶಪಡಿಸುತ್ತಾರೆ. ನ್ಯೂಲೆ ಬ್ಲೆಸ್ಸಿಂಗ್ ಎಂಬ ಕೆಮರೂನಿನ ತಾಯಿಯೊಬ್ಬಳು ಹೇಳುವದೇನು ಗೊತ್ತಾ? “ಹೌದು, ನಾನು ನನ್ನ ಮಗಳಿಗೆ ಅದನ್ನು ಮಾಡಿದೆ .ನನಗೆ ನನ್ನದೇ ಕಾರಣಗಳಿದ್ದವು. ನನ್ನ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಹಸಿಮಾಂಸದ ಥರ ನೋಡುತ್ತಾರೆ .ಅವಳೆದೆ ಒಂಚೂರು ಆಕಾರಗೊಳ್ಳುವದೇ ತಡ ಗಂಡಸರು ,ಪುಂಡ ಹುಡುಗರು ಹಸಿದ ತೋಳಗಳಂತೆ ಅವರ ಸುತ್ತ ಸುತ್ತುತ್ತಾರೆ. ಅವರನ್ನು ಹೊರಗೆ ಕಳಿಸುವದಕ್ಕೇ ಭಯವಾಗುತ್ತದೆ. ನನ್ನ ಮಗಳಿಗೆ ತಾನು ಓದಬೇಕು ವಿದ್ಯಾವಂತಳಾಗಬೇಕೆಂಬ ಆಸೆ. ಈಗವಳು ಭಯವಿಲ್ಲದೇ  ಅವಳ ಗುರಿ ಮುಟ್ಟಬಹುದು” ಎನ್ನುತ್ತ ತನ್ನ ಮಗಳ ಸಪಾಟಾದ ಎದೆಯನ್ನು ತೋರುತ್ತಾಳೆ. ಮತ್ತವಳು ಕಣ್ಣಲ್ಲಿ ನೀರು ತುಂಬಿಕೊಂಡು ನುಡಿಯುತ್ತಾಳೆ, “ಆದರೆ ಅದಕ್ಕಾಗಿ ನಾನು ನನ್ನ ಮಗಳ ದೈಹಿಕ ಆರೋಗ್ಯ ಹಾಗೂ ಸೌಂದರ್ಯವನ್ನು ಹಾಳುಗೆಡಹುವ ಒಪ್ಪಂದವನ್ನು ಮಾಡಿಕೊಂಡೆ. ಈಗ ನೋಡಿ ಅವಳು ಅಂದಗೆಟ್ಟಿದ್ದಾಳೆ .ಅದರರ್ಥ ಅವಳೀಗ ಸುರಕ್ಷಿತ .ಹೆಣ್ಣುಮಕ್ಕಳು ಅಸಾಧ್ಯ ನೋವಿಗೆ ವಿಲಗುಡುತ್ತ ತಮ್ಮೆದೆಯ ಅಸಹ್ಯ ಬದಲಾವಣೆಗೆ ಬೇಯುತ್ತ ತಮ್ಮ ತಾಯಂದಿರನ್ನು ಪ್ರಶ್ನಿಸಿದರೆ ಬರುವ ಉತ್ತರವೇನು ಗೊತ್ತಾ?”ನೀವು ಲೈಂಗಿಕ ದೌರ್ಜನ್ಯಕ್ಕೆ ಅತ್ಯಾಚಾರಕ್ಕೆ ಒಳಗಾಗದಿರಲೆಂದು ನಾವು ಇದನ್ನು ಮಾಡಬೇಕಾಗಿದೆ .ಹಾಗೇನಾದರೂ ನೀನು ಬಸುರಿಯಾದರೆ ಇಡೀ ಕುಟುಂಬದ ಘನತೆ ಕೀರ್ತಿ ಮಣ್ಣುಪಾಲಾಗಿ ಹೋಗುತ್ತದೆ”.  ಓ ದೇವ್ರೇ ಇದಕ್ಕಿಂತಲೂ ಎಚ್ಚಿನ ನರಕದರ್ಶನ ಬೇರೊಂದಿರಬಹುದೇ…    ಒಂದು ನೆನಪಿರಲಿ, ಈ ಎದೆ ಸಪಾಟು ಮಾಡುವ ಪದ್ಧತಿಯಲ್ಲಿ ಬಳಕೆಯಾಗುವದು ನುರಿತ ಸರ್ಜನ್ ಗಳ ವೈದ್ಯಕೀಯ ಕಿಟ್ ಗಳಲ್ಲ, ನೋವು ನಿವಾರಕ ಇಂಜಕ್ಷನ್ ಗಳಿಲ್ಲ , ಎಲ್ಲವೂ ಹಸಿಹಸಿ ಜೀವ ಸುಡುವ ಗಾಂವ್ಟಿ ಪದ್ಧತಿಗಳು. ಸಹಿಸುವ ಪುಟ್ಟ ಹೆಣ್ಣುಗಳ ಮನಸ್ಥಿತಿ ದೇಹಸ್ಥಿತಿಗಳನ್ನು ಊಹಿಸಬಲ್ಲಿರಾ?     ಭೂಮಿಯಮೇಲೆ ಹೆಣ್ಣುಗಳು ಕುಟುಂಬದ ಗೌರವ ಘನತೆ ಮರ್ಯಾದೆಗಳನ್ನು ಗುತ್ತಿಗೆ ಪಡೆದೇ ಹುಟ್ಟುತ್ತಾರೆ. ಅದನ್ನು ಹೊತ್ತುಕೊಂಡೇ ಬದುಕುತ್ತಾರೆ. ನಮ್ಮಲ್ಲೇನು ಕಡಿಮೆಯಿಲ್ಲ….‌ ಆಯುಧಗಳನ್ನು ಬಳಸೋದಿಲ್ಲ ಅಷ್ಟೇ… ಅದೆಂತ ಹಾಗೆ ಎದೆ ಮೀರಿಸ್ಕೊಂಡು ನಡ್ದಾಡ್ತೆ, ಅದೆಂತಕೆ ಹಾಂಗೆ ಗಲಗಲ ಅಲುಗಸ್ತಾ ತಿರ್ಗಾಡ್ತೆ ಎಡ್ನಾಡಿ, ಅದ್ನ ಸರಿ ಬಿಗ್ದು ಕಟ್ಕೊಂಬುಕೆ ಏನ್ ಧಾಡಿ,  ಆಯುಧಗಳಿಗಿಂತ ಹರಿತ ಮಾತುಗಳು ಚಿಗುರುವ ಎದೆಯನ್ನು ಜಜ್ಜಿ ಬಿಡುತ್ತವೆ. “ದೇವ್ರೆ ನನ್ನನ್ನು ಈ ನೆಲ ನುಂಗಬಾರದೇ..?” ಎಂದು ಅಮಾಯಕ ಜೀವಗಳು ನರಳುತ್ತವೆ.. ಹೊರುವ ಹೆರುವ ಮೈಯೊಳಗೆರಡು ಊಡುವ ಅಪ್ಪಿ ಎದೆಗೊತ್ತಿಕೊಳ್ಳುವ ವಾತ್ಸಲ್ಯದ ವೇದಗಳು.. ಆದರೆ ಅದನ್ನೋದುವ  ನೋಟ ಕೊಳಕು ಕೆಡುಕು ಕೊಂಕು ಕೆಣಕು ಕೀಸು ಅಣುಕು ಹುಳುಕು. ಅಯ್ಯೋ ಎಲ್ಲವೂ ಸೂಜಿ ಚುಚ್ಚಿದ ನೋವುಗಳು. ಎದೆ ಭಾವದಲ್ಲಿ ಸಾವಿರ ಸುಟ್ಟ ಬೊಬ್ಬೆಗಳು.. ಬೆಂದ ಹುಣ್ಣುಗಳು.. ಒಂದು ಹನಿ ಕಣ್ಣೀರು ಸಾಕೇ? ಒಂದು ದಿನದ ಆಚರಣೆ ತಂಪು ತಂದೀತೇ..? ಹಾಂ, ಲೋಕದ ಕಣ್ಣಿಗೆ ಹೆಣ್ಣು ಮಾಧುರ್ಯವೇ  ಇರಬಹುದು, ನಿಜದ ಕಣ್ಣಿಗೆ ಅವಳು ನೋವು ತುಂಬಿಕೊಳ್ಳಲೆಂದೇ ಹುಟ್ಟುವ ಪಾತ್ರೆಗಳು  ಅಥವಾ ಪಾತ್ರಗಳೇ… ? ಬಿಟ್ಟುಬಿಡು ದೇವರೇ….. ಮತ್ತೆ ಹುಟ್ಟಿಸಬೇಡ ಎನಬೇಡಿ. ನಮ್ಮ ಮೊರೆ ಮುಟ್ಟುವದಿಲ್ಲ ಅಲ್ಲಿಗೆ… ಮುಟ್ಟಿದರೆ ಈ ನೆಲ  ಸುಟ್ಟು ಬೂದಿಯಾಗಿಬಿಡಬಹುದು..‌ ಪಟವಾಗಿ ಪೂಜೆಗೊಳ್ಳುವ ಹೆಣ್ಣು ನಿತ್ಯ ಉಸಿರಿಗೆ ಮಿಸುಗುತ್ತಲೇ ಇದ್ದಾಳೆ. ಊದಿನಕಡ್ಡಿ ಕರ್ಪೂರದ ಆರತಿ ಬೇಡ. ನಮಗೂ ನೋವಾಗುತ್ತದೆ.. ಬದುಕಲು ಬಿಟ್ಟುಬಿಡಿ, ಅಷ್ಟು ಸಾಕು ಎಂಬ ಆಶಯಗಳೊಂದಿಗೆ……… ನಿಮ್ಮ ಪ್ರೇಮಾ ಟಿ ಎಂ ಆರ್                         ಪ್ರೇಮಾ ಟಿ ಎಮ್ ಆರ್

“ಬಿಟ್ಟುಬಿಡಿ ಬದುಕಿಕೊಳ್ಳುತ್ತೇವೆ”ಮಹಿಳೆಯರ ಬಗ್ಗೆ ವಿಶೇಷ ಬರಹ, ಪ್ರೇಮಾ ಟಿ‌ ಎಂ ಆರ್ Read Post »

ನಿಮ್ಮೊಂದಿಗೆ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ ಶಕ್ತಿಯ ಪ್ರತಿರೂಪ ಹೆಣ್ಣು ಮಹಿಳೆಯರು ಕುಟುಂಬದ ಆಧಾರ ಸ್ಥಂಭವಾಗಿದ್ದು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಆದರೆ ಹಿಂದೂ ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸುತ್ತಿರುವುದು ದುಃಖಕರ. ಕುಟುಂಬದ ನಿರ್ವಹಣೆಯಿಂದ ಹಿಡಿದು ಬಾಹ್ಯಾಕಾಶದ ವರೆಗೂ ಮಹಿಳೆ ಪುರುಷನಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದರು ಲಿಂಗ ಸಮಾನತೆ ಮತ್ತು ಶಿಕ್ಷಣ ಭದ್ರತೆಯ ವಿಷಯದಲ್ಲಿ ಇಂದಿಗೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ. “*ಯತ್ರ ನಾರಿಸ್ತು ಪೂಜಂತೆ ರಮಂತು ತಂತ್ರ ದೇವತಾ*” ಎಂಬ ವೇದವಾಕ್ಯದಂತೆಎಲ್ಲಿ ನಾರಿಯನ್ನು ಪೂಜಿಸುತ್ತಾರೆ ಅಲ್ಲಿ ದೇವರುಗಳು ನೆಲೆಸಿರುತ್ತಾರೆ ಎನ್ನುವಂತೆ ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವಿಸುವುದು ಅಷ್ಟೇ ಮುಖ್ಯ. ಹಾಗೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಸ್ಥಾನಮಾನವೂ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ. ಮಹಿಳಾ ಸಬಲೀಕರಣವು ಸಮಾನ ಅವಕಾಶಗಳನ್ನುಒದಗಿಸುವ ಮೂಲಕ ಸಮೃದ್ಧ ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗಿದೆ. ಆದರೂ ಕೂಡ ಹೆಣ್ಣು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂದು ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದಾರೆ ಹಾಗೂ ವಿಜ್ಞಾನ, ತಂತ್ರಜ್ಞಾನ ,ರಾಜಕೀಯ ಮತ್ತು ಕಾರ್ಪೊರೇಟ್ ವಲಯಗಳಲ್ಲಿ ಮಹಿಳೆಯರು  ಸಾಧನೆ ಮಾಡುತ್ತಿದ್ದಾರೆ. ಸಮಾಜದ ಮತ್ತೊಂದು ದುಃಖಕರ ಸಂಗತಿ ಎಂದರೆ ಈಗಲೂ ಕೂಡ ಹೆಣ್ಣಿನ ಮೇಲೆ ದೌರ್ಜನ್ಯಗಳು ಕಿರುಕುಳ ಬ್ರೂಣ ಹತ್ಯೆ ಗಳು ದೊಡ್ಡ ಪಿಡುಗುಗಳಾಗಿವೆ. ಮಹಿಳೆಯರ ಸಬಲೀಕರಣ ಎಂದರೆ ಕೇವಲ ಉದ್ಯೋಗವಲ್ಲ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಕಾನೂನುಗಳ ಕಟ್ಟುನಿಟ್ಟಿನ ಜಾರಿ ಸುರಕ್ಷಿತ ವಾತಾವರಣ ಮತ್ತು ಪುರುಷರ ಮನೋಭಾವನೆಯಲ್ಲಿ ಬದಲಾವಣೆ ತರುವುದು ಅತಿ ಮುಖ್ಯವಾಗಿದೆ. ಹಾಗೂ ಮಹಿಳೆಯರು ಬಲಿಷ್ಠವಾದಾಗ ಮಾತ್ರ ಸಮಾಜವು ಬಲಿಷ್ಠ ವಾಗುತ್ತದೆ. ಎನ್ನುವಂತೆ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಸಮಾನತೆಯತ್ತ ಧನಾತ್ಮಕ ಹೆಜ್ಜೆ ಇಡುತ್ತಿದ್ದು ನಿಜವಾದ ಪ್ರಗತಿಯನ್ನು ಸಾಧಿಸಲು ಕಾರಣವಾಗುತ್ತಿದೆ. ಸ್ವ ಸಹಾಯ ಗುಂಪುಗಳ ಮೂಲಕ ಉದ್ಯೋಗಾವಕಾಶಗಳು ಮತ್ತು ಆಸ್ತಿ ಹಕ್ಕು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಿವೆ. ತಾಳ್ಮೆಯ ಗುಣವೇ ಹೆಣ್ಣಿನ ಗೆಲುವಿಗೆ ಕಾರಣ ಎನ್ನುವಂತೆ ಮಹಿಳೆ ತನ್ನ ತಾಳ್ಮೆಯಿಂದ ಎಲ್ಲರನ್ನು ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದಾಳೆ. *ಹೆಣ್ಣು ಸಂಸಾರದ ಕಣ್ಣು*  ಎನ್ನುವಂತೆ ಕುಟುಂಬದಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಾ ಎಲ್ಲರ ಮನಸ್ಸನ್ನು ಗೆಲ್ಲುವ ಮನೆ ಬೆಳಗುವ ಮಹಾಲಕ್ಷ್ಮಿಯಂತೆ ಎಲ್ಲರನ್ನ ಸಂತೈಸಿ ಮನಸನ್ನ ಗೆಲ್ಲುವ ಪ್ರತಿಭೆ ಇವಳು. ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ಪ್ರತಿಯೊಂದು ಹಂತದಲ್ಲೂ ತನ್ನದೇ ಆದ ಜವಾಬ್ದಾರಿ ಯೊಂದಿಗೆ ಸಂಸಾರವನ್ನು ನಡೆಸುವಲ್ಲಿ ಯಶಸ್ಸನ್ನು ಕಾಣುವ ನಗೆಯ ಚಿಲುಮೆ . ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಮಹಿಳೆ ತನ್ನ ಅಪ್ರತಿಮ ಸಾಧನೆಯನ್ನು ಮಾಡಿದ್ದಾಳೆ.ಉದಾಹರಣೆ:  ಕಿತ್ತೂರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀಬಾಯಿ ,ಒನಕೆ ಓಬವ್ವ, ರಾಣಿ ಅಬ್ಬಕ್ಕ, ಇನ್ನು ಹಲವಾರು ಮಹಿಳೆಯರು ತಮ್ಮದೇ ಆದ ಸಾಧನೆಯನ್ನು ಮಾಡಿದ್ದಾರೆ. ಆದರೂ ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆ ಒತ್ತಡದ ಬದುಕಿನಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸಿ ಮೆಟ್ಟಿ ನಿಲ್ಲುವ ಧೈರ್ಯವಂತೆ ಹೆಣ್ಣು. ಪ್ರತಿ ವರ್ಷವೂ ಕೂಡ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾರೆ ಹಾಗೂ ಅಂದು ಹಲವಾರು ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಗೌರವಿಸಿ ಸನ್ಮಾನಿಸುತ್ತಾರೆ.  ವಿಶೇಷವಾಗಿ ಕಾರ್ಮಿಕ ಚಳುವಳಿಗಳ ಭಾಗವಾಗಿ ಈ ಆಚರಣೆ ಪ್ರಾರಂಭವಾಯಿತು. 1975ರಲ್ಲಿ ಯುನೈಟೆಡ್  ನೇಷನ್ ಅಧಿಕೃತವಾಗಿ ಮಾರ್ಚ್ 8 ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ಘೋಷಿಸಿತು. ಉದ್ದೇಶವೇನೆಂದರೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆ , ಸಮಾನ ವೇತನ, ರಾಜಕೀಯ ಸಾಮಾಜಿಕ  ಪ್ರಾತಿನಿಧ್ಯ ಮತ್ತು ಲಿಂಗ ತಾರತಮ್ಯ ತೊಡೆದು ಹಾಕುವುದು. ಆದರೂ ಹೆಣ್ಣಿನ ಬಗ್ಗೆ ಹೇಳುವುದಾದರೆ ಪದಗಳೇ ಸಾಲದು ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವಿಸಿದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ. ನಾಗರತ್ನ ಎಚ್ ಗಂಗಾವತಿ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ Read Post »

ಇತರೆ

ಮಹಿಳಾದಿನದ ವಿಶೇಷ, ಲತಾ ಎ ಆರ್‌ ಬಾಳೆಹೊನ್ನೂರು

ಮಹಿಳಾದಿನದ ವಿಶೇಷ ಲತಾ ಎ ಆರ್‌ ಬಾಳೆಹೊನ್ನೂರು ದಿಟ್ಟ ಮಹಿಳೆ ತಂದೆ ತಾಯಿಯರ ಮುದ್ದಿನ ಮಗಳಿವಳುಅಣ್ಣಾ ಅಕ್ಕಾ ರ ಮುದ್ದಿನ ತಂಗಿಯಿವಳುಎಲ್ಲರ ಜೊತೆ ಸಮನಾಗಿ ಬೆರೆತವಳುಸಂತಸದ ಸೆಲೆ ಕುಟುಂಬಕ್ಕೆ ಕೊಟ್ಟವಳು ವಿದ್ಯೆಯನು ಚಂದದಿ ಶಾಲೆಯಲಿ ಕಲಿತವಳುಬದುಕಿಗೆ ಬಾಳಿನ ಬೆಳಕು ತಂದುಕೊಂಡವಳುದಿಟ್ಟ ಮಹಿಳೆಯಾಗಿ ಬದುಕು ಕಟ್ಟಿದವಳುಸಮಾಜಕ್ಕೆ ಸುಖದ ಹೊನಲು ಹರಿಸಿದವಳು ಏಳು ಬೀಳುಗಳ ಜೊತೆ ಸಾಗಿದವಳುಸುಖ ಸಂಸಾರದ ಸವಿ ಕಂಡವಳುಬಂದ ನೋವುಗಳ ಮೌನದಿ ಸಹಿಸಿದವಳುಮನೆ ಬೆಳಗುವ ಸಾತ್ವಿಕ ಮನದವಳು ಎಲ್ಲಾ ರಂಗದಲಿ ಸೈ ಎನಿಸಿದವಳುಲೋಕದ ಸೃಷ್ಟಿಗೆ ಕಾರಣ ಆದವಳುಎಲ್ಲರ ಮನ ಗೆದ್ದ ವಿನಯವಂತಳುಸೌಹೃದಯದ ಕರುಣಾಳು ಸಾಹಸಿ ಗುಣದವಳು ಡಾ.ಲತಾ ಎ.ಆರ್ ಬಾಳೆಹೊನ್ನೂರು

ಮಹಿಳಾದಿನದ ವಿಶೇಷ, ಲತಾ ಎ ಆರ್‌ ಬಾಳೆಹೊನ್ನೂರು Read Post »

ಇತರೆ

ಮಹಿಳಾದಿನದ ವಿಶೇಷ,ಜಯಶ್ರೀ ಭ. ಭಂಡಾರಿ 

ಮಹಿಳಾದಿನದ ವಿಶೇಷ ಜಯಶ್ರೀ ಭ. ಭಂಡಾರಿ  ವಿಶ್ವ ಮಹಿಳಾ ದಿನಾಚರಣೆ ವಿಶೇಷತೆ. ನಾರಿ ಹಿ ಸಾರಿ ಕಿ ಹೈ.ಸಾರಿ‌ ಹಿ ನಾರಿ ಕಿ ಹೈ.“ಎಲ್ಲವೂ ನಾರಿಯೇ. ನಾರಿಯೇ ಎಲ್ಲಾ’” ಮಾತೃದೇವೋ ಭವ ಪೂಜ್ಯತೆ ಪಡೆದವಳು. ಎಲ್ಲ ಕಡೆ ತಾನಿರಲಾಗುವುದಿಲ್ಲವೆಂದೇ ಪ್ರತಿ ಮನೆಯಲಿ ಒಬ್ಬ ತಾಯಿಯನ್ನು ದೇವರು ಸೃಷ್ಟಿ ಮಾಡಿದನಂತೆ. ತಾಯಿಯ ಎದೆ ಹಾಲೆಂಬ ಬಿಳಿ ಮಸಿ  ಮಗುವಿನ  ಭವಿಷ್ಯ ರೂಪಿಸುತ್ತದೆ. ಕಾರಣ‌ ತಾಯಿ ಹಾಲೂಡಿಸುವಾಗ ” ಈ‌ ನನ್ನ ಕಂದ ಜಗತ್ತನ್ನೇ ಗೆಲ್ಲುವ ಬಲಶಾಲಿಯಾಗಲಿ ” ಎಂದು ಮಮತೆ ತುಂಬಿ ಹಾರೈಸಿ ಹರಸುವಳು. “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ  ಗರಿಯಸಿ”  ಎಂದರೆ ಹೆತ್ತ‌ ತಾಯಿ,ಹೊತ್ತ ಭೂಮಿ ಇವೆರಡೂ ಸ್ವರ್ಗಕ್ಕಿಂತಲೂ ಮಿಗಿಲು. ಇವರಿಬ್ಬರ ಋಣ ತೀರಿಸಲಾಗದು. ತಾಯಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ತಾಯಿಯೆಂಬ ಮಹಿಳೆಗೂ ಒಂದು ದಿನವಿದೆ. ಅದೆಂದರೆ ” ವಿಶ್ವ ಮಹಿಳಾ ದಿನಾಚರಣೆ”. ವಿಶ್ವದೆಲ್ಲೆಡೆ ಸಂಭ್ರಮದಿಂದ. ಆಚರಿಸಲಾಗುತ್ತದೆ   1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು. ಕ್ಲಾರಾ ಜೆಟ್‌ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ೧೯೧೧ರಲ್ಲಿ ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಈ ಸಮ್ಮೇಳನದಲ್ಲಿ ಫಿನ್ಲೆಂಡ್‌ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಜೆಟ್‌ಕಿನ್‌ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ತಮ್ಮ ಹಕ್ಕುಗಳನ್ನು  ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಕ್ಕೂ ಮೊದಲು 1903ರಲ್ಲಿ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡವು. 1908ರ ಫೆಬ್ರುವರಿ ಕೊನೆಯ ಭಾನುವಾರ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ನಂತರ 1909ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000ದಿಂದ 30,000ದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು. ಮಹಿಳೆಯರ ಟ್ರೇಡ್ ಯೂನಿ ಯನ್ ಲೀಗ್‌ನವರು ಜಾಮೀನು ನೀಡಿ ಬಂಧಿತ ಕೆಲಸ ಗಾರರನ್ನು ಬಿಡಿಸಿಕೊಂಡರು. ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್‌ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದಳು. ಸಬಲತೆ ಅಥವಾ ಸಶಕ್ತತೆ ಎಂಬ ಪರಿಕಲ್ಪನೆಯು ಅಧಿಕಾರ ಹೊಂದುವುದು ಮತ್ತು ಶಕ್ತಿಯುತರಾಗುವುದುನ್ನು ಸೂಚಿಸುತ್ತದೆ. ಸಬಲತೆ ಎನ್ನುವುದು ಸ್ತ್ರೀ-ಪುರು‍ಷರಿಬ್ಬರಿಗೂ ಸಮಾಜದಲ್ಲಿ ಬದುಕಲು ಬೇಕಾದ ಶಕ್ತಿ. ಒಬ್ಬ ಮಹಿಳೆಯು ಶಕ್ತಿವಂತಳಾಗಿ, ಸ್ವತಂತ್ರವಾಗಿ ತನ್ನ ಇಚ್ಛೆಯಂತೆ ಸ್ವಾಲಂಬಿಯಾಗಿ ಬಾಳುವ ಸ್ಥಿಯನ್ನು ಸಾಮಾನ್ಯ ಅದನ್ನು ಸಬಲತೆ ಎನ್ನಬಹುದು. ಒಬ್ಬ ಮಹಿಳೆ ತನ್ನ ಜೀವನದ ಬಗ್ಗೆ ಪರಿಪೊರ್ಣ ಜ್ಞಾನವನ್ನು ಹೊಂದುವುದು, ತನ್ನ ಜೀವನದಬಗ್ಗೆ ನಿರ್ಣಯ ಹಾಗೂ ತೀರ್ಮಾನಗಳನ್ನು ಕೈಗೊಲಳ್ಳುವ ಸ್ವಾತಂತ್ರ್ಯ ಹೊಂದುವುದು, ಅಧಿಕಾರ ಹಾಗೂ ಸಂಪನ್ಮೂಲಗಳನ್ನು ಬಳಸಿಕೂಳ್ಳುವ ಅವಕಾಶಗಳನ್ನು ಹೊಂದುವುದು. ಯಾವುದೇರೀತಿಯ ಅಸಮಾನತೆ,ಶೋಷಣೆಗಳಿಗೆ ಒಳಗಾಗದೆ ಶಿಕಣ, ಉದ್ಯೋಗ, ವಿವಾಹ, ಜೀವನ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಹಕ್ಕುಗಳನ್ನು ಹೊಂದುವುದು. ಸಾಮಾಜಿಕ ಚಾಲನೆ, ರಾಜಕೀಯ ಮತ್ತು ಆಡಳಿತದಲ್ಲಿ ಪಾಲ್ಗೋಳ್ಳುವಿಕೆ ಇಂತಹ ಅಂಶಗಳ ಬಗ್ಗೆ ಸ್ವತಂತ್ರ್ಯ ಹೊಂದಿ ಸ್ವಾಭಿಮಾನಿಯಾಗಿ ಅತ್ಮ ವಿಸ್ವಾಸದಿಂದ ಬಾಳುವಶಕ್ತಿಯೇ ಮಹಿಳಾ ಸಬಲತೆ. ಮಹಿಳಾ ಸಬಲತೆಯು ಮೂಲಭೂತವಾಗಿ ಮಹಿಳೆಯರ ಮಾನಸಿಕ ಸಬಲತೆಯೂಗಿದ್ದು ಅವರು ಪ್ರಜ್ನಾಪೂರ್ವಕವಾಗಿ ಶಕ್ತಿ ವಂತರಾಗುವ ಸ್ಥಿತಿ. ಮಹಿಳೆಯರ ಯೋಚನೆ, ಶಕ್ತಿ,ಸಾಮರ್ಥ್ಯ, ಅರಿವು, ಅಭಿವ್ಯಕ್ತಿ, ಆರೋಗ್ಯ, ನಿರ್ಣಯ, ಆತ್ಮವಿಶ್ವಾಸ,ಪಾಲ್ಗೊಳ್ಳುವಿಕೆ ಮತ್ತು ಸಾಮಾಜಿಕ ಚಾಲನೆಗಳಿಂದ ಹಂತ ಹಂತವಾಗಿ ಶಕ್ತಿವಂತಳಾಗಿ, ಸ್ವಾಲಂಬಿಯಾಗಿ ವಿಕಾಸವಾಗುವ ಕ್ರಿಯೆಯೇ ಸಬಲತೆ. ಮಹಿಳಾ ಸಬಲತೆಯು ಬಹು ಆಯಾಮಗಳ ಪ್ರಕ್ರಿಯೆಯಾಗಿದ್ದು ವ್ಯಕ್ತಿಗತವಾಗಿ ಹಾಗೂ ಸಾಮಾಜಿಕ ಹಿನ್ನಲೆಯಲ್ಲಿ ಮೂಡಿಬರುವಂತಹದ್ದು. ವ್ಯಕ್ತಿತ್ವದೂದಿಂಗೆ ಮಹಿಳೆಯು ತನ್ನನ್ನು ಗುರುತಿಸಿಕೂಳ್ಳುವುದು, ತನ್ನ ಜೀವನದ ಬಗ್ಗೆ ಪೂರ್ಣ ಅಧಿಕಾರ ಹೊಂದುವ ಸ್ಥಿತಿ. ಪುರುಷರಿಗೆ ಸರಿಸಮಾನವಾಗಿ ಸ್ಥಾನ ಮಾನ, ವ್ಯಕ್ತಿಗೌರವ ಮತ್ತು ಘನತೆ ಹೊಂದುವುದು. ಸಾಮಾಜಿಕ ಚಾಲನೆ,ಆರ್ಥಿಕ ಸ್ವಾವಲಂಬನೆ, ಹಕ್ಕುಗಳ ಬಗ್ಗೆ ಅರಿವು, ಆರೋಗ್ಯಸೇವೆಗಳು ಮತ್ತು ಸಂಪನ್ಮೂಲಗಳ ಮೇಲಿನ ಒಡೆತನ, ಆರ್ಥಿಕ ಚಟುವಟಿಕೆಗಳು ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಆತ್ಮವಿಶ್ವಾಸದಿಂದ ಸಶಕ್ತವಾಗಿ ಬಾಳಬಹುದು.     ಮಹಿಳಾ ಸಬಲೀಕರಣದ ಉದ್ದೇಶಗಳು. ೧. ಸಮಾಜದಲ್ಲಿ ಆಚರಣೆಯಲ್ಲಿರುವ ಲಿಂಗ ತಾರತಮ್ಯವನ್ನು ತೊಡೆದುಹಾಕಿಮಹಿಳೆಯರ ಘನತೆ, ಗೌರವ ಹಾಗೂ ಸಾಮಾಜಿಕಸ್ಥಾನ ಮಾನಗಳನ್ನು ಉನ್ನತಿಗೊಳಿಸುವುದು. ೨. ಮಹಿಳೆಯರಲ್ಲಿ ಸುಪ್ತವಾಗಿರುವ ಅಪೂರ್ವ ಸಾಮರ್ಥ್ಯಗಳನ್ನು ಗುರ್ತಿಸಿ ವೃದ್ಥಿಗೂಳಿಸಿ ಅವರು ಬದಲಾವಣೆಯ ನಿಯೋಗಿಗಳಾಗಿ ರೂಪುಗೊಳ್ಳುವಂತೆ ಆತ್ಮವಿಶ್ವಾಸ ಮೂಡಿಸುವುದು. ೩. ಮಹಿಳೆಯರು ತಮ್ಮ್ ಅಭಿವೃದ್ಧಿಗೆ ಅವಕಾಶಗಳನ್ನು ಗುರುತಿಸಿಕೊಂಡು ಅಭಿವೃದ್ಧಿಯಾಗಲು ಪ್ರೋತ್ಸಾಹ ನೀಡುವುದು. ೪. ಮನೆ ಹಾಗು ಸಮುದಾಯದಲ್ಲಿ ಲಭ್ಯವಿರುವ ವಿವಿಧ ರೀತಿಯ ಸಂಪನ್ಮೂಲಗಳ ಮೇಲೆ ಅಧಿಕರ ಹೊಂದುವುದು ಹಾಗೂ ಅವುಗಳನ್ನು ಬಳಸಿಕೊಳ್ಳು ತಿಳಿವಳಿಕೆಮತ್ತು ತಂತ್ರಗಳನ್ನ್ನು ಬೆಳೆಸುವುದು. ೫. ಮಹಿಳೆಯರ ಸಂತಾನೋತ್ಪತಿ ಆರೋಗ್ಯ, ಶಿಶು ಜನನ ಮತ್ತು ಮಕ್ಕಳ ಪಾಲನೆಗಳ ಬಗ್ಗೆ ಅರಿವು ನೀಡುವುದು. ೬. ಅಸಮಾನತೆ, ಹಸಿವು, ಶೋಷಣೆ, ಹಿಂಸೆ ಹಾಗೂ ನಿಂದನೆಗಳ ವಿರುದ್ದ ಜಾಗೃತರಾಗಿ ಸಮಾನತೆಗಾಗಿ ಹಾಗೂ ಅಭಿವೃದ್ಧಿಗಾಗಿ ಸಂಘಟನಾತ್ಮಕ ಹೋರಾಟ ಮಾಡುವ ಆತ್ಮವಿಶ್ವಾಸ ಬೆಳೆಸುವುದು . ೭. ಹಕ್ಕುಗಳು ಹಾಗೂ ಅಭಿವೃದ್ಧಿಯ ಅವಕಾಶಗಳ ಬಗ್ಗೆ ಅರಿವು ಮೂಡಿಸುವುದು. ೮. ಮಹಿಳೆಯರಲ್ಲಿ ವ್ಯಕ್ತಿತ್ವ ವಿಕಾಸದೂಂದಿಗೆ ನಾಯಕತ್ವದ ಗುಣಗಳನ್ನು ಬೆಳೆಸುವುದು. ೯. ಮಹಿಳೆಯರಲ್ಲಿ ತನ್ನ ಹಾಗೂ ಕುಟುಂಬದ ಶೈಕ್ಷಣಿಕ, ಆರೋಗ್ಯ, ಆರ್ಥಿಕ ವಿಷಯಗಳಲ್ಲಿ ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯ, ಜವಾಬ್ದಾರಿ ಹೊರುವ ಹಾಗೂ ನಿರ್ಣಯ ತೆಗೆದುಕೊಳ್ಳುವ ಶಕ್ತಿಯನ್ನು ಬೆಳೆಸುವುದು. ಆದರೆ ಇಂದು ಸಮಾಜದಲ್ಲಿ ಮಹಿಳೆಯ ಮೇಲಿನ ಅತ್ಯಾಚಾರ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಾ ಸಾಗಿವೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಯಾವ ದೇಶದಲ್ಲಿ ಸ್ತ್ರೀಯರಿಗೆ ಅತ್ಯುನ್ನತ ಸ್ಥಾನ,ಮಾನ ಗೌರವ ಇರುವುದೊ ಆ ದೇಶ ಮುಂದುವರಿದ ದೇಶವಾಗಿರುತ್ತದೆ. “ಭೇಟಿ ಬಚಾವೋ ,ಭೇಟಿ ಪಡಾವೋ”ಸದಾ ಎಲ್ಲರ ಮನದಲ್ಲಿ ಅನುರಣಿಸಲಿ. ಜೋಗುಳ ಹಾಡಿ ಬೆಳೆಸಿದ ತಾಯಿಯನ್ನು ಸದಾ ಸ್ಮರಿಸೋಣ. ಇಳೆಯ ಕಳೆ ಹೆಚ್ಚಿಸುವ ಮಹಿಳೆ ಸದಾ ಸಂತಸದಿಂದ ಬದುಕಲಿ.  ಅವಳ ನೆರಳಿನಲ್ಲಿ ನಾವೆಲ್ಲ ಅನುಗಾಲ ಸುಖವಾಗಿರೋಣ.  ಜಯಶ್ರೀ ಭ. ಭಂಡಾರಿ  

ಮಹಿಳಾದಿನದ ವಿಶೇಷ,ಜಯಶ್ರೀ ಭ. ಭಂಡಾರಿ  Read Post »

You cannot copy content of this page

Scroll to Top