ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಡಿದುಕೊಳ್ಳಲೆಂದೇ ಸ್ನೇಹ ತಂತುವಿನ ಕೈ ಹಿಡಿದಿದ್ದೆ
ಎಂದರಿವಾಗುವ ಮುನ್ನವೇ ಹರಿದುಕೊಳ್ಳಲು ಬಂದಿದ್ದೆ

ನನ್ನೊಳಗಿನ ಹರಿವು ಅರಿವಾಗಲೇ ಇಲ್ಲ
ನನ್ನ ಸ್ನೇಹವ ಕಳೆಯಂತೆ ಕಿತ್ತದ್ದು ಮರೆಯಲಾಗಲಿಲ್ಲ

ನಾನೋ ಅತ್ಯಾಪ್ತನ ಆತ್ಮಕೇ ಅಂಟಿ ಕೊಂಡವಳು
ಮಧುರ ಬಾಂಧವ್ಯವೇ ಬದುಕೆಂದು ನಂಬಿಕೊಂಡವಳು

ಚೂರಾದ ಮನಸ ಮುಚ್ಚಿಬಿಡಲು ಕಲ್ಲುಬಂಡೆಯೇ ಬೇಕಿಲ್ಲ
ಕಲ್ಲಂತ ಮನಸಿನ ಮಾತುಗಳ ಹತ್ಯಾರವೇ ಸಾಕಲ್ಲ

ಬೇಕೆಂದಾಗ ಬೆಸೆದು ಬಿಡುವ ಬೇಡವೆಂದಾಗ ಬಸಿದು ಬಿಡುವವನೇ
ನಿರೀಕ್ಷೆಯನೇ ನಿರ್ಲಕ್ಷಿಸಿ ಕಣ್ಣಮುಂದಿರುವುದ ಕಡೆಗಣಿಸಿದವನೇ

ತಿರುಳಿಲೆಂದು ತಳ್ಳಿ ಹೋಗುವ ಮೊದಲೇ ತಾಲೀಮು ನಡೆದಿತ್ತೇ….
ಮೌನದ ಅಗಾಧ ದಳ್ಳುರಿಯಲಿ ಮಾತುಗಳ ದಾಸ್ತಾನು
ಸುಟ್ಟು ಭಸ್ಮವಾಗಿತ್ತೇ…..

ಅಪರಿಚಿತನಾಗ ಬಯಸಿದವಗೆ ಪರಿಚಯದ ಮುಖವಾಡ ಬೇಕಿತ್ತೇ
ಬೆನ್ನು ತಿರುಗಿಸಲು ಕ್ಷುಲ್ಲಕ ಕಾರಣ ಸಾಕಿತ್ತೇ

ನಿನ್ನೊಲವ ಪದಗಳ ಗೂಡಿನಲಿ ಗರಿ ಬಿಚ್ಚುವ ಹಕ್ಕಿ ನಾನಲ್ಲ
ಕಣ್ಣಿಗೆ ಗೋಚರಿಸಿದ ದಾರಿಯೆಲ್ಲ ನನ್ನದೇ ಹಾದಿಯಲ್ಲ

ಎಂಬರಿವಿನ ಕುರುಹಿರುವವಳ ವಿಶ್ವಾಸವ ಹೊಸಕಿ
ಒಲವ ತೋಟಕೆ ಲಗ್ಗೆಯಿಟ್ಟು ಧ್ವಂಸ ಮಾಡಿ ಮನದ ಮೊಗ್ಗನು ಹಿಚುಕಿ
 
ದೂಷಿಸಿ ದೂರಾಗುವ ಮುನ್ನ
ಧಮನಿ ಧಮನಿಗಳ ದಿಟ್ಟಿಸದಾದೆಯ ಮರುಳ
ಅಂತಃಸಾಕ್ಷಿಯನ್ನೊಮ್ಮೆ ಸಾಕ್ಷೀಕರಿಸಬೇಕಿತ್ತು ಅಂತರಾತ್ಮವ ಕೊಂದು ತೆರಳುವ ದುರುಳ

ಶೋಭಾ ಮಲ್ಲಿಕಾರ್ಜುನ್ 

About The Author

Leave a Reply

You cannot copy content of this page

Scroll to Top