ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಹಿಂದಿ ಹೇರಿಕೆ ಹಿಂದಿರುವ ಭಾಷಾ ರಾಜಕಾರಣ

ಹಿಂದಿ ಹೇರಿಕೆಯ ಹಿಂದೆ ಭಾಷಾ ರಾಜಕಾರಣದ ನಂಟಿದೆ. ಒಟ್ಟಾರೆಯಾಗಿ ಒಂದೇ ಏಟಿಗೆ ಭಾರತದ ಮೂಲ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲೆಯಾಳಿ ಹಾಗೂ ಮರಾಠಿ ಸೇರಿದಂತೆ ಅನೇಕ ಪ್ರಾದೇಶಿಕ ತಾಯ್ತನದ ಭಾಷೆಗಳನ್ನು ಮುಗಿಸುವ ಹುನ್ನಾರವಿದೆ.

ಹಿಂದಿ ಹೇರಿಕೆ ಹಿಂದಿರುವ ಭಾಷಾ ರಾಜಕಾರಣ Read Post »

ಕಥಾಗುಚ್ಛ

ನಿರ್ಧಾರ

ದಿನಗಳೆದಂತೆ ಯೋಗಿಯೊಂದಿಗಿನ ಆತ್ಮೀಯತೆ ವಿನುತಳಲ್ಲಿ ಹೊಸ ಹುರುಪು ಮೂಡಿಸಿತ್ತು.ಯೋಗಿಯು ವಿನುತಳನ್ನು ಅನುರಾಗದ ಭಾವದಿಂದ ನೋಡುತಿದ್ದ.ಇಬ್ಬರಲ್ಲಿ ಮೂಡಿದ ಪ್ರೀತಿ ತೋರ್ಪಡಿಸದಿರಲು ಇಬ್ಬರು ಹೆಣಗುತಿದ್ದರು .ಆದರೆ ಇದರ ಅರಿವು ಮೋದಲಾದದ್ದು ಸುಮಿತ್ರಳಿಗೆ. ವಿನುತ ಜೀವನದಲ್ಲಿ ಮುಂದುವರೆಯುವದು ಸುಮಿತ್ರಳಿಗೆ ಖುಷಿಯ ವಿಷಯವಾಗಿತ್ತು.

ನಿರ್ಧಾರ Read Post »

ಇತರೆ, ಪ್ರಬಂಧ

ಸವಾಲ್

ಸವಾಲ್ ದಾರನು ಹಣವನ್ನು ಪಡೆದು ಜರಿ ಸೀರೆಯನ್ನು ಕುತೂಹಲ ನಿರೀಕ್ಷಿಯಲ್ಲಿರುವ, ಐದನೇ ಸೀಟಿನಲ್ಲಿರುವವನ ಪತ್ನಿಗೇ ನೇರವಾಗಿ ಕೊಟ್ಟನು. ಅವಳು ಆ ಸೀರೆಯನ್ನು ಮತ್ತೊಮ್ಮೆ ಬಿಚ್ಚಿ ಕೈಯಾಡಿಸಿ ನೋಡಿ ಸಂತಸಬಟ್ಟು ಮಡಚಿ ಪಕ್ಕದಲ್ಲಿಟ್ಟು ಕೊಂಡಳು.

ಸವಾಲ್ Read Post »

ಇತರೆ

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳು ಜನಾದೇಶ ಪಡೆದು ರಾಜ್ಯಗಳ ಹಿತ ಕಾಪಾಡುತ್ತಿರುವ ನಿದರ್ಶನಗಳು ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿವೆ. ಹಾಗೆ ನೋಡಿದರೆ ಕೆಲಮಟ್ಟಿಗೆ ಕೇರಳದ ಎಡಪಂಥೀಯ ಸರಕಾರವೂ ಪ್ರಾದೇಶಿಕ ನೆಲೆಗಟ್ಟಿನದೇ. ಕೇಂದ್ರ ಮತ್ತು ರಾಜ್ಯದ ನಡುವಿನ ಮಧುರ ಬಾಂಧವ್ಯದಷ್ಟೇ ಪ್ರಾದೇಶಿಕ ಹಿತಾಸಕ್ತಿಯ ಬಾಂಧವ್ಯ ಅಕ್ಷರಶಃ ಅಲ್ಲಗಳೆಯಲಾಗದು.

Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-33 ಆಸ್ಪತ್ರೆಯಲ್ಲಿ ಒಂದು ವಾರ ತೀವ್ರ ನಿಗಾಘಟಕದಲ್ಲಿ ನರಳಿದ ಶ್ರೀನಿವಾಸ ಕೊನೆಗೂ ಬದುಕುಳಿದ. ಆದರೆ ಈ ಘಟನೆಯಿಂದ ಪ್ರವೀಣನ ನಾಗದೋಷದ ಭೀತಿಯು ದುಪ್ಪಟ್ಟಾಗಿ ಪ್ರಜ್ವಲಿಸತೊಡಗಿತು. ತನ್ನ ಅನಾಚಾರದಿಂದಲೇ ಇವೆಲ್ಲ ಅನಾಹುತಗಳು ನಡೆಯುತ್ತಿರುವುದು! ಎಂದು ಭಾವಿಸಿದವನು ಇನ್ನು ತಡಮಾಡಬಾರದು. ತನ್ನ ಜೀವನ ಸರ್ವನಾಶ ಆಗುವುದಕ್ಕಿಂತ ಮುಂಚೆಯೇ ಎಚ್ಚೆತ್ತುಕೊಳ್ಳಬೇಕು ಎಂದು ನಿರ್ಧರಿಸಿದ. ಅದೇ ಸಂದರ್ಭದಲ್ಲಿ ಶಂಕರನ ಶೀಂಬ್ರಗುಡ್ಡೆಯ ನಾಗಬನ ಜೀರ್ಣೋದ್ಧಾರದ ಸಂಗತಿಯೂ ಅವನಿಗೆ ತಿಳಿಯಿತು. ಕೂಡಲೇ ಹಳೆಯ ಗೆಳೆಯನನ್ನು ಹೊಸ ಆತ್ಮೀಯತೆಯಿಂದ ಅರಸಿ ಹೋಗಿ ಭೇಟಿಯಾದ. ಶಂಕರನೂ ಪ್ರವೀಣನನ್ನು ಆಪ್ತತೆಯಿಂದ ಬರಮಾಡಿಕೊಂಡು ಕುಶಲೋಪರಿ ವಿಚಾರಿಸಿದ. ಆದರೆ ಅವನ ಮೂತ್ರ ಪ್ರಸಂಗ, ಚರ್ಮರೋಗ ಮತ್ತು ಹಾವಿನ ಕಡಿತದ ವಿಷಯವನ್ನು ಕೇಳಿದವನು ‘ಇದು ಖಂಡಿತಾ ನಾಗದೋಷದ ಪ್ರತಿಫಲವೇ ಮಾರಾಯಾ…! ಇಲ್ಲದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ!’ ಎಂದು ಆತಂಕ ವ್ಯಕ್ತಪಡಿಸಿದ. ‘ಅಲ್ವಾ ಅಲ್ವಾ ಶಂಕರಣ್ಣಾ…? ನನಗೆ ಆವತ್ತು ಸುರೇಶ ಹೇಳಿದಾಗಲೇ ಅದು ಗೊತ್ತಾಗಿತ್ತು. ಆದರೆ ನನ್ನ ಮನೆಯವಳೂ, ಆ ಚರ್ಮರೋಗದ ಡಾಕ್ಟ್ರೂ ಹೇಳುವುದು ನಾನು ಸರಿಯಾಗಿ ಸ್ನಾನನೇ ಮಾಡುವುದಿಲ್ಲವಂತೆ. ಅದರಿಂದ ಹುಳಕಜ್ಜಿ ಬಂದಿದೆಯಂತೆ! ಹಾಗಾದರೆ ನನ್ನ ಮೈದುನನಿಗೆ ಹಾವು ಯಾಕೆ ಕಚ್ಚಿತು? ಅದೂ ನನ್ನ ಅಂಗಡಿಯ ಒಳಗೆಯೇ ಬಂದು ಕಚ್ಚಬೇಕಿತ್ತಾ…!’ ಎಂದು ಭಯದಿಂದ ಕಣ್ಣುಬಾಯಿ ಬಿಟ್ಟುಕೊಂಡು ಅಂದವನು, ‘ನನಗೀಗ ನೀವು ಹೇಳಿದ ಮೇಲೆ ಧೈರ್ಯ ಬಂತು ಶಂಕರಣ್ಣಾ…ಆದ್ದರಿಂದ ನೀವೇ ಇದಕ್ಕೊಂದು ಪರಿಹಾರವನ್ನೂ ಸೂಚಿಸಬೇಕು!’ ಎಂದು ಕೇಳಿಕೊಂಡ. ‘ನೀನೇನೂ ಹೆದರಬೇಡ ಮಾರಾಯಾ ನಾನಿದ್ದೇನೆ. ಎಲ್ಲಾ ಸಮ ಮಾಡುವ ನಡೀ…!’ ಎಂದು ಶಂಕರ ಗತ್ತಿನಿಂದ ಹೇಳಿದವನು ಕೂಡಲೇ ಅವನನ್ನು ಏಕನಾಥ ಗುರೂಜಿಯವರ ಹತ್ತಿರ ಕರೆದೊಯ್ದ.    ಆ ಸಮಯದಲ್ಲಿ ಗುರೂಜಿಯವರು ತಮ್ಮ ಹಳೆಯ ಮನೆಯ ಒಂದು ಪಾಶ್ರ್ವವನ್ನು ಒಡೆದು, ಮುಂದೆ ತಮ್ಮಲ್ಲಿ ನಿರಂತರ ನಡೆಯಲಿರುವ ವಿವಿಧ ಪೂಜಾ ಕೈಂಕರ್ಯಗಳಿಗೆ ಸಹಾಯಕವಾಗುವಂಥ ವಿಶಾಲವಾದ ಆಧುನಿಕ ಪಡಸಾಲೆಯೊಂದನ್ನು ನಿರ್ಮಿಸತೊಡಗಿದ್ದರು. ಅತ್ತ ಶಂಕರನ ಕಾರು ಬಂದು ತಮ್ಮ ಮನೆಯೆದುರು ನಿಂತುದನ್ನೂ, ಅವನೊಂದಿಗೆ ಶ್ರೀಮಂತನೊಬ್ಬ ಇಳಿದು ಬರುತ್ತಿರುವುದನ್ನೂ ಮತ್ತು ಅವನ ಮುಖದಲ್ಲಿದ್ದ ಕಳವಳವನ್ನೂ ಗ್ರಹಿಸಿದವರಿಗೆ ತಮ್ಮ ಪಡಸಾಲೆಯ ಕೆಲಸವು ನಿರ್ವಿಘ್ನವಾಗಿ ಸಮಾಪ್ತಿಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದೆನಿಸಿತು. ಆದ್ದರಿಂದ ಮಂದಹಾಸ ಬೀರುತ್ತ ಇಬ್ಬರನ್ನೂ ಬರಮಾಡಿಕೊಂಡು ತಮ್ಮ ಜ್ಯೋತಿಷ್ಯದ ಕೋಣೆಗೆ ಕರೆದೊಯ್ದರು.    ಶಂಕರ ತನ್ನ ಗೆಳೆಯನ ವ್ಯವಹಾರ ಮತ್ತು ಅವನ ಪ್ರಸ್ತುತ ಸಮಸ್ಯೆಯನ್ನು ಗುರೂಜಿಗೆ ಹಳೆಯ ಸಲುಗೆಯಿಂದ ವಿವರಿಸಿದ. ಆದರೆ ಅವರು ಅವನ ಸ್ನೇಹದತ್ತ ಗಮನಕೊಡದೆ ಅವನ ಮಾತುಗಳನ್ನು ಮಾತ್ರವೇ ಗಂಭೀರರಾಗಿ ಕೇಳಿಸಿಕೊಂಡರು ಹಾಗೂ ಕ್ಷಣಹೊತ್ತು ಕಣ್ಣುಮುಚ್ಚಿ ಧ್ಯಾನಸ್ಥರಂತೆ ಕುಳಿತು ಪ್ರವೀಣನ ಸಮಸ್ಯೆಗಳನ್ನು ತಮ್ಮದೇ ದೃಷ್ಟಿಕೋನದಿಂದ ಮಥಿಸಿದರು. ಗುರೂಜಿಯ ಗಾಂಭೀರ್ಯವನ್ನೂ ಅವರು ತನಗಾಗಿ ಧ್ಯಾನಿಸುತ್ತಿದ್ದ ರೀತಿಯನ್ನೂ ಕಂಡ ಪ್ರವೀಣನಿಗೆ ಅರ್ಧಕ್ಕರ್ಧ ಭಯ ಹೋಗಿಬಿಟ್ಟಿತು. ಆದರೆ ಅತ್ತ ಗುರೂಜಿಯ ಯೋಚನಾಲಹರಿ ಈ ರೀತಿ ಸಾಗುತ್ತಿತ್ತು, ‘ಓ ಪರಮಾತ್ಮಾ… ಕೊನೆಗೂ ನೀನು ನಮ್ಮ ಜೀವನಕ್ಕೊಂದು ಭದ್ರ ನೆಲೆಯನ್ನು ಕರುಣಿಸಿಬಿಟ್ಟೆ. ಅದಕ್ಕಾಗಿ ಅನಂತಾನಂತ ಕೃತಜ್ಞತೆಗಳು ದೇವಾ! ಹಾಗೆಯೇ ಈಗ ನಮ್ಮಲ್ಲಿಗೆ ನೀನು ಕಳುಹಿಸಿರುವ ಈ ವ್ಯವಹಾರವೂ ಸಾಂಗವಾಗಿ ನೆರವೇರುವಂಥ ಶಕ್ತಿಯನ್ನು ದಯಪಾಲಿಸು ಪ್ರಭುವೇ!’ಎಂದು ಪ್ರಾರ್ಥಿಸಿದರು. ನಂತರ ನಿಧಾನವಾಗಿ ಕಣ್ಣು ತೆರೆದು ಪ್ರವೀಣನನ್ನು ದಿಟ್ಟಿಸಿದರು. ಆಗ ಅವನು ಅವರನ್ನು ದೈನ್ಯದಿಂದ ನೋಡಿದ. ‘ಹೌದು ಪ್ರವೀಣರೇ, ನೀವು ಮಾಡಿರುವುದು ಮಹಾ ಅಪರಾಧವೇ ಆಗಿದೆ! ಅದರಲ್ಲಿ ಎರಡು ಮಾತಿಲ್ಲ’ ಎನ್ನುತ್ತ ಅವನನ್ನು ತೀಕ್ಷ್ಣವಾಗಿ ದಿಟ್ಟಿಸಿದರು. ಪ್ರವೀಣ ಭಯದಿಂದ ಇನ್ನಷ್ಟು ಇಳಿದುಹೋದ. ಅದನ್ನು ಗಮನಿಸಿದ ಗುರೂಜಿ, ‘ಆದರೂ ನೀವಿನ್ನು ಹೆದರಬೇಕಾಗಿಲ್ಲ. ನಿಮ್ಮ ಆ ಪಾಪಕೃತ್ಯವನ್ನು ಸರಿಪಡಿಸುವ ಮಾರ್ಗ ನಮ್ಮಲ್ಲಿದೆ. ಆದರೆ ಅದಕ್ಕೆ ಸಂಬಂಧಿಸಿದ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಸಿದ್ಧರಿದ್ದೀರಾ?’ ಎಂದು ಮುಖದಲ್ಲಿ ನಿರ್ಭಾವ ತೋರಿಸುತ್ತ ಕೇಳಿದರು. ಆದರೂ ಅವರ ಕೆಳದುಟಿಯು ಸಣ್ಣಗೆ ಕಂಪಿಸುತ್ತಿದ್ದುದು ಯಾರ ಗಮನಕ್ಕೂ ಬರಲಿಲ್ಲ. ‘ಆಯ್ತು ಗುರೂಜಿ. ತಾವು ಹೇಗೆ ಹೇಳುತ್ತೀರೋ ಹಾಗೆ ನಡೆದುಕೊಳ್ಳುತ್ತೇನೆ. ಒಟ್ಟಾರೆ ನನ್ನ ಸಮಸ್ಯೆಯನ್ನು ನಿವಾರಿಸಿಕೊಡಬೇಕು ತಾವು!’ ಎಂದ ಪ್ರವೀಣ ನಮ್ರನಾಗಿ ಕೇಳಿಕೊಂಡ. ಆಗ ಗುರೂಜಿಯ ಮುಖದಲ್ಲಿ ನಗು ಮೂಡಿತು.  ‘ಆಯ್ತು, ಸರಿಮಾಡಿ ಕೊಡುವ. ಆದರೆ ಅದಕ್ಕಿಂತ ಮೊದಲು ಆ ಜಾಗವನ್ನು ನಾವೊಮ್ಮೆ ನೋಡಬೇಕಲ್ಲಾ…?’ ‘ಆಯ್ತು ಗುರೂಜಿ. ನಿಮಗೆ ಪುರುಸೋತ್ತಿದ್ದರೆ ಈಗಲೇ ಹೋಗಿ ನೋಡಿ ಬರಬಹುದು!’ ಎಂದ ಪ್ರವೀಣನು, ಶಂಕರನ ಮುಖ ನೋಡುತ್ತ, ‘ಹೇಗೇ…ಹೋಗಿ ಬರುವ ಅಲ್ಲವಾ…?’ ಎಂದು ಕಣ್ಣಿನಲ್ಲೇ ಪ್ರಶ್ನಿಸಿದ.  ಆದರೆ ಅತ್ತ, ‘ಈಗಲೇ ಹೋಗುವುದಾ…?’ ಎಂದ ಗುರೂಜಿ ಬೇಕೆಂದೇ ಕೆಲವುಕ್ಷಣ ಯೋಚಿಸುವಂತೆ ನಟಿಸಿದವರು ನಂತರ, ‘ಸರಿ. ಹೊರಡುವ…!’ ಎಂದರು. ‘ನೋಡಮ್ಮಾ ದೇವಕೀ… ಎಲ್ಲಿದ್ದೀಯೇ?’ ಎಂದು ಹೆಂಡತಿಯನ್ನು ಕೂಗಿ ಕರೆದರು. ಅವಳು ಅಡುಗೆ ಕೋಣೆಯಿಂದಲೇ, ‘ಏನೂಂದ್ರೆ….?’ ಎಂದಳು. ‘ಪಡಸಾಲೆಯ ಕೆಲಸವನ್ನು ಸ್ವಲ್ಪ ಗಮನಿಸುತ್ತಿರು. ನಾವು ಹೊರಗೆ ಹೋಗಿ ಬರುತ್ತೇವೆ…’ ಎಂದು ಸೂಚಿಸಿದರು. ‘ಆಯ್ತು, ಹೋಗಿ ಬನ್ನಿ…!’ ಎಂಬ ಅವಳ ಉತ್ತರ ಸಿಗುತ್ತಲೇ ಎದ್ದು ಅವರೊಂದಿಗೆ ಹೊರಟರು.                                                                                    *** ಗುರೂಜಿ ಮತ್ತು ಶಂಕರನೊಂದಿಗೆ ಪ್ರವೀಣ ಮಸಣದಗುಡ್ಡೆಗೆ ಬಂದವನು ಅಲ್ಲಿಂದ ಸ್ವಲ್ಪ ದೂರವಿದ್ದ ಸುರೇಶನ ಸರಕಾರಿ ಕಾಲೋನಿಗೆ ಅವರನ್ನು ಕರೆದೊಯ್ದ. ಅಲ್ಲಿನ ಅಶ್ವತ್ಥ ಮರದ ಕಟ್ಟೆಯೊಂದಲ್ಲಿ ಗುರೂಜಿಯವರನ್ನು ಕುಳ್ಳಿರಿಸಿದವನು ಶಂಕರನನೊಂದಿಗೆ ಸುರೇಶನ ಮನೆಯತ್ತ ಹೋದ. ಸುರೇಶ ಆಹೊತ್ತು ತನ್ನ ಬಡಾವಣೆಯ ಕೊನೆಯ ಸಾಲಿನ ಹರಕು ಮುರುಕು ಮನೆಯೊಂದರಲ್ಲಿ ಕುಡಿದು ಮತ್ತನಾಗಿ ಮಲಗಿದ್ದ. ಪ್ರವೀಣ ಮತ್ತು ಶಂಕರನ ಚೆನ್ನಾಗಿ ಪರಿಚಯವಿದ್ದ ಅಲ್ಲಿನವರಲ್ಲಿ ಒಂದಿಬ್ಬರು ಗಂಡಸರು ಅವರನ್ನು ಕಂಡು ದಡಬಡನೆದ್ದು ಬಂದು ಅವರಿಂದ ವಿಷಯ ತಿಳಿದುಕೊಂಡವರು ಕೂಡಲೇ ಸುರೇಶನನ್ನು ಎಬ್ಬಿಸಲು ಅವನ ಮನೆಯೊಳಗೆ ನುಗ್ಗಿದರು. ಆದರೆ ಸುರೇಶ ಏಳುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ಅವರಲ್ಲೊಬ್ಬ ಸುರೇಶನ ನೆತ್ತಿಗೆ ಒಂದು ಚೊಂಬು ತಣ್ಣೀರು ಸುರಿದು ಎಬ್ಬಿಸಬೇಕಾಯಿತು. ಅದರಿಂದ ಸುರೇಶ ಎಚ್ಚರಗೊಂಡು ಕೆಂಡಾಮಂಡಲನಾದವನು ಇಬ್ಬರಿಗೂ ಕೆಟ್ಟಕೆಟ್ಟ ಪದಗಳಿಂದ  ಬಯ್ಯುತ್ತ ಎದ್ದು ಕುಳಿತ. ಆದರೆ ಅವರು ಅವನ ಅಂಥ ಬೈಗುಳವನ್ನು ಕೇಳಿ ತಮಾಷೆಯಾಗಿ ನಗುತ್ತ ಪ್ರವೀಣ, ಶಂಕರರು ಬಂದಿರುವುದನ್ನು ಅವನಿಗೆ ತಿಳಿಸಿದರು. ಅವರ ಹೆಸರು ಕಿವಿಗೆ ಬೀಳುತ್ತಲೇ ಸುರೇಶ ತಟ್ಟನೆ ನೆಟ್ಟಗಾದ. ‘ಓಹೋ, ಆ ಬೇವರ್ಸಿ ಬಂದಿದ್ದಾನಾ…? ಅಂವ ನನ್ನನ್ನು ಹುಡುಕಿಕೊಂಡು ಬಂದೇ ಬರ್ತಾನೆ ಅಂತ ಗೊತ್ತಿತ್ತು ಬಿಡಿ!’ ಎಂದು ನಗುತ್ತ ಎದ್ದು ತೂರಾಡುತ್ತ ಹೊರಗೆ ಬಂದ. ಅಲ್ಲಿ ತನ್ನ ವಠಾರದವರೆಲ್ಲರೂ ತಂತಮ್ಮ ಹೊಸ್ತಿಲು, ಅಂಗಳದಲ್ಲಿ ನಿಂತುಕೊಂಡು ತನ್ನತ್ತ ಕುತೂಹಲದಿಂದ ನೋಡುತ್ತಿದ್ದುದನ್ನು ಕಂಡ ಸುರೇಶ ತನ್ನ ಮಹತ್ವವನ್ನು ಸಾರುವ ಉದ್ದೇಶದಲ್ಲಿ,‘ನಮಸ್ಕಾರ ಪ್ರವೀಣಣ್ಣ… ಏನು ವಿಷಯ ಮಾರಾಯ್ರೇ…?’ಎಂದು ಸಂಗತಿ ತನಗೆ ಗೊತ್ತಿದ್ದರೂ ಜೋರಿನಿಂದ ಪ್ರಶ್ನಿಸಿದ. ಅವನ ಅಹಂಕಾರದ ಮಾತುಗಳನ್ನು ಕೇಳಿದ ಪ್ರವೀಣ, ಶಂಕರರಿಬ್ಬರಿಗೂ ಕೆಟ್ಟ ಕೋಪ ಬಂತು. ಆದರೆ ಈ ಸಮಯದಲ್ಲಿ ತಾಳ್ಮೆಗೆಟ್ಟರೆ ಕೆಲಸ ಕೆಡುವುದೆಂದು ವಿವೇಕ ಎಚ್ಚರಿಸಿತು. ‘ಏನಿಲ್ಲ ಮಾರಾಯಾ ನಮ್ಮ ಗುರೂಜಿಯವರು ಬಂದಿದ್ದಾರೆ. ಮೊನ್ನೆ ನೀನು ತೋರಿಸಿದ ನಾಗನ ಕಲ್ಲಿದ್ದ ಆ ಜಾಗ ಮತ್ತು ಅದರ ಕಥೆಯನ್ನು ಸ್ವಲ್ಪ ಅವರಿಗೆ ಹೇಳಬೇಕಿತ್ತಲ್ಲವಾ…?’ ಎಂದು ಪ್ರವೀಣ, ‘ಈಗಲೇ ಹೊರಡು…!’ ಎಂಬಂಥ ಭಾವದಿಂದ ಆಜ್ಞಾಪಿಸಿದ. ‘ಅರೇ, ಅದಕ್ಕೇನಂತೆ ಹೋಗುವ. ನಡೆಯಿರಿ!’ ಎಂದು ಸುರೇಶ ಅವರಿಗಿಂತ ಮುಂದೆ ನಡೆದವನು ತಟ್ಟನೆ ನಿಂತು,‘ಆದರೆ ಪ್ರವೀಣಣ್ಣ ನನಗೀಗ ಸ್ವಲ್ಪ ಎದುರು ಹಾಕದೆ (ಸಾರಾಯಿ ಕುಡಿಯದೆ) ಕೈಕಾಲು ಅಲ್ಲಾಡುವುದಿಲ್ಲ ನೋಡಿ. ಆಗ ಸ್ವಲ್ಪ ಕುಡಿದು ಮಲಗಿದ್ದೆ. ಆದರೆ ಈ ದರ್ವೇಶಿಗಳಿದ್ದಾರಲ್ಲ…ಇವರು, ನೀವು ಬಂದ ಸುದ್ದಿಯನ್ನು ಹೇಳುವ ಗಡಿಬಿಡಿಯಲ್ಲಿ ನನ್ನ ಮಂಡೆಗೆ ಸಮಾ ನೀರು ಸುರಿದು ಎಬ್ಬಿಸಿ ಎಲ್ಲಾ ಹಾಳು ಮಾಡಿಬಿಟ್ಟರು!’ಎಂದು ಆ ಇಬ್ಬರತ್ತ ಕೋಪದಿಂದ ದಿಟ್ಟಿಸುತ್ತ ಹೇಳಿದ. ಆದರೆ ಅವರು ಆಗಲೂ ತಮಾಷೆಯಿಂದ ನಗುತ್ತ ನಿಂತಿದ್ದರು. ‘ಆಯ್ತು, ಆಯ್ತು ಮಾರಾಯಾ. ಸ್ವಲ್ಪವೇನು ಕೆಲಸವಾದ ಮೇಲೆ ಇಡೀ ಬಾಟಲಿಯನ್ನೇ ಕೊಡಿಸುತ್ತೇನೆ. ಕುಡಿದು ಬಿದ್ದು ಸಾಯಿ ಅತ್ಲಾಗೆ. ಈಗ ಮೊದಲು ನಡೆ!’ ಎಂದು ಪ್ರವೀಣ ತನ್ನ ಕೋಪವನ್ನು ತಮಾಷೆಯೊಂದಿಗೆ ಬೆರೆಸಿ ತೋರಿಸಿದ.‘ಹಾಗಾದರೆ ಸರಿ ಹೋಗುವ…!’ ಎಂದು ಸುರೇಶ ತಾಳತಪ್ಪಿದ ಹೆಜ್ಜೆಗಳನ್ನಿಡುತ್ತ ಮುಂದೆ ನಡೆದ.    ಸ್ವಲ್ಪಹೊತ್ತಿನಲ್ಲಿ ಸುರೇಶ ಗುರೂಜಿಯವರನ್ನು ಅಲ್ಲಿನ ಕುರುಚಲು ಹಾಡಿಯತ್ತ ಕರೆದುಕೊಂಡು ಹೋಗಿ ಆ ಪೊದೆಯನ್ನು ತೋರಿಸಿದ. ಪ್ರವೀಣನಿಗೆ ಮೂತ್ರ ಹುಯ್ಯಲು ಆ ಸ್ಥಳವು ಬಹಳ ಇಷ್ಟವಾಗಿದ್ದುದರಿಂದ ಆ ಪರಿಸರವಿಡೀ ಗಬ್ಬು ವಾಸನೆ ಬೀರುತ್ತಿತ್ತು. ಗುರೂಜಿಯವರು ಕುತೂಹಲದಿಂದ ಅದರತ್ತ ಹೋದವರಿಗೆ ಒಮ್ಮೆಲೇ ವಾಂತಿ ಬಂದಂತಾಯಿತು. ಆದರೂ ಮೂಗು ಮುಚ್ಚಿಕೊಂಡು ಆ ಜಾಗವನ್ನೂ ಅಲ್ಲಿನ ಕಲ್ಲುಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸತೊಡಗಿದರು. ಆದರೆ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದೆ ಉಸಿರುಗಟ್ಟಿತು. ತಟ್ಟನೆ ಈಚೆಗೆ ಧಾವಿಸಿ ಬಂದವರು, ‘ಛೇ, ಛೇ! ಎಂಥದಿದು ಪ್ರವೀಣರೇ… ಎಷ್ಟು ವರ್ಷಗಳಿಂದ ಇಲ್ಲಿ ಗಲೀಜು ಮಾಡುತ್ತಿದ್ದೀರಿ…? ಈ ಜಾಗವಿಡೀ ಸರ್ಕಾರಿ ಪಾಯಿಖಾನೆಯ ಥರಾ ನಾರುತ್ತಿದೆಯಲ್ಲ. ಅಪಚಾರ ಅಪಚಾರ…!’ ಎಂದು ಗೊಣಗಿದರು. ಅಷ್ಟು ಕೇಳಿದ ಪ್ರವೀಣನಿಗೆ ಭಯ, ಅವಮಾನವೆಲ್ಲವೂ ಒಟ್ಟೊಟ್ಟಿಗಾಯಿತು. ಪೆಚ್ಚು ನಗುತ್ತ ನಿಂತುಕೊಂಡ. ಗುರೂಜಿಯವರು ಆ ಪೊದೆಯ ಸುತ್ತಮುತ್ತ ದಟ್ಟ ಮರಗಳಿಂದ ತುಂಬಿದ ಪ್ರದೇಶವೊಂದನ್ನು ಮೂಗು ಮುಚ್ಚಿಕೊಂಡೇ ಪರೀಕ್ಷಿಸುತ್ತ ಸ್ವಲ್ಪಹೊತ್ತು ಸುತ್ತಾಡಿದರು. ಅಲ್ಲೊಂದು ಕಡೆ ವಿಶಾಲವಾದ ಮನೆಯಿದ್ದು ಈಗ ಅದರ ನಾಮಾಶೇಷ ಮಾತ್ರವೇ ಉಳಿದಿದ್ದುದು ಕಾಣಿಸುತ್ತಿತ್ತು. ಆದ್ದರಿಂದ ಈ ಬನವೂ ಅದಕ್ಕೆ ಸಂಬಂಧಿಸಿದ್ದು ಎನ್ನುವುದು ಅವರಿಗೆ ಸ್ಪಷ್ಟವಾಯಿತು. ಮತ್ತೊಮ್ಮೆ ಅವೆಲ್ಲವನ್ನೂ ಪರಿಶೀಲಿಸಿ ಮುಂದಿನ ಕಾರ್ಯಚರಣೆ ಏನೆಂಬುದರ ಕುರಿತು ಅಲ್ಲಿಯೇ ನಿರ್ಧರಿಸಿಬಿಟ್ಟರು. ಈಗ ಸುರೇಶ ಮಾತನಾಡಿ,‘ಆ ಜಾಗದ ವಾರಸುದಾರರು ಈಗ ಇಲ್ಲಿ ಸುತ್ತಮುತ್ತ ಯಾರು ಇಲ್ಲ. ಜಾಗವು ಸರಕಾರದ ಸ್ವಾಧೀನದಲ್ಲಿದೆ! ಎಂದ. ಗುರೂಜಿ ಅವನ ಹೇಳಿಕೆಯನ್ನು ಕೇಳಿಸಿಕೊಂಡರಾದರೂ ಅವರಿಗೆ ಅದರಲ್ಲಿ ವಿಶ್ವಾಸ ಬರಲಿಲ್ಲ. ಆದ್ದರಿಂದ ಆ ಕುರಿತು ಸತ್ಯವನ್ನು ತಿಳಿದುಕೊಳ್ಳುವ ಜವಾಬ್ದಾರಿಯನ್ನು ಪ್ರವೀಣ ಮತ್ತು ಶಂಕರನಿಗೆ ವಹಿಸಲಿಚ್ಛಿಸಿದವರು,‘ನೋಡಿ ಪ್ರವೀಣರೇ, ನೀವಿನ್ನು ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ. ಇಲ್ಲಿನ ಸಂಗತಿ ಏನೆಂಬುದು ನಮಗೆ ಸ್ಪಷ್ಟವಾಗಿದೆ. ಅವೆಲ್ಲವನ್ನೂ ಸುಸೂತ್ರವಾಗಿ ಪರಿಹರಿಸಿಕೊಡುವ ಜವಾಬ್ದಾರಿ ನಮ್ಮದು. ಆದರೆ ಸ್ವಲ್ಪ ದುಡ್ಡು ಖರ್ಚಾಗುತ್ತದೆ. ನೀವು ಕೂಡಲೇ ಆ ವ್ಯವಸ್ಥೆಯನ್ನು ಮಾಡಿಕೊಳ್ಳಿ ಮತ್ತು ಈ ಸ್ಥಳಕ್ಕೆ ಸಂಬಂಧಪಟ್ಟು ನಾವು ಹೇಳುವ ಕೆಲವು ಮುಖ್ಯ ವಿಚಾರಗಳನ್ನೂ ತಿಳಿದುಕೊಳ್ಳುವ ಕೆಲಸವನ್ನು ನೀವಿಬ್ಬರೂ ಮಾಡಬೇಕಾಗುತ್ತದೆ. ಎಷ್ಟು ಬೇಗ ಆ ಮಾಹಿತಿಯನ್ನು ತಂದು ನಮಗೆ ಒಪ್ಪಿಸುತ್ತೀರೋ ಅಷ್ಟೇ ಬೇಗ ನಿಮ್ಮ ಸಮಸ್ಯೆಯನ್ನೂ ನಿವಾರಿಸಿಕೊಡುತ್ತೇವೆ!’ ಎಂದರು ಗಂಭೀರವಾಗಿ. ‘ಹಣದ ವ್ಯವಸ್ಥೆ ಮಾಡಿಕೊಳ್ಳಿ…!’ಎಂದಾಕ್ಷಣ ಪ್ರವೀಣ ಸ್ವಲ್ಪ ಅಶಾಂತನಾದ. ಅದನ್ನು ಗಮನಿಸಿದ ಶಂಕರ,‘ಅದರ ಬಗ್ಗೆ ಈಗಲೇ ತಲೆಕೆಡಿಸಿಕೊಳ್ಳುವುದು ಮಾರಾಯಾ ಸುಮ್ಮನಿರು…!’ ಎಂದು ಕಣ್ಣಿನಲ್ಲೇ ಅವನನ್ನು ಸಮಾಧಾನಿಸಿದ.    ಗುರೂಜಿಯ ಆಜ್ಞೆಯಂತೆ ಗೆಳೆಯರಿಬ್ಬರು ಕೆಲವೇ ದಿನದೊಳಗೆ ಆ ಬನದ ಚರಿತ್ರೆಯನ್ನು ತಿಳಿದುಕೊಂಡು ಬಂದು ಅವರಿಗೊಪ್ಪಿಸಿದರು. ಆ ವರದಿಯ ಪ್ರಕಾರ, ‘ಸದ್ಯ ಬನದ ವಾರಸುದಾರರು ಈಶ್ವರಪುರದಲ್ಲಿ ಯಾರೂ ಇಲ್ಲ. ಅವರ ದೂರದ ಸಂಬಂಧಿಗಳಾದ ಒಂದೆರಡು ಕುಟುಂಬಗಳು ಇರುವುವಾದರೂ ಮೂಲ ಜಾಗಕ್ಕೆ ಸಂಬಂಧಿಸಿದವರ ಮಾಹಿತಿ ಮತ್ತು ವಿಳಾಸ ಅವರಿಗೂ ಗೊತ್ತಿಲ್ಲ ಹಾಗೂ ಬನದ ಜಾಗವೂ ಸರಕಾರಕ್ಕೆ ಸಂಬಂಧಿಸಿದ್ದಲ್ಲ. ಸ್ಮಶಾನವಿದ್ದ ಜಮೀನು ಮಾತ್ರ ಸರಕಾರದ್ದು. ಹಾಗಾಗಿ ಸ್ಮಶಾನದ ಸುತ್ತಮುತ್ತದ ಒಂದಷ್ಟು ಭೂಮಿ ಸಹಜವಾಗಿಯೇ ಪಾಳುಬಿದ್ದಿದೆ. ಅದರಲ್ಲಿ ಬನವೂ ಸೇರಿಬಿಟ್ಟಿದೆ!’ ಎಂದು ತಿಳಿದು ಬಂತು. ಅಷ್ಟು ವಿಷಯನ್ನು ತಿಳಿದ ಗುರೂಜಿಯವರು ಒಳಗೊಳಗೇ ಹರುಷಗೊಂಡರು.‘ಈಶ್ವರಪುರದ ಹೃದಯಭಾಗದಲ್ಲಿರುವ ನಾಗ ಬನವದು. ಅಲ್ಲಿ ಸುತ್ತಮುತ್ತಲ್ಲೆಲ್ಲೂ ಬೇರೊಂದು ಬನವೂ ಇಲ್ಲ. ಹಾಗಾಗಿ ಅದನ್ನು ತಮ್ಮಿಂದ ಊರ್ಜಿತಗೊಳಿಸುವುದೇ ನಾಗದೇವನಿಚ್ಛೆಯಿರಬೇಕು. ಅಷ್ಟಲ್ಲದೇ ತಮ್ಮ ಜೀವನದೇಳಿಗೆಯ ಕಾರ್ಯಸಾಧನೆಗೂ ಆ ಪರಿಸರವು ಹೇಳಿ ಮಾಡಿಸಿದಂತಿದೆ. ಆದಷ್ಟು ಬೇಗ ಅದನ್ನು ಜೀರ್ಣೋದ್ಧಾರ ಮಾಡಿ ತಮ್ಮದಾಗಿಸಿಕೊಳ್ಳಬೇಕು!’ ಎಂದು ನಿರ್ಧರಿಸಿದರು ಹಾಗೂ ಕೂಡಲೇ ಪ್ರವೀಣನನ್ನೂ ಶಂಕರನಿಗೂ ಮನೆಗೆ ಕರೆದು ತಮ್ಮ ಮನದಿಂಗಿತವನ್ನು ಅವರಿಗೆ ವಿವರಿಸಿದರು. ಜೊತೆಗೆ ಆ ಶುಭಕಾರ್ಯಕ್ಕೆ ತಗಲುವ ಖರ್ಚುವೆಚ್ಚವನ್ನೂ ಮತ್ತದನ್ನು ಹೊಂದಿಸುವ ಬಗೆಯನ್ನೂ ಹಾಗೂ ಆ ಕಾರ್ಯದಲ್ಲಿ ಪಾಲುಗೊಳ್ಳುವುದರಿಂದ ಅವರ ಜೀವನದಲ್ಲಾಗುವ ಸಮೃದ್ಧಿಗಳು ಯಾವ ಯಾವ ರೀತಿಯವು ಎಂಬುದನ್ನೆಲ್ಲ ಅಂದು ಶಂಕರನಿಗೆ ವಿವರಿಸಿದಂತೆಯೇ ಇಂದು ಪ್ರವೀಣನಿಗೂ ತಿಳಿಸಿ ಅವನನ್ನು ಸಜ್ಜುಗೊಳಿಸಿದರು.    ಗುರೂಜಿಯವರ ಮಾತು ಕೇಳಿದ ಪ್ರವೀಣ ಮತ್ತು ಶಂಕರ ಆ ಕಾರ್ಯದ ಕುರಿತು ಭಾರೀ ಉತ್ಸುಕರಾದರು. ಗುರೂಜಿಯ ಮಾರ್ಗದರ್ಶನದಂತೆ ಅವರ ಹೇಳಿಕೆಯನ್ನು ಆ ಬನದ ಸುತ್ತಮುತ್ತಲಿನ ಜನರಲ್ಲಿ ಪ್ರಚಾರ ಮಾಡುತ್ತ ಬಂದರು. ಬಳಿಕ ಜೀರ್ಣೋದ್ಧಾರದ ವಿಷಯಕ್ಕೆ ಸಂಬಂಧಿಸಿ ನಗರಸಭೆಯಿಂದಲೂ ಕೆಲವೇ ದಿನದಲ್ಲಿ ‘ನೋ ಅಬ್ಜಕ್ಷನ್!’ ಲೆಟರ್ ಕೂಡಾ ಪ್ರವೀಣನ ಕೈಸೇರಿತು. ಆದ್ದರಿಂದ ದಟ್ಟ ಹಸಿರಿನಿಂದ ತುಂಬಿ ಆರೋಗ್ಯಪೂರ್ಣವಾಗಿದ್ದ ಆ ಬನವನ್ನು ಕೂಡಲೇ‘ಕಾಂಕ್ರೀಟ್ ಭವನ’ವನ್ನಾಗಿ ಮಾರ್ಪಡಿಸಲು ಶುಭದಿನವೊಂದನ್ನು ಗೊತ್ತುಪಡಿಸಲಾಯಿತು. ಆದರೆ ಅದಕ್ಕಿನ್ನೂ ಒಂದೂವರೆ ತಿಂಗಳ ಗಡುವಿತ್ತು. ಈ ಎರಡನೆಯ ಜೀರ್ಣೋದ್ಧಾರದ ಮೂಲಕ ಗುರೂಜಿಯವರಿಗೆ ತಮ್ಮ ಧಾರ್ಮಿಕ ವರ್ಚಸ್ಸು ಮತ್ತು ಸಂಪಾದನೆಯನ್ನು ವೃದ್ಧಿಸಿಕೊಳ್ಳುವುದು ಬಹಳ ಮುಖ್ಯ ಉದ್ದೇಶವಾಗಿತ್ತು. ಹಾಗಾಗಿ ಬಹಳ ಹಿಂದೆಯೇ ಅವರೊಳಗೆ ಹೊಸ ವಿಚಾರವೊಂದು ಮೊಳೆತಿತ್ತು. ಆದ್ದರಿಂದ ಇದೇ ಕಾರ್ಯಕ್ರಮದಲ್ಲಿ ಅದನ್ನು ಕಾರ್ಯಗತಗೊಳಿಸಲು ಅವರು ಮನಸ್ಸು ಮಾಡಿದರು. (ಮುಂದುವರೆಯುವುದು) ********* ಗುರುರಾಜ್ ಸನಿಲ್ ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ. ********************************************

Read Post »

ಕಥಾಗುಚ್ಛ

ಶಾಂಭವಿ, ಬಣ್ಣ, ಜಾತಿ ಮುಂತಾಗಿ..

ಸಣ್ಣಕಥೆ ಶಾಂಭವಿ, ಬಣ್ಣ, ಜಾತಿ ಮುಂತಾಗಿ.. ಡಾ. ಅರಕಲಗೂಡು ನೀಲಕಂಠ ಮೂರ್ತಿ –01– ಮೊಬೈಲ್  ವಾಟ್ಸ್ಯಾಪ್ ರಿಂಗಾದಾಗ ಸುಮಾರು ರಾತ್ರಿ ಹತ್ತು ಗಂಟೆಯ ಸಮಯ. ಊಟ ಮುಗಿಸಿ, ಪಾತ್ರೆ ತೊಳೆಯುವುದು ಇನ್ನೂ ಬಾಕಿ. ಅಷ್ಟರಲ್ಲಿ ಫೋನ್. ಉದ್ದ ರಿಂಗ್ ಆದಾಗಲೇ ಬಹುಶಃ ಇದು ಭಾರತದ್ದಲ್ಲ ಅನ್ನಿಸಿತು. ನಿರಂಜನ್ ತಮ್ಮ ಆಫೀಸಿನ ಫೈಲ್ ಹಿಡಿದು ಮಗ್ನರಾಗಿದ್ದರು. ಇಂತಹ ಫೋನ್ ಕಾಲ್ ಗಳು ಬರುವುದೇ ಅವರಿಗೆ. ಹಾಗಿದ್ದರೂ ಸುಮ್ಮನೆ ಫೈಲೊಳಗೇ ಇಳಿದಿದ್ದಾರೆ. ನಾನು ಕಿಚನ್ನಿನಲ್ಲಿದ್ದೇನೆ, ಹಾಲ್ನಲ್ಲಲ್ಲ, ಅಂತ ಅರಿತೂ ಸಹ. ಪಾಪು ಗಾಢ ನಿದ್ದೆಯಲ್ಲಿದ್ದಳು. ಯಾರಿರಬಹುದು? ಉದ್ದವಾದ ರಿಂಗ್ ಬೇರೆ. ವಿದೇಶದ್ದೇ ಅನ್ನಿಸಿತು. “ತಮ್ಮದೇ ಕಾಲ್, ಅವರೇ ಎದ್ದು ನೋಡಬಹುದು, ಆದರೂ ನೋಡು,ಅವರನ್ನ”, ಅನ್ನಿಸಿತು. ಕೊನೆಗೆ ನಾನೇ  ಓಡಿದೆ. ನನ್ನದೇ  ಫೋನ್. ನನಗೆ ಈ ಫೋನಿನ, ಆ ಫೋನಿನ ಅಂತ  ‘ಕರೆಯ ರಿಂಗ್’ ಗಳನ್ನು ಕೇಳಿ ಗುರುತು ಹೀಡಿಯೋದು ಸ್ವಲ್ಪ ಕಷ್ಟವೇ. ಆದರೆ, ಈಗ ಆಶ್ಚರ್ಯ ಕಾದಿತ್ತು. ನನಗೆ ವಾಸ್ತವವಾಗಿ ವಿದೇಶೀ ಫೋನ್ ಬಂದದ್ದೇ ಇಲ್ಲ – ಶಾಂಭವಿ  ಹೋದ ಹೊಸದರಲ್ಲಿ ಮಾಡಿದ್ದು ಬಿಟ್ಟು. ಅವಳಲ್ಲದೆ ನನ್ನವರು ಅಂತ ವಿದೇಶದಲ್ಲಿ ಯಾರಿದ್ದಾರೆ? ಶಾಂಭವಿ! ಹೌದು, ಶಾಂಭವಿಯ ಫೋನ್, ಅಮೇರಿಕಾದಿಂದ! ನನ್ನ ಖುಷಿ ನಾನೇ ಅಮೇರಿಕಕ್ಕೆ ಒಮ್ಮೆಲೇ ಹಾರಿದಂತೆ. ನನ್ನ ಆತ್ಮೀಯ  ಗೆಳತಿಯಿಂದ. ಅವಳೂ ಅರ್ಜೆಂಟ್ನಲ್ಲಿದ್ದಳು, ಅನ್ನಿಸಿತು; ಆತುರಾತುರವಾಗೇ  ಮಾತು ಮುಗಿಸಿಬಿಟ್ಟಳು. ಮೂರ್ನಾಲ್ಕು ನಿಮಿಷಗಳು ಅಷ್ಟೇ. ಆದರೆ, ಮುಖ್ಯ ಸುದ್ದಿಯೆಂದರೆ, ಅವಳು ನಾಳೆಯೇ ಅಲ್ಲಿಂದ ಹೊರಟು  ರಜೆಗೆ ಬರುವವಳಿದ್ದಾಳೆ! ಇಷ್ಟು ತಿರುಳು…ಶಾಂಭವಿ  ನನ್ನ ಆಪ್ತ ಗೆಳತಿ. ಅವಳು ಮತ್ತು ವೈಶಾಲಿ ಇಬ್ಬರೇ ನನ್ನ ಆತ್ಮೀಯ ಗೆಳತಿಯರು . ಶಾಂಭವಿ  ನಿಜಕ್ಕೂ ಗಿಣಿಯೇ. ಅದೂ ಬಿಳೀ ಗಿಣಿ! ನಮ್ಮ ಕಾಲೇಜಿನಲ್ಲಿ ಅವಳಷ್ಟು ಬೆಳ್ಳಗಿದ್ದವರು, ಎಲ್ಲ ಕ್ಲಾಸ್ ನವರನ್ನೂ ಸೇರಿಸಿ ಹುಡುಕಿದರೂ, ಸಿಗುವುದೇ, ಬಹುಶಃ ಒಂದಿಬ್ಬರು. ಹಾಗಾಗಿ ಅವಳು ನಮ್ಮ ಬಿಳಿ ಗಿಣಿ. ಅಂದಾಕ್ಷಣ,  ಖಂಡಿತ ಗಿಣಿ ಮೂತಿಯವಳಂತೂ ಅಲ್ಲ!ಶಾಂಭವಿ ನನ್ನ ಆಪ್ತ ಗೆಳತಿ, ಆದುದರಿಂದ, ಈ ಹೊಗಳಿಕೆ, ಅಂತೇನೂ ಅಲ್ಲ. ಅವಳು ನೈಜ ಶ್ವೇತದ ಗೊಂಬೆ. ಕೇವಲ ಬಿಳಿ ಬಣ್ಣ ಮಾತ್ರವಲ್ಲ, ಸುಂದರಿಯೂ ಹೌದು! ಸಿನಿಮಾ ನಟಿಯರೂ ನಾಚುವಷ್ಟು! ಇಡೀ ಕಾಲೇಜೇನು, ಕಾಲೇಜಿನ ಪ್ರತಿ ಇಟ್ಟಿಗೆಯೂ, ಬಹುಶಃ ಅವಳ ಮೇಲೆ ಕಣ್ಣಿಟ್ಟಿತ್ತು ಅಂದರೆ ಅತಿಶಯವಲ್ಲ! ಹೌದು, ಇದೂ ವಾಸ್ತವ – ಸುಂದರಿಯರೆಲ್ಲರೂ ನಟಿಯರಾಗಿಲ್ಲ; ನಟನೆಯಲ್ಲಿ ಸಾಕಷ್ಟು  ನುರಿತಿದ್ದರೂ ಸಹ! ಹಲ್ಲು ಮತ್ತು ಕಡ್ಲೆ ಕಥೆ…ಬದುಕಿನ ಕಟು ಸತ್ಯ! ಅಷ್ಟೇ ಅಲ್ಲ; ಶಾಂಭವಿ ಇಂಟೆಲಿಜಂಟ್ ಕೂಡ. ವೆರಿ ಮಚ್! ಬ್ರಹ್ಮದೇವ ಎಲ್ಲರಿಗೂ ಇಂಥ ತಥಾಸ್ತು ಹೇಳುವುದು ಅಸಾಮಾನ್ಯ.ವೈಶಾಲಿ ಕೂಡ ಬಹಳ ಬುದ್ಧಿವಂತೆ. ಅವಳೂ ಸಹ ನನಗಿಂತ ಚೆನ್ನಾಗಿದ್ದಳು. ಹಾಗಾದರೆ, ನಾನು? ಅದನ್ನ ಅವರಿಬ್ಬರಲ್ಲಿ ಯಾರೋ ಒಬ್ಬರಾದರೂ ಹೇಳಬೇಕು ಅಲ್ಲವೇ-“ಲೇ,ನೀರಜ, ನೀನೂ ಚೆನ್ನಾಗಿದ್ದೀಯ” ಅಂತ… ನಾವು ಮೂವರು ಕೂಡ ಈಗ, ನಮ್ಮ ನಮ್ಮ  ಮದುವೆಯ ನಂತರ ಬೇರೆ ಬೇರೆ ದಿಕ್ಕು. ವೈಶಾಲಿ ಬೆಳಗಾವಿಯಲ್ಲಿ, ಶಾಂಭವಿ ಅಮೆರಿಕದ ಫ್ಲಾರಿಡದಲ್ಲಿ ಮತ್ತು ನಾನು ಬೆಂಗಳೂರಿನ  ಮಲ್ಲೇಶ್ವರದ ಹತ್ತಿರ.  ಶಾಂಭವಿಯ ಪತಿ ಬೆಂಗಳೂರಲ್ಲೇ ಸೆಟ್ಲಾಗುವ ಐಡಿಯಾದಿಂದ ಅಲ್ಲೇ ಕೋರಮಂಗಲದ ಹತ್ತಿರ ಮನೆ ಮತ್ತು ಸಾಕಷ್ಟು ಇತರ ಆಸ್ತಿ ಮಾಡಿಟ್ಟಿದ್ದಾರೆ. ನಾವು ಮೂವರು ಇಷ್ಟೊಂದು ಗಾಢ ಸ್ನೇಹಿತರು, ನಿಜ. ಆದರೂ ಸಹ, ‘ಎಲ್ಲರ ಬಗ್ಗೆ ಯಾರಿಗೂ ಅಥವಾ ಎಲ್ಲರಿಗೂ, ಒಬ್ಬೊಬ್ಬರ ವೈಯಕ್ತಿಕವಾದ ಸಂಪೂರ್ಣ ಅರಿವಿರುವುದಿಲ್ಲ’ ಅನ್ನುವುದೂ ಅಷ್ಟೇ ಸತ್ಯ! ಹಾಗೆಯೇ ಶಾಂಭವಿಯ ವಿಷಯದಲ್ಲೂ, ಅವಳ ಆತ್ಮೀಯ ಗೆಳೆತಿಯಾದ ನೀರಜ, ಅಂದರೆ ನನಗೂ ಸಹ ಸಂಪೂರ್ಣ ಮಾಹಿತಿ ಇರಲಿಲ್ಲ ಅಂತ ಅನ್ನಿಸುತ್ತೆ…ಅದೂ ಸಹ ಶಾಂಭವಿಯ ಮದುವೆಯ ನಂತರದ ಬದುಕಿನ ಬಗ್ಗೆ. ಕಾರಣ ಮದುವೆಯ ಹೊಸ್ತಿಲಿನಿಂದಲೇ ಅನ್ನಿಸುವಂತೆ, ಅವಳು ತರಾತುರಿಯಿಂದ ಗಂಡನ ಜೊತೆ ಅಮೆರಿಕದ ವಿಮಾನ ಏರಿಬಿಟ್ಟಿದ್ದಳು. ಆಮೇಲೆ ಕಷ್ಟ-ಸುಖ ಅಂತಿರಲಿ, ಹೆಚ್ಚು ಫೋನ್ ಕೂಡ ಇಲ್ಲ. ವಾಟ್ಸ್ಯಾಪ್ ಇನ್ನೂ ಉಗಮ ಆಗದಿದ್ದ ಕಾಲದಲ್ಲಿ, ಫೋನಿನಲ್ಲಿ, ಅದೂ ಅಷ್ಟು ದೂರದ ಕರೆಗಳಲ್ಲಿ ಏನೇನು ಅಂತ ಮಾತಾಡಲು ಸಾಧ್ಯ? ಅವಳ ಅಪ್ಪ ಅಮ್ಮ ನನ್ನ ಜೊತೆ ಸಲಿಗೆಯಿಂದ ಇದ್ದರೂ, ಸುಮಾರು ಬಾರಿ ಫೋನ್ ಮಾಡಿದ್ದರೂ ಸಹ, ಎಲ್ಲ ರೀತಿಯ ವಿಚಾರ ವಿನಿಮಯ ಅವರೊಂದಿಗೆ ನನಗೆ ಸಾಧ್ಯವೇ? ಅವರೇನು ನನ್ನ ಓರಗೆಯವರೇ? ಶಾಂಭವಿಯ ಮದುವೆ,  ನನ್ನ ಮತ್ತು ವೈಶಾಲಿಯ ಮದುವೆಯಾಗಿ ಬರೋಬ್ಬರಿ ಎರಡೂವರೆ ವರ್ಷದ ನಂತರ, ಆದದ್ದು. ಅದಕ್ಕೆ ಕಾರಣವೂ, ಇಲ್ಲದಿಲ್ಲ. ನನಗೆ ಗೊತ್ತಿರುವುದು ಅಷ್ಟಿಷ್ಟು ಮಾತ್ರ;  ಶಾಂಭವಿ ಮಧ್ಯೆಮಧ್ಯೆ ಹೇಳುತ್ತಿದ್ದಷ್ಟು. ನಮ್ಮ ಎಜುಕೇಷನ್ ಮುಗಿದ ಮೇಲಂತೂ, ನಾನು ಮಲ್ಲೇಶ್ವರದಲ್ಲಿ, ಅವಳು ಕೆಂಗೇರಿಯಲ್ಲಿ; ಆಗಾಗ ಫೋನ್ ಕರೆ ಬಿಟ್ಟು, ಪರಸ್ಪರ ಹೋಗೋದು ಬರೋದು ಅಂತಲೂ ಇರಲಿಲ್ಲ. ಇನ್ನೆಲ್ಲಿಯ ವಿಚಾರ ವಿನಿಮಯ? ಮದುವೆಯ ನಂತರ ಅಂತೂ ಏನೇನು ಗೊತ್ತಿಲ್ಲ. ಪೂರ್ತಿ ಮಾಹಿತಿಯಂತೂ ಇಲ್ಲವೇ ಇಲ್ಲ. ಹಾಗಾಗಿ, ಅದರ ಬಗೆಗೆ….. –02– ನಾವೀಗ ಬೆಂಗಳೂರು ನಗರದ ಹೊರವಲಯದಲ್ಲಿ ವಾಸವಿದ್ದೇವೆ – ಕೆಂಗೇರಿಯಲ್ಲಿ. ನಾನು ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ರಿಟೈರ್ ಆಗಿ, ಸರಿ ಸುಮಾರು ಹತ್ತು ವರ್ಷಗಳೇ ಸಂದಿವೆ. ನನ್ನದು ಅಂತರ್ಜಾತೀಯ ವಿವಾಹ. ನಾನಾಗ ಲೆಕ್ಚರರ್ ಆಗಿದ್ದಾಗಿನಿಂದ ನನ್ನ ಪ್ರೇಮಕಥಾ ಪ್ರಸಂಗ ಆರಂಭ. ನನಗೆ ಡೆಪ್ಯೂಟೇಶನ್ ಮೇಲೆ ಚಿತ್ರದುರ್ಗಕ್ಕೆ ಎರಡು ತಿಂಗಳ ಕಾಲ ಕಳಿಸಿದ್ದರು. ಆಗ ಒಂದು ದಿನ ಲೈಬ್ರರಿಯಲ್ಲಿ ಯಾವುದೋ ಪುಸ್ತಕದ ಶಿಕಾರಿಯಲ್ಲಿ ಬಿಜಿಯಾಗಿದ್ದಾಗ, ಬಹುಶಃ ನನ್ನ ಕಷ್ಟ ನೋಡಲಾರದೆ ಇವಳು, ಪ್ರಭ – (ಹೌದು, ಈಗಿನ ಈ ಇವಳು, ಪ್ರಭ; ಆಗ ಇವಳಾಗಿರಲಿಲ್ಲ ಅಥವಾ ಪ್ರಭ ಕೂಡ ಆಗಿರಲಿಲ್ಲ; ಬದಲಿಗೆ, ಅವಳು ಮತ್ತು ಪ್ರಭಾಮಣಿ ಆಗಿದ್ದಾಗಿನ ಕಾಲ), – ತಾನೆ ಖುದ್ದು ಬಂದು, “ಎನಿ ಹೆಲ್ಪ್ ನೀಡೆಡ್” ಅಂತ ಕೇಳಿದ್ದಳು, ಕೇಳಿ ಒಂದು ಹೊಸ ಅಧ್ಯಾಯದ ಆರಂಭಕ್ಕೆ ಕಾರಣವಾಗಿ ಆಶ್ಚರ್ಯ ಮೂಡಿಸಿದ್ದಳು! ಹಾಗೆ ಪರಿಚಯವಾಗಿ, ಅಲ್ಲಿದ್ದ ಆ ಎರಡು ತಿಂಗಳ ಅವಧಿಯಲ್ಲಿ, ಅದು ಪ್ರೀತಿ- ಪ್ರೇಮ ಅಂತಲೂ ತಿರುವು ಪಡೆದು, ‘ನಮ್ಮ ಕಥೆ ನಾವೇ ದಿಗ್ಧರ್ಶಿಸಿಕೊಂಡ  ಹಾಗೆ’ ಡೆಪ್ಯೂಟೇಶನ್ ಮುಗಿಸಿ ವಾಪಸ್ ಆದ ಎರಡು ವರ್ಷಗಳ ನಂತರ ತಾಳಿ ಅಂತ ಭದ್ರ ಬಿಗಿದದ್ದು! ನಮ್ಮ ಆ ಬೆಚ್ಚನೆಯ ಭಾವನಾ ಬದುಕಿನ, ಕೆಚ್ಚಿನ ಸಮಯದಲ್ಲಿ, (ಮತ್ತು ಆಮೇಲೆ ಹಾಗೂ ಈಗ ಕೂಡ, ಅಥವ ಎಂದೆಂದಿಗೂ-ಬಹುಶಃ ನಾವು ಬದುಕಿರುವವರೆಗೂ) ನಮ್ಮ ಬಗ್ಗೆ ಯಾರು ಯಾರು ಏನೇನು ಕಥೆ ಹೆಣೆದಿದ್ದಾರೆ, ಏನೇನು ಹಿಂದೆಮುಂದೆ, ಸುತ್ತ ಮುತ್ತ ತಿವಿದು ತಿವಿದು ಅಣಕಿಸಿದ್ದಾರೆ, ಅದೆಲ್ಲ ಆಗಲೂ ನಮಗೆ ಮುಖ್ಯವಾಗಿರಲಿಲ್ಲ, ಹಾಗೂ ಈಗಲೂ ಇಲ್ಲ! ಆದರೆ…ನನ್ನ ಪ್ರೀತಿಯ ಅಪ್ಪ ಅಮ್ಮ? ಅವರಾದರೂ, ನನ್ನ ‘ಭುಜದೊಡನೆ ಭುಜವಾಗಿ’ ನಿಂತಿದ್ದರೆ, ಆ ದಿನಗಳಲ್ಲಿ, ಆನಂದ ಹಾಗೂ ಹಿಂಸೆಗಳ ದ್ವಂದ್ವ ಪರಿಸ್ಥಿತಿಯ ಆ ದಿನಗಳಲ್ಲಿ, ಮುಖ್ಯವಾಗಿ ಮದುವೆಯಾದ ತಕ್ಷಣದ ಕಾಲದಲ್ಲಿ, “ನಾವಿರುವೆವು ನಿಮ್ಮೊಂದಿಗೆ” ಅಂದಿದ್ದರೆ, ಅಷ್ಟಕ್ಕೇ ನಾನು ‘ಕೆಚ್ಚೆದೆಯಾಗಿರುತ್ತಿದ್ದೆ’! … ಆದರದು ಹಾಗಾಗಲೇ ಇಲ್ಲ. ಎಣಿಕೆಯೇ ಬೇರೆ, ನಡೆಯುವುದೇ ಬೇರೆ…! ಹಾಗಂತ ನಾನು ಹೇಡಿಯಾದೆ ಅಂತಲೂ ಅಲ್ಲ. ಹಾಗಾದರೆ ನನ್ನ ಹೆತ್ತವರನ್ನು ನಾನು ದೂಷಿಸಬಹುದೇ? ಅಕಸ್ಮಾತ್ ನಾನೇ ಅವರ ಸ್ಥಾನದಲ್ಲಿ ಇದ್ದಿದ್ದರೆ; ಆಗ ನನ್ನ ಯೋಚನೆಗಳು ಯಾವ ಕೋನದತ್ತ ತಿರುಗುತ್ತಿದ್ದವು? ಮೇಲಾಗಿ,  ಮನೆಗೆ ನಾನೇ ಹಿರಿಯನಾಗಿದ್ದೆ; ಆದರೆ ನನ್ನ ನಂತರ ಹೆಣ್ಣು ಮಕ್ಕಳು ಅಂತಲೂ ಇರಲಿಲ್ಲ. ಇದ್ದವರಿಬ್ಬರೂ ಅವಳಿ ತಮ್ಮಂದಿರು. ಈ ದಿಕ್ಕಿನಲ್ಲಿ ಯೋಚಿಸುವುದೂ ಸಹ ತಪ್ಪಾಗಿ, ನನ್ನ ಮೂತಿ ನೇರಕ್ಕೆ ನನ್ನದೇ ಮಾತಾದಂತೆ,  ಆಗಬಿಡಬಹುದು ಅಲ್ಲವೇ? ಹೌದು, ಜಾತಿ! ಹ್ಞೂ, ಜಾತಿ ಅನ್ನುವುದು  ಎಷ್ಟು ಕಠೋರ. ಇದು ಯಾವ ಬೇತಾಳ-ಸೃಷ್ಟಿ ಅನ್ನಿಸಿಬಿಡುತ್ತದೆ! ಕನಿಷ್ಠ ವಿಷಮ ಘಳಿಗೆಗಳಲ್ಲಿ… ನನ್ನ ಮೊದಲ ಮಗಳು, ಶಕುಂತಲ ಹುಟ್ಟಿದ ನಂತರ, ಏಳು ವರ್ಷಗಳು ಮಕ್ಕಳೇ ಆಗಿರಲಿಲ್ಲ. ವಾಸ್ತವವಾಗಿ, ನಮ್ಮಿಬ್ಬರಿಗೇ ಬೇಡ ಅನ್ನಿಸಿ, ಒಂದೇ ಸಾಕು, ಅವಳನ್ನೇ ಚೆನ್ನಾಗಿ ಸಾಕಿ ಸಲಹಿ, ಉತ್ತಮ ವಿದ್ಯಾವಂತಳನ್ನಾಗಿ ಬೆಳೆಸಿದರಾಯಿತು, ಅಂದುಕೊಂಡು ಸುಮ್ಮನಿದ್ದೆವು. ಶಕ್ಕುವಿನ  (ಶಕುಂತಲೆಯನ್ನು ನಾವು ಕರೆಯುವ ಹ್ರಸ್ವ ಹೆಸರು), ಆರನೇ ಹುಟ್ಟು ಹಬ್ಬದ ನಂತರ, ಅಥವಾ ಅಷ್ಟರಲ್ಲಿ, ಇದ್ದಕ್ಕಿದ್ದಂತೆ ಪ್ರಭಾಳಿಗೆ, ಇನ್ನೊಂದು  ಮಗು, ಗಂಡುಮಗು, ಬೇಕೆಂಬ ಹೆಬ್ಬಯಕೆ ಉಂಟಾಗಿ, ಮತ್ತು ತನ್ನ ಮೊದಲ ಮಗಳು ಮದುವೆಯಾಗಿ ಗಂಡನ ಮನೆ ಸೇರಿದ ಮೇಲೆ, ಈ ನಮ್ಮ ಮನೆ ಭಣಗುಡುವುದಲ್ಲ, ಅನ್ನುವ ಭ್ರಮೆ ಅಥವಾ ಭಯ ಕಾಡಲು ಆರಂಭಿಸಿ, ಹಠ ಹಿಡಿದ ಕಾರಣ ಬಂದವಳೇ ಈ ನಮ್ಮ ಶಾಂಭವಿ! ಪ್ರಭಾಳ ದುರದೃಷ್ಟ, ಗಂಡಾಗಲೇ ಇಲ್ಲ! ನಮ್ಮ ಶಕುಂತಲೆಯ ಮದುವೆ ಬಹಳವೇ ಕೆಟ್ಟಕಾಲದಂತೆ ಕಾಡಿ, ನಮ್ಮನ್ನು ಹಿಂಸಿಸಿ ಹಿಂಡಿಬಿಟ್ಟಿತ್ತು. ಯಾರು ಬಂದರೂ, ಹುಡುಗಿ ಒಪ್ಪಿಗೆಯಾಗಿದೆ, ತೀರ್ಮಾನ ಮಾಡಿ ತಿಳಿಸುವೆವು ಅಂತ ಹೇಳಿ ಹೋಗುತ್ತಿದ್ದರು; ಕ್ರಮೇಣ ಬ್ರೋಕರ್ ಮೂಲಕವೋ, ಇನ್ನಾರದೋ, ಅಥವ ಇನ್ನಾವುದೋ  ಮುಖಾಂತರವೋ, ಈಗಲೇ ಮದುವೆ ಮಾಡಲ್ಲ ಅಂತಲೋ, ಬೇರೊಂದು ಕಾರಣವನ್ನೋ, ಅಥವಾ  ಕಾರಣವೇ ಇಲ್ಲದ ಕಾರಣವೊಂದನ್ನು  ತೂರಿ, ನಿರ್ಗಮಿಸುತ್ತಿದ್ದರು. ಸತ್ಯ ಅಂದರೆ ನಮ್ಮಿಬ್ಬರ ಅಂತರ್ಜಾತಿ ಅಡ್ಡಲಾಗಿ ನಿಂತ  ಮುಳ್ಳು ಅಂತ ನಮಗೆ ಅರಿವಂತೂ ಆಗಿಬಿಡುತ್ತಿತ್ತು; ಈ ತೆರನಾದ   ಅನುಭವಗಳು ವಿಪುಲವಾಗಿ  ನಮ್ಮಿಬ್ಬರನ್ನೂ ಹೈರಾಣಾಗಿಸಿದ್ದವು.. ಅಂತಹ ಸಂದರ್ಭಗಳಲ್ಲಿ ಪ್ರಭ ಬೆಡ್ ರೂಮಿನಲ್ಲಿ  ಬಳ್ಳಗಟ್ಟಲೆ ಕಣ್ಣೀರು ಹರಿಸಿದ್ದಳು. ಕೊನೆಗೆ, “ಯಾವುದೇ ಕಾರ್ಯ ಆಗುವ ಹಾಗಿದ್ದರೆ, ಯಾವ ಪ್ರಚೋದನೆ ಇಲ್ಲದೆಯೂ, ಆಗಿಯೇ ತೀರುತ್ತದೆ, ಆ ಸುವರ್ಣ ಸಮಯಕ್ಕೆ ಸರಿಯಾಗಿ”, ಅನ್ನುವಂತೆ ನಮ್ಮ ಪಾಲಿನ ಭಗವಂತ ಒಮ್ಮೆ ಕಣ್ತೆರೆದೇಬಿಟ್ಟ! ನನ್ನ ಹಳೆಯ ಕೊಲೀಗ್ ಒಬ್ಬರ ಮೂಲಕ…ಅವರ ಆಪ್ತರ ಮಗ, ಫಿಸಿಕ್ಸ್ ಲೆಕ್ಚರರ್, ಶಶಾಂಕ್ ಎಂಬೊಬ್ಬರು ಒಪ್ಪಿ ಮದುವೆ ಅಂತ ಆಯಿತು! ಶಕುಂತಲೆಯ ರೂಪ ಕೂಡ ತೆಗೆದುಹಾಕುವ ಹಾಗೇನಿರಲಿಲ್ಲ. ಶಾಂಭವಿಯಷ್ಟು ಬಣ್ಣ ಮತ್ತು ಸೌಂದರ್ಯ  ಇಲ್ಲದಿದ್ದರೂ ಸಹ. ಆದರೂ ಸಹ, ನಮ್ಮ ಶಾಂಭವಿ ಬಹಳವೇ ರೂಪವಂತೆ ಆಗಿದ್ದುದರಿಂದ, ಯಾರೇ ಶಕುಂತಲೆಯನ್ನು ನೋಡಲು ಬಂದಾಗ, ಶಾಂಭವಿಯನ್ನು ಹೊರಗೆ ಏಲ್ಲಾದರೂ ಕಳಿಸಿ, ಅವಳು ಕಾಲೇಜಿಗೆ ಹೋಗಿದ್ದಾಳೆ, ಎಂದು ಕೇಳಿದವರಿಗೆ ಸುಳ್ಳು ಹೇಳುತ್ತಿದ್ದೆವು. ಇಷ್ಟಕ್ಕೂ ಈ ಜಾತಿ! ಜಾತಿ ಯಾರ ಅಪ್ಪನ ಮನೆ ಸ್ವತ್ತು, ಅಲ್ಲವೇ…! ನನ್ನ ಅಳಿಯ, ಶಶಾಂಕ್ ಕೂಡ, ಅಂತರ್ಜಾತೀಯ ತಾಯಿತಂದೆಯ ಮಗನೇ ಆಗಿದ್ದರು. ಅದೇ ನಮಗೆ ವರಪ್ರದಾಯವಾದದ್ದು! ಆಗ ನನಗೆ ಅನಿಸಿದ್ದು ಹೀಗೆ ಮತ್ತು ಇಷ್ಟು: ನಾನು ಮತ್ತು ಪ್ರಭಾಮಣಿ ಮಾತ್ರ ಈ ಪರಿಸ್ಥಿತಿಯ “ಯಜ್ಞಪಶು”ಗಳಾಗಿರಲಿಲ್ಲ”, ಬದಲಿಗೆ ನಮ್ಮಂಥಹವರು ಈ ಜಗತ್ತಿನಲ್ಲಿ, ಕನಿಷ್ಠ ನನ್ನ ಸುತ್ತಮುತ್ತಲಿನ ಜಗತ್ತಿನಲ್ಲಿ, ಅನೇಕ- ರಿದ್ದಾರೆ ಅನ್ನಿಸಿ ಸಮಾಧಾನ ಆಗಿತ್ತು! “ಅಯ್ಯಾ, ಗೆದ್ದುಬಿಟ್ಟೆಕಣೋ, ಮನೋಹರ!” ಅಂದುಕೊಂಡು ಸಮಾಧಾನ ಪಟ್ಟಿಕೊಂಡು , ಪ್ರಭಾಳಿಗೂ ಬೆನ್ನು ತಟ್ಟಿದ್ದೆ…ಆದರೆ, ಇನ್ನೂ ಮುಂದೆ ಮುಂದೆ ಬೃಹತ್ತಾಗಿ, ಬೆನ್ನುಫಣಿಯ ಹಾಗೆ ಅದೇ ಸಾಂಕ್ರಾಮಿಕ, ಅವಳ ತಂಗಿಯ ಮೂಲಕ, ಶಾಂಭವಿಯ ಮದುವೆ ಮೂಲಕ, ಕಾಡಬಹುದು ಅನ್ನಿಸಿರಲಿಲ್ಲ… ನಮ್ಮಪ್ಪ ಅಮ್ಮನಿಗೆ ನನ್ನ ನಂತರ ಹುಟ್ಟಿದ್ದು ನನ್ನ ಇಬ್ಬರು ತಮ್ಮಂದಿರು, ಅವಳಿ ಎಂದು ಆಗಲೇ ಹೇಳಿದ್ದೇನೆ. ಆದರೂ, ಅಷ್ಟಕ್ಕೇ ಅವರಿಗೆ ನನ್ನ ಅಂತರ್ಜಾತಿ ವಿವಾಹದ ‘ಭಯಂಕರ ಭೂತ’ ಹೊಕ್ಕಂತೆ ಜಿಗುಪ್ಸೆ ಕಾಡತೊಡಗಿ,  ನನ್ನನ್ನು ದೂರ

ಶಾಂಭವಿ, ಬಣ್ಣ, ಜಾತಿ ಮುಂತಾಗಿ.. Read Post »

You cannot copy content of this page

Scroll to Top