ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಬದರ್

ಪುಸ್ತಕ ಸಂಗಾತಿ ಬದರ್ (ಅಬಾಬಿಗಳ ಸಂಕಲನ) ಮೂಲ ಲೇಖಕರ ಪರಿಚಯ ಇವರ ಪೂರ್ಣ ಹೆಸರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ ಇಸವಿಯಲ್ಲಿ ಮುಸ್ಲಿಂ ಬರಹಗಾರರ ಸಂಘವನ್ನು ಸ್ಥಾಪಿಸಿ ವ್ಯವಸ್ಥಾಪಕರಾಗಿ ಮುಸ್ಲಿಂ ಸಾಹಿತಿಗಳನ್ನು ಒಂದೇ ವೇದಿಕೆಗೆ ಕರೆದುತರುವ ಮಹತ್ವವಾದ ಕಾರ್ಯಕ್ಕೆ ನಾಂದಿ ಹಾಡಿದರು. ಪ್ರಗತಿಪರ ಮುಸ್ಲಿಂ ಬರಹಗಾರರಾಗಿ ಇವರು ಜನಮಾನಸವನ್ನು ಸೂರೆಗೊಂಡಿದ್ದಾರೆ. ಕೆಳ ಮತ್ತು ಮಧ್ಯಮ ವರ್ಗದ ಮುಸಲ್ಮಾನರ ಬದುಕಿನ ಬವಣೆಗಳೇ ಇವರ ಬರಹಗಳಲ್ಲಿರುವ ಜೀವಸೆಲೆ. . ಅನುವಾದಕರ ಪರಿಚಯ ಪೂರ್ಣ ಹೆಸರು ಧನಪಾಲ ನಾಗರಾಜಪ್ಪ. ಜೂನ್ 20, 1987ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಹುಟ್ಟಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನೆಲವಾಗಿಲು ಗ್ರಾಮದ ನಿವಾಸಿಗಳು. ವೈದ್ಯಕೀಯ ಪ್ರಯೋಗಾಲಯದ ಡಿಪ್ಲೊಮಾ ಮಾಡಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಿಂದ ವೈದ್ಯಕೀಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ================ ಅಬಾಬಿಗಳನ್ನು ಯಾಕೆ ಅವಿಷ್ಕರಿಸಿದೇನೆಂದರೆ (ಮೂಲ ಲೇಖಕರು ಮಾತುಗಳು) ವರ್ತಮಾನ ತೆಲುಗು ಸಾಹಿತ್ಯ ವಿಸ್ತೃತವಾದುದ್ದಾಗಿದೆ. ಅಸ್ತಿತ್ವದಲ್ಲಿರುವ ಅನೇಕಾನೇಕ ಹೋರಾಟಗಳ ನಿಲಯವಿದು. ಈ ಕ್ರಮದಲ್ಲಿ ಭಾಷೆಯಲ್ಲಿನ ಸಂಕ್ಲಿಷ್ಟತೆಯನ್ನು ದೂರ ಮಾಡುತ್ತ ಜನ ಸಾಮಾನ್ಯರಿಗೆ ಹತ್ತಿರವಾಗುವಂತೆ ಕಾವ್ಯ ಸಂಕ್ಷಿಪ್ತ ರೂಪವನ್ನು ಪಡೆದುಕೊಳ್ಳುತ್ತಿರುವ ದೆಶೆಯಿದು. ಇಂತಹ ಸಂದರ್ಭದಲ್ಲಿ ಮುಸ್ಲಿಂ ಕವಿಗಳಿಗೆ ತಮ್ಮ ಸಾಮಾಜಿಕ, ಸಾಂಸ್ಕೃತಿಕ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತ ಚೈತನ್ಯವನ್ನು ತುಂಬುವ ಒಂದು ಹೊಸ ರೀತಿಯ ವಚನಾ ಪ್ರಕ್ರಿಯೆಯ ಅಗತ್ಯವಿದೆ ಎಂದು ನನಗನಿಸಿತು. ಈ ಆಲೋಚನೆ ಬಂದಿದ್ದೇ ತಡ ʼಅಬಾಬಿಗಳು’ ಎಂಬ ಹೊಸ ರೀತಿಯ ವಚನಾ ಪ್ರಕ್ರಿಯೆಯನ್ನು ಅವಿಷ್ಕರಿಸುವ ಉದ್ದೇಶದಿಂದ ಈ ʼಬದರ್‌ʼ ಅನ್ನು ನಿಮ್ಮ ಮುಂದೆ ತರುತ್ತಿದ್ದೇನೆ. “ಅಬಾಬಿಗಳು’’ ಎಂಬ ಈ ಹೊಸ ರೀತಿಯ ಕಾವ್ಯ ಪ್ರಕಾರಕ್ಕೆ ನಾನು ಪಂಚಪದಿಗಳನ್ನು ಆರಿಸಿಕೊಂಡಿದ್ದೇನೆ. ಮುಸಲ್ಮಾನರ ನಡವಳಿಕೆಗೆ ಪಂಚಸೂತ್ರಗಳು ಇರುವಂತೆಯೇ ಪ್ರತಿ ಅಬಾಬಿಯೂ ಐದು ಸಾಲುಗಳಿಂದ ಮುಗಿಯುತ್ತದೆ. ಸಮಸ್ಯೆ, ವಿಷಯ ವಿಶ್ಲೇಷಣೆ, ವಿವರಣೆ, ಆತ್ಮಾವಲೋಕನ, ಸಂದೇಶ ಇಲ್ಲವೆ ವ್ಯಂಗ್ಯವಾದ ವಿಡಂಬನೆಯಿಂದ ಅಬಾಬಿಗಳು ಮುಗಿಯುತ್ತವೆ. ಅಬಾಬಿಗಳು ಎಂಬ ಈ ಹೊಸ ಕಾವ್ಯ ಪ್ರಕಾರವನ್ನು ಕೇವಲ ಮುಸ್ಲಿಂ ಕವಿಗಳೇ ಮಾತ್ರವಲ್ಲದೆ ಶೋಷಿತ ವರ್ಗಕ್ಕೆ ಸೇರಿದ ಕವಿಗಳೆಲ್ಲರೂ ಅನುಸರಿಸಬೇಕು ಎಂಬುದು ನನ್ನ ಆಕಾಂಕ್ಷೆ. ಇಂದಿನ ಕವಿಗಳಷ್ಟೇ ಅಲ್ಲದೆ ಮುಂಬರುವ ಕವಿಗಳೂ ಸಹ ಈ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ವಿನಮ್ರತೆಯಿಂದ ಆಶಿಸುತ್ತೇನೆಷೇಕ್ ಕರೀಮುಲ್ಲಾ 1.ಈ ಭೂಮಿಯ ಸುತ್ತಲೂಕಗ್ಗತಲು ಕವಿದಿದೆಸೂರ್ಯೋದಯ ಆಗುವುದೋ? ಇಲ್ಲವೋ?ಕರೀಮ್!ಇನ್ನು ಬೆಳದಿಂಗಳ ರಾತ್ರಿಗಳಿಲ್ಲ. 2.ದುಃಖದ ಮಳೆಯಲ್ಲಿತೋಯ್ದು ಮುದ್ದೆ ಆಗುತ್ತಿದ್ದೇನೆ.ಕುರುಡು ಬಸ್ತಿಗೆ ಕನಿಕರವಿಲ್ಲ.ಕರೀಮ್!ಈ ನೆಲವಿಡೀ ನನ್ನ ಸಮಾಧಿಯಂತೆ ಭಾಸವಾಗುತ್ತಿದೆ. 3.ಕುರ್ತಾದ ಮೇಲೆ ಅತ್ತರು ವಾಸನೆಕುಕ್ಷಿಯಲ್ಲಿ ಕರಕಲು ಕಮಟು ವಾಸನೆಹಸಿವಿಗೂ ಮಿಗಿಲಾದ ಗೆಳೆಯನಿಲ್ಲ.ಕರೀಮ್!ರಾತ್ರಿ ಯಾಕೋ ಗಹಗಹಿಸಿ ನಗುತ್ತಿದೆ. 4.ರಿಕ್ಟರ್ ಮಾಪಕದ ಮೇಲೆ ದೇಶಭಕ್ತಿಬೀಳುತ್ತ ಏಳುತ್ತ ಪರದಾಡುತ್ತಿದೆ.ಗುಂಡಿಗೆಯನ್ನು ಸೀಳಿ ತೋರಿಸಂತಾನೆ.ಕರೀಮ್!ಕಾಷಾಯದ ಮೊಸಳೆ ಕಚ್ಚಿಹಿಡಿದಿದೆ ಅಂತ ಹೇಳು! 5.ಅವನ ಅಂಬುಮಹಾಟವಿಯನ್ನು ಸುಡುತ್ತಲೇ ಇದೆ.ಮೊಹಲ್ಲಾಗಳೆಲ್ಲಾ ಖಾಂಡವ ವನಗಳೇ!ಕರೀಮ್!ನಾಗಾಸ್ತ್ರದಂತೆ ಗುರಿ ತಪ್ಪದಿರಲಿ. 6.ಎದೆಯಲ್ಲಿ ಧಮನಿಗಳುಮುದುಡಿಕೊಳ್ಳುತ್ತಿವೆಭಯದಿಂದಲೋ, ಉದ್ವೇಗದಿಂದಲೋಕರೀಮ್!ಈ ರಾಜ್ಯ ಎಷ್ಟು ಮಂದಿಯ ಉಸಿರು ಕಸಿದಿದೆಯೋ! 7.ಹಕ್ಕಿಗಳೇ ಅಲ್ಲವೆ ಅಂತಬಾಣಗಳ ಬಿಡಬೇಡಅಬಾಬಿಲ್ ಪಕ್ಷಿಗಳಾಗಿ ದಂಡು ಕಟ್ಟುತ್ತವೆಕರೀಮ್!ಅಬ್ರಹಾ ಸೇನೆಯ ಗತಿ ಹೇಳು. 8.ಅವನ ಕಾರಿನ ಅಡಿಯಲ್ಲಿನಾವು ನಾಯಿಯ ಮರಿಗಳಂತೆಅವಕ್ಕೂ ಕೋರೆಗಳಿರುತ್ತವೆ ಅಂತ ಹೇಳು.ಕರೀಮ್!ಕರ್ಬಲಾ ವಿಸ್ತರಿಸುತ್ತಿದೆ ನೋಡು. 9.ಅವನು ನಮ್ಮನ್ನುಎದುರುಮತದವರು ಅಂತಾನೆತಲೆಗೆ ಮೆಟ್ಟುಕೊಂಡಿರುವ ಜೋಡುಗಳನ್ನು ನೋಡಿಕೊಳ್ಳುವುದಿಲ್ಲಕರೀಮ್!ನೀನು ಕಾಲುಗಳಿಂದಲೇ ನಡೆ. 10.ನನ್ನ ವರ್ಣಮಾಲೆಯ ಮೇಲೆಅವರು ಸಂಕೋಲೆಗಳ ಬಲೆ ಬೀಸಿದ್ದಾರೆ.ಅವು ಪರಿವಾಳಗಳಾಗಿ ಅಂಬರಕ್ಕೆ ಹಾರಿದವು.ಕರೀಮ್!ಹುರಿಯನ್ನು ಕತ್ತರಿಸುವ ಇಲಿ ಎಲ್ಲಿ?! 12.ಎದೆಯ ವೇದನೆಹಳೆಯ ಕಬ್ಬಿಣದ ಪೆಟ್ಟಿಗೆಯಂತಲ್ಲದೆಹೊಸ ಅಂಗಿಯಂತೆ ಹೊಳೆಯುತ್ತಿದೆಕರೀಮ್!ಹೊಲಿದ ಚಿಂದಿಗಳನ್ನು ಉಡುವುದರಲ್ಲಿ ನೀನು ದಿಟ್ಟನೇ. ====== ತೆಲುಗು ಮೂಲ: ಷೇಕ್ ಕರೀಮುಲ್ಲಾಕನ್ನಡಕ್ಕೆ : ಧನಪಾಲ ನಾಗರಾಜಪ್ಪ

ಬದರ್ Read Post »

ಕಾವ್ಯಯಾನ

ಆತ್ಮ ಚೈತನ್ಯ

ಕವಿತೆ ಆತ್ಮ ಚೈತನ್ಯ ವಸುಂಧರಾ ಕದಲೂರು ಹೌದು,ಸದಾ ಚೈತನ್ಯಶೀಲರಾಗಿರುವನಾವು ಆಗಾಗ್ಗೆ ಮಂಕಾಗುತ್ತೇವೆ. ಚೈತನ್ಯವು ಬೇರುಬಿಟ್ಟ ಆಲದಮರದ ಬಿಳಲುಗಳೇನಲ್ಲ! ಆಗಸದ ವಿಸ್ತಾರದ ಕ್ಯಾನ್ವಸ್ಸಿನಹಿನ್ನೆಲೆಯಲಿ ರಂಗು ರಂಗಿನೋಕುಳಿಆಡುವ ಚಿತ್ತಾರದ ಮೇಘಮಾಲೆ;ಕ್ಷಣ ಕ್ಷಣವೂ ಬದಲಾಗುವಗಡಿಯಾರದ ಮುಳ್ಳಿನ ಚಲನೆ; ಹಕ್ಕಿ ಗೂಡೊಳಗಿನ ಜೀವಂತಿಕೆಯಕಾವಿಗೆ ಕಾದು ಕೂತ ಪುಟ್ಟ ಮೊಟ್ಟೆ.ರೆಕ್ಕೆ ಬಲಿತ ಮೇಲೆ ಗಗನ ಗಾಮಿ. ಚೈತನ್ಯವು ನಿತ್ಯ ನೂತನವೂ ನಿರಂತರತಾರುಣ್ಯಪೂರ್ಣವೂ ಆಗಿರಲುಸಾಧ್ಯವಿಲ್ಲ. ಸತ್ಯದ ಒಳ ಹೂರಣದಮೇಲೆ ಹುಸಿ ಸುಳ್ಳಿನ ಹೊರಕವಚ. ಚೈತನ್ಯದ ವಾಸ್ತವತೆ ಸಾವಿನಂತೆ.ಮರುಹುಟ್ಟಿನ ನಿರೀಕ್ಷಣೆಯಲ್ಲಿಅಲೆವ ಆತ್ಮಜ್ಯೋತಿ! ಜನ್ಮಾಂತರಗರ್ಭದೊಳಗಿನ ಭ್ರೂಣ ಪ್ರಣತಿ! ******************************************

ಆತ್ಮ ಚೈತನ್ಯ Read Post »

ಇತರೆ

ಮಕ್ಕಳಿಗಾಗಿ ಅನುಭವ ಕಥನ ಕಾಡಂಚಿನಊರಿನಲ್ಲಿ….. ವಿಜಯಶ್ರೀ ಹಾಲಾಡಿ ವಿಜಿ ಸಣ್ಣವಳಿರುವಾಗ, ಅಜ್ಜಿ ಅಂದಿಗೆ ಸುಮಾರು ಐವತ್ತೈದು-ಅರವತ್ತು ವರ್ಷಗಳ ಹಿಂದೆ (ಅಂದರೆ ಇವತ್ತಿಗೆ ತೊಂಬತ್ತು-ತೊಂಬತ್ತೈದು ವರ್ಷಗಳ ಹಿಂದೆ) ನಡೆದ ಘಟನೆಯನ್ನು ಹೇಳುತ್ತಿದ್ದರು. ಅಜ್ಜಿಯ ಮಾವ ಮುಂತಾದ ಹಿರಿಯರಿದ್ದ ಸಮಯವದು. ಆಗ ನಮ್ಮೂರು `ಮುದೂರಿ’ಯ ಸುತ್ತಲಿನ ಕಾಡುಗಳಲ್ಲಿ ಹುಲಿಯಿತ್ತಂತೆ! ಎಷ್ಟು ಹುಲಿಗಳಿದ್ದವೋ, ತಿಳಿಯದು, ಆದರೆ ಊರಿಗೆ ಬಂದು ದನಗಳನ್ನು ಕೊಂಡೊಯ್ದ ಅನೇಕ ಪ್ರಸಂಗಗಳಿದ್ದವು. ಹಟ್ಟಿಯ ಗೋಡೆಯನ್ನು ಮಣ್ಣಿನಿಂದ ಗಟ್ಟಿಯಾಗಿ ನಿರ್ಮಿಸಿ ಬಂದೋಬಸ್ತು ಮಾಡಿದ್ದರೂ ಬಾಗಿಲು ಸ್ವಲ್ಪ ಸದರ ಇದ್ದರೆ ಅದರ ಮೂಲಕ ಹಟ್ಟಿಗೆ ನುಗ್ಗಿ ರಾತ್ರೋರಾತ್ರಿ ದನಗಳನ್ನು ಹೊತ್ತೊಯ್ಯುತ್ತಿತ್ತು.  ಹಾಗೊಂದು ಸಲ ಹತ್ತಿರದಲ್ಲೇ ಹುಲಿಯ ಭೀಕರ ಘರ್ಜನೆ ಕೇಳಿ ಮನೆಯವರೆಲ್ಲ ನಡುಗಿ ಕುಳಿತಿದ್ದಾಗ ಹಟ್ಟಿಯಿಂದ ಒಂದು ದನವನ್ನು ಕೊಂಡೊಯ್ದಿತ್ತು ಎಂಬ ಭೀಕರ ಘಟನೆಯನ್ನುಅಜ್ಜಿ ಹೇಳಿದರು. ಮೇಯಲು ಬಿಟ್ಟಾಗಲೂ ದನಕರುಗಳನ್ನು ಕದ್ದುಕೊಂಡು ಹೋಗುತ್ತಿತ್ತು ಎಂದರು. ಈ ಘಟನೆಗಳನ್ನು ಕೇಳಿದ ನಂತರ ವಿಜಿಗೆ ಸುಮಾರು ಸಲ ಹುಲಿ ಬಂದು ತಮ್ಮ ದನಗಳನ್ನು ತೆಗೆದುಕೊಂಡು ಹೋದಂತೆ; ತಡೆಯಲು ಹೋದ ಊರಿನವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದಂತೆ ಕನಸು ಬೀಳುತ್ತಿತ್ತು! ಅಜ್ಜಿ ಹೇಳಿದ ಹಳೆಯ ಕಾಲದಲ್ಲಿ ಹುಲಿಗಳು ಜನರಿಗೆ ಬಹಳಷ್ಟು ಕಾಟ ಕೊಟ್ಟಿದ್ದರೂ ವಿಜಿ ಸಣ್ಣವಳಿರುವಾಗ ಅಂತದ್ದೇನೂ ಇರಲಿಲ್ಲ. ಆದರೆ ಹುಲಿಯ ಬದಲಿಗೆ `ಕುರ್ಕ’ ಎಂದು ಕರೆಯುವ ಸಣ್ಣ ಚಿರತೆ ಇತ್ತು. ಇದು ನಾಯಿಗಳನ್ನು ಕದ್ದೊಯ್ಯುತ್ತಿತ್ತು. ಕಾಡಿನೊಳಗೇ ಇರುವ ಕೆಲ ಮನೆಗಳ ನಾಯಿಗಳನ್ನು ಕೊಂಡೊಯ್ಯುತ್ತಿತ್ತು. ಪ್ರೀತಿಯ ನಾಯಿಗಳನ್ನು ಕಳೆದುಕೊಂಡ ಅಂತಹ ಮನೆ ಜನರ ನೋವಿನ ಪ್ರಕರಣಗಳನ್ನು ರುಕ್ಮಿಣಿಬಾಯಿ ಆಗಾಗ ಹೇಳುತ್ತಿದ್ದರು. ಆದರೆ ವಿಜಿಯ ಮನೆ ಕಾಡಿನಿಂದ ಹೊರಗೆ ತೋಟದ ಪಕ್ಕದಲ್ಲಿದ್ದುದರಿಂದ ಇಂತಹ ಅನುಭವ ಆಗಿರಲಿಲ್ಲ. ಅವರೂರಿಗೆ ಸಮೀಪದಲ್ಲೇ ಇದ್ದ `ಹರಿನ್‌ಗುಡ್ಡೆ’ ಎಂಬ ದೊಡ್ಡ  ಬೆಟ್ಟದಲ್ಲಿ ಹುಲಿ ಇದೆ ಎಂದು ಜನ ಹೇಳುತ್ತಿದ್ದರು. ಅದು ಸುತ್ತಮುತ್ತಲಿನ ದಟ್ಟ ಕಾಡುಗಳಲ್ಲಿ ರಾತ್ರಿ ತಿರುಗುತ್ತದೆ ಎಂದು ಮಾತಾಡಿಕೊಳ್ಳುತ್ತಿದ್ದರು. ಹಾಗಾಗಿ ರಾತ್ರಿ ಹೊತ್ತುಅಂತಹ ಜಾಗಗಳಿಗೆ ಯಾರೂ ಕಾಲು ಹಾಕುತ್ತಿರಲಿಲ್ಲ. ಮುದೂರಿನಲ್ಲಿಕಬ್ಬಿನಾಲೆ (ಅಲೆಮನೆ) ಪ್ರತೀ ವರ್ಷ ನಡೆಯುತ್ತಿತ್ತು. ಸುತ್ತಮುತ್ತ ಕಬ್ಬು ಬೆಳೆದವರು ಅಲೆಮನೆಗೆ ಸಾಗಿಸಿ ಬೆಲ್ಲ ಮಾಡುತ್ತಿದ್ದರು. ಈ ಕಬ್ಬಿನಾಲೆ ಆಗುತ್ತಿದ್ದುದು ಚಳಿಗಾಲದಲ್ಲಿ. ಆಗ ರಾತ್ರಿಯೆಲ್ಲ ಆಲೆಮನೆಯಲ್ಲಿ ಕೋಣಗಳನ್ನು ಓಡಿಸುತ್ತ ಹಾಡುತ್ತಿದ್ದ ಹಾಡು ಕಿವಿಗೆ ಬೀಳುತ್ತಿತ್ತು. ಇಂತಹ ಸಿಹಿ ಕಬ್ಬಿನಗದ್ದೆಗೆ ನರಿಗಳು ಬರುತ್ತಿದ್ದವು. ರಾತ್ರಿ ಬಂದು ಕಬ್ಬು ತಿಂದು ಹೋಗುತ್ತಿದ್ದವು. ಬಹುಶಃ ಕಬ್ಬು ತಿಂದ ಖುಷಿಯಲ್ಲೋ ಏನೋ ಕೂಕೂಕೂ ಎಂದು ಜೋರಾಗಿ ಊಳಿಡುತ್ತಿದ್ದವು. ಈ ಕೂಗಂತೂ ಮನುಷ್ಯರದ್ದೇ ಸ್ವರ ಎಂಬಷ್ಟರಮಟ್ಟಿಗೆ ಹೋಲಿಕೆಯಾಗುತ್ತದೆ! ಮನೆಯಲ್ಲಿ ಬೆಚ್ಚಗೆ ಮಲಗಿದ ವಿಜಿಗೆ ಈ ಕೂಗು ಕೇಳಿದೊಡನೆ ಕಬ್ಬು, ಸೌತೆಕಾಯಿ ತಿನ್ನುವ ವಿಚಿತ್ರ ಪ್ರಾಣಿ ನರಿ ಇಷ್ಟವೆನಿಸಿ ಅದನ್ನು ನೋಡಬೇಕೆನಿಸುತ್ತಿತ್ತು. ಆದರೆ ಅದನ್ನು ಕಾಡಿನಲ್ಲಿ ನೋಡಿದ್ದು ಒಂದೇ ಸಲ. ಉಳಿದಂತೆ ಝೂಗಳಲ್ಲಿ ನೋಡಿದ್ದಷ್ಟೇ. ಕತೆಗಳಲ್ಲಿ ಓದಿದಂತೆ ನರಿ ಮೋಸ ಮಾಡುವ ಪ್ರಾಣಿ ಎಂದು ಒಪ್ಪಿಕೊಳ್ಳಲು ಅವಳಿಗೆಂದೂ ಸಾಧ್ಯವಾಗಲೇಇಲ್ಲ. “ಮೋಸ ಮಾಡುವುದು ಮನುಷ್ಯರು ಮಾತ್ರ, ಪ್ರಾಣಿಗಳಲ್ಲ” ಎನಿಸುತ್ತಿತ್ತು. ನರಿಗಳ ಕುರಿತು ಅವರೂರಿನ ಜನರು ಒಂದು ಮಾತು ಹೇಳುತ್ತಿದ್ದರು. ಅದು ತಮಾಷೆಯಾಗಿ ಕಂಡರೂ ಜನಕ್ಕೆ ಅದು ನಿಜವೆಂದೇ ನಂಬಿಕೆಯಿತ್ತು. ಕಬ್ಬು ತಿನ್ನುವಾಗ ನಡುನಡುವೆ ಕೆಲಭಾಗ ಕೆಂಪಾಗಿ ಬಿರುಕುಬಿಟ್ಟು ಹಾಳಾಗಿರುತ್ತದಲ್ಲ; `ನರಿ ಪೂಂಕಿ ಬಿಟ್ಟು ಹಾಗಾದದ್ದು’ ಎಂದು ಜನ ಹೇಳುತ್ತಿದ್ದರು! ರಾತ್ರಿ ಕಬ್ಬಿನಗದ್ದೆಗೆ ಇಳಿದು ಚೆನ್ನಾಗಿ ತಿಂದು ಆಮೇಲೆ ಹೀಗೆ ಕಿಡಿಗೇಡಿತನ ಮಾಡಿ ನರಿಗಳು ವಾಪಸ್ಸಾಗುತ್ತವಂತೆ! ವಿಜಿ ಕೂಡಾ ಇದು ನಿಜವೆಂದೇ ತಿಳಿದುಕೊಂಡಿದ್ದಳು. ಆಮೇಲೆ ಸ್ವಲ್ಪ ದೊಡ್ಡವಳಾದ ನಂತರ ಅದು ಕಬ್ಬಿಗೆ ಬರುವ ಎಂತದೋ ರೋಗ ಎಂದು ಗೊತ್ತಾಯಿತು. ಆದರೂ ಪ್ರತೀ ಸಲ ಕಬ್ಬು ತಿನ್ನುವಾಗ ಹಾಳಾದ ಭಾಗವನ್ನು ನೋಡಿದಾಗ ನರಿಯ ಈ ಪ್ರಕರಣ ನೆನಪಾಗದೇ ಹೋಗುವುದಿಲ್ಲ! ಬಿಸಿಲು-ಮಳೆ ಒಟ್ಟಾಗಿ ಬಂದರೆ “ಹಾ ನರಿಯಣ್ಣನ್ ಮದಿ ಆತ್ತ್ಕಾಣಿ ಮಕ್ಳೇ ಈಗ” ಎನ್ನುತ್ತಿದ್ದರು ಅಜ್ಜಿ ಮತ್ತು ಆಚೆಮನೆ ದೊಡ್ಡಮ್ಮ. ಬಿಸಿಲು-ಮಳೆ ಬಂದಾಗಷ್ಟೇ ನರಿಗಳ ಮದುವೆ ನಡೆಯುತ್ತದೆ ಎಂದು ವಿಜಿಯಂತಹಾ ಮಕ್ಕಳು ಕಲ್ಪಿಸಿಕೊಂಡೂ ಇದ್ದರು! ನರಿಗಳು ‘ಕೂಕೂಕೂ’ ಎಂದು ಗುಂಪಾಗಿ ಕೂಗುತ್ತವಲ್ಲ; ಅದು ರಾತ್ರಿ ಹೊತ್ತು ಮಾತ್ರ. ಕಗ್ಗತ್ತಲಲ್ಲಿ ಕೇಳುವ ಆ ವಿಚಿತ್ರ ಕೂಗು ಬಾಲ್ಯದ ಸಿಹಿನೆನಪುಗಳಲ್ಲಿ ಒಂದು. ವಿಶೇಷವೆಂದರೆ ದೀಪಾವಳಿ ಹಬ್ಬದ ದಿನ ಗದ್ದೆಗೆ ದೀಪವಿಟ್ಟ ನಂತರ ಮನುಷ್ಯರೂ ನರಿಗಳಂತೆ ಕೂಕೂಕೂ ಎಂದು ಕೂಗು ಹಾಕುತ್ತಿದ್ದರು! ಇದಾದರೆ ಭೂಮಿಯ ರಾಜ ಬಲೀಂದ್ರನನ್ನು ಕರೆಯುವ ಸಲುವಾಗಿ ವರ್ಷಕ್ಕೊಮ್ಮೆ ಹಬ್ಬ ಮಾಡಿ ಕರೆಯುವುದು.  ಆದರೆ ನರಿಗಳು ಯಾರನ್ನು ಕರೆಯಲು ಕೂಗುತ್ತವೋ ವಿಜಿಗೆ ಗೊತ್ತಿರಲಿಲ್ಲ. ಕಬ್ಬು ತಿಂದ ಖುಷಿಯಲ್ಲಿ ಅವು `ದಿಗಣ’ ಹಾರಿ ಕೂಗುವುದು ಎನ್ನುತ್ತಿದ್ದರು ಅಜ್ಜಿ! ಅದೇ ನಿಜವೆಂದು ಅವಳೂ ನಂಬಿದ್ದಳು. ಆದರೆ ಕತೆಗಳಲ್ಲಿ ಓದಿದ ಕಳ್ಳನರಿ, ಸುಳ್ಳನರಿ, ಕುತಂತ್ರಿ ನರಿ, ಮೋಸಗಾರ ನರಿಯ ಪಾತ್ರ ಎಂದೂ ವಿಜಿಯೊಳಗೆ ಇಳಿಯಲೇ ಇಲ್ಲ. ನರಿಯೆಂದರೆ ಮುದ್ದಿನಪ್ರಾಣಿ ಅವಳಿಗೆ! ಗಾಢ ರಾತ್ರಿಗಳಲ್ಲಿ ಕಬ್ಬು, ಸೌತೆ ತಿಂದು ಹಾಡು ಹೇಳುವ ಜೀವನಪ್ರೀತಿಯ ನರಿ ಅವಳಿಗೆ ಸದಾ ಇಷ್ಟ. ಮನೆ ಎದುರಿನ ಗದ್ದೆಯಲ್ಲಿ ಬಸಳೆ ಚಪ್ಪರವನ್ನು ಹಾಕುತ್ತಿದ್ದರು. ಮಳೆಗಾಲದ ಮೂರ್ನಾಲ್ಕು ತಿಂಗಳುಗಳನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಬಸಳೆ ಚಪ್ಪರ ಇದ್ದೇ ಇರುತ್ತಿತ್ತು. ಉಳಿದ ತರಕಾರಿಗಳೂ ಇರುತ್ತಿದ್ದವು. ಕಾಡುಹಂದಿ ರಾತ್ರಿ ಬಂದು ಈ ಗಿಡಗಳ ಬುಡವನ್ನು ಒಕ್ಕಿ ಹೋಗುತ್ತಿತ್ತು. ಬೆಳಿಗ್ಗೆ ಹೋಗಿ ನೋಡುವಾಗ ಅಗೆದು ಹಾಕಿದ ಮಣ್ಣು; ಕೆಲವು ಗಿಡಗಳು ಬುಡಮೇಲಾಗಿ ಬಿದ್ದದ್ದು ಕಾಣುತ್ತಿತ್ತು. ರಾತ್ರಿ ಯಾವ ಮಾಯಕದಲ್ಲೋ ಬಂದು ಹೀಗೆಲ್ಲ ಕರಾಮತ್ತು ಮಾಡಿಹೋದ ಆ ಹಂದಿಗೆ ಅಜ್ಜಿ ಬಯ್ಯುತ್ತಿದ್ದರು. ಕಾಡುಹಂದಿ ಹೀಗೆ ಅಗೆದು ಹೋಗುವುದು ಯಾಕೆ ಎಂದು ವಿಜಿ ಕೇಳಿದಾಗ ಅದು ಗಿಡದ ಗಡ್ಡೆ ಹುಡುಕುವುದುಎಂದು ಅಜ್ಜಿ ಹೇಳುತ್ತಿದ್ದರು. ಅಂದರೆ ಬಸಳೆಯನ್ನು ಗೆಣಸೋ, ಮರಸಣಿಗೆಯೋ, ಕೆಸವೋ, ಮರಗೆಣಸೋ ಎಂದು ಭ್ರಮಿಸಿ, ಅಗೆದು ನೋಡುತ್ತಿತ್ತೇನೋ ಪಾಪದ್ದು! ‘ಕಾಡುಹಂದಿಗೆ ದೊಡ್ಡ ಕೊಂಬಿದೆ, ಅದರಿಂದ ನೆಲ ಅಗೆಯುತ್ತದೆ’ ಎಂದು ವಿಜಿ ಕಲ್ಪಿಸಿಕೊಂಡಿದ್ದಳು. ಆದರೆ ಮತ್ತೆ ಗೊತ್ತಾಯಿತು; ಕೊಂಬಲ್ಲ, ಅದಕ್ಕಿರುವುದು ಬಾಯಿಂದ ಹೊರಹೊರಟ ಬಲಿಷ್ಠ ಹಲ್ಲು ಎಂದು. ಕೆಲವೊಮ್ಮೆ ಸುಮ್ಮ ಸುಮ್ಮನೆ ಗದ್ದೆಯಕಂಟ(ಬದು)ಗಳನ್ನೆಲ್ಲ ಅಗೆದುಹಾಕಿ ಹೋಗುತ್ತಿತ್ತು. ಅಲ್ಲಿ ಹುಳಗಳನ್ನು ಹುಡುಕುತ್ತಿತ್ತೋ ಏನೋ! “ಈ ಹಂದಿಯಿಂದ ಇರಸ್ತಿಕೆ ಇಲ್ಲ” ಎಂದು ಅಜ್ಜಿ ಗೊಣಗುತ್ತಿದ್ದರು. ಇಂತಹ ಹಂದಿ ಮತ್ತು ಇತರ ಪ್ರಾಣಿಗಳ ಬೇಟೆಗಾಗಿ ಅವರೂರಿನ ಜನ ವರ್ಷಕ್ಕೊಂದು ಸಲ  ಹೋಗುತ್ತಿದ್ದರು. ನಾಯಿಗಳನ್ನು ಕರೆದುಕೊಂಡು ವಿವಿಧ ರೀತಿಯ ಬಲೆಗಳನ್ನೆಲ್ಲ ಹಿಡಿದು ಹುರುಪಿನಿಂದ ಅವರೆಲ್ಲ ಬೇಟೆಗೆ ಹೋಗುವುದನ್ನು ನೋಡಿ ಅದೇನೋ ಸಂಭ್ರಮವಿರಬೇಕು ಎಂದು ವಿಜಿ ಮೊದಮೊದಲು ಊಹಿಸಿದ್ದಳು. ನಾಯಿಗಳಂತೂ ಕಿವಿಗೆ ಗಾಳಿ ಹೊಗ್ಗಿದಂತೆ ಹತ್ತು ದಿಕ್ಕಿಗೆ ಮೂಗುಗಾಳಿ ಹಿಡಿಯುತ್ತಾ ನೆಗೆದು ಬಿಡುತ್ತಿದ್ದವು. ಅವುಗಳ ಕಾತುರ, ಉದ್ವೇಗ, ಚುರುಕುತನ ವರ್ಣಿಸಲಸಾಧ್ಯ. ಆದರೆ ಬೇಟೆ ಎಂದರೆ ಹೇಗಿರುತ್ತದೆಂದು ವಿಜಿಗೆ ಗೊತ್ತಿರಲಿಲ್ಲ. ಕ್ರಮೇಣ, ಜನರು ಹೆಗಲ ಮೇಲೆ ತೂಗುಹಾಕಿಕೊಂಡು ಬರುವ ಮೊಲ, ಹಂದಿ ಮತ್ತಿತರ ಸತ್ತ ಪ್ರಾಣಿಗಳನ್ನು ನೋಡಿ ಬೇಟೆಯೆಂದರೆ ಏನೆಂದು ತಿಳಿಯಿತು. ವಿಜಿಯ ಮನೆ ಮೆಟ್ಟಿಲಿನಿಂದ ಮುಂದಿನ ಹೆಜ್ಜೆ ಇಟ್ಟರೆ ಅದೇ ಗದ್ದೆ! ಮಳೆಗಾಲದಲ್ಲಂತೂ ನೀರು, ಕೆಸರು ಅಥವಾ ಬತ್ತದ ಸಸಿಗಳನ್ನು ಒಳಗೊಂಡ ಈ ಗದ್ದೆ ಹಲವು ರೂಪಗಳಲ್ಲಿ ಕಾಣಿಸುತ್ತಿತ್ತು. ಗದ್ದೆಯಲ್ಲಿದ್ದ ಕಪ್ಪೆಗಳೆಲ್ಲ ಮಳೆಗಾಲದ ರಾತ್ರಿ ಕೂಗುತ್ತಾ ಅದೇ ಒಂದು ದೊಡ್ಡ ಶ್ರುತಿ ಹಿಡಿದ ಸಂಗೀತ ಸಭೆಯಂತೆ ಕೇಳುತ್ತಿತ್ತು. ಈ ಕಪ್ಪೆಗಳಿಗೂ ವಿಜಿಯ ಮನೆ ಸದಸ್ಯರಿಗೂ ಹತ್ತಿರದ ಸಂಬಂಧ!  ‘ಗೋಂಕ್ರಕಪ್ಪೆ’ ಎಂದು ಕರೆಯುವ ದೊಡ್ಡ ಕಪ್ಪೆಯನ್ನು ಕಂಡರಂತೂ ವಿಜಿಯಂತಹ ಮಕ್ಕಳು ಎರಡು ಹೆಜ್ಜೆ ಹಿಂದೆ ಹಾರಿ ಹೆದರಿಕೊಳ್ಳುತ್ತಿದ್ದವು. ದೊಡ್ಡ, ಉರುಟು ಕಣ್ಣಿನ ಗ್ವಾಂಕ್ರ ಕಪ್ಪೆಗಳು ತೆಂಗಿನಕಟ್ಟೆಯಲ್ಲಿ, ಹೂವಿನ ಗಿಡಗಳ ಅಡಿಯಲ್ಲಿ ಹುಲ್‌ಕುತ್ರೆಯ ಅಡಿಯಲ್ಲಿ ಎಲ್ಲೆಲ್ಲೋ ಕುಳಿತುಕೊಳ್ಳುತ್ತಿದ್ದವು. ಕೆಸರಿನ ಬಣ್ಣಕ್ಕಿರುವ ಅವು ಫಕ್ಕನೆ ಕಾಣುತ್ತಿರಲಿಲ್ಲ. ಹತ್ತಿರ ಹೋದಾಗ ಚಂಗನೆ ಹಾರಿ ಹೆದರಿಸುತ್ತಿದ್ದವು! ಅವು ಕೂಗುವುದೂ ‘ಗ್ವಾಂಕ್ರ್  ಗ್ವಾಂಕ್ರ್ ‘ ಎಂಬ ದೊಡ್ಡ ಶಬ್ದದಲ್ಲಿ! ಬೇಸಗೆ ಕಳೆದು ಮೊದಲ ಮಳೆ ಬೀಳುವ ಸಮಯದಲ್ಲಿ ಸೂಚನೆ ಕೊಡುವುದು ಈ ಗ್ವಾಂಕ್ರ ಕಪ್ಪೆಗಳೇ! ಎಲ್ಲೋ ದೂರದಲ್ಲಿ ಮಳೆ ಬರುವಾಗಲೇ ಅಥವಾ ಮಳೆ ಬರುವ ವಾತಾವರಣ ಉಂಟಾದಾಗಲೇ ಇವುಗಳಿಗೆ ಗೊತ್ತಾಗುತ್ತೆಂದು ಕಾಣುತ್ತದೆ. ಒಂದೇ ಸಮನೆ ಕೂಗಲು ಶುರು ಮಾಡುತ್ತಿದ್ದವು. ಹಾಗೆ ಕಪ್ಪೆಗಳು ಕೂಗಿದಾಗ ‘ಹೋ ಮಳೆ ಬರುತ್ತದೆ’ ಎಂಬ ಖುಷಿ ಜನರಲ್ಲಿ ಮೂಡುತ್ತಿತ್ತು. ಇವಲ್ಲದೆ ಇತರ ಸಣ್ಣ ಸಣ್ಣ ಕಪ್ಪೆಗಳೂ ಇದ್ದವು. ಇವು ಆಗಾಗ ನೇರ ಮನೆಯೊಳಗೇ ಪ್ರವೇಶಿಸುತ್ತಿದ್ದವು. ಹಿಡಿಕಟ್ಟಿನಲ್ಲಿ ಓಡಿಸಿ ಹೊರಹಾಕಲು ಪ್ರಯತ್ನಿಸಿದರೆ ಛಲಬಿಡದೆ ಜಗಲಿಯಿಂದ ಚಾವಡಿಗೆ, ಪಡಸಾಲೆಗೆ, ಅಲ್ಲಿಂದ ಒಳಕೋಣೆಗೆ ಹೀಗೆ ಮನೆಯೊಳಗೇ ಹಾರುತ್ತ ಪಜೀತಿ ಮಾಡುತ್ತಿದ್ದವು. ಹಾಗಾಗಿ ರಾತ್ರಿ ಇವು ಒಳಗೆ ಬಂದಾಗ ಹಾರದಂತೆ ಒಂದು ಪಾತ್ರೆ ಮುಚ್ಚಿಟ್ಟು ಮರುದಿನ ಬೆಳಿಗ್ಗೆ ಹೊರಗೆ ಓಡಿಸುತ್ತಿದ್ದುದೂ ಇದೆ. ಈ ಕಪ್ಪೆಗಳ ಒಂದು ದುರ್ಗುಣವೆಂದರೆ ಉಚ್ಚೆ ಹಾರಿಸುವುದು. ಓಡಿಸಲು ಹೋದ ಕೂಡಲೇ ಉಚ್ಚೆ ಹಾರಿಸಿ ತಪ್ಪಿಸಿಕೊಳ್ಳುತ್ತಿದ್ದವು! ಬೆಕ್ಕು ನಾಯಿಗಳು ಇವನ್ನು ಮುಟ್ಟಲು ಹೋದರೆ ಕಣ್ಣಿಗೋ, ಮೂಗಿಗೋ, ಬಾಯಿಗೋ ಇವು ಹಾರಿಸಿದ ಉಚ್ಚೆ ಕುಡಿದುಕೊಂಡು ಸಪ್ಪೆ ಮುಖ ಹಾಕಿ ವಾಪಸ್ಸು ಬರುತ್ತಿದ್ದವು! ಆದರೆ ಇವು ಎಷ್ಟೇ ಉಪದ್ರ ಕೊಟ್ಟರೂ ಯಾರೂ ಕೊಲ್ಲುತ್ತಿರಲಿಲ್ಲ. “ಕಪ್ಪೆಕೊಂದ್ರೆ ಪಾಪ” ಎಂಬ ಆಡುಮಾತನ್ನುಎಲ್ಲರೂ ನಂಬುತ್ತಿದ್ದರು. ವಿಜಿಯ ಮನೆಯಲ್ಲಿ ಯಾರೂ ಯಾವತ್ತೂ ಒಂದೇ ಒಂದು ಕಪ್ಪೆಯನ್ನು ಹೊಡೆದದ್ದು, ಕೊಂದದ್ದನ್ನು ಅವಳು ನೋಡಿಲ್ಲ, ಇನ್ನು ಮರಕಪ್ಪೆಗಳೆಂದರೆ ವಿಜಿಗೆ ಭಾರೀ ಹೆದರಿಕೆ. ಇವು ಒಳಗೆ ಬಂದರೆ ಹೊರಹಾಕಲು ಸಾಧ್ಯವೇ ಇಲ್ಲ! ಕಡ್ಡಿಯಲ್ಲಿ ಮುಟ್ಟಲು ಹೋದರೆ ತಿರುಗಿ ಮುಖದ ಕಡೆಗೇ ಹಾರುತ್ತವೆ. ಇವುಗಳಿಗೆ ಮನುಷ್ಯರಂತೆ ಬುದ್ಧಿ ಗಿದ್ದಿ ಇದೆಯೇನೋ ಎಂದು ಸಂಶಯವಾಗುತ್ತಿತ್ತು ಅವಳಿಗೆ! ವಿಚಿತ್ರವಾಗಿ ವರ್ತಿಸುವ ಇವುಗಳು ಮೈಮೇಲೆ ಹಾರಿ ಕುಳಿತುಕೊಳ್ಳಲು ಮನುಷ್ಯನ ಕಡೆಗೇ ಹಾರುತ್ತವೆ. ಅದಲ್ಲದೆ ಮನೆಯ ಆಯಕಟ್ಟಿನ ಯಾವುದಾದರೂ ಜಾಗದಲ್ಲಿ ಕುಳಿತು ಅಶರೀರವಾಣಿ ಹೊರಡಿಸುತ್ತವೆ. ಮನೆಯೊಳಗೇ ಅವಿತುಕೊಂಡಿದ್ದರೂ ಇವುಗಳನ್ನು ಹುಡುಕುವುದು ಕಷ್ಟ. ಕಾಲುಗಳನ್ನು ಅಗಲವಾಗಿ ಹರಡಿಕೊಂಡು ಗೋಡೆಯ ಮೇಲೆ ಚಲಿಸುವ ಮರಕಪ್ಪೆಯನ್ನು ಕಂಡರೆ ಭಯವಾಗಿ ಆ ಜಾಗದಿಂದಲೇ ದೂರ ಓಡಿಹೋಗುತ್ತಿದ್ದಳು ವಿಜಿ. ಒಮ್ಮೊಮ್ಮೆ ಬಚ್ಚಲು ಮನೆಯೊಳಗೆ, ಕೋಣೆಯೊಳಗೆ ಕುಳಿತು ಇವು ಅಣಕಿಸುವಾಗ ಏನು ಮಾಡಬೇಕೆಂದೇ ತಿಳಿಯುತ್ತಿರಲಿಲ್ಲ! ಆವಾಗೆಲ್ಲ ಎಷ್ಟೊಂದು ಗ್ವಾಂಕ್ರ ಕಪ್ಪೆ, ಮರಕಪ್ಪೆ, ಸಣ್ಣ ಚಿಲ್ಟಾರಿ ಕಪ್ಪೆಗಳು ಇದ್ದವು! ವಿಜಿ ಹೈಸ್ಕೂಲಿಗೆ ಹೋಗುತ್ತಿದ್ದ ಎಂಬತ್ತು-ತೊಂಬತ್ತರ ದಶಕದಲ್ಲಿ ಹಾವು-ಕಪ್ಪೆ ಹಿಡಿಯುವವರು ಬರಲಾರಂಭಿಸಿದರು. ಗದ್ದೆ ಬದಿ, ತೋಡಿನ ಬದಿ ಚೀಲಗಳನ್ನು ಹಿಡಿದುಕೊಂಡು ಅವರು ತಿರುಗಾಡುತ್ತಿದ್ದರು. `ಗೋಂಕ್ರಕಪ್ಪೆ ಮತ್ತು ಹಾವಿನ ಚರ್ಮಕ್ಕಾಗಿ ಅವುಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಯಾವುದೋ ಕಂಪನಿಯವರು ಇದನ್ನೆಲ್ಲ ಮಾಡಿಸುತ್ತಾರೆ’ ಎಂದು ಅಣ್ಣ ಹೇಳುತ್ತಿದ್ದ. ಹಳ್ಳಿಯ ಜನ ಎಷ್ಟು ಅಮಾಯಕರಾಗಿದ್ದರೆ, ತಮ್ಮಗದ್ದೆ ಬಯಲುಗಳಿಂದ ಅವುಗಳನ್ನು ಹಿಡಿದೊಯ್ಯಬಾರದೆಂದು ಗುರುತು ಪರಿಚಯವಿಲ್ಲದ ಆ ಮನುಷ್ಯರಿಗೆ ತಾಕೀತು ಮಾಡಬೇಕೆಂದೂ ಅವರಿಗೆ ತಿಳಿದಿರಲಿಲ್ಲ…!  ಹೀಗೆ ಹಾವು, ಕಪ್ಪೆಗಳನ್ನು ಹಿಡಿದು ಕೊಂದ ಅಂದಿನ ಆ ಕೆಲಸ ಪರಿಸರಕ್ಕೆ ದೊಡ್ಡ ನಷ್ಟ. ಆಮೇಲೆ ಗ್ವಾಂಕ್ರ ಕಪ್ಪೆಗಳು ಮೊದಲಿನಷ್ಟು ಕಾಣ ಸಿಗಲೇ ಇಲ್ಲ! ಓತಿಕ್ಯಾತಕ್ಕೆ ವಿಜಿಯ ಊರಿನಲ್ಲಿ  ‘ಕಾಯ್ಕಳ್ಳ’ ಎಂದು ಕರೆಯುತ್ತಿದ್ದರು. ಈ ಹೆಸರು

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—21 ಆತ್ಮಾನುಸಂಧಾನ ವಿದ್ಯಾರ್ಥಿ ನಿಲಯದಲ್ಲಿ ಪ್ರಪ್ರಥಮ ರಂಗಪ್ರವೇಶ ಅಂಕೋಲೆಯ ಲಕ್ಷ್ಮೇಶ್ವರ ಭಾಗದ ವಿದ್ಯಾರ್ಥಿ ನಿಲಯದಲ್ಲಿ ಮೊದಲ ಮಳೆಗಾಲ ಕಳೆದಿತ್ತು. ನವೆಂಬರ್ ತಿಂಗಳಲ್ಲಿ ವಿದ್ಯಾರ್ಥಿ ನಿಲಯವು ಅಂಬಾರಕೊಡ್ಲ ರಸ್ತೆಗೆ ಹೊಂದಿಕೊಂಡಿದ್ದ ಎರಡಂತಸ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ವಿಶಾಲವಾದ ಕಂಪೌಂಡಿನಲ್ಲಿರುವ ಕಟ್ಟಡದ ನೆಲ ಅಂತಸ್ತಿನಲ್ಲಿ ಸಾಕಷ್ಟು ವಿಶಾಲವಾದ ಕೋಣೆಗಳು, ಮೊದಲ ಮಹಡಿಯಲ್ಲಿಯೂ ಅಷ್ಟೇ ವಿಶಾಲ ಕೋಣೆಗಳು ತುಂಬಾ ಅನುಕೂಲಕರವಾಗಿದ್ದವು. ಈ ಕಟ್ಟಡದ ಮಾಲಿಕರು ಯಾರೋ ನಮಗೆ ತಿಳಿದಿರಲಿಲ್ಲ. ಆದರೆ ಬಹುಕಾಲದಿಂದ ಈ ಭವ್ಯ ಬಂಗಲೆ ಯಂಥ ಮನೆಯಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಸುತ್ತ ಮುತ್ತಲ ಮನೆಯವರು ಇದು ‘ಭೂತ ಬಂಗಲೆ….. ಅಲ್ಲಿ ದೆವ್ವಗಳ ಕಾಟವಿದೆ…’ ಇತ್ಯಾದಿ ಮಾತನಾಡಿಕೊಳ್ಳುತ್ತಿದ್ದರು. ನಾವು ಬಂದು ನೆಲೆಸಿದ ಕೆಲದಿನಗಳವರೆಗೆ ನಮಗೂ ಅಂಥ ಭ್ರಮೆಯ ಅನುಭವಗಳೂ ಆದವು. ಮಧ್ಯರಾತ್ರಿಯ ನಂತರ ಯಾರೋ ಮಹಡಿಯ ಮೇಲೆ ನಡೆದಾಡಿದ… ಏನೋ ಮಾತಾಡಿದ ಸಪ್ಪಳ ಕೇಳಿ ಬಂತಾದರೂ ಕೆಲವೇ ದಿನಗಳಲ್ಲಿ ನಾವು ಅದಕ್ಕೆ ಹೊಂದಿಕೊಳ್ಳುತ್ತ ಕ್ರಮೇಣ ಮರೆತೇ ಬಿಟ್ಟೆವು. (ಈಗ ಅದೇ ಕಟ್ಟಡವನ್ನು ಬೇರೆ ಯಾರೋ ಕೊಂಡು ನವೀಕರಿಸಿ ‘ಹರ್ಷ ನಿವಾಸ’ ಎಂದು ಹೆಸರಿಟ್ಟು ವಾಸಿಸುತ್ತಿದ್ದಾರೆ). ನಾವು ಈ ಕಟ್ಟಡಕ್ಕೆ ಬಂದು ನೆಲೆ ನಿಂತ ಕೆಲವೇ ದಿನಗಳಲ್ಲಿ ವಸತಿನಿಲಯದ ಮೊದಲಿನ ಮೇಲ್ವಿಚಾರಕರಾಗಿದ್ದ ‘ಮಾಜಾಳಿಕರ’ ಎಂಬುವವರು ವರ್ಗವಾಗಿ ಬೇರೆ ಮೇಲ್ವಿಚಾರಕರು ಆಗಮಿಸಿದರು. ಹೊಸದಾಗಿ ನಮ್ಮ ವಸತಿನಿಲಯದ ಮೇಲ್ವಿಚಾರಕರಾಗಿ ಆಗಮಿಸಿದ ಲಿಂಗು ಹುಲಸ್ವಾರ ಎಂಬುವವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಮೂಲತಃ ಕಾರವಾರದವರಾದ ಲಿಂಗು ಹುಲಸ್ವಾರ ತಮ್ಮ ಯುವ ಸ್ನೇಹಿತರ ಸಂಘಟನೆ ಮಾಡಿಕೊಂಡು ಕಾರವಾರದಲ್ಲಿ ರಂಗ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಇದ್ದವರು. ಅವರು ನಮ್ಮ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿಯನ್ನು ಪ್ರೇರೆಪಿಸುವುದಕ್ಕಾಗಿ ಇಲ್ಲಿಯೂ ನಾಟಕವೊಂದನ್ನು ಆಡಿಸುವ ಆಸಕ್ತಿ ತೋರಿದರು. ಆದರೆ ಹಾಸ್ಟೆಲಿನ ಯಾವ ವಿದ್ಯಾರ್ಥಿಯೂ ಈ ಹಿಂದೆ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಹೊಂದಿರಲಿಲ್ಲ. ಆದರೂ ಲಿಂಗು ಹುಲಸ್ವಾರ ಅವರು ಅಲ್ಪಸ್ವಲ್ಪ ಪ್ರತಿಭೆ ಮತ್ತು ಅಭಿನಯದ ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಆಯ್ದು ತರಬೇತಿ ನೀಡುವ ಸಂಕಲ್ಪ ಮಾಡಿದರು. ಕಾರವಾರದ ತಮ್ಮ ಪರಿಚಯದ ಕೆಲವು ಯುವಕರನ್ನು ಕರೆಸಿಕೊಂಡು ನಾಟಕ ನಿರ್ದೇಶನದ ನೆರವು ಪಡೆದರು. ಹಾಸ್ಟೆಲಿನ ಆಯ್ದ ವಿದ್ಯಾರ್ಥಿಗಳ ತಂಡ ‘ಸಂಸಾರ’ ಎಂಬ ಸಾಮಾಜಿಕ ನಾಟಕವೊಂದನ್ನು ಪ್ರಯೋಗಿಸುವುದೆಂದು ತೀರ್ಮಾನವಾಯಿತು. ನನ್ನ ನೆನಪಿನಲ್ಲಿ ಉಳಿದಿರುವಂತೆ ಲಿಂಗು ಹುಲಸ್ವಾರ ಅವರೇ ನಾಟಕದ ಮುಖ್ಯ ಪಾತ್ರ ನಿರ್ವಹಿಸಿದ್ದರು. ಉಳಿದಂತೆ ನಾಗೇಶದೇವ ಅಂಕೋಲೆಕರ, ಲಕ್ಷ್ಮಣ ಹುಲಸ್ವಾರ, ಶಂಕರ ಹುಲಸ್ವಾರ, ಹುಲಿಯಪ್ಪ ನಾಯ್ಕ, ನಾರಾಯಣ ವೆಂಕಣ್ಣ ಆಗೇರ, ಲೋಕಪ್ಪ ಬರ‍್ಕರ್ ಮುಂತಾದವರು ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದರು. ನನಗೆ ಒಂದು ಹಾಸ್ಯ ಸ್ತ್ರೀ ಪಾತ್ರದಲ್ಲಿ ಅಭಿನಯಿಸುವ ಅವಕಾಶ ನೀಡಿದ್ದರು. ಮಾರುತೇಶ ಬಾಬು ಮಾಂಡ್ರೆ ಎಂಬುವವರು ಬರೆದ ‘ಸಂಸಾರ’ ಎಂಬ ಸಾಮಾಜಿಕ ನಾಟಕವನ್ನು ಬನವಾಸಿಯಲ್ಲಿ ನಾನು ಮೂರನೆಯ ತರಗತಿಯಲ್ಲಿ ಓದುತ್ತಿರುವಾಗ ಗಮನಿಸಿದ್ದೆ. ಬನವಾಸಿಯಲ್ಲಿ ನಮ್ಮ ಗುರುಗಳಾದ ಪಿ.ಜಿ. ಪಾತಃಕಾಲ ಎಂಬುವವರ ನಾಯಕತ್ವದಲ್ಲಿ ಪ್ರಯೋಗಗೊಂಡ ‘ಸಂಸಾರ’ ನಾಟಕದಲ್ಲಿ ನಮ್ಮ ತಂದೆಯವರು ಮುಖ್ಯ ಸ್ತ್ರೀ ಪಾತ್ರಧಾರಿಯಾಗಿದ್ದರು ಎಂಬುದನ್ನು ಹಿಂದೆ ಪ್ರಸ್ತಾಪಿಸಿದ್ದೇನೆ. ಈ ನಾಟಕವು ಅಲ್ಲಿ ಜನಾಗ್ರಹದ ಮೂಲಕ ಎರಡು-ಮೂರು ಬಾರಿ ಪ್ರಯೋಗಗೊಂಡಿತ್ತು. ಹೀಗಾಗಿ ಪ್ರಸ್ತುತ ನಾಟಕದ ಸ್ಥೂಲ ಚಿತ್ರಣವೊಂದು ನನ್ನ ಮನಸ್ಸಿನ ಮೂಲೆಯಲ್ಲಿ ಸುಪ್ತವಾಗಿತ್ತು. ಇಷ್ಟಾಗಿಯೂ ನಾನು ಮೊಟ್ಟ ಮೊದಲ ಬಾರಿಯ ಸ್ತ್ರೀ ಪಾತ್ರ ನಿರ್ವಹಣೆಯಲ್ಲಿ ಸಫಲನಾಗಲಿಲ್ಲ ಎಂಬುದು ನಿಜ. ಮೂಲಭೂತವಾಗಿ ನನ್ನೊಳಗಿರುವ ಸಭಾ ಕಂಪ ಮತ್ತು ಕೀಳರಿಮೆಯ ಕಾರಣದಿಂದ ಅಂಜುತ್ತಲೇ ರಂಗ ಪ್ರವೇಶಿಸಿದ ನಾನು ಸಂದರ್ಭಕ್ಕೆ ಸರಿಯಾಗಿ ಕಂಠಪಾಠ ಮಾಡಿದ ಸಂಭಾಷಣೆಗಳನ್ನು ಒಪ್ಪಿಸಿದ್ದಲ್ಲದೆ ಹಾಸ್ಯ ಪಾತ್ರಕ್ಕೆ ತಕ್ಕಂತೆ ನಟಿಸುವುದು ಸಾಧ್ಯವೇ ಆಗಿರಲಿಲ್ಲ. ಬಹುತೇಕ ನನ್ನ ಸ್ನೇಹಿತರು ಕೂಡ ನನ್ನಂತೆಯೇ ಅಳುಕಿನಿಂದಲೇ ರಂಗ ಪ್ರವೇಶದ ಮೊದಲ ಅನುಭವ ಪಡೆದರಲ್ಲದೆ ನಾಟಕದ ಪಠ್ಯಕ್ಕೆ ನ್ಯಾಯ ನೀಡಲಾಗದೆ ಒಟ್ಟಾರೆ ನಾಟಕವು ಸಾಮಾನ್ಯ ರಂಗ ಪ್ರಯೋಗವಾಗಿಯೇ ಪ್ರದರ್ಶನಗೊಂಡಿತು. ವಿದ್ಯಾರ್ಥಿ ನಿಲಯದ ಎರಡು ವರ್ಷಗಳನ್ನು ಕಳೆಯುವಾಗ ನಾರಾಯಣ ವೆಂಕಣ್ಣ ಆಗೇರ ತನ್ನ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಸಿದ ಕಾರಣ ಊರಲ್ಲಿಯೇ ಉಳಿದ. ತನ್ನ ತಂದೆ ತೀರಿಕೊಂಡುದರಿಂದ ಊರಿಗೆ ಹೋದ ಕೃಷ್ಣ ಆಗೇರ ಮರಳಿ ವಿದ್ಯಾರ್ಥಿ ನಿಲಯಕ್ಕೆ ಬಾರದೆ ಹನೇಹಳ್ಳಿಯ ಹೈಸ್ಕೂಲು ಸೇರಿಕೊಂಡ. ಉಳಿದ ನಾವು ಕೂಡ ವಿದ್ಯಾರ್ಥಿ ನಿಲಯದ ಆಶ್ರಯದಿಂದ ಹೊರಬಂದು ಮತ್ತೆ ನಮ್ಮ ನಮ್ಮ ಮನೆ ಸೇರಿಕೊಂಡು ಅಲ್ಲಿಂದಲೇ ಓದು ಮುಂದುವರಿಸಿದೆವು. ****************************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

You cannot copy content of this page

Scroll to Top