ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಂಟಿನ ಗುಟ್ಟು..

ಕವಿತೆ ನಂಟಿನ ಗುಟ್ಟು.. ಜ್ಯೋತಿ ಡಿ.ಬೊಮ್ಮಾ. ನೀರೆಗೂ ಸೀರೆಗೂ ಅಂಟಿದನಂಟನ್ನು ಬಲ್ಲಿರಾ..ಪಡೆದಷ್ಟು ಹೆಚ್ಚಾಗುವ ಹಂಬಲದಗುಟ್ಟೆನು ಗಮನಿಸಿದ್ದಿರಾ.. ಅಂಚು ಸೆರಗಿನ ವರ್ಣನೆಬಣ್ಣಿಸುವದೆ ಒಂದು ಕಲೆ.ಆ ವರ್ಣ ನೆ ಮುಂದೆ ಎಷ್ಟಿದ್ದರೇನುಸೀರೆಯ ಬೆಲೆ. ಎಷ್ಟು ಕೊಂಡರು ತೀರದಮನದ ಹಂಬಲ.ಇನ್ನೊಂದು ಮತ್ತೊಂದು ಎಂದುಬಯಸುವದು ಮನ ಚಂಚಲ. ಕಂಚಿ ಪಿತಾಂಬರ ರೇಷ್ಮೆಹೆಸರಿರುವವು ಅನೇಕ.ಕೆಂಪು ಹಳದಿ ಗುಲಾಬಿಗಳಲ್ಲಿಕಂಗೊಳಿಸುವದನ್ನು ನೋಡುವದೆ ಪುಳಕ. ಮೈಗೆ ಒಪ್ಪುವಂತೆ ಉಟ್ಟುಗತ್ತಿನ ಕುಪ್ಪಸ ತೊಟ್ಟುಚಿಮ್ಮುವ ನೀರಿಗೆಗಳನ್ನೆತ್ತಿಗಾಳಿಗೆ ಹಾರುವ ಸೆರಗಿಗೆ ಪಿನ್ನಿನ ಹೂ ಮುಡಿಸಿಹಂಸ ನಡಿಗೆಯಲ್ಲಿ ನಡೆವ ನೀರೆಯೆ.. ನಿನಗೂ ಸೀರೆಗೂ ಅಂಟಿದನಂಟಿನ ಗುಟ್ಟು..ಎಂಟೆದೆ ಭಂಟರಿಗೂಬಿಡಿಸಲಾರದ ಕಗ್ಗಂಟು. ***********************

ನಂಟಿನ ಗುಟ್ಟು.. Read Post »

ಇತರೆ

ಇನ್ವಿಕ್ಟಸ್ ಮತ್ತು ಮಂಡೇಲಾ

ಲೇಖನ ಇನ್ವಿಕ್ಟಸ್ ಮತ್ತು ಮಂಡೇಲಾ ರಶ್ಮಿ ಹೆಗಡೆ ಮುಂಬೈ ಕೆಲವರ ವ್ಯಕ್ತಿತ್ವ ಹಾಗೂ ಸ್ಪೂರ್ತಿದಾಯಕ ಮಾತುಗಳು,ಸಾಧಕರ ಜೀವನಗಾಥೆಗಳು,ಕೆಲವು ಪುಸ್ತಕಗಳು,ಇನ್ನು ಕೆಲವು ಕಾವ್ಯಗಳು ನಮಗೆ ಗುರುವಾಗಿ,ಆದರ್ಶದ ಚಿಲುಮೆಗಳಾಗಿ ಜೀವನದುದ್ದಕ್ಕೂ ಪ್ರೇರೇಪಿಸುತ್ತವೆ. ಕೆಲವು ಕಾವ್ಯಗಳಂತೂ ಉತ್ಕೃಷ್ಟತೆಯ ಎಲ್ಲೆಯನ್ನು ಮೀರಿ ಬೆಳೆಯುತ್ತವೆ. ಬದುಕಿನ ಅಂಕುಡೊಂಕಿನ ದಾರಿಯಲ್ಲಿ  ಹಾದಿ ತಪ್ಪದಂತೆ ಮುನ್ನಡೆಸಿ,ಸಂಕಟದ ಸಮಯದಲ್ಲಿ ಧೈರ್ಯ,ನೆಮ್ಮದಿ ನೀಡಿ ಚಿಕಿತ್ಸೆಯ ರೂಪದಲ್ಲಿ ಕಾಪಾಡುತ್ತವೆ. ಉತ್ಕೃಷ್ಟವಾದ ಸಾಹಿತ್ಯ ಹಾಗೂ ಪುಸ್ತಕಗಳು ಮನುಷ್ಯನ ಯೋಚನಾಲಹರಿಯನ್ನೇ ಬದಲಿಸಬಲ್ಲದು. ಶಬ್ದಗಳು ಖಡ್ಗಕ್ಕಿಂತ ಹರಿತವಾದದ್ದು ಎನ್ನುವುದು ಸತ್ಯ. ಹೀಗೆಯೇ ಒಂದು ಪುಸ್ತಕ ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಬಲ್ಲದು ಎನ್ನುವುದಕ್ಕೆ ಇಲ್ಲಿದೆ ಒಂದು ಉದಾಹರಣೆ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಕೃಷ್ಣ ನೀಡಿದ ಗೀತೋಪದೇಶ ಆತನಿಗೆ ಶಕ್ತಿಯಾಗಿ ಯುದ್ಧದಲ್ಲಿ ಜಯಶಾಲಿಯನ್ನಾಗಿ ಮಾಡಿತ್ತು. ಅದೇ ಭಗವತ್ಗೀತೆ ಕಲಿಯುಗದಲ್ಲಿ ಮಹಾತ್ಮಾ ಗಾಂಧೀಜಿ,ಅನಿಬೆಸಂಟ್ ,ಸ್ವಾಮಿ ವಿವೇಕಾನಂದರಂಥ ಮಹಾನ್ ವ್ಯಕ್ತಿಗಳಿಗೆ ಸಾಧನೆಯತ್ತ ದಾರಿತೋರಿದ್ದು ತಿಳಿದ ವಿಷಯ. ಕನ್ನಡದ ಭಗವತ್ಗೀತೆ ಎಂದು ಕರೆಯಲ್ಪಡುವ ಡಿ ವಿ ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’ವಂತೂ ಅದೆಷ್ಟು ಜನರ ಮನಸ್ಸಿಗೆ ನೆಮ್ಮದಿ ನೀಡಿದೆ ಎಂದು ಹೇಳತೀರದು. ಹೀಗೆಯೇ ಒಂದು ಕಾವ್ಯ ನೆಲ್ಸನ್ ಮಂಡೇಲಾ ಅವರ ಜೀವನಕ್ಕೆ ದಾರಿದೀಪವಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಭೇದ ನೀತಿ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿ,ಬಹುಜಾತಿ ಸಮಾನತೆಯ ಬಗ್ಗೆ ಸ್ವತಃ ಶಿಕ್ಷಣ ನೀಡಿದವರು ಮಂಡೇಲಾ. ಅವರು ತಮ್ಮ ಜೀವನದ ಕಾಲುಭಾಗಕ್ಕಿಂತ ಹೆಚ್ಚು ಸಮಯವನ್ನು,ಅಂದರೆ ಸತತವಾಗಿ ಇಪ್ಪತ್ತೇಳು ವರ್ಷ ವಿವಿಧ ಜೈಲುಗಳಲ್ಲಿಯೇ ಕಳೆದರು. 1961ರಲ್ಲಿ ವರ್ಣಭೇದ ಚಳುವಳಿ ಅಡಿಯಲ್ಲಿ ಮೊದಲಬಾರಿಗೆ ಬಂಧಿತರಾದ ಮಂಡೇಲಾರನ್ನು ಖುಲಾಸೆಗೊಳಿಸಿದ್ದರೂ,ಅಕ್ರಮವಾಗಿ ದೇಶತೊರೆದರೆಂಬ ಕಾರಣಕ್ಕೆ ದೋಷಿಯನ್ನಾಗಿಸಿ 1962ರಲ್ಲಿ ಮತ್ತೆ ಬಂಧಿಸಿ ಕೇಪ್ ಟೌನ್ ಹಾಗೂ ಟೇಬಲ್ ಮೊಂಟೆನಿನ ಸಮೀಪದ “ರಾಬಿನ್ ದ್ವೀಪ ಕಾರಾಗೃಹ”ದಲ್ಲಿ ಇರಿಸಲಾಯಿತು. ಹಾಸಿಗೆಯಂಥ  ಕನಿಷ್ಠ ಸೌಲಭ್ಯಗಳೂ ಇರದ ಚಿಕ್ಕದಾದ,ಸದಾ ಒದ್ದೆಯಾಗಿರುತ್ತಿದ್ದ ಕೋಣೆ. ಜೈಲಿನ ಬಿಳಿವರ್ಣೀಯ ಅಧಿಕಾರಿಗಳಿಂದ ಸತತವಾದ ದೈಹಿಕ ಹಾಗೂ ಮಾನಸಿಕ ಕಿರುಕುಳ,ಮಲಗಲು ಒಣ ಹುಲ್ಲಿನ ಚಾಪೆ. ಕೈದಿಗಳ ಮೇಲೆ ಒತ್ತಡ ಹೇರಿ ಗಣಿ ಕೆಲಸಮಾಡಿಸಿ, ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದ ಆ ಕಾರಾಗೃಹದಲ್ಲಿ ಅವರು ಕಳೆದಿದ್ದು ಸತತವಾಗಿ ಹದಿನೆಂಟು ವರ್ಷಗಳು. ಆರು ತಿಂಗಳಿಗೊಮ್ಮೆ ಮಾತ್ರ ಪತ್ರ ವ್ಯವಹಾರ ನಡೆಸುವುದಷ್ಟೇ ಅಲ್ಲದೆ, ವರ್ಷಕ್ಕೆ ಒಂದೇ ದಿನ,ಅದೂ ಸಹ ಅರ್ಧ ಘಂಟೆ ಮಾತ್ರ ಆಪ್ತರನ್ನು ಭೇಟಿಯಾಗುವ ಅವಕಾಶವಿತ್ತು. ಅಷ್ಟಾದರೂ ಅವರು ಧೃತಿಗೆಡಲಿಲ್ಲ. ಜೈಲಿನಲ್ಲಿಯೇ ಸಹ ಖೈದಿಗಳಲ್ಲೂ ಸ್ಫೂರ್ತಿ ತುಂಬಿ ನಾಗರಿಕ ಅಸಹಕಾರ ಚಳುವಳಿಯನ್ನು ಮುನ್ನಡೆಸಿದರು. ಇದು ದಕ್ಷಿಣ ಆಫ್ರಿಕಾದ ಅಧಿಕಾರಿಗಳನ್ನು ರಾಬಿನ್ ದ್ವೀಪದ ಪರಿಸ್ಥಿತಿಯನ್ನು ತೀವ್ರವಾಗಿ ಸುಧಾರಿಸುವಂತೆ ಒತ್ತಾಯಿಸಿತು. ಇದೇ ಕಾರಣಕ್ಕೆ ಅವರನ್ನು “ಪೋಲ್ಸ್ ಮೂರ್” ಜೈಲಿಗೆ, ಸ್ಥಳಾಂತರಿಸಿ ಅಲ್ಲಿನ ಒಂದು ಸಣ್ಣ ಕೋಣೆಯಲ್ಲಿ ಗೃಹಬಂಧನದಲ್ಲಿಟ್ಟರು. ಜೈಲಿನಲ್ಲಿದ್ದಾಗಲೇ ಅಂಚೆ ತರಬೇತಿ ಮೂಲಕ ಆಕ್ಸ್ಫರ್ಡ್ ನ ವೋಲ್ಸಿಹಾಲ್ ನಿಂದ ಎಲ್ ಎಲ್ ಬಿ ಪದವಿ ಪಡೆದರು. ಇಪ್ಪತ್ತೇಳು ವರ್ಷಗಳ ಸಮಯ ಹೊತ್ತುರಿಯುತ್ತಿದ್ದ ಹೋರಾಟದ ಕಿಚ್ಚನ್ನು ಮನಸಿನಲ್ಲಿ ಆರಲು ಬಿಡದೆ,ಕಾಪಾಡಿಕೊಂಡು ಹೋಗುವುದು ಸುಲಭವಲ್ಲ. ಈ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದು ಒಂದು ಕವಿತೆ  ಎಂದರೆ ಅತಿಶಯೋಕ್ತಿಯಾಗದು. ಜೈಲಿನಲ್ಲಿದ್ದಷ್ಟು ವರ್ಷ ಅವರ ಜೊತೆಯಾಗಿ,ಗುರುವಾಗಿ,ಸ್ಪೂರ್ತಿಯಾಗಿ ನಿಂತಿದ್ದು ಹದಿನೆಂಟನೇ ಶತಮಾನದ ಕವಿಯಾಗಿದ್ದ “ವಿಲಿಯಂ ಅರ್ನೆಸ್ಟ್ ಹೆನ್ಲೇ” ಅವರ ಕವನ ‘ಇನ್ವಿಕ್ಟಸ್’. ಲ್ಯಾಟಿನ್ ಭಾಷೆಯಲ್ಲಿ ಇದರರ್ಥ “ಅಜೇಯ”ಎಂದು.  ನೆಲ್ಸನ್ ಮಂಡೇಲಾರ ಜೀವನ ಚರಿತ್ರೆ ಆಧಾರಿತ ಸಿನಿಮಾಕ್ಕೂ ಸಹ ‘ಇನ್ವಿಕ್ಟಸ್’ ಎಂದೇ ಹೆಸರಿಡಲಾಗಿತ್ತು.  ಕೆಲವೇ ಸಾಲುಗಳುಳ್ಳ ಈ ಕವನ ಅವರ ಮೇಲೆ ಅಗಾಧವಾದ ಪರಿಣಾಮ ಬೀರಿತ್ತು. ತಮ್ಮ ಸಹಖೈದಿಗಳೆದುರೂ ಆ ಕವನವನ್ನು ವಾಚಿಸುತ್ತಿದ್ದ ಮಂಡೇಲಾ, ಕ್ರಮೇಣವಾಗಿ ಅವರಲ್ಲಿಯೂ ಆ ಕವಿತೆಯ ಮೂಲಕ ಹೊಸ ಸ್ಪೂರ್ತಿಯನ್ನು ತುಂಬಿದ್ದರು. ಜೈಲಿನ ಕಠಿಣ ಸಮಯದಲ್ಲೂ ಹೋರಾಟದ ಕಿಚ್ಚು ಆರದಂತೆ ಕಾಪಾಡಿಕೊಂಡು ಬಂದಿದ್ದು ಅದೇ ಪದ್ಯ. ಇನ್ವಿಕ್ಟಸ್ ಕವನದ ಕೊನೆಯ ಈ ಎರೆಡು ಸಾಲುಗಳು ಆತನಿಗೆ ಅತ್ಯಂತ ಪ್ರಭಾವ ಬೀರಿದ್ದವು. “ನನ್ನ ಅದೃಷ್ಟದ ಮುಖ್ಯಸ್ಥ ನಾನು, ನನ್ನ ಆತ್ಮದ ನಾಯಕನು ನಾನು” ಎಂದು. “ಈ ಕವಿತೆಯು ನಾನು ವೈಯಕ್ತಿಕವಾಗಿ,ಪ್ರಪಂಚದಾದ್ಯಂತದ ಅನೇಕರೊಂದಿಗೆ ವ್ಯವಹರಿಸಿ,ಪಾಲಿಸಿದ ಅನುಭವ ಹಾಗೂ ಪದಗಳ ಸಂಗ್ರಹ”ಎಂದಿದ್ದರು. ಹೋರಾಡುವ ಧೈರ್ಯ ಸೋತು ಮಲಗುತ್ತಿದೆ ಎನಿಸಿದಾಗಲೆಲ್ಲ ಎಚ್ಚರಿಸಿ,ಧೈರ್ಯ ತುಂಬಿದ್ದು ಈ ಕವಿತೆ. ಒಂದು ಬರಹ ಒಬ್ಬ ವ್ಯಕ್ತಿ,,ಸಮಾಜ ಹಾಗೂ ದೇಶದ ಮೇಲೆ ಅದೆಷ್ಟು ಪರಿಣಾಮ ಬೀರಬಲ್ಲದೆಂಬುದಕ್ಕೆ ಇದೇ ಸಾಕ್ಷಿ. ಮಂಡೇಲಾ ಮುಂದೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದು ಇತಿಹಾಸ. ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರ್ಣ ಭೇದ ನೀತಿಯ ವಿರುದ್ಧ ದನಿಯೆತ್ತಿದವರು. ಆ ಚಳುವಳಿಯನ್ನು ಅಲ್ಲಿ ಮುಂದುವರೆಸಿದ ಮಂಡೇಲಾರಿಗೆ ಆದರ್ಷವಾದವರೇ ಗಾಂಧೀಜಿ. ಇಪ್ಪತ್ತೇಳು ವರ್ಷದ ಕಾರಾಗೃಹ ಶಿಕ್ಷೆ ಮುಗಿಸಿಬಂದ ಮಂಡೇಲಾ ನಗುತ್ತಾ ಹೇಳಿದ್ದೇನು ಗೊತ್ತೇ? ” ಇಪ್ಪತ್ತೇಳು ವರ್ಷದ ಸುದೀರ್ಘ ರಜೆ ಇನ್ನು ಮುಗಿಯಿತು “ಎಂದು. ಭಾರತ ರತ್ನ,ಮಹಾತ್ಮಾ ಗಾಂಧಿ ಶಾಂತಿ ಪ್ರಶಸ್ತಿ,ನೊಬೆಲ್ ಶಾಂತಿ ಪುರಸ್ಕಾರಗಳಂತಹ ಅನೇಕ ಗೌರವಕ್ಕೆ ಪಾತ್ರರಾದ ಮಂಡೇಲಾ 2013 ರಂದು ತಮ್ಮ ಜೀವನ ಯಾತ್ರೆ ಮುಗಿಸಿ ಇಹಲೋಕಕ್ಕೆ ಪಯಣಿಸಿದರು. ಪುಸ್ತಕಗಳು ಅತ್ಯಂತ ಶಾಂತವಾದ ಸಲಹೆಗಾರರಷ್ಟೇ ಅಲ್ಲ,ಅವು ಸ್ಥಿರವಾದ ಸ್ನೇಹಿತರು ಕೂಡ. ಜೀವನದ ಎಲ್ಲಾ ಸಂಬಂಧಗಳು ನಮ್ಮಿಂದ ದೂರವಾದಾಗ ಸದಾ ಜೊತೆಗಿರುವ ಆತ್ಮೀಯ ಬಂಧುವೆಂದರೆ ಅದು ಪುಸ್ತಕ ಮಾತ್ರ. ಹಾಗೆಯೇ ನಾಲ್ಕೇ ಸಾಲುಗಳುಳ್ಳ ಒಂದು ಕವಿತೆ ಸಾವಿರ ಅನುಭವದ ವ್ಯಕ್ತಿಗೂ ಮೀರಿ ಪ್ರಭಾವ ಬೀರಬಲ್ಲದು. ************************************************************

ಇನ್ವಿಕ್ಟಸ್ ಮತ್ತು ಮಂಡೇಲಾ Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ   ವಸಾಹತುವಿನಿಂದ ಬಿಡುಗಡೆಗೆ ಭಾಷೆ ಕೊಟ್ಟವ ( ಬಸವಣ್ಣನವರ ಒಂದು ವಚನದ ಭಾಷಿಕ ವಿವೇಚನೆ ) ಕನ್ನಡ ಸಾಹಿತ್ಯ ಸಂಸ್ಕೃತದ ಪ್ರಭಾವಕ್ಕೆ ಸಿಕ್ಕು ವಸ್ತು, ರೂಪ, ಅಭಿವ್ಯಕ್ತಿಯ ಕ್ರಮದಲ್ಲಿ ಬೆಳವಣಿಗೆ ಹೊಂದಿ ಜನಸಾಮಾನ್ಯರಿಂದ ಬಹುದೂರ ನಿಂತಿದ್ದುದು ಎಲ್ಲಕಾಲದಲ್ಲಿಯೂ ಸತ್ಯವೇ ಸರಿ. ಹನ್ನೆರಡನೆಯ ಶತಮಾನದ ವಚನ ಚಳುವಳಿಯ ಸಾಹಿತ್ಯ ರೂಪ ಮತ್ತು ಅದರೊಳಗಿನ ಸಂವೇದನೆಗಳು ನೆಲದ ಬೇಡಿಕೆ, ಸದ್ಯದ ತುರ್ತಿಗೆ ಸ್ಪಂದಿಸಿ ಜನಸಾಮಾನ್ಯರ ನಾಡಿಮಿಡಿತಕ್ಕೆ ಸ್ಪಂದಿಸಿದ್ದು. ಸಂಸ್ಕೃತದ ಮಾರ್ಗ ಸಂಪ್ರದಾಯಕ್ಕೆ, ಮಹಾಕಾವ್ಯ ಪರಂಪರೆಗೆ ವಿರುದ್ಧವಾಗಿ ತನ್ನದೇ ಆದ ಕ್ರಮವನ್ನು ಕಟ್ಟಿಕೊಂಡಿರುವುದು ತಿಳಿದೇ ಇದೆ. ವಚನಗಳು ಸಾಮಾನ್ಯರಿಗೆ ಅರ್ಥವಾಗುವ ಮಟ್ಟದಲ್ಲಿರುವುದು ಅದರ ಬಹು ಮುಖ್ಯ ಅಂಶ. ಇದೇ ಮೊದಲ ಬಂಡಾಯ. ಮತ್ತು ಸಂಸ್ಕೃತಭೂಯಿಷ್ಟ ಮಾರ್ಗ ಪರಂಪರೆಗೆ ಕೊಟ್ಟ ಛಾಟಿ ಏಟಾಗಿದೆ. ವಿಷಯ ಹಸ್ತಾಂತರಕ್ಕೆ ಕಂಡುಕೊಂಡ ಸಾಹಿತ್ಯ ರೂಪ, ಬಳಸಿದ ಭಾಷೆ, ಸೂಕ್ಷ್ಮವಾದ ಪರ್ಯಾಯ ದಾರಿಯನ್ನು ನಾಡಿಗರಲ್ಲಿ ಇಂದಿಗೂ ಜಾಗೃತಗೊಳಿಸಿ ನಿಲ್ಲಿಸಿವೆ. ಪರ್ಯಾಯ ದಾರಿಯನ್ನು ಹುಟ್ಟುಹಾಕುವಲ್ಲಿ ಬಸವಣ್ಣನವರ ಪಾತ್ರ ಬಹುಮುಖ್ಯವಾದದ್ದು ಮತ್ತು ಆ ಕಾರ್ಯದ ಯಶಸ್ವಿಗೆ ಮಾರ್ಗಕ್ಕೆ ವಿರುದ್ಧವಾದ ಭಾಷೆಯನ್ನು ಬಳಸುವ ದಾರಿ ಬಸವಣ್ಣನವರ ಹಾದಿ ಓದುಗರನ್ನು ಬೆರಗಾಗಿಸುತ್ತದೆ. ಈ ವಚನವನ್ನು ಮತ್ತೊಮ್ಮೆ ಗಮನಿಸಿ. ಉಳ್ಳವರು ಶಿವಾಲಯ ಮಾಡುವರು ; ನಾನೇನ ಮಾಡವೆ ? ಬಡವನಯ್ಯಾ. ಎನ್ನ ಕಾಲೇ ಕಂಭ, ದೇಹವೇ ದೇಗುಲ, ಸಿರ ಹೊನ್ನ ಕಳಸವಯ್ಯಾ. ಕೂಡಲಸಂಗಮದೇವ, ಕೇಳಯ್ಯ; ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ! ೧ ಈ ವಚನ ಪ್ರಖ್ಯಾತವಾಗಿರುವುದು ‘ದೇವಾಲಯ’ಗಳ ವಿರುದ್ಧವಾಗಿ, ದೇಹವೇ ‘ದೇಗುಲ’ ಎನ್ನುವ ಗ್ರಹಿಕೆಯಿಂದ. ಸ್ಥಾವರಕ್ಕಿಂತ ಜಂಗಮ ಬಹುದೊಡ್ಡದು ಮತ್ತು ಕ್ರಿಯಾಶೀಲ, ಚಲನಶೀಲವಾದುದು ಎಂಬುದರಿಂದ. ಆ ಕಾಲದ ಪುರೋಹಿತಶಾಹಿ ಸೃಷ್ಟಿಸಿದ್ದ ವಸಾಹತುವಿನಿಂದ ಬಿಡಿಸಿಕೊಳ್ಳಲು ತಮ್ಮನ್ನು ತಾವು ಕಟ್ಟಿಕೊಳ್ಳಲು ನಿರ್ಮಿಸಿಕೊಂಡಿರುವ ಮಾರ್ಗದಿಂದ. ಇದೊಂದು ಮಹಾಮಾರ್ಗವಾಗಿ ಇಂದಿಗೂ ಜೀವಂತವಾಗಿದೆ. ಪ್ರತೀ ಕ್ಷೇತ್ರಗಳಲ್ಲಿಯೂ ಜ್ಞಾನವೆಂಬುದು ಅಮೂರ್ತ ಮತ್ತು ಸೀಮಾತೀತ. ಈ ಜ್ಞಾನವು ಭಾಷೆಯ ಮೂಲಕ ಬರುವುದೆನ್ನುವುದು. ವಸಾಹತೀಕರಣಕ್ಕೆ ಒಳಪಟ್ಟಾಗ ‘ಭಾಷೆ’ ಎನ್ನುವುದರ ಮೇಲೂ ಬಹುಸೂಕ್ಷ್ಮವಾಗಿ ಯಜಮಾನ್ಯ ಸಂಸ್ಕೃತಿಯು ಬಹುದೊಡ್ಡ ಪ್ರಭಾವ ಬೀರುತ್ತದೆ. ಕೊಟ್ಟ ಭಾಷೆಯಿಂದ ಬಿಡಿಸಿಕೊಳ್ಳುವುದು ಅಥವಾ ಅದಕ್ಕೆ ಪರ್ಯಾಯವಾದ ಭಾಷೆಯನ್ನು ಕಟ್ಟುವುದು, ಹುಟ್ಟಿಸಿಕೊಳ್ಳುವುದು ವಸಾಹತುವಿನಿಂದ ಮುಕ್ತಿರಾಗಲು ಪ್ರಮುಖವಾದ ದಾರಿಯಾಗಿದೆ. ಈ ಕೆಲಸವನ್ನು ಬಹು ಯಶಸ್ವಿಯಾಗಿ ಮತ್ತು ನೆಲದ ಕಣ್ಣಾಗಿ ಮಾಡುವಲ್ಲಿ ಬಸವಣ್ಣನವರ ಈ ವಚನ ಮಹತ್ತರವಾದ ಕಾರ್ಯ ನಿರ್ವಹಿಸಿದೆ. ಪ್ರಕೃತ ವಚನದಲ್ಲಿ ಬಸವಣ್ಣನವರಿಗಿದ್ದ ಅತೀ ಸೂಕ್ಷ್ಮ ಭಾಷಾ ಜ್ಞಾನ ಮತ್ತು ವಸಾಹತುವಿನಿಂದ ಮುಕ್ತರಾಗುವ ಹಂಬಲವಿರುವುದು ತಿಳಿಯುತ್ತದೆ. ಅವರಲ್ಲಿದ್ದ ಭಾಷಾ ಪ್ರಜ್ಞೆಯೇ ಇನ್ನೂ ಜೀವಂತವಾಗಿ ನಮ್ಮ ನಡುವೆ ಅವರನ್ನಿಟ್ಟಿರುವುದು. ವಚನದಲ್ಲಿನ ಕೆಲವು ಪದಗಳು ವಿಭಿನ್ನ ಮತ್ತು ಸೂಕ್ಷö್ಮ ಓದನ್ನು ಕೇಳುತ್ತದೆ. ಸಾಮಾನ್ಯವಾಗಿ ಎಲ್ಲರೂ ಬಳಸುವ – ಅತೀ ಮೆಚ್ಚಿರುವ ಬಸವಣ್ಣನವರ ವಚನವಿದಾದ್ದರಿಂದ ಇದರಲ್ಲಿ ವಿಶಿಷ್ಟ ಮತ್ತು ಜಾಗೃತ ಪ್ರಜ್ಞೆ ಮಾಡಿರುವ ಕಾರ್ಯವನ್ನು ನೋಡಲೇಬೇಕೆನಿಸುತ್ತದೆ.  ‘ಉಳ್ಳವರು ಶಿವಾಲಯ ಮಾಡುವರು’ ಸಾಲಿನಲ್ಲಿ  ಅಧಿಕಾರದ ಮೂಲಾಂಶವಾದ ಹಣವನ್ನು ಹೋಂದಿರುವ ಉಳ್ಳವರು ಮತ್ತು ಪೌರೋಹಿತ್ಯದ ಕೇಂದ್ರವಾದ ‘ದೇವಾಲಯ’ದ ಬಗೆಗೆ ನೇರವಾಗಿಯೇ ಮಾತುಬಂದಿದೆ. ‘ಆಲಯ’ ಎನ್ನುವುದು ಸಂಸ್ಕೃತದ ಪದವಾಗಿದ್ದು, ಸಾಮಾನ್ಯ ಸರಳ ವಾಕ್ಯದಲ್ಲಿಯೇ ಹೇಳಿದ್ದಾರೆ. ‘ನಾನೇನ ಮಾಡವೆ? ಬಡವನಯ್ಯಾ.’ ಸಾಲು ಅಸಹಾಯಕತೆಯನ್ನು ತೋಡಿಕೊಳ್ಳುವ ಹಾಗೆ ಬಂದಿದ್ದರೂ, ಕೊನೆಯ ಪದ ವಾಸ್ತವವನ್ನು ಉಳ್ಳವರ ಎದುರು ನಿಲ್ಲಿಸುವಾಗ ‘ಬಡವ’ ಎನ್ನುವ ಕನ್ನಡ ಪದವನ್ನು ಬಳಸಿದ್ದಾರೆ. ಮಾರ್ಗದ ಸಂಸ್ಕೃತ ಪದಕ್ಕೆ ವಿರುದ್ಧವಾದ ಕನ್ನಡ ಪದ ಬಳಸುವ ಮೂಲಕ ಮುಂದಿನ ಮಾತುಗಳನ್ನು ಆಡುತ್ತಿರುವುದು ಅಸಹಾಯಕತೆಯೊಂದಿಗೇ ಅದರಲ್ಲಿನ ಅನನ್ಯತೆಯನ್ನು ಸಾದರಪಡಿಸುವ ಕ್ರಮವಾಗಿದೆ. ‘ಆಲಯ’ ಪದವು ಸಂಸ್ಕೃತದ್ದಾಗಿದ್ದು ಅದಕ್ಕೆ ಪರ್ಯಾಯವಾಗಿ ಕನ್ನಡದ ‘ದೇಗುಲ’ ಎನ್ನುವುದನ್ನು, ಮತ್ತದರ ವಿನ್ಯಾಸವನ್ನು ‘ಕಾಲು’ ‘ಕಂಭ’ ‘ದೇಹ’ ಎನ್ನುವ ಕನ್ನಡ ಪದವನ್ನು ಬಳಸಿರುವುದೇ ವಿಶೇಷವಾಗಿದೆ. ಸಂಸ್ಕೃತದ ‘ಶಿರ’ ಕ್ಕೆ ವಿರುದ್ಧವಾಗಿ ಕನ್ನಡದ ‘ಸಿರ’ ಎನ್ನುವುದನ್ನೂ, ‘ಕಳಶ’ ಕ್ಕೆ ಪರ್ಯಾಯವಾಗಿ ‘ಕಲಸ’ ಎನ್ನುವ ಪದವನ್ನು ಬಳಸಿ ಕಟ್ಟಿರುವ ಪ್ರತಿಮೆ ಏಕಕಾಲದಲ್ಲಿ ಭಾಷಿಕವಾಗಿಯೂ-ಆಚರಣೆಯಲ್ಲಿಯೂ ಯಜಮಾನ್ಯ ಸಂಸ್ಕೃತಿಗೆ ವಿರುದ್ಧವಾಗಿ ಕಟ್ಟಿರುವ ಸಂಕಥನವನ್ನು ಒಡೆಯುತ್ತಿರುವ ಮಹತ್ತರವಾದ ಹಾದಿಯನ್ನು ತಿಳಿಸುತ್ತಿದೆ. ಬಸವಣ್ಣನವರ ಅಂಕಿತದಲ್ಲಿಯೂ ಮೊದಲ ಪದ ‘ಕೂಡಲ’ ಎನ್ನುವುದು ಕನ್ನಡ ಪದವೇ ಆಗಿದ್ದು ‘ದೇವ’ ಎನ್ನುವುದನ್ನು ಹೇಳುತ್ತ ಹಿಂದಿನ ‘ನಾನೇನ ಮಾಡಲಿ ಬಡವನಯ್ಯಾ’ ಎನ್ನುವುದನ್ನು ತಳ್ಳಿಹಾಕುವ ಹಾಗೆ ಅನಿಸುತ್ತದೆ. ಪರ್ಯಾಯ ಸಂಸ್ಕೃತಿಯ ವಕ್ತಾರರಂತಿರುವ ಬಸವಣ್ಣನವರು ಏನು ಮಾಡಬೇಕಿತ್ತೋ ಯಶಸ್ವಿಯಾಗಿ ಮೊದಲು ಭಾಷೆಯ ಮೂಲಕವೇ ಮಾಡಿಬಿಟ್ಟಿದ್ದಾರೆ. ಇಲ್ಲಿನ ‘ನಾನೇನ ಮಾಡಲಿ ಬಡವನಯ್ಯಾ’ ಎನ್ನುವ ಸಾಲು ಒಂದರ್ಥದಲ್ಲಿ ವಚನದ ವ್ಯಂಗ್ಯಧ್ವನಿಯನ್ನು ಹೊರಹೊಮ್ಮಿಸಿ ಬಸವಣ್ಣ ಹುಸಿನಗುವಂತೆನಿಸುತ್ತಿದೆ. ‘ಬಡವನಯ್ಯಾ’ ಪದವು ತನ್ನ ಅರ್ಥ ಸಾಧ್ಯತೆಯನ್ನೇ ಕುಗ್ಗಿಸಿಕೊಂಡು ಹಿನ್ನಲೆಗೆ ಉಳಿಯುವಂತೆನಿಸುತ್ತದೆ. ಕೊನೆಯ ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!’ ಸಾಲಿನಲ್ಲಿ ತಮ್ಮ ಉದ್ದೇಶವನ್ನು ವಾಚ್ಯವಾಗಿ ಸ್ಪಷ್ಟಪಡಿಸುವಲ್ಲಿ ಮತ್ತು ಯಜಮಾನ್ಯಕ್ಕೆ ನೇರವಾಗಿ ಉತ್ತರಿಸುವಲ್ಲಿ ಬಸವಣ್ಣ ಬಳಸಿರುವ, ಅನುಸರಿಸಿದ್ದ ‘ಜಂಗಮ’ ಸ್ಥಿತಿಯನ್ನು ‘ಸ್ಥಾವರ’ ಕ್ಕೆ ವಿರುದ್ಧವಾಗಿ ನಿಲ್ಲಿಸಿ ಬೆರಗಾಗಿಸುತ್ತಾರೆ. ‘ಉಂಟು’ ಮತ್ತು ‘ಇಲ್ಲ’ ಎನ್ನುವ ಎರಡು ವೈರುಧ್ಯಗಳು ಏಕಕಾಲದಲ್ಲಿ ಮತ್ತು ಒಂದಾದನಂತರ ಮತ್ತೊಂದು ಸಮಾನಾಂತರವಾಗಿ ಬಂದಿದ್ದು, ಕೊನೆಗೆ ಇಲ್ಲ ಎನ್ನುವುದು ಓದಿನ ಕೊನೆಯಲ್ಲಿ ಉಳಿಯುತ್ತದೆ. ಮತ್ತದ ಶಾಶ್ವತವಾದ ಸತ್ಯದ ಅವರ ಗ್ರಹಿಕೆಯನ್ನು ಸಾದರಪಡಿಸುತ್ತಿದೆ. ಸಂಸ್ಕೃತದ ಶಬ್ಧಗಳನ್ನೇ ಜಾಗಗಳಲ್ಲಿ ಬಳಸಿದ್ದರೆ ಪರ್ಯಾಯ ಸಂಸ್ಕೃತಿಯ ಅನಾವರಣದ ದಾರಿ ಎನ್ನುವುದನ್ನು ಮಾತನಾಡುವುದಾಗುತ್ತಲೇ ಇರಲಿಲ್ಲ. ಮತ್ತು ಇಷ್ಟೆಲ್ಲಾ ಸೂಕ್ಷ್ಮತೆ ವಚನಕ್ಕೆ ಬರುತ್ತಿರಲಿಲ್ಲವೆಂದೇ ಹೇಳಬಹುದು. ಬರಹಗಾರನೊಬ್ಬನಿಗೆ ಪ್ರಮುಖವಾದ ಎರಡು ನೆಲೆಯೆನಿಸುವುದು ‘ಆಯ್ಕೆ’ ‘ಪ್ರತ್ಯೇಕತೆ’ಗಳನ್ನು ಶೋಧಿಸುವ ಮತ್ತು ಸೃಜಿಸಿಕೊಳ್ಳುವ ಸ್ಥಿತಿ. ‘ಆಯ್ಕೆ’ಯೆನ್ನುವುದು ‘ಅಸ್ಥಿತ್ವ’ದ ಸ್ಥಿತಿ ಮತ್ತು ದಾರಿ, ಜೀವಂತವಾಗಿಡುವಲ್ಲಿ ಸ್ಥಿತಿ. ಇದನ್ನು ಕೈಗೊಳ್ಳುವ ಸಮಯದಲ್ಲಿ ಚಳುವಳಿಯ ಮುನ್ನೆಲೆಯಲ್ಲಿರುವ ನೇತಾರನೊಬ್ಬ ಅನುಸರಿಸಬೇಕಾದ ‘ಜಾಗೃತತೆ’ ಮತ್ತು ‘ನಿಖರತೆ’ ಬಸವಣ್ಣವರಲ್ಲಿದೆ. ಮತ್ತೊಂದು ‘ಪ್ರತ್ಯೇಕತೆ’ಯ ಪ್ರಶ್ನೆ ವಸಾಹತು ಸೃಜಿಸುವ ‘ಸಂಸ್ಥೆ’ಯಿಂದ ತಮ್ಮನ್ನು ಹೊರಗಿಟ್ಟು ನೋಡಿಕೊಳ್ಳುವ ಮತ್ತು ಅಂತರ ಕಾಯ್ದುಕೊಳ್ಳುವ, ಈ ಎರಡು ಕೆಲಸಗಳಿಂದ ನೇತಾರನಾಗಿ ಗುಂಪಿನ ಅಸ್ಥಿತ್ವಕ್ಕೆ ಹಾಕಿಕೊಟ್ಟ ದಾರಿಯಾಗಿ ಅವರ ಎಲ್ಲ ಉದ್ದೇಶಗಳನ್ನು ಏಕಕಾಲದಲ್ಲಿ ವಚನವು ತಿಳಿಸುತ್ತಿದೆ. ಆಳುವ ಮತ್ತು ಗಾಢ ಪ್ರಭಾವ ಇರುವ ಸಂಸ್ಕೃತಿ, ಭಾಷೆಗಳು ಒಂದು ಭ್ರಮೆಯಲ್ಲಿ ನಿಲ್ಲಿಸಿರುವುದು ಇಂದಿಗೂ ಸತ್ಯವೇ ಆಗಿದೆ. ಆದರೆ ಸೂಕ್ಷ್ಮಾವಾಗಿ ಮತ್ತು ಜಾಗೃತನಾಗಿರುವ ಲೇಖಕ, ಬರಹಗಾರ, ಚಿಂತಕ, ಸಾಮಾಜಿಕ ಹೋರಾಟಗಾರ ಆ ಭಾಷೆಗೆ ಪರ್ಯಾಯವಾಗಿ ಮತ್ತೊಂದನ್ನು ಅದೇ ಜಾಗದಲ್ಲಿ ನಿಲ್ಲಿಸುತ್ತಾನೆ. ಈ ಕಾರ್ಯವನ್ನು ಸೈದ್, ಫೂಕೋ, ಡೆರಿಡಾರೇ ಬಂದು ಕನ್ನಡದ ನೆಲದಲ್ಲಿ ಹೇಳಬೇಕಾಗಿಲ್ಲ. ಆ ಕೆಲಸವನ್ನು ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಪ್ರಮಾಣದಲ್ಲಿ ಕನ್ನಡದ ನೆಲದ ಪ್ರಜ್ಞೆ ಸಾಧಿಸಿ ತೋರಿಸಿದೆ ಎನ್ನುವುದು ಅಚ್ಚರಿಯ ಜೊತೆಗೆ ಸತ್ಯವೂ ಆಗಿದೆ. ಭಾಷೆಯೊಂದನ್ನು ಬಳಸಿ ‘ಸಂಸ್ಥೆ’ಗಳು ಭ್ರಮೆಯನ್ನು ಸೃಜಿಸಿ, ಆ ಭ್ರಮೆಯಲ್ಲಿ ಸಿಲುಕಿದವರು ಕೊನೆಗೆ ಅಲ್ಲಿಯೂ ಸಲ್ಲದ – ಇಲ್ಲಿಯೂ ನಿಲ್ಲಲಾರದ ಅತಂತ್ರ ದ್ವಂದ್ವಸ್ಥಿತಿಯನ್ನು ಸೃಷ್ಟಿಸಿ ಹಾಳುಮಾಡಿಬಿಡುತ್ತವೆ.  ಸಮಾಜಿಕ ಹೋರಾಟಗಾರ, ಬರಹಗಾರ, ಲೇಖಕ ಮತ್ತು ಚಿಂತಕನ ಜೀವದ ಮತ್ತು ಅವನ ನಡೆ, ಉದ್ದೇಶಗಳನ್ನು ಪ್ರಕೃತ ವಚನವು ಶಾಶ್ವತವಾಗಿ ಸಾರುತ್ತಿದೆ. ಒಂದು ಹೋರಾಟದ ಮುನ್ನೆಲೆಯಲ್ಲಿರುವ ವ್ಯಕ್ತಿ ‘ಜೀನಿಯಸ್’ (ತಕ್ಷಣದಲ್ಲಿ ಇದಕ್ಕೆ ಪರಿಣಾಮದ ದೃಷ್ಟಿಯಿಂದ ಪರ್ಯಾಯ ಪದವನ್ನು ಬೇಕೆಂದೇ ಬಳಸುತ್ತಿಲ್ಲ) ಎನಿಸುವುದು ವಸಾಹತು ಸೃಜಿಸಿರುವ ಅಥವಾ ಕೊಟ್ಟ ಭಾಷೆಯನ್ನೇ ಬಳಸಿ ಹೋರಡುವವರನ್ನಲ್ಲ–ಅದಕ್ಕೆ ಪ್ರತಿಸ್ಪರ್ಧಿಯಾಗಿ-ವಿರುದ್ಧವಾಗಿ ಮತ್ತೊಂದನ್ನು ತನ್ನಿಂದಲೇ ತನ್ನೊಳಗಿನಿಂದಲೇ ಸೃಜಿಸುವವರನ್ನು ಮತ್ತು ಪರಿಣಾಮಕಾರಿಯಾಗಿ ಬಳಸುವವರನ್ನು ಎನ್ನುವುದನ್ನು ತಳಿದರೆ ಕನ್ನಡದ ನೆಲದ ಅಸ್ಥಿತ್ವ ಮತ್ತು ಹೋರಾಟ ಹೆಚ್ಚು ಉಜ್ವಲವಾದದ್ದು ಎನಿಸದೆ ಇರದು. ಸಮಕಾಲೀನದಲ್ಲಿ ‘ಆಯ್ಕೆ’ ಮತ್ತು ‘ಪ್ರತ್ಯೇಕತೆ’ ಯ ಸಮಸ್ಯೆಗೆ ಬಸವಣ್ಣನವರಲ್ಲಿ ಉತ್ತರ ಸಿಕ್ಕಬಹುದೆನ್ನುವುದಂತೂ ಸತ್ಯವೇ ಆಗಿದೆ.  ಈ ವಚನಕ್ಕೆ ಬೇರೆ ಪಾಂಠಾಂತರಗಳು ಎಂ. ಆರ್. ಶ್ರೀನಿವಾಸಮೂರ್ತಿ ಯವರ ‘ವಚನ ಧರ್ಮಸಾರ.೨ಬಸವನಾಳ ಶಿವಲಿಂಗಪ್ಪನವರ ‘ಬಸವಣ್ಣನವರ ಷಟ್ ಸ್ಥಲದ ವಚನಗಳು.೩ಡಾ. ಎಸ್. ವಿದ್ಯಾಶಂಕರರ ಸಂಪಾದನೆಯ ‘ಎನ್ನ ನಾ ಹಾಡಿಕೊಂಡೆ.೪ಮತ್ತು ಡಾ. ಎಂ. ಎಂ. ಕಲಬುರ್ಗಿ ಯವರ ಸಂಪಾದನೆಯ ‘ಬವಸಯುಗದ ವಚನ ಮಹಾಸಂಪುಟ’.೫ ಪುಸ್ತಕಗಳಲ್ಲಿದೆ. ಆದರೆ ಸಂ. ಶಿ. ಭೂಸನೂರುಮಠರ ಸಂಪಾದನೆಯಲ್ಲಿರುವ ಈ ಮೇಲಿನ ವಚನದ ಪಾಠಾಂತರವು ಬಸವಣ್ಣನವರ ವ್ಯಕ್ತಿತ್ವ ಮತ್ತು ಅವರ ಹೋರಾಟದ ಬದುಕನ್ನು ಸಂಪಾದಕ ಬಹುಸೂಕ್ಷ್ಮವಾಗಿ ಗಮನಿಸಿರುವುದು ತಿಳಿದುತ್ತದೆ. ಪರಾಮರ್ಶನ ಗ್ರಂಥ : ೧. ವಚನ ಸಾಹಿತ್ಯ ಸಂಗ್ರಹ. ಸಂ. ಶಿ ಭೂಸನೂರು ಮಠ. ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್. ಮೈಸೂರು. ಪು ೬೨೬ (೧೯೬೫) ೨. ವಚನಧರ್ಮಸಾರ. ಎಂ. ಆರ್. ಶ್ರೀನಿವಾಸಮೂರ್ತಿ. ಪ್ರಸಾರಾಂ, ಮೈಸೂರುವಿಶ್ವವಿದ್ಯಾನಿಲಯ. ಪು ೨೪೯ (೧೯೪೪) ೩. ಬಸವಣ್ಣನವರ ಷಟ್ ಸ್ಥಲದ ವಚನಗಳು. ಬಸವನಾಳ ಶಿವಲಿಂಗಪ್ಪ. ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ. ಧಾರವಾಡ. ವ. ಸಂ ೮೨೦. ಪು ೨೧೬ (೧೯೫೪) ೪. ಎನ್ನ ನಾ ಹಾಡಿಕೊಂಡೆ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು. ವ. ಸಂ ೮೨೦. ಪು ೬೪೮ (೨೦೧೨) ೫. ಬವಸಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು. ವ. ಸಂ ೮೨೧. ಪು ೭೪ (೨೦೧೬) ************************************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಲ್ಲಿಗೆಯಿಲ್ಲ ಮುಡಿಯಲಿ ಘಮವಾದರೂ ಇರುಳಿಗೆ ಇರಲಿಶಶಿಯಿಲ್ಲ ನಭದಲಿ ನಕ್ಷತ್ರ ವಾದರೂ ಇರುಳಿಗೆ ಇರಲಿ ಬತ್ತಿ ಎಣ್ಣೆ ಕುಡಿದು ಖುಷಿಯಲಿ ಹರಡಿತು ಬೆಳಕು ಕೋಣೆಯಲಿಅಮಲೇರಲು ಪ್ರೀತಿಯ ಮಧುವಾದರೂ ಇರುಳಿಗೆ ಇರಲಿ ಮೌನ ಚೂರಿಯಿಂದ ಇರಿದು ಗಾಯಗೊಳಿಸಿದೆ ಒಲಿದ ಹೃದಯಎದೆಯ ಉರಿ ಆರಲು ಲಾಲಿ ಹಾಡಾದರೂ ಇರುಳಿಗೆ ಇರಲಿ ಬಯಕೆಯ ಮೃಗಜಲದ ಬೆನ್ನಹಿಂದೆ ಓಡಿ ಓಡಿ ಬಳಲಿದೆಅನುರಾಗದ ಬದುಕಾಗಲು ಕನಸಾದರೂ ಇರುಳಿಗೆ ಇರಲಿ ಏಕಾಂಗಿಯ ಬೇಸರದ ಉಸಿರು ಎಣಿಸುತಿದೆ ತಾರೆಗಳನೊಂದ ಜೀವಿಗೆ ಸುಖದ “ಪ್ರಭೆ” ಯಾದರೂ ಇರುಳಿಗೆ ಇರಲಿ ******************************************************

ಗಜಲ್ Read Post »

ಕಾವ್ಯಯಾನ

ಮಿಂಚು ನಾದದಲೆಯ ಮೇಲೆ

ಕವಿತೆ ಮಿಂಚು ನಾದದಲೆಯ ಮೇಲೆ ನೂತನ ದೋಶೆಟ್ಟಿ ನಗುವ ಹೂಗಳು ಹಲವುಬೇಲಿಗುಂಟ ಬೆಳೆದಿವೆಕೈಚಾಚುವ ಆಸೆ ಮಾತ್ರ ಇಲ್ಲ ಕಣ್ಣು ಮಿಟುಕಿಸಿದ ನಕ್ಷತ್ರದ ಮೋಹಏಕೆಂದು ಹೇಳಲಿ? ಹಗಲು ಕಾಣುವ ಹೂಗಳಅಂದ ಚಂದ ಕಂಪುಯಾವುದೂ ಕಂಪಿಸಲೇ ಇಲ್ಲ ರಾತ್ರಿ ನಕ್ಕ ತಾರೆಗೆಒಲವೇ ಧಾರೆ ಎರೆದೆಹೊಳಪಿಗೊ ಚೆಲುವಿಗೊ ಹೇಳಲಾರೆ ಅಂತರಂಗವ ಆವರಿಸಿದ ಬೆಳಕುಮೂಲೆ ಮೂಲೆಯಲಿ ಮಿನುಗುತಿದೆಮಿಂಚುನಾದದಲೆಯ ಮೇಲೆಒಲುಮೆ ಹಾಯಿ ನಡೆಸಿದೆ ಸೊಗಸ ಸಂಗ ಸಾಕು ಇನ್ನುಪ್ರೀತಿ ತೊರೆಯು ಹರಿಯಲಿಬಾಳಿನಾಟದಂಕದಲ್ಲಿಬಣ್ಣ ಮೂಡಿ ಬರಲಿ **********************************

ಮಿಂಚು ನಾದದಲೆಯ ಮೇಲೆ Read Post »

ಇತರೆ, ಲಹರಿ

ಎದಿಹಿಗ್ಗು ಕಡೆತನಕ.

ಭಾವಲಹರಿ. ಎದಿಹಿಗ್ಗು ಕಡೆತನಕ. ರಶ್ಮಿ .ಎಸ್. ಅಳಬಾರ್ದು ಅಂತ ನಿರ್ಧಾರ ಮಾಡೇನಿ ಅಕ್ಕ. ಆಮ್ಯಾಲೆ ಕಣ್ಣೀರು ತಂದಿಲ್ಲ. ಕಂಠ ಮೀರಿ ದುಖ್ಖಿಸಿಲ್ಲ. ಬಿಕ್ಕಿಲ್ಲ’. ‘ತ್ರಾಸು ಆಗ್ತದ. ಆದ್ರ ಅಳೂದ್ರಿಂದ ಸಂದರ್ಭ ಇರೂದಕ್ಕಿಂತ ಬ್ಯಾರೆ ಏನಾಗೂದಿಲ್ಲ. ಇಡೀ ಪರಿಸ್ಥಿತಿಯನ್ನಂತೂ ಬದಲಸಾಕ ಆಗೂದಿಲ್ಲ. ಅದಕ್ಕೆ ಅಳಬಾರ್ದು ಅಂತ ಮಾಡೇನಿ’. ನಮ್ಮ ಚಿಗವ್ವ ನಮ್ಮಮ್ಮಗ ಹೇಳ್ತಿದ್ಲು. ಮನಿ ಹಿತ್ತಲದಾಗ ಬೇವಿನ ಮರಕ್ಕ ಕಟ್ಟಿದ್ದ ಜೋಕಾಲಿಯೊಳಗ ತೂಗಕೊಂತ ಕುಂತ ಚಿಕ್ಕಮ್ಮ ಆಗಲೇ ೫ ದಶಕ ನೋಡ್ದಕ್ಕಿ. ನಮ್ಮಮ್ಮ ೬. ಬ್ಯಾಸಗಿ ಝಳ ತಾಕಲಾರ್ದ ಹಂಗ ಅಪ್ಪ ಹಿತ್ತಲದಾಗ ತೋಟ ಮಾಡ್ಯಾರ. ಅಲ್ಲಿ ತಣ್ಣಗೆ ಕುತ್ಗೊಂಡು ಕಷ್ಟ ಸುಖ ಮಾತಾಡೂ ಮುಂದ ನಾವು ಮಕ್ಕಳು ಇಬ್ಬರ ಮುಖ ಮಿಕಮಿಕ ನೋಡ್ಕೊಂತ ಸುಮ್ನಾಗಿದ್ವಿ. ಮೈ ಇಡೀ ಕಣ್ಣಾಗಿದ್ವು. ಕಿವಿಯಾಗಿದ್ವು. ಅಕ್ಕ–ತಂಗಿ ಇಬ್ರೂ ಕಷ್ಟ ಉಂಡು ಗಟ್ಟಿಯಾದೋರು. ಅಮ್ಮ ಅತ್ತು ಹಗುರಾಗ್ತೀನಿ ಅಂತಂದ್ರ, ಅತ್ರ ಮಂದಿಮುಂದ ಹಗುರಾಗ್ತೀವಿ ಅನ್ನೂ ನಂಬಿಕಿ ತಂಗೀದು. ಭಾಳ ತ್ರಾಸ ಆದ್ರ ಕಣ್ಣೀರಿನ ಮುತ್ತು ಗಲ್ಲಗುಂಟ ಇಳೀತಾವ. ಮುತ್ತಿನ ಮಣಿಯಂಥ ಬಣ್ಣ ನಮ್ಮ ಚಿಗ್ಗವ್ವಂದು. ಹಾಲಿನ ಕೆನಿ ಮ್ಯಾಲೆ ಹಬೆ ಇಬ್ಬನಿ ಕುಂತಂಗ ಕಾಣ್ತದ ಅವಾಗ. ಚಿಕ್ಕಮ್ಮ ಮಾತು ಮುಂದುವರಿಸಿದ್ರು.  ‘ಅಳೂದಂದ್ರ ಏನು? ನಾವು ನಮ್ಮ ದೌರ್ಬಲ್ಯವನ್ನು ತೋರಸೂದು. ನಾವು ನಂಬಿದ್ದು ಎಲ್ಲೊ ಖೊಟ್ಟಿ ಆಗೇದ ಅಂತ ತ್ರಾಸ ಮಾಡ್ಕೊಳ್ಳೂದು. ನಂಬಿದೆದಿಗೆ ಕಾಲ ನೀಡೂ ಪೆಟ್ಟು. ಅದು ಯಾವಾಗಲೂ ಎದಿ ಮುರದು ಬಿರದು ಬರೂಹಂಗ ಇರ್ತದ. ಈ ದುಃಖ್ಖದ್ದ ಕಟ್ಟಿ ಮುರದು ಬರೂವ ನೀರೆ ಕಣ್ಣೀರು. ಅವಕ್ಕೂ ಗಟ್ಟಿಯಾಗಬೇಕು. ಕಲ್ಲಾಗಬೇಕು. ಮನಸು ಹೂ ಕಲ್ಲಾಗಬೇಕು. ಅಂದ್ರ ಸಂತೋಷ ಆದಾಗ ಹೂವಿನ್ಹಂಗ ಅರಳೂದು. ನೋವು ಬಂದ್ರ ಕಲ್ಲಿನ್ಹಂಗ ಗಟ್ಟಿಯಾಗೂದು ಅಷ್ಟೆ. ನಾವು ಅಳೂದ್ರಿಂದ ಏನಾಗ್ತದ? ಇಷ್ಟಕ್ಕೂ ನಮ್ಮ ತ್ರಾಸೇ ದೊಡ್ದು ಅಂದ್ಕೊಂಡಾಗ ಅಳ್ತೀವಿ. ನಮಗ ಎದುರಸಾಕ ಆಗ್ದೇ ಇರೂದು ಯಾವುದೂ ನಮ್ಮ ಜೀವನದಾಗ ಘಟಿಸಾಕ ಸಾಧ್ಯನೇ ಇಲ್ಲ. ಇದು ನಮ್ಮ ಜೀವನದೊಳಗ ಆಗೇದ ಅಂದ್ರ, ಅದಕ್ಕ ನಾವು ಲಾಯಕ್ಕದೀವಿ. ಅದನ್ನು ಎದುರಿಸುವ, ನಿಭಾಯಿಸುವ ಛಾತಿ ನಮಗದ ಅಂತನೇ ಅರ್ಥ. ಹಂಗಿದ್ದಾಗ ಕಣ್ಣೀರು ಸುರಿಸಿ, ಸ್ವಮರುಕದ ಬಾವಿಯೊಳಗ ನಮ್ಮನ್ನೇ ನಾವು ದೂಡಬೇಕು ಯಾಕ?’ ಇಬ್ಬರೂ ಅಕ್ಕಾ ತಂಗೇರು ಹತ್ತು ವರ್ಷದ ನಂತರ ಮಾತಾಡಾಕ ಕುಂತಿದ್ರು. ಅಳಾಕ, ನಗಾಕ ಎರಡಕ್ಕೂ ರಾಶಿ ರಾಶಿ ಮಾತುಗಳಿದ್ವು. ಇವರ ಸಾಲಿಗೆ ದೊಡ್ಡಮ್ಮನೂ ಸೇರ್ಕೊಂಡರ ಅಲ್ಲೊಂದು ಬದುಕಿನ ಪಡಸಾಲಿನ ಬಿಚ್ಕೊಂತದ. ಅವರು ಸೀರಿ ತೊಗೊಂಡ ಲೆಕ್ಕದಿಂದ ಶುರು ಆಗುವ ಮಾತು, ದೇವರಿಗೆ ಒಂದು ಕೈ ನೋಡ್ಕೊಳ್ಳೂತನಾನೂ ಹೋಗ್ತದ.  ಅವರಿಬ್ಬರ ನಡು ನಾನು ಬಾಯಿ ಹಾಕಿದ್ದೆ. ‘ಯಾರರೆ ಅನುಮಾನಿಸ್ದಾಗ, ಅವಮಾನ ಮಾಡ್ದಾಗ, ನಿರ್ಲಕ್ಷ್ಯ ಮಾಡ್ದಾಗ, ನಮ್ಮ ಇರುವನ್ನು ಅಲ್ಲಗಳೆದಾಗ ಮಾತ್ರ ಅಳು ಉಕ್ಕಿ ಬರ್ತದ. ಅದನ್ನು ತಡ್ಯಾಕ ಆಗಾಂಗಿಲ್ಲ. ನೀನೂ ಕಾಕಾರೂ ೩೫ ವರ್ಷಾ ಸಂಸಾರ ಮಾಡೇರಿ. ಈಗ ಹಿಂಗ ಹೇಳ್ತಿ. ನೀ ಖರೆ ಹೇಳು ಮದಿವಿಯಾದ ಹೊಸತರೊಳಗ ಅತ್ತಿಲ್ಲೇನು?’ ಚಿಕ್ಕಮ್ಮ ಸುಮ್ಮನಾಗಿದ್ಲು. ಅಳು ಬರ್ತಿತ್ತೇನೋ? ಇಲ್ಲ. ಒಮ್ಮೆ ನಮ್ಮನಿ ಮಾವಿನ ಗಿಡ ದಿಟ್ಟಿಸಿ ನೋಡ್ದಕ್ಕಿನ, ‘ನೋಡಲ್ಲೆ, ಆ ದೊಡ್ಡ ಮಾವಿನ ಕಾಯಿನ ಎಲಿ ಹೆಂಗ ಮರೀ ಮಾಡ್ಯಾವು ನೋಡು… ಎಷ್ಟು ಮಂಗ್ಯಾ ಬಂದ್ರೂ ಕಂಡಿಲ್ಲದು’ ಅಂದ್ರು. ಅಂಗಳದಾಗ ನಿಂತು ಹಿಸಿಕಿ ಕೊಟ್ಟ ಹಣ್ಣು, ಕಣ್ಮುಚ್ಚಿ ಹೀರ್‌್ಕೊಂತ ನಿಂತ ನನಗ ಆ ಕಾಯಿ, ಎಲಿ, ಮಂಗ್ಯಾ ಯಾವೂ ಕಾಣವಲ್ದಾಗಿತ್ತು. ನಾನು ಚಿಕ್ಕಮ್ಮನಿಗೆ ಸವಾಲು ಹಾಕೇನಿ ಅನ್ನೂ ಮದದೊಳಗ ರಸ ಹೀರ್ತಿದ್ದೆ. ‘ಮನಸು ಹಂಗೆ. ಕೆಲವೊಮ್ಮೆ ಹುಡುಕಿ ಹೆಕ್ಕಿ, ಹಣ್ಣು ಕಿತ್ತೊಗಿಯೂ ಮಂಗ್ಯಾನ್ಹಂಗ. ಇನ್ನೂ ಕೆಲವೊಮ್ಮೆ ಯಾರ ಕಣ್ಣಿಗೂ ಕಾಣದೇ ಇರೂಹಂಗ ಬೆಚ್ಚಗೆ ಕಾಪಿಡುವ ಎಲಿ ಇದ್ಹಂಗ. ಇದು ಕಡೀಕ ಕೇಳೂದು ನಮ್ಮ ಮಾತು ಮಾತ್ರ. ಎಲ್ಲಿ ಮಂಗ್ಯಾ ಆಗಬೇಕು? ಎಲ್ಲಿ ಮನಶಾ ಆಗಬೇಕು ಅನ್ನೂ ನಿರ್ಧಾರ ನಮ್ಮದೇ ಆಗಿರ್ಬೇಕು. ಅಳ್ತಿದ್ದೆ. ನಮ್ಮತ್ತಿ ಎಲ್ಲಾ ಹೆಣ್ಣ ಹಡದಿಯಲ್ಲಬೇ ಅಂತ ಹಂಗಿಸಿದಾಗೆಲ್ಲ ಅಳ್ತಿದ್ದೆ. ಹಿಂಗೆ ಒಮ್ಮೆ ಅತ್ತು ಅತ್ತು ಹೈರಾಣಾದಾಗ ಅನಿಸಿದ್ದು ಅತ್ರೇನು ಮಕ್ಕಳು ಗಂಡಾಗ್ತಾವ? ಇಲ್ಲ. ಅತ್ತೇನು ಪ್ರಯೋಜನ? ದೇವರು ಹೆಣ್ಣು ಕೊಟ್ಟಾನ. ನಮಗೂ ಅಂಥಾ ಹೆಣ್ಣು ಕೊಡಲಿಲ್ಲ ಅಲ್ಲ ಅಂತ ಮಂದಿ ಕರಬೂಹಂಗ ಮಕ್ಕಳನ್ನ ಬೆಳಸ್ತೀನಿ ಅಂತ ನಿರ್ಧಾರ ಮಾಡ್ದೆ. ಯಾವ ಕಾರಣಕ್ಕೂ ಅಳೂದಿಲ್ಲ. ದೇವರು ನಾ ಅತ್ತೂ ಕರದು ಮಾಡ್ಲಿ ಅನ್ನೂವಂಥ ಸಂದರ್ಭ ತಂದಾಗೂ ಕಲ್ಲಾಗಿದ್ದೆ. ಇದು ಜಿದ್ದು. ದೇವರ ಮ್ಯಾಲಿನ ಜಿದ್ದು. ಈ ಜಿದ್ದಿನಿಂದ ಇನ್ನೊಬ್ಬರಿಗೆ ತ್ರಾಸಂತೂ ಇಲ್ಲಲ್ಲ.  ಆಮೇಲೆ ನಿಮ್ಮಣ್ಣ ಹುಟ್ದಾ. ಆ ಮಾತು ಬ್ಯಾರೆ. ಆದ್ರ ಇವೊತ್ತಿಗೂ ಅಳಬಾರದು ಅನ್ನೂ ನಿರ್ಧಾರ ಗಟ್ಟಿಯಾಗಿಯೇ ಉಳದದ. ಇದು ನಮ್ಮೊಳಗಿನ ಬೆಳಕು. ಅದು ನಮಗೇ ಕಾಣಬೇಕು. ನಮ್ಮ ಜೀವನಾನ ತೋರಬೇಕು. ಮುಂದ ಅಳಬೇಕು ಅನ್ನಸ್ದಾಗಲೆಲ್ಲ ಬೇಂದ್ರೆ ಅಜ್ಜನ ಪದಗಳು ನನಗ ಗಟ್ಟಿಯಾದ್ವು. ರೊಟ್ಟಿ ಬಡ್ಕೊಂತ ‘ನನ್ನ ಕೈ ಹಿಡಿದಾಕೆ ಅಳುನುಂಗಿ ನಗು ಒಮ್ಮೆ, ನಾನೂನು ನಕ್ಕೇನ’ ಹಾಡು ಹಾಡ್ತಿದ್ರ ರೊಟ್ಟಿ ತೆಳು ಆಗ್ತಿದ್ವು. ಮನಸೂ ತಿಳಿ ಆಗ್ತಿತ್ತು. ತೀರ ಅಂಥ ಸಂದರ್ಭ ಬಂದ್ರ, ನೀನು ಇದನ್ನ ಮನನ ಮಾಡ್ಕೊ. ‘ಹುಸಿ ನಗುತ ಬಂದೇವ, ನಸುನಗುತ ಬಾಳೋಣ, ತುಸು ನಗುತ ತೆರಳೋಣ’ ‘ಬಡತನ ಗಿಡತನ ಕಡೆತನಕುಳಿದಾವೇನ, ಎದೆಹಿಗ್ಗು ಕಡೆ ಮಟ್ಟ, ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ, ಕಡೆಗೋಲು ಹಿಡಿ ಹುಟ್ಟ’ ಅಂತ ಹಾಡಾಕ ಸುರು ಮಾಡಿದ್ರು. ಮೊದಲಾದ್ರ ಇವರ ಚಿತ್ರಹಾರ್ ಮುಗಿಯೂದಿಲ್ಲ ಅಂತ ಮೂಗುಮುರಿಯೂ ಮಕ್ಕಳು ಅವೊತ್ತು ಸುಮ್ನ ಕೇಳಿರಲಿಲ್ಲ. ಕೇಳಿ ಸುಮ್ನ ಆಗಲೂ ಇಲ್ಲ. ‘ಗಂಡ ಅಂತಾನಂತ ಅತ್ಗೊಂತ ಕುಂತ್ರ, ಸಿಟ್ಟಿಗೆದ್ರ ಬದುಕು ಮೂರಾಬಟ್ಟಿ ಆಗ್ತದ. ಕಟ್ಗೊಂಡ ಗಂಡ ಪೂರ್ವಜನ್ಮದ ಮಗಾ ಅಂತ ತಿಳ್ಕೊಂಡು ಕ್ಷಮಿಸ್ಕೊಂತ ಹೋಗಬೇಕು. ಅವರೂ ಅಷ್ಟೆ. ಕಟ್ಗೊಂಡು ಹೆಂಡ್ತಿ, ಮಗಳಿದ್ಹಂಗ ಅನ್ನೂ ಮಮಕಾರ ಬೆಳಸ್ಕೊಂಡ್ರ ಜಗಳ ಕಡಿಮಿ ಆಗ್ತಾವ. ಎದಿಹಿಗ್ಗು ಉಳದೇ ಉಳೀತದ… ಇವೆಲ್ಲ ಕಾಲ ಮಾಗಿದ್ಹಂಗ, ಪ್ರೀತಿ ಗಟ್ಟಿ ಆದ್ಹಂಗ ಬರ್ತದ. ಈಗೀಗ ನೀವು ಪ್ರೀತಿ ಬಲಿಯಾಕೆ ಬಿಡೂದಿಲ್ಲ. ಪ್ರೇಮದ ಕಾವು ಇಳಿಯೂ ಮುನ್ನ, ಪ್ರೇಮದ ಪೂರ ಕಡಿಮಿ ಆಗಿ, ನದಿ ಹೊಳಿ ಹರಿಯೂ ಮೊದಲೇ ದಾರಿ ಬ್ಯಾರೆ ಅನ್ನೂಹಂಗ ಜಗಳಾಡ್ತೀರಿ. ಕಾದು ನೋಡ್ರಿ. ‘ಜಗಳ ಕಾಯ್ದು’ ಅಲ್ಲ‘ ಅಂತಹೇಳಿ ಸುಮ್ನಾಗಿದ್ರು. ಈ ‘ಎದಿಹಿಗ್ಗು ಕಡೆತನಕ’ ಅನ್ನೂ ಪದ, ಹಸಿ ಗೋಡಿಯೊಳಗ ಹಳ್ಳ ನೆಟ್ಟಂಗ ಗುರಿ ಮುಟ್ಟಿತ್ತು. ಅನ್ನೋರು ಅಂತಾರ. ಆಡ್ಕೊಳ್ಳೋರು ಆಡ್ಕೊಂತಾರ. ನಮ್ಮ ಎದಿ ಹಿಗ್ಗು ನಮಗಿದ್ರ ಯಾವ ನೋವು ಎಷ್ಟು ಹೊತ್ತಿನ ಅತಿಥಿ? ಸದಾ ಕಣ್ಣೀರೊಳಗ ತೇಲೂ ನನಗ ಇದು ಪಾಠ ಆಗಿತ್ತು. ಆದ್ರ ಗಟ್ಟಿಯಾಗೂದು, ಗಟ್ಟಿ ಮಾಡೂದು ಅವರಿವರ ಮಾತಲ್ಲ. ನಮ್ಮ ಬದುಕು. ****************************************

ಎದಿಹಿಗ್ಗು ಕಡೆತನಕ. Read Post »

ಕಾವ್ಯಯಾನ

ಕನಸು

ಕವಿತೆ ಕನಸು ಮೋಹನ್ ಗೌಡ ಹೆಗ್ರೆ ಜಗದಗಲವ ಅಳೆದ ಕಣ್ಗಳುಎದೆಯದವ ತಟ್ಟಿದ ಮೌನ ಮಾತುಗಳುಅಮೂರ್ತ ವಿಸ್ಮಯಗಳ ಮೂಟೆ ಕಟ್ಟಿ ಮುದ್ದಾಡುತ್ತವೆನಮ್ಮೊಳಗೆ ಹೊಸ ಕನಸಿನ ಪರಪಂಚದೊಂದಿದೆ…….. ಕಣ್ಣಲ್ಲಿ ನೋಡದೇ ಇದ್ದರೂಕೈಯಲ್ಲಿ ಮುಟ್ಟದಿದ್ದರೂಅಲ್ಲೊಂದು ಕ್ಷಣಿಕ ಮೂರ್ತ ಸ್ಥಿತಿಪರಿಚಿತ ಅಪರಿಚಿತ ವ್ಯಕ್ತಿ ಜಾಗೆಗಳ ಅನಾವರಣ ಕನಸುಗಳಿಗೋ ಸಾಕಷ್ಟು ಕವಲುಗಳುಹೌದೆನಿಸುವ, ಬೇಕು, ಬೇಡವೆನಿಸೋನಮ್ಮದೇ ವಸ್ತು ವಿಷಯಗಳೇ ಕನಸಿನ ಒಡಲಾಳಆದರೂ ಹೋಲಿಕೆಯಾಗದ ಕನಸುಗಳೂ ಒಮ್ಮೊಮ್ಮೆ ಕನಸಿನ ನೂರು ಮುಖಗಳಲ್ಲಿಪ್ರೀತಿ, ಖುಷಿ, ಭಯ, ನಿರೀಕ್ಷೆಗಳಿದ್ದರೂಕಂಡು ಕಾಣದಾದ ಕನಸನೂಕ್ಷಣಿಕ ಮನದಾಳದಲ್ಲಿ ಇರಿಸಿಕೊಂಡಿದ್ದಿದೆ ಕನಸಿನ ವಿಳಾಸ ಪಡೆದು ಮಾತಾಡಬೇಕಿದೆಭ್ರಷ್ಟತೆ, ನ್ಯಾಯ ನಿಷ್ಠತೆಕೆಡಕುಗಳಮುಂಚಿತವಾಗಿಯೇ ಎದುರಿಸುವ ತಯಾರಿಗಾಗಿಒಡೆದು ಹೋದ ಅನಾಥ ಮನಸುಗಳಿಗೆಮನೆ ಇದ್ದೂ ಹಸಿದೇ ಇರುವ ಒಡಲುಗಳಿಗೆಎಲ್ಲ ಇದ್ದೂ ಇಲ್ಲದಂತ ಕಣ್ಣುಗಳಿಗಿಷ್ಟುಕನಸಲ್ಲಾದರೂ ಖುಷಿ ಪಡಿಸೆಂದುಒಂದು ಆಪ್ತ ತಾಕಿತು ಮಾಡಲು…….. ********************************

ಕನಸು Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….7 ಅಲಗೇರಿಯಲ್ಲಿ ಬೆಂಕಿ ಮತ್ತು ಮೊಲ             ನಾಗಮ್ಮಜ್ಜಿಯ ಅಂತ್ಯಸಂಸ್ಕಾರ ಅನಿವಾರ್ಯವಾಗಿ ಕಾರವಾರದಲ್ಲಿ ನಡೆದುಹೋಯಿತು. ಕ್ರಿಯಾ ಕರ್ಮಗಳನ್ನು ಪೂರ್ಣಗೊಳಿಸುವವರೆಗೆ ಊರಿಗೆ ಮರಳುವ ಹಾಗೆಯೂ ಇರಲಿಲ್ಲ. ತಾತ್ಕಾಲಿಕವಾಗಿ ನಮ್ಮ ಪರಿವಾರ ಕಾರವಾರ ತಾಲೂಕಿನ ಅರಗಾ ಎಂಬಲ್ಲಿ ಶಾನುಭೋಗಿಕೆಯಲ್ಲಿರುವ ನಾರಾಯಣ ಆಗೇರ ಎಂಬ ಜಾತಿ ಬಂಧುವೊಬ್ಬರ ಮನೆಯಲ್ಲಿ ವಾಸ್ತವ್ಯ ಮಾಡಬೇಕಾಯಿತು. ಶಾನುಭೋಗರ ಪತ್ನಿ (ಅವಳ ಹೆಸರೂ ನಾಗಮ್ಮ) ನನ್ನ ಯೋಗಕ್ಷೇಮಕ್ಕೆ ನಿಂತಳು. ತಬ್ಬಲಿ ತನದಲ್ಲಿ ನೊಂದು ಹಾಸಿಗೆ ಹಿಡಿದ ಅವ್ವ, ತರಬೇತಿಯ ಜವಾಬ್ದಾರಿಯಲ್ಲಿ ದಿಕ್ಕು ತೋಚದಂತಿದ್ದ ಅಪ್ಪ ಮತ್ತು ಹಸುಳೆಯಾದ ನನಗೆ ಅಂದು ನಾರಾಯಣ ಶಾನುಭೋಗ ದಂಪತಿಗಳು ನೀಡಿದ ಆಶ್ರಯ, ಮಾಡಿದ ಉಪಕಾರಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ಅವ್ವ ಈಗಲೂ ನೆನಪಿಸಿಕೊಳ್ಳುತ್ತಾಳೆ. ಆದರೆ ಅವರಿಗೆ ಕೃತಜ್ಞತೆ ಹೇಳಲು ಇಬ್ಬರೂ ಬದುಕಿ ಉಳಿದಿಲ್ಲ ಎಂಬುದು ನಮ್ಮ ದೌರ್ಭಾಗ್ಯ!             ಮರಳಿ ಮಾಸ್ಕೇರಿಯ ತೌರಿಗೆ ಬಂದು ಸೇರುವಾಗ ಅವ್ವನಿಗೆ ತಾಯಿಯಿಲ್ಲದ ತೌರುಮನೆಯಾಗಿತ್ತು ಅದು. ಹಾಗೆಂದು ಅವ್ವ ನೊಂದುಕೊಂಡಿದ್ದರೂ ಮಾಸ್ಕೇರಿಯ ಜಾತಿ ಬಂಧುಗಳೆಲ್ಲರೂ ತಾಯಿ ತಂದೆಯರ ಹಾಗೆ ಅಕ್ಕರೆ ತೋರಿದರಂತೆ. ಅದರಲ್ಲಿಯೂ ಸಾಕವ್ವ ಎಂಬ ಮುದುಕಿ ಸರಿಯಾದ ಬಾಣಂತನವಿಲ್ಲದೆ ಅವ್ವನ ಮುಖ ಸೊರಗಿದುದನ್ನು ಗ್ರಹಿಸಿ ಎರಡು ತಿಂಗಳು ಕಟ್ಟು ನಿಟ್ಟಿನ ಬಾಣಂತನ ಮಾಡಿದಳಂತೆ. ತನ್ನ ಮನೆಯಿಂದ ಹತ್ತಾರು ಮಾರು ಅಂತರದಲ್ಲಿದ್ದ ನಮ್ಮ ಮನೆಗೆ ಮುಂಜಾನೆ ಸಂಜೆ ತಪ್ಪದೇ ಬರುತ್ತ ಅರಶಿನ ಎಣ್ಣೆ ತಿಕ್ಕಿ, ಅಡಕಲ ತುಂಬ ಬಿಸಿನೀರು ಹೊಯ್ದು, ಧೂಪದ ಹೊಗೆ ಹಾಕಿ ತಾಯಿ ಮಗುವನ್ನು ಉಪಚರಿಸಿದ ಸಾಕವ್ವ ಅವ್ವನಿಗೆ ಹದವಾದ ಕಾಳು ಮೆಣಸಿನ ಚಟ್ನಿಯನ್ನು ಮಾಡಿ ಉಣ್ಣಿಸುತ್ತಿದ್ದಳಂತೆ. ಸಾಕವ್ವನ ಅಂಥ ಕಟ್ಟುನಿಟ್ಟಿನ ಬಾಣಂತನದಿಂದಾಗಿಯೇ ಮುಂದೆ ಮತ್ತೆ ಐದು ಜನ ಮಕ್ಕಳನ್ನು ಹೆತ್ತರೂ ತನ್ನ ದೇಹದ ಚೈತನ್ಯ ಉಡುಗದೆ ಉಳಿಯುವುದು ಸಾಧ್ಯವಾಯಿತು ಅನ್ನುತ್ತಾಳೆ ಅವ್ವ.             ಬೆಳ್ಳಗೆ ಎತ್ತರದ ನಿಲುವಿನ ಸಾಕವ್ವ’ ಅವ್ವನಿಗೆ ಮಾತ್ರ ಸಾಕವ್ವನಾಗಿರದೆ ಕೇರಿಗೇ ಅಕ್ಕರೆಯ ಅವ್ವನಾಗಿದ್ದಳಂತೆ. ಶುಚಿಯಾಗಿ ಅಡಿಗೆ ಮಾಡುವ ಅವಳು, ಕೇರಿಯಲ್ಲಿ ಯಾರಿಗೇ ಕಾಯಿಲೆಯಾದರೂ ನಾರುಬೇರುಗಳ ಕಷಾಯ ಮಾಡಿ ಕುಡಿಸಿ ಕಾಯಿಲೆಗಳನ್ನು ಗುಣ ಪಡಿಸುತ್ತಿದ್ದಳಂತೆ. ೧೯೬೧-೬೨ ರ ಸುಮಾರಿಗೆ ನಾವೆಲ್ಲ ಬನವಾಸಿಯಲ್ಲಿರುವಾಗ ಊರಲ್ಲಿ ಹಬ್ಬಿದ ಆಮಶಂಕೆ’ ಕಾಯಿಲೆ ನಮ್ಮಕೇರಿಯ ಒಂದಿಷ್ಟು ಪ್ರಾಯದ ಮತ್ತು ಎಳೆಯ ಮಕ್ಕಳನ್ನು ಬಲಿತೆಗೆದುಕೊಂಡಿತ್ತು. ಸಾಕವ್ವಜ್ಜಿ ಕೂಡ ಇದೇ ಕಾಯಿಲೆಯಲ್ಲಿ ಸಾವು ಕಂಡಿದ್ದಳು.             ಕಾರವಾರದ ಶಿಕ್ಷಕ ತರಬೇತಿಯ ಬಳಿಕ ಕೆಲವು ವರ್ಷಗಳಲ್ಲಿ ಅಪ್ಪನಿಗೆ ಅಂಕೋಲಾ ತಾಲೂಕಿನ ಅಲಗೇರಿ’ ಎಂಬ ಹಳ್ಳಿಯ ಸರಕಾರಿ ಶಾಲೆಗೆ ವರ್ಗವಾಯಿತು. ನನಗೆ ಮೂರೋ ನಾಲ್ಕೋ ವರ್ಷ ತುಂಬಿರಬಹುದು. ಆಗಿನ್ನೂ ಬಾಲವಾಡಿ, ಅಂಗನವಾಡಿ ಇತ್ಯಾದಿ ವ್ಯವಸ್ಥೆ ಇರಲಿಲ್ಲ. ನಾನು ಮನೆಯಲ್ಲೇ ಆಡಿಕೊಂಡಿದ್ದೆ. ನಮಗೆ ನಮ್ಮ ಜಾತಿಯ ಜನರ ಕೇರಿಯಲ್ಲೇ ವಾಸ್ತವ್ಯಕ್ಕೆ ಒಂದು ಚಿಕ್ಕ ಹುಲ್ಲಿನ ಮನೆ ವ್ಯವಸ್ಥೆಯಾಗಿತ್ತು. ಅಪ್ಪ ಅದಾಗಲೇ ಹಳ್ಳಿಯ ಜನರ ಯಕ್ಷಗಾನ ಬಯಲಾಟಗಳಿಗೆ ಅರ್ಥಬರೆದುಕೊಡುವುದೂ, ಕುಣಿತ ಕಲಿಸುವುದೂ ಇತ್ಯಾದಿ ಮಾಡುತ್ತಿದ್ದ. ಇದರಿಂದ ಇತರ ಸಮಾಜದ ಜನರು ಅಪ್ಪನನ್ನು ವಿಶೇಷ ಗೌರವದಿಂದ ಕಾಣುತ್ತಿದ್ದರು. ಸಮಯಕ್ಕೊದಗಿ ಸಹಾಯವನ್ನು ಮಾಡುತ್ತಿದ್ದರು. ಹೆಚ್ಚಾಗಿ ಅಲ್ಲಿನ ಹಾಲಕ್ಕಿಗಳು ಮನೆಯವರೆಗೂ ಬಂದು ಹೆಚ್ಚಿನ ಪ್ರೀತಿ, ವಿಶ್ವಾಸ ತೋರಿಸುತ್ತಿದ್ದರು. ತಾವು ಬೆಳೆದ ತರಕಾರಿಗಳನ್ನು ಪುಕ್ಕಟೆಯಾಗಿ ತಂದು ಕೊಡುತ್ತಿದ್ದರು. ಒಬ್ಬ ಹಾಲಕ್ಕಿ ಗೌಡನಂತೂ ಒಂದು ಮೊಲವನ್ನು ಜೀವಂತ ಹಿಡಿದು ತಂದು ಅಪ್ಪನಿಗೆ ಕಾಣಿಕೆಯಾಗಿ ಒಪ್ಪಿಸಿದ್ದ. ಅಪ್ಪ ಅದಕ್ಕೊಂದು ಪಂಜರ ಮಾಡಿ ಸೊಪ್ಪು ಸದೆ ತಿನ್ನಿಸಿ ಅಕ್ಕರೆ ತೋರುತ್ತಿದ್ದರೆ, ನನಗೋ ಅದು ಜೀವಂತ ಆಟಿಗೆಯ ವಸ್ತುವಾಗಿತ್ತು. ಒಂದೆರಡು ತಿಂಗಳಲ್ಲೇ ನಮಗೆ ಹೊಂದಿಕೊಂಡ ಮೊಲ ಪಂಜರದ ಹೊರಗೂ ಅಷ್ಟೇ ನಿರಾಳವಾಗಿ ಓಡಾಡತೊಡಗಿತು. ಅಪ್ಪ ಶಾಲೆಗೆ ಹೊರಟರೆ ಹತ್ತು ಹೆಜ್ಜೆಯಾದರೂ ಅವನೊಟ್ಟಿಗೆ ಕುಪ್ಪಳಿಸಿ ನಡೆದು ಮತ್ತೆ ಆಚೀಚೆ ಬೆಕ್ಕು ನಾಯಿಗಳ ಸದ್ದು ಕೇಳಿದರೆ ಮರಳಿ ಬಂದು ಗೂಡು ಸೇರುತ್ತಿತ್ತು.             ಯಾವ ಊರಿನಲ್ಲಾದರೂ ಸಜ್ಜನರ ನಡುವೆಯೇ ಒಂದಿಬ್ಬರಾದರೂ ನಯವಂಚಕ ಜನ ಇದ್ದೇ ಇರುತ್ತಾರೆ ಎಂಬ ಸರಳ ಸತ್ಯದ ಅರಿವು ನಮ್ಮ ಮುಗ್ಧ ತಾಯಿ ತಂದೆಯರ ಗಮನಕ್ಕೆ ಬರಲೇ ಇಲ್ಲ. ಮೊಲವನ್ನು ಕಾಣಿಕೆ ನೀಡಿದ ಅದೇ ಜಾತಿಯ ಮನುಷ್ಯನೊಬ್ಬ ಮೆತ್ತಗಿನ ಮಾತನಾಡಿ, “ಮೊಲಕ್ಕೆ ಹುಲ್ಲು ಮೇಯಿಸಿ ತರುವೆ” ಎಂದು ಸುಳ್ಳು ಹೇಳಿ ಕೊಂಡೊಯ್ದವನು ಅದನ್ನು ಕೊಂದು ತಿಂದು ವಂಚನೆ ಮಾಡಿದ. ಅಪ್ಪ-ಅವ್ವ ಮತ್ತು ನಾನು ಮೊಲದ ಸಾವಿಗಾಗಿ ಮರುಗುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾಡುವಂತಿರಲಿಲ್ಲ.             ಅಲಗೇರಿಯಲ್ಲಿ ನನ್ನನ್ನು ಆಡಿಸುವುದಕ್ಕೂ ಆಯಿತು ತಾನು ಶಾಲೆ ಕಲಿಯುವುದಕ್ಕೂ ಆಯಿತು ಎಂಬ ಉದ್ದೇಶದಿಂದ ಅವ್ವನ ಚಿಕ್ಕಪ್ಪನ ಮಗ (ನನ್ನ ಸೋದರ ಮಾವ) ರಾಮ ಎಂಬ ಹುಡುಗ ಬಂದು ನಮ್ಮ ಜೊತೆಗೆ ಉಳಿದುಕೊಂಡಿದ್ದ. ಅಗ್ಗರಗೋಣದ ನಮ್ಮ ಸೋದರತ್ತೆಯ (ನಮ್ಮ ತಂದೆಯವರ ಅಕ್ಕ) ಮಗ ನಾರಾಯಣ ಎಂಬುವವನೂ ಕೆಲವು ದಿನ ನಮ್ಮೊಡನೆಯೇ ಇದ್ದ. ಇಬ್ಬರೂ ನನ್ನನ್ನು ಮುದ್ದು ಮಾಡುತ್ತ, ಹಟ ಮಾಡಿದರೆ ಬಡಿದು ತಿದ್ದುತ್ತ ಅಕ್ಕರೆಯಿಂದ ಆಟವಾಡಿಸುತ್ತಿದ್ದರು. ನಮಗೆ ಇಂಥಹುದೇ ಆಟಿಗೆ ವಸ್ತು ಎಂಬುದೇನೂ ಇರಲಿಲ್ಲ. ಮುರಿದ ತೆಂಗಿನ ಹೆಡೆ, ಗರಟೆ ಚಿಪ್ಪು, ಬಿದಿರಿನ ಕೋಲು, ಹುಲ್ಲಿನ ಬಣವೆ ಇತ್ಯಾದಿ ನಿಸರ್ಗ ಸಹಜ ವಸ್ತುಗಳೇ ನಮಗೆ ಆಟಿಕೆಯಾಗಿದ್ದವು.             ಒಂದು ಮುಸ್ಸಂಜೆಯ ಹೊತ್ತು. ಅವ್ವ ಮೀನು ಕೊಯ್ಯುತ್ತಾ ಅಂಗಳದ ಆಚೆ ಕುಳಿತಿದ್ದಳು. ಬದಿಯ ಮನೆಯವಳು ಕತ್ತಲಾಯಿತೆಂದು ನಮ್ಮ ಮನೆಯ ದೀಪದ ಬುರುಡಿಯನ್ನು ತನ್ನ ಮನಗೊಯ್ದು ಎಣ್ಣೆ ಹಾಕಿ ಹೊತ್ತಿಸಿ ತಂದ… ************************************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಪುಸ್ತಕ ಸಂಗಾತಿ

ಬಿಳಿ ಸಾಹೇಬನ ಭಾರತ

ಪುಸ್ತಕ ಸಂಗಾತಿ ಬಿಳಿ ಸಾಹೇಬನ ಭಾರತ ಪುಸ್ತಕ: ಬಿಳಿ ಸಾಹೇಬನ ಭಾರತಲೇಖಕರು: ಜಗದೀಶ್ ಕೊಪ್ಪಪ್ರಕಾಶನ: ಮನೋಹರ ಗ್ರಂಥಮಾಲೆ ‌ಬೆಲೆ: 90 ರೂಲಭ್ಯತೆ : ಸಂಗಾತ ಪುಸ್ತಕ, ಧಾರವಾಡ ಜಿಮ್ ಕಾರ್ಬೆಟ್ ಅವರ ಪುಸ್ತಕಗಳು ಎಷ್ಟು ಓದಿದರು ಮುಗಿಯದ ಕುತೂಹಲ ಭರಿತ ಪುಸ್ತಕಗಳು .ಈ ಪುಸ್ತಕ ಕಾರ್ಬೆಟ್ ಅವರ ಜೀವನದ ಮತ್ತಷ್ಟು ವಿಶೇಷ ಸಂಗತಿಗಳನ್ನು ಓದುಗರಿಗೆ ಪರಿಚಯಿಸುತ್ತವೆ . ಇದು ಶಿಕಾರಿ ,ಕಾಡಿನ ಅನುಭವದ ಹೊತ್ತಿಗೆ ಅಲ್ಲ ಪುಸ್ತಕ ಅವರ ವೈಯಕ್ತಿಕ ಬದುಕಿನ ಅನುರೂಪ ಮಾಹಿತಿ ನೀಡುತ್ತದೆ . ಇಲ್ಲಿ ಆತ್ಮೀಯತೆ ,ಮಾನವೀಯತೆ, ದಕ್ಷತೆ, ಪ್ರಮಾಣಿಕತೆ ಬಹು ಪ್ರಧಾನವಾಗಿ ಕಾಣುವ ಅಂಶಗಳು . ಪ್ರಾಮಾಣಿಕತೆ ,ದಕ್ಷತೆ ಸರಳತೆ ,ಮಾನವೀಯತೆ ಎಲ್ಲರಗೂ ಬೇಕು ಆದರೆ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಯಾರೂ ಸಿದ್ದರಿಲ್ಲ..!!!?? .ಬರಿಯ ಪುಸ್ತಕದ ಮಾತಾಗಿ ಇವು ಉಳಿಯುವಂತಾಗಿದೆ .ಹೀಗಿರುವಾಗ ಭಾರತವನ್ನು ಭಾರತೀಯರಿಗಿಂತ ಹೆಚ್ಚಿನದಾಗಿ ಪ್ರೀತಿಸಿ ,ಅವರಿಗೆ ಗೆಳಯನಾಗಿ ,ಕಾವಲಿಗಾರನಾಗಿ ,ಅವರೊಂದಿಗೆ ಕಾರ್ಮಿಕನಾಗಿ ,ವೈದ್ಯನಾಗಿ ,ಬಾಳಿ ಸಾರ್ಥಕ ಸಮರ್ಥ ಜೀವನ್ನು ಉಳಿಸಿಹೋದ ಜಿಮ್ ಕಾರ್ಬೆಟ್ ಅಸಮಾನ್ಯ ರಾಗಿ ಉಳಿಯುತ್ತಾರೆ ಸ್ಮೃತಿ ಪಟಲದಲ್ಲಿ . ಸರಳತೆಯನ್ನು ಅನಾಯಾಸವಾಗಿ ಪಾಲಿಸಿ ,ಮುಗ್ದ ಜನರ ಬದುಕಿಗಾಗಿ ಸದಾ ಚಿಂತಿಸಿ, ಅವರಿಗಾಗಿ ಬಂಡಯವನ್ನು ಹಾರಿಸಿದ ಜಿಮ್ ಕಾರ್ಬೆಟ್. ನೂರಾರು ಮರಗಳು ಒಂದೇ ದಿನದಲ್ಲಿ ರೈಲಿಗಾಗಿ ಧರೆಗುರುಳಿದಾಗ ಅತೀವ ನೋವನ್ನು ಅನುಭವಿಸುತ್ತಾರೆ .ಪಕ್ಷಿಗಳ ನೋವು ,ಬದುಕಿನ ಕುರಿತು ಬಾಲ್ಯದ ಆಸಕ್ತಿ ಮುಂದೆ ಅವರುಪರಿಸರದ ಕಾಳಜಿಯನ್ನು ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಲ್ಲಿ ಯಶಸ್ವಿಯಾಗುವಂತೆ ಮಾಡಿತ್ತದೆ …! ದಮನಕಾರಿ ಬ್ರಿಟಿಷ್ ರ ಬಗ್ಗೆ ನಾವು ಇತಿಹಾಸದಲ್ಲಿ‌ಓದಿರುತ್ತೇವೆ .ಆದರೆ ಇಲ್ಲಿ ಹಲವು ಮಾನವೀಯ ಬ್ರಿಟಿಷ್ ಅಧಿಕಾರಗಳು ಭಾರತೀಯರಿಗಾಗಿ ಶ್ರಮಿಸುವದನ್ನು ಕಾಣುತ್ತೇವೆ . ತನ್ನ ಮನೆಯನ್ನು ಮಿನಿ ಭಾತವನ್ನಾಗಿಸಿ ,ಸರ್ವಜನಿಕ ಆರೋಗ್ಯ ಕೆಂದ್ರವಾಗಿಸಿ ದಜಿಮ್ ಕಾರ್ಬೆಟ್ ಅವರ ಹೃದಯ ವೈಶಾಲ್ಯತೆಗೆ ಭಾರತ ಸೋತಿದೆ . ಭಾರತೀಯ ರ ನಂಬಿಕೆಗಳನ್ನು ಅಲ್ಲಗೆಳಯದೆ ,ಗೌರವಿಸಿ ಅವರನ್ನು ಪ್ರೀತಿಸಿದ ಬಿಳಿ ಸಾಹೇಬ ಅನನ್ಯ .ನಾವು ಭಾರತೀಯರು ಎನನ್ನು ಕಲಿಯುತ್ತೇವಯೊ ಗೊತ್ತಿಲ್ಲ ಆದರೆ ಏತೇಚ್ಛವಾದ ಮೂಢನಂಬಿಕಗೆಳು ಬಲವಾಗಿ ನಮ್ಮಲ್ಲಿ ನಮಗರಿಯದೆ ಬೇರೊರಿರುತ್ತವೆ .ಆದರೆ ಕಾರ್ಬೆಟ್ ಅವರ ಪುಸ್ತಕಗಳು ಸಾರಾಸಗಟಾಗಿ ಈ ನಂಬಿಕೆಗಳನ್ನು ತಳ್ಳಿಹಾಹುತ್ತವೆ . ತಾರ್ಕಿಕ ಆಲೋಚನೆಗೆ ಓದುಗನನ್ನು‌ ಇಳಿಸುತ್ತವೆ ಕಾಲ ,ಜಾಗ ,ಸಮಯ ಇವುಗಳು ಬಹಳ ಸರಳವಾಗಿ ಅವರು ನಡುದುಬರುತ್ತಾರೆ .”ಏಕಾಂತವಾಗಿ ಭಾರತದ ಕಾಡುಗಳಲ್ಲಿ ಸಂಚರಿಸಿ ಬೆಳದಿಂಗಳ “ಸುಬಗು, “ಕಾಶ್ಮಿರದಸೂರ್ಯೋದಯದ ” ಬೆಡಗನ್ನು ತಮ್ಮ ಹಲವು ಪುಸ್ತಕಗಳಲ್ಲಿ ಅವರು ವರ್ಣಿಸಿದ್ದಾರೆ . ತನಾಗಾಗಿ ಎನನ್ನು ಪಡೆಯದೆ ಬಡ ಭಾರತೀಯರಿಗಾಗಿ ಬದುಕಿ . ಇಳಿಯ ವಯಸ್ಸಿನಲ್ಲಿ ಅನಿವಾರ್ಯ ವಗಿ ಭಾತವನ್ನು ತೊರೆದು ಕೀನ್ಯಾದಲ್ಲಿ ಇಹಲೋಕ ತ್ಯಜಿಸಿದರು. ಇಂದಿಗೂ ಇವರು ನಿರ್ಮಿಸಿದ ಶಾಲೆ , ಮನೆಗಳು ಬಹು ಪ್ರೀತಿಸಿದ ಕಾಡು ಮನೆಯ ಮುಂದಿನ ಮಾವಿನ ಮರ ಎಲ್ಲವು ಅವರ ಇರುವಿಕೆಯನ್ನು ಸಾರುತ್ತವೆ ಎಂದು ಲೇಖಕರು ಹೇಳುತ್ತಾರೆ . ಲೇಖಕರು ಅಲ್ಲಿನ ಪರಿಸರದಲ್ಲಿ ಸಂಚರಿಸಿ ಸಲೂನ್ , ಟೀ ಅಂಗಡಿ ಎಲ್ಲದಕ್ಕೊ‌ ಕಾರ್ಬೆಟ್ ಅವರ ಹೆಸರು ಇರುವದು ತಿಳಿದಿದ್ದಾರೆ .ಇನ್ನೊ ಅಲ್ಲಿ ಜನಮಾನಸ ಅವರಿಗಾಗಿ ಕಾಯುತ್ತಿದೆ .” ಭಾರತವೇ ನನ್ನ ಪತ್ನಿ ಭಾರತೀಯರೇ ನನ್ನ ಮಕ್ಕಳು ” ಎಂದ ಬಿಳಿ ಸಾಹೇಬರನ್ನು ಹೇಗೆ ಮರೆಯಲು ಸಾದ್ಯ ಭಾರತೀಯರಿಗೆ . ಶಿಕಾರಿಗಾಗಿ ಕೋವಿ ಹೀಡಿದು ನರಭಕ್ಷಕ ರನ್ನು ಹೊಡೆದುರುಳಿಸಿ ತದನಂತರ ಕ್ಯಾಮರಾ ಹೀಡಿದು ವನ್ಯಸಂಕುಲವ ಜಗತ್ತಿಗೆ ಪರಿಚಯಿಸಿ , ನಂತರ ಲೇಖಕನಾಗಿ ಪರಿವರ್ತನೆ ಹೂಂದಿ ಯಶಸ್ಸುಕಂಡುತನ್ನ ನಿಸರ್ಗ ಪ್ರೇಮವನ್ನು ಜಗತ್ತಿಗೆ ಅನಾವರಣಗೂಳಿಸಿದ ಸರಳ ಜೀವಿ ಕಾರ್ಬೆಟ್ ಅವರ ಜೀವನದ ಹಲವು ಮಜಲುಗಳ ವಿವರಣೆ ಜೊತೆಗೆ ಅವರ ತಾಯಿಯ ಛಲ ,ಸಹೋದರಿ ಮ್ಯಾಗಿ ಯ ಮಮತೆ ಎಲ್ಲವು ಈ ಹೊತ್ತಿಗೆಯಲ್ಲಿ‌ ಕಾಣಸಿಗುತ್ತವೆ . ಕಾಲದೊಂಗಿ ಮತ್ತು ಚೋಟಿ ಹವಾಲ್ದನಿಯಲ್ಲಿ ಕಾಣುವ ಕರ್ಬೆಟ್ ನೆನಪುಗಳು ನೈನಿತಾಲ್ ನಿಂದ ಮರೆಯಾದದು ಏಕೆ ಎಂದು ಲೇಖಕರು ಬಹು ವಿಷಾದಿಸುತ್ತಾರೆ . ಇದು ಓದುಗರಿಗು ಕಾಡುವ ಪ್ರಶ್ನೆ . ********************* ರೇಶ್ಮಾಗುಳೇದಗುಡ್ಡಾಕರ್

ಬಿಳಿ ಸಾಹೇಬನ ಭಾರತ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸರೋಜಾ ಶ್ರೀಕಾಂತ್ ಸುರಿದ ಬೆಳದಿಂಗಳಿಗೆ ಇರುಳೆಲ್ಲ ಮಾಯವಾಗಿದೆ ಕೇಳು ಸಖಬಳಿಗೆ ಕರೆವ ಸನಿಹಕ್ಕೂ ತುಸು ನಾಚಿಕೆ ಕೇಳು ಸಖ ರಂಗೇರಿದ ಕೆನ್ನೆಗೆ ಕಾರಣವೇ ನಿನ್ನಾಗಮನಒಲವರಿತ ಮುಂಗುರುಳಿಗೆ ಸ್ಪರ್ಶದ ಸಡಗರ ಕೇಳು ಸಖ ಸದ್ದಿಲ್ಲದ ಮೌನದೊಳಗೂ ನೂರೊಂದು ಮಾತುಗಳಿವೆಕಿವಿಗಪ್ಪಳಿಸುತ್ತ ಚಿತ್ತವನ್ನೆಲ್ಲ ಅಪಹರಿಸುತ್ತಿವೆ ಕೇಳು ಸಖ ಸೋತೆನೆನ್ನುವ ಭಾವಕ್ಕೂ ನವಿರಾದ ಮಂದಹಾಸಗೆಲುವಿನ ನಗೆ ನೀ ಬೀರುವಾಗ ಸೊಗಸಿದೆ ಕೇಳು ಸಖ ನೇಸರ ಬರುವ ಮುನ್ನವೇ ಸಂಭ್ರಮಿಸಲಿ ಮತ್ತೊಂದು ಸಲ‘ಸರೋಜ’ಳ ಅಂತರಂಗ ಪ್ರತಿಧ್ವನಿಸುತ್ತಿದೆ ಕೇಳು ಸಖ ***********************************

ಗಜಲ್ Read Post »

You cannot copy content of this page

Scroll to Top