ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಬಾಪೂ ಜೊತೆ ಇಂದು

ಇಳಿ ಮದ್ಯಾಹ್ನ

ಪ್ರಜ್ಞಾ ಮತ್ತಿಹಳ್ಳಿ

Mahatma Gandhi Statue at Malpe Beach. A black stone statue of Mohandas Karamchand Gandhi at Malpe Beach, Udupi district, Karnataka state in india. This is best royalty free stock image

ಬಾ ಬಾಪೂ ಇಲ್ಲೇ ಕೂಡು
ಇಕ್ಕಟ್ಟಾದರೂ ಅಂಗಳಕ್ಕಿಳಿಯಲು
ವೈರಾಣು ಭಯ
ಗುಂಡು ಕನ್ನಡಕವನು
ಅರ್ಧ ಮುಚ್ಚಿದರೂ
ಮಾಸ್ಕ್ ತೆಗೆಯಬೇಡ
ಬೆಳಿಗ್ಗೆಯೇ ನಿನ್ನ ಪಟಕ್ಕೆ ಹೂ
ಹಾರ ಮಂಗಳಾರತಿ
ಸಾಮೂಹಿಕ ಭಜನೆ ರಘುಪತಿ
ಮುಗಿಸಿ ಬಂದ ಮೇಲೆಯೇ ನಾಷ್ಟಾ ತಿಂದೆ
ಆದರೀ ಸಲ
ಏನೋ ಕಲಮಲ

ಕಳೆದ ವಾರ ನಿನ್ನ ಆತ್ಮಕತೆ ಓದಿ
ಎಲ್ಲರ ನೋವನು ಬಲ್ಲವನೊಬ್ಬನ
ಹುಡುಕುತ್ತ ಹೊರಟಿದ್ದೆ
ನಡುರಾತ್ರಿ ಕಂದೀಲು ಹಚ್ಚಿದ
ದೋಣಿಗಳು ತುಯ್ಯುವ ಅಲೆಯಲ್ಲಿ
ನಿಧಾನಕ್ಕೆ ಹೊರಟಿದ್ದವು.
ನಿದ್ದೆ ಜಗ್ಗುವ ರೆಪ್ಪೆಗಳ ಅಗಲಿಸುತ್ತ
ಹುಟ್ಟು ಹಾಕುವ ಬೆಸ್ತರು ಎಂದೂ
ಮಲಗದ ಮೀನುಗಳ ಹಂಬಲಿಸುತಿದ್ದರು
ಕೈ ಮಗ್ಗ ನಂಬಿ ಬಟ್ಟೆ ಕತ್ತರಿಸುವ
ಹೆಂಗಸರು ಕೂಳಿಲ್ಲದೇ ಕಂಡವರ
ತೋಟಕ್ಕೆ ಮಣ್ಣು ಹೊರುತ್ತಾ
ಕೆಕ್ಕರಿಸುವ ನೋಟಕ್ಕೆ ಕಾನದಿರುವಂತೆ
ಹರಿದ ಸೆರಗೆಳೆಯಲು ಪರದಾಡುತ್ತಿದ್ದಾರೆ

ಆಡಿನ ಹಾಲು ಕರೆದಿಟ್ಟ ಪಾತ್ರೆಯಲ್ಲಿ
ಸಣ್ಣಗೆ ನೊರೆಯ ಗುಳ್ಳೆಗಳು
ಅಡಗುತ್ತ ಒಳ ಪದರಕ್ಕೆ ಹೈನು
ಗಸಿ ಮೂಡಿಸುತ್ತ ಕುಡಿದ ತುಟಿಯ
ಮೇಲೊಂದು ಹಾಲಿನ ಮೀಸೆ
ನಿನಗೂ ಮೂಡಿರಬಹುದಲ್ಲವೆ ಬಾಪೂ

ಜೊಹಾನ್ಸಬರ್ಗಿನ ಪ್ಲೇಗು ರೋಗಿಗೆ
ಗಂಜಿ ಕಾಯಿಸುವಾಗ ಫೀನಿಕ್ಸ
ಆಶ್ರಮದ ಪುಂಡು ಹುಡುಗರಿಗೆ ಕವಾಯತು
ಮಾಡಿಸುವಾಗ ಬಿಚ್ಚಿಟ್ಟ ಕೋಟಿನ
ಕಿಸೆಯಲ್ಲಿ ತುಂಡು ಹಾಳೆಯ ಕವಿತೆ
ಲೋಟ ನೀರು ಕೊಟ್ಟವನಿಗೆ ಊಟವಿಕ್ಕು
ಕಾಸು ಕೊಟ್ಟವಗೆ ಚಿನ್ನದ ಮೊಹರು
ಹತ್ತು ಪಟ್ಟು ಪ್ರತ್ಯುಪಕಾರಕ್ಕೆ
ತೋಳು ಮಡಚಿ ತಯಾರಾದೆ
ಓ ಅಲ್ಲಿ ರಿಕ್ಷಾದಲ್ಲಿ ಅಡ್ಮಿಶನ್ ಮಾಡಿಸಿ
ಬರುತ್ತಿದ್ದ ಹುಡುಗಿಯನೆಳೆದು ಸಿರಿಂಜು
ಚುಚ್ಚಿ ಈಗ ಮನೆ ಮುಂದೆ ತಂದೊಗೆದ
ರಕ್ತಸಿಕ್ತೆ ಪ್ರಾಣ ಬಿಡುವಾಗ ಕಿವಿಯಲ್ಲಿ
ಹಾಡಬಹುದೇ ಪೀಡಪರಾಯೆ ಜಾನೆ

ಕ್ಷಮೆಯಿರಲಿ ಬಾಪೂ ಈ ಸಲ
ಭಜನೆಗೆ ಧ್ವನಿಗೂಡಿಸುವಾಗ
ಗಂಟಲು ಗೊರಗೊರ ಕಣ್ಣು
ಒದ್ದೆಯಾದರೂ ನಾಲಿಗೆ ನುಡಿಯುತ್ತಿಲ್ಲ
ಹುಲ್ಲು ಕೊಯ್ಯುವ ಹುಡುಗಿಯ
ಕತ್ತರಿಸಿ ಬಿದ್ದ ನಾಲಿಗೆಯದೇ ನೆನಪು
ನೋಡು ಬಾಪೂ ಅಕಾಲದಲ್ಲಿ
ಮೋಡ ಕತ್ತರಿಸಿ ಮಳೆ ಹೊಯ್ಯುತಿದೆ
ಬಾರದುದು ಬಂದಾಗ ಬಪ್ಪುದು ತಪ್ಪದು
ಎನ್ನುತ್ತಾರೆ ಹಿರಿಯರು
ಮಳೆ ನಿಂತ ಕೆಸರು ದಾರಿಯಲಿ
ಹಗೂರಕೆ ಕೋಲೂರಿ ಹೊರಡು
ಮುಂದಿನ ಜಯಂತಿಗಾದರೂ
ಹಾಡಲಾಗುತ್ತದೆಯೆ ನೋಡೋಣ

***************************************

About The Author

Leave a Reply

You cannot copy content of this page

Scroll to Top