ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಹಿ ಈಸ್ ಅನ್ಲೈನ್..ಬಟ್ ನಾಟ್ ಫಾರ್ ಯೂ. …..

ಕಥೆ ನಂದಿನಿ ವಿಶ್ವನಾಥ ಹೆದ್ದುರ್ಗ. “ನಾಡಿದ್ದು ಒಂದು ಇಂಟರವ್ಯೂ ಮಾಡೋಕಿದೆ.ಅವರ ಫೋನ್ ನಂಬರ್ ಜೊತೆಗೆ ಉಳಿದ ಡೀಟೈಲ್ಸ್ ಕಳಿಸ್ತಿನಿ.ಪ್ಲಾಂಟೇಷನ್ ನಲ್ಲಿ ಅವರು ಮಾಡಿರೋ ಸಾಧನೆಯ ಸಣ್ಣ ವಿವರವನ್ನೂ ಕಳಿಸ್ತೀನಿ.ಡೇಟ್ ನೆನಪಿರ್ಲಿ” ಅಂತ ಒಂದೇ ಉಸುರಿಗೆ ಹೇಳಬೇಕಾದ್ದನ್ನೆಲ್ಲಾ ಹೇಳಿ ಮುಗಿಸಿದ. ಅವನ ಸಮಯ ಅವನಿಗೆ ಬಹಳ ಮಹತ್ವದಂತೆ.ಹಾಗಂತ  ಪದೇಪದೇ ಹೇಳ್ತಾನೆ ಇರ್ತಾನೆ. ಅದೂ ಇತ್ತೀಚಿಗೆ. ಅವನ ಜೊತೆಗೆ  ಮಾತಾಡುವಾಗ ಸ್ವರ ಆದಷ್ಟೂ ಸಹಜವಾಗಿರೋದಿಕ್ಕೆ ಪ್ರಯತ್ನಿಸ್ತೀನಿ. ಅವನಿಗೆ ಕಾಲ್ ಮಾಡಿ ಆ ಕಡೆಯಿಂದ ಬರುವ ಮೊದಲ ಹಲೋಗೆ ಎದೆ ಮೂರು ಪಟ್ಟು ಮಿಡಿತ ಏರಿಸಿಕೊಂಡು ಕುಡಿದ ಕುದುರೆ ಥರ ಆಡೋದನ್ನ ಮುಚ್ಚಿಡ್ಲಿಕ್ಕೆ ಮಾಡೋ ಹರಸಾಹಸಕ್ಕೆ ಒಂದೊಂದು ಸರಿ ಬೇಸತ್ತು ಹೋಗಿ ಬಿಡುತ್ತೆ . ‘Okay.ಯೂ ಕ್ಯಾರಿ ಆನ್.ಇಫ್ ಯು ವಾಂಟ್ ವೆಹಿಕಲ್ ,ಐ ವಿಲ್ ಅರೆಂಜ್  ಫಾ ಇಟ್”ಅಂದ ತೀರ ಗಂಭೀರವಾಗಿ. ಅವನ ಪತ್ರಿಕೆಗಾಗಿ ಕೆಲಸ ಮಾಡೋ ಯಾರೋ ಹತ್ತರಲ್ಲೊಬ್ಬ ವರದಿಗಾರ್ತಿಯ ಜೊತೆ ಮಾತಾಡುವಂತೆ. ಎದುರಿಗಿದ್ದಿದ್ದರೆ ನನ್ನ ಉಗುರು ಅವನ ಕುತ್ತಿಗೆಯ ಮೇಲೆ ಮೂಡಿರ್ತಿದ್ವು.ಫೋನ್ ತೆಗೆದು ಬಿಸಾಡುವಷ್ಟು ಅಸಹನೆ ಅನಿಸ್ತು. ನನ್ನ ಹುಡುಗ…! ನನಗಾಗಿಯೇ ಇದ್ದವನು. ಆ ದಿನಗಳಲ್ಲಿ ನನ್ನ ಜೊತೆಗೆ ಕಳೆಯೋ ಹತ್ತೇ ಹತ್ತು ನಿಮಿಷಕ್ಕಾಗಿ ಅವನ ಆ ಹಾತೊರೆಯುವಿಕೆ, ನನ್ನ ಕಂಡೊಡನೆ ಬೆಳಕು ಚೆಲ್ಲುತ್ತಿದ ಅವನ ನೋಟದ ಪರಿ,ಅವನ ಇಡೀ ದೇಹ ನನ್ನ ಭೇಟಿಯನ್ನು ಸಂಭ್ರಮಿಸುತ್ತಿದ್ದದ್ದನ್ನ ನೋಡಿದಾಗೆಲ್ಲಾ ನನಗೆ ನನ್ನ ಬಗ್ಗೆ ಹೆಮ್ಮೆ ಅನಿಸ್ತಿತ್ತು. ಅವನ ಆ ಒಲವು,ಕಾವು ,ನನಗಾಗಿ ‌ಮೀಸಲಿಡುತ್ತಿದ್ದ ಸಮಯ ಎಲ್ಲವೂ ನನ್ನೊಳಗೆ ಉದ್ದೀಪಿಸುತ್ತಿದ್ದ ಆತ್ಮವಿಶ್ವಾಸವನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವೇ.? ಅಂತಹ ಅವನು..?? ಹೀಗೆ…ಹೇಗೆ ಸಾಧ್ಯ.? ಇದೇನಾಯಿತು‌ ನಮ್ಮಿಬ್ಬರ ನಡುವೆ.? ಎಷ್ಟು ಯೋಚಿಸಿದರೂ ಒಂದೇ ಒಂದು ಬಿರುಕು ಮೂಡುವಂತ ಘಟನೆ ನೆನಪಿಗೆ ಬರತಿಲ್ಲ. ಅಥವಾ ನಡೆಯಲೂ ಇಲ್ಲ. ಎರಡು ವರ್ಷಗಳ ಕಾಲ ನಿತ್ಯದ ಸಂಜೆಗಳನ್ನ ನನಗಾಗಿಯೇ ಮೀಸಲಿಡುತ್ತಿದ್ದ ಅವ ನಿಧಾನವಾಗಿ ಕಾಲದ ಮಹತ್ವದ ಕುರಿತು ಭಾಷಣ ಶುರು‌ಮಾಡಿದ. ಮೊದಮೊದಲು ನನಗಿದಾವುದೂ ತಿಳಿಯಲೇ ಇಲ್ಲ. ಬರುಬರುತ್ತಾ  ನಿತ್ಯದ ಫೋನುಗಳು ಮೂರುದಿನಕ್ಕೋ,ವಾರಕ್ಕೋ ಬದಲಾಯಿಸಿಕೊಂಡಾಗ ನನ್ನ ದಿನಚರಿಯ ಭಾಗವೇ ಆಗಿಹೋಗಿದ್ದ ಸಂಭ್ರಮದ ಸಂಜೆಗಳಿಲ್ಲದೆ ದಿಗಿಲೆದ್ದು ಹೀಗೇಕೆ ಎಂದು ಗಾಬರಿ ಬಿದ್ದದ್ದು,ಮನೆಯಲ್ಲೇನಾದರೂ ಸಮಸ್ಯೆಯಾ ಅಂತ ದೇವರಿಗೆ ಮುಡುಪಿಟ್ಟದ್ದೆಲ್ಲ ಮುಗಿದು ನಾನೇ ಮಾತಾನಾಡಿಸುವ ಎಂದರೆ ಅವನ ಫೋನ್ ಲಾಂಗ್ ಟೈಮ್ ಎಂಗೇಜು. ಇಂಪಾರ್ಟೆಂಟ್ ಕೆಲಸ ಇತ್ತು,ಡೆಲಿಗೇಟ್ಸ್ ಇದ್ರು,ಕಾನ್ ಕಾಲ್ ಇತ್ತು ಅಂತ ಅವ ಹೇಳುವಾಗ  ‘ಛೆ.ಇದೇನು ಸಂಪಾದಕನ ಕೆಲಸ ಬಿಟ್ಟು ಯಾವುದಾದರೂ ಬಿಸಿನೆಸ್ ಶುರು ಮಾಡಿದ್ನಾ ಅಂತ ಅನುಮಾನವಾಗಿ ಕೇಳಿದ್ರೆ ”ಹಾ ಒಂದು ಪೆಯಿಂಟ್ ಏಜೆನ್ಸಿ ತಗೊಂಡಿದೀನಿ..ಶಾಪ್ ಮೊನ್ನೆ ಓಪನ್ ಆಯ್ತು..ಇಲ್ಲೇ ಥಿಯೆಟರ್ ಪ್ರಿಮಿಸಿಸ್ ನಲ್ಲೆ” ಅಂದ..ಶಾಕ್ ಆಯ್ತು…ಫೋಟೊ ಕಳಿಸಲಿಲ್ಲ,ಕರೀಲಿಲ್ಲ ಎಂದೆ. ತಕ್ಷಣ ಹತ್ತಿಪ್ಪತ್ತು ಫೋಟೋ ಬಂದ್ವು.  ಕಳಿಸಿದ ಫೋಟೊದಲ್ಲಿ  ದೂರದವರು ಅಂದುಕೊಂಡವರೆಲ್ಲ ಇದಾರೆ. ನಾನಿಲ್ಲ. ಹಾಗೆ ನೋಡಿದ್ರೆ ಅವರ ತಂದೆಗೆ ನನ್ನ ಕಂಡರೆ ಅಚ್ಚುಮೆಚ್ಚು. ನನ್ನ ಸೊಸೆ ಅಂತ ರೇಗಿಸ್ತಾನೆ ಇರ್ತಾರೆ. ಹಾಗಾದ್ರೆ ಇಲ್ಲೇನೋ ನಡೀತಿದೆ. ಪರಿಹರಿಸಿಕೊಳ್ಳಣಾಂದ್ರೆ ಅವ‌ ಮಾತಿಗೆ ಸಿಗೋದೇ ಇಲ್ಲ.. ಸಿಕ್ಕರೂ ಫಾರ್ಮಾಲಿಟೀಸ್ ಮಾತಿನಿಂದ ಮುಂದಕ್ಕೆ ಸಂಭಾಷಣೆ ಮುಂದುವರಿಯಲೇ ಇಲ್ಲ. “ರವೀಂದ್ರ,ದಯವಿಟ್ಟು ಕಟ್ ಮಾಡಬೇಡ ಕಾಲ್ .ಸರಿಯಾಗಿ ಕೇಳಿಸ್ಕೊ.ನಾನು ಈ ಇಂಟರ್ ವ್ಯೂ ಮಣ್ಣು ,ಮಸಿ ಅಂತ ಎಲ್ಲ ಮಾಡ್ತಿರೋದು ಹಣಕ್ಕಾಗಿ ಹೆಸರಿಗಾಗಿ ಅಲ್ಲ .ನಿನ್ನ ಜೊತೆ ಒಂದಷ್ಟು ಸಮಯ ಕಳೆಯಬಹುದಲ್ಲಾ ಅಂತ.as usual ಒಂದಷ್ಟು ರಫ್ ಪ್ತಶ್ನೆಗಳನ್ನ ತಯಾರಿ ಮಾಡಿದ್ದೀನಿ.ಅದನ್ನ ಫೈನ್ ಮಾಡಿಕೊಂಡು ನಾಡಿದ್ದು ನನ್ನನ್ನ ಮನೆಯಿಂದ ಪಿಕ್ ಮಾಡು.ನಿನ್ನ ವೃತ ಭಂಗ ಮಾಡೋದಿಲ್ಲೋ ಮಾರಾಯಾ ಜೊತೆಗಿರಬೇಕು ಅನ್ನೋದಷ್ಟೆ ನನ್ನಾಸೆ..ಏನು.?” ಅಂದೆ. ಮೊದಲಾದರೆ’ಆಹಾ ನಿನ್ನ ಸ್ವರವೇ!’ ಅಂತ ಮುದ್ದುಗರೆಯುತ್ತಿದ್ದವ ‘ಸರಿ’ ಎಂದಷ್ಟೇ ಹೇಳಿದಾಗ ಪಿಚ್ಚೆನಿಸಿತು. ಎಷ್ಟೋ ದಿನಗಳ ನಂತರ ಅವನ ಬೇಟಿ. ಸಂದರ್ಶನದ ದಿನ ಸಮಯಕ್ಕೂ ಮೊದಲೇ ತಯಾರಾಗಿ ಅವನಿಗಿಷ್ಟದ ನೀಲಿ ಬಿಂದಿಯಿಟ್ಟು ಕಾಯುತ್ತಿದ್ದವಳ ಕಣ್ಣಿಗೆ ಬಿದ್ದದ್ದು ಆಫೀಸಿನ ‌ಕಾರು. ತಲೆಸುತ್ತಿ ಬಂದ ಹಾಗಾಯ್ತು. ಹಾಗೆಲ್ಲ ನಾನು ಯೋಚಿಸಿದ ಹಾಗೆ ಇರಲಾರದು. ಅದು ಅವನೇ ಇರಬೇಕು. ಆಫೀಸ್ ಕಾರು ಅವನು ಬಳಸಬಾರದು ಅಂತೇನೂ ಇಲ್ಲವಲ್ಲ ಅಂತ ಮನಸಿಗೆ ಸಮಜಾಯಿಷಿ ಹೇಳಿಕ್ಕೊಳ್ಳುವಾಗಲೇ ಡ್ರೈವರ್ ಬಂದು’ಸರ್ ಹೇಳಿದ್ರು..ಅವರಿಗೆ ಬರೋದಿಕ್ಕೆ ಆಗಲ್ವಂತೆ.ನಿಮ್ ಫೋನು ಕನೆಕ್ಟ್ ಆಗ್ತಿಲ್ವಂತೆ..ತೋಟದ ಮಾಲೀಕರಿಗೆ ಫೋನ್ ಮಾಡಿದಾರೆ.ಬನ್ನಿ‌ಮೇಡಮ್ ‘ಅಂದ. ಇದೇನಾಗ್ತಿದೆ ನನ್ನ ಜೀವನದಲ್ಲಿ.! ನನ್ನ ಹುಚ್ಚು ಹತ್ತಿಸಿಕೊಂಡು ಕಾದುಕಾದು ಕರಗಿ ಹೋಗ್ತಿದ್ದವ ನನ್ನನ್ನುಅವಾಯ್ಡ್ ಮಾಡ್ತಿದ್ದಾನೆ.! ಕಾರಣ..?? ಇವತ್ತೇ.ಇದೇ ಕೊನೆ.ಮತ್ತೆಂದೂ‌ ಫೋನ್ ಅಥವಾ ಮೆಸೇಜ್ ಮಾಡಲಾರೆ ಅವನಿಗೆ. ಆದರೆ.? ಹೀಗಂತ ಎಷ್ಟು ದಿವಸ ಅಂದುಕೊಂಡಿಲ್ಲ ನಾನು.? ಬೆಳಗಾಗುವಷ್ಟರಲ್ಲಿ ನಿರ್ಧಾರ ಬದಲಾಗಿ ಇನ್ನೊಮ್ಮೆ.. ಒಮ್ಮೆ.. ಪ್ರಯತ್ನಿಸಬಹುದಲ್ಲಾ ಅನಿಸಿ ಮರಳಿ ಯತ್ನವ ಮಾಡಿದಾಗೆಲ್ಲಾ ಮತ್ತದೆ ಉಡಾಫೆ ಉತ್ತರ. ಅದೂ ಗಂಟೆ ಕಳೆದ ಮೇಲೆ. ” ಹಿ ಈಸ್ ಆನ್ಲೈನ್.ಬಟ್ ನಾಟ್ ಫಾರ್ ಯೂ”  ಅಂತ ಬೇರೆ ಸ್ಟೇಟಸ್ ಹಾಕಿದಾನೆ.. ನಾ ಈ ಮಟ್ಟಿಗೆ ಹಚ್ಚಿಕೊಳ್ಳೊ ಮುನ್ನ ಯೋಚಿಸಬೇಕಿತ್ತಾ..? ಆದರೆ ಅಳೆದು ಸುರಿದು ಮುಂದುವರೆಯಲು ಇದು ಭಾವಕೋಶದ ಮಾತು . ಯಾಕೆ ಅವನಿಗಾಗಿ ಅಳ್ತಿದ್ದೀನಿ ನಾನು.? ಅದೂ ಈ‌ ಮಟ್ಟಿಗೆ.? ಒಲಿಯುವವರೆಗೆ ನಡುರಾತ್ರಿ ತನಕ ನೋವು ಪ್ರಲಾಪಗಳ ಕವಿತೆ ಹಾಡಿದ್ದೇ ಹಾಡಿದ್ದು. ಛೀ ಅನಿಸುತ್ತೆ ಈಗ ಯೋಚಿಸಿದ್ರೆ. ಅತ್ತು‌ಮುಗಿದ ಮೇಲೆ  ಯೋಚಿಸುತ್ತೇನೆ.? ಯೋಗ್ಯತೆ ಇಲ್ಲದವನಿಗಾಗಿ ನನ್ನ ಕಣ್ಣೀರೇ.? ಈಗಿಂದೀಗಲೇ ಅವನನ್ನು ನನ್ನ ಮನಸಿಂದ ತೆಗೆದು ಹಾಕ್ತೀನಿ. ಹೀಗಂತ ಪದೇಪದೇ ಹೇಳಿಕೊಂಡಿದ್ದೂ ಆಯ್ತು. ಚಕ್ಕಳಮಕ್ಕಳ ಹಾಕಿ ಕೂತುಬಿಟ್ಟಿದ್ದಾನೆ. ಇಲ್ಲಿ.. ಈ ಎದೆಯೊಳಗೆ. ಹೊರಗೆ ಕಳಿಸೋದು ಅಷ್ಟು ಸುಲಭವಲ್ಲ. ‘ರವೀ…ನಿನ್ನ ಹೆಸರಿಗೆ ಅಂಟಿರುವ ಇಂದ್ರನ ಕುರಿತು ‌ನಂಗೆ ಮೊದಲಿಂದಲೂ ಅನುಮಾನ ಇದೆ’. ಅಂತಿದ್ದೆ ನಾನು ಆಗಾಗ. ಹಾಗಂದಾಗೆಲ್ಲಾ  ‘ ನನ್ನ ಪ್ರೇಮಕ್ಕೆ ,ಪಟ್ಟಕ್ಕೆ ಚಾರುದೇವಿಯೊಬ್ಬರೆ  ರಾಣಿ ‘ ಅಂದ‌ಮಾತಿಗೆ ಆಕಾಶಕ್ಕೆ ತಲೆ ಹೊಡಿಸಿಕೊಂಡು ಪೆಟ್ಟಾದ ಹಾಗೆ. ಮತ್ತೆ ಹಳೆ ನೆನಪುಗಳೆ. ಇವತ್ತು..ಇವತ್ತೇ ಕೊನೆ ಬಾರಿ. ಇನ್ನೆಂದೂ ನಿನಗೆ ಫೋನ್ ಮಾಡಲಿಕ್ಕೆ  ಮೆಸೇಜಿಗೆ ಪ್ರಯತ್ನಿಸೊಲ್ಲ.ಇದೊಂದು ಪರೀಕ್ಷೆ ನಡೆದೇ ಹೋಗಲಿ. “ರವಿ.ಮುಂದಿನ ಭಾನುವಾರ ಮಂಡ್ಯಕ್ಕೆ ಹೋಗ್ತಿದ್ದೀನಿ. ಮೈಸೂರಿನಿಂದ ಗೆಳತಿ ಪಿಕ್ ಮಾಡ್ತಾಳೆ. ಲಗೇಜಿದೆ.ಬಸ್ಸು ಪ್ರಯಾಣ “ ಅಂತ ಟೈಪಿಸಿ ಸೆಂಡ್ಒತ್ತಿದೆ. ಬಿದ್ದೇ ಹೋಗುವ ಎದೆಯ ಹಿಡಿದು ಅರ್ದ ಗಂಟೆ ಕಾಯ್ದ ಮೇಲೆ ಓಕೆ ಅಂತ ಮೆಸೇಜು ಬಂತು. ಇಷ್ಟೇನಾ..? ದೂರ ಹೋಗುವಾಗ ಹೇಳು. ಒಟ್ಟಿಗೆ ಪ್ರಯಾಣ ಮಾಡೋಣ. ನಿನ್ನ ಪ್ರಭಾವಳಿಯೊಳಗೆ ಸ್ವಲ್ಪ ಹೊತ್ತು ಇದ್ದ ಖುಷಿ ನನದಾಗುವ ಸಂಭ್ರಮವನ್ನು ಕೊಡೆ ಅಂತ ಗೋಗರೆಯುತ್ತಿದ್ದವ ಇವನೇನಾ.? ಇಲ್ಲ.. ಏನೋ ವ್ಯತ್ಯಾಸ ಆಗ್ತಿದೆ.ಅವನು ಮಾಡಿರಲಾರ ಮೆಸೇಜು.. ಒಪ್ಪಲಿಲ್ಲ ವಾಸ್ತವವನ್ನು ಮನಸ್ಸು. ಅನುಮಾನ, ಬೇರೆಯವರ ಬಳಿಯಲ್ಲಿ ಫೋನಿದ್ದರೆ..? ಕಾಲ್ ಒತ್ತಿದೆ..ಅವನದ್ದೇ ಧ್ವನಿ.ಕೇಳಿದೊಡನೆ ಕುಣಿಯೋ ನವಿಲಾಗೋ ಈ ಹಾಳು ಜನ್ಮ ಸಾಕು ಇನ್ನು. ಘನ ಗಂಭೀರವಾಗಿ ‘ಬಿಡುವಿದೆಯಾ’.ಎಂದೆ. ‘ಹಾ ಹೇಳು.’ ‘ಮಂಡ್ಯಕ್ಕೆ ಹೊರಟಿದ್ದೀನಿ’ ಮುಗಿದೇ ಇಲ್ಲ ಮಾತು. ‘ಸರಿಯಾಗಿ ಒಂಬತ್ತೂ ಕಾಲಿಗೆ ಮಾಡ್ತೀನಿ. ಪ್ಲೀಸ್ ಬಿಟ್ ಬ್ಯುಸಿ’ ಕರೆ ಕತ್ತರಿಸಿದ ಫೋನು ಹಿಡಿದವಳ ಮನಸಿಗೆ ಅವನ ಧ್ವನಿಯಲ್ಲಿ ಪ್ರಾಮಾಣಿಕತೆ ಇದೆ ಅನಿಸಿತೊ ಅಥವಾ ಈ ಸಂದರ್ಭಕ್ಕೆ ನಂಗೆ ಹಾಗೆ ಅನಿಸ್ತಿದೆಯಾ  ತಿಳಿಲಿಲ್ಲ. ಒಂಬತ್ತು ಮುಗಿದ ಮೇಲಿನ ಒಂದೊಂದು ನಿಮಿಷವೂ ಆ ಮಟ್ಟಿಗೆ ದೀರ್ಘ ಎನಿಸಿದ್ದು ಅದೇ ಮೊದಲು.. ಗಡಿಯಾರದ ಶೆಲ್ ಸರಿಗಿದೆಯಾ…ಚೆಕ್ ಮಾಡಬೇಕಿತ್ತು.. ಛೆ..ಫೋನ್  ನೆಟ್ವರ್ಕ್ ಲಿ ಇದೆಯಾ ಇಲ್ಲವೇ ಅಂತ ಚೆಕ್ ಮಾಡಿ… 9.15ಆಯ್ತು.ಓ ಮೈ ಗಾಡ್. ಇವನು…!! ಇವನು ಅವಾಯ್ಡ್ ಮಾಡ್ತಿದ್ದಾನೆ ನನ್ನ.! ಆನ್ ಲೈನ್‌ ಚೆಕ್ ಮಾಡಿದ್ರೆ ಮುಕ್ಕಾಲು ಗಂಟೆ ಹಿಂದೆ ಲಾಸ್ಟ್ ಸೀನ್ ಇದೆ. ‘ಹೈ ‘ಕಳಿಸಿದೆ. ಸಿಂಗಲ್  ರೈಟುಮಾರ್ಕು. ಅಂದರೆ. ಅಂದರೆ ಬೇರೆಯವರ ಜೊತೆಗೆ ಸಂಭಾಷಣೆ ನಡೀತಿದೆ.ಮಾತಾಡುವಾಗ ಅವ ನೆಟ್ ಆಫ್ ಇಡೋದು ಗೊತ್ತಿರೊ ವಿಚಾರವೇ. ಹೀಗೇಕಾಯ್ತು. ಸಂಬಂಧದಲ್ಲಿ ಏನೊಂದು  ಇಲ್ಲದೆ ಹೀಗೆ ದೂರಾಗಲು ಸಾಧ್ಯವೇ? ನನ್ನ ಪ್ರೀತಿಯಲ್ಲಿ ಇದ್ದ ಕೊರತೆಯಾದರೂ ಏನು? ಛೆ.ಅಲ್ಲದ್ದನ್ನೇ ಯೋಚಿಸ್ತೀನಿ. ಅಂತವನಲ್ಲ ಅವ. ಕ್ಷಣ ನಿರಾಳವಾದರೂ ಮತ್ತೆ ಎದೆಯೊಳಗೆ ಅನಂತವಾಗುತ್ತಿದ್ದ ನೋವು. ರಾತ್ರಿ ಹನ್ನೊಂದು ಕಾಲಿಗೆ ಸರಿಯಾಗಿ ಅವನಿಂದ ಮೆಸೇಜು ಬಂತು. ಜೊತೆಗೆ ಅನ್ಲೈನಿಗೂ ಬಂದ  ‘ಸಾರಿ..ಆಗಲಿಲ್ಲ.ಕಾಲ್ ಮಾಡೋದಿಕ್ಕೆ. ಫಾರ್ ಮಂಡ್ಯ, ಯೂ ಪ್ಲೀಸ್ ಕ್ಯಾರಿ ಆನ್. ಹ್ಯಾವ್ ಎ ನೈಸ್ ಟೈಮ್.ಬೈ.’ ಗಳಗಳನೆ ಅಳಬಹುದಾದ ಮಾತುಗಳು. ಆದರೆ…ಹೇಗೋ ಈ ಎದೆ ಗಟ್ಟಿಯಾಗಿದೆ.! ಒಂದೇ ಒಂದು ತೊಟ್ಟು ಕಣ್ಣೀರು ಬರಲಿಲ್ಲ . ಕಳೆದುಕೊಂಡಿದ್ದ ಆತ್ಮವಿಶ್ವಾಸವನ್ನೆಲ್ಲಾ ತುಸು ಹೊತ್ತು ಧ್ಯಾನಿಸಿ ಆವಾಹಿಸಿಕೊಂಡೆ. ಮತ್ತೆಂದೂ. ಎಂದೆಂದೂ ಅವನಿಗಾಗಿ ಕಾಯಲಾರೆ. ತಿರುಗಿ ಬಂದರೆ ಸ್ವೀಕರಿಸಲಾರೆ. ಮುಂದೆ ಯಾರಿಗಾಗಿಯೂ ಕಾಯಲಾರೆ.! ಕನ್ನಡಿ ನೋಡಿಕೊಂಡೆ. ಹಣೆಯ  ನೆರಿಗೆಗಳೆಲ್ಲ ಸಡಿಲಾಗಿ ಮುಖ ಪ್ರಸನ್ನವಾಗಿತ್ತು. ನೆಮ್ಮದಿಯ ಒಂದು ಕಿರುನಗು ತುಟಿಯ ಮೇಲೆ. ಎಂದೂ ನಿದ್ರಿಸದ ರೀತಿಯಲ್ಲಿ ಆ ರಾತ್ರಿ ಮಲಗಿ ನಿದ್ರಿಸಿದೆ. —– ಸುದೀರ್ಘವಾದ ನಿಟ್ಟುಸಿರಿನೊಂದಿಗೆ  ಮಾತು ಮುಗಿಸಿ ಅವಳು ನನ್ನ ಮುಖ ನೋಡಿದಳು. ಯಾಕೋ ಅಪ್ಪಿಕೊಳ್ಳಬೇಕು ಅನಿಸಿತು. ಸಮಾನ ದುಃಖಿಗಳು. ಇದೇ ಕಥೆ ನನ್ನ ಜೀವನದಲ್ಲಿ. ಎರಡು ವರ್ಷ ಮೊದಲು. ಆಗ ನನ್ನ ತಪ್ಪಿಸಿ ಮಾತಿಗೆ ತೊಡಗಿದ್ದು ಅವ ಇವಳ ಜೊತೆ.. ಈಗ …!!! ಹೆಸರು ಗೊತ್ತಿಲ್ಲ.. ಯಾವುದೋ ಹೆಣ್ಣು ಎದೆ… ಮೊಹರೊತ್ತಿಕೊಂಡಿದೆ ಇವನ ಹೆಸರನ್ನ.! ಮತ್ತದೇ ನೋವಿನ ಪ್ರಲಾಪಗಳ ಹಾಡು ಹೇಳ್ತಿರಬಹುದು. ನಡುರಾತ್ರಿವರೆಗೆ..!! ಹೆಣ್ಣು ಜನ್ಮ..’ಅಯ್ಯೋ’ ಅನ್ನೋದು ಜನ್ಮ ಸಿದ್ಧ.! ಎಲ್ಲ ಹೇಳಿ ಹಗುರಾಗಿ ಹೊಸದಾಗಿ ಹೊಳೆಯುತ್ತಿದ್ದ ಅವಳ ಅಕ್ಕರೆಯಲಿ ಕರೆದು ಒಂದು ಸಣ್ಣ ವಾಕಿಂಗ್ ಹೋಗಲಿಕ್ಕೆ ಹೊರಟೆ. ಅವಳೂ ಅಡ್ಡಿಯಿಲ್ಲದೆ  ಎದ್ದಳು. **********************

ಹಿ ಈಸ್ ಅನ್ಲೈನ್..ಬಟ್ ನಾಟ್ ಫಾರ್ ಯೂ. ….. Read Post »

ಕಾವ್ಯಯಾನ

ಬೊಗಸೆಯೊಡ್ಡುವ

ಕವಿತೆ ಗೋಪಾಲ ತ್ರಾಸಿ ಅಹೋರಾತ್ರಿಬಾನು ಭುವಿಯ ನಡುವೆ ಚಲನಶೀಲ ಶಿಖರದಂದದಿ ಉದ್ದಾನುದ್ದಕೆರಾಶಿರಾಶಿ ಮೋಡಗಳ ಜಂಬೂಸವಾರಿ,ಕಾರಿರುಳ ದಿಬ್ಬಣಕೆ,ಅಲ್ಲೊಂದು ಇಲ್ಲೊಂದುಅಂಜುತ್ತಂಜುತ್ತ ಇಣುಕುವಮಿಣುಕು ನಕ್ಷತ್ರಗಳು, ಸಾಕ್ಷಿ. ಮೈಭಾರವಿಳಿಸಿಕೊಳ್ಳಲೇನೊ, ತಾನೇತಾನು ಮೈತುಂಬ ಕನ್ನಕೊರೆದುನಸುಕಿನಿಂದಲೆ, ಧಸಧಸ ಸುರಿದುಕೊಂಡಮೋಡ;ರ್ರೊಯ್ಯನೆ ಹೊಯಿಲೆಬ್ಬಿಸುವ ಗಾಳಿಗೌಜು,ಧಡಾಂಧುಡೂಂ, ಛಟ್ ಛಟ್ ಛಟೀಲ್ಗುಡುಗು ಮಿಂಚಿನ ಜುಗಲ್ಬಂಧಿಏರುಮಧ್ಯಾಹ್ನವೇ ಸಂಜೆಗತ್ತಲ ಭ್ರಾಂತಿ;ಹೊರಗೆ. ಆಯಾಸದಿಂದ ಕಿಟಕಿಬಾಗಿಲು ಸಂದಿತೂರಿಸುಯ್ಯನೆ ಒಳಸುಳಿದುಅಪ್ಯಾಯಮಾನವಾಗಿ ಕಚಗುಳಿಯಿಡುವಒದ್ದೆಗಾಳಿಗರಿಗರಿಯಾಗಿ ಮೈಮನಸ್ಸು ಬೆಚ್ಚಗೆಗರಿಗೆದರಬೇಕಿತ್ತು ; ಒಳಗೆ. ಮಾಗಿಯ ಚುಮುಚುಮು ಚಳಿಯ ಜೊತೆ ಅನಾಯಾಸ ಬೆವರಿಳಿಸುವನಿರ್ಜೀವ ಜಡ ಜಂತುಭೂಮ್ಯಾಕಾಶ ಬಾಹು ಚಾಚಿಕೊಳ್ಳುತ್ತಲೆ, ಎಲ್ಲೋ ಕ್ಷಿತಿಜದಂಚಿಂದದಿಢೀರನೆ, ಹೊಸ್ತಿಲಲಿ ಹೊಂಚು ! ಹೊರಟೇ ಹೋಯಿತೆನ್ನಿಬಂದಂತೆ ವೈಶಾಖ, ಪೆಚ್ಚುಮೋರೆ ಹಾಕಿಅಟ್ಟಕ್ಕೇರಿದ ಹರ್ಷೋಲ್ಲಾಸವರ್ಷಾಕಾಲಿಟ್ಟರೂ ಮಿಸುಕಾಡಲಿಲ್ಲರಾಹು ಬಡಿದಂತೆ ಮಂಕು ಸಮಯ ! ರೆಕ್ಕೆ ಪುಕ್ಕ ತೊಯ್ದುಹಿಂಜಿ ಹಿಂಡಿ ಇನ್ನಿಲ್ಲವೆಂಬಂತೆಮುದುಡಿ ಹಿಡಿಯಾದ ತೈನಾತಿ ದಿನಚರಿಪಿಳಿಪಿಳಿಗಣ್ಣು ನಿಸ್ತೇಜ ಪಾಪೆತೆರೆಗಣ್ಣಲಿ ಮೂರ್ಛೆ ಹೋದಮಾನವನಹಮಿಕೆಅಳಿದುಳಿದ ಅಂತ:ಸ್ಥೈರ್ಯಮಂಡಿಯೂರಲೂ ಘನಕಾರಣವಿರಬೇಕು;ಇರಲಂತೆ, ಇರುವಂತೆ. ತೊಯ್ಯಲಾಗದ ಮೃದುಲ ಮನಸ್ಸಿನವಿಭ್ರಾಂತಿನಿಮ್ನೋನ್ನತ ಹಾದಿಗುಂಟ ತಲ್ಲಣಗಳ ಸಂತೈಸುತ್ತಲೇ ಪಾರಾಗಬೇಕಿನ್ನುಸಕಲ ಪೀಡಾವಿನಾಶಕ ವಿಪ್ಲವಕ್ಕೆಗದ್ಗದಿತ ಮೋಡ ತೊಟ್ಟಿಕ್ಕುವ ಆ ಕೊನೇಯಸಂಜೀವಿನಿ ಹನಿಗೆಭೊಗಸೆಯೊಡ್ಡುವ ಆವೊಂದುತಂಪು ಬೆಳಕಿನ ಬೆಳಗಿಗೆ…

ಬೊಗಸೆಯೊಡ್ಡುವ Read Post »

ಇತರೆ, ಲಹರಿ

ಭರವಸೆಯ ಹೊರತು ಬೇರೇನೂ ಉಳಿದಿಲ್ಲ

ಲಹರಿ  ವಸುಂಧರಾ ಕದಲೂರು  ಖಾಲಿ ಮಂಕರಿ ಕವಚಿ ಹಾಕಿದಂತೆ ಎಲ್ಲಾ ಖಾಲಿಖಾಲಿಯಾದ ಭಾವ. ನಿರಾಳ ಅಂತೇನಲ್ಲ. ಮನಸ್ಸು ಭಾರವಾಗಿದೆ. ಏನೆಲ್ಲಾ ಇದೆ. ಆದರೂ ಏನೇನೂ ಇಲ್ಲ ಎನ್ನುವ ಒಂಟಿತನ ಹಿಂಡಿಹಿಪ್ಪೆ ಮಾಡುವಂತೆ. ಬಿಸಿಲಿಗೆ ಒಣ ಹಾಕಿದ ಬಟ್ಟೆ ಒಣಗೀ ಒಣಗೀ ಅಲ್ಲೇ ಇದ್ದು ಕೊನೆಗೆ ಬಣ್ಣಗೆಟ್ಟಂತೆ…      ಸದಾ ಗಿಜಿಗಿಜಿ ಗಜಿಬಿಜಿಯಲ್ಲಿ ಸುತ್ತಾಡುತ್ತಿದ್ದ ಮೈ ಮನಸ್ಸೆಲ್ಲಾ ಒಂದು ಕ್ಷಣಕ್ಕೆ  ಥಟ್ ಎಂದು ಏಕಾಂತ ವಾಸಕ್ಕೆ ನಿರ್ಜನ ಕಾಡ ಮಧ್ಯದಲ್ಲಿ ವಿರಮಿಸಿದಂತೆ ಭಾಸವಾಯಿತು. ಆಹಾ..!! ಇದೇ ಬೇಕಾಗಿತ್ತು ನನಗೆ ಎನಿಸಿ ಎಷ್ಟು ಖುಷಿಪಟ್ಟಿತೋ ಮನಸ್ಸು ಗೊತ್ತಿಲ್ಲ. ಆದರೆ ದಿನ ಕಳೆದ ಮೇಲೆಯೇ ಗೊತ್ತಾದದ್ದು ಅದು ವಿಶ್ರಮಿಸುವ ಏಕಾಂತವಲ್ಲ ಭಯ ಹುಟ್ಟಿಸುವ ಸೆರೆವಾಸವೆಂದು.       ಏನೇನೋ ಕಸರತ್ತುಗಳು. ಸಮಾಧಾನಕ್ಕೆ, ಸ್ಫೂರ್ತಿಗೆ, ಭರವಸೆಗೆ ಯತ್ನಿಸುತ್ತಾ ನಾನೂ ನನ್ನವರೂ ಎಲ್ಲರನ್ನೂ ಹುರಿದುಂಬಿಸಲು ಪ್ರಯತ್ನಿಸುತ್ತಲೇ ಇರುವುದು.     ಇದೇ ಸರಿಯಾದ ಸಮಯ. ನಿನ್ನೊಳಗೆ ನೀನೇ ಇಣುಕಿ ನೋಡು. ನೀನು ಯಾರೆಂಬುದೇ ಮರೆತಿದ್ದೆಯಲ್ಲಾ. ಮನೆ, ಮಕ್ಕಳು, ಮನೆಯವರು… ಇನ್ನಾದರೂ ಗಮನಕೊಡು. ಆಂತರ್ಯದ ಕೂಗು ಇನ್ನಿಲ್ಲದಂತೆ ಎಬ್ಬಿಸಲು ಪ್ರಯತ್ನಿಸಿತು. ಹೌದು ನಿಜ. ನಮ್ಮ ಬದುಕು ಈಗ ಮತ್ತೆ ನಮಗೇ ಸಿಕ್ಕಿದೆ. ನಮ್ಮ ಇಷ್ಟದ ತಿನಿಸು, ಮನೆಯವರಿಷ್ಟದ ಉಣಿಸು, ಸಿನೆಮಾ, ಪುಸ್ತಕ…     ಇಷ್ಟಯೇ… ಸಾಕೇ..?!    ಇಲ್ಲ, ಸ್ನೇಹವಿಲ್ಲದೇ, ಸುತ್ತಾಟವಿಲ್ಲದೇ ಇರಲಾಗದು, ಇರಲಾಗದು. ನಾನೇನು ಅವ್ವ, ಅಮ್ಮನ ಕಾಲದವಳೇ..?  ಪ್ರತಿ ದಿನವೂ ಎಂಟರಿಂದ ಹತ್ತು ಗಂಟೆ ಕಾಲ ಮನೆಯ ಹೊರಗೇ ಕಾಲನ್ನು ಇಟ್ಟವಳು. ಈಗ ಕಾಲಿನ ಚಲನೆಯೂ ಇಲ್ಲದಂತೆ, ಕಾಲದ ಚಲನೆಯೂ ಕಾಣದಂತೆ ಉಳಿದುಬಿಡುವುದು ಹೇಗೆ ಸಾಧ್ಯ?     ಎಷ್ಚೆಂದು ಟಿ.ವಿ ನೋಡುವುದು? ಪುಸ್ತಕ ಸಾಂಗತ್ಯ ಮಾಡುವುದು? ಮನೆ ಮಂದಿಯೊಡನೆ ಹರಟುವುದು?  ಅವರಿಗೂ ಬೇಸರವೇ…    ಮಕ್ಕಳಂತೂ ಜೊತೆಗಾರರಿಲ್ಲದೆ ಮೊಬೈಲ್, ಲ್ಯಾಪ್ಟಾಪು, ಟಿ.ವಿ. ಗಳ ಸಾಂಗತ್ಯದಲ್ಲಿ  ರೊಬೋಟುಗಳೇ ಆಗಿಬಿಡುತ್ತಾರೇನೋ ಎಂಬ ಆತಂಕ. ಮಡದಿಯೊಡನೆ ಹೇಳಿಕೊಳ್ಳಲಾರದ ಆಡಲಾರದ ಮಾತುಗಳಿಗೆ ಗಂಡನಿಗೆ ಗೆಳೆಯನ ಕಿವಿ ಬೇಕು. ಹೃದಯದ ಸಾಂತ್ವಾನಕೆ ಸ್ನೇಹದ ಕೈ ಕುಲುಕುವಿಕೆ ಬೇಕು. ಪತಿಯನ್ನು ಪ್ರತಿ ದಿನವೂ ಕೆರಳಿಸಲಾಗದೆ, ಅರಳಿಸಲಾಗದೆ, ಸಮಾಧಾನಿಸಲಾಗದ ಹೆಂಡತಿಯ ಸಂಕಟಕೆ ಸ್ನೇಹಿತೆ ಬೇಕು. ಆಕೆಯೊಡನಾಡುವ ನಾಕಾರು ಮಾತುಗಳು, ಹೊಸ ಪಾಕದ ಪಾಠ, ಧಾರಾವಾಹಿಯ ಕಂತುಗಳ ಕುರಿತ ವಿಮರ್ಶೆ,  ಬಿರುಸಾಗಿ ಪಾರ್ಕುಗಳಲ್ಲಿ ಒಂದರ್ಧ ಗಂಟೆ ಸುತ್ತಾಡುವ ಸ್ವಾತಂತ್ಯ್ರ ಮತ್ತೆ ಇವೆಲ್ಲವೂ ಅವಶ್ಯ ಬೇಕು.         ಪ್ರತಿ ದಿನವೂ ಕೈ ಗಾಡಿಯಲಿ ಸೊಪ್ಪು ತರಕಾರಿ ಹಣ್ಣುಗಳನ್ನಿಟ್ಟುಕೊಂಡು ಕುಳಿತಿರುತ್ತಿದ್ದ ಅಜ್ಜನೋ, ಯುವಕನೋ, ಅಕ್ಕ – ತಂಗಿಯಂತಹವರೋ ತಮ್ಮತಮ್ಮ ಊರದಾರಿ ಹಿಡಿದಿದ್ದಾರೆ. ಅವರಿಗಲ್ಲಿ ಏನಾಗಿದೆಯೋ..? ಪ್ರತಿದಿನದ ಒಂದು ಸಣ್ಣ ನಗೆಯ ವಿನಿಮಯ ಈಗ ಕಡಿತಗೊಂಡಿದೆ. ಮೊಬೈಲ್ ನಂಬರೂ ಪಡೆದಿಲ್ಲ. ದಿನಂಪ್ರತಿ ಸಿಗುವ ಭರವಸೆಯಿದ್ದಾಗ ಮೊಬೈಲ್ ನಂಬರ್ ಪಡೆದು ದೂರಕರೆ ಮಾಡುವ ಜರೂರೇನಿತ್ತು?           ವಾರಕ್ಕೊಮ್ಮೆ ಹೆಚ್ಚು ಖಾರ, ಈರುಳ್ಳಿ, ಕ್ಯಾರೆಟ್ಟು ಹಾಕಿಸಿಕೊಂಡು ತಿನ್ನುತ್ತಿದ್ದ ಮೈಸೂರು ಚುರುಮುರಿಯವನ ಗಾಡಿಯ ಸದ್ದು ಈಗ ಅಡಗಿ ಹೋಗಿದೆ.     ದಿನಪತ್ರಿಕೆಗಳ ಜೊತೆಗೆ ಬರುತ್ತಿರುವ ಜಾಹೀರಾತುಗಳಲ್ಲಿ ಒಂದು ಕರೆ ಮಾಡಿದರೆ ಸಾಕು ಅರ್ಧ ಗಂಟೆಯೊಳಗೆ ನೀವು ಬಯಸಿದ್ದೆಲ್ಲಾ ಮನೆ ಬಾಗಿಲಿಗೆ ಬಂದು ಡೆಲಿವರಿಯಾಗುತ್ತದೆ ಎಂಬುದನ್ನು ನೋಡೀ ನೋಡೀ ಸಾಕಾಗಿದೆ.      ಮನೆಗೆ ಸ್ನೇಹಿತರನ್ನೂ ಬಂಧುಗಳನ್ನೂ ಆರ್ಡರ್ ಮಾಡಿಸಿ ತರಿಸಿಕೊಳ್ಳಬಹುದೇ….?! ಕಾಲ ಇಷ್ಟು ನಿರ್ದಯಿಯಾಗಿ ಹೀಗೆ ಎಲ್ಲವನ್ನೂ ಕಡಿತ ಮಾಡಬಾರದಿತ್ತು… ಆದರೆ ಈಗ ಭರವಸೆಯ ಹೊರತು ಬೇರೇನೂ ಉಳಿದಿಲ್ಲ.  **********

ಭರವಸೆಯ ಹೊರತು ಬೇರೇನೂ ಉಳಿದಿಲ್ಲ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸುಜಾತಾ ಲಕ್ಮನೆ ಇಲ್ಲಿ ಅಬ್ಬರದ ಬಿನ್ನಾಣ, ಮಾತಿನ ಸಂಚಲಿ ಮೌನ ಗೆಲ್ಲುವುದಿಲ್ಲಸಭ್ಯ ನಡೆಗೆಲ್ಲ ನ್ಯಾಯದ ತಕ್ಕಡಿಯಲಿ ಮಾನ್ಯತೆ ಸಿಗುವುದಿಲ್ಲ ತಾ ನಡೆವ ದಾರಿಯೆಲ್ಲವೂ ರಾಜಪಥವೆಂಬ ವಿಭ್ರಮೆ ತರವೇಯಾವ ಪಯಣವೂ ಕವಲೊಡೆಯದೇ ಗುರಿ ತಲುಪುವುದಿಲ್ಲ ಶಶಿ ಸೂಸುವ ಕಿರಣ ಪ್ರಭೆ ಇಳೆಯ ಕಣಕಣಕೂ ತಂಪನ್ನೆರಚದೇಒಳತೋಟಿಗಳ ತೂರಿದಂತೆ ಎದೆಯ ತೊಳಲಾಟ ತಗ್ಗುವುದಿಲ್ಲ ಅಂತರಂಗ ತೆರೆದಿಟ್ಟ ಭಾವಗಳು ಬೀದಿಗಳಲಿ ಬಿಕರಿಯಾಗುತ್ತವೆಸುಳ್ಳಿನ ಜಗದಲಿ ಸತ್ಯದ ಕದಪಿಗಿಟ್ಟ ಮಸಿ ಬಿಳಿಯಾಗುವುದಿಲ್ಲ ನೇರವಾಗಿ ನಿಂತಷ್ಟೂ ವಕ್ರರೇಖೆಯ ಬಣ್ಣ ಬೆನ್ನಿಗೆ ಮೆತ್ತುವರುಒಳದನಿಯ ಧಿಕ್ಕರಿಸಿ ನಡೆದಂತೆಲ್ಲ ಬಂಧ ಹಿತವಾಗುವುದಿಲ್ಲ ಕೈ ಚೀಲ ಹಿಡಿದು ಹಲ್ಕಿರಿದು ಓಲೈಸುವವರಿಗಷ್ಟೇ ಮನ್ನಣೆಯಿಲ್ಲಿನಲ್ನುಡಿಗಳಿಗೂ ಕೆಸರೆರಚುವವರ ಘನತೆ ಅಟ್ಟಕ್ಕೇರುವುದಿಲ್ಲ ಒಲವು, ಆದರವಿಲ್ಲದ ಕಡೆ ಇದ್ದು ಸಾಧಿಸುವುದೇನು “ಸುಜೂಅಸಲಿ, ನಕಲಿಯನೆ ಒರೆ ಹಚ್ಚಲು ಸೋತರೆ ಮೌಲ್ಯವಿರುವುದಿಲ್ಲ **************************

ಗಜಲ್ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ – ಸಂಚಿಕೆ ೩

ಶ್ರಾವಣ ಗೀತ ಮಹಾದೇವ ಕಾನತ್ತಿಲ ಸಂಕ್ರಮಣ! ಹೌದು, ಸಂಕ್ರಮಣ, ಒಂದು ಸ್ಥಿತಿಯಿಂದ ಇನ್ನೊಂದಕ್ಕೆ, ಮತ್ತೆ ಮತ್ತೊಂದಕ್ಕೆ!.  ಅಂಗಳದಲ್ಲಿ ಲಂಗದಾವಣಿ ಹಾಕಿ ಕುಣಿದು ಹಾರುತ್ತಿದ್ದ ಹುಡುಗಿ, ಪುಷ್ಪವತಿಯಾಗಿ, ಗಾಂಭೀರ್ಯ ತುಂಬಿ, ಗಜಗಾಮಿನಿಯಾದಾಗ ಸಂಕ್ರಮಣ. ಒಂದು ಮುಂಜಾನೆ, ಕಪ್ಪುಹಸಿರು ಜಡ ಎಲೆಗಳ ಮಾಮರದಲ್ಲಿ, ನಸುಗೆಂಪು ತಳಿರು ಚಿಗುರೊಡೆದಾಗ ಮರಕ್ಕೆ ಸಂಕ್ರಮಣ. ನಲವತ್ತರ ನಸುಕಲ್ಲಿ, ಕಣ್ಣು ಮಬ್ಬಾಗಿ ನೆಟ್ಟ ನೇರ ನೋಟಕ್ಕೆ, ಚಾಳೀಸು ಬಂದಾಗ ಸಂಕ್ರಮಣ. ಅರುವತ್ತಕ್ಕೆ ವೃತ್ತಿಯಿಂದ ನಿವೃತ್ತಿ ಸಂಕ್ರಮಣ. ಹೆಚ್ಚೇನು! ಸೂರ್ಯೋದಯ,ಸೂರ್ಯಾಸ್ತಮಾನ ದಿನ ರಾತ್ರೆಗಳ ಅದಲು ಬದಲು ಸಂಕ್ರಮಣ!.  ಪ್ರಕೃತಿಯಲ್ಲಿ, ಬದುಕಿನ ಘಟನೆಗಳಲ್ಲಿ, ಅರ್ಥವ್ಯವಸ್ಥೆಯ ಸಾಧ್ಯತೆಗಳಲ್ಲಿ, ನೇರವಾಗಿ ಚಲಿಸುವ ನಮ್ಮ ಕಾರು, ಅಚಾನಕ್ ಆಗಿ ರಸ್ತೆ ಬಲಕ್ಕೋ, ಎಡಕ್ಕೋ  ತಿರುಗಿದರೆ ಒಂದು ಬಿಂದುವಿನಲ್ಲಿ ದಾರಿ ಸಂಕ್ರಮಿಸುತ್ತದೆ. ಹೌದು ಅಲ್ಲೊಂದು ಸಂಧಿಬಿಂದುವಿದೆ. ಇಂತಹ ಸಂಕ್ರಮಣಕ್ಕೆ, ಕವಿಮನಸ್ಸನ್ನು ಹೇಗೆ ಸ್ಪಂದಿಸಬಹುದು ಎನ್ನುವುದು ಕೌತುಕವೇನಲ್ಲ. ಕವಿಮನಸ್ಸು ಅತ್ಯಂತ ಸೂಕ್ಷ್ಮ. ಸುತ್ತುಮುತ್ತಲಿನ ಅತಿ ಚಿಕ್ಕ ಬದಲಾವಣೆಗಳನ್ನೂ, ಗಮನಿಸಿ ಸ್ಪಂದಿಸುವ, ಅನುಭವಿಸಿ, ಸೃಜಿಸುವ ಮನಸ್ಸದು. ಉದಾಹರಣೆಗೆ, ನಿನ್ನೆಯವರೆಗೆ ರಣರಣ ಬಿಸಿಲು, ಸಾಯಂಕಾಲ ಗಾಳಿಬೀಸಿದರೂ, ಒಲೆಯಿಂದ ಹೊರಟ ತಿದಿಯ ಹಾಗೆ ಬೇಯಿಸುವ ಗಾಳಿ. ಧೂಳನ್ನೆಬ್ಬಿಸುವ, ಸುಳಿ ಸುಳಿಯಾಗಿ ತಿರುಗಿಸುವ ಸುಂಟರಗಾಳಿ. ಆಕಾಶದಲ್ಲಿ ಬಿಳೀ ಮೋಡಗಳು ನಿರಾಶೆಯ ಹೆಣವನ್ನು ಹೊತ್ತು ಸ್ಮಶಾನ ಹುಡುಕುವಂತೆ ಸುತ್ತುವಾಗ, ಮಳೆಯೆಲ್ಲಿಯದು! ಎಲ್ಲೋ ಮರೀಚಿಕೆಯಂತೆ ಒಂದೋ ಎರಡೋ ಹನಿ ಉದುರಿಸಿ ವಾತಾವರಣವನ್ನು, ಇಡ್ಲಿ ಬೇಯಿಸುವ ಕುಕ್ಕರ್ ನೊಳಗಿನ ಹಬೆಯಂತೆ ಬೆವರಿಳಿಸುವ ಹವೆ.  ಹಾಗಿದ್ದಾಗ ಅಚಾನಕ್ ಆಗಿ ಮಳೆ ಬಂದರೆ! ಅದೆಂಥಾ ಮಳೆ!. ಇಳೆ ತಣಿಸುವ, ನೊಂದು ಬಿಕ್ಕಳಿಸುವ ಮನಸ್ಸಿಗೆ ಬೆನ್ನು ಸವರಿ ಸಾಂತ್ವನ ಹೇಳುವ ಅಮ್ಮನ ಸ್ಪರ್ಶದಂತಹಾ ಮಳೆ!. ಮಳೆಯೋ ಮಳೆ. ಹ್ಞಾ! ಇದೊಂದು ಮೈನವಿರೇಳಿಸುವ ಸಂಕ್ರಮಣವೇ!. ಹೀಗೆ ಉತ್ತರ ಕರ್ನಾಟಕಕ್ಕೆ ಹಾಜರು ಹಾಕುವುದು ಶ್ರಾವಣ! (ಇವಿಷ್ಟೂ ಮಲೆನಾಡು ಮತ್ತು, ಕರಾವಳಿಗೆ ಅನ್ವಯವಾಗಲ್ಲ. ಅಲ್ಲಿ, ಆಷಾಢ ಪೂರ್ತಿ ಮಳೆಸುರಿದು,ಶ್ರಾವಣದಲ್ಲಿ ಸೋನೆಮಳೆ.) ಶ್ರಾವಣ ಬಂತೆಂದರೆ, ಬೇಂದ್ರೆಯಂತಹ ಬೇಂದ್ರೆ, ಕರಗಿ ಹರಿಯುತ್ತಾರೆ.. “ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಬಂತು ಶ್ರಾವಣ ಓ! ಬಂತು ಶ್ರಾವಣ” ಸಮ ದೃಷ್ಟಿ, ಬೇಂದ್ರೆಯವರ ಶ್ರಾವಣಕ್ಕೆ!.  ಈ ಶ್ರಾವಣ, ಎಲ್ಲರಿಗೂ, ಎಲ್ಲಾ ನೆಲಕ್ಕೂ, ತಾರತಮ್ಯವಿಲ್ಲದೆ ಕದ ತಟ್ಟಿ, ಎಲ್ಲವನ್ನೂ ಹೊಸತಾಗಿಸುವ ಸಂಕ್ರಮಣ ಕ್ರಿಯೆ. ಶ್ರಾವಣದ ಅಗಾಧತೆ,  ಮನಷ್ಯನ ಯೋಚನೆಗೂ ಮೀರಿದ ಅದರ ಶಕ್ತಿಯನ್ನು, ವ್ಯಾಪ್ತಿಯನ್ನು ಬೇಂದ್ರೆಯವರು ಈ ಕೆಳಗಿನ ಸಾಲುಗಳಲ್ಲಿ ಅನುಭವಿಸುತ್ತಾರೆ. “ಕಡಲಿಗೆ ಬಂತು ಶ್ರಾವಣಾ| ಕುಣಿಧ್ಹಾಂಗ ರಾವಣಾ| ಕುಣಿದಾವ ಗಾಳಿ| ಭೈರವನ ರೂಪತಾಳಿ” ಇಲ್ಲಿ, ಕಡಲು, ಗಾಳಿ ಇತ್ಯಾದಿಗಳು, ಬೇಂದ್ರೆಯವರ ಕಾವ್ಯ ಕುಸುರಿಯ ಹಲವು ಅರ್ಥಸಾಧ್ಯತೆಗಳು. ಅವರು ಮುಂದುವರೆದು, “ಶ್ರಾವಣ ಬಂತು ಘಟ್ಟಕ್ಕ ರಾಜ್ಯ ಪಟ್ಟಕ್ಕ, ಬಾಣ ಮಟ್ಟಕ್ಕ” ಅನ್ನುತ್ತಾರೆ. ಶ್ರಾವಣ ಎಂಬ ಪ್ರತಿಮೆಯನ್ನು, ಮಳೆಯಿಂದ, ಎತ್ತರಕ್ಕೆ ಬೆಳೆಸಿ, ಅದಕ್ಕೆ ರಾಜ್ಯಭಾರದ ಹವಾಮಾನದ ಪ್ರತಿಮೆ, ವಿವಿಧ ಬದುಕಿನ ಸ್ತರಗಳನ್ನು ಅದು ಆವರಿಸುವ ಪ್ರತಿಮೆ, ಅದರ ಅಗಾಧತೆ ಇತ್ಯಾದಿ ಆಯಾಮಗಳಿಂದ ಅರ್ಥವರ್ಷವಾಗಿಸುತ್ತಾರೆ. ಆಷಾಢ ಮಾಸದ ಅಗಂತುಕ, ಅಪರೂಪದ ಅತಿಥಿ ಮಳೆ. ನೆಲ ಹಸನು ಮಾಡಿ, ಬಿತ್ತಿ, ಮಳೆಗಾಗಿ ಕಾಯುವಾಗ, ಅದೋ ನೋಡಿ, ಆಗಸ ತುಂಬಾ ದಟ್ಟ ಮೋಡಗಳು.ಮೋಡಗಳು ಜೀವಜಾಲಕ್ಕೆ ಹೊಸ ಭರವಸೆಯ ಮೋಡ.‌ ಬರೇ ಮೋಡವಲ್ಲ, ಆಗಸದ ತುಂಬಾ ತೂತು ಬಿದ್ದು ಸೋರಿ ಬೀಳುವ ತುಂತುರು ನಿರಂತರ ಮಳೆ, ಆಶೆ ಆಶೋತ್ತರಗಳ ಸಂಕೇತ. “ಬನಬನ ನೋಡು ಈಗ ಹ್ಯಾಂಗ| ಮದುವಿ ಮಗನ್ಹಾಂಗ ತಲಿಗೆ ಬಾಸಿಂಗ| ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು” ಶ್ರಾವಣ ಎಂದರೆ ಬೇಂದ್ರೆಯವರಿಗೆ ಸೃಷ್ಟಿಯ ಮುಖಬಾಗಿಲು.  ಅಸಂಖ್ಯ ಬೀಜಗಳು ತಂತಾನೇ ಮೊಳೆತು ಜೀವಸಂಕುಲಗಳ ಚಿಲಿಪಿಲಿ ಎಷ್ಟು ಅಗಾಧ ಎಂದರೆ  ಬೆಟ್ಟಗಳೆಲ್ಲಾ ಹಸಿರಿನ ಅಂಗಿ ತೊಡುತ್ತವೆ. ಶ್ರಾವಣ ಎಂದರೆ ಅದು ಸೃಷ್ಟಿಕ್ರಿಯೆಯ ಉತ್ಸವವೂ ಹೌದು.  ಬನಬನಗಳೂ ಬಾಸಿಂಗ ಕಟ್ಟಿ ಮದುಮಗ, ಮದುಮಗಳಾಗಿ ಸಂಭ್ರಮಿಸುವದನ್ನು ಬೇಂದ್ರೆಯವರು, ಶ್ರಾವಣದ ಮೂಲಕ ಕಾಣುತ್ತಾರೆ. ರೈತರಿಗೆಲ್ಲ, ಬಿತ್ತಿದ,ಬೀಜ, ಮೊಳಕೆ ಹಸಿರು ಚಿಗುರೊಡೆಯುವ ಸಂತಸ. ಪ್ರಕೃತಿ ಹಸಿರುಮನೆಯಾಗಿ ಹೊಸ ಹಕ್ಕಿಗಳನ್ನು ಕರೆಯುತ್ತೆ, ಬಳ್ಳಿಗಳು ಬಳುಕಿ ಮರವೇರಿ ಹೂಗಳ ಬಾವುಟ ಹಾರಿಸುತ್ತವೆ. ಇಂತಹಾ ಶ್ರಾವಣ, ಪ್ರಕೃತಿಯ ಸಂಭ್ರಮದ ಬಾಗಿಲು ತೆರೆದಂತೆ,  ಜೀವಸಂಕುಲಕ್ಕೆ ಚೇತನ ಮೂಡಿಸಿದಂತೆ,  ಹಬ್ಬಗಳೂ ಜನಮಾನಸಕ್ಕೆ ಬಣ್ಣ ತುಂಬುತ್ತವೆ. ಮದುವೆಯಾಗಿ ಗಂಡನಮನೆ ಸೇರಿದ ಹೆಣ್ಣು ಮಗಳನ್ನು ಹೊಕ್ಕುಳಬಳ್ಳಿ ಸೆಳೆಯುತ್ತೆ,ಆಷಾಢ ಮಾಸದ ಕೊನೆಯಲ್ಲಿ. ಅಣ್ಣ ಬಂದು ತವರುಮನೆಗೆ ಕರೆದೊಯ್ಯುವ, ಹಬ್ಬದ ಸಡಗರ ಶ್ರಾವಣದ ಚೌತಿ ಮತ್ತು ಪಂಚಮಿ. ಜಾನಪದ ಸಂಗೀತಕ್ಕೂ ಮತ್ತು ಶ್ರಾವಣಕ್ಕೂ ಬಿಟ್ಟಿರದ ಸಂಬಂಧ. ‘ಆನಂದ ಕಂದ’ ( ಬೆಟಗೇರಿ ಕೃಷ್ಣಶರ್ಮ) ಅವರು ಜಾನಪದ ಶೈಲಿಯಲ್ಲಿ ಬರೆದ ಹಾಡು.. “ಪಂಚಮಿ ಹಬ್ಬ ಉಳಿದಿದೆ ದಿನ ನಾಕs.. ಅಣ್ಣ ಬರಲಿಲ್ಲ ಯಾಕs ಕರಿಯಾಕs..” ಅಂತ ಆರ್ತದನಿಯಲ್ಲಿ ಅಣ್ಣನಿಗಾಗಿ ಕಾಯುವ ತಂಗಿಯ ಹಾಡು.  ಈ ಹಾಡು ಮನಮನವನ್ನೂ ಹೊಕ್ಕು, ಪ್ರತಿಯೊಂದು ಮನೆಯಲ್ಲೂ ಗುನುಗುನಿಸಿ, ಬರೆದವರ ಹೆಸರೇ ಮರೆತಷ್ಟು ಜಾನಪದ ಹಾಡಿನ ಸ್ವರೂಪ ಪಡೆದಿದೆ. ಈ ಶ್ರಾವಣವೇ ಹೀಗೆ. ಇದರ ಮಳೆ, ಇದರ ಮೋಡ, ಮೊಳಕೆಯೊಡೆಯುವ ಹೊಲ, ಎಲ್ಲವೂ ಆಶೆ ಆಶೋತ್ತರಗಳನ್ನು, ಭರವಸೆಗಳನ್ನು ಸೋನೆಮಳೆಯಾಗಿ ಸುರಿಸುತ್ತೆ. ಈ ಹಾಡಿನ ಕೆಳಗಿನ ಸಾಲುಗಳನ್ನು ನೋಡಿ.. “ನಮ್ಮ ತವರೀಲಿ ಪಂಚಮಿ ಭಾರಿ ಮಣದ ತುಂಬಾ ಬಟ್ಟಲ ಕೊಬ್ಬರೀ ಎಳ್ಳು ಅವಲಕ್ಕಿ ತಂಬಿಟ್ಟು ಸೂರಿ ನಾನೂ ತಿನುವಾಕಿ ಬಂದ್‌ ಹಾಂಗ ಮನಕ- ಅಣ್ಣ ಬರಲಿಲ್ಲ ಯಾಕೋ ಕರಿಲಾಕ …” ಪಂಚಮಿ ಹಬ್ಬದ ಸಿಹಿ ತಿಂಡಿಗಳು, ಮನೆ ಮುಂದೆ ಚಿತ್ರಿಸುವ ರಂಗೋಲಿಗಳು, ಹೆಣ್ಮಕ್ಕಳೆಲ್ಲಾ ಮಕ್ಕಳೆಲ್ಲಾ ಸಪ್ತವರ್ಣದ ಬಳೆ ತೊಟ್ಟು ಗಲಗಲಿಸಬೇಕು, ಹೊಸ ಅಂಗಿ ತೊಟ್ಟು,ಜೋಕಾಲಿ ಆಡಬೇಕು, ಎಷ್ಟೆಂದರೆ, ಈ ಹಬ್ಬವನ್ನೇ, ಜೋಕಾಲಿ ಹಬ್ಬ ಎನ್ನುವಷ್ಟು!. ಶ್ರಾವಣ ಅಂದರೆ ಬರೇ ಮಳೆಯಲ್ಲ, ಇದೊಂದು ಸಮಾಜದಿಂದ ಸಮಾಜಕ್ಕೇ ಕಳೆಕಟ್ಟುವ ಹಬ್ಬಗಳ ತೋರಣ. ಶ್ರಾವಣದ ಪಂಚಮಿಯಂದು ಮದುವೆಯಾದ ಹೆಣ್ಣುಮಗಳು ತನ್ನ ತವರಿಗೆ ಬಂದು,  ನಾಗನಿಗೆ ಹಾಲೆರೆದು ತಮ್ನ ಬೆನ್ನು, ಬಸಿರು ತಣ್ಣಗಿರಿಸಬೇಕೆಂದು ನಾಗನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ತನ್ನ ಬೆನ್ನು ಎಂದರೆ ತವರು, ಅಣ್ಣ ತಮ್ಮಂದಿರು, ಬಸಿರು ಎಂದರೆ ಮುಂದಿನ ಪೀಳಿಗೆ. ಹೀಗೆ ತವರಿಗಾಗಿ ಮತ್ತು ತನ್ನ ಪೀಳಿಗೆಗಾಗಿ ಪ್ರಾರ್ಥನೆ ಮಾಡುವಾಗ,ಆಕೆ, ಎರಡು ಮನೆಗಳನ್ನು ತನ್ನ ಮೂಲಕ ಜೋಡಿಸುತ್ತಾಳೆ. ಶ್ರಾವಣ ಕಳೆಯುವ ಕಾಲವಲ್ಲ, ಕೂಡುವ ಕೂಡಿ ಚಿಗುರುವ ಸಮೃಧ್ಧಿಯ ಕಾಲ. ಹೀಗೆ ಶ್ರಾವಣ, ಕವಿಮನಸ್ಸಿನೊಳಗೆ ಹೇಗೆ ಹಲವಾರು ಪ್ರತಿಮೆಗಳ ರೂಪತಳೆದು ಜನ್ಮಿಸುತ್ತದೋ,ಹಾಗೆಯೇ ಜಾನಪದದಲ್ಲೂ ಹಲವು ಆಯಾಮಗಳಿಗೆ ರೂಪಕವಾಗಿ, ಹಳತನ್ನು ಮರೆಯದೆ ಹೊಸತಿಗೆ ತೆರೆಯುವ, ಸ್ವಸ್ಥ ಸಮಾಜದ ನಿರ್ಮಾಣದ, ಸಂಕ್ರಮಣ, ಜೀವಸಂಭ್ರಮ. **********

ಕಬ್ಬಿಗರ ಅಬ್ಬಿ – ಸಂಚಿಕೆ ೩ Read Post »

ಪುಸ್ತಕ ಸಂಗಾತಿ

ಕಣ್ಣ ಮುಂದಿನ ಎರಡು ಮೌಲ್ಯಗಳು -ಎರಡು ದಾರಿಗಳು

ಪುಸ್ತಕ ವಿಮರ್ಶೆ ನಾಗರಾಜಹರಪನಹಳ್ಳಿ ಬಹಳ ದಿನಗಳಿಂದ ನನ್ನ ಕಾಡುತ್ತಿರುವ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವೆ. ಒಂದು ದೇವನೂರು ಮಹಾದೇವ ಅವರ `ಎದೆಗೆ ಬಿದ್ದ ಅಕ್ಷರ’ ಕೃತಿ ಹಾಗೂ ಇನ್ನೊಂದು ಸಾರ್ವಜನಿಕರ ಕವಿ ಎಂದೇ ಹೆಸರಾಗಿದ್ದ ಡಾ.ಸಿದ್ದಲಿಂಗಯ್ಯ ಅವರ `ನನ್ನ ಜನಗಳು ಮತ್ತು ಇತರೆ ಕವಿತೆಗಳು’. ಕನ್ನಡದಲ್ಲಿ ಬಹಳ ಮಹತ್ವದ ಎರಡು ಕೃತಿಗಳ ಹೆಸರು ಹೇಳಿ ಅಂತ ಯಾರಾದರೂ ನನ್ನ ಪ್ರಶ್ನಿಸಿದರೆ ನಾನು ಮೊದಲು ಹೇಳುವ ಕೃತಿಗಳ ಹೆಸರು `ಎದೆಗೆ ಬಿದ್ದ ಅಕ್ಷರ’, `ನನ್ನ ಜನಗಳು’ ಕವಿತಾ ಸಂಕಲನ. ಯಾಕೆ ಈ ಎರಡು ಕೃತಿಗಳು ಮಹತ್ವದವು ? ಯಾಕೆ ಈ ಕೃತಿಗಳನ್ನು ಓದಬೇಕು ? ಎಂಬುದಕ್ಕೆ ಒಂದಿಷ್ಟು ಹಿನ್ನೆಲೆ ಕಾರಣಗಳನ್ನು ನೋಡಬೇಕಾಗುತ್ತದೆ. ಹಾಗೆಯೇ ದೇವನೂರು ಮತ್ತು ಡಾ.ಸಿದ್ದಲಿಂಗಯ್ಯ ಇಬ್ಬರಲ್ಲಿ ಯಾರು ಇಷ್ಟ ಎಂದು ಪ್ರಶ್ನಿಸಿದರೆ, ದೇವನೂರು ನನ್ನ ಮೊದಲ ಉತ್ತರ. ಕಾರಣ ಇದೆ. ವಿವರಿಸುವೆ. ಇಬ್ಬರದೂ ಒಂದೊಂದು ದಾರಿ. ಇಬ್ಬರೂ ಬದುಕಿರುವಾಗಲೇ ಇತಿಹಾಸ ಸೃಷ್ಟಿಸಿದವರು. ಇಬ್ಬರಲ್ಲೂ ಅಗಾಧ ಪ್ರತಿಭೆ ಇದೆ. ಇಬ್ಬರೂ ಕರ್ನಾಟಕದ ಜನ ಜೀವನದ ಮೇಲೆ, ಶೋಷಿತರ ಮೇಲೆ, ದುಡಿಯುವ ಜನರ, ದಲಿತ ಸಮುದಾಯದ ಅಕ್ಷರಸ್ಥರ  ಆಲೋಚನೆಗಳ ಮೇಲೆ ಪ್ರಭಾವ ಬೀರಿದವರು. ಒಬ್ಬರು ಅಧಿಕಾರದ ಬೆನ್ನು ಹತ್ತಿದವರು. ಇನ್ನೊಬ್ಬರು ಅಧಿಕಾರ ಕೇಂದ್ರವೇ ತಮ್ಮ ಮನೆಯ ಬಳಿಗೆ ಬರುವಂತೆ ಬದುಕಿದವರು. ಮುಖ್ಯಮಂತ್ರಿಯೇ ಮನೆಬಾಗಿಲಿಗೆ ಬಂದು ಮಾತಾಡಿಕೊಂಡು, ಸಲಹೆ ಕೇಳಿಕೊಂಡು ಹೋಗುವಂತೆ ಬದುಕಿದವರು. ಒಬ್ಬರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ತಾತ್ವಿಕ ಕಾರಣಕ್ಕೆ ನಿರಾಕರಿಸಿದವರು. ಮತ್ತೊಬ್ಬರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷ ಸ್ಥಾನವನ್ನು ಅಪ್ಪಿಕೊಂಡವರು. ಒಬ್ಬರು ಸಮಾಜದ ಮತ್ತು ಸರ್ಕಾರದ ನಡೆಗಳಿಗೆ ಪ್ರತಿಕ್ರಿಯಿಸುತ್ತಾ ಸಾಗಿದವರು. ಮತ್ತೊಬ್ಬರು ಎಲ್ಲಾ ಘಟನೆಗಳಿಗೂ ಪ್ರತಿಕ್ರಿಯಿಸಿದೇ ಮೌನಿಯಾದವರು. ಇದೆಲ್ಲಾ  ಸಿದ್ಧಲಿಂಗಯ್ಯ ಮತ್ತು ದೇವನೂರು ಸಮಕಾಲೀನರಿಗೆ ಗೊತ್ತಿದೆ. ಆದರೆ ಅವರ ನಂತರದ ತಲೆಮಾರಿಗೆ, ಇವತ್ತಿನ ಯುವ ಜನಾಂಗಕ್ಕೆ ಈ ಇಬ್ಬರು ಬರಹದ ಬಗ್ಗೆ ಸ್ವಲ್ಪವಾದರೂ ಗೊತ್ತಿರಬಹುದು, ಆದರೆ ಅವರ ಬದುಕಿನ ದಾರಿಯ ಬಗ್ಗೆ, ನಿಲಯವುಗಳ ಬಗ್ಗೆ, ಸವೆಸಿದ ಬದುಕಿನ ವಿವರಗಳು ಗೊತ್ತಿರಲಿಕ್ಕಿಲ್ಲ.ಜೊತೆಗೆ  ಕೆಲ ಸಂಗತಿಗಳು ಮರೆತು ಹೋಗಬಾರದು ಎಂಬ ಕಾರಣಕ್ಕೆ ಇಲ್ಲಿ ಪ್ರಸ್ತಾಪಿಸುವೆ. ಕಾರಣ ನಮ್ಮ ಕಣ್ಣ ಮುಂದಿರುವ ಎರಡು ಭಿನ್ನ  ದಾರಿಗಳ ಆಯ್ಕೆಯಲ್ಲಿ ಯಾವ ಹಾದಿಯಲ್ಲಿ ಸಾಗಬೇಕು ಎಂಬ ಸ್ಪಷ್ಟತೆ ಇದ್ದರೆ ಒಳಿತು. ಇವತ್ತಿನ ಆಧುನಿಕ ಯುಗದಲ್ಲಿ ವೇಗವಾಗಿ ಪ್ರಸಿದ್ಧಿ ಪಡೆವ  ಮನಸ್ಥಿತಿಯಲ್ಲಿ ಕಠಿಣ ಹಾದಿಯನ್ನು, ಆದರ್ಶದ ಮೌಲ್ಯದ ಹಾದಿಯನ್ನು ಹಿಡಿಯುವವರು ಎಷ್ಟು ಜನ ಇದ್ದಾರೆ ? ಯಾರಿಗೆ ಬೇಕಾಗಿದೆ ಕಠಿಣ ಹಾದಿ ?  ಈಗ ಕಠಿಣ ಹಾದಿ ಬೇಕೋ,  ಅವಕಾಶವಾದಿ ದಾರಿ ಬೇಕೋ ಎಂಬ ನಿರ್ಣಯ ಹೊಸ ತಲೆಮಾರಿಗೆ ಬಿಟ್ಟದ್ದು. ದೇವನೂರು ಮಹಾದೇವ ಅವರ ಹೆಸರನ್ನು ನಾನು ಮೊದಲು ಕೇಳಿದ್ದು ೧೯೯೧ರಲ್ಲಿ. ಅವರ ನೀಳ್ಗತೆ ಒಡಲಾಳ ಎಂ.ಎ.ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ಹಸಿವು ಮತ್ತು ಆಸ್ತಿತ್ವದ ಪ್ರಶ್ನೆಯನ್ನು ಕಟ್ಟಿಕೊಡುವ ಹಾಗೂ ದಲಿತರ ಹಸಿವಿನ ಹೋರಾಟವನ್ನು ಒಡಲಾಳದ  ಸಾಕವ್ವನ ಧ್ವನಿಯ ಮೂಲಕ ಕಟ್ಟಿಕೊಡುವ ಲೇಖಕ ಹೊಸ ಲೋಕವನ್ನು ಕನ್ನಡಿಗರ ಮುಂದೆ ಇಟ್ಟಿದ್ದರು. ಇದಕ್ಕೂ ಮುನ್ನ ದ್ಯಾವನೂರು ಕಥಾ ಸಂಕಲನ ಕನ್ನಡ ಸಾಹಿತ್ಯದಲ್ಲಿ ಸಂಚಲನ ಮೂಡಿಸಿತ್ತು. ಕುಂಬಾರ ವೀರಭದ್ರಪ್ಪನವರು ಆ ಹೊತ್ತಿಗಾಗಲೇ ದಲಿತರ ಹಸಿವಿನ ಕತೆಯನ್ನು ಠೊಣ್ಣಿ  ಮತ್ತು ಕತ್ತಲನು ತ್ರಿಶೂಲ ಹಿಡಿದ ಕತೆ ಹಾಗೂ  ಇತರ ಕತೆಗಳಲ್ಲಿ ಕಟ್ಟಿಕೊಟ್ಟಿದ್ದರು. ಕುಂವೀ ಕತೆಗಳಲ್ಲಿ ಬರುವ ಆಕ್ರೋಶ, ದೇವನೂರು ಕತೆಗಳಲ್ಲಿ ಭಿನ್ನವಾಗಿದ್ದರೂ, ಭಾಷಾ ಬಳಕೆ ಮತ್ತು ಕತೆ ಕಟ್ಟುವ ಮತ್ತು ಪ್ರಾಮಾಣಿಕ ಅಭಿವ್ಯಕ್ತಿಯಿಂದ ದ್ಯಾವನೂರು ಕತೆಗಳು ಕನ್ನಡದಲ್ಲಿ ಮೈಲಿಗಲ್ಲಾದವು. ದೇವನೂರು ಅವರ “ಎದೆಗೆ ಬಿದ್ದ ಅಕ್ಷರ” ಕೃತಿಯಂತೂ ಕನ್ನಡ ಬರುವವರೆಲ್ಲಾ ಓದಲೇ ಬೇಕಾದ ಕೃತಿ. ಎದೆಗೆ ಬಿದ್ದ ಅಕ್ಷರದಲ್ಲಿ ಬರುವ ಆರಂಭದ  ಲೇಖನಗಳಾದ  ನಾನು ಚಿತ್ರಿಸಿದಂತೆ ನನ್ನ ದೇವರು, ನನ್ನ ದೇವರು, ಮನವ ಕಾಡುತಿದೆ, ದಯೆಗಾಗಿ ನೆಲ ಒಣಗಿದೆ, ಮೂರ್ಛಾವಸ್ಥೆಯಲ್ಲಿ ಕಾರುಣ್ಯ, ಕೇವಲ ಮನುಷ್ಯನಾಗುವುದೆಂದರೆ, ಅಸ್ಪೃಶ್ಯತೆ ನಿನ್ನ ಮೂಲ ಎಲ್ಲಿ? ಎಂಬ ಪುಟ್ಟ ಪುಟ್ಟ ಬರಹಗಳನ್ನು ಓದಲೇ ಬೇಕು. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು…ಎಂಬ ಆಶಾವಾದ ದೇವನೂರು ಅವರದು. ನನ್ನದು ಕೂಡಾ.  ಅತ್ಯಂತ ಕಡಿಮೆ ಬರೆದು ಅಂತರಾಷ್ಟ್ರೀಯ ಮಟ್ಟದಲ್ಲಿ ದೇವನೂರು ಭಾರತೀಯ ಸಾಹಿತ್ಯಕ್ಕೆ ಹೆಸರು ತಂದು ಕೊಟ್ಟಿದ್ದರು. ಮೈಸೂರಿನ ಸಿಐಐಎಲ್ ನಲ್ಲಿ ಕೆಲಸ ಮಾಡುತ್ತಿದ್ದ ದೇವನೂರು ಕೆಲಸಕ್ಕೆ ರಾಜೀನಾಮೆ ನೀಡಿ ಕೃಷಿಯನ್ನು ಆಯ್ಕೆ ಮಾಡಿಕೊಂಡರು. ಶ್ರವಣಬೆಳಗೋಳದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಅವರು ಆಯ್ಕೆಯಾಗಿದ್ದರು. ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುವುದಿಲ್ಲವಾದರೆ, ಅಧ್ಯಕ್ಷತೆ ವಹಿಸಿ ಮಾತನಾಡುವುದು ವ್ಯರ್ಥ ಎಂದು ಅವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವಹಿಸಲು ನಿರಾಕರಿಸಿದರು. ಹೀಗೆ ಆದರ್ಶದ ಹಾದಿಯನ್ನು ದೇವನೂರು ಆಯ್ಕೆ ಮಾಡಿಕೊಂಡರು. ದಲಿತ ಚಳುವಳಿಯನ್ನು ಪ್ರಭಾವಿಸಿದರು. ನಾಡಿನ ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಲು ಯತ್ನಿಸಿದರು. ಈಗಲೂ ಚಲನಶೀಲ ರಾಜಕೀಯ ಪಕ್ಷ ಕಟ್ಟಲು ಅವರ ಪ್ರಯತ್ನ ನಿಂತಿಲ್ಲ. ಇನ್ನು ಸಿದ್ಧಲಿಂಗಯ್ಯ ೧೯೭೫ ರಲ್ಲಿ ಹೊಲೆ ಮಾದಿಗರ ಹಾಡು ಬರೆದರು. ೧೯೭೯ರಲ್ಲಿ ಸಾವಿರಾರು ನದಿಗಳು ಕಾವ್ಯವನ್ನು ಕನ್ನಡಕ್ಕೆ, ಕರ್ನಾಟಕಕ್ಕೆ ನೀಡಿದರು. ಆಗ ಸಿದ್ದಲಿಂಗಯ್ಯ ಕರ್ನಾಟಕದ ಸಾರ್ವಜನಿಕ ಕವಿ ಎಂದೇ ಹೆಸರಾಗಿದ್ದರು. “ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತವರು,ವದೆಸಿಕೊಂಡು ವರಗಿದವರು ನನ್ನ ಜನಗಳು.ಹೊವಲನುತ್ತು ಬಿತ್ತೋರು ಬೆಳೆಯ ಕುಯ್ದು ಬೆವರೋರು, ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು”.  “ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಕಪ್ಪು ಮುಖದ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು ಹಗಲ ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು ಕ್ರಾಂತಿಯ ಬಿರುಗಾಳಿಯಲ್ಲಿ ಕೈ ಬೀಸಿದ ನನ್ನ ಜನ ಛಡಿಯ ಏಟು ಹೊಡೆದವರ ಕುತತಿಗೆಗಳ ಹಿಡಿದರು ಪೊಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು  ವೇದಶಾಸ್ತ್ರ ಪುರಾಣ ಬಂದೂಕದ ಗುಡಾಣ, ತರಗೆಲೆ ಕಸಕಡ್ಡಿಯಾಗಿ ತೇಲಿ ತೇಲಿ ಹರಿದವು  ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು… ಹೀಗೆ… ಸಿದ್ಧಲಿಂಗಯ್ಯನವರ  ಕವಿತೆಯನ್ನು ದಲಿತರ ಹೋರಾಟಕ್ಕೆ ಬಳಸಿದರು. ರೈತ ಹೋರಾಟಗಳಿಗೆ, ಕಾರ್ಮಿಕರ ಹೋರಾಟಗಳಿಗೆ ಸಹ ಸಿದ್ಧಲಿಂಗಯ್ಯನವರ ಕಾವ್ಯ ಬಳಕೆಯಾಯಿತು. ಯಾರಿಗೆ ಬಂತು, ಎಲ್ಲಿಗೆ ಬಂತು, ನಾಲ್ವತ್ತೇಳರ ಸ್ವಾತಂತ್ರ್ಯ ಕವಿತೆಯಂತೂ ಹೋರಾಟಗಾರರ ನಾಲಿಗೆಯ ಶಕ್ತಿಯಾಗಿತ್ತು. ೧೯೭೫ ರಿಂದಾಚೆಗೆ ದಲಿತರು ಹೊಸ ಪ್ರಜ್ಞಾವಂತ ಜನಾಂಗವಾಗಿ ಕರ್ನಾಟಕದಲ್ಲಿ ಸಿದ್ಧಲಿಂಗಯ್ಯನವರ ಕವಿತೆಗಳ  ಎರಕದಲ್ಲಿ ರೂಪುಗೊಂಡರು. ಅದಕ್ಕಾಗಿಯೇ ದಲಿತರ ಮೆರವಣಿಗೆ ಬೀದರ್ ನಿಂದ ಕೋಲಾರದತನಕ ಯಾವುದೇ ಮೂಲೆಯಲ್ಲಿ ನಡೆದರೂ ಅಲ್ಲಿ ಕವಿಯ ಹಾಡುಗಳನ್ನು ಹಾಡುತ್ತಿದ್ದರು. ಅದಕ್ಕಾಗಿಯೇ ಇದು ಸಾರ್ವಜನಿಕ ಕಾವ್ಯದ ಅಂತಿಮ ಯಶಸ್ಸು ಎನ್ನುತ್ತಾರೆ ಕನ್ನಡದ ಖ್ಯಾತ ವಿಮರ್ಶಕ ಡಿ.ಆರ್.ನಾಗರಾಜ್. ಕುತೂಹಲದ ಸಂಗತಿಯೆಂದರೆ ಕವಿ ಸಿದ್ಧಲಿಂಗಯ್ಯನವರ  ಮೊದಲ ಕವಿತೆಗಳಲ್ಲಿ  ಅಂಬೇಡ್ಕರ್,ಮಾರ್ಕ್ಸವಾದ  ಕಾಣುವ ಭಾವನೆಗಳ ಖಾಚಿತ್ಯ  ಅವರ ಎರಡನೇಯ ಹಂತದ ಕಾವ್ಯದಲ್ಲಿಲ್ಲ ಎಂದು ಡಿ.ಆರ್.ನಾಗರಾಜ್ ಗುರುತಿಸಿದ್ದಾರೆ. ಹೌದು. ಮುಂದೆ ರಾಮಕೃಷ್ಣ ಹೆಗಡೆ ಅವರ ಸ್ನೇಹದಿಂದ ವಿಧಾನ ಪರಿಷತ್ತನ್ನು ಸಹ ಸಿದ್ಧಲಿಂಗಯ್ಯ ಪ್ರವೇಶಿಸಿದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಸಹ ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದರು.  ಅನೇಕ ಪ್ರಚಲಿತ ವಿದ್ಯಮಾನಗಳಿಗೆ ಮೌನಿಯಾದರು. ಪಂಪ ಪ್ರಶಸ್ತಿ ಸಹ ಪಡೆದರು. ೨೦೨೦ ಫೆಬ್ರುವರಿಯಲ್ಲಿ ಬನವಾಸಿಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿದ ಸಿದ್ಧಲಿಂಗಯ್ಯ ಪ್ರಭುತ್ವವನ್ನು ಹೊಗಳಿದರು. ಮುಖ್ಯಮಂತ್ರಿಯ ಕಾರ್ಯವೈಖರಿ ಪ್ರಶಂಸಿದರು. ಪ್ರಭುತ್ವದ ಜೊತೆಗಿದ್ದೇ, “ಅರಸರನ್ನು ಒಲೈಸಿ ಬಾಳುವುದು ಕಡು ಕಷ್ಟ” ಎಂದ ಪಂಪನ ಹೆಸರೆತ್ತಲಿಲ್ಲ ನಮ್ಮ ಸಿದ್ಧಲಿಂಗಯ್ಯನವರು.  ಪಂಪನ ಕಾವ್ಯದ ಒಂದೇ ಒಂದು ಸಾಲನ್ನು ಅವರ ಪ್ರಸ್ತಾಪಿಸಲಿಲ್ಲ. ಸಾಹಿತ್ಯದ ಕುರಿತು ಮಾತೇ ಆಡಲಿಲ್ಲ. ದಲಿತ ಚಳುವಳಿಗೆ ದಿಕ್ಕು ತೋರಿಸಿಬೇಕಿದ್ದ ಕ್ರಾಂತಿಕಾರಿ ಕವಿ ಮೌನಕ್ಕೆ ಜಾರಿದರು. ಇದೇ ಕಾಲದ ವಿಪರ್ಯಾಸ. ಎರಡು ಧ್ರುವಗಳು : ಈಗಲೂ ಸರ್ಕಾರಗಳು ಎಡವಿದಾಗ ಅದಕ್ಕೆ ಪ್ರತಿಕ್ರಿಯಿಸುತ್ತಾ ಪ್ರತಿರೋಧವನ್ನು ಕಾಲ ಕಾಲಕ್ಕೆ  ದೇವನೂರು ಮಹಾದೇವ ಎತ್ತುತ್ತಲೇ ಬಂದಿದ್ದಾರೆ. ತಾವು ನಡೆದ ದಾರಿಯಲ್ಲಿ ಉತ್ತರ ಧ್ರುವ, ದಕ್ಷಿಣ ಧ್ರುವಗಳಿಂತಿರುವ ದೇವನೂರು ಮತ್ತು ಸಿದ್ಧಲಿಂಗಯ್ಯ ನಾಡಿನ ಯುವ ಜನತೆಗೆ ಏನು ಸಂದೇಶವನ್ನು ತಮ್ಮ ಬದುಕಿನ ಮೂಲಕ ಹೇಳಿದ್ದಾರೆ ಎಂಬುದು ನಮ್ಮ ಕಣ್ಣಮುಂದಿದೆ. ಆಯ್ಕೆ ಮಾತ್ರ ನಮ್ಮದು… ******************

ಕಣ್ಣ ಮುಂದಿನ ಎರಡು ಮೌಲ್ಯಗಳು -ಎರಡು ದಾರಿಗಳು Read Post »

ಕಾವ್ಯಯಾನ

ವರುಣರಾಗ

ಕವಿತೆ ಅರುಣ್ ಕೊಪ್ಪ ಹಸಿರು ಚಿಮ್ಮುವ ಬುವಿಯೊಳು….ವರುಣನ ಹನಿಗಳ ಸದ್ದು.!ಕವಿದ ಮೋಡಗಳು…ಎಲ್ಲೋ ಸೇರಿಹೋದವು…ಹನಿಯೊಂದೇ …..ಕೂಗುತ್ತಾಕ್ರಮಿಸುತ್ತಿದೆ….ಭೂ ಗರ್ಭವ!ಆಳ ಆಳವನು ಸೇರುವಾಸೆ….ಎಲ್ಲ ಕಡೆ ನರ್ತನ ಮಾಡುವಾಸೆ…ನಿನ್ನ ಹಾಡಿಗೆ ದ್ವನಿಗೂಡುವಹಿಂಡೇ ಈ ಪ್ರಪಂಚ!!ನೀ ಇದ್ದರೆ ಜೀವವೇ ಸಂಗೀತಮಯ…ಹಸಿರು…,ಹಸೀವು…,ಒಲವು ಎಲ್ಲ…..ನೀ ನರಿಯದಿಹ ಮಿಂಚು!!ಬಿರುಗಾಳಿ ಬೆನ್ನಟ್ಟಿ ಬಂದಾಗಆಗುವ ಭಯ!!ನೀ ಕಾಣದಾದಾಗ ಆಗುವ ವ್ಯಥೆ …..ಬಣ್ಣಿಸಲಾಗದಷ್ಟು ಭಾವಪೂರಿತ…ನೀ ಸುರಿವ ಸದ್ದೆ ಚಂದನೀ ಬೆರೆವ ಸಾಲು ಸಾಲುನೆರೆಗಳೇ ….ಪ್ರಾಕೃತಿಕ ಸೌಂದರ್ಯದ ಅಂತರಾಳ….ಆದರೆ ನಿನ್ನ ಆಳವ ಬಲ್ಲವರಾರಿಲ್ಲ….ಸಾಗರವೇ….??ನೀ ಮಳೆಯ ಮಗು,ನಗು,ಮಡದಿ,ಎಲ್ಲ ವೂ ನೀನೇ. ಎಲ್ಲ ನಿನ್ನ ಮಾಯೇ **************

ವರುಣರಾಗ Read Post »

ಕಾವ್ಯಯಾನ

ಬಂದಿಯಾಗಿಹ ರವಿ

ಕವಿತೆ ನೀ.ಶ್ರೀಶೈಲ ಹುಲ್ಲೂರು ಉದಯಿಸುವ ರವಿಯ ದಿನದೋಟಕೆಅಡ್ಡಿಯಾಗಿದೆ ಕುರಿಮೋಡ ಕರಿಸಾಲುಕುರಿಗಾರ ಪವನನೆದ್ದು ಬರುವನಕಹಿಂಡು ಕುರಿಗಳ ನಡುವೆ ರವಿ ಕಂಗಾಲು ಮಳೆಗಾಲದೀಗಿನೀ ಹಗಲ ಹೊತ್ತುಮೋಡಗಳದು ನಿಲದ ನಿತ್ಯ ರಂಪಾಟಕೆಂಪಾದವನಿಗದೇನೋ ಮಮಕಾರಮೋಡಗಳೊಂದಿಗವನದೂ ತುಂಟಾಟ ಶುಕಪಿಕಗಳ ಇನಿದನಿಯ ಗಾಢಮೌನಮಂಕಾದ ಮನಗಳಲಿ ಗೌಣ ಸೊಗಸುಅವನೆದ್ದರೆ ಬೆಳಗು ಏಳುವರು ಎಲ್ಲಹೊದಿಕೆಯಡಿಯಲೆ ಕಾಣುವರು ಕನಸು ಸುರಿವ ವರುಣನ ನಡುವೆ ನೆಲದ ಗಾನಝರಿ ತೊರೆ ನದಿಗಳಲಿ ರಭಸದೋಟತಡೆವರಾರಿಲ್ಲ ತಿಮಿರದಾಲಿಂಗನವಮೋಡಗಳಡಿಯೆ ರವಿಯ ಮಿಲನ ಕೂಟ ಕಡಲಿನೊಡಲಿಗದೇನೋ ಸಡಗರರವಿಯ ಚುಂಬನವು ಮರೆತ ಗೀತಅಮ್ಮನೊಡಲಲಿ ನದಿಗೆ ಧನ್ಯ ಭಾವಕಡಲ ಕುಡಿಗಳಲದೋ ನವ ಸಂಗೀತ **********

ಬಂದಿಯಾಗಿಹ ರವಿ Read Post »

You cannot copy content of this page

Scroll to Top