ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಸಮಯಾಂತರ

ಪುಸ್ತಕ ಸಂಗಾತಿ ಸಮಯಾಂತರ ಕನಸುಗಾರರು ಬರಲಿ ನಾವೂ ಸೋತ ಆಟವನ್ನು ಗೆದ್ದು ತರಲಿ ಅವರು- ಸಮಯಾಂತರ ಕಟ್ಟುವ ಕವಿ, ಕನ್ನಡದ ಕಾವ್ಯದೆಗಳನ್ನು ಮುಟ್ಟಿದ,ನಮ್ಮ ಅಂತರಾಳವನ್ನು ತಟ್ಟುವ,ಕವಿ ಸತೀಶ ಕುಲಕರ್ಣಿ ಅವರ ಆಯ್ದ ಕವಿತೆಗಳ ಸಂಕಲನ ‘ಸಮಯಾಂತರ’ ಮೊಗಸಾಲೆ ಪ್ರಕಾಶನದಲ್ಲಿ ಪ್ರಕಟವಾದ -೨೦೧೩ ಕೃತಿ ಹಲವೂ ಗಟ್ಟಿ ಕವಿತೆಗಳ ಗುಚ್ಛ “ರಕ್ತಗಾಲಿನ ನಮ್ಮಪಾಲಿನ/ ಹಾಡ ಬರೆಯತೇವ /ನೆಲಕ ಹಾಡ ಬರೆಯತೇವ ಎನ್ನುತ್ತಲೆ ಸತೀಶರು ನೆಲದ ಜನರ ನಾಡಿ ಮಿಡಿತದಿಂದ ರೂಪುಗೊಂಡು ಕಾವ್ಯ ನೆಲಕೆ ಸಂಕಟವೊದಗಿದಾಗ ಸತೀಶರ ಕಾವ್ಯ ಹೋರಾಟದ ನಾಲಗೆಯ ಮೇಲೆ ಕೆಂಪಾಗಿ ಹೋಗುತ್ತದೆ. ಎದೆ ಗಟ್ಟಿಸಿ ತುಳಿತಕ್ಕೊಳಗಾದವರ ಒಮ್ಮೆಲೆ ಧ್ವನಿಯಾಗಿ ಬಿಡುತ್ತದೆ. ಕಾವ್ಯ ನೆಲದ ಬೇರುಗಳನ್ನು ಹುರಿಯಾಗಿಸಿ ಗಾಂಧಿಯನ್ನೇ ಪ್ರಶ್ನೆ ಮಾಡುತ್ತದೆ ‘ಬೇರು ಸತ್ತಿಲ್ಲ ಮತ್ತೊಮ್ಮೆ ಈ ನೆಲದ ಮಾತಾಗಬಹುದೇ ಹೇಳು ಗಾಂಧಿ ಗಿಡ…? ನೆಲದ ಮಾತಾಗಬಹುದೇ ಹೇಳು ಗಾಂಧಿ ಎನ್ನುವ ಕವಿ ಅಸಹಾಯಕತೆಯಲ್ಲಿ ಗಾಂಧಿ ಗಿಡ ಪ್ರಶ್ನಿಸುವುದು ಪ್ರಸ್ತುತ ವ್ಯವಸ್ಥೆಯ ವ್ಯಂಗವಾಗಿ ಮತ್ತೆ ಭೂತಕಾಲದ ಆದರ್ಶ ಗಳು ಈ ಸಂಕಟದ ಕಾಲದಲ್ಲೂ ಗಾಂಧಿ ಬೇಕಾಗಿತ್ತು ಎನ್ನುವ ಕವಿಯ ತಹತಹಿಕೆ ಓದುಗನ ಹಳಹಳಿಕೆಯಾಗಿ ಬಿಡುತ್ತದೆ ಮೌನ ಚಿಗಿಯುವುದು ಅಷ್ಟೇ ಸುಲಭವಲ್ಲ ಅದು ಅಪಾರ ಮಾತುಗಳನ್ನು ಹುದುಗಿಸಿಕೊಂಡು ಅನಂತ ಕಾಲ ಸಮಾದಿ ಸ್ಥಿತಿಯಲ್ಲಿದ್ದಾಗ ಮೌನ ಹುಟ್ಟಬಲ್ಲದು ಆ ಮೌನ ಕಾವ್ಯವಾಗಬಲ್ಲದು ಅಡಿಗರ ಕವಿತೆಯಂತೆ ‘ ಹುತ್ತಗಟ್ಟದ ಚಿತ್ತ ಮತ್ತೆ ಕೆತ್ತಿತೇನೊ ಅಂತ ಆ ಪುರುಷೋತ್ತಮನ’ ಸಾಲುಗಳೆರಡರ ನಡುವೆ ಮೌನ ಚಿಗಿತರೆ ಸಾಕು ಅದು ನನ್ನ ಕವಿತೆ ಮೌನಕ್ಕಿರುವ ಅನಂತ ಅರ್ಥ ,ಅಪರಿಮಿತ ಸಾಧ್ಯತೆಗಳನ್ನು ಕಾವ್ಯದ ಜೊತೆ ಮಿಳಿತಗೊಳಿಸಿದ್ದಾರೆ ಸ್ಪರ್ಶ ಬೇಕೆನಗೆ/ ಉಚ್ಛ ಅಸ್ಪೃಶ್ಯನಾಗುವುದು ಬೇಡ/ ಹಾರುವ ನಾನಲ್ಲ /ನೆಲದ ಮೇಲೆ ನಡೆಯುವವ ಪ್ರತಿಯೊಬ್ಬ ವ್ಯಕ್ತಿಯು ಅನುಭವಿಸುವ ವೇದನೆಯ ತುಮುಲುಗಳ ತಾಕಲಾಟಗಳನ್ನು ಕಾವ್ಯ ಸಮರ್ಥ ವಾಗಿ ಹಿಡಿದು ತನ್ನ ನಿಲುವನ್ನು ನೆಲದ ಜೊತೆ ಕವಿ ಸಮ್ಮೀಳಿಸುತ್ತಾರೆ. ಕಾಲದ ಕಟ್ಟಳೆಯಲಿ ಎಲ್ಲರೂ ಸಿಕ್ಕಿಕೊಂಡವರೆ ಶಂಕಿತರಂತೆ ಅನುಮಾನಿಸುವ ಗುಮಾನಿ ಎಲ್ಲ ಕಾಲವನ್ನು ಬಿಟ್ಟಿಲ್ಲ ,ಕಾವ್ಯಧಾರೆಯ ಎಲ್ಲರನ್ನೂ ಸಮುದಾಯದ ಚೌಕಟ್ಟಿನಲ್ಲಿ ಬಂಧಿಸಲೂ ನೋಡಿದರು ಆ ಕಾಲಕ್ಕೆ ತಕ್ಕಂತೆ ಎಲ್ಲರೂ ಪ್ರತ್ಯುತ್ತರ ಕೊಡುತ್ತಲೆ ಮುಖಾಮುಖಿ ಯಾಗಿದ್ದಾರೆ ಹಾಗೆಯೆ ಕವಿ ಸತೀಶರನ್ನು ಈ ಸೋಂಕು ಬಿಟ್ಟಿಲ್ಲ ಕಾವ್ಯ ಕೊಡುವ ಉತ್ತರ ಅದ್ಭುತ ‘ ‘ ಹಾರುವ ನಾನಲ್ಲ  ನೆಲದ ಮೇಲೆ ನಡೆಯುವವ’ ಎನ್ನುವ ಕವಿ ನೆಲದ ಜೊತೆ ತನ್ನತನವನ್ನು ತನ್ನ ಮೂಲವನ್ನು ಗುರುತಿಸಿಕೊಳ್ಳುತ್ತಾರೆ ಈ ಪರಿಯ ಕಾವ್ಯ ಕನ್ನಡ ಸಾಂಸ್ಕೃತಿಕ ಲೋಕ ಅನುಭವಿಸುತ್ತಲೆ ಬಂದಿದೆ ಎನ್ಕೆ ಹನಮಂತಯ್ಯ ಅವರ ‘ನಾನು ಗೋವು ತಿಂದು ಗೋವಿನಂತಾದೆ’ ಬಿ ಫೀರಬಾಷಾ ಅವರ ‘ ಅಕ್ಕಾ ಸೀತಾ ನಿನ್ನಂತೆ ನಾನೂ ಶಂಕಿತ’ ಎನ್ನುವಲ್ಲಿ ಹೆಬಸೂರ ರಂಜಾನ್ ಅವರ ‘ ಅಮ್ಮಾ/ನಿನ್ನ ಎದೆಯಾಳದಲಿ/ನಾನೊಂದು ಗನ್ನು ಬಾಂಬು ಎನ್ನುವ ಸಾಲುಗಳು ಎಲ್ಲ ಸಮುದಾಯಗಳ ಅಸ್ಮಿತೆಯನ್ನು ಪರೀಕ್ಷಿಸುತ್ತವೆ ಕವಿ ಸತೀಶರ ಕಾವ್ಯ ಮಂಜುಗಡ್ಡೆಯು ತನ್ನನ್ನು ಕಳೆದುಕೊಳ್ಳುತ್ತಾ ತನ್ನ ಹೊರಮೈ ನ್ನು ತೊಳೆದುಕೊಳ್ಳುತ್ತಾ ಕರಗುವುದಲ್ಲಾ ಆ ರೀತಿ ತನ್ನ ಶಂಕೆಯನ್ನು ನೆಲದ ಜೊತೆ ತಾದಾತ್ಮ್ಯ ಗೊಳಿಸಿ ಅನುಸಂಧಾನಿಸುವ ಪರಿ ಅನನ್ಯ ಹಾದಿ ಹೆಣವಾದ/ ಬೀದಿ ದೀಪಗಳ ದೊರೆಯೇ….. ಕಂಬ ನೆಟ್ಟವನು ನೀನು/ ಸಾವು ತಂತಿಯ ಬಿಗಿದು /ನಿತ್ಯ ನಾಗರ ಹಾವಿನೊಡನಾಡಿದವ ಲೈನ್ ಮನ್ ಮಡಿವಾಳ ಭೀಮಪ್ಪನಿಗೆ  ಎನ್ನುವ ಕವಿತೆಯಲ್ಲಿ ತನ್ನ ಕಾಯಕದ  ಜೊತೆಗಾರನ ಸಾವಿನ ದುರಂತ, ಜೀವ ಕಾರುಣ್ಯದ ಪ್ರೀತಿ ದುಗುಡ ಕಾವ್ಯದುದ್ದಕ್ಕು ಕರುಳು ಮಿಡಿಯುವ ವಿದ್ರಾವಕ ನೀನು ಬೆಳಕು ಕೊಟ್ಟು ಕತ್ತಲೆಯನ್ನು ನೀ ಸೇರಿದೆ ಎನ್ನುವ ಸಾಲುಗಳು ಓದುಗನನ್ನು ಮಿಡಿಯುತ್ತವೆ ಕಾವ್ಯ ಅದು ಪ್ರಭುತ್ವದ ಕೈಗೊಂಬೆಯಾಗದೆ ಉಳ್ಳವರ ಅಡಿಯಾಳಾಗದೆ ಒಬ್ಬ ಸಾಮಾನ್ಯನ , ದುಡಿಯುವ ಕಾರ್ಮಿಕನಸಾವು ಹೇಗೆ ಕಾವ್ಯದ ವಸ್ತುವನ್ನು ತಮ್ಮ ಬಂಡಾಯದ ಸಿದ್ಧಾಂತವನ್ನು ಕಾವ್ಯದ ಪಾತಳಿಯಲ್ಲಿ ನೆಲಸಮಗೊಳಿಸಿದ್ದಾರೆ. ನಗರ ಏಳುತ್ತದೆ,ಬಾಲ ಬಿಚ್ಚುತ್ತದೆ ,ಆಕಳಿಸುತ್ತದೆ,ಮಿರಗುತ್ತದೆ, ಕರಗುತ್ತದೆ ಎನ್ನುವ ಸಾಲುಗಳು ನಾಗರಿಕ ಜಗತ್ತಿನ ಕಿರೀಟವಾಗಿರುವ ನಗರಗಳ ವಾಸ್ತವ ಬದುಕನ್ನು ಅದರ ಭ್ರಮಾತ್ಮಕ ಕಲ್ಪನೆಗಳನ್ನು ಕವಿತೆ ಹುಸಿಗೊಳಿಸುತ್ತದೆ ‘ ನಗರ ಗಾಢ ಗೊರಕೆ ನಿದ್ರೆಯಲ್ಲಿದೆ’ ಎನ್ನುವ ಧ್ವನಿಪೂರ್ಣ ಸಾಲುಗಳು ಅಮಾನವೀಯತೆಯ ಸಾಕ್ಷಿಯ ಪ್ರತೀಕದಂತಿರುವ ನಗರಗಳ ಕರ್ಮಕಾಂಡ ವನ್ನು ಅನಾವರಣಗೊಳಿಸುತ್ತಲೆ ಮಾನವತೆಯ ವಿರೋಧಿ ಪ್ರಜ್ಞೆಯನ್ನು ನಗರ ಒಳಗೊಂಡಿವೆ ” ಮರಣ ಮಹಾಯಾಗದ/ ಮುನ್ನುಡಿಗೆ / ಹುರಿಗೊಂಡ ಒಂದೆ ಒಂದು ಬಾಣ ಎನ್ನುವ ಕವಿತೆಯ ಸಾಲುಗಳು ಯುದ್ಧ ವಿರೋದಿ ನೆಲೆಯನ್ನು ಕಾವ್ಯ ಸಾದರ ಪಡಿಸುತ್ತದೆ. ಸತೀಶರ ಕಾವ್ಯದ ವಸ್ತುಗಳು ದೇವಲೋಕದ ವಸ್ತುಗಳಾಗದೆ ಸದ್ಯದ ನಿತ್ಯ  ದುಡಿಯುವ ಜನರ ಜೊತೆಯಾದ ವಸ್ತುಗಳೆ ಕಾವ್ಯದ ನಿಲುವಾಗಿದೆ.ಅಲ್ಲಿ ಮಡಿವಾಳ ಭೀಮಪ್ಪ, ಅವರ ಗುರುಗಳು, ಚಪ್ಪಲಿಗಳು,ನಂಬದ ದೇವರುಗಳು, ಜನಪರ ಕಾವ್ಯದ ಬಗ್ಗೆ, ನಗರಗಳ ಬಗ್ಗೆ, ಬದುಕಿನ ಭವಣೆಗಳ ಬಗ್ಗೆ, ಮನಸುಗಳನು ಕಟ್ಟುವ, ಭಯೋತ್ಪಾದನೆಯಿಂದ ನಲುಗಿ ನೆಲೆ ಕಳೆದುಕೊಂಡ  ಮುಗ್ದ ಕಂದಮ್ಮಗಳ ನೋವು, ಯುದ್ಧ, ಶಾಂತಿ ಎಲ್ಲವೂ ವಸ್ತುಗಳಾಗಿ ನೆಲೆಗೊಂಡಿವೆ, ಕವಿತೆಯಲ್ಲವೂ ಒತ್ತರಿಸಿಕೊಂಡು ಬಂದ  ಕವಿತೆಗಳಾಗಿರದೆ ಅವೆಲ್ಲವೂ ಸಹಜತೆಯಿಂದ ಹೋರಾಟದ ಹಾದಿಯಲ್ಲಿ ಪಡಿಮೂಡಿದ್ದು. ಸತೀಶರ ಕಾವ್ಯ  ನಾಲ್ಕು ಗೋಡೆಯ ಮಧ್ಯ ಹುಟ್ಟಿದ ಚಮತ್ಕಾರಿ ಶಬ್ದಗಳಲ್ಲ ಅವು ಕರುಳಿನಿಂದ  ಹಾದಿ ಬೀದಿಗಳಲ್ಲಿ ಕಾವ್ಯ ತನ್ನ ಅಂತರಂಗ ತಾವಾಗಲೆ ತೆರೆದುಕೊಂಡು ಹಾಡಾಗಿದ್ದು, ಅವು ಅತ್ತವರ ಕರುಳಿನ ಭಾಷೆ ಕಾವ್ಯದಲ್ಲಿ ಹೃದ್ಯಗೊಂಡಿದೆ ಇಷ್ಟು ಬಾರ ಹೊತ್ತು/ ಇಷ್ಟು ದೂರ ತಂದ / ಈ ಚಪ್ಪಲಿಗಳಿಗೆ ನನ್ನ ವಂದನೆಗಳು ಅನನ್ಯ ವಸ್ತು ಒಳಗೊಂಡ ಕಾವ್ಯ ‘ ಚಪ್ಪಲಿಗಳು ಪರಾಣ ಕಾಲದಿಂದ ಅಧುನಿಕ ಕಾಲದವರೆಗೂ ಚರ್ಚಿತವಾದ ವಸ್ತು ಅದು ಭರತ, ಬಸವಣ್ಣನಿಂದಿಡಿದು ತೀರಾ ಇತ್ತೀಚಿನ ತನಕವು ಸುದ್ದಿಯಲ್ಲಿದೆ ಚಪ್ಪಲಿಯು ನಿಷ್ಕಾಮ ಸೇವೆಯನ್ನು ಹೇಳುತ್ತಲೆ ದೈವತ್ವದ ಸ್ಥಾನದ ಎತ್ತರಕೆ ಹೋಗುತ್ತವೆ, ಬಸವಣ್ಣ  ಚನ್ನನ ಚಪ್ಪಲಿಯನ್ನು ತಲೆಯ ಮೇಲೆ ಹೊತ್ತಂತೆ  ಸತೀಶರು ಕಾವ್ಯದಲ್ಲಿ ಚಪ್ಪಲಿಗಳು  ಎದೆಯ ಮೇಲೆರಿದೆ ಕಾವ್ಯದಲ್ಲಿ ಬರುವ ಸಾಲುಗಳು ಮೌನದ ಸಂಗಾತಿಗಳೆ, ನನ್ನ ಕಾಲು ಮರಿಗಳೆ, ಬಡಮೋಚಿಯ ಜೋಡಿ ಮಕ್ಕಳೆ, ಅರಿವಿನಾ ದೇವರುಗಳೆ, ಮರಿ ಪಾರಿವಾಳಗಳೆ, ಓ ಮೌನ ತಪಸ್ವಿಗಳೆ,ಎಂದು ಚಪ್ಪಲಿಗಳನ್ನು ಸಂಬೋದಿಸುವ ರೀತಿ ಪರಿ ಅನನ್ಯ ಕವಿ ಸತೀಶರು ಬದುಕಿನ ಅರ್ಧ ಭಾಗವನ್ನು ಬೀದಿಯ ಬಯಲಲ್ಲೆ  ಕಳೆದವರು ಬಂಡಾಯವನ್ನು ಉಸಿರಾಗಿಸಿಕೊಂಡು ಮನುಷ್ಯ ಪರ ನಿಲುವನ್ನಿಟ್ಟುಕೊಂಡವರು  ಸಿದ್ದಲಿಂಗಯ್ಯನವರ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರನಂತೆ, ಚಂಪಾ ಅವರ ಪ್ರೀತಿಯಿಲ್ಲದೆ ನಾನು ದ್ವೇಷವನ್ನು ಕೂಡಾ ಮಾಡಲಾರೆ ಎನ್ನುವಂತೆ ತಣ್ಣನೆಯ ಕಾವನ್ನು ಕಾವ್ಯಕ್ಕೆ ಸ್ಪರ್ಶಿಸಿದವರು ತನ್ನದೆ  ತನ್ನದೆ ಪರಂಪರಾಗತ ಸಮೂಹವನ್ನು ಎದುರಿಸಿಕೊಂಡು ಬಸವಣ್ಣ ಹೇಳಿದಂತೆ ” ಆನು ಹಾರುವನೆಂದರೆ ಕೂಡಲ ಸಂಗಯ್ಯ ನಗುವನಯ್ಯ” ಎನ್ನುವ ನಿಲುವನ್ನೆ  ಕವಿ ‘ ಹಾರುವವ ನಾನಲ್ಲ ನೆಲದ ಮೇಲೆ ನಡೆಯುವವ ‘ ಎನ್ನುವ ನಿಲುವು ‘ ಗೋವಿಂದ ಭಟ್ಟರು ಶರೀಫನಿಗೆ ತೊಡಿಸಿದ ಜನಿವಾರವನ್ನು ಸಾರ್ವತ್ರಿಕಗೊಳಿಸುವುದು ಸತೀಶರು ‘ ಹೆಗಲೇರಿ ಬೆನ್ನಿಳಿದು ಸೊಂಟ/ ಸುತ್ತಿದ ಜನಿವಾರ ನನಗೆ/ಸಾವು/ ಹೆಡಮುರಗಿಯ ಹಾವು ಎಂದು ನಿರಾಕರಿಸುವುದು , ಬಸವಣ್ಣ ‘ ಅಕ್ಕನಿಗಿಲ್ಲದ ಜನಿವಾರ ನನಗೇಕೆ’ ಎಂದು ಪ್ರಶ್ನಿಸುವುದು ಎಲ್ಲವೂ ಸಾರ್ವತ್ರಿಕ ಗೊಳಿಸುವುದು, ನಿರಾಕರಿಸುವುದು, ಪ್ರಶ್ನಿಸುವುದು ಒಳಗೊಂಡು ಮಂತ್ರಕ್ಕಿಂತಲೂ ಸ್ಪರ್ಶಶಕ್ತಿಯ ಮಹತಿಯನ್ನು ಕಾವ್ಯದಲ್ಲಿ ದಾಖಲಿಸುತ್ತಾರೆ ಸಂಶಯದ ಮಂಡಲದಲ್ಲಿ, ಸುಳಿಗಳಲಿ ನಾನು ಹರಿವ ಹೊಳೆ ಎನ್ನುವುದು ಕೆಂಡ ಕುಂಡಗಳ ಸಂಗ ದ ಆತಂಕದ ಗಡಿಗಳನು ನೀವೇದಿಸುತ್ತಾರೆ ತಮ್ಮ ಕಾವ್ಯದ ನಿಲುವನ್ನು ದಾಖಲಿಸುತ್ತಾ ತಮ್ಮ ಬಂಡಾಯ ಕವಿತೆಯಲ್ಲಿ ” ದಮನಕ್ಕೆ ಉತ್ತರ ದಿಕ್ಕಾರ/ಬಂಡಾಯ ದಬ್ಬಾಳಿಕೆಗೆ ಉತ್ತರ ಎನ್ನುತ್ತಾರೆ ಸಾದತ್ ಹಸನ್ ಮಾಂಟೋ  ಕವಿತೆಯಲ್ಲಿ ಹೋರಾಟದ ಹುಕಿಗೆ  ಸಂಗಾತಿಯಾಗಿ ಕಾಲ ಕಾಲಕ್ಕೆ ಗೋಳಗೊಮ್ಮಟದ ನಿಲ್ಲದ ಮಾರ್ದನಿ ಮಂಟೋ ನಿತ್ಯ ಕೈದಿ,ಕಾಲಾತೀತ ಬಂದಿ / ನಮ್ಮಾತ್ಮಗಳ ಬೆಂಕಿಯಾಗಿದ್ದಾನೆ ಮಂಟೊ ಹೋರಾಟದ  ಕಾವಿಗೆ ಕಿಡಿಯಾದ ಮಂಟೋನನ್ನು ತಮ್ಮ ಕಾವ್ಯದಲ್ಲಿ ಪ್ರತಿಫಲನಗೊಳ್ಳುತ್ತಾನೆ ಈ ಬೀದಿಯವರು ಕವಿತೆಯಲ್ಲಿ ಬೀದಿಯವರ ಪರ ನಿಲುವು ,ಒಡಲಾಳ ಕಿಚ್ಚಿನ ಕವಿತೆ  ೧೯೮೦ ರ ದಶಕದಲ್ಲಿ ಬಂದ ಸಂಕಲನ ಕವಿತೆಯಲ್ಲಿ ಬೆವರು ಸುರಿಯುವವರ ಸಂಗಡ/ ಬದುಕು ಸುಲಿಯುವವರು ಇದ್ದಾರೆ ಎನ್ನುವಲ್ಲಿ ಕವಿ ಬೆವರಿಗೆ ಪ್ರತಿಯಾಗಿ ರಕ್ತ ಬೇಡುವವರು ,ಕಿತ್ತು ತಿನ್ನುವವರ ನಡುವೆ  ಕೂತು ತಿನ್ನುವವರು, ಉರಿ ಹಚ್ಚಿ ಸುಟ್ಟು ಹಾಕುವವರ ಮಧ್ಯ ಹೊಸ ಚಿಗುರುವ ದನಿ ಎತ್ತುವವರು ಇದ್ದಾರೆ ಒಡಲಾಳ ಕಿಚ್ಚಿನ ಸಂಕಟ, ತಳಮಳ ತುಮುಲದ ಒಳಬೇಗುದಿಯನ್ನು ದೇವನೂರು ಮಹಾದೇವ ‘ಅವರ ಒಡಲಾಳ’ ಕತೆ ಆ ಕಿಚ್ಚಿನಲ್ಲಿ ಕುಸುಮ ಬಾಲೆ ಇಣುಕಿದಂತೆ ಹಾದು ಹೋಯಿತು ಪ್ರಸ್ತುತ ಪ್ರಭುತ್ವ ಪ್ರೇರಿತ ದಮನದಲ್ಲಿ ಅಂದು ಬರೆದ ಕವಿತೆಯು’ ವರ್ತಮಾನದ ಒತ್ತಡದಲ್ಲಿ ‘ ಕವಿತೆ ಮುಖಾ ಮುಖಿ ಯಾಗಿ ನಿಲ್ಲುತ್ತದೆ. “ವರ್ತಮಾನದ ಒತ್ತಡದಲ್ಲಿ ಚಹರೆಗಳು/ಭೂತವನ್ನು ತಿನ್ನುತ್ತವೆ , ಭವಿಷ್ಯವನ್ನು ಕೊಲ್ಲುತ್ತವೆ ಪ್ರಸ್ತುತ ವರ್ತಮಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಒಂದು ಹತ್ಯಾಚಾರದ ಹಂತಗಳು ಕವಿತೆಯಲ್ಲಿ  ವಾಸ್ತವ ಭಾರತದ  ನ್ಯಾಯ ಪದ್ದತಿಯ ಒಳನೋಟವನ್ನು ಸೂಕ್ಷ್ಮ ವಾಗಿ ಅನಾವರಣಗೊಳಿಸುತ್ತದೆ, ” ಅತ್ಯಾಚಾರವಾಗಿಲ್ಲ/ ತೀರ್ಪು ಬಂದಿತ್ತು ಒಂದು ದಿನ/ ಅವಳು ಹೆರಿಗೆ ನೋವಿಗೆ ನರಳುತಿದ್ದಳು ಎನ್ನುವ ಕೊನೆಯ ಸಾಲು ಮನಕಲಕುತ್ತದೆ. ಸತೀಶರ ಕವಿತೆ ಕಾಲುದಾರಿ ಬದಿಯ ಬೇಲಿ ಮೇಲಿನ ಹೂವಂತೆ , ನಾಳೆ ಈ ನೆಲದಲ್ಲಿ ಅರಳುವ ಸಾಲು ಸಾಲು ಗುಲಾಬಿ, ಸುಟ್ಟ ಮನಸ್ಸಿನ ಕ್ರಾಂತಿ ಪತ್ರ, ಪುಟ್ಟ ಮಗನ ಹರಿದ ಹವಾಯಿ ಚಪ್ಪಲಿ ಅವರ  ಕಾವ್ಯವನ್ನು ಅವರೆ ಹೇಳುವಂತೆ ಪಿಂಡ ಪುರಾಣದಲ್ಲಿ,ಕಾಗೆ ಸಾಲುಗಳಲ್ಲಿ, ಜನಿವಾರದ ಬಂಧದಲ್ಲಿ, ಶ್ರಾದ್ಧ ಕರ್ಮದ ಕಾಂಡಗಳಲ್ಲಿ ನನ್ನ ಹುಡಕಬೇಡಿ ಎನ್ನುತ್ತಾರೆ ಕಾವ್ಯದ ಅಂತಿಮ ಉತ್ತರ ” ನಾನು ಬೂದಿಯಾಗಿರುವೆ/ ಈ ನೆಲದ ಮಣ್ಣಾಗಿರುವೆ ಎನ್ನುವ ಉತ್ತರ ತಾರ್ಕಿಕತೆಗೆ ತಂದು ನಿಲ್ಲಿಸುತ್ತದೆ. ಅದು ಪುಟ್ಟ ಬೀಜದ ಹೊಟ್ಟೆಯಿಂದ  ಹುಟ್ಟುವ ಹೆಮ್ಮರ,ನನ್ನಂತೆ ನಾನಾಗಿ ಬದುಕಬಲ್ಲ ಸ್ವಾಭಿಮಾನ ದ ಹಾಡಾಗಿದೆ. ಅವರು ಬದುಕು,ಕಾವ್ಯವನ್ನಷ್ಟೇ ತಮ್ಮ ವೃತ್ತಿಯನ್ನು ಪ್ರೀತಿಸಿದವರು ಕಾವ್ಯದ ಬೆಳಕಿನ ಜೊತೆಗೆ ತಮ್ಮ ವೃತ್ತಿ ಯ ದೀಪದ ಕಂಬವನ್ನು ಹೊತ್ತವರು ಹೀಗಾಗಿಯೆ ಲೈನ್ಮನ್ ಮಡಿವಾಳಪ್ಪ ನೆನಪಿನ ಪರದೆಯಲಿ ಸರಿದು ಹೋಗುತ್ತಾನೆ,ಆ ನನ್ನ ಕೆ.ಇ.ಬಿ ಕವಿತೆ ವಿದ್ಯುತ್  ಇಲಾಖೆಯ ಚೆಂಬಳಕಿನ ನೆರಳು ಬೆಳಕು ಕತ್ತಲಿನಾಟವನ್ನು ತೆರದಿಡುತ್ತದೆ  ಅಷ್ಟೇ ನೆನಹುನಿಂದ ” ಅನ್ನ ಕೊಟ್ಟ/ ಅರಿವೆ ಕೊಟ್ಟ/ ಮನೆ ಕೊಟ್ಟ ಮೂಕ ತಂದೆ ನನ್ನ ಕೆ.ಇ.ಬಿ ಎನ್ನುವಲ್ಲಿ  ಆ ಬದುಕು ಕೊಟ್ಟ ಇಲಾಖೆಯ ಪ್ರೀತಿ ಅಷ್ಟೆ ಅಕ್ರೋಶವಾಗಿ ” ಊರೂರು ಚೌಕದಲಿ / ಹತ್ತೂರ ಒಡೆಯರ ನಡುವೆ/ ಹರಾಜಿಗೆ ನಿಂತ ಮುದಿ ಗುಲಾಮ ನನ್ನ ಕೆ.ಇ.ಬಿ ಹೀಗೆ ಜಗಭಗ ಸುಟ್ಟು ಬೂದಿ ಮಾಡಿ ಬಿಡು ಎಂದು ಒಳಗಿಚ್ಚನ್ನು ತೂರಿಬಿಡುತ್ತಾರೆ ನನ್ನ ಕಣ್ಣ ಬಾಗಲದಾಗ ನೀರು ತುಂಬಿ ನಿಂತಿತ್ತು ಎನ್ನುವ ಸತ್ತ ಗುರುಗಳನ್ನು ಸ್ಮರಿಸಿದ ಕವಿತೆಯ ಸರಳೀಕರಣ ಆಪ್ತತೆಯ ತೆಕ್ಕೆಯಲ್ಲಿ ತಂದು ಕಣ್ಣೇರಾಗಿಸುತ್ತದೆ. ಮಹಾಭಾರತದ ಆ ಹಕ್ಕಿ ಅವರ ಚರ್ಚಿತ ಕವಿತೆ “ಯಾವುದು ಗೆಲ್ಲಬೇಕು/ ಯಾವುದು ಸೋಲಬೇಕು/ ಇದು ಕವಿ ಹೃದಯದ ಕದರು ಕವಿಯಾಗಿ ನಾನೇಕೆ ಪ್ರಶ್ನೆ ಕೇಳಬಾರದು,  ಹಕ್ಕಿ ಯಾಕೆ ಹಾರಿ ಹೋಗಬಾರದು ಯಾಕೆ ಬಾಣದ ಗುರಿ ತಪ್ಪಬಾರದು  ಹೇಳಿ ನೀವೆ ಹೇಳಿ ಎಂದು

ಸಮಯಾಂತರ Read Post »

ಪುಸ್ತಕ ಸಂಗಾತಿ

ಮರುಭೂಮಿಯ ಹೂ’ ಸಫಾ’

ಹಳೆಯ ಧೂಳು ಹಿಡಿದ ಅಥವಾ ತುಕ್ಕು ಹಿಡಿದ ರೇಜರ್ ಬ್ಲೇಡಿನಿಂದ ಹೆಣ್ಣಿನ ಗುಪ್ತಾಂಗದ ಕ್ಲಿಟೋರಸ್ ಎಂಬ ಬಹುಮುಖ್ಯವಾದ ಭಾಗವನ್ನು ಅನಸ್ತೇಸಿಯಾಗಳ ಸಹಾಯವಿಲ್ಲದೆಯೇ ತೆಗೆದು ಕತ್ತರಿಸಿ ಹಾಕಿ ಪೊದೆಗಳಿಂದ ತೆಗೆದ ಮುಳ್ಳುಗಳಿಂದ ಹಸಿಯಾದ ಗಾಯವನ್ನು ಮುಚ್ಚಿ ಹೊಲಿಯುವ ಬರ್ಬರ ಸಂಪ್ರದಾಯ.

ಮರುಭೂಮಿಯ ಹೂ’ ಸಫಾ’ Read Post »

ಪುಸ್ತಕ ಸಂಗಾತಿ

ದುಗುಡದ ಕೆಂಡ – ಕೈಲಿ ಹಿಡಿದು

ಪುಸ್ತಕ ಸಂಗಾತಿ ದುಗುಡದ ಕೆಂಡ – ಕೈಲಿ ಹಿಡಿದು ರಾಯಬಾಗದ ಯುವ ಕವಿ‌ ಮಿತ್ರ ರಾಜು ಸನದಿಯವರ ಕವನಸಂಕಲನ “ದುಗುಡದ ಕುಂಡ ಕೈಲಿ ಹಿಡಿದು ಕಾವ್ಯ ಪ್ರೀತಿಯ ಸಂಭ್ರಮ ಸಂತೋಷ ಅನುಭವಿಸುತ್ತ ಈ ಕೆಲವು‌ ಮಾತುಗಳನ್ನು ಬರೆಯುತ್ತಿದ್ದೇನೆ. ( ಸನದಿ ಪ್ರಕಾಶನ ರಾಯಬಾಗ -೨೦೧೯) ಈ ಸಂಕಲನ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕಪ್ರಾಧಿಕಾರದ ಧನ ಸಹಾಯ ಪಡೆದು ಮುದ್ರಣವಾಗಿರುವದೂ ವಿಶೇಷವೇ.ಹೊಸ ಕಾಲದ ಕವಿಗಳ ಕವಿತೆಗಳನ್ನು ಓದುವದೇ ಒಂದು ಸೊಗಸು. ಬರುತ್ತಿರುವ ಕವನ ಸಂಕಲನಗಳಿಗೇನೂ ಬರವಿಲ್ಲ. ಆದರೆ ಎದೆಯ ಕಾವು ತಣಿಸುವ ಕವಿತೆಯನ್ನು, ಓದುವದೇ ಒಂದು ಸೊಗಸು. ಹೊಸ ಹೊಸ ವಿನ್ಯಾಸದಲ್ಲಿ‌ ಮುರಿದು ಕಟ್ಟುವ ಕವಿತೆಗಳನ್ನು ಅವು  ಬಂದಾಗ ಆಗುವ ಎದುರುಗೊಳ್ಳುವ  ಸಂತೋಷ ,ಭವಿಷ್ಯದ ಕಾವ್ಯ ದ ಬಗ್ಗೆ ಇರಿಸಿಕೊಳ್ಳಬಹುದಾದ ಭರವಸೆ ಇವು ಸಂತೋಷಗೊಳಿಸುತ್ತವೆ. ಅದೇ ಅದೇ ಚರ್ವಿತ ಚರ್ವಣ ರೂಪಕಗಳ ನಡುವೆ ಕಾವ್ಯ ಮುಳುಗಿ ಹೋಗಿದ್ದಾಗ ರಾಜು ಅವರ ಸಂಕಲನ ತನ್ನ ಹೊಸ ಇಡಿಯಮ್ಮುಗಳಿಂದಾಗಿ  ತುಂಬ ಖುಷಿ  ಕೊಟ್ಟದ್ದನ್ನು ಮೊದಲೇ ಹೇಳಿ ಮುಂದೆ ಹೋಗುತ್ತೇನೆ. ರಾಜು ಅವರ ಈ ಸಂಕಲನದ ಬಹುಮುಖ್ಯ ಕವಿತೆ “ಅಕ್ಕ ಕಾಣೆಯಾಗಿದ್ದಾಳೆ “ಎನ್ನುವ ಹೆಸರಿನ ಎರಡು ಕವಿತೆಗಳು.ಮಹಿಳಾ‌ಸ್ವಾತಂತ್ರ್ಯದ ಬಗೆಗೆ ಬರೆದ ಕವಿತೆಗಳು ಇವು. ಹನ್ನೆರಡನೆಯ ಶತಮಾನದ ಅಕ್ಕನಿಗಾದರೋ ಎಲ್ಲವನ್ನು ದಿಕ್ಕರಿಸಿ ಹೊರಬರುವ ಸ್ವಾತಂತ್ರ್ಯವಿದ್ದಿತು. ಈ ಕಾಲದ ತನ್ನ ಅಕ್ಕ ಈ ಬಗೆಯ ಸ್ವಾತಂತ್ರ್ಯ ಅನುಭವಿಸುವದು ಯಾವಾಗ? ಎಂದು‌ ಪ್ರಶ್ನಿಸುವ ಕವಿ  ಅಕ್ಕ  ಜಡ ಸಂಪ್ರದಾಯಗಳ ವಿರುದ್ಧ ಬಂಡೆದ್ದು ದಿಗಂಬರೆಯಾಗಿ ಹೊರಬಂದಳು.ಆದರೆ ತನ್ನ‌ ಅಕ್ಕ ಅಪ್ಪ ಅವ್ವನ ಬಂಗಾರ ಸರಪಳಿಯ ಸಂಪ್ರದಾಯದ ಮಾತು ಬಾಜು‌ಮನೆಯ ಗಂಡಸರ ಆಚಾರದ ಗಡಸು ದ್ವನಿಗಳ‌ ಗಸ್ತು! ಇವುಗಳಿಗೆ ಹೆದರಿ ಅಕ್ಕ ಮನೆಯೊಳಗಡೆಯೆ ಅಡಗಿ‌ ಕುಳಿತು ಕವಿಯ ಬಾಜುವೆ ಇದ್ದರೂ ” ಮೋಡದ‌ ಮರೆಯ ಚಂದಿರನಂತೆ” ಮುಸುಕಿನಲ್ಲಿ  ಮರೆಯಾಗಿದ್ದಾಳೆ. ಮುಚ್ಚಿ‌ಹೋಗಿದ್ದಾಳೆ. ಕಾಳು ಹಾಕಲು ಹೊರಗೆ ಅವಳು ಬರುವಳೆಂದು ‌ಕಾದ ಪಾರಿವಾಳಗಳು ಮೋಸ ಹೋಗಿವೆ.ಕವಿ ಅದಕ್ಕೇ ಕೇಳುತ್ತಾನೆ , ಮತ್ತೆಂದು ಹುಟ್ಟುತ್ತಾರೆ ಅಲ್ಲಾಹುವಿನ ಕರುಣೆಯಿಂದ ಬಸವ ಅಲ್ಲಮ ಪೈಗಂಬರರು ನಮ್ಮಕ್ಜನ ಎದೆಯೊಳಗಿದ್ದ ದುಗುಡದ ಕುಂಡವನ್ನು ಹೊರಗಿಳಿಸಲು? ಹೀಗೆ ಪ್ರಶ್ನಿಸುವ ಕವಿ ಸಮಸ್ತ ಮನುಕುಲಕ್ಕೆ ಪ್ರಶ್ನೆ ಎಸೆಯುತ್ತಾರೆ .ಇದೇ ಹೆಸರಿನ ಇನ್ನೊಂದು‌ ಕವಿತೆ ಇದರದೆ ಮುಂದುವರಿದ ಭಾಗವಾಗಿದೆ.ಅಕ್ಕನ ಸೌಂದರ್ಯ ಯಾವ ದೇವಲೋಕದ ಸುಂದರಿಗೂ ಕಡಮೆಯಲ್ಲದ್ದು. ಅಕ್ಕ ಸುಂದರ ಚಂದ್ರಬಿಂಬದಂತೆ ಬಿನ್ನಾಣವಿಲ್ಲದ ಖೂಬಸೂರತ್ ಚೆಲುವೆ ಆಕೆಗೂ ತನ್ನ ಚಲುವಿನೊಂದಿಗೆ ಹೊರಬರುವ ಆಸೆ.ತನ್ನ ಸೌಂದರ್ಯದೊಡನೆ ಆದರೆ ಸುತ್ತಲಿನ ಕಣ್ಣುಗಳೇ ಕುರುಡು. ಅದನ್ನೆ ಕವಿತೆ ಕಪ್ಪು ಬಟ್ಟೆಯೊಂದಿಗೆ ಧಪನ್ ಆಗಿದೆ  ಅಕ್ಕನ‌ ಚಲುವು ಎಂದು ವಿಷಾದಿಸುತ್ತದೆ. ಆಕೆಗೂ ಆಸೆಯಿದೆ. ತಮ್ಮನಿಗೆ ಆಕೆ ಹೇಳಿದ್ದೂ ಇದೆ”.ನಾನು ನಿನ್ನಂತೆ ಬಣ್ಣ ಉಡಬೇಕು ,ಜಿಂದಗಿ ಬಾಳಬೇಕು”, ಎಲ್ಲ ಬಣ್ಣ ಉಟ್ಟರೂ ಹೊರಗೆ ಬರುವಾಗ ಮಾತ್ರ ಕಪ್ಪು ಕಪ್ಪಾಗಿ ಬಿಡುತ್ತಾಳೆ. ಆ ಕಪ್ಪು ಬಟ್ಟೆ ಅವಳ ನಗು,ನೋಟ, ನಡೆ,ನಲಿವನ್ನೆಲ್ಲಾ ನುಂಗಿ ಹಾಕಿರುವದರ ವಿರುದ್ದ ತಣ್ಣನೆಯ  ಆಕ್ರೋಶವಿದೆ.ಕವಿತೆ ಸ್ವಲ್ಪ ವಿವರಣಾ ತ್ಮಕವಾಗಿದೆ ಎನಿಸಿದರೂ ಅದು‌ ಕವಿತೆಯ ಸಂವಿಧಾನ ಕ್ಕೆ ಏನೂ ಅಂತಹ ಬಂಗ ತಂದಿಲ್ಲ. ಇಡೀ ಮಹಿಳಾ ಕುಲದ ಎದೆಯೊಳಗಿರುವ ದುಗುಡದ ಕುಂಡವ ಆರಿಸುವ ಆಸೆ ಕವಿಗೆ ಇರುವದು ಸ್ಪಷ್ಟವಾಗಿ ವ್ಯಕ್ತವಾಗಿದೆ. “ಬೆಳಕು “ನಂತಹ ಕವಿತೆಗಳು ಅವರ ಸಮಾಜಮುಖಿ ಚಿಂತನೆಯಿಂದ ಗಮನ ಸೆಳೆದಿವೆ. ಈ ಸಾಲುಗಳು ನೋಡಿ. ರೈತ ನೀರುಣಿಸುವಾಗ ಲಾಂದ್ರವಾಗುವ ಆಸೆ ಯೋಧ ಹೋರಾಡುವಾಗ ದೀವಟಿಗೆಯಾಗುವ ಆಸೆ ಈ ಸಾಲುಗಳು‌ಕವಿಯ ಕವಿತಾ ಶಕ್ತಿಗೆ  ನಿದರ್ಶನವಾಗಿವೆ.ಪ್ರೇಮ ಬಾವದ ಕವಿತೆಗಳಲ್ಲೂ ಕವಿ ಶಕ್ತಿವತ್ತಾಗಿ ಭಾವ ಸೂಸುವ ಸಾಲು ಬರೆದಿದ್ದಾರೆ ಎದೆಯ ಬ್ಯಾನಿಗೆ ನಿನ್ನ ಸ್ವಾತಿ  ಮಳೆಯ ತಂಪಿನ ಜರೂರತ್ತಿನಲ್ಲಿದ್ದೇನೆ.. ಸಾದ್ಯವಿದ್ದರೆ ಸವುಡು ಮಾಡಿ ಚಂದಿರನ ನಗುವ ತೆಗೆದುಜೊಂಡು ಇತ್ತ ಬಾ ಎನ್ನು ಅಹವಾಲು ವ್ಯಕ್ತಮಾಡುತ್ತಾರೆ” ಕಣ್ಣೀರ ರಕ್ತ” ಎನ್ನುವ ಕವಿತೆಯ ಪ್ರೀತಿಯನ್ನು ನಾ ದೈವವೆಂದು ನಂಬಿದ್ದೆ ದೈವದ ಎದುರು ವಾದಿಸಲಿಕ್ಕಾಗದು ಕೈಯೊಡ್ಡಿ ಕಣ್ಣೀರ ಸುರಿಸಿ ಪ್ರಾರ್ಥಿಸಬಹುದಷ್ಟೇ‌.. ಇಂತಹ ಸಾಲುಗಳ ಅಭಿವ್ಯಕ್ತಿ ಸಂತಸ ಉಕ್ಕಿಸುತ್ತದೆ.”  “ಪ್ರಳಯವಾಗಬೇಕಿದೆ” ,”ನಮ್ಮ ನಿಮ್ಮ ನಡುವೆ” “ಬದಲಾಗಲಿ” ಇತ್ಯಾದಿ‌ ಕವಿತೆಗಳ ಸಾಲುಗಳ ಪ್ರಾಮಾಣಿಕತೆ ಮೆಚ್ಚುವಂತಿದೆ. ಬುದ್ದ, ಬಸವ,ಅಂಬೇಡ್ಕರ್ ಹಿಲಾಲುಗಳನ್ನು ಹಚ್ಚಿಕೊಂಡು ಸಾವಿರಾತು ಹೆಜ್ಜೆ ಮುಂದೆ ಸಾಗುತ್ತೇವೆ.ಧರ್ಮದ ಹೆಸರಿನ ಮೋಸಗಳ ಹುಗಿದು ಎನ್ನುವ ಸಾಲುಗಳ ಸಂಖ್ಯೆ ಹೆಚ್ಚಬೇಕಿರುವದು ಇಂದಿನ   ಅಗತ್ಯವಾಗಿದೆ. ಕವಿಯ ಹಕ್ಕಿಯ ಹಾಡಿಗೆ ನಗುವ ಮಗುವಿಗೆ ಯಾವ ಧರ್ಮದ ಮುದ್ರೆಯಿದೆ ದಯೆಯಿಲ್ಲದ ಧರ್ಮಕ್ಕೆ ಯಾವ ಎದೆ ಅರಳುತ್ತದೆ ನೂರಾರು ನದಿಗಳ ದಾರಿ ಸಾಗಿಸಿದ ಸಂವಿಧಾನ ರಥದ ಕೀಲುಗಳ ಸಡಿಲಿಸುವ ನಂಜಿನ ನಾಗರಗಳ ನಾಲಿಗೆಗಳು ಬದಲಾಗಬೇಕಿದೆ ಇಂತಹ ಸಾಲುಗಳನ್ನು ಓದಿದಾಗ ಹಿಂಬದಿಯ ಪುಟಗಳಲ್ಲಿ ಆಶಾ ಜಗದೀಶ್ ರವರು ಬರೆದಿರುವ ಮಚ್ಚಿಕೆಯ ಸಾಲುಗಳು  ನಿಜಕ್ಕೂ  ಸಾರ್ಥಕ ವಾಗುತ್ತವೆ. ರಾಜು ಅವರ ಕೆಲವು  ಕವಿತೆಗಳು ವಿವರಣಾತ್ಮಕ ವಾಗಿವೆ .ಅಲ್ಲಿ ಒಂದಿಷ್ಟು ಸಂಯಮ ಬೇಕಿತ್ತು. ಸಂಕ್ಷಿಪ್ತತೆ ಕಾವ್ಯದ ಶ್ರೇಷ್ಠ ಗುಣ ಎನ್ನುವದನ್ನು ಈ ಯುವ ಕವಿಗಳು ರೂಢಿಸಿಕೊಂಡರೆ ಅವರ ಕಾವ್ಯಕ್ಕೆ ಇನ್ನೂ  ಹೆಚ್ಚಿನ  ಶಕ್ತಿ ಬರುತ್ತದೆ. ಇದು ಅವರಿಂದ ಸಾಧ್ಯವಿದೆ ಎಂಬ ನಂಬಿಕೆ ನನಗಿದೆ. ಕಾವ್ಯ ಬೋದನಾತ್ಮಕವಾದಾಗ ಮನುಷ್ಯ ದಂತಹ ಕವಿತೆ‌ ಬಂದಿವೆ. “ಮನುಷ್ಯ” ಕವಿತೆ ಓದಿದಾಗ ಇದು ವ್ಯಕ್ತವಾಗುತ್ತದೆ. ನೀ ಹೀಗೇಕಾದೆ? ಪ್ರೀತಿ ,ಕರುಣೆ ದಯೆ,ಎಲ್ಲ ಮರೆತು ಎಲ್ಲವನ್ನು ಹಣದಿಂದ ಅಳೆಯುವ ಬುದ್ದಿಯನ್ನು ಕಲಿತು ಬುದ್ದುವಾದೆ! ನೀ ಮತ್ತೊಮ್ಮೆ “ಮನುಷ್ಯ “ಎಂದಾಗುವೆ? ಇಂತಹ ಕವಿತೆಗಳು ಇನ್ನು ಹೆಚ್ಚು ಸಾವಯವ ಗೊಳ್ಳಬೇಕು. “ಪ್ರಜಾಪ್ರಭುತ್ವ” ದಂತಹ ಕವಿತೆಗಳಿಗೂ ಇದೆ ಮಾತು ಅನ್ವಯವಾಗುತ್ತದೆ.. ರಾಜು ಅವರ ಹಿಂದೆ ಇರುವ ಶ್ರಮ ಸಂಸ್ಕೃತಿ , ಮೂಲ ಸೆಲೆಯಾಗಿರುವ ಹಳ್ಳಿ ಬದುಕು ಅವರನ್ನು ಗಟ್ಟಿ ಗೊಳಿಸಿವೆ.ಮುನ್ನುಡಿ ಬರೆದ ಹಿರಿಯ ಕವಿ ಸತೀಶ ಕುಲಕರ್ಣಿಯವರು ಹೇಳಿರುವ ” ಕವಿ ರಾಜು ಎಸ್ ಸನದಿ ಕಾವ್ಯ ಲೋಕದಲ್ಲಿ ಬಹಳ ದೂರ ಸಾಗಬೇಕಿದೆ.ಸವಾಲುಗಳ ನಡುವೆ ಉತ್ತರಗಳನ್ನು ಹುಡುಕುವ ದಾರಿ ಕಾಣಬೇಕಾಗಿದೆ” ಎನ್ನುವ ಸಾಲುಗಳು ಇಂದಿನ ಎಲ್ಲ‌ ಕವಿಗಳಿಗೂ ಎಚ್ಚರಿಕೆಯಾಗಿದೆ. ಮೊದಲ ಸಂಕಲನದಲ್ಲಿ ತೋರಿರುವ ಉತ್ಸಾಹವನ್ನು‌ಮುಂದಿನ ಸಂಕಲನಗಳಲ್ಕಿಯೂ ನಿರೀಕ್ಷಿಸುತ್ತ ಅವರಿಗೆ ಶುಭ ಹಾರೈಸುತ್ತೇನೆ. ********************************* ಯ.ಮಾ ಯಾಕೊಳ್ಳಿ

ದುಗುಡದ ಕೆಂಡ – ಕೈಲಿ ಹಿಡಿದು Read Post »

ಪುಸ್ತಕ ಸಂಗಾತಿ

ತುಂಡು ರೊಟ್ಟಿ

ಪುಸ್ತಕ ಸಂಗಾತಿ ವರ್ತಮಾನಕ್ಕೆ ಮುಖಾಮುಖಿಯಾಗುವ ಪ್ರತಿಭಟನಾತ್ಮಕ ಕಾವ್ಯ ಜ.೩೧ ಶಿಗ್ಗಾವಿಯಲ್ಲಿದ್ದೆ. ಕನಕ ಶರೀಫ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಹೀಗೆ ಮೂರು ಆಯಾಮಗಳ ಸಮಾರಂಭವನ್ನು ಉತ್ತರ ಸಾಹಿತ್ಯ ವೇದಿಕೆ ಹಾಗೂ ನೇತಾಜಿ ಪ್ರಕಾಶನದವರು, ಗೆಳೆಯ ರಂಜಾನ್ ಕಿಲ್ಲೆದಾರ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಕವನ ವಾಚನದ ನೆಪದಲ್ಲಿ ಶಿಗ್ಗಾಂವ್ ತಲುಪಿದ್ದೆ. ಅಲ್ಲಿದ್ದ ಗೆಳೆಯ ಅಲ್ಲಾಗಿರಿರಾಜ್ ಕನಕಗಿರಿ” ಸರ್ಕಾರ ರೊಕ್ಕ ಮುದ್ರಿಸಬಹುದು,ತುಂಡು ರೊಟ್ಟಿಯನ್ನಲ್ಲ .. ” ಎಂಬ ಅವರ ಕವನ ಸಂಕಲನವನ್ನು ನನ್ನ ಕೈಗಿಟ್ಟರು‌ . ಆ ಸಂಕಲನದ ರಕ್ಷಾ ಪುಟದ ಕೊನೆಗೆ ‘ ನೀವು ಎದೆಗೆ ಗುಂಡು ಹೊಡೆದರೆ’ ಎಂಬ ಕವಿತೆ ಮೊದಲ ಓದಿಗೆ ಥಟ್ಟನೆ ನನ್ನ ಗಮನ ಸೆಳೆಯಿತು. ಕ್ರಾಂತಿಯ ಕಿಡಿಯಂತೆ ಇದ್ದ ಆ ಕವಿತೆಯನ್ನು ಓದಿದ ತಕ್ಷಣ, ನನ್ನ ವ್ಯಾಟ್ಸಪ್ ಸ್ಟೇಟಸ್‌ ನಲ್ಲಿ ಹಂಚಿಕೊಂಡೆ. ೨೦೨೦ರಲ್ಲೇ ಎರಡು ಮುದ್ರಣ ಕಂಡ ಕವಿತಾ ಸಂಕಲನ ಇದಾಗಿತ್ತು. ಮೋಹನ್ ಕುರುಡಗಿ ಕಾವ್ಯ ಪ್ರಶಸ್ತಿ ಪಡೆದುಕೊಂಡ ” ತುಂಡು ರೊಟ್ಟಿ ” ಈಗಾಗಲೇ ಕನ್ನಡ ಕಾವ್ಯಾಸಕ್ತರ ಗಮನ ಸೆಳೆದಿದೆ. ‌ವರ್ತಮಾನಕ್ಕೆ ಮುಖಾಮುಖಿಯಾಗುವ ಪ್ರತಿಭಟನಾತ್ಮಕ ಕಾವ್ಯ ಸಿಟ್ಟು ,ಆಕ್ರೋಶ, ಕವಿತೆಯಾಗುವ ಪರಿ, ಪ್ರಭುತ್ವ ಹೋರಾಟದ ಧ್ವನಿ ಹತ್ತಿಕ್ಕಿದಾಗ ; ಪ್ರತಿಕ್ರಿಯೆಯಾಗಿ ಹುಟ್ಟಿದ ಕಾವ್ಯ ತುಂಡು ರೊಟ್ಟಿ. ಆಕ್ರೋಶದ ಕಾವ್ಯ ಪ್ರೀತಿ ,ಕರುಣೆ‌‌ ಹಂಚಿ, ಪ್ರಭುತ್ವದ‌ ಠೇಂಕಾರ ಸಹ ಕರಗುವಂತೆ ಕವಿತೆ ಬರೆಯುವ, ಅಲ್ಲಾಗಿರಿರಾಜ್ ಸಮಾಜದ ನಡುವೆ ನೋವಿನ ಧ್ವನಿಗಳಿಗೆ ಕಿವಿಯಾದವರು. ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ ಎಂಬ ಉದ್ದದ ಸಾಲನ್ನು ಕವನ ಸಂಕಲನದ‌ ಮುಖಪುಟ ಆವರಿಸಿದೆ. ತುಂಡು ರೊಟ್ಟಿ ಅಥವಾ ರೊಟ್ಟಿ ಎಂದು ಸಂಕಲನದ ಹೆಸರು ಇದ್ದರೂ ಸಾಕಿತ್ತು. ಸಂಕಲನದ‌ ತಲೆ ಬರಹ ಪರಿಣಾಮಕಾರಿಯಾಗಿಯೇ ಇರುತ್ತಿತ್ತು.ರೈತ ,ರೊಟ್ಟಿ, ರೊಕ್ಕ,‌ಪ್ರಭುತ್ವ, ಕುರುಡು ಪ್ರಭುತ್ವ ಮುಖಾಮುಖಿಯಾಗುವ ಪರಿಯೇ ಓದುಗನಲ್ಲಿ ಕಾವ್ಯದ ಎಚ್ಚರ ಮೂಡಿಸುವಂತಹದ್ದು. ತಾಯ ಮೊಲೆಹಾಲು ವಿಷವಾದ ಕಾಲವಿದು. ಕರುಳು ,ಹೃದಯವಿಲ್ಲದ ಅಧಿಕಾರ , ಆಡಳಿತ ಶಾಹಿಯನ್ನು ಎಚ್ಚರಿಸುವ ಜಾಗೃತ ಕಾವ್ಯ ನಮಗೀಗ ಬೇಕು. ಕನ್ನಡ ಪ್ರಜ್ಞೆ ಪರಿಸರ ಅಂಥದ್ದು. ಅಂತಹ ನಾಡಿ ಮಿಡಿತ ಹಿಡಿದು ಬರೆಯುವ ಕವಿ ಅಲ್ಲಾಗಿರಿರಾಜ್ ರೊಟ್ಟಿ ಕವಿತೆಯಲ್ಲಿ ಅದನ್ನು ಸಾಧಿಸಿದ್ದಾರೆ. ” ನೆತ್ತರಿನ ಮಳೆ ಬಿದ್ದ” ಕವಿತೆಯ ಮೇಲೆ ಲಂಕೇಶರ ಕೆಂಪಾದವೋ ಎಲ್ಲಾ ಕೆಂಪಾದವೋ, ಒಣಗಿದ್ದ ಗಿಡಮರ‌ ನೆತ್ತರ ಕುಡಿದ್ಹಾಂಗ ಕೆಂಪಾದವೋ…ಕವಿತೆಯ ದಟ್ಟ ಛಾಯೆಯಿದೆ. ಲಂಕೇಶರ ಕವಿತೆಯನ್ನು ಮುರಿದು ಕಟ್ಟಿದ ಹಾಗೆ ಇದೆ ನೆತ್ತರಿನ ಮಳೆ ಬಿದ್ದ ಕವಿತೆ.“ಚಪ್ಪಲಿ ಕಥೆ ” ಎಂಬ ಹೆಸರಿನ ಕವಿತೆ ವಾಚ್ಯ ಎನಿಸಿದರೂ ಅಂತಿಮ ಸಾಲಿನಲ್ಲಿ ಧ್ವನಿ ಕಾರಣ ಗೆಲ್ಲುತ್ತದೆ.“ಅಪ್ಪ ಎಂದೂ ಮುಗಿಯದ ಕನಸು” ಕವಿತೆ ಅಪ್ತವಾಗಿದೆ. ‘ಅಪ್ಪ ಕವಿತೆಯ ಕೊನೆಯ ಸಾಲಿನಂತೆ’ ಎನ್ನುವ ಸಾಲು ಮನ‌ಮೀಟುತ್ತದೆ. ಅಲ್ಲದೇ” ನನ್ನವ್ವ ತೀರಿ‌ಕೊಂಡಾಗನನ್ನಪ್ಪ ಅಂದೇ ಒಳ ಒಳಗೇಸತ್ತಿದ್ದ “ಎನ್ನುವ ಸಾಲು ಸಹೃದನನ್ನು ಕಾಡದೇ ಇರದು. ಲಾಕ್ ಡೌನ್ ಮತ್ತು ನಾಯಿ ದಿನಚರಿ ಕವಿತೆ ೨೦೨೦ ನೇ ವರ್ಷದ ಕೋವಿಡ್ ಕರಾಳತೆಯನ್ನು ರಾಚುತ್ತದೆ. ಮನುಷ್ಯರಾಗೋಣ ಕವಿತೆ ಕೋಮುಸೌಹಾರ್ದತೆ ಹಾಗೂ ಭಾರತೀಯತೆಯನ್ನು ಕಟ್ಟಿಕೊಡುತ್ತದೆ. ಕವಿಯ ಕಳಕಳಿ , ಉದ್ದೇಶ ಇಂತಹ ಕವಿತೆಗಳ ಮೂಲಕ ದಾಖಲಾಗುತ್ತದೆ.” ಲಾಲ್ ಸಲಾಂ ಚೆಗು” ಎಂಬ ಕವಿತೆಯಲ್ಲಿ ಕವಿ ಚೆಗೆವಾರನನ್ನು ನೆನಪಿಸಿಕೊಂಡಿದ್ದಾರೆ. ಇದೊಂದು ಸಶಕ್ತ ಕವಿತೆ.ಕ್ರಾಂತಿ ಗೀತೆಯಂತಿದೆ.” ನಿನ್ನ ಕಣ್ಣ ಕಿಂಡಿಯಲ್ಲಿ ಜಗದ ಹಸಿದವರ ದನಿಯಿದೆಶೋಷಿತರ ಹೆಗಲಮೇಲೆ ನಿನ್ನ ಲಾಲ್ ಝೆಂಡಾ ಇನ್ನೂ ಘರ್ಜಿಸಿದೆ” ಎನ್ನುತ್ತಾನೆ ಕವಿ.ನನ್ನ ಕವಿತೆಯಲ್ಲಿಎಂಜಲು ಅನ್ನ ಕಾಯುವ ಅನಾಥ ಬೀದಿ ಮಕ್ಕಳ ಎದೆಯ ಹಾಡು ನನ್ನ ಕವಿತೆಅಕ್ಕ ತಂಗುಯರ ಎದೆಯ ಹಾಡುಲೋಕದ‌ ಹಸಿವು ನೀಗಿಸಿದ ಅನ್ನದಾತರ‌ ಎದೆಯ ಹಾಡುನನ್ನ ಕವಿತೆನನ್ನದೇ ಅಲ್ಲಹಸಿದವರ ಹಾಡು ” ಎಂಬಲ್ಲಿ ಕವಿತೆ ಸಾರ್ವಜನಿಕರದ್ದು, ಶ್ರಮಜೀವಿಗಳದ್ದು ಎಂಬ ಸಂದೇಶವನ್ನು ಕವಿ ಸಮಾಜಕ್ಕೆ ನೀಡುತ್ತಾ ಸಾಗುತ್ತಾನೆ. ” ಅಲ್ಲಿ ವರ್ಣ- ಇಲ್ಲಿ ಧರ್ಮ ” ಎಂಬ ಕವಿತೆಯಲ್ಲಿ ವರ್ಣ ಬೇಧ , ಧರ್ಮಬೇಧ ಇರುವಾಗ ಮನುಷ್ಯರು ಮನುಷ್ಯರಾಗುವುದು ಯಾವಾಗ ? ಎಂಬ ಪ್ರಶ್ನೆ ಎತ್ತುತ್ತಾನೆ ಕವಿ.ಧರ್ಮದ ಅಮಲು ಬಣ್ಣದ ಧಿಮಾಕು ಇನ್ನೆಷ್ಟು ದಿನ ? ಇಂತಹ ಪ್ರಶ್ನೆಗಳನ್ನು ಎತ್ತುವ ಮೂಲಕ ಸಕಾಲಿಕ ,ಸಮಾಕಾಲಿನ ಸಮಸ್ಯೆಗೆ ಮುಖಾಮುಖಿಯಾಗಿ ಕಾವ್ಯವನ್ನು ಎಚ್ಚರಿಕೆಯ ಗಂಟೆಯಾಗಿ ಭಾರಿಸಿದ್ದಾರೆ.ಗೋಡೆ ಎತ್ತರವಾಗುತ್ತಿದೆ ನಿನ್ನ ನನ್ನ ನಡುವೆ , ಧರ್ಮದ ವಿಷಗಾಳಿ ಕುಡಿದು ಎನ್ನುವ ಆತಂಕ ಸಹ ಕವಿಗಿದೆ. ಮಂದಿರ‌ ಮಸೀದಿ ಮೇಲಿನ ಬಿಳಿ ಪಾರವಾಳ ರಕ್ತ ಕಾರುವ ಮುನ್ನ ಕಫನ್ ಸುತ್ತಿಕೊಳ್ಳಬೇಕು ಎಂದು ತಮಗೆ ತಾವೇ ಹೇಳಿಕೊಂಡ ಆತ್ಮಾವಾಲೋಕನದ ಕವಿತೆಗಳು ಓದುಗುನಲ್ಲಿ ಅಚ್ಚರಿಯ ಬದಲಾವಣೆ ತರದೇ ಇರಲು ಸಾಧ್ಯವೇ? ಹೀಗೆ ಕವಿ ಆತಂಕವನ್ನು ತೋಡಿಕೊಳ್ಳತ್ತಲೇ ಆಶಾವಾದವನ್ನು ಸಹ ಇಲ್ಲಿನ‌ ಕವಿತೆಗಳು ಸಾರುತ್ತವೆ. ************************************** ನಾಗರಾಜ ಹರಪನಹಳ್ಳಿ

ತುಂಡು ರೊಟ್ಟಿ Read Post »

ಪುಸ್ತಕ ಸಂಗಾತಿ

ಪರಿಮಳದ ಹನಿಗಳು

ಪುಸ್ತಕ ಸಂಗಾತಿ ಪರಿಮಳದ ಹನಿಗಳು “ಸಖ ಸತ್ತ ಹೃದಯ ಮಸಣ ಸೇರಿತು ನಿನ್ನ ಕುಡಿಮೀಸೆಯ ಕುಂಚ ದಿಂದ ತುಟಿಯ ಮಾಸ್ತಿಗಲ್ಲಿಗೆ ಹೆಸರು ಬರೆದುಬಿಡು ಭಗ್ನ ಪ್ರೇಮಿಗಳು ಅಧ್ಯಯನಕ್ಕೆ ಬರುತ್ತಾರೆ”. ಇದು ಎ. ಎಸ್. ಮಕಾನದಾರ ಅವರ “ಪ್ಯಾರಿ ಪದ್ಯ” ಹನಿಗವನ ಸಂಕಲನದ ಒಂದು ಹನಿ. “ ಮನಸ್ಸಿನ ಆಳದಲ್ಲಿ ಮುದಿವಯಸ್ಸಿನವರಿಗಿಂತ ಯುವ ಜನರೇ ಹೆಚ್ಚು ಏಕಾಂಗಿತನವನ್ನು ಅನುಭವಿಸುತ್ತಾರೆ” ಅನ್ನೋ  ಮಾತಿದೆ. ಆ ಏಕಾಂತಕ್ಕೆ ಸಂಗಾತಿಯೇ ಕವಿತೆ.  ಇಲ್ಲಿರುವ ಹನಿಗವನಗಳು ಪ್ರೀತಿ, ಪ್ರೇಮ ವಿರಹ ಹಾಗೂ ಶೋಷಣೆಯ ವಿರುದ್ಧ ತಣ್ಣಗಿನ ಹನಿಯಂತೆ ಕೆಲವು ಬಾರಿ ನುಡಿದರೆ, ಮತ್ತೊಮ್ಮೆ ಭೋರ್ಗರೆವ ನದಿಯಂತೆ ಬೊಬ್ಬಿರುತ್ತವೆ.  ಪ್ರೇಮ ಕವಿ ಪ್ರೀತಿಯ ತಳಮಳವನ್ನು ಅದರ ಜೊತೆಗೆ ಸೃಷ್ಟಿಯ ಸೊಬಗನ್ನು ಅದರ ವಿಶ್ವರೂಪ ಅನನ್ಯತೆಯನ್ನು ಶಬ್ದಗಳ ಹಾರದಲ್ಲಿ ಪೋಣಿಸುವ ಪ್ರಯತ್ನವನ್ನು ತನ್ನ ಅನುಭವಗಳ ಆಧಾರದ ಮೇಲೆ ಮಾಡುತ್ತಲೇ ಕಾವ್ಯ ಕನ್ನಿಕೆಯ ಸೆರಗಲ್ಲಿ ಪುಷ್ಪವೇಷ್ಟಿತ ಪರಿಮಳವನ್ನು ತುಂಬುವ ಪ್ರಯತ್ನ ಮಾಡುತ್ತಾನೆ. ಅಂತಹ ಪ್ರೇಮದ ತಹತಹವನ್ನು ತೋಡಿಕೊಳ್ಳುವ ಇಲ್ಲಿಯ ಸಾಲುಗಳು ವಿಚಿತ್ರವಾಗಿ ಆಕರ್ಷಿಸುತ್ತವೆ. ಇಂತಹ ಸಾಲುಗಳನ್ನು  ಉರ್ದು ಸಾಹಿತ್ಯದಲ್ಲಿ ಹೇರಳವಾಗಿ ಶಾಯರಿ ರೂಪದಲ್ಲಿ ಬಳಸುತ್ತಾರೆ. ಅಂತಹ ಆಕರ್ಷಕ ಉರ್ದು ಪದಗಳನ್ನು ಕನ್ನಡಕ್ಕೆ ಹೊಂದಿಸಿಕೊಂಡು ಇಲ್ಲಿಯ  ಹನಿಗಳಿಗೆ ತೀವ್ರತೆಯನ್ನು ನೀಡಿದ್ದಾರೆ ಎ. ಎಸ್. ಮಕಾನದಾರ. ಪ್ರೇಮ ಮತ್ತು ವಿರಹ ಇಲ್ಲಿಯ ಹನಿಗವನಗಳಲ್ಲಿ ವ್ಯಕ್ತವಾಗಿಯೂ ಅಲ್ಲಿಯೇ ಸಾಮಾಜಿಕ ಅಂತರಗಳಿಗೆ, ವಿಘಟನಾ ವಿಧಾನಗಳಿಗೆ ಸಣ್ಣ ಚಾಟಿಯನ್ನು ಬೀಸುತ್ತವೆ ಕವನಗಳು. “ಕಬರಸ್ಥಾನದಲ್ಲಿ ಜಾಗ ನಿಗದಿಯಾಗಿದೆ ಸ್ಮಾರಕ ಶಿಲೆ ಕೆತ್ತಲಾಗಿದೆ ದಿನಾಂಕ ಬಿಟ್ಟಿದ್ದಾನೆ ಕಲೆಗಾರ ಜನಾಜ್ ಇನ್ನೇನು ಬರಬಹುದು ಅನ್ನ ತಿನ್ನುವ ಕೈಗಳಿಗೆ ಧರ್ಮದ ಅಮಲು ಏರಿದೆ ಪಂಡಿತರ ಭಾಷಣ ಪಾಶಾಣಕ್ಕಿಂತ ಸಿಹಿಯಾಗಿದೆ” ಎನ್ನುವ ಸಾಲುಗಳಲ್ಲಿ ಜ್ಞಾನವಲಯವನ್ನು ತರಾಟೆಗೆ ತೆಗೆದುಕೊಂಡರೆ, ಧರ್ಮದ ಕುರುಡನ್ನು ವಿಡಂಬಿಸುತ್ತಾರೆ. ಪ್ರೇಮದಲ್ಲಿಯೇ  ಧ್ಯಾನಸ್ಥ ಸ್ಥಿತಿಯನ್ನ ಕಂಡ ಕವಿ ಪರಂಪರೆ ನಮ್ಮಲ್ಲಿದೆ.  “ಡೆತ್ ಇನ್ ಲವ್. ಲವ್ ಇನ್ ಡೆತ್” ಪ್ರೀತಿಯಲ್ಲೆ ಸಾವು, ಸಾವಿನಲ್ಲಿಯೂ ಮೂಡುವ ಪ್ರೀತಿ. ಆ ಸ್ಥಿತಿ ಇಲ್ಲಿದೆ. “ಖಬರ್‌ನಲ್ಲಿ ಲೀನವಾಗಿರುವೆ ದೀಪವಾಗಿ ಬಂದರೆ ಪತಂಗವಾಗಿ ಸುತ್ತುವೆ” ಇಂತಹ ಸೊಗಸಾದ ಸಾಲುಗಳು ನೆನಪಿನಲ್ಲಿ ಉಳಿದೇ ಬಿಡುತ್ತವೆ. “ಸಾವಿನ ಕದ ತಟ್ಟಿದ ಫಕೀರನಿಗೆ ಜೀವದ ಹಂಗೂ ಇಲ್ಲಾ ಸಾವಿನ ಹಂಗೂ ಇಲ್ಲಾ ಚಮಲಾದ ಚುಂಗ ಇದೆ ತೋಡಿದ ಗೋರಿ ಜನಾಜಾ ತಬ್ಬಿದರೂ ತಬ್ಬಲಿ ಆಗಲಾರ ಪ್ಯಾರಿ” . ಸಾಹಿತ್ಯದ ವಸ್ತು ಇತಿಹಾಸವೇ ಇರಲಿ, ಸಮಕಾಲೀನ ಸಂಗತಿಯೇ ಆಗಿರಲಿ, ಅದು ಸತ್ಯಕ್ಕೆ ವಿಮುಖವಾಗಿರಬಾರದು. ಭಾವ ಜಗತ್ತಿನ ಉತ್ಪ್ರೇಕ್ಷೆ ಇದ್ದರೂ ವಾಸ್ತವಕ್ಕೆ ನಿಕಟವಾಗಿರಬೇಕು. ಇಲ್ಲಿ ಒಂದೇ ಕವನದಲ್ಲಿ ಬಳಕೆಯಾಗಿರುವ  ಫಕೀರ, ಚಮಲಾ, ಚುಂಗ, ಜನಾಜ್ , ಪ್ಯಾರಿ ಇತ್ಯಾದಿ ಉರ್ದು ಪದಗಳು ಕಟ್ಟಿಕೊಟ್ಟ ಸಂವೇದನೆ ಮಹತ್ವದ್ದು. ಸಾವು, ಬದುಕು, ಹಂಗು, ಗೋರಿ, ತಬ್ಬಲಿ ಕನ್ನಡದಲ್ಲಿ ಮಾತಾಡಿದರೆ,ಉಳಿದವು ಉರ್ದುವಿನಲ್ಲಿ ಮಾತನಾಡಿಯೂ ಸಮಕಾಲೀನವೂ ಆಗಿವೆ ಹಾಗೇ ಇತಿಹಾಸದ ಉದ್ದಕ್ಕೂ ಹಬ್ಬಿದ ಪ್ರೇಮಜಗತ್ತಿನ ವಿಷಾದವೇ ಆಗಿದೆ. ಪ್ರೀತಿಯ ಹಂಬಲಿಕೆಯ ಇನ್ನೊಂದು ಕವನ ಹೇಳುವ ಆಶಯ ಹಳತಾದರೂ ಬಳಸಿದ ಉಪಮೆಗಳು ಮನಃಸೆಳೆಯುತ್ತವೆ. “ಸಾಕಿ ನಿನ್ನ ಪ್ರೀತಿ ಹಿಡಿ ನವಣಿಯಷ್ಟು ಪಡೆದೆ ತೀರಲು ಮಾಡಿಕೊಂಡಿರುವೆ ಸಾಲ ಪಡಿ ಹೊನ್ನಿನಷ್ಟು.” ಈ ಅಲ್ಪ ಸಾಲುಗಳು ಹೇಳುವುದು ಅಲ್ಪವೇನಲ್ಲ ಅವಳ ಪ್ರೀತಿಗಾಗಿ ಹಂಬಲಿಸಿದವನಿಗೆ ಸಿಕ್ಕಿದ್ದು ಹಿಡಿ ನವಣೆಯಷ್ಟು. ಅಲ್ಪ ಪ್ರೀತಿ. ಆದರೆ ನವಣೆ ಅಲ್ಪವಾಗುವುದಾರೂ ಹೇಗೆ? ಹಾಗೇ ಪ್ರೇಮಿ ಅದಕ್ಕಾಗಿ ಹಂಬಲಿಸಿ ಮಾಡಿದ್ದು ಪಡಿ ಹೊನ್ನಿನಷ್ಟು ಸಾಲ. ಸಾಲಗಾರನಾಗಲೂ ಹಿಂದೆ ಮುಂದೆ ನೋಡದಂತಹ ಸ್ಥಿತಿ ಅವನದು.  ಮನಸ್ಸನ್ನು ಉಲ್ಲಸಿತಗೊಳಿಸುವುದು ಕಾವ್ಯ. ರಸಸ್ವಾದನೆಯೇ ಕವಿತೆ ಮೂಲ ಆಶಯ. ಇಲ್ಲಿಯ ಕವಿತೆಗಳು ಪ್ರೇಮ ರಸಾನುಭವದ ಮತ್ತನ್ನು ಓದುಗನಿಗೆ ಕುಡಿಸುವಂತಿವೆ. ಪ್ರೇಮಬದುಕಿನ ಕ್ಷಣಗಳು ಸುಖದ ದುಃಖದ ನೋವಿನ, ನಿರಾಶೆಯ, ಆಕ್ರೋಶದ ಅನುಭವಗಳನ್ನು  ಇಲ್ಲಿ ಬಿಚ್ಚು ನುಡಿಗಳಲ್ಲಿ ತೆರೆದಿಡಲಾಗಿದೆ. “ಧರ್ಮ, ಧರ್ಮಗುರುವಿನ ಉಪದೇಶ ಸಾಕು ರಟ್ಟೆಯ ಬಲ ರೊಟ್ಟಿಯ ರುಚಿ ಕುರಿತು ಉಪದೇಶ ಬೇಕು. ಪ್ರೇಮದ ಒಳದನಿಯನ್ನು ಮುಕ್ತವಾಗಿ ಅಭಿವ್ಯಕ್ತಿಸುವ  ಹನಿಗವನಗಳನ್ನು ಓದುತ್ತಾ ಪ್ರೀತಿಯ ಕಾವು ಮೈಗೂ ಏರಿದಂತಾಗಿ ಓದುಗ ಮೈಮರೆಯಬಹುದು. ಪ್ರೇಮದ ಅಭಿವ್ಯಕ್ತಿಗೆ ಅಂತಹ ಹೃದಯವಿದೆ. ಕತ್ತಲೆಯಾಚೆಗಿನ ಅನೂಹ್ಯ ನಿಗೂಢತೆಗಳನ್ನು ಶೋಧಿಸುವ ಬೆಳಕಿನ ಸೂಡಿಗಾಗಿ ಹುಡುಕುತ್ತಾ, ಆ ತೇಜದ ಹಂಬಲವನ್ನೇ ಕಣ್ಣಲ್ಲಿ ಸೃಷ್ಟಿಸಿಕೊಂಡವ ಒಂದೋ  ಕವಿಯಾಗಿರಲು ಸಾಧ್ಯ. ಇಲ್ಲ ವ್ಯಾಕುಲ ಪ್ರೇಮಿಯಾಗಿರಬಹುದು. ತಂತ್ರದ ಮೂಲಕ ರಚಿಸಿದ ವಿನ್ಯಾಸ ಯಾವಾಗಲೂ ಸುಂದರವಾಗಿಯೇ ಇರುತ್ತದೆ. ಈ ಪ್ರಯತ್ನ ಎಲ್ಲ ಪ್ರಕಾರಗಳಿಗೂ ಅನ್ವಯಿಸುತ್ತದೆ. ಆದರೆ ಮಕಾನದಾರ ಅವರ ಎಲ್ಲ ಹನಿಗವನಗಳು ವಿನ್ಯಾಸಕ್ಕೆ ಪಕ್ಕಾಗಿಲ್ಲ. ಆದರೆ ಆಶಯದಲ್ಲಿ ಹಿಂದೆ ಬಿದ್ದಿಲ್ಲ. ಅರ್ಥದಲ್ಲಿ ಸೋತಿಲ್ಲ. ಹಾಗಾಗಿ ಓದುಗ ಒಮ್ಮೆ ಕೈಗೆತ್ತಿಕೊಂಡರೆ ಸರಸರನೇ ಓದಿ ಮುಗಿಸುವವರೆಗೂ ಸರಾಗವಾಗಿ ಕರೆದೊಯ್ಯುತ್ತವೆ ಹನಿಗಳು.ಕೆಲವನ್ನು ಗಪದ್ಯದ ಗತಿಯಲ್ಲಿ ಕಟ್ಟಿಕೊಟ್ಟರೆ ಇನ್ನು ಕೆಲವು ಎರಡು ಸಾಲುಗಳ ಪದ ಮಿತಿಯಲ್ಲಿ ಅರ್ಥ ಮಹತ್ತನ್ನು ಮೈಗೂಡಿಸಿಕೊಂಡಿವೆ. ಅಲ್ಲಲ್ಲಿ ಅಸ್ಪಷ್ಟ ಪದ್ಯಗಳು ಇದ್ದು ಅವು ಸಂಕಲನದ ಒಟ್ಟಂದಕ್ಕೆ ಭಂಗ ತರುವುದಿಲ್ಲ. ಕವಿ ಇನ್ನಷ್ಟು ಈ ಕವಿತಾ ಬಂಧದೊಳಗೆ ಮುಳುಗಿ ಸಾಕಿಯನ್ನು ಇನ್ನು ಒಳಗೊಳ್ಳುವ ಪ್ರಯತ್ನ ಮಾಡಿದ್ದರೆ ಹನಿಗವನಗಳು ಇನ್ನಷ್ಟು ಉತ್ಕಟವಾಗಿ ಹೊಮ್ಮುತ್ತಿದ್ದವು.  ಕವಿತೆಗಳಿಗೆ ಸುಂದರ ಚಿತ್ರಗಳ ಬರೆದು ಹನಿಗವನಗಳ ಗಹನತೆಯನ್ನು ಹೆಚ್ಚಿಸಿದ ಚಿತ್ರಕಾರನಿಗೂ ಹಾಗೂ ಕವಿಗೂ ಶುಭಾಶಯಗಳು. ******************************************** ನಾಗರೇಖಾ ಗಾಂವಕರ್

ಪರಿಮಳದ ಹನಿಗಳು Read Post »

ಪುಸ್ತಕ ಸಂಗಾತಿ

“ಸರಹದ್ದುಗಳಿಲ್ಲದ ಭೂಮಿಯಕನಸು:

ಪುಸ್ತಕ ಸಂಗಾತಿ ಸರಹದ್ದುಗಳಿಲ್ಲದ ಭೂಮಿಯಕನಸು ಕನ್ನಡ ಕಾವ್ಯ ಲೋಕದ ಹೊಸ ಬೆಳಕು ಕವಯಿತ್ರಿ ನಿರ್ಮಲಾ ಶೆಟ್ಟರ 2020 ರಲ್ಲಿ ಕನ್ನಡ ಸಾಹಿತ್ಯದ ಕಾವ್ಯ ಲೋಕಕ್ಕೆ ಕೊಟ್ಟ ಹೊಸ ನೋಟದ ಕೃತಿ ‘ಸರಹದ್ದುಗಳಿಲ್ಲದ ಭೂಮಿಯ ಕನಸು’. ಹೌದು ಕವಿ ಹಾಗೆ. ಕವಿತೆಗಳಿಗೆ ಸರಹದ್ದುಗಳಿರುವುದಿಲ್ಲ. ಕಾವ್ಯ ಸದಾ ಮನುಷ್ಯ ಮನುಸ್ಸು ಗಳನ್ನು ಬೆಸೆಯುವ ,ಹೊಸ ಹೊಸ ಕನಸು ಕಾಣುವ, ಶೋಷಣೆಯ ಬಂಧಗಳ ಮುರಿದು , ಹೊಸ ಹುಡುಕಾಟ ಮಾಡುತ್ತಿರುತ್ತದೆ. ಅದು ಕಾವ್ಯದ ಕ್ರಿಯೆ. ಕನ್ನಡದ ಪರಂಪರೆಯೇ ಹಾಗೆ. ವಚನಗಳ ಬೇರುಗಳಿಂದ ಚಿಗಿಯುವ ಹೊಸ ಚಿಗುರು ಸರಹದ್ದುಗಳಿಲ್ಲದ ದೇಶ ದೇಶಗಳ ಮನಸುಗಳನ್ನು ಬೆಸೆಯುವುದೇ ಆಗಿರುತ್ತದೆ. ಬದುಕಿನ ಅಸಂಗತತೆ, ಸಂಕೀರ್ಣ ಮನಸ್ಥಿತಿಗಳ , ಆತಂಕ, ತಳಮಳದ ಮನಸುಗಳ ಮಧ್ಯೆ ಹುಟ್ಟುವ ಕಾವ್ಯ , ಕಸುವುಗೊಳ್ಳುವುದೇ ಸಂಕೋಲೆಗಳಿಲ್ಲದ ಭೂಮಿಯಲ್ಲಿ ನಿಂತು ಮನುಷ್ಯತ್ವದ ಕನಸು ಕಂಡಾಗ. ಕವಿ ಸಂತನ ಹಾಗೆ. ನಾಳಿನ ಬೆಳಕಿಗೆ ವರ್ತಮಾನದಲ್ಲಿ ನಿಂತು ಹಂಬಲಿಸುತ್ತಿರುತ್ತಾನೆ. ಕರುಣೆ ಮತ್ತು ದಯೆಯನ್ನು ಉಡಿಯಲ್ಲಿಟ್ಟು ಹಂಚುವ ಮನಸೊಂದು ಕವಯಿತ್ರಿಯ ಒಡಲಲ್ಲಿ ತಣ್ಣಗೆ ಹರಿವ ನದಿಯಂತೆ , ಈ ಸಂಕಲನದ ಕವಿತೆಗಳಲ್ಲಿ ಹರಿದಿದೆ. ಪ್ರಕೃತಿಯ ಸೂಕ್ಷ್ಮ ಗಮನಿಸುವಿಕೆ ಹಾಗೂ ಅದರಿಂದ ಕವಯಿತ್ರಿ ಕಟ್ಟಿಕೊಡುವ ಪ್ರತಿಮೆಗಳು ನಿರ್ಮಲಾ ಶೆಟ್ಟರ್ ಅವರ ಕವಿತೆಗಳಿಗೆ ಶಕ್ತಿ, ಕಸುವು ನೀಡಿವೆ.ಭೂಮಿಯ ಚಲನೆ, ಹುಲ್ಲುಗರಿಕೆ, ಕತ್ತಲು, ಬೆಳಕು, ದೀಪಗಳನ್ನು ಅವರು ವಿವಿಧ ಕವಿತೆಗಳಲ್ಲಿ ಪಡಮೂಡಿಸುವ,ಗ್ರಹಿಸುವ ಮತ್ತು ಅವುಗಳಿಂದ ಹೊರಡಿಸುವ ಧ್ವನಿ ಸೊಗಸಾಗಿದೆ. ಅರ್ಥಗರ್ಭಿತ ವಾಗಿದೆ. ಚಲಿಸುವಗಾಳಿಗೂ ಉಸಿರು ಕಟ್ಟುವುದನ್ನು ಗ್ರಹಿಸುವ ಶಕ್ತಿ ಅದ್ಭುತವಾದುದು. ” ಬಯಲ ಸಂತಾನವಾದ ಬಣ್ಣಬಯಲಾಗಿ ನಿಲ್ಲುವುದುಸುಗಂಧ ಹರಡಿಕೊಂಡಷ್ಟೇ ಸರಳವಲ್ಲಗಾಳಿಗೂ ಉಸಿರು ಸಿಕ್ಕಿಕೊಂಡಂತೆ(ಸರಹದ್ದುಗಳಿಲ್ಲದ ಭೂಮಿಯ ಕನಸು) ಹೀಗೆ ಚೆಂದ ಪ್ರತಿಮೆಗಳ ಮೂಲಕ ಬಣ್ಣ ಹಚ್ಚಿಕೊಂಡು ಬಣ್ಣವೇ ಆಗುವ, ದಾರಿ ಬಲು ದೀರ್ಘ ಎನ್ನುತ್ತಾ , ಆ ದಾರಿಗೆ ಸರಹದ್ದುಗಳಿಲ್ಲ. ಸರಹದ್ದುಗಳಿಲ್ಲದ ದಾರಿ ಭೂಮಿಯ ಮೇಲೆ ಹಾಸಿಕೊಂಡಿದೆ. ಭೂಮಿ ಸಹ ತನ್ನ ಪಾಡಿಗೆ ತಾನು ಸುತ್ತುತ್ತಿದೆ. ಮನುಷ್ಯ ಮಾತ್ರರಾದ ನಾವು ಮಾತ್ರ ಚಲಿಸಿದೇ ಸ್ಥಗಿತ ವ್ಯವಸ್ಥೆಯ ಭಾಗವಾಗಿದ್ದೇವೆ ಎಂಬ ಧ್ವನಿ ಇಲ್ಲಿ ಕಾಣ ಸಿಗುತ್ತದೆ. ಜಗಕೆ ಬೆಳಕು ಹರಿಯುವುದಿಲ್ಲ ಎಂಬ ಕವಿತೆಯಲ್ಲಿ ಸಹ” ಏನೊಂದು ಸಿಕ್ಕದೆ ಹೋದರೂ ದಕ್ಕಿಸಿಕೊಂಡದ್ದುಬೆಳಗು ಕತ್ತಲೆಯ ಮೀರಿದ್ದೆಂದು ಹೇಗೆ ಹೇಳಲಿ”ಈ ಒಳನೋಟ, ಬದುಕಿನ ಧ್ಯಾನ ಕವಿಗೆ ಮಾತ್ರ ಕಾಣುವ ಹೊಳಹು .” ಮಾತಿಲ್ಲದಮೌನವೂ ಅಲ್ಲದನಸುಕಿನಲಿ ಅರಳಿದ ಹೂ” ಹೀಗೆ ಕವಿತೆಗಳು ಓದುಗನನ್ನು ಹೊಸ ಅರ್ಥವ್ಯಾಪ್ತಿಗೆ ಕರೆದೊಯ್ಯುತ್ತವೆ. “ಕಲ್ಲಿನೆದೆ ಸೀಳಿತಲೆಯೆತ್ತಿ ಗಾಳಿಗೆ ಬಳುಕುವ ಗರಿಕೆ” ಎಂಬ ಸಾಲು ‘ನಮಿಸುವುದಾದರೆ ತಡವೇಕೆ’ ಎಂಬ ಕವನದಲ್ಲಿದೆ. ಇದೇ ಕವಿತೆಯ ಕೊನೆಯ ಸಾಲು ಹೀಗಿದೆ…” ಒಮ್ಮೆ ನಮಿಸಿ ಬಿಡಿಬೆಳಗುವ ದೀಪದಧ್ಯಾನದಲಿರುವ ಕತ್ತಲಿಗೆ”ಕವಯಿತ್ರಿಗೆ ಗರಿಕೆ ಹಾಗೂ ಕತ್ತಲು ಸಹ ಮುಖ್ಯವಾಗುವುದು ಹೀಗೆ.. ಗರಿಕೆ ಹುಲ್ಲು ಮತ್ತೆ ” ನಿಮ್ಮ ತಕ್ಕಡಿಯಲಿ ” ಎಂಬ ಕವಿತೆಯಲ್ಲಿ ಪುರುಷಾಹಂಕಾರವನ್ನು ಮೆಟ್ಟಿ ನಿಲ್ಲುತ್ತದೆ.ನಿಮ್ಮೊಳಗಿನ ಅಹಂ ಬಿಟ್ಟು ನೋಡಿ…….. “ಒಲವೆಂಬುದು ಹೀಗೂ ನಳನಳಿಸುವುದುಲೆಕ್ಕವಿಲ್ಲದ ತುಳಿತಕೆ ಎದೆಯೊಡ್ಡಿಯೂ ,ತಲೆ ಎತ್ತಿ ನಿಂತ ಹುಲ್ಲಿನಂತೆ…” “ಬೆಂಕಿ ಇರುವಲ್ಲಿ ಕುದಿತವಿದ್ದದ್ದೆಒಲೆಯಾದರೂ ; ಎದೆಯಾದರೂ…..” ಬದುಕಿನ ನಿಷ್ಠುರತೆಯನ್ನು ಎಷ್ಟು ಚೆಂದದ ರೂಪಕದಲ್ಲಿ ಹೇಳುತ್ತಾಳೆ ಕವಯಿತ್ರಿ. ಇದರ ಹಿಂದಿನ ನೋವು ಮಾತ್ರ ಊಹೆಗೆ ನಿಲುಕದ್ದು. “ಹೇಳಬೇಕಿಲ್ಲ” ಎಂಬ ಕವಿತೆಯಲ್ಲಿ ಹಕ್ಕಿಯ ಕೂಗು,ಆ ನಗು …ಅಳಿದು ಹೋಗಬೇಕೆಂದಿದ್ದ ನಿನ್ನ ಹೀಗೆ ಉಳಿಸಿಬಿಟ್ಟವು ಎಂಬುದು ಬದುಕಿನ ಭಾವನಾತ್ಮಕತೆಯ ಮಹತ್ವ ಸಾರುತ್ತವೆ. ‘ನಾವು ಹೀಗೆಯೆ’ ಕವಿತೆ ಬಂಡಾಯವನ್ನು ಸಾರುತ್ತಲೇ, ಪುರುಷ ಚಂಚಲತೆಯ ದಟ್ಟವಾಗಿ ಹಿಡಿದಿಡುತ್ತಲೇ, ಕೊನೆಯಲ್ಲಿ ….ಇನ್ನಾದರೂ ಮುಖಕ್ಕೆ ಮುಖ ಕೊಟ್ಟು ; ಕಣ್ಣಲಿ ಕಣ್ಣು ನೆಟ್ಟು ಮಾತಾಡುತ್ತಲಿರಿ ; ಹಗಲ ಬೆಳಕಿನಲಿ …….. ಎಂಬಲ್ಲಿ ಪ್ರಾಮಾಣಿಕತೆಯನ್ನು ಹೆಣ್ಣು ಬಯಸುತ್ತಾಳೆ ಎಂಬ ದನಿಯಿದೆ. “ದೇಹವನ್ನು ಸುಮ್ಮನಿರಿಸಿ” ಕವಿತೆ ಹೆಣ್ಣಿನ ಬದುಕಿನ ಆರ್ತನಾದವಿದೆ. ದಿನ ನಿತ್ಯದ ಜಂಜಾಟದಲ್ಲಿ ಬದುಕು ಸೆವೆಯುವ ಹಾದಿಯಿದೆ. ಸಪ್ಪಳ ಮಾಡದಿರು ಗಾಳಿಯೆ ಬೆಳದಿಂಗಳಲಿನಲ್ಲನ ಪಿಸುಮಾತು ಕೇಳದಾದೀತುಕಾದ ಅದೆಷ್ಟೋ ಮೌನಹದಗೆಟ್ಟ ಮಾತು ಮರೆತು ಮೂಕವಾದೀತು(ಗಾಳಿಗೊಂದು ವಿನಂತಿ) ಎಂಬಲ್ಲಿ ಮನಸು ಎಷ್ಟು ಸೂಕ್ಷ್ಮಗ್ರಾಹಿ. ಗಾಳಿಗೆ ವಿನಂತಿ ಮಾಡುವ ವಿನಯ ಕವಿಗೆ ಮಾತ್ರ ದಕ್ಕುವಂತಹದ್ದು. ಧರೆಯೊಡಲ ಧ್ಯಾನದಲ್ಲಿ ಇಳೆಗೆ ಮಳೆ ಕರೆಯುವ ಧ್ಯಾನವಿದೆ. ಬೆತ್ತಲಿನ ಇಳೆಯ ಕಣ್ಣ ಪಾಪೆಯ ಕನಸ ತಣಿಸುವ ಹಂಬಲ ಎದ್ದು ಕಾಣುತ್ತದೆ. ಮೈ ಬಿರಿದ ಅವನಿಯಲಿ ಕಳೆ ಕಳೆದು ಕೂಡುವ ,ಕೂಡುವಿಕೆ ಮೀರಿದ; ತೀರಿದರೂ ತೀರದ ಹಂಬಲವಿದೆ. ಸಾಂಗತ್ಯದ ಬಾಯಾರಿಕೆ ಇದು ಎನ್ನುವ ಕವಯಿತ್ರಿ, ನಾನೊಂದು ದೀಪ, ನಾನೊಂದು ಮರ, ಹೂ, ನದಿ, ಮೊಡ ಎಂದು ಸಾರುತ್ತಾಳೆ. ತಡೆಯಲಾರಿರಿ , ತೊರೆದು ನಡೆದಿರುವೆ ದೇಶ ಭಾಷೆಯ ಹಂಗನು ; ಅಳಿಯಬೇಕಿಲ್ಲಿ ಉಳಿಯಬೇಕೆಂದರೆ ಎನ್ನುತ್ತಾ ,ಬದುಕಿನ ತತ್ವ ಸಾರುತ್ತಾಳೆ. ಹೀಗೆ ಸರಹದ್ದುಗಳಿಲ್ಲದ ಭೂಮಿಯಲ್ಲಿ ಬುದ್ಧ, ಬಸವ ,ಗಾಂಧಿ ಸಹ ಬಂದು ನಿಂತು ಮಾತಾಡುತ್ತಾರೆ, ಕವಯಿತ್ರಿಯು ಮಗನೊಡನೆ ಮುಖಾಮುಖಿಯಾಗುತ್ತಾರೆ.ಹೀಗೆ ತನ್ನ ಸುತ್ತಣ ಜಗತ್ತಿನ ಜೊತೆ ಕವಯಿತ್ರಿ ನಿರ್ಮಲಾ ಮುಖಾಮುಖಿಯಾಗಿ, ಅಂತರ್ಮುಖಿಯಾಗಿ, ಪ್ರಶ್ನಿಸಿಕೊಳ್ಳುತ್ತಾ, ಪ್ರಶ್ನಿಸುತ್ತಾ ಹೊಸ ನೋಟ ಸಮಾಜದ ಮುಂದಿಡುತ್ತಾರೆ. ಹೊಸ ಬದುಕಿನಲ್ಲಿ ಬೇಲಿಗಳಿಲ್ಲ ; ‘ಅಹಂ’ ಅಳಿದು ಮನುಷ್ಯರಾಗುವ ಹೊಸ ಅನುಸಂಧಾನವನ್ನು ಕಾವ್ಯ ಜಗತ್ತಿನ ಮುಂದಿಟ್ಟಿದ್ದಾರೆ. ಧ್ಯಾನದಿಂದ, ಧ್ಯಾನಿಸಿದ ಮೇಲೆಯೂ ಉಳಿಯುವ ಹೊಸತನದ ಹಂಬಲ,ಮನುಷ್ಯತ್ವದ ಹುಡುಕಾಟ ಇಲ್ಲಿ ಅನನ್ಯವಾಗಿ , ಅಂರ್ತಧ್ವನಿಯಾಗಿ, ಗಂಗೆಯಾಗಿ ಹರಿದಿದೆ. ಧ್ಯಾನಿಸದೆ ಕವಿತೆ ದಕ್ಕದು, ಪ್ರೀತಿಯ ಬದುಕೂ ದಕ್ಕದು ಎಂಬ ಒಳದನಿ ಇಲ್ಲಿದೆ. ********************************** ನಾಗರಾಜ ಹರಪನಹಳ್ಳಿ

“ಸರಹದ್ದುಗಳಿಲ್ಲದ ಭೂಮಿಯಕನಸು: Read Post »

ಪುಸ್ತಕ ಸಂಗಾತಿ

ಪುಸ್ತಕ ಬಿಡುಗಡೆ

ಪುಸ್ತಕ ಸಂಗಾತಿ ‘ಗೌರಿಯೊಂದಿಗೆ ಏಕಾಂತ_ಲೋಕಾಂತ‘ ಸ್ನೇಹಿತರೆ…ಗೌರಿಯೊಂದಿಗೆ ಏಕಾಂತ_ಲೋಕಾಂತ ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆ ಇಲ್ಲಿದೆ. ಆಸಕ್ತರೆಲ್ಲರೂ ಸಮಯ ಸರಿದೂಗಿಸಿಕೊಂಡು ನಮಗೆ ಜೊತೆಯಾಗಿ…!! ಭೇಟಿಯಾಗಿ ಬಾಂಧವ್ಯ ಬೆಸೆದುಕೊಳ್ಳುವ. ಪ್ರೀತಿಯಿಂದ- ಚಾರು ಪ್ರಕಾಶನ ಒಟ್ಟು ಪುಟಗಳು 200ಬೆಲೆ ರೂ 150/- ಪ್ರತಿಗಳಿಗಾಗಿ ಸಂಪರ್ಕಿಸಿ94483806379380788349080-266603037.Charu PrakashanaCurrent Account number64054262366IFSC Code SBI no 040014State Bank Of India.Basavanagudi BranchBengaluru 560004 Parvateesh Bilidaale Charu Prakashana No 83, 3rd Floor Pride plaza building 5th Main Near Adarsha College T R Mill Road Chamaraja pete Bangaluru_560018 Phone 080 _26603637Mobile 9448380637. *********************************************************************** ರಾಜೇಶ್ವರಿ ಭೋಗಯ್ಯ

ಪುಸ್ತಕ ಬಿಡುಗಡೆ Read Post »

ಪುಸ್ತಕ ಸಂಗಾತಿ

ಕಲ್ಲಳ್ಳಿ ಗಜಲ್

ಪುಸ್ತಕ ಸಂಗಾತಿ ಕಲ್ಲಳ್ಳಿ ಗಜಲ್ ಸಂಕಲನದ ಹೆಸರು : ಕಲ್ಲಳ್ಳಿ ಗಜಲ್ ಲೇಖಕರು : ದೊಡ್ಡ ಕಲ್ಲಳ್ಳಿ ನಾರಾಯಣಪ್ಪ ಬೆಲೆ : ೧೨೦/- ದೊಡ್ಡ ಕಲ್ಲಳ್ಳಿ ನಾರಾಯಣಪ್ಪನವರು ವೃತ್ತಿಯಲ್ಲಿ ಪದವೀಧರ ಶಿಕ್ಷಕರಾಗಿದ್ದು, ಪ್ರವೃತ್ತಿಯಾಗಿ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಪ್ರತಿಭೆ. ಇವರು ಈಗಾಗಲೇ ಉತ್ತತೀಯ ಹಾಡು, ಎದೆಯೊಳಗಿನ ಇಬ್ಬನಿ, ಬೆಂಗಾಡು ಎಂಬ ಮೂರು ಸಂಕಲನಗಳನ್ನು ಹೊರ ತಂದಿದ್ದು ಈ ಕಲ್ಲಳ್ಳಿ ಗಜಲ್ ನಾಲ್ಕನೇ ಸಂಕಲನವಾಗಿದೆ.  ಇವರ ಪ್ರತಿಭೆಯನ್ನು ಗುರುತಿಸಿ ಇವರಿಗೆ ಗೋವಿಂದ ದಾಸ್ ಪ್ರಶಸ್ತಿ, ಬೆಳಕು ಸಾಹಿತ್ಯ ಪ್ರಶಸ್ತಿ, ಕುವೆಂಪು ಅನಿಕೇತನ ಪ್ರಶಸ್ತಿ ಇವರ ಮುಡಿಗೇರಿದೆ. ಸೌಮ್ಯ ಸ್ವಭಾವದ, ಮಗು ಮನದ ದೊನಾ ರವರು ಎಂತಹವರನ್ನು ತನ್ನತ್ತ ಸೆಳೆಯುವ ಸ್ವಾಭಾವದವರಾಗಿದ್ದಾರೆ.  ನಾನು ಗಜಲ್ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಇವರೇ ಪ್ರೇರಣೆ ಎಂದರೆ ತಪ್ಪಾಗಲಾರದು.               ಕಲ್ಲಳ್ಳಿ ಗಜಲ್ ಈ ಸಂಕಲನದ ಹೆಸರು, ಮುಖಪುಟದ ವಿನ್ಯಾಸ ಒಂದು ರೀತಿಯಲ್ಲಿ ವಿಭಿನ್ನವಾಗಿ ಮೂಡಿದ್ದು ಚಿತ್ತಾಕರ್ಷಕ ರೇಖಾ ಚಿತ್ರಗಳು ಅದರೊಳಗೆ ಹುದುಗಿಸಿಕೊಂಡಿರುವ ಜೀವದ ಉಸಿರು,  ನೆಲೆ ಎಲ್ಲರ ಗಮ್ಯವನ್ನು ಬೇರೆ ಲೋಕದತ್ತ ಸೆಳೆಯುತ್ತದೆ. ನಮ್ಮ ಮಾಲೂರಿನ ಸಾಹಿತ್ಯ ಪರಿಚಾರಕರಾಗಿದ್ದ  ನಮ್ಮೆಲ್ಲರ ಹಿರಿಯಣ್ಣನಂತಿದ್ದ ಉದಯೋನ್ಮುಖ ಕವಿಗಳಿಗೆ ನೆಲೆ ನಿಲ್ಲಲು ವೇದಿಕೆ ಕಲ್ಪಿಸಿ ಬೆನ್ನು ತಟ್ಟುತಿದ್ದ  ” ಕುಂಚ ”  ಅಂದರೆ ಕುಂತೂರು ಚಂದ್ರಪ್ಪನವರು ( ಇವರು ಈಗ ಇಲಿಲ್ಲ..!!  ಪ್ರಪಂಚವನ್ನೇ ತಲ್ಲಣಗೊಳಿಸಿ ತನ್ನ ಭಾಹು ತೆಕ್ಕೆಗೆ ತೆಗೆದುಕೊಂಡು ಅಪೋಷಣ ಗೈದ  ಮಹಾ ಮಾರಿ ಕರೋನಾ ಈ ಪುಣ್ಯಾತ್ಮನನ್ನು ತನ್ನ ಉದರದ ಹಸಿವಿಗೆ ಅಪೋಷಣ ಮಾಡಿದ್ದು ದುರ್ದೈವ.  ನಮ್ಮನೆಲ್ಲ ಅಗಲಿ ಅನಾಥರನ್ನಾಗಿಸಿದ್ದು  ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಇನ್ನೂ ಯಾರು ಆ ಸ್ಥಾನ ತುಂಬಲಾರರು.) ಇಂತಹ ವ್ಯಕ್ತಿಗೆ ಈ ಸಂಕಲನ ಅರ್ಪಿಸಿ ತಮ್ಮ ಘನತೆಯನ್ನು ದೊನಾ ಹೆಚ್ಚಿಸಿಕೊಂಡಿದ್ದಾರೆ. ಕೃತಘ್ನರೇ ತುಂಬಿರುವ ಕಲಿಯುಗದಲ್ಲಿ ಕೃತಜ್ಞತೆಯ ಈ ಕರುಣಾಳುವಿನ ಈ ಕಾರ್ಯ ಖುಷಿಕೊಟ್ಟಿತು. ಲೇಖಕರ ಪರಿಚಯ ತುಸು ಹೆಚ್ಚೆನಿಸಿದರೂ ನಾನು ಪರಿಚಯಿಸುವುದು ಸಮಂಜಸವೂ , ಔಚಿತ್ಯ ವೂ ಎಂದು ಭಾವಿಸಿರುವೆ. ಇನ್ನೂ ಸಂಕಲನದ ಸುತ್ತ ಸಮಚಿತ್ತ…             ಅರಬ್ಬೀ, ಪರ್ಷಿಯ ಉರ್ದು ಕಾವ್ಯ  ಪ್ರಕಾರದ ಜನಪ್ರಿಯ ಸಾಹಿತ್ಯ ರೂಪ  ಗಜಲ್. ಗಜಲ್ ತನ್ನ ಪ್ರೇಯಸಿಯೊಡನೆ ಸಂವಾದಿಸುವ , ಲಲ್ಲೆಯೊಡಿಯುವ ಕಾವ್ಯವೆಂದೇ ಹೆಸರುವಾಸಿ . ಹಾಡುಗಬ್ಬವೂ ಹೌದು. ನಾರಾಯಣಪ್ಪನವರ ನುಡಿಯಲ್ಲೇ ಹೇಳುವುದಾದರೆ  ಗಜಲ್, ಎಲ್ಲಾ ರೀತಿಯ ಪ್ರಮಾಣಗಳನ್ನು ಧಿಕ್ಕರಿಸಿ ಗಡಿ ಮಡಿಗಳನ್ನು ಮೀರಿ ಬಹುತ್ವವನ್ನು ಸಾರುವ ಮತ್ತು ಜೀವನ ಪ್ರೀತಿಯನ್ನು ಹೆಚ್ಚಿಸುವ ಒಂದು ಚಿಕಿತ್ಸಕ ಕಾವ್ಯ ಪ್ರಕಾರವಾಗಿದೆ. ನಮ್ಮ ಅಂತರಂಗದಲ್ಲಿ ಒಲವಿನ ಕಿರುದೀಪ ಹಚ್ಚಿಡುವ ಮೂಲಕ ಸಮಚಿತ್ತ ಸಾಧಿಸಲು ನೆರವಾಗುತ್ತದೆ. ತಲ್ಲಣಿಸುವ ಜೀವಕ್ಕೆ  ಸಾಂತ್ವನ ನೀಡುವ ಬೇಲಿಯ ಹೂ !  ಹತ್ತಾರು ಕವಲು ದಾರಿಗಳ ಮುಂದೆ ಗೊಂದಲದ ಗೂಡಾಗಿ ನಿಂತ ಸಾಮಾನ್ಯ ಪಯಣಿಗನ ಪಾಡು.  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡುವುದಾದರೆ ನಾನಾ ವೈರುದ್ಯಗಳ ನಡುವೆಯೂ ಅನ್ನದ ಹಾಡು ಹಾಡುತ್ತಿರುವ ನೇಗಿಲ ಯೋಗಿಯ ಬೆವರು. ಇವೆಲ್ಲವೂ ಗಜಲ್ ನ ಬೇರುಗಳಾಗಬೇಕು.‌  ಇತ್ತೀಚೆಗೆ ಗಜಲ್ ಕಾವ್ಯ ಪ್ರಕಾರ ಕನ್ನಡ ಸಾಹಿತ್ಯಕ್ಕೂ ಲಗ್ಗೆಯಿಟ್ಟು ತನ್ನ ಅರ್ಥ ವಿಸ್ತಾರ , ಬಹುಮುಖ ಆಯಾಮಗಳು ಕಾವ್ಯಸಕ್ತರನ್ನು  ತನ್ನತ್ತ ಸೆಳೆದು ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತೆ ಜನಪ್ರಿಯತೆ ಪಡೆಯುತ್ತಿರುವ ಕಾವ್ಯ. ಕೇವಲ ಉತ್ತರ ಕರ್ನಾಟಕದ ಕಪ್ಪುನೆಲದ ಕವಿಗಳೇ ಹೆಚ್ಚಾಗಿ ದುಡಿಸಿಕೊಳ್ಳುತ್ತಿದ್ದ ಈ ಗಜಲ್ ಇತ್ತೀಚೆಗೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ  ಅಲ್ಲೊಬ್ಬ ಇಲ್ಲೊಬ್ಬ ಗಜಲ್ ಕಾರರನ್ನು ಹುಟ್ಟು ಹಾಕಿ ನದಿ – ನಾಲೆಗಳಲ್ಲಿ ಹರಿಯುವಂತೆ ಕನ್ನಡದ ಗಜಲ್ ಕಂಪು ನಾಡಿನುದ್ದಗಲಕ್ಕೂ ಪಸರಿಸುತ್ತಿರುವುದು ಸಂತೋಷದ ಸಂಗತಿ. ನಾಡಿನ ಹೆಸರಾಂತ ಗಜಲ್ ಕವಿಗಳಾದ ಅಲ್ಲಾ ಗಿರಿರಾಜ್ ( ಈ ಸಂಕಲನದ ಮುನ್ನುಡಿಕಾರರು) ಗಿರೀಶ್ ಜಕಾಪುರೆ,  ಪ್ರಭಾವತಿ ದೇಸಾಯಿ, ಅರುಣಾ ನರೇಂದ್ರ, ಶ್ರೀದೇವಿ ಕೆರೆಮನೆ, ಪ್ರೇಮ ಹೂಗಾರ್, ಹಾಗೂ ಪ್ರಭುದ್ದ ರಾದ ಸುಜಾತ ಲಕ್ಮನೆ  ಶಮಾ ಜಮಾದಾರ್ , ಚಂಪೂ, ನೂರ್ ಅಹ್ಮದ್  ನಾಗನೂರ್ ಮುಂತಾದ ಹಲವಾರು ಕವಿಗಳ ಸಾಲಿನಲ್ಲಿ ನಮ್ಮ ಈ ಕೋಲಾರದ  ಚಿನ್ನ ದೊನಾ ಹೊಳಪು ಕಾಣುತ್ತಿರುವುದು ಹೆಮ್ಮೆಯ ವಿಷಯ.         ಹುಟ್ಟು ಬಡತನ, ಶೋಷಣೆಯ ಬೇಗುದಿಯಲ್ಲಿ ಬೆಂದ ನಾರಾಯಣಪ್ಪನವರು  ಸಮಾಜದಲ್ಲಿನ ಅಸಮಾನತೆ, ಅಂಧಾನುಕರಣೆ , ಜಾತೀಯತೆ, ಧರ್ಮ ರಾಜಕಾರಣ , ಬಡತನ, ಮುಂತಾದ ವಿಷಯಗಳ ಕಡೆ ತಮ್ಮ ಮೃದು, ಮಧುರ ಬಂಡಾಯದ ಬರಹಗಳಿಂದಲೇ  ತಿದ್ದುವ ಬದಲಾವಣೆ ಬಯಸುವ  ಮನಸ್ಸುಳ್ಳವರಾಗಿದ್ದಾರೆ. ಅಷ್ಟೇ ಅಲ್ಲದೆ ಪ್ರೀತಿ ಪ್ರೇಮದ ಸೆಳೆತದ ಅತ್ತರಿನ ನೆಶೆಯಂತೆ ಮಧು ಬಟ್ಟಲೊಳಗೆ ಪ್ರೇಮಾಂಕುರದ ಜೀವ ದ್ರವ್ಯ ತುಂಬಿ ಈ ಸಂಕಲನದ ಮೂಲಕ ಉಣ ಬಡಿಸಲು  ಶಕ್ತರಾಗಿದ್ದಾರೆ.  ಈ ಸಂಕಲನವು ೪೦ ಗಜಲ್ ಗಳನ್ನು ಹೊಂದಿದೆ. *ನನ್ನ ಎದೆಗೆ ಬಿದ್ದ ನಾಣಿಯ ಗಜಲ್ ನ ಕೆಲವು ಸಾಲುಗಳು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ನನ್ನ ಕೇರಿ ಗಾಯಗೊಂಡವರ ಶಾಶ್ವತ ದವಾಖಾನೆ ಒಂದೇ ಒಂದು ಗಾಯಕ್ಕಾದರೂ ನಾನು ಔಷಧಿಯಾಗಬೇಕು. ಗ..೨ ಇಲ್ಲಿ ನೋಡಿ ಬಂಡಾಯದ ಬಂಡ ! ಈ ಒಂದು ದ್ವಿಪದಿ ಇವರ ಹುಟ್ಟು ಶೋಷಣೆಯ ಅನಾವರಣ ಮಾಡಿಸುತ್ತದೆ.  ಇವರದಷ್ಟೇ ಅಲ್ಲ ; ಸಮಾಜದ ಕೆಳಸ್ತರದ ಪ್ರತಿಯೊಬ್ಬರ ನೋವು ಇಲ್ಲಿದೆ.  ಜಾತಿ , ಸಮುದಾಯದ ಹೆಸರಲ್ಲಿ ಸಾಮಾನ್ಯರ ಮುಂದೆ ಅಧಿಕಾರಕ್ಕಾಗಿ ಮಂಡಿಯುರುವ ಮಂದಿ ಮುಂದೆ ಸಾಮ್ರಾಜ್ಯ ಆಳುವರು . ಆದರೆ ಕತ್ತಲಾಗಿದ್ದ  ಕೇರಿಯ ಗೂಡಿನ  ಜನರ ನೋವು ಇಂಗುವುದೇ ಇಲ್ಲ.. !! ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದಾರೆ. ಹೃದಯಗಳಿಲ್ಲದ ಕಣಿವೆಯಲ್ಲಿ ಒಂದೇ ಸಮನೆ ಕಿರುಚುತಿದ್ದಾಳೆ ಬಾಯಿಗೆ ತುರುಕಿದ ಬಟ್ಟೆಯ ಮೇಲೆ ಕಸೂತಿಯ ಹಾಕುತ್ತಿದ್ದಾಳೆ .  ಗ…೫ ಬಯಲ  ಎದೆಯ ತುಂಬಾ  ಬೆಳದಿಂಗಳೆಂಬ ಹಾಲು ಒಸರುವ ಹೊತ್ತಿನಲ್ಲಿ ಯಾರೋ ಇಲ್ಲಿ ಸತ್ತ ಹಸುಳೆಯನ್ನು ಬಟ್ಟೆಯಲ್ಲಿ ಸುತ್ತಿ ಎಸೆದು ಹೋಗಿದ್ದಾರೆ.. ಗ..೧೬. ಎಷ್ಟು ದುರಂತ ಅಲ್ವಾ ?  ಅವಿದ್ಯಾವಂತರಿಗಿಂತಲೂ ವಿದ್ಯಾವಂತ ನಮ್ಮ ಸಮಾಜ.. ಮನುಷ್ಯತ್ವದ ಬಗ್ಗೆ ಮಾತಾನಾಡುವ ನಾವು ಸಮಾಜದಲ್ಲಿ ನೆಲೆಯೂರಿ ನೆಡೆಯುತ್ತಿರುವ ಸ್ತ್ರೀ ಶೋಷಣೆ  (ಹೆಣ್ಣು ಶಿಶು ಹತ್ಯೆ , ಅತ್ಯಾಚಾರ,  ದೌರ್ಜನ್ಯ ) ದ ವಿರುದ್ಧ ಮೌನವಹಿಸಿರುವುದರ  ವ್ಯಂಗ್ಯ ವಾಡಿದ್ದಾರೆ. ನೆಲ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಕವಿಗಳನ್ನು ನೇಮಿಸಿದೆಯಂತೆ ಕಲ್ಲಳ್ಳಿ ವಿಪರ್ಯಾಸ ಅಲ್ವಾ ಈಗೀಗ ಕವಿತ್ವವು ಕೀರ್ತೀಗಾಗಿ ಮಾರಲ್ಪಡುತ್ತಿದೆ. ಗ…೨೧ ನೋಯುವಷ್ಟು ನಿಂದಿಸಿದವರು ನೊಣ ಕೂರದಂತೆ ನೋಡಿಕೊಳ್ಳುತ್ತಾರೆ ನನ್ನ ಹೆಣದ ಮೇಲೆ ಮತ್ತೆ ಅತ್ತರು ಚೆಲ್ಲುತ್ತಾರೆ ನೀನು ಸುಮ್ಮನೆ ನಗಬೇಕು… ಗ.೩೬ ಈ  ಎರಡು ಗಜಲ್ ನ ಪ್ರತಿ ಶೇರ್ ಗಳು ಮತ್ತೆ ಮತ್ತೆ ಓದಿಸಿಕೊಂಡು ಹೋಗುತ್ತೆ.  ಸಮಾಜದಲ್ಲಿನ ಜನರ ವಾಸ್ತವಿಕತೆಯ ಮನಸ್ಥಿತಿ, ಗೋಮುಖ ವ್ಯಾಘ್ರತೆಯ ಕರಾಳ ರೂಪವನ್ನು ಸಮಯ ಸಾಧಕತನದ ಸಾಚಾತನವನ್ನೂ ! ಕವಿ ವಿಡಂಬನಾತ್ಮಕ ರೂಪಕಗಳಲ್ಲಿ ಚಿತ್ರಿಸಿ ಓದಗನ್ನು  ಅಲ್ಲೇ ಹಿಡಿದಿಡುವಂತ್ತೆ ಮಾಡಿದ್ದಾರೆ. ಇವಿಷ್ಟು ಕೇವಲ ಉದಾಹರಣೆ ಮಾತ್ರ ಸಂಕಲನದಲ್ಲಿ ಇನ್ನೂ ಹಲವಾರು ಬಗೆಯ ಬಹುಮುಖ ವಸ್ತು , ವಿಷಯಗಳ ಮೇಲೆ ಬೆಳಕು ಚೆಲ್ಲುವ , ಪ್ರತಿರೋದಿಸುವ ಸಂವೇದನಾಶೀಲ ಕೆಲಸ ಮಾಡಿದ್ದಾರೆ. ಕಲ್ಲಳ್ಳಿಯವರು ಒಬ್ಬ ಪ್ರತಿಭಾನ್ವಿತ , ಗಟ್ಟಿ ಗಜಲ್ ಕಾರರು . ಇವರ ಕಾವ್ಯದ ಭಾಷೆ, ಸರಳ  ಸಾಮಾನ್ಯನು ಎದೆಗವಿಚಿಕೊಳ್ಳುವಷ್ಟು ಸುಂದರ ಸಶಕ್ತ. ಪ್ರಾಂತೀಯ ಭಾಷೆಯ ಸೊಗಡನ್ನು ಮೈಗೂಡಿಸಿಕೊಂಡಿರುವ  ಈ ಸಂಕಲನದ ಕೆಲವು ಗಜಲ್ ಗಳ ಮಿಸ್ರಗಳು ಸ್ವತಂತ್ರತೆಯ ಲಯ ತಪ್ಪಿದಂತೆ , ಭಾವಾಭಿವ್ಯಕ್ತಿಯ ಏಕತಾನತೆಯನ್ನು ಹೊಂದಿರುವಂತೆ ಕಂಡು ಬಂತು ಇದು ನನ್ನ ಊಹೆಗೂ ನಿಲುಕದ ಮುದ್ರಾ ದೋಷವೋ ಅಥವಾ ತಿದ್ದುವಾಗ ಆದ ದೋಷವೋ ಇರಬೇಕು ಎಂದೆನಿಸಿತು.  ಓದುಗನಾದ ನನ್ನ ದೃಷ್ಠಿಯಲ್ಲಿ ಭಿನ್ನತೆಯೂ ಇರಬಹುದು.!! ಕವಿ ಭಾವಕ್ಕೆ ದಕ್ಕೆಯಾಗದಿರಲಿ.  ಮುಂದೆ ಇದರತ್ತ ಗಮ್ಯ ನೀಡಲಿ.    ಇವರ ಈ ಸಂಕಲನ ಕನ್ನಡ ಸಾರಸ್ವತ ಲೋಕದಲ್ಲಿ ದಾಪುಗಾಲಿಟ್ಟು  ಕೀರ್ತಿ ಪತಾಕೆಯ ಶಿಖರವೇರಲಿ. ಇನ್ನಷ್ಟು ಮತ್ತಷ್ಟು ಕೃತಿಗಳು ಇವರಿಂದ ಹೊರ ಬರಲಿ ಎಂದು  ಪ್ರೀತಿಯಿಂದ ಶುಭ ಹಾರೈಸುತ್ತೇನೆ. ********************************************* ಅಶೋಕ ಬಾಬು ಟೇಕಲ್.

ಕಲ್ಲಳ್ಳಿ ಗಜಲ್ Read Post »

You cannot copy content of this page

Scroll to Top