ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಪ್ರಸ್ತುತ

ಮತ್ತೆ ಕಾಣಬಲ್ಲೆವೇ ಆ ದಿನಗಳನು..? ಮಲ್ಲಿಕಾರ್ಜುನ ಕಡಕೋಳ ದುರಿತಕಾಲ ಎಂಬ ಪದ ನಾವೆಲ್ಲ ಬರಹಗಳಲ್ಲಿ ಸೂಕ್ಷ್ಮತೆಯಿಂದ ಬಳಕೆ ಮಾಡಿದ ಪರಿಚಯವಿತ್ತು. ಪ್ರಸ್ತುತ ನಾವು ಅನುಭವಿಸುತ್ತಿರುವ ಖರೇ, ಖರೇ ದುರಿತಕಾಲದ ಈ ದಿನಗಳಿಗೆ ಕೊನೆಯೆಂಬುದು ಯಾವಾಗ ಎಂಬ ದುಗುಡ ನಮ್ಮನ್ನೀಗ ಘೋರವಾಗಿ ಬಾಧಿಸುತ್ತಿದೆ. ಅಷ್ಟಕ್ಕೂ ಕೊರೊನಾದ ಈ ಕಾಲಘಟ್ಟಕ್ಕೆ ಕೊನೆಯೆಂಬುದು ಇದೆಯೋ, ಇಲ್ಲವೋ ಎಂಬ ಕ್ರೂರ ಆತಂಕ. ಹಗಲು ರಾತ್ರಿಗಳೆನ್ನದೇ ಕಿವಿ, ಕಣ್ಣು, ಬಾಯಿ, ಮೂಗು, ಮನಗಳ ತುಂಬೆಲ್ಲ ಸೋಂಕಿತರು, ಶಂಕಿತರು, ರೆಡ್ ಝೋನ್, ಎಲ್ಲೋ ಝೋನ್, ಪೋಲಿಸರು, ವೈದ್ಯರಿಗೇ ಸೋಂಕು ಪದಗಳ ರಕ್ಕಸ ಕುಣಿತ. ಇವುಗಳ ಜೊತೆಗೆ ಜಾಗತಿಕ ಮಟ್ಟದ ಲಕ್ಷ ಲಕ್ಷ ಸಂಖ್ಯೆಯ ಸಾವು ನೋವಿನ ಅಂಕಿ ಅಂಶಗಳ ರುದ್ರನರ್ತನ. ಹುಟ್ಟೂರಿಗೆ ಹೋಗಿಯೇ ಸಾಯಬೇಕೆಂಬ “ಬದುಕಿಗಾಗಿ” ರಹದಾರಿಗಳಿಲ್ಲದೇ ಸಾವಿರಾರು ಮಂದಿ ನೂರಾರು ಹರದಾರಿ ನಡಕೊಂಡೇ ಹೋದವರು. ಹಾಗೆ ನಡಕೊಂಡು ಹೋಗುವ ನಡುದಾರಿಯಲ್ಲೇ ನೀರು – ಕೂಳಿಲ್ಲದೇ ಪ್ರಾಣಬಿಟ್ಟ ಬಸುರಿ – ಬಾಣಂತಿ, ತಾಯಿಮಕ್ಕಳ ಸಂಕಟದ ಸಾಲು ಸಾಲು ಸರಗಥೆಗಳು. ಹೀಗೆ ಅರಣ್ಯ ರೋದನವಾಗುತ್ತಿರುವ ಒಂದೆರಡಲ್ಲ ನಿತ್ಯವೂ ನೂರಾರು ಸಂಕಟಗಳ ಕರುಳು ಹಿಂಡಿ ಹಿಪ್ಪೆಮಾಡುವ ದೃಶ್ಯಗಳಿಗೆ ಕೊನೆಯೆಂಬುದಿದೆಯೇ ? ಇದ್ದರೆ ಯಾವಾಗ..? ಕೊರೊನಾ ಸಂದರ್ಭದಲ್ಲಿ ಮನುಷ್ಯ, ಮನುಷ್ಯರ ನಡುವಿನ ದೈಹಿಕ ದೂರ ಕಾಪಾಡಬೇಕೆಂಬುದು ವೈಜ್ಞಾನಿಕ ಸತ್ಯ. ವಿದೇಶಗಳಲ್ಲಿ ಸೋಶಿಯಲ್ ಗ್ಯಾದರಿಂಗ್ ಹಿನ್ನೆಲೆಯಲ್ಲಿ ಸೋಶಿಯಲ್ ಡಿಸ್ಟನ್ಸ್ ಎಂದು ಕರೆದಿರಬಹುದು. ಆದರೆ ಬಹುತ್ವ ಭಾರತದ ಸಂದರ್ಭದಲ್ಲಿ ಅದನ್ನು ಸಾಮಾಜಿಕ ಅಂತರ ಎಂಬ ಹೆಸರಿಂದ ಕರೆಯುವ ಮೂಲಕ ಅದು ಭಯ ಮೂಲದ್ದು ಎಂಬುದು ಮಾತ್ರವಲ್ಲದೇ ಜನಸಂಸ್ಕೃತಿ ವಿರೋಧಿಜನ್ಯ ಭಾವಕ್ಕೆ ಹತ್ತಿರವಾಗಿದೆ. ಅದು ವ್ಯಕ್ತಿಗತ ಅಥವಾ ದೈಹಿಕ ಅಂತರ – ದೂರ ಎಂಬುದು ವಾಸ್ತವವೇ ಆದರೂ ಹಾಗೇಕೆ ಕರೆಯುತ್ತಿಲ್ಲ.? ಮಡಿ – ಮೈಲಿಗೆ ಎಂಬಂತೆ ಸಾಮಾಜಿಕ ಅಂತರ ಎಂದು ಕರೆಯುವ ಮೂಲಕ ಅದು ಹುಟ್ಟುಹಾಕುತ್ತಿರುವ ಭಯ ಮಾತ್ರ ಭಯಂಕರ. ಕೊರೊನಾಗಿಂತ ಕೊರೊನಾ ಕುರಿತು ಹುಟ್ಟಿಕೊಂಡಿರುವ ಈ ತೆರನಾದ ಆತಂಕಕಾರಿ ಜೈವಿಕ ಸಂಸ್ಕೃತಿ (Bio Culture) ಬಣ್ಣಿಸಲಸದಳ. ಈ ಕೊರೊನಾಮಾರಿ ಮನುಷ್ಯ ಮನುಷ್ಯರ ನಡುವಿನ ಜೀವ ಸಂಬಂಧಗಳನ್ನು ನಿರ್ನಾಮಗೊಳಿಸುತ್ತಿದೆ. ಜೀವ ಕಕುಲಾತಿಯ ಸಹಬಾಳ್ವೆ, ಸಹಿಷ್ಣುತೆ, ಸಮಷ್ಟಿ ಪ್ರಜ್ಞೆಯ ಸಾಮೂಹಿಕ ಬದುಕು ಮತ್ತೆ ಮರಳಿ ಬರುವುದೇ ಎಂಬ ಶಂಕೆ. ಒಡೆದು ಹೋಗುತ್ತಿರುವ ಸಹಮತದ ಜೀವಗನ್ನಡಿ ಹರಳು ಮತ್ತೆ ಬೆಸೆದೀತೇ.? ಎಲ್ಲವೂ ಸರಿಯಾಗುವವರೆಗೆ ಲಾಕ್ ಡೌನ್, ಸೀಲ್ ಡೌನ್ ಪ್ರಕ್ರಿಯೆಗಳು ಮುಂದುವರೆದರೆ ನಾವೆಲ್ಲ ಬದುಕುಳಿಯಬಹುದೇ.? ಹೀಗೆ ಏನೇನೋ ಜೀವದುಸಿರು ಸೂತಕದ ಆಲೋಚನೆಗಳು. ಸಣ್ಣದೊಂದು ಸಮಾಧಾನದ ಸಂಗತಿಯೆಂದರೆ ಟೀವಿಗಳಲ್ಲಿ ಗಂಟೆಗಟ್ಟಲೇ ಕೊರೆಯುತ್ತಿದ್ದ, ಮನುಕುಲದ ಉದ್ದಾರಕ್ಕಾಗಿಯೇ ಹುಟ್ಟಿ ಬಂದವರಂತೆ ತರಹೇವಾರಿ ಫೋಸು ಕೊಡುತ್ತಿದ್ದ ದೇವಮಾನವ ನಾಮಾಂಕಿತ ಜೋತಿಷಿಗಳು ನಾಪತ್ತೆಯಾಗಿದ್ದಾರೆ. ಕೊರೊನಾ ಹೋದಮೇಲೂ ಅವರು ಮತ್ತೆ ಬಾರದಿರಲಿ. ಆಯುರ್ವೇದ, ಅಲೋಪತಿ, ಸಿದ್ಧ, ಹೋಮಿಯೋಪಥಿ ಯಾವುದರಲ್ಲಿ ಇದಕ್ಕೆ ನೆಟ್ಟಗಾಗುವ ಮದ್ದಿದೆ ? ದಿನಕ್ಕೊಂದಲ್ಲ ಹತ್ತಾರು, ನೂರಾರು ತರಹೇವಾರಿ ಸುದ್ದಿಗಳಿಂದ ಬದುಕು ಅಕ್ಷರಶಃ ಗದ್ಗದಿತವಾಗಿದೆ. ಸಾವಿಗಿಂತಲೂ ಸಾವಿನ ಕುರಿತಾದ ಸಾವಿನಪ್ಪನಂತಹ ಸುದ್ದಿಗಳನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ತಿಂಗಳೊಪ್ಪತ್ತಿನಿಂದ ನಾಗಾಲೋಟದಲ್ಲಿ ನೂರಿನ್ನೂರನೇ ಪ್ರಯೋಗದಲ್ಲಿ ಮುನ್ನುಗ್ಗುತ್ತಿರುವ ಪ್ರಸಿದ್ಧ ಕಂಪನಿ ನಾಟಕಗಳ ಪ್ರಯೋಗಗಳಂತೆ. ಆದರಿದು ಕುಪ್ರಸಿದ್ಧವಾಗುತ್ತಿರುವ ಕೊರೊನ ಎಂಬ ಮಹಾರಾಕ್ಷಸತ್ವದ ಕರಾಳ ಕಥೆ. ಮನುಷ್ಯರ ಬದುಕು ಬರ್ಬರಗೊಳ್ಳುತ್ತಿರುವ ದುಃಖಸಾಗರದ ಕಥೆ. ಜನರ ಜೀವನ ಅಕ್ಷರ ಅಕ್ಷರಶಃ ತತ್ತರಿಸಿ ಹೋಗಿದೆ. ಆದರೆ ಇಂತಹ ಸಂಕಟಗಳನ್ನು ಹಾಡು, ರೂಪಕ, ಸಣ್ಣಾಟ, ಜಾನಪದ, ಪ್ರಹಸನ, ಕವನ ಮುಂತಾದ ಪ್ರಕಾರಗಳಲ್ಲಿ ಜನಕಲಾವಿದರು ತೋರಿಸುವ ಕ್ರಿಯಾಶೀಲತೆ ಮಾತ್ರ ತುಂಬಾ ಚುರುಕಾಗಿದೆ. ಬಡವರು ಸತ್ತಾರ ಸುಡಲಾಕ ಸೌದಿಲ್ಲ ! ಶಿವನೇ ಬಡವರಿಗೆ ಸಾವು ಕೊಡಬೇಡ !! ಸಾವಿನ ಘನಘೋರ ಸಂದರ್ಭದಲ್ಲೂ ನಮ್ಮ ಜನಪದರ ಕರುಳಿನ ಸಂಕಟ ಕೊರಳ ಸಿರಿಕಂಠದ ಮೂಲಕ ಜೀವದ ಹಾಡಾಗಿ, ಪಾಡಾಗಿ ಹೊರಹೊಮ್ಮುತ್ತದೆ. ಅದು ನಮ್ಮ ಜೀವಪರ ಜನಸಂಸ್ಕೃತಿ. ಅದು ಶಿವಸಂಸ್ಕೃತಿ. ಸಾವಿನ ಬಗ್ಗೆ ಅವರಿಗೆ ಭಯವಿಲ್ಲ. ಆದರೆ ಸತ್ತರೆ ಸುಡಲು ಸೌದೆಇಲ್ಲ. ಅದಕ್ಕೆಂದೇ ಶಿವನೆ ಬಡವರಿಗೆ ಸಾವು ಕೊಡಬೇಡವೆಂದು, ಅವರು ಬಡತನದ ಬೇಗೆಯಲ್ಲೇ ಬೆಂದುಹೋಗುವ ಸತ್ಯದ ಮೊರೆತ ಅವರದು. ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ, ಒಮ್ಮೆ ನೀನು ಒಡಲುಗೊಂಡು ನೋಡಾ ರಾಮನಾಥ., ಎಂದು ದೇವರ ದಾಸಿಮಯ್ಯ ದೇವರಿಗೆ ಹಾಕುವ ಒಡಲಿನ ಸವಾಲು, ಪ್ರಪಂಚದ ಯಾವ ವೇದಾಂತ, ಸಿದ್ದಾಂತ, ಸಾಹಿತ್ಯ ಹೇಳಿಲ್ಲ. ಇಂತಹ ಪರಮಸತ್ಯದ ಸವಾಲು ನಮ್ಮ ಸಂಸ್ಕೃತಿ. ಈಗ ಅವುಗಳಿಗೆ ಸಾಮಾಜಿಕ ಜಾಲತಾಣಗಳೇ ಬಹುದೊಡ್ಡ ಮಾಧ್ಯಮ. ಜನಸಮೂಹದ ನೆಲೆದಾಣಗಳಲ್ಲಿ ಸಾರ್ವತ್ರಿಕ ಅವಕಾಶಗಳಿಲ್ಲವಾದ್ದರಿಂದ ಸಧ್ಯಕ್ಕೀಗ ಸಾಮಾಜಿಕ ಅಂತರ ಕಾಪಾಡಿಕೊಂಡಿರುವ ಸಾಮಾಜಿಕ ಜಾಲತಾಣಗಳೇ ಏಕೈಕ ಸಂವಹನ ಸಾಧನಗಳು. ನಾಕೈದು ತಿಂಗಳುಕಾಲ ಅಂದರೆ ಬೇಸಿಗೆಯ ಆರಂಭದ ಒಂದೆರಡು ವಾರ ಮೊದಲೇ ಆರಂಭಗೊಂಡು ಮಿರುಗ (ಮೃಗಶಿರ)ದ ಮಳೆಯವರೆಗೂ ನಾಡಿನ ತುಂಬಾ ಜರುಗುವ ಜಾತ್ರೆ, ಸಾಂಸ್ಕೃತಿಕ ಹಬ್ಬ ಹರಿದಿನಗಳದ್ದೇ ಸಂಭ್ರಮ, ಸಡಗರ. ಜನವರಿ ತಿಂಗಳು ಬಹುಪಾಲು ಸಂಕ್ರಮಣಕ್ಕೆ ಮೊದಲೇ ಆರಂಭಗೊಳ್ಳುವ, ಜನಜೀವಾಳವೇ ಆಗಿರುವ ರೈತಾಪಿ ಬದುಕಿನ ಸುಗ್ಗಿ, ದೇವರು ದಿಂಡರ ಪರಿಷೆ, ಜನಪದರ ಜಾತ್ರೆ, ಸಾರ್ವಜನಿಕ ಪ್ರೀತಿ ಹುಟ್ಟಿಸುವ ಹತ್ತು ಹಲವು ಮಹೋತ್ಸವಗಳ ಸಾಂಸ್ಕೃತಿಕ ಸುಗ್ಗಿಯಕಾಲ. ಜನವರಿಯಿಂದ ಮೇ, ಜೂನ್ ಮುಗಿಯೋಮಟ ಜನಸಂಸ್ಕೃತಿಯ ಕಲಾಪ್ರದರ್ಶನಗಳಿಗೆ ಹೇಳಿ ಮಾಡಿಸಿದ ಕಾಲ. ರೈತಾಪಿ ಕೆಲಸಗಳು ಮುಗಿದು ಜನರ ಬದುಕಿನ ಸಾಹಿತ್ಯ, ಹಾಡು, ಕುಣಿತ ಒಟ್ಟು ಎಲ್ಲ ಕಲಾಪ್ರಕಾರ ಪ್ರದರ್ಶನಗಳ ಸಂಭ್ರಮಕಾಲ. ಸಡಗರದ ಕಾಲ. ಈ ಸಡಗರ ಸಂಭ್ರಮಗಳಿಗೆ ಈ ಬಾರಿ ಅವಕಾಶವೇ ಇಲ್ಲವಾಯಿತು. ಕೊರೊನಾ ಇಲ್ಲದಿದ್ದರೆ ಇದು ತಿಂಗಳುಗಳ ಕಾಲ ಜಾತ್ರೆಗಳು ಜರುಗುವ ಸಮಯ. ಜಾತ್ರೆಗಳಲ್ಲಿ ನಾಟಕ ಕಂಪನಿಗಳಿಗೆ ರಂಗನಾಟಕಗಳ ಬಂಪರ್ ಸುಗ್ಗಿಯ ಸಂಭ್ರಮ. ಪುಣ್ಯಕ್ಕೆ ನಾಟಕಗಳ ಜಾತ್ರೆಯೆಂದೇ ಪ್ರಸಿದ್ದವಾದ ಬನಶಂಕರಿ ಜಾತ್ರೆಯ ಸದುಪಯೋಗ ಹನ್ನೊಂದು ನಾಟಕ ಕಂಪನಿಗಳು ಮಾಡಿಕೊಂಡವು. ಆ ನಂತರ ಮಾರ್ಚ್ ಮೊದಲ ವಾರದಿಂದ ಜಾತ್ರೆಯ ಕ್ಯಾಂಪುಗಳದ್ದು ನೋವಿನ ಮಜಕೂರ. ಕಲಾವಿದರ ನಿತ್ಯದ ಬದುಕಿಗೂ ತತ್ವಾರ. ನಾಟಕ ಕಂಪನಿಗಳ ಕಲಾವಿದರೆಲ್ಲ ಮನೆ ಸೇರಿದ್ದಾರೆ. ಹಳ್ಳಿಯ ಜಾತ್ರೆಗಳಲ್ಲಿ ಜರುಗುವ ವೃತ್ತಿರಂಗ ನಾಟಕಗಳಲ್ಲಿ ಅಭಿನಯಿಸುವ ನೂರಾರು ಮಂದಿ ಹವ್ಯಾಸಿ ಕಲಾವಿದೆಯರು ನಿರುದ್ಯೋಗದ ನಿಟ್ಟುಸಿರು ಬಿಡುತ್ತಿದ್ದಾರೆ. ಮುಖ್ಯವಾಗಿ ಮದುವೆಗಳ ಸೀಜನ್ ಇದಾಗಿತ್ತು. ಮಂಗಳವಾದ್ಯ ನುಡಿಸುವ ಕಲಾವಿದರಿಗೆ ಅಗ್ನಿಪರೀಕ್ಷೆಯಂತಹ ಬದುಕಿನ ಪ್ರಶ್ನೆಯ ಸಮಯ. ಅವರ ಕುಟುಂಬ ನಿರ್ವಹಣೆ ಅಕ್ಷರಶಃ ಸಂಕಟಮಯ. ಸಿನೆಮಾ, ಧಾರಾವಾಹಿಗಳಲ್ಲಿ ಕೆಲಸ ಮಾಡುವ ಕಲಾವಿದರು, ತಂತ್ರಜ್ಞರ ಜೀವನ ಸಂಕಷ್ಟಕ್ಕೀಡಾಗಿದೆ. ಪುಸ್ತಕಗಳ ಪ್ರಕಟಣೆ ಸ್ಥಬ್ಧಗೊಂಡಿದೆ. ಹೀಗೆ ವಿರಮಿಸಿರುವ ಸಂಸ್ಕೃತಿ ಸಂಬಂಧಿತ ಬಹುದೊಡ್ಡ ಪಟ್ಟಿಯೇ ಇದೆ. ಹಳ್ಳಿ, ಪಟ್ಟಣ, ನಗರಗಳೆನ್ನದೇ ಬೇಸಿಗೆ ಶಿಬಿರಗಳು ಸಂಸ್ಕೃತಿಯ ಸಮೃದ್ಧತೆಯನ್ನು ಮಕ್ಕಳಿಗೆ ಉಣ ಬಡಿಸುತ್ತಿದ್ದವು. ಮಕ್ಕಳಿಗೆ ಅಭಿನಯ, ಸಂಗೀತ, ಅಜ್ಜಿಹೇಳುವ ಕಥೆ, ಚಿತ್ರಕಲೆ ಕಲಿಕೆ ಹೀಗೆ ಹೊಸತನದ ಸೃಜನಶೀಲತೆಗಳಿಗೆ ಮಕ್ಕಳನ್ನು ಸಿದ್ಧಗೊಳಿಸುವ ಎಲ್ಲಕ್ಕೂ ಕೊರೊನಾ ಕಲ್ಲು ಬಿದ್ದಿದೆ. ಸರಕಾರದ ರಂಗಾಯಣಗಳು ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ನಡೆಸುತ್ತಿದ್ದವು. ಖಾಸಗಿಯಾಗಿ ಸಂಘ ಸಂಸ್ಥೆಗಳು ಅಲ್ಲಲ್ಲಿ ಜರುಗಿಸುತ್ತಿದ್ದ ಇಂತಹ ನೂರಾರು ಶಿಬಿರಗಳು ಸಂಸ್ಕೃತಿಯ ವಿವಿಧ ಮಜಲುಗಳ ಬೃಹತ್ ಕಾರ್ಯಾಗಾರ, ಕಮ್ಮಟ, ಸಮಾವೇಶಗಳು ನಾಡಿನ ಸಂಸ್ಕೃತಿ ಬಿಂಬಿಸುವ ಅವಕಾಶಗಳಾಗಿದ್ದವು. ಅಲ್ಲದೇ ಸರಕಾರದ ಹತ್ತು ಹಲವು ಸಂಸ್ಕೃತಿ ಉತ್ಸವಗಳು ಜರುಗುತ್ತಿದ್ದವು. ಅವೆಲ್ಲವುಗಳನ್ನು ಕೊರೊನಾ ಎಂಬ ಕರಾಳ ಕಾಳಿ ನುಂಗಿ ನೊಣೆಯುತ್ತಿದೆ. ಲಾಕ್ ಡೌನ್ ಮತ್ತು ಸೀಲ್ ಡೌನ್ ಗಳಿಂದ ಸಾಂಸ್ಕೃತಿಕ ಲೋಕವಿರಲಿ ಸಾಮಾನ್ಯ ಜನಜೀವನ ಸಹಜಸ್ಥಿತಿಗೆ ಮತ್ತೆ ಮರುಳತ್ತದೆಯಾ.? ಮತ್ತೆ ಕಾಣಬಲ್ಲೆವೇ ಆ ದಿನಗಳನು ಎಂಬ ಸಹಸ್ರಮಾನದ ನಿರೀಕ್ಷೆ ನಿತ್ಯವೂ ನಮ್ಮೆಲ್ಲರನ್ನು ಕಾಡುತ್ತಿದೆ. ***********

ಪ್ರಸ್ತುತ Read Post »

ಇತರೆ, ಜೀವನ

ಪ್ರಸ್ತುತ

ಸಂವಾದ ಜ್ಯೋತಿ ಡಿ.ಬೊಮ್ಮಾ. ಹೌದು ಪಾಶ್ಚಾತ್ಯ ಸಂಸ್ಕೃತಿಯೆ ಚನ್ನ ಒತ್ತಾಯದ ಬದುಕು ಅವರಾರು ಬದುಕರು ಹೊಂದಾಣಿಕೆಯ ಪ್ರಯತ್ನವೇ ಮಾಡರವರು ನಮ್ಮಂತಲ್ಲ ಒಳಗೊಂದು ಹೊರಗೊಂದು ಇಷ್ಟವಿಲ್ಲದವನ/ಳೊಂದಿಗೆ ಏಗುವ ರಗಳೆ ಕುಡಿದು ಪೀಡಿಸುವ ಗಂಡನೊಡನೆ ಸಹಬಾಳ್ವೆ ಇಲ್ಲಿ ಮಕ್ಕಳಾಗದಿದ್ದರು ತಾನೆ ತಪಿತಸ್ಥಳು ಲೋಕಕ್ಕೆ ಅವನು ಗಂಡಸು..ಅವನಲ್ಲೆನು ಕೊರತೆ..! ಮಕ್ಕಳಾದ ಮೇಲೆ ಇನ್ನೆನಿದೆ. ಅನುಸರಿಸಿಕೊಂಡು ಹೋಗುವದೊಂದೆ. ಅವರಾದರೂ ಎಲ್ಲಿರುತ್ತಾರೆ ಕೊನೆವರೆಗೆ ನಮ್ಮವರಾಗಿ..! ಬಿಟ್ಟು ಬಿಡುವದೊಳಿತು ಮನಸ್ಸಿಗೊಪ್ಪದು ಸುಮ್ಮನಿರು ,ಮಾತು ಬೇರೆ  ಆತ್ಮ ಬೇರೆ ಎರಡು ಒಂದಾಗಬೇಕಾದರೆ ತೆರೆ ಸರಿಸಿ ಬದುಕಬೇಕು. ಬಯಸಿ ದೊರಕಿಸಿಕೊಂಡದ್ದು ಹಳತಾಗದೆ..! ಹಾಗಂತ ಹೊಂದಾಣಿಕೆಯಲ್ಲೆ ಬದುಕಬೇಕೆ.. ದೇವತೆಗಳ ನೆಲೆವೀಡು ನಮ್ಮ ನಾಡು ಸುಸಂಸ್ಕತಿ ಉಳ್ಳದ್ದು. ಪುರುಷ ದೇವರೆಲ್ಲ ಬಹುಪತ್ನಿತ್ವ ಸ್ಥರೆ ಶ್..ಕದ್ದು ಕೇಳುವ ಕಿವಿಗಳಿವೆ ಇಲ್ಲಿ. ಕದ್ದು ಏನು ಮಾಡಿದರು ನಡೆಯಬಹುದಿಲ್ಲಿ.. ಇರುವದನ್ನೆ ಒಪ್ಪಿಕೊಂಡರು ಬದುಕಿದರಾಗದೆ..? ನೀವು ಬುದ್ದಿ ಜೀವಿಗಳು ,ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುವವರು.. ಎಡ ಬಲವೆಂದು ಎಗ್ಗಿಲ್ಲದೆ ಬಡಿದಾಡುವ ಗೊಡ್ಡು ವಾದಿಗಳು.. ನೈಜತೆ ಮರೆಮಾಚಿ ಕಲ್ಪನೆಯಲ್ಲಿ ಬದುಕುವರು.. ಯಾಕೋ..ಅಲ್ಲಗಳೆಯಲಾಗಲಿಲ್ಲ.           **********

ಪ್ರಸ್ತುತ Read Post »

ಇತರೆ, ಜೀವನ

ಪ್ರಸ್ತುತ

ಮಕ್ಕಳ ಆಯ್ಕೆಯಲ್ಲಿ ನಂಬಿಕೆ ಏಕಿಲ್ಲ….? ಅನಿತ.ಕೆ.ಬಿ.   ವಿವಾಹವೆಂಬುದು ನಮ್ಮ ಸಮಾಜದಲ್ಲಿ ಕಂಡುಬರುವಂತಹ ಒಂದು ಸಂಸ್ಥೆ. ಗಂಡಿಗೆ ಹೆಣ್ಣು,ಹೆಣ್ಣಿಗೆ ಗಂಡು ಆಸರೆಯಾಗಿರುತ್ತಾರೆಂಬ ನಂಬಿಕೆಯಿಂದ ವಿವಾಹ ಅವಶ್ಶಕ ಹಾಗೂ ಅನಿವಾರ್ಯ. ಮದುವೆಯನ್ನು ಪುರಾಣಗಳ ಕಾಲದಲ್ಲಿ ಸ್ವಯಂವರ ರೀತಿ ನಡೆಸಲಾಗಿದೆ.    ಹಾಗದರೆ ಮದುವೆ ಎಂದರೇನು…? ಎಂಬ ಪ್ರಶ್ನೆಗೆ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬರಾದ ಮ್ಶಾಲಿನೊಸ್ಕಿರವರು “ಸ್ತ್ರೀ-ಪುರುಷರ ನಡುವೆ ಲೈಂಗಿಕ ಹಾಗೂ ಮಾನಸಿಕ ಸಂಬಂಧವನ್ನ ದೃಢಪಡಿಸುವ ಮತ್ತು ಸಂತಾನೋತ್ಪತ್ತಿಗಾಗಿ ಉದ್ದೇಶಪೂರ್ವಕವಾಗಿ ಏರ್ಪಡಿಸುವ ಒಪ್ಪಂದ” ಎಂದಿದ್ದಾರೆ.     ಮದುವೆ ಇಲ್ಲದೆ ಜೀವನ ನಡೆಸಲು ಸಾಧ್ಶವಿಲ್ಲವೇ? ಯಾಕಿಲ್ಲ,ಎಷ್ಟೋ ಮಂದಿ ತಮ್ಮ ಉದ್ದೇಶಕ್ಕಾಗಿ ವಿವಾಹವಾಗದೇ ಉಳಿದಿದ್ದಾರೆ. ಆದರೆ ಯಾರೋ ಒಬ್ಬ ವಿವೇಕಾನಂದ,ಎಲ್ಲೊ ಒಬ್ಬ ಕಲಾಂ, ಮೋದಿಯಂತವರೇ ಹೊರತು ನಮ್ಮ ಅಣ್ಣ-ತಮ್ಮ,ಅಕ್ಕ-ತಂಗಿಯರಂತು ಅಲ್ಲವೇ ಅಲ್ಲ..! ವಿವಾಹವಿಲ್ಲದೆ ಮೋಕ್ಷವಿಲ್ಲ ಎಂಬುದು ಹಿಂದೂಗಳ ನಂಬಿಕೆ ಹಾಗಾಗಿ ವಿವಾಹ ಅನಿವಾರ್ಯ. ಮದುವೆ ಎಂಬುದು ಬಂಧನವೇ? ಅಲ್ಲವೇ ಅಲ್ಲ. ಇದು ಎರಡು ಜೀವಗಳನ್ನ ಹತ್ತಿರ ತಂದು ಜೀವನವಿಡೀ ಒಂದಾಗಿ ಬಾಳಬೇಕೆಂದು ಹರಸುವಂತಹ ಒಂದು ವಿಧಿ. ವಿವಾಹದ ಕುರಿತು ಹೆಣ್ಣು-ಗಂಡುಗಳಲ್ಲಿ ಹತ್ತಾರು ಕನಸುಗಳಿರುತ್ತವೆ,ಮಾತ್ರವಲ್ಲ ಹಲವರು ತಮ್ಮ ಸಂಗಾತಿಯನ್ನ ಆಯ್ಕೆ ಮಾಡಿಕೊಂಡಿರುತ್ತಾರೆ. ಇದಕ್ಕೆ ವಿರುದ್ಧವಾದ ಸಂದರ್ಭ ಸೃಷ್ಠಿಗೊಂಡಾಗ ಮಾತ್ರ ವಿವಾಹ ಬಂಧನವಾಗುತ್ತದೆ.     ಹೌದು ಮದ್ವೆ ಒಂದೆರಡು ದಿನದ ಜವಾಬ್ದಾರಿಯಲ್ಲ, ಒಂದೆರಡು ದಿನದ ಸಂಭ್ರಮವಲ್ಲ. ಅಂದೊಂದು ಪವಿತ್ರ ಬಂಧ. ಒಂದೆರಡು ದಿನದ ಸಂಭ್ರಮ ಮುಗಿಸಿಹೋಗುವವರು ನೀವಾದರೆ, ಅವರು ಜೀವನದ ಕೊನೆಯ ಪಯಣದವರೆಗೂ ವಿವಾಹವಾದವರೊಡನೆ ನಡೆಯುವವರಾಗಿರುತ್ತಾರೆ. ಹಾಗಾಗಿ ಯಾರೋ ನೊಡುವ ಹೆಣ್ಣು-ಗಂಡನ್ನು ನಂಬುವ ನೀವೂ ನಿಮ್ಮ ಕೈಬೆರಳ ಹಿಡಿದು ಜೊತೆ ಜೊತೆ ಸಾಗಿ ಬಂದ ನಿಮ್ಮ ಮಕ್ಕಳ ಆಯ್ಕೆಯಲ್ಲಿ ನಂಬಿಕೆ ಏಕಿಲ್ಲ…? ಅವರ ಅಭಿಪ್ರಾಯಕ್ಕೂ ಮನ್ನಣೆ ಕೊಡಿ. ನೀವು ಪ್ರತಿನಿತ್ಶ ಪೂಜಿಸುವ ಆ ನಿಮ್ಮ ದೇವರುಗಳು ಕೂಡ ಸಂಗಾತಿಗಳನ್ನ ಆಯ್ಕೆಯಾಗೆ ತಾನೇ ವಿವಾಹವಾಗಿರುವುದು.    ಹೌದು ನಾವು ಸಮಾಜದ ಹೊರತಾಗಿ ಬದುಕಲು ಸಾಧ್ಶವಿಲ್ಲ. ಹಾಗಂತ ಸಮಾಜಕ್ಕಾಗಿ ಬದುಕುವುದು ಸರಿಯೇ?. ಸಂಗಾತಿಯನ್ನ ಆಯ್ಕೆ ಮಾಡಿಕೊಂಡ ಮಾತ್ರಕ್ಕೆ ಸಮಾಜ ಹದಗೆಡುವುದೇ? **********

ಪ್ರಸ್ತುತ Read Post »

ಇತರೆ, ಜೀವನ

ಅನುಭವ

                      ಮನೆ……. ಹಕ್ಕಿ ಮನೆ ಅನುಪಮಾ ರಾಘವೇಂದ್ರ                       ಮನೆ……. ಹಕ್ಕಿ ಮನೆ        ಈ ಮರೆವು  ಅನ್ನೋದು ಮನುಷ್ಯರಿಗೆ ಮಾತ್ರವೋ….? ಅಲ್ಲಾ ಪ್ರಾಣಿ ಪಕ್ಷಿಗಳಿಗೂ ಇರುತ್ತೋ…..? ನನಗೀ ಸಂಶಯ ಬರಲು ಕಾರಣವೇನೋ ಇದೆ. ಕೆಲವು ದಿನಗಳ ಹಿಂದಿನ ಘಟನೆ……          ಸಂಜೆ ವೇಳೆ ಹಟ್ಟಿ ಬಳಿಗೆ ಹೋದಾಗ ಹಟ್ಟಿಯ ಒಳಗಿನಿಂದ ಹಕ್ಕಿಯೊಂದು ಪುರ್ರನೆ ಹಾರಿ ಹೋಯ್ತು. ಮರುದಿನ ಬೆಳಗ್ಗೆಯೂ ಅದೇ ರೀತಿ ಹಕ್ಕಿ  ಹಾರುವುದು ಕಂಡಿತು. ಹಕ್ಕಿಗಳ ಕಿಚ ಪಿಚ ಸುಮಧುರವಾದ ಸಂಗೀತ…… ನಾನು ಹೋದ ಕ್ಷಣದಲ್ಲಿ ನಿಂತು ಬಿಡುತ್ತದೆ. ನಾನು ಹೋಗುವುದನ್ನು ದೂರದಿಂದಲೇ ಕಂಡು  ಹಾರಿ ಹೋಗುತ್ತದೆ. ಪದೇ ಪದೇ ಘಟನೆ ಮರುಕಳಿಸಿದಾಗ ಏನೋ ಕುತೂಹಲ……. ಅಡಗಿ ನಿಂತು ಗಮನಿಸಿದೆ. ಹಟ್ಟಿಯ ಗೋಡೆಯಲ್ಲಿ ಹಲವಾರು ಕಿಂಡಿಗಳಿವೆ.  ಒಂದು ಕತ್ತಲಿನ ಮೂಲೆಯ ಕಿಂಡಿಯಲ್ಲಿ ಹಕ್ಕಿಯೊಂದು ಮನೆ ಕಟ್ಟಿಕೊಂಡಿದೆ.        ಹುಲ್ಲಿನ ಮನೆಯೋ….., ಹಂಚಿನ ಮನೆಯೋ…..,ತಾರಸೀ ಮನೆಯೋ….. ವ್ಯತ್ಯಾಸವೇ ಇಲ್ಲ. ಮಣ್ಣಿನ ನೆಲವೋ…. , ಸಿಮೆಂಟ್ ನೆಲವೋ…., ಗ್ರಾನೈಟ್ ನೆಲವೋ….. ಸಂಶಯವೂ ಇಲ್ಲ.  ಆಹಾ…… ಬೇರು ನಾರುಗಳನ್ನು ಸೇರಿಸಿ ನಿರ್ಮಿಸಿದ ಸುಂದರವಾದ ಮನೆ. ಮನೆ ಅನ್ನುವುದಕ್ಕಿಂತಲೂ ಪುಟ್ಟ ಗೂಡು ಎನ್ನುವುದೇ ಸೂಕ್ತವಲ್ಲವೇ…..  ಗೂಡಿನ ಸುತ್ತಮುತ್ತ ಸೂಕ್ಷ್ಮವಾಗಿ ಗಮನಿಸಿದೆ. ಒಂದು ಕಿಂಡಿಯಲ್ಲಿ ಗೂಡು , ಪಕ್ಕದ ಎರಡು ಕಿಂಡಿಗಳಲ್ಲಿ ಅಲ್ಪ ಸ್ವಲ್ಪ ಬೇರು ನಾರುಗಳು , ಅರೆಬರೆ ಕಟ್ಟಿದ ಗೂಡು….! ಇದೇಕೆ ಹೀಗೆ….? ಗೂಡು ಕಟ್ಟುವಾಗ ಯಾವ ರೀತಿಯ ನಾರುಗಳು ಬೇಕು ಎಂಬ ಆಯ್ಕೆಗಾಗಿ ತಂದು ಇಟ್ಟಂತೆಯೂ ಕಾಣುವುದಿಲ್ಲ.  ಗೂಡು ಕಟ್ಟಲು ಆರಂಭಿಸಿದ ಹಕ್ಕಿಗೆ ತಾನು ಯಾವ ಕಿಂಡಿಯಲ್ಲಿ ಗೂಡು ಕಟ್ಟುತ್ತಿರುವೆ ಎಂಬುದು ಮರೆತು ಹೋಗಿರಬಹುದೇ….? ‘ಮರೆವು ಎಂಬುದು ಮನುಷ್ಯರಿಗೆ ಮಾತ್ರವೇ…? ಪ್ರಾಣಿ ಪಕ್ಷಿಗಳಿಗೂ ಇದೆಯೇ…..?’ ಎಂಬ ಸಂಶಯ ನನಗೆ ಬಂದದ್ದು ಈ ಕಾರಣಕ್ಕಾಗಿ.         ದಿನದಲ್ಲಿ ಕಡಿಮೆಯೆಂದರೆ ನಾಲ್ಕು ಬಾರಿಯಾದರೂ ಹಟ್ಟಿಗೆ ಹೋಗಿ ನೋಡುವ ಹುಚ್ಚು. ಇಷ್ಟಾದರೂ ಹಕ್ಕಿ ನನ್ನ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸಿಕೊಳ್ಳಲೇ ಇಲ್ಲ.  ಆ ದಿನ ಗೂಡಿನಲ್ಲಿ ಕಂಡದ್ದು ಮೂರು ಮೊಟ್ಟೆ! ತವರಿಗೆ ಬಂದವಳ ಬಾಣಂತನ ಮಾಡಿಸಿ ಕಳುಹಿಸುವ ಜವಾಬ್ದಾರಿ ಇಲ್ಲವೇ….. ಪ್ರತಿದಿನ ಹಟ್ಟಿಯ ಒಂದು ಮೂಲೆಯಲ್ಲಿ ಒಂದಿಷ್ಟು  ಗೋಧಿ, ಭತ್ತ, ಅಕ್ಕಿಕಾಳುಗಳನ್ನು ಇಟ್ಟೆ. ಹಕ್ಕಿ ಮೊದಲೆರಡು ದಿನ ನಾನಿಟ್ಟ ಕಾಳುಗಳ ಕಡೆ ತಿರುಗಿಯೂ ನೋಡದ್ದು ನನ್ನ ಮನಸಿಗೇಕೋ ಬೇಸರ. ಮತ್ತೆರಡು ದಿನ ಕಳೆದಾಗ ನಾನಿಡುವ ಕಾಳುಗಳನ್ನು ಆಸೆಯಿಂದ ಆರಿಸಿಕೊಂಡದ್ದು ಸುಳ್ಳಲ್ಲ. ಮೊಟ್ಟೆಯೊಡೆದು ಮರಿಗಳು ಹೊರ ಬರುವ ಕ್ಷಣಕ್ಕಾಗಿ ತಾಯಿ ಹಕ್ಕಿಗಿಂತ ಹೆಚ್ಚು ಕಾತರದಿಂದ ಕಾದುಕೊಂಡಿರುವವಳು ನಾನೇ ಏನೋ……?    ಅದೊಂದು ದಿನ ಗೂಡನ್ನು ಇಣುಕಿ ನೋಡುವಾಗ ಮುದ್ದು ಮುದ್ದಾದ ಮೂರು ಪುಟಾಣಿಗಳು. ನಾನು ಅಲ್ಲಿಗೆ ಹೋಗುತ್ತಿದ್ದಂತೆ ಇನ್ನೂ ಕಣ್ಣು ಬಿಡದ ಪಾಪಚ್ಚಿಗಳು ಕೊಕ್ಕನ್ನು ದೊಡ್ಡದಾಗಿ ತೆರೆದು , ಚಿಂವ್ ಚಿಂವ್ ದನಿಯೊಂದಿಗೆ ತಲೆ ಎತ್ತಿದವು. ಪಾಪ…. ಅಮ್ಮ ಬಂದಿರಬಹುದೆಂಬ ಭಾವ. ಅಮ್ಮ ಎಲ್ಲೋ ಆಹಾರದ ಅನ್ವೇಷಣೆಯಲ್ಲಿರಬಹುದು. ಅವುಗಳಿಗೇನು ನಮ್ಮಂತೆ ಎಣ್ಣೆ- ನೀರೇ…… ಬಾಣಂತನವೇ…. ನನಗೆ ಮಗ ಹುಟ್ಟಿದ ಸಮಯದಲ್ಲಿ ಎರಡು ತಿಂಗಳು ಕೋಣೆಯೊಳಗೆ ಬಂಧಿಯಾಗಿದ್ದು, ಎಣ್ಣೆ ಹಚ್ಚಿ , ಬಿಸಿ ನೀರು ಸ್ನಾನ , ಪಥ್ಯದ ಊಟ , ವಿಶ್ರಾಂತಿ ಎಲ್ಲ  ನೆನಪುಗಳೂ ಮರುಕಳಿಸಿದವು. ಅಷ್ಟೊತ್ತಿಗಾಗಲೇ ಒಂದು ಹಕ್ಕಿ ಬಾಯಿಯಲ್ಲಿ ಏನನ್ನೋ ಕಚ್ಚಿಕೊಂಡು ಹಾರಿ ಬರುವುದು ಕಂಡೆ. ಅದರ ಅಮ್ಮನೋ …. ಅಪ್ಪನೋ ಅರಿಯೆ . ನನ್ನನ್ನು ಕಂಡು ದೂರದಲ್ಲೇ ಕುಳಿತುಕೊಂಡಿತು. ನನ್ನಿಂದಾಗಿ ಪುಟಾಣಿಗಳು ಹಸಿದುಕೊಂಡಿರುವುದು ಬೇಡವೆಂದು ದೂರ ಸರಿದೆ. ಮಕ್ಕಳಿಗೆ ತಿನ್ನಿಸಿ ಪುರ್ರನೆ ಹಾರಿ ಹೋಯಿತು.       ಮನೆಯೊಳಗಿದ್ದರೂ ನನ್ನ ಮನಸೆಲ್ಲ ಪುಟ್ಟ ಕಂದಮ್ಮಗಳ ಕಡೆಗೇ ಇತ್ತು. ಮೂರು ಮಕ್ಕಳಲ್ಲಿ ಎಷ್ಟು ಹೆಣ್ಣು….?  ಎಷ್ಟು ಗಂಡು …?ಎಂಬ ಯೋಚನೆ ಒಂದು ಕಡೆ .  ಪ್ರಾಣಿ ಪಕ್ಷಿಗಳು ಹೆಣ್ಣು ಗಂಡೆಂಬ ಬೇಧ ಭಾವ ಮಾಡುತ್ತವೆಯೇ…? ಅದೇನಿದ್ದರೂ ನಮ್ಮಂತಹ ಮನುಷ್ಯರಿಗೇ ಎಂಬ ಯೋಚನೆ ಇನ್ನೊಂದು ಕಡೆ. ನಮಗೆ ಮನೆಯೊಳಗೆ ಗಂಡು ಬೇಕು . ಹಟ್ಟಿಯಲ್ಲಿ ಹೆಣ್ಣೇ ಬೇಕು. ಎಲ್ಲದರಲ್ಲಿಯೂ ತನ್ನ ಲಾಭವನ್ನೇ ನೋಡುವ ಸ್ವಾರ್ಥಿಗಳು….!       ಆಗಾಗ ಹೋಗಿ ಗೂಡನ್ನು ಇಣುಕಿ ನೋಡುವುದು ಅಭ್ಯಾಸವಾಯ್ತು. ಸಣ್ಣ ಸದ್ದಾದರೂ  ತಿನ್ನಲು ಬಂದಿರಬಹುದೆಂದು ಬಾಯಿ ತೆರೆಯುವುದು, ಉಳಿದ ಸಮಯದಲ್ಲಿ ನಿದ್ದೆ ಮಾಡುವುದು ಈ ಮರಿಗಳಿಗೆ ಇಷ್ಟೇ ಕೆಲಸವೋ….. ನನ್ನ ಕಲ್ಪನೆಗೆ ನನಗೇ ನಗು ಬಂತು. ಚಿಕ್ಕ ಮಗುವಿನ ಮೂಗು, ತುಟಿಗಳನ್ನು ಮುಟ್ಟಿದರೆ ತಿನ್ನಲು ಬಾಯಿ ತೆರೆಯುತ್ತದೆ. ಉಳಿದ ಸಮಯದಲ್ಲಿ ಮಲಗಿ ನಿದ್ರಿಸುತ್ತದೆ. ಇದು ಸಹಜ ತಾನೇ…. ಎಲ್ಲಾ ಜೀವಿಗಳೂ ಅದರದರ ಕಾಲಕ್ಕೆ ಆಯಾ ಕೆಲಸ ಕಾರ್ಯಗಳನ್ನು ಕಲಿತು ನಡೆಸಿಕೊಂಡು ಹೋಗುತ್ತವೆ.            ನನ್ನ ಹೆಜ್ಜೆಯ ಸದ್ದಿಗೆ ಎಚ್ಚರಗೊಳ್ಳುವ ಮರಿಗಳು ಚಿಂವ್ ಚಿಂವ್ ಎನ್ನುತ್ತಾ ದೊಡ್ಡದಾಗಿ ಬಾಯಿ ಅಗಲಿಸುವುದನ್ನು ನೋಡುವುದೇ ಚಂದ.  ನನಗೆ ಇದೊಂದು ಆಟ. ಆ ಮರಿಗಳಿಗೆ ಎಷ್ಟು ಸಂಕಟವಾಗಿತ್ತೋ ಆ ದೇವರೇ ಬಲ್ಲ. ಈ ದೃಶ್ಯಗಳನ್ನು ಮೊಬೈಲಿನಲ್ಲಿ ಸೆರೆ ಹಿಡಿಯುವ ಬಯಕೆಯಾಗಿ ಮೊಬೈಲ್ ಹಿಡಿದು ಹಟ್ಟಿಯ ಕಡೆಗೆ ನಡೆದೆ. ಎಲ್ಲಿದ್ದನೋ ನನ್ನ ಮಗ…! ಕಣ್ಣೆದುರು ಪ್ರತ್ಯಕ್ಷ. ನನ್ನನ್ನು ತಡೆದು ನಿಲ್ಲಿಸಿ “ಏನು ಆಪುಟಾಣಿಗಳ ವಿಡಿಯೋ ಮಾಡುವ ಯೋಚನೆಯಾ…..?” ಕೇಳಿದ. “ಹೌದು ಎಷ್ಟು ಸುಂದರ ಮರಿಗಳು . ಅವುಗಳ ಚಿಂವ್ ಚಿಂವ್ ಕೂಗು, ಬಾಯಿ ಅಗಲಿಸುವ ದೃಶ್ಯ ಎಲ್ಲವೂ ಅದ್ಭುತ” ಎಂದೆ. “ಇನ್ನೂಕಣ್ಣು ಬಿಡದ ಮರಿಗಳಿಗೆ ಯಾಕೆ ಹಿಂಸೆ ಕೊಡುತ್ತೀ…? ಅವುಗಳಿಗೆ ನಿನ್ನಿಂದಾಗಿ ತೊಂದರೆ “ ಎಂದ. “ತೊಂದರೆ ಏನಿಲ್ಲ. ನಾನು ಅವುಗಳನ್ನು ಮುಟ್ಟುವುದೇ ಇಲ್ಲ. ಸುಮ್ಮನೆ ನೋಡಿ ವಿಡಿಯೋ ಮಾಡಿ ಬರುವೆ” ಎಂದೆ. “ ನಿನ್ನಿಂದಾಗಿ ಆ ಮರಿಗಳ ನಿದ್ರೆ ಹಾಳಾಗಲೂ ಬಹುದು. ನಿನ್ನನ್ನು ಅಲ್ಲಿ ಕಂಡು ಅದರ ಅಮ್ಮ ಹತ್ತಿರ ಬರದೇ ಇರಲೂ ಬಹುದು. ನಿನಗೆ ನೆಮ್ಮದಿಯಲ್ಲಿರುವವರನ್ನು ಕಂಡರೆ ಹೊಟ್ಟೆ ಉರಿಯಾ…? ನಾನು ಬೆಳಗ್ಗೆ ಒಳ್ಳೆ ನಿದ್ದೆಯಲ್ಲಿರುವಾಗಲೂ ಹೀಗೇ ಕಿರಿಕಿರಿ ಮಾಡ್ತಾ ಇರ್ತೀಯ….” ಅಂದ. ಅವನ ಮಾತಿಗೆ ಬೆಲೆ ಕೊಟ್ಟು ಆ ದೃಶ್ಯಗಳನ್ನು ಸೆರೆ ಹಿಡಿಯುವ ಯೊಚನೆ ಬಿಟ್ಟೆ. ಆದರೂ ಸಮಾಧಾನವೇ ಇಲ್ಲ. ಒಂದೆರಡು ಸಲ ಮೊಬೈಲ್ ತರುವ ಪ್ರಯತ್ನ ಮಾಡಿ ಸಿಕ್ಕಿ ಬಿದ್ದದ್ದೂ ಆಯ್ತು. ಮಗನ ಹದ್ದಿನ ಕಣ್ಣನ್ನು ತಪ್ಪಿಸಲು ಸಾಧ್ಯವಾಗಲೇ ಇಲ್ಲ. ಕೊನೆಗೆ ,  ಫ್ಲ್ಯಾಷ್ ಲೈಟ್ ಹಾಗೂ ಮೊಬೈಲ್ ಕಿರಣಗಳು ಪ್ರಾಣಿ ಪಕ್ಷಿಗಳಿಗೆ ಎಷ್ಟು ಹಾನಿಕಾರಕ .ಅದರಲ್ಲೂ ಇನ್ನೂ ಕಣ್ಣು  ಬಿಡದ ಮರಿಗಳಿಗೆ ಎಷ್ಟು ಮಾರಕ. ಇದು ಅಪರಾಧ ಕೂಡಾ….  ಎಂಬುದನ್ನು ಇಂಟರ್ ನೆಟ್ಟಿನಲ್ಲಿ ತೋರಿಸಿಕೊಟ್ಟ. ಮಕ್ಕಳಿಂದಲೂ ನಾವು ಕಲಿಯುವುದು ಸಾಕಷ್ಟಿದೆ ಎಂಬುದನ್ನು ಅರಿತುಕೊಂಡೆ. ಇದಾದ ಮೇಲೆ ಮನಸ್ಸು ಹಟ್ಟಿಯ ಕಡೆಗೆ ಸೆಳೆದರೂ ದೇಹಕ್ಕೆ ಕಡಿವಾಣ ಹಾಕಿ ನಿಲ್ಲಿಸಿದೆ. ದಿನಕ್ಕೊಂದೆರಡು ಬಾರಿ ದೂರದಿಂದಲೇ ನೋಡಿ ಸಮಾಧಾನ ಪಟ್ಟುಕೊಂಡೆ.     ಆ ಹಕ್ಕಿಯ ಹೆಸರೇನೆಂದು ತಿಳಿಯುವ ಕುತೂಹಲದಿಂದ ಗೂಗಲಣ್ಣನಲ್ಲಿ ಜಾಲಾಡಿದೆ. ಹಕ್ಕಿಯನ್ನು ಸ್ಪಷ್ಟವಾಗಿ ನೋಡದ ಕಾರಣ ಗೂಗಲಣ್ಣ ಸರಿಯಾದ ಮಾಹಿತಿ ನೀಡಲಿಲ್ಲ.  ಅಲ್ಲೂ ಒಂದೇ ರೀತಿಯ ಹಕ್ಕಿಗಳು ಹಲವಾರು. ನಮ್ಮ ಆತ್ಮೀಯರೊಬ್ಬರಲ್ಲಿ ವಿಚಾರಿಸಿದಾಗ ,ಈ ಹಕ್ಕಿ ಕೆಂಪು ಕೊರಳಿನ ನೊಣ ಹಿಡುಕ (Tickle’s Blue flycatcher) ಎಂದು ತಿಳಿಯಿತು. ದಿನ ನಿತ್ಯ ನವಿಲು, ಕಾಗೆ , ಕೊಕ್ಕರೆ , ಮರಕುಟಿಗ , ಮಡಿವಾಳ ಹಕ್ಕಿಗಳನ್ನು ನೋಡಿ ಪರಿಚಯವಿದ್ದರೂ ಈ ಹೆಸರು ನನಗೆ ಹೊಸದು.        ಕೊನೆಗೂ ಆ ದಿನ ಬಂದೇ ಬಂತು…….. ನಾನು ಹಟ್ಟಿಯ ಕಡೆಗೆ ಹೋಗುವಾಗ ದೊಡ್ಡ ಹಕ್ಕಿ ಅಲ್ಲೇ ಪಕ್ಕದಲ್ಲಿದ್ದ ಮರದಲ್ಲಿ ಕುಳಿತು ಜೋರಾಗಿ ಚೀರುತ್ತಿತ್ತು. ಆಶ್ಚರ್ಯವೆಂದರೆ ಯಾವತ್ತೂ ನನ್ನನ್ನು ಕಂಡ ಕೂಡಲೇ ಹಾರಿ ಹೋಗುತ್ತಿದ್ದ ಹಕ್ಕಿ ಇಂದು ಜಾಗ ಬಿಟ್ಟು ಕದಲಲೇ ಇಲ್ಲ. ಗೂಡಿನ ಕಡೆಗೆ ನೋಡಿದೆ . ಮರಿಗಳಿಲ್ಲ. ನನ್ನೆದೆ ಧಸಕ್ಕೆಂದಿತು. ಏನಾಗಿರಬಹುದು…..?  ಬೇರೆ ಯಾವುದಾದರೂ ಹಕ್ಕಿಗಳು ಧಾಳಿ ಮಾಡಿರಬಹುದೇ…….? ಹಾವೋ… ಬೆಕ್ಕೋ…… ಇನ್ಯಾವುದಾದರೂ ಪ್ರಾಣಿಗಳೋ ಆಕ್ರಮಣ ಮಾಡಿರಬಹುದೇ….? ನನ್ನ ಕೈ ಕಾಲುಗಳಲ್ಲಿ ಸಣ್ಣ ನಡುಕ. ನನಗೇ ಇಷ್ಟು  ಭಯವಾಗಿದೆ. ಇನ್ನು ಆ ಕಂದಮ್ಮಗಳ  ಅಪ್ಪ ಅಮ್ಮನ ಪರಿಸ್ಥಿತಿ …….. ಅಯ್ಯೋ…. ಯಾರಿಗೂ ಬೇಡಪ್ಪಾ…… ಆದರೂ ನನ್ನ ಕಣ್ಣುಗಳು ಸುತ್ತ ಮುತ್ತ ಹುಡುಕುತ್ತಲೇ ಇದ್ದವು. ಮರದ ಮೇಲಿದ್ದ ಹಕ್ಕಿಯ ಚೀರಾಟವನ್ನು ಗಮನಿಸಿದೆ. ಅದರ ದೃಷ್ಟಿ ಅಲ್ಲೇ ಕೆಳಗೇ ಇತ್ತು. ಆ ಕಡೆಗೆ ನೋಡಿದೆ. ಅಬ್ಬಾ…..ಮರಿ ಅಲ್ಲೇ ಇದೆ. ಹಾಗಿದ್ದರೆ ಹಕ್ಕಿಯ ಕಿರುಚಾಟ ಯಾಕಾಗಿ…..? ಆ ಮರಿ ಗೂಡಿನಿಂದ ಅಲ್ಲಿವರೆಗೆ ಹೇಗೆ ಬಂತು…? ಹೋ…… ಮಗ ಮೊತ್ತ ಮೊದಲ ಬಾರಿಗೆ ಅಂಬೆಗಾಲಿಟ್ಟು ಮುಂದೆ ಮುಂದೆ ಬರುವಾಗ ಮುಗ್ಗರಿಸಿದ್ದು , ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯಲು ಅಪ್ಪನ ಕೈಯ ಆಸರೆ ಬಯಸಿದ್ದು ಒಂದೊಂದಾಗಿ ಕಣ್ಣ ಮುಂದೆ ಬಂತು. ಅಂದರೆ ಈ ಮರಿಯೂ ಹಾರಲು ಕಲಿಯುತ್ತಿದೆ. ಮರದಲ್ಲಿದ್ದ ಹಕ್ಕಿ ಹುರಿದುಂಬಿಸುತ್ತಿದೆ. ಇನ್ನಷ್ಟು ಹತ್ತಿರದಿಂದ ಮರಿಯ ಫೊಟೋ ತೆಗೆಯಲು  ಹತ್ತಿರ ಹತ್ತಿರ ಹೋಗುತ್ತಿದ್ದಂತೆ ಆ ಮರಿಯೂ ಪುರ್ರನೆ ಹಾರಿ ಹೋಯ್ತು. ಅಷ್ಟು ಹೊತ್ತು ಚೀರಾಡುತ್ತಿದ್ದ ಹಕ್ಕಿ ಸಂತೋಷದಿಂದ ಹಾಡುತ್ತಾ ಹಾರಿತು. ಹಕ್ಕಿ ಮನೆಯೊಂದಿಗೆ ನನ್ನ ಮನವೂ ಬರಿದಾಯ್ತು.       ಆ ಗೂಡು ಹಕ್ಕಿ ಜೋಡಿಯ ನಿರೀಕ್ಷೆಯಲ್ಲಿದೆಯೋ……. ಇಲ್ಲವೋ….  ನಾನರಿಯೆ. ನಾನಂತೂ ಇನ್ನೊಂದು ಹಕ್ಕಿ ಜೋಡಿಯ ನಿರೀಕ್ಷೆಯಲ್ಲಿರುವೆ. ************

ಅನುಭವ Read Post »

You cannot copy content of this page

Scroll to Top