ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಬದುಕು ಎಷ್ಟೊಂದು ಸುಂದರ

ಲೇಖನ ಚಿಕ್ಕ ಪುಟ್ಟ ಸಂಗತಿಗಳಲ್ಲೇ ಸಂತೃಪ್ತಿ ಕಾಣುತ್ತಿರಿ ಆಗ ಬದುಕು ಎಷ್ಟೊಂದು ಸುಂದರ. ಪಲ್ಲವಿ ಪ್ರಸನ್ನ ಬೆಳಗಾಗಲೆoದೆ ಕತ್ತಲು ,ಗೆಲ್ಲಲೆoದೆ ಸೋಲು,ನಗುವಿನ ಜೊತೆ ದುಃಖ ಇದ್ದೇ ಇರುತ್ತದೆ ,ಅದರೂ ಚಿಕ್ಕ ಪುಟ್ಟ ಸಂಗತಿಗಳಲ್ಲೇ ನಾವು ಆನಂದ ಅನುಭವಿಸುತ್ತೇವಲ್ಲ ಅದು ನಮಗೆ ಅಪ್ಪಟ ಆರೋಗ್ಯ ,ಉಲ್ಲಾಸಿತರಾಗಿಡಲು ಸಹಾಯಮಾಡುತ್ತದೆ. ತಲೆ ಬಾಚಿಕೊಳ್ಳುವಾಗ ಉದುರಿದ ಕೂದಲ ಬಗ್ಗೆ  ಕೊರಗದೇ ಇದ್ದ ಕೂದಲನ್ನು ನೇವರಿಸುತ್ತ ಅದರ ಆರೈಕೆಯಲಿ ಮಗ್ನವಾಗಿ ಖುಷಿ ಅನುಭವಿಸಬೇಕು. ಒಂದು ಒಳ್ಳೆ ಪುಸ್ತಕವನ್ನು ಓದುವಾಗ ಅದರ ಇಂಚಿಂಚೂ ,ಪ್ರತೀ ಸಾಲನ್ನೂ ಸವಿಯುತ್ತ ಅದರಲ್ಲಿ ನಿಮ್ಮ ಪರಕಾಯ ಪ್ರವೇಶವಾಗುವಂತೆ ಓದಿದರೆ ಆ ಓದಿನಲ್ಲೂ ಒಂಥರಾ ನಿರಾಳ.ಆಕಳು ಕರೆಯುವಾಗಲೂ ಸಹ ಹಾಡುಹೇಳಿಕೊಳ್ಳುತ್ತಾ ಅದರ ಮೈ ದಡವಿ ,ಅದ್ಭುತ ಅನುಭವ ನಿಮಗಾಗುತ್ತದೆ. ಮಗು ನೀವೊಬ್ಬರೆ ಇರುವಾಗ ಅಪ್ಪಿಕೊಂಡು ಮುದ್ದು ಮಾಡುವುದ ಅನುಭವಿಸಿ ನೋಡಿ ಅದು ಬಿಟ್ಟು ನನಗೆ ಕೆಲಸ ಇದೆ ಹೋಗೋ ಆಚೆ ಎಂದು ದೂರ ತಳ್ಳಿದರೆ ಪಾಪ ಮಗುವಿಗೂ ಬೇಸರ ನಿಮಗೂ ಕಳವಳ.ನನ್ನ ಮಗನಿಗೆ ನಾನು ಅವನು ಮಲಗಿ ನಿದ್ರಿಸುವಾಗ ಸಣ್ಣದಾಗಿ ಮುತ್ತು ಕೊಡಬೇಕೆನಿಸುತ್ತದೆ ,ನನ್ನ ಯಜಮಾನರು ಮಲಗಿರುವವನ ಏಕೆ ಮುದ್ದೀಸ್ತೀಯಾ ಅಂತ ಬಯ್ದರೂ ಮೆಲ್ಲಗೆ ಎಚ್ಚರ ಆಗದಂತೆ ಪಪ್ಪಿ ಕೊಡುತ್ತೇನೆ .ಇದರಲ್ಲೇ ಏನೋ ಒಂಥರಾ ಹಿತ .ನೀವೂ ಅನುಭವಿಸಿ ನೋಡಿ. ಹಾಗೆಯೇ  ತರಕಾರಿ ಗಿಡಕ್ಕೆ ನೀರುಣಿಸುವುದು, ಹೂವಿನ ಗಿಡದ ಆರೈಕೆಯಲ್ಲಿ ಹೂವು ನಳ ನಳಿಸುವಂತಾದರೆ ಅದರ ಸೌಂಧರ್ಯವನ್ನು ಆಸ್ವಾಧಿಸುತ್ತ ,ನಮಗೆ ಎಷ್ಟು ಸಮಯವಿದ್ದರೂ ಅದು ಕಡಿಮೆಯೇ, ಹಾಗೆಯೇ ಏನಾದರೂ ಬರೆಯುವ ಹವ್ಯಾಸವಿದ್ದರೆ ಒಂಟಿಯಾಗಿ ಕುಳಿತು ಅನುಭವಿಸಿ ಬರೆದಾಗ ನಾಲ್ಕು ಜನರು ಚೆಂದ ಬರಿದ್ಯೆ ಎನ್ನುವ ಮಾತು ನಮ್ಮಲ್ಲಿ ಸಾರ್ಥಕ್ಯ ಭಾವನೆ ,ಸ್ಫೂರ್ತಿ ಮೂಡಿಸುತ್ತದೆ .ಇಷ್ಟೆಲ್ಲದರ ಮಧ್ಯೆ ನಮಗೆ ಬೇರೆಯವರ ಸುದ್ಧಿ ಹೇಳಲು ,ಕೇಳಲು ಸಮಯವೂ ಇರುವುದಿಲ್ಲ,ಇದ್ದರೂ ಇದು ಕಾಲ ಹರಣದ ಜೊತೆ ನಮ್ಮ ನೋವಿಗೆ ಕಾರಣ. ಯಾರೇನೆಂದರೂ ಒಂಟಿಯಾಗಿ ನಮ್ಮ ಚಟುವಟಿಕೆಯಲ್ಲಿ ತೊಡಗುವುದೇ ಉತ್ತಮ. ಮೌನಕ್ಕಿಂತ ಸುಂದರ ಮಾತಿಲ್ಲ.ಕಾಡಿ ಬೇಡಿ ಪಡೆಯುವ ಮಿತ್ರರಿಗಿಂತ ,ನೆರೆ ಹೊರೆ ಯವರಿಗಿಂತ ನಿಸರ್ಗ ತುಂಬಾ ನಿಸ್ವಾರ್ಥಿ ,ಅದು ನಮಗೆ ಏನೆಲ್ಲ ಕೊಟ್ಟಿತು ,ಏನೂ ಬಯಸುವುದಿಲ್ಲ ,ನಿಮ್ಮದೇ ತೋಟ ಇದ್ದರೆ ಒಂದು ಸುತ್ತು ತಿರುಗಿ ಹಸಿರನ್ನು ಆಸ್ವಾದಿಸಿ . ಇನ್ನೂ ಅಡಿಗೆ ಕೂಡಾ ಪ್ರೀತಿಯಿಂದ ಮಾಡಿ ಬಡಿಸಿ ,ಅದರಲ್ಲಿ ಮನೆಯ ಜನಗಳ ತೃಪ್ತಿ ಗಮನಿಸಿ ಇದರಿಂದ ನೀವು ಊಟ ಮಾಡದಿದ್ದರೂ ನಿಮ್ಮ ಹೊಟ್ಟೆ ತುಂಬುತ್ತದೆ. ಸದಾ ಒಂದಲ್ಲಾ ಒಂದು ಕೆಲಸದಲ್ಲಿದ್ದರೆ ಯಾವ ಚಿಂತೆ ನೋವು ನಮಗೆ ಬಾಧಿಸುವುದಿಲ್ಲ.ಇದು ನಾನು ಕಂಡು ಕೊಂಡ ಸತ್ಯ. ಇದೇ ಅನಿವಾರ್ಯ,ಇದೇ ಸತ್ಯ,ಇದೇ ಜೀವನ ಎಂದು ನಮ್ಮ ಮನಸ್ಸಿಗೆ ನಾವೇ ಸಾಂತ್ವನಿಸುತ್ತ ಅಳುಕನ್ನು ದೂರ ಮಾಡುತ್ತಾ ಅಲ್ಲೊಂದು ಶಾಂತಿ,ಪ್ರೀತಿ ,ಸಹನೆಯ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು.ಆವಾಗ ನಿಮ್ಮ ಜೀವನ ಸದಾ  ಸುಂದರವಾಗಿರುತ್ತದೆ. *************************************

ಬದುಕು ಎಷ್ಟೊಂದು ಸುಂದರ Read Post »

ಇತರೆ, ಪ್ರಬಂಧ

ಬೀದಿಯ ಪ್ರಪಂಚ….

ಲಲಿತ ಪ್ರಬಂಧ ಬೀದಿಯ ಪ್ರಪಂಚ…. ಟಿ.ಎಸ್.ಶ್ರವಣಕುಮಾರಿ ಹಾದಿ ಬೀದಿಗಳಿಗೆ ತನ್ನದೇ ಒಂದು ಆಕರ್ಷಣೆಯಿದೆ. ಅದರದ್ದೇ ಒಂದು ಪ್ರಪಂಚ. ಎಂಥ ಅಳುತ್ತಿರುವ ಪುಟ್ಟ ಮಕ್ಕಳನ್ನೂ ಎತ್ತಿಕೊಂಡು ಬೀದಿಗೆ ಕರೆದುಕೊಂಡು ಬಂದರೆ ಕೆಲವೇ ಕ್ಷಣಗಳಲ್ಲಿ ಅವುಗಳ ಅಳು ಮಾಯ. ಅವುಗಳಿಗೆ ತೋರಿಸುವುದಕ್ಕೆ ಇಡಿಯ ಪ್ರಪಂಚವೇ ಅಲ್ಲಿದೆ. “ಪುಟ್ಟೂ ಅಲ್ನೋಡು ಕಾರು.. ಬಂತು ಬಂತು ಬಂತು…. ಈಗ ಸ್ಕೂಟರ್ ನೋಡೋಣ.. ಮಾಮಾ ಬಂದ್ಮೇಲೆ ಸ್ಕೂಟರ್‌ನಲ್ಲಿ ರೌಂಡ್ ಹೋಗ್ತೀಯಾ…  ಇದೇನಿದು..? ಸ್ಕೂಲು ವ್ಯಾನು.. ಮುಂದಿನ್ವರ್ಷದಿಂದ ನೀನೂ ಸ್ಕೂಲಿಗೆ ಹೋಗ್ತೀಯಾ ಅಣ್ಣಾ ತರ…. ಇಲ್ನೋಡು ಮರ.. ಅಬ್ಭಾ! ಎಷ್ಟೊಂದು ಹೂವು ನೋಡು… ಅಲ್ನೋಡು ಕಾಕಿ `ಕಾವ್ ಕಾವ್’ ಅದರ ಬಳಗಾನೆಲ್ಲಾ ಕರೀತಿದೆ. ಹೌದಾ.. ಹಾರಿಹೋಯ್ತಾ ಅದು. ಅಲ್ಲೇ ನೋಡ್ತಾ ಇರು ಈಗ ಗಿಣಿಮರಿ ಬರತ್ತೆ ಅಲ್ಲಿ… ನೋಡ್ದ್ಯಾ ನೋಡ್ದ್ಯಾ ಎಷ್ಟು ಚೆನ್ನಾಗಿದೆ ನೋಡು.. ಈಗ ನೋಡು ಅದರ ಫ್ರೆಂಡೂ ಬಂತು.. ಏನೋ ಮಾತಾಡ್ಕೊಂಡು ಒಟ್ಗೆ ಹಾರೋದ್ವು. ಇಲ್ನೋಡಿಲ್ನೋಡು ಪಕ್ಕದ್ಮನೆ ಮೀನಾ ಅಜ್ಜಿ ಒಣಗಿ ಹಾಕಿರೋ ಬೇಳೇನ ಎಷ್ಟೊಂದು ಗುಬ್ಬಿಗಳು ತಿಂತಾ ಇವೆ.” ಅಷ್ಟರಲ್ಲಿ ಎದುರಂಗಡಿಯ ಬದರಿ ಮಾಮ ಪುಟ್ಟೂನ ಕರೀತಾನೆ “ಬರ್ತೀಯಾ ನಮ್ಮಂಗಡೀಗೆ ಬಿಸ್ಕತ್ತು, ಚಾಕಲೇಟು ಎಲ್ಲಾ ಕೊಡ್ತೀನಿ.” “ಆಮೇಲ್ಬರ್ತೀನಿ” ಅನ್ನೂ ಮಾಮಂಗೆ… ಅಲ್ನೋಡು ತರಕಾರಿ ಗಾಡಿ ಬರ್ತಾ ಇದೆ. ಅಜ್ಜೀನ ಕೇಳ್ಕೊಂಡು ಬರೋಣ್ವಾ ಏನು ತರಕಾರಿ ಬೇಕೂಂತ” ….. ಹೀಗೆ ಮಾತಾಡಿಸ್ತಾ ಇದ್ರೆ ಟೈಂಪಾಸಾಗದೆ ಅಳ್ತಾ ಇದ್ದ ಮಗು ಬೇರೆ ಪ್ರಪಂಚಕ್ಕೇ ಹೋಗ್ಬುಡತ್ತಲ್ವಾ… ಮಗೂನೆ ಯಾಕೆ?!.. ನಮಗೂ ಮನೆಯ ಏಕತಾನತೆ ಬೇಸರ ಬಂದರೆ ಒಂದು ಸ್ವಲ್ಪ ಹೊತ್ತು ಮನೆಯ ಮುಂದೋ ಅಥವಾ ಬಾಲ್ಕನಿಯ ಕಿಟಕಿಯೆದುರೋ ಕೂತು ಹಾಗೇ ಬೀದಿಯ ಕಡೆ ನೋಡುತ್ತಿದ್ದರೆ ಎಷ್ಟು ವೈವಿಧ್ಯಮಯ ಪ್ರಪಂಚದಲ್ಲಿ ನಾವೂ ಕಳೆದುಹೋಗುತ್ತೇವೆ…. ಏಳುವಾಗಲೇ `ಸೊಪ್ಪೋ ಸೊಪ್ಪು’ ಎಂದು ಕೂಗಿಕೊಂಡು ಬರುವ ಮುದುಕನ ಕರೆಯಿಂದಲೇ ನನಗೆ ದಿನವೂ ಬೆಳಗಾಗುವುದು. ಬೆಳಗಿನ ಐದು ಗಂಟೆಗೆ ಮುಲ್ಲಾ `ಏಳಿ ಬೆಳಗಾಯಿತು’ ಎಂದು ಕರೆದಾಗ ಎಚ್ಚರಾದರೂ `ಸ್ವಲ್ಪ ಹೊತ್ತು ಬಿಟ್ಟು ಏಳೋಣ’ ಎಂದು ಮುದುರಿಕೊಂಡವಳನ್ನು ಆರೂವರೆಯಾಯಿತು ಇನ್ನಾದರೂ ಏಳು ಎಂದು ಎಬ್ಬಿಸುವುದು ಸೊಪ್ಪಿನವನ ಕರೆಯೇ. ಎದ್ದ ಐದು ಹತ್ತು ನಿಮಿಷಗಳಲ್ಲಿಯೇ `ಹಾಲು’ ಎಂದು ಕೂಗುತ್ತಾ ಹಾಲಿನ ಪ್ಯಾಕೆಟ್ಟನ್ನು ತಂದಿಡುವ ಬದರಿ. `ಹೂವು’ ಎಂದು ಹೂವಿನ ಸರವನ್ನು ಬಾಗಿಲಿಗೆ ಸಿಕ್ಕಿಸಿ ಹೋಗುವ ಹೂವಮ್ಮ. ಕಾಫಿಯ ಲೋಟ ಹಿಡಿದು ಬರುವ ವೇಳೆಗೆ ದಿನ ಪತ್ರಿಕೆ ಎಸೆದು ಹೋಗುವ ಹುಡುಗ…. ಎಲ್ಲರೂ ಹೊರಗಿನ ಜಗತ್ತಿನ ಸಂಪರ್ಕವಾಹಕರು. ಹೂವಿನ ಗಾಡಿಯ ಹಿಂದೆಯೇ ತೆಂಗಿನ ಕಾಯಿ ಮಾರುವವನು ಬರುತ್ತಾನೆ. ಎಂಟು ಗಂಟೆಗೆ ತರಕಾರಿ ಗಾಡಿಯವರ ಸಾಲು ಶುರುವಾಗುತ್ತದೆ. ಕೆಲವು ಗಾಡಿಗಳು ಒಂದೊಂದೇ ತರಕಾರಿಯದು, ಟೊಮೇಟೋ, ಈರುಳ್ಳಿ, ಅವರೆ ಕಾಯಿ’ ಇಂತವು. ಇನ್ನು ಕೆಲವು ಡಿಪಾರ್ಟ್-ಮೆಂಟಲ್ ಸ್ಟೋರಿನ ಹಾಗೆ ಶುಂಟಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪಿನಿಂದ ಶುರುವಾಗಿ ಎಲ್ಲ ಬಗೆಯ ತರಕಾರಿಗಳನ್ನೂ ಕಣ್ಣಿಗಂದವಾಗುವ ಹಾಗೆ ಜೋಡಿಸಿಕೊಂಡು ಬಂದ ತರಕಾರಿ ಗಾಡಿಗಳು. ಮನೆಯೊಳಗೇ ಇದ್ದರೂ, ಅವರ ಧ್ವನಿಯ ಮೇಲೆ ಇಂತದೇ ಗಾಡಿ ಬಂದಿದೆಯೆಂದು ಅಂದಾಜಾಗುವಷ್ಟರ ಮಟ್ಟಿಗೆ ಅವರ ಧ್ವನಿ ಮೆದುಳಿನೊಳಗೆ ಮುದ್ರಿತವಾಗಿರುತ್ತದೆ. ಹೀಗೇ ದಿನಾ ಬೆಳಗ್ಗೆ ಏಳೂವರೆಗೆ `ರೋಜಾ ಹೂವು ಶ್ಯಾವಂತ್ಗೆ ಹೂವೂ..’ ಅಂತ ಗೊಗ್ಗರು ದನಿಯಲ್ಲಿ ಕೂಗಿಕೊಂಡು ಬರುತ್ತಿದ್ದ ಮುದುಕನ ಧ್ವನಿ ಮೂರ್ನಾಲ್ಕು ದಿನ ಕೇಳದೇ ಏನೋ ಕೊರೆಯಾದಂತೆನಿಸುತ್ತಿತ್ತು. ನಂತರ ಅವನು ಮುಂದಿನ ಬೀದಿಯಲ್ಲಿ ಗಾಡಿ ತಳ್ಳಿಕೊಂಡು ಹೋಗುವಾಗ ಸೇವಾಕ್ಷೇತ್ರ ಆಸ್ಪತ್ರೆಯ ಬಳಿ ಹೃದಯಾಘಾತವಾಗಿ ದಾರಿಯಲ್ಲೇ ಸತ್ತಿದ್ದ ಸುದ್ದಿ ಕೇಳಿದಾಗ ಬಂದುಗಳೊಬ್ಬರನ್ನು ಕಳೆದುಕೊಂಡ ಭಾವ ಬಹಳದಿನಗಳು ಆ ಹೊತ್ತಿಗೆ ಕಾಡುತ್ತಿತ್ತು. ಹನ್ನೊಂದು ಗಂಟೆಯ ವೇಳೆಗೆ ಬರುವ ಎಳನೀರು ಮಾರುವವನು, ಹಣ್ಣಿನ ಬುಟ್ಟಿ ಹೊತ್ತು ಬರುವವನು “ಪಕ್ಕದವ್ರಿಗೆ ಹೇಳ್ಬೇಡಿ. ನಿಮಗಂದ್ರೆ ಎರಡು ರೂಪಾಯಿ ಕಮ್ಮಿಗೇ ಕೊಡ್ತಿದೀನಿ” ಎಂದು ಎಲ್ಲರ ಮನೆಯಲ್ಲೂ ಹಾಗೆ ಹೇಳಿಯೇ ವ್ಯಾಪಾರ ಮಾಡಿದ್ದರೂ, ಅವನು ಹೇಳಿದ್ದು ನಮಗಷ್ಟೇ ನಿಜವೆಂದು ಆ ಕ್ಷಣಕ್ಕಾದರೂ ನಂಬುವಂತಾಗುತ್ತದೆ. ಮಧ್ಯಾನ್ಹದ ವೇಳೆ ಬರುವ ಪೈನಾಪಲ್, ಸೌತೆಕಾಯಿ, ಇಂತವನ್ನು ಹೆಚ್ಚಿಕೊಡುವ ಗಾಡಿಗಳು, ಅಲಂಕಾರಿಕ ಸಸ್ಯಗಳು ಮತ್ತು ಹೂಕುಂಡಗಳನ್ನಿಟ್ಟುಕೊಂಡು ಬರುವ ಕೈಗಾಡಿಗಳು, ಸಾಯಂಕಾಲ ನಾಲ್ಕು ಗಂಟೆಯಿಂದ ಶುರುವಾಗುವ ಮಲ್ಲಿಗೆ ಮೊಗ್ಗು, ಕಳ್ಳೇ ಪುರಿ, ಚುರುಮುರಿ-ಪಾನೀಪೂರಿ ಗಾಡಿ, ಠಣಾ ಠಣಾ ಎಂದು ಸದ್ದು ಮಾಡುತ್ತಾ ಕಡಲೇಕಾಯನ್ನು ಹುರಿಯುವವನ ಗಾಡಿ ಎಲ್ಲರೂ ರಂಗಸ್ಥಳದ ಮೇಲಿನ ತಮ್ಮ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸುವವರಂತೆ ಆಯಾಕಾಲಕ್ಕೆ ಬಂದು ಹೋಗುತ್ತಿರುತ್ತಾರೆ. ಇವರೆಲ್ಲಾ ನಿಯತಕಾಲಿಕರಂತಿದ್ದರೆ ಸೋಫಾ ರಿಪೇರಿ, ಛತ್ರಿ, ಪಾದರಕ್ಷೆ ರಿಪೇರಿಯವರು, ಚಾಕು, ಈಳಿಗೆಗಳನ್ನು ಚೂಪು ಮಾಡುವವರು, ಚಾಪೆ, ನೆಲವಾಸು, ಮತ್ತು ಕಾರ್ಪೆಟ್ಟುಗಳನ್ನು ಮಾರುವವರು, ಪ್ಲಾಸ್ಟಿಕ್, ಅಲ್ಯುಮಿನಿಯಂ, ಮತ್ತು ಸ್ಟೀಲ್ ಪಾತ್ರೆ ಮಾರಾಟಗಾರರು, ಕಡೆಗೆ ರಂಗೋಲಿ, ಪೊರಕೆ, ಮಕ್ಕಳ ಬಟ್ಟೆಗಳು, ಆಟಿಕೆಗಳು, ಪೆಟ್ಟಿಕೋಟು ಇತ್ಯಾದಿಗಳನ್ನು ಮಾರುವವರು ಅತಿಥಿ ನಟರಂತೆ ಆಗೀಗ ಬಂದು ತಮ್ಮ ದರ್ಶನ ಭಾಗ್ಯವನ್ನು ಇತ್ತು ಹೋಗುತ್ತಿರುತ್ತಾರೆ. ಇದಷ್ಟೇ ಬೀದಿ ಪ್ರಪಂಚವೇ? ಖಂಡಿತಾ ಅಲ್ಲ. ಈಗ ಅಂಚೆಯಣ್ಣ ಇಲ್ಲ ಬಿಡಿ; ಅವನಾದರೆ ಒಂದು ನಿಗದಿತ ಸಮಯದಲ್ಲಾದರೂ ಬರುತ್ತಿದ್ದ. ಈಗ ಅವನ ಬದಲಿಗೆ ಕೊರಿಯರ್ ಹುಡುಗರು ಹೊತ್ತು ಗೊತ್ತಿಲ್ಲದೆ ಬಾಗಿಲು ತಟ್ಟುತ್ತಾರೆ. ಮೊದಲಿಗೆ ದಿನವೂ ಬರುತ್ತಿದ್ದ ಅಂಚೆಯಣ್ಣ ಮನೆಯವರೆಲ್ಲರಿಗೆ ಪರಿಚಿತನಾಗಿರುತ್ತಿದ್ದ. ಎಷ್ಟೋ ಹಳ್ಳಿಗಳಲ್ಲಿ, ಸಣ್ಣ ಪುಟ್ಟ ಊರುಗಳಲ್ಲಿ ಸಂದೇಶವಾಹಕನಾಗಿಯೂ ಇರುತ್ತಿದ್ದ. ಓದು ಬಾರದವರಿಗೆ ಪತ್ರದಲ್ಲಿದ್ದುದನ್ನು ಓದಿ ಹೇಳುತ್ತಿದ್ದ. ಬಿಸಿಲು ಹೊತ್ತಿನಲ್ಲಿ ಬಂದವನಿಗೆ ಒಂದು ಲೋಟ ಪಾನಕವೋ, ಮಜ್ಜಿಗೆಯೋ ಕೊಡುವ ಪರಿಪಾಠವೂ ಕೆಲವು ಮನೆಗಳಲ್ಲಿರುತ್ತಿತ್ತು. ಬಂಧುವಲ್ಲದಿದ್ದರೂ ಆತ ಮಿತ್ರರ ಗುಂಪಿನಲ್ಲಿ ಸೇರಿ ಹೋಗುತ್ತಿದ್ದ. ಈಗಲಾದರೋ ದಿನಕ್ಕೊಬ್ಬ ಕೊರಿಯರ್ ಹುಡುಗರು. ಯಾರು ನಿಜವಾದವರೋ, ಯಾರು ಮೋಸಗಾರರೋ ಒಂದೂ ಅರಿವಾಗದೆ ಅವರನ್ನು ಬಾಗಿಲ ಹೊರಗೇ ನಿಲ್ಲಿಸಿ ಗ್ರಿಲ್ ಬಾಗಿಲಿನ ಕಿಂಡಿಯಿಂದಲೇ ಮಾತಾಡಿಸಿ ಲಕೋಟೆಯಾದರೆ ಅಲ್ಲಿಂದಲೇ ತೆಗೆದುಕೊಂಡು, ಪಾರ್ಸೆಲ್ ಆದರೆ, ಅದರ ಹಿಂದು ಮುಂದನ್ನೆಲ್ಲಾ ವಿಚಾರಿಸಿಕೊಂಡು ನಂತರ ಬಾಗಿಲನ್ನು ಸ್ವಲ್ಪವೇ ತೆರೆದು ಡಬ್ಬಿಯನ್ನು ತೆಗೆದುಕೊಂಡ ತಕ್ಷಣ ಮತ್ತೆ ಬಾಗಿಲು ಮುಚ್ಚುವುದು ಸಹಜವೇ ಆಗಿದೆ. ಇನ್ನು ಮನೆ ಬಾಗಿಲು ತಟ್ಟುವ ಮಾರಾಟಗಾರರದಂತೂ ಇನ್ನೊಂದು ಉಪಟಳ. ಪುಸ್ತಕ, ದಿನೋಪಯೋಗಿ ವಸ್ತುಗಳಿಂದ ಹಿಡಿದು ಮಕ್ಕಳ ಡೈಪರ್ ವರೆಗೆ ಎಲ್ಲವನ್ನೂ ಮನೆಬಾಗಿಲಿಗೆ ತರುತ್ತಾರೆ. ನಕಲಿಯೆಷ್ಟೋ, ಅಸಲಿಯೆಷ್ಟೋ ದೇವನೇ ಬಲ್ಲ! ಬೀದಿಯ ಮೇಲೆ ಬರುವ ಮೆರವಣಿಗೆ, ದೇವರ ಉತ್ಸವಗಳೆಂದರೆ ಮಕ್ಕಳಾದಿಯಾಗಿ ದೊಡ್ಡವರವರೆಗೂ ಎಲ್ಲರಿಗೂ ಆಕರ್ಷಣೆ. ಅಂತಹ ಸದ್ದು ಕಿವಿಗೆ ಬಿದ್ದಿತೆಂದರೆ ಸಾಕು… ಮನೆಯಲ್ಲಿರುವವರೆಲ್ಲರೂ ಬೀದಿಯ ಕಡೆಗೇ… ನಾನು ಎಳೆಯದರಲ್ಲಿ ನೋಡುತ್ತಿದ್ದ ಮಾರ್ಗಶಿರ ಮಾಸದ ಬೆಳಗಿನ ಝಾವದಲ್ಲಿ ತಾಳ ತಟ್ಟಿಕೊಂಡು ತನ್ನದೇ ಒಂದು ಅಲೌಕಿಕ ಛಾಪನ್ನು ನಿರ್ಮಿಸಿಕೊಂಡು ಬರುತ್ತಿದ್ದ ದತ್ತ ಜಯಂತಿಯ ಭಜನೆ, ರಥಸಪ್ತಮಿಯಲ್ಲಿ ಸುಶ್ರಾವ್ಯ ವಾಲಗದೊಂದಿಗೆ ಬರುತ್ತಿದ್ದ ತೇರು, ಆಡಿ ಕೃತ್ತಿಕೆಯ ದಿನದಂದು ಗುಡ್ಡೇಕಲ್ಲಿನ ಸುಬ್ರಹ್ಮಣ್ಯೇಶ್ವರನ ದೇವಸ್ಥಾನಕ್ಕೆ `ಹರೋಹರ’ ಎಂದು ಕೂಗುತ್ತಾ ಬೇವಿನ ಮತ್ತು ಅರಿಶಿನ ಬಣ್ಣದ ಉಡುಗೆಯುಟ್ಟು ಕಾವಡಿ ಎತ್ತಿಕೊಂಡು ಹೋಗುತ್ತಿದ್ದ, ಕೆಲವರು ಭೀಕರವಾಗಿ ಕೆನ್ನೆಯನ್ನೂ, ನಾಲಗೆಯನ್ನೂ ಕಂಬಿಯಿಂದ ಚುಚ್ಚಿಕೊಂಡು, ಮತ್ತೆ ಕೆಲವರು ಬೆನ್ನಿಗೆ ಕೊಕ್ಕೆಯನ್ನು ಸಿಕ್ಕಿಸಿಕೊಂಡು ಎಳೆದುಕೊಂಡು ಹೋಗುತ್ತಾ ನಮ್ಮ ಮನದಲ್ಲಿ ಭಕ್ತಿಯೊಂದಿಗೆ ಭಯವನ್ನೂ ಹುಟ್ಟಿಸುತ್ತಿದ್ದ ಭಕ್ತರ ಗುಂಪು… ವಿಜಯ ದಶಮಿಯ ದಿನ ಊರಿನ ಎಲ್ಲ ದೇವರೂ ಬನ್ನಿ ಕಡಿಯುತ್ತಿದ್ದ ನೆಹರೂ ಮೈದಾನಕ್ಕೆ ಮೆರವಣಿಗೆ ಹೋಗುತ್ತಿದ್ದ ದೃಶ್ಯ…  ಎಲ್ಲವೂ ನನ್ನ ನೆನಪಿನ ಕೋಶದಲ್ಲಿ ಭದ್ರವಾಗಿ ಬೇರುಬಿಟ್ಟು ಕುಳಿತುಬಿಟ್ಟಿವೆ. ಹೀಗೇ ಒಂದು ಆಡಿ ಕೃತ್ತಿಕೆಯ ದಿನ ನಾವೆಲ್ಲರೂ ಕಾವಡಿಯ ಮೆರವಣಿಗೆಯನ್ನು ನೋಡಲು ಬೀದಿಗೆ ಬಂದು ನಿಂತಿದ್ದೆವು. ನಮ್ಮ ಮನೆಯ ಕೆಲಸದಾಕೆ ಮುನಿಯಮ್ಮನೂ ನಮ್ಮ ಜೊತೆಗೇ ನಿಂತಿದ್ದವಳಿಗೆ ಅದೇನಾಯಿತೋ ಇದ್ದಕ್ಕಿದ್ದಂತೆ ಅರೆಗಣ್ಣಿನಲ್ಲಿ ಎರಡೂ ಕೈಗಳನ್ನು ತಲೆಯಮೇಲೆ ಜೋಡಿಸಿ ಮುಗಿದುಕೊಂಡು ಮೆರವಣಿಗೆಯ ಹಿಂದೆಯೇ ಓಡಿಹೋದಳು. ನಾವೆಲ್ಲರೂ `ಮುನಿಯಮ್ಮಾ ಮುನಿಯಮ್ಮಾ’ ಎಂದು ಜೋರಾಗಿ ಕರೆಯುತ್ತಲೇ ಇದ್ದೇವೆ; ಅವಳಿಗೆ ಕೇಳಿಸಿದ್ದರೆ ತಾನೆ! ಸ್ವಲ್ಪ ಹೊತ್ತು ಕಾದು ನಿಂತಿದ್ದು ನಾವೆಲ್ಲಾ ಮನೆಯೊಳಗೆ ಬಂದವು. ಅದೆಷ್ಟು ದೂರ ಹೋಗಿದ್ದಳೋ… ಒಂದು ಗಂಟೆಯ ನಂತರ ಅವಳೂ ವಾಪಸ್ಸು ಬಂದಳು. ಬಹಳ ಆಯಾಸಗೊಂಡಿದ್ದಳು. ಅಮ್ಮನಿಗೆ ಅವಳು ಸಾಕ್ಷಾತ್ ಸುಬ್ರಹ್ಮಣ್ಯೇಶ್ವರನೇ ಅನ್ನಿಸಿಬಿಟ್ಟಿತೋ ಏನೋ..  ಅವಳನ್ನು ಕೂರಿಸಿ ಒಂದು ಲೋಟ ತಣ್ಣಗೆ ಪಾನಕ ಮಾಡಿಕೊಟ್ಟು “ಸುಸ್ತಾಗಿದ್ದರೆ ಮನೆಗೆ ಹೋಗಿ ಮಲಗಿಕೋ. ನಾಳೆ ಬಂದು ಬಟ್ಟೆ ಒಗೆಯುವೆಯಂತೆ” ಎಂದರು. ಸ್ವಲ್ಪ ಹೊತ್ತು ಕೂತಿದ್ದವಳು ಮುನಿಯಮ್ಮನಾಗೇ `ಈಗ ಸರಿಹೋಯ್ತು’ ಎನ್ನುತ್ತಾ ತನ್ನ ಕೆಲಸಕ್ಕೆ ಎದ್ದಳು. ನಮಗೆಲ್ಲಾ ಭಕ್ತಿಯ ಈ ಮುಖದ ದರ್ಶನವಾಗಿತ್ತು! ಈಗ ಬೆಂಗಳೂರಿನಲ್ಲಿ ನಾವಿರುವ ರಸ್ತೆಯ ಒಂದು ಅಡ್ಡರಸ್ತೆಯಲ್ಲಿ ಗಂಗಮ್ಮನ ಗುಡಿಯಿದೆ. ಅದರ ಮುಂದಿನ ರಸ್ತೆಯಲ್ಲಿ ಮಸೀದಿಯಿದೆ. ಅಣ್ಣಮ್ಮ ದೇವಿಯ ಭಕ್ತಮಂಡಳಿ ನಮ್ಮ ಮನೆಯ ಪಕ್ಕಕ್ಕೇ ಇದೆ. ಮನೆಯ ಹಿಂಬಾಗದಲ್ಲಿ ವೆಂಕಟರಮಣನ ದೇವಸ್ಥಾನವಿದೆ. ಹಾಗಾಗಿ ಆಗಾಗ ಎಷ್ಟೆಲ್ಲಾ ಮೆರವಣಿಗೆಗಳನ್ನು ನೋಡುವ ಭಾಗ್ಯ ನಮ್ಮದಾಗಿದೆ. ಗಂಗಮ್ಮನ ಹೂವಿನ ಕರಗ, ರಥೋತ್ಸವ, ವೆಂಕಟರಮಣನ ಕಡೆಯ ಶ್ರಾವಣ ಶನಿವಾರದ ಉತ್ಸವ, ಮುಸ್ಲಿಮರ ಹಬ್ಬಗಳ ಹಲವು ಬಗೆಯ ಉತ್ಸವಗಳು, ಮೆರವಣಿಗೆಗಳು, ವರ್ಷಕ್ಕೊಮ್ಮೆ ಚೈತ್ರಮಾಸದಲ್ಲೋ, ವೈಶಾಖ ಮಾಸದಲ್ಲೋ ನಮ್ಮ ಮನೆಯ ಪಕ್ಕದಲ್ಲೇ ಮೂರು ದಿನ ಠಿಕಾಣಿ ಹಾಕುವ ಅಣ್ಣಮ್ಮ.. ಶುಕ್ರವಾರ ಆಕೆ ಬರುವುದು. ಅದಕ್ಕೆ ಪೂರ್ವಭಾವಿಯಾಗಿ ಆ ಸೋಮವಾರದಿಂದಲೇ ಇಡೀ ಬೀದಿ ಅಲಂಕರಿಸಿಕೊಂಡು ನಿಂತಿರುತ್ತದೆ. ಬೀದಿಯ ಮುಂಬಾಗದಲ್ಲಿ ವಿದ್ಯುದ್ದೀಪಗಳಲ್ಲಿ ಅಣ್ಣಮ್ಮನ ದೊಡ್ಡ ಚಿತ್ರ, ಬೀದಿಯುದ್ದಕ್ಕೂ ತೋರಣದಂತೆ ಬಣ್ಣ ಬಣ್ಣದ ವಿದ್ಯದ್ದೀಪಗಳು, ಮಾವು ಬೇವಿನ ತೋರಣಗಳು, ಬಾಳೆಯ ಕಂಬದ ಅಲಂಕರಣ, ಇನ್ನು ದೇವಿಯನ್ನು ಕೂರಿಸುವ ವೇದಿಕೆಯಂತೂ ಗುರುವಾರದಿಂದಲೇ ವೈಭವವಾಗಿ ಸಿದ್ಧವಾಗಿರುತ್ತದೆ. ಅಣ್ಣಮ್ಮ ಬೀದಿಯ ಕೊನೆಯಲ್ಲಿರುವಾಗಲೇ ಅವಳನ್ನು ಎದುರುಗೊಳ್ಳಲು ನಮ್ಮ ಪಕ್ಕದ ಅಡ್ಡರಸ್ತೆಯಲ್ಲಿರುವ ಗಂಗಮ್ಮದೇವಿಯ ಉತ್ಸವಮೂರ್ತಿ ಗೆಳತಿಯನ್ನು ಕರೆದುಕೊಂಡು ಬರಲು ಹೊರಡುತ್ತದೆ. ಇಬ್ಬರೂ ಒಟ್ಟಿಗೆ ಅಲ್ಲಿಂದ ಬರುತ್ತಾರೆ. ದೇವಿಯರ ಮುಂದೆ ಪೂರ್ಣಕುಂಭ ಹೊತ್ತ ಸಿಂಗಾರಗೊಂಡ ಮಹಿಳೆಯರು, ಬಾಜಾ ಬಜಂತ್ರಿ, ಆರತಿಗಳು, ಕಿವಿ ಗಡಚಿಕ್ಕುವ ಅಣ್ಣಮ್ಮನ ಭಕ್ತಿಯ ಹಾಡುಗಳು.. ಅದೇನು ಸಂಭ್ರಮ… ಮೂರುದಿನಗಳೂ ಮನೆಯ ಮುಂದೆ ಹಬ್ಬವಿದ್ದಂತೆ. ಮಾರನೆಯ ದಿನ ಅಣ್ಣಮ್ಮ ದೇವಿ ಇಲ್ಲಿನ ಆಸುಪಾಸಿನ ಬೀದಿಯಲ್ಲಿರುವ ಅರವತ್ತು ಎಪ್ಪತ್ತು ಮನೆಗಳಿಗೆ ವರ್ಷಕ್ಕೊಮ್ಮೆ ಬರುವ ಮಗಳಂತೆ ಹೋಗಿ ಪೂಜೆ ಮಾಡಿಸಿಕೊಂಡು ಉಡಿತುಂಬಿಸಿಕೊಂಡು ಬರುತ್ತಾಳೆ. ಅಂದು ಸಂಜೆ ದೇವಿಯ ಎದುರಿಗೆ ಮೂರು ಬೀದಿ ಕೂಡುವಲ್ಲಿ ಒಂದು ಸ್ಟೇಜನ್ನು ಹಾಕಿ ನಾಟಕವೋ, ಆರ್ಕೆಸ್ಟ್ರಾನೋ ಏನಾದರೊಂದು ನಡೆಯುತ್ತಿರುತ್ತದೆ. ನಮ್ಮ ಮನೆಯ ಕಾರ್ ಗ್ಯಾರೇಜೇ ಅವರಿಗೆ ಗ್ರೀನ್ ರೂಮು. ಪಕ್ಕದ ಬೀದಿಗಳಲ್ಲಿರುವ ಮುಸಲ್ಮಾನ್ ಬಂಧುಗಳೂ ಹೆಂಗಸರು, ಮಕ್ಕಳಾದಿಯಾಗಿ ಇದರಲ್ಲಿ ಮತ್ತು ಮಾರನೆಯ ದಿನ ನಡೆಯುವ ರಾಗಿ ಅಂಬಲಿ ಮತ್ತು ಅನ್ನ ಸಂತರ್ಪಣೆಗಳಲ್ಲಿ ಪಾಲುಗೊಳ್ಳುತ್ತಾರೆ. ಎಲ್ಲರನ್ನೂ ಒಂದುಗೂಡಿಸಿ ಸಂತೋಷ ಪಡಿಸುತ್ತಾ ಪರಸ್ಪರ ಬಾಂಧವ್ಯ ವೃದ್ಧಿಸುವುದರಲ್ಲಿ ಬೀದಿಯ ಪಾತ್ರವೇನು ಕಮ್ಮಿಯೇ?! ಬೀದಿ ಜಗಳಗಳ ಮಹಾತ್ಮೆ ಅತ್ಯಂತ ಪುರಾತನವಾದದ್ದು. ಬೀದಿ ಬದಿಯಲ್ಲಿ ನೀರಿಗಾಗಿ ಕಾದಾಡುವುದು; ಅಕ್ಕಪಕ್ಕದವರ ಜಗಳ ಬೀದಿಗೆ ಬರುವುದು ಇವೆಲ್ಲಾ ಬಹಳ ಸಹಜವಾದ ಕ್ರಿಯೆಗಳು. ಇಬ್ಬರೂ ಅಮ್ಮ, ಅಪ್ಪ, ಅಜ್ಜಿ, ತಾತ ಎಲ್ಲರ ಜಾಯಮಾನವನ್ನೂ ನೀವಾಳಿಸುತ್ತಾ ಕೂಗಾಡುತ್ತಿದ್ದರೆ, ಅಲ್ಲಿಯವರೆಗೆ ಗೆಳೆಯರಾಗಿದ್ದ ಅವರಿಬ್ಬರ ಮನೆಯ ನಾಯಿಗಳೂ ತಮ್ಮ ಮಾಲೀಕರನ್ನು ಅನುಕರಿಸಿ `ಭೌ…ವೌ…’ ಎಂದು ಹಿಮ್ಮೇಳ ನೀಡುತ್ತಿದ್ದರೆ ಒಂದಷ್ಟು ಕಾಲ ಜನರೆಲ್ಲಾ ಮನರಂಜನೆಯನ್ನು ತೆಗೆದುಕೊಂಡು ನಂತರ ಯಾರೋ ಒಬ್ಬರು ಹಿರಿಯರು ಇಬ್ಬರ ಮಧ್ಯ ನಿಂತು ಇಬ್ಬರಿಗೂ ಸಮಾಧಾನ

ಬೀದಿಯ ಪ್ರಪಂಚ…. Read Post »

ಇತರೆ, ವರ್ತಮಾನ

ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ

ಲೇಖನ ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ ಶಿವರಾಜ್ ಮೋತಿ ಸಮಾಜವೆಂದರೆ ಜನ,ಗುಂಪು ಎಂದರ್ಥವಾಗುತ್ತದೆ. ವಿಧವಿಧವಾದ ಜನ,ಅನೇಕ ಗುಂಪುಗಳು ಇರುತ್ತವೆ. ಆದರೆ ಇಂದಿನ ಸಮಾಜ ಮೂಲಭೂತವಾದಿ,ಡೊಂಗಿ ರಾಜಕಾರಣಿಗಳ ಕೈಗೆ ಸಿಕ್ಕು ವಿಲ-ವಿಲವಾಗಿ ಬಿದ್ದು ನರಳಾಡುತ್ತಿದೆ. ಸಮಾಜದಲ್ಲಿದ್ದ ನೂನ್ಯತೆಗಳನ್ನು ಸರಿಪಡಿಸಲು,ಸಮ ಸಮಾಜದ ಕನಸನ್ನು ಕಟ್ಟಲು ಹಲವಾರು ಮಾರ್ಗಗಳಿವೆ. ಅದರಲ್ಲೂ ವಿಶೇಷವಾಗಿ ಸಾಹಿತ್ಯವೂ ಒಂದು.ಸಾಹಿತ್ಯದಲ್ಲಿ ಹಲವಾರು ಪ್ರಕಾರಗಳು ಜನಪದ, ಜಾನಪದ,ಪುರಾಣ,ನಾಟಕ,ಕಲೆ, ಸಂಗೀತ ಮುಂತಾದವೆಲ್ಲವೂ ಒಂದಕ್ಕೊಂದು ಸಂಬಂಧವಿದ್ದೆ ಇದೆ. ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟಲು ಅನೇಕ ಮಹನೀಯರು,ಶ್ರಮಿಸಿದ್ದಾರೆ,ಶ್ರಮಿಸುತ್ತಿದ್ದಾರೆ ಕೂಡ ಹೌದು.ಸಾಹಿತ್ಯವು ಒಡೆದ ಮನಸ್ಸುಗಳನ್ನು ಕೂಡಿಸಬೇಕೇ ವಿನಹ ಛಿದ್ರ-ಛಿದ್ರ ಮಾಡಬಾರದು. ಜಾತಿ ಅಸ್ಪೃಶ್ಯತೆಯ ತೆಕ್ಕೆಗೆ ಸಿಲುಕಿ ನರಳಾಡಿದ ಜನಕ್ಕೆ,ಧ್ವನಿಯಿಲ್ಲದ ಸಮುದಾಯಕ್ಕೆ ಧ್ವನಿಯಾಗಲು,ತಬ್ಬಲಿಗಳ ಪರ, ಅಲೆಮಾರಿ, ಆದಿವಾಸಿ,ಬುಡಕಟ್ಟು ಜನರಿಗಾಗಿ ಹೋರಾಡಲು, ಶೋಷಣೆಗೆ ಒಳಪಟ್ಟವರನ್ನು ಕಿಚ್ಚೆಬ್ಬಿಸಿ,ಅವರಿಗಾಗುವ ಅನ್ಯಾಯದ ವಿರುದ್ಧ ಸಿಡಿದೇಳಲು ಎಬ್ಬಿಸಿ,ಅವರ ಜೊತೆಗೂಡಲು ಸಾಹಿತ್ಯದ ಮೂಲಕ ಸಾಧ್ಯ.ಇಂತಹ ಕೆಲಸ ಮಾಡುತ್ತಿರುವ ದೊಡ್ಡ ದೊಡ್ಡ ಕೆಲವೇ ಸಾಹಿತಿಗಳನ್ನೂ ಹಾಗೂ ಪ್ರಚಾರ ಪಡೆಯದೇ ಮಾಡುತ್ತಿರುವ ಸಣ್ಣ-ಸಣ್ಣ ಸಾಹಿತಿಗಳನ್ನನ್ನೂ, ಹೋರಾಟಗಾರರನ್ನು ನಾವು ಇಂದು ನೋಡಬಹುದು.. ಇನ್ನೂ ಕೆಲ ಸಾಹಿತಿಗಳಿದ್ದಾರೆ,ಹೆಣ್ಣು ಸಬಲೆಯಲ್ಲ, ಅಬಲೆಯೆನ್ನುವ ಹೆಣ್ಣನ್ನು ಶೋಷಿಸುವ ಕೀಳು ಮನಸ್ಥಿತಿಗಳು,ಶೋಷಿತರನ್ನು ಶೋಷಿತರನ್ನಾಗೆ ನೋಡಬಯಸುವ,ಜಾತಿಧರ್ಮಗಳ ನಡುವೆ ಜಗಳ ಹಚ್ಚುವ ಸಾಹಿತ್ಯ ಸೃಷ್ಟಿ ಮಾಡುವುದು, ಅನ್ಯಧರ್ಮೀಯರನ್ನು ಅನುಮಾನಸ್ಥವಾಗಿ ನೋಡುವ, ಇಲ್ಲ-ಸಲ್ಲದ ಇತಿಹಾಸ ಸೃಷ್ಟಿ ಮಾಡುವುದು, ಅದು ನಿಜವಾದರೂ ಇಂದಿನ ಪರಿಸ್ಥಿತಿಗೆ ಒಗ್ಗೂಡಿಸಿಕೊಂಡು ಬದಲಾವಣೆಯನ್ನು ತರಬಯಸದೇ, ಕೋಮುಸೌಹಾರ್ದತೆಯನ್ನು ಕಾಪಾಡಿಕೊಳ್ಳದೆ ಶಾಂತಿಗೆಡುವ ಕೆಲಸವೂ ನಡೆದಿದೆ.ಅದೂ ನಿಲ್ಲಲ್ಲಿ.. ಇಂದಿನ ಉದಯೋನ್ಮುಖ ಸಾಹಿತಿಗಳು,ಕವಿಗಳು ಅವನು,ಅವಳು ಎನ್ನದೇ ಅರ್ಥಾತ್ ಪ್ರೀತಿ-ಪ್ರೇಮದ ಬಗ್ಗೆ ಬರೆಯುವುದು ಅದರಲ್ಲೂ ಭಗ್ನಪ್ರೇಮಿಯಂತೆ ಕಲ್ಪಿಸಿ ಬರೆಯುವುದು ನೋಡಿದರೆ,ಇವರಿಗೆ ಅನ್ಯ ವಿಷಯಗಳೇ ಇಲ್ಲವೇ ಎನ್ನಿಸದೇ ಇರದು.ಆದರೂ ಇವರು ಅನ್ಯವಿಷಯಗಳು ನನಗ್ಯಾಕೆ,ನಾನು ಬರೆದರೆ ಏನಾದರೂ ಬದಲಾದಿತೇ ಎಂದು ಕೀಳು ಮನಸ್ಥಿತಿಯಿಂದಲೇ ಇದಾರೆ ವಿನಹ ದೊಡ್ಡತನದಿಂದಲ್ಲ. ಸಮಾಜದಲ್ಲಿ ಅನ್ಯಾಯವಾಗುತ್ತಿದ್ದರೂ ದೈಹಿಕವಾಗಿ ಎದುರಿಸದೇ ಆಗದಿರಬಹುದು,ಕಣ್ಣುಮುಂದೆ ಅನ್ಯಾಯ ನಡೆಯದೇ, ನಡೆದೂ ಇರಬಹುದು, ದೂರದೆಲ್ಲೋ ಅನ್ಯಾಯ ನಡೆದಿರಬಹುದು ನಮಗ್ಯಾಕೆನ್ನದೇ ಅದನ್ನು ಪ್ರತ್ಯಕ್ಷವಾಗಿ ವಿರೋಧಿಸದಾಗದಿದ್ರೂ ಸಾಹಿತ್ಯದ ಮೂಲಕ ವಿರೋಧಿಸುವುದು, ಪ್ರತಿರೋಧಿಸಬೇಕೇ ವಿನಹ ಮಂಕಾಗಿ ಕುರುಡಾಗುವುದಲ್ಲ,ಅನ್ಯಾಯವನ್ನು ವಿರೋಧಿಸುವ ಕೆಲಸವಾಗಬೇಕಿದೆ. ಪರಿಸರದ ಹಾನಿಯನ್ನು ತಡೆಗಟ್ಟಲು, ಪರಿಸರಾತ್ಮಕ, ಪ್ರಾಣಿ-ಪಕ್ಷಿಗಳ ರಕ್ಷಣೆ,ಅತ್ಯಾಚಾರದ ವಿರುದ್ಧ, ಜೀವವಿರೋಧಿ, ಮಹಿಳಾ ವಿರೋಧಿ,ಮಾನವ ವಿರೋಧಿ ಮುಂತಾದವುಗಳ ಕೆಲಸ ಸಾಹಿತಿಗಳಿಂದ ತಡೆಗಟ್ಟಲು ಆಗುತ್ತಿಲ್ಲ.ನಮ್ಮ ದೇಶ ಮಹಾನ್ ಧೀಮಂತ ಪುರುಷ-ಮಹಿಳೆ ಸಾಧಕ ಮಹಾತ್ಮರನ್ನು ನೀಡಿದೆ.ಅವರು ಸಮಾಜ ಕಟ್ಟಿದ ಪರಿಯನ್ನು ನಾವು ಅಳವಡಿಸಿಕೊಂಡು ಸಾಗಬೇಕಾಗಿದೆ.ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜವನ್ನು ಕಟ್ಟಲು ಸಾಹಿತ್ಯದ ಮೂಲಕ ಕೆಲಸಗಳು ಆಗುತ್ತಿಲ್ಲ,ಆಗಬೇಕಾಗಿದೆ. ಸರ್ಕಾರದ ನಡೆನುಡಿಗಳು,ಕಾಯ್ದೆಗಳು ಎಲ್ಲ ಕಾಲಕ್ಕೂ ಪ್ರಜಾಸತ್ತಾತ್ಮಕವಾಗಿ,ಪ್ರಜೆಗಳ ಹಿತರಕ್ಷಣೆಗಾಗಿಯೇ ಇರುತ್ತವೆ ಎಂದು ಹೇಳಲಾಗದು,ಕೆಲವೊಮ್ಮೆ ಸರಕಾರಗಳು ಗೊತ್ತಿದ್ದೂ,ಗೊತ್ತಿಲ್ಲದೆಯೂ ಪ್ರಜೆಗಳ ವಿರೋಧಿ ಕಾಯ್ದೆಯೂ ತರಬಹುದು.ಅವಾಗ ಸಾಹಿತಿಗಳಾದವರು ಖಡಾಖಂಡಿತವಾಗಿ ವಿರೋಧಿಸಬೇಕು. ರಾಜಕೀಯದ ಬಗ್ಗೆ ಬೇಡವೆಂದು ತಮ್ಮ ಅಭಿಪ್ರಾಯವನ್ನು ದಾಖಲಿಸದೇ ಹೋದರೆ ಎಲ್ಲ ಕಾಲಕ್ಕೂ ಬಾಯಿಮುಚ್ಚಿ ಮೂಕಪ್ರೇಕ್ಷರಾದರೆ ಅದೆಂತಹ ದೊಡ್ಡ ಬರಹಗಾರನಾದರೂ,ಅವರು ಸಾಹಿತಿಗಳಲ್ಲ,ಅವಕಾಶವಾದಿಗಳಾಗುತ್ತಾರೆ. ಮತ್ತೊಂದೆಡೆ ಓದದೇ ಬರೆಯಬಹುದು,ಆದರೂ ಓದಬೇಕು.ಸ್ವತಃ ತಾನೇ ಮತ್ತೊಬ್ಬರದನ್ನು ಓದದೇ, ನಮ್ಮ ಭವ್ಯ ಸಾಹಿತ್ಯದ ಇತಿಹಾಸವನ್ನೋದದೇ, ಹಿಂದಿನಿಂದ ನಡೆದುಕೊಂಡು ಬಂದ ಸಮಾಜದ ಬಗ್ಗೆ ಅವಲೋಕಿಸದೆ ನನ್ನದೇ ಓದಲಿ ಅಂತ ಅನ್ನಿಸಿದ್ದನ್ನು ಗೀಚುವವರನ್ನು ಹಾಗೂ ಖುಷಿಗಾಗಿ, ಆತ್ಮಸಂತೋಷಕ್ಕಾಗಿ ಬರೆಯುತ್ತೇನೆಂದರೆ ಅಭ್ಯಂತರವಿಲ್ಲ ಆದರೆ ಅದು ಸಾಹಿತ್ಯವಾಗಲಾರದು. ಅಂತ ಬರಹಗಳಿದ್ದರೆ ನಿಮಗೂ ನಿಮ್ಮ ಬರಹಕ್ಕೂ ನೆಲೆಯಿಲ್ಲದಾಗುತ್ತದೆ.. ಒಟ್ಟಾರೆಯಾಗಿ ಏನೇ ಆಗಲಿ,ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟುವ ಕೆಲಸಗಳು ಆಗಲಿ, ಸಾಹಿತ್ಯವನ್ನು ಉದ್ಯೋಗ ಮಾಡಿಕೊಂಡವರಿದ್ದಾರೆ, ಜೀವನಕ್ಕಾಗಿ ಸಾಹಿತ್ಯವನ್ನು ನೆಚ್ಚಿಕೊಂಡವರಿದ್ದಾರೆ. ಉದಯೋನ್ಮುಖರಾದ ನಾವುಗಳು ಸಮಾಜದ ಸಮಸ್ಯೆ,ರೋಧನೆಗಳಿಗೆ ಸ್ಪಂದಿಸಿ ಬರಹ, ಹೋರಾಟ, ಚಳುವಳಿಗಳ ಮೂಲಕ ಇನ್ನಾದರೂ ನಮ್ಮ ಲೇಖನಿಯ ವರಸೆ ಬದಲಿಸಿಕೊಂಡು ಸಾಧ್ಯವಾದಷ್ಟು ಜೀವವಿರೋಧಿಗೆ ಪ್ರತಿಧ್ವನಿಗಳಾಗೋಣ..!!! ******************************************************

ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ Read Post »

ಮಕ್ಕಳ ವಿಭಾಗ

ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ!

ಅನುಭವ ಕಥನ  ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ! ವಿಜಯಶ್ರೀ ಹಾಲಾಡಿ ಹೋಳಿಹಬ್ಬ ಬರುವುದು ಬೇಸಗೆಯ ವಸಂತಮಾಸದಲ್ಲಿ… ಅಂದರೆ ಮಾವು, ಗೇರು ಮತ್ತು ಕಾಡಿನ ಬಹುತೇಕ ಮರಗಳು ಚಿಗುರು, ಹೂ ಬಿಡುವಕಾಲದಲ್ಲಿ. ವಿಜಿಯ ಮನೆ ಹತ್ತಿರದ ಕಾಡುಗಳಲ್ಲಿ ಕೆಲವು ಮಾವಿನಮರಗಳಿದ್ದವಲ್ಲ, ಅವು ಚಿಗುರು ಬಿಡುವುದನ್ನು ನೋಡಬೇಕು! ಇಡಿ ಮರವೇ ಹೊಳೆಯುವ ಕೆಂಪು ಬಣ್ಣವಾಗಿಬಿಡುತ್ತಿತ್ತು. ಇದೇ ಸಂದರ್ಭದಲ್ಲಿ ಹೋಳಿಹಬ್ಬವೂ ತನ್ನ ಬಣ್ಣ ಸೇರಿಸಿ ಕೆಂಪು, ಹಳದಿ, ಹಸಿರು, ಕಿತ್ತಳೆ ವರ್ಣಗಳಲ್ಲಿ ಅವರ ಊರು ಹೊಳೆಯುತ್ತಿತ್ತು. ಅಲ್ಲಿ ಕುಡುಬಿ ಜನಾಂಗದವರ ಮನೆಗಳು ಸಾಕಷ್ಟಿದ್ದವು. ಅವರ ಕುಂದಾಪುರ ತಾಲ್ಲೂಕಿನಲ್ಲಿ ಕುಡುಬಿಯರು ಬಹುಸಂಖ್ಯೆಯಲ್ಲಿದ್ದಾರೆ. ವಿಜಿಯ ಬಾಲ್ಯಕಾಲದಲ್ಲಿ ಕುಡುಬಿಯರ ದಿನನಿತ್ಯದ ವೇಷಭೂಷಣಕೂಡಾ ವಿಶಿಷ್ಟವಾಗಿತ್ತು. ಹೆಂಗಸರು ಸೀರೆ ಉಡುವ ರೀತಿಯೇ ಬೇರೆ. ‘ಗೇಂಟಿ’ ಹಾಕಿ ಸೀರೆಯುಟ್ಟು ಕೊರಳಿಗೆ ಹತ್ತಾರು ಮಣಿಸರಗಳನ್ನು ಹಾಕಿಕೊಳ್ಳುತ್ತಿದ್ದರು. ತಲೆತುಂಬ ಅಬ್ಬಲಿಗೆ ಹೂ ಮುಡಿದು ಮೂಗಿಗೆ ದೊಡ್ಡ ಹರಳಿನ ಮೂಗುತಿ, ಕಿವಿಗೆ ಬೆಂಡೋಲೆ, ಬುಗುಡಿ, ಕೈತುಂಬ ಗಾಜಿನ ಬಳೆಗಳನ್ನಿಟ್ಟು ಖುಷಿ ಖುಷಿಯಾಗಿ ಅವರು ನಡೆದುಬರುವುದೇ ಒಂದು ಜಾಪು! ಕುಡುಬಿಯರು ಪ್ರತಿವರ್ಷ ಆಚರಿಸುತ್ತಿದ್ದ ಹೋಳಿಹಬ್ಬವಂತೂ ವಿಶೇಷ. ವಿಜಿ ಮತ್ತು ಗೆಳತಿಯರು ಆ ಸಮಯದ ಹೋಳಿ ಕುಣಿತವನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಸರಿಸುಮಾರು ಹತ್ತು-ಹದಿನೈದು ದಿನದ ಹಬ್ಬವಿದು. ಅಮಾವಾಸ್ಯೆಯ ನಂತರ ಶುರುವಾಗಿ ಹುಣ್ಣಿಮೆಯವರೆಗೆ ಇರುವ ಹಬ್ಬ. ಕುಡುಬಿಯರು ತಮ್ಮಲ್ಲೇ ನಾಲ್ಕೈದು ಮೇಳಗಳನ್ನು ಮಾಡಿಕೊಳ್ಳುತ್ತಿದ್ದರು. ಮನೆಮನೆಗೆ ಹೋಗಿ ನೃತ್ಯ, ಕೋಲಾಟವನ್ನು ಈ ಸಂದರ್ಭದಲ್ಲಿ ಮಾಡುತ್ತಿದ್ದರು. ಗಂಡಸರು ಮತ್ತು ಚಿಕ್ಕ ಗಂಡುಮಕ್ಕಳು ಬಣ್ಣಬಣ್ಣದ ಉಡುಪು ಧರಿಸಿ ಮಣಿಸರಗಳಿಂದ ತಲೆಗೆ ಮುಂಡಾಸು, ಹೂಗಳು, ಹಕ್ಕಿ ಗರಿಗಳಿಂದ ಅಲಂಕರಿಸಿ ಕೊಂಡಿರುತ್ತಿದ್ದರು. ಭುಜಕ್ಕೆ ಗುಮ್ಟಿ(ಗುಮ್ಮಟೆ) ಎಂಬ ವಾದ್ಯವನ್ನು ಹಾಕಿಕೊಂಡು, ಕಾಲುಗಳಲ್ಲಿ ದೊಡ್ಡ ದೊಡ್ಡ ಗೆಜ್ಜೆ ಧರಿಸಿ ಉದ್ದಾನುದ್ದಕ್ಕೆ ಅವರು ನಡೆದು ಬರುವಾಗ ಇಡೀ ಗದ್ದೆ ಬಯಲೇ ಸಂಗೀತ, ಬಣ್ಣಗಳಲ್ಲಿ ಮುಳುಗಿದಂತೆ ಭಾಸವಾಗುತ್ತಿತ್ತು. ವಿಜಿಗೆ ಆಶ್ರ‍್ಯವಾಗುತ್ತಿದ್ದ ವಿಷಯವೆಂದರೆ ಬೇರೆ ದಿನಗಳಲ್ಲಿ ಗದ್ದೆ, ಹೊಲಗಳಲ್ಲಿ ತುಂಡು ಬಟ್ಟೆಯುಟ್ಟು ದುಡಿಯುತ್ತಿದ್ದ ಆ ಪರಿಚಿತ ಜನರೆಲ್ಲ ಆವತ್ತು ಗುರ್ತವೇ ಸಿಗದಂತೆ ಕಾಣುತ್ತಿದ್ದುದು! ಅಬ್ಬ, ಆ ಹೊಸ ವೇಷದಲ್ಲಿ ಅವರೆಲ್ಲ ‘ಅವರೇಅಲ್ಲ’ ಎಂಬಷ್ಟು ಚಂದ ಕಾಣುತ್ತಿದ್ದರು. ಕೆಲವು ಸಲ ರಾತ್ರಿ ಹೊತ್ತುಕುಣಿಯಲು ಬಂದರಂತೂ ಲಾಟೀನು ಬೆಳಕಲ್ಲಿ ಅವರ ಕುಡುಬಿ ಭಾಷೆಯ ಹಾಡು ಮತ್ತು ನೃತ್ಯ ನಕ್ಷತ್ರಲೋಕಕ್ಕೆ ಕರೆದೊಯ್ಯುತ್ತಿತ್ತು! ಅವರು ತಲೆಗೆ ಸಿಂಗರಿಸಿದ್ದ ಸುರಗಿ ಹೂಗಳ ಮಾಲೆ ಪರಿಮಳಿಸುತ್ತಿದ್ದವು. ಗುಮ್ಮಟೆ ಬಡಿಬಡಿದು ಕುಣಿಯುವಾಗ, ಕೋಲಾಟ ಆಡುವಾಗ ಅವರೆಲ್ಲ ಎಷ್ಟು ಚುರುಕು! ಆ ವೇಷದಲ್ಲಿದ್ದಾಗಲೂ ಗಿಡ್ಡ, ಹೆರಿಯ, ಬಾಗ್ಡು, ಬುತ್ಯ ಮುಂತಾದವರು “ಪುಟ್ಟಮ್ಮ ಎಂತಾ ಮಾಡ್ತೆ?” ಎಂದು ಮಾತಾಡಿಸಿದಾಗ ಪುಟ್ಟ ವಿಜಿಗೆ ಏನೋ ಭಯಮಿಶ್ರಿತ ಸಂತೋಷ! ತನ್ನದೇ ವಯಸ್ಸಿನ ಕೆಲವು ಮಕ್ಕಳೂ ವೇಷ ಹಾಕಿಕೊಂಡು ಬಂದದ್ದನ್ನು ನಿಬ್ಬೆರಗಾಗಿ ನೋಡುತ್ತಿದ್ದಳು. ಅವರ ಊರಲ್ಲಿ ನೆಲೆಸಿದ್ದ ಕೆಲ ಮರಾಠರೂ ಹೋಳಿ ಕುಣಿತವನ್ನು ಮಾಡುತ್ತಿದ್ದರು. ಇವರ ಉಡುಪಿನಲ್ಲಿ ಬಣ್ಣಗಳು ತುಸು ಕಡಿಮೆ. ಆದರೆ ಇವರ ಕೋಲಾಟ ಮಾತ್ರ ಅದ್ಭುತ. ಮರಾಠಿ ಭಾಷೆಯ ಹಾಡುಗಳಂತೂ ಬೇರೆಯೇ ತರಹ. ಮತ್ತೊಂದು ವಿಶೇಷವೆಂದರೆ ಇವರ ಮೇಳದಲ್ಲಿ ಒಬ್ಬ ‘ಅಜ್ಜ’ ಇರುತ್ತಾನೆ! ಅಂದರೆ; ಒಬ್ಬ ಹುಡುಗನಿಗೆ ದೊಡ್ಡದಾದ ಬಿಳಿಗಡ್ಡ, ಕಣ್ಣಿಗೆ ಕಪ್ಪುಕನ್ನಡಕ, ಕೈಗೆ ಕೋಲು, ಗಂಟೆ ಕೊಟ್ಟು ವಿಶೇಷವಾಗಿ ‘ಹೋಳಿ ಅಜ್ಜನ ವೇಷ’ ಹಾಕಿಸುತ್ತಾರೆ. ಯಾಕೆಂದು ಇವತ್ತಿಗೂ ಗೊತ್ತಿಲ್ಲ; ಆ ಅಜ್ಜನನ್ನು ಕಂಡರೆ ವಿಜಿಗೆ ವಿಪರೀತ ಭಯವಾಗುತ್ತಿತ್ತು. ಕೊನೆಯಲ್ಲಿ ಅಕ್ಕಿ, ಕಾಯಿ, ದುಡ್ಡಿನ ಸಂಭಾವನೆಯನ್ನು ಆ ‘ಅಜ್ಜ’ನ ಕೈಯ್ಯಲ್ಲೇ ಕೊಡುವುದಾಗಿತ್ತು. ಆ ಅಜ್ಜನೋ ಕೀಟಲೆ ಮಾಡಿ, ಕುಮ್ಬೆಟ್ ಹಾರಿ ಎಲ್ಲರನ್ನೂ ನಗಿಸುತ್ತಿದ್ದ. ಹಾಗೇ ಮಕ್ಕಳನ್ನು ಹೆದರಿಸುತ್ತಲೂ ಇದ್ದ. ಅಜ್ಜ ಸಂಭಾವನೆ ಪಡೆಯುವುದು ಕುಣಿತದ ಕೊನೆಯ ಹಂತ. ಆಮೇಲೆ ಬಾಯಾರಿಕೆ ಕುಡಿದು ಸ್ವಲ್ಪ ದಣಿವಾರಿಸಿಕೊಂಡು ಮತ್ತೊಂದು ಮನೆಗೆ ಮೇಳ ಹೊರಟುಬಿಡುತ್ತಿತ್ತು. ವಿಜಿಯ ಊರಿನಲ್ಲಿ ಅವತ್ತೆಲ್ಲ ಹೋಳಿಹುಣ್ಣಿಮೆಯ ಆಸುಪಾಸಿನ ಆ ಕೆಲವು ದಿನಗಳು ಕಳೆದದ್ದೇ ತಿಳಿಯುತ್ತಿರಲಿಲ್ಲ. ಬಂದು ಹೋಗುವ ಹೋಳಿಮೇಳಗಳ ಕುಣಿತ ನೋಡುವುದರಲ್ಲಿ ಹೊರ ಪ್ರಪಂಚವೇ ಮರೆತುಹೋಗುತ್ತಿತ್ತು. ಆ ಸಮಯದಲ್ಲಿ ಶಾಲೆಯಲ್ಲಿ ಬೇಸಿಗೆ ರಜೆಕೊಡುವ ದಿನಗಳು ಹತ್ತಿರವಾಗುತ್ತಿತ್ತು. ಪರೀಕ್ಷೆಗಳು ಮುಗಿದಿರುತ್ತಿದ್ದವು. ಶಾಲೆಯಲ್ಲೂ ಈ ಹೋಳಿಹಬ್ಬದ ಕುರಿತು ಮಕ್ಕಳು ಚರ್ಚಿಸುತ್ತಿದ್ದರು. ಹಾಗೇ ಮನೆಯ ಸುತ್ತಮುತ್ತ ಗೆಳತಿಯರು ಸೇರಿದರೂ ಅದೇ ಮಾತು. ಹೋಳಿ ಮೇಳ ಬಂದಾಗ ಅವರ ಬೀಚುಬೆಕ್ಕು ಹೆದರಿ ಎಲ್ಲೋ ಅಟ್ಟದ ಸಂದಿಯಲ್ಲಿ ಅಡಗಿ ಕೂರುತ್ತಿದ್ದುದನ್ನು ಆಡಿಕೊಂಡು ನಗುತ್ತಿದ್ದರು. ವಿಜಿ, ನೀಲಿಮಾ, ಮಾಣಿಕ್ಯಳಿಗೆ ವಿಚಿತ್ರ ಕಾಣುತ್ತಿದ್ದುದು ಹೋಳಿ ಜನರು ತಲೆಗೆ ಸಿಕ್ಕಿಸಿಕೊಳ್ಳುತ್ತಿದ್ದ ಹಕ್ಕಿ ಗರಿಗಳು! ಮನೆಯ ಹತ್ತಿರದ ತೋಟದಲ್ಲಿ, ಕಾಡಿನಲ್ಲಿ ಹಾರಾಡುವ ‘ಬಾಲದ ಹಕ್ಕಿ’ಯಿಂದ ಆ ಉದ್ದನೆ ಗರಿಗಳನ್ನು ಕದಿಯುತ್ತಿದ್ದರು ಎಂದು ಅವರಿಗೆ ಗೊತ್ತು. ಕೊಂಬೆಗಳಿಗೆ ಮೇಣ ಹಚ್ಚಿಟ್ಟು, ಹಕ್ಕಿ ಬಂದು ಕುಳಿತಾಗ ಉದ್ದ ಗರಿಗಳನ್ನು ಕಿತ್ತುಕೊಂಡು ಮತ್ತೆ ಕಾಡಿಗೆ ಬಿಡುತ್ತಾರಂತೆ. “ಪಾಪದ್ದು ಆ ಬಾಲದ ಹಕ್ಕಿ, ಅದಕ್ಕೆ ಎಷ್ಟು ಹೆದರಿಕೆಯಾಗುತ್ತದೋ, ಏನೋ” ಎಂದು ಮಾತಾಡಿಕೊಳ್ಳುತ್ತಿದ್ದರು. `ಅಂತಹ ಹಕ್ಕಿಗಳು ಪುನಃ ಕಾಡಿಗೆ ಹೋದಾಗ ಉಳಿದ ಹಕ್ಕಿಗಳು ಅವನ್ನು ಸೇರಿಸಿಕೊಳ್ಳುತ್ತಾವಾ?’ ಮುಂತಾಗಿ ಯೋಚಿಸುತ್ತಿದ್ದರು. ಏಕೆಂದರೆ ಒಮ್ಮೆ ಮನುಷ್ಯರು ಮುಟ್ಟಿದರೆ ಅಂತಹ ಹಕ್ಕಿ, ಅಳಿಲು ಮುಂತಾದ ಪ್ರಾಣಿ ಪಕ್ಷಿಗಳನ್ನು ಪುನಹ ಅವುಗಳ ಗೂಡಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಅವರು ಪುಸ್ತಕದಲ್ಲಿ ಓದಿ ತಿಳಿದುಕೊಂಡಿದ್ದರು.  “ಕಾಡಿಗೆ ಬಿಟ್ಟ ಹಕ್ಕಿಗೆ ಪುನಃ ಬಾಲ ಬೆಳೆಯುತ್ತದಾ?” ವಿಜಿ ಕೇಳುತ್ತಿದ್ದಳು. “ಹೂಂ, ಮತ್ತೆ ಬಾಲ ಬಂದಾಗ, ಮುಂದಿನ ವರ್ಷದ ಹಬ್ಬಕ್ಕೆ ಕಿತ್ತುಕೊಳ್ಳುತ್ತಾರೆ” ಎಂದು ನೀಲಿಮಾ ಹೇಳುತ್ತಿದ್ದಳು. “ಹಾಗಾದರೆ ಈ ಬಾಲದ ಹಕ್ಕಿಗೆ ಬಾಲವೇ ಇರಬಾರದಿತ್ತು, ಪಾಪ” ಎಂದುಕೊಳ್ಳುತ್ತಿದ್ದಳು ವಿಜಿ. ಮನರಂಜನೆಗಳೇ ಕಮ್ಮಿಯಿದ್ದ ವಿಜಿಯ ಊರಿನಲ್ಲಿ ಹೋಳಿಹಬ್ಬ ಒಂದು ದೊಡ್ಡ ಕುತೂಹಲಕಾರಿ ವಿಷಯವಾಗಿತ್ತು; ಹೌದು ವರ್ಷಕ್ಕೊಮ್ಮೆಅದು ಮರಳುತ್ತಿತ್ತು! ******************************************************

ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ! Read Post »

ಜೀವನ

“ಉಳ್ಳವರು ಶಿವಾಲಯವ ಮಾಡುವರು”

ಅನಿಸಿಕೆ “ಉಳ್ಳವರು ಶಿವಾಲಯವ ಮಾಡುವರು” ವೀಣಾ ದೇವರಾಜ್           ನಿಜಕ್ಕೂ ಅಣ್ಣನ ಈ ವಚನವು ಬರಿಯ ಪುಸ್ತಕಗಳಿಗೆ ಮತ್ತು ಹಾಡುಗಾರರಿಗೇ ಸೀಮಿತವಾಗಿವೆ. ಕಾರ್ಯರೂಪಕ್ಕೆ ಬರುವುದೆಂದೊ. ಹಿರಿಯರು ‘ಉಳ್ಳವರು ಶಿವಾಲಯವ ಮಾಡುವರು ‘ ಎಂದರು, ಆದರೆ ಇಂದಿನ ಉಳ್ಳವರು ತಮಗಾಗಿ ತಮ್ಮ ಕುಟುಂಬಕ್ಕಾಗಿ ಮಾತ್ರ ಆಲಯ ಮಾಡಿಕೊಳ್ಳುವರೇ ಹೊರತು ಸಮಾಜಕ್ಕಾಗಿ ಯಾವ ಉಪಯೋಗಕ್ಕೂ ಬಾರದು. ಇಂಥಹವರಿಂದ ಪರಿವರ್ತನೆ ಬಯಸುವುದು ಸಾಧ್ಯವೇ?        ಆಯ್ದಕ್ಕಿ ಲಕ್ಕಮ್ಮ, ಮಾರಯ್ಯ ದಂಪತಿಗಳು, ದಾಸೋಹ ಮಾಡುವ ಶಕ್ತಿ ಇರದಿದ್ದರೂ ಅಂತಹ ಮನಸ್ಸಿತ್ತು. ಲಕ್ಕಮ್ಮತನ್ನ ಬಿಡುವಿನ ಸಮಯದಲ್ಲಿ ಹೊಲಗಳಲ್ಲಿ ಕಟಾವು ಮಾಡುವಾಗ, ಭತ್ತದರಾಶಿ ಮಾಡುವಾಗ ಸುತ್ತಮುತ್ತ ಹಾರಿಬಿದ್ದ ಕಾಳುಗಳನ್ನು ಆಯ್ದು ತಂದು ದಾಸೋಹ ಮಾಡುತ್ತಿದ್ದರು. ಆಗ ಆಹಾರದ ಒಂದೊಂದು ಅಗುಳಿಗೂ ಬೆಲೆಯಿತ್ತು. ಯಾವುದನ್ನೂ ವೃಥಾ ಹಾಳುಮಾಡುತ್ತಿರಲಿಲ್ಲ. ಅವರಿವರೆನ್ನದೆ ಹಸಿದವರಿಗೆ ಉಣಬಡಿಸುವುದು ಸಹಜವಾಗಿತ್ತು.           ನಮ್ಮ ಈಗಿನ ಪೀಳಿಗೆಯಲ್ಲಿ ಅನ್ನ ಹಾಗೂ ಹಣದ ಬೆಲೆಯೇ ತಿಳಿಯದಾಗಿದೆ. ಕೆಲವರಿಗೆ ಅದೇನು ಪ್ರತೀಷ್ಟೆಯೊ, ಊಟದ ತಟ್ಟೆಯಲ್ಲಿ ಸ್ವಲ್ಪ ಊಟವನ್ನೊ ಇಲ್ಲ ಕುಡಿಯಲು ಕೊಟ್ಟ ಪಾನೀಯವನ್ನೊ ಸ್ವಲ್ಪ ಸ್ವಲ್ಪ ಬಿಡುವ ಅಭ್ಯಾಸವಿರುತ್ತದೆ. ಅದನ್ನು ಬಳಸುವ ಹಾಗೂ ಇಲ್ಲ. ಒಲ್ಲದ ಮನಸ್ಸಿನಿಂದ ಆಚೆಗೆ ಸುರಿಯ ಬೇಕಾಗುತ್ತದೆ. ಮೊದಲಿನಂತೆ ಹಸುಗಳಿಗೆ ಮುಸುರೆ ನೀರೆಂದು ಕೊಂಡು ಹೋಗುವವರೂ ಇಲ್ಲವಾಗಿದ್ದಾರೆ.        ಮನೆಯಲ್ಲಿನ ಕಸದ ಬುಟ್ಟಿಗೆ ಹಾಕಿ, ಜಿರಲೆಗಳ ಸಂತತಿಗೆ ಪೌಷ್ಟಿಕ ಆಹಾರ ಉಣಬಡಿಸಿ, ಮನೆಯ ಸದಸ್ಯರು ನಾಲ್ವರಾದರೆ ಅವುಗಳ ಸಂಖ್ಯೆ ನಾನೂರಾಗಿ, ಅವನ್ನು ತಿನ್ನಲು ಹಲ್ಲಿಗಳೂ ಬಂದು ‘ ಮಕ್ಕಳಿರಲವ್ವ ಮನೆ ತುಂಬ’ ಎನ್ನುವ ನಾಣ್ನುಡಿ  ಬದಲಿಗೆ ‘ಜಿರಲೆ ಹಲ್ಲಿಗಳಿರಲವ್ವ ಮನೆ ತುಂಬ’ಎನ್ನಬೇಕಾಗುತ್ತದೆ.         ಅಷ್ಟೇ ಆದರೆ ಹೇಗೋ ಆದೀತೇನೋ! ಮಾರನೆಯ ಬೆಳಗಿನಲ್ಲಿ ಜೋರು ದ್ವನಿಯಲ್ಲಿ ‘ಕಸ’ ಎಂದು ಬೈದಾಡಿಕೊಂಡು, ಕೂಗಾಡಿಕೊಂಡು  ಮನೆಯ ಕಸ ತೆಗೆದುಕೊಂಡು ಹೋಗಲು ಬರುವ ನಮ್ಮ ಮಹಾ ನಗರ ಪಾಲಿಕೆಯ ಬಜಾರಿ ಸುಬ್ಬಮ್ಮನಿಗೆ (ಕ್ಷಮೆ ಇರಲಿ), ಹೆದರಿಕೊಂಡು ಮೆತ್ತಗೆ ಹೋಗಿ ಬೀದಿ ಬದಿಯಲ್ಲಿ ಕಸದ ಚೀಲವನ್ನು ಇಟ್ಟು  ಬಂದೆವೊ ಬಚಾವು. ಸುಬ್ಬಮ್ಮನ ಕಣ್ಣಿಗೆ ಬಿದ್ದು, ಅದು ನಮ್ಮದೇ ಕಸ ಎಂದು ಗೊತ್ತಾಯಿತೊ ಮರ್ಯಾದೆ ಬೀದಿಗೆ ಬಂತು ಎಂದ ಹಾಗೇ. ನಮ್ಮ ಸುಬ್ಬಮ್ಮ ಬೀದಿಯ ಎಲ್ಲಾ ಹೆಂಗಳೆಯರಿಗೂ ಗಟವಾಣಿ ಅತ್ತೆ ಇದ್ದಂತೆಯೇ! ಅವಳಂದಂತೆ ಅನ್ನಿಸಿಕೊಂಡು ,ಎದುರು ಮಾತೂ ಆಡದೆ, ಅಕ್ಕಪಕ್ಕದವರೇನಾದರೂನೋಡುತ್ತಿದ್ದಾರೊ, ಯಾರಾದರೂ ಕೇಳಿಸಿಕೊಂಡರೊ ಎಂದು ಕತ್ತು ಆಚೀಚೆ ತಿರುಗಿಸಿ ನೋಡಿ ಸರಸರನೆ ಮನೆಯೊಳಗೆ ಸೇರಿಕೊಳ್ಳಬೇಕು.            ಅನ್ನಂ ಪರಃ ಬ್ರಹ್ಮಂ ; ಎನ್ನುವ ಮಾತನ್ನು ಅರ್ಥೈಸಿಕೊಂಡು, ನಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ತಟ್ಟೆಯಲ್ಲಿ ಊಟ ಬಿಡಬಾರದು, ಬೇಕಾದ್ದನ್ನು,ಬೇಕಾದಷ್ಟು ಮಾತ್ರವೇ ತಟ್ಟೆಯಲ್ಲಿ ನೀಡಿಸಿಕೊಳ್ಳಬೇಕು ಎಂದು ತಿಳಿಹೇಳಬೇಕು. ಚಿಕ್ಕಂದಿನಲ್ಲೇ ರೂಢಿಸಿಕೊಂಡಲ್ಲಿ ಸ್ವಲ್ಪವಾದರೂ ಆಹಾರ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ ಎಂಬಂತೆ ಒಬ್ಬೊಬ್ಬರಿಂದಲೂ ಒಂದೊಂದು ತುತ್ತು ಆಹಾರ ಉಳಿದರೆ ಹೆಚ್ಚಲ್ಲದಿದ್ದರೂ ದಿನಕ್ಕೆ ಒಂದು ಮನೆಯಲ್ಲಿ ಒಂದು ಹಿಡಿ ಧಾನ್ಯ ಉಳಿಯುತ್ತದೆ.            ಹಾಗೇ ಉಳ್ಳವರು ಮಾತ್ರವಲ್ಲದೇ ಎಲ್ಲರೂ ತಮ್ಮಕೈಲಾದಷ್ಟು ಹಣ ದಾನಮಾಡಿ ಧರ್ಮಛತ್ರಗಳನ್ನು ಕಟ್ಟಬಹುದು, ಹಸಿದವರಿಗೆ ಎರಡು ತುತ್ತು ಅನ್ನ ನೀಡಬಹುದು. ಈ ಶತಮಾನದ ಮಹಾ ಮಾರಿ ಬಂದು ಎಷ್ಟೊ ಜನರಿಗೆ ಪಾಠ ಕಲಿಸಿದೆ. ‘ನಡೆದಾಡುವ ದೇವರಂ’ತವರೂ ನೂರಾರು ಜನರು ಹುಟ್ಟಿ ಬರಲಿ.           *********************************

“ಉಳ್ಳವರು ಶಿವಾಲಯವ ಮಾಡುವರು” Read Post »

ಇತರೆ, ಜೀವನ

ಲಿವಿಂಗ್ ಟುಗೆದರ್

ಲೇಖನ ಲಿವಿಂಗ್ ಟುಗೆದರ್ ಸುಜಾತಾ ರವೀಶ್ ಇಬ್ಬರೂ ಸಮಾನ ಮನಸ್ಕರು ಒಂದೇ ಸೂರಿನಡಿ ವಾಸಿಸುತ್ತಾ ಭಾವನಾತ್ಮಕ ಹಾಗೂ ದೈಹಿಕ ಸಂಬಂಧಗಳನ್ನು ವಿವಾಹ ವ್ಯವಸ್ಥೆ ಇಲ್ಲದೆ ಹೊಂದಿ ಜೀವಿಸುವುದಕ್ಕೆ livein relationship ಅಥವಾ ಸಹಬಾಳ್ವೆ ಪದ್ಧತಿ ಎನ್ನುತ್ತಾರೆ.  ಈಗ ಎರಡು ದಶಕಗಳಿಂದೀಚೆಗೆ ಪ್ರಪಂಚದಲ್ಲಿ ಶುರುವಾಗಿರುವ ಹಾಗೂ ಸಮಾಜಶಾಸ್ತ್ರಜ್ಞರು ಮತ್ತು ಮಾನವ ಶಾಸ್ತ್ರಜ್ಞರ ನಿರೀಕ್ಷೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ವ್ಯವಸ್ಥೆ ಇದು ಪ್ರಚಲಿತ ಅಸ್ತಿತ್ವದಲ್ಲಿರುವ ಕುಟುಂಬ ಎಂಬ ಸಾಮಾಜಿಕ ಪರಿಕಲ್ಪನೆಯಿಂದ ಹೊರತಾದ ಹೊಸ ಬದಲಾವಣೆಯ ಅಲೆ ಇದು .  ಮನುಷ್ಯ ಒಂದು ಸಾಮಾಜಿಕ ಪ್ರಾಣಿ ಜೀವನವೇ ಸವಾಲು ಹಾಗೂ ಸಮಸ್ಯೆಗಳ ಪಯಣ .  ಆಗ ಸಾಹಚರ್ಯದ ಅಗತ್ಯವಿರುತ್ತದೆ . ಅದೇ ಸಂಸಾರ ಮದುವೆಯ ವ್ಯವಸ್ಥೆಗೆ ಕಾರಣೀಭೂತವಾಗುತ್ತದೆ.  ಆದರೆ ಈಗಿನ ಸಾಮಾಜಿಕ ಪರಿವರ್ತನೆಗಳ ದಾಳಿ, ಸಾಂಸಾರಿಕ ಬಂಧಗಳ ಶಿಥಿಲತೆ, ಹಳಸಿದ ಸಡಿಲಾದ ಸಂಬಂಧಗಳಿಗೆ ಕಾರಣವಾಗಿ ವಿವಾಹ ವಿಚ್ಛೇದನಗಳಿಗೆ ಕಾರಣವಾಗುತ್ತಿದೆ.  ಹಾಗೂ ಈ ರೀತಿ ವಿವಾಹ ವ್ಯವಸ್ಥೆಯ ವಿರುದ್ಧ ಎತ್ತಿದ ಪ್ರಶ್ನೆಯೇ ಈ ಸಹಬಾಳ್ವೆ ಜೀವನ ಪದ್ಧತಿ.  ಮೊದಲಿಗೆ ಈ ಪದ್ಧತಿಗೆ ಕಾರಣಗಳೇನು ಎಂಬುದರ ಬಗ್ಗೆ ದೃಷ್ಟಿ ಹರಿಸಿದಾಗ…  ಜಾಗತೀಕರಣ  ಯಾವುದೇ ಆರ್ಥಿಕ ಬದಲಾವಣೆ ಸಾಮಾಜಿಕ ಮತ್ತು ನೈತಿಕ ಬದಲಾವಣೆಯನ್ನು ತರುತ್ತದೆ. ಕೈಗಾರೀಕರಣದ ಪ್ರಭಾವದಿಂದ ದೀರ್ಘಕಾಲದ ಕೆಲಸ ಒತ್ತಡದ ಜೀವನ ಹಾಗೂ ನಿಷ್ಕ್ರಿಯ ಸಾಮಾಜಿಕ ಜೀವನಗಳು ಮದುವೆಯ ಕಡೆಯಿಂದ ಅನ್ಯ ಸಂಬಂಧಗಳತ್ತ ಆಕರ್ಷಿಸುತ್ತದೆ.  ಪಾಶ್ಚಿಮಾತ್ಯೀಕರಣ ಆಧುನೀಕರಣದತ್ತ ಮಾರು ಹೋಗುತ್ತಿರುವ ಯುವ ಜನಾಂಗ ಪಾಶ್ಚಾತ್ಯ ಉಡುಗೊರೆಯಾದ ಲಿವ್ ಇನ್ ರಿಲೇಶನ್ ಶಿಪ್ ಅನ್ನು ಆಹಾರ ವಸ್ತ್ರ ಆಚಾರ ವಿಚಾರದಂತೆ ಇದನ್ನು ಕೂಡ ಅಂಧಾನುಕರಣೆ ಮಾಡುತ್ತಿದೆ. ಇವುಗಳೊಂದಿಗೆ ಜನಸಂಖ್ಯೆಯ ಚಲನಶೀಲತೆ (ಹೆಚ್ಚಿನ ಉದ್ಯೋಗ ನಿಮಿತ್ತ) ಸಹ ತನ್ನದೇ ಕೊಡುಗೆ ನೀಡುತ್ತಿದೆ . ಮಹಿಳಾ ಶಿಕ್ಷಣ ಮಟ್ಟ ಏರಿಕೆ ಪುರುಷರಂತೆ ಸ್ತ್ರೀಯರು ಸಹ ಶಿಕ್ಷಣ ಉದ್ಯೋಗ ಎಲ್ಲ ರಂಗಗಳಲ್ಲೂ ಸಮಾನತೆ ಹೊಂದುತ್ತಿದ್ದಾರೆ.  ಹಾಗಾಗಿ ಮದುವೆಯ ವಯಸ್ಸಿನ ಸರಾಸರಿ ಏರಿಕೆ ಮತ್ತು ವೈವಾಹಿಕ ಆಯ್ಕೆಯ ಸ್ವಾತಂತ್ರ್ಯ ಹಾಗೂ ಜೊತೆಯಲ್ಲಿ ಆರ್ಥಿಕ ಸ್ವಾತಂತ್ರ್ಯ ಇಂದಿನ ಯುಗದ ಮಹಿಳೆಯರನ್ನು ಹೆಚ್ಚು  ದಿಟ್ಥರಾಗಿಸುತ್ತದೆ. ಹೊಸದಾಗಿ ಸಂಬಂಧ ಬೆಳೆಸುವುದರೊಂದಿಗೆ ಗಂಡ ಹೆಂಡಿರ ನಡುವಣ ಪ್ರತ್ಯೇಕತೆ ಉದ್ವಿಗ್ನತೆ ಘರ್ಷಣೆ ಹೆಚ್ಚಿಸಿ ವಿಚ್ಛೇದನಗಳಿಗೆ ಕಾರಣವಾಗುತ್ತಿದೆ . “ಜೀವನಕ್ಕಾಗಿ ಸತ್ತ ಸಂಬಂಧದ ಹೊರೆ ಹೊರುವುದಕ್ಕಿಂತ ಸಂಬಂಧವನ್ನು ಕೊನೆಗಾಣಿಸಿ ಕೊಳ್ಳುವುದು ಉತ್ತಮ” ಎಂಬ ನಿಲುವಿಗೆ ಅಂಟಿಕೊಳ್ಳುವುದನ್ನು ಕಾಣಬಹುದು.  ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆ ಮಹಿಳೆಯರಾಗಲಿ ಪುರುಷರಾಗಲಿ ವೃತ್ತಿ ಜೀವನವೇ ಕೇಂದ್ರಬಿಂದು ಆಗುತ್ತಿದೆ.  ಹಾಗಾಗಿ ಮದುವೆಯ ವಯಸ್ಸಿನಲ್ಲಿ ವಿಳಂಬ, ವೈವಾಹಿಕ ಅಡ್ಡಿ ಪಡಿಸುವಿಕೆ ಮದುವೆಯ ಪೂರ್ವಭಾವಿಯಾಗಿಯೋ ಅಥವಾ ಮದುವೆಯವರೆಗಿನ ಸ್ಟಾಪ್ ಗ್ಯಾಪ್ ವ್ಯವಸ್ಥೆ ಆಗಿಯೋ ಈ ಲಿವ್ ಇನ್ ರಿಲೇಷನ್ ಶಿಪ್ ಗಳು ಜನಪ್ರಿಯ ಆಗುತ್ತಿವೆ . ಸಂಸಾರದಲ್ಲಿನ ನಿರ್ಬಂಧ ಅಸಮಾನತೆ ಹಾಗೂ ಮಾನಸಿಕ ದೈಹಿಕ ಹಿಂಸೆಗಳನ್ನು ಮೌನವಾಗಿ ಯಾರೂ ಸಹಿಸುತ್ತಿಲ್ಲ ಹೀಗಾಗಿ ಈ ಪದ್ಧತಿ  ಸಾಂಸ್ಥಿಕ ವೈವಾಹಿಕ ಸಂಕೋಲೆಯಿಂದ ಬಿಡಿಸಿಕೊಳ್ಳುವ ಮಾರ್ಗವಾಗಿಯೂ ಪರಿಣಮಿಸಿದೆ . ಆದರೆ ಭಾರತದಂತಹ ಪುರಾತನ ಸಂಸ್ಕೃತಿಯ ದೇಶದಲ್ಲಿ ಇದು ಸರಿಯೇ? ನಿಜಕ್ಕೂ ಇದು ಒಂದು ನೈತಿಕ ಅಧಃಪತನವೇ ಸರಿ.  ಮದುವೆ ಎಂಬುದು ಸಮಾಜ ಅಂಗೀಕರಿಸಿದ ರಕ್ಷಣೆ ಕೊಟ್ಟ ಒಂದು ವ್ಯವಸ್ಥಿತ ಒಡಂಬಡಿಕೆ. ನ್ಯಾಯಸಮ್ಮತವೂ ಸಹ . ಆದರೆ ಈ ಲಿವ್ ಇನ್ ಸಂಬಂಧಗಳು ಮನುಷ್ಯರಲ್ಲಿ ಬದ್ಧತೆಯ ಕೊರತೆಯನ್ನುಂಟು ಮಾಡುತ್ತದೆ.  ಬಟ್ಟೆ ಬದಲಿಸುವ ಹಾಗೆ ಸಂಗಾತಿಯನ್ನು ಬದಲಾಯಿಸಬಹುದು . ನೈತಿಕ ಸಾಮಾಜಿಕ ಮೌಲ್ಯಗಳು ಪ್ರಪಾತದ ದಾರಿ ಹಿಡಿಯುತ್ತಿರುವ ದ್ಯೋತಕ. ಕುಟುಂಬ ವ್ಯವಸ್ಥೆಯಲ್ಲಿ ಪ್ರಬಲವಾಗಿರುವ ಕರ್ತವ್ಯ’ ತ್ಯಾಗ, ಬದ್ಧತೆ ಮತ್ತು ವಿಧೇಯತೆ ಜಾಗದಲ್ಲಿ ಈ ಸಂಬಂಧ ಸ್ವಾರ್ಥ ,ಸಹವಾಸ ಕಾಮತೃಪ್ತಿ, ಸಮಾನತೆ ಮತ್ತು ಒಗ್ಗಿ ಕೊಳ್ಳುವಿಕೆ ಅಂತಹ ದುರ್ಬುದ್ಧಿ ಬಿತ್ತುತ್ತಿದೆ_  ಸಾಮಾಜಿಕ ಬಂಧಗಳ ಬಗ್ಗೆ ಅಗೌರವ ಸಂಬಂಧಗಳಲ್ಲಿ ಅಸಹನೆ ಅಸಹಿಷ್ಣುತೆಗಳು ಸ್ಯೆ ಕೊರತೆ ಹುಟ್ಟುಹಾಕುತ್ತಿದೆ . ಹಕ್ಕುಗಳು ಜವಾಬ್ದಾರಿಗಳೂ ಇರದ ಜೀವನ ದೀರ್ಘಕಾಲದಲ್ಲಿ ಮಾನಸಿಕ ಸಮಸ್ಯೆಗಳನ್ನು ತರುತ್ತದೆ ಇಲ್ಲಿ ದೈಹಿಕ ಹೊಂದಾಣಿಕೆ ಹಾಗೂ ಭಾವನಾತ್ಮಕ ಅಂಶಗಳೇ ಮುಖ್ಯವಾಗಲಿ ಬೇರೆ ಉತ್ತಮ ಅಂಶಗಳು ಗೌಣವಾಗುತ್ತದೆ . ಸಾಮಾಜಿಕ ಬೇಜವಾಬ್ದಾರಿತನ ಯಾವುದೇ ಭದ್ರತೆ ಇಲ್ಲದ ಸಂಬಂಧಗಳು ಅಕ್ರಮ ಸಂತಾನಗಳಿಗೆ ಅನೈತಿಕತೆಗೆ ಮತ್ತಷ್ಟು ಎಡೆಮಾಡಿಕೊಡುತ್ತದೆ . ಸಾಮುದಾಯಿಕವಾಗಿ ಗೌರವ ಸ್ಥಾನಮಾನಗಳಿರದೆ ನೋವುಗಳನ್ನು ಉಂಟು ಮಾಡುತ್ತದೆ.  ಕಾನೂನುಬದ್ಧವಲ್ಲದ ಜನ್ಮ ಕೊಟ್ಟ ಮಕ್ಕಳು ಮತ್ತು ಅವರ ಬೆಳವಣಿಗೆಯಲ್ಲಿ ಅವರ ಮಾನಸಿಕ ಪರಿಸ್ಥಿತಿ ಇವುಗಳ ಬಗ್ಗೆ ಯೋಚಿಸುವಾಗ ಬರೀ ಸ್ವಾರ್ಥಪರತೆ ಕಾಮ ವಾಂಛೆಗಳೇ ಪ್ರಧಾನವಾದ ಈ ಸಂಬಂಧಗಳು ಸಾಧುವೇ ಅಗತ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ . ಭವ್ಯ ಪ್ರಾಚೀನ ಸಂಸ್ಕೃತಿಯ ನಮ್ಮ ದೇಶ ತನ್ನ ಕುಟುಂಬ ವ್ಯವಸ್ಥೆ ಪರಸ್ಪರ ಮಮತೆ ವಾತ್ಸಲ್ಯದಿಂದಲೇ ಪ್ರಪಂಚದಲ್ಲಿ ಪ್ರಸಿದ್ಧ . ಮೌಢ್ಯ ಅಂಧಾನುಕರಣೆಯಿಂದ ಸಚ್ಚರಿತೆಯ ಎಳನೀರನ್ನು ಬಿಟ್ಟು ಕೊಚ್ಚೆ ಗುಂಡಿನ ಕಲುಷಿತ ನೀರಿಗೆ ಆಸೆ ಪಡುವುದು ತರವೇ?   *******************************************

ಲಿವಿಂಗ್ ಟುಗೆದರ್ Read Post »

ಇತರೆ, ಜೀವನ

ಯೋಗ್ಯತೆಯಲ್ಲ ಯೋಗ ಬೇಕು

ಲೇಖನ ಯೋಗ್ಯತೆಯಲ್ಲ ಯೋಗ ಬೇಕು ಜ್ಯೋತಿ ಬಾಳಿಗಾ “ಯಾಕೆ ಒಳ್ಳೆ ಇಡ್ಲಿ ಹಿಟ್ಟು ಊದಿಕೊಂಡಹಾಗೆ ಮುಖ ಮಾಡಿ ಕೂತಿದ್ದೀಯಾ… ಏನಾಯಿತು ?” ಎಂದು ನನ್ನವರು ಕೇಳಿದಾಗ “ಯಾಕೋ ಮನಸ್ಸು ಸರಿಯಿಲ್ಲ ಕಣ್ರಿ.. ಅಳು ಬರುವ ಹಾಗಿದೆ…” ಎಂದು ನನ್ನ ಮನದ ಬೇಗುದಿಯನ್ನು ತಿಳಿಸದೇ ಮಾತನ್ನು ತಳ್ಳಿ ಹಾಕಿದೆ. “ವಿಷಯ ಏನೂಂತ ಹೇಳಿದ್ರೆ ನನಗೂ ಗೊತ್ತಾಗುತ್ತದೆ, ಅದು ಬಿಟ್ಟು ಮನಸ್ಸು ಸರಿಯಿಲ್ಲಾಂತ ಹೇಳಿದ್ರೆ ಹೇಗೆ …? ಇಡೀ ದಿನ ಓದುವುದು, ಬರೆಯೋದೆ ಆಯಿತು. ಯೋಚನೆ ಮಾಡಿ ಮಾಡಿ ತಲೆ ಹಾಳು ಮಾಡಿಕೊಳ್ಳೋದು ಅಲ್ಲದೇ ನಮ್ಮ ತಲೆನೂ ಕೆಡಿಸ್ತಾ ಇದ್ದೀಯಾ…” ಎಂದು ಹರಿಹಾಯ್ದರು. ಯಾವಾಗ ನಾನು ಸಪ್ಪಗಾದರೂ, ಅದರ‌ ನೇರ ಹೊಣೆ ನನ್ನ ಬರವಣಿಗೆಯ ಮೇಲೆ ಹಾಕುತ್ತಾರೆ. ಕೊನೆಗೆ ಬರೆಯೋದು ನಿಲ್ಲಿಸು ಎಂದು ನನ್ನ ಬುಡಕ್ಕೆ ಬರುತ್ತೆ ಮಾತು. ಅದಕ್ಕೆ ನನ್ನವರಿಗೆ ವಿಷಯ ಏನೂಂತ ಹೇಳುವ ಮನಸ್ಸು ಮಾಡಿದೆ. “ಅಲ್ಲಾರೀ‌… ಹೆಣ್ಣು ಮಕ್ಕಳು ಆಗದೇ ಇರೋದು ನಮ್ಮ ತಪ್ಪಾ ? ಹೆಣ್ಣು ಮಕ್ಕಳು ಮನೆಯ ನಂದಾದೀಪ. ಮನೆಗೊಂದು ಕಳೆ ಹೀಗೆ ಏನಾದರೂ ಪೋಸ್ಟ್ ಹಾಕಲಿ ಬೇಡ ಅನ್ನಲ್ಲ ನಾನು. ಆದರೆ ಹೆಣ್ಣುಮಕ್ಕಳು ಹುಟ್ಟಬೇಕು ಅಂದ್ರೆ ಪುಣ್ಯ ಮಾಡಿರಬೇಕಂತೆ, ಯೋಗ್ಯತೆ ಇದ್ದವರಿಗೆ ಮಾತ್ರ ಹೆಣ್ಣುಮಕ್ಕಳು ಹುಟ್ಟುತ್ತವೆಯಂತೆ … ಹೀಗೆ ಪೋಸ್ಟ್ ಹಾಕಿ ಹೊಟ್ಟೆ ಉರಿಸುತ್ತಾ ಇದ್ದಾರೆ‌ ಕಣ್ರಿ…” ಎಂದು ಗೋಳಿಟ್ಟೆ. “ಮಕ್ಕಳು ಹುಟ್ಟುವುದೇ ಒಂದು ಅದೃಷ್ಟ ಕಣೆ. ಹೆಣ್ಣಾಗಲಿ, ಗಂಡಾಗಲಿ ದೇವರು ಕೊಟ್ಟ ವರದಂತೆ ಸ್ವೀಕರಿಸಿ ಯೋಗ್ಯ ರೀತಿಯಲ್ಲಿ ಬೆಳಸಬೇಕೆ ಹೊರತು ಪಾಪ, ಪುಣ್ಯ ಎಂದು ಜಿದ್ದಿಗೆ ಬಿದ್ದವರ ಹಾಗೆ ಪೋಸ್ಟ್ ಹಾಕುವುದಲ್ಲ. ಒಮ್ಮೆ ಸುತ್ತಮುತ್ತಲಿನ ಜನರನ್ನು ನೋಡು, ಹೆಣ್ಣೋ, ಗಂಡೋ ಒಂದು ಮಗು ಹುಟ್ಟಿದರೆ ಸಾಕೂಂತ ಕಾಯುವ ಜೀವಗಳು ಎಷ್ಟಿವೆ ಗೊತ್ತಿಲ್ವಾ ? ಗಂಡು ಮಕ್ಕಳು ಹುಟ್ಟಿ ಏನು ತೊಂದರೆಯಾಗಿದೆ ನಿನಗೆ ? ಒಂದು ವೇಳೆ ಹೆಣ್ಣು ಮಕ್ಕಳೇ ಹುಟ್ಟಿದ್ರೆ ಏನ್ ಸಾಧನೆ ಮಾಡಿಸುತ್ತಿದ್ದೆ ನೀನು..? ನಿನ್ನ ಗಂಡು ಮಕ್ಕಳು ಯಾರಿಗೆ ಯಾವುದಕ್ಕೆ ಕಡಿಮೆ ಇದ್ದಾರೆ ಹೇಳು..? ” ಎಂದು  ಪ್ರಶ್ನೆಗಳ ಸುರಿಮಳೆ ಸುರಿಸಿದರು. ನಾನು ಮೌನವಾಗಿ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. “ಮಕ್ಕಳು ತಂದೆ ತಾಯಿಯ ಕಷ್ಟ ಅರಿತುಕೊಂಡು ಅವರಿಗೆ ವಿಧೇಯರಾಗಿರಬೇಕೆ ಹೊರತು ಹೇಳಿದ ಮಾತು ಕೇಳದೆ, ಅಷ್ಟೇನೂ ಚೆನ್ನಾಗಿಲ್ಲದ ತಂದೆಯ ಆರ್ಥಿಕ ಸ್ಥಿತಿಯನ್ನು ನೋಡಿದರೂ ಕೂಡ ಹಠಮಾಡಿ ತಮಗೆ ಬೇಕಾದದ್ದನ್ನು ತರಿಸಿಕೊಳ್ಳುವವರು, ಅಮ್ಮನಿಗೆ ಆರೋಗ್ಯ ಸರಿಯಿಲ್ಲದಿದ್ದರೂ ಕಿಂಚಿತ್ತೂ ಸಹಾಯ ಮಾಡದೇ ಬರೀ ಅಲಂಕಾರ ಮಾಡಿಕೊಂಡು ಷೋಕೇಷಿನಲ್ಲಿ ಇಡುವ ಬೊಂಬೆ ತರಹ ಇದ್ದರೆ ಏನು ಪ್ರಯೋಜನ ಹೇಳು…? ಅವತ್ತು ಪರಿಚಯದವರ ಮನೆಗೆ ಹೋದಾಗ ನೀನೆ ನೋಡಲಿಲ್ವಾ? ಅವರ ಮನೆಯ ಪರಿಸ್ಥಿತಿ ನೋಡಿ ಅರ್ಥಮಾಡಿಕೊಳ್ಳದೆ ಹೊಸ ಮೊಬೈಲ್ ಬೇಕೂಂತ ಅಷ್ಟು ದೊಡ್ಡ ಹುಡುಗಿ ಹೇಗೆ ಹಠ ಮಾಡ್ತಿದ್ದಳು….”ಎಂದು ವಾಸ್ತವದ ಅರಿವು ಮಾಡಿಸಿ ಸಮಾಧಾನ ಮಾಡಿದರು. “ಹೌದು ರೀ… ನಾನು ಇಷ್ಟು ದಿನದಿಂದಸುಮ್ಮನೆ ತಲೆಕೆಡಿಸಿಕೊಂಡಿದ್ದೆ..” ಎಂದು ಹೇಳಿದೆ. “ಹೆಣ್ಣೋ, ಗಂಡೋ ಆರೋಗ್ಯವಂತ , ಹಿರಿಯರಿಗೆ ಗೌರವ ಕೊಡುವ ಸಂಸ್ಕಾರವಂತ ಮಕ್ಕಳು ಮುಖ್ಯ ಕಣೆ..”  ಎಂದು ಬೆನ್ನು ತಟ್ಟಿ ಹೋದರು. ನನಗೆ ನನ್ನ ಮಕ್ಕಳ ಬಾಲ್ಯದ ನೆನಪುಗಳು ಕಾಡಲು ಶುರುವಾದವು. ಮೊದಲನೆಯ ಮಗು ಹೆಣ್ಣಾಗಬೇಕೂಂತ ತುಂಬಾ ಆಸೆಯಿಂದ ಇದ್ದೆ. ಗಂಡು ಮಗು ಆದಾಗ ಆಸೆ ನಿರಾಸೆಯಾಗಿತ್ತು. ಗಂಡೋ ಹೆಣ್ಣೋ ಮಗು ಹುಟ್ಟಿತಲ್ವಾ ? ಸಂತೋಷ ಪಡು ಎಂದು ಮನೆಯವರೆಲ್ಲಾ ಹೇಳಿದರೂ ಮನಸ್ಸಿನಲ್ಲಿ ಹೆಣ್ಣಾಗಲಿಲ್ಲ ಎಂಬ ಕೊರಗು ಇದ್ದೆ ಇತ್ತು. ಅವನ ಹುಡುಗಾಟಿಕೆಯ ಬುದ್ಧಿಗೋ, ನನಗೆ ಮಗುವನ್ನು ನೋಡಿಕೊಳ್ಳಲು ತಿಳಿಯದೆಯೋ ದೊಡ್ಡ ಮಗ ನನ್ನಿಂದ ಏಟು, ಬೈಗುಳ ಸರಿಯಾಗಿ ತಿನ್ನುತ್ತಿದ್ದ. ನನಗೆ ಅವನಿಗೆ ತರಕಾರಿ ತಿನ್ನಿಸುವ ಹುಚ್ಚು. ಅವನಿಗೆ ತರಕಾರಿ ಅಂದರೆ ಗಂಟಲಿನಲ್ಲಿ ಇಳಿಯುತಿರಲಿಲ್ಲ. ಹೇಗಾದರೂ ಮಾಡಿ ತಿನ್ನಿಸಬೇಕೆಂದು ಬೇಯಿಸಿ ಮಿಕ್ಸಿಯಲ್ಲಿ ಹಾಕಿಯೋ ಹೊಸ ಹೊಸ ಸಂಶೋಧನೆ ಮಾಡಿಯೋ ಅವನಿಗೆ ತರಕಾರಿಯನ್ನು ತಿನ್ನಿಸುತ್ತಿದ್ದೆ. ನನ್ನ ಒತ್ತಾಯಕ್ಕೋ, ಹೆದರಿಕೆಗೋ ಆ ಕ್ಷಣ ತಿಂದರೂ ಸ್ವಲ್ಪ ಹೊತ್ತಿನಲ್ಲಿ ಎಲ್ಲಾ ವಾಂತಿ ಮಾಡುತ್ತಿದ್ದ. ಹೀಗೆ ವಾಂತಿ ಬಳಿದು ಬಳಿದು ಸಾಕಾಗಿ ಕೊನೆಗೆ ನಾನು ಅಲ್ಲಲ್ಲಿ ಬಕೆಟ್ ಇಡೋಕೆ ಶುರು ಮಾಡಿದೆ. ವಾಂತಿ ಬಂದ ಕೂಡಲೇ ಬಕೆಟ್ನಲ್ಲೇ ವಾಂತಿ ಮಾಡಬೇಕೂಂತ ಕಲಿಸಿದ್ದೆ. ತರಕಾರಿ ತಿಂದ ಕೂಡಲೇ ಬಕೇಟ್ ನಲ್ಲಿ ವಾಂತಿ ಮಾಡೋದು ಮಾಡ್ತಿದ್ದ. ಆಮೇಲೆ ನಾನು ತೊಳೆದಿಡುವುದು ಹೀಗೆ ದಿನಾ ಹೋಗ್ತಾ ಇತ್ತು. ಯಾವಾಗ ನಾನು ಮತ್ತೊಮ್ಮೆ ತಾಯಿಯಾಗುವೆನೆಂದು ತಿಳಿಯಿತೋ ಎರಡನೆಯ ಮಗು ಹೆಣ್ಣಾಗಲಿ ಎಂದು ಆಶಿಸಿದ್ದೆ. ಮೊದಲನೆಯ ಸಲ ಇರುವಾಗ ಇದ್ದ ಗರ್ಭಿಣಿಯ ಲಕ್ಷಣ ಕಾಣಿಸದೇ ಇದ್ದಾಗ ನನ್ನ ಆಸೆ ಹೆಚ್ಚಾಯಿತು. ಮೊದಲನೆ ಗರ್ಭಾವಸ್ಥೆಯಲ್ಲಿ ನನಗೆ ಅಷ್ಟೊಂದು ವಾಂತಿ ಇರಲಿಲ್ಲ. ಎರಡನೆಯ ಗರ್ಭಾವಸ್ಥೆಯಲ್ಲಿ ನನಗೆ ವಾಂತಿ ಶುರುವಾಯಿತು. ಅನ್ನ ಬಿಡಿ, ನೀರು ಕುಡಿದರೂ ವಾಂತಿ ಬರುತಿತ್ತು. ನಾನು ಓಡಿ ಹೋಗಿ ಬಾತ್ ರೂಮಿನಲ್ಲಿ ವಾಂತಿ ಮಾಡಿ ಬರುತ್ತಿದ್ದೆ. ನನ್ನ ವಾಂತಿ ನೋಡಿ ನೋಡಿ ನನ್ನ ಮಗ ಒಂದು ದಿನ ಬಕೆಟ್ ಹಿಡಿದು ನಿಂತಿದ್ದಾನೆ. ಅಮ್ಮಾ… ಇದರಲ್ಲಿ ವಾಂತಿ ಮಾಡು ಎಂದು ಬಕೆಟ್ ಕೈಯಲ್ಲಿ ಕೊಟ್ಟ. ನನಗೂ ಓಡಿ ಓಡಿ ಸುಸ್ತಾಗಿದ್ದ ಕಾರಣ ಬಕೆಟ್ ನಲ್ಲಿ ವಾಂತಿ ಮಾಡಿ ಮಲಗಿದೆ. ಸ್ವಲ್ಪ ಹೊತ್ತಿನಲ್ಲಿ ಸದ್ದು ಕೇಳಿ ಎಚ್ಚೆತ್ತಾಗ ಮಗನ ಕೈಯಲ್ಲಿ ಕ್ಲೀನ್ ಮಾಡಿದ ಬಕೆಟ್ ಇದೆ. ಇವರು ಬಂದಿದ್ರಾ ಎಂದು ನೋಡಿದರೆ ಹಾಕಿದ ಲಾಕ್ ಹಾಗೇ ಇದೆ. ಆರೋಗ್ಯ ಸರಿಯಿಲ್ಲಾಂದ್ರೆ ಒಂದು ತೊಟ್ಟು ನೀರು ಕೊಡೋದಕ್ಕೂ‌ ಹೆಣ್ಣಿನ ಗತಿಯಿಲ್ಲ ಎಂದು ಎಷ್ಟೋ ಸಲ ಗಂಡು ಮಗು ಹುಟ್ಟಿದಾಗ ಬೇಸರ ಮಾಡಿಕೊಂಡಿದ್ದೆ. ಆದರೆ ನನ್ನೆಲ್ಲಾ ಮಾತುಗಳನ್ನು ಹಿಂಪಡೆಯುವಂತೆ ಮಾಡಿದ್ದ ನನ್ನ ಮಗ. ಕ್ಲೀನ್ ಆದ ಬಕೇಟ್ ನೋಡಿದಾಗನನಗಂತೂ ನಿಜವಾಗಿ ಅಳುನೇ ಬಂದು ಬಿಡ್ತು. ನನ್ನ ಕಂದನಿಗೆ ಅವಾಗ ಬರಿ ಎರಡುವರೆ ವರ್ಷ…!! ಅವನ ಗುಣವನ್ನು ‌ನೋಡಿದ ಮೇಲೆ ಮತ್ತೆಂದೂ ಹೆಣ್ಣು ಹುಟ್ಟಲಿಲ್ಲ ಎಂದು ದುಃಖವನ್ನು ಪಡಲಿಲ್ಲ ನಾನು. ಎರಡನೆಯ ಮಗುವೂ ಗಂಡು ಮಗುವಾದಾಗ ಸಂಭ್ರಮದಿಂದ ಸ್ವಾಗತಿಸಿದೆ. ನನಗಿನ್ನೂ ನೆನಪಿದೆ. ಎಂಟು ವರ್ಷದ ಹಿಂದೆ ನನಗೆ ಆರೋಗ್ಯ ಸಮಸ್ಯೆಯಿಂದವೈದ್ಯರು ಬೆಡ್ ರೆಸ್ಟ್ ಹೇಳಿದ್ದರು. ಇವರು ಅಡುಗೆಯನ್ನು ಮಾಡಿಕೊಟ್ಟು ತೋಟದ ಉಸ್ತುವಾರಿ‌ ನೋಡಿಕೊಳ್ಳಲು ಹೋದಾಗ ಇಬ್ಬರೂ ಗಂಡು ಮಕ್ಕಳೇ ನನ್ನ ಅಪ್ಪ ಅಮ್ಮನಂತೆ ನೋಡಿಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೂ ಅಡುಗೆಯಿಂದ ಹಿಡಿದು ಮನೆಯ ಸ್ವಚ್ಚತೆಯ ಕೆಲಸದಲ್ಲೂ ಜೊತೆಗೂಡುತ್ತಾರೆ. ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಗಂಡು ಮಕ್ಕಳನ್ನು ಹೆಡೆದವರಿಗೆ ನೋವು ಕೊಡುವ ಪೋಷಕರೇ ಈಗ ಹೇಳಿ ಹೆಣ್ಣು ಮಕ್ಕಳು ಹುಟ್ಟಿದರೆ ಭಾಗ್ಯವೋ..? ಗಂಡೋ, ಹೆಣ್ಣೋ ನಮ್ಮ ಪಾಲಿಗೆ ಬಂದದ್ದು ಪಂಚಾಮೃತವೆಂದು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ಯೋಗ್ಯ ರೀತಿಯಲ್ಲಿ ಬೆಳಸುವುದು ಉತ್ತಮವೋ…?! *************************************************

ಯೋಗ್ಯತೆಯಲ್ಲ ಯೋಗ ಬೇಕು Read Post »

ಇತರೆ

ಸ್ವತಂತ್ರ ಭಾರತದ ಮೊದಲ ದೀಪಾವಳಿಯಂದು ರಾಷ್ಟ್ರಕ್ಕೆ ಮಹಾತ್ಮ ಗಾಂಧಿಯವರ ಸಂದೇಶ

ಲೇಖನ ಸ್ವತಂತ್ರ ಭಾರತದ ಮೊದಲ ದೀಪಾವಳಿಯಂದು ರಾಷ್ಟ್ರಕ್ಕೆ ಮಹಾತ್ಮ ಗಾಂಧಿಯವರ ಸಂದೇಶ    – ಡಾ. ಎಸ್.ಬಿ. ಬಸೆಟ್ಟಿ ಬಹುಶಃ ಭಾರತಕ್ಕಿಂತ ಹೆಚ್ಚು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾವ ಹೊಸ ರಾಷ್ಟ್ರವೂ ಎದುರಿಸಿರಲಿಕ್ಕಿಲ್ಲ. ಬ್ರಿಟಿಷರು ಆಖ್ಯೇರಾಗಿ ಉಪಖಂಡದ ಮೇಲಿನ ಹತೋಟಿಯನ್ನು ತ್ಯಜಿಸಿದಾಗ ಅವರು ತಮ್ಮ ಬೆನ್ನಿಗೆ ಒಂದಲ್ಲ ಎರಡು ರಾಷ್ಟ್ರಗಳನ್ನು ಬಿಟ್ಟು ಹೋಗಿದ್ದರು. ಒಂದು ಹೊಸ ರಾಷ್ಟ್ರವಲ್ಲ   ಎರಡು, ಭಾರತ ಮತ್ತು ಪಾಕಿಸ್ತಾನ. ಅಲ್ಪಸಂಖ್ಯಾತರಾದ ಮುಸ್ಲಿಮರ ಸ್ವದೇಶವಾಗಿ ಪಾಕಿಸ್ತಾನವನ್ನು ಸೃಷ್ಠಿಸಲಾಯಿತು. ಈ ಕೋಮುಗಲಭೆಗಳು ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡವು. ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳ ಗಡಿದಾಟಿ ಬಂದಿದ್ದು ಸುಮಾರು ಎಂಬತ್ತು ಲಕ್ಷ ನಿರಾಶ್ರಿತರನ್ನು ಸಲಹಬೇಕಾದ ಕೋಪ ಹತಾಶೆಗಳಲ್ಲಿ ಭಾರತ ಸರ್ಕಾರ ತೃಪ್ತಿ ಪಟ್ಟು ಕೊಳ್ಳಬೇಕಾಯಿತು. ಇದರ ಜೊತೆಗೆ ಹಿಂಸಾಚಾರದ ಹೊಸ ಅಲೆ. ಒಂದು ಕಡೆ ಹಿಂದೂಗಳು ಮತ್ತು ಸಿಖ್ಖರ ನಡುವೆ ಮತ್ತೊಂದು ಕಡೆ ಭಾರತದಲ್ಲೇ ಉಳಿಯಲು ನಿಶ್ಚಯಿಸಿದ ಮುಸಲ್ಮಾನರುಗಳು ಮತ್ತು ಹಿಂದೂಗಳ ನಡುವೆ ಹಿಂಸಾಚಾರ ಭುಗಿಲೆದ್ದಿತು.ಇಂಥದ್ದೇ ಇನ್ನೊಂದು ಅನಿಷ್ಟಕಾರಿ ಸಮಸ್ಯೆಯೆಂದರೆ ರಾಜಮಹಾರಾಜರ ಆಳ್ವಿಕೆಯ ಸಂಸ್ಥಾನಗಳು ಬ್ರಿಟಿಷರು ಉಪಖಂಡದ ಮೂರನೇ ಎರಡರಷ್ಟು ಭಾಗದ ಮೇಲೆ ನೇರ ಹತೋಟಿ ಹೊಂದಿದ್ದರು. ಸ್ವಾತಂತ್ರ್ಯ ಬಂದ ನಂತರ ಹೊಸ ರಾಷ್ಟ್ರಗಳೊಂದಿಗೆ ವಿಲೀನ ಹೊಂದುವಂತೆ ಸಂಸ್ಥಾನಗಳ ರಾಜರುಗಳ ಮನ ಒಲಿಸಬೇಕಾಯಿತು. ಆಗ್ರಹ ಪಡಿಸಬೇಕಾಗಿ ಬಂತು. ಈ ಪ್ರಕ್ರಿಯೆ ಎರಡು ವರ್ಷಗಳಿಗಳೂ ಹೆಚ್ಚು ಕಾಲ ನಡೆಯಿತು. ನಿರಾಶ್ರಿತರನ್ನು ಸಂತೈಸಬೇಕಾಗಿತ್ತು. ರಾಜರ ಸಂಸ್ಥಾನಗಳನ್ನು ವಿಲೀನ ಗೊಳಿಸಿಕೊಳ್ಳಬೇಕಿತ್ತು. ಇವೆರಡು ತತ್‌ಕ್ಷಣದ ಸಮಸ್ಯೆಗಳಾಗಿದ್ದವು. ಇದರ ಜೊತೆಗೆ ಹೊಸ ರಾಷ್ಟ್ರ ದ ಭವ್ಯ ಭವಿಷ್ಯವನ್ನು ರೂಪಿಸಬೇಕಾಗಿತ್ತು. ಗಾಂಧೀಜಿಯವರು ಹಿಂದೂ-ಮುಸ್ಲಿಮರ ನಡುವೆ ಐಕ್ಯತೆ ಸಾಧಿಸುವ ನಿಟ್ಟಿನಲ್ಲಿ ವಹಿಸಿದ ಪಾತ್ರ ಅತ್ಯಂತ ಪ್ರಶಂಸನೀಯವಾದುದಾಗಿದೆ. ಗಾಂಧೀಜಿಯವರು ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಈ ಬಗ್ಗೆ ಪ್ರಯೋಗ ಕೈಗೊಂಡಿದ್ದು, ಭಾರತದಲ್ಲಿ ಹಿಂದೂ ಮುಸ್ಲಿಂರ ಐಕ್ಯತೆ ಸಾಧಿಸಲು ಅವರಿಗೆ ಪ್ರೇರಣೆ ದೊರಕಿದಂತಾಯಿತು. ಅಂತೆಯೇ ಲಕ್ನೋ ಒಪ್ಪಂದವು ಸಹ ಇವರಿಗೆ ಒಂದು ರೀತಿ ಸಹಕಾರಿಯಾಯಿತು. ಭಾರತೀಯ ರಾಷ್ಟ್ರೀ ಯ ಕಾಂಗ್ರೆಸ್‌ನಲ್ಲಿದ್ದ ಅನೇಕ ಮುಸ್ಲಿಂರು ಇವರಿಗೆ ಹತ್ತಿರವಾಗತೊಡಗಿದರು.  ಇವರು ೧೯೦೯ರ ತರುವಾಯ ಈ ಎರಡೂ ಸಮುದಾಯಗಳ ನಡುವಿನ ಐಕ್ಯತೆಯ ಮೂಲಕ ದೇಶದ ಪ್ರಗತಿ ಬಗ್ಗೆ ಚಿಂತನೆ ನಡೆಸಲಾರಂಭಿಸಿದರು.  ಇವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಗಾಂಧೀಜಿಯವರು ಹಿಂದೂ-ಮುಸ್ಲಿಮರ ನಡುವಿನ ಐಕ್ಯತೆಯನ್ನು ಸಾಧಿಸುವ ಪರಿಸ್ಥಿತಿಯನ್ನು ಗಮನಿಸಿದಾಗ ಅವರು ಈ ರೀತಿ ಹೇಳಿರುವರು “ತೊಂದರೆಗಳಲ್ಲಿ ತೊಂದರೆ” ಹಾಗೂ ಇದರಿಂದ ತೀವ್ರ ಅಸಮಾಧಾನಗೊಂಡರು. ಗಾಂಧೀಜಿಯವರ ಪ್ರಯತ್ನದ ಫಲವಾಗಿ ೧೯೧೯ ರಿಂದ ೧೯೨೨ರ ವರೆಗೆ ಈ ಎರಡೂ ಕೋಮುಗಳ ನಡುವೆ ಐಕ್ಯತೆ ಸಾಧಿಸಲಾಗಿತ್ತು. ಈ ದೇಶದ ಸ್ವಾತಂತ್ರ್ಯ ಕ್ಕೆ ಹಿಂದೂ ಮುಸ್ಲಿಂರ ಐಕ್ಯತೆ ಅನಿವಾರ್ಯವೆಂದು ಅವರು ಸಾರಿದರು. ೧೫ನೇ ಆಗಸ್ಟ್ ೧೯೪೭ ರಂದು ಭಾರತ ಬ್ರಿಟಿಷ್ ಕಾಮನ್‌ವೆಲ್ತ್ಗೆ ಸೇರಿದ ಸ್ವತಂತ್ರ ರಾಷ್ಟ್ರ ದ ಸ್ಥಾನಮಾನವನ್ನು ಪಡೆಯಿತು. ೨೬ನೇ ಜನೇವರಿ ೧೯೫೦ ರಂದು ಸಂವಿಧಾನದತ್ತವಾಗಿ ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಈ ಅವಧಿಯಲ್ಲಿ ಹೊಸ ರಾಷ್ಟ್ರದ ಏಕತೆ ದಾರುಣವಾದ ಪರೀಕ್ಷೆಗಳಿಗೊಳಪಟ್ಟಿತು. ನಿರಾಶ್ರಿತರ ಸಮಸ್ಯೆ, ರಾಜರ ಸಂಸ್ಥಾನಗಳ ಸಮಸ್ಯೆ ಹೀಗೆ ಹಲವಾರು ಗಂಭೀರ ಸಮಸ್ಯೆಗಳ ಅಗ್ನಿ ದಿವ್ಯವನ್ನು ಹೊಸ ರಾಷ್ಟ್ರ ಎದುರಿಸಬೇಕಾಗಿ ಬಂತು. ೧೯೪೭ರ ಸೆಪ್ಟೆಂಬರ್‌ನಲ್ಲಿ ಕಾಶ್ಮೀರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದೊಂದಿಗೆ ಸಶಸ್ತ್ರ ಹೋರಾಟ ನಡೆಸಬೇಕಾಯಿತು. ೧೯೪೮ ರ ಮಾರ್ಚ್ನಲ್ಲಿ ಕಮ್ಯುನಿಷ್ಟ್ ಪಕ್ಷ ಚೀನಾದ ಮಾದರಿಯಲ್ಲಿ ಏಕಪಕ್ಷ ಸರ್ಕಾರದ ವ್ಯವಸ್ಥೆಯನ್ನು ಜಾರಿಗೆ ತರುವ ನಿರೀಕ್ಷೆಯಿಂದ ದಂಗೆ ಎದ್ದಿತು. ನಾಗಾಗಳಲ್ಲಿ ಬಹುಸಂಖ್ಯಾತ ಜನರು ಹಾಗೂ ಮಣಿಪುರಿ ಜನರು ಭಾರತ ಒಕ್ಕೂಟಕ್ಕೆ ಸೇರಲೊಪ್ಪದೆ ತಕರಾರು ತೆಗೆದಿದ್ದರು. ಇದರಿಂದ ಈಶಾನ್ಯ ಗಡಿ ಪ್ರದೇಶಗಳಲ್ಲಿ ಅಸಮಾಧಾನ ಭುಗಿಲೆದ್ದಿತು. ೧೨ನೇ ನವೆಂಬರ್ ೧೯೪೭ ರಂದು ಮಹಾತ್ಮ ಗಾಂಧಿಯವರು ನಡೆಸಿದ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು. ಇದು ಸ್ವತಂತ್ರ ಭಾರತದ ಮೊದಲ ದೀಪಾವಳಿ. ಸಹೋದರರು ಮತ್ತು ಸಹೋದರಿಯರು. ಇಂದು ದೀಪಾವಳಿ ಮತ್ತು ಈ ಸಂದರ್ಭದಲ್ಲಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಇದು ಹಿಂದೂ ಕ್ಯಾಲೆಂಡರ್ನಲ್ಲಿ ಉತ್ತಮ ದಿನವಾಗಿದೆ. ವಿಕ್ರಮ್ ಸಂವತ್ಸರ ಪ್ರಕಾರ, ನಾಳೆ ಗುರುವಾರದಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಪ್ರತಿವರ್ಷ ದೀಪಾವಳಿಯನ್ನು ಏಕೆ ಪ್ರಕಾಶದೊಂದಿಗೆ ಆಚರಿಸಲಾಗುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ರಾಮ ಮತ್ತು ರಾವಣನ ನಡುವಿನ ಮಹಾ ಯುದ್ಧದಲ್ಲಿ, ರಾಮನು ಒಳ್ಳೆಯ ಶಕ್ತಿಗಳನ್ನು ಮತ್ತು ರಾವಣನು ದುಷ್ಟ ಶಕ್ತಿಗಳನ್ನು ಸಂಕೇತಿಸಿದನು. ರಾಮನು ರಾವಣನನ್ನು ಗೆದ್ದನು ಮತ್ತು ಈ ಗೆಲುವು ಭಾರತದಲ್ಲಿ ರಾಮರಾಜ್ಯವನ್ನು ಸ್ಥಾಪಿಸಿತು. ಆದರೆ ಅಯ್ಯೋ! ಇಂದು ಭಾರತದಲ್ಲಿ ರಾಮರಾಜ್ಯ ಇಲ್ಲ. ಹಾಗಾದರೆ ನಾವು ದೀಪಾವಳಿಯನ್ನು ಹೇಗೆ ಆಚರಿಸಬಹುದು? ಒಳಗೆ ರಾಮನಿರುವವರು ಮಾತ್ರ ಈ ವಿಜಯವನ್ನು ಆಚರಿಸಬಹುದು. ಏಕೆಂದರೆ, ದೇವರು ಮಾತ್ರ ನಮ್ಮ ಆತ್ಮಗಳನ್ನು ಬೆಳಗಿಸಬಲ್ಲನು ಮತ್ತು ಆ ಬೆಳಕು ಮಾತ್ರ ನಿಜವಾದ ಬೆಳಕು. ಇಂದು ಹಾಡಿದ ಭಜನೆಯು ದೇವರನ್ನು ನೋಡುವ ಕವಿಯ ಬಯಕೆಯನ್ನು ಒತ್ತಿಹೇಳುತ್ತದೆ. ಜನಸಂದಣಿಯು ಕೃತಕ ಬೆಳಕನ್ನು ನೋಡಲು ಹೋಗುತ್ತದೆ ಆದರೆ ಇಂದು ನಮಗೆ ಬೇಕಾಗಿರುವುದು ನಮ್ಮ ಹೃದಯದಲ್ಲಿ ಪ್ರೀತಿಯ ಬೆಳಕು. ನಾವು ಪ್ರೀತಿಯ ಬೆಳಕನ್ನು ಒಳಗೆ ಬೆಳಗಿಸಬೇಕು. ಆಗ ನಾವು ಅಭಿನಂದನೆಗಳಿಗೆ ಅರ್ಹರು. ಇಂದು ಸಾವಿರಾರು ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಹಿಂದೂ, ಸಿಖ್ ಅಥವಾ ಮುಸ್ಲಿಂ ಆಗಿರುವ ಪ್ರತಿಯೊಬ್ಬ ರೋಗಿಯೂ ನಿಮ್ಮ ಸ್ವಂತ ಸಹೋದರ ಅಥವಾ ಸಹೋದರಿ ಎಂದು ನೀವು, ನಿಮ್ಮ ಹೃದಯದ ಮೇಲೆ ಕೈ ಹಾಕಿ ಹೇಳಬಹುದೇ? ಇದು ನಿಮಗಾಗಿ ಪರೀಕ್ಷೆ. ರಾಮ ಮತ್ತು ರಾವಣ ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ ನಡುವಿನ ನಿರಂತರ ಹೋರಾಟದ ಸಂಕೇತಗಳಾಗಿವೆ. ನಿಜವಾದ ಬೆಳಕು ಒಳಗಿನಿಂದ ಬರುತ್ತದೆ. ಗಾಯಗೊಂಡ ಕಾಶ್ಮೀರವನ್ನು ನೋಡಿದ ಪಂಡಿತ್ ಜವಾಹರಲಾಲ್ ನೆಹರು ಎಷ್ಟು ದುಃಖದ ಹೃದಯದಿಂದ ಮರಳಿದ್ದಾರೆ! ನಿನ್ನೆ ಮತ್ತು ಇಂದು ಮಧ್ಯಾಹ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ನನಗೆ ಬಾರಾಮುಲಾದಿಂದ ಕೆಲವು ಹೂವುಗಳನ್ನು ತಂದಿದ್ದಾರೆ. ಪ್ರಕೃತಿಯ ಅಂತಹ ಉಡುಗೊರೆಗಳನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ. ಆದರೆ ಇಂದು ಲೂಟಿ, ಅಗ್ನಿಸ್ಪರ್ಶ ಮತ್ತು ರಕ್ತಪಾತವು ಆ ಸುಂದರ ಭೂಮಿಯ ಸೌಂದರ್ಯವನ್ನು ಹಾಳು ಮಾಡಿದೆ. ಜವಾಹರಲಾಲ್ ಜಮ್ಮುವಿಗೂ ಹೋಗಿದ್ದರು. ಅಲ್ಲಿಯೂ ಎಲ್ಲವೂ ಸರಿಯಾಗಿಲ್ಲ. ಅವರ ಸಲಹೆಯನ್ನು ಕೋರಿದ ಶ್ರೀ ಶಮಲ್ದಾಸ್ ಗಾಂಧಿ ಮತ್ತು ಧೇಬರ್ಭಾಯ್ ಅವರ ಕೋರಿಕೆಯ ಮೇರೆಗೆ ಸರ್ದಾರ್ ಪಟೇಲ್ ಜುನಗಡಗೆ ಹೋಗಬೇಕಾಗಿತ್ತು. ಜಿನ್ನಾ ಮತ್ತು ಭುಟ್ಟೋ ಇಬ್ಬರೂ ಕೋಪಗೊಂಡಿದ್ದಾರೆ ಏಕೆಂದರೆ ಭಾರತ ಸರ್ಕಾರ ತಮ್ಮನ್ನು ಮೋಸ ಮಾಡಿದೆ ಎಂದು ಭಾವಿಸಿ ಜುನಗಡವನ್ನು ಒಕ್ಕೂಟಕ್ಕೆ ಸೇರಿಸಲು ಒತ್ತಾಯಿಸುತ್ತಿದೆ. ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸ್ಥಾಪಿಸುವ ಸಲುವಾಗಿ ಅವನ ಹೃದಯದಿಂದ ದ್ವೇಷ ಮತ್ತು ಅನುಮಾನವನ್ನು ಹೊರಹಾಕುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಿಮ್ಮೊಳಗಿನ ದೇವರ ಉಪಸ್ಥಿತಿಯನ್ನು ನೀವು ಅನುಭವಿಸದಿದ್ದರೆ ಮತ್ತು ನಿಮ್ಮ ಸಣ್ಣ ಆಂತರಿಕ ಜಗಳಗಳನ್ನು ಮರೆಯದಿದ್ದರೆ, ಕಾಶ್ಮೀರ ಅಥವಾ ಜುನಗಡದ ಯಶಸ್ಸು ನಿರರ್ಥಕವೆಂದು ಸಾಬೀತುಪಡಿಸುತ್ತದೆ. ಭಯದಿಂದ ಪಲಾಯನ ಮಾಡಿದ ಎಲ್ಲ ಮುಸ್ಲಿಮರನ್ನು ನೀವು ಮರಳಿ ಕರೆತರುವವರೆಗೂ ದೀಪಾವಳಿ ಆಚರಿಸಲಾಗುವುದಿಲ್ಲ. ಅಲ್ಲಿಂದ ಓಡಿಹೋದ ಹಿಂದೂಗಳು ಮತ್ತು ಸಿಖ್ಖರ ಜೊತೆ ಹಾಗೆ ಮಾಡದಿದ್ದರೆ ಪಾಕಿಸ್ತಾನವೂ ಬದುಕುಳಿಯುವುದಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಬಗ್ಗೆ ನಾನು ಏನು ಮಾಡಬಹುದೆಂದು ನಾಳೆ ಹೇಳುತ್ತೇನೆ. ಗುರುವಾರದಿಂದ ಪ್ರಾರಂಭವಾಗುವ ಹೊಸ ವರ್ಷದಲ್ಲಿ ನೀವು ಮತ್ತು ಅಖಿಲ ಭಾರತ ಸಂತೋಷವಾಗಿರಲಿ. ದೇವರು ನಿಮ್ಮ ಹೃದಯವನ್ನು ಬೆಳಗಿಸಲಿ ಇದರಿಂದ ನೀವು ಪರಸ್ಪರ ಅಥವಾ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಸೇವೆ ಸಲ್ಲಿಸಬಹುದು. ಜೈ ಹಿಂದ್ ಎಂದರೆ ಹಿಂದೂಗಳಿಗೆ ಜಯ ಮತ್ತು ಮುಸ್ಲಿಮರಿಗೆ ಸೋಲು ಎಂದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರು ಅದನ್ನು ಆ ಬೆಳಕಿನಲ್ಲಿ ತೆಗೆದುಕೊಳ್ಳುತ್ತಾರೆ ಏಕೆಂದರೆ ನಾವು ಅದನ್ನು ತಪ್ಪು ಬಳಕೆಗೆ ತಂದಿದ್ದೇವೆ ಮತ್ತು ಅವರಿಗೆ ಬೆದರಿಕೆ ಹಾಕಿದ್ದೇವೆ. ಇನ್ನೊಬ್ಬ ವ್ಯಕ್ತಿಯು ಕೂಗಿದ ಘೋಷಣೆಗಳನ್ನು ನಾವು ಕೇಳಿದಾಗ, ಇತರ ಸಹವರ್ತಿ ಜಗಳಕ್ಕೆ ಸಿದ್ಧರಾಗುತ್ತಿದ್ದಾರೆ ಎಂದು ನಾವು ಭಾವಿಸುತ್ತೇವೆ, ಮತ್ತು ನಾವು ಸಹ ಅದಕ್ಕೆ ತಯಾರಾಗಲು ಪ್ರಾರಂಭಿಸುತ್ತೇವೆ. ನಾವು ಈ ರೀತಿ ಹೋರಾಡುತ್ತಿದ್ದರೆ ಮತ್ತು ಒಂದು ಸ್ಥಳಕ್ಕೆ ಮತ್ತೊಂದು ಸ್ಥಳಕ್ಕೆ ಪ್ರತೀಕಾರ ತೀರಿಸಿದರೆ, ರಕ್ತದ ನದಿಗಳು ಭಾರತದಾದ್ಯಂತ ಹರಿಯುತ್ತವೆ ಮತ್ತು ಇನ್ನೂ ಪ್ರತೀಕಾರದ ಮನೋಭಾವ ಕಡಿಮೆಯಾಗುವುದಿಲ್ಲ. ಹಿಂದೂಗಳು ಎಷ್ಟು ಪ್ರೀತಿಯಿಂದ ವರ್ತಿಸಬೇಕು ಎಂದರೆ ಒಬ್ಬ ಮುಸ್ಲಿಂ ಮಗು ಅವರ ಮಧ್ಯೆ ಬಂದರೂ ಸಹ, ಅವನನ್ನು ತೊಳೆದು ಸ್ವಚ್ಛಗೊಳಿಸಬೇಕು, ಅವನನ್ನು ಚೆನ್ನಾಗಿ ಧರಿಸಿ ಮತ್ತು ಅಂತಹ ಪ್ರೀತಿಯಿಂದ ಶವರ್ ಮಾಡಬೇಕು. ಇದು ಸಂಭವಿಸಿದಾಗ ಮಾತ್ರ ಮುಸ್ಲಿಮರು ಹಿಂದೂಗಳು ತಮ್ಮ ಸ್ನೇಹಿತರಾಗಿದ್ದಾರೆಂದು ಅರಿತುಕೊಳ್ಳುತ್ತಾರೆ. ಗಾಂಧೀಜಿಯವರು ಹಿಂದೂ ಮುಸ್ಲಿಂರಿಬ್ಬರೂ ಒಳಗೊಂಡ ಸಮಾನ ವೇದಿಕೆಯೊಂದನ್ನು ರೂಪಿಸಲು ಪ್ರಯತ್ನಿಸಿ ವಿಫಲರಾದರು. ಪಾಕಿಸ್ತಾನ ಸೃಷ್ಠಿಯಲ್ಲಿ ಮುಸ್ಲಿಂಲೀಗ್ ಸಫಲವಾಯಿತು. ಆದರೆ ಉತ್ತರ ಭಾರತ ಮತ್ತು ಪೂರ್ವ ಭಾರತದ ಬಹುತೇಕ ಪ್ರದೇಶಗಳಲ್ಲಿ ಸಂಭವಿಸಿದ ಹಿಂದೂ-ಮುಸ್ಲಿಮರ ರಕ್ತಸಿಕ್ತ ಗಲಭೆಗಳ ಫಲ ಈ ಪಾಕಿಸ್ತಾನ ವಿಭಜನೆ ನಂತರ ಲಕ್ಷಾಂತರ ಮಂದಿ ಮುಸ್ಲಿಂರು ಭಾರತದಲ್ಲೇ ಉಳಿಯಲು ನಿರ್ಧರಿಸಿದರು. ೧೫ನೇ ನವೆಂಬರ್ ೧೯೪೭ ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯನ್ನುದ್ದೇಶಿಸಿ ಮಾಡಿದ ಈ ಭಾಷಣದಲ್ಲಿ ಭಾರತದಲ್ಲಿನ ಮುಸ್ಲಿಮರಿಗೆ ಸಮಾನ ಪೌರತ್ವ ಮತ್ತು ಹಕ್ಕುಗಳನ್ನು ನೀಡುವಂತೆ ತಮ್ಮ ಪಕ್ಷದ ಸಹೋದ್ಯೋಗಿಗಳಿಗೆ ಗಾಂಧೀಜಿ ಆಗ್ರಹಪಡಿಸಿದ್ದಾರೆ.              ರಾಜಕೀಯ ಅಧಿಕಾರ ಎಲ್ಲಾ ಅಸಮಾಧಾನ ಸಂಶಯಗಳಿಗೂ ಮೂಲ ಸ್ಥಾನ. ಭಾರತದಲ್ಲಿ ಅನೇಕ ಜಾತಿಗಳಿವೆ, ಧರ್ಮಗಳಿವೆ. ಒಂದು ಧರ್ಮ ಅಥವಾ ಜಾತಿ ಮತ್ತೊಂದು ಜಾತಿಯ ಮೇಲೆ ಆಳಲು ಪ್ರಯತ್ನಿಸಿದರೆ ಇಲ್ಲಿ ಶಾಂತಿ ಅಭಿವೃದ್ಧಿಗಳು ಕಣ್ಮರೆಯಾಗುವುವು. ಇದರಿಂದ ಕೋಮು ಸೌಹಾರ್ದವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಆದ್ದರಿಂದ ನ್ಯಾಯವು ಔದಾರ‍್ಯವೂ ಒಂದಕ್ಕೊಂದು ವಿರೋಧವಾಗಬೇಕಾದುದಿಲ್ಲ. ಸಂಶಯವನ್ನು ದ್ವೇಷವನ್ನು ಹೋಗಲಾಡಿಸಲು ಒಂದು ಔದಾರ‍್ಯ ಮುಖ್ಯ ಅಸ್ತ್ರವಾಗಬೇಕು. ಸಮಾಜದಲ್ಲಿ ಕೋಮು ಸೌಹಾರ್ದತೆ ಗಾಂಧೀಜಿಯವರ ಮನದಾಳದ ಆಸೆಯಾಗಿತ್ತು. ಅಂತೆಯೇ ತಮ್ಮ ಜೀವನಪೂರ್ತಿ ಅವರು ಮತೀಯ ಸಾಮರಸ್ಯಕ್ಕಾಗಿ ಹೋರಾಡಿದರು. ಗಾಂಧೀಜಿ ತಾವೊಬ್ಬ ಹಿಂದುವಾಗಿರುವೆನೆಂಬುದನ್ನು ಅಭಿಮಾನದಿಂದ ಹೇಳುತ್ತಿದ್ದರೂ ಅದೇ ಕಾರಣದಿಂದ ಎಲ್ಲಾ ಮತೀಯರನ್ನೂ ಸಮಾನವಾಗಿ ಕಾಣುತ್ತಾ ಸಹೋದರ-ಸಹೋದರಿಯರಂತೆ ಪ್ರೀತಿಸಬಲ್ಲೆನೆನ್ನುತ್ತಿದ್ದರು. ವಿವಿಧ ಮತ-ಧರ್ಮಗಳಿಗೆ ಸೇರಿದ ಜನರು ಭಾರತದಲ್ಲಿ ಒಟ್ಟಿಗೆ ಜೀವಿಸಬೇಕಾದ್ದರಿಂದ ಮತೀಯ ಸಾಮರಸ್ಯ ತೀರಾ ಅಗತ್ಯವೆಂದು ಅವರು ಒತ್ತಿ ಹೇಳುತ್ತಿದ್ದರು. ಭ್ರಾತೃತ್ವ ತತ್ವವನ್ನು ಮಾನ್ಯ ಮಾಡದೇ ಇರುವುದು ನಮ್ಮಲ್ಲಿರುವ ದೊಡ್ಡ ನ್ಯೂನತೆ, ಭ್ರಾತೃತ್ವ ಎಂದರೇನು? ಭ್ರಾತೃತ್ವ ಎಂದರೆ ಭಾರತೀಯರೆಲ್ಲ ಸಹೋದರರು ಎನ್ನುವ ಒಂದು ಸಮಾನತೆ, ಸಹೋದರತೆ ಸಮಾನ ಮನೋಭಾವ, ಭಾರತೀಯರೆಲ್ಲ ಒಂದು ಎನ್ನುವ ಮನೋಭಾವ. ಈ ತತ್ವ ಸಾಮಾಜಿಕ ಜೀವನದಲ್ಲಿ ಏಕತೆ ಮತ್ತು ಒಗ್ಗಟ್ಟನ್ನು ಮೂಡಿಸುತ್ತದೆ. ಕೋಮು ಸೌಹಾರ್ದವು  ರಾಜಕೀಯ ಐಕ್ಯತೆಗಿಂತ ಹೆಚ್ಚಿನ ಮಹತ್ವದಾಗಿದೆ. ಇದು ಪರಸ್ಪರ ಪ್ರೀತಿ, ವಿಶ್ವಾಸಗಳಾಧಾರಿತವಾಗಿರಬೇಕು. ಸಮಾಜ ಕಾರ್ಯಕರ್ತರು ಹಿಂದೂ ಮುಸ್ಲಿಂರಲ್ಲಿ ಪ್ರೀತಿ ವಿಶ್ವಾಸದ ಸಂಬಂಧ ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಹೀಗೆ ಪ್ರೀತಿ ವಿಶ್ವಾಸದ ಐಕ್ಯತೆ ಮುರಿಯಲಾರದ್ದು. **************************

ಸ್ವತಂತ್ರ ಭಾರತದ ಮೊದಲ ದೀಪಾವಳಿಯಂದು ರಾಷ್ಟ್ರಕ್ಕೆ ಮಹಾತ್ಮ ಗಾಂಧಿಯವರ ಸಂದೇಶ Read Post »

ಇತರೆ

ಭಾವಪೂರ್ಣ ಅಂತಿಮ ನಮನ.

ಭಾವಪೂರ್ಣ ಅಂತಿಮ ನಮನ. ಹುಬ್ಬಳ್ಳಿ ಯ ಕರ್ಮವೀರ ಕಾಲದಿಂದಲೂ ನಿನ್ನೆ ಮೊನ್ನೆಯವರಿಗೂ ಸುಮಾರು ಇಪ್ಪತ್ತು ವರ್ಷಗಳ ಆತ್ಮೀಯ ಒಡನಾಟ ಹೊಂದಿದ್ದ ನಾಡಿನ ದೈತ್ಯ ಬರಹಗಾರ ಆತ್ಮೀಯ ರವಿ ಬೆಳಗೆರೆ ಅವರ ಸಾವು ತುಂಬಾ ನೋವು ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುವೆ.ನನ್ನ ನೂರಾರು ಹನಿಗವನ ,ಕವನ, ಗಜಲ್, ಕಥೆ,ಬರಹ ಪ್ರಕಟಿಸಿ ನನಗೆ ಒಂದು ಶಕ್ತಿಯಾಗಿದ್ದ ಈ ಓದುಗರ ದೊರೆ ನನಗೆ ಸ್ನೇಹಿತನಾಗಿದ್ದ ಎಂಬ ಹೆಮ್ಮೆ.ಈ ಕೊಂಡಿ ಇಷ್ಟು ಬೇಗ ಕಳಚಬಾರದಿತ್ತು. ಹುಬ್ಬಳ್ಳಿ ಯ ಕಸ್ತೂರಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡುವ ಕಾಲದಿಂದಲೂ ನನಗೆ ಅವರ ಒಡನಾಟ.ಆಗಿನಿಂದಲೇ ನನ್ನ ಕಥೆ ಕಾವ್ಯ ಪ್ರಕಟಿಸುತ್ತಾ ಬಂದ ಅವರೊಂದಿಗೆ ಆತ್ಮೀಯತೆ ಬೆಳೆಯುತ್ತಲೇ ಹೋಯಿತು.ಬದುಕಿನ ದಕಡಿ ಅವರನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ತಂದಿತು.ಕರ್ಮವೀರಕ್ಕೆ ಮರು ಜೀವ ನೀಡಿದ ಅವರು ಪಾಪಿಗಳ ಲೋಕದಲ್ಲಿ ಅಂಕಣ ಬರೆಯುವ ಮೂಲಕ ಭೂಗತ ಲೋಕವನ್ನು ಪರಿಚಯಿಸಿದರು.    ಲಂಕೇಶ್, ಕನ್ನಡಪ್ರಭ ಹೀಗೆ ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಾ ಎಲ್ಲಿಯೂ ದಕ್ಕದೆ ಕಪ್ಪು ಸುಂದರಿ ಹಾಯ್ ಬೆಂಗಳೂರ್ ಆರಂಭಿಸಿ ಬದುಕಿಗೆ ತಿರುವು ಪಡೆದುಕೊಂಡರು.ಅದು ಅವರ ಕೈ ಹಿಡಿಯಿತು.ಅವರು ಮೊದಲ ಮಾರುತಿ ೮೦೦ ಕಾರುಕೊಂಡ ದಿನ ಅವರು ಜೊತೆ ಇದ್ದು ನಾನೇ ಸ್ವೀಟ್ ಕೊಟ್ಟಿದ್ದೆ.ಅಲ್ಲಿಂದ ಆರಂಭವಾದ ನಮ್ಮ ಬಾಂಧವ್ಯ ಬೆಳೆಯುತ್ತಲೇ ಹೋಯಿತು.ನಾನು ಪತ್ರಿಕೆಯ ಒಂದು ಭಾಗ ಅನ್ನುವಷ್ಟು ನಿರಂತರವಾಗಿ ನನ್ನ ಬರಹಗಳು ಪ್ರಕಟ ಆಗುತ್ತಲೇ ಹೋದವು. ನನ್ನ ಹೆಗಲ ಮೇಲೆ ಕಂಬಳಿ ಇತ್ತು ಕೈಯಲ್ಲಿ ಇತ್ತು ಕೊಳಲು ನಾನು ಎಲ್ಲೂ ಹೋಗಿರಲಿಲ್ಲ ಮಲಗಿರಲೂ ಇಲ್ಲ ನನ್ನ ಹೆಗಲ ಮೇಲೆ ಹೆಣವನಿಟ್ಟವರಾರು ಕೈಯಲ್ಲಿ ಬಂದುಕು ಕೊಟ್ಟವರಾರು. 🙏ಕವಿ ಮಿಂದರ್ ಪಂಜಾಬ್    ನನ್ನ ಪಂಚನದಿಗಳ ನಾಡಿನಲ್ಲಿ ಪ್ರವಾಸ ಕಥನ ದ ಈ ಕವಿತೆ ಯುದ್ಧ ವರದಿಗೆ ಆಫ್ಘಾನಿಸ್ತಾನ ಹೋದಾಗ ಇದನ್ನು ಉಲ್ಲೇಖಿಸಿ ಅಲ್ಲಿಂದಲೇ ತಮ್ಮ ವರದಿ ತಮ್ಮ ಪತ್ರಿಕೆ ಬರೆದು ಅಫ್ಘಾನಿಸ್ತಾನದ ಪರಸ್ಥಿತಿ ಸಿದ್ಧರಾಮ ಹೊನ್ಕಲ್ ಅವರು ಅವರ ಕೃತಿಯಲ್ಲಿ ಉಲ್ಲೇಖಿಸಿದ  ಕವಿತೆಯಂತಿದೆ ಎಂದು ಬರೆದು ನನಗೆ ಅಪಾರ ಹೆಸರು ತಂದಿದ್ದರು. ಅವರಿಗೆ ಶಹಾಪುರ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷತೆ ವಹಿಸಿದಾಗ ಅಹ್ವಾನಿಸಿದ್ದೆ.ಆದರೆ‌ ಆಗಲೇ ಅವರ ಆರೋಗ್ಯ ಕೈ ಕೊಡುತ್ತಾ ಬಂದಿದ್ದರಿಂದ ಬರಲು ಒಪ್ಪಲಿಲ್ಲ.ಆದರೆ ಬೆಂಗಳೂರು ಹೋದಾಗ ಮೂರು ನಾಲ್ಕು ದಿನ ಇದ್ದರೆ ಅದರಲ್ಲಿ ಒಂದು ದಿನ ಅವರ ಜೊತೆ ಭೇಟಿ ಮಾಡುವುದಿತ್ತು.      ಬೆಂಗಳೂರು ಇದ್ದಾಗ ಒಮ್ಮೆ ಫೋನು ಮಾಡಿ ಅಳಿಯ ಮಗಳು ಎಲ್ಲರೂ ಬನ್ನಿ ಅಂತ ಕರೆದಿದ್ದರು.ಎಲ್ಲರೂ ಹೋಗಿ ಬಂದಿದ್ದೇವು.ನಿಮ್ಮ ಮನೆಗೆ ರೊಟ್ಟಿ ಉಣ್ಣಲು ಬರುವೆ ಅಂತ ನನ್ನ ಹೆಣ್ಣು ಮಕ್ಕಳಿಗೆ ಅಳಿಯಂದಿರುಗಳಿಗೆ ಹೇಳಿದ್ದರು.ನನ್ನ ಮಗ ಬಸವಪ್ರಭು ಗೆ ಎಂ.ಎ.ಜರ್ನಾಲಿಸಂ ಮುಗಿಸಿ ಬಂದು ಭೇಟಿಯಾಗು.ನಿನಗೆ ಮಿಡಿಯಾದಲ್ಲಿ ಉದ್ಯೋಗ ಕೊಡಿಸುವೆ ಅಂತ ಅವನ ಹೆಗಲ ಮೇಲೆ ಕೈ ಹಾಕಿ ಹೇಳಿ ಧೈರ್ಯ ತುಂಬಿದ್ದರು.     ಕಥೆ ಕವನ ಗಜಲ್ ಕಾದಂಬರಿ ಪತ್ರಿಕಾ ಬರಹ ಖಾಸಬಾಥ್,ಹಸಿರು ಲಂಗದ ಹುಡುಗಿ, ಚಲನಚಿತ್ರ, ಕ್ರೈಮ್ ಡೈರಿ, ಟಿವಿ. ಹೀಗೆ ಏನೆಲ್ಲದರ ಜೊತೆ ಜೊತೆಗೆ ಪ್ರಾರ್ಥನಾ ಶಾಲೆ ಆರಂಭಿಸಿ ಬಹುದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿ ನಿಲ್ಲಿಸಿದ್ದಾರೆ.ಇಪ್ಪತ್ತು ಪೈಸೆಯ ಒಂದು ರಿಫೀಲ್ ಹಿಡಿದು ಬರೆದ ಬರಹಗಾರ ಐದುನೂರು ಕೋಟಿಯ ಅಸ್ಥಿ ಘೋಷಣೆ ಮಾಡಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದು ಕನ್ನಡ ಸಾಹಿತ್ಯ ಹಾಗೂ ಪತ್ರಿಕಾ ಲೋಕದಲ್ಲೆ ಒಂದು ಲೆಜೆಂಡ್ ಅಂದ್ರೆ ತಪ್ಪಿಲ್ಲ.     ಬಹುಮುಖ ಪ್ರತಿಭೆ.ಏನೂ ಬರೆದರೂ ಅದು ಓದಿಸಿಕೊಂಡು ಹೋಗುವಂತೆ,ಪ್ರೇಮದ ಹುಡಿ ಮೈಮನಗಳಿಗೆ ಅಂಟಿಕೊಳ್ಳುವಂತೆ ಬರೆಯುತ್ತಿದ್ದ ಅಕ್ಷರ ಮಾಂತ್ರಿಕ.ಆತ ನನಗೆ ಖಾಸಗಿ ಸ್ನೇಹಿತ ಅನ್ನೋ ಹೆಮ್ಮೆ ನನ್ನಂಥವರದು.ಓ..ಮನಸೇ ಆರಂಭವಾದಾಗ ಉದ್ಯೋಗ ಬಿಟ್ಟು ಬಂದುಬಿಡು ನಿನಗೆ ವಹಿಸುವೆ ಅಂದದುಂಟು.ಆದರೆ ನನಗೆ ನಾನಿರುವ ಪ್ರಪಂಚ ಬಿಟ್ಟು ಹೋಗುವ ಮನಸು ಇರಲಿಲ್ಲ.ಇಷ್ಟೆ ಸಾಕು ಎಂಬ ತೃಪ್ತಿ ನನ್ನದು.ಹಾಗಾಗಿ ನಾ ಎಂದು ಹೋಗಲಿಲ್ಲ.    ಅಂತಹ ರವಿ ಬೆಳಗೆರೆ ಗೆ ತುಂಬಾ ಜೀವನೋತ್ಸಾಹ ಇತ್ತು. ಸಾರ್ , ನೀವು ಖುಷ್ವಂತ್ ಸಿಂಗ್ ರಂತೆ ನೂರು ವರ್ಷಗಳ ಕಾಲ ಬರೀತಾ ಬದುಕುವೀರಿ, ಅಂದಾಗಲೆಲ್ಲ ತುಂಬಾ ಖುಷಿ ಪಡೋರು.ಹೌದೋ ಹೊನ್ಕಲ್, ನನಗೆ ಅದೇ ಆಸೆ ಇದೆ ಅನ್ನೋರು.ಆದರೆ ಸಾವು ಎಲ್ಲಿ ಹೊಂಚಿ ಕುಳಿತಿತ್ತೋ ಇಂದು ಧುತ್ತನೆ ಆವರಿಸಿಕೊಂಡು ಕರೆದೊಯ್ದಿದೆ. ಮನಸು ಈಗ ತುಂಬಾ ಭಾರ.ಒಂದು ಕೃತಿಗಾಗುವಷ್ಟು ನೆನಪುಗಳಿವೆ.ಆದರೆ ಬರೆಯಲು ನೋವು ಅಡ್ಡವಾಗುತ್ತಿವೆ.ಎಂದೂ ಮರೆಯದ ಹಾಡಿನಂತೆ ಈ ರವಿ ಬೆಳಗೆರೆಯವರು ನನಗೆ ಎಂದು ಮರೆಯದ ಹಾಡಿನಂತೆ ಕಾಡುವರು. ******************** ಸಿದ್ಧರಾಮ ಹೊನ್ಕಲ್

ಭಾವಪೂರ್ಣ ಅಂತಿಮ ನಮನ. Read Post »

ಇತರೆ

ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ

ಪ್ರಶಸ್ತಿ ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ ಸರಳಾ ರಂಗನಾಥರಾವ್ ಸ್ಮಾರಕ ಪ್ರತಿಷ್ಠಾನವು ಕೊಡುವ ೨೦೧೯ನೇ ಸಾಲಿನ ಸರಳಾ ರಂಗನಾಥರಾವ್ ಪ್ರಶಸ್ತಿಗೆ ಶಿರಸಿಯ ಕವಯಿತ್ರಿ ಶೋಭಾ ಹಿರೇಕೈ ಕೊಂಡ್ರಾಜಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ಲೇಖಕಿಯರ ಚೊಚ್ಚಲ ಕೃತಿಗೆ ಕೊಡಲಾಗುತ್ತಿದ್ದು, ಶೋಭಾ ಅವರ ಅವ್ವ ಮತ್ತು ಅಬ್ಬಲಿಗೆ ಕವನ ಸಂಕಲನ  ಈ ಪ್ರಶಸ್ತಿಗೆ ಆಯ್ಕೆಯಾಗಿದೆ. ಶೋಭಾ ಹಿರೇಕೈ ಕೊಂಡ್ರಾಜಿ ಅವರು  ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಂಡ್ರಾಜಿಯವರು. ಪ್ರಸ್ತುತ ಸಿದ್ದಾಪುರ ತಾಲ್ಲೂಕಿನಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮೊದಲ ಕವನ ಸಂಕಲನ `ಅವ್ವ ಮತ್ತು ಅಬ್ಬಲಿಗೆ’ ೨೦೧೯ರಲ್ಲಿ ಪ್ರಕಟಣೆ ಕಂಡಿದೆ. ಗ್ರಾಮೀಣ ಪರಿಸರ, ತಾಯ್ತನ ಈ ಸಂಕಲನದ ಪ್ರಧಾನ ಧಾರೆ. ಹಾಗೆ ಯುದ್ಧವಿರೋಧಿ ಧೋರಣೆ, ಬುದ್ಧನ ಕರುಣೆ ಹಾಗೂ ಅಯ್ಯಪ್ಪನನ್ನು ತಾಯಿಯ ಮಗನಾಗಿ ನೋಡುವ ಪ್ರಮುಖ ಕವಿತೆಗಳು ಅವ್ವ ಮತ್ತ ಅಬ್ಬಲಿಗೆ ಸಂಕಲನದಲ್ಲಿವೆ. ಅಲ್ಲದೇ ಹೆಣ್ಣಿನ ಕನಸು, ಪ್ರೀತಿಯ ಹಂಬಲ, ಬಂಜೆತನ ಹಾಗೂ ಶ್ರಮಿಕವರ್ಗದ ಬಗ್ಗೆ ಇರುವ ಕಳಕಳಿಯ ಕವಿತೆಗಳಿದ್ದು, ಕನ್ನಡ ಕಾವ್ಯ ಪರಂಪರೆಯನ್ನು ಶೋಭಾ ನಾಯ್ಕ ಹಿರೇಕೈ ಕವನಗಳಲ್ಲಿ ಕಾಣಬಹುದಾಗಿದೆ. ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಚಿಂತಾಮಣಿ ಕೊಡ್ಲೇಕೆರೆ ಮತ್ತು ವಿಮರ್ಶಕರಾದ ಜಿ. ಎನ್. ರಂಗನಾಥ್ ರಾವ್ ಅವರು ತೀರ್ಪುಗಾರರಾಗಿದ್ದರು. ೨೦೨೧ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂತೋಷವಾಗಿದೆ :  ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ’ ಪ್ರಶಸ್ತಿ ಘೋಷಣೆಯಾದ ಕ್ಷಣದ ಕುರಿತು ಕವಯಿತ್ರಿ ಶೋಭಾ ನಾಯ್ಕ ಅವರು ಪ್ರತಿಕ್ರಿಯಿಸಿದ್ದು, ನನಗೆ ಸಂತೋಷವಾಗಿದೆ. ನನ್ನ ಮೊದಲ ಸಂಕಲನಕ್ಕೆ ಪ್ರಶಸ್ತಿ ಬಂದದ್ದು ಇನ್ನೂ ಖುಷಿಯ ಸಂಗತಿ. ನನ್ನ ಹಳ್ಳಿಯ ಸಂಬಂಧ ಗಟ್ಟಿಯಾಗಿದೆ. ನಾನು ಬರೆಯುವುದು ಸಹ  ವಿರಳ. ಶಾಲಾ ಶಿಕ್ಷಕಿಯಾಗಿರುವ ನನಗೆ ಮಕ್ಕಳ ಜೊತೆಗಿನ ಒಡನಾಟ, ನನ್ನ ಪರಿಸರ ಹಾಗೂ ಕನ್ನಡ ಪಠ್ಯಗಳಲ್ಲಿನ ವಚನಗಳು ಸೇರಿದಂತೆ ಕನ್ನಡ ಕವಿಗಳ ಕವಿತೆಗಳನ್ನು ಓದುತ್ತಾ, ಕಲಿಸುತ್ತಾ ನನಗೂ ಬರೆಯುವ ಹಂಬಲ ಹುಟ್ಟಿತು. ಅದೇ ಅವ್ವ ಅಬ್ಬಲಿಗೆಯಾಗಿದೆ. ಮುಂದೆ ನನ್ನೂರಿನ ಚಿತ್ರಗಳನ್ನು ಗದ್ಯ ರೂಪದಲ್ಲಿ ಬರೆಯುವ ಕನಸಿದೆ. ನನ್ನ ಮೇಲೆ ದೇವನೂರು ಮಹಾದೇವ ಅವರ ಬರಹಗಳು, ಎದೆಗೆ ಬಿದ್ದ ಅಕ್ಷರ ತುಂಬಾ ಪ್ರಭಾವ ಬೀರಿವೆ. ಕನ್ನಡದ ಸೌಹಾರ್ದ, ಮಾನವೀಯ ಪರಂಪರೆ ನನ್ನ ಪ್ರಜ್ಞೆಯಲ್ಲಿದೆ ಎಂದರು. *******************************

ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ Read Post »

You cannot copy content of this page

Scroll to Top