ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ತೊರೆಯ ಹರಿವು

ಜನರ ನಡುವೆಯೇ ಇರುವ, ಅವರಿಂದ ಉಪಕೃತರಾಗುವ ಅವರಿಗೂ ಉಪಕರಿಸುವ ಶಾಸಕಾಂಗ ರಚನಕಾರರಾದ ಮಂತ್ರಿ- ಮಹೋದಯರು ಜನಪ್ರಿಯತೆಯ ಹಿಂದೆ ಬಿದ್ದರೆ ಮತದಾನ ಪ್ರಕ್ರಿಯೆಯಲ್ಲಿ ಅವರಿಗೆ ಅಗತ್ಯ ಇರಬಹುದು ಎಂದು ಒಂದು ಪಕ್ಷ ಒಪ್ಪಬಹುದೇನೋ.. ಆದರೆ ಶಾಸನಗಳನ್ನು ನ್ಯಾಯವಾಗಿ ಜಾರಿಗೊಳಿಸಿ ಪಾಲಿಸಬೇಕಾದ ಕಾರ್ಯಾಂಗ ವ್ಯವಸ್ಥೆಯಲ್ಲಿ ಕೆಲಸ ಮಾಡುವವರು ಹೀಗೆ ಜನಪ್ರಿಯತೆಯ ಬೆನ್ನು ಹಿಡಿದರೆ, ಅವರಿಂದ ನಿಷ್ಪಕ್ಷಪಾತ ಸೇವೆಯನ್ನು ನಿರೀಕ್ಷೆ ಮಾಡುವುದು ಸಾಧ್ಯವೇ?

Read Post »

ಅಂಕಣ ಸಂಗಾತಿ, ದೀಪದ ನುಡಿ

ದೀಪದ ನುಡಿ ಇಲ್ಲಿಗೆ ಮುಗಿಯುತ್ತದೆ. ಹದಿನಾಲ್ಕು ವಾರಗಳ ಕಾಲ ಮೂಡಿ ಬಂದ ಈ‌ ಅಂಕಣದಲ್ಲಿ ನಾ ಕಂಡ, ಕೇಳಿದ ,ಅನುಭವಿಸಿದ ಘಟನೆಗಳು, ಜೀವನದ ತಿರುವುಗಳು ಕಳಿಸಿದ ಒಳನೋಟಗಳಿಗೆ ಅಕ್ಷರದ ರೂಪು ಕೊಡಲು ಪ್ರಯತ್ನಿಸಿರುವೆ.ದೀಪ ಎಂದಿಗೂ ಮಾತಾಡದು ಎನ್ನುವವರೂ ಇದ್ದಾರೆ. ಆದರೆ ದೀಪದ ಬೆಳಕೇ ದೀಪದ ಮಾತು.ಜಗತ್ತಿರುವವರೆಗೂ ಬೆಳಕಿರಲೇಬೇಕು.ದೀಪಗಳು ಬೆಳಗಲೇ ಬೇಕು.ಅದು ಸೂರ್ಯನಿರಬಹುದು ಅಥವಾ ಪುಟ್ಟ ಹಣತೆಯಿರಬಹುದು.ಬೆಳಕು ಬೆಳಕೇ…ಬೆಳಕಲ್ಲೇ ನಮ್ಮ ಬದುಕು ಭಾವಗಳು ಅರಳಬೇಕು ಎನ್ನುವುದಂತೂ‌ಸತ್ಯ..ನಮ್ಮ ನಮ್ಮ ಎದೆಯಲ್ಲಿನ ಹಣತೆಗಳು ನಾವಿರುವವರೆಗೂ ಆರಂದತೆ ಕಾಪಿಡುವ ಜಬಾಬ್ದಾರಿ ನಮ್ಮದೇ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಇದೀಗ ನಾನು ಓದುವುದಕ್ಕಾಗಿ ದೂರದ ಧಾರವಾಡಕ್ಕೆ ಹೊರಟಿದ್ದೇನೆ ಎನ್ನುವಾಗ ಅವನಿಗೆ ಅದು ಅಮೇರಿಕೆಗೋ ಇಂಗ್ಲೆಂಡಿಗೋ ಹೊರಟಂತೆ ದೂರ ಪ್ರಯಾಣವಾಗಿ ಕಂಡಿದೆ. ಆತ ನಾನು ಧಾರವಾಡಕ್ಕೆ ಹೋಗಲೇ ಬಾರದೆಂದು ಹಠ ಹಿಡಿದ. ಎರಡು ಮೂರು ದಿನ ಮನೆಯಲ್ಲಿ ಈ ವಿಷಯದ ಕುರಿತಾಗಿಯೇ ವಾದ-ವಿವಾದಗಳು ನಡೆದವು. ಇದು ಎಂತಹ ವಿಕೋಪಕ್ಕೆ ಹೋಯಿತೆಂದರೆ ಅಂತಿಮವಾಗಿ ಗ್ರಾಮದೇವರಲ್ಲಿ ಪ್ರಸಾದ ಕೇಳುವುದೆಂದೇ ತೀರ್ಮಾನವಾಯಿತು

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಇದರ ಕತೆ ಸುತ್ತುವುದೇ, ತಾಯಿಯ ಪಾತ್ರದ ಸುತ್ತ. ಮನೆಯ ಜವಾಬ್ದಾರಿಗಳನ್ನೆಲ್ಲ ಪ್ರೀತಿಯಿಂದ ನಿರ್ವಹಿಸುವ ತಾಯಿ. ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿಸುತ್ತಾಳೆ. ಜವಾಬ್ದಾರಿ ಹೊರಲು ಹಿಂದೇಟು ಹಾಕುವ ಪತಿ. ಮಕ್ಕಳೂ ಮದುವೆಯಾಗಿ ಸೊಸೆಯಂದಿರು ಮನೆ ತುಂಬಿದರೂ ಅಮ್ಮನಿಗೆ ಮುಗಿಯದ ಕೆಲಸ. ಅಪ್ಪ ರಿಟೈರ್ ಆಗಿ ವಿಶ್ರಾಂತ ಜೀವನ

Read Post »

ಅಂಕಣ ಸಂಗಾತಿ, ತೊರೆಯ ಹರಿವು

ಪರೋಪಕಾರಿ ಚೇತನವಾಗಿರುವ ಕೆಲವರಿಗೆ ಅವರಂತಹ ಸುಬುದ್ಧಿಯುಳ್ಳ ಜನರೇ ನೆರೆಮನೆಯವರಾಗಿ ಸಿಗುತ್ತಾರೆಂಬ ವಿಶ್ವಾಸಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಅಂಥ ಭರವಸೆ ಇಟ್ಟುಕೊಳ್ಳುವ ತಪ್ಪನ್ನು ಎಂದಿಗೂ ಯಾರೂ ಮಾಡಬಾರದು ಎಂದು ಉಪದೇಶ ಮಾಡೋರಿದ್ದಾರೆ

Read Post »

ಅಂಕಣ ಸಂಗಾತಿ, ದೀಪದ ನುಡಿ

*ಮತ್ತೆ ಒಂದು ದಿನ ನಾವೆಲ್ಲ …ಉಸಿರಾಡುತ್ತೇವೆ ..ನಿರಾಳವಾಗಿ…ನಮ್ಮ ನಮ್ಮ ಅಸ್ತಿತ್ವಗಳ , ಗುರುತುಗಳ ಮರಳಿ ಪಡೆದೇ ಪಡೆಯುತ್ತೇವೆ ….ಈ ಯುದ್ಧ ನಿಲ್ಲದು …ನಾವು ಗೆಲುವವರೆಗೂ*

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ವಿಶ್ವನಾಥ ನಾಯಕ ಬಿ.ಎ. ಮುಗಿಯುತ್ತಿದ್ದಂತೆ ಎಂ.ಎ. ವ್ಯಾಸಂಗ ಮಾಡಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಅವನ ಮೂಲಕವೇ ನನಗೆ ವಿಶ್ವವಿದ್ಯಾಲಯ ಮತ್ತು ಎಂ.ಎ ವ್ಯಾಸಂಗದ ಕುರಿತು ಅಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ದೊರೆಯುವ ಹಾಸ್ಟೆಲ್ ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳ ಕುರಿತು ಮಾಹಿತಿ ದೊರೆಯಿತು. ಮತ್ತು ನನ್ನ ಎಂ.ಎ ಓದಿನ ಆಸೆಯೂ ಜಾಗೃತವಾಯಿತು

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗ ರಂಗೋಲಿ ಓಪತ್ತಿಯ ಒಡೆದ ಬಳೆ ಚೂರುಗಳು ” ನಾನು ಏನೂ ಹೇಳುವುದಿಲ್ಲ. ತಾಯಿ ಕರುಳಿನ ಸಂಕಟ, ನೋವು, ಅವಳ ಅಸಹಾಯಕತೆ, ನೋಡುವವರಿಗೆ ತಲುಪಬೇಕು. ಯಾವುದೇ ಡೈಲಾಗ್ ಇಲ್ಲ. ಕದಿರು ತುಂಬಿ ಅಂಗಳದಲ್ಲಿ ಪೇರಿಸಿಟ್ಟ ಒಣಹುಲ್ಲುಇದೆ. ಅದು ಅವಳಿಗೆ ಲಕ್ಷ್ಮೀ. ತುಳಸೀಕಟ್ಟೆಯಿದೆ. ನೀವು ಅದರ ಎದುರು ಬೀಳಬೇಕು, ನೀವು, ನಿಮ್ಮ ದುಃಖ..ನನಗೆ ನನ್ನ ಕಲಾವಿದೆಯ ಬಗ್ಗೆ ನಂಬಿಕೆಯಿದೆ. ಅಭಿನಯಿಸಿ” ನಿರ್ದೇಶಕರಾದ ಚಂದ್ರಹಾಸ ಆಳ್ವರು ಕರೆದು ಸಂದರ್ಭ ತಿಳಿಸಿದರು. ನನಗೆ ಭಯ. ತುಳಸೀಕಟ್ಟೆ ಎದುರು ಕುಸಿದು ಬೀಳಬೇಕು ಎಂದಿದ್ದಾರೆ. ಅದು ಹೇಗೆ..ಓಡಿ ಹೋಗಿ ಬೀಳುವುದು ಸಹಜವಾಗಿರಬೇಕು. ಮನಸ್ಸಿನಲ್ಲಿ ಬೀಳಬೇಕು ಎಂಬ ಅರಿವು ದೇಹವನ್ನು ತಡೆದು ಬಿಟ್ಟರೆ? ಅದು ಕೃತಕವಾದರೆ..? ಜೊತೆಗೆ ನಿರ್ದೇಶಕರು ಇಡೀ  ದೃಶ್ಯ ಒಂದೇ ಟೇಕಿನಲ್ಲಿ ಮುಗಿಯಬೇಕು. ರೀ ಟೇಕ್ ಆಗದು ಎಂದಿದ್ದಾರೆ. ನಾನು ಅಭಿನಯಿಸಿದೆ.  ಹೌ..ದು….. ಅದು ಅಭಿನಯವೇ? ನಿಜಜೀವನವೇ?.. ಮಗಳ ಬಳಿಯಿಂದ ಓಡುತ್ತೋಡುತ್ತ ಓಪತ್ತಿ ಅಂಗಳಕ್ಕೆ ಬರುತ್ತಾಳೆ.. ಆ ವೇಗದಲ್ಲಿ ಬಂದವಳು ಬೀಳುವುದು..? ತುಳಸಿಕಟ್ಟೆ ಹತ್ತಿರ ಬಂತು. ಒಂದು ಕ್ಷಣ ಮನಸ್ಸಿನಲ್ಲಿ ಹೇಗೆ ಬೀಳಲೀ ಎಂದಾಯಿತು. ಯೋಚನೆ ಮುಗಿಯುವ ಮುನ್ನ ಓಪತ್ತಿ  ಕಟ್ಟೆಯೆದುರು ಕಡಿದ ಬಾಳೆಯಂತೆ ಧೊಪ್ ಎಂದು ಉರುಳಿ ಬಿದ್ದಿದ್ದಾಳೆ. ಕೈಯ ಬಳೆಗಳು ಛಟ್- ಫಟ್.. ಚೂರಾಗಿ ಹಾರಿದವು. ಅಂಗೈ, ,ಮಣಿಕಟ್ಟಿನ ಬಳಿ ತುಂಡಾದ ಬಳೆ ಚೂರು ತಾಕಿ ರಕ್ತ . ಅವಳಿಗೆ ಅದರ ಅರಿವಿಲ್ಲ. ತನ್ನ ಮಗಳನ್ನು ಕಾಡಿಗೆ, ಕ್ರೂರ ಮೃಗಗಳ ಬಾಯಿಗೆ ಕಳುಹಿಸಬೇಕು. ಅದೂ ಮಗಳಿಗೆ ತಿಳಿಯದಂತೆ ಕಳುಹಿಸಬೇಕು. ಹಾ. ..ಅಯ್ಯೋ,ವಿಧಿಯೇ.. ಮನಸ್ಸಿನೊಳಗೆ ಭಾವ ಅನುರಣಗೊಳ್ಳುತ್ತಿತ್ತು. ತೆನೆ ಹುಲ್ಲನ್ನು ‘ಪಡಿಮಂಚ’ಕ್ಕೆ ಆಕ್ರೋಶ, ಅಸಹಾಯಕತೆ, ತನ್ನಬಗ್ಗೆ, ತನ್ನ ದುರ್ವಿಧಿಯ ಬಗ್ಗೆ ಹಳಿದು ಬಡಿಯುತ್ತಿದ್ದಾಳೆ. ದೃಶ್ಯ ಮುಗಿದಿತ್ತು. ಅದು ‘ ಕೋಟಿಚನ್ನಯ’ ಟಿವಿ ಧಾರಾವಾಹಿಯೊಳಗಿನ ಮನಕಲಕುವ ದೃಶ್ಯ. ‘ಕೋಟಿ ಚನ್ನಯ’, ಅದು ನಾಟಕವೋ, ಯಕ್ಷಗಾನವೇ ಎಂಬುದು ಸರಿಯಾಗಿ ಮನಸ್ಸು ತೆರೆದು ತೋರಿಸುತ್ತಿಲ್ಲ. ನಾಟಕಕ್ಕೆ ತನ್ನದೇ ಮಾರ್ದವತೆ, ಯಕ್ಷಗಾನದ ‘ಚಂಡೆಮದ್ದಳೆ’ಯ ಶೈಲಿ, ಚೆಂದವೇ ಬೇರೆ. ಹೀಗಾಗಿ ಅವು ನೆನಪಿನಲ್ಲಿ ತಮ್ಮದೇ ಖಾತೆ ತೆರೆದು ಕೂತಿರುತ್ತವೆ. ನಾನು ಚಿಕ್ಕವಳಿರುವಾಗ ನಮ್ಮ ಮನೆಯ ಅನತಿ ದೂರದಲ್ಲಿ ರಂಗದಲ್ಲಿ ಅರಳಿ ಛಾಪು ಬೀರಿದ ಆ ಪ್ರಸ್ತುತಿ ಕಥನವಾಗಿ ಹೆಚ್ಚು ತೀವ್ರತೆಯಿಂದ ದಾಖಲಾಗಿತ್ತು. ಅದು ಅವಿಭಜಿತ ದಕ್ಷಿಣ ಕನ್ನಡದ ಆಡು ಭಾಷೆಯಾದ ತುಳುವಿನಲ್ಲಿ ಆಪ್ತವಾಗಿ ಕಾಡಿ ಉಳಿದುಬಿಟ್ಟಿತ್ತು. ಈಗಲೂ ಅದೇ ಮಧುರತೆ. ಮೌಖಿಕ ಪರಂಪರೆಯ ಪಾಡ್ದನ ಕೃತಿಯೊಂದು ತುಳುನಾಡಿನ ಮನಸ್ಸುಗಳಲ್ಲಿ ನಾಟಕ, ಯಕ್ಷಗಾನ ರೂಪದಲ್ಲಿ ಮತ್ತಷ್ಟು ಹತ್ತಿರವಾಗಿ ಸಿನೇಮಾ, ಧಾರವಾಹಿಯಾಗಿ ಯಶಸ್ವಿಯಾದ ದಾಖಲೆ. ಮೌಖಿಕ ಪರಂಪರೆಗೆ ತನ್ನದೇ ಸೊಗಡು. ಇದು ತುಳುನಾಡಿನ ಅವಳಿ ವೀರ ಸಹೋದರರಾದ ಕೋಟಿ ಚೆನ್ನಯರ ಕಥೆ. ಪಾಡ್ದನದ ಕಥೆ ಸಾಹಿತ್ಯದ ಮಡಿಲಿಗೆ ಬಿದ್ದು ಅಕ್ಷರದಲ್ಲಿ ಬಗೆಬಗೆಯ ವಸ್ತ್ರ ತೊಟ್ಟು ಮತ್ತಷ್ಟು ಪ್ರಬಲಗೊಂಡು ಕಲೆಯ ಸೊಡರು ಹಿಡಿದು ಅನಾವರಣಗೊಂಡಿದೆ. ಬಾಲ್ಯದಲ್ಲಿ ಕಂಡ ಆ ಪ್ರಸ್ತುತಿ ಮೆದು ಮನಸ್ಸನ್ನು ಕಲಕಿ ಕಾಡಿತ್ತು. ಕಾಡುತ್ತಲೇ ಇದೆ.  ನಂತರದ ದಿನಗಳಲ್ಲಿ ನಾಟಕವಾಗಿ, ಸಿನೆಮಾವಾಗಿ ನೋಡಿದ್ದು ಅದೆಷ್ಟು ಸಲವೋ.. ತುಳುವರ ಬಾಯಿಯಲ್ಲಿ ಈ ಕಥೆ ಸಿನೇಮಾ ಆದಾಗ ಆ ಹಾಡುಗಳು ಮನೆಮನೆಗಳಲ್ಲೂ ಆತ್ಮೀಯವಾಗಿ ಗುನುಗಲ್ಪಟ್ಟಿದೆ. ಈಗಲೂ ಅಷ್ಟೇ ಪ್ರೀತಿಯಿಂದ ಹಾಡುತ್ತಾರೆ. “ಮೊಕುಲು ವೀರೆರ್, ಮೊಕುಲ್ ಶೂರೆರ್ “ ” ಎಕ್ಕಸಕ್ಕ‌ಎಕ್ಕಸಕ್ಕ” “ಪೆಮ್ಮಲೆತಾ ಬ್ರಹ್ಮಾ..ಎಂಕ್ಲೆ ಕುಲದೈವೋ” “ಜೋಡು ನಂದಾ ದೀಪ” ಎಂತಹ ಮಧುರ ಹಾಡುಗಳವು..ಈ ಮೂಲಕ ತುಳು ಭಾಷೆಗಿರುವ ಸಿಹಿಯೂ ಜಗತ್ತಿನಾದ್ಯಂತ ಪರಿಚಯಗೊಂಡಿದೆ.  ತುಳುವರಿಂದ ಆರಾಧನೆಗೊಳಪಟ್ಟ ಕೋಟಿ ಚೆನ್ನಯರ ಕಥೆಯು ಇಲ್ಲಿಯ ಜನರಿಗೆ ಎಂದೂ ರುಚಿಕೆಡದ ಆಕರ್ಷಣೆ. ಹಾಗಾಗಿ ಮತ್ತೆ ಮತ್ತೆ ಹೊಸ ಹೊಸ ರೂಪಗಳೊಂದಿಗೆ ಕಲಾ ಅವಿಷ್ಕಾರವಿಲ್ಲಿ ನಡೆಯುತ್ತದೆ. ಆ ದಿನ ಬೆಳಗಿನ ನೇಸರ ತೆಂಗಿನ ಮರದ ತುದಿಯಾಚೆ ತಲಪಿದ್ದ. ಫೋನ್ ಟ್ರಿಣ್ ಟ್ರಿಣ್ ಅಂದಿತ್ತು. ರಂಗಕರ್ಮಿ, ಸಂಗೀತ ನಿರ್ದೇಶಕರಾದ ಗುರುರಾಜ್ ಮಾರ್ಪಳ್ಳಿಯವರ ಕರೆಯದು. ” ‘ಕೋಟಿ ಚೆನ್ನಯ’ ಪ್ರಜಾ ಫಿಲಂಸ್ ಬ್ಯಾನರ್ ನಿಂದ ಧಾರವಾಹಿಯಾಗಿ ತಯಾರಾಗುತ್ತಿದೆ. ನಿಮಗೆ ಆಸಕ್ತಿಯಿದ್ದರೆ ಒಮ್ಮೆ ಬಂದು ಮಾತನಾಡಿ ಹೋಗಿ” ಎಂದು ವಿಳಾಸ ನೀಡಿದರು. ಕುತೂಹಲದೊಂದಿಗೆ ಹೋಗಿ ಧಾರವಾಹಿಯ ನಿರ್ದೇಶಕರಾದ ಚಂದ್ರಹಾಸ ಆಳ್ವ ಹಾಗೂ ಜೊತೆಗಿದ್ದ ಮಾರ್ಪಳ್ಳಿ ಸರ್ ರವರನ್ನು ಕಂಡು ಬಂದಿದ್ದೆ. ಮಾರ್ಪಳ್ಳಿ ಸರ್ ನನ್ನ ಬಗ್ಗೆ ಒಳ್ಳೆಯ ಮಾತೂ ಆಡಿದ್ದರು. ” ನನಗೆ ಕೋಟಿ ಚೆನ್ನಯ” ರ ತಾಯಿ ದೇಯಿ ಬೈದೆದಿ ಬಗ್ಗೆ ಆಸೆ. ನಿರ್ದೇಶಕರು ಕರೆ ಮಾಡಿ ” ನೀವು ಓಪತ್ತಿ ಪಾತ್ರ ಮಾಡಬೇಕು” ಎಂದರು. ಹೊಸ ಹೆಸರಿನ ಪಾತ್ರ. ಒಂದಿಷ್ಟು ನಿರಾಸೆಯಾದರೂ ಹ್ಹೂಂ ಗುಟ್ಟಿದೆ. ಮುಂದೆ ಮೊದಲ ದಿನದ ಚಿತ್ರೀಕರಣದ ನಂತರ ನನ್ನನ್ನು ಕರೆದ ನಿರ್ದೇಶಕರು ” ಚಿಂತಿಸದಿರಿ. ಈ ಪಾತ್ರ ನಿಮ್ಮ ಅಭಿನಯವನ್ನು ಧಾರವಾಹಿ ನೋಡಿದವರಿಗೆ ಪರಿಚಯಿಸುತ್ತದೆ” ಎಂದರು.  ನಾನು ಓಪತ್ತಿಯಾದೆ. ದೇಯಿ ಬೈದೆದಿಯ ತಾಯಿಯ ಪಾತ್ರ. ಈ ಧಾರವಾಹಿಯ ಮೊದಲ ಕಂತಿನಿಂದ ಸುಮಾರು 20 ಕಂತುಗಳ ತನಕ ನನ್ನ ಅಭಿನಯವಿತ್ತು. ಹಲವಾರು ಸಿನೇಮಾ, ಕೆಲವು ಧಾರಾವಾಹಿಗಳಲ್ಲಿ, ನಾಟಕಗಳಲ್ಲಿ ಚಿಕ್ಕ, ದೊಡ್ಡ, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಅಭಿನಯದ ದೃಷ್ಟಿಯಿಂದ ಅತ್ಯಂತ ಸಂತಸ, ತೃಪ್ತಿ ಉಣಿಸಿದ ಪಾತ್ರ ಓಪತ್ತಿ ಎನ್ನುವುದು ದಿಟ. ನಮ್ಮದೇ ಮಣ್ಣಿನೊಳಗೆ ಹೊಕ್ಕುಳು ನೆಟ್ಟ ಪಾತ್ರಗಳೊಳಗೆ ಪರಕಾಯ ಪ್ರವೇಶ ಮಾಡಬೇಕೇ?. ಅದು ಸ್ವಕಾಯ ವಿಕಸನ ಮತ್ತು ಕಲಾ ಜ್ವಲನ ಅಲ್ಲವೇ!. ಈ ಧಾರವಾಹಿಯ ಚಿತ್ರೀಕರಣದ ಸಮಯದಲ್ಲಿ ಉಂಡ ಮಧುರ ನೆನಪುಗಳಷ್ಟೋ, ಅಭಿನಯಕ್ಕೆ ಸವಾಲು ಅನಿಸಿದ ಸನ್ನಿವೇಶಗಳು, ಯಾವುದೋ ಶಕ್ತಿಯೊಂದು ಮುನ್ನಡೆಸುತ್ತಿದೆ ಎಂಬ ಭಾವ ಭರಿಸಿದ ಘಟನೆಗಳು, ನನಗೆ ದೊರಕಿದ ಇಲ್ಲಿಯ ಜನರ ಪ್ರೀತಿಯ ಮಹಾಪೂರ. ನನ್ನನ್ನು ಧಾರವಾಹಿಯಲ್ಲಿ ನೋಡಿ ಅತ್ಯಂತ ಆಪ್ತತೆಯಿಂದ ಇಲ್ಲಿನವರು ಮನೆ ಮಗಳಂತೆ ನಡೆಸಿಕೊಂಡ ಮನದ ಸಿರಿವಂತಿಕೆ ಮರೆಯಲಾಗದು.  ಕೋಟಿ ಚೆನ್ನಯ ತುಳು ಮಣ್ಣಿನ ಮೌಖಿಕ ಕಾವ್ಯ. ಕೆಳವರ್ಗದ ಜನರ ಪ್ರತಿಭಟನೆಯ ಅಸ್ತ್ರವಾಗಿ ಕೋಟಿ- ಚೆನ್ನಯರು ತೋರಿಬಂದಿದ್ದಾರೆ. ಅನ್ಯಾಯದ ವಿರುದ್ದ ಸಿಡಿದೆದ್ದ ಕಲಿಗಳು.  ಪರಂಪರಾಗತವಾಗಿ ಬಂದ ನಾಟಿ ವೈದ್ಯದಲ್ಲಿ ತಾಯಿ ದೇಯಿ ಬೈದೆದಿ  ಪರಿಣಿತಳು.  ಅವಳ ಹುಟ್ಟಿನ ಬಗ್ಗೆ ಪಾಡ್ದನವು ಸುಂದರವಾದ ಕಥೆ ಹೇಳುತ್ತದೆ. ಆಕೆ ಬ್ರಾಹ್ಮಣರ ಮಗಳು. ಮಕ್ಕಳಿಲ್ಲದ ಬ್ರಾಹ್ಮಣ ದಂಪತಿಗಳಿಗೆ ಕೇಂಜ ಪಕ್ಷಿಗಳಿಂದ, ಸೂರ್ಯದೇವರ  ಅನುಗ್ರಹದಲ್ಲಿ ದೊರೆತ ಮಗು. ಆದರೆ ಅಂದಿನ ಕಾಲದ ಸಂಪ್ರದಾಯದಂತೆ ಮದುವೆಗೆ ಮುನ್ನವೇ ಋತುಮತಿಯಾದ ಆಕೆಯನ್ನು ಕಣ್ಣಿಗೆ ಬಟ್ಟೆಕಟ್ಟಿ ಕಾಡಿಗೆ ಬಿಡಲಾಗುತ್ತದೆ. ಈ ಸಣ್ಣ ಎಳೆ ನಿರ್ದೇಶಕರ ಮನಸ್ಸಿನ ಮೂಸೆಯಲ್ಲಿ ತಾಯಿ ಓಪತ್ತಿಯ ಸಂಕಟ, ತಳಮಳ, ಬಂಜೆಯೆನಿಸುವ ಹೆಣ್ಣಿನ ನೋವು ಎಲ್ಲವನ್ನೂ ಎಳೆಎಳೆಯಾಗಿ ತೆರೆದಿಡುವ ಪಾತ್ರವಾಗಿ ಹೊರಹೊಮ್ಮಿದೆ. ಒಂದು ಸನ್ನಿವೇಶವಿದೆ. ಓಪತ್ತಿ ಶುಭ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಾಳೆ. ಆದರೆ ಆಕೆಗೆ ಹೆಂಗಸರು ಬಂಜೆಯೆಂದು ಅವಮಾನಿಸಿ ಕಳುಹಿಸುತ್ತಾರೆ. ದುಃಖದ ಮಹಾಪೂರ ಧರಿಸಿ ಮನೆಗೆ ಬಂದವಳು ಪತಿಯ ಬಳಿ ಪ್ರಶ್ನಿಸುತ್ತಾಳೆ, ರೋಧಿಸುತ್ತಾಳೆ. ” ನನಗೆ ಮಕ್ಕಳಿಲ್ಲ. ಏನು ಮಾಡಲು ಸಾಧ್ಯ. ಇದೆಂತಹ ಶಿಕ್ಷೆ. ಹೆಣ್ಣಾದ ತಪ್ಪಿಗೆ ಈ ಸಮಾಜ ನನ್ನ ಚುಚ್ಚಿ ಹಿಂಸಿಸುತ್ತಿದೆ. ನಾನು ಬಂಜೆ, ಓಪತ್ತಿ ಬಂಜೆ” ಈ ಸಂಭಾಷಣೆಯನ್ನು ಗಂಡ ‘ಪಿಜಿನ’ ರಲ್ಲಿ( ಅರವಿಂದ ಬೋಳಾರ್) ಹೇಳಿ ಅತೀವ ದುಃಖ ವ್ಯಕ್ತಪಡಿಸುತ್ತಾಳೆ. ಆ ಸಮಯ ಚಿತ್ರೀಕರಣ ನೋಡುತ್ತಿದ್ದವರಲ್ಲಿ ಒಂದು ಕಾರಿನ ಚಾಲಕರೂ ಇದ್ದರು. ಅವರಿಗೆ ಕಲಾವಿದರಿಗೆ ಊಟ, ತಿಂಡಿ ತಂದುಕೊಡುವ ಕೆಲಸ. ಆ ಶಾಟ್ ಮುಗಿದಾಗ ನಿರ್ಮಾಪಕರು ಅವನನ್ನು ಕರೆದರೆ ಎಲ್ಲೂ ಕಾಣಿಸಲಿಲ್ಲ. ಅವರು ಚಿತ್ರೀಕರಣ ನಡೆಯುವ‌ ಮನೆಯ ಹಿಂಬದಿಗೆ ಹೋಗಿ ಅಳುತ್ತಿದ್ದರಂತೆ. ಅವರನ್ನು ಹುಡುಕಲು ಹೋದವರಲ್ಲಿ ಕಣ್ಣೀರಿಟ್ಟು, ‘ ನಾನು ನಿಜ ಜೀವನದಲ್ಲಿ ಕೊಲೆಯ ಅಪರಾಧದಲ್ಲಿ ಶಿಕ್ಷೆ ಅನುಭವಿಸಿ ಬಂದಿರುವೆ. ಒಂದು ದಿನವೂ ಕಣ್ಣೀರಿಡಲಿಲ್ಲ. ಆ ಹೆಂಗಸು ಇವತ್ತು ನನ್ನ ಎದೆಯಾಳದ ಸಂಕಟವೆಲ್ಲ ಹೊರಹಾಕಿ ಬಿಟ್ರು” ಎಂದರಂತೆ. ಅವರು ಮೌನವಾಗಿ ಮೂಲೆ ಹಿಡಿದು ಕೂತಿದ್ದರು. ನಾನು ಹೋಗಿ  “ಬನ್ನಿ ಅಣ್ಣಾ” ಎಂದೆ. ” ನೀವು ಯಾರು,ನನ್ನನ್ನು ಈ ರೀತಿ ಅಳುವಂತೆ ಮಾಡಿದಿರಿ.(ಈರ್ ಯೆನನ್ ಬುಲ್ಪಾಯೆರ್ ಅಕ್ಕಾ..) “ ಎಂದಾಗ ಓಪತ್ತಿ ಪಾತ್ರ ನನ್ನ ಒಪ್ಪಿಕೊಂಡ ಸಂತೃಪ್ತಿಯ ಭಾವದ ಜೊತೆಗೆ ಪರಿಣಾಮಕಾರಿ ಪ್ರಸ್ತುತಿ ನೋಡುಗನ ಮೇಲೆ ಬೀರುವ ಪ್ರಭಾವ ಮನಗಂಡೆ. ಮತ್ತೊಂದು ಸಂದರ್ಭ ಮಗಳು ಮೈನೆರೆತಾಗ ಪರಿಣಾಮ ನೆನೆದು ತಾಯಿಯ ಎದೆ ಕುಸಿಯುತ್ತದೆ. ಮುಂದೆ ನಡೆಯುವ ದುರಂತ ಆಕೆ ಊಹಿಸಬಲ್ಲಳು. ಈ ದೃಶ್ಯವನ್ನೇ ನಾನು ಲೇಖನದ ಆರಂಭದಲ್ಲಿ ತಿಳಿಸಿದ್ದು. ಆ ದೃಶ್ಯದ ಚಿತ್ರೀಕರಣದ ದಿನದಂದು ನಿರ್ದೇಶಕರ ಬಳಿ ಕಥೆಯ ಬಗ್ಗೆ ಚರ್ಚಿಸಲು ತುಳುಭಾಷಾ ವಿದ್ವಾಂಸರೂ, ಹಿರಿಯರೂ ಆದ ವಾಮನ ನಂದಾವರ ಬಂದಿದ್ದರು. ಅವರ ಕೆಲಸ ಮುಗಿಸಿ ಹೊರಡಲು ಅನುವಾದಾಗ ನಿರ್ದೇಶಕರು ಅವರನ್ನು ತಡೆದು  ” ಇರಿ. ಈ ಒಂದು ದೃಶ್ಯ ನೋಡೋಣ. ಮತ್ತೆ ಹೊರಡಿ”  ಎಂದರಂತೆ. ಅವರು ಅರೆಮನಸ್ಸಿನಲ್ಲಿ ” ತಡವಾಯಿತು” ಎನ್ನುತ್ತಾ ಕುಳಿತು ಈ ದೃಶ್ಯ ನೋಡಿದ್ದಾರೆ. ” ಅಬ್ಬಾ,ಎಂತಹ ದೃಶ್ಯ.. ಈಗ ತಿಳಿಯಿತು. ನನ್ನನ್ನು ಹೋಗಲು ಬಿಡದೆ ಕಟ್ಟಿಹಾಕಿದ ರಹಸ್ಯ” ನನ್ನ ಬಳಿ ಬಂದು ” ನಿಮ್ಮ ಅಭಿನಯ ಮೆಚ್ಚಿದೆ. ಸರಸ್ವತಿಯ ಅನುಗ್ರಹ ಸದಾ ಇರಲಿ. ” ಎಂದರು. ಕಲಾವಿದೆಗೆ ದೊರಕಿದ ಮನ್ನಣೆ. ನಿರ್ದೇಶಕರೂ ಸಂತೃಪ್ತಿಯಲ್ಲಿದ್ದರು. ಚಿತ್ರೀಕರಣ ನೋಡುತ್ತಿದ್ದ ಹಳ್ಳಿಯ ಮುಗ್ಧ ಜನರು ಕಣ್ಣೀರಿಡುತ್ತಿದ್ದರಂತೆ.  ” ಆ ರೀತಿ ಉರುಳಿ ಬಿದ್ದದ್ದು ನನಗೆ ಆಶ್ಚರ್ಯವಾಯಿತು”  ನಿರ್ದೇಶಕರು ನುಡಿದಾಗ ನಾನು ನಿಧಾನವಾಗಿ ತುಸು ಸಂಕೋಚದಲ್ಲಿ ಅಂದೆ. “ಸರ್,ಅದೂ..ತುಳಸೀಕಟ್ಟೆಯ ಬಳಿ ಬರುವಾಗ ಸೀರೆ ಕಾಲ ಕೆಳಗೆ ಸಿಕ್ಕಿಬಿದ್ದು ಎಡವಿದಂತಾಯಿತು. ಆಧಾರ ಸಿಗದೆ ನೇರ ತುಳಸಿಕಟ್ಟೆ ಎದುರಿಗೇ ಬಿದ್ದೆ.” ” ಹಾಗಾದರೆ ಒಂದು ಶಕ್ತಿ ನಮ್ಮನ್ನು ನಡೆಸುತ್ತದೆ ಎಂಬುವುದರಲ್ಲಿ ಸಂಶಯವಿಲ್ಲ. ಅಲ್ವಾ. ಇರಲಿ ನಿಮ್ಮ ಕೈ ನೋಡಿ, ರಕ್ತ ಸೋರುತ್ತಿದೆ. ಪಟ್ಟಿ ಹಾಕಬೇಕು” ಎನ್ನುವಾಗ ನಿರ್ಮಾಪಕರಾದ ಆಶೋಕ ಸುವರ್ಣರು ಕಣ್ಣೊರೆಸುತ್ತ ಪಟ್ಟಿ ಹಿಡಿದು ಬಳಿ ಬಂದಿದ್ದರು. ಈ ಧಾರವಾಹಿಯಲ್ಲಿ ನಾನು ತುಳುನಾಡಿನ ಬಹುದೊಡ್ಡ ಕಲಾವಿದರಾದ ಅರವಿಂದ ಬೋಳಾರ್ ಜೊತೆಗೆ ಅಭಿನಯಿಸಿದ್ದು ಭಾಗ್ಯವೆನ್ನಬಹುದು. ಚಿತ್ರೀಕರಣದ ಸಮಯದಲ್ಲಿ ಯಾವಾಗಲೂ ನಗಿಸುತ್ತಿದ್ದು ವಾತಾವರಣವನ್ನು ಸದಾ ಹಸಿರಾಗಿಡುವ ಅತೀ ಅಪರೂಪದ ಕಲಾವಿದರಿವರು.  “ನನಗೆ ಈ ಧಾರವಾಹಿಯಲ್ಲಿ ನಿಮ್ಮ ಅಭಿನಯ ಇಷ್ಟ. ಯಾಕೆ ಹೇಳಿ..ನೀವು ನನ್ನ ಹೆಂಡತಿಯ ಕಣ್ಣಲ್ಲಿ ನೀರು ತರಿಸಿದ್ದೀರಿ. ಇದು ನನಗೆ ಆಗದೇ ಇದ್ದ ಕೆಲಸ “ ಎಂದು ತಮಾಷೆ ಮಾಡಿ ನಗುತ್ತಿದ್ದರು.   ಒಂದು ಧಾರವಾಹಿ ಜನರ ಮನಸ್ಸಿಗೆ ಆಪ್ತವಾಗಿ ತಮ್ಮದೇ ಮನೆಯ ಕಥೆ, ತಮ್ಮವರ ಕಥೆ ಅನಿಸಿ  ಆ ಕಲಾವಿದರೂ ಮನೆಯ ಸದಸ್ಯರೇ ಆಗಿ ಆರ್ತಿಯಿಂದ ಒಪ್ಪುವ ಸಂಭ್ರಮದ ಅನುಭೂತಿ ಸಾಮಾನ್ಯವಾದುದ್ದಲ್ಲ. ಕೋಟಿ ಚೆನ್ನಯರು ತುಳುನಾಡಿನ ಆರಾಧ್ಯ ದೈವ. ಜನರು ಭಯ, ಭಕ್ತಿಯಿಂದ ಕೋಲ, ನೇಮ ಎಂದು ಆರಾಧಿಸುತ್ತಾರೆ. ಅಂತೇ ಇಲ್ಲಿ ನಮ್ಮನ್ನೂ  ಗೌರವದಿಂದ ಮಾತನಾಡಿಸುತ್ತಿದ್ದರು. ಇದು ಕಲಾವಿದೆಯಾಗಿ ನನಗೆ ದೊರಕಿದ ಪುಳಕ,ಸಾರ್ಥಕತೆ. ಎದೆಯಲ್ಲಿ ಭಿತ್ತಿದ ಈ ಪಾಡ್ದನ ಕೃತಿಯ ಬೀಜ ಮುಂದೆ  “ಸಿರಿ” ಎಂಬ ನಾಟಕ ಚಿಗುರಲು ಮೂಲ ದ್ರವ್ಯವಾಯಿತು.  ಈ ಪುಣ್ಯ ಮಣ್ಣಿಗೆ, ಓಪತ್ತಿಗೆ ಶರಣು.

Read Post »

ಅಂಕಣ ಸಂಗಾತಿ, ತೊರೆಯ ಹರಿವು

ಮಹಾತ್ಮ ಗಾಂಧಿ, ‘ಗ್ರಾಹಕರನ್ನು ದೇವರು’ ಎಂದರು. ಆದರೆ, ದೇವರನ್ನೇ ಜಾಹೀರಾತಿಗೆ ಬಂಡವಾಳ ಮಾಡಿಕೊಂಡವರು ನಾವು. ಇಂತಲ್ಲಿ ಇಂತಹ ಪೂಜಾ ಕೈಂಕರ್ಯವೋ, ಸೇವೆಯೋ ಕೈಗೊಂಡರೆ ಇಂತಹದ್ದು ಸಿದ್ಧಿಸುತ್ತದೆ. ನಮ್ಮ ದೈವದ ಸ್ಥಳ ಮಹತ್ವ ಇದು, ನಮ್ಮ ದೈವದ ಶಕ್ತಿ ಇಂತಿಥದ್ದು… ಇದೆಲ್ಲಾ ಜಾಹೀರಾತು ತಾನೇ!? ಹೀಗೆ ದೇವಾನುದೇವತೆಗಳೇ ಜಾಹೀರಾತಿಗೆ ಬಿಕರಿಯಾಗುವಾಗ ಜನಸಾಮಾನ್ಯರ ಪಾಡೇನು?

Read Post »

ಅಂಕಣ ಸಂಗಾತಿ, ದೀಪದ ನುಡಿ

ಅಂಕಣ ಬರಹ ದೀಪದ ನುಡಿ ಗೆಲ್ಲುವುದು ಬೆಳಕೇ ಒಳಿತು-ಕೆಡುಕುಗಳು‌ ಇಲ್ಲದೆ ಈ ಜಗತ್ತಿಲ್ಲ. ಇಲ್ಲಿ ಅಳತೆಗಳು ಮಾತ್ರಾ ಸಾಪೇಕ್ಷವೇ ಹೊರತು ಒಳತು-ಕೆಡುಕುಗಳಲ್ಲ. ಒಳಿತು ಕೆಡುಕುಗಳಿಲ್ಲವೇ ಇಲ್ಲ ಎಂದು ವಾದಿಸುವವರೂ ಇದ್ದಾರೆ ನಮ್ಮ ನಡುವೆ. ಆದರೆ ಹಾಗೆ ವಾದಿಸಿದವರೆಲ್ಲ ಬಹುತೇಕ ಯಾವುದೋ ಸಂದರ್ಭದಲ್ಲಿ ಕೆಡುಕಿಗೆ ಬಲಿಯಾಗಿ ನೋಯಬಹುದು ಅಥವಾ  ಇತರರಿಗೂ ಕೆಡುಕು ಮಾಡಲೂಬಹುದು. ಮಾನಸಿಕವಾಗಿ, ದೈಹಿಕವಾಗಿ , ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂಸಿಸುವುದನ್ನೇ ಕೆಡುಕು ಎಂದು ಬಹಳ ಸರಳವಾಗಿ ಹೇಳಬಹುದು.ದೊಡ್ಡ ದೊಡ್ಡ ವ್ಯಾಖ್ಯಾನದ ಅವಶ್ಯಕತೆಯೇ ಇಲ್ಲ. ಬಹಳಷ್ಟು ಸಲ ಸಜ್ಜನರೇ ಕೆಡುಕಿಗೆ ಬಲಿಯಾಗಿ ಪರಿತಪಿಸುವುದು. ದುರ್ಜನರ ಅಟ್ಟಹಾಸಕ್ಕೆ ಸಾಕ್ಷಿಯಾಗುವುದು. ಇಷ್ಟೆಲ್ಲ ಕೆಡುಕು ಮಾಡಿದವರು ಚೆನ್ನಾಗಿಯೇ ಇದ್ದಾರೆ .ನಾನು ಯಾರಿಗೂ ಏನೂ ಕೆಡುಕು ಮಾಡದಿದ್ದರೂ ,ಕೆಡುಕ ಬಯಸದಿದ್ದರೂ ನನಗೇ ಈ ಕಷ್ಟ? ಜಗತ್ತಿನಲ್ಲಿ ಯಾವಾಗಲೂ ಒಳ್ಳೆಯತನವೇ ಕಷ್ಟಕ್ಕೆ ಈಡಾಗುವುದೇಕೆ ಎನ್ನುವುದು ಬಹಳ ಜನ ನೊಂದವರ ಪ್ರಶ್ನೆ.    ಕೆಡುಕು ಮೊದಲು ವಿಜೃಂಭಿಸಿದರೂ ಕೊನೆಗೆ  ಗೆಲ್ಲುವುದು ಒಳಿತೇ. ಕೆಡುಕಿಗೆ ಹೇಗೆ  ಬೆಂಬಲವಿದೆಯೋ ಹಾಗೇ  ಜಗತ್ತಿನಲ್ಲಿ ಒಳಿತಿಗೂ ಬೆಂಬಲವಿದೆ.ಒಳತು ನಿರಾಸೆಗೊಳಗಾಗಬೇಕಾದ ಅವಶ್ಯಕತೆಯಿಲ್ಲ..ಒಳಿತಿನಿಂದ ಏನೂ ಲಾಭವಿಲ್ಲ ಬರಿದೆ ಕಷ್ಟ ಎಂದುಕೊಂಡು ಕೆಡುಕಿನ ಹಾದಿ ತುಳಿದರೆ ಅಲ್ಲಿಗೆ ಕೆಡುಕು ಮತ್ತೂ ಅಟ್ಟಹಾಸಗೈಯುತ್ತದೆ. ಒಳಿತಿನ ಗೆಲುವಿಗೆ  ಸಂಯಮ ಬೇಕು.ದೃಢ ಮನಸ್ಸು ಬೇಕು, ಗೆಲ್ಲುವ ಛಲ , ಆತ್ಮವಿಶ್ವಾಸ ಬೇಕು..ಇದಾವುದೂ ಕೆಡುಕಿನ ಬಳಿ‌ಖಂಡಿತಾ ಇಲ್ಲ.ಕೆಡುಕಿನ ಮಿತ್ರರೆಂದರೆ ಅಹಂಕಾರ, ಸುಳ್ಳು ವಂಚನೆ ಭಯ ಮಾತ್ರಾ.  ಸಂಜೆ ಅಸ್ತವಾದ ಸೂರ್ಯ ಮತ್ತೆ ಮುಂಜಾವು ಉದಯಿಸುವಂತೆ ಕೆಲಕಾಲ ಒಳಿತು ಮರೆಗೆ ಸರಿದರೂ ಯುಕ್ತ ಕಾಲ ಬಂದಾಗ ಹೊರಹೊಮ್ಮಿ  ನಸುನಗುತ್ತದೆ.   ಒಳೆತನ್ನೂ ಬೆಳಕಿಗೂ ,ಕೆಡುಕನ್ಮೂ ಕತ್ತಲೆಗೂ ಹೋಲಿಸುವು ತೀರಾ ಸಹಜ..ಈ ಹಿನ್ನಲೆಯಲ್ಲಿ ಈ ಒಂದು ಪುಟ್ಟ ಕಥೆ ನೆನಪಾಗುತ್ತಿದೆ. ಅಲ್ಲೊಂದು ದೀಪ ಇತ್ತು. ಆ ದೀಪ‌ ಬೆಳಗಕ್ಕೆ ಬೇಕಾದ ಎಣ್ಣೆ ಬತ್ತಿ ಗಾಳಿ ಎಲ್ಲಾ ದೀಪದಿಂದಲೇ ಉತ್ಪತ್ತಿ ಆಗ್ತ ಇತ್ತು. ಜೊತೆಗೇ ದೀಪದ ಬೆಳಕು ಬೇಕೆನ್ನುವವರೂ ಹೇರಳವಾಗಿ ಎಣ್ಣೆ , ಬತ್ತಿ ಎಲ್ಲಾ ಕೊಡ್ತಾ ಇದ್ದರು.ದೀಪ ಸದಾ ಶಾಂತವಾಗಿ ಬೆಳಕು ಬೀರುತ್ತಾ ತನ್ನ ಪಾಡಿಗೆ ತಾನು ಇರುತ್ತಿತ್ತು. ಕತ್ತಲಿಗೆ ದೀಪವನ್ನು ಕಂಡರಾಗದು .ಏನಾದರೂ ಮಾಡಿ ಈ ದೀಪವನ್ನು ಅದರ ಬೆಳಕಿನ ಸಮೇತ ನಾಶ ಮಾಡಬೇಕೆನ್ನುವ ವಿನಾಕಾರಣದ ಮತ್ಸರ,  ದ್ವೇಷ ಕತ್ತಲಿನದ್ದು. ದೀಪ ಎದುರಿಗೆ ಬಂದು ನಿಂತರೆ ಅಸ್ತಿತ್ವವೇ ನಾಶ ಆಗೋ ಭಯ ಕತ್ತಲಿಗಿತ್ತು. ಹಾಗಾಗಿ ಅದು ಸದಾ ದೀಪದ ಬುಡದಲ್ಲೇ ಅವಿತುಕೊಂಡು ಸಮಯ ಕಾಯ್ತಾ ಇರುತ್ತಿತ್ತು.       ಅರೇ, ಬಂದವರೆಲ್ಲ ಈ ದೀಪದ ಬೆಳಕನ್ನೇ ನೋಡುತ್ತಾರಲ್ಲ.ನಾನಿವರ ಕಣ್ಣಿಗೆ ಕಾಣುವುದೇ ಇಲ್ಲವೇ …ಜಗತ್ತೆಂದರೆ ಬೆಳಕು ಮಾತ್ರವೆ? ಕತ್ತಲೆಗೆ ಬೆಲೆಯೇ ಇಲ್ಲವೇ ..ಇಲ್ಲ ಈ ದೀಪ ಎಲ್ಲರನ್ನೂ ಮರುಳು‌ ಮಾಡಿಬಿಟ್ಟಿದೆ …ಎಲ್ಲರೂ ತನ್ನ ಬಳಿಗೇ ಬರುತ್ತಾರೆಂಬ ಅಹಂಕಾರ ಬಹಳ ಇದೆ. ಏನಾದರೂ ಮಾಡಿ ಇದನ್ನ ಆರಿಸಿ ಬುದ್ಧಿ ಕಲಿಸಬೇಕು ಎಂದು ಬಹಳ ಯೋಚಿಸಿತು.ಕೊನೆಗೆ ಒಂದು ಉಪಾಯ ಹೊಳೆದು  ” ಗಾಳಿಯೇ ಜೋರಾಗಿ ಬೀಸಿ ಬಿಡು , ಈ ದೀಪ ಆರಿ ಹೋಗಲಿ‌” ಅಂತ  ಕತ್ತಲೆ ಒಮ್ಮೆ ಗಾಳಿಯನ್ನು ಕೇಳಿತು.         ಗಾಳಿ ನಸು ನಕ್ಕಿತು. ” ಅಯ್ಯಾ ಕತ್ತಲೆಯೇ ನಾನು ಯಾರ ಅಣತಿಯ ಮೇರೆಗೂ ಚಲಿಸುವವನಲ್ಲ..ಇಷ್ಟಕ್ಕೂ ನಾನು ಜೋರಾಗಿ ಬೀಸಿದರೆ ಹತ್ತಾರು ಕೈಗಳು ಆ ದೀಪವನ್ನ ರಕ್ಷಿಸುತ್ತವೆ. ಬೆಳಕನಾರಿಸುವ ಬಯಕೆ ಒಳ್ಳೆಯದಲ್ಲ ಬಿಡು ” ಎಂದು ಹೇಳಿ ಮೆಲುವಾಗಿ  ಹಾರಿ ಹೋಯಿತು.       ಕತ್ತಲೆಗೆ ನಿರಾಸೆಯಾದರೂ ದ್ವೇಷ ಮಾತ್ರಾ ತಣಿಯಲಿಲ್ಲ. ” ಬತ್ತಿಯೇ ನೀನು ಕರಟಿಹೋಗು …ಈ ದೀಪ‌ ಆರಿ ಹೋಗಲಿ ” ಎಂದು ಕತ್ತಲೆ ಒಮ್ಮೆ ಬತ್ತಿಯನ್ನು ಕೇಳಿತು.       ಬತ್ತಿ ನಸು ನಕ್ಕಿತು.” ಅಯ್ಯಾ ಕತ್ತಲೆಯೇ ನಾನಿರುವುದೇ ಉರಿಯಲು..ಹೇಗೆ ಕರಟಲಿ? ಕರಟಿದರೆ ನಾನೇ ಬೂದಿಯಾಗುವೆನಲ್ಲ…ಬೆಳಕ ನಂದಿಸಲು ಹೋಗಿ ನಾನೇ ಇಲ್ಲವಾಗಿಬಿಡುವೆ ..ಅಷ್ಟಕ್ಕೂ ಇಂತಹಾ ದುರ್ಬುದ್ಧಿ ನಿನಗೇಕೆ ? ” ಎಂದು ಕೇಳಿತು.        ಕತ್ತಲೆ ಉತ್ತರಿಸದೆ ಮೊಗ ತಿರುವಿತು. “ಎಣ್ಣೆಯೇ ನೀನು ಈ ಬತ್ತಿಗೆ ಶಕ್ತಿ ಕೊಡುವುದನ್ನು ನಿಲ್ಲಿಸಿಬಿಡು ..ಹಾಗಾದರೂ ದೀಪ‌ ಆರಿ ಹೋಗಲಿ” ಎಂದು ಕತ್ತಲೆ ಒಮ್ಮೆ ಎಣ್ಣೆಯನ್ನು ಕೇಳಿತು.      ಎಣ್ಣೆ ಗಲಗಲನೆ ನಕ್ಕಿತು.” ಅಯ್ಯಾ ಕತ್ತಲೆಯೆ ಈ ಬತ್ತಿಯನ್ನು ನಾನು ಎದುರಿಸುವುದೆ? ನನ್ನ ಅಸ್ತಿತ್ವವೇ ಈ ಬತ್ತಿ..ಬತ್ತಿಯಿಲ್ಲದಿರೆ ನಾನೇನೂ ಅಲ್ಲ..ಅಷ್ಟಕ್ಕೂ ಬೆಳಕ ಕಂಡರೆ ನಿನಗೇಕೆ ದ್ವೇಷ? ಬಿಟ್ಟು ಬಿಡು” ಎಂದು ಬುದ್ಧಿ ಹೇಳಿತು.            ಕತ್ತಲೆಗೆ ಅಸಹಾಯಕತೆ , ರೋಷ ಎಲ್ಲಾ ಸೇರಿ ಮೈ ಪರಚಿಕೊಳ್ಳುವಂತಾಯಿತು. ಬಹಳಷ್ಟು ಯೋಚಿಸಿ ಅಲ್ಲೇ ಹರಿಯುತ್ತಿದ್ದ ನೀರಿನ ಬಳಿಗೆ ಹೋಯಿತು. ” ನೀರೇ ನೀರೇ …ನೀನಾದರೂ ನನಗೆ ಸಹಾಯ ಮಾಡು. ಬೆಳಕಿದ್ದರೆ ನಿನ್ನಲ್ಲಿನ ಕಸ ಕಡ್ಡಿ ಎಲ್ಲಾ ಕಾಣುತ್ತದೆ .ಅದೇ ಕತ್ತಲೆ , ನಾನಿದ್ದರೆ ನಿನ್ನ‌ ನಿಜರೂಪ ಕಾಣುವುದೇ ಇಲ್ಲ..ಒಮ್ಮೆ ಉಕ್ಕಿ ಆ ದೀಪದ ಮೇಲೆ ಹರಿದು ಬಿಡು …” ಎಂದು ಕೇಳಿಕೊಂಡಿತು.          ನೀರಿಗೇನು ? ಯಾವ ಪಾತ್ರೆಗೆ ಹಾಕಿದರೂ ಅದರ ಆಕಾರ ತಳೆವುದಷ್ಟೆ ಗೊತ್ತಿತ್ತು.. ಅದಕ್ಕೆ ಉರಿಯುತ್ತಿರುವ ದೀಪದ ಮೇಲಾವ ಮತ್ಸರವೂ ಇರಲಿಲ್ಲ. ಆದರೂ ಹರಿವುದೇ ಸ್ವಭಾವವಾಗಿ ಕತ್ತಲಿನ ಮಾತಿಗೆ ಹೂಂಗುಟ್ಟಿ ಒಮ್ಮೆಲೇ ಉಕ್ಕಿ ಹರಿಯಿತು.ಅಲ್ಲಿಯವರೆಗೂ ಶಾಂತವಾಗಿ ಬೆಳಗುತ್ತಿದ್ದ ದೀಪ ನೀರಿನ ಆರ್ಭಟ ಎದುರಿಸಲಾಗದೇ ಫಕ್ಕನೇ ಆರಿಹೋಯಿತು.                 ಕೂಡಲೇ ಹತ್ತಾರು ಕೈಗಳೆದ್ದು ಬಂದವು ..ಅದೇ ನೀರಿನಿಂದ ಮಣ್ಣ ಕಲೆಸಿ ದೀಪ ಮಾಡಿದವು.ಗಾಳಿ ನೀರನ್ನೆಲ್ಲ ಹೀರಿ ಒದ್ದೆ ದೀಪವ ಒಣಗಿಸಿತು.ನೋಡನೋಡುತ್ತಿದ್ದಂತೇ ದೀಪದಲ್ಲಿ ಎಣ್ಣೆ , ಬತ್ತಿ ಮೂಡಿದವು..ದೀಪ‌ ಮತ್ತೆ ಎಂದಿನಂತೆ ಉರಿಯತೊಡಗಿತು…          ಕತ್ತಲೆ ಮತ್ತೆ ದೀಪದ ಬುಡದಲ್ಲಿ ಅವಿತು ಕುಳಿತು ಸಂಚು ಮಾಡತೊಡಗಿತು.        ಅಂದಿನಿಂದಲೂ ಒಂದು ದೀಪವಾರಿದರೂ ಇನ್ನೊಂದು ದೀಪ ಉರಿಯುತ್ತಲೇ ಇದೆ. ಒಂದಲ್ಲ ,ಹತ್ತಲ್ಲ ನೂರಲ್ಲ ,ಸಾವಿರ ದೀಪಗಳುರಿದರೂ ಅವುಗಳ ಬುಡದಲ್ಲಿ ಕತ್ತಲೆ ಅವಿತು ಕುಳಿತು ಬೆಳಕನಾರಿಸಲು ಹೊಂಚು ಹಾಕುತ್ತಲೇ ಇದೆ..              ಬೆಳಕಿಗೂ ಕತ್ತಲೆಗೂ ನಿರಂತರ ಯುದ್ಧ ನಡೆಯುತ್ತಲೇ ಇದೆ.           ದೀಪ ಬೆಳಗುತ್ತಲೇ ಇದೆ. ಕತ್ತಲೆಯನ್ನು ತುಳಿದೇ ನೆಳಕು ನಿಲ್ಲಬೇಕು ಕತ್ತಲೆಯನ್ನು ಸೀಳಿಯೇ ಬೆಳಕು ಹೊಮ್ಮಬೇಕು. ************************                                     ದೇವಯಾನಿ ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ

Read Post »

You cannot copy content of this page

Scroll to Top