ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಹಬ್ಬಗಳ ಆಚರಣೆ ಅಂದು ಇಂದು…”   ವಿಶೇಷ ಲೇಖನ,ಪ್ರೊ .ರಾಜೇಶ್ವರಿ ಶೀಲವಂತ ಪುಣೆ

ಸಂಸ್ಕೃತಿ ಸಂಗಾತಿ ಪ್ರೊ .ರಾಜೇಶ್ವರಿ ಶೀಲವಂತ ಪುಣೆ “ಹಬ್ಬಗಳ ಆಚರಣೆ ಅಂದು ಇಂದು…”   ಹಿಂದೂ ಧಾರ್ಮಿಕತೆ ಸಂಕ್ರಾಂತಿ, ಹೋಳಿ,ಯುಗಾದಿ,ಗಣೇಶ ಚತುರ್ಥಿ, ದಸರಾ,ದೀಪಾವಳಿ ಮುಂತಾದ ಹಬ್ಬಗಳನ್ನೊಳಗೊಂಡಿದೆ.  ಈ ಎಲ್ಲ ಹಬ್ಬಗಳಲ್ಲಿ  ಮೊದಲ ಆಚರಣೆ ಸಂಕ್ರಾಂತಿ. ಅದನ್ನು ಸ್ವಲ್ಪ ವಿವರವಾಗಿ ನೋಡೋಣ.ಸಂಕ್ರಾತಿ ಹಬ್ಬ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಕೇರಳ, ತಮಿಳ್ನಾಡು ಮುಂತಾದ ಕಡೆಗಳಲ್ಲಿ ಮುಖ್ಯ ಹಬ್ಬವಾಗಿ ಆಚರಿಸಲಾಗುತ್ತದೆ.ರೈತರು ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲ್ಪಡುವದರಿಂದ ಇದು  ಸಮೃದ್ಧಿಯ ಸಂಕೇತ.               ಸಂಕ್ರಾಂತಿ ಹಬ್ಬವನ್ನು ಎಲ್ಲ ಪ್ರದೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಉದಾಹರಣೆಗೆ , ಬೆಳೆ ಪೂಜೆ, ಸೂರ್ಯ ಪೂಜೆ,ನೃತ್ಯ, ಗಾಳಿಪಟ ಹಾರಿಸುವುದು, ನದಿ ಸ್ನಾನ ,ಮುಂತಾದುವುಗಳು. ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲ ಎನ್ನುತ್ತಾರೆ. ಈ ಹಬ್ಬದ   ದಿನದಿಂದ ಹಗಲು ಜಾಸ್ತಿಯಾಗಿ ರಾತ್ರಿ ಕಡಿಮೆಯಾಗುವುದು.ಅದೇರೀತಿ ಬಿಸಿಲಿನ ತಾಪಮಾನ ಕೂಡ ಜಾಸ್ತಿಯಾಗುತ್ತಾ ಹೋಗುತ್ತದೆ.                ಈ ಸಂಕ್ರಾಂತಿ ಹಬ್ಬ ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸಲಾಗುವುದು.ಇದು ರೈತರ ಪಾಲಿಗೆ ಸುಗ್ಗಿ ಹಬ್ಬ.ಅಂದರೆ ಅರಿಶಿಣ, ಕಬ್ಬು,ಗೋಧಿ,ಜೋಳ, ಭತ್ತ ಮುಂತಾದ ಭೂಮಿಯ ಮೇಲೆ ಬೆಳೆದ ಇವುಗಳಿಗೆ ಜೀವ ಶಕ್ತಿ  ತುಂಬಿದ ಆ ಸೂರ್ಯ ದೇವನಿಗೆ ಪೂಜೆ ಹಾಗು ನೈವೇದ್ಯದ ಮೂಲಕ ಕೃತಜ್ಞತೆ ಸಮರ್ಪಿಸುವರು.              ಕರ್ನಾಟಕದ ಸಂಕ್ರಾಂತಿಯ ಖಾದ್ಯಗಳು ಎಂತವರಿಗೂ ಬಾಯಲ್ಲಿ ನೀರೂರಿಸುತ್ತವೆ ಹಾಗು ಚಳಿಗಾಲದ ಚಳಿಯಿಂದ ತಣ್ಣಗಾದ ದೇಹವನ್ನು ಬೆಚ್ಚ ಗಿಡಲು ವೈಜ್ಞಾನಿಕ ರೀತಿಯಲ್ಲಿ ಸಹಾಯ ಮಾಡುತ್ತವೆ. ನೈಸರ್ಗಿಕವಾಗಿ ದೇಹಕ್ಕೆ ಉಷ್ಣತೆ ನೀಡುವ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಶೇಂಗಾ ಮತ್ತು ಎಳ್ಳು ಮಿಶ್ರಣದ ಹೋಳಿಗೆ, ಹೂರಣ ಹೋಳಿಗೆ, ಮಾದಲಿ, ಕಫ ನಿವಾರಿಸುವ ಬದನೆಕಾಯಿ ಭರಿತ ,ಶೇಂಗಾ ಚಟ್ನಿ, ಅಗಸೆ ಚಟ್ನಿ, ಬೆಣ್ಣೆ,ಮೊಸರು, ಜುಣಕದ ವಡಿ, ಮಡಿಕೆ ಕಾಳು ಉಸುಳಿ,ಗಜಿಬಿಜಿ ಪಲ್ಯ,ಪಚಡಿ, ಹುಳಿಬಾನ, ಹೀಗೆ ಹತ್ತು ಹಲವಾರು ಖಾದ್ಯಗಳು.ಇವೆಲ್ಲವನ್ನೂ ಒಬ್ಬರ ಮನೆಯಿಂದ ಇನ್ನೊಬ್ಬರ ಮನೆಗೆ ಹಂಚುವುದರ ಮೂಲಕ ಬಾಂಧವ್ಯ ಬೆಸೆಯಲಾಗುವುದು.           ಸಾಯಂಕಾಲ ಹೊಸ ಬಟ್ಟೆ ತೊಟ್ಟು , ಹಿರಿಯರಿಗೆ ಎಳ್ಳು ಬೆಲ್ಲದ ವಿನಿಮಯದೊಂದಿಗೆ ನಮಸ್ಕಾರ.  ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ, ಎಳ್ಳು ಬೆಲ್ಲ ತೊಗೊಂಡು ಎಳ್ಳು ಬೆಳ್ಳದಂಗಿರೋಣ ಅಂತ ಹೇಳುವುದು.  ಶಾಂತಿ ,ಪ್ರೀತಿ ಮತ್ತು ಸೌಹಾರ್ದತೆಯ ಸಂಕೇತವೇ ಈ ಮಕರ ಸಂಕ್ರಾಂತಿಯಾಗಿತ್ತು ಅಂದು.                ಇನ್ನು ಹೋಳಿ ಹಬ್ಬ ,ನಾಡಿನಾದ್ಯಂತ ವಸಂತ ಕಾಲದ ಆಗಮನವೆಂದು ಪರಿಗಣಿಸಲಾಗಿದೆ.  ವಿವಿಧ ಬಣ್ಣದ ಓಕುಳಿ ಆಟ ,ಹಲಗೆ ಬರಿಸುವುದು, ಕಾಮ ದಹನ, ಇವೆಲ್ಲವನ್ನೊಳಗೊಂಡಿದೆ. ಅದೇ ರೀತಿ ಯುಗಾದಿ ಹಬ್ಬವನ್ನು ಹಿಂದೂಗಳ ಹೊಸ ವರುಷವೆಂದು ಪರಿಗಣಿಸುತ್ತೇವೆ. ಇದನ್ನು ದೇವರ ಪೂಜೆ, ಹಿರಿಯರ ಪೂಜೆ, ಅಂಗಡಿ ಪೂಜೆಯೊಂದಿಗೆ ಆಚರಿಸಲಾಗುವುದು.  ಅಂಗಡಿಕಾರರು ಹೊಸ ಲೆಕ್ಕ ಪತ್ರ ಪ್ರಾರಂಭಿಸುವರು. ಜೀವನದ ಸಿಹಿ ಕಹಿ ಸಮನಾಗಿ ಕಾಣೋಣ ಅಂತ ಬೇವು ಬೆಲ್ಲ ನೈವೇದ್ಯ ಮಾಡಿ  ಎಲ್ಲರೂ ಸೇವಿಸುವರು.             ಗಣೇಶ್ ಚತುರ್ಥಿಯನ್ನು ನಾಡಿನಾದ್ಯಂತ ಎಲ್ಲೆಡೆ ಆಚರಿಸುವರು. ಮಹಾರಾಷ್ಟ್ರದಲ್ಲಿ ಈ  ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾರೆ.   ವಿಘ್ನ ನಾಶಕನಾದ ವಿನಾಯಕನಿಗೆ ಧೂಪ, ದೀಪ , ನೈವೇದ್ಯಗಳನ್ನು ಭಕ್ತಿಯಿಂದ ಸಮರ್ಪಿಸುವರು. ಇನ್ನು ನಾಡ  ಹಬ್ಬ ಎಂದು ಕರೆಯುವ ದಸರಾ ಹಬ್ಬವನ್ನು ಹಲವಾರು ದೇಶಗಳಲ್ಲಿ ವಿಭಿನ್ನವಾಗಿ ಆಚರಿಸುವರು.ಕರ್ನಾಟಕದ ಮೈಸೂರಿನ ದಸರಾ ಆಚರಣೆ ತುಂಬಾ  ವಿಜೃಂಭಣೆಯಿಂದ ನಡೆಯುತ್ತದೆ. ಹಲವೆಡೆ ನವರಾತ್ರಿಯ ಆಚರಣೆಯ ಮೂಲಕ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಆರಾಧಿಸಲಾಗುವದು. ಹತ್ತನೇ ದಿವಸ  ರಾವಣನ ಪ್ರತಿಮೆ ದಹನ ಮಾಡುವುದರ ಮೂಲಕ ಶ್ರೀರಾಮನ ವಿಜಯೋತ್ಸವವನ್ನು ಮೆರೆಯಲಾಗುವುದು.                     ವರ್ಷದ ಕೊನೆಯ ಹಬ್ಬವಾಗಿ ದೀಪಾವಳಿಯನ್ನು ಜಗದಾದ್ಯಂತ ಬೆಳಕಿನ ಹಬ್ಬವೆಂದು ಸಂಬ್ರಮಿಸಲಾಗುವದು.  ಐದು ದಿನಗಳ ಹಬ್ಬವಾದ ದೀಪಾವಳಿಯ ಮೊದಲ ದಿನ ನೀರು ತುಂಬುವ ಹಬ್ಬ, ಎರಡನೇ ದಿನ ನರಕಚತುರ್ದಶಿ, ಮೂರನೇ ದಿನ ದೀಪಾವಳಿ ಅಮವಾಸ್ಯೆ, ನಾಲ್ಕನೇ ದಿನ ಬಲಿ ಪಾಡ್ಯ ಹಾಗೂ ಐದನೇ ದಿನ ಕಡೆ ಪಾಡ್ಯ  . ಒಂದೊಂದು ದಿನಕ್ಕೂ  ತನ್ನದೇ ಆದ ಮಹತ್ವ ಇದೆ. ಬಣ್ಣ ಬಣ್ಣದ ರಂಗೋಲಿ, ಹೂವುಗಳ ಅಲಂಕಾರ, ಪೂಜೆ, ಹೊಸ ಬಟ್ಟೆ, ಸಿಹಿ ತಿಂಡಿಗಳ ವಿನಿಮಯ ನವ ವಿವಾಹಿತರಿಗೆ ಪ್ರಾಧಾನ್ಯ. ಮುಂತಾದುವುಗಳನ್ನು ಇಲ್ಲಿ  ಕಾಣಬಹುದು.                      ಆದರೆ ವಿಷಾಧದ ಸಂಗಾತಿ ಎಂದರೆ  ಆಧುನಿಕತೆಯ ಹೆಸರಿನಲ್ಲಿ ಇಂದು ಹಬ್ಬಗಳ ಪ್ರಾಧಾನ್ಯತೆ ಕಡಿಮೆಯಾಗಿದೆ. ನೌಕರಿಯ ಒತ್ತಡದಲ್ಲಿ, ಸಮಯದ ಅಭಾವದಲ್ಲಿ  ಹಬ್ಬಗಳ  ಆಚರಣೆಯ ಹುರುಪು ಉಳಿದಿಲ್ಲ.  ಅವಿಭಕ್ತ ಕುಟುಂಬದಲ್ಲಿ ಎಲ್ಲ ಖಾದ್ಯಗಳನ್ನು ತಯಾರಿಸುತ್ತಿದ್ದರು. ಎಲ್ಲ ಸಂಪ್ರದಾಯಗಳನ್ನು ಸಂಭ್ರಮಿಸುತ್ತಿದ್ದರು.ಈಗಿನ ವಿಭಕ್ತ ಕುಟುಂಬಕ್ಕೆ ಮಾಡುವುದು ತಿನ್ನುವುದು ಎರಡೂ ಗೊತ್ತಿಲ್ಲ.  ಸ್ವಿಗ್ಗಿ, ಜೋಮಾಟೋಗಳಿಂದ ಪಿಜ್ಜಾ,ಬರ್ಗರ್, ಮ್ಯಾಗಿಗಳ ರುಚಿ ಕಂಡೋರಿಗೆ ಮೇಲಿನ ಅಡುಗೆಗಳ ಬೆಲೆಯೇ ಗೊತ್ತಿಲ್ಲ. ಹಬ್ಬದ ಸಿಹಿ ತಿಂಡಿಗಳು ಕೂಡಾ  ಆನ್ಲೈನ್ನಲ್ಲಿಯೇ ತರಿಸುವರು .ಸಂಕ್ರಾಂತಿಯ ಎಳ್ಳು ಬೆಲ್ಲದ ವಿನಿಮಯದಿಂದ  ಹಿಡಿದು ದೀಪಾವಳಿಯ ಸಿಹಿ ತಿಂಡಿಗಳು ಕೂಡಾ ವಾಟ್ಸಾಪ್ನಲ್ಲಿಯೇ ಹಂಚಲಾಗುವುದು. ಹಿರಿಯರ ನಮಸ್ಕಾರ ,        ಆಶೀರ್ವಾದವಂತೂ ತುಂಬಾ ದೂರದ ಮಾತು. ಯಾರಿಗೂ ಉತ್ಸಾಹನೂ ಇಲ್ಲ , ಆಸಕ್ತಿನೂ ಇಲ್ಲ.  ಯುವ ಜನಾಂಗದ ಸೌಹಾರ್ಧ ಭಾವ ಮೆರೆಯುವ ಎಲ್ಲ ಸಂಸ್ಕಾರ ಮತ್ತು ಸಂಪ್ರದಾಯಗಳೂ  ದಿನೇ ದಿನೇ ಮರೆಯಾಗುತ್ತಿವೆ.  ಪ್ರೊ .ರಾಜೇಶ್ವರಿ ಶೀಲವಂತ ಪುಣೆ

“ಹಬ್ಬಗಳ ಆಚರಣೆ ಅಂದು ಇಂದು…”   ವಿಶೇಷ ಲೇಖನ,ಪ್ರೊ .ರಾಜೇಶ್ವರಿ ಶೀಲವಂತ ಪುಣೆ Read Post »

ಇತರೆ

“ಬೇಂದ್ರೆ_ ಕಾವ್ಯಾಸ್ವಾದ” ಸುಜಾತಾ ರವೀಶ್

ಕಾವ್ಯ ಸಂಗಾತಿ ಸುಜಾತಾ ರವೀಶ್ “ಬೇಂದ್ರೆ_ ಕಾವ್ಯಾಸ್ವಾದ” ಇಂದು ಡಾ. ದಾರಾ ಬೇಂದ್ರೆ ಅವರ ೧೩೦ ನೆಯ ಜಯಂತಿ ಪ್ರಯುಕ್ತ ಅವರದೊಂದು ಪ್ರಸಿದ್ಧ ಭಾವಗೀತೆಯ ಬಗ್ಗೆ ತಿಳಿಯುವ ಪ್ರಯತ್ನ.  ಕಾವ್ಯ ಗಾರುಡಿಗ ಬೇಂದ್ರೆಯವರ ಕವಿ ದೃಷ್ಟಿ ಬರೀ ಪ್ರಕೃತಿಯ ಬೆಡಗಿನ ಬಗ್ಗೆ  ಅಷ್ಟೇ ಅಲ್ಲ ಸಾಮಾಜಿಕ ಸ್ಥಿತ್ಯಂತರಗಳನ್ನು ಸೂಕ್ಷ್ಮ ದೃಷ್ಟಿಯಿಂದ ಪರೀಕ್ಷಿಸುತ್ತಿತ್ತು ಎನ್ನುವುದಕ್ಕೆ ನಿದರ್ಶನ ಈ ಕವನ “ಇನ್ನೂ ಯಾಕೆ ಬರಲಿಲ್ಲಾ ಹುಬ್ಬಳ್ಳಿಯಂವಾ” ಅಂದಿನ ದಿನಮಾನದಲ್ಲಿ ಪ್ರಚಲಿತವಿದ್ದುದು ಜೋಗತಿ ಪದ್ಧತಿ . ಅಂತಹ ಜೋಗತಿ ಹೆಣ್ಣುಮಗಳಿಬ್ಬಳು ತನ್ನ ಗೆಣೆಕಾರನನ್ನು ನೆನೆಸಿ ಅವನು ಬಾರದಿರಲು ಹಲುಬುವ ಪ್ರಸಂಗವನ್ನು ಕವಿ ಇಲ್ಲಿ ಕವಿತೆಯಾಗಿಸಿದ್ದಾರೆ . ಹೆಣ್ಣೊಬ್ಬಳ ಅಂತರಂಗದ ಧ್ವನಿ ಹಾಗೆಯೇ ಅಂದಿನ ಸಾಮಾಜಿಕ ಸ್ಥಿತಿಯ ಕನ್ನಡಿ ಯಾಗಿಯೂ ಹೊರಹೊಮ್ಮಿರುವ ಈ ಕವನ ರಾಧೆ ಕೃಷ್ಣನಿಗಾಗಿ ಪರಿತಪಿಸುವ ಸಂದರ್ಭವನ್ನು ನೆನಪಿಸುತ್ತದೆ. ಹೋಲಿಕೆ ಅಸಮಂಜಸವೂ ಅನುಚಿತವೂ ಇರಬಹುದು. ಆದರೆ  ಬೇರೆಲ್ಲವನ್ನೂ ಒತ್ತಟ್ಟಿಗಿಟ್ಟು ಪ್ರೇಮಿಕೆಯೊಬ್ಬಳು ಪ್ರೇಮಿಗಾಗಿ ತನ್ನ ಆಂತರ್ಯ ತೆಗೆದಿಡುವ ಭಾವವನ್ನೇ ತೆಗೆದುಕೊಂಡಿದ್ದೇನೆ ತಪ್ಪಿದ್ದರೆ ಕ್ಷಮೆ ಇರಲಿ ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ ಆ ಜೋಗತಿಯ ಮನೆಗೆ ಸಾಮಾನ್ಯವಾಗಿ ವಾರಕ್ಕೆ ಮೂರು ಸಾರಿ ಭೇಟಿ ಕೊಡುವ ಅಭ್ಯಾಸವಿಟ್ಟುಕೊಂಡಿದ್ದ ಗೆಳೆಯ ಈ ಬಾರಿ ಬಂದೇ ಇಲ್ಲ ಎಂದು ದುಃಖಿಸುತ್ತಿದ್ದಾಳೆ.  ಏನೋ ಮುನಿಸು ಅಸಮಾಧಾನದಿಂದ ಅವನು ಬಾರದಿರಲು ಇವಳಿಗೆ ದುಮ್ಮಾನ. (೧)ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾಇನ್ನೂ ಯಾಕ……….ಮುಂದೆ ಅವನನ್ನು ಅವನ ವೇಷಭೂಷಣವನ್ನು ವರ್ಣಿಸುತ್ತಾ ಜರಿಯ ರುಮಾಲು ಸುತ್ತಿ ಕೊಂಡವನು ತುಂಬು ಮೀಸೆಯನ್ನು ತೀಡಿಕೊಳ್ಳುತ್ತಾ ನಗುನಗುತ್ತ ಹಾಸ್ಯ ಮಾಡಿ ನಗಿಸುತ್ತಾ ಮಾತಿಗೆ ಮಾತು ಸೇರಿಸುತ್ತಾ ಹಾಡು ಕಟ್ಟುವವನು ಎನ್ನುತ್ತಾಳೆ.  ಜರದ ರುಮಾಲಿನ ಶ್ರೀಮಂತ ಅಷ್ಟೇ ಅಲ್ಲ ಸ್ನೇಹಮಯಿ ರೂಪವಂತ ಹಸನ್ಮುಖಿ ಎಂದೆಲ್ಲಾ ಅವನ ವರ್ಣನೆ. (೨)ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾಜೋಗತಿಯರು ಮದುವೆಯಾಗಿ ತಾಳಿ ಧರಿಸುವಂತಿಲ್ಲ ದೇವರ ಹೆಸರಲ್ಲಿ ಮುತ್ತು ಕಟ್ಟಿಕೊಳ್ಳುವ ಪದ್ಧತಿ ಆದರೆ ಅವನು ಅವಳಿಗೆ ಮದುವೆಯಾಗುವ ಆಹ್ವಾನವನ್ನಿತ್ತಿದ್ದಾನೆ.  ಹಾಗೆಯೇ ಜೋಗತಿಗೆ ಭಂಡಾರ ಅರಿಸಿನ ಕುಂಕುಮ ತುಂಬಾ ಅಮೂಲ್ಯ ಬಂಗಾರದ ಹುಡಿಯಲ್ಲಿ ಭಂಡಾರ ಮಾಡಿಸುವೆ ಎಂದು ಹೇಳಿದ್ದನಂತೆ ಮತ್ತೆ ಮೂರನೆಯ ಸಾಲಿನಲ್ಲಿ ಅಂದಿನ ಕಾಲದ ಗಣಿಕೆಯರ ಸ್ತರವನ್ನು ಹೇಳುತ್ತಾರೆ . ಕಸಬೇರು ಒಂದು ಕೆಳಗಿನ ಸ್ತರ ಅದಕ್ಕಿಂತ ಮೇಲಿನದು ಬಸವಿಯರು ಅದಕ್ಕೂ ಮೇಲಿನದ್ದು ಜೋಗತಿಯರು.  ಈಕೆ ಅಂತಹ ಜೋಗತಿ ಆ ಜೋಗತಿಯರಲ್ಲಿ ನೀನು ನನಗೆ ಮೂಗುತಿ ಅಂದರೆ ಶ್ರೇಷ್ಠ ಎಂದು ಅವಳನ್ನು ಹೊಗಳುತ್ತಾನೆ . (೩)ಇರು ಅಂದರ ಬರತೇನಂತ ಎದ್ದು ಹೊರಡಾಂವಾಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾಇನ್ನೂ ಯಾಕ………. ಅವನು ಹೊರಟಾಗ ಬೇಡ ಎಂದು ತಡೆದರೂ ಕೇಳುವುದಿಲ್ಲ.  ಆದರೆ ಮುಖ ಸಪ್ಪಗೆ ಮಾಡಿಕೊಂಡರೆ ಮತ್ತೆ ಉಳಿಯುತ್ತಾನೆ. ಕೈತುಂಬಾ ರೊಕ್ಕ ಕೊಡಲು ಬಂದು ಕೈಚಾಚಿದರೆ ಹಣ ಕೊಡದೇ ಕೈ ಹಿಡಿದೆಳೆದು ರಸಿಕತನ ತೋರಿಸುತ್ತಾನೆ ಎಂದು ನೆನೆಸುತ್ತಾಳೆ (೪)ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾಇನ್ನೂ ಯಾಕ……….ಏನಾದರೂ ಅಲ್ಲಿ ಸಾಮಾಜಿಕ ಔಚಿತ್ಯವನ್ನು ಮೀರದ ರೂಪಕ ಕಟ್ಟಿಕೊಡುತ್ತಾರೆ. ಚಹಾಕ್ಕೆ ಚೂಡಾ ಧಾರವಾಡದವರ ನೆಚ್ಚಿನ ಜೋಡಿ.  ನೀನು ನನಗೆ ಹಾಗೆ ಎನ್ನುತ್ತಾನೆ .ಅವಳನ್ನು ರಮಿಸಲು ನೀನು ಚೂಡಾಮಣಿ ಚೌಡಿ ಯಲ್ಲ ಎಂದು ಮೆರೆಸುತ್ತಾ ನೆ.  ಅವಳಿಗೆ ಬೆರಳುಂಗುರ ಮೂಗಿನ ಬಟ್ಟು ಕೊಡಿಸುತ್ತಾನಂತೆ. ಅವೆರಡೂ ಮದುವೆಯಾಗುವ ಸೂಚನೆಗಳು ಆಭರಣಕ್ಕಿಂತ ಪ್ರೀತಿಯ ಮೆಚ್ಚುಗೆಯ ದ್ಯೋತಕವಾಗಿರು ತ್ತದೆ ಇಲ್ಲಿ . ಅಂತಹವನು ಬಾರದಿದ್ದರೆ ಸಂತಾಪವಲ್ಲದೆ ಇನ್ನೇನು? (೫)ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾಇನ್ನೂ ಇವನು ಹುಟ್ಟಿನಿಂದಲೇ ನಗುವೆಂಬ ಕೇದಗೆಯ ಗಂಧ ವಿರುವ ಸ್ನೇಹಮಯಿ .ಇವನ ಹಿಂದೆ ಹೆಣ್ಣುಗಳು ತಾವಾಗಿ ಬೀಳುತ್ತಾರೆ. ಆದರೆ ಇವನು ಮಾತ್ರ ನಿನ್ನ ಜನ್ಮ ಜನ್ಮಕ್ಕೂ ನಾನೇ ಗೆಳೆಯ ಎನ್ನುತ್ತಾನೆ .(ಇಲ್ಲಿಯೂ ಗಮನಿಸಿ ಗಂಡ, ಪತಿ ಎನ್ನದೆ ಗೆಳೆಯ ಎಂದಿದ್ದಾರೆ) ನನ್ನನ್ನು ತನ್ನ ಎದೆಯಲ್ಲಿ ಇಟ್ಟುಕೊಂಡಿದ್ದಾನೆ ಎನ್ನುವುದೇ ಸಂತಸ ಅವಳಿಗೆ . (೬)   ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾಹಾದಿ ಬೀದಿ ಹುಡುಕತೈತ್ರೇ ಬಿಟ್ಟು ಎಲ್ಲ ಹ್ಯಾಂವಾಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ?ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ?ಇನ್ನೂ ಯಾಕ ಬರಲಿಲ್ಲಾ ? ಕಡೆಯ ಪ್ಯಾರಾದಲ್ಲಿ ಹಾದಿ ಬೀದಿಗಳಲ್ಲಿ ಅವನನ್ನು ಹುಡುಕುತ್ತಾ ಮಲ್ಲಿ ತಾರಿ ಪಾರಿ ನಿಂಗಿ ಸಂಗೀ ಸಾವಂತರಿ ಅಂತ ಕಂಡವರನ್ನೆಲ್ಲ ತನ್ನ ಗೆಳೆಯನ ಕಂಡಿರಾ ಎಂದು ಕೇಳುತ್ತಾ ಹುಡುಕುವ ಚಿತ್ರಣ.  ಸಿಟ್ಟು ಮಾಡಿಕೊಂಡು ಹೋದ ಆ ಶೆಟ್ಟರ ಹುಡುಗನ್ನು ಅರಸುವ ಈ ಕ್ರಿಯೆಯಲ್ಲಿ ಪ್ರೀತಿಯೊಂದಿಗೆ ಅನಿವಾರ್ಯತೆಯ ಎಳೆಯನ್ನು ಕಾಣಬಹುದು . ಕವಿ ಇಲ್ಲಿ ಹತಾಶೆ ಅನಿವಾರ್ಯತೆ ಪ್ರೀತಿ ಎಲ್ಲವನ್ನೂ ಒಳಗೊಂಡ ಆರ್ಥಿಕವಾಗಿಯೂ ಮಾನಸಿಕವಾಗಿಯೂ ವ್ಯಕ್ತಿಯೊಬ್ಬನ ಮೇಲೆ ಭಾವುಕಳಾಗಿ ಅವಲಂಬಿತಳಾದ ಜೋಗತಿಯೊಬ್ಬಳ ಮನದಾಳದ ಮಾತುಗಳನ್ನು ಆಂತರ್ಯದ ಧ್ವನಿಯನ್ನು ಅಭಿವ್ಯಕ್ತಿಸಿದ್ದಾರೆ.  ಕಣ್ಣಿಗೆಆ ಹುಡುಕುವಿಕೆಯ ತೀವ್ರತೆಯನ್ನು ಭಾವವಿಷಾದತೆಯನ್ನು ಕಟ್ಟಿಕೊಡಲು ಸಮರ್ಥರಾಗಿದ್ದಾರೆ .ಒಂದು ರೀತಿಯ ಸಂತಾಪವನ್ನು ಹುಟ್ಟಿಸುವ ಕವಿತೆ . ಬೇಂದ್ರೆಯವರ ಸಖೀ ಗೀತದ  ಇಪ್ಪತಾಲ್ಕನೆಯ ಕವನವಾಗಿರುವ ಇದನ್ನು ಅವರ ಸಮಗ್ರ ಕಾವ್ಯ ಔದುಂಬರ ಗಾಥೆಯ 4ನೇ ಸಂಪುಟ ವಿನ್ಯಾಸದಲ್ಲಿ ಸೇರಿಸಲಾಗಿದೆ ಸುಜಾತಾ ರವೀಶ್

“ಬೇಂದ್ರೆ_ ಕಾವ್ಯಾಸ್ವಾದ” ಸುಜಾತಾ ರವೀಶ್ Read Post »

ಇತರೆ, ಪ್ರಬಂದ

“ಊರ ಮುಂದಿನ ಅರಳಿ ಮರ”ಗೊರೂರು ಅನಂತರಾಜು ಅವರ ಪ್ರಬಂಧ

ಪ್ರಬಂಧ ಸಂಗಾತಿ “ಊರ ಮುಂದಿನ ಅರಳಿ ಮರ” ಗೊರೂರು ಅನಂತರಾಜು ‘ಬನ್ನಿ ಕವಿಗಳೇ, ಬಹಳ ದಿನಗಳ ಮೇಲೆ ಊರಿಗೆ ಬಂದಿದ್ದೀರಿ. ಚೆನ್ನಾಗಿದ್ದೀರಿ ತಾನೇ? ಯಾರೋ ಮಾತನಾಡಿದಂತಾಗಿ ಹಿಂತಿರುಗಿ ನೋಡಿದೆ. ಯಾರೂ ಕಾಣಿಸಲಿಲ್ಲ. ಸುತ್ತಾ ಕಣ್ಣಾಯಿಸಿದೆ ಉಹೂಂ ಯಾರೂ ಇಲ್ಲ..!‘ಅಲ್ಲಿ ಇಲ್ಲಿ ಯಾಕೆ ನೋಡುವಿರಿ ಕವಿಗಳೇ, ನಾನು ಅರಳಿಮರ ಮಾತನಾಡುತ್ತಿರುವೆ. ಎಷ್ಟೋ ವರ್ಷಗಳಿಂದ ಎತ್ತರಕ್ಕೆ ಬೆಳೆದು ನಿಂತಿರುವೆ. ಇನ್ನೂ ಬಿದ್ದಿಲ್ಲ. ಯಾರೋ ಮಹನೀಯರು ನನ್ನ ಸುತ್ತಲೂ ಕಟ್ಟೆ ಕಟ್ಟಿದ್ದಾರೆ. ಬನ್ನಿ ಇಲ್ಲಿ  ಕುಳಿತು  ವಿಶ್ರಮಿಸಿ. ಕೊಂಚ ನಿಮ್ಮೊಂದಿಗೆ ಮಾತನಾಡುವ ಬಯಕೆ ಇದೆ.‘ಆಯ್ತು ಅರಳಿಮರವೇ ಕುಳಿತುಕೊಂಡೆ. ಹೇಳಿ ನಿಮಗೀಗ ವಯಸ್ಸು ಎಂತಾ?  ‘ನನಗೆ ತಿಳಿಯದು ಮಾರೆಯರೇ. ಯಾರಿಗಾದರೂ ತಿಳಿದಿದ್ದರೇ ತಿಳಿದು ನನಗೂ ತಿಳಿಸಿ.   ಈಗ ನಿಮ್ಮ ಕಥೆ ಹೇಳಿ. ಈಗಲೂ ಕಥೆ ಕವನ ಬರೆಯುತ್ತಿದ್ದೀರಾ. ಎಷ್ಟು ಪುಸ್ತಕ ಬರೆದಿರುವಿರಿ. ನಮ್ಮೂರು ಹಿಂತಿರುಗಿ ನೋಡಿದಾಗ ಎಂಬ ನಿಮ್ಮ ಪುಸ್ತಕದಲ್ಲೂ ನನ್ನ ಪ್ರಸ್ತಾಪವಿಲ್ಲ. ನನ್ನನ್ನು ನೀವು ಏಕೆ ಮರೆತಿರಿ..?  ‘ಇಲ್ಲ ಅರಳಿಮರವೇ, ನಾನು ಅರಳಿಕಟ್ಟೆ ಎಂಬ ನಾಟಕ ಬರೆದಿದ್ದು ನಿನ್ನ ನೆನಪಿನಲ್ಲೇ.  ‘ಹೌದೇ, ತುಂಬಾ ಸಂತೋಷ. ಆ ನಾಟಕ ಇಲ್ಲಿ ಪ್ರದರ್ಶಿಸಬಹುದಿತ್ತಲ್ಲ..‘ನಾನು ನಾಟಕ ಬರೆಯಬಹುದು ಅಷ್ಟೇ. ಅದನ್ನು ಕಲಿತು ಪ್ರದರ್ಶಿಸುವರು ಸಿಗಬೇಕಷ್ಟೇ.  ‘ನಿಂತುಹೋದ ಕನ್ನಡ ರಂಗವೈಭವ ಎಂಬ ನಾಟಕ ಪುಸ್ತಕದ ಮುಖಪುಟದಲ್ಲಿ ಚಿತ್ರನಟ ನರಸಿಂಹರಾಜು ಪೋಟೋ ಹಾಕಿದ್ದೀರಿ. ಅವರು ಇಲ್ಲಿ ಬಂದು ನಾಟಕ ನಟಿಸಿದ್ದರು..‘ನರಸಿಂಹರಾಜು ಕುರಿತಾಗಿಯೇ ಪುಸ್ತಕದಲ್ಲಿ ಬರೆದಿದ್ದೇನೆ. ಅವರು ಇಲ್ಲಿ ಬಂದಾಗ್ಗೆ ನಾನು ಹೈಸ್ಕೂಲು ವಿದ್ಯಾರ್ಥಿ. ಅಗ ಊರಿನ ರಥೋತ್ಸವ ಜಾತ್ರೆಗೆ ಅಪಾರ ರಾಸುಗಳು ಕಟ್ಟುತ್ತಿದ್ದವು. ಅಂದು ನಾಟಕ ಕಂಪನಿಯೊAದು ಇಲ್ಲಿ ಮೊಕ್ಕಾಂ ಮಾಡಿ  ನರಸಿಂಹರಾಜು, ಸುದರ್ಶನ್, ಶಕ್ತಿಪ್ರಸಾದ್ ನಾಟಕದಲ್ಲಿ ನಟಿಸಲು ಬಂದಿದ್ದರು.‘ಅಲ್ಲಿ ಒಂದು ಟೆಂಟ್ ಸಿನಿಮಾ ಇತ್ತು..‘ಹೌದು. ಆಗ ವಾರಕ್ಕೆರಡು ಸಿನಿಮಾ ತೋರಿಸುತ್ತಿದ್ದರು. ಭಾನುವಾರದಿಂದ ಮೂರು ದಿನ ತಮಿಳು, ನಾಲ್ಕು ದಿನ ಕನ್ನಡ ಸಿನಿಮಾ. ಆ ಸಿನಿಮಾ ಪೋಸ್ಟರ್ ನೋಡೇ ಆನಂದಿಸುತ್ತಿದ್ದವು. ಕದ್ದು ಸಿನಿಮಾ ನೋಡಿ ಅಪ್ಪನಿಂದ ಹೊಡೆಸಿಕೊಂಡ ಮಂಡಿಚಿಪ್ಪಿನ ಗಾಯದ ಗುರುತು ಇನ್ನು  ಇದೆ.  ‘ ಆ ಟೆಂಟ್ ಸಿನಿಮಾ ಜಾಗದಲ್ಲೇ ಗ್ರಾಮ ಪಂಚಾಯ್ತಿ ಕಛೇರಿ ಕಟ್ಟಡ ಇತ್ತಲ್ಲ.. ಅಲ್ಲಿ ಗಣೇಶೋತ್ಸವಕ್ಕೆ  ಹರಿಕಥೆ, ಚೌಡಿಕೆ ಕಥೆ, ನಾಟಕ, ಆರ್ಕೆಸ್ಟಾç..‘ನಿಜ, ನಮಗೆ ಟೆಂಟ್ ಸಿನಿಮಾ ಹೋದಮೇಲೆ ನಮಗೆ ಹತ್ತು ದಿನ ಇದೇ ಮನರಂಜನೆ. ಭಾನುವಾರ ಗಣೇಶನ ವಿಸರ್ಜನೆ. ಹಾಸನ ಬಂಗಾರಿ ತಂಡದ ಕೀಲುಕುದುರೆ ಮನರಂಜನೆ..‘ಇಲ್ಲೇ, ನೀವು ಜಿ.ಎಸ್.ಪ್ರಕಾಶ್ ಬರೆದ ಸರಿದ ತೆರೆ ನಾಟಕದಲ್ಲಿ ಮಾತು ಮರೆತು..‘ಅದೆಂತು ಮರೆಯಲಿ. ಮೊದಲ ರಂಗ ಪ್ರವೇಶ ಗಾಬರಿ..  ‘ಮತ್ತೇ ಅಲ್ಲಿ ನೀವು ಜಿಲ್ಲಾ ನಾಟಕೋತ್ಸವ..‘ಹೌದು, ಬೇಲೂರು ಸಿ.ಎಸ್.ಆಚಾರ್ ಅವರ ಹೆಣದ ನಾಟಕ ನೋಡಿ ಮೊದಲ ಬಾರಿ ವಿಮರ್ಶೆ ಬರೆದಿದ್ದೇ.‘ನೀವು ವೀರಪ್ಪನ್ ಭೂತ  ನಾಟಕ ಬರೆದಾಡಿಸಿದ್ದು..!‘ಹೌದು ೧೯೯೧ರಲ್ಲಿ. ಹೇಮಾವತಿ ತೀರಿದ ಗಾಂಧಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಿಧನರಾದ ಆ ವರ್ಷ ನಾವು ಹುಡುಗರು ಡಾ. ಗೊರೂರು ಸ್ಮರಣ ಸಮಿತಿ ರಚಿಸಿಕೊಂಡು, ನಾನು ಡಾ.ಗೊರೂರು ಬದುಕು ಬರಹ ಪ್ರಬಂಧ ಮಂಡಿಸಿ ಅವರು ಹುಟ್ಟಿದ ಮನೆ ಸ್ಮಾರಕವಾಗಬೇಕೆಂದು  ಪ್ರಯತ್ನ ನಡೆಸಿದೆವು.  ‘ಅವರ ಭೂತಯ್ಯನ ಮಗ ಅಯ್ಯು ಸಿನಿಮಾ ನೋಡಿರುವೆಯಾ.?‘ನೋಡಿದ್ದೇನೆ. ಅದು ಬಿಡುಗಡೆ ಆಗಿ ೫೦ ವರ್ಷ ಕಳೆದಿದೆ.‘ಅದರಲ್ಲಿ ತೋರಿಸಿದ್ದಾರಲ್ಲಾ ಮಾರಿ ಹಬ್ಬ. ಅದು ಹಿಂದೆ ಇಲ್ಲೇ ನಡೆಯುತ್ತಿತ್ತು ಗೊತ್ತೇ.?‘ ಗೊತ್ತಿಲ್ಲ.  ಆದರೆ ಆ ಸಿನಿಮಾದಲ್ಲಿ ಊರಿಗೆ ಪ್ರವಾಹ ಬಂದ ಸೀನ್ ಇದೆಯೆಲ್ಲಾ. ಅಂತಹ ಸೀನ್ ೧೯೯೧ರಲ್ಲಿ ನೋಡಿದ್ದೆ.  ‘ ಇರಲಿ ಈಗ ಊರಿನ ಶ್ರೀ ಯೋಗನರಸಿಂಹಸ್ವಾಮಿ ತೇರು ಜಾತ್ರೆ ನೋಡಲು ಬಂದಿರುವೆ.  ಊರಿನ ಕಲಾವಿದರು ಪೌರಾಣಿಕ ನಾಟಕೋತ್ಸವ ಏರ್ಪಡಿಸಿದ್ದಾರೆ. ನೋಡಿ ಹೋಗು. ನಾನು ಇನ್ನು ಕೆಲವು ವರ್ಷ ಬದುಕಿರುವೆ. ಮತ್ತೇ ಎಂದಾದರೂ ಒಂದು ದಿನ ಬಾ..— ಗೊರೂರು ಅನಂತರಾಜು,

“ಊರ ಮುಂದಿನ ಅರಳಿ ಮರ”ಗೊರೂರು ಅನಂತರಾಜು ಅವರ ಪ್ರಬಂಧ Read Post »

ಇತರೆ

“ಒಂದು ತಪ್ಪು” ಪೃಥ್ವಿರಾಜ್ ಟಿ ಬಿ

ವಿಶೇಷ ಸಂಗಾತಿ “ಒಂದು ತಪ್ಪು” ಪೃಥ್ವಿರಾಜ್ ಟಿ ಬಿ ಜೀವನದಲ್ಲಿ ನಾವು ಮಾಡುವ ಒಂದು ತಪ್ಪು ನಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.ನಾವು ಹಾಗಲ್ಲ ಎಂದು ತಿಳಿದಿದ್ದರೂ ಪರಿಸ್ಥಿತಿ ಅವರಿಗೆ ನಮ್ಮ ಆ ಒಂದು ತಪ್ಪು ದೊಡ್ಡದಾಗಿ ಕಾಣುತ್ತದೆ.ನಾವು ಮಾಡಿದ ಆ ಒಂದು ತಪ್ಪು ನಮ್ಮನ್ನು ಒಳಗೊಳಗೆ ಕೊಲ್ಲುತ್ತದೆ.ಕೆಲವೊಮ್ಮೆ ಅದನ್ನು ನೆನಪು ಮಾಡಿಕೊಂಡಾಗ ಅದರಿಂದ ನಮ್ಮ ವ್ಯಕ್ತಿತ್ವದ ದೃಷ್ಟಿಕೋನ ನಾವೇನೆಂದು ತಿಳಿದವರೇ ಬದಲಿಸಿ ನೋಡುವಾಗ ಬದುಕಿನ ಮೇಲೆ ಜಿಗುಪ್ಸೆ ಬರುತ್ತದೆ. ಏನೇನೋ ಯೋಚನೆಗಳು ಬರುತ್ತವೆ. ಜೀವನವೆಂಬುದು ನಿರಂತರ ಕಲಿಕೆಯ ಪಯಣ. ಪ್ರತಿದಿನ ನಾವು ಹೊಸ ಅನುಭವಗಳನ್ನು ಸಂಗ್ರಹಿಸುತ್ತೇವೆ, ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ, ಹೊಸ ಸಂಬಂಧಗಳನ್ನು ಕಟ್ಟುತ್ತೇವೆ. ಈ ಪಯಣದಲ್ಲಿ ನಾವು ಸಾಧಿಸುವ ಯಶಸ್ಸಿನಷ್ಟೇ, ಮಾಡುವ ತಪ್ಪುಗಳೂ ನಮ್ಮನ್ನು ರೂಪಿಸುತ್ತವೆ. ಆದರೆ ಕೆಲವೊಮ್ಮೆ ನಾವು ಮಾಡುವ ಒಂದು ಸಣ್ಣ ತಪ್ಪು ನಮ್ಮ ಸಂಪೂರ್ಣ ವ್ಯಕ್ತಿತ್ವದ ಮೇಲೆ ಆಳವಾದ ಛಾಯೆಯನ್ನು ಬೀರುತ್ತದೆ. ಆ ತಪ್ಪು ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಬಲ್ಲ ಶಕ್ತಿಯನ್ನು ಹೊಂದಿರುತ್ತದೆ.ಮಾನವನ ಸ್ವಭಾವವೇ ತಪ್ಪುಮಾಡುವದು. ಯಾರೂ ಸಂಪೂರ್ಣರಾಗಿಲ್ಲ. ಆದರೂ ಸಮಾಜ ನಮ್ಮ ತಪ್ಪನ್ನು ಕ್ಷಮಿಸಲು ಯಾವಾಗಲೂ ಸಿದ್ಧವಿರುವುದಿಲ್ಲ. ನಾವು “ನಾವು ಹಾಗಲ್ಲ” ಎಂದು ಒಳಗೊಳಗೆ ತಿಳಿದಿದ್ದರೂ, ಹೊರಗಿನ ಜಗತ್ತಿಗೆ ನಮ್ಮ ಆ ಒಂದು ತಪ್ಪೇ ನಮ್ಮ ಗುರುತಾಗಿ ಕಾಣುತ್ತದೆ. ನಮ್ಮ ಶುದ್ಧ ಉದ್ದೇಶಗಳು, ಒಳ್ಳೆಯ ಕಾರ್ಯಗಳು, ಮೌಲ್ಯಗಳು ಎಲ್ಲವೂ ಆ ಒಂದು ತಪ್ಪಿನ ನೆರಳಲ್ಲಿ ಮಸುಕಾಗಿಬಿಡುತ್ತವೆ. ಇದೇ ನಮ್ಮ ಮನಸ್ಸಿಗೆ ಅತಿದೊಡ್ಡ ನೋವನ್ನು ಉಂಟುಮಾಡುತ್ತದೆ.ಒಂದು ತಪ್ಪು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ನಾವು ನಮ್ಮನ್ನೇ ಪ್ರಶ್ನಿಸಿಕೊಳ್ಳಲು ಪ್ರಾರಂಭಿಸುತ್ತೇವೆ – “ನಾನು ನಿಜವಾಗಿಯೂ ಇಷ್ಟು ಕೆಟ್ಟವನಾಗಿದ್ದೇನಾ?”, “ನನ್ನಿಂದಲೇ ಇದು ನಡೆಯಿತೇ?” ಎಂದು. ಈ ಪ್ರಶ್ನೆಗಳು ನಿಧಾನವಾಗಿ ನಮ್ಮ ಮನಸ್ಸನ್ನು ಕಿತ್ತುಕೊಳ್ಳುತ್ತವೆ. ಕೆಲವೊಮ್ಮೆ ನಾವು ಹೊರಗೆ ನಗುತ್ತಾ ಬದುಕುತ್ತೇವೆ, ಆದರೆ ಒಳಗೊಳಗೆ ಅದೇ ತಪ್ಪು ನಮ್ಮನ್ನು ಮೌನವಾಗಿ ಕೊಲ್ಲುತ್ತಿರುತ್ತದೆ. ಇದು ಕಾಣದ ನೋವು, ಆದರೆ ಅತ್ಯಂತ ತೀವ್ರವಾದ ನೋವು.ಅತ್ಯಂತ ನೋವುಂಟುಮಾಡುವ ಸಂಗತಿ ಎಂದರೆ ನಮ್ಮನ್ನು ಚೆನ್ನಾಗಿ ಅರಿತವರು ಕೂಡ ಆ ತಪ್ಪಿನ ಆಧಾರದ ಮೇಲೆ ನಮ್ಮನ್ನು ಅಳೆಯಲು ಪ್ರಾರಂಭಿಸುವುದು. ಒಮ್ಮೆ ನಮ್ಮನ್ನು ಗೌರವದಿಂದ ನೋಡಿದ ಕಣ್ಣುಗಳು, ಈಗ ಸಂಶಯದಿಂದ ನೋಡುವಾಗ ಮನಸ್ಸು ಕುಗ್ಗುತ್ತದೆ. ಅವರ ದೃಷ್ಟಿಕೋನದ ಬದಲಾವಣೆ ನಮ್ಮ ಆತ್ಮಗೌರವಕ್ಕೆ ದೊಡ್ಡ ಆಘಾತವನ್ನು ಉಂಟುಮಾಡುತ್ತದೆ. ಇದರಿಂದ ಜೀವನದ ಮೇಲೆ ಜಿಗುಪ್ಸೆ ಹುಟ್ಟುತ್ತದೆ. ಬದುಕು ಅರ್ಥವಿಲ್ಲದಂತೆ ಕಾಣಲು ಶುರುವಾಗುತ್ತದೆ. ಮನಸ್ಸಿನಲ್ಲಿ ಅಶಾಂತ ಯೋಚನೆಗಳು, ನಿರಾಶೆ, ಭಯ, ಅಪರಾಧಬೋಧ ಮೇಳೈಸುತ್ತವೆ.ಕೆಲವರಿಗೆ ಆ ತಪ್ಪು ಒಂದು ಪಾಠವಾಗುತ್ತದೆ; ಇನ್ನೂ ಕೆಲವರಿಗೆ ಅದು ಶಾಪವಾಗಿಬಿಡುತ್ತದೆ. ವ್ಯತ್ಯಾಸ ಇರುವುದು ನಮ್ಮ ಅದನ್ನು ನೋಡುವ ದೃಷ್ಟಿಕೋನದಲ್ಲಿ. ತಪ್ಪನ್ನು ನಾವು ಒಪ್ಪಿಕೊಂಡು, ಅದರಿಂದ ಪಾಠ ಕಲಿದು ಮುಂದೆ ಸಾಗಿದರೆ ಅದು ನಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ. ಆದರೆ ಅದನ್ನೇ ನಮ್ಮ ಅಸ್ತಿತ್ವದ ಗುರುತಾಗಿ ಮಾಡಿಕೊಂಡರೆ, ಅದು ನಮ್ಮನ್ನು ನಿಧಾನವಾಗಿ ಕುಗ್ಗಿಸುತ್ತದೆ.ಸಮಾಜದ ಪಾತ್ರವೂ ಇಲ್ಲಿ ಅತ್ಯಂತ ಮಹತ್ವದ್ದಾಗಿದೆ. ಸಮಾಜ ಸಾಮಾನ್ಯವಾಗಿ ತಪ್ಪನ್ನು ತೀರ್ಪಿನ ಕಣ್ಣಿನಿಂದ ನೋಡುತ್ತದೆ; ಸಹಾನುಭೂತಿಯ ಕಣ್ಣಿನಿಂದ ಅಲ್ಲ. ಒಬ್ಬ ವ್ಯಕ್ತಿಯ ಒಂದು ತಪ್ಪನ್ನು ಸಂಪೂರ್ಣ ಜೀವನದ ತೂಕಕ್ಕೆ ಹಾಕಿ ತೀರ್ಮಾನಿಸುವುದು ಸುಲಭ. ಆದರೆ ಆ ವ್ಯಕ್ತಿಯ ಒಳಗಿನ ನೋವು, ಪಶ್ಚಾತ್ತಾಪ, ಬದಲಾವಣೆಯ ಪ್ರಯತ್ನಗಳು ಬಹುತೇಕ ಯಾರಿಗೂ ಕಾಣುವುದಿಲ್ಲ. ನಾವು ಸಹ ಇತರರ ತಪ್ಪನ್ನು ಕ್ಷಮಿಸುವ ಮನಸ್ಸು ಬೆಳೆಸಬೇಕು. ಏಕೆಂದರೆ ಇಂದು ಅವರ ಸ್ಥಾನದಲ್ಲಿ ನಾವಿರಬಹುದು; ನಾಳೆ ನಮ್ಮ ಸ್ಥಾನದಲ್ಲಿ ಅವರು ಇರಬಹುದು.ತಪ್ಪುಗಳು ನಮ್ಮನ್ನು ಮಾನವೀಯರನ್ನಾಗಿಸುತ್ತವೆ. ತಪ್ಪಿಲ್ಲದ ಬದುಕು ಕಲ್ಪನೆಯಲ್ಲಷ್ಟೇ ಸಾಧ್ಯ. ಪ್ರತಿಯೊಂದು ತಪ್ಪು ನಮ್ಮೊಳಗೆ ಒಂದು ಪಾಠವನ್ನು ಅಡಗಿಸಿಕೊಂಡಿರುತ್ತದೆ. ಅದು ನಮ್ಮನ್ನು ಜಾಗರೂಕರನ್ನಾಗಿಸುತ್ತದೆ, ವಿನಮ್ರತೆಯನ್ನು ಕಲಿಸುತ್ತದೆ, ಇತರರ ನೋವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಅವುಗಳಿಂದ ಕಲಿಯುವ ಧೈರ್ಯವನ್ನು ಹೊಂದಿದಾಗ ಮಾತ್ರ ನಿಜವಾದ ವ್ಯಕ್ತಿತ್ವ ಬೆಳೆಯುತ್ತದೆ.ಒಂದು ತಪ್ಪಿನಿಂದ ಹೊರಬರುವುದು ಸುಲಭವಲ್ಲ. ಕೆಲವೊಮ್ಮೆ ಸಮಯ ಬೇಕಾಗುತ್ತದೆ, ಕೆಲವೊಮ್ಮೆ ಕ್ಷಮೆ ಕೇಳಬೇಕಾಗುತ್ತದೆ, ಇನ್ನೊಮ್ಮೆ ಸ್ವತಃ ನಮ್ಮನ್ನೇ ಕ್ಷಮಿಸಿಕೊಳ್ಳಬೇಕಾಗುತ್ತದೆ. ನಮ್ಮನ್ನು ನಾವು ಕ್ಷಮಿಸಿಕೊಳ್ಳುವ ಕಲಿಕೆ ಅತ್ಯಂತ ಕಠಿಣವಾದರೂ ಅತ್ಯಂತ ಅಗತ್ಯವಾದದ್ದು. ಏಕೆಂದರೆ ನಾವು ನಮ್ಮನ್ನೇ ಕ್ಷಮಿಸದಿದ್ದರೆ, ಮುಂದೆ ಸಾಗಲು ಸಾಧ್ಯವಿಲ್ಲ.ನಮ್ಮ ಮನಸ್ಸಿನಲ್ಲಿ ಮರುಮರು ಅದೇ ತಪ್ಪಿನ ನೆನಪುಗಳು ಬಂದಾಗ, ನಾವು ನಮ್ಮನ್ನು ತಡೆದುಕೊಳ್ಳಬೇಕು. “ನಾನು ಆ ತಪ್ಪಿಗಿಂತ ದೊಡ್ಡವನು”, “ನನ್ನ ಬದುಕು ಒಂದು ತಪ್ಪಿನಿಂದ ಸೀಮಿತವಾಗುವುದಿಲ್ಲ” ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಧನಾತ್ಮಕ ಚಿಂತನೆ, ಉತ್ತಮ ಸಂಗಾತಿ, ಸೃಜನಶೀಲತೆ, ಸೇವಾಭಾವ – ಇವುಗಳು ನಮ್ಮ ಮನಸ್ಸನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿವೆ.ವಿಶೇಷವಾಗಿ ಯುವಜನರಲ್ಲಿ ಒಂದು ತಪ್ಪು ದೊಡ್ಡ ನಿರಾಶೆಗೆ ಕಾರಣವಾಗುತ್ತದೆ. ಜೀವನವೇ ಮುಗಿದಂತೆ ಭಾಸವಾಗಬಹುದು. ಆದರೆ ಅದೇ ತಪ್ಪು ಭವಿಷ್ಯದ ಬಲಿಷ್ಠ ವ್ಯಕ್ತಿತ್ವಕ್ಕೆ ಬೀಜವಾಗಬಹುದು ಎಂಬುದನ್ನು ಅವರು ಅರಿಯಬೇಕು. ಇತಿಹಾಸದಲ್ಲಿನ ಅನೇಕ ಮಹಾನ್ ವ್ಯಕ್ತಿಗಳು ತಮ್ಮ ಜೀವನದಲ್ಲಿ ದೊಡ್ಡ ತಪ್ಪುಗಳನ್ನು ಮಾಡಿದ್ದಾರೆ; ಆದರೆ ಅದನ್ನೇ ತಮ್ಮ ಶಕ್ತಿಯಾಗಿ ಪರಿವರ್ತಿಸಿಕೊಂಡಿದ್ದಾರೆ.ಕೊನೆಗೆ ಹೇಳಬೇಕೆಂದರೆ, ಒಂದು ತಪ್ಪು ನಮ್ಮನ್ನು ಮುರಿಯಬಹುದು, ಅಥವಾ ನಮ್ಮನ್ನು ಕಟ್ಟಬಹುದು — ಅದು ನಮ್ಮ ಆಯ್ಕೆ. ತಪ್ಪು ನಮ್ಮ ಗುರುತು ಅಲ್ಲ; ನಾವು ಅದರಿಂದ ಏನು ಕಲಿತೆವು ಎಂಬುದೇ ನಮ್ಮ ನಿಜವಾದ ಗುರುತು. ಬದುಕು ಎಂದರೆ ಪರಿಪೂರ್ಣತೆ ಅಲ್ಲ, ನಿರಂತರ ಸುಧಾರಣೆ. ತಪ್ಪುಗಳನ್ನು ಒಪ್ಪಿಕೊಂಡು, ಆತ್ಮವಿಶ್ವಾಸದಿಂದ ಮುಂದೆ ಸಾಗುವವನೇ ನಿಜವಾದ ಗೆದ್ದವನು. ಪೃಥ್ವಿರಾಜ್ ಟಿ ಬಿ

“ಒಂದು ತಪ್ಪು” ಪೃಥ್ವಿರಾಜ್ ಟಿ ಬಿ Read Post »

ಇತರೆ

“ಹೆಣ್ಣು ಎದುರಿಸುತ್ತಿರುವ ಅತ್ಯಾಚಾರವೆಂಬ ಸವಾಲು” ಡಾ.ಸುಮತಿ ಪಿ.

ಮಹಿಳಾ ಸಂಗಾತಿ ಡಾ.ಸುಮತಿ ಪಿ. “ಹೆಣ್ಣು ಎದುರಿಸುತ್ತಿರುವ ಅತ್ಯಾಚಾರವೆಂಬ ಸವಾಲು” ನಮ್ಮ ಹಿಂದಿನವರು ಹೇಳಿದ್ದನ್ನು ಕೇಳಿದ್ದೆ.”ಹೆಣ್ಣೆಂದರೆ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆ”ಎಂದು.ಆಗ ಹೆಣ್ಣಿಗೆ ಸ್ವಾತಂತ್ರ್ಯವಿಲ್ಲದ ಸಮಯ.ಮನೆಯ ನಾಲ್ಕು ಗೋಡೆಯ ಒಳಗಿದ್ದು,ಯಾವ ರೀತಿಯ ಮನೋಭಾವ ಇತ್ತೆಂದರೆ ಸ್ವಚಂದವಾಗಿ ಹಾರಾಡುವ ಸ್ವಾತಂತ್ರ್ಯವಿರದ ಪಂಜರದಲ್ಲಿರುವ ಹಕ್ಕಿಯಂತೆ. ಆಗ ಹೆಣ್ಣಿಗೆ ಶಿಕ್ಷಣ ನೀಡುತ್ತಿರಲಿಲ್ಲ. ಏನಿದ್ದರೂ ಮನೆ ಕೆಲಸ,ಅಡುಗೆ, ಗಂಡ, ಮಕ್ಕಳು, ಕುಟುಂಬ,ಸಂಸಾರ, ನೆಂಟರು ಇಷ್ಟಕ್ಕೆ ಅವಳ ಸಂಪರ್ಕ ಸೀಮಿತವಾಗಿತ್ತು.ಈ ಕಾಲದಲ್ಲಿ  ಹೆಣ್ಣಿಗೆ ಗಂಡಿನಂತೆಯೇ ಶಿಕ್ಷಣ,ಸ್ವಾತಂತ್ರ ಎಲ್ಲವೂ ಸುಲಭವಾಗಿ ದೊರಕಿದರೂ,ಹೆಣ್ಣಿನೆದುರಿಗೆ ಸವಾಲುಗಳ ಸರಮಾಲೆಯೇ ಇದೆಯೆಂದರೆ ತಪ್ಪಾಗಲಾರದು.ಅದರಲ್ಲಿಯೂ ಬಹುದೊಡ್ಡ ಸವಾಲೆಂದರೆ ಪ್ರಾಣಕಂಟಕವಾದ ಅತ್ಯಾಚಾರ.   “ಎಲ್ಲಿ ಸ್ತೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ”ಎಂಬ ಮೇರು ಸಂಸ್ಕೃತಿಯ ನಮ್ಮ ಭಾರತ ದೇಶದಲ್ಲಿ ಇದೀಗ ಅತ್ಯಾಚಾರವೆಂಬ ಕತ್ತಲು ಕವಿದಿದೆ.ಮನುಷ್ಯನ ನಾಗರಿಕತೆಗೆ ಮಂಕು ಕವಿದಿದೆಆಧುನಿಕತೆಯ ಹೆಸರಲ್ಲಿ,ಜೀವನ ಕ್ರಮ ಬದಲಾಗುತ್ತಿದೆ. ಸಂಸ್ಕೃತಿ ,ಸಂಸ್ಕಾರ ಮರೆಯಾಗುತ್ತಿದೆ. ಕುಟುಂಬದಲ್ಲಿ, ಸಮಾಜದಲ್ಲಿ ಕಟ್ಟುಪಾಡಿನ ಕ್ರಮಗಳು ಮರೆಯಾಗಿವೆ, ಮದುವೆಯೆನ್ನುವುದು ಚೌಕಟ್ಟು ಮೀರಿದೆ,ಹೆಣ್ಣಿಗೆ ನೀಡಿದ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಅವಿಭಕ್ತ ಕುಟುಂಬ ಜೀವ ಕಳೆದುಕೊಂಡು,ವಿಭಕ್ತ ಕುಟುಂಬದಲ್ಲಿ,ಹೇಳುವವರು ಕೇಳುವವರಿಲ್ಲದೇ, ಸ್ವಾತಂತ್ರ್ಯದ ಹೆಸರಲ್ಲಿ ಯುವಕರು ನಡೆದದ್ದೇ ದಾರಿ ಎಂಬಂತಾಗಿದೆ.ಕಡಿವಾಣವಿಲ್ಲದ ಕುದುರೆಯಂತೆ, ಯೌವನದ ಮರ್ಕಟ ಮನದಲಿ ಉದಿಸುವ ಹುಚ್ಚು ಕನಸುಗಳ ಬೆನ್ನೇರಿ,ಸಾಗುವ ಜೀವನ,ಕನಸುಗಳು ಈಡೇರದೇ,ಸೋಲೊಪ್ಪಲಾಗದೆ ದುರಂತ ಅಂತ್ಯ ಕಾಣುತ್ತಿದೆ.      ಪ್ರಸ್ತುತ ಸಮಾಜದಲ್ಲಿ ಅತ್ಯಾಚಾರವೆಂಬುದು ದಿನನಿತ್ಯದ ಸಾಮಾನ್ಯ ಘಟನೆಯೆಂಬಂತೆ ಕಂಡುಬರುವುದು ಕಳವಳಕಾರಿ ಸಂಗತಿ.ದಿನಕಳೆದಂತೆ ಅತ್ಯಾಚಾರದ ಘಟನೆಗಳು ಮಿತಿಮೀರಿ ನಡೆಯುತ್ತಿವೆ.ಒಂದೊಂದು ಪ್ರಕರಣವೂ ನಿಯತ್ತಿನ ಹೆಣ್ಣುಮಕ್ಕಳಲ್ಲಿ ಭಯ ಮೂಡಿಸುತ್ತಿದೆ!. ಅದರಲ್ಲೂ ಹೆಣ್ಣು ಮಗಳೊಬ್ಬಳು ಸ್ವಂತ ಅಣ್ಣ-ತಮ್ಮಂದಿರಿಂದೇಕೆ!,ಜನ್ಮಕ್ಕೆ ಕಾರಣವಾದ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದರೆ,ಇದಕ್ಕಿಂತ ಹೇಯ,ಹೀನ ಕೃತ್ಯ ಬೇರೆ ಉಂಟೇ? ಹಾಗಾದರೆ ನಾಗರಿಕತೆ ಎತ್ತ ಸಾಗುತ್ತಿದೆ?     “ವಿನಾಶ ಕಾಲೇ ವಿಪರೀತ ಬುದ್ಧಿ “ಎಂಬಂತೆ ಇದು ಹೀಗೆ ಮುಂದುವರಿದರೆ ಸಂಸ್ಕೃತಿ ,ಸಂಸ್ಕಾರದಲ್ಲಿ ಜಗತ್ತನ್ನೇ ಗೆದ್ದು  ಬೀಗಿ ನಿಂತ ಬಾರತ ಅತ್ಯಾಚಾರದಂತಹ ಹೇಯ ಕೃತ್ಯಗಳಿಂದ ಜಗತ್ತಿನೆದುರು ತಲೆತಗ್ಗಿಸಿ ನಿಲ್ಲುವಂತಾದರೂ ಆಶ್ಚರ್ಯವಿಲ್ಲ.!“ಎರಡೂ ಕೈ ಸೇರಿದಾಗ ಮಾತ್ರ ಚಪ್ಪಾಳೆ” ಎಂಬಂತೆ, ಅತ್ಯಾಚಾರಕ್ಕೆ ಗಂಡನ್ನು ಕಾರಣವಾಗಿಸುವಾಗ,ಹೆಣ್ಣಿನ ತಪ್ಪನ್ನು  ಮುಚ್ಚಿಡಲಾಗದು. ಹೆಣ್ಣಿನ ನಡೆ,ನುಡಿ ಕೂಡ ಅವಳ ಅತ್ಯಾಚಾರಕ್ಕೆ ಕಾರಣವಾಗಬಹುದು ಎಂಬುವುದು ಗಮನಿಸಬೇಕಾದ  ಅಂಶವಾಗುತ್ತದೆ.ಆದ್ದರಿಂದ ಹೆಣ್ಣಿನ ಅತ್ಯಾಚಾರದಲ್ಲಿ ಗಂಡಿನ ಪಾತ್ರ ಹೆಚ್ಚಿದ್ದರೂ,ಹೆಣ್ಣಿಗೆ ಎಚ್ಚರಿಕೆಯ ನಡೆಯಿರಬೇಕು.ಗಂಡಸರು ಹೆಣ್ಣಿಗೂ ತನ್ನಂತೆ ಮನಸ್ಸು ಇದೆ,ಆಸೆ,ಆಕಾಂಕ್ಷೆಯಿದೆ ಎಂಬುದನ್ನು ಅರಿಯಬೇಕು.ಪರಸ್ಪರ ಗೌರವ, ಸಹಕಾರ, ಸಹಜೀವನ ಇರಬೇಕು.ಕಾನೂನು ಕೂಡ ಕಟ್ಟುನಿಟ್ಟಿರಬೇಕು.ಹೆಣ್ಣು ತನ್ನ ಮೇಲೆ ನಡೆದ ಅತ್ಯಾಚಾರವನ್ನು ಸಾಬೀತುಪಡಿಸುವ ಮನೋಸ್ಥೈರ್ಯ ಮೂಡಿಸಿಕೊಳ್ಳಬೇಕು.ಅತ್ಯಾಚಾರ ಸಾಬೀತಾದರೆ ಮರಣದಂಡನೆ ವಿಧಿಸಬೇಕು.ಸುಳ್ಳು ಸಾಕ್ಷಿ,ಹಣದಿಂದ, ಅಧಿಕಾರ ಪ್ರಭಾವದಿಂದ ನುಸುಳಲು ಬಿಡಬಾರದು.ಒಟ್ಟಿನಲ್ಲಿ ಅತ್ಯಾಚಾರ ತಡೆಯಬೇಕಾದರೆ,ಗಂಡು ಹೆಣ್ಣಿಗೆ ಅರಿವಿನ ಶಿಕ್ಷಣ,ಮಾನಸಿಕ ಚಿಕಿತ್ಸೆ,ಹೆಣ್ಣಿನ ಬಗ್ಗೆ ಬದಲಾಗಬೇಕಾದ ಮನೋಭಾವ,ಕಠಿಣ ಕಾನೂನು,ಪ್ರಜ್ಞಾವಂತ ಸಮಾಜದೊಂದಿಗೆ ,ಹೆತ್ತವರೂ ಜಾಗೃತರಾಗಿರಬೇಕು, ಅತ್ಯಾಚಾರ ಮುಕ್ತ ಸಮಾಜ ನಿರ್ಮಾಣವಾಗಬೇಕು. ಡಾ.ಸುಮತಿ ಪಿ

“ಹೆಣ್ಣು ಎದುರಿಸುತ್ತಿರುವ ಅತ್ಯಾಚಾರವೆಂಬ ಸವಾಲು” ಡಾ.ಸುಮತಿ ಪಿ. Read Post »

gaade
ಇತರೆ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ
​ಗಾದೆಗಳ ವಿಶ್ಲೇಷಣೆ
ನಿಜ ಆಡಿದರೆ ನಿಷ್ಠುರ, ಸುಳ್ಳಾಡಿದರೆ ಮತ್ಸರ

Read Post »

ಇತರೆ, ಜೀವನ

“ಜಪಾನೀಯರ ದೀರ್ಘಾಯುಷ್ಯದ ಗುಟ್ಟು” ವೀಣಾ ಹೇಮಂತ್‌ ಗೌಡ ಪಾಟೀಲ್

ಜೀವನ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಜಪಾನೀಯರ ದೀರ್ಘಾಯುಷ್ಯದ ಗುಟ್ಟು”  ಇತ್ತೀಚಿಗಿನ ವರದಿಯ ಪ್ರಕಾರ ಜಪಾನಿನಲ್ಲಿ 95,000ಕ್ಕೂ ಹೆಚ್ಚು ಶತಾಯುಷಿಗಳಿದ್ದಾರೆ. ಆರೋಗ್ಯವಾಗಿ ಓಡಾಡಿಕೊಂಡು ತಮ್ಮ ದೈನಂದಿನ ಬದುಕನ್ನು ನಡೆಸುತ್ತಿರುವ ಅವರನ್ನು ನೋಡಿದಾಗ ಅಬ್ಬಾ ಎಂಥ ಅದೃಷ್ಟವಂತರು ಇವರು ಎಂದು ನಮಗೆ ಅನಿಸಿದರೆ ತಪ್ಪಿಲ್ಲ.  ಆದರೆ ಇಲ್ಲಿ ಕೇವಲ ಅದೃಷ್ಟದ ಪಾಲು ಇಲ್ಲ. ದೀರ್ಘಾಯುಷ್ಯ ಅವರ ವಂಶವಾಹಿಗಳಲ್ಲಂತೂ ಮೊದಲೇ ಇಲ್ಲ….. ಹಾಗಿದ್ದರೆ ಅವರ ದೀರ್ಘಾಯುಷ್ಯದ ಗುಟ್ಟೇನು? ಎಂದು ಕೇಳಿದರೆಅವರ ಶಾಂತ ಸ್ವಭಾವ, ಉದ್ದೇಶ ಹಾಗೂ ಆಳವಾದ ಬುದ್ದಿವಂತಿಕೆ ಎಂದು ಹೇಳಬಹುದು.  ಬದುಕಿನಲ್ಲಿ ಅವರ ಕೆಲವು ಅಭ್ಯಾಸಗಳನ್ನು  ಅರ್ಥಮಾಡಿಕೊಳ್ಳೋಣ* ಅವರು ಅತ್ಯಂತ ಧಾನಪೂರ್ವಕವಾಗಿ ಆಹಾರವನ್ನು ಸೇವಿಸುತ್ತಾರೆ ಹಾಗೂ ಅನವಶ್ಯಕವಾಗಿ ಹೆಚ್ಚು ಆಹಾರವನ್ನು ಸೇವಿಸುವುದಿಲ್ಲ ಅವರು ಸೇವಿಸುವ ಆಹಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ.ತಾಜಾ ಆಗಿರುವ, ಆಯಾ ಋತುಮಾನದಲ್ಲಿ ದೊರೆಯುವ ತರಕಾರಿ, ಹಣ್ಣು, ಆಹಾರಗಳನ್ನು ಅವರು ಸೇವಿಸುತ್ತಾರೆ.ಸಾಧ್ಯವಿದ್ದಷ್ಟು ತರಕಾರಿಗಳು, ಅಕ್ಕಿ, ಮೀನು ಹಾಗೂ ಹುದುಗು ಬರಿಸಿದ ಆಹಾರ ಪದಾರ್ಥಗಳು ಅವರ ಮೊದಲ ಆದ್ಯತೆ. ತಮ್ಮ ಅವಶ್ಯಕತೆಯ 80% ನಷ್ಟು ಆಹಾರವನ್ನು ಮಾತ್ರ ಅವರು ಸೇವಿಸುತ್ತಾರೆ…. ಅಂದರೆ ಹೊಟ್ಟೆ ತುಂಬುವ ಮುನ್ನವೇ ಅವರು ಆಹಾರ ಸೇವನೆಯನ್ನು ನಿಲ್ಲಿಸುತ್ತಾರೆ.‘ಹರಾ ಹಚೀ ಬು’ ಎಂದರೆ ನಿಮ್ಮ ಅವಶ್ಯಕತೆಯ ಕೇವಲ 80 ಶೇಕಡಾ ಆಹಾರವನ್ನು ನೀವು ಸೇವಿಸಿ ಎಂಬ ನಿಯಮವನ್ನು ಅವರು ಪಾಲಿಸುತ್ತಾರೆ. *ಸಾಮಾನ್ಯವಾಗಿ ಅವರು ಅತ್ಯಂತ ಸಹಜವಾಗಿ, ನೈಸರ್ಗಿಕವಾಗಿ ಪ್ರತಿದಿನ ನಡೆದಾಡುತ್ತಾರೆ.ಮನೆಯ ಕೈದೋಟಗಳನ್ನು ನಿರ್ವಹಿಸುತ್ತಾ ಓಡಾಡುತ್ತಾರೆ.ಇತರರನ್ನು ಅವಲಂಬಿಸದೆ ಮನೆಯ ಸ್ವಚ್ಛತೆಯನ್ನು ತಾವೇ ಮಾಡಿಕೊಳ್ಳುತ್ತಾರೆ. ಚಿಕ್ಕ ಪುಟ್ಟ ದೂರವನ್ನು ಮಾತ್ರವಲ್ಲದೆ ತುಸು ಹೆಚ್ಚಿನ ದೂರವನ್ನು ಕೂಡ ಅವರು ನಡೆದು ಪೂರೈಸುತ್ತಾರೆಪ್ರತಿದಿನ ಕೆಲ ಸೂಕ್ತ ವ್ಯಾಯಾಮಗಳನ್ನು ಮಾಡುತ್ತಾರೆ.ಅವರು ವ್ಯಾಯಾಮ ಮಾಡಲು ಜಿಮ್ ನಂತಹ ಯಂತ್ರಗಳ ಅವಲಂಬನೆಯನ್ನು ಮಾಡದೆ ಅತ್ಯಂತ ಸಹಜವಾಗಿ ಅವರು ಓಡಾಡಿಕೊಂಡು ತಮ್ಮ ನಿತ್ಯ ಬದುಕನ್ನು ನಡೆಸುತ್ತಾರೆ. ಪ್ರತಿದಿನ ಮುಂಜಾನೆ ಬೇಗನೆ ಏಳಲು ಅವರಿಗೆ ಅವರದ್ದೇ ಆದ ಕಾರಣವಿದೆ. ಇಕಿಗಾಯಿ ಎಂದು ಅದಕ್ಕೆ ಹೆಸರು. ಅದೆಷ್ಟೇ ಚಿಕ್ಕದಾದ ವಸ್ತು, ವಿಷಯವಿರಲಿ ಅದರಲ್ಲಿ ಒಂದು ಉದ್ದೇಶವನ್ನು ಅವರು ಹೊಂದಿರುತ್ತಾರೆ. ಸದಾ ಚಟುವಟಿಕೆಯಿಂದ ಇರುತ್ತಾರೆ.ಎಂದೂ ನಿವೃತ್ತರಾಗುವುದಿಲ್ಲ. ಸಾಧ್ಯವಾದಷ್ಟು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಪ್ರತಿ ಹುಟ್ಟುಹಬ್ಬಕ್ಕೂ ಮತ್ತಷ್ಟು ಆರೋಗ್ಯವಂತರಾಗಿರುವ ಆಶಯವನ್ನು ಹೊಂದಿದ್ದು ಅದಕ್ಕೆ ಪೂರಕವಾಗಿ ಬದುಕನ್ನು ಕಟ್ಟಿಕೊಳ್ಳುತ್ತಾರೆ. *ಮಕ್ಕಳನ್ನು, ಮೊಮ್ಮಕ್ಕಳನ್ನು ಕಾಳಜಿ ಮಾಡುವ ಅವರೇ ಎಲ್ಲ ಕೆಲಸ ಕಾರ್ಯಗಳನ್ನು ಅವರು ನಿರ್ವಹಿಸಲು ಸಹಾಯ ಮಾಡುವರು. ಚಿಕ್ಕ ಸಸಿ ಇರಲಿ ದೊಡ್ಡ ಮರವಿರಲಿ ಅದನ್ನು ಕೂಡ ಅತ್ಯಂತ ಕಾಳಜಿ ಪೂರ್ವಕವಾಗಿ ಬೆಳೆಸುತ್ತಾರೆ . ಸಮಾಜದ ಹಾಗೂ ಸಮುದಾಯದ ಕುರಿತು ಕೂಡ ಅದೇ ಪ್ರಮಾಣದ ಕಾಳಜಿಯನ್ನು ಅವರು ಹೊಂದಿರುತ್ತಾರೆ. ತಮ್ಮನ್ನು ತಾವು ಅತ್ಯಂತ ಉಪಯುಕ್ತ ಮತ್ತೊಬ್ಬರ ಅವಶ್ಯಕತೆಗೆ ಜೊತೆಯಾಗುವ ಹಾಗೂ ಅವರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿರುತ್ತಾರೆ   ಅತ್ಯಂತ ಬಲವಾದ ಸಾಮಾಜಿಕ ಬಂಧುಗಳನ್ನು ಕೂಡ ಅವರು ಕಾಯ್ದುಕೊಳ್ಳುತ್ತಾರೆ *ಕುಟುಂಬ ಮತ್ತು ನೆರೆಹೊರೆಯೊಂದಿಗೆ ಅತ್ಯುತ್ತಮ ಬಾಂಧವ್ಯ ಹಾಗೂ ನಿರಂತರ ಸಂಪರ್ಕವನ್ನು ಹೊಂದಿರುತ್ತಾರೆ. ಹಿರಿಯರಿಗೆ ಅನಾದರ ತೋರದೆ ಗೌರವ ಪೂರ್ವಕವಾಗಿ ನಡೆಸಿಕೊಳ್ಳುತ್ತಾರೆ.ಒಂಟಿತನವನ್ನು ಅವರು ಬಯಸುವುದಿಲ್ಲ ಸದಾ ಸಮಾಜದ ಸಮುದಾಯದ ಜೊತೆ ಬೆರೆತು ಅದರ ಆಗುಹೋಗುಗಳಲ್ಲಿ ಒಂದಾಗಿ ನಡೆಯುತ್ತಾರೆ ಅತ್ಯಂತ ಕಡಿಮೆ ಒತ್ತಡವನ್ನು ಹೊಂದಿರುತ್ತಾರೆ ಇದು ಅವರ ನರವ್ಯೂಹವನ್ನು ಶಾಂತಗೊಳಿಸುತ್ತದೆ. ಬದುಕಿನಲ್ಲಿ ಅತ್ಯಂತ ಕಡಿಮೆ ಅವಶ್ಯಕತೆಗಳು ಹಾಗೂ ಹೆಚ್ಚು ಉಪಯುಕ್ತತೆ ಯನ್ನು ಬಯಸುವ ವ್ಯಕ್ತಿತ್ವ ಅವರದಾಗಿದ್ದು ಅತ್ಯಂತ ನಿಧಾನ ಆದರೆ ಅಷ್ಟೇ ಅರ್ಥಪೂರ್ಣವಾದ ಶೈಲಿಯ ಬದುಕು ಅವರದಾಗಿರುತ್ತದೆ. ನಿರಂತರವಾಗಿ ಎಲ್ಲವನ್ನು ವಿರೋಧಿಸದೆ  ಒಪ್ಪಿಕೊಳ್ಳುವ ಮನೋಭಾವವನ್ನು ಹೊಂದಿರುತ್ತಾರೆ.ಹಣ, ಆಸ್ತಿ, ಅಂತಸ್ತುಗಳ ಕುರಿತು ಅವರಿಗೆ ವಿಶೇಷ ಮೋಹ ಇರುವುದಿಲ್ಲ. ಇತರರೊಂದಿಗೆ ಹೋಲಿಕೆ ಮಾಡಿಕೊಂಡು ವ್ಯಥೆ ಪಡುವ ಸ್ವಭಾವ ಕೂಡ ಅವರದಲ್ಲ. * ಪ್ರಕೃತಿಯೊಂದಿಗೆ ಸಾಮರಸ್ಯದ ಬದುಕು ಅವರದ್ದುಮನೆಯಲ್ಲಿ ಅತಿಯಾಗಿ ಲೈಟುಗಳನ್ನು ಫ್ಯಾನುಗಳನ್ನು ಉರಿಸುವುದಿಲ್ಲ ನೈಸರ್ಗಿಕ ಗಾಳಿ, ಬೆಳಕನ್ನು ಹೆಚ್ಚು ಆಸ್ವಾದಿಸುತ್ತಾರೆ. ಅವರ ದಿನಚರ್ಯ ಹಾಗೂ ಋತುಚರ್ಯಗಳಿಗೆ ಅನುಸಾರವಾಗಿ ಬದುಕನ್ನು ನಡೆಸುತ್ತಾರೆ. ಬದುಕಿನ ಕುರಿತು ಅಪಾರ ಗೌರವವನ್ನು ಹೊಂದಿರುವ ಅವರು ಆಹಾರ ಸೇವನೆಯ ಕುರಿತು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯನ್ನು ತೋರುತ್ತಾರೆ ಯಾವುದನ್ನೇ ಆಗಲಿ ಪೋಲು ಮಾಡದೆ ಬಳಸುವ ರೂಢಿಯನ್ನು  ಹೊಂದಿರುತ್ತಾರೆ.ತಮ್ಮ ದೇಹದ ಕುರಿತು ಕೂಡ ಅಷ್ಟೇ ಕಾಳಜಿ, ಗೌರವವನ್ನು ಹೊಂದಿದ್ದು ಪ್ರೀತಿಪೂರ್ವಕ ಪೋಷಣೆ ಅವರದ್ದಾಗಿರುತ್ತದೆ. *ಸಂತೋಷಕ್ಕಾಗಿ ಅವರು ಹಪಹಪಿಸುವುದಿಲ್ಲ ಬೆನ್ನತ್ತುವುದಿಲ್ಲ…. ಅವರು ಬದುಕಿನಲ್ಲಿ ಸಮತೋಲನವನ್ನು ಇಚ್ಚಿಸುತ್ತಾರೆ ಹಾಗೂ ಅದನ್ನೇ ಅಳವಡಿಸಿಕೊಳ್ಳುತ್ತಾರೆ.ಅವರು ತಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆಬದುಕಿನ ತಾತ್ಕಾಲಿಕ ವಿಷಯ ಸುಖಗಳ ಕುರಿತು ಅವರಿಗೆ ಅರಿವು ಇದ್ದು ಅಶಾಶ್ವತತೆಯನ್ನು ಒಪ್ಪಿಕೊಂಡು ಬಾಳುತ್ತಾರೆ.ಯಾವುದೇ ರೀತಿಯ ದ್ವೇಷ ಅಸಹನೆ ಅಸಮಾಧಾನಗಳನ್ನು ದೀರ್ಘಕಾಲದವರೆಗೆ ಇಟ್ಟುಕೊಂಡು ಮಾನಸಿಕವಾಗಿ ಬೇಯುವುದಿಲ್ಲ…. ಹೋಗಲಿ ಬಿಡು ಎಂದು ವಿಷಯಗಳನ್ನು ಅವು ಇರುವಂತೆಯೇ ಒಪ್ಪಿ ಅಪ್ಪಿಕೊಳ್ಳುತ್ತಾರೆ.  ನೋಡಿದಿರಾ ಸ್ನೇಹಿತರೆ,ಬುದ್ಧನ ಎಲ್ಲ ಬೋಧನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ಅವರು ಹೇರಳತೆಯ ವಿರುದ್ಧ ವಿರಳತೆಯನ್ನು ಅತಿ ಬಳಕೆಯ ವಿರುದ್ಧ ಸರಳತೆಯನ್ನು ಭೋಗ ಮತ್ತು ಲಾಲಸೆಯ ಬದುಕಿನ ಮೇಲೆ ಮಿತಿಯನ್ನು ತಮ್ಮನ್ನು ವಿಚಲಿತಗೊಳಿಸುವ ವಿಷಯಾಸಕ್ತಿಗಳ ಕುರಿತು ಅರಿವನ್ನು ಹೊಂದಿರುತ್ತಾರೆಒಬ್ಬಂಟಿತನದ ವಿರುದ್ಧ ಸಮುದಾಯದ ಜೊತೆಗಿನ ಭಾಗವಹಿಸುವಿಕೆಯನ್ನು ಹೊಂದಿರುತ್ತಾರೆ. ಇವೆಲ್ಲವೂ ಬೌದ್ಧ ಧರ್ಮದ ಬೋಧನೆಯ ಜಾಣ್ಮೆಯನ್ನು ಬದುಕಿನ ಕನ್ನಡಿಯಲ್ಲಿ ಅಳವಡಿಸಿಕೊಂಡು ನಮ್ಮನ್ನು ನಾವು ನೋಡಿಕೊಳ್ಳಲು ಅವರು ಬಳಸುವ ವಿಧಾನಗಳು. ಅಂತಿಮವಾಗಿ ದೀರ್ಘಾಯುಷ್ಯ ಎಂದರೆ ಬದುಕಿನ ದಿನಗಳಿಗೆ ಮತ್ತಷ್ಟು ಆಯುಷ್ಯವನ್ನು ತುಂಬುವುದು ಅಲ್ಲ.ಮತ್ತಷ್ಟು ಹೆಚ್ಚು ವರ್ಷ ಬಾಳುವುದಂತೂ ಅಲ್ಲವೇ ಅಲ್ಲ…. ಇದು ಬದುಕಿನಲ್ಲಿ ನಮಗೆ ನಿಧಾನ ವಿಷವಾಗಿ ಪರಿಣಮಿಸುವ ವಸ್ತು, ವಿಷಯ ಹಾಗೂ ವ್ಯಕ್ತಿಗಳನ್ನು ನಿರಾಕರಿಸುವ ದೂರವಿಡುವ ಒಂದು ಪ್ರಕ್ರಿಯೆ.  ಹಾಗಾದರೆ ಬದುಕಿನಲ್ಲಿ ನಿಧಾನ ವಿಷವಾಗಿ ಪರಿಣಮಿಸುವ ವಿಷಯಗಳು ಯಾವುವು ಎಂದರೆ* ಅತಿಯಾದ ಒತ್ತಡ *ಅತಿಯಾದ ಆಹಾರ ಸೇವನೆ *ಒಬ್ಬಂಟಿತನ *ಎಲ್ಲದಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುವುದು /   ಆತುರತೆಯನ್ನು ತೋರುವುದು *ಅರ್ಥ ರಹಿತ ಬದುಕನ್ನು ನಡೆಸುವುದು ಹಾಗೂ ಅಂತಿಮವಾಗಿ ಇನ್ನೊಬ್ಬರೊಂದಿಗೆ ನಮ್ಮ ಬದುಕನ್ನು ಹೋಲಿಸಿಕೊಂಡು ವ್ಯಕ್ತಪಡುವುದು ಸ್ನೇಹಿತರೇ…ಜಪಾನೀಯರು ದೀರ್ಘಾಯುಷಿಗಳಾಗಲು ಕಾರಣ ಅವರು ಹೆಚ್ಚೇನು ಮಾಡಿಲ್ಲ ಬದಲಾಗಿ ಜಾಣತನದಿಂದ ತಮ್ಮ ಬದುಕನ್ನು ನಡೆಸುವ ಮೂಲಕ ಅನಾವಶ್ಯಕ ವಿಷಯಗಳನ್ನು ದೂರವಿಟ್ಟಿದ್ದಾರೆ.ಬಹಳಷ್ಟು ಬಾರಿ ದೀರ್ಘಾಯುಷ್ಯದ ಗುಟ್ಟು ಯಾವುದೇ ಔಷಧಿ ಚಿಕಿತ್ಸೆಗಳಲ್ಲಿ ಇಲ್ಲ… ಬೇರೆಯವರು ನಮ್ಮ ಕುರಿತು ಗಮನ ಹರಿಸದೇ ಇದ್ದಾಗಲೂ ಕೂಡ ನಾವು ಹೇಗೆ ನಮ್ಮ ಬದುಕನ್ನು ನಡೆಸುತ್ತೇವೆ ಎಂಬುದು ನಮ್ಮ ದೀರ್ಘಾಯುಷ್ಯದ ಗುಟ್ಟಾಗಿರಬೇಕು. ವೀಣಾ ಹೇಮಂತ್ ಗೌಡ ಪಾಟೀಲ್

“ಜಪಾನೀಯರ ದೀರ್ಘಾಯುಷ್ಯದ ಗುಟ್ಟು” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ

“ಮೊಬೈಲ್ ನಿಂದ ಆಗುತ್ತಿರುವ ಅನಾಹುತ” ವನಜ ಮಹಾಲಿಂಗಯ್ಯ ಮಾದಾಪುರ.                     

ಮಾಧ್ಯಮ ಸಂಗಾತಿ ವನಜ ಮಹಾಲಿಂಗಯ್ಯ .                      “ಮೊಬೈಲ್ ನಿಂದ ಆಗುತ್ತಿರುವ ಅನಾಹುತ” ಈಗ ಏಳೆಂಟು ವರ್ಷಗಳ ಹಿಂದೆ ಹೋಗಿ ನೋಡಿ, ಮೊಬೈಲ್ ಗಳನ್ನಿಡಿದು ರಸ್ತೆಗಳಲ್ಲಿ ಹುಚ್ಚರಂತೆ ಒಬ್ಬೊರೇ ಮಾತನಾಡುತ್ತಾ, ಕಿವುಡರು ಹಾಕಿಕೊಳ್ಳುವ ಮಿಷನ್ಗಳಂತೆ  ಇಯರ್ ಪೋನ್, ಬ್ಲೂಟೂತ್ ಹಾಕಿಕೊಂಡು ಓಡಾಡುವವರನ್ನು ನೋಡಿ ಏನಪ್ಪ ಇದು  ಅನ್ನೋ ತರ ಆಗಿತ್ತು. ಇತ್ತೀಚೆಗಂತೂ ಮೊಬೈಲ್ ನ ಹಾವಳಿ  ಬೇರೆ ತರ ಆಗಿದೆ.watsapp , F b, insta ದಲ್ಲಿ ಪರಿಚಯವಾದವರ ಜೊತೆಯಲ್ಲಿ ಚಾಟಿಂಗ್ ಮಾಡ್ತಾ ಮಾಡ್ತಾ ಮನೆಯ ಪ್ರತಿಯೊಂದು ವಿಷಯಗಳನ್ನು ವಿವರವಾಗಿ ಹಂಚಿಕೊಳ್ಳುವ ಪ್ರವೃತ್ತಿಯನ್ನು ಮಕ್ಕಳು ಹೆಚ್ಚಾಗಿಯೇ ಬೆಳಸಿಕೊಳ್ಳುತ್ತಿದ್ದಾರೆ.ಇದನ್ನೇ ಬಳಸಿಕೊಂಡು  ಹುಡುಗಿಯರ  ಜೊತೆ ಸಲುಗೆಯಿಂದ ಮಾತನಾಡುತ್ತಾ ಅವರನ್ನು ಸಂತೈಸುತ್ತ  ನಾಟಕವಾಡುವ ಮಂದಿ ಜಾಸ್ತಿಯಾಗುತ್ತಿದ್ದಾರೆ.ಆದರೆ ಮಕ್ಕಳು ತಂದೆ ತಾಯಂದಿರ ಪ್ರೀತಿ ಅವರ ಜವಾಬ್ದಾರಿಗೆ ಬೆಲೆ ಕೊಡದೇ ಮೂರು ದಿನದ ಪರಿಚಯಸ್ಥರಿಗೆ ತಮ್ಮೆಲ್ಲಾ ಗುಟ್ಟನ್ನು ಬಿಟ್ಟುಕೊಟ್ಟು ಮೂರ್ಖರಾಗುತ್ತಿದ್ದಾರೆ. ಎಷ್ಟೇ ಆಗಲಿ ನನ್ನ ಅಪ್ಪ ಅಮ್ಮ ಹೆತ್ತು ಹೊತ್ತು ಸಾಕಿ ನಮ್ಮನ್ನು ಬೆಳೆಸಲು ಎಷ್ಟು ಕಷ್ಟ ಕಾಳಜಿ ವಹಿಸಿದ್ದಾರೆ ಎನ್ನುವ  ಅರಿವಿಲ್ಲದೆ ಮನೆಯ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವುದು ಎಷ್ಟು ಸರಿ? ಮೊನ್ನೆ ಇದೇ ತರಹದ ಒಂದು ದೂರು ನನಗೆ ಬಂದಿತ್ತು.ಅಪ್ಪ ಅಮ್ಮನಿಗೆ ಮಗಳಿಂದ ತುಂಬಾ ಕಿರುಕುಳ, ಮಾತೇ ಕೇಳುವುದಿಲ್ಲ, ಪಿ ಜಿ ಗೆ ಸೇರಿಸಿ   ಎಂದು ಒತ್ತಾಯ ಮಾಡುತಿದ್ದಾಳೆಂದು. ನಾನು ಹೋದೆ ಅಲ್ಲಿ ಅವಳ ತಂದೆ ತಾಯಿ ಅವಳ ಬಗ್ಗೆ ಏನು ಹೇಳಲು ಹುಡುಗಿ ಬಿಡುತ್ತಿಲ್ಲ.ಒಂದೇ ಹಠ ನನ್ನ ಪಿಜಿಗೆ ಕಳಿಸಿ ಮೇಡಂ ನಾನು ಮನೆಯಲ್ಲಿರುವುದಿಲ್ಲ. ನನಗೆ ತುಂಬಾ ಕಿರುಕುಳ ಕೊಡುತ್ತಾರೆ ನಾನು ಪಿ ಜಿಯಲ್ಲಿರುತ್ತೇನೆ ಎಂದು. ಯಾಕೆ ಇಂತಹ ತೀರ್ಮಾನವೆಂದು ಕೆಳಿದರೆ ನನಗೆ ಮನೆಯಲ್ಲಿರಲು ಇಷ್ಷವಿಲ್ಲ.ಒಂದೇ ಉತ್ತರ. ನಾನಾಗ ನಿನ್ನ ಮೊಬೈಲ್ ಕೊಡು ಎಂದು ಕೇಳಿದೆ. ಇಲ್ಲ ಮೇಡಂ ನನ್ನ ಹತ್ತಿರ ಮೊಬೈಲ್ ಇಲ್ಲಅಂದಳು .ಇದೆ ಎಂದು ಅವರ ತಾಯಿ ಹೇಳಿದರು..ಕೊಡು ಎಂದೆ ತಂಬಾ ಜೋರುಮಾಡಿದ ಮೇಲೆ ಸ್ವಿಚ್ ಆಫ್ ಮಾಡಿ   ಬಚ್ಚಿಟ್ಟ ಮೊಬೈಲ್ ಕೊಟ್ಟಳು. ಲಾಕ್ ಓಪನ್ ಮಾಡೆಂದರೆ ಮಾಡಲೇ ಇಲ್ಲ ಗೊತ್ತಿಲ್ಲ, ಮರೆತೋಗಿದೆ ಅಂದಳು. ಸಿಟ್ಟು ಬಂದು ಎರಡು ಬಿಟ್ಟೆ.ಆಗ ಆನ್ ಮಾಡಿದಳು.ನಾನು ತೆಗೆದು ನೋಡ್ತಿನಿ ಮನೆಯಲ್ಲಿ ನಡೆಯೋದನ್ನೆಲ್ಲ ಒಬ್ಬ ಹುಡುಗನಿಗೆ ಮೆಸೇಜ್ ಮಾಡಿದಾಳೆ. ಅವನ್ಯಾರೆಂದು ಕೇಳಿದೆ , f b ಸ್ಹೇಹಿತ  ತುಂಬಾ ಒಳ್ಳೆಯವನು ಅಂದಳು. ಸರಿ ಅಂದು  ಅವನಿಗೆ ಕಾಲ್ ಮಾಡಿದೆ.ಯಾರೆಂದು ವಿಚಾರಿಸಿದೆ,  ಅವನು ಬೇಂಗಳೂರಿನಲ್ಲಿ ಕೋರಿಯರ್ ಬಾಯ್. ಅಂತೆ ,  ಏನಪ್ಪ ನೀನು ನಮ್ಮ ಹುಡುಗಿಗೆ  ಇಷ್ಷವಾಗಿದಿಯಂತೆ ಇವಳಿಗೆ ಮದುವೆ ಮಾಡ್ಕೋತಿಯಾ? ಅಂತ ಕೇಳಿದೆ. ಸ್ಪೀಕರ್ ಅನ್ ಮಾಡಿದ್ದೆ  ನಾನ್ಯಾಕರಿ ಅವಳನ್ನ ಮದುವೆಯಾಗಲಿ ಟೈಂಪಾಸಿಗೆ ಅವಳ ಹತ್ತಿರ ಮಾತಾಡ್ತಿದ್ದೆ , ನನಗೆ ಲವ್ವರ್ ಇದಾಳೆ ಅಂದ. ಹುಡುಗಿ ಶಾಕ್!  ಅವಳು ಪಿ ಜಿ ಗೆ ಹೊರಟಿದ್ದು ಅವನ ಜೊತೆ ಚಾಟಿಂಗ್ ಮಾಡಲಿಕ್ಕೆ.ಅವನು ಹೇಳಿದ್ದು ಕೇಳಿದ ನಂತರ ನಾನು ಎಲ್ಲಿಗೂ ಹೊಗಲ್ಲ. ಮನೆಯಲ್ಲಿಯೆ ಇರುತ್ತೇನೆ ಅಂದಳು. ಅಂದರೆ ಅರ್ಥ ಮಾಡಿಕೊಳ್ಳಿ ಮೊಬೈಲ್ನಿಂದ  ತಾಯಿ ತಂದೆಯನ್ನು ದೂರಮಾಡಿಕೊಂಡು ಹೋಗುವ ಕೆಟ್ಟ ನಿರ್ಧಾರಕ್ಕೆ ಬರುವ ಈ ಮಕ್ಕಳು  ಎಂತಹ ವಿದ್ಯಾವಂತರು?  ಪೋನಿಂದ ಪರಿಚಯವಾದ ತಕ್ಷಣ ಮನೆಯ ವಿಷಯವನ್ನೆಲ್ಲ  ಹೇಳಿಕೊಳ್ಳುವುದು ಎಷ್ಟು ಸಮಂಜಸ?  ಬೇಡ ಮಕ್ಕಳೇ ಬಂಗಾರದಂತಹ ಬದುಕನ್ನು ಹಾಳು ಮಾಡಿಕೊಳ್ಳಬೇಡಿ. ಹೆತ್ತವರನ್ನು ನೋಯಿಸಬೇಡಿ. ಜೀವ ಜೀವನ ಹೋದರೆ ಮತ್ತೆ ಸಿಗುವುದಿಲ್ಲ. ತಂದೆ ತಾಯಿಯ ಮರ್ಯಾದೆಯನ್ನು ಕಳೆದು  ಯಾರನ್ನೋ ನಂಬಿ ಹಾಳಾಗಬೇಡಿ.ಮೊಬೈಲನ್ನು ಒಳ್ಳೆಯದಕ್ಕೆ ಉಪಯೋಗಿಸಿ ಎಂದಷ್ಟೆ ನನ್ನ ಕಾಳಜಿ ವನಜ ಮಹಾಲಿಂಗಯ್ಯ                      

“ಮೊಬೈಲ್ ನಿಂದ ಆಗುತ್ತಿರುವ ಅನಾಹುತ” ವನಜ ಮಹಾಲಿಂಗಯ್ಯ ಮಾದಾಪುರ.                      Read Post »

ಇತರೆ, ಲಹರಿ

“ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..”ಪ್ರೇಮಾ ಟಿ ಎಂ ಆರ್‌ ಅವರ ಲಹರಿ

ಲಹರಿ ಸಂಗಾತಿ ಪ್ರೇಮಾ ಟಿ ಎಂ ಆರ್‌ ಅವರ ಲಹರಿ “ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..” ಒಂದು ಕಪ್ ಕೊಫಿ ಹೊಯ್ಕೊಂಡು ಬಿಡೋಣ ಅನ್ನುವ ಮನಸಿನ ಗಿಂಜಾಟಕ್ಕೆ  ಕಭಿಕಭಿ ರಾಜಿಯಾಗುವದು. ಕಿಚನ್ನಿನ ಪುಟ್ಟ ಗ್ಲಾಸ್ ಶೋಕೇಸಿನ ಬಾಗಿಲು ತೆರೆದರೆ ಮಣ್ಣಿನ ಬಣ್ಣದ ದೊಡ್ಡ  ಕಾಫಿ ಮಗ್ ಕೈಗೆ ತಗಲಿತು.‌ ಹಾಗೇ ಎತ್ತಿಕೊಂಡು ಮೈ ಸವರಿದೆ. ಕ್ಷಣ ಎಲ್ಲೋ ಜಾರಿತು ಮನ.. ಈಗ ಹೇಗಿರಬಹುದು…? ಯಾವುದೋ ನೆನಪಿಗೆ ಮನ ಬಿರಿಯಿತು.. ಆ ಕೊಫಿಮಗ್ ಬರೀ ಆಗಾಗ ಸವರಿ ಒಳಗಿಡೋಕೆ ಮಾತ್ರ… ಅದ್ರಲ್ಲಿ ನಾನ್ಯಾವತ್ತೂ ಕುಡಿದಿಲ್ಲ, ಕುಡ್ಯೋದಿಲ್ಲ. ಅಂಥದ್ದೊಂದು ಎದೆ ಕರಗುವ ನೆನಪು ಥಳಕುಗೊಂಡಿದೆ ಅದರಲ್ಲಿ.. ಕೈಲಿದ್ದ ಕೊಫಿಮಗ್ ಒಳಕ್ಕೆ ನೂಕಿ, ಬೇರೊಂದನ್ನು ಎತ್ತಿಕೊಂಡು, ಕುದಿದಹಾಲು ಕಾಫಿಪುಡಿ ಸಕ್ಕರೆ ಸುರಿದುಕೊಂಡು  ಕಲಕುತ್ತ ಮತ್ತೆ ಅಂಗಳಕ್ಕೆ  ಬಂದೆ. ಎಲ್ಲಿದ್ದವೋ ಪುಟ್ಟಪುಟ್ಟ ಎರಡು ಬಿಳಿ ಚಿಟ್ಟೆ ಮರಿಗಳು ಆಗಷ್ಟೇ ಅರಳುವ ಕಾಯಕದಲ್ಲಿರುವ ಗೂಡುಮೊಗ್ಗುಗಳ ಬಳಿಯಲ್ಲಿ ಸುಳಿದಾಡುತ್ತಿದ್ದವು. ಈಗ ಮನಸ ಹಿಡಿದಿಡೋಕೆ ಸಾಧ್ಯವಾಗಲಿಲ್ಲ.. ಎರಡೂವರೆ ದಶಕಗಳ ಹಿಂದಕ್ಕೆ ಜಿಗಿದು ಗಡಕ್ಕನೆ ಬ್ರೇಕ್ ಒತ್ತಿಕೊಂಡು ನಿಂತಿತು ಮನಸೆಂಬ ಮಂಗ್ಯ..        ಇದೇ ಚಳಿಗಾಲ ಡಿಸೆಂಬರ್ ತಿಂಗಳ ಕೊನೆಯ ದಿನಗಳಿರಬಹುದು, ಕರಾವಳಿ ಉತ್ಸವ ಮುಗಿದಿತ್ತು. ಎಲ್ಲೆಲ್ಲಿಂದಲೋ  ಬಂದ ಬಯಲ ವ್ಯಾಪಾರೀ ಅಲೆಮಾರಿಗಳು ಕಡಲದಂಡೆಯ ಮೇಲೆಯೇ ಬೀಡು ಬಿಟ್ಟಿದ್ದರು. ಬೆಳಗಿನ ಹೊತ್ತು ಇಂದಿನಂತೆಯೇ ಹೊರಗಿನ ಮೆಟ್ಟಿಲಮೇಲೆ ಕೂತು ಎಳೆ ಬಿಸಿಲಿಗೆ ಮೈಯೊಡ್ಡಿದ್ದೆ.. ಕಪ್ಪು ಬಸೀರಿ.. ಕಪ್ಪುಬಸಿ.. ಕೂಗುತ್ತ ಬಂದ ಹೆಣ್ಣೊಂದು ಗೇಟಲ್ಲಿ ನಿಂತಿತ್ತು. ಪಕ್ಕದಲ್ಲೊಂದು  ಪುಟ್ಟಮ್ಮ..‌ ಬೇಡ ಹೋಗವ್ವ… ಅಂದೆ “ಯವ್ವಾ ಸೆನ್ನಾಗೈತೆ ಒಂದ್ಕಿತಾ ನೋಡ್ರವ್ವ” ಪಿರಿಪಿರಿಗುಟ್ಟಿದಳು… ಸರಿ ಬಾ.. ಅವಳ ಕಪ್ಪುಬಸಿಗಿಂತ ಪಕ್ಕದಲ್ಲಿ ನಿಂತ ಪಾದರಸದಂತೆ ನಿಂತಲ್ಲಿ ನಿಲ್ಲದ ಕಪ್ಪು ಹುಡುಗಿ ನನ್ನ ಸೆಳೆದಿದ್ದಳು.‌ ಬುಟ್ಟಿ ಇಳಿಸಿದಳು. ಪೂರಾ ಗುಂಜಾಡಿದೆ.. “ಬ್ಯಾಡವ್ವೋ, ಒಂಚೂರು ಚೆನ್ನಾಗಿಲ್ಲ ಬಿಡು, ಸುಮ್ನೆ ನಿನ್ನ ಟೇಮು ಹಾಳು, ನಂಗೂ ಹೊತ್ತಾತು, ತಿಂಡಿಯಾಗಿಲ್ಲ ಇನ್ನೂ..” ಅಂದೆ.. “ಅವ್ವಾ, ಒಂದಾರ ತಗಳವ್ವ, ಇನ್ನ ಬೋಣಿ ಆಗಿಲ್ಲ, ಮೊದಲ್ಕ ನಿನ್ಮನಿ ಹೊಕ್ಕೀನೀ” ಅಂದ್ಲು.. “ಇಲ್ಲವ್ವ, ಪಸಂದಾಗಿಲ್ಲ, ವಸಿ ನಿಲ್ಲು” ಎಂದು ಒಳಹೋದೆ. ಇಡ್ಲಿ ಪಾತ್ರೆ ಘಮ್ಮನೆ ಸುಂಯ್ಗುಡುತ್ತಿತ್ತು. ಎರಡು ಬಿಸಿಬಿಸಿ ಹಬೆಯಾಡುವ ಇಡ್ಲಿ ತಟ್ಟೆಗೆ ಹಾಕಿಕೊಂಡು ಮೇಲೊಂದಷ್ಟು ಚಟ್ನಿ ಹಾಕ್ಕೊಂಡು, ಒಂದ್ಹಿಡಿ ಒಣದ್ರಾಕ್ಷಿ ಇಟ್ಕೊಂಡು ಬಂದು ಬೊಗಸೆಗೆ ಹಾಕಿ, “ದ್ರಾಕ್ಷಿ ಮಗೀಗೆ ತಿನ್ಸು, ಇಡ್ಲಿ ನೀನು ತಿನ್ನು ಅಂದೆ..‌ ಎಳೆಕೂಸನ್ನ ನೋಡ್ತಾ ಅಲ್ಲೇ ತುಸು ದೂರ ಕೂತೆ. ಗೋಲಮುಖದಲ್ಲಿ ಕಡುನೀಲಿ ಮಿಂಚುಗಣ್ಣು, ಚೂಪು ಮೂಗು, ಕಪ್ಪುಕಂಚಿನ ಬಣ್ಣ, ಸರ್ರನೆ ಜಾರುವ ನುಣ್ಪುಗೂದಲು.. ಅವಳಿಗೆ ನನ್ನಲ್ಲಿ ಆಸಕ್ತಿಯಿಲ್ಲ. ಬೊಗಸೆಗೆ ಬಿದ್ದ ಒಣ ದ್ರಾಕ್ಷಿಯನ್ನು ಕೊಳಕು ಫ್ರಾಕಿನ ಬದಿಯ ಕಿಸೆಗೆ ತುಂಬುವ ಪ್ರಯತ್ನ ಮಾಡುತ್ತಿದ್ದಳು.. ದ್ರಾಕ್ಷಿ ಬದ್ದೀತೆಂಬ ಕಾಳಜಿಗೆ ಬೊಗಸೆ ಮುಚ್ಚಿಟ್ಟುಕೊಂಡೇ ಕಿಸೆಯೆಡೆಗೆ ಬಾಗುವ ಸರ್ಕಸ್ ನೋಡಿ ಕಳ್ಳು ಚುಳ್ಳೆಂತು. ಆಗಷ್ಟೇ ಸ್ನಾನಮಾಡಿ ಬಂದಿದ್ದೆ. ಪೂಜೆ ಮುಗಿದಿರಲಿಲ್ಲ. ಅವಳನ್ನು ಮುಟ್ಟಿದ್ರೆ ಮತ್ತೆ ಸ್ನಾನ ಮಾಡ್ಬೇಕು… ಅಷ್ಟು ಕೊಳಕಾಗಿದ್ದಳು.  ಮಾರುದೂರ ನಿಂತವಳು ಬುಗ್ಗನೆ ವಾಸನೆ ಬಡಿಯುತ್ತಿದ್ದಳು.. ಅವಳೊಳಗೆ ತುಂಟ ಕೃಷ್ಣ ಕಾಣುತ್ತಿದ್ದ ನನಗೆ.  ಕೈತೊಳ್ಕೊಂಡ್ರಾಯ್ತು, ಬಾಗಿ ಅವಳ ಅಂಗಿ ಹಿಡಿದು ಬಳಿಗೆಳೆದುಕೊಂಡು ಒಣದ್ರಾಕ್ಷಿ ಕಾಳುಗಳನ್ನು ಕಿಸೆಗೆ ತುಂಬಿಸಿದೆ.  ಇಷ್ಟಗಲ ಕಣ್ಣುಗಳು ಇನ್ನಷ್ಟು ಅರಳಿದವು. ನನ್ನ ಹಿಡಿತದಿಂದ ನುಣುಚಿಕೊಂಡು ಅಷ್ಟುದೂರ ನಿಂತು ಉಬ್ಬಿದ ಕಿಸೆಯಮೇಲೆ‌ ಕೈಯಾಡಿಸಿಕೊಂಡವಳು ಕಿಸಕ್ಕನೆ  ನಕ್ಕಳು. ಎರಡೂ ಕೆನ್ನೆಯ ನಡುವೆ ಸುಳಿಗುಳಿ ಅರಳಿಕೊಂಡಿತು. ನಾನದರಲ್ಲಿ  ಕರಗುವ ಮೊದಲೇ ಹೂಗಳ ಮೇಲೆ ಹರಿದಾಡುವ ಬಿಳಿಚಿಟ್ಟೆಯ ಮರಿಗಳ ಹಿಂದಿಂದೆ ಓಡಿ ಹಿಡಿಯಲು ಕೈಚಾಚಿದಳು. ಹಾರುವ  ಚಿಟ್ಟೆ ಮರಿಗಳ ಜೊತೆಗೆ ತಾನೂ ಪಾದರಸದಂತೆ ಹರಿದಾಡತೊಡಗಿದಳು. ಅವಳ ತೊಡೆಮುಚ್ಚದ ಪುಟ್ಟ ಸ್ಕರ್ಟ್ ಅವಳೊಂದಿಗೆ ಚಿಮ್ಮುತ್ತಿತ್ತು.. ಮತ್ತೆಮತ್ತೆ ಮುಖಕ್ಕೆ ಮುತ್ತುವ ತುಂಡುಗೂದಲುಗಳನ್ನು ಗತ್ತಿನಿಂದ ಹಿಂದಕ್ಕೆ ನೂಕುತ್ತಿದ್ದಳು. ಯಾಕೋ ಅಕ್ಕರೆಯುಕ್ಕಿತು..  ಮಣ್ಣು ಮೆತ್ತಿಕೊಂಡ ಹಿಮ್ಮಡಿ ತುಂಬು ಪಾದ  ಗಮನ ಸೆಳೆದವು. “ಎಷ್ಟು ದಣಿದವೋ ಪಾದಗಳು. ಒಂದಷ್ಟು ಎಣ್ಣೆಯುಜ್ಜಿ ಬಿಸಿಬಸಿ ನೀರಲ್ಲಿ ಮೈತೊಳೆದರೆ ಪರಿಯಂತೆ ಹೊಳೆದಾಳು ಪುಟ್ಟವ್ವ..” ನನ್ನ ಯೋಚನೆಗೆ ನಗು ಬಂತು. ‘ಯಾರದೋ ಕೂಸು ಆಸೆನೋಡು?’ ತಲೆಮೇಲೊಂದು ಮೊಟಕಿಕೊಂಡೆ..  ಇಡ್ಲಿ ತಿಂದು ಮುಗಿಸಿದ ಹೆಣ್ಣು “ಅವ್ವಾ ನೀರ್ಕೊಡ್ರಿ ವಸಿ ಗಂಗಾಳ ತೊಕ್ಕೊಡ್ತೀನಿ”  ತಟ್ಟೆ ತೊಳ್ಸೋಕೆ ಅವ್ಸರ ಮಾಡಿದ್ಲು. “ಏನೂಬೇಡ, ಕೊಡವ್ವ  ನನ್ಕೈಯ್ಯಲ್ಲಿ, ನಾನೇ ತೊಳ್ಕೊಂತೇನೆ ಅಂದೆ. “ಅಯ್ಯೋ ಬ್ಯಾಡವ್ವ, ನಮ್ಮೆಂಜ್ಲು ನೀ ತೊಳಿತೀಯಾ? ನಮ್ಗೆ ಪಾಪ ಬತ್ತೈತೆ.” ಕೊಸರಿದಳು. “ಸರಿ ನಾನ್ಯಾವಾಗಾದ್ರೂ ಕಾಲ್ತಪ್ಪಿ ನಿನ್ ಜೋಪ್ಡೀತಾವ ಬಂದ್ರೆ, ನೀನೇನಾರ ಒಂದ್ಗುಟ್ಗಿ ನೀರು ಕೊಟ್ಟೀ ಅಂದ್ಕೊ, ತಟ್ಟೆ ತೊಳಿಸ್ತೀಯಾ ನನ್ಕಡೆ!” ಕೇಳಿದೆ. ‘ಯವ್ವಾ ನೀಯಾಕ್ಬಂದಿ ನಮ್ಮ ಗುಡ್ಸಲ್ಕೆ’ ಎಂದು ಕೆನ್ನೆಗೆ ಹೊಡ್ಕೊಳ್ಳುತ್ತಲೇ ಎಂಜಲು ತಟ್ಟೆ ನನ್ಕೈಲಿಟ್ಟು ನಿನ್ನ ಹೊಟ್ಟೆ ತಣ್ಣಗಿರ್ಲಿ ಅವ್ವ.” ಹರಸಿದಳು. “ಏಟ್ ವರ್ಷಾತು ಮಗೀಗೆ? ಚಂದದಾಳ. ಕಾಲಿಗೊಂದು ಚಪ್ಲೀನೂ ಹಾಕಿಲ್ವಲ್ಲ, ಈ ಎಳೆಕೂಸನ್ನ ಯಾಕೆ ಹಿಡ್ಕೊಂಡು ಬರೋಕೋದೆ?” ಅಲ್ಲೇ ಕೂತು ಮಾತಿಗಿಳಿದೆ. “ಮತ್ತೆಲ್ಬಿಡ್ಬೇಕ್ರಿ ಮಗೀನ.?” “ನಿನ್ಗಂಡ ಏನ್ಮಾಡ್ತಾನ.. ಜೋಪ್ಡಿ ಒಳ್ಗ ಕುಡ್ದ ಬಿದ್ದಾನಾ..? ತಲಿಮ್ಯಾಲ ಒಂದ್ಗಡ್ಗಿ ತಣ್ಣೀರ್ ಸುರ್ದು ಎಬ್ಸಿ ಮಗೀನ ಅವನ್ತಾವ ಬಿಟ್ಟ ಬರ್ಬೇಕು ತಾನೇ..” ಕೋಪ ಕಾರಿದೆ… “ನನ್ನ ಕೂಸಲ್ರಿ ಅವ್ವಾ, ಮೊಮ್ಮಗ್ಳೂರೀ.” ನಾನು ಮಿಕಿಮಿಕಿ ಅವ್ಳನ್ನೇ ನೋಡಿದೆ. ಇನ್ನೂ ಮೂವತ್ತೈದರೊಳಗಿನ ಕೆಂಚು ದೇಹದ ಹೆಣ್ಣು, ಆಗ್ಲೇ ಮೊಮ್ಮಗ್ಳಾ..?ಹುಬ್ಬೇರಿಸಿದೆ.. “ಹೂಂನ್ರವ್ವಾ.. ಇದ್ರವ್ವ ಹೆರ್ಗಿ ಕಾಲಕ್ಕೆ ಸತ್ತೋತ್ರಿ..” ಕಣ್ಣೊರಸಿಕೊಂಡಳು. “ಇವ್ಳ ಅಪ್ಪ ಏನ್ಮಾಡ್ತಾನೆ? ಮತ್ತೆ ನಿನ್ಗಂಡ?” “ಯವ್ವ ಅದ್ನೆಲ್ಲ ನೀವು ಕೇಳ್ಬಾರ್ದು, ನಾವು ಹೇಳ್ಬಾರ್ದೂರಿ.. ನಾನೂ ಅಪ್ನ ಮುಖ ಕಂಡಿರ್ಲಿಲ್ರಿ  ನನ್ಮಗ್ಳೂ ಅಪ್ಪ್ನ ಮುಖ ಕಂಡಿಲ್ರೀ… ಇದ್ಕೂ ಅಪ್ಪನ್ನಾಕ ಯಾರಿಲ್ರೀ..” ನಿಸ್ಸಂಕೋಚದ ನುಡಿ. ಒಮ್ಮೆ ನನ್ನ ಮೈ ನಡುಗಿತು. ಅವಳ ಮುಖದಲ್ಲಿನ ಭಾವನೆಗಳನ್ನು ಓದೋಕಾಗ್ಲಿಲ್ಲ ನನಗೆ..ನಿರ್ಭಾವವಾಗಿದ್ದಳು…  ಹೊಕ್ಕುಳಲ್ಲಿ ಹುಟ್ಡಿದ ಚಳಿ ಇಡೀ ಎದೆಯ ಆವರಿಸಿ ಕ್ಚಣ ನಡುಗಿದೆ.. “ನಮ್ಮವ್ವ ಅದಾಳ್ರೀ…‌ ಆಕೀನೂ ಕಪ್ಪ ಬಸೀ ಮಾರಾಕಂತ ಹೊಂಟೋಯ್ತಾಳೆ..‌ ಹಾಂಗಾಗಿ ಕೂಸ್ನ ನನ್ಜೊತೀನ ಕಟ್ಗೊಂಡ್ ಬತ್ತೀನ್ರಿ.” ಅಂದ್ಲು.  ಯಾಕೋ ಅಂಗಾಂಗಗಳೆಲ್ಲ ಮರಗಟ್ಟಿದಂತೆ ಮಿಸುಕಾಡಿದೆ..  “ಯವ್ವಾ ಬತ್ತೀವ್ರಿ, ಬುಟ್ಟಿಗ್ ಒಸಿ ಕೈಹಚ್ರಿ, ಭಾರೈತ್ರಿ” ಅಂದ್ಲು.. ಈಗ ಸಾವರಿಸಿಕೊಂಡೆ..                 “ಅವ್ವಾ, ನಿಮ್ಗೊಂದು ಕೇಳ್ತೇನೆ ಬೈಯ್ಬ್ಯಾಡ” ಅಂದೆ..  ತಡೆದು ನಿಂತಳು.  ಮಗೀನ ನನಗ್ ಕೊಟ್ಬಿಡವ್ವಾ.. ಚಂದಾಗಿ ಸಾಕೊಂತೀನಿ, ನಿನಗ್ ನೆನ್ಪಾದಾಗ ಯಾವಾಗ್ಬೇಕೋ ಅವಾಗ್ಬಂದು ನೋಡ್ಕೊಂಡೋಯ್ತಾ ಇರು,  ಇಕೀಗ ಸಾಲಿ ಕಲ್ಸಿ ದೋಡ್ಡ ನೌಕ್ರೀ ಮಾಡಿಸ್ತೀನಿ, ನನ್ನ ಮಗನ್ಮೇಲೆ ಆಣಿ ಮಾಡ್ತೀನಿ. ನನ್ಮಗಾ ಬ್ಯಾರೆ ಈ ಮಗೀ ಬ್ಯಾರೆ  ಯಾವತ್ತೂ ಮಾಡಂಗಿಲ್ಲವ್ವ, ಕೊಟ್ಬಿಡು” ಅಂದೆ. ಒಂದು ಕ್ಷಣ ಅವಳ ದೃಷ್ಟಿ ಕ್ರೂರವಾಯಿತು, “ಕೂಸ್ಬೇಕಿದ್ರ ಒಂದ್ಹೆತ್ಕೊಳ್ಳಾಕ ಏನ್ಬಂದಿತ್ತ ಬ್ಯಾನಿ, ಬ್ಯಾರೆದವ್ರ ಕೂಸಿಗೆ ಬಾಯ್ಬಿಡ್ತಿ.. ಯವ್ವಾ ಹೆಂತಾಕಿ ನೀನು? ” ದುರುಗುಟ್ಟಿದವಳು ಮತ್ತೆ ಮೆದುವಾದಳು.. ಯವ್ವಾ, ಅದೊಂದ ಕೇಳ್ಬ್ಯಾಡವ್ವ.. ಕೂಸಿನ್ಮ್ಯಾಲ  ನನ್ ಜೀವಾನೇ ಮಡಿಕಂಡೀನಿ, ಮುನ್ಸಕಬ್ಯಾಡವ್ವ” ದೈನ್ಯವಾಗಿ ಹೇಳಿದವಳು, ದೊಗ್ಗಾಲುಕೊಟ್ಟು ಹೆಣಗಿ ಭಾರದ ಬುಟ್ಟಿ ತಲೆಮೇಲೆ ಹೊತ್ತು, “ಲೇ  ಕಾವೇರಿ ಬಾರಿತ್ತಾಗ.. ಹೋಗಾನ” ಗೇಟಿನತ್ತ ನಡೆದಳು.. ಕಾವೇರಿ ಮರಿಜಿಂಕೆಯಂತೆ ಜಿಗಿದು ಅಜ್ಜಿಯ ಬೆನ್ನಟ್ಟಿದಳು.. ಅವಳು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಳು.. ನಾನು ಸರಿಯೆಂದು ದೃಢಪಡಿಸಲು ನನ್ನಲ್ಲಿ ಮಾತುಗಳಿರಲಿಲ್ಲ..  ಹಿಂದ್ಹಿಂದೇ ನಡೆದು ಬಂದಿದ್ದೆ.. ಗೇಟು ದಾಟುವ ಮುನ್ನ ಏನನ್ನಿಸಿತೋ..ಹಿಂತಿರುಗಿದಳು.. ಕಂಪೌಂಡ್ ವಾಲಿನ ಮೇಲೆ ಬುಟ್ಟಿಯೂರಿ ಹೆಗಲ ಚೀಲಕ್ಕೆ ಕೈಹಾಕಿ ಚಂದದ ಮಣ್ಣುಬಣ್ಣದ ದೊಡ್ಡ ದೊಡ್ಡ ಕಾಫಿ ಮಗ್ ಗಳ ಆರರ ಸೆಟ್ ಹೊರತೆಗೆದಳು, “ತಗಳ್ರವ್ವ  ಇದ್ನ.. ಇದ್ ಪಸಂದಾಗೈತಾ ಯೋಳಿ” ಅಂದ್ಲು…. ಯಾಕೋ ನಿರಾಕರಿಸಲು ಮನಸು ಬಾರದೇ ‘ಎಷ್ಟಾಗ್ತೈತೆ?’ ಅಂದೆ. “ಕೊಡವ್ವ, ನಿಂಗ್ ಯೋನ್ ಕೊಡ್ಬಕನ್ಸತೈತಿ ಅದ್ನ ಕೊಡು” ಅಂದ್ಲು… ಐದ್ನೂರು ತಂದು ಕೈಲಿಟ್ಟೆ… ಮುನ್ನೂರು ಸಾಕು ಅಂದ್ಲು.. ಇಟ್ಕಳವ್ವ ಕಾವೇರಿಗೆ ಚಪ್ಲಿ ಕೊಡ್ಸು ಅಂದೆ. “ಬತ್ತೀನವ್ವಾ, ನಿನ್ಮನ್ಸು ನಾ ಬಲ್ಲೆ, ತೆಪ್ಪಾತು ಕಣವ್ವಾ, ಮತ್ಯಾವಾಗ್ಲೋ ಕಾಲ್ತೆಪ್ಪಿ ಈ ಊರಿಗ್ಬಂದ್ರ ಮತ್ತ ಮಗೀನ ತೋರಿಸ್ಕೊಂಡು ಹೋಕ್ಕೀನಿ.. ಆದ್ರ ಇದೇ ಕೊನಿ, ಮಗೀನ ಬೇಡ್ಬ್ಯಾಡ” ಕಪ್ಪುಬಸೀರಿ ಒದರುತ್ತ ಸಾಗಿದಳು.. ತಿರುಗಿ ತಿರುಗಿ ನನ್ನೇ ನೋಡುತ್ತ ಅಜ್ಜಿಯ ಕೈಹಿಡಿದು ಕುಣಿಕುಣಿದು ಸಾಗಿದ ಕಾವೇರಿಯನ್ನು ದೇವಸ್ಥಾನದ ಮುರ್ಕಿ ತಿರುಗುವತನಕ ನೋಡುತ್ತ ನಿಂತೆ… ಈ ಪುಟ್ಟ ಕಾವೇರಿಗೊಂದು ಅಪ್ಪನಿಲ್ಲದ ಕೃಷ್ಣೆ ಹುಟ್ಟದ ಹಾಗೇ ಇವಳನ್ನು ನಿನ್ನ ಕಣ್ಣಲ್ಲಿಟ್ಕೊಂಡು ತಲೆ ಕಾಯುವದು ತಂದೆ… ಎದೆ ರೋಧಿಸುತ್ತಿತ್ತು…. ಮತ್ತೆ ಅವಳು ಈ ಬೀದಿಗೆ ಬಂದಿಲ್ಲ. ನಾನವಳ ಮರೆತಿಲ್ಲ…. ಒಂದು ನೋವಿನ ನಗೆಯಾಗಿ ಸದಾ ನನ್ನೊಳಗೆ ಇದ್ದಾಳೆ ಕಾವೇರಿ…. ನಿಮ್ಮ ಪ್ರೇಮಾ… ಪ್ರೇಮಾ ಟಿ ಎಂ ಆರ್

“ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..”ಪ್ರೇಮಾ ಟಿ ಎಂ ಆರ್‌ ಅವರ ಲಹರಿ Read Post »

ಇತರೆ, ಗಜಲ್ ದುನಿಯಾ

“ಗಜಲ್ ಮನಸುಗಳಿಗಾಗಿ, ಗಜಲ್ ಕುರಿತು ಒಂದಿಷ್ಟು ವಿಚಾರಗಳು.” ಡಾ. ಮಲ್ಲಿನಾಥ ಎಸ್. ತಳವಾರ

ಗಜಲ್‌ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ಗಜಲ್ ಮನಸುಗಳಿಗಾಗಿ, ಗಜಲ್ ಕುರಿತು ಒಂದಿಷ್ಟು ವಿಚಾರಗಳು.” ಎಲ್ಲರಿಗೂ ನಮಸ್ಕಾರಗಳು…ಗಜಲ್.. ಇದು ಕೇವಲ ಕಾವ್ಯ ಪ್ರಕಾರವಲ್ಲ, ಇದೊಂದು ಜೀವನ ಶೈಲಿ, ತಹಜೀಬ್ ಹಾಗೂ ಸಂವೇದನೆಗಳ ಒಂದು ಭಾಗ. ಹೃದಯದ ಆಳದಿಂದ ಹೊರಬರುವ ನಿಜವಾದ ಧ್ವನಿ. ಇದು ಭಾವನೆಗಳು, ಪ್ರೀತಿ, ನೋವು ಮತ್ತು ಭರವಸೆಯ ಸುಂದರ ಅಭಿವ್ಯಕ್ತಿ. ಇದೊಂದು ಎಕ್ಸರೇ ಇದ್ದಂತೆ, ನಮ್ಮೊಳಗಿನ ಗಾಯ ತೋರಿಸಿ ಅರಿತುಕೊಳ್ಳಲು ಸಹಕರಿಸುತ್ತದೆ. ಗಜಲ್… ಕನ್ನಡದಲ್ಲಿ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಚಲಿತದಲ್ಲಿರುವ ಹಾಗೂ ಹೆಚ್ಚೆಚ್ಚು ಓದುಗರನ್ನೂ- ಬರಹಗಾರರನ್ನು ಸೆಳೆಯುತ್ತಿರುವ ಕಾವ್ಯ ಪ್ರಕಾರ. ಕನ್ನಡದ ಭಾಗಶಃ ಸಾಹಿತ್ಯಾಸಕ್ತರು ಗಜಲ್ ಗಳನ್ನು ಬರೆಯಲು, ಓದಲು ಹಾಗೂ ಗಜಲ್ ಕುರಿತು ತಿಳಿದುಕೊಳ್ಳಲು ಆಸಕ್ತರಾಗಿದ್ದಾರೆ. ಇಂಥ ಗಜಲ್ ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿ ಅರ್ಧ ಶತಮಾನವೇ ಉರುಳಿದೆ. ಇಂದು ಗಜಲ್ ಕಾವ್ಯ ಪ್ರಕಾರ ಅಸಂಖ್ಯಾತ ಸಹೃದಯಿಗಳಿಂದ ಕನ್ನಡ ಸಾಹಿತ್ಯ ಪರಪಂಚದಲ್ಲಿ ಸಕ್ರೀಯವಾಗಿದೆ. ಈ ಗಜಲ್ ಕಾವ್ಯ ಪ್ರಕಾರ ಹತ್ತು ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಅವುಗಳನ್ನು ಆಂತರಿಕ ಹಾಗೂ ಬಾಹ್ಯ ಲಕ್ಷಣಗಳೆಂದು ವಿಂಗಡಿಸಲಾಗಿದೆ. ಇಂದು ನಾವು ಈ ಲಕ್ಷಣಗಳನ್ನು ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ, ಅಳವಡಿಸಿಕೊಳ್ಳುತಿದ್ದೇವೆ ಹಾಗೂ ಆ ದಿಸೆಯಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಮತ್ಲಾ, ಮಕ್ತಾ, ರದೀಫ್ ಹಾಗೂ ಕಾಫಿಯಾ… ಇವು ಗಜಲ್ ನ ನಾಲ್ಕು ಅಂಗಗಳು. ಇವುಗಳಲ್ಲಿ ‘ರದೀಫ್’ ಐಚ್ಛಿಕವಾಗಿದ್ದು, ಉಳಿದವುಗಳು ಗಜಲ್ ನ ಜೀವಾಳವಾಗಿವೆ. ಇವುಗಳ ಹೊರತು ಗಜಲ್ ರಚನೆಯಾಗದು. ಯಾರಾದರೂ ಬರೆದಿದ್ದಾರೆ, ಬರೆಯುತ್ತಾರೆ ಎಂದರೆ ಅದು ಗಜಲ್ ಎಂದೆನಿಸಿಕೊಳ್ಳದೆ, ಕಾವ್ಯ ಎಂದೆನಿಸಿಕೊಳ್ಳುವುದು! ಗಜಲ್ ಮೂಲಭೂತವಾಗಿ ಷೇರ್ ಮಾದರಿಯಲ್ಲಿ ಇರುವಂತದ್ದು. ಈ ಷೇರ್ ನ ಪ್ರತಿ ಮಿಸ್ರಾ ಸ್ವತಂತ್ರವಾಗಿದ್ದು, ಒಂದಕ್ಕೊಂದು ಪೂರಕವಾಗಿಯೋ ಅಥವಾ ವಿರುದ್ಧಮುಖವಾಗಿಯೊ ಇರಬೇಕು. ಮಿಸ್ರಾ-ಎ-ಊಲಾದ ಕೊನೆಯಲ್ಲಿಯ ಕೌತುಕತೆ ಮಸ್ರಾ-ಎ-ಸಾನಿಯ ಆರಂಭದಲ್ಲಿ ರೂಪ ಪಡೆಯಬೇಕು. ಅವು ಒಂದರೊಳಗೊಂದು ತಳುಕು ಹಾಕಿಕೊಂಡಿರಬಾರದು. ಇದುವೇ ಕಾವ್ಯವನ್ನು ‘ಗಜಲ್’ ಆಗಿಸುವತ್ತ ಮುನ್ನಡೆಯುತ್ತದೆ. ಇಂಥ ಗಜಲ್ ಗೆ ‘ಮತ್ಲಾ’ ತುಂಬಾ ಅವಶ್ಯಕ. ಇದು ಮನೆಗೆ ಹೊಸ್ತಿಲು ಇರುವಂತೆ! ಇನ್ನೂ ‘ಮತ್ಲಾ’ ಅಂದರೆ ಆರಂಭ, ಉದಯ ಎಂದರ್ಥ. ಇಲ್ಲಿ ಏನು ಹೇಳಬೇಕಾಗಿದೆ ಎನ್ನುವುದರ ನಿರ್ಣಯ, ಗಜಲ್ ಕಾರರ ಉದ್ದೇಶವಿರುತ್ತದೆ. ಗಜಲ್ ಒಳಗೊಂಡಿರಬಹುದಾದ, ಒಳಗೊಳ್ಳಬಹುದಾದ ವಿಷಯ, ಮೀಟರ್, ವಜನ್, ಬೆಹರ್ ಹಾಗೂ ಕವಾಫಿ (ಕಾಫಿಯಾಗಳು) ಆಯ್ಕೆಯನ್ನು ನಿರ್ಧರಿಸುತ್ತದೆ. ‘ಮತ್ಲಾ’ ಏನು ಒಳಗೊಂಡಿರುತ್ತದೆಯೋ ಅದುವೇ ಇಡೀ ಗಜಲ್ ನ ಉದ್ದಕ್ಕೂ ಬರಬೇಕು. ಅದು ಅಲಾಮತ್ ಆದರೂ ಸರಿ, ಮೀಟರ್, ಬೆಹರ್ ಆದರೂ ಸರಿಯೆ! ಅಂತೆಯೇ ಶಾಯರ್/ಶಾಯರಾ ಆದವರು ಮತ್ಲಾವನ್ನು ತುಂಬಾ ಪ್ರಜ್ಞಾಪೂರ್ವಕವಾಗಿ ರೂಪಿಸಿಕೊಂಡು ಹೋಗಬೇಕು. ಇದೊಂದು ರೀತಿಯಲ್ಲಿ ಗಜಲ್ ನ ಉಳಿದ ಅಶ್ಆರ್ ಗೆ ಸ್ಪಷ್ಟಿಕರಣ ಕೊಡುವ ರೀತಿಯಲ್ಲಿ ಇರುತ್ತದೆ, ಇರಬೇಕು! ಇದು ಗಜಲ್ ನ ಸೌಂದರ್ಯಕ್ಕೆ ಬಾಗಿಲು, ಭಾವ ಲೋಕಕ್ಕೆ ಪ್ರವೇಶದ್ವಾರವಿದ್ದಂತೆ. ಇದು ಅಷ್ಟೊಂದು ಸರಳವಲ್ಲ, ಸುಲಭವೂ ಅಲ್ಲ. ಪ್ರತಿಯೊಬ್ಬರೂ ಇದನ್ನು ‘ಸವಾಲು’ ಎಂದು ಸ್ವೀಕರಿಸಿ ಗಜಲ್ ರಚನೆಗೆ ಮುಂದಾಗಬೇಕು. ‘ಮಕ್ತಾ’ ಎಂದರೆ ಅಂತ್ಯ, ಮುಕ್ತಾಯ. ಗಜಲ್ ಗೆ ‘ಮತ್ಲಾ’ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ‘ಮಕ್ತಾ’. ಇದು ಗಜಲ್ ಗೆ ಒಂದು ತಾರ್ಕಿಕ ಹಾಗೂ ಭಾವನಾತ್ಮಕ ಅಂತ್ಯವನ್ನು ನೀಡುತ್ತದೆ. ಅಂದರೆ, ಶಾಯರ್/ಶಾಯರಾ ಅವರ ಇಂಗಿತ, ಆಶಯ ಹಾಗೂ ಉದ್ದೇಶವನ್ನು ಈಡೇರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಂದರೆ, ಅವರ ಅಂತಿಮ ಮಾತು, ಸಂದೇಶ ಹಾಗೂ ವೈಯಕ್ತಿಕ ಧ್ವನಿಗೆ ವೇದಿಕೆಯನ್ನು ಒದಗಿಸುತ್ತದೆ. ಈ ಷೇರ್ ಓದುತಿದ್ದಂತೆಯೇ ಗಜಲ್ ಮುಗಿಯಿತು ಎಂಬ ಭಾವ ಸಹೃದಯ ಓದುಗರಲ್ಲಿ, ಕೇಳುಗರಲ್ಲಿ ಬರುತ್ತದೆ, ಬರಬೇಕು. ಇಂತಹ ‘ಮಕ್ತಾ’ಗೆ ಇನ್ನೊಂದು ಬಹುಮುಖ್ಯವಾದ ಲಕ್ಷಣವಿದೆ. ಅದೆಂದರೆ ‘ತಖಲ್ಲುಸ’. ತಖಲ್ಲುಸ್ ಅಂದರೆ ಶಾಯರ್/ಶಾಯರಾ ಅವರ ಗುರುತು. ಇಲ್ಲಿ ಅವರು ತಮ್ಮ ಹೆಸರು, ಇಲ್ಲವೇ ತಮ್ಮ ಇಷ್ಟದ ಹೆಸರನ್ನು ಬಳಸುತ್ತಾರೆ. ಇದು ಹೆಚ್ಚಾಗಿ ‘ನಾಮವಾಚಕ’ವಾಗಿಯೇ ಬಳಕೆಯಾಗಿದೆ. ಆದಾಗ್ಯೂ ಈ ತಖಲ್ಲುಸ್ ರೂಪಕವಾಗಿ ಬಳಕೆಯಾದರೆ ‘ಮಕ್ತಾ’ಗೆ ಒಂದು ಅನುಪಮ ಕಳೆ ಬರುತ್ತದೆ. ‘ತಖಲ್ಲುಸ್’ ಬಳಕೆ ಐಚ್ಛಿಕವಾಗಿದ್ದರೂ ಅದರ ಉಪಸ್ಥಿತಿಯೇ ‘ಮಕ್ತಾ’ಗೆ ಅನ್ವರ್ಥಕವಾಗಿದೆ. ಒಂದುವೇಳೆ ಬೇಮಕ್ತಾ ಷೇರ್ ಇದ್ದರೆ ಅದನ್ನು ಗಜಲ್ ನ ಕೊನೆಯ ಷೇರ್ ಎಂದು ಗುರುತಿಸುವುದು ಕಷ್ಟ! ಇನ್ನೂ ಕಾಫಿಯಾ… ಗಜಲ್ ನ ಉಸಿರು, ಕವಾಫಿ (ಕಾಫಿಯಾಗಳು) ಹೊರತುಪಡಿಸಿ ಗಜಲ್ ಅನ್ನು ಊಹಿಸಿಕೊಳ್ಳಲೂ ಆಗದು! ಕಾಫಿಯ ಆಯ್ಕೆ ಶಾಯರ್/ಶಾಯರಾ ಅವರ ಸೃಜನಶೀಲತೆ, ಗಜಲ್ ಮೇಲಿನ ಪ್ರೀತಿ-ಹುಚ್ಚನ್ನು ಅವಲಂಬಿಸುತ್ತದೆ. ಗಜಲ್ ಕಲಿಕೆಯ ಆರಂಭಿಕ ಹಂತದಲ್ಲಿ ‘ಕಾಫಿಯಾ’ವನ್ನು ಸಾಮಾನ್ಯವಾಗಿ ‘ಪ್ರಾಸ’ ಎಂದು ಗುರುತಿಸಲಾಗುತ್ತದೆ. ಆದರೆ ‘ಪ್ರಾಸ’ ಎಂಬ ಸಾಮಾನ್ಯೀಕರಣ ತುಂಬಾ ಅಪಾಯಕಾರಿ! ಏಕೆಂದರೆ ಕಾಫಿಯಾ ಎಂದರೆ ಕೇವಲ ಪ್ರಾಸವಲ್ಲ, ರವಿ/ರವೀಶ್ ಹೊಂದಿದ್ದರೆ ಸಾಲದು. ಸಾಧ್ಯವಾದಷ್ಟು ಸಮತೂಕ ಹಾಗೂ ಸಮ ಅಕ್ಷರಗಳಿಂದ ಕೂಡಿದ್ದು ರೌಫ್, ಕೈದ್ ಒಳಗೊಂಡಿರಬೇಕು. ಏಕ ಅಲಾಮತ್ -ಬಹು ಅಲಾಮತ್ ರೂಢಿಸಿಕೊಂಡಿರಬೇಕು. ಇದು ಅಷ್ಟೊಂದು ಸುಲಭವಲ್ಲ, ಇದಕ್ಕೆ ಬದ್ಧತೆ ಮತ್ತು ಅಭ್ಯಾಸ ಬೇಕು. ಇದು ಸೃಜನಶೀಲತೆಗೆ ಅಡ್ಡಿಪಡಿಸುತ್ತದೆ ಎಂದು ಭಾವಿಸುವುದು ತರವಲ್ಲ, ಬದಲಿಗೆ ಇದುವೇ ಸೃಜನಶೀಲತೆ ಎಂದು ಬಯಸಬೇಕು! ಪರಿಪೂರ್ಣ ಕವಾಫಿಯ ಆಯ್ಕೆಯೇ ಗಜಲ್ ಅನ್ನು ಗೆಲ್ಲಿಸುತ್ತದೆ. ಅಂತೆಯೇ ಕವಾಫಿ ಗಜಲ್ ನ ಧ್ವನಿಯನ್ನು ಬಲಪಡಿಸುವಂತಿರಬೇಕು, ಗಜಲ್ ನ ಭಾವಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಆರಿಸಬೇಕು. ಸಂದರ್ಭಕ್ಕೆ ತಕ್ಕಂತೆ ಭಾವಪೂರ್ಣವಾಗಿ, ಅರ್ಥಪೂರ್ಣವಾಗಿ ಇರಬೇಕು. ಇಂತಹ ‘ಕಾಫಿಯಾ’ ಇಲ್ಲದ ಬರಹ ಕಾವ್ಯವಾಗಬಹುದೇ ಯಾವತ್ತೂ ಗಜಲ್ ಆಗದು! ಇದು ಕಹಿಯೆನಿಸಿದರೂ ಸತ್ಯ! ರದೀಫ್.. ಗಜಲ್ ಗೆ ಹಾಡುಗಬ್ಬದ ಪೋಷಾಕು ತೊಡಿಸುವ ವಿಶಿಷ್ಟ ಲಕ್ಷಣವನ್ನು ಹೊಂದಿದೆ. ‘ಗಜಲ್’ ಶಿಷ್ಟ ಸಾಹಿತ್ಯ ಪ್ರಕಾರವಾದರೂ ರದೀಫ್ ಇದಕ್ಕೆ ಜಾನಪದೀಯ ರೂಪವನ್ನು ನೀಡುವಲ್ಲಿ ಶ್ರಮಿಸುತ್ತದೆ. ಗಜಲ್ ಗೆ ವಿಶಿಷ್ಟ ಗೇಯತೆ, ಲಾಲಿತ್ಯ ಮತ್ತು ಭಾವತೀವ್ರತೆಯನ್ನು ನೀಡುತ್ತದೆ. ಇದುವೇ ಜನರ ನಾಲಿಗೆಯ ತುದಿಯಲ್ಲಿ ಜೀವಂತವಾಗಿ ಉಳಿಯುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ರದೀಫ್ ನ ಆಯ್ಕೆಗೆ ಸಮರ್ಪಕ ಯೋಚನೆ ಅವಶ್ಯಕ. ಅನಗತ್ಯ ಪದಗಳ, ಶಬ್ಧಗಳ ಬಳಕೆ ರಸಭಂಗ ಮಾಡುತ್ತದೆ ಎಂಬುದನ್ನು ಮರೆಯಬಾರದು! ಸಾಮಾನ್ಯವಾಗಿ ದಿನನಿತ್ಯ ಬಳಸುವ ಪದಗಳಿಗಿಂತ ವಿಭಿನ್ನವಾಗಿಯೂ, ಗಾಢಭಾವ, ಸುಲಭವಾಗಿ ಉಚ್ಚರಿಸಬಲ್ಲಂತಹ ಪದಗಳ ಆಯ್ಕೆ ಮಾಡಬೇಕು. ರದೀಫ್ ಗಜಲ್ ನ ಕಾಂತಿ, ರಮ್ಯತೆ ಹಾಗೂ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಗೆ ‘ರದೀಫ್’ ಅತ್ಯವಶ್ಯಕ. ಆದಾಗ್ಯೂ ಇದರ ಬಳಕೆ ಐಚ್ಛಿಕವಾಗಿದೆ! ಇನ್ನೂ ಗಜಲ್‌ನ ಭಾಷೆ ಲಾಲಿತ್ಯಪೂರ್ಣ, ಸಂಕೇತಾತ್ಮಕ ಮತ್ತು ಸಂವೇದನಾಶೀಲವಾಗಿರಬೇಕು. ನೇರವಾದ ಹೇಳಿಕೆಗಳ ಬದಲು ಸೂಚನೆ, ಸಂಕೇತ ಮತ್ತು ರೂಪಕಗಳ ಮೂಲಕ ಭಾವವನ್ನು ಹೇಳುವುದು ಗಜಲ್‌ನ ಮುಖ್ಯ ಲಕ್ಷಣವಾಗಿದೆ. ಭಾಷೆ ಸರಳವಾಗಿದ್ದರೂ ಅರ್ಥದಲ್ಲಿ ಗಾಢತೆ ಹೊಂದಿರಬೇಕು. ರೂಪಕ, ಪ್ರತೀಕ, ಅಲಂಕಾರ, ವ್ಯಂಗ್ಯಗಳ ಸಮೃದ್ಧ ಬಳಕೆಯಾಗಬೇಕು. ಪ್ರತಿ ಷೇರ್ ಸ್ವತಂತ್ರವಾಗಿದ್ದರೂ ಭಾಷೆಯ ಲಯ ಮತ್ತು ಭಾವದ ತೀವ್ರತೆ ಗಜಲ್‌ಗೆ ಏಕತೆಯನ್ನು ನೀಡಬೇಕು. ಉರ್ದೂ ಗಜಲ್ ಪರಂಪರೆಯಲ್ಲಿ ಪರ್ಷಿಯನ್–ಅರಬಿ ಪದಗಳ ಪ್ರಭಾವ ಕಂಡುಬಂದರೂ, ಕನ್ನಡ ಗಜಲ್‌ನಲ್ಲಿ ದೇಸಿ, ತದ್ಭವ ಮತ್ತು ತತ್ಸಮ ಪದಗಳ ಸಮನ್ವಯ ಕಾಣಸಿಗುತ್ತದೆ. ಈ ನೆಲೆಯಲ್ಲಿ ಗಮನಿಸಿದಾಗ ಗಜಲ್‌ನ ಭಾಷೆ ಹೇಳುವುದಕ್ಕಿಂತ ಸೂಚಿಸುವುದರ ಕಡೆಗೆ, ವಿವರಿಸುವುದಕ್ಕಿಂತ ಅನುಭವಿಸಿಸುವುದರ ಕಡೆಗೆ ಗಮನ ಹರಿಸುತ್ತದೆ ಎಂಬುದು ಮನವರಿಕೆಯಾಗುತ್ತದೆ. ಅಂದರೆ ಗಜಲ್ ಕೋಮಲ, ಮೃದುತ್ವ ಮತ್ತು ಹೃದಯ ತಟ್ಟುವ ಪದಗಳ ಬಳಕೆಯನ್ನು ನಿರೀಕ್ಷಿಸುತ್ತದೆ. ಅಂತೆಯೇ ಇಲ್ಲಿ ಬೌದ್ಧಿಕತೆಗಿಂತ ಹೃದಯವಂತಿಕೆ ಅತ್ಯವಶ್ಯಕ! ಇಂದು ಗಜಲ್ ಕೇವಲ ಪ್ರೇಮಕ್ಕೆ ಸೀಮಿತವಾಗಿ ಉಳಿದಿಲ್ಲ; ಮಾನವನ ಅಂತರಂಗ ಮತ್ತು ಸಮಾಜದ ವಿವಿಧ ಆಯಾಮಗಳನ್ನು ಸ್ಪರ್ಶಿಸುತ್ತಿದೆ. ಪ್ರೇಮ ಮತ್ತು ವಿರಹ, ನೋವು ಮತ್ತು ಮನೋವ್ಯಥೆ, ತತ್ತ್ವ ಮತ್ತು ಅಸ್ತಿತ್ವದ ಪ್ರಶ್ನೆಗಳು, ಸಾಮಾಜಿಕ ವ್ಯಂಗ್ಯ ಮತ್ತು ವಿರೋಧ, ಆಧ್ಯಾತ್ಮಿಕ ಮತ್ತು ಸೂಫಿ ಭಾವನೆ, ನೆನಪು, ಕನಸು ಮತ್ತು ಹಂಬಲ.. ಎಲ್ಲವನ್ನೂ ಗಜಲ್ ಒಳಗೊಳ್ಳುತ್ತಿದೆ! ಆದರೆ ಒಂದನ್ನು ನಾವು ಮರೆಯಬಾರದು, ಅದೆಂದರೆ ಅಭಿವ್ಯಕ್ತಿಯ ಕ್ರಮ! ಗಜಲ್ ಯಾವುದೇ ವಿಷಯವನ್ನು ಒಳಗೊಳ್ಳಬಹುದು, ಆದರೆ ಅದು ಸಹೃದಯ ಓದುಗರ, ಕೇಳುಗರ ಹೃದಯದ ಕದ ತಟ್ಟಬೇಕು! ಪ್ರತಿಯೊಂದು ಕಾವ್ಯದ ಬಗ್ಗೆ ಮಾತಾಡುವಾಗಲೆಲ್ಲ ನಾವು ‘ಆತ್ಮ’ದ ಉಲ್ಲೇಖ ಮಾಡುತ್ತೇವೆ. ಅಂದರೆ, ಬಾಹ್ಯ ಲಕ್ಷಣಗಳಿಗಿಂತಲೂ ಆಂತರಿಕ ಭಾವಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂಬ ನೆಲೆಯಲ್ಲಿ! ಹೌದು, ಪ್ರತಿ ಬರಹದ ಮೂಲ ಸ್ಥಾಯಿಯೇ ಅದು ಒಳಗೊಂಡಿರಬಹುದಾದ ಧ್ವನಿ, ರಸ! ಹಾಗಂತ ಬಾಹ್ಯ ಲಕ್ಷಣಗಳನ್ನು ನಿರಾಕರಿಸುವಂತಿಲ್ಲ. ಏಕೆಂದರೆ ನಮಗೆ ಮೊದಲು ಗೋಚರಿಸುವುದೆ ಭೌತಿಕ ಶರೀರ, ನಂತರವಷ್ಟೇ ಆತ್ಮದ ಪರಿಚಯ! ಇಲ್ಲಿ ಇನ್ನೊಂದು ಅಪಾಯವಿದೆ, ಏನೆಂದರೆ ಲಕ್ಷಣಗಳು ಕೇವಲ ‘ಹಿಟ್ಟಿನ ಹುಂಜ’ವನ್ನು ತಯಾರಿಸುವಂತಾಗಬಾರದು! ಆಂತರಿಕ ಹಾಗೂ ಬಾಹ್ಯ ಲಕ್ಷಣಗಳ ಸಾಮರಸ್ಯ ಶಾಯರ್/ಶಾಯರಾ ಸಾಧಿಸುವಂತಾಗಬೇಕು. ಆವಾಗಲೇ ಗಜಲ್ ಉದಯಿಸಲು ಸಾಧ್ಯ, ಸಾರಸ್ವತ ಲೋಕದಲ್ಲಿ ನೆಲೆಯೂರಲು ಸಾಧ್ಯ ಹಾಗೂ ರಸಿಕರ ನಾಲಿಗೆಯ ತುದಿಯಲ್ಲಿ ನುಲಿಯಲೂ ಸಾಧ್ಯ! ಡಾ. ಮಲ್ಲಿನಾಥ ಎಸ್. ತಳವಾರ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರು,ಕನ್ನಡ ಅಧ್ಯಯನ ವಿಭಾಗ,ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,ಕಲಬುರಗಿ ೫೮೫ ೧೦೩

“ಗಜಲ್ ಮನಸುಗಳಿಗಾಗಿ, ಗಜಲ್ ಕುರಿತು ಒಂದಿಷ್ಟು ವಿಚಾರಗಳು.” ಡಾ. ಮಲ್ಲಿನಾಥ ಎಸ್. ತಳವಾರ Read Post »

You cannot copy content of this page

Scroll to Top