ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಕಾಯಕದ ಮಹತ್ವ.

ಲೇಖನ ಕಾಯಕದ ಮಹತ್ವ. ಜಯಶ್ರೀ ಭ.ಭಂಡಾರಿ. ದಾಸೋಹ ಕಾಯಕವೆಂಬ ನಾಣ್ಯದ ಇನ್ನೊಂದು ಮುಖ.ಸಮಾಜದಲ್ಲಿ ಸಂಪತ್ತು ಉತ್ಪತ್ತಿಯಾಗಲು ಸತ್ಯಶುದ್ಧ ಕಾಯಕ ಬೇಕು.ಆದರೆ,ಸಂಪತ್ತು ಕೇಂದ್ರೀಕತವಾದರೆ ಎಲ್ಲಾ ಬಗೆಯ ಅಸಮಾನತೆಗಳು ಹುಟ್ಟುತ್ತವೆ.ಆದ್ದರಿಂದ ಬಸವಾದಿ ವಚನಕಾರರು ದಾಸೋಹ ತತ್ವವನ್ನು ಆವಿಷ್ಕರಿಸಿ ಆಚರಣೆಯಲ್ಲಿ ತಂದರು.ಅಣ್ಣನವರ ಸುಪ್ರಸಿದ್ಧ ವಚನ “ಕಾಗೆಯೊಂದಗುಳ ಕಂಡಡೆ ಕೂಗಿ ಕರೆಯದೆ ತನ್ನ ಬಳಗವ….”. ಸಮಾಜದಲ್ಲಿ ಸಂಪತ್ತಿನ ವಿತರಣೆಯಾಗಲೇಬೇಕೆಂದು ವಿಧಿಸುವ ನಿಯಮ. ಕಾಯಕ ಸಾರ್ಥಕವಾಗುವದೇ ದಾಸೋಹದಲ್ಲಿ.ಆದ್ದರಿಂದಲೇ “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಅಣ್ಣ.”ತನು ಮನ ಬಳಲಿಸಿ ತಂದು ದಾಸೋಹ ಮಾಡುವವ”ರನ್ನು ಸದ್ಭಕ್ತರೆನ್ನುತ್ತಾರೆ ಅಣ್ಣ. ಸಂಪತ್ತನ್ನು ಕೂಡಿಡುವ ,ಮಣ್ಣಿನಲ್ಲಿ ಹೂತಿಡುವ,ಕಂಗಳಲ್ಲಿ ನೋಡಿ ಹಿಗ್ಗುವ ಮರುಳರನ್ನು ಎಚ್ಚರಿಸಿ “ಕೂಡಲ ಸಂಗನ ಶರಣರಿಗೊಡನೆ ಸಂಪತ್ತನ್ನು ಸವೆಸಬೇಕು” ಎಂದು ಹೇಳುತ್ತಾರೆ.ಇನ್ನೊಂದು ಲೋಕೋತ್ತರ ವಚನದಲ್ಲಿ: ” ನಾನ್ಯಾವ ಕರ್ಮವ ಮಾಡಿದರೆಯೂನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದು ಕ್ರೀಯೆಯ ಮಾಡೆನುನಿಮ್ಮ ಸೊಮ್ಮಿಂಗೆ ಸಲಿಸುವೆನು ನಿಮ್ಮಾಣೆಕೂಡಲ ಸಂಗಮದೇವಾ” ಎಂದು ಹೇಳುವಾಗ ಅಸಂಗ್ರಹಾದುದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ.ಆದ್ದರಿಂದಲೇ ಅಣ್ಣನವರನ್ನು 12 ನೇ ಶತಮಾನದ ಮಾರ್ಕ್ಸ ಎಂದು ಕೆಲವರು ಕರೆಯುತ್ತಾರೆ. ಬಸವಣ್ಣನವರ ಪ್ರಕಾರ ಐಹಿಕ ವಸ್ತುಗಳ ಮೋಹಕ್ಕೆ ಒಳಗಾಗುವವನು ಭವಿ. ಐಹಿಕ ವಸ್ತುಗಳೆಲ್ಲ ಶಿವನ ಪ್ರಸಾದವೆಂದು ಭಾವಿಸಿ ದಾಸೋಹಂ ಭಾವದ ಮೂಲಕ ಇವೆಲ್ಲ ಜಗತ್ತಿನ  ಜೀವಿಗಳಿಗೆ ಸೇರಿದ್ದು ಎಂದು ನಂಬಿದವನು ಭಕ್ತ. ಲಿಂಗಧಾರಣೆಯಿಂದ ಶರೀರವು ಭಕ್ತನ ಹಾಗೆ ಕಾಣಬಹುದೇ ಹೊರತು ವ್ಯಕ್ತಿ ಭಕ್ತ ಆಗಲಾರ. ಭಕ್ತಿ ಎಂಬುದು ಸರ್ವ ಸಮತ್ವ ಭಾವದಿಂದ ಬರುವಂಥದ್ದು.ಅಂತೆಯೇ ಬಸವಣ್ಣನವರು ‘ಎನ್ನ ತನು ಭಕ್ತ, ಮನ ಭವಿ’ ಎಂದು ಸೂಚ್ಯವಾಗಿ ಖಂಡಿಸಿದ್ದಾರೆ.ಯಾರು ಆತ್ಮಸಾಕ್ಷಿಯಾಗಿ ಬದುಕುವದಿಲ್ಲವೋ ಅವರೇ ಭವಿಗಳು ಎಂದು ಅವರು ಸೂಚಿಸಿದ್ದಾರೆ. ಕಾಯಕದಿನದ ಬಂದ  ಹಣವನ್ನು ದಾಸೋಹಕ್ಕೆ ವಿನಿಯೋಗಿಸುತಿದ್ದ ಕಕ್ಕಯ್ಯನನ್ನು ಪರೀಕ್ಷೀಸಲೆಂದು  ಬಂದ ಶಿವ ಕಂಕರಿಯ ನಾದಕ್ಕೆ ಮಾರುಹೋಗಿ ಕುಣಿಯತೊಡಗಿದ.ಕಕ್ಕರಿಯ ಕಕ್ಕಯ್ಯ ಶಿವ ಕುಣಿಯುವದನ್ನು ನೋಡಿ ಕಂಕರಿಯನ್ನು ಇನ್ನಷ್ಟು ಜೋರಾಗಿ ಸೊಗಸಾಗಿ ಬಾರಿಸಲು ಇಬ್ಬರಲ್ಲೂ ಸ್ಪರ್ಧೆ ಏರ್ಪಟ್ಟಿತು.ಮೂರು ದಿನಗಳ ನಿರಂತರ ನರ್ತನದ ಕೊನೆಗೆ ಶಿವನೇ ಸೋತು ಕುಣಿಯಲಾರದೆ ನೆಲಕ್ಕೊರಗಿದ.ಅವನ ಕೈ ಹಿಡಿದು ಎಬ್ಬಿಸಿದ ಕಕ್ಕಯ್ಯ ಕುಣಿಯುವಂತೆ ಹೇಳಿದ.ಜಂಗಮರೂಪದ ಶಿವ ತನ್ನ ನಿಜರೂಪ ತೋರಿ “ಈ ಲೋಕದ ಹಂಗು ಸಾಕು,ನನ್ನ ಜೊತೆ ಕೈಲಾಸಕ್ಕೆ ಬಾ” ಅಂದನಂತೆ.ಶಿವ ಮತ್ತು ಕೈಲಾಸ ಎರಡನ್ನೂ ಧಿಕ್ಕರಿಸಿದ ಕಕ್ಕಯ್ಯ “ಮೂರು ದಿನ ತಪ್ಪಿಹೋದ ಕಾಯಕದ ಆಯ ಕೊಡದೆ ನಿನ್ನನ್ನು ಬಿಡಲಾರೆ” ಎಂದನಂತೆ. ನಾನೂ ಮೂರು ದಿನ ಕುಣಿದೆ.ನಿಜವಾಗಿ ನೋಡಿದರೆ ನೀನೆ ನನಗೆ ಕಾಯಕದ ಪ್ರತಿಫಲವನ್ನು ಕೊಡಬೇಕು” ಎಂದ ಶಿವ.”ಕಾಯಕ ಸಿಕ್ಕುವದು ಈ ಭೂಮಿಯಲ್ಲಿ ಇರುವವರಿಗೆ ಮಾತ್ರ, ನಿನ್ನ ಕೈಲಾಸದವರು ಸೋಮಾರಿಗಳು, ನೀನು ಕಾಯಕವೆಂಬ ಪವಿತ್ರ ಭಾವನೆಯಿಂದ ಕುಣಿಯಲಿಲ್ಲ.ನನ್ನನ್ನು ಪರಿಕ್ಷಿಸಲು ಕುಣಿದೆ….ಕಾಯಕ ತೆಗೆದುಕೊಂಡು ನೀನು ಯಾರಿಗಾಗಿ ದಾಸೋಹ ಮಾಡುವೆ? ನಿನಗೆ ಕಾಯಕ ಬೇಕಾಗಿದ್ದರೆ ಈ ಭೂಮಿಯಲ್ಲಿ ವಾಸಮಾಡು. ಸತ್ಯಶುದ್ಧನಾಗಿ ದುಡಿ” ಎಂದು ಸವಾಲೆಸೆದು ಮುಲಾಜಿಲ್ಲದೆ ಕಾಯಕದ ಹಣವನ್ನು ವಸೂಲು ಮಾಡಿ ದಾಸೋಹಕ್ಕೆ ತೆರಳಿದ.   ಇದೇ ರೀತಿ ಶಿವನಿಂದ ಕಾಯಕವನ್ನು ಪಡೆದ ಮತ್ತೊಬ್ಬ ಶರಣನೆಂದರೆ ನಗೆಯ ಮಾರಿತಂದೆ.ಮುಖದಲ್ಲಿ ನಗೆಮಲ್ಲಿಗೆ ಅರಳಲು ಯಾರ ಅಪ್ಪಣೆಯೂ ಬೇಕಿಲ್ಲ.ನಗೆಯನ್ನು ದುಡ್ಡುಕೊಟ್ಟು ಕೊಳ್ಳಬೇಕಿಲ್ಲ ಆದರೂ ನಗೆ ನಮ್ಮ ಬಾಳಿನಲ್ಲಿ ಅಪರೂಪವಾಗುತ್ತಿದೆ.ನರನ ಬಾಳಿನಲ್ಲಿ ನಗೆಗಿಂತ ಹೊಗೆ,ಧಗೆಗಳೇ ಜಾಸ್ತಿ.ನಗುವ ಮನಸ್ಸಿದ್ದರೂ ಜಗದ ವೈಚಿತ್ರ್ಯದಿಂದ  ಮಿಡುಕುತ್ತ,ಸಿಡುಕುತ್ತ ದುಡಿಯುವ ಜನರಿಗೆ ನಕ್ಕು ನಗಿಸುವ ನಗೆಗಾರರು ಬೇಕಾಗುತ್ತಾರೆ. ಮಾರಿತಂದೆ ಅಂಥ ನಗೆಗಾರರಿಗೆಲ್ಲ ಗುರು.ಮ್ಲಾನಮುಖದಲ್ಲಿ ಮಂದಹಾಸವನ್ನು ಉಕ್ಕಿಸುವದೇ ಅವನ ಕಾಯಕವಾಗಿದ್ದಿತು.ಅವನ ವಿನೋದ ವಿನ್ಯಾಸದಿಂದ ನಕ್ಕು ಆನಂದ ಹೊಂದಿದ ಭಕ್ತರು ಸ್ವಸಂತೋಷದಿಂದ ಏನಾದರೂ ಕೊಟ್ಟರೆ ಅದನ್ನು ಭಕ್ತಿಯಿಂದ ಸ್ವೀಕರಿಸಿ ಅದರಲ್ಲಿಯೇ ಉದರ ನಿರ್ವಹಣೆ ಪೂರೈಸಿ,ಉಳಿದುದರಲ್ಲಿ ದಾಸೋಹ ಮಾಡುತ್ತಿದ್ದ. ಇಂಥಹ ದಾಸೋಹದ ಶರಣಸಂಕುಲವೇ ನಮ್ಮ ಮುಂದಿದೆ. ನಮಗೆ ಬಿಟ್ಟುಹೋದ ದಾಸೋಹ ಸಂಸ್ಕ್ರತಿಯನ್ನು ನಾವು ಚಾಚೂತಪ್ಪದೆ ಪಾಲಿಸೋಣ ಹಾಗೂ ಶರಣ ಸಂಸ್ಕ್ರತಿಯಲ್ಲಿ ನಡೆದು ಧನ್ಯರಾಗೋಣ. ******************************

ಕಾಯಕದ ಮಹತ್ವ. Read Post »

ಇತರೆ, ಜೀವನ

ಖುಷಿ ನಮ್ಮಲ್ಲೇ!!!

ಲೇಖನ ಖುಷಿ ನಮ್ಮಲ್ಲೇ!!! ಮಾಲಾ ಅಕ್ಕಿಶೆಟ್ಟಿ  ಕೈಯಲ್ಲಿ10 ರ ನೋಟು ಹಿಡಿದುಕೊಂಡು ಬಡ ಹುಡುಗ ರೋಡ್ ಮೇಲೆ ಇರುವ ಭಜಿ ಅಂಗಡಿಗೆ ಬಂದಿದ್ದ. ಆಸೆ ಕಂಗಳಿಂದ ಮೂರು ತರಹದ ಭಜಿ, ‌ಅಂದರೆ ‌ಕಾಂದಾ, ‌ಮಿರ್ಚಿ ‌ಮತ್ತು ‌ಮೈಸೂರ ‌ಭಜಿಯನ್ನು ‌‌ಒಂದೇ ‌ಸಮನೇ ನೋಡಿದ. ‌ಆ ‌ಅಂಗಡಿಯಲ್ಲಿ 4 ‌ಭಜಿಗಳ ‌ಪ್ಲೇಟ್ಗೆ 20 ‌ರೂಪಾಯಿ.ಒಂದು ಭಜಿಯನ್ನು ಕೊಡುವ ಸೌಲಭ್ಯವಿರುವದರಿಂದ 5ರೂಪಾಯಿಗೆ ‌ಯಾವುದಾದರು ‌ಭಜಿ ‌ತಿನ್ನಬಹುದು.ಆತ ‌ಡಿಸೈಡ್ ‌ಮಾಡಿ 5 ರೂ ‌ಕೊಟ್ಟು ‌ಮಿರ್ಚಿ ‌ಭಜಿಯನ್ನು ಸವಿದ.ಬಸಿಯಾಕಾರದಲ್ಲಿ ಕಣ್ಣು ತೆರೆದು, ಬಾವಿಯಂಥ ಬಾಯಲ್ಲಿ ಹಾಕಿ ಸುತ್ತಲೂ ನೋಡುತ್ತಾ ‌‌ಭಜಿಯನ್ನು ‌ಆತ್ಮೀಯತೆಯಿಂದ ಅನುಭವಿಸಿದ. ಹೊರಗೆ ‌ಧೋ ‌ಧೋ ಅನ್ನುವ ಎಡಬಿಡದ ಮಳೆ, ಅಲ್ಲಲ್ಲಿ ಛತ್ರಿಗಳ ಸಹಾಯದಿಂದ ಜನರ ಓಡಾಟ,‌ ‌ಜೋರ ‌ಮಳೆಯಲ್ಲಿ,ರೋಡ ‌ಖಾಲಿಯಾದ್ದರಿಂದ, ‌ಬುರ್ ಬುರ್ ಎಂದು ಹೋಗುವ ವಾಹನಗಳು ಮಳೆಗೆ ಕಳೆ ತಂದಿದ್ದವು.ಆ ಚಿಕ್ಕ ಅಂಗಡಿಯಲ್ಲಿ ಎಲ್ಲರೂ ಜಮಾಯಿಸಿ ಮಳೆ ನಿಂತರಾಯ್ತು,‌‌ ಹೊರಗೆ ಕಾಲಿಡುವಾ ಅನ್ನುವ ಸಾಂದರ್ಭಿಕ ನಿರ್ಣಯ. ಇನ್ನೂ 5 ‌ರೂಪಾಯಿ ಉಳಿದಿತ್ತಲ್ಲ, ‌ಅದರಿಂದ ಮೈಸೂರು ‌ಭಜಿ ತೆಗೆದುಕೊಂಡು ಬೇಕಾದಷ್ಟು ಸಾಸ್ ‌ಮೆತ್ತಿಸಿ,‌ ಮತ್ತೆ ಆನಂದದಿಂದ ಸವಿದ.ಇವನೊಂದಿಗೆ ಬಂದ ಇನ್ನುಳಿದ ಎರಡು ಹುಡುಗರೂ ‌ಥೇಟ್ ‌ಇವನಂಗೆ ‌ಸಂತೋಷ. ಅಬ್ಬಾ!!! ‌‌5 ರೂನಲ್ಲಿ ಒಂದು ‌ಭಜಿ ಕೊಡುವ ಆನಂದ ಯಾವ ಫೈವ್ ‌ಸ್ಟಾರ್ ಹೋಟೆಲ್ ನಲ್ಲಿ ಸಿಗುತ್ತೆ?                            ರೋಡಿನಲ್ಲಿಯ ಗೂಡಂಗಡಿಗಳಲ್ಲಿ ಆಹಾರ ಸರಿಯಿರಲ್ಲ,‌low quality ಎಣ್ಣೆ, ಕಾಳು, ಹಿಟ್ಟು ಬಳಸಿರುತ್ತಾರೆ, ಸ್ವಚ್ಛತೆ ಕಡಿಮೆ, ಆರೋಗ್ಯಕ್ಕೆ ಹಾನಿ ಎನ್ನುವುದೇನೋ ಸರಿ. ಆದರೆ ದೊಡ್ಡ ದೊಡ್ಡ ಹೋಟೆಲ್ಗಳಲ್ಲಿಯ ಎಣ್ಣೆ, ಕಾಳು, ಹಿಟ್ಟು ಸ್ವಚ್ಛತೆಯನ್ನು ಸಾಮಾನ್ಯನು ‌ಪರೀಕ್ಷಿಸಲಾಗುತ್ತಾ? ಹೊರಗಡೆ ಲಕಲಕ ಹೊಳೆದು ಒಳಗೆ ರೋಡ್ ಅಂಗಡಿಗಿಂತ  ‌ಕೀಳಿದ್ದರೆ ವ್ಯತ್ಯಾಸವೇನು? 5 ರೂ ನಲ್ಲಿ ಸಿಗುವ ಇಂಥದ್ದೇ ‌ಭಜಿ, ದೊಡ್ಡ ಹೋಟೆಲ್ ನಲ್ಲಿ ‌ಸುಮಾರು ‌20 ರೂಪಾಯಿ‌ಯಾದರೂ ಇರುತ್ತೆ. ಲೋ ಕ್ವಾಲಿಟಿ ಎಂದು ಬಡ ಹುಡುಗ ನಿಂತರೆ, ಎಂದು ‌ಆತ ಒಂದು ‌ಭಜಿ ‌ತಿಂದಾನು? ರೋಡ್ ನಲ್ಲಿ ತಿಂದ ಎಲ್ಲರ ಆರೋಗ್ಯ ಹಾಳಾಗುವುದರೆ, ಹೋಟೆಲ್ನಲ್ಲಿ ತಿಂದವರಿಗೆ ರೋಗವೇ ಬರಲ್ಲವೇ? ಅಥವಾ ದೊಡ್ಡ ಹೋಟೆಲ್ ನಲ್ಲಿ ತಿಂದವರ ಆರೋಗ್ಯ ಎಂದೂ ಕೊಡುವುದಿಲ್ಲವೇ? ಒಟ್ಟಾಗಿ ಹೇಳುವ ತಾತ್ಪರ್ಯ ಅವರವರ ಇಮ್ಯೂನಿಟಿ ಪವರ್ ಮೇಲೆ ಆರೋಗ್ಯ ನಿಂತಿದೆ.          ಬಡವನೊಬ್ಬ ಒಳ್ಳೆ ಹೋಟೆಲ್ ನಲ್ಲೇ ತಿನ್ನಬೇಕೆಂದರೆ ಎಷ್ಟು ಜನ್ಮ ಆತ ಕಾಯಬೇಕು? ಯಾರಿಗ್ಗೊತ್ತು? ರೋಡ್ ನಲ್ಲಿಯ ‌ಅಂಗಡಿಗಳಿಂದ ಎಟ್ಲೀಸ್ಟ್ ಈ ‌ಈ ತಿನಿಸುಗಳು ಹೀಗೆಯೇ ಇರುತ್ತವಪ್ಪಾ  ಎನ್ನುವ ಕಲ್ಪನೆಯಾದರೂ ಬಡವರಿಗೆ ಬಂದೀತು. ಇಲ್ಲಾದರೆ ರುಚಿ ಕೂಡ ‌ಬರೀ ಕಲ್ಪನೆಯಲ್ಲಿ ಅನುಭವಿಸಬೇಕಾಗಬಹುದು.ದೊಡ್ಡ ಹೋಟೆಲ್ ನಲ್ಲಿ ಇಬ್ಬರ ನಾಷ್ಟಾ ಸುಮಾರು 600 ರೂಪಾಯಿ.‌ಇದು ಬಡವನ ‌ತಿಂಗಳ ‌ಸಂಬಳವೂ ಹೌದು.        ಈ ‌ದೊಡ್ಡ ಹೋಟೆಲ್ ನಲ್ಲಿ ಇದನ್ನು ತಿಂದೇ, ಇಷ್ಟು ಬಿಲ್ ‌ಬಂತು, ‌ಆದ್ರೂ ಎಂಜಾಯ್ ಮಾಡಿದೆ ಎನ್ನುವ, ಅದೇ ಒಂದು ಸಿನಿಮಾ ಸಾಮಾನ್ಯ ಥೇಟರ್ನಲ್ಲಿ ನೋಡಲು ಸಿಕ್ಕಾಗೂ ಆ ದೊಡ್ಡ ಥಿಯೇಟರ್ನಲ್ಲಿ ನೋಡಿದೆ, ಫಸ್ಟ್ ಡೇ, ಫಸ್ಟ್ ಶೋ ಎಂದು ಒಂದು ಟಿಕೆಟ್ಗೆ ಇಷ್ಟು ದುಡ್ಡಿತ್ತು ಗೊತ್ತಾ? ಆದ್ರೂ ಸಂತೋಷ ಆತು ಅಂತ ಹೇಳುವ ಮನುಜರು ಇದ್ದಾರೆ. ಇರಲಿ, ಅವರಿಗೆ ಇರುವ ಆದಾಯದ ಮೇಲೆ ಅವರು ಆಯಾ ಹೋಟೆಲ್ ಹಾಗೂ ಥಿಯೇಟರ್ಗಳಿಗೆ ಹೋಗುತ್ತಾರೆ ಎನ್ನೋಣ. ಆದರೆ ತಾವು ಮಾಡಿದ್ದೇ ಶ್ರೇಷ್ಠ, ಬೇರೆಯವರದು ಕನಿಷ್ಠ ಅಂದರೆ ಹೇಗೆ? ಎಷ್ಟೋ ಶ್ರೀಮಂತರ ಮನೆಯಲ್ಲಿ ಲಕ್ಷ್ಮಿ ಕಾಲುಮುರಿದುಕೊಂಡು ಬಿದ್ದಿದ್ದರೂ ದುಂದು ವೆಚ್ಚ ಮಾಡಿಲ್ಲ. ದೊಡ್ಡ ಹೋಟೆಲ್ ಅಥವಾ ಥೇಟರ್ ಗಳ ವಿರೋಧ ಇಲ್ಲಿ ಇಲ್ಲ. ಆದರೆ ಅಂಥದ್ದೇ ವಾತಾವರಣ ಸಾಮಾನ್ಯ ಸ್ಥಿತಿಯಲ್ಲಿ ಬಡವರಿಗೆ ಸಿಕ್ಕಾಗ ಅದನ್ನು ಶ್ಲಾಘೀಸೋಣ ಎನ್ನುವ ಕಳಕಳಿ.ಅದು ಅವರ ದುಡ್ಡು, ಹೇಗಾದರೂ ಖರ್ಚು ಮಾಡಿಕೊಳ್ಳಲಿ                           ಸಾಮಾನ್ಯರಿಗೆ ಸಾಮಾನ್ಯವಾದ ವಸ್ತುಗಳು ಈ ಜಗತ್ತಿನಲ್ಲಿ ಸಿಗುತ್ತಿರುವುದರಿಂದಲೇ ಅವರಿಗೂ ಎಲ್ಲದರ ರುಚಿ ಗೊತ್ತಾಗಿದೆ. ಬಡವರಿಂದಲೇ ನಡೆಸಲ್ಪಡುವ ಅಂಗಡಿಗಳು ಬಡವರ ಜೀವಾಳ. ಬಡ ಅಂಗಡಿ ಮಾಲೀಕನಿಗೆ ಹೆಚ್ಚಿನ ಆದಾಯದ ಚಿಂತೆಯಿಲ್ಲ. ತನ್ನಂತೆ ಜನ ಅಂದು ಇದ್ದದ್ದರಲ್ಲೇ ತುಸು ಲಾಭ ಗಳಿಸುವ ಆಸೆ. ಇದರಿಂದ ತನಗೂ ಲಾಭ ಜೊತೆಗೆ ತನ್ನಂಥವನಿಗೆ ಹೊಟ್ಟೆ ತುಂಬಿಸಿದೆ ಅನ್ನುವ ಧನ್ಯತಾ ಭಾವ. ಇಷ್ಟಿಷ್ಟರಲ್ಲೇ ಇಷ್ಟಿಷ್ಟದ ಖುಷಿಯನ್ನು ಹುಡುಕುವ ತವಕ. ಸಂತೃಪ್ತಿ ಜೀವನದ ಸೆಲೆ. ಇವುಗಳನ್ನು ಸ್ವೀಕರಿಸಿ ದೋಷಗಳನ್ನು ಬಹಿರಂಗಪಡಿಸದೇ ಆನಂದಿಸುವ ಘಳಿಗೆ. ಬಹುಶಃ ಇದಕ್ಕೇನೆ ವಿಶಾಲ ಮನೋಭಾವ ಅಂತ ಕರೀಬಹುದು. *************************************

ಖುಷಿ ನಮ್ಮಲ್ಲೇ!!! Read Post »

ಇತರೆ, ಜೀವನ

ಯಾಕೆ ನೆಗೆಟಿವಿಟಿ?

ಲೇಖನ ಯಾಕೆ ನೆಗೆಟಿವಿಟಿ? ಮಾಲಾ.ಮ. ಅಕ್ಕಿಶೆಟ್ಟಿ.  “ಆಕೆ ಯಾವಾಗಲೂ ಹಾಗೆಯೇ ಬಿಡಿ. ಏನ್ ಹೇಳಿದ್ರು ನೆಗೆಟಿವ್ ಆಗಿ ಯೋಚಿಸಿ, ಅದರಲ್ಲೇ ಮುಳುಗಿರುತ್ತಾಳೆ. ಇದ್ದ ಗಳಿಗೆಯನ್ನು ಆನಂದಿಸಲು ಬರಲ್ಲ. ಬರೀ ನೆಗೆಟಿವ್. ಜೀವನವನ್ನು ಆನಂದಿಸುವುದೂ ಒಂದು ಕಲೆ. ಅದು ಆಕೆಗೆ ಗೊತ್ತಿಲ್ಲ. ಎಲ್ಲರದೂ ಒಂದೊಂದು ಸಮಸ್ಯೆ ಇದ್ದೇ ಇರುತ್ತೆ. ಯಾರಿಗೂ ಸಮಸ್ಯೆ ತಪ್ಪಿದ್ದಿಲ್ಲ. ಜೀವನ ಇದ್ದ ಹಾಗೆ ನಡೆದುಕೊಂಡು ಹೋಗಬೇಕು. ಅದು ಬಿಟ್ಟು ಸತತ ಇಪ್ಪತ್ತನಾಲ್ಕು ಗಂಟೆಯೂ ನಕಾರಾತ್ಮಕವಾಗಿ ಯೋಚಿಸಿದರೆ ಹೇಗೆ? ಅದೇನೊ ಅಂತಾರಲ್ಲ ಪ್ರತಿ ಪರಿಹಾರಕ್ಕೂ ಇಂಥವರು ಸಮಸ್ಯೆಯನ್ನು ಹುಟ್ಟಿಸಿಬಿಡತಾರೆ ಅನ್ನೊ ಗುಂಪಿನಲ್ಲಿ ಇವಳೂ ಒಬ್ಬಳು”  ಎಂದು ನಾವು, ನೀವು ಹೀಗಿರುವವರನ್ನು ಭಾರಿ ಬಾರಿ ಟೀಕಿಸಿ ಮಾತನಾಡಿರಬಹುದು.ಕೊರೊನಾ ರೋಗದ ಬೆನ್ನಲ್ಲೇ ಎಲ್ಲಾ ವಯಸ್ಸಿನವರನ್ನೂ ಈ ನಕಾರಾತ್ಮಕತೆ ಕಾಡುತ್ತಿದೆ.ಆದರೆ ಎಲ್ಲರೂ ಮಾಡುವ ತಪ್ಪು ಇಲ್ಲೇ ಇದೆ. ಹೌದು ಸಕಾರಾತ್ಮಕವಾಗಿ ಇರಬೇಕು, ಯೋಚಿಸಬೇಕು… ಎಲ್ಲಾ ಸರಿ. ಆದರೆ ಯಾಕೆ ವ್ಯಕ್ತಿ ಇಷ್ಟೊಂದು ನಕಾರಾತ್ಮಕವಾಗಿ ಯೋಚಿಸುತ್ತಾನೆ ಅನ್ನುವುದನ್ನು ನಾವು, ಅಂದರೆ ಅಂತ ಅಂಥ ವ್ಯಕ್ತಿಗಳಿಗೆ ಉಪದೇಶ ಮಾಡುವಾಗ ಯೋಚಿಸಬೇಕಾಗುತ್ತದೆ.ಪೊಜಿಟಿವ್ ಥಿಂಕ್ ಮಾಡಿ, ಮಾಡಿ, ಎಂದು ಒತ್ತಾಯಿಸಿದಾಗ ಅತೀವ ದುಃಖದಲ್ಲಿದ್ದ ವ್ಯಕ್ತಿ ಹೇಗೆ ತಾನೇ ಪೊಜಿಟಿವ್ ಆಗಿ ಯೋಚಿಸಬಲ್ಲ! ಆದ್ದರಿಂದ ನೆಗೆಟಿವ್ ವ್ಯಕ್ತಿಗಳ ಹಿಂದಿರುವ ಕಾರಣಗಳನ್ನು ವಿಶ್ಲೇಷಿಸಬೇಕಾಗುತ್ತದೆ.               ತಾನು ಅತಿಯಾಗಿ ಪ್ರೀತಿಸಿದ ವ್ಯಕ್ತಿ ಮರಣ ಹೊಂದಿದಾಗ, ಆತ್ಮೀಯರಿಂದ ಬೇರ್ಪಟ್ಟ ನೋವು ಅಪಾರ.ಈ ಆತ್ಮೀಯರು.. ತಂದೆ ,ತಾಯಿ, ಅಕ್ಕ, ಅಣ್ಣ, ತಂಗಿ, ತಮ್ಮ, ತಂಗಿ, ಗೆಳೆಯ,ಗೆಳತಿ ಅಥವಾ ತನ್ನದು ಅಂದುಕೊಂಡ ಯಾವುದೇ ಜೀವ, ಇತ್ಯಾದಿಗಳ ಯಾದಿಯನ್ನು ಹೊಂದಿರುತ್ತದೆ. ಜೀವನವೇ ಅವರು ಎಂದಾಗ ಅವರಿಲ್ಲದ ಜೀವನಕ್ಕೆ ಅರ್ಥವೇ ಇಲ್ಲ ಎನ್ನಿಸುವುದು ತೀರ ಸ್ವಾಭಾವಿಕ. ಅನುಭವಗಳು ಜೀವನಕ್ಕೆ ಪಾಠ ಕಲಿಸುತ್ತಾ ಎನ್ನುವುದೇನೋ ಸರಿ. ಆದರೆ ಆದ ಕೆಟ್ಟ ಅನುಭವಗಳು ಮನುಷ್ಯನನ್ನು ನೆಗೆಟಿವ್ ಕೂಪಕ್ಕೆ ತಳ್ಳುವುದೂ ಅಷ್ಟೇ ಸತ್ಯವಾಗಿದೆ. ಕೆಟ್ಟ ಅನುಭವಗಳು  ಒಬ್ಬನನ್ನು ಮೇಲೆತ್ತುವಂತೆ ಮಾಡಿದರೆ, ಇನ್ನುಳಿದವರಿಗೆ ಅಂಥ ಘಟನೆಗಳಿಂದ ಹೊರಬಾರದಂತೆ ಮಾಡಿರುತ್ತವೆ. ಪೆಟ್ಟು ತಿಂದ ವ್ಯಕ್ತಿ ಪೆಟ್ಟನ್ನು ಚಾಲೆಂಜ್ ಆಗಿ ತೆಗೆದುಕೊಂಡು ನಾಗಾಲೋಟದಲ್ಲಿ ಮುಂದುವರಿದು ಪ್ರಗತಿಯನ್ನು ಸಾಧಿಸಬಹುದು… ಆದರೆ ಅದು ಎಲ್ಲರ ಜೀವನದಲ್ಲೂ ಸಾಧ್ಯವಿಲ್ಲ.          ಎಷ್ಟೇ ಪೊಜಿಟಿವ್ ಆಗಿ ಇರಲು ಬಯಸಿದರೂ ಬರುವ ಸಂದರ್ಭಗಳು ಮನುಷ್ಯನನ್ನು ಕುಗ್ಗಿಸಿ ನೆಲಕಚ್ಚುತ್ತವೆ. ಅಂಥ ಸಂದರ್ಭ ಎಂದರೆ ಭಯ ಪೀಡಿತರಾಗುವ ಅನುಭವಗಳು ಅವರಲ್ಲಿ ಬೇರೂರಿ ಬಿಡುತ್ತವೆ.ಇನ್ನೊಂದೆಡೆ, ಮರಳಿ ಪ್ರಯತ್ನ ಮಾಡು ಎನ್ನುವ ಸಿದ್ಧಾಂತವನ್ನು ಕಟ್ಟಾ ನಿರ್ವಹಿಸಿದಾಗಲೂ ಮಾಡಿದ ಪ್ರಯತ್ನಗಳಿಗೆ ಬೆಲೆಯೇ ಇರಲ್ಲ; ಎಲ್ಲ ವಿಫಲವಾಗುತ್ತವೆ ಅಥವಾ ಪ್ರಯತ್ನಕ್ಕೆ ಫಲವೇ ಇರೋದಿಲ್ಲ. ಇನ್ನಷ್ಟು ಸಂದರ್ಭಗಳಲ್ಲಿ ಒಳ್ಳೆಯದೇ ಆಗುತ್ತೆ ಎಂದು ಕಾದು ಕಾದು ಕುಳಿತಿರುತ್ತಾರೆ. ಆದರೆ ಕಾಯುವಿಕೆಗೆ ಸಫಲತೆ ಸಿಕ್ಕಿರಲ್ಲ. ಒಳ್ಳೆಯ ಗಳಿಗೆ ನಿರೀಕ್ಷೆಯಲ್ಲಿ ದಿನ, ತಿಂಗಳು ವರ್ಷಗಳನ್ನು ಸವೆಸಿದರೂ ಸಾಧನೆ ಆಗಿರಲ್ಲ.ಕಾದು ಬರೀ ಸುಣ್ಣವಾಗುತ್ತಾರೆ ಅಷ್ಟೇ. ಕೆಲವು ಸಲ ಮನೆಯವರಿಂದ ಅಥವಾ ಸ್ನೇಹಿತರಿಂದ ನಿರೀಕ್ಷಿಸಿದ ಮಟ್ಟದ ಸಹಾಯ, ಸಹಕಾರಗಳು, ವ್ಯಕ್ತಿಗೆ ಸಿಕ್ಕಿರಲ್ಲ. ಒಂದು ಕಿರುಬೆರಳಷ್ಟೇ ಸಹಾಯ, ಸಹಕಾರ, ಉತ್ತೇಜನದ ಲಾಲಸೆಯನ್ನು ಇಟ್ಟುಕೊಂಡ ವ್ಯಕ್ತಿ ಒಮ್ಮೆಲೇ ಮೇಲಿಂದ ಕೆಳಗೆ ಬಿದ್ದಿರುತ್ತಾನೆ. ಇದಕ್ಕೆ ವಿರುದ್ಧವಾದ ಸಂದರ್ಭಗಳಲ್ಲಿ ವ್ಯಕ್ತಿಯ ಸಹಾಯ, ಪ್ರೋತ್ಸಾಹ, ಕೆಲಸಕ್ಕೆ ಬಂದಿರಲ್ಲ. ಕಾರಣ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಚಿಮ್ಮುತ್ತಿರುತ್ತದೆ. ತಮ್ಮ ಮೇಲೆ ತಮಗೆ ವಿಶ್ವಾಸವಿಲ್ಲ. ಈ ಕೆಲಸದಲ್ಲಿ ನಾನು ಸೋತರೆ ಹೇಗೆ? ಜನ ಏನೆಂದಾರು? ಎಂಬುದರಲ್ಲಿ ಕಾಲಹರಣವಾಗುತ್ತದೆ. ಇಂಥದ್ದೇ ಸಂದರ್ಭಗಳು ವ್ಯಕ್ತಿಯನ್ನು ಜಿಗುಪ್ಸೆ ಹೊಂದುವಂತೆ ಮಾಡುತ್ತವೆ. ಈ ಜಿಗುಪ್ಸೆ ಜೀವನದುದ್ದಕ್ಕೂ ಮುಂದುವರಿದು ಜನ ಎಲ್ಲ ಆತ ಬರೀ ನೆಗೆಟಿವ್ ಬಿಡು ಎಂಬ ನೇಮಪ್ಲೇಟ್ ತಯಾರಿಸಿ, ಹಾಕುವುದರಲ್ಲಿ ಉತ್ಸುಕರಾಗಿರುತ್ತಾರೆ.                               ಆದರೆ ನಿಜಸಂಗತಿ ಇರೋದೇ ಇಲ್ಲಿ. ಒಬ್ಬ ವ್ಯಕ್ತಿ ಯಾವ ಕಾರಣಗಳಿಂದ ನೆಗೆಟಿವ್ ಆಗಿ ಯೋಚಿಸುತ್ತಾನೆ ಎಂಬುದನ್ನು ಅರಿಯಬೇಕಾಗಿದೆ. ಮೂಲ ಸಮಸ್ಯೆಗಳಿಗೆ ಪರಿಹಾರಗಳು ಸೃಷ್ಟಿಯಾದಾಗ ಸ್ವಾಭಾವಿಕವಾಗಿ ಪೊಜಿಟಿವ್ ಎಡೆಗೆ ಮನುಷ್ಯ ವಾಲಬಹುದು. ಇಲ್ಲಾದರೆ ಎಂದೂ ಆಗಲ್ಲ. ಪಾಸಿಟಿವ್ ಆಗಿ ಆಗಿ ಎಂದರೆ ನಾಟಕೀಯ ನಗುವನ್ನು ಹೊದ್ದು ಹೃದಯದಲ್ಲಿ ನೋವು ತುಂಬಿಕೊಂಡು ಸಾಗಬೇಕಾಗುತ್ತದೆ. ಇಂಥವರಿಗೆ ನಿಜವಾಗಿಯೂ ಸಹಾಯ ಮಾಡುವ ಮನಸ್ಸಿದ್ದರೆ ಅವರೊಂದಿಗೆ ಒಂದು ಆಪ್ತ ಸಮಾಲೋಚನೆಯ ಅಗತ್ಯವಿದೆ.ಸಮಸ್ಯೆಯ ಆಳ ಅರಿತು, ಪರಿಹಾರ ಒದಗಿಸಿ.ಇಲ್ಲಾ ಅವರಿಗೆ ಸಾಂತ್ವನ ನೀಡುವ ವ್ಯಕ್ತಿಗಳ ಹತ್ತಿರವಾದರೂ ಕರೆದುಕೊಂಡು ಹೋಗಿ. ಅವರಂಥದ್ದೇ ಸಮಸ್ಯೆಯಿಂದ ಬಳಲಿ, ಅವುಗಳನ್ನು ಮೆಟ್ಟಿನಿಂತ ವ್ಯಕ್ತಿಗಳ ಪರಿಚಯ ಮಾಡಿರಿ.ಅತೀಯಾದ negativity ಯಿಂದ ದೇಹಾರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಿ.ನೀವು ಕೊಡುವ ಸಲಹೆಗಳು ಅಥವಾ ಕ್ರಮಗಳು ನೈಜವಾದಲ್ಲಿ, ಖಂಡಿತ ವ್ಯಕ್ತಿ ತನ್ನ ನೆಗೆಟಿವಿಟಿಯಿಂದ ಹೊರಬರಬಹುದು.ಹೀಗೆ ಮಾಡಿದಾಗ ಒಳ್ಳೆಯ ಮಾರ್ಗದರ್ಶನ ಹಾಗೂ ಸಹಾಯ ಮಾಡಿದ ಆತ್ಮ ಸಂತೋಷ ನಿಮಗೂ ಇರುತ್ತದೆ. **************************************

ಯಾಕೆ ನೆಗೆಟಿವಿಟಿ? Read Post »

ಇತರೆ, ಜೀವನ

ಥಾಂಕ್ಸ್ ಎಂದರೆ ಸಾಕೇ

ಲೇಖನ ಥಾಂಕ್ಸ್ ಎಂದರೆ ಸಾಕೇ ಶಾಂತಿವಾಸು ನನಗೆ ನಮ್ಮಪ್ಪ (ನಾವು ನಮ್ಮಪ್ಪನನ್ನು ಅಣ್ಣ ಅಂತಾನೇ ಕರೀತಿದ್ದಿದ್ದು) ಏನು ಅಂತ ಅರ್ಥವಾಗಿದ್ದು, ನಾನು ಮದುವೆ ಆದ ಮೇಲೇನೆ. ನನ್ನ ಮದುವೆಯಾದ ನಂತರ ಮೊದಲ ಸಲ ಅತ್ತೆ ಮನೆಗೆ ಹೊರಡಿಸಲು ಕೆಲವರು ಹಾಗೂ ಕರೆದುಕೊಂಡು ಹೋಗಲು ಬಂದ ನೆಂಟರು ಮನೆ ತುಂಬಾ ತುಂಬಿರುವಾಗ, ನಮ್ಮಪ್ಪ ಬಚ್ಚಲುಮನೆಯ ಒಳಗೆ ಸೇರಿಕೊಂಡು ಚಿಲಕ ಜಡಿದು ಕಿರಿಚಿ ಕಿರಿಚಿ ಅತ್ತಿದ್ದನ್ನು ಕಂಡು ಎಲ್ಲರಿಗೂ ಪರಮಾಶ್ಚರ್ಯ. ನಮ್ಮಪ್ಪನ ಹೃದಯದಲ್ಲಿಯೂ ಪ್ರೀತಿ ಎಂಬ ಒರತೆ ಜಿನುಗುತ್ತದೆ ಎಂದು ಎಲ್ಲರಿಗೂ ಗೊತ್ತಾಗಿದ್ದೇ ಆಗ. ಪಟಪಟ ಮಾತು, ಹಠ ಹಾಗೂ ಅತಿ ಶುದ್ಧತೆಯಿದ್ದ ನಾನು ನಮ್ಮಪ್ಪನ ಕಣ್ಣಲ್ಲಿ “ಸಾಧಕಿ”. ಅತೀ ಕೋಪ ಇದ್ದ ನಮ್ಮಪ್ಪ ಬಹಳ ಶಿಸ್ತಿನ ಸಿಪಾಯಿಯಾಗಿದ್ದರು. ಮನೆಗೆ ಯಾರೇ ಬಂದರೂ ಯಾರೂ ಮುಖ ಹೊರಹಾಕುವಂತಿರಲಿಲ್ಲ. ನನಗೊಬ್ಬಳಿಗೆ ಮಾತ್ರ ಅದರಲ್ಲೆಲ್ಲ ಸ್ವಲ್ಪ ಸಡಿಲತೆಯಿತ್ತು. ಬಂದವರೆದುರು ಮಾತು, ಡಾಕ್ಟರ್ ರಾಜ್ ಕುಮಾರ್ ಪರ ವಾದ, ಚರ್ಚೆ ಮಾಡುವುದಕ್ಕೂ ಮತ್ತು ಅವರಿಗೆಲ್ಲಾ ತಿಂಡಿ ಕಾಫಿ ಕೊಡುವುದಕ್ಕೂ ನನಗೆ ಮಾತ್ರ ಅವಕಾಶವಿತ್ತು. ನಾವು ನಾಲ್ಕು ಜನ ಅಕ್ಕತಂಗಿಯರು ಕೂರವ, ನಿಲ್ಲುವ ಭಂಗಿಗಳೆಲ್ಲ ಅವರು ಮಾಡಿದ ನಿಯಮಗಳ ಪಟ್ಟಿಯಲ್ಲಿದ್ದವು. ಮಕ್ಕಳು ಕೂರುವಂಥ ಪುಟ್ಟ ಪುಟ್ಟ ಕಬ್ಬಿಣದ ಕಟ್ಟಿನಲ್ಲಿ ಬಿಗಿದ ಪ್ಲಾಸ್ಟಿಕ್ ವೈರಿನ ಮೂರು ಖುರ್ಚಿಗಳನ್ನು ತಂದು ಅದರಲ್ಲಿಯೇ ಕೂರಲು ನಿರ್ಭಂಧ ಹೇರಿದ್ದರು. ನನಗೆ ಬುದ್ದಿ ಬಂದ ಮೇಲೆ (ನನಗೆ ಪ್ರಶ್ನೆ ಕೇಳುವಷ್ಟು ಬುದ್ದಿ ಬಂದದ್ದು ನನ್ನ 20 ವರ್ಷ ವಯಸ್ಸಿನ ನಂತರ) ಕೇಳಿದ್ದೆ “ಯಾಕಣ್ಣ ನಮ್ಮನ್ನ ಯಾವಾಗಲೂ ಪುಟ್ಟ ಖುರ್ಚಿ ಮೇಲೆ ಕೂರಿಸ್ತಿದ್ದೆ” ಅಂತ. ಅದಕ್ಕವರು “ಜಾಗ ದೊಡ್ಡದಿದ್ರೂ ಚಿಕ್ಕದಾಗಿ ಕೂತ್ಕೋಳ್ಳೋದನ್ನು ಕಲಿಸೋಕ್ಕೆ” ಎಂದಿದ್ದರು. ಯಾರಿಗೂ ಏನೂ ಅಲ್ಲವೆನಿಸುವ, ಅಷ್ಟು ಸಣ್ಣ ವಿಷಯ ಕೂಡಾ ನನ್ನ ತಂದೆಯ ಜೀವನದಲ್ಲಿ ಶಿಸ್ತಿನ ಭಾಗವಾಗಿತ್ತು. ನನ್ನ ತಂದೆಯ ಕೊನೇ ದಿನ ನನ್ನನ್ನು ಮನೆಗೆ ಕರೆಸಿಕೊಂಡು, ಪಕ್ಕದಲ್ಲೇ ರಾತ್ರಿ ಪೂರ್ತಿ ಕೂಡಿಸಿಕೊಂಡು ತಾನು ನಿದ್ದೆ ಮಾಡಿದ್ದರು. ಕೊನೆಯ ಊಟ ನನ್ನ ಕೈಯಿಂದ ಮಾಡಿ, ತಲೆಮೇಲೆ ಕೈಯಿಟ್ಟು ಆಶೀರ್ವಾದ ಮಾಡಿ, ದೀರ್ಘವಾದ ಉಸಿರಿನೊಂದಿಗೆ ಹಾಗೇ ಹೊರಟುಬಿಟ್ಟರು. ನಾನು ತಣ್ಣಗಾದ್ರೆ ತಿನ್ನಲ್ಲ ಅಂತ ಪ್ರತಿದಿನ ಬೇಸರ ಮಾಡದೆ, ಎರಡು ಕಿಲೋಮೀಟರ್ ದೂರವಿದ್ದ ನನ್ನ ಶಾಲೆಯ ತನಕ ನಡೆದು ಊಟ ತಂದುಕೊಟ್ಟು, ಮತ್ತೆರಡು ಕಿಲೋಮೀಟರ್ ವಾಪಸ್ ಮನೆಗೆ ಬರುತ್ತಿದ್ದ ನನ್ನಪ್ಪನಿಗೋ, ತಾತನಿಗೋ ನಾನೆಂದೂ ಥಾಂಕ್ಸ್ ಹೇಳೇ ಇಲ್ಲ. ನನಗೆ ಊಟದ ಡಬ್ಬಿ ಕೊಟ್ಟುಬಂದು ನಮ್ಮಪ್ಪ, ಊಟ ಮಾಡಿ ಎರಡು ಕಿಲೋಮೀಟರ್ ದೂರದ ಕಾರ್ಖಾನೆಗೆ ಎರಡನೇ ಪಾಳಿಯ ಕೆಲಸಕ್ಕೆ ನಡೆದು ಹೋಗಬೇಕಿತ್ತು. ಅಲ್ಲಿ ಮೆಷಿನಿನ ಮುಂದೆ ನಿಂತು ಕೆಲಸ ಮಾಡಿ, ಮಧ್ಯರಾತ್ರಿ 12.30ಗೆ ಮನೆಗೆ ನಡೆದು ಬರುತ್ತಿದ್ದ ನನ್ನಪ್ಪನ ಕಷ್ಟಗಳು, ಪ್ರೀತಿ ನನಗೆ ತಿಳಿದದ್ದು ಮಾತ್ರ ಗಂಡನ ಮನೆ ಮೆಟ್ಟಿದ ನಂತರವೆ. ನಾಲ್ಕು ಹೆಣ್ಣು ಮಕ್ಕಳಿಗೂ 8 ಗಂಟೆ ಒಳಗೆ ಸ್ನಾನ, ಸೀಮೆಎಣ್ಣೆ ಸ್ಟವ್ವಿನಲ್ಲಿ ತಿಂಡಿ, ಬ್ಯಾಗು ಏನೇನೋ ಅವಸ್ಥೆ ಜೊತೆಗೆ ಎಂಟು ಜಡೆ ಹೆಣಿದ ಅಮ್ಮನಿಗೂ ನಾನೆಂದೂ ಥಾಂಕ್ಸ್ ಹೇಳಲಿಲ್ಲ. ಎಳವೆಯಲ್ಲಿ ಅಂದರೆ ಇಲ್ಲಿಗೆ 45 ವರ್ಷಗಳ ಹಿಂದೆ ಬೇನೆ ಬಂದು, ಮುಚ್ಚಿಹೋದ ಕಣ್ಣಿಗೆ ಹಾಕಲು, ಕಳ್ಳರ ಕೂಪವಾಗಿದ್ದ, ಆಗಿನ ಬೆಂಗಳೂರು ಹೊರವಲಯದಲ್ಲಿದ್ದ (ಈಗ ಈ ಜಾಗವನ್ನೂ ದಾಟಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಿಕೊಂಡಿದೆ) 40 ಕ್ಯಾಂಡಲ್ ಬ್ರಿಡ್ಜ್ ಹತ್ತಿರವಿದ್ದ ಸೀಗೇ ಬೇಲಿಯ ಕೊರಡನ್ನು, ನನ್ನ ಸೋದರಮಾವನೊಡನೆ ನಡೆದೇ ಹೋಗಿ ತಂದು, ಪ್ರಾಣ ಹಾರಿಹೋಗುವಂತೆ ಊದಿದರೆ, ಬರುವ ಎಣ್ಣೆಯನ್ನು ಹಾಕಿ ಕಣ್ಣುಳಿಸಿದ ನನಪ್ಪನನ್ನು ಕಣ್ಣುಮುಚ್ಚುವ ತನಕ ಮಗುವಂತೆ ಕಾಯ್ದಿದ್ದೇನೆ. ಗಂಡ್ಯಾಕೆಂದು ಇಂದು ನಿಡುಸುಯ್ವ ಇದೇ ಜನ, ಅಂದು “ನಾಲ್ಕೂ ಹೆಣ್ಣು ಬೋಕಿಗಳೆಂದೂ, ಕೊಳ್ಳಿ ಇಡಲು ಒಬ್ಬ ಗಂಡು ಹೆರಲು ಯೋಗ್ಯತೆಯಿಲ್ಲದವಳು, ಕೊನೇ ಕಾಲದಲ್ಲಿ ನಿನಗ್ಯಾರು ಆಸರೆ” ಎನ್ನುತ್ತಾ ಮೂದಲಿಸಿ, ಹೆದರಿಸಿದಾಗೆಲ್ಲ, ಕೊರಗುತ್ತಿದ್ದ ನಮ್ಮಮ್ಮನ ಮನಸ್ಸನ್ನು ಮಾತ್ರ, ಅವರಿರುವ ತನಕವೂ ಬದಲಾಯಿಸಲಾಗದೆ ಸೋತಿದ್ದೇನೆ… ಇದುವೇ ಅಲ್ಲವೇ “ಸಹಜ ಜೀವನ” ಮಾತುಮಾತಿಗೆ ಥಾಂಕ್ಸ್ ಥಾಂಕ್ಸ್ ಅನ್ನುವುದು, ಮತ್ತು ನಮ್ಮ ಮಕ್ಕಳಿಗೆ ನಾವು ಮಾಡಲೇಬೇಕಾದ ಕರ್ತವ್ಯಕ್ಕೂ ಥಾಂಕ್ಸ್ ನಿರೀಕ್ಷಿಸುವ ಇಂದಿನ ಮನಃಸ್ಥಿತಿ ಖಂಡಿತ ಅಸಹಜ. ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ನನ್ನ ತಂದೆತಾಯಿಯರಿಗೋ ಮತ್ತು ಅವರ ಸಮವಯಸ್ಕರಿಗೋ ಈ ವಿಷಯದಲ್ಲಿ ಖಿನ್ನತೆ ಇರಲಿಲ್ಲ. ಯಾಕೆಂದ್ರೆ ಎಲ್ಲರೂ ಮಾಡುವ ಕೆಲಸವನ್ನೇ ನಾವು ಮಾಡುವುದೆಂಬ ಭಾವನೆಯಿತ್ತು. ಕುಟುಂಬಕ್ಕಾಗಿ ನಾನೇನೂ ವಿಶೇಷವಾದದ್ದನ್ನು ಮಾಡುತ್ತಿಲ್ಲ ಅನ್ನೋ ಹಾಗೆ ಹೇಳದೆ ಬದುಕಿಬಿಟ್ಟರು. ಮುಖ್ಯವಾಗಿ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ನಿರೀಕ್ಷೆಗಳೆ ಇರಲಿಲ್ಲ. ಬದಲಾದ ಪರಿಸ್ಥಿತಿಗಳು ಜೀವನದ ಸಹಜತೆಯನ್ನು ನುಂಗಿ ಖಿನ್ನತೆಯನ್ನು ಹುಟ್ಟುಹಾಕುತ್ತಿವೆ. ******************************************

ಥಾಂಕ್ಸ್ ಎಂದರೆ ಸಾಕೇ Read Post »

ಇತರೆ, ಜೀವನ

ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ

ಅನುಭವ ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ             ಪ್ರತಿ ಡಿಸೆಂಬರ್ ೨೨ಕ್ಕೆ ನಮ್ಮ ಶಾಲೆಯ ವಾರ್ಷಿಕೋತ್ಸವ, ಯಾವಾಗಲು ವಾರ್ಷಿಕೋತ್ಸವ ಮುಗಿದ ಬಳಿಕ ನಮಗೆ ಕ್ರಿಸ್ಮಸ್ರಜೆ. ರಜೆ ಕಳೆಯಲೆಂದೇ ಅಜ್ಜನ ಮನೆಗೆ ಹೋದೆವು. ನಮ್ಮ ಹಾಗೆ ಕ್ರಿಸ್ಮಸ್ ರಜೆ ಕಳೆಯಲು ನಮ್ಮಜ್ಜನ ದಾಯಾದಿಗಳ ಮನೆಮಕ್ಕಳೂ ಬಂದಿದ್ದರು. ಒಂದು ರೀತಿ ಮಕ್ಕಳ ಸೈನ್ಯವೇ ಸರಿ. ನಿಮ್ಮ ಶಾಲೆ ಹೇಗೆ? ನಿಮ್ಮ ಶಾಲೆಯಲ್ಲಿ ಏನೇನು ಕಲಿಸುತ್ತಾರೆ? ನಿಮಗೆ ಯಾವ ಟೀಚರ್ ಇಷ್ಟ? ಯಾರು ಹೇಗೆ ಬಯ್ಯುತ್ತಾರೆ? ಇತ್ಯಾದಿಗಳ ಚರ್ಚೆ ಮಾಡುತ್ತಿದ್ದೆವು. ರಜೆಗೆಂದು ಹೋದ ದಿನ ನಮಗೆ ಅಲ್ಲಿ ಭರ್ಜರಿ ಸ್ವಾಗತ. ನಮ್ಮಜ್ಜ ಅಜ್ಜಿಯಂತೂ ಬಸ್ ಬಳಿಯೇ ಬಂದು ನಮ್ಮ ಹೆಗಲ ಮೇಲೆ ಕೈಹಾಕಿ, ತಲೆನೇವರಿಸಿ ಕರೆದುಕೊಂಡು ಹೋದರು. ಇಂದು ನೆನಪಿಸಿಕೊಂಡರೆ ಕಣ್ಣಂಚಿನಲ್ಲಿ ನೀರು ತುಳುಕುತ್ತದೆ. ಅಣ್ಣನ ಮಕ್ಕಳು ಬರುತ್ತಾರೆಂಬ ಖುಷಿಯಲ್ಲಿ ನಮ್ಮತ್ತೆ (ಆಗಿನ್ನು ಲಗ್ನವಾಗಿರಲಿಲ್ಲ) ಗಸಗಸೆ ಪಾಯಸ ಮಾಡಿ ತಣಿಸಿ ನಮಗಾಗಿ ಕಾಯುತ್ತಿದ್ದರು. ಭರ್ಜರಿ ತಿಂಡಿತಿನಿಸುಗಳು ಅವುಗಳನ್ನು ತಿಂದ ನಮಗೆ ಊಟ ಬೇಡ ಅನ್ನಿಸಿ ಹಾಗೆ ಮಲಗಿಕೊಂಡೆವು. ನನ್ನಜ್ಜಿ ನಾವೆಲ್ಲ ಮಲಗಿದ ಮೇಲೆ ಬಂದು ಸರಿಯಾಗಿ ಹೊದಿಸಿ ತಾನೂ ಪಕ್ಕದಲ್ಲೆ ಕುಳಿತುಕೊಂಡು ಹೂ ಕಟ್ಟುತ್ತಾ “ಇವತ್ತೇನೊ ಹೊಸದು ಏನು ಗಲಾಟೆಯಿಲ್ಲ, ನಾಳೆಯಿಂದ ಇವರ ಜಗಳ ಬಿಡಿಸುವುದೇ ನನಗೊಂದು ಕೆಲಸ” ಎಂದರು. ಅದಕ್ಕೆ ಪ್ರತಿಯಾಗಿ “ಅವರು ಹೇಳಿದ್ದಕ್ಕೆಲ್ಲ ನಾನು ಹೂ ಅನ್ನಬೇಕು ಅದೊಂದು ನನಗೆ ತಾಪತ್ರಯ” ಎಂದು ಅತ್ತೆ ನಗುತ್ತಿದ್ದರು.              ಡಿಸೆಂಬರ್ ಅಂದರೆ ಚಳಿಗಾಲ ಜೊತೆಗೆ ಸುಗ್ಗಿಯ ಕಾಲವೂ ಹೌದು, ಭತ್ತ ಕೊಯ್ದು ಹೊರೆ ಕಟ್ಟಿ ಬಣವೆಗಳನ್ನು ಒಟ್ಟುತ್ತಿದ್ದ ಸೀಸನ್ ಅದು. ನಮಗೆ ಅದನ್ನು ಹೇಗೆ ಜೋಡಿಸುತ್ತಾರೆ ಎಂಬ ಕುತೂಹಲ, ಅಜ್ಜನ ಬಳಿಗೆ ಹೋಗಿ ಮೆಲ್ಲನೆ “ನಾವೂ ಬರ್ತೀವಿ ನಿಮ್ಮ ಜೊತೆಗೆ ಗದ್ದೆಹತ್ರ” ಅಂದೆವು ಒಂದೇ ಬಾರಿಗೆ “ಬನ್ನಿ ಅದಕ್ಕೇನಂತೆ” ಎಂದರು. ಆದರೆ ಅಜ್ಜಿ “ನೀವುಗಳು ಬಂದು ಅಲ್ಲೇನು ಮಾಡ್ತೀರಿ ಮನೆಲ್ಲೇ ಇರಿ” ಎಂದರು. ಪುರುಸೊತ್ತಿಲ್ಲದ ಕೆಲಸದ ನಡುವೆ ಈ ಮಕ್ಕಳ ತುಂಟಾಟ ತಡೆಯಲಾಗದು ಎಂಬ ಭಾವ ಆಕೆಯದ್ದು. ನಾವು ಅವರ ಬಳಿ ಇವರ ಬಳಿ ಹೇಳಿಸಿ ಶಿಫಾರಸ್ಸು ಮಾಡಿಸಿ ಕಡೆಗೆ ಗದ್ದೆ ಬಯಲಿಗೆ ಪ್ರಯಾಣ ಬೆಳೆಸಿದೆವು. ದಾರಿಯಲ್ಲಿ ಹೋಗುವಾಗ ನಮ್ಮ ಕೂಗಾಟ ಸ್ವಲ್ಪ ಹೆಚ್ಚೇ ಇತ್ತು ಅಜ್ಜಿ  ಆ ಕೂಗಾಟವನ್ನು ತನ್ನ ಕಣ್ಣುಗಳಿಂದಲೇ ನಿಯಂತ್ರಿಸುತ್ತಿದ್ದರು. ಭತ್ತವನ್ನು ಕಟಾವು ಮಾಡಿದ್ದರಿಂದ ಆ ಗದ್ದೆ ಬಯಲಿನಲ್ಲಿ ಬರಿಗಾಲಲ್ಲಿ ಹೋಗಲಿ ಚಪ್ಪಲಿ ಧರಿಸಿದ ಕಾಲುಗಳಿಂದಲೂ ಆಗುತ್ತಿರಲಿಲ್ಲ.             ಸ್ವಲ್ಪ ಹೊತ್ತು ನೋಡಿ ಪಕ್ಕದವರ ತೋಟಕ್ಕೆ ನಮ್ಮ ಪ್ರವೇಶವಾಯಿತು. ರಜೆಗೆ ಮಕ್ಕಳು ಬಂದಿದ್ದಾರೆ ಎಂದು ಎಳನೀರು, ಸೀಬೆಕಾಯಿ, ಗಣಿಕೆ ಹಣ್ಣು ಇತ್ಯಾದಿಗಳನ್ನು ಕೊಟ್ಟರು. ಹೆಣ್ಣುಮಕ್ಕಳಿಗೆಲ್ಲ ಆ ಪಕ್ಕದ ತೋಟದ ಅಜ್ಜಿ “ಕಾಕಡ, ಕನಕಾಂಬರ, ದವನ, ಮರುಗ ಎಲ್ಲಾ ಇವೆ ಎಲ್ಲಾ ಕೊಯ್ದುಕೊಂಡು ಕಟ್ಟಿ ಮುಡಿದುಕೊಳ್ಳಿ” ಎಂದು ಎಲ್ಲೊ ಸಿಕ್ಕಿಸಿ ಇಟ್ಟಿದ ದಾರವನ್ನು ನಮ್ಮೆಡೆಗೆ ಎಸೆದರು. ಅಭ್ಯಾಸವಿಲ್ಲದ ನಮಗೆ ಹೂ ಬಿಡಿಸಲು ಗೊತ್ತಾಗುತ್ತಿರಲಿಲ್ಲ ತರಚಿ ಹಾಳು ಮಾಡುತ್ತಿದ್ದೆವು ಅದನ್ನು ಕಂಡ ಅವರು “ಉಪಯೊಗಕ್ಕೆ ಬಾರದ್ಹಾಗೆ ಮಾಡ್ತೀರಲ್ಲ”  “ಓದೋ ಮಕ್ಕಳೇ ಹಿಂಗೆ ಹೂ ಬಿಡಿಸೋಕ್ಕು ಬರಲ್ವೆ?” ಎಂದು ಅವರೆ ಬಿಡಿಸಿ ಅಲ್ಲೆ ಒಂದು ಮುತ್ತುಗದ ಎಲೆ ಕೊಯ್ದು ಪೊಟ್ಟಣಕಟ್ಟಿ ನಯವಾಗಿ ಬೀಳ್ಕೊಟ್ಟರು ಇನ್ನು ಹೆಚ್ಚಿನ ನಷ್ಟವಾಗಬಾರದೆಂದು.             ನನ್ನಜ್ಜನಿಗೆ ಮೊಮ್ಮಕ್ಕಳನ್ನು ಪರಿಚಯ ಮಾಡಿಕೊಳ್ಳುವುದೇ ಖುಷಿ. ಆದರೆ ನಮ್ಮಜ್ಜಿಗೆ ಬೇರೆಯವರ ಬಳಿ ದೂರು ಹೇಳಿ ಬಯ್ಯವುದರಲ್ಲೆ ಖುಷಿ. ಅಜ್ಜ ನನ್ನನ್ನು ತೋರಿಸಿ “ಇವಳು ಕಾನ್ವೆಂಟ್ ಶಾಲೆಗೆ ಹೋಗ್ತಾಳೆ ಅಕ್ಷರವಂತೂ ಮುತ್ತು ಪೋಣಿಸಿದ ಹಾಗೆ ಬರಿತಾಳೆ” ಅಂದರೆ ಅಜ್ಜಿ ಮಧ್ಯೆ ಪ್ರವೇಶಿಸಿ “ಹೌದು ಮನೆಯಲ್ಲಿ ಒಂದೇ ಒಂದು ಕೆಲಸ ಮಾಡಲ್ಲ ಲಕ್ಷಣವಾಗಿ ಉದ್ದಲಂಗ ಹಾಕ್ಕೋಳದ್ ಬಿಟ್ಟು ಎನೋ ಹಿಜಾರ ಸಿಕ್ಕಿಸಿಕೊಂಡಿದ್ದಾರೆ ನೋಡಿ ಮೆರೆಯೋ ದೇವರುಗಳು ಇದ್ದ ಹಂಗೆ” ಎಂದರು. ನಮಗೆ ಆ ಮಾತುಗಳನ್ನು ಕೇಳಿ ನಗುಬಂತು, ತಕ್ಷಣ ಪಕ್ಕದ ಮನೆಯ ನೆಂಟರ ಹುಡುಗಿ “ ಇಲ್ಲ ನಿನ್ನ ತರ ಉದ್ದನೆ ಪಂಚೆ ಸುತ್ತೊಕಬೇಕ ಅಜ್ಜಿ” ನಮ್ಮ ಹಾಗೆ  ನೀವೂ ಹಾಕೊಳಿ ಎಷ್ಟು ಆರಾಮ್ ಫೀಲ್ ಆಗುತ್ತೆ ಗೊತ್ತ” ಎಂದೆ ಬಿಟ್ಟಳು ಎಲ್ಲರು ನಕ್ಕುಬಿಟ್ಟರು ಪಾಪ ಅಜ್ಜಿ ಬೇಜಾರು ಮಾಡಿಕೊಳ್ಳಲಿಲ್ಲ ನಕ್ಕು ಸುಮ್ಮನಾದರು. ಹೊತ್ತು ಕಳೆದ್ದು ಗೊತ್ತಾಗಲಿಲ್ಲ.             ದೊಡ್ಡ ದೊಡ್ಡ ಬಾಕ್ಸ್ಗಳಲ್ಲಿ ಊಟ ಮನೆಯಿಂದ ಬಂತು. ಗದ್ದೆ ಕೆಲಸಕ್ಕೆ ಬಂದವರೊಬ್ಬರು ಸೈಕಲ್ ಮೇಲೆ ಊಟ ಇರಿಸಿಕೊಂಡು ಬಂದರು ಅವರ ಜೋತೆಗೆ ಅತ್ತೆಯೂ ಬಂದರು. ಗದ್ದೆ ಬಯಲಿನಲ್ಲಿ ಕುಳಿತು ಊಟ ಮಾಡುವ ಖುಷಿಯೇ ಬೇರೆ ಎಲ್ಲಾ ಸೇರಿ ಊಟ ಮಾಡಿದೆವು. ನನ್ನಜ್ಜನಿಗೆ ಎಲೆಯಲ್ಲಿ ಊಟ ಬಿಡುವಂತಿರಲಿಲ್ಲ ಹಾಗೆ ಉಳಿಸಿದರೆ ಬಹಳ ಕೋಪಮಾಡಿಕೊಂಡು ಬಡಿಸಿದವರಿಗೂ, ಊಟಕ್ಕೆ ಕುಳಿತವರಿಗೂ ಬಯ್ದುಬಿಡುತ್ತಿದ್ದರು. ಗದ್ದೆ ಕೆಲಸಕ್ಕೆಂದು ಬಂದಿದ್ದ ಅಳು ಸೈಕಲ್ನಲ್ಲಿ ಊಟ ತಂದಿದ್ದರಲ್ಲ ಅದಕ್ಕೆ ಪ್ರತಿಫಲವೆಂಬಂತೆ “ಇಲ್ಲೇ ಒಂದು ನಿಮಿಷ” ಎಂದು ಹೋದವರು ಒಂದು ಗಂಟೆಯಾದರು ಪತ್ತೆಯಿರಲಿಲ್ಲ. ಕೆಲಸ ಸಾಗುತ್ತಿಲ್ಲ ಎಂದು ಅಜ್ಜ ಸಿಟ್ಟು ಮಾಡಿಕೊಂಡು ನಾವಿದ್ದ ಜಾಗ ಬಿಟ್ಟು ಮುಂದೆ ಹೋದರು. ಹಾಗೆ ಮುಂದೆ ಹೋದರು. ಹಾಗೆ ಮುಂದೆ ಹೋಗುತ್ತಾ ಹೋಗುತ್ತಾ ಇದ್ದಂತೆ ಏನೋ ಸದ್ದಾಯಿತು. ಅದನ್ನು ಗಮನಿಸಿದ ನಮ್ಮ ಸೋದರ ಅತ್ತೆ “ಅದೇನೂ ಅಲ್ಲ ಸಮಯ ಬಂದರೆ ಇರಲಿ ಅಂತ ಒಂದು ಮಡಚುವ ಚಾಕು, ಅರ, ಬೀಗದ ಕೀ ಇತ್ಯಾದಿಗಳನ್ನು ಇಟ್ಟುಕೊಂಡಿದ್ದಾರೆ”. “ಹಾಗಿದ್ದರೆ ಅಜ್ಜಿ” ಎಂದರೆ ಅವರು  “ಚಿಮ್ಮಟ, ಹೂಕಟ್ಟುವ ನೂಲು, ಸೇಪ್ಟಿಪಿನ್, ಹರಶಿಣ ಕೊಂಬು, ಅರ್ಚನೆ ಪ್ರಸಾದ ಇತ್ಯಾದಿ ಇತ್ಯಾದಿ ಅಂದರು ಅದೆಲ್ಲ ಸರಿ ನೀವು………….” ಎಂದಾಗ ಅತ್ತೆಗೆ ಕೋಪ ಬಂದು ಕೈ ಎತ್ತಿದಾಗ ನಾವೆಲ್ಲ ಚೆಲ್ಲಾಪಿಲ್ಲಿಯಾದೆವು.             ಸ್ವಲ್ಪ ಹೊತ್ತಿನ ಬಳಿಕ ನಮ್ಮಜ್ಜಿ ಮತ್ತು ಅತ್ತೆ ಹೂಕಟ್ಟುತ್ತಾ ಕುಳಿತರು ನಾವು ಹೋಗಿ ಕುಳಿತುಕೊಂಡು ಅದೇನು ಮ್ಯಾಜಿಕ್ ಎಂಬಂತೆ ಕಣ್ಣುಬಾಯಿ ಬಿಟ್ಟು ನೋಡುತ್ತಿದ್ದೆವು. ಏನೋ ದೂರಕ್ಕೆ ಕಣ್ಣು ಹಾಯಿಸಿದರೆ ಎದರೊಂದು ಬೆಟ್ಟ ಅದರ ಮೇಲೊಂದು ಗುಡಿಕಾಣಿಸುತ್ತಿತ್ತು. ಕುತುಹಲ ತಡೆಯಲಾಗಲಿಲ್ಲ ಏನು?ಏನು?  ಎಂದು ಕೇಳಿದೆವು “ಇರಿ ಸ್ವಲ್ಪ ಪಕ್ಕದ ತೋಟದವರು ನಾವು ಕೇಳಿದ್ರೆ ಇಷ್ಟೊಂದು ಹೂ ಕೊಡ್ತಾ ಇರಲಿಲ್ಲ ಎನೋ ನೀವು ಹೋಗಿದಿರ ಅಂತ ಅಪ್ಪಿ ತಪ್ಪಿ ಕೊಟ್ಟಿದ್ದಾರೆ, ಬಾಡಿ ಹೋಗುತ್ತವೆ ಹೂಗಳು ಕಟ್ಟಣ ಇರಿ ಎಂದರು” ನಾವು ಬಿಡಲಿಲ್ಲ ನಮ್ಮ ಬಲವಂತಕ್ಕೆ “ಅದು ರಂಗನಾಥಸ್ವಾಮಿ ಬೆಟ್ಟ” ಅಂದೇ ಬಿಟ್ಟರು. ಹೋಗೋಣ!  ಹೋಗೋಣ! ಅಂದೆವು.             ಅತ್ತೆ “ಈಗ ………..” ಎಂದರೆ ನಾವು “ಹೌದು ಈಗ್ಲೆ………… ಈ ಕ್ಷಣವೇ” ಎಂದು ಅತ್ತೆಗೆ ಬಲವಂತ ಮಾಡಿದೆವು. ಇವರುಗಳು ಸುಮ್ನೆ ಇರಲ್ಲ ಎಂದು ಅಜ್ಜಿಯ ಕಡೆಗೆ ಕಣ್ಸನ್ನೆ ಮಾಡಿದರು. ಹೊ………. ಇರಲಿ ಇರಲಿ ಬನ್ನಿ ಎಂದೆವು. ನಾವು ಇನ್ಯಾವಾಗ  ಬರ್ತೀವೋ ?ಬಂದರೂ ನೀವು ಮದುವೆಯಾಗಿ ಹೋಗಿರ್ತೀರ ಬನ್ನಿ! ಬನ್ನಿ!  ಪ್ಲೀಸ್! ಪ್ಲೀಸ್! ಅಂದೆವು ಕಡೆಗೂ ಒಪ್ಪಿಗೆ ಕೊಟ್ಟೇ ಬಿಟ್ಟರು. ನಾವುಗಳು ಉತ್ಸಾಹದಿಂದ ಹೊರೆಟೆವೂ. ಹಾಗೆ ಬೆಟ್ಟದ ಕಡೆಗೆ ಹೋಗುವಾಗ ನಾವು ನಮ್ಮ ದೊಡ್ಡಜ್ಜನ ಗದ್ದೆಬಯಲು ಧಾಟಿಕೊಂಡು ಹೋಗಬೇಕಾಗಿತ್ತು ಏನೋ ಮರ ಅದರ  ಹೆಸರು ಗೊತ್ತಿಲ್ಲ  ಆ ಮರದ ಕೆಳಗೆ ಪಾರ್ಕಲ್ಲಿ ವೃತ್ತಾಕಾರದಲ್ಲಿ ಬೆಳೆದ ಸಸ್ಯಗಳಂತೆ ಪೊದೆಪೊದೆಯಾಗಿ ಕಡ್ಡಿಕಡ್ಡಿಯಾಗಿ ಕೆಲವು ಸಸ್ಯಗಳು ಬೆಳೆದಿದ್ದವು. ಅ ಗಿಡಗಳನ್ನು ನೋಡುತ್ತಲೇ “ನನಗೆ ಈ ಗ್ರೀನ್ಶೇಡ್ ಎಂದರೆ ಬಹಳ ಇಷ್ಟ” ಎಂದೆ ಇನ್ನೊಬಳು “ನನಗೆ ಆ ಡೀಪ್ ಗ್ರೀನ್” ಎಂದಳು. ಅತ್ತೆ ನಮ್ಮನ್ನು ಕರೆದು “ಇಂಗ್ಲೀಷ್ ಇಲ್ಲಲ್ಲ ಯಾವ ಗಿಡ? ಅಂತ ಹೇಳಿ” ಎಂದರು ನಮಗೆ ಗೊತ್ತಿದ್ರೆ ಅಲ್ವೆ! ಹೇಳೋದು? ಗೊತ್ತಾಗಲಿಲ್ಲ ಸ್ವಲ್ಪ ಪೊದೆಯಾಗಿ  ತಿಳಿ ಹಸಿರಿನಿಂದ ಇದ್ದ ಸಸ್ಯ ತೋರಿ ಇದು ಹರಿಶಿಣ ಎಂದರು. ಚೂಪಾದ ಗಾಡ ಹಸಿರಿನ ಚೂಪಾದ ಎಲೆ ತೋರಿಸಿ ಇದು ಶುಂಠಿ ಎಂದರು.             ಅಷ್ಟರಲ್ಲಿ ಅತ್ತೆಗೆ ನಾವು ಅದನ್ನು ನೋಡುತ್ತಿರುವ ಕ್ರಮ ಕಂಡು ಅದನ್ನು ಕಿತ್ತು ತೋರಿಸಬೇಕೆನಿಸಿತು. ಕೀಳಲು ಮುಂದಾದರೆ ಬುಡ ಗಟ್ಟಿಯಾಗಿತ್ತು. ಆಗವರು “ನಿಮ್ಮಜ್ಜಿ ಹತ್ತಿರ ಹೋಗಿ ಕೂಡುಗೋಲು ತೆಗೆದುಕೊಂಡು ಬನ್ನಿ” ಎಂದರು. ಕಣ್ಣು ಮುಚ್ಚಿ ಬಿಡುವುದರಲ್ಲಿ ತಂದು ಕೊಟ್ಟೆವು. ಅತ್ತೆ ಚೂಪಾದ ಕೂಡಗೋಲಿನಿಂದ ನಯವಾಗಿ ಗಿಡಗಳಿಗೆ ಹಾನಿಯಾಗದಂತೆ ಹರಿಶಿಣ, ಶುಂಠಿಯನ್ನು ತೆಗೆದು ತೋರಿಸಿದರು. “ಇನ್ನು ಸ್ವಲ್ಪ ತೋರಿಸಿ” ಎಂದಾಗ “ನಿಮ್ಮ ದೊಡ್ಡಜ್ಜಿ ಬಂದರೆ ಕೋಲಲ್ಲೇ ತೋರಿಸ್ತಾರೆ” ಅಂದರು. ಆದರೆ ಯಾಕೋ ಏನೋ ಅವರ ಮನಸ್ಸಿನಲ್ಲಿ ಎನನ್ನಿಸಿತೋ ಊಟ ಖಾಲಿಯಾಗಿ ತೊಳೆದು ಇಟ್ಟಿದ್ದೀವಲ್ಲ ಆ ಬಾಕ್ಸ್ ತೆಗೆದುಕೊಂಡು ಬನ್ನಿ ಎಂದರು. ನಾವೆಲ್ಲ ಹೊರೆಟೆವು. ಅತ್ತೆ ನಮ್ಮನ್ನು ಕಂಡು “ಈ ಮೆರವಣಿಗೆ ಬೇಕಾ ಯಾರದರು ಒಬ್ಬರು ಹೋಗಿ” ಅಂದರು. ಆ ಮಾತಿನ ಧಾಟಿಗೆ ಅದರಿ ಅಲ್ಲಾಡಿದಂತೆ ನಾವಿದ್ದರೂ ನಮಗೆ ಮನಸ್ಸಿನಲ್ಲಿ ತಡೆಯಲಾಗದ ನಗು ನಗು. ಅತ್ತೆ ಹರಿಶಿಣವನ್ನು, ಶುಂಠಿಯನ್ನು ಬಗೆದು ಬಗೆದು ಬಾಕ್ಸ್ನಲ್ಲಿ ತುಂಬಿಸುತ್ತಿದ್ದರೆ  ನಮಗೆ ನಗು ಮತ್ತು ಹೆದರಿಕೆ ಒಟ್ಟೊಟ್ಟಿಗೆ ಆಗುತ್ತಿತ್ತು. ಮರು ಮಾತನಾಡದೆ ಅತ್ತೆ ಬಾಕ್ಸ್ ತುಂಬಿದ ಮೇಲೆ ಎತ್ಲಾರದಂತೆ ತೆಗೆದುಕೊಂಡು ಹೋಗಿ ಅಜ್ಜಿಯ ಬಳಿ ಕುಕ್ಕರಿಸಿ ಬಂದರು.             ಹಾಗೆ ನಮ್ಮ ಬಳಿಗೆ ಬಂದವರೆ “ಹರಿಶಿಣ ಫ್ರೆಶ್ ಆಗಿದೆ ಹಾಲಲ್ಲಿ ಅರೆದು ಹಚ್ಚಿಕೊಂಡರೆ ಮುಖ  glove ಆಗುತ್ತೆ  ಗೊತ್ತ” ಎಂದರು. “ಶುಂಠಿನೂ ಹಾಗೆ ಮಾಡಬೇಕ?” ಎಂದು ಇನ್ನೊಬ್ಬರಿಂದ ಮರು ಪ್ರಶ್ನೆ ಬಂತು. ಅತ್ತೆ ಅದೆಲ್ಲ ಇರಲಿ ಬೆಟ್ಟಕ್ಕೆ ಹೋಗ್ಬೇಕೋ ಬೇಡ್ವೋ ಎಂದರು. ಹೂ ಸರಿ ಸರಿ ಎಂದು ಬೇಗನೆಹೆಜ್ಜೆ ಹಾಕಿದೆವು. ನಮಗೆ  ಆ ಗದ್ದೆ ಬಯಲಿನಲ್ಲಿ ತೆಂಗಿನ ಅಡಿಕೆ ತೋಟಗಳ ನಡುವೆ ಅಜ್ಜನ ಮನೆಗೆ ಬಂದ ಕಾರಣಕ್ಕೆ ಹಾಕಿಕೊಂಡಿರುವ ಕಾಲುಗೆಜ್ಜೆ, ಪುಟ್ಟ ಹ್ಯಾಂಗಿಗ್ಸೆಗಳನ್ನು ಕುಣಿಸಿಕೊಂಡು ಅಲುಗಾಡಿಸಿಕೊಂಡು ವೇಲ್ಗಳನ್ನು ಮತ್ತೆ ಮತ್ತೆ ಸರಿಮಡಿಕೊಂಡು ಹೋಗುವುದೇ ಸಂಭ್ರಮವಾಗಿತ್ತು. ದೂರಕ್ಕೆ ಚಿಕ್ಕದಾಗಿ ಕಾಣುತ್ತಿದ್ದ ಅ ಬೆಟ್ಟ ಹತ್ತಿರ ಹೋದಂತೆ ದೊಡ್ಡದು, ದೊಡ್ಡದು ಅನ್ನಿಸುತ್ತಿತ್ತು.             ಬೇಗ ಬೇಗ ಹತ್ತಿ ಮನಗೆ ಹೋಗಿ ಮತ್ತೆ ಕೆಲಸ ಇದೆ ಧನುರ್ಮಾಸದ ಪೂಜೆ ಬೇರೆ ಬನ್ನಿ ಎಂದರು. ಹೊರಟಾಗ ಇದ್ದ ಖುಷಿ ಬೆಟ್ಟ ಹತ್ತುವಾಗ ಇರಲಿಲ್ಲ. ಆದರೂ ಹೇಗೊ ಸಾಹಸದ ದಂಡಯಾತ್ರೆ ಎಂಬಂತೆ ಗುಡಿಯ ಮುಂಭಾಗ ತಲುಪಿದೆವು. ಬಾಗಿಲು ಕಡೆ ನೋಡಿದರೆ ಎರಡೆರಡು ಬೀಗ ಹಾಕಿದ್ದರು. ಅತ್ತೆ ಇದೇ ಬೆಟ್ಟ  ರಂಗನಾಥಸ್ವಾಮಿ ಬೆಟ್ಟ ನೋಡಿದ್ರಾ ಇಳಿರಿ ಎಂದರು. ನಮಗೆ ಕುತೂಹಲ ಗರ್ಭಗುಡಿಯ ಸುತ್ತು ಬಂದರೆ ಗುಡಿಯ ಪೂರ್ವಕ್ಕೆ ನಮ್ಮ ಹಳ್ಳಿ ಹುಲಿಕಲ್ ಕಾಣುತ್ತಿತ್ತು. ಜೊತೆಗೆ ಶ್ರೀನಿವಾಸ ದೇವಾಲಯದ ರಾಜ ಗೋಪುರ. ಸುಮ್ಮನೆ ಎಲ್ಲಿ? ಎಲ್ಲಿ? ಹುಡುಕೋಣ! ಎಂದು ನಿಂತೆವು. ಅತ್ತೆ ಬಿಡಲಿಲ್ಲ ಈಗ ಕೋಲು ತೆಗೆದುಕೊಂಡು ತೋರಿಸುತ್ತೇನೆ ಎಂದರು. ನಮ್ಮಗಲ್ಲಿ ಕಂಡಿದ್ದು ಕಾಗೆಗಳು ತಿನ್ನಲಾರದ ಮೆಣಸಿನ ಕಾಯಿ, ಕರೀಬೇವು, ಕಡಲೇಬೀಜ, ಉದ್ದನೆಯ ಕೊಬ್ಬರಿ ತುರಿ ಇತ್ಯಾದಿ ಎಲ್ಲ ಪುಳಿಯೋಗರೆಯ ಅವಶೇಷ.             ಹತ್ತುವಾಗ ಆದ ಕಷ್ಟ ಇಳಿಯುವಾಗ ಆಗಲಿಲ್ಲ. ಬೇಗನೆ ಬಂದರೂ ಮುಸ್ಸಂಜೆ ಅವರಿಸಿದ ಕಾರಣ ಅಜ್ಜಿ ನಮಗಲ್ಲ ಅತ್ತೆಯನ್ನು ಬಯ್ಯಲು ಪ್ರಾರಂಭಿಸಿದರು. “ನೀನು ಅವರುಗಳ ಜೊತೆ ಕುಣಿಯುತ್ತಾ ಇದ್ದೀಯಲ್ಲ”

ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ Read Post »

ಇತರೆ, ಜೀವನ

ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧ

ಪ್ರಸ್ತುತ       ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧದ ಕುರಿತು ಮಹಾತ್ಮ ಗಾಂಧೀಜಿ ಡಾ.ಎಸ್.ಬಿ. ಬಸೆಟ್ಟಿ ಮಹಾತ್ಮ ಗಾಂಧೀಜಿಯವರು ಜನರು ಬಯಸುವ ಹಾನಿಕಾರಕ ಮತ್ತು ಅನಾವಶ್ಯಕ ಮಾದಕ ವಸ್ತುಗಳನ್ನು  ವಿರೋಧಿಸುತ್ತಿದ್ದರು. ಗಾಂಧೀಜಿಯವರು ತಂಬಾಕು ಮತ್ತು ಮಧ್ಯವನ್ನು ಜನರ ಆರೋಗ್ಯಕ್ಕೆ ಅತ್ಯಂತ ಹಾನಿ ಕಾರಕ ವಸ್ತುಗಳೆಂದು ಪರಿಗಣಿಸಿದ್ದರು ಜೊತೆಗೇ ಚಹಾ ಮತ್ತು ಕಾಫಿಯನ್ನು ಕೂಡಾ ಅನಾವಶ್ಯಕ ವಸ್ತುಗಳೆಂದು ಭಾವಿಸಿದ್ದರು. “ಬೆಂಕಿ ದೇಹವನ್ನು ನಾಶ ಮಾಡಿದರೆ, ಮದ್ಯ ಮತ್ತು ಮಾದಕ ವಸ್ತು ದೇಹ  ಮತ್ತು ಆತ್ಮ ಎರಡನ್ನೂ ನಾಶ ಮಾಡುತ್ತದೆ” ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದಾರೆ. ವೈದ್ಯರು, ಮದ್ಯಪಾನಿಯಗಳು ಮತ್ತು ಅಫೀಮು ವ್ಯಸನಿಗಳನ್ನು ಈ ಶಾಪದಿಂದ ಹೊರತರುವ ದಾರಿಗಳನ್ನು ಕಂಡುಹಿಡಿಯಬೇಕು. ಪ್ರೀತಿಯಿಂದ ಈ ವ್ಯಸನಿಗಳನ್ನು ತಮ್ಮ ಮಾತು ಕೇಳುವಂತೆ ಮಾಡಿ ಅದರ ಸೇವನೆಯಿಂದಾಗುವ ಕೆಡಕನ್ನು ಅವರಿಗೆ ಮನದಟ್ಟು ಮಾಡಿ ಕೆಟ್ಟ ಚಟವನ್ನು ಬಿಡುವಂತೆ ಮನವರಿಕೆ ಮಾಡಬೇಕು ಎಂದಿದ್ದರು. ಮಾದಕ ವಸ್ತುಗಳಲ್ಲಿ ಹೊಗೆಸೊಪ್ಪು, ಭಂಗಿ, ಗಾಂಜಾ, ಅಫೀಮು, ಬ್ರಾಂದಿ, ವಿಸ್ಕಿ, ರಮ್ಮ, ಜಿನ್, ವೈನ್, ಶೇಂದಿ, ಸಾರಾಯಿ ಹೀಗೆ ಇನ್ನೂ ಹತ್ತು ಹಲವಾರು ಬಗೆಯ ವಸ್ತುಗಳು ಸೇರಿವೆ. ಇವುಗಳ ಅವಶ್ಯಕತೆ ನಮ್ಮ ಶರೀರಕ್ಕೆ ಖಂಡಿತಾ ಇಲ್ಲ. ಇವುಗಳಿಂದ ಶರೀರದ ಆರೋಗ್ಯ ಹಾಳಾಗಿ ಆರ್ಥಿಕವಾಗಿ ಸಂಸಾರ  ಸರ್ವನಾಶವಾಗುತ್ತದೆ. ಅಗೌರವಯುತ ಬಾಳು ದಕ್ಷತೆಗೆ ಕುಂದು ಮತ್ತು ದೇಶದ ಗೌರವಕ್ಕೆ ಚ್ಯುತಿ ತರುತ್ತದೆ. ಇದಕ್ಕೆ ದಾಸನಾದವನು ತನ್ನ ಮತ್ತು ಸಂಸಾರದ ಮಾನ ಮರ್ಯಾದೆಯನ್ನು  ಬೀದಿ ಬೀದಿಗಳಲ್ಲಿ ಹರಾಜು ಹಾಕುತ್ತಾನೆ.  ಈ ಮಾದಕ ವಸ್ತುಗಳನ್ನು ದೇಶದಿಂದ ಸಂಪೂರ್ಣವಾಗಿ ಪ್ರತಿಬಂಧಿಸಬೇಕೆಂಬುದು ಗಾಂಧೀಜಿಯವರ ಅದಮ್ಯ ಕನಸು. ಆದರೆ ಇಂದಿನ ಸರಕಾರಗಳು ಬದುಕಿರುವುದೇ ಅಬಕಾರಿ ಬಾಬ್ತಿನ ವರಮಾನದಿಂದ ಯಾವ ಪಕ್ಷದ ಸರ್ಕಾರಗಳಿದ್ದರೂ ಇದರ ಬಗೆ ಗಮನ ಹರಿಸಲು ಹಿಂಜರಿಯುತ್ತವೆ. ಗಾಂಧೀಜಿಯವರ ಪರಿಕಲ್ಪನೆಯ ಸಂಪೂರ್ಣ ಪಾನನಿಷೇದ ಎಂದೆಂದಿಗೂ ಸಾಧ್ಯವಾಗದಿರಬಹುದು. ಆದರೆ ಗುಜರಾತ್ ನಂತರ ಇತ್ತೀಚಿನ ವರ್ಷಗಳಲ್ಲಿ ಬಿಹಾರದಲ್ಲಿ   ಪಾನ ನಿಷೇದ ಜಾರಿಗೆ ಬಂದಿದೆ. ತಮಿಳುನಾಡು ಮೊದಲು ನಂತರ ಕರ್ನಾಟಕ ರಾಜ್ಯಗಳು ಸರಾಯಿ ನಿಷೇಧಿಸಿದವು. ಆದರೆ ಆ ನಂತರ ಹೆಚ್ಚೆಚ್ಚು ವೈನಶಾಪ ತೆರೆಯಲು ಅನುಮತಿ ನೀಡಿದವು. ಒಂದು ಅವಿವೇಕದ ವಾದವನ್ನು ಪ್ರತಿಪಾದಿಸುವವರು ಇದ್ದಾರೆ.  ಸ್ವಲ್ಪ (ಅತೀಕಡಿಮೆ) ಮಧ್ಯಪಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಸರ್ವರೋಗಕ್ಕೂ ಸರಾಯಿ ಮದ್ದು ಎನ್ನುತ್ತಾರೆ. ಇಂದಿನ ಜಗತ್ತಿಗೆ ಸವಾಲಾಗಿರುವ ಮಹಾಮಾರಿ ಕೋವಿಡ-೧೯ ರೋಗಕ್ಕೂ ಸರಾಯಿ ಮದ್ದು ಎನ್ನುವವರಿದ್ದಾರೆ. ಆದರೆ ಈ ವಾದಕ್ಕೆ ಹುರುಳಿಲ್ಲ. ಪಾರ್ಸಿ ಜನಾಂಗದವರು ಹೆಂಡ ಕುಡಿಯುವುದನ್ನು ಒಳ್ಳೆಯದೆಂದು ಪ್ರತಿಪಾದಿಸುತ್ತಿದ್ದರು. ಇದು ಮಾದಕ ವಸ್ತುವಾದರೂ ಆಹಾರವೂ ಸಹ ಆಗಬಲ್ಲದು ಎಂದು ಹೇಳುತ್ತಿದ್ದರು. ಆದರೆ ತಜ್ಞರ ಪ್ರಕಾರ ಇದು ಸತ್ಯವಲ್ಲ. ‘ನೀರಾ’ ಭಟ್ಟಿ ಇಳಿಸಿದ ತಕ್ಷಣ ಮದ್ಯವಲ್ಲ. ನಿಜ ಅದು ಒಂದು ಆಹಾರ. ಇದನ್ನು ಕುಡಿದರೆ ಮಲಬದ್ಧತೆ ಇರುವುದಿಲ್ಲವೆಂದು ಕೇಳಿ ಗಾಂಧೀಜಿಯವರೇ ಕೆಲವು ದಿನಗಳ ಕಾಲ  ‘ನೀರಾ’ ಕುಡಿಯಲು ಪ್ರಾರಂಭಿಸಿದಾಗ ಅವರಿಗೆ ಅದರ ಉಪಯುಕ್ತತೆಯ ಅರಿವಾಗುತ್ತದೆ. ಪಾಮ್ ಜಾತಿಗೆ ಸೇರಿದ ತೆಂಗು, ಈಚಲು, ಖರ್ಜೂರ ಇತ್ಯಾದಿ ಇವುಗಳಲ್ಲಿ ಕಾಂಡ ಕೊರೆದು ತೆಗೆಯುವ ಬಣ್ಣವಿಲ್ಲದ ನೀರಿನಂತಹ ರಸಕ್ಕೆ ಅಥವಾ ಹಾಲಿಗೆ ‘ನೀರಾ’ ಎಂದು ಕರೆಯುತ್ತಾರೆ. ತೆಗೆದ ಕೆಲವೇ ನಿಮಿಷಗಳಲ್ಲಿ ಈ ‘ನೀರಾ’ ಹುಳಿ ಬಂದು ಜನರಿಗೆ ಅಮಲೇರಿಸಿ ಹುಚ್ಚೆಬ್ಬಿಸುತ್ತದೆ. ಮಹಾತ್ಮಾ ಗಾಂಧೀಜಿಯವರು ಮಧ್ಯಪಾನವನ್ನು ಒಂದು ಘೋರ ಖಾಯಿಲೆ ಎಂಬುದಾಗಿ ಕರೆಯುತ್ತಾರೆ. ಆದರೆ ವೈದ್ಯಕೀಯ ಉದ್ದೇಶಕ್ಕೆ ಮದ್ಯ ಬಳಸುವುದನ್ನು ಗಾಂಧೀಜಿಯವರು ಆಕ್ಷೇಪಿಸುವುದಿಲ್ಲ. ಕುಡಿತದ ಬಗ್ಗೆ ಗಾಂಧೀಜಿಯವರು ಹೀಗೆ ಹೇಳಿದ್ದಾರೆ, “ಕುಡಿತ ಎನ್ನುವುದು ದುರಾಚಾರ ಎನ್ನುವುದಕ್ಕಿಂತಲೂ ಹೆಚ್ಚಾಗಿ ಅದನ್ನು ಕಾಯಿಲೆ ಎಂದು ಕರೆಯಬಹುದು. ಬಹಳ ಮಂದಿ ಸಾಧ್ಯವಾಗುವುದಾದರೆ ಸಂತೋಷದಿಂದ ಕುಡಿತವನ್ನು ಬಿಟ್ಟುಬಿಡುವರು ಎಂದು ನನಗೆ ಗೊತ್ತಿದೆ. ಪ್ರಲೋಭನೆಗೆ ಒಳಗಾಗಿರುವ ಕೆಲವರು ಅದನ್ನು ದೂರವಿರಿಸಬಹುದು ಎಂದು ನನಗೆ ಗೊತ್ತಿದೆ. ನಿರ್ದಿಷ್ಟ ಪ್ರಸಂಗದಲ್ಲಿ ಆ ಪ್ರಲೋಭನೆಯನ್ನು ದೂರವಿರಿಸುವವರು  ಕಳ್ಳತನದಲ್ಲಿ ಕುಡಿಯುತ್ತಾರೆ ಎಂದು ನನಗೆ ಗೊತ್ತಿದೆ. ಆದ್ದರಿಂದ ಪ್ರಲೋಭನೆಯನ್ನು ಕಿತ್ತು ಹಾಕುವುದು ತಪ್ಪು ಎಂದು ನಾನು ಭಾವಿಸುವುದಿಲ್ಲ. ಕಾಯಿಲೆಯಾಗಿರುವ ವ್ಯಕ್ತಿಗಳು ಅವರಷ್ಟಕ್ಕೆ ಅವರೇ ಸಹಾಯ ಮಾಡಿಕೊಳ್ಳಬೇಕು”.( ಯಂಗ ಇಂಡಿಯಾ – ೧೨-೧-೧೯೨೮) ಗಾಂಧೀಜಿಯವರು “ನಾನು ನನ್ನನ್ನು ಶ್ರಮಿಕರ ಜತೆಯಲ್ಲಿ ಗುರುತಿಸಿಕೊಂಡಿರುವುದರಿಂದ ಕುಡಿತದ ಚಟಕ್ಕೆ ಅಂಟಿಕೊಂಡಿರುವ ಶ್ರಮಿಕರ ಮನೆಗಳಿಗೆ ಕುಡಿತವು ಎಂತಹ ಹಾನಿಯನ್ನುಂಟು ಮಾಡಿದೆ ಎಂದು ನನಗೆ ಗೊತ್ತಿದೆ. ಅವರಿಗೆ ಸುಲಭವಾಗಿ ದೊರೆಯುವಂತಿಲ್ಲದಿದ್ದರೆ ಅವರು ಮಧ್ಯವನ್ನು ಮುಟ್ಟುವುದಿಲ್ಲ ಎಂದು ನನಗೆ ಗೊತ್ತಿದೆ. ಅನೇಕ ಪ್ರಸಂಗಗಳಲ್ಲಿ ಕುಡುಕರೇ ಸ್ವತಃ ಪಾನನಿರೋಧಕ್ಕೆ ಕೋರಿಕೆ ಸಲ್ಲಿಸಿದ್ದಾರೆ ಎಂಬುದಕ್ಕೆ ನಮ್ಮ ಬಳಿ ಸಮಕಾಲೀನ ಸಾಕ್ಷ್ಯಗಳಿವೆ” (ಹರಿಜನ ಪತ್ರಿಕೆ -೩-೬-೧೯೩೯)  ಎಂದು ಹೇಳಿದ್ದಾರೆ. “ಆರ್ಥಿಕ ನಷ್ಟಕ್ಕಿಂತ ಯಾವಾಗಲೂ ನೈತಿಕ ನಷ್ಟ ಹೆಚ್ಚಿನದು” ಎಂಬುದು ಗಾಂಧೀಜಿಯವರ ವಾದ. ಏಕೆಂದರೆ ಅವರು ಹೀಗೆ “ಕುಡಿತದ ಚಟವು ಮನುಷ್ಯನ ಆತ್ಮವನ್ನು ಹಾಳು ಮಾಡುತ್ತದೆ ಮತ್ತು ಅವನನ್ನು ಮೃಗವಾಗಿ ಪರಿವರ್ತಿಸುತ್ತದೆ. ಹೆಂಡತಿ, ತಾಯಿ ಮತ್ತು ಸಹೋದರಿಯ ನಡುವಣ ಬೇಧವನ್ನು ಗ್ರಹಿಸಿಕೊಳ್ಳಲಾರದಷ್ಟು ಅಸಮರ್ಥವಾಗುತ್ತಾನೆ. ಮಧ್ಯದ ಪ್ರಭಾವದಡಿಯಲ್ಲಿ ಈ ಬೇಧವನ್ನು ಮರೆಯುವವರನ್ನು ನಾನು ಕಂಡಿದ್ದೇನೆ. ಮತ್ತು ಅಮಲೇರದೆ ಶಾಂತಚಿತ್ತನಾಗಿರುವ ಸಮಯದಲ್ಲಿ ತನ್ನ ಹೀನ ಕೃತ್ಯಗಳಿಗೆ ನಾಚಿಕೆಪಟ್ಟುಕೊಳ್ಳುತ್ತಾನೆ. ಆದುದರಿಂದ ಕುಡಿತ ಅತ್ಯಂತ ನೀಚತನದ ಕೆಲಸ” (ಹರಿಜನ ಪತ್ರಿಕೆ- ೯-೩-೧೯೩೪) ಎಂದಿದ್ದಾರೆ. ಕುಡುಕರ ಪತ್ನಿಯರ ಬಗ್ಗೆ ಗಾಂಧೀಜಿಯವರು ಕನಿಕರ ವ್ಯಕ್ತಪಡಿಸುತ್ತಾರೆ. ಅವರು ಕೊಡುವ ಎರಡು ಉದಾಹರಣೆಗಳು ಕುಡಿತದ ದುಷ್ಪರಿಣಾಮಗಳನ್ನು ತಿಳಿಸುತ್ತದೆ. ಹಡುಗುಗಳ ಕ್ಯಾಪ್ಟನ್ಗಳು ಪಾನಮತ್ತರಾಗಿದ್ದಲ್ಲಿ. ಅವರಿಗೆ ಯಾವ ರೀತಿಯಿಂದಲೂ ಹಡಗನ್ನು ನಿಯಂತ್ರಿಸಲು ಸಾಧ್ಯವಾಗದು. ಅವರ ಕುಡಿತದ ಅಮಲು ಇಳಿದು ಅವರು ಯಥಾಸ್ಥಿತಿಗೆ ಬಂದ ನಂತರ ಮಾತ್ರ ಸಾಧ್ಯವಾಗಬಹುದು. ಅದೇ ರೀತಿ ಓರ್ವ ವಕೀಲ ಪಾನಮತ್ತನಾಗಿ ನಡೆಯಲಾಗದೆ ಚರಂಡಿಯಲ್ಲಿ ಉರುಳಿ ಬಿದ್ದಲ್ಲಿ ಪೋಲಿಸರು ಆತನನ್ನು ಹೊತ್ತೊಯ್ದು ಆತನ ಮನೆ ತಲುಪಿಸಬೇಕಾಗಬಹುದು. “ಕುಡಿತದಿಂದ ಸರ್ವನಾಶ” ಕುಡಿತವು ಆತನ ಸಂಸಾರದ ಮತ್ತು ಸಮಾಜದ ಸ್ವಾಸ್ಥವನ್ನು ಕೆಡಿಸುತ್ತದೆ. ಗಾಂಧೀಜಿಯವರು ಹೀಗೆ “ಕುಡಿತ ಮತ್ತು ಮಾದಕವಸ್ತುವಿನ ಚಟದ ಕೆಡಕು ಅನೇಕ ರೀತಿಗಳಲ್ಲಿ ಮಲೇರಿಯಾ ಮತ್ತು ಅದರಂತಹ ಕಾಯಿಲೆಗಳಿಂದ ಉಂಟಾಗುವ ಕೆಡುಕಿಗಿಂತಲೂ ಅಪಾರವಾಗಿ ಹಾನಿಯನ್ನುಂಟು ಮಾಡುವುದಾಗಿರುತ್ತದೆ. ಏಕೆಂದರೆ ಕಡೆಯದು ದೇಹಕ್ಕೆ ಅಪಾಯವನ್ನುಂಟು ಮಾಡಿದರೆ ಕುಡಿತ ಮತ್ತು ಮಾದಕ ವಸ್ತುಗಳು ದೇಹ ಮತ್ತು ಆತ್ಮ ಜೀವ ಎರಡನ್ನು ಹಾಳು ಮಾಡುತ್ತದೆ” (ಯಂಗ್ ಇಂಡಿಯಾ – ೩-೩-೧೯೨೭)  ಎಂದಿದ್ದಾರೆ. ದೇಶ ದಿವಾಳಿಯಾದರೂ ಚಿಂತೆಯಿಲ್ಲ ನಮ್ಮ ಮಧ್ಯೆ ಸಾವಿರಾರು ಮಂದಿ ಕುಡುಕರು ಇರುವ ಸಮಾಜವನ್ನು ನೋಡಲು ನಾನು ಇಷ್ಟಪಡುವದಿಲ್ಲವೆನುತ್ತಿದ್ದರು. ಅಬಕಾರಿ ಸುಂಕದಿಂದ ಬರುವ ಆದಾಯದಿಂದ ನಾವು ಶಿಕ್ಷಣ ಕೊಡುತ್ತೇವೆಂದಾದರೆ ಅಂತಹ ಶಿಕ್ಷಣವೇ ನಮಗೆ ಬೇಡವೆನ್ನುತ್ತಿದ್ದರು. ಗಾಂಧೀಜಿಯವರು ಹೀಗೆ ಹೇಳಿದ್ದಾರೆ, “ಕುಡಿತದ ಚಟಕ್ಕೆ ಬಲಿಯಾಗಿರುವ ರಾಷ್ಟ್ರದ ಮುಖದಲ್ಲಿ ವಿನಾಶವಲ್ಲದೇ ಬೇರೆನೂ ಕಣ್ಣಿಗೆ ಹೊಳೆಯುವಂತಿರುವುದಿಲ್ಲ. ಆ ಚಟದ ಮೂಲಕ ಸಾಮ್ರಾಜ್ಯಗಳು ಹಾಳಾಗಿವೆ ಎಂದು ಇತಿಹಾಸ ದಾಖಲಿಸಿದೆ. ಶ್ರೀ ಕೃಷ್ಣ ಸೇರಿದ್ದ ಪ್ರಸಿದ್ಧ ಸಮುದಾಯವೊಂದು ಆದ್ದರಿಂದ ಪತನಗೊಂಡಿತು ಎಂದು ಭಾರತದ ಇತಿಹಾಸದಲ್ಲಿ ದಾಖಲಾಗಿದೆ. ರೋಮ್ನ ಪತನಕ್ಕೆ ನೇರವಾಗಿ   ಈ ಭಯಾನಕ ಮಧ್ಯವೇ ಕಾರಣವಾಗಿತು”್ತ.( ಯಂಗ್ ಇಂಡಿಯಾ- ೪-೪-೧೯೨೯) ಗಾಂಧೀಜಿಯವರು ಹೀಗೆ ಹೇಳಿದ್ದಾರೆ, ‘ಇಡೀ ಭಾರತಕ್ಕೆ ನನ್ನನ್ನು ಒಂದು ಗಂಟೆ ಕಾಲ ಸರ್ವಾಧಿಕಾರಿಯೆಂದು ನೇಮಿಸಿದರೆ ನಾನು ಮಾಡಲಿರುವ ಮೊದಲ ಕೆಲಸವೆಂದರೆ ಪರಿಹಾರ ನೀಡದೇ ಎಲ್ಲ ಮಧ್ಯದಂಗಡಿಗಳನ್ನು ಮುಚ್ಚಿಸುವುದು ಮತ್ತು ಖಾರಕಾನೆ ಮಾಲೀಕರುಗಳಿಗೆ ಅವರ ಕೆಲಸಗಾರರುಗಳಿಗೆ ಮಾನವೀಯ ಸೌಲಭ್ಯಗಳನ್ನು ಒದಗಿಸಲು ಬಲವಂತಪಡಿಸುವುದು ಮತ್ತು ಈ ಶ್ರಮಿಕರುಗಳು ಪರಿಶುದ್ಧ ಪಾನೀಯಗಳನ್ನು ಮತ್ತು ಮನರಂಜನೆಗಳನ್ನು ಪಡೆಯುವಂತಹ ಆಹಾರ ಪಾನೀಯಗಳ ಮತ್ತು ಮನರಂಜನಾ ರೂಮುಗಳನ್ನು ತೆರೆಯುವಂತೆ ಸೂಚನೆ/ಸಲಹೆ ನೀಡುತ್ತಾರೆ’ .(ಯಂಗ್ ಇಂಡಿಯಾ-೨೫-೬-೧೯೩೧) ರಷ್ಯಾ ದೇಶದ ಲಿಯೋ ಟಾಲ್ಸ್ಟಾಯ್ ಎಂಬ ಮಹಾಶಯ ತಾನೇ ಈ ಚಟಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಬಲಿಯಾಗಿ ನಂತರ ತ್ಯಜಿಸಿ, ಹೊಗೆಸೊಪ್ಪಿನ ಯಾವುದೇ ರೂಪದ ಸೇವನೆ ಎಲ್ಲಾ ಚಟಗಳಿ ಗಿಂತ ಅತ್ಯಂತ ದುಷ್ಟ ಚಟವೆಂದಿದ್ದನು. ಈ ಚಟ ‘ದುಶ್ಚಟಗಳ ರಾಜ’ ‘ತಂಬಾಕು ಅತ್ಯಂತ ಹೀನ ಮಾದಕ ವಸ್ತು ಎಂದು ಆ ಮಹಾನುಭಾವ ಹೇಳಿದ್ದ. ಸಾಮಾನ್ಯವಾಗಿ ಹದಿಹರೆಯದವರು ಎರಡು ರೀತಿಯ ದುಶ್ಚಟಗಳಿಗೆ ಸಿಲುಕಿಕೊಳ್ಳುತ್ತಾರೆ. ಕೆಲವರು ಸಿಗರೇಟ, ಮದ್ಯಪಾನದ ಸುಳಿಗೆ ಬಿದ್ದರೆ, ಇನ್ನೂ ಕೆಲವರು ಮಾದಕ ದ್ರವ್ಯಗಳ ದಾಸರಾಗುತ್ತಾರೆ. ಸಿಗರೇಟ, ಮದ್ಯಪಾನದ ಸುಳಿಯಲ್ಲಿ ಬಿದ್ದವರು ಚಟವನ್ನು ತುಂಬ ದಿನ ರಹಸ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಸಿಗರೇಟ ಸೇದುವುದು ಒಂದು ಬೇಜವಾಬ್ದಾರಿಯುತ ವರ್ತನೆಯ ಪ್ರತೀಕ ಬಸ್ಸ್,  ರೈಲು, ಟ್ಯಾಂಗಾ, ಮನೆಯಲ್ಲಿ ಅಕ್ಕಪಕ್ಕದವರ ನಿಂದನೆಯನ್ನು ಲೆಕ್ಕಿಸದೇ ಮಾಡುವ ಒಂದು ಅನಾಗರಿಕ ವರ್ತನೆ ಹೊಗೆಸೊಪ್ಪು ಪಾತಕ ಕೃತ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆಂದು ತಜ್ಞರು ಸಾಬೀತುಪಡಿಸಿದ್ದಾರೆ. ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇದಿಸಿದ್ದರೂ. ಸಿಗರೇಟ ಸೇವನೆ ಕಡಿಮೆಯಾಗಿಲ್ಲ. ಧೂಮಪಾನ ಮಾಡುವವನು ಪ್ರಜ್ಞೆ ಇಲ್ಲದೆ ಸುತ್ತಲೂ ಹೊಗೆ ಮತ್ತು ವಾಸನೆ ಹರಡಿ ಪಕ್ಕದವರಿಗೆ ಅಸಹ್ಯ ಹುಟ್ಟಿಸುತ್ತಾನೆ. ಆದರೆ ಮಾದಕ ದ್ರವ್ಯದ  ವ್ಯಸನ ಹಾಗಲ್ಲ. ಮಕ್ಕಳು ಡ್ರಗ್ ದಾಸರಾಗಿ ಅತಿರೇಕಕ್ಕೆ ಹೋಗುವವರೆಗೂ ಪೋಷಕರಿಗೆ ತಮ್ಮ ಮಗ ಮಾದಕ ವ್ಯಸನಿ ಎಂಬ ಸಣ್ಣ ಸುಳಿವು ಕೂಡ ಸಿಕ್ಕಿರುವುದಿಲ್ಲ. ಸೈಲೆಂಟ ಕಿಲ್ಲರ್ನಂತೆ ತನ್ನ ಚಟಕ್ಕೆ ಬಿದ್ದವರನ್ನು ಅಪೋಶನ ತೆಗೆದುಕೊಂಡಿರುತ್ತದೆ. ಹಾಗಾಗಿ ಯುವಸಮುದಾಯದ ಪಾಲಿಗೆ ಮಾದಕದ್ರವ್ಯ ಯಾವತ್ತಿಗೂ ಅತಿಘೋರ ಶಾಪವಿದ್ದಂತೆ. ವಾಸ್ತವವಾಗಿ ಮದ್ದು ಎಂದರೇನು? ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಯಾವುದೇ ಪದಾರ್ಥವನ್ನು ಜೀವಿಯೊಂದು ಸೇವಿಸಿದಾಗ ಅದರ ಸ್ವಾಭಾವಿಕ ಕ್ರಿಯೆಗಳಲ್ಲಿ ವ್ಯತ್ಯಾಸ ಉಂಟುಮಾಡುವ ಸಾಮರ್ಥ್ಯ ಹೊಂದಿದ್ದರೆ. ಅದನ್ನು ಮದ್ದು ಎಂದು ಕರೆಯಲಾಗುತ್ತದೆ. ‘ನಾರ್ಕೋಟಿಕ್ ಡ್ರಗ್ಸ್’ ಇಂದು ಬಹಳಷ್ಟು ಚರ್ಚೆಗೆ ಗ್ರಾಸವಾಗುತ್ತಿರುವ ವಿಷಯವಾಗುತ್ತಿವೆ. ಸುಂಕದ ಇಲಾಖೆಯವರು ವಿಮಾನ ನಿಲ್ದಾಣಗಳಲ್ಲಿ ಅವುಗಳನ್ನು ವಶಪಡಿಸಿಕೊಂಡ ಸುದ್ಧಿ ಸಮಾಚಾರಗಳನ್ನು ಪತ್ರಿಕೆಗಳಲ್ಲಿ ಆಗಾಗ್ಗೆ ಓದುತ್ತೇವೆ. ಹೆಚ್ಚೆÀಚ್ಚ್ಚು ಯುವಜನರು ಅದರ ಕಪಿಮುಷ್ಟಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಮದ್ದುಗಳ ಕಳ್ಳ ಸಾಗಾಣಿಕೆ ಮತ್ತು ಅವುಗಳ ದುರ್ಬಳಕೆಯ ಅವಳಿ ಸಮಸ್ಯೆ ಇಂದು ನಮ್ಮೆದುರಿಗೆ ಬೃಹದಾಕಾರವಾಗಿ ತಲೆಯೆತ್ತಿ ನಿಂತಿದೆ. ಭೌಗೋಳಿಕವಾಗಿ ನಮ್ಮ ದೇಶ ಮದ್ದುಗಳನ್ನು ಕದ್ದು ಸರಬರಾಜು ಮಾಡುವ ಎರಡು ಪ್ರಮುಖ ವಲಯಗಳ ನಡುವೆ ನೆಲೆಯಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ, ಆಗ್ನೇಯ ಏಷ್ಯಾದ ರಾಷ್ಟ್ತಗಳಾದ ಬರ್ಮಾ, ಥೈಲ್ಯಾಂಡ, ಮತ್ತು ಲಾವೋಸ್ (ಸುವರ್ಣ ತ್ರಿಕೋಣ) ಮತ್ತು ಸನಿಹದ ಮದ್ಯಪೂರ್ವ ದೇಶಗಳಾದ ಪಾಕಿಸ್ತಾನ, ಅಪಘಾನಿಸ್ಥಾನ ಮತ್ತು ಇರಾನ್ (ಬಂಗಾರದ ಅರ್ಧಚಂದ್ರ) ಕೇಂದ್ರ ಕಾರ್ಯಸ್ಥಾನಗಳಾಗಿದ್ದು ಭಾರತ ಅವುಗಳ ನಡುವೆ ಸ್ಯಾಂಡವಿಜ್ ನಂತೆ ಸೇರಿಕೊಂಡಿವೆ. ಹೀಗಾಗಿ ಭಾರತ ಮದಕ ವಸ್ತುಗಳ ಕಳ್ಳ ಸಾಗಾಣಿಕೆಯ ಪ್ರಮುಖ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. ಜೊತೆಗೆ ಮರಿಜುವಾನ ಮತ್ತು ಹಶೀಶಗಳನ್ನು ವಿಶ್ವದ ಮಾರುಕಟ್ಟೆಗಳಿಗೆ ಸರಬರಾಜು ಮಾಡುವ ನೇಪಾಳ ನಮ್ಮ ಉತ್ತರಕ್ಕಿದೆ. ಸದ್ಯ ಬಾಲಿವುಡ್ ನಟ ಸುಶಾಂತಸಿಂಗ್  ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಮದ್ದಿನ ವಿರಾಟ್ ಸ್ವರೂಪ ಬಯಲಾಗಿಬಿಟ್ಟಿದೆ. ಎನ್ಸಿಬಿ ಅಧಿಕಾರಿಗಳು ರಾಜ್ಯದ  ಡ್ರಗ್ಸ್  ದಂಧೆಯಲ್ಲಿ, ಬಾಲಿವುಡ್, ಹಾಗೂ ಕನ್ನಡ ಚಿತ್ರರಂಗದ ನಟ-ನಟಿಯರು ನಂಟು ಬೆಸೆದುಕೊಂಡಿರುವುದನ್ನು ಪತ್ತೆ ಮಾಡಿದ್ದಾರೆ. ಇದು ಪ್ರಕರಣಕ್ಕೆ ಇನ್ನಷ್ಟು ರೋಚಕತೆ ತಂದುಕೊಟ್ಟಿದೆ. ಜೊತೆಗೆ ರಾಜಕೀಯ ಕೆಸರೆರಚಾಟಕ್ಕೂ ಈ ಪ್ರಕರಣ ಹಾದಿ ಮಾಡಿಕೊಟ್ಟಿದೆ. ರಾಜಕೀಯ ಆರೋಪ ಪ್ರತ್ಯಾರೋಪಗಳಿಂದ ಡ್ರಗ್ ವಿರುದ್ಧದ ಹೋರಾಟ ಹಾದಿ ತಪ್ಪುತ್ತಿದೆ. ಈಗ ರಾಜಕೀಯ ಮಾಡುತ್ತಾ ಕುಳಿತುಕೊಳ್ಳುವ ಬದಲು ಅತ್ಯಂತ ಕೆಟ್ಟ ಪಿಡುಗಾಗಿರುವ ಈ ದಂದೆಯನ್ನು ಮಟ್ಟಹಾಕುವ ಬಗ್ಗೆ ಆರೋಗ್ಯಕರವಾಗಿ ಚಿಂತಿಸುವ ಕಾಲ ಸನ್ನಿಹಿತನಾಗಿದೆ. ಇಂದು

ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧ Read Post »

ಇತರೆ, ಜೀವನ

ಲೆಕ್ಕಕ್ಕೊಂದು ಸೇರ್ಪಡೆ

ಲೇಖನ ಲೆಕ್ಕಕ್ಕೊಂದು ಸೇರ್ಪಡೆ ಶಾಂತಿ ವಾಸು ಚೀನಿಯರ ಕೆಟ್ಟ ಮನಸ್ಥಿತಿಯ ಕನ್ನಡಿ ಕೊರೊನ, ಭಾರತವನ್ನು ಪ್ರವೇಶಿಸುವ ಮೊದಲೇ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ, ಸಂಪೂರ್ಣ ದೇಹವನ್ನು ಅದೇನೋ ಹೊಸತರಹದ ದಿರಿಸಿನಿಂದ ಮುಖಸಹಿತ ಮುಚ್ಚಿಕೊಂಡ ಜನರು ಪ್ಲಾಸ್ಟಿಕ್ ಚೀಲದಲ್ಲಿ ಬಿಗಿಯಾಗಿ ಸುತ್ತಿದ ನೂರಾರು ಜನರ ಮೃತದೇಹಗಳನ್ನು ಒಟ್ಟೊಟ್ಟಿಗೇ, ಆಳವಾದ ಒಂದೇ ಹಳ್ಳದಲ್ಲಿ ಹಾಕಿ ಮಣ್ಣು ಮುಚ್ಚುವುದು ಹಾಗೂ ಪೆಟ್ರೋಲ್ ಸುರಿದು ಸಾಮೂಹಿಕವಾಗಿ ಸುಡುವುದನ್ನು ನೋಡಿಯೇ ಪ್ರಪಂಚವು ನಡುಗಿಹೋಗಿತ್ತು. ಇದೇನು?? ಹೊಸದಾಗಿ ನಡೆದದ್ದೇ? ಅಥವಾ ಯಾವುದಾದರೂ ಸಿನಿಮಾಗಾಗಿ ಇರಬಹುದೇನೋ ಎಂದು ಗೊಂದಲಗೊಂಡ ಕೋಟ್ಯಂತರ ಭಾರತೀಯರಲ್ಲಿ ನಾನೂ ಒಬ್ಬಳು. ನಂತರದ ದಿನಗಳಲ್ಲಿ ಗುಂಪುಗುಂಪಾಗಿ ಚೀನೀ ಜನರು ನಿಂತಲ್ಲಿಯೇ ಹುಳುಗಳಂತೆ ಮುದುರಿ ಬೀಳುವ ದೃಶ್ಯವನ್ನು ಮಾಧ್ಯಮಗಳಲ್ಲಿ ತೋರಿಸಲಾಯಿತು. ಇದನ್ನು ಕಂಡ ನಮ್ಮನ್ನು ಹೆಚ್ಚಾಗಿ ಕಾಡಿದ್ದೆಂದರೆ, ಬಿದ್ದವರನ್ನು ಗಮನಿಸುವುದಾಗಲೀ ಏನಾಯಿತೆಂದು ತಿರುಗಿಯೂ ನೋಡುವ ವ್ಯವಧಾನವೋ ಕರುಣೆಯೋ ಇಲ್ಲದವರಂತೆ ಭಾವನಾರಹಿತರಾಗಿ ಓಡಾಡುತ್ತಿದ್ದ ಮಾಸ್ಕ್ ಧರಿಸಿದ ಚೀನಾ ಜನರ ಹೃದಯಹೀನತೆ. ಆಸ್ಪತ್ರೆಯ ದೃಶ್ಯಗಳಲ್ಲಿ ವೆಂಟಿಲೇಟರ್ ಹಾಕಿದ್ದರೂ ಉಸಿರಾಡಲು ಕಷ್ಟಪಡುವ ರೋಗಿಗಳ ನರಳಾಟ ಎಂಥಹವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಕೊರೊನ ಎಂಬ ಹೊಸ ಖಾಯಿಲೆಯಿಂದ ಸಾವಿರಾರು ಸಂಖ್ಯೆಯ ಜನರು ಬೀದಿ ಹೆಣಗಳಾಗುತ್ತಿದ್ದಾರೆಂದೂ ಅವರನ್ನೆಲ್ಲಾ ಸಾಮೂಹಿಕವಾಗಿ ಹೂಳುತ್ತಿದ್ದಾರೆಂಬುದನ್ನೂ ನಾವೆಲ್ಲಾ ಅರಗಿಸಿಕೊಳ್ಳುವಷ್ಟರಲ್ಲಿ ನಮ್ಮೆಲ್ಲರ ಮಧ್ಯೆ ತನ್ನ ಕದಂಬಬಾಹುಗಳನ್ನು ಚಾಚಲು ಪ್ರಾರಂಭಿಸಿಯೇ ಬಿಟ್ಟಿತ್ತು ಅದೇ ಚೀನಾದ ಅನಾಮಿಕ ವೈರಸ್.. ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯರ ಜೀವನದಲ್ಲೂ ಪ್ರಬಲ ಬದಲಾವಣೆ ತಂದ ಈ ವೈರಸ್ ಇಲ್ಲಿಯ ತನಕ ಲಕ್ಷಾಂತರ ಮಂದಿಯ ಪ್ರಾಣವನ್ನು ಬಲಿ ಪಡೆದಿದೆ. ಹಾಗೂ ಇನ್ನೂ ಮುಂದುವರೆಯುವ ಲಕ್ಷಣಗಳು ನಿಚ್ಚಳವಾಗಿವೆ.. ಪ್ರತಿ ಧರ್ಮದವರೂ ಅವರವರದೇ ರೀತಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಿ ಮೃತರ ಆತ್ಮವನ್ನು ಅಂತರಾತ್ಮನಲ್ಲಿ ವಿಲೀನಗೊಳಿಸುವ ಶ್ರೇಷ್ಠಪದ್ಧತಿಯನ್ನು ರೂಢಿಸಿಕೊಂಡು ಬಂದ ನಮ್ಮ ಭಾರತದಂತಹ ಪುಣ್ಯಭೂಮಿಯಲ್ಲಿ ಬದುಕಿದ ಮನುಷ್ಯರು ಬೀದಿ ಹೆಣಗಳಾಗಿಸುವುದನ್ನೂ, ಸತ್ತವರನ್ನು ದರದರನೇ ಎಳೆದೊಯ್ದು ಎತ್ತಿ ಹಳ್ಳಕ್ಕೆ ಬಿಸಾಡುವುದನ್ನು ಎಂದಿಗೂ ಯಾರೂ ಕಲ್ಪಿಸಿಯೂ ಇರಲಾರರು. ನಮ್ಮ ಸಂಸ್ಕೃತಿಯಲ್ಲಿಲ್ಲದ ಅನೇಕ ವಿಷಯಗಳಲ್ಲಿ ಅನ್ಯರನ್ನು ಅನುಸರಿಸುತ್ತಿರುವ ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನುಷ್ಯರ ಸಂಸ್ಕಾರವನ್ನೂ ಅಮಾನುಷ್ಯವಾಗಿ ನಡೆಸಿಬಿಟ್ಟೆವು. ತನ್ನ ದೇಹಕ್ಕೆಂಥಹ ಅವಮಾನವಾಗುತ್ತಿದೆ ಎಂದು ಮೃತರಿಗೆ ತಿಳಿಯುವುದಿಲ್ಲವಾಗಲೀ, ಹತ್ತಿರ ಸುಳಿಯಲು ಅವಕಾಶವಿಲ್ಲದೆ ದೂರದಲ್ಲಿ ನಿಂತು ನೋಡುತ್ತಿರುವ ಸಂಬಂಧಿಕರು ಅಥವಾ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದ ಸಾರ್ವಜನಿಕರಲ್ಲಿ ಎಂಥ ಭಾವನೆ ಹಾಗೂ ಭಯ ಹುಟ್ಟಿಸುತ್ತಿವೆ ಎಂದು ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಮೋದಿ ಬೇಕಾ ಮನಮೋಹನ್ ಸಿಂಗ್ ಬೇಕಾ ಎಂದು ಕೇಳಿ, ಒಂದನ್ನು ಒತ್ತಿ ಎರಡನ್ನು ಒತ್ತಿ ಎನ್ನುತ್ತಾ, ಮುಂದಿನ ಪ್ರಧಾನಿ ಯಾರೆಂಬ ದೊಡ್ಡ ಸಮೀಕ್ಷೆಯನ್ನು ಸರಳವಾಗಿ ಸದ್ದಿಲ್ಲದೇ ನಡೆಸಿ ನಿಂತಗಳಿಗೆಯಲ್ಲಿಯೇ ಮುಂದಿನ ಪ್ರಧಾನಿ ಯಾರೆಂದು ನಿಖರತೆ ಸಾರುವ ಆಪ್ಗಳು(app), ಕೇವಲ ಒಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳು ಉಳಿದಿವೆ, ಕೋವಿಡೇತರ ರೋಗಿಗಳು ಯಾವ ಆಸ್ಪತ್ರೆಯನ್ನು ಎಡತಾಕಬೇಕು ಎಂಬ ವಿವರ ಒದಗಿಸುವುದನ್ನು ನಿರಾಕರಿಸುತ್ತಿವೆ ಏಕೆ?? ಪ್ರಮಾದಗಳನ್ನು ತಡೆಯಲಾಗದ ಇಚ್ಚಾಶಕ್ತಿಯ ಕೊರತೆ, ಕೊರೊನಾದಿಂದ ಧಿಡೀರನೆ ವ್ಯಕ್ತಿಯನ್ನು ಕಳೆದುಕೊಂಡ ದುಃಖ, ಮುಂದೇನು ಎಂದು ದಿಕ್ಕುತೋರದೆ ಚಿಂತೆಗೊಳಗಾದ ಕುಟುಂಬಸ್ಥರಿಗೆ, ಕೊನೆಪಕ್ಷ ಮೃತರ “ಮರ್ಯಾದಾ ಶವಸಂಸ್ಕಾರ”ದ ಭರವಸೆ ನೀಡುವಲ್ಲಿ ವಿಫಲವಾಯಿತು. ಸಾರ್ವಜನಿಕರಾದ ನಾವು ಅರಿತಿರಲೇಬೇಕಾದ ವಿಷಯವೆಂದರೆ ಯಾವುದೇ ಪಕ್ಷವಾಗಲಿ ಪ್ರಜಾಪ್ರಭುತ್ವದಲ್ಲಿ ಹಲವರು ಆಶಿಸಿದಂತೆ ಆಳಲು ಬರುವ ಜನನಾಯಕರ ಪ್ರಭುತ್ವವನ್ನೇ, ಆಯ್ಕೆ ಮಾಡದವರೂ ಸಹಾ ಒಪ್ಪಿಕೊಳ್ಳಬೇಕಾಗುತ್ತದೆ. ನಾವು ಆರಿಸಿದ ವ್ಯಕ್ತಿಯು ನಮ್ಮನ್ನು ಅವರಾಯ್ಕೆಯ ಹಲವರ ಅಧೀನಕ್ಕೆ ತಳ್ಳಿಬಿಡುವ ಸತ್ಯವನ್ನು ನಾವು ಅರಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಕೊರೊನಾದಂತಹ ಲೋಕವ್ಯಾಪಿ ಸಮಸ್ಯೆಯ ಸನ್ನಿವೇಶವನ್ನೆದುರಿಸಿದ ಯಾವುದೇ ಜನರು ನಮ್ಮ ಮಧ್ಯೆ ಇಲ್ಲ. ನಮ್ಮ ದೇಶದ್ದಲ್ಲದ ಹಂತಕ ವೈರಸ್ಸಿನ ದಮನ ಮಾಡುವ ಔಷಧ ಬರುವ ತನಕ ಸಾರ್ವಜನಿಕರಾದ ನಮ್ಮ ಜವಾಬ್ದಾರಿಯೂ ದೊಡ್ಡದಿದೆ. ಆದರೆ ಅದನ್ನು ಸರಳಗೊಳಿಸಿಕೊಂಡು,ಆದಷ್ಟು ಮನೆಯಲ್ಲಿರುವುದು, ಹೊರಹೋಗುವಾಗ ಮೂಗುಬಾಯಿ ಮುಚ್ಚುವ ಮಾಸ್ಕ್ ಧರಿಸುವುದು, ಸೋಪಿನಿಂದ ಆಗಾಗ ಕೈಗಳನ್ನು ತೊಳೆಯುವುದರಿಂದ ಕೊರೊನ ತಡೆಯಬಹುದೆಂದಾದರೆ, ಇವೆಲ್ಲವನ್ನು ಅನುಸರಿಸಿ ಹೊಸ ಔಷದಕ್ಕೆ ಪ್ರಯೋಗ ಶಿಶುವಾಗುವುದನ್ನು ಹಾಗೂ ಸರ್ಕಾರೀ ಲೆಕ್ಕ ಪುಸ್ತಕದ ಖಾಯಿಲೆಗೋ ಅಥವಾ ಸಾವಿಗೋ ನಾವು ಒಂದು ಸಂಖ್ಯೆಯಾಗುವುದನ್ನು ತಪ್ಪಿಸಬಹುದು. ***********************

ಲೆಕ್ಕಕ್ಕೊಂದು ಸೇರ್ಪಡೆ Read Post »

ಇತರೆ, ಜೀವನ

ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..!

ಲೇಖನ ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..! ಕೆ.ಶಿವು ಲಕ್ಕಣ್ಣವರ ಹಿಂದಿ ಹೇರಿಕೆಯು ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..! ಕರ್ನಾಟಕದಲ್ಲಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಅಣತಿ ಮೇರಗೆ ಬೆಂಗಳೂರು ಮೆಟ್ರೋ ಆಡಳಿತ ಮಂಡಳಿ ಇಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಯಲ್ಲಿ ಫಲಕಗಳನ್ನು ಹಾಕಿದಾಗಲೇ ಸ್ಥಳೀಯ ಕನ್ನಡಪರ ಹೋರಾಟಗಾರರು ಹಿಂದಿ ಫಲಕಗಳಿಗೆ ಬಣ್ಣ ಬಳಿದು ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಯಾವ ಭಾಷೆಗೂ ರಾಷ್ಟ್ರಭಾಷೆ ಎಂಬ ವಿಶೇಷ ಸ್ಥಾನಮಾನ ನೀಡಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು. ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು; ಹಿಂದಿ ಹೇರಿಕೆಯ ವಿರುದ್ಧ ರಾಜ್ಯ ನಾಯಕರು ಕೆಂಡಾಮಂಡಲವಾಗಿದ್ದರು. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ತಣ್ಣಗಾಗಿದ್ದ ಹಿಂದಿ ಹೇರಿಕೆಯ ಪರ-ವಿರೋಧದ ಚರ್ಚೆ ಇದೀಗ ಮತ್ತೆ ಕಾವು ಪಡೆದುಕೊಂಡಿದೆ. ಇದಕ್ಕೆ ಕಾರಣ  ಕೇಂದ್ರ ಸರ್ಕಾರ ಹೇರಲು ಮುಂದಾಗಿರುವ ತ್ರಿಭಾಷಾ ನೀತಿ. ಕೇಂದ್ರ ಸರ್ಕಾರದ ಈ ನೀತಿಯ ವಿರುದ್ಧ ಇದೀಗ ಕರ್ನಾಟಕ ಮಾತ್ರವಲ್ಲ, ಇಡೀ ದಕ್ಷಿಣ ಭಾರತ ಸಿಡಿದೆದ್ದು ನಿಂತಿದ್ದು ರಾಜ್ಯ ನಾಯಕರು ಟೀಕಾಪ್ರಹಾರ ನಡೆಸಿದ್ದಾರೆ. ಪರಿಣಾಮ ಮುಂದಿನ ದಿನಗಳಲ್ಲಿ ಇದು ದೊಡ್ಡ ಹೋರಾಟವಾಗಿ ರೂಪಗೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿದೆ. ಕರ್ನಾಟಕದಲ್ಲಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಅಣತಿ ಮೇರಗೆ ಬೆಂಗಳೂರು ಮೆಟ್ರೋ ಆಡಳಿತ ಮಂಡಳಿ ಇಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಯಲ್ಲಿ ಫಲಕಗಳನ್ನು ಹಾಕಿದಾಗಲೇ ಸ್ಥಳೀಯ ಕನ್ನಡಪರ ಹೋರಾಟಗಾರರು ಹಿಂದಿ ಫಲಕಗಳಿಗೆ ಬಣ್ಣ ಬಳಿದು ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಹಿಂದಿ ರಾಷ್ಟ್ರಭಾಷೆ ಎಂದು ಬಿಂಬಿಸಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಯೇ ನಡೆದಿತ್ತು. ಆದರೆ, ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಯಾವ ಭಾಷೆಗೂ ರಾಷ್ಟ್ರಭಾಷೆ ಎಂಬ ವಿಶೇಷ ಸ್ಥಾನಮಾನ ನೀಡಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು.  ಹೀಗಿದ್ದ ಮೇಲೆ ಕೇಂದ್ರ ಸರ್ಕಾರ ಮತ್ತೇ ದಕ್ಷಿಣ ರಾಜ್ಯಗಳ ಮೇಲೆ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆಗೆ ಮುಂದಾಗಿದೆ. ಇದಕ್ಕೆ ರಾಜ್ಯದಲ್ಲೂ ಸಹ ಪರ-ವಿರೋಧ ಚರ್ಚೆಗಳು ಶುರುವಾಗಿದೆ. ಹಾಗಾದರೆ ಏನಿದು ತ್ರಿಭಾಷಾ ನೀತಿ? ಇದಕ್ಕೆ ದಕ್ಷಿಣ ರಾಜ್ಯಗಳ ವಿರೋಧವೇಕೆ?..?– ಏನಿದು ತ್ರಿಭಾಷಾ ಸೂತ್ರ?— ಬಹುಭಾಷಾ ಸಂವಹನ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 1968 ರಲ್ಲೇ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಲಾಗಿತ್ತು. 1986 ರ ನೀತಿಯಲ್ಲಿಯೂ ಇದನ್ನು ಪುನರುಚ್ಚರಿಸಲಾಗಿತ್ತು. ಇದರಂತೆಯೇ ದೇಶದಾದ್ಯಂತ ಶಾಲಾ ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಿಂದಲೇ ಅಲ್ಲಿನ ಸ್ಥಳೀಯ ಮಾತೃಭಾಷೆಯ ಜೊತೆಗೆ ಇಂಗ್ಲೀಷ್​ ಹಾಗೂ ತೃತೀಯ ಭಾಷೆಯಾಗಿ ಹಿಂದಿಯನ್ನೂ  ಕಲಿಸುವುದು ಈ ನೀತಿಯ ಉದ್ದೇಶವಾಗಿತ್ತು. ಆದರೆ, ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷಾ ಹೇರಿಕೆಯಿಂದ ಒಂದು ಭಾಷೆ ಒಂದು ಸಂಸ್ಕೃತಿ ನಿರ್ಮಾಣವಾಗುತ್ತದೆ. ಇದರಿಂದ ದ್ರಾವಿಡ ಭಾಷೆಗಳ ಅಸ್ಮಿತೆಗೆ ಕೊಡಲಿ ಪೆಟ್ಟು ಬಿದ್ದಂಗಾಗುತ್ತದೆ. ಇದರಿಂದ ಮುಂದೊಂದು ದಿನ ದ್ರಾವಿಡ ಭಾಷೆಗಳು ಕಣ್ಮರೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ಈ ನೀತಿಯನ್ನು 1969 ರಿಂದಲೂ ತೀವ್ರವಾಗಿ ವಿರೋಧಿಸುತ್ತಾ ಬಂದಿತ್ತು. ಒಂದು ಹಂತದಲ್ಲಿ ಸ್ವತಂತ್ರ್ಯ ದ್ರಾವಿಡ ರಾಷ್ಟ್ರದ ಪರಿಕಲ್ಪನೆಯನ್ನೂ ಮುಂದಿಟ್ಟಿತ್ತು. ಕೊನೆಗೆ ಕೇಂದ್ರದ ನೀತಿಗೆ ಬೆನ್ನು ತೋರಿಸಿದ್ದ ತಮಿಳುನಾಡು ಈವರೆಗೆ ದ್ವಿಭಾಷಾ ಸೂತ್ರವನ್ನು ಮಾತ್ರ ಅನುಸರಿಸುತ್ತಿದೆ. ತಮಿಳುನಾಡಿನಲ್ಲಿ ಕಳೆದ 6 ದಶಕದಿಂದ ಹಿಂದಿ ಕಲಿಕೆ ಕಡ್ಡಾಯವಲ್ಲ. ಇದರಂತೆ ಅಲ್ಲಿನ ಮಕ್ಕಳು ತಮಿಳು ಹಾಗೂ ಆಂಗ್ಲ ಭಾಷೆಯನ್ನು ಮಾತ್ರ ಕಲಿಯುತ್ತಿದ್ದಾರೆ. ಆದರೆ, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮಾತ್ರ ಹಿಂದಿಯನ್ನು ಸಾಮಾನ್ಯವಾಗಿ ಕಲಿಸಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ತಮಿಳುನಾಡನ್ನು ಗುರಿಯಾಗಿಸಿಕೊಂಡು ಮತ್ತೇ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸಲು ಮುಂದಾಗಿತ್ತು. ಆದರೆ, ಕೇಂದ್ರದ ಈ ನೀತಿಗೆ ಇದೀಗ ಕರ್ನಾಟಕ ಸೇರಿದಂತೆ ಉಳಿದೆಲ್ಲಾ ದಕ್ಷಿಣ ರಾಜ್ಯಗಳು ಒಮ್ಮೆಲೆ ತಿರುಗಿಬಿದ್ದಿವೆ. ರಾಜ್ಯದ ನಾಯಕರು ಹಿಂದಿ ಹೇರಿಕೆಯ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವುದು ಕೇಂದ್ರಕ್ಕೆ ನುಂಗಲಾರದ ತುತ್ತಾಗಿದೆ..! ಕೇಂದ್ರ ಸರ್ಕಾರ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸುವ ತೀರ್ಮಾನ ಹೊರಬೀಳುತ್ತಿದ್ದಂತೆಯೇ ರಾಜ್ಯ ನಾಯಕರು ಇದನ್ನು ಸಾರಾಸಗಟಾಗಿ ಖಂಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೊರಡಿಸಿದ ಶಿಕ್ಷಣ ಕರಡು ಕಾರ್ಯನೀತಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ. 3-ಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸಲಾಗುವುದು’ ಎಂದಿದ್ದರು. ಕುಮಾರಸ್ವಾಮಿ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಇದೀಗ ಬಹುತೇಕ ರಾಜ್ಯದ ಎಲ್ಲಾ ನಾಯಕರು ಹಿಂದಿ ಹೇರಿಕೆಯ ವಿರುದ್ಧ ಕೂಗೆತ್ತಿದ್ದಾರೆ. ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯ ವಿರುದ್ಧ ಟ್ವೀಟ್ ಮಾಡುವ ಮೂಲಕ ಗುಡುಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಸಹಿಸಲಾಗದು. ಕನ್ನಡ ನಮ್ಮ ಅಸ್ಮಿತೆ. ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನಪ್ರತಿನಿಧಿಗಳೆಲ್ಲರೂ ಪಕ್ಷಾತೀತವಾಗಿ ಚಿಂತನೆ ಮಾಡಬೇಕೆಂದು ನನ್ನ ಮನವಿ’ ಮಾಡಿದ್ದಾರೆ ಅವರು. ಮತ್ತೊಂದು ಟ್ವೀಟ್​ನಲ್ಲಿ, ‘ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕವಾಗಿರಬೇಕೇ ಹೊರತು ಕಡ್ಡಾಯವಾಗಬಾರದು. ಇದು ಇನ್ನೊಂದು ಭಾಷೆಯ ಒತ್ತಾಯಪೂರ್ವಕ ಹೇರಿಕೆಯಂತಾಗಿದೆ. ಮಗುವಿನ ಕಲಿಕೆಯ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹಿಂದಿ ಭಾಷಿಗರಲ್ಲದವರ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ಭಾರತ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಅವರು, ‘ಕೇಂದ್ರ ಸರ್ಕಾರ ಏಕಮುಖ ನಿರ್ಧಾರ ಕೈಗೊಳ್ಳುತ್ತಿದೆ. ನಾವೇನಾದರೂ ಹಿಂದೆ ಭಾಷೆಬೇಕೆಂದು ಕೇಳಿದ್ದೇವೆಯೇ? ಕೇಂದ್ರ‌ ಇದಕ್ಕೆ‌ ನೀತಿ ಜಾರಿಗೆ ತರುತ್ತಿರುವುದು ಕನ್ನಡಿಗರ ಮೇಲೆ ಬಲವಂತದ ಹಿಂದಿ ಹೇರಿಕೆಯಾಗಿದೆ. ನೆಲ‌, ಜಲ‌, ಭಾಷೆ ವಿಚಾರದಲ್ಲಿ ರಾಜಿ ಇಲ್ಲ. ಬಲವಂತವಾಗಿ ಯೋಜನೆ ಜಾರಿಗೆ ಮುಂದಾರೆ ನಾವು ತಮಿಳುನಾಡು ಮಾದರಿಯ ಹೋರಾಟ ಮಾಡಲೂ ಸಿದ್ಧ’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ ಅವರು. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು, ‘ಕೇಂದ್ರ ಸರ್ಕಾರದ ಈ ನೀತಿ ರಾಜ್ಯಗಳ ಸಂವೇದನೆ ಹಾಗೂ ಉತ್ತಮ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುವಂತಿರಬೇಕು. ಆದರೆ, ಈ ಭಾಷಾ ನೀತಿ ನಮ್ಮ ಹಿತಾಸಕ್ತಿಗೆ ಅನುಗುಣವಾಗಿಲ್ಲ. ಹೀಗಾಗಿ ನಮ್ಮ ರಾಜ್ಯದ ಮೇಲಿನ ಯಾವುದೇ ಭಾಷಾ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ’ ಎಂದು ತಿಳಿಸಿದ್ದಾರೆ. ಒಟ್ಟಾರೆ ಕೇಂದ್ರದಲ್ಲಿ ಹೊಸ ಎರಡನೇ ಅವಧಿಗೆ ಬಿಜೆಪಿ ಸರ್ಕಾರ ಮತ್ತೇ ಅಧಿಕಾರ ಹಿಡಿದ ಕೇವಲ ಮೂರು ದಿನಗಳಲ್ಲಿ ದಕ್ಷಿಣ ಭಾರತದ ಮೇಲೆ ಹಿಂದಿ ಭಾಷೆ ಹೇರಿಕೆಗೆ ಮುಂದಾಗಿದೆ. ಈ ಹಿಂದೆಯೂ ಹಲವು ಬಾರಿ ಕೇಂದ್ರ ಸರ್ಕಾರ ಹಿಂದಿ ಹೇರಿಕೆಗೆ ಮುಂದಾದಾಗಲು ದಕ್ಷಿಣ ರಾಜ್ಯಗಳು ಅದರಲ್ಲೂ ಮುಖ್ಯವಾಗಿ ತಮಿಳುನಾಡು ಪ್ರಬಲವಾಗಿ ವಿರೋಧಿಸಿತ್ತು. ಇದೀಗ ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶ ಸಹ ಒಟ್ಟಾಗಿ ಕೇಂದ್ರದ ವಿರುದ್ಧ ಹಿಂದಿ ಹೇರಿಕೆ ವಿರೋಧದ ಹೋರಾಟಕ್ಕೆ ದನಿಗೂಡಿಸಿರುವುದು ಮುಂದಿನ ದಿನಗಳಲ್ಲಿ ದೊಡ್ಡ ಚಳುವಳಿಯಾಗಿ ರೂಪಗೊಂಡರೂ ಅಚ್ಚರಿ ಇಲ್ಲ. ಹೀಗಿರುವಾಗ ಹಿಂದಿ ಹೇರಿಕೆಯನ್ನು ಕೈಬಿಟ್ಟರೇ ಒಳಿತು..! *****************************************************************

ದ್ರಾವಿಡ ಭಾಷಾ ಅಸ್ಮಿತೆಗೆ ಕೇಂದ್ರದ ಕೊಡಲಿ ಪೆಟ್ಟು..! Read Post »

ಇತರೆ, ಜೀವನ

ವಿವಾಹ ವ್ಯವಸ್ಥೆ- ಒಂದು ಚರ್ಚೆ

ಚರ್ಚೆ ವಿವಾಹ ವ್ಯವಸ್ಥೆ- ಒಂದು ಚರ್ಚೆ ಚಂದಕಚರ್ಲ ರಮೇಶ ಬಾಬು ಹೊಸ ತಲೆಮಾರಿನ ವಿವಾಹಗಳು ವೈವಿಧ್ಯತೆ ಸಂತರಿಸಿಕೊಂಡಿರುವುದರಿಂದ ಈಗ ನಮ್ಮ ಸಮಾಜದಲ್ಲಿನ ವಿವಾಹ ವ್ಯವಸ್ಥೆಯ ಬಗ್ಗೆ ಒಂಚೂರು ಚರ್ಚೆ ಮಾಡುವ ಎಂತಾಗಿದೆ. ನಮಗೆ ಕಾಣುವ ಹಾಗೆ ವಿವಾಹಗಳಲ್ಲಿ ಎರಡು ರೀತಿಯ ಪ್ರಭಾಗಗಳು ಕಾಣುತ್ತವೆ. ಗಂಡು ಹೆಣ್ಣು ಪ್ರೀತಿಸಿ ತಾವೇ ನಿರ್ಣಯಿಸಿಕೊಂಡು ಮದುವೆ ಯಾಗುವುದು (ಪ್ರೇಮ ವಿವಾಹ)  ಮತ್ತೊಂದು ಸಾಂಪ್ರದಾಯಿಕವಾಗಿ ನಡೆದು ಬಂದ ರೀತಿಯಲ್ಲಿ ಮನೆಗೆ ದೊಡ್ಡವರು ಹೆಣ್ಣು ನೋಡಿ ನಿಶ್ಚಯಿಸಿ ಮದುವೆ ಮಾಡುವುದು ( ಅರೇಂಜ್ಡ್ ಮ್ಯಾರೇಜ್) ನಮ್ಮ ವಿವಾಹ ಪದ್ಧತಿಗಳಲ್ಲಿ ಗಾಂಧರ್ವ ವಿವಾಹ, ರಾಕ್ಷಸ ವಿವಾಹ ಅಂತ ಮತ್ತೆ ಸುಮಾರು ತರಗಳಿವೆ. ಆದರೆ ನಾವು ಪ್ರಸಕ್ತ ಸಮಾಜದಲ್ಲಿ ನಡೆಯುತ್ತಿರುವ ರೀತಿ ನೀತಿಗಳಿಗೆ ಸಂಬಂಧಪಟ್ಟಂತೆ ನಡೆಯುವ ವಿವಾಹಗಳ ಬಗ್ಗೆ ಮಾತ್ರ ಮಾತಾಡೋಣ. ಸದ್ಯದ ದಿನಗಳಲ್ಲಿ ಬಳಕೆಯಲ್ಲಿರುವ ಈ ’ಪ್ರೇ’ ಎನ್ನುವ ಪದದ ಅರ್ಥ ನಿಘಂಟುವಿನ ಪ್ರಕಾರ  “ಪ್ರೀತಿ, ಸ್ನೇಹ, ಅನುರಾಗ, ಮಮತೆ” ಅಂತೆಲ್ಲ ಇದೆ. ಸಂಸಾರದಲ್ಲಿಯ ಸದಸ್ಯರ ನಡುವೆ ಪ್ರೀತಿ, ಪ್ರೇಮ ಇರುತ್ತವೆ. ಆದರೆ ಅಲ್ಲಿಯ ಪ್ರೇಮಕ್ಕೂ, ವಿವಾಹ ಸಂಬಂಧೀ ಪ್ರೇಮಕ್ಕೂ ವ್ಯತ್ಯಾಸವಿದೆ. ವಿವಾಹ ಸಂಬಂಧದ ಪ್ರೇಮ ಎಂದರೆ ಗಂಡು ಹೆಣ್ಣಿನ ನಡುವಣ ಪ್ರೀತಿ ಮಾತ್ರ ಅಂತ ಸಿನಿಮಾಗಳಲ್ಲಿ ಬಳಸುವ ಅರ್ಥದಿಂದಲೇ ಹುಟ್ಟಿ ಬಂದಿದೆ. ಇನ್ನೂ ಹೇಳ ಬೇಕೆಂದರೆ ಬೇರೇ ಜಾತಿ, ಬೇರೇ ಪಂಗಡ, ಬೇರೇ ಧರ್ಮದ ಹುಡುಗ, ಹುಡುಗಿಯರ ನಡುವಿನ ಪ್ರೀತಿಗೆ ಮಾತ್ರವೇ ಪ್ರೇಮ ಎನ್ನುವ ಹಾಗೆ ಬಳಕೆ ಯಾಗುತ್ತಿದೆ. ಪ್ರೇಮ ವಿವಾಹ ಎಂದರೆ ಇದೇ ರೀತಿಯ ಮದುವೆ. ಒಂದೇ ಜಾತಿಯ ಹುಡುಗ ಹುಡುಗಿ ಇಷ್ಟಪಟ್ಟು ಮದುವೆಯಾದರೇ ಅದು ಪ್ರೇಮ ವಿವಾಹದ ಕೆಳಗೆ ಬರುತ್ತದಾ ? ಇದಕ್ಕೆ ಉತ್ತರವಿಲ್ಲ. ಮತ್ತೊಂದು ರೀತಿ ಮದುವೆಯ ಬಗ್ಗೆ ಜಾಸ್ತಿ ಹೇಳಬೇಕಿಲ್ಲ. ದೊಡ್ಡವರ ಅನುಭವಕ್ಕೆ ಮಣೆ ಹಾಕಿ, ಅವರು ನಮ್ಮ ಒಳಿತನ್ನೇ ನೋಡುತ್ತಾರೆ ಅಂತ ನಂಬಿ, ಅವರು ನಿರ್ಣಹಿಸಿದ ಹೆಣ್ಣು/ಗಂಡನ್ನು ತಾವೂ ನೋಡಿ, ಒಪ್ಪಿ ಮದುವೆಯಾಗುವುದು.. ಲವ್ ಮ್ಯಾರೇಜ್ ( ಈಗಿನ ಪ್ರೇಮ ವಿವಾಹಗಳ ತುಂಬಾ ಕೇಳಿ ಬರುವ ಹೆಸರು) ಮಾಡಿಕೊಳ್ಳ ಬಯಸುವ ಜೋಡಿಯ ವಾದನೆ “ ದೊಡ್ಡವರು ನೋಡಿ ನಿಶ್ಚಯಿಸಿದ ಮದುವೆಗಳಲ್ಲಿ ಪ್ರೀತಿ ಎಲ್ಲಿರುತ್ತದೆ ?” ಅಂತ. ಯಾಕಿರಬಾರದು ಅಂತ ಅವರಿಗೆ ಅನಿಸುವುದಿಲ್ಲ. ಆ ವಯಸ್ಸೇ ಹಾಗೆ. ದುಡುಕುತನ ತುಂಬಿದ ಪ್ರಾಯ. ತಾವು ಬಲೆಗೆ ಬಿದ್ದ ಆಕರ್ಷಣೆಗೆ ಒಂದು ವಾದನೆಯನ್ನು ಹುಟ್ಟಿಸಿಕೊಂಡು ಅದಕ್ಕೇ ಜೋತು ಬೀಳುವ ಕ್ರಮ. ಆದರೆ ಅದೊಂದೇ ವಾಸ್ತವವಲ್ಲ. ಕೆಲ ಹುಡುಗ/ಹುಡುಗಿಯರು ತಮ್ಮ ಶಾಲೆ ಕಾಲೇಜುಗಳಲ್ಲಿ ತಾವು ರುಚಿ ನೋಡಿದ ಮಧುರ ಗಳಿಗೆಗಳನ್ನು ಬರೀ ಮಕ್ಕಳ ಆಟಿಕೆಯ ಆಕರ್ಷಣೆ ಎಂದು ಮರೆತು ತಮ್ಮ ತಂದೆ ತಾಯಿ ನೋಡಿದ ಮದುವೆಗಳಿಗೆ ಒಪ್ಪುತ್ತಾರೆ. ಮತ್ತೆ ಕೆಲವರು ಅತ್ತ ಪ್ರೀತಿಸಿದವಳನ್ನು ಮದುವೆಯಾಗಲಾರದೇ ಭಗ್ನ ಪ್ರೇಮಿಗಳಾಗುತ್ತಾರೆ. ಅಥವಾ ದೊಡ್ಡವರು ಹೇಳಿದ ಮದುವೆಗೆ ಒಪ್ಪಿ ಬೇರೇ ಯಾರನ್ನೋ ಮದುವೆಯಾಗಿ ಆ ಬಂಧದಲ್ಲಿಯ ಆತ್ಮೀಯ ಭಾವನೆಗೆ ದೂರವಾಗುತ್ತಾರೆ. ಎರಡೂ ಪದ್ಧತಿಗಳಲ್ಲೂ ಒಳಿತುಗಳಿವೆ, ಕೆಡಕುಗಳಿವೆ. ಯಾವುದನ್ನೂ ನಾವು ಇದೇ ಸರಿಯೆಂದು ಹೇಳಲಾಗುವುದಿಲ್ಲ. ಯಾವುದನ್ನೂ ಬೇಡದ್ದೆಂದು ತೆಗೆದು ಹಾಕಲಾಗುವುದಿಲ್ಲ. ಪ್ರೇಮ ವಿವಾಹ ( ಲವ್ ಮ್ಯಾರೇಜ್ ) ಗಳು ಮಾತ್ರ ಇಷ್ಟು ದಶಕಗಳು  ಕಳೆದರೂ ತಂದೆ ತಾಯಿಗಳ ಮನಸ್ಸಿಗೆ ಬೆಂಕಿ ಹಚ್ಚುವ ಮದುವೆಗಳೇ. ತಾವು ಬೆಳೆಸಿದ ಮಕ್ಕಳು ತಮ್ಮ ಕಣ್ಣೆದುರಲ್ಲೇ ತಮ್ಮನ್ನು ಎದುರಿಸಿ ತಮ್ಮ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ತಮಗೆ ತಿಳಿದ ಹಾಗೆ ಮಾಡುವುದು ಯಾವ ತಂದೆ ತಾಯಿಗೂ ರುಚಿಸುವುದಿಲ್ಲ. ಮತ್ತೆ ಅವರ ಅಂತಸ್ತು, ಸಮಾಜದಲ್ಲಿ ಅವರಿಗಿರುವ ಮಾನ ಮರ್ಯಾದೆ ಮತ್ತೆ ಒಮ್ಮೊಮ್ಮೆ ಬರೀ ಅಹಂಕಾರ. ಇವೆಲ್ಲ ಅಡ್ಡ ಬರುತ್ತವೆ. ಕೆಲ ಸೌಮ್ಯ ಸ್ವಭಾವದ ತಂದೆ ತಾಯಿಯರು ತಮ್ಮ ಮಕ್ಕಳ ಆಯ್ಕೆ, ಭವಿಷ್ಯ ನೋಡಿ ಒಪ್ಪುತ್ತಾರೆ. ಅವರ ನಿಲುವು ಇಷ್ಟೇ “ ಮದುವೆಯಾಗಿ ಒಟ್ಟಿಗೆ ಜೀವನ ಮಾಡುವವರು ಅವರಿಬ್ಬರೂ. ನಾವು ಇಂದು ಇದ್ದೇವೆ, ನಾಳೆ ಇಲ್ಲ. ಅವರ ಆಯ್ಕೆಗೆ ನಾವೇಕೆ ಅಡ್ಡಿ ಹೇಳುವುದು “ಅಂತ.  ಈ ತರದ ನಿಲುವಿನಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅವರಿಗಿರುವ ದೂರದೃಷ್ಟಿ ಮತ್ತು ಅವರ ವೈರಾಗ್ಯ ಕಾಣುತ್ತದೆ. ಆದರೆ ಇಲ್ಲಿ ಬಹುಭಾಗ ನಮಗೆ ಕಾಣ ಸಿಗುವುದು ಮಧ್ಯ ತರಗತಿಯ ಕುಟುಂಬಗಳೇ. ಇವರಿಗಿಂತ ಒಂದು ಮೆಟ್ಟಿಲು ಮೇಲಿರುವ ವರ್ಗದವರು ಆಷ್ಟು ಬೇಗ ಪ್ರೇಮ ವಿವಾಹಕ್ಕೆ ಒಪ್ಪುವುದಿಲ್ಲ. ತಮಗಿರುವ ಎಲ್ಲ ರೀತಿಯ ದಾರಿಗಳಿಂದ ಮಕ್ಕಳನ್ನು ಒಪ್ಪಿಸುವ ಪ್ರಯತ್ನ ಮಾಡುತ್ತಾರೆ. ಒಪ್ಪದಿದ್ದಲ್ಲಿ ಹಿಂಸೆಗೂ ಹೇಸುವುದಿಲ್ಲ. ಇವರಿಗೆ ಸಮಾಜದ ನೋಟ ಮುಖ್ಯ. ಉತ್ತರ ಭಾರತದ ಕೆಲ ಭಾಗಗಳಲ್ಲಿ ಈ ರೀತಿಯ ಪ್ರೇಮ ವಿವಾಹಗಳಾದಲ್ಲಿ ಹೆಣ್ಣು ಕುಟುಂಬದ ಕಡೆಯವರು “ ಆನರ್ ಕಿಲ್ಲಿಂಗ್ ’ ಹೆಸರಲ್ಲಿ ಹುಡುಗನನ್ನು ಅಥವಾ ಇಬ್ಬರನ್ನೂ ಕೊಂದ ಪ್ರಕರಣಗಳು ಸಾಕಷ್ಟಿವೆ. ಅವರನ್ನು ತಮ್ಮ ಮನೆಗೆ ಬರಗೊಡದಿರುವುದು ಮುಂತಾದವುಗಳಿಂದ ಆ ದಂಪತಿಗಳಿಗೆ ಸಾತ್ವಿಕ ಹಿಂಸೆ ಕೊಡುತ್ತಾರೆ. ಪ್ರೇಮ ವಿವಾಹ ಮಾಡಿಕೊಂಡ ಜೋಡಿಗಳು ಒಮ್ಮೊಮ್ಮೆ ಭಿನ್ನ ಹಿನ್ನೆಲೆಗಳಿಂದ ಹೊಂದಾಣಿಕೆ ಕಾಣದೆ ಕಷ್ಟ ಪಡುತ್ತಾರೆ. ತಮ್ಮ ತಂದೆ ತಾಯಿಯರನ್ನು ಮತ್ತು ಬಂಧುವರ್ಗದವರ ಸಾನ್ನಿಹಿತ್ಯ ಕಳೆದುಕೊಂಡು ಮಾನಸಿಕ ದೌರ್ಬಲ್ಯಕ್ಕೊಳಗಾಗುತ್ತಾರೆ. ಈಗ ಎರಡೂ ಕಡೆಯ ವಾದಗಳನ್ನು ಒಮ್ಮೆ ತೂಗಿ ನೋಡೋಣ. ಪ್ರೇಮಿಗಳ ವಾದ: ನಾವು ಯುಕ್ತವಯಸ್ಕರಾಗಿದ್ದೇವೆ. ನಮ್ಮ ಬೇಕು ಬೇಡಗಳು ನಮಗೆ ಗೊತ್ತು. ನಮ್ಮ ವೈವಾಹಿಕ ಜೀವನ ಹೇಗಿರಬೇಕು ಎಂಬುದರ ಬಗ್ಗೆ ನಮಗೆ ಅರಿವಿದೆ. ನೀವೇನೋ ತ್ಯಾಗ ಮಾಡಿದ್ದೇವೆ ಎನ್ನುವುದು ಬೇಡ. ನಮ್ಮ ಬಾಲ್ಯದ ಮಧುರಕ್ಷಣಗಳನ್ನು ನಾವು ನಿಮಗೆ ಕೊಟ್ಟಿಲ್ಲವೇ ? ನನಗೆ ಆ ಹುಡುಗನ/ಹುಡುಗಿಯ ಪರಿಚಯವಿದೆ. ಅವಳ/ಅವನ ಜೊತೆ ನನ್ನ ಬಾಳು ಹಸನಾಗಿರುತ್ತದೆ. ಸಮಾಜ ಬದಲಾಗುತ್ತಿದೆ. ನೀವು ಸಹ ಆಗಿ. ಇನ್ನೆಷ್ಟು ದಿನ ನೀವು ನಿಮ್ಮ ಇಷ್ಟಾಯಿಷ್ಟಗಳನ್ನು ನಮ್ಮ ಮೇಲೆ ಹೇರುತ್ತೀರಿ? ಅಮೆರಿಕ, ಯೂರೋಪ್ ದೇಶಗಳ ಜನರನ್ನು ನೋಡಿ. ತಮಗೆ ಬೇಕಾದವರನ್ನು ಡೇಟಿಂಗ್ ಗಳ ಮೂಲಕ ತಾವೇ ಆರಿಸಿಕೊಳ್ಳುತ್ತಾರೆ. ಹುಡುಗಿಯರಾದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀವು ಯಾರೋ ನೋಡಿದ ಅಪರಿಚಿತ ಹುಡುಗನಿಂದ ಕತ್ತು ಬಗ್ಗಿಸಿ ತಾಳಿ ಕಟ್ಟಿಸಿಕೊಳ್ಳಲು ನಾನು ತಯಾರಿಲ್ಲ ಅಂತಲೂ ಹೇಳುವುದಿದೆ. ದೊಡ್ಡವರ ವಾದಃ ನೀವೆಷ್ಟೇ ದೊಡ್ಡವರಾದರೂ ಸಮಾಜದಲ್ಲಿನ ಒಳಿತು ಕೆಡಕುಗಳ ಪರಿಚಯವಿರುವುದಿಲ್ಲ. ಅದಕ್ಕೆ ನಾವು ಹಿನ್ನೆಲೆ ಎಲ್ಲ ವಿಚಾರಿಸಿ, ನೋಡಿ ಮದುವೆ ಮಾಡುತ್ತೇವೆ. ಅದಕ್ಕೆ ಏಕೆ ಆಕ್ಷೇಪಣೆ? ನಾವೇನು ನಿಮ್ಮ ಶತ್ರುಗಳೇ ? ನಿಮ್ಮ ಒಳಿತು ಕೆಡುಕು ನಮಗೆ ಗೊತ್ತಾಗೋದಿಲ್ವಾ ? ನಾವದೆಷ್ಟು ನಮ್ಮ ಸುಖಗಳನ್ನು ತ್ಯಾಗ ಮಾಡಿ ನಿಮ್ಮನ್ನು ಬೆಳೆಸಿದ್ದೇವೆ ಗೊತ್ತಾ? ಕೊನೆಗೆ ಈ ತರನಾ ಮಾಡೋದು? ನಾವೆಲ್ಲ ಈ ತರದ ಮದುವೆ ಆದವರೇ. ನಾವೇನಾಗಿದ್ದೇವೆ ? ನಮ್ಮ ಜಾತಿಯವರಲ್ಲಿ ನಮ್ಮ ಮರ್ಯಾದೆ ಉಳಿಯುತ್ತದೆಯೇ ? ನಾಲ್ಕು ಜನದ ನಡುವೆ ಜೀವನ ನಡೆಸುವುದು ಹೇಗೆ ? ನಿಮ್ಮ ತಂಗಿಯ ಮದುವೆ ಹೇಗಾದೀತು ನೀನು ಈ ರೀತಿ ಮಾಡಿದರೆ ? ಎರಡೂ ಕಡೆಯ ವಾದಗಳಲ್ಲಿ ನಿಜಾಂಶಗಳಿಲ್ಲ ಅಂತ ಹೇಳಲಾಗದು. ೨೦ನೆಯ ಶತಮಾನದ ಕೊನೆಯಲ್ಲಿ ಪ್ರಾರಂಭವಾದ ತಂತ್ರಜ್ಞಾನದ ಸ್ಫೋಟ ಇಡೀ ಜಗತ್ತಿನ ಜೊತೆಗೆ ಭಾರತದ ಸಮಾಜಕ್ಕೂ ತನ್ನ ಪ್ರಭಾವ ತೋರಿತು. ಹೆಣ್ಣುಮಕ್ಕಳಿಗೆ ಕೆಲಸ ಸಿಗಲು ಆರಂಭವಾಯಿತು. ಕೈತುಂಬಾ ಸಂಬಳ ಬರಲು ಶುರುವಾಯಿತು. ಕೆಲಸದ ಸಲುವಾಗಿ ನಗರಗಳಿಗೆ ಹೋಗುವುದು ನಡೆಯಿತು. ಅಲ್ಲಿಯ ವರೆಗೆ ನೆಂಟರಿಷ್ಟರ ಮನೆಗಳಲ್ಲಿ ಇರುತ್ತಿದ್ದ ಹೆಣ್ಣು ಮಕ್ಕಳು ಪೇಯಿಂಗ್ ಗೆಸ್ಟ್ ಗಳಾಗಿ ಇರುತ್ತ ಸ್ವತಂತ್ರವಾಗಿ ಇರಲು ಶುರುವಾಯಿತು. ಇತರೆ ರಾಜ್ಯಗಳ, ಪ್ರದೇಶಗಳ ಹುಡುಗರ ಜೊತೆ ಬೆರೆಯುವುದು ಪ್ರಾರಂಭವಾಯಿತು. ಇದೆಲ್ಲದರ ಜೊತೆ ಅಂತರ್ಜಾಲ ತುಂಬಾ ಸುಲಭದಲ್ಲಿ ಸಿಗುವಂತಾಗಿ ಜಗತ್ತಿನ ಬೇರೇ ಬೇರೇ ಸಮಾಜಗಳ ರೀತಿ ನೀತಿ, ಆಚಾರ ವ್ಯವಹಾರ ಗೊತ್ತಾಗಲು ಮೊದಲಾಯಿತು. ಒಂದು ರೀತಿ ಹೇಳ ಬೇಕೆಂದರೆ ಅಲ್ಲಿಯ ವರೆಗಿದ್ದ ಸಮಾಜದ ಮುಖವೇ ಬದಲಾಯಿತು. ಆಗಲೇ ಈ ರೀತಿಯ ಪ್ರೇಮ ವಿವಾಹಗಳು ಸಹ ಹೆಚ್ಚುತ್ತ ಹೋದವು. ತನಗೆ ಮೆಚ್ಚುಗೆಯಾದ ಹುಡುಗ/ಹುಡುಗಿಯರಲ್ಲಿ ಗುಣ ನೋಡಲಾರಂಭಿಸಿದ ಯುವ ಪೀಳಿಗೆ, ತಾವಿರುವ ಸಮಾಜದ ಕಟ್ಟಳೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಪ್ರಾರಂಭವಾಯಿತು. ಅಲ್ಲಿಂದ ಪ್ರಾರಂಭವಾದ ಈ ಪ್ರೇಮ ವಿವಾಹದ ರಭಸ ದೊಡ್ಡವರು ನೋಡಿ ಮಾಡುವ ವಿವಾಹ ವ್ಯವಸ್ಥೆಯನ್ನು ಮತ್ತು ಅದರಲ್ಲಿಯ ಪ್ರೀತಿಯನ್ನು ಪ್ರಶ್ನಿಸುವ ಮಟ್ಟಕ್ಕೆ ಬಂದಿದೆ. ಹೀಗೆ ಬದಲಾದ ದೃಷ್ಟಿಕೋನಕ್ಕೆ ಪೂರಕವಾಗಿ ನಮ್ಮ ಚಲನ ಚಿತ್ರಗಳು ಸಹ ಪ್ರೇಮದ ಕತೆಗಳನ್ನು ತೆಗೆದು ಅವುಗಳ ಪರವಾಗಿ ತಮ್ಮ ವಾದವನ್ನು ಮಂಡಿಸುವ ಸಂದೇಶಗಳನ್ನು ನೀಡಲಾರಂಭಿಸಿದವು. ಇದರಿಂದ ಯುವಲೋಕವೆಲ್ಲ ಒಂದು ತರವಾದ ರೆಬೆಲ್ ಮನಸ್ತತ್ವವನ್ನು ಅಳವಡಿಸುಕೊಂಡಿತು. ತಂದೆ ತಾಯಿಯರ ಮಾತು ಲಕ್ಷ್ಯವಿಲ್ಲದಾಯಿತು. ತಮಗೊಂದು ಸ್ಪೇಸ್ ಎಂಬ ಹೊಸ ಪದವನ್ನು ಹುಟ್ಟು ಹಾಕಿಕೊಂಡು ತಾವು ಮಲಗುವ ಕೋಣೆಗೆ ಬಾಗಿಲು ಜಡಿತು ತಮ್ಮದೇ ಲೋಕದಲ್ಲಿ ಇರಲು ಆರಂಭಿಸಿತು. ಅಮ್ಮ ಅಡಿಗೆ ಮಾಡುವುದಕ್ಕೆ, ಅಪ್ಪ ಎಟಿಎಂ ಕಾರ್ಡಿಗೆ ಹಣ ಹಾಕುವುದಕ್ಕೆ ಎನ್ನುವ ಧೋರಣೆ ಜಾಸ್ತಿಯಾಯಿತು. ಸಾಮಾಜಿಕ ಜಾಲತಾಣಗಳು ಬಳಕೆಗೆ ಬಂದ ಮೇಲಂತೂ ಯುವ ಪೀಳಿಗೆ ತಮ್ಮದೇ ಆದ ಲೋಕದಲ್ಲಿ ಸಂಚರಿಸಲಾರಂಭಿಸಿತು. ಇವರಿಗೆ ಮಾಧ್ಯಮಗಳಲ್ಲಿಯ ತಮ್ಮ ಸ್ನೇಹಿತರು ಹೇಳಿದ್ದೇ ವೇದವಾಕ್ಯ, ಅವರು ಮಾಡಿದ್ದೇ ಅನುಕರಣೆಗೆ ಯೋಗ್ಯ. ಹೀಗಿರುವ ಇವರಿಗೆ ಅರೇಂಜ್ಡ್ ಮದುವೆಗಳಲ್ಲಿ ಪ್ರೀತಿ ಇರುವುದಿಲ್ಲ ಎನಿಸುವುದು ಸ್ವಾಭಾವಿಕವಾಯಿತು. ನಮ್ಮ ದೇಶದಲ್ಲಿಯ ಅಂಕೆ ಸಂಖ್ಯೆಗಳ ಪ್ರಕಾರ ಪ್ರೇಮ ವಿವಾಹಗಳು ಶೇಕಡಾ ೧೮ ಮಾತ್ರ. ಇದರರ್ಥ ಇನ್ನೂ ೮೨% ಹುಡುಗರು ತಮ್ಮ ತಂದೆತಾಯಿಯ ಮಾತಿಗೆ ಬೆಲೆ ಕೊಡುತ್ತಿದ್ದಾರೆ ಅಂತಾಯಿತು. ಅವರು ತಮಗೆ ತೋರುವ ಪ್ರೀತಿ, ಭದ್ರತಾ ಭಾವಕ್ಕೆ ತಮ್ಮ ಮತ ಎಂದು ತೋರಿಸುತ್ತಿದ್ದಾರೆ ಅಂತಾಯಿತು. ಮತ್ತೆ ನಗರಗಳಲ್ಲಿ ಬಿಟ್ಟರೆ ನಮ್ಮ ಸಮಾಜದಲ್ಲಿ ಮದುವೆ ವಿಚ್ಛೇದನೆ ಸಹ ತುಂಬಾ ಕಮ್ಮಿ. ಇನ್ನೂ ಮದುವೆ ಎನ್ನುವ ವ್ಯವಸ್ಥೆಗೆ ಗೌರವ, ಮರ್ಯಾದೆ ತೋರುತ್ತಿದ್ದಾರೆ ಅಂತಾಯಿತು. ಏನೇ ಇರಲಿ ಎರಡೂ ಕಡೆಯವರು ಅರ್ಥ ಮಾಡಿಕೊಳ್ಳ ಬೇಕಾದ ಕೆಲ ವಿಷಯಗಳ ಕಡೆ ಗಮನ ಕೊಟ್ಟಲ್ಲಿ ಎರಡೂ ತರದ ವಿವಾಹಗಳು ಸಫಲವಾಗಿ ನಿಲ್ಲುತ್ತವೆ. ೧. ಮಕ್ಕಳು ತಮ್ಮ ತಂದೆ ತಾಯಿಯರ ಬಗ್ಗೆ ಗೌರವ ಹೊಂದಿರ ಬೇಕು. ಅವರು ತಮಗೆ ಒಳ್ಳೆಯ ಭಾಗಸ್ವಾಮಿಯನ್ನು ಹುಡುಕುತ್ತಾರೆ ಎನ್ನುವ ಭರವಸೆ ಇಡಬೇಕು. ತಮ್ಮ ಸ್ನೇಹಿತರು ಪ್ರೇಮದಲ್ಲಿ ಸಿಲುಕಿದಾರೆ ಎಂದು ತಾವು ಅನುಕರಿಸ ಬಾರದು. ೨. ಮಕ್ಕಳು ತಾವು ಪ್ರೇಮಿಸಿದ ವ್ಯಕ್ತಿಯನ್ನು ಮದುವೆಯಾಗ ಬೇಕೆಂದು ತಿಳಿಸಿದಾಗ ದೊಡ್ಡವರು ಸಹ ಅವರು ಆರಿಸಿದವರನ್ನು ಪರಿಶೀಲಿಸಿ ಒಪ್ಪಬೇಕು. ಮುಂದಿನ ಜೀವನ ಅವರದ್ದೇ ಅಲ್ಲವೇ ! ಸಮಾಜದಲ್ಲಿ ತಮ್ಮ ಅಹಂ, ಮರ್ಯಾದೆಯ ಬಗ್ಗೆ ಜಾಸ್ತಿ ಕಾಳಜಿ ಮಾಡಿ ಅವರ ಜೀವನಕ್ಕೆ ಕುತ್ತಗಬಾರದು. ೩. ದೊಡ್ಡವರು ನೋಡಿ ಮಾಡುವುದು ನಿಯಂತೃತ್ವ ಧೋರಣೆ ಎಂದು ಇವರು, ಪ್ರೇಮ ವಿವಾಹಗಳು ನಿಲ್ಲಲಾರವು ಎಂದು ದೊಡ್ಡವರು ನಿರ್ಣಯಿಸುವುದನ್ನು ಬಿಡಬೇಕು. ಎರಡೂ ಕಡೆಯವರು ತಮ್ಮ ಮುಂದಿನ ಪೀಳಿಗೆಗಳ ಭವಿತವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾರಿಗೂ ನೋವಾಗದಂತೆ ಮದುವೆಗಳು ನಡೆಸ ಬೇಕು. ಬದಲಾಗುತ್ತಿರುವ ಸಮಾಜದ ಬಗ್ಗೆ ಗೌರವವಿಟ್ಟುಕೊಳ್ಳ ಬೇಕು. ಹಠಕ್ಕೆ ಬಿದ್ದು ಕುಟುಂಬಗಳಲ್ಲಿ ನೋವು, ಹಿಂಸೆ ತಂದುಕೊಳ್ಳಬಾರದು. ಮದುವೆ ಎನ್ನುವ ನಮ್ಮ ಸಂಸ್ಕೃತಿಯ ವ್ಯವಸ್ಥೆಯನ್ನು ಮುಂದಿನ ಕೆಲ ಪೀಳಿಗೆಗಳ ವರೆಗೂ ಮುಂದುವರೆಸುವಂತಾಗಬೇಕು. *********************************************************

ವಿವಾಹ ವ್ಯವಸ್ಥೆ- ಒಂದು ಚರ್ಚೆ Read Post »

ಇತರೆ, ಜೀವನ

ಇತರೆ

ರೈತರ ಆಪತ್ಭಾಂದವ ಜೋಕಪ್ಪನೂ..! ಮಳೆ ತರುವ ದೇವರು ಜೋಕುಮಾರಸ್ವಾಮಿ. ಗಣೇಶ ಶಿಷ್ಟ ಪರಂಪರೆಯ ದೇವರು. ಅಲ್ಲದೇ ಜಾನಪದರ ದೇವರು ಜೋಕುಮಾರಸ್ವಾಮಿ.ಗಣೇಶ ಹೊಟ್ಟೆ ತುಂಬ ಉಂಡು ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆತಾಯಿಗಳಾದ ಶಿವ-ಪಾರ್ವತಿಯರಿಗೆ ವರದಿ ಒಪ್ಪಿಸಿದರೆ, ಜಾನಪದರ ದೇವರು ಜೋಕುಮಾರಸ್ವಾಮಿ ಇಲ್ಲಿ ಮಳೆ, ಬೆಳೆ ಇಲ್ಲದೇ ಕಂಗಾಲಾಗಿರುವ ಜನತೆಯ ಕಷ್ಟ ಕಾರ್ಪಣ್ಯಗಳ ವರದಿ ನೀಡಿ ಮಳೆ ಸುರಿಸಲು ವಿನಂತಿಸಿಕೊಳ್ಳುತ್ತಾನೆ. ಹೀಗಾಗಿಯೇ ಜೋಕುಮಾರಸ್ವಾಮಿ ಒಕ್ಕಲಿಗರಿಗೆ ಮಳೆ ತರುವ ನಂಬಿಗಸ್ತ ದೇವರು. ‘ಜೋಕುಮಾರಸ್ವಾಮಿ ಮಳಿ ಕೊಡಾವ ನೋಡ್ರೀ’ ಎಂದು ರೈತರು ಎದೆ ತಟ್ಟಿ ಹೇಳುತ್ತಾರೆ. ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ ‘ಜೋಕಪ್ಪ’ ಎಂಬ ಮುನಿಯ ಮಗನೆಂದೂ, ಜೇಷ್ಠಾ ದೇವಿಯ ಮಗನೆಂದೂ ಹೇಳಲಾಗುತ್ತಿದೆ. ಹುಟ್ಟಿದೊಡನೆ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ ಹೋಗುತ್ತಾನೆ. ಜೋಕುಮಾರನನ್ನು ಹೊತ್ತು ತರುವ ಬುಟ್ಟಿಯಲ್ಲಿ ಯಥೇಚ್ಛವಾಗಿ ಬೇವಿನ ಸೊಪ್ಪನ್ನಿಟ್ಟಿರುತ್ತಾರೆ. ಹಾಗಾಗಿಯೇ ದುರ್ಮರಣಕ್ಕೀಡಾದವರನ್ನು ಬೇವಿನ ಸೊಪ್ಪು ಮುಚ್ಚಿ ಶವ ಸಾಗಿಸಲಾಗುತ್ತದೆ. ಆ ಕಾರಣವಿಟ್ಟುಕೊಂಡೇ ಹಳ್ಳಿಯಲ್ಲಿ ತಮ್ಮೂರಿನ ಉಡಾಳರಿಗೆ, ಗೂಂಡಾಗಳಿಗೆ, ಫಟಿಂಗರಿಗೆ ‘ಅಂವಾ ಹೊಕ್ಕಾನಳ ಬೇವಿನ ತೊಪ್ಪಲ ದೊಳ್ಗ’ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿರುತ್ತಾರೆ. ಇಂಥ ಜೋಕುಮಾರ ಹುಟ್ಟುವುದು ವಿಶ್ವಕರ್ಮರ ಮನೆಯಲ್ಲಿ. ಮಣ್ಣಿನಿಂದ ತಿದ್ದಿ, ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿ ಇದಾಗಿರುತ್ತದೆ. ಮೂರ್ತಿ ಮಾಡಿದವರಿಗೆ ಕೊಡಬೇಕಾದ ಗೌರವ ಧನದೊಂದಿಗೆ ಎಲೆ. ಅಡಿಕೆ, ಉಲುಪಿ (ಹಿಟ್ಟು, ಬೇಳೆ, ಬೆಲ್ಲ, ಅಕ್ಕಿ) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ. ಗೌಡರ ಮನೆಯಲ್ಲಿ ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ. ವಾಲ್ಮೆಕಿ ಜನಾಂಗದ, ಕೋಲಕಾರ, ಕಬ್ಬಲಿಗರ, ಅಂಬಿಗರ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಆ ಹಾಡುಗಳಲ್ಲಿ ಆತನ ಜನನ, ಉಡಾಳತನ, ಆತನ ಕೊಲೆ, ನಂತರದಲ್ಲಿ ‘ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿ’ ಎಲ್ಲವೂ ಆ ಹಾಡಿನಲ್ಲಿ ಬರುತ್ತವೆ. ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು ಇಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ ಎಂಬ ನಮ್ಮ ‘ಜನಪದ’ರದು. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ. ಬೇವಿನ ಸೊಪ್ಪು ಕಹಿಯಾದ ಹಾಗೂ ಔಷಧೀಯ ಗುಣವಿರುವ ಸೊಪ್ಪು.ಊರಲ್ಲಿ ಹೀಗೆಯೇ ಏಳು ದಿನ ತಿರುಗಾಡಿದನಂತರ ತಳವಾರರ ಮನೆಯಲ್ಲಿ ಬುಟ್ಟಿ ತುಂಬುವಷ್ಟು ಜೋಳದ ಕಡುಬು ಮಾಡಿ ಜೋಕುಮಾರನ ಮೈ ಮೇಲಿನ ವಸ್ತುಗಳನ್ನು ತೆಗೆದು ಆತನ ಕುತ್ತಿಗೆ ಮುಚ್ಚುವವರೆಗೆ ಕಡುಬುಗಳನ್ನು ಪೇರಿಸಿ ಇಡಲಾಗುತ್ತದೆ.ಒಂದು ಕೈಯ್ಯಲ್ಲಿ ಕೊಬ್ಬರಿ ಬಟ್ಟಲನ್ನು, ಇನ್ನೊಂದು ಕೈಯ್ಯಲ್ಲಿ ದೀಪ ಹಚ್ಚಿದ ಪರಟೆಯನ್ನು ಕೊಟ್ಟಿರುತ್ತಾರೆ. ಆ ನಂತರದಲ್ಲಿ ಗಂಡಸೊಬ್ಬನು ಜೋಕುಮಾರನನ್ನು ಕುಳ್ಳಿರಿಸಿದ ಬುಟ್ಟಿಯನ್ನು ಹೊತ್ತು ನಡೆಯುತ್ತಾನೆ. ಹೀಗೆ ಕತ್ತಲಲ್ಲಿ ಸಾಗಿದ ಜೋಕುಮಾರನನ್ನಾಗಲೀ, ಆತನ ಕೈಯ್ಯಲ್ಲಿಯ ದೀಪವನ್ನಾಗಲೀ ಯಾರೂ ನೋಡುವಂತಿಲ್ಲ. ನೋಡಿದರೆ ಅಪಶಕುನವಷ್ಟೇ ಅಲ್ಲ, ವರ್ಷ ತುಂಬುವದರೊಳಗಾಗಿ ನೋಡಿದಾತ ಲೈಂಗಿಕ ಹಗರಣದಲ್ಲಿ ಸಿಲುಕಿ ಅಪಮಾನವಾಗಿ ಇಲ್ಲವೇ ಪ್ರಾಣ ಕಳೆದುಕೊಳ್ಳುವ ಅಪಾಯವೂ ಉಂಟೆಂದು ಹೇಳಲಾಗುತ್ತದೆ ‘ಜನಪದ’ದಲ್ಲಿ. ಜೋಕುಮಾರನ ಹತ್ಯೆಯಾಗುವ ದಿನ ಆತ ಹಾಯ್ದು ಹೋಗುವ ದಾರಿಯುದ್ದಕ್ಕೂ ಮೊದಲೇ ಒಬ್ಬಾತ ‘ಜೋಕುಮಾರ ಬರ್ತಾನ, ಲಗೂ ಬಾಗ್ಲಾ ಮುಚ್ಚ್ರೀ’ ಎಂದು ಹೇಳುತ್ತಾ ಹೋಗುತ್ತಾನೆ. ಮಧ್ಯರಾತ್ರಿಯ ನಂತರವೇ ಜೋಕುಮಾರನನ್ನು ಹೊತ್ತು ಕೇರಿಗೆ ಕರೆತರುತ್ತಾರೆ. ಕೇರಿಯ ಚಾವಡಿಯಲ್ಲೊಬ್ಬ ಬೆನ್ನು ಹಿಂದಕ್ಕೆ ಮಾಡಿಯೇ ಜೋಕುಮಾರನ ಬುಟ್ಟಿಯನ್ನು ತೆಗೆದುಕೊಳ್ಳುತ್ತಾನೆ. ಇಲ್ಲಿಯೂ ಬುಟ್ಟಿ ಕೊಡುವವ, ತೆಗೆದುಕೊಳ್ಳುವವ ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುವಂತಿಲ್ಲ. ನಂತರ ಬುಟ್ಟಿಯಲ್ಲಿದ್ದ ಕಡುಬುಗಳನ್ನು ತೆಗೆಯುತ್ತಾರೆ. ಅದೇ ಸಮಯದಲ್ಲಿ ಚಾವಡಿ ಕಟ್ಟೆಯ ಮೇಲೆ ಜೋಕುಮಾರನ ಬುಟ್ಟಿಯ ಸಮೀಪ ಬಾರಿ ಮುಳ್ಳಿನ ಕಂಟಿಯನ್ನಿಟ್ಟಿರುತ್ತಾರೆ. ವೇಶ್ಯೆಯರು ಚಾವಡಿಯಲ್ಲಿಟ್ಟಿರುವ ಜೋಕುಮಾರನ ಬುಟ್ಟಿಯ ಸುತ್ತಲೂ ಸುತ್ತುತ್ತಿರಬೇಕಾದರೆ ಪಕ್ಕದಲ್ಲಿರಿಸಲಾಗಿರುವ ಮುಳ್ಳಿನ ಕಂಟಿ ಅವರ ಸೀರೆಗೆ ಸಿಕ್ಕಿ ಜಗ್ಗಿದಾಗ ‘ಜೋಕುಮಾರ ನಮ್ಮನ್ನು ಹಿಡಿದುಕೊಳ್ಳಲು ಬಂದ, ನಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ’ ಎಂದು ಭೂಮ್ಯಾಕಾಶ ಬಿರಿಯುವಂತೆ ಬಾಯಿ ಮಾಡತೊಡಗುತ್ತಾರೆ. ಅದನ್ನು ಕೇಳಿದವರೆಲ್ಲ ಓಡಿ ಬಂದು ಜೋಕುಮಾರನನ್ನು ಒಣಕೆಯಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕುತ್ತಾರೆ. ಜೋಕುಮಾರನ ಮರಣದ ನಂತರ ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ, ಕೆರೆಯ ಸಮೀಪವೋ, ನದಿ ದಂಡೆಗೋ ಒಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ ‘ದಿನ’ ಮಾಡಿ ಮುಗಿಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ..! ಇದು ಜೋಕುರಸ್ವಾಮಿಯ ಜಾನಪದ ಕತೆ… ನಿಜಕ್ಕೂ ಜೊಕುಮಾರಸ್ವಾಮಿ ರೈತರ ದೇವರು. ಏಕೆಂದರೆ ರೈತರ ಪೀಕು-ಪೈರಿನ ಹುಲುಸುವಿಕೆ ಬಯಸುವ ದೇವರು ಜೋಕುಮಾರಸ್ವಾಮಿ. ಮಳೆಗಾಗಿ ಶಿವ-ಪಾರ್ವತಿಯರನ್ನು ಅಂಗಲಾಚಿ ಮಳೆ ತರಿಸುವ ದೇವರು.ಜೊಕುಮಾರಸ್ವಾಮಿಗಿಂತಲೂ ಮೊದಲು ಬಂದು ಹೋಗುವ ದೇವರು ಗಣೇಶ ಉಂಡಿ-ಕಡಬು ತಿಂದು ಸಂಪಲೇಪರಾಕೆನ್ನುತ್ತಾ ರೈತರ ಕಷ್ಟ-ಕಾರ್ಪಣ್ಯದತ್ತ ಗಮನ ಕೊಡದ ದೇವರು..! ಹೀಗಾಗಿಯೇ ಜೊಕಪ್ಪ ಅಥವಾ ಜೋಕುಮಾರಸ್ವಾಮಿ ರೈತರಿಗೆ ಆಪದ್ಭಾಂವ ಅನ್ನಲೇನೂ ಅಡ್ಡಿಯಿಲ್ಲ… *********************** ಕೆ.ಶಿವು.ಲಕ್ಕಣ್ಣವರ

ಇತರೆ Read Post »

You cannot copy content of this page

Scroll to Top