ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಲಹರಿ

“ಒಂಟಿ ಚಪ್ಪಲಿಯ ಗೋಳಾಟ”ಕಲ್ಪನಾ ಎಸ್‌ ಪಾಟೀಲ್‌ ಅವರ ಒಂದು ಲಹರಿ ಬರಹ

ಲಹರಿಸಂಗಾತಿ ಕಲ್ಪನಾ ಎಸ್‌ ಪಾಟೀಲ್‌ “ಒಂಟಿ ಚಪ್ಪಲಿಯ ಗೋಳಾಟ” ನಾಲ್ಕು ದಿನ ಅಂತ ಊರಿಗೆ ಹೋಗಿದ್ದೆಮರಳಿದಾಗ ಅನಿಸ್ತಿತ್ತು ಏನೋ ಇಲ್ಲಲಾಮನೆ ಮುಂದ ಅಂಗಳದಾಗ,ಏನಿಲ್ಲ,?ಏನಿಲ್ಲ ಅಂತ ಒಳಗ ಕಾಲಿಡೊದ್ರಾಗ ಒಂಟಿ ಚಪ್ಪಲಿ ಗೋಳಾಡತಿತ್ತು.ಗೊಳೋ ಅಂತ ಅಳತಿತ್ತು  ಕುಂಯ್ಯೋss ಮರೋss ಅಂತ ಆಗಾಗ ನಿಟ್ಟುಸಿರು ಬಿಡತಾನೆ ಇತ್ತು. ನಾ ಏಕಾಂಗಿ ಆಗೇನಿ ಅಂತ ಬಿಕ್ಕಿ ಬಿಕ್ಕಿ ಅಳೋದನ್ನ  ನೋಡಿ.. ಏನಾಯಿತು? ಯಾಕೆ ಈ ರೋದನೆ? ಬಿಸಿಲ ಜಾಸ್ತಿ ಆಯಿತಾ?ಮನಸ್ಸು ಪ್ರಶ್ನೆ ಹಾಕಿತು,ತಕ್ಷಣ ನೆರಳಲ್ಲಿ ಬಿಡೋಕ ಬಲಕಾಲು ಮುಂದೆ ಬಂದು, ಗಬಕ್ಕನ ಹಿಂದೆ ಸರಿದು ಸುಮ್ನ ನಿಲ್ಲತು.ಯಾಕ ನಿನಗೇನಾತು? ನೀ ಯಾಕ ನಿಂತಿ ನೆರಳಾಗ ಬಿಡಾಕತ್ತಿದ್ದ್ಯಲ್ಲ.?ಅಲ್ಲಿವರೆಗೂ ಅದು ಎಡಗಾಲಿನ ಚಪ್ಪಲಿ, ಅಂತ ನನ್ನ ತಲೆಗೆ ಹೊಳದಿರಲಿಲ್ಲ. ಹೌದಲ್ಲ.ಹೌದು, ಎಲ್ಲಿ ನನ್ನ ಜೊತೆಗಾರ? ನೀನು ಹೋದಾಗಿನಿಂದ ನಾನು ಒಂಟಿಯಾಗಿದ್ದೀನಿ ಅಂತ ಗೋಳಾಡಾಕತ್ತು. ನಾವಿಬ್ಬರೂ ಎಂದೂ ಅಗಲತಿರಲಿಲ್ಲ,  ಎಲ್ಲಿ ಹೋದರೂ ಇಬ್ಬರೂ ಜೊತೆಯಾಗೆ ಹೋಗತಿದ್ದವಿ. ಒಟ್ಟಿಗೆ ಇರತಿದ್ದವಿ.ಅದ ಯಾವ ನಾಯಿ ನಮ್ಮನ್ನ ಬ್ಯಾರೆಮಾಡಿದೆಯೋ? ಮುಗಿತಿನ್ನು ನನ್ನ ಕತಿ,ನೀನು ನನ್ನ ದೂರ ಮಾಡತಿ.ಕಸದಾಗ ಎಸಿತಿ?ನನ್ನ ನೋವು ನಿನಗೆಲ್ಲಿ ಕಾಣಿಸಬೇಕು.  ನನ್ನ ನೀನ ತಯಾರ ಮಾಡಿ, ಆದ್ರೂ ನನಗ ಮಾತು ಬರುದಿಲ್ಲ.ಅದೇನೋ ಅಂತೀರಲ್ಲ ನೀವು ಮಿಸ್ ಮ್ಯಾಚಂತ ಹಂಗ ಮಾಡಕೊ.ನಾ ಎಲ್ಲಿ ಹೋಗುದಿಲ್ಲ ಅಂತು.ಹುಂ, ಆಯಿತ ಆಯಿತ ಸರಿ ನೋಡತಿನಿ ತಡೆ.ಮಿಸ್ ಮ್ಯಾಚಂತ,ಆಹಹಹಾ…ಈ ನಮ್ಮ ಕರಿಯಗ ಚಪ್ಪಲಿಯಂದ್ರ ಬಾಳ  ಪ್ರೀತಿ. ನನಗ ಅವನ ಮ್ಯಾಲ ಸಂಶಯ ಬರಾಕತ್ತಿತ್ತು.ನನ್ನ ನೋಡಿ ಎದೆ ಎತ್ತರಕ್ಕ ಜಿಗಿದ, ಮುಖ ನೆಕ್ಕಿ ಅರಿವಿ ಜಗ್ಗಿ ನನ್ನ ಯಾಕ ಬಿಟ್ಟ ಹೋಗಿದ್ದೆ? ಅಂತ ಕೇಳತಿತ್ತು.ಲೇ ಕರಿಯ ಚಪ್ಪಲಿ ಎಲ್ಲ್ಯಲೇ? ನಾ ನೋಡಿಲ್ಲ ಅಂತ ವರದಿ ಒಪ್ಪಿಸಿತು.ಬಾಳಷ್ಟು ಓಣ್ಯಾಗ ಹೋಗವ್ರನ್ನ ಸ್ನೇಹಿತರನ್ನ ಮಾಡಿಕೊಂಡಿದ್ದ. ಮನಿಯೆಲ್ಲ ಹುಡಕಾಡಿ, ಒಳಗ ಎಲ್ಲ ಹುಡಕಾಡಿದೆ.ಈಗರ ಬಂದಿ, ಕುಂಡರು, ನೀರು  ಕುಡಿ ಅಂದಳು ಆಯಿ. ಸಿಗತೈತಿ ಇಲ್ಲೆ, ಎಲ್ಲ್ಯರ ಬಿದ್ದಿರತೈತಿ.ನನಗೂ ಅದ ಸಿಗೂತನ ಸಮಾಧಾನ ಇರಲಿಲ್ಲ. ಯಾಕೋ ಬಾಳ ಕೆಟ್ಟ ಅನಿಸಾಕತ್ತಿ,  ನಾನು- ನನ್ನ ಸ್ನೇಹಿತರಿಂದ ದೂರಾದಂಗ ಅನಿಸಾಕತ್ತ.ಹೊರಗಡೆ ಹೋಗಿ ಮನೆಯ ಹಿಂದೆ, ಅಗ್ಗಲ-ಮಗ್ಗಲ ಒಂದು ಸುತ್ತ ಹೊಡೆದು ಸ್ವಲ್ಪ ದೂರ ಹೊದಾಗ ಅಲ್ಲಿ ಒಂದು ಚಪ್ಪಲಿ ಕಾಣಿಸಿತು, ಹತ್ತಿರ ಹೋಗಿ ನೋಡಿದ್ರ ಬಲಗಾಲಿನ ಚಪ್ಪಲಿ ಅನಾಥವಾಗಿ ಬಿದ್ದಿತ್ತು. ಇದರದು ಅದ ಗೋಳು. ಅಯ್ಯೋ, ಯಾರಿಗೆ ಹೇಳಲಿ ನನ್ನ ಗೋಳು? ನಮಗೂ ಮನುಷ್ಯರ ತರ ಮಾತಾಡೋಕ ಬರತಿದ್ರ, ಕೂಗಬಹುದಿತ್ತು. ಚೀರಿ ಹೇಳಬಹುದಿತ್ತು.  ಗಂಟಲೆ ಇಲ್ಲ. ತಮ್ಮ ಪಾದಗಳನ್ನ ಸುರಕ್ಷಿತವಾಗಿಟ್ಟುಕೊಳ್ಳಾಕ ನಮ್ಮನ್ನ ಸೃಷ್ಟಿ ಮಾಡಿಕೊಂಡ ಮನ್ಷ್ಯಾ ಆವಾಗವಾಗ, ಕಳೆದುಕೊಂಡಾಗಲೂ “ಹೋಗಲಿ ಬಿಡ ಪೀಡಾ ಹೋತಂತ” ಅಂತಿರಿ. ನೀವು ಕಳೆದು ನಮ್ಮನ್ನ ಪೀಡಾ ಅಂತಿರಿ. ಇದು ಖರೇನ, ಹಿಂಗ ಎಷ್ಟ ಸಲ ನಮ್ಮ ಮನ್ಯಾನವ್ರು, ಮದುವೆಗೆ, ಮಣ್ಣಿಗೆ ಹೋದಾಗ, ಯಾರೋ ಹಳೆಯ ಹರಿದ,ಸವೆದ,ಬಣ್ಣ ಮಾಸಿದ, ಉಂಗುಟ ಕಿತ್ತಿದ ಜೋಡುಗಳನ್ನ ಬಿಟ್ಟು ಇವರ ಹೊಸ ಜೋಡನ್ನ ಧರಿಸಿ ಹೋಗಿದ್ದಾಗ ಬರಿಗಾಲಲ್ಲಿ ಮನೆಗೆ ಬಂದಾಗ ಹಂಗ ಹೇಳಿದ್ದ ನೆನಪಾಯಿತು. ಅಷ್ಟರಾಗ, ಇದು ಓsss ನೀವೇನು ನನ್ನ ಹುಡಕ್ಕೊಂಡ ಬಂದ್ರಾ ಅಂತ ಕೇಳತು.ಹುಂ ಅಂದೆ..ನೀವು ಊರಗೆ ಹೋಗಬೇಕಾದ್ರ ನಮ್ಮನ್ನ ಎತ್ತಿಟ್ಟು ಹೋಗೊದಲ್ಲ! ನಮಗೇನು ಎದ್ದ ಹೋಗಾಕ ನಿಮ್ಮ ತರಹ ಕಾಲಿದ್ದಾವಾ… ನಮಗ ಜೀವ ಇಲ್ಲದಂಗ ಸೃಷ್ಟಿ ಮಾಡಿರಿ.ಬೇರೆ ಬೇರೆ ದೇಶದಾಗ ಮಕ್ಕಳಿಂದ ಹಿಡಿದು ದೊಡ್ಡವರು ಧರಿಸೊ ಜೋಡಗಳೊಳಗ ಬಣ್ಣ ಬಣ್ಣದ ವಿದ್ಯುತ್ ಲೈಟ್ , ಮ್ಯುಜಿಕ್ ಹಾಕತಾರ. ನಮ್ಮನ್ನ ಇಡಾಕ ಚಂದ ಚಂದ ಕಪಾಟ ಮಾಡಸ್ತಾರ. ನೀವು ಅದಿರಿ ಕೋಟಿಗಟ್ಟಲೆ ರೊಕ್ಕ ಖರ್ಚ ಮಾಡಿ ಮನೆ ಕಟ್ಟಸ್ತಿರಿ, ಹೊರತು ನಮಗ ಜಾಗ ಮಾತ್ರ ಇರುದಿಲ್ಲ. ಹಾಂ, ಇನ್ನೊಂದೇನದ ಹೊರಗಿನಿಂದ ಬರುವವರಗೆ ನಾವು ಮೊದಲ ಕಾಣಿಸಬಾರದಂತಿರಿ. ಹೇಳಿ ಮಾಡಸಿದ ಜೋಡಿ ಸಿಗುದಂದ್ರ ನಾವ ಅಲ್ಲೇನ,  ಮತ್ತೇನ ಸಿಗತೈತಿ ನಿಮಗ?ಅಂದಾಗ ನನಗ “ಹೇಳಿ ಮಾಡಿಸಿದ ಜೋಡು ಸಿಗುವುದು ಚಪ್ಪಲಿಯಲ್ಲಿ ಮಾತ್ರ ಉಳಿದೆಲ್ಲ ಹೊಂದಾಣಿಕೆ” ಅಂತ ಎಲ್ಲೋ ಓದಿದ್ದ ನೆನಪಾಯಿತು. ನಾನಂದೆ ಹೋಗಲಿ ಬಿಡು, ಈಗ ಸುಮ್ಮನ ನಡಿ ಅಂತ ಒಂಟಿಯಾದ ಜೋಡನ್ನ ಧರಿಸಿ ಮನೆಗೆ ಬಂದು ಒಂಟಿಯಾಗಿದ್ದರ ಪಕ್ಕ ಬಿಟ್ಟಾಗ, ಎರಡು  ಬಾಳ ಖುಷಿ ಪಟ್ಟಂತೆ ಭಾಸವಾಗತಿತ್ತು. ಎರಡು ಕೋಪ,ಇರಿಸುಮುರಿಸನ್ನ ಬಿಟ್ಟು ಎಲ್ಲ ಬೇಗ ಮರೆತು ಶಾಂತ ಅದವು. ನನ್ನ ಮನಸ್ಸು ಹೇಳಿತು, ನೋಡು ನೀವು ನರಮಾನವರು ಇರತಿರಿ, ಎನಾದ್ರೂ ಆದ್ರ ಲಗೂ ಮರೆಯೊದಿಲ್ಲ,  ದುಃಖಿಸ್ತಿರಿ,  ಮತ್ತ ಮತ್ತ ನೆನೆಸಿಕೊಂಡು ಅಳತಿರಿ. ಏನೋ, ಆದರೂ ಮನುಷ್ಯ ಅನ್ನೋ ವಿಚಿತ್ರ ಪ್ರಾಣಿನ ಆ ಭಗವಂತ ಅದೆಷ್ಟು ತಾಳ್ಮೆಯಿಂದ ಸೃಷ್ಟಿ ಮಾಡಿದ್ದಾನಲ್ಲ ಅಂತು. ಹುಂ, ಅದಕ್ಕ ಅಲ್ಲ ನನ್ನಲ್ಲಿ ಅಷ್ಟ ತಾಳ್ಮೆ ಐತಿ ಅಂದೆ, ಅದು ಶಾಂತವಾಗಿ ನಸುನಕ್ಕಿತು. ನನಗೂ ಖುಷಿ ಆಯಿತು. “ಹುಂ, ಚಪ್ಪಲಿ ಸಿಕ್ಕಿತಲ್ಲ, ಬಾ ಇನ್ನsss  ಒಳಗ, ಬಿಸಿಲ ಬಾಳೈತಿ ಹೊರಗ” ಅಂತ ಆಯಿಯ ಕೂಗು ಕೇಳಿಸಿ ಒಳ ನಡೆದೆ. ಕಲ್ಪನಾ ಎಸ್ ಪಾಟೀಲ ಕಾವ್ಯಧರೆ

“ಒಂಟಿ ಚಪ್ಪಲಿಯ ಗೋಳಾಟ”ಕಲ್ಪನಾ ಎಸ್‌ ಪಾಟೀಲ್‌ ಅವರ ಒಂದು ಲಹರಿ ಬರಹ Read Post »

ಇತರೆ

“ನಾವಾರು ಎಂಬ ಅರಿವು – ಜೀವನದ ನಿಜವಾದ ಶಕ್ತಿ”ಪೃಥ್ವಿರಾಜ್ ಟಿ ಬಿ.

ವ್ಯಕ್ತಿ ಸಂಗಾತಿ ”ಪೃಥ್ವಿರಾಜ್ ಟಿ ಬಿ. “ನಾವಾರು ಎಂಬ ಅರಿವು – ಜೀವನದ ನಿಜವಾದ ಶಕ್ತಿ ಮಾನವನ ಜೀವನದಲ್ಲಿ ಅನೇಕ ಸವಾಲುಗಳು ಬರುತ್ತವೆ. ಕೆಲವೊಮ್ಮೆ ಪರಿಸ್ಥಿತಿಗಳು ಕಠಿಣವಾಗಿರುತ್ತವೆ, ಕೆಲವೊಮ್ಮೆ ಜನರ ಮಾತುಗಳು ನಮ್ಮ ಮನಸ್ಸನ್ನು ನೋಯಿಸುತ್ತವೆ. ಆದರೆ ಈ ಎಲ್ಲದರ ಮಧ್ಯೆ ಅತ್ಯಂತ ಮುಖ್ಯವಾದ ಒಂದು ವಿಷಯ ಇದೆ – ನಾವಾರು ಎಂಬ ಅರಿವು. “ನಾವೇನೆಂದು ನಮಗೆ ತಿಳಿದಿದ್ದರೆ ಸಾಕು, ಮೂರನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ” ಎಂಬ ಮಾತು ಜೀವನದ ಬಹಳ ದೊಡ್ಡ ಸತ್ಯವನ್ನು ಹೇಳುತ್ತದೆ. ಇಂದಿನ ಸಮಾಜದಲ್ಲಿ ಜನರು ತಮ್ಮ ಜೀವನಕ್ಕಿಂತ ಹೆಚ್ಚು ಇತರರ ಜೀವನದ ಬಗ್ಗೆ ಮಾತನಾಡುತ್ತಾರೆ. ಕೆಲವರು ಪ್ರೋತ್ಸಾಹ ನೀಡುತ್ತಾರೆ, ಆದರೆ ಕೆಲವರು ಟೀಕೆ ಮಾಡುತ್ತಾರೆ. ನಮ್ಮ ಸಾಧನೆ, ನಮ್ಮ ಪ್ರಯತ್ನ ಅಥವಾ ನಮ್ಮ ಕನಸುಗಳ ಬಗ್ಗೆ ಕೆಲವರು ಅರ್ಥಮಾಡಿಕೊಳ್ಳದೇ ಮಾತನಾಡಬಹುದು. ಈ ಸಂದರ್ಭಗಳಲ್ಲಿ ನಾವು ಅವರ ಮಾತುಗಳನ್ನು ಮನಸ್ಸಿಗೆ ಹಾಕಿಕೊಂಡರೆ ನಮ್ಮ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಆದ್ದರಿಂದಲೇ ಸ್ವತಃ ನಮ್ಮನ್ನು ನಾವು ಅರಿತುಕೊಳ್ಳುವುದು ಬಹಳ ಮುಖ್ಯ. ಮಾನವನಿಗೆ ತನ್ನ ಮೇಲೆ ನಂಬಿಕೆ ಇದ್ದರೆ, ಯಾವುದೇ ಟೀಕೆ ಅಥವಾ ನಿಂದೆ ಅವನನ್ನು ಕುಗ್ಗಿಸಲು ಸಾಧ್ಯವಿಲ್ಲ. ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಚೆನ್ನಾಗಿ ಓದುತ್ತಿದ್ದಾನೆ ಎಂದುಕೊಳ್ಳಿ. ಆದರೆ ಕೆಲವು ಜನ “ನೀನು ಇದನ್ನು ಮಾಡಲಾಗುವುದಿಲ್ಲ” ಎಂದು ಹೇಳಬಹುದು. ಆ ಮಾತುಗಳನ್ನು ನಂಬಿ ಆತ ನಿರಾಶೆಯಾಗಿದರೆ ಅವನ ಪ್ರಯತ್ನ ವ್ಯರ್ಥವಾಗುತ್ತದೆ. ಆದರೆ ಅವನು ತನ್ನ ಶ್ರಮದ ಮೇಲೆ ವಿಶ್ವಾಸ ಇಟ್ಟಿದ್ದರೆ, ಇತರರ ಮಾತು ಅವನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜೀವನದಲ್ಲಿ ಯಶಸ್ಸು ಸಾಧಿಸಿದ ಅನೇಕ ಮಹಾನ್ ವ್ಯಕ್ತಿಗಳ ಕಥೆಗಳನ್ನು ನೋಡಿದರೆ ಇದೇ ವಿಷಯ ಸ್ಪಷ್ಟವಾಗುತ್ತದೆ. ಅವರು ತಮ್ಮ ಗುರಿಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು. ಪ್ರಾರಂಭದಲ್ಲಿ ಹಲವರು ಅವರನ್ನು ಟೀಕಿಸಿದರು, ಹಾಸ್ಯ ಮಾಡಿದರು. ಆದರೆ ಅವರು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ತಮ್ಮ ದಾರಿಯಲ್ಲಿ ಸಾಗಿದರು. ಅಂತಿಮವಾಗಿ ಅವರ ಪರಿಶ್ರಮವೇ ಅವರನ್ನು ಯಶಸ್ಸಿನ ಶಿಖರಕ್ಕೆ ಕರೆದೊಯ್ದಿತು. ಇಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು (Social Media) ನಮ್ಮ ಜೀವನದ ಒಂದು ಭಾಗವಾಗಿವೆ. ಇಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಸುಲಭವಾಗಿ ಹೇಳುತ್ತಾರೆ. ಕೆಲವೊಮ್ಮೆ ಅವು ಒಳ್ಳೆಯವು ಆಗಿರಬಹುದು, ಆದರೆ ಕೆಲವೊಮ್ಮೆ ಅವು ನೋವುಂಟುಮಾಡುವಂತೆಯೂ ಇರಬಹುದು. ಈ ಕಾರಣದಿಂದ ಕೆಲವರು ಇತರರ ಅಭಿಪ್ರಾಯಗಳಿಗೆ ಅತಿಯಾದ ಮಹತ್ವ ಕೊಡುತ್ತಾರೆ. ಅವರು ತಮ್ಮ ಸ್ವಂತ ಸಂತೋಷವನ್ನೇ ಮರೆತುಬಿಡುತ್ತಾರೆ. ಆದರೆ ನಾವು ನೆನಪಿಡಬೇಕಾದದ್ದು ಒಂದೇ – ನಮ್ಮ ಜೀವನವನ್ನು ನಾವು ಬದುಕಬೇಕು, ಇತರರು ಅಲ್ಲ. ಸ್ವತಃ ನಮ್ಮನ್ನು ನಾವು ಅರಿತುಕೊಳ್ಳುವುದು ಎಂದರೆ ನಮ್ಮ ಶಕ್ತಿಗಳು ಮತ್ತು ದುರ್ಬಲತೆಗಳನ್ನು ತಿಳಿದುಕೊಳ್ಳುವುದು. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಪ್ರತಿಭೆ ಇರುತ್ತದೆ. ಕೆಲವರು ಬರವಣಿಗೆಯಲ್ಲಿ ಉತ್ತಮರಾಗಿರಬಹುದು, ಕೆಲವರು ಸಂಗೀತದಲ್ಲಿ, ಇನ್ನೂ ಕೆಲವರು ವಿಜ್ಞಾನ ಅಥವಾ ಕೃಷಿಯಲ್ಲಿ ಪ್ರತಿಭೆ ಹೊಂದಿರಬಹುದು. ನಾವು ನಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡರೆ, ಇತರರ ಮಾತುಗಳು ನಮ್ಮನ್ನು ತಡೆಯಲು ಸಾಧ್ಯವಿಲ್ಲ.ಮೂರನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳುವುದು ಜೀವನವನ್ನು ಕಠಿಣವಾಗಿಸುತ್ತದೆ.  ಉದಾಹರಣೆಗೆ, ಒಬ್ಬ ಯುವಕ ತನ್ನ ಕನಸನ್ನು ಅನುಸರಿಸಲು ಬಯಸುತ್ತಾನೆ. ಆದರೆ ಸುತ್ತಮುತ್ತಲಿನ ಜನರು “ಇದು ಸಾಧ್ಯವಿಲ್ಲ”, “ನೀನು ಇದರಲ್ಲಿ ಯಶಸ್ವಿಯಾಗುವುದಿಲ್ಲ” ಎಂದು ಹೇಳಬಹುದು. ಈ ಮಾತುಗಳನ್ನು ಕೇಳಿ ಆತ ತನ್ನ ಕನಸನ್ನೇ ಬಿಟ್ಟುಬಿಟ್ಟರೆ, ಅವನ ಜೀವನದಲ್ಲಿ ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಾನೆ. ಆದರೆ ಆತ ತನ್ನ ಮನಸ್ಸಿನ ಧ್ವನಿಯನ್ನು ಕೇಳಿ ಮುಂದೆ ನಡೆದರೆ, ಅವನು ಖಂಡಿತವಾಗಿಯೂ ಸಾಧನೆ ಮಾಡಬಹುದು. ಇತರರ ಅಭಿಪ್ರಾಯಗಳು ಕೆಲವೊಮ್ಮೆ ಉಪಯುಕ್ತವಾಗಬಹುದು, ಆದರೆ ಅವು ನಮ್ಮ ಜೀವನವನ್ನು ನಿರ್ಧರಿಸಬಾರದು. ನಾವು ಯಾವ ದಾರಿಯನ್ನು ಆರಿಸಬೇಕು ಎಂಬುದು ನಮ್ಮ ನಿರ್ಧಾರವಾಗಿರಬೇಕು. ಜನರು ಮಾತನಾಡುವುದು ಸಹಜ. ಇಂದು ಒಂದು ವಿಷಯದ ಬಗ್ಗೆ ಮಾತನಾಡುತ್ತಾರೆ, ನಾಳೆ ಮತ್ತೊಂದು ವಿಷಯದ ಬಗ್ಗೆ ಮಾತನಾಡುತ್ತಾರೆ. ಆದರೆ ನಾವು ಅವರ ಪ್ರತಿಯೊಂದು ಮಾತಿಗೂ ಮಹತ್ವ ನೀಡಿದರೆ, ನಮ್ಮ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ.ಜೀವನದಲ್ಲಿ ಶಾಂತಿ ಮತ್ತು ಸಂತೋಷ ಬೇಕಾದರೆ, ಮೊದಲಿಗೆ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಇರಬೇಕು. ಸ್ವಾಭಿಮಾನ ಇರುವ ವ್ಯಕ್ತಿ ಯಾರ ಮಾತಿಗೂ ಸುಲಭವಾಗಿ ಕುಗ್ಗುವುದಿಲ್ಲ. ಆತ ತನ್ನ ಮೌಲ್ಯವನ್ನು ತಿಳಿದಿರುತ್ತಾನೆ. ಆತ್ಮವಿಶ್ವಾಸ ಇರುವ ವ್ಯಕ್ತಿ ತನ್ನ ಗುರಿಯತ್ತ ಧೈರ್ಯವಾಗಿ ಸಾಗುತ್ತಾನೆ. ಇದರ ಜೊತೆಗೆ ನಮಗೆ ಬೆಂಬಲ ನೀಡುವ ಜನರನ್ನು ಗುರುತಿಸುವುದೂ ಮುಖ್ಯ. ನಮ್ಮ ಕುಟುಂಬ, ಸ್ನೇಹಿತರು ಅಥವಾ ಶಿಕ್ಷಕರು ಕೆಲವೊಮ್ಮೆ ನಮಗೆ ಮಾರ್ಗದರ್ಶನ ನೀಡುತ್ತಾರೆ. ಅವರ ಸಲಹೆಗಳು ನಮ್ಮ ಬೆಳವಣಿಗೆಗೆ ಸಹಾಯ ಮಾಡಬಹುದು. ಆದರೆ ಎಲ್ಲರ ಮಾತನ್ನೂ ಒಂದೇ ರೀತಿ ಸ್ವೀಕರಿಸಬೇಕೆಂದು ಇಲ್ಲ. ನಾವು ಯಾವ ಮಾತು ನಮ್ಮ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ನಾವೇನೆಂದು ನಮಗೆ ತಿಳಿದಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಸ್ವತಃ ಪರಿಹಾರವಾಗುತ್ತವೆ. ನಮ್ಮ ಮೌಲ್ಯವನ್ನು ಅರಿತುಕೊಂಡ ವ್ಯಕ್ತಿ ಯಾರ ಮುಂದೆ ತಲೆಬಾಗುವುದಿಲ್ಲ. ಆತ ತನ್ನ ಜೀವನವನ್ನು ಗೌರವದಿಂದ ನಡೆಸುತ್ತಾನೆ. ಇತರರ ಟೀಕೆಗಳು ಅವನನ್ನು ದುರ್ಬಲಗೊಳಿಸುವುದಿಲ್ಲ, ಬದಲಾಗಿ ಇನ್ನಷ್ಟು ಬಲಿಷ್ಠನನ್ನಾಗಿ ಮಾಡುತ್ತವೆ. ಕೊನೆಯಲ್ಲಿ ಹೇಳಬೇಕಾದದ್ದು ಏನೆಂದರೆ – ಜೀವನದಲ್ಲಿ ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಿಲ್ಲ. ಯಾರೇ ಆಗಲಿ, ಏನೇ ಮಾಡಿದರೂ ಕೆಲವು ಜನರು ಟೀಕೆ ಮಾಡುತ್ತಾರೆ. ಆದ್ದರಿಂದ ನಾವು ಎಲ್ಲರ ಮಾತಿಗೂ ಮಹತ್ವ ಕೊಡದೆ, ನಮ್ಮ ಗುರಿಯತ್ತ ಗಮನಹರಿಸಬೇಕು. ನಮ್ಮ ಮನಸ್ಸು ಶುದ್ಧವಾಗಿದ್ದರೆ ಮತ್ತು ನಮ್ಮ ಉದ್ದೇಶ ಸತ್ಯವಾಗಿದ್ದರೆ, ಇತರರ ಮಾತುಗಳಿಂದ ನಾವು ಅಲುಗಾಡಬಾರದು.“ನಾವೇನೆಂದು ನಮಗೆ ತಿಳಿದಿದ್ದರೆ ಸಾಕು, ಮೂರನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ” ಎಂಬ ಮಾತು ನಮಗೆ ಆತ್ಮವಿಶ್ವಾಸದ ಮಹತ್ವವನ್ನು ನೆನಪಿಸುತ್ತದೆ. ನಮ್ಮ ಜೀವನದ ದಾರಿಯನ್ನು ನಾವು ಸ್ವತಃ ಆಯ್ಕೆ ಮಾಡಬೇಕು. ಇತರರ ಮಾತುಗಳು ನಮ್ಮನ್ನು ತಡೆಯುವ ಬದಲು, ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿ ಮಾಡಲಿ. ಅಂತಿಮವಾಗಿ, ಜೀವನದ ನಿಜವಾದ ಸಂತೋಷ ಹೊರಗಿನ ಮೆಚ್ಚುಗೆಯಲ್ಲಿ ಇಲ್ಲ, ಅದು ನಮ್ಮ ಒಳಗಿನ ಆತ್ಮಸಂತೋಷದಲ್ಲಿ ಇದೆ. ನಾವು ನಮ್ಮನ್ನು ನಾವು ನಂಬಿದರೆ, ಯಾವುದೇ ಅಡೆತಡೆಗಳು ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ತಮ್ಮ ಮೇಲೆ ನಂಬಿಕೆ ಇಟ್ಟು, ಇತರರ ಮಾತಿಗೆ ತಲೆ ಕೆಡಿಸಿಕೊಳ್ಳದೆ, ತಮ್ಮ ಕನಸುಗಳತ್ತ ಧೈರ್ಯವಾಗಿ ಮುಂದೆ ಸಾಗಬೇಕು. ಇದೇ ಜೀವನದ ನಿಜವಾದ ಜ್ಞಾನ ಮತ್ತು ಯಶಸ್ಸಿನ ದಾರಿ ಪೃಥ್ವಿರಾಜ್ ಟಿ ಬಿ.

“ನಾವಾರು ಎಂಬ ಅರಿವು – ಜೀವನದ ನಿಜವಾದ ಶಕ್ತಿ”ಪೃಥ್ವಿರಾಜ್ ಟಿ ಬಿ. Read Post »

ಇತರೆ, ರಂಗಭೂಮಿ

“ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ” ಗೊರೂರು ಅನಂತರಾಜು

ರಂಗ ಸಂಗಾತಿ ಗೊರೂರು ಅನಂತರಾಜು “ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ” 50 ವರ್ಷದ ಸನಿಹದಲ್ಲಿರುವ ಬೆಂಗಳೂರಿನ ಗೆಜ್ಜಹೆಜ್ಜೆ ರಂಗತಂಡವು ಬೆಂಗಳೂರು ಸೇವಾ ಸದನ ರಂಗಮಂದಿರದಲ್ಲಿ ದಿನಾಂಕ 12.03.206 ರಂದು ಯುಗಾದಿ ರಂಗ ಸಂಭ್ರಮ ನಾಟಕೋತ್ಸವ ಏರ್ಪಡಿಸಿತ್ತು.  ರಂಗಭೀಷ್ಮ ಬಿ ವಿ ಕಾರಂತರ ಸಂಗೀತ ಸುಂಯೋಜನೆಯಲ್ಲಿ ಮೂಡಿ ಬಂದ  ಗಜವದನ ಏರಂಬ ಎಂಬ ಗೀತೆಯನ್ನು ಗಣೇಶಯ್ಯನವರು ಆಡುವುದರ ಮುಖೇನ ನಾಟಕೋತ್ಸವಕ್ಕೆ ಚಾಲನೆ ನೀಡಿದರು  ಹಲವಾರು ಪ್ರಸಿದ್ಧ ನಾಟಕಗಳ ರಂಗಗೀತೆಗಳನ್ನು ಒಂದು ಗಂಟೆಗಳ ಕಾಲ ಹಾಡಲಾಯಿತು  ತಂಡದ ಹೊಸ ಪ್ರಯೋಗ ಮಾದಕ ಯುವ ಮಾರಕ ಪ್ರದರ್ಶಿಸಲಾಯಿತು. ಯುವ ಜನತೆ ದುಶ್ಚಟಕ್ಕೆ ದಾಸರಾಗ್ತ ಇದ್ದಾರೆ. ಇದರ ಸುತ್ತ ಹೆಣೆಯಲಾದ ಕಥಾ ಹಂದರ ಮನುಷ್ಯ ಅನುಮಾನ ಮತ್ತು ಅವಮಾನದಿಂದ ಕೋಪ ತಾಪ ಆವೇಶ ಚಟ ಬಿದ್ದು ಚಟ್ಯಕೆ ಏರುತ್ತಾನೆ. ಬೀದಿ ಬದಿಗಳಲ್ಲಿ ಜನಸಂದಣಿ ಇರುವ ಜಾಗಗಳಲ್ಲಿ ಶಾಲಾ-ಕಾಲೇಜುನ ಸಮೀಪ ಏರ್ಪೋರ್ಟ್ ಬಸ್ಟ್ಯಾಂಡ್ ರೈಲು ನಿಲ್ದಾಣ ಮುಂತಾದ ಕಡೆಗಳಲ್ಲಿ ಗಾಂಜಾ ಅಫೀಮು ಎಲಾಯಿನ್ ಮತ್ತೇರಿಸುವ ಪದಾರ್ಥಗಳನ್ನು ಮಾರುತಿರುತ್ತಾರೆ. ಯುವಕ ಯುವತಿಯರನ್ನು ದುಶ್ಚಟಕ್ಕೆ ದಾಸರನ್ನಾಗಿಸುವ ವಂಚಕರ ಜಾಲವೇ ವಿಪರೀತವಾಗಿದೆ. ಪ್ರೇಕ್ಷಕರಿಗೆ ನೇರವಾಗಿ ಡ್ರಗ್ಸ್ ಮಾರಾಟ ಕಂಡು ಬಂದಲ್ಲಿ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಒಂದು ಪಾತ್ರ ಹೇಳುತ್ತದೆ. ಯುವ ಜನತೆಯನ್ನು ದುಸ್ಥಿತಿಯಿಂದ ಕಾಪಾಡಬೇಕಾದ ಪರಿಸ್ಥಿತಿ ಒದಗಿ ಬಂದಿರುವುದು ನೋವಿನ ಸಂಗತಿ. ಧರೆಗೆ ತಂದು ಬಿಟ್ಬಿಟ್ನಪ್ಪ ಆಟ ಆಡ್ಸೋಕೆ ಪಾಠ ಕಲ್ಸೋಕೆ ಈ ಭೂಮಿ ಎಂಬ ರಂಗದ ಮೇಲೆ ಹಾಡೋಕ್ ಬಿಟ್ಟವ್ನೆ, ಕಾಮ ನೇಮ ಲೋಭ ಲಾಭದ ಪಾತ್ರ ಕೊಟ್ಟವ್ನೆ ಅಂತ ಹೇಳ್ತಾ ಪ್ರಹಸನ ಮುಕ್ತಾಯವಾಗುತ್ತದೆ. ನಿಂತ್ಕೋಳಿ ಅಲ್ಲಲ್ಲ ಕುಳಿತುಕೊಳ್ಳಿ ಎಂಬ  ಹಾಸ್ಯ ಕಿರು ನಾಟಕ ಮತ್ತು ಎಂಡ್ ಇಲ್ಲದ ಬಂಡ್ ಅವತಾರ ರಾಜಕೀಯ ವಿಡಂಬನಾತ್ಮಕ ನಗೆ ನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ ತಂಡ. ರಂಗ ಉಪನ್ಯಾಸ ರಂಗ ಗೀತೆಗಳು, ಕಿರು ನಾಟಕ ರಂಗದ ಬಗ್ಗೆ ಮಾತುಗಳು ರಂಗ ಹಾಸ್ಯ ಪಟಾಕಿ ಎಲ್ಲಾ ಸರಿಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿತು ಚಿಂತನೆಗೂ ಚಾಲನೆ ನೀಡಿತು.  ಬೆಳಕು ವಿನ್ಯಾಸ ರವಿಶಂಕರ್ ಪ್ರಸಾದನ ಶಿವು, ಉಪನಿಷ ವಸ್ತ್ರಾಲಂಕಾರ ಪುಷ್ಪಲತಾ. ಪ್ರಚಾರ ಅಮಿತಾನಂದ ಶೇಖ ಪಾತ್ರವರ್ಗದಲ್ಲಿ ಮೈಸೂರು ರಮಾನಂದ್, ಶೇಖರ್ ಸೂರ್ಯನಾರಾಯಣರಾವ್,  ಲಲಿತಾ ಗಣೇಶಯ್ಯ, ಟಿ.ಜಿ ಹರೀಶ್ ಸಂಗೀತ. ನಾಟಕ ಬರೆದಾಡಿಸಿದವರು ಮೈಸೂರು ರಮಾನಂದ. ಗೊರೂರು ಅನಂತರಾಜು

“ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ” ಗೊರೂರು ಅನಂತರಾಜು Read Post »

ಇತರೆ

“ಹಾಯಿಕು ಅಂದ್ರೆ ಏನು? ಎಂದು ಒಂದಷ್ಟು ಪರಿಚಯಾತ್ಮಕ ಮಾತು ಕಥೆ” ಡಾ.ಸಿದ್ದರಾಮ ಹೊನ್ಕಲ್

ಕಾವ್ಯ ಸಂಗಾತಿ ಡಾ.ಸಿದ್ದರಾಮ ಹೊನ್ಕಲ್ “ಹಾಯಿಕು ಅಂದ್ರೆ ಏನು? ಒಂದಷ್ಟು ಪರಿಚಯಾತ್ಮಕ ಮಾತು ಕಥೆ” ಈ ಪುರಸ್ಕೃತ ಹೊನ್ನಗರಿಯ ಹೈಕು ಕೃತಿಯಲ್ಲಿ ಬರೆದ‌  ಲೇಖನ  ತಮ್ಮ ಓದಿಗೆ… *ಹಾಯಿಕು ಅಂದ್ರೆ ಏನು? ಎಂದು ಒಂದಷ್ಟು ಪರಿಚಯಾತ್ಮಕ ಮಾತು ಕಥೆ*ಈ ಪುರಸ್ಕೃತ ಹೊನ್ನಗರಿಯ ಹೈಕು ಕೃತಿಯಲ್ಲಿ ಬರೆದ‌  ಲೇಖನ  ತಮ್ಮ ಓದಿಗೆ…ಈ ಹೈಕು ಅನ್ನೋದು ಜಪಾನಿ ಕಾವ್ಯ ಪ್ರಕಾರ. ಜಪಾನಿಗರು ತುಂಬಾ ಕುಳ್ಳರು ಹಾಗೂ ಅಪಾರ ಶ್ರಮ ಜೀವಿ ಚೆಲುವರು.ಅವರಂತೆಯೇ ಅವರ ಕಾವ್ಯ ಪ್ರಕಾರ ಹೈಕು ಸಹ ತುಂಬಾ ಪುಟ್ಟದು.ಹಾಗೇ ಅವರಷ್ಟೇ ಮೌಲ್ಯಯುತವಾದುದೂ. ಒಂದೊಂದು ಹೈಕುಗೆ ಒಂದೊಂದು ಸೆಮಿನಾರ್ ಮಾಡುವಷ್ಟು ಅರ್ಥ ಇರುತ್ತದೆ ಎಂಬುದು ಕೇವಲ ಔಪಚಾರಿಕ ಮಾತಲ್ಲ. ಮೂರು ಸಾಲಿನಲ್ಲಿ ಒಂದು ಮಹಾ ಕಾವ್ಯವನ್ನೇ ಹೇಳಬಹುದು ಅನ್ನುತ್ತಾರೆ.ಅದು ಹೈಕುವಿನ ಶಕ್ತಿ. ಹಾಯ್ಕು-ಹೈಕು ಎಂಬ ಈ ಪ್ರಕಾರವು ಕನ್ನಡಕ್ಕೆ ಬಂದ ಹೊಸ ಹೊಳುಹುಗಳಂತೆ ಸುಳಿದಿವೆ.ಹೈಕು ಕವಿಗಳು  ಇಂಗ್ಲಿಷ್ ನಲ್ಲಿ ಬಂದ ಅನೇಕ ಹಾಯ್ಕುಗಳನ್ನು ಕನ್ನಡಕ್ಕೆ ತಂದಿದ್ದಾರೆ.ಈ ಕೆಲಸ ಹಿರಿಯರಾದ ಎ.ಕೆ.ರಾಮಾನುಜನ್ ಅವರಿಂದ ಹಿಡಿದು ಇತ್ತೀಚಿನ ಬಹು ಭಾಷಾ ಬಲ್ಲ ಎಲ್ಲ ಹೈಕು ಕವಿಗಳ ತನಕವು ಅನುವಾದದ ಕೆಲಸ ನಿರಂತರವಾಗಿ ನಡೆದೆ ಇದೆ. ಹಾಯ್ಕುಗಳ ಮೂಲ ಜಪಾನ್ ದೇಶದ್ದಾದರೂ ಕಾಲ ದೇಶಗಳನ್ನು ದಾಟಿ ಅನೇಕ ಭಾಷೆಗಳಲ್ಲಿ ಈ ಹೈಕು ಮೈ ಚಾಚಿಕೊಂಡು ಹೊಸ ಹೊಸ ರೂಪದಲಿ ಮೈದೆಳೆದಿದೆ. ತಳೆಯುತ್ತ ಬೆಳೆಯುತ್ತಲಿದೆ.ಇದು ಮುಖ್ಯವಾಗಿ ಪ್ರಕೃತಿ ಹಾಗೂ ಆಧ್ಯಾತ್ಮಿಕ ಬೇಸ್ ಹೊಂದಿರುವ ಕಾವ್ಯ ಪ್ರಕಾರ.      ಇತ್ತೀಚೆಗೆ ನಾನು ಹೈಕು ಸಂಕಲನ ತರುವ ಮನಸು ಮಾಡಿದ್ದರಿಂದ ಈಗಾಗಲೇ ಈ ಹೈಕು ಗುಂಪುಗಳಲ್ಲಿ ಆಗಾಗ ಜುಗಲ್ ಗೆ ಒಂದಷ್ಟು ಹೈಕು ಬರೆದದ್ದು ಬಿಟ್ಟರೆ ಹೈಕು ಬರೆಯಲೇಬೇಕೆಂದು ಧ್ಯಾನಿಸಿ ಬರೆಯಲು ಕುಂತದ್ದು ತೀರಾ ಕಡಿಮೆ ಇತ್ತು.ಆದರೆ ಕಳೆದ ಎರಡು ವರ್ಷಗಳಿಂದ ಈ ಹೈಕುಗಳ ಆಂತರ್ಯದ ಅಧ್ಯಯನ, ಆಸಕ್ತಿ ಒಳಗೊಳಗೆ ನಡೆದೇ ಇತ್ತು.ಗಜಲ್ ವ್ಯಾಮೋಹಕ್ಕೆ ಬಿದ್ದು ಸುಮಾರು‌ ನೂರರ ಸಮೀಪ ಹೈಕು ಬರೆದು ನಿಲ್ಲಿಸಿದ್ದೆ.    ಹಾಯ್ಕುವಿನ ಪ್ರಖ್ಯಾತ ಲೇಖಕ *ಬಾಶೋವಿನ್* ಅವರು ಯಾರು ಐದು ಹೈಕು ಬರೆಯುವರೋ ಅವರು ಕವಿ.ಅವರ ಪ್ರಕಾರ ಯಾರು ಹತ್ತು ಹೈಕು ಬರೆಯುತ್ತಾರೋ ಅವರು  *ಮಹಾಕವಿ* ಎಂದು ಹೇಳಿದ್ದಾರೆ. ಇದರ ಅರ್ಥ ಹೈಕು ಬರೆಯೋದು ಸುಲಭವಲ್ಲ ಅಂತ ಅರ್ಥ.  *ಸಮುದ್ರವನ್ನು ಬೊಗಸೆಯಲ್ಲಿ ಹಿಡಿಯುವ ಪ್ರಯತ್ನ* ಅಂತ ನನಗನಿಸುತ್ತದೆ.ಹಿಂದೆ ಆರಂಭದಲ್ಲಿ ನಾ ಹೈಕು ಗುಂಪಿನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದು ಉಂಟು.       ನಮ್ಮದೇ ನೆಲದ ಸರ್ವಜ್ಞನ ತ್ರಿಪದಿ, ಶರಣರ ವಚನಗಳು, ಹನಿಗವನ, ಚುಟುಕು ಇರುವಾಗ ನಾವೇಕೆ ಈ ೫/೭/೫ ಅಕ್ಷರಗಳ ಜಪಾನಿಯರ ಈ ವಿದೇಶಿ ಪುಟ್ಟ ಕನ್ಯೆಗೆ ಲೈನು ಹೊಡೆಯಲು, ಅವಳನ್ನು ನಮ್ಮ ಪ್ರೇಮಕ್ಕೆ ಒಲಿಸಲು, ಒಗ್ಗಿಸಲು ಕಷ್ಟ ಪಡಬೇಕು ಅಂತ ಬರೆದಿದ್ದ ನೆನಪು.      ನಮ್ಮ ಭಾರತೀಯರ  ಹಣೆಬರಹವೇ ಇಷ್ಟು.ಸ್ವದೇಸಿ ಜಾಗರಣದವರು ಎಷ್ಟು ಹೇಳಿದರೂ ಸಹ ನಾವು ವಿದೇಶಿ ಬಿಳೀ ಬಣ್ಣಕ್ಕೆ ಅನುಗಾಲ ದಿಂದಲೂ ಜೋತು ಬೀಳೋರೆಂದು ಫೇಮಸ್ ಆಗಿದ್ದೇವೆ. ಹ್ಯಾಗೂ ಪರ್ಷಿಯನ್ ದೇಶದ ಉರ್ದು ಗಜಲ್ ಕಾವ್ಯ ಕನ್ನಿಕೆಗೆ ಸೋತು ಗೆದ್ದಾಗಿದೆ. ಈ ಜಪಾನಿ ಕನ್ನಿಕೆಗೂ ಒಂದಷ್ಟು ಮುಟ್ಟಿ ತಟ್ಟಿ ನೋಡೋಣ.ಇದು ಒಂದು *ಎಕ್ಸಪಿರಿಮೆಂಟ್* ಆಗಲಿ ಅಂತ ಇದೀಗ ಹೈಕು ಕಡೆಗೆ ಒಂದು ಹೆಜ್ಜೆ ನನ್ನದು. ಒಲಿಯುವಳೋ, ಮುನಿವಳೋ ನೋಡೋಣ.      ಈ ಹೈಕುಗಳು ಪ್ರಕೃತಿ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯ ಒಂದು ಅಸದ್ರುಶ್ಯ ಕಾವ್ಮಚಿತ್ರಣ ಕೊಡುವ, ಕಿರಿದರಲ್ಲಿ ಹಿರಿದಾದ ಅರ್ಥಕೊಡುವುದುಂಟು.ಕೇವಲ ೫/೭/೫ ಅಕ್ಷರಗಳಿಂದ ಬರೆದುದೆಲ್ಲ ಹೈಕು ಆಗುವ ಹಾಗಿದ್ದರೆ,ಇಲ್ಲಿ ಹೀಗೆ ಹೈಕು ಬರೆದವರೆಲ್ಲ ಮಹಾ ಕವಿಗಳೇ ಆಗಿ ಬಿಟ್ಟಿರೋರು.ಬಹಳ ಜನ ಹೀಗೆ ಬರೆಯಲು ಹೋಗಿ ಸೋತಿದ್ದಾರೆ. ಕೆಲವರು ಗೆದ್ದಿದ್ದಾರೆ.      ಹನಿಗವನ ಬರೆಯಲಿಕ್ಕೆ ಒಂದು ಕಾಲದಲ್ಲಿ ಫೇಮಸ್ ಇದ್ದ ನಾನು,ಐದಾರು ನೂರು ಹನಿಗವನ ಬರೆದವನು.ನನಗೆ ಇದು ಬೇಗ ಒಗ್ಗಬೇಕು.ಆದರೆ ಧ್ಯಾನಸ್ಥ ಮನಸ್ಥಿತಿಯಲ್ಲಿ ಕೂಡಲೇ ಆಗುತ್ತಿರಲಿಲ್ಲ. ಕುಂತರೆ ಖಂಡಿತಾ ಗೆಲ್ಲಬಲ್ಲೆ.ಇಲ್ಲಿಯ ಕೆಲ ಹೈಕುಗಳು ಅಪಾರ ಮೆಚ್ಚುಗೆ ಪಡೆದದ್ದು ನೋಡಿದಾಗ, ಧ್ಯಾನಸ್ಥ ಮನಸ್ಥಿತಿ ಮೈಗೂಡಿರಬಹುದೇ? ಇದೀಗ ಹೈಕು ಬರೆಯುವ‌ ನಂಬಿಕೆ ಬಂದಿದೆ.ತಾವು ಅದನ್ನು ದೃಡಿಕರಿಸಬೇಕಿದೆ. ಹೈಕುಗಳನ್ನು ಕನ್ನಡದ ಬಹುಮುಖ್ಯ ಹೈಕು ಲೇಖಕರಾದ ಡಾ.ಕೆ.ಬಿ.ಬ್ಯಾಳಿಯವರು, ಜಂಬಣ್ಣ ಅಮರಚಿಂತ ಅವರು, ಮುಂತಾದ ಕೆಲವರು ಸಾಕಷ್ಟು ಬರೆದು ಒಂದು ಗಟ್ಟಿ ಬುನಾದಿ ಹಾಕಿದ್ದಾರೆ.     ಇನ್ನೂ *ಎಪ್ಪತ್ತರ ದಶಕದಲ್ಲಿ ಹೈಕುಗಳನ್ನು ಮೊಟ್ಟ ಮೊದಲು ಕನ್ನಡದಲ್ಲಿ*  ಬರೆದು ಇದಕ್ಕೆ ಬುನಾದಿ ಹಾಕಿದವರು ನಮ್ಮದೇ *ಚಂದ್ರಕಾಂತ ಕುಸುನೂರರು* ಎಂದು ದಾಖಲಿಸಿರುವ ನಮ್ಮ ಕವಿ  *ಜಂಬಣ್ಣ ಅಮರಚಿಂತ* ರು ನೆನಪಾಗುತ್ತಾರೆ.ಆದರೆ ಕುಸನೂರರೂ ಸಹ ೧೭ ಸಿಲೆಬಲ್ ಗೆ ಸೀಮಿತ ಆದಂತಿಲ್ಲ. ಇದೇ ಹಾದಿಯಲ್ಲಿ ಯುವ ಲೇಖಕ ರಮಜಾನ್ ಹೆಬಸೂರು ಅವರು,ಡಾ.ಎ.ರವಿಂದ್ರನಾಥ ಅವರು ಹಾಗೂ ಇತರ ಅನೇಕರು ಸಹ ತಮ್ಮದೇ ಆದ ರೀತಿಯಲ್ಲಿ ೧೭ ಸಿಲೆಬಲ್ ಹಾಗೂ ಮೂರು ಸಾಲಿಗೆ ಸೀಮಿತ ಆಗದೇ ಉತ್ಕೃಷ್ಟ ಹಾಯಿಕು ನೀಡಿದ್ದಾರೆ.  *ಸಖಿಯ ಮನ* *ಅರಿತರೆ ಸ್ವರ್ಗವು* *ಕಾಲಡಿಯಲಿ….*   (ಹೊನ್ನು)  ನಮ್ಮ ಕನ್ನಡದಲ್ಲಿನ ಚುಟುಕು,ತ್ರಿಪದಿ, ಹನಿಗವನಗಳಂತೆ ಈ ಹೈಕು ಸಣ್ಣದರಲ್ಲಿಯೇ ಒಂದು ಹಿರಿದಾದ ಅರ್ಥ ನೀಡುವ ಪುಟ್ಟ ಕಾವ್ಯ. ಜಪಾನಿಗರಂತೆ ಚಿಕ್ಕದು,ಬುದ್ದಿ ಶಾಲಿಯಾದುದೂ, ಕೊನೆಯ ಸಾಲಿನಲ್ಲಿ ಒಂದು ಪಂಚ್ ನೀಡಿ ಇಡೀ ಆ ಪುಟ್ಟ ಕಾವ್ಯಕ್ಕೆ ಅರ್ಥವಂತಿಕೆ ತರುವಂತಹದು. ವಿಷಯ ಪ್ರಕೃತಿ, ಆಧ್ಯಾತ್ಮಿಕ ಇರಬಹುದಾದರೂ ಬರೆಯುವ‌ ಲೇಖಕನ  ಮನಸ್ಥಿತಿಗೆ ಸಂಬಂಧಿಸಿದ ವಿಷಯ ಅದು.ಆ ಲೇಖಕನ ಭಾವ ಲಹರಿ ಯಾವ ಕಡೆಗಾದರೂ ಚಲಿಸಿತು.ಆದರೆ ಸಾಂಪ್ರದಾಯಿಕ ಹೈಕು‌ ಇಂದಿಗೂ‌ ೫/೭/೫ ಸಿಲೆಬಲ್ ಮೂಲಕವೇ ಹೆಚ್ಚು ಜನಪ್ರಿಯ ಗೊಂಡಿದೆ.ಉದಾಹರಣೆಗೆ ಅನೇಕರು ಮೆಚ್ಚುಗೆ ಹೇಳಿದ ನನ್ನದೇ ಹೈಕು ನೋಡೋದಾದರೆ  *ಬಿತ್ತಿಕೋ ಒಮ್ಮೆ* *ನಿನ್ನೊಳಗೆ ನನ್ನನು* *ಮರವಾಗುವೆ…* ಇಂತಹದರಲ್ಲಿ ಒಂದು ಪಂಚ್ ಲೈನ್ ಇದೆ.ಅದು ಗರ್ಭಾಶಯದಲ್ಲಿ ಬಿತ್ತಿಕೋದೂ ಆಗಿರಬಹುದು. ಈ ಆದಿಗೆ ಅನಂತವಾದ ಭೂಗರ್ಭದಲ್ಲಿ ಬಿತ್ತುವುದೂ ಆಗಿರಬಹುದು. ಈ ಹೈಕು ಗೆ ಒಂದು ಸೆಮಿನಾರೆ ಮಾಡಬಹುದು. ಹೀಗೆ ಈ ಹೈಕು ಐದು ಏಳು ಐದು ಪದ ಬಳಕೆಯ ಮೂಲಕ ಒಂದು ‌ವಿಶಿಷ್ಟವಾದ ಚಿತ್ರಣವನ್ನು ಓದುಗನಿಗೆ‌ ಕಟ್ಟಿ ಕೊಡಬೇಕಾಗುವುದು.ಮೊದಲ ಎರಡು ಸಾಲು‌ ಹನಿಗವನ,ಮಿನಿಗವನದಂತೆ ಸಾಗಿದ್ದರೂ ಸಹ ಕೊನೆಯ ಸಾಲಿನ ಪದ ಇಡೀ ಆ ಹೈಕು ಕಾವ್ಯದ ಆಶಯವನ್ನು ಓದುಗನ ಮನೋ ಪಟಲದ ಮೇಲೆ ಒಮ್ಮಲೇ ಮೂಡುವ ಒಂದು ಅಸದ್ರಶ್ಯ ಕಾವ್ಯ ಚಿತ್ರಣವಾಗಿ,ಮನೋ ಭೂಮಿಕೆಯ ಮೇಲೆ ಪ್ರತಕ್ಷವಾಗುವಂತಿರಬೇಕು.ಅದಕ್ಕೆ ಅನೇಕರು ಪಂಚ್‌ ಲೈನ್ ಅನ್ನುವದುಂಟು.ಅದಕ್ಕೆ ಪ್ರಾಸದ, ಗೇಯದ ಹಂಗು ಇರಬೇಕಿಲ್ಲ.ಇದ್ದರೂ ತಪ್ಪೇನು ಇಲ್ಲ. ಆದರೆ ಇಡೀ ಮೇಲಿನ ಎರಡು ಸಾಲಿನಲ್ಲಿ ಹೇಳದೇ ಉಳಿದದ್ದು ಇಲ್ಲಿ ಧ್ವನಿಸಿ ಬಿಡಬೇಕು.ಅದರಲ್ಲಿ ಆಳ,ತಿಳಿವು, ಆಧ್ಯಾತ್ಮಿಕತೆ,ನಿಜದ ಪ್ರತಿರೂಪ ಕಣ್ಣಿಗೆ, ಮನಸ್ಸಿಗೆ ಒಂದು ಅನುಭೂತಿಯಾಗಿ ಮೂಡುವಂತಿರಬೇಕು.ಅದು ಸಾರ್ಥಕ ಹೈಕುವಿನ‌ ಒಂದು ಗುಣ ಲಕ್ಷಣವಾಗಿದೆ. ನಮ್ಮ ನವ್ಯ ಕಾವ್ಯದಂತೆ,ಹನಿಗವನದಂತೆ,ಮನ ಬಂದಷ್ಟು, ಮನ ಬಂದ ಕಡೆ ಸಾಲುಗಳು ಹರಿಯುವಂತಿಲ್ಲ. ಈ ಜಪಾನಿ ಚೆಲುವೆಗೆ ತನ್ನದೇ ಆದ ಒಂದು ಉಡುಪಿನ ಚೌಕಟ್ಟಿದೆ.ಅದು ೫/೭/೫ ರ ಪದ ಪ್ರಯೋಗ.ಒಂದೆರಡು ಸಿಲೆಬಲ್ ಹೆಚ್ಚು ಕಡಿಮೆಯಾದರೆ ಹೊಸ ಹೊಳವು, ಹೊಸ ಅರ್ಥ ಮೂಡಬಹುದಾದರೂ ಆ ಚೌಕಟ್ಟು ದಾಟುವಂತಿಲ್ಲ. ಅದು ದಾಟಿದರೆ ಅದು‌ ನಾನ್ ಸಿಲೆಬಲ್ ಹೈಕು ಆಗಿ ಪರಿಗಣಿಸಲಾಗುವುದು. ಹಾಗೇ ಬರೆಯುವ ಅನೇಕ ಪ್ರಯೋಗಶೀಲ ಲೇಖಕರು ಆ ಜಪಾನಿನಲ್ಲೂ ಇದ್ದಾರೆ, ನಮ್ಮಲ್ಲೂ ಇದ್ದಾರೆ.ನವೋದಯದ ನಂತರ ಬಂದ ನವ್ಯ, ಬಂಡಾಯ,ದಲಿತ ಕಾವ್ಯದಂತೆ ಈ ಜಪಾನಿ ಕಾವ್ಯದ‌ ಸಾಂಪ್ರದಾಯಿಕ ಛಂದಸ್ಸು ದಾಟಿದವರು ಅಲ್ಲೂ ಉಂಟು. ಇಲ್ಲಿಯು ಉಂಟು.ಅದನ್ನು ಯಾವುದೇ ದೇಶದ ಸಾಹಿತ್ಯದ ಸಂದರ್ಭದಲ್ಲಿಯು ನಿರಾಕರಿಸಲಾಗದು.     ಈ ಹದಿನೇಳು‌ ಸಿಲೆಬಲ್ ಒಂದೇ ಸಾಲಿನಲ್ಲಿ ಬರೆಯುವವರು ಉಂಟು.ಮೊದಲು ಏಳು,ನಂತರ ಐದು ಐದು ಬರೆಯುವವರುಂಟು.ಒಟ್ಟಾರೆ ಹದಿನೇಳು ಸಿಲೆಬಲ್ ಸಾಕು ಅಂತ ನಾಲ್ಕು ಸಾಲು ಮಾಡಿರುವ‌ ಪ್ರಯೋಗ ಶೀಲರು ಉಂಟು.ಈ ಯಾವುವೂ ಈಗ್ಗೆ ಮೊದಲು ಅಲ್ಲ. ಕೊನೆಯವು ಅಲ್ಲ.ಆಯಾ ಲೇಖಕನ ಮನಸ್ಥಿತಿಯ ಮೇಲೆ ಹೋಗಲಿದೆ.ಕೆಲವರು ಸಾಂಪ್ರದಾಯಿಕ ಗಜಲ್ ಬರೆದಂತೆ ನಿಯಮಾವಳಿ ಪ್ರಕಾರ ಬರೆವವರುಂಟು.ಕೆಲವರು ತಾವು ನಡೆದಿದ್ದೆ ದಾರಿ ಅಂತ ಹೋಗುವುದುಂಟು. *ಅಂತಹ ಕೆಲವು ಮುಖ್ಯ ಹೈಕು ಗಮನಿಸಬಹುದು.* *ಕುಮಾರಿಗೆ**ಬೆಳಕಿನ ಸೀರೆ ತರುವುದಿದೆ**ಬರುವಿರಾ* ( *ಚಂದ್ರಕಾಂತ ಕುಸನೂರು* )@*ಹಕ್ಕಿಯ ಎರಡು ರೆಕ್ಕೆಗಳು**ಹೂವಿಗೂ**ದಕ್ಕಲಿ* ( *ಹೆಬ್ಬಸೂರು ರಂಜಾನ್*  )@ಆದರೆ ಬಹುತೇಕ ಈ ಜಪಾನಿ ಕಾವ್ಯ ಮೊದಲ ಸಾಲಿನಲ್ಲಿ ಐದು ಅಕ್ಷರ.ಎರಡನೇ ಸಾಲಿನಲ್ಲಿ ಏಳು ಅಕ್ಷರ.ಮತ್ತು ಮೂರನೇ ಕೊನೆಯ ಸಾಲಿನಲ್ಲಿ ಐದು ಅಕ್ಷರಗಳಲ್ಲಿ ರಚಿಸಲ್ಪಡುವ ಒಂದು ವಿಶಿಷ್ಟ ಕಾವ್ಯ ಪ್ರಕಾರವಾಗಿ ಜನಪ್ರಿಯಗೊಂಡಿದೆ.ಜಪಾನಿಗರು ಅದನ್ನು ಕಟ್ಟು ನಿಟ್ಟಾಗಿ ಅನುಸರಿಸುತ್ತಾರೆ.ಬಹುತೇಕರು ಕನ್ನಡದಲ್ಲಿ (ನನ್ನನೂ ಒಳಗೊಂಡು) ಅದೇ ಸಾಂಪ್ರದಾಯಿಕ ಸಿಲೆಬಲ್ ಹಾಗೂ ಮೂರೇ ಸಾಲಿಗೆ ಅಂಟಿಕೊಂಡು ಬರೆದಿದ್ದಾರೆ. ಬರೆಯುತ್ತಲೂ ಇದ್ದಾರೆ.ಇತರ ರೀತಿಯಲ್ಲಿ ಬರೆದು ಸಹ ಹೈಕು ಗೆ ತಮ್ಮದೇ ನ್ಯಾಯ ಒದಗಿಸಿದವರು ಸಹ ಇದ್ದಾರೆ. ಯಾವುದೇ ಒಂದು ಕಾವ್ಯ ಪ್ರಕಾರ ನಿಂತ ನೀರಾಗಿ ಪಾಚಿಗಟ್ಟಬಾರದು.ಪ್ರಯೋಗಕ್ಕೆ ಒಳಪಡಿಸುವುದು ಜೀವಂತಿಕೆಯ ಲಕ್ಷಣ. *ಈ ಕೆಳಗಿನ ಹೈಕು ೧೭ ಸಿಲೆಬಲ್ ಗೆ ಗಮನಿಸಬಹುದು* @ *ಬೆತ್ತಲೆ ಮನ**ಹರಿದ ಬಿಸಿರಕ್ತ**ಕೆಂಪು ಕಣ್ಣೀರು*  ( *ಡಾ.ಕೆ.ಬಿ.ಬ್ಯಾಳಿ* ) @ *ಉನ್ಮಾದವಿಲ್ಲ* *ಗಂಧದ ಕೊರಡಿಗೆ* *ಕಣ್ಣೀರಧಾರೆ*  ( *ಮಹಿ ಮುನ್ನೂರು* )@*ಮಳೆಯ ಹನಿ**ಮರು ಜೀವ ನೀಡಿತು**ಬಾಳ ಬಳ್ಳಿಗೆ* ( *ಭಾರತಿ ರವೀಂದ್ರ*  ) ಇಂತಹ ಹಲವು ಹೈಕು ನನ್ನವು ಈ ಕೆಳಗಿವೆ.ತಾವು ಅಧ್ಯಯನದ ದೃಷ್ಟಿಯಿಂದ ಗಮನಿಸಬಹುದು.@ *ಪ್ರೀತಿ ಪ್ರೇಮಕೆ**ಏರು ಇಳುವಿಲ್ಲವು**ಸಮುದ್ರವದು*@ *ಪೂಜೆಗೆಂದು ನಾ**ಹೂವು ಮುಡಿಸಲೋದೆ**ಆ ದೇವನಕ್ಕ*@ *ಬೆಳಗಾಯಿತು**ಹೂವು ಕೀಳಲು ನಾನು**ದುಂಬಿ ರೇಗಿತು*@ *ಬಯಕೆ ಬೀಜ**ಹದದಿ ಬಿತ್ತಿಹಳು**ಕಾಯ ! ಬೇಕಿಗ*@ *ನಿರ್ಮೋಹಿ ಸಂಗ**ಬಯಸಿದವನಿಗೆ**ನಿಸ್ಸಂಗ ವರ*@ *ಹೃದಯ ಭಾಷೆ**ಕಣ್ಣುಗಳಿಗೆ ಬೇಕೆ**ಮನಸ್ಸು ಸಾಕು*@ *ಚೆಲುವಿಗಲ್ಲ**ಒಲವಿಗಾಗಿ ಎಲ್ಲ**ಮರೆತು ಹೋದ*@ *ನಿರಾಭರಣೆ**ಅತಿ ಸುಂದರವವು**ಜೋಡಿ ಕಂಗಳು*@ *ಮೊಡಗಟ್ಟಿದೆ**ಬಾನಲಿ ಮತ್ತೆ ಮತ್ತೆ**ನಿನ್ನ ನೆನಪು*@ *ಜಗದೆಲ್ಲೆಡೆ**ಪ್ರೀತಿ ತುಂಬಬೇಕಿದೆ**ಮಾತ್ಸರ್ಯವಲ್ಲ*  @  *ಹಸಿವು ತೃಷೆ* *ನೆಲದೆಡೆಗೆ ನೋಡು*   *ಹಿಂಗಿಸುವನು*  @ ಈ ಹೈಕುಗಳು ಕೇವಲ ಮೂರೇ ಸಾಲಿನವು. ಮೊದಲ ಸಾಲಿನಲ್ಲಿ ೫, ಎರಡನೆಯ ಸಾಲಿನಲ್ಲಿ ೭ ಮತ್ತು ಮೂರನೆಯ ಸಾಲಿನಲ್ಲಿ ೫ ಅಕ್ಷರಗಳು.ಜಪಾನಿಗರು ಈ ನಿಯಮ ಚಾಚು ತಪ್ಪದೆ ಪಾಲಿಸುತ್ತಾರೆ.ಈ ರಚನೆಗಳಲ್ಲಿ ಪ್ರಾಸದ ಬಗ್ಗೆ ಯಾವ ಗೊಂದಲವಿಲ್ಲ.ಪ್ರಾಸ್ ಒಟ್ಟು ಅರ್ಥಕ್ಕೆ ಹೊಸ ಹೊಳಹು ಹಾಗೂ ಪಂಚ್ ಕೊಡುವಂತಿದ್ದರೆ ಬಳಸುವುದಕ್ಕೆ ಯಾರ ಅಭ್ಯಂತರ ಇಲ್ಲ. ಅದು ಆಯಾ ಲೇಖಕನ ಪದ ಸಂಪತ್ತಿನ ಸಾಮರ್ಥ್ಯದ ಮೇಲೆ ಹೋಗುತ್ತದೆ. ಹೈಕುಗಳ ಪದ ವಿನ್ಯಾಸ ಅಥವಾ ಜನಪ್ರಿಯ ಆಕೃತಿಯ ದೃಷ್ಟಿಯಿಂದ ನೋಡುವುದಾದರೆ ಅದು ಐದು,ಏಳು,ಐದು ಅಕ್ಷರಗಳು ಹೊಂದಿದ ಸಾಲುಗಳು ಆಗಿರಬೇಕು.ಕನ್ನಡದ ಮನೋಧರ್ಮಕ್ಕೂ ಜಪಾನಿ ಭಾಷೆಯ ಮನೋಧರ್ಮ ಕ್ಕೂ ಬಹಳ ವ್ಯತ್ಯಾಸವಿದೆ. ಜಪಾನಿ ಭಾಷೆ ಸ್ವರ ಬದ್ಧವಾದ ಭಾಷೆ ಆಗಿದೆ.ನಾವು ಇಲ್ಲಿ ಕಣ್ಣಿಗೆ ಕಾಣುವ‌ ಅಕ್ಷರ ಎಣಿಸಿದರೆ ಅವರು ಉಚ್ಚಾರದಲ್ಲಿ ಬರುವ ಘಟಕಗಳನ್ನು  ಲೆಕ್ಕ ಹಾಕುತ್ತಾರೆ.ಆ ಹಿನ್ನೆಲೆಯಲ್ಲಿ ಅವರ ಸಿಲೆಬಲ್ ಗ್ರಹಿಕೆ ಕನ್ನಡದ ಜಾಯಮಾನಕ್ಕೆ ಸ್ವಲ್ಪ ಬದಲಾಗೋದು‌ ಸಹಜವಾಗಿದೆ.ಉಚ್ಚಾರಣೆಯಲ್ಲಿ ಬಳಕೆಯಾದ ಅಕ್ಷರಗಳನ್ನು ಅವರು ಗ್ರಹಿಸುತ್ತಾರೆ. ಉದಾಹರಣೆಗೆ ಕೌ…ಒಂದೇ ಅಕ್ಷರ.ಜಪಾನಿಗರ ದೃಷ್ಟಿಯಿಂದಇಂಗ್ಲಿಷ್ ನಲ್ಲಿ Cow  ಮೂರು ಅಕ್ಷರ.ಕನ್ನಡದಲ್ಲಿ ಕವ್ ಎರಡು ಅಕ್ಷರ.ಹೀಗೆ ಒಂದೇ ಉಚ್ಚಾರಣೆಯಲ್ಲಿ ಉಚ್ಚರಿಸಲ್ಪಡುವ

“ಹಾಯಿಕು ಅಂದ್ರೆ ಏನು? ಎಂದು ಒಂದಷ್ಟು ಪರಿಚಯಾತ್ಮಕ ಮಾತು ಕಥೆ” ಡಾ.ಸಿದ್ದರಾಮ ಹೊನ್ಕಲ್ Read Post »

ಇತರೆ, ಜೀವನ

“ಜಗತ್ತು ನಿಮ್ಮನ್ನು ನಂಬುವ ಮೊದಲು. . . .?”  ಜಯಶ್ರೀ.ಜೆ. ಅಬ್ಬಿಗೇರಿ                                     

ಬದುಕಿನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ                                      “ಜಗತ್ತು ನಿಮ್ಮನ್ನು ನಂಬುವ ಮೊದಲು. . . .?”  ಅಮೆರಿಕದ ಪ್ರಸಿದ್ಧ ಅಧ್ಯಕ್ಷರಲ್ಲಿ ಒಬ್ಬರಾದ ಅಬ್ರಹಾಂ ಲಿಂಕನ್ ಅವರ ಜೀವನ  ಸೋಲುಗಳ ಸರಮಾಲೆಯಿಂದ ಕೂಡಿತ್ತು ವ್ಯಾಪಾರದಲ್ಲಿ ನಷ್ಟ, ಪ್ರಿಯತಮೆಯ ಸಾವು, ಹನ್ನೆರಡಕ್ಕೂ ಹೆಚ್ಚು ಬಾರಿ ಚುನಾವಣೆಯಲ್ಲಿ ಸೋಲು ಕಂಡರು. ಆದರೂ,’ನನ್ನ ಆತ್ಮವಿಶ್ವಾಸ ನನ್ನನ್ನು ಕೈಬಿಡುವುದಿಲ್ಲ.’ ಎಂದು ನಂಬಿದ್ದರು. ಅವರು ಅಂತಿಮವಾಗಿ ತಮ್ಮ ೫೨ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷರಾದರು. ಸ್ವ ನಂಬಿಕೆ , , ,?ಜೀವನದ ಅತೀ ದೊಡ್ಡ ಶಕ್ತಿ ಯಾವುದು ಎಂದು ಯೋಚಿಸಿದಾಗ ಸ್ವ ನಂಬಿಕೆ ಎನ್ನುವುದು ಉತ್ತರವಾಗಿ ಸಿಗುತ್ತದೆ. ಸ್ವ ನಂಬಿಕೆ ಎಂದರೆ ತನ್ನನ್ನು ತಾನು ನಂಬುವುದು. ಸ್ಪರ್ಧಾತ್ಮಕ ಪ್ರಪಂಚದಲ್ಲಿ  ಬದುಕುತ್ತಿರುವ ನಾವು ಲಿಂಕನ್‌ರoತಹ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಿದೆ. ಸ್ವ ನಂಬಿಕೆ ಇಲ್ಲವೆಂದರೆ ಯಾವ ಸ್ಥಾನವೂ ಇಲ್ಲ. ಯಾರಲ್ಲಿ ಆತ್ಮವಿಶ್ವಾಸ ಇಲ್ಲವೋ ಅವರಲ್ಲಿ ಭಯ ಇರುತ್ತದೆ. ಮತ್ತು  ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರುವುದಿಲ್ಲ. ಇಲ್ಲದಿದ್ದರೆ . . .? ವ್ಯಕ್ತಿ ಎಷ್ಟೇ ಜಾಣನಾಗಿದ್ದರೂ ಪ್ರತಿಭಾವಂತನಾಗಿದ್ದರೂ ಅವನಲ್ಲಿ ಸ್ವ ನಂಬಿಕೆ ಇಲ್ಲವೆಂದರೆ ಅವನು ಸಾಧನೆ ಮಾಡುವುದು ಅಸಾಧ್ಯ. ಸಾಧನೆಗೆ ಬೇಕಾದುದು ಎಲ್ಲವೂ ಇದ್ದು ಸ್ವ ನಂಬಿಕೆ ಇಲ್ಲದಿದ್ದರೆ ಸರಿಯಾದ ಇಂಜಿನ್ ಸ್ಟೇರಿಂಗ್ ಗಾಲಿಗಳು ಡ್ರೈವರ್ಎಲ್ಲವೂ ಇದ್ದು ಇಂಧನವಿಲ್ಲದ ಕಾರ್ ಇದ್ದಂತೆ. ಅದು ಮುಂದಕ್ಕೆ ಚಲಿಸಲಾರದು.‘ಜಗತ್ತಿನ ಇತಿಹಾಸವು ತನ್ನ ಮೇಲೆ ನಂಬಿಕೆ ಇಟ್ಟಿದ್ದ ಕೆಲವೇ ಕೆಲವು ವ್ಯಕ್ತಿಗಳ ಇತಿಹಾಸವಾಗಿದೆ. ಆ ನಂಬಿಕೆಯು ಒಳಗಿರುವ ದೈವತ್ವವನ್ನು ಜಾಗೃತಗೊಳಿಸುತ್ತದೆ. ನೀವು ಯಾವುದನ್ನಾದರೂ ಸಾಧಿಸಬಹುದು.’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಆತ್ಮವಿಶ್ವಾಸವೆಂದರೆ , , ,? ಆತ್ಮವಿಶ್ವಾಸವೆಂದರೆ ನಮ್ಮ ಮೇಲೆ ನಮಗಿರುವ ವಿಶ್ವಾಸ. ನಮ್ಮ ಸಾಮರ್ಥ್ಯ ಗುಣಗಳು ಮತ್ತು ನಿರ್ಧಾರಗಳ ಮೇಲೆ ನಮಗಿರುವ ಅಚಲವಾದ ನಂಬಿಕೆ. ಯಾವುದೇ ಕ್ಷೇತ್ರದಲ್ಲಿ ಜಯಗಳಿಸಲು ಇದೇ ಅತಿ ಮುಖ್ಯವಾದ ಅಸ್ತ್ರವಾಗಿದೆ. ಅದು ನಮ್ಮ ಆಂತರಿಕ ಶಕ್ತಿ. ಜೀವನದ ಪ್ರತಿಯೊಂದು ಹಂತದಲ್ಲೂ ನಾವು ಯಶಸ್ವಿಯಾಗಲು ಅತಿ ಮುಖ್ಯ. ಒಬ್ಬ ವ್ಯಕ್ತಿಯು ಎಷ್ಟೇ ಬುದ್ಧಿವಂತನಾಗಿದ್ದರೂ ಆತ್ಮವಿಶ್ವಾಸದ ಕೊರತೆಯಿದ್ದರೆ ಗುರಿ ತಲುಪುವುದು ಕಷ್ಟವಾಗುತ್ತದೆ. ಕಾರಣ ಅರಿಯಿರಿ ಆತ್ಮವಿಶ್ವಾಸ ಕಡಿಮೆ ಆಗಲು ಕಾರಣ ಹಲವಾರು ಅದರಲ್ಲಿ ಮುಖ್ಯವೆಂದರೆ; ಮನೆಯಲ್ಲಿ ಹಿರಿಯರು ಶಾಲೆಯಲ್ಲಿ ಶಿಕ್ಷಕರು ನಿನಗೇನೂ ಬರುವುದಿಲ್ಲ. ನಿನ್ನ ಕೈಯಲ್ಲಿ ಏನೂ ಆಗುವುದಿಲ್ಲ. ನೀನು ಮೂರ್ಖ. ನೀನು ದಡ್ಡ ಎಂದು ಹೇಳಿದ್ದನ್ನು ಸಬ್ ಕಾನ್ಶಿಯಸ್ ಮೈಂಡ್ ಅಚ್ಚೊತ್ತಿಕೊಂಡಿರುತ್ತದೆ. ಅದೇ ಸರಿಯೆಂದು ನಂಬಿ ಅದೇ ನಂಬಿಕೆಯಿoದ ದೊಡ್ಡವರಾಗಿರುವುದು. ಮದ್ದು ಅರೆಯಿರಿ ‘ನಿಮ್ಮಲ್ಲಿ ಅದನ್ನು ಮಾಡುವ ಸಾಮರ್ಥ್ಯವಿದೆ ಎಂಬ ನಂಬಿಕೆ ನಿಮಗಿದ್ದರೆ, ಆರಂಭದಲ್ಲಿ ಆ ಸಾಮರ್ಥ್ಯ ಇಲ್ಲದಿದ್ದರೂ ಸಹ, ಕೆಲಸದ ಕೊನೆಯಲ್ಲಿ ಅದನ್ನು ಮಡುವ ಶಕ್ತಿಯನ್ನು ನೀವು ಖಂಡಿತವಾಗಿಯೂ ಪಡೆದುಕೊಳ್ಳುತ್ತೀರಿ.’ ಎಂದು ಹೇಳಿದ್ದಾರೆ ಗಾಂಧೀಜಿ. ಅವರ ನುಡಿಮುತ್ತಿನಂತೆ ಆತ್ಮವಿಶ್ವಾಸದ ಕೊರತೆಗೆ ಮದ್ದು ಅರೆಯಬೇಕು. ಇದುವರೆಗೂ ನಾನು ತಿಳಿದಿದ್ದು ತಪ್ಪು. ಇತರರ ತರಹ ನನ್ನಲ್ಲಿ ಅರ್ಹತೆಯಿದೆ. ನಾನು ಏನು ಬೇಕಾದರೂ ಮಾಡಬಹುದು ನನಗನಿಸಿದ್ದನ್ನು ಸಾಧಿಸಬಹುದು ಅನ್ನೋ ಮೈಂಡ್ ಸೆಟ್ ಬೆಳೆಸಿಕೊಳ್ಳಬೇಕು. ಚಿಕ್ಕ ಗುರಿ ‘ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಎಂಬುದು ‘ಅಪಜಯ’ ಎಂಬ ಕಾಯಿಲೆಯನ್ನು ಕೊಲ್ಲಲು ಇರುವ ಅತ್ಯತ್ತಮ ಔಷಧಿಯಾಗಿದೆ. ಇದು ನಿಮ್ಮನ್ನು ಒಬ್ಬ ಯಶಸ್ವಿ ವ್ಯಕ್ತಿಯನ್ನಾಗಿ ಮಾಡುತ್ತದೆ.’ ಎಂಬ ಅಬ್ದುಲ್ ಕಲಾಂಜಿ ಅವರ ಮಾತು ಶ್ರಮದ ಕುರಿತಾಗಿಯೂ ಹೇಳುತ್ತದೆ. ಆದ್ದರಿಂದ ದಿನನಿತ್ಯ ಚಿಕ್ಕ ಚಿಕ್ಕ ಗುರಿಗಳಿರುವ ಒಂದು ಪಟ್ಟಿ ಮಾಡಿ. ಅದರಲ್ಲಿ  ಐದಾರು ಗುರಿಗಳಿದ್ದರೂ ಸಾಕು.  ಹೆಚ್ಚೆಚ್ಚು  ಗುರಿಗಳನ್ನು ಬರೆದು ಅದನ್ನು ಪೂರ್ಣಗೊಳಿಸಲು ಆಗದಿದ್ದರೆ ನಿಮಗೆ ಬೇಜಾರು ಆಗುತ್ತದೆ. ಮತ್ತು ಆತ್ಮವಿಶ್ವಾಸವು ಮತ್ತಷ್ಟು ಕೆಳಕ್ಕೆ ಜಾರುತ್ತದೆ. ಆದ್ದರಿಂದ ಚಿಕ್ಕ ಗುರಿಗಳನ್ನು ದಿನವೂ ಸಾಧಿಸಲು ಯತ್ನಿಸಿ. ತಯಾರಿ ‘ನೀವು ಅದನ್ನು ಮಾಡಬಲ್ಲಿರಿ ಎಂದು ನಂಬಿದರೂ ಅಥವಾ ಮಾಡಲು ಸಾಧ್ಯವಿಲ್ಲ ಎಂದು ನಂಬಿದರೂ ಎರಡೂ ಸಂದರ್ಭದಲ್ಲೂ ನೀವು ಸರಿಯಾಗಿಯೇ ಇರುತ್ತೀರಿ.’ ಎಂದಿದ್ದಾರೆ ಹೆನ್ರಿ ಫೋರ್ಡ್ ಯಾವುದೇ ಕೆಲಸ ನಿನ್ನ ಯೋಚನೆ ಮತ್ತು ನಿನ್ನ ನಂಬಿಕೆಯ ಮೇಲೆ ಅವಲಂಬಿತ ಎನ್ನುವುದು ಅವರ ಮಾತಿನ ಅರ್ಥ. ಗುರಿಗೆ ಗುರಿ ಇಡುವ ಮೊದಲು ಅದರ ಬಗ್ಗೆ ಸರಿಯಾದ ತಯಾರಿ ನಡೆಸಿ. ಸಂಕಷ್ಟದ ಸಮಯದಲ್ಲಿ ಎದೆಗುಂದದೆ ಮುನ್ನಡೆಯಲು ಇದು ಸಹಕಾರಿ. ಸ್ವ ನಂಬಿಕೆ ಇದ್ದಾಗ ಮಾತ್ರ ನಾವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ.ಸೋತಾಗ ಕುಗ್ಗದೆ, ಮಗದೊಮ್ಮೆ ಪ್ರಯತ್ನಿಸುವ ಧೈರ್ಯವನ್ನು ಇದು ತುಂಬುತ್ತದೆ. ನಕಾರಾತ್ಮಕತೆ ಬಿಡಿ ‘ಲೈಫ್ ಹ್ಯಾಸ್ ಮೆನಿ ಪ್ರಾಬ್ಲಮ್ಸ್ ಬಟ್ ನೋ ಪ್ರಾಬ್ಲಮ್ ಲಾಸ್ಟ್ ಫಾರೆವರ್ ಸೋ ಫೇಸ್ ಚಾಲೆಂಜಿಸ್ ವಿಥ್ ಕಾನ್ಫಿಡೆನ್ಸ್. ’ನನ್ನಿಂದ ಸಾಧ್ಯವಿಲ್ಲ ಎಂಬ ಯೋಚನೆಯನ್ನು ಮೊದಲು ಕೈಬಿಡಿ. ಅದರ ಬದಲು ನಾನು ಪ್ರಯತ್ನಿಸುತ್ತೇನೆ ಎಂದು ಆಲೋಚಿಸಿ. ಸೋಲನ್ನು ಅನುಭವವಾಗಿ ಸ್ವೀಕರಿಸಿ. ಮುನ್ನಡೆಯಬೇಕು. ಸೋಲನ್ನು ವೈಫಲ್ಯವೆಂದು ಭಾವಿಸದೆ, ಕಲಿಕೆಯ ಒಂದು ಭಾಗವೆಂದು ಸ್ವೀಕರಿಸಿ ಆಗ ಸೋಲಿನ ಭಯ ಹೋಗಲಾಡುತ್ತದೆ. ಸೋಲಿನ ಭಯ ದೂರವಾಗಿ ಹೊಸ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತದೆ. ನಿಮ್ಮನ್ನು ನೀವು ಪ್ರೀತಿಸಿ. ಇತರರೊಂದಿಗೆ ಹೋಲಿಕೆ ಮಾಡಕೊಳ್ಳುವುದನ್ನು ನಿಲ್ಲಿಸಿ ನಿಮ್ಮ ವ್ಯಕ್ತಿತ್ವವನ್ನು ಗೌರವಿಸಿ. ಗುರುತಿಸಿ ನಿಮ್ಮ ಸಣ್ಣ ಪುಟ್ಟ ಯಶಸ್ಸನ್ನು ಗುರುತಿಸಿ. ಅವುಗಳನ್ನು ಸಂಭ್ರಮಿಸಿ. ಅದು ದೊಡ್ಡ ಸಾಧನೆಗೆ ಸ್ಪೂರ್ತಿಯಾಗುತ್ತದೆ. ನಿರಂತರ ಕಲಿಕೆಯಿರಲಿ ಅದು ಜ್ಞಾನ ಹೆಚ್ಚಿಸುತ್ತದೆ. ಜ್ಞಾನ ಹೆಚ್ಚಾದಂತೆ ಸಹಜವಾಗಿಯೇ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಗುರಿ ಒಂದೇ ಆಗಿರಲಿ ಪ್ರಯತ್ನ ವಿಭಿನ್ನವಾಗಿರಲಿ. ನಿಮ್ಮ ಮೇಲೆ ನಿವiಗೆ ನಂಬಿಕೆಯಿರಲಿ ಇಡೀ ಜಗತ್ತೇ ನಿಮ್ಮ ಕಾಲಡಿಯಲ್ಲಿರುತ್ತದೆ. ಪ್ರಶಂಸೆ ಮತ್ತು ಟೀಕೆಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಒಂದು ಹೂವಿನ ಗಿಡ ಸರಿಯಾಗಿ ಬೆಳೆಯಲು ಮಳೆ ಮತ್ತು ಬಿಸಿಲು ಎರಡೂ ಬೇಕು. ಅಷ್ಟಕ್ಕೂ ಪ್ರಶಂಸೆ ಮತ್ತು ಟೀಕೆಗಳು ವಾಸ್ತವವಲ್ಲ. ಅವು ಜನರ ಅಭಿಪ್ರಾಯಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ತಿಳಿದುಕೊಳ್ಳಿ ಈ ಜಗತ್ತಿನಲ್ಲಿ ಗೌರವದಿಂದ ಬದುಕಲು ಶ್ರೇಷ್ಠವಾದುದನ್ನು ಸಾಧಿಸಲು ನಿಮ್ಮನ್ನು ನೀವು ನಂಬಬೇಕು. ಇತರರು ನಿಮ್ಮನ್ನು ನಿರೀಕ್ಷಿಸುವ ರೀತಿಯಲ್ಲಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡುವುದಲ್ಲ. ನಿಮ್ಮ ಆತ್ಮವಿಶ್ವಾಸದ ಮಾತುಗಳು ಆತ್ಮವಿಶ್ವಾಸಭರಿತ ನಿಮ್ಮ ಕ್ರಿಯೆಗಳು. ಸಾಕ್ರೆಟಿಸ್ ಆಗಾಗ್ಗೆ ಜನರಿಗೆ ‘ಪರೀಕ್ಷಿಸದ ಜೀವನವು ಬದುಕಲು ಯೋಗ್ಯವಲ್ಲ.’ ಎಂದು ನೆನಪಿಸುತ್ತಿದ್ದರು. ಸ್ವ ನಂಬಿಕೆಗೆ ಮೊದಲು ನಿಮ್ಮನ್ನು ನೀವು ತಿಳಿದುಕೊಳ್ಳಬೇಕು. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದು ಒಂದು ಸಲದ ಕೆಲಸವಲ್ಲ; ಇದು ಪ್ರಶ್ನಿಸುವ ಕಲಿಯುವ ಮತ್ತು ಸರಿಪಡಿಸುವ ದೈನಂದಿನ ಅಭ್ಯಾಸವಾಗಿದೆ. ಬದಲಾವಣೆಗೆ ದಾರಿ ಆಲೋಚನೆ ಮತ್ತು ಕ್ರಿಯೆ ಸ್ಥಿರವಾದಾಗ ಮಾತ್ರ ನಂಬಿಕೆ ಹೆಚ್ಚುತ್ತದೆ. ನೋವು ಮತ್ತು ಅನಿಶ್ಚಿತತೆಯನ್ನು ತಪ್ಪಿಸುವ ಮೂಲಕ ವಿಶ್ವಾಸದಿಂದ ವರ್ತಿಸುವಂತೆ ಒತ್ತಾಯಿಸುತ್ತದೆ. ಸತತ ಪ್ರಯತ್ನ ಜ್ಞಾನಾರ್ಜನೆ ಮತ್ತು ಧೈರ್ಯದಿಂದ ಇದನ್ನು ಬೆಳೆಸಿಕೊಳ್ಳಬಹುದು. ಅಂಜಿಕೆಯನ್ನು ಬಿಟ್ಟು ಹೊಸ ಸವಾಲುಗಳನ್ನು ಎದುರಿಸಿದಾಗ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ‘ನಿಮ್ಮನ್ನು ನೀವು ಗೆಲ್ಲುವುದು ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ದೊಡ್ಡದು.’ ಜಗತ್ತು ನಿಮ್ಮನ್ನು ನಂಬುವ ಮೊದಲು ನೀವು ನಿಮ್ಮನ್ನು ನಂಬಬೇಕು.ನೆನಪಿರಲಿ: ‘ನನ್ನಿಂದ ಸಾಧ್ಯ’ ಎಂಬ ಸಣ್ಣ ನಂಬಿಕೆ ದೊಡ್ಡ ಬದಲಾವಣೆಗೆ ದಾರಿಯಾಗುತ್ತದೆ.

“ಜಗತ್ತು ನಿಮ್ಮನ್ನು ನಂಬುವ ಮೊದಲು. . . .?”  ಜಯಶ್ರೀ.ಜೆ. ಅಬ್ಬಿಗೇರಿ                                      Read Post »

ಇತರೆ, ಶಿಕ್ಷಣ

“ಕೆಲವೊಂದು ಸಲಹೆಗಳು:ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳಿಗೆ” ವಾಣಿ ಶಿವಕುಮಾರ್

ಶಿಕ್ಷಣ ಸಂಗಾತಿ ವಾಣಿ ಶಿವಕುಮಾರ್ “ಕೆಲವೊಂದು ಸಲಹೆಗಳು: ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳಿಗೆ”  pic̲:chat gpt/gemini ಇನ್ನೇನು ಕೆಲವೇ ದಿನಗಳಲ್ಲಿ ೧೦ ನೇ ತರಗತಿಯ ಪರೀಕ್ಷೆ ಶುರುವಾಗಲಿದೆ. ನಿಮ್ಮ ನಿಮ್ಮ ಶಾಲೆಗಳಲ್ಲಿ ಉತ್ತಮವಾದ ಸಿದ್ಧತೆ ಮಾಡಿಸಿರುವುದರ ಜೊತೆಗೆ ಆತ್ಮವಿಶ್ವಾಸವನ್ನೂ ಸಹ ಬಲಪಡಿಸಿರುತ್ತಾರೆ  ಹಲವಾರು ಮಾದರಿ ಪ್ರಶ್ನೆ ಪತ್ರಿಕೆಗೆ ಉತ್ತರ ನೀಡಿ ನಿಮ್ಮ ತಯಾರಿಕೆಗೆ ಮತ್ತಷ್ಟು ಪುಷ್ಟಿ ನೀಡಿರುತ್ತಾರೆ. ಊಟ, ನಿದ್ದೆ ಬಿಟ್ಟು ಓದಿ ಅಂತ ಯಾರೂ ಸಹ ಎಲ್ಲೂ ಉಲ್ಲೇಖಿಸಿಲ್ಲ ಓದಿನ ಜೊತೆ ನಿಮ್ಮ ಆರೋಗ್ಯದ ಕಡೆಗೂ ಗಮನವಿರಲಿ.  ಯಾರ ಅಂಕದ ಜೊತೆಗೂ ನಿಮ್ಮನ್ನು ನೀವು ಹೋಲಿಸಿಕೊಳ್ಳದಿರಿ ಪರೀಕ್ಷೆಯಿಂದ ಹೊರಬಂದ ಬಳಿಕ ಅನಗತ್ಯ ಚರ್ಚೆ ಬೇಡ, ಇದರಿಂದ ನೀವು ಗೊಂದಲಕ್ಕೊಳಗಾಗುವ ಸಾಧ್ಯತೆಯೇ ಹೆಚ್ಚು.  ಪೋಷಕರೇ ಮಕ್ಕಳ ಮೇಲೆ ಒತ್ತಡ ಹೇರಬೇಡಿ ಮೊದಲ ದಿನದಿಂದ ಅವರ ಓದು,ಬರಹ ಚಲನ ವಲನಗಳನ್ನು ಗಮನಿಸುತ್ತಾ ಬಂದಿರ್ತೀರ ಶೇಕಡಾ ೯೦ ೯೫ ಬರಲೇಬೇಕು ಅಂತ ತಾಕಿತು ಮಾಡಬೇಡಿ  ಎಷ್ಟೇ ಅಂಕ ಬಂದರೂ ಅವರು ನಮಗೆ ಮಕ್ಕಳೇ. ಎಲ್ಲಾ ಮಕ್ಕಳಲ್ಲಿಯೂ ವಿಶೇಷವಾದ ಕಲೆ ಇದ್ದೇ ಇರುತ್ತದೆ ಅದನ್ನು ಗುರುತಿಸಿ,ಪ್ರೋತ್ಸಾಹಿಸಿ, ಉತ್ತೇಜಿಸಿ. ಒಂದು ಹುದ್ದೆಯನ್ನು ಅಲಂಕರಿಸುವುದಕ್ಕೋಸ್ಕರ ಅಂಕಗಳು ಬೇಕು ಅಂಕಗಳು ಹೆಚ್ಚು ಕಡಿಮೆಯಾದರೂ ನಮ್ಮ ನಡವಳಿಕೆ, ಸಂಸ್ಕಾರ,ನಯ,ವಿನಯ ಅತಿ ಮುಖ್ಯವಾಗಿರುತ್ತದೆ  ಒಂದು ವೇಳೆ ಅಂಕಗಳು ಕಡಿಮೆ ಬಂದರೆ ಅಥವಾ ನಪಾಸ್ ಆದರೆ ದಯವಿಟ್ಟು ಕೆಟ್ಟ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಠಿಣ ಸಾಹಸಕ್ಕೆ ಕೈ ಹಾಕಬೇಡಿ. ಅರಳ ಬೇಕಿರುವ ಪ್ರತಿಭೆಗಳು ನೀವು ಅರಳುವ ಮುನ್ನವೇ ಬಾಡಿ ಹೋಗದಿರಿ  ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಈ ಮೂಲಕ ಆಲ್ ದ ಬೆಸ್ಟ್ ಹೇಳುವುದಕ್ಕೆ ಬಯಸುತ್ತೇನೆ. ಕಠಿಣ ಪರಿಶ್ರಮ,ಪೋಷಕರ ಆಶೀರ್ವಾದ,ದೇವರ ಅನುಗ್ರಹ ಸದಾ ಇರುತ್ತದೆ. ಯಶಸ್ಸು ನಿಮ್ಮದಾಗಲೆಂದು ಹಾರೈಸುತ್ತೇನೆ. ವಾಣಿ ಶಿವಕುಮಾರ್

“ಕೆಲವೊಂದು ಸಲಹೆಗಳು:ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳಿಗೆ” ವಾಣಿ ಶಿವಕುಮಾರ್ Read Post »

ಇತರೆ, ಪ್ರವಾಸ ಕಥನ

“ಪ್ರವಾಸದ ಹೊಸ ಅನುಭವದಿಂದ ಬದಲಾವಣೆ” ಡಾ.ಸುಮತಿ ಪಿ

ಪ್ರವಾಸ ಸಂಗಾತಿ ಡಾ.ಸುಮತಿ ಪಿ “ಪ್ರವಾಸದ ಹೊಸ ಅನುಭವದಿಂದ ಬದಲಾವಣೆ” ಪ್ರವಾಸವೆಂದರೆ ತಮ್ಮ ವಾಸಸ್ಥಾನದಿಂದ ಅಥವಾ ದೈನಂದಿನ ಚಟುವಟಿಕೆಯ ಸ್ಥಾನದಿಂದ ಬೇರೆ ಊರಿಗೆ ಅಥವಾ ಬೇರೆ ಸ್ಥಳಗಳಿಗೆ ಭೇಟಿ ನೀಡುವುದು. ದೈನಂದಿನ ಚಟುವಟಿಕೆಗಳ ಏಕತಾನತೆಯಿಂದ ಮನಸ್ಸನ್ನು ಪುನರ್ಚೇತನಗೊಳಿಸಲು ಪ್ರವಾಸದ ಯೋಜನೆಯನ್ನು ಹಾಕಿಕೊಂಡು ಪ್ರವಾಸ ಹೋಗುತ್ತಾರೆ. ಜೊತೆಗೆ ಅಧ್ಯಯನ ಪ್ರವಾಸ ಕೂಡ ಮಾಡುತ್ತಾರೆ. ಪ್ರವಾಸದಿಂದ ಹೊಸ ಅನುಭವ ಆಗುವುದರ ಜೊತೆಗೆ ಮನರಂಜನೆ ಕೂಡ ಸಿಗುತ್ತದೆ. ಪ್ರವಾಸದ ಸಮಯದಲ್ಲಿ ಉಂಟಾದ ಹೊಸ ಅನುಭವದಿಂದ ವ್ಯಕ್ತಿಯ ದೈನಂದಿನ ಬದುಕಿನಲ್ಲಿ  ಕೆಲವೊಂದು ಬದಲಾವಣೆಗಳು ಆಗಲು ಸಾಧ್ಯವಿದೆ. “ದೇಶ ಸುತ್ತು ಕೋಶ ಓದು”ಎಂಬ ಗಾದೆ ಮಾತಿದೆ. ಅದರಲ್ಲೂ ಪುಸ್ತಕದ ಜ್ಞಾನಕ್ಕಿಂತಲೂ ಪ್ರತ್ಯಕ್ಷ ಅನುಭವದ ಜ್ಞಾನ ಮನುಷ್ಯನ ಬದುಕಿನ ಮೇಲೆ ಹೆಚ್ಚಿನ ಪರಿಣಾಮ ಬೀರಬಲ್ಲದು.ಬೇರೆ ಊರುಗಳಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿಯ ದೇವಸ್ಥಾನಗಳು, ಜನಜೀವನ,ಕಲೆ, ವಾಸ್ತುಶಿಲ್ಪ, ಜನರ ಸಂಸ್ಕೃತಿ ಇವೆಲ್ಲವನ್ನು ಗಮನಿಸುವಾಗ ನಮ್ಮ ದೇಶದ ಸಂಸ್ಕೃತಿಯ ಅರಿವಾಗುವುದರ ಜೊತೆಗೆ ಅಲ್ಲಿ ಏನು ಹೊಸತಿದೆ ಎಂಬುದು ಮನಸ್ಸಿಗೆ ಮುಟ್ಟುತ್ತದೆ.ಪ್ರವಾಸದ ಸಮಯದಲ್ಲಿ ಅದ್ಭುತವಾದಂತಹ ಕಟ್ಟಡಗಳು,ಪ್ರಕೃತಿ ಸೌಂದರ್ಯ, ಉದ್ಯಾನವನಗಳು,ಎತ್ತರದಿಂದ ಧುಮುಕುವ ಜಲಪಾತಗಳು ಇವುಗಳನ್ನೆಲ್ಲ ನೋಡುವಾಗ ಮನಸ್ಸಿಗೆ ಖುಷಿಯಾಗಿ ಎಲ್ಲವನ್ನು ಮರೆತು, ಸಂತೋಷದಿಂದ ಇರಲು ಸಾಧ್ಯವಾಗುತ್ತದೆ ಅದು ಮಾನಸಿಕ ನೆಮ್ಮದಿಯನ್ನು ನೀಡುತ್ತಾ ನಮ್ಮ ಆರೋಗ್ಯದ ಮೇಲು ಪ್ರಭಾವ ಬೀರುತ್ತದೆ ಈ ಕಾರಣದಿಂದಲೇ ಇರಬಹುದು ವರ್ಷವಿಡಿ ದುಡಿಯುವ ನೌಕರರು ಕೆಲವೊಂದು ದಿನಗಳ ಬಿಡುವು ಮಾಡಿಕೊಂಡು ಪ್ರವಾಸ ಹೋಗುತ್ತಾರೆ. ಪ್ರವಾಸ ಹೇಗಿರಬೇಕು ಪ್ರವಾಸಕ್ಕೆ ನಿರ್ದಿಷ್ಟವಾದ ಉದ್ದೇಶವಿರಬೇಕು.ಅದು ಮನರಂಜನೆಗೆ ಅಥವಾ ವಿಹಾರಕ್ಕಾಗಿ ಮಾಡುವ ಪ್ರವಾಸ ವಿರಬಹುದು, ಅಥವಾ ಶಿಕ್ಷಣದ ಉದ್ದೇಶದಿಂದ ಮಾಡುವ ಪ್ರವಾಸವಿರಬಹುದು ಅಥವಾ ಸಾಂಸ್ಕೃತಿಕ ಸ್ಥಿತಿಗತಿ ಅಧ್ಯಯನದ ಬಗ್ಗೆ ಪ್ರವಾಸ ಇರಬಹುದು. ಹೀಗೆ ಒಂದು ಉದ್ದೇಶವಿಟ್ಟುಕ್ಕೊಂಡು  ಮಾಡುವುದೇ ಪ್ರವಾಸ. ಪ್ರವಾಸ ಮಾಡುವ ಮೊದಲು ಅದರ ಉದ್ದೇಶಕ್ಕೆ ಅನುಗುಣವಾಗಿ ಯೋಚನೆ ಮಾಡಿ,ಯೋಜನೆ ಹಾಕಿಕೊಂಡು ಮುನ್ನಡೆದರೆ ಎಲ್ಲವೂ ಹಾಕಿಕೊಂಡ ಯೋಚನೆಯಂತೆ ನಡೆದರೆ ಅಂತಹ ಪ್ರವಾಸ ಒಳ್ಳೆಯ ಪ್ರತಿಫಲವನ್ನು ನೀಡಬಲ್ಲದು. ಪ್ರವಾಸ ಯಾವುದೇ ಇರಲಿ ಅದರ ಉದ್ದೇಶ ಈಡೇರಬೇಕು. ಪ್ರವಾಸದಿಂದ ಉಂಟಾಗುವ ಹೊಸ ಅನುಭವ ಪ್ರವಾಸವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತದೆ. ಇದು ಹೊಸ ಸಂಸ್ಕೃತಿಗಳು, ಭಾಷೆಗಳು ಮತ್ತು ಸ್ಥಳಗಳನ್ನು ಪರಿಚಯಿಸುವುದರಿಂದ ಸೃಜನಶೀಲತೆ ಹಾಗೂ ಜ್ಞಾನ ವೃದ್ಧಿಸುತ್ತದೆ. ಜೊತೆಗೆ, ಆತ್ಮವಿಶ್ವಾಸ ಹೆಚ್ಚಿಸಿ, ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅನುಭವಗಳನ್ನು ಒದಗಿಸುತ್ತದೆ.ಮನುಷ್ಯನ ಬದುಕಿನಲ್ಲಿ ಪ್ರತಿಯೊಂದು ದಿನವು ಹೊಸ ದಿನವೆಂಬಂತೆ ಕೈಗೊಳ್ಳುವ ಯಾವುದೇ ರೀತಿಯ ಪ್ರವಾಸದಿಂದ ಹೊಸತಾದ ಅನುಭವ ಆಗಿಯೇ ಆಗುತ್ತದೆ ಅಂತಹ ಹೊಸ ಅನುಭವ ಬದುಕಿನಲ್ಲಿ ರೋಚಕತೆಯನ್ನು ಉಳಿಸಿಕೊಂಡು ಹೊಸ ಬದಲಾವಣೆಯನ್ನು ತರಲು ಸಾಧ್ಯವಿದೆ ಉದಾಹರಣೆಗೆ ಯಾವುದೋ ಒಂದು ಹೊಸ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿಯ ಜನರ ಜೀವನ ಕ್ರಮ ನಮಗೆ ಇಷ್ಟವಾಗಬಹುದು ಆಗ ಆ ಜೀವನ ಕ್ರಮವನ್ನು ನಮ್ಮ ಊರಲ್ಲಿ ಬಂದು ನಾವು ಅನುಸರಿಸಿದರೆ ನಮ್ಮಲ್ಲಿ ಬದಲಾವಣೆಯಾಗಲು ಸಾಧ್ಯ. ಇದೇ ರೀತಿಯಲ್ಲಿ ನಾವು ಪ್ರವಾಸಕ್ಕೆ ಹೋದಾಗ ಕಂಡುಕೊಂಡಂತಹ ವಿಶೇಷತೆಗಳು ಅಲ್ಲಿನ ಜನರ ಸಭ್ಯತೆ ಇರಬಹುದು ಅಥವಾ ಆಹಾರ,ಆಚಾರ ವಿಚಾರ ಇರಬಹುದು ವ್ಯವಹಾರ ಇರಬಹುದು ಜೀವನ ಕ್ರಮ ಇರಬಹುದು ಇವುಗಳೆಲ್ಲ ಪ್ರವಾಸಿಗರ ಮನಸಲ್ಲಿ ಅಚ್ಚಳಿಯದೆ ಉಳಿಯುವಂತಹ ಕೆಲವೊಂದು ಅಂಶಗಳು ಪ್ರವಾಸಕ್ಕೆ ಹೋದಾಗ ಅಲ್ಲಿಯ ಜನರ ಜೀವನ ಕ್ರಮ ಪದ್ಧತಿಗಳನ್ನು ನೋಡುವಾಗ ನಮ್ಮ ಜೀವನ ಪ್ರಕ್ರಮ ಪದ್ಧತಿಯ ನೆನಪು ನಮಗಾಗುತ್ತದೆ ಮನಸ್ಸು ತನ್ನಂತಾನೆ ಸಾಮ್ಯತೆಯನ್ನು ಚಿಂತನೆ ಮಾಡುತ್ತದೆ ಯಾವುದು ಒಳ್ಳೇದು ಎಂಬುದನ್ನು ಆಲೋಚಿಸುತ್ತದೆ ಮನಸ್ಸಿಗೆ ಖುಷಿಯಾದರೆ ಅದನ್ನು ಅಳವಡಿಸುವ ಕೆಲಸವು ನಡೆಯುತ್ತದೆಒಟ್ಟಿನಲ್ಲಿ ಪ್ರವಾಸದಿಂದ ಹೊಸ ಅನುಭವ ಮಾತ್ರ ಸಿಗುತ್ತದೆ ಎನ್ನಲಾಗದು. ಪ್ರವಾಸದಿಂದ ಅನೇಕ ರೀತಿಯ ಪ್ರಯೋಜನಗಳು ಆಗುತ್ತವೆ ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮಲ್ಲಿ ನಾವು ಬದಲಾವಣೆಯನ್ನು ತರುವುದಕ್ಕೆ ಸಾಧ್ಯವಾಗುತ್ತದೆ. ಕೂಪ ಮಂಡೂಕದಂತಿರುವ ಮನುಷ್ಯರು ಪ್ರವಾಸಕ್ಕೆ ಹೋಗಿ ಬಂದ ನಂತರ ಮನಸ್ಸು ವಿಶಾಲವಾಗುತ್ತದೆ ಬದಲಾವಣೆಯನ್ನು ಅವರು ಸ್ವೀಕರಿಸುತ್ತಾರೆ. ಹೊಸ ಪರಿಸರ ಮತ್ತು ಸಂಸ್ಕೃತಿಯು ಮೆದುಳನ್ನು ಸಕ್ರಿಯಗೊಳಿಸುತ್ತದೆ.ದೈನಂದಿನ ಜಂಜಾಟದಿಂದ ವಿರಾಮ ನೀಡಿ, ಮನಸ್ಸನ್ನು ಶಾಂತಗೊಳಿಸುತ್ತದೆ ಹೊಸ ಚೈತನ್ಯ ನೀಡುತ್ತದೆ.ವಿಭಿನ್ನ ಆಹಾರ ಪದ್ಧತಿ, ಸಂಪ್ರದಾಯ ಮತ್ತು ಜೀವನಶೈಲಿಯನ್ನು ಅರ್ಥಮಾಡಿಕೊಳ್ಳುವ ಅವಕಾಶ ಸಿಗುತ್ತದೆ.ಒಟ್ಟಾರೆಯಾಗಿ, ಪ್ರವಾಸವು ಬದುಕಿನ ಬದಲಾವಣೆಗೆ,ವ್ಯಕ್ತಿತ್ವ ವಿಕಸನಕ್ಕೆ ಮತ್ತು ಬದುಕಿನ ದೃಷ್ಟಿಕೋನವನ್ನು ವಿಸ್ತರಿಸಲು ಸಹಕಾರಿಯಾಗಿದೆ. ಡಾ.ಸುಮತಿ ಪಿ

“ಪ್ರವಾಸದ ಹೊಸ ಅನುಭವದಿಂದ ಬದಲಾವಣೆ” ಡಾ.ಸುಮತಿ ಪಿ Read Post »

ಆರೋಗ್ಯ, ಇತರೆ

“ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಯ ಅವಶ್ಯಕತೆ” ವಿಶೇಷಬರಹ ಸಂಗಮೇಶ್ ಜವಾದಿ

ಆರೋಗ್ಯ ಸಂಗಾತಿ ಸಂಗಮೇಶ್ ಜವಾದಿ “ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಯ ಅವಶ್ಯಕತೆ”  ಬೇಸಿಗೆಯು ವರ್ಷದ ಅದ್ಭುತ ಸಮಯವಾಗಿದ್ದು, ಬೆಚ್ಚಗಿನ ಹವಾಮಾನ, ದೀರ್ಘ ಹಗಲು ಸಮಯ ಮತ್ತು ಹೊರಾಂಗಣದಲ್ಲಿ ಆನಂದಿಸಲು ಸಾಕಷ್ಟು ಅವಕಾಶಗಳನ್ನು ತರುತ್ತದೆ. ಆದಾಗ್ಯೂ, ಸೂರ್ಯ, ಶಾಖ ಮತ್ತು ಆರ್ದ್ರತೆಯೊಂದಿಗೆ ಸಂಭಾವ್ಯ ಆರೋಗ್ಯ ಅಪಾಯಗಳು ಬರುತ್ತವೆ, ಅವುಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಅವು ಹಾನಿಕಾರಕವಾಗಬಹುದು. ಬೇಸಿಗೆಗೆ ನಾವು ಸಜ್ಜಾಗುತ್ತಿರುವಾಗ, ನಮ್ಮ ಬಗ್ಗೆ ಕಾಳಜಿ ವಹಿಸುವುದು ಪ್ರಮುಖ ಆದ್ಯತೆಯಾಗಿರಬೇಕು ಎಂಬುದನ್ನು ನೆನಪಿಟ್ಟುಕೊಳ್ಳುವುದು ಅಷ್ಟೇ ಮುಖ್ಯ.ಸೂರ್ಯನು ಸುಡುತ್ತಾ ಬಹುಮುಖಿ ದೇಹದ ತೊಂದರೆಗಳನ್ನು ಎದುರಿಸುತ್ತಿರುವಾಗ, ಬೇಸಿಗೆಯ ತಿಂಗಳುಗಳಲ್ಲಿ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಲು ಕೆಲವು ಸಲಹೆಗಳು ನೀಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ರಾಜ್ಯಾದ್ಯಂತ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗ ಅದರಲ್ಲಿಯೂ ಬೀದರ ಮತ್ತು ಕಲಬುರ್ಗಿಜಿಲ್ಲೆಯಾದ್ಯಂತ ಪ್ರಸ್ತುತ ತಿಂಗಳಿನಿಂದ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಕಂಡುಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ದರು ತಮ್ಮ ಆರೋಗ್ಯದ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಬಹಳಷ್ಟು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಸಂದರ್ಭದಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು. ಸರ್ಕಾರದಿಂದ ಸಾರ್ವಜನಿಕರಿಗೆ ಅನೇಕ ಸಲಹೆಗಳನ್ನು ನೀಡಿರುತ್ತಾರೆ. ಅವುಗಳನ್ನು ಖಂಡಿತವಾಗಿಯೂ ಪಾಲಿಸಬೇಕು. ಬೇಸಿಗೆ ಸಮಯದಲ್ಲಿ ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು. ಮಜ್ಜಿಗೆ ಅಥವಾ ಎಳನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬೇಕು. ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ. ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆಯನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಗಾಳಿಯಾಡುವ ಪಾದರಕ್ಷೆ ಧರಿಸುವುದು ಅಷ್ಟೇ ಸುರಕ್ಷಿತ. ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಬೇಕು. ರೇಡಿಯೊ, ದೂರದರ್ಶನ ಹಾಗೂ ದಿನಪತ್ರಿಕೆಗಳಲ್ಲಿ ಬಿಸಿಯಾದ ಗಾಳಿ ಅಥವಾ ಶಾಖ ತರಂಗದ ಬಗ್ಗೆ ನೀಡುವ ಮಾಹಿತಿ ಅನುಸಾರ ದೈನಂದಿನ ಚಟುವಟಿಕೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು.ಅಲ್ಲದೆ  ವಿಶೇಷವಾಗಿ ಹೇಳಬೇಕೆಂದರೆ ‎ಬಿಸಿಲಿನಲ್ಲಿ  ಕಾರ್ಯನಿರ್ವಹಿಸುವವರು (ಜಮೀನು ಕೆಲಸ, ರಸ್ತೆ ಕಾಮಗಾರಿ ಮುಂತಾದವು) ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆ ನಂತರ ಕೈಗೊಳ್ಳುವುದು ಉತ್ತಮ. ಈ ಅವಧಿಯಲ್ಲಿ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯಬೇಕು. ಬಿಸಿಲಿನಲ್ಲಿ ನಡೆಯುವಾಗ ಕಡ್ಡಾಯವಾಗಿ ಚಪ್ಪಲಿ ಧರಿಸಿ. ಟೀ ಅಥವಾ ಕಾಫಿ, ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಕಾರ್ಬೋನೇಟೆಡ್ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರುವುದು ಆದಷ್ಟು ಒಳ್ಳೆಯದು. ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿ. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ ವಿಶ್ರಾಂತಿ ಪಡೆಯುವುದು ಸೂಕ್ತ ಮತ್ತು ಅವಶ್ಯಕವಾಗಿದೆ.ಇನ್ನು ಆಹಾರವನ್ನು ತೆಗೆದುಕೊಳ್ಳುವಾಗ, ಯಾವಾಗಲೂ  ಕೈಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಮೂಲಭೂತ ನೈರ್ಮಲ್ಯ ಮುನ್ನೆಚ್ಚರಿಕೆಗಳನ್ನು ಗಮನಿಸಿ. ಕಲುಷಿತ ಆಹಾರ ಮತ್ತು ನೀರಿನಿಂದ ಸೋಂಕು ತಗುಲುವುದನ್ನು ತಪ್ಪುತ್ತದೆ.ಪ್ರಯಾಣಿಸುವಾಗ ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಾಗ ಸೂರ್ಯನ ಶಾಖದಿಂದ ಕಡ್ಡಾಯವಾಗಿ ರಕ್ಷಿಸಿಕೊಳ್ಳಲು ಕ್ಯಾಪ್ ಮತ್ತು ಸನ್ ಗ್ಲಾಸ್ ಧರಿಸಿ. ಟೋಪಿ ಮತ್ತು ಸನ್ ಗ್ಲಾಸ್ ಧರಿಸುವುದರಿಂದ ಸೂಕ್ಷ್ಮ ಪ್ರದೇಶಗಳು UV ಕಿರಣಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ.ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ :ಏನು ತಿನ್ನುತ್ತೀರಿ ಮತ್ತು  ದೇಹವನ್ನು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ಬೇಸಿಗೆಯು ಮಾನವರ ಶಕ್ತಿಯ ಮಟ್ಟಗಳು, ಚರ್ಮ, ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಒಂದು ವೇಳೆಬಿಸಿಗಾಳಿ ಮತ್ತು ಅತಿಯಾದ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಅಥವಾ 108/102 ಕ್ಕೆ ಕರೆ ಮಾಡುವುದು ಸೂಕ್ತ.ಕೊನೆಯದಾಗಿ ಹೇಳುವುದಾದರೆ : ಬೇಸಿಗೆಯಲ್ಲಿ ಆರೋಗ್ಯವಾಗಿರಲು, ದಿನಕ್ಕೆ 4-5 ಲೀಟರ್ ನೀರು ಕುಡಿಯುವುದು, ಕಲ್ಲಂಗಡಿ, ಸೌತೆಕಾಯಿಯಂತಹ ನೀರಿನಂಶವಿರುವ ಆಹಾರ ಸೇವಿಸುವುದು, ಮತ್ತು ಮಧ್ಯಾಹ್ನ 11 ರಿಂದ 4 ರವರೆಗೆ ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಮಾಡುವುದು ಮುಖ್ಯ. ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ, ಸನ್‌ಸ್ಕ್ರೀನ್ ಬಳಸಿ ಮತ್ತು ತಾಜಾ ಆಹಾರ ಸೇವಿಸುವ ಮೂಲಕ ನಿರ್ಜಲೀಕರಣ ಹಾಗೂ ಶಾಖದ ಹೊಡೆತವನ್ನು ತಪ್ಪಿಸಬಹುದು.ವಿಶೇಷವಾಗಿ ದಿನವಿಡೀ ಸಾಕಷ್ಟು ನೀರು, ಎಳನೀರು, ನಿಂಬೆ ಪಾನಕ, ಮತ್ತು ಮಜ್ಜಿಗೆ ಕುಡಿಯುವುದು.ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ, ದ್ರಾಕ್ಷಿ, ಮತ್ತು ಮಾವಿನಹಣ್ಣಿನಂತಹ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಆರೋಗ್ಯ ಹಿತದೃಷ್ಟಿಯಿಂದ ಅತ್ಯುತ್ತಮ ಕ್ರಮವಾಗಿದೆ.ಅಲ್ಲದೆ ಹಸಿರು ತರಕಾರಿಗಳು, ಕಲರ್ ಫುಲ್ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸುವುದು ಒಳ್ಳೆಯದು. ಇವು ದೇಹವು ಅದರ ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ.ಜೊತೆಗೆ ನಿಂಬೆ ನೀರು ಸಹ  ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.ಅಂದಹಾಗೆ ಬೇಸಿಗೆಯು ವರ್ಷದ ಅದ್ಭುತ ಸಮಯ, ಆದರೆ ಸಂಭಾವ್ಯ ಆರೋಗ್ಯ ಅಪಾಯಗಳನ್ನು ತಪ್ಪಿಸಲು ನಮ್ಮನ್ನು ನಾವು ನೋಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ಬೇಸಿಗೆಯಲ್ಲಿ ದೊರೆಯಬಹುದಾದ ಎಲ್ಲವನ್ನೂ ಆನಂದಿಸುತ್ತಾ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ಮಾನವರ ಆರೋಗ್ಯದ ಬಗ್ಗೆ ಯಾವುದೇ ಸಮಸ್ಯೆ ಇದ್ದರೆ ಅಥವಾ ಕಾಳಜಿಗಳಿದ್ದರೆ, ಸಮೀಪದ ಆರೋಗ್ಯ ಕೇಂದ್ರಗಳನ್ನು ದಯವಿಟ್ಟು ಸಂಪರ್ಕಿಸಿ. ಸಂಗಮೇಶ ಎನ್ ಜವಾದಿ

“ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಯ ಅವಶ್ಯಕತೆ” ವಿಶೇಷಬರಹ ಸಂಗಮೇಶ್ ಜವಾದಿ Read Post »

ಇತರೆ

“ಕರುಣೆ ತೋರಿಸಿ” ವಿಶೇಷ ಲೇಖನ ವಾಣಿ ಶಿವಕುಮಾರ್

ಜೀವ ಸಂಗಾತಿ ವಾಣಿ ಶಿವಕುಮಾರ್ “ಕರುಣೆ ತೋರಿಸಿ” ಮೂಕ ಪ್ರಾಣಿಗಳೆಂದ ಮಾತ್ರಕ್ಕೆ ದಯವಿಟ್ಟು ನಮ್ಮನ್ನು ಕೀಳಾಗಿ ಕಾಣಬೇಡಿ ನಾವೂ ಸಹ ನಿಮ್ಮಂತೆಯೇ ಉಸಿರಾಡುತ್ತೇವೆ. ನಾಯಿ,ಹಸು,ಕುರಿ, ಕೋಳಿ,ಮೇಕೆ ಹೆಸರುಗಳಿಂದ ನಮ್ಮನ್ನು ಗುರುತಿಸುತ್ತೀರಾ.  ಬೇಸಿಗೆಕಾಲ ಶುರುವಾಗಿದೆ ನಿಮಗೆ ಹೇಗೆ ನೀರಿನ ಅಗತ್ಯವಿದೆಯೋ, ಅದೇ ರೀತಿ ನಮಗೂ ಸಹ ಅಗತ್ಯವಿರುತ್ತದೆ. ದಯವಿಟ್ಟು ನಿಮ್ಮ ನಿಮ್ಮ ಮನೆಯ ಮುಂದೆ ಒಂದು ಬಟ್ಟಲಿನಲ್ಲಿ ಅಥವಾ ಅಗಲವಾದ ಪಾತ್ರೆಯಲ್ಲಿ ನಮಗಾಗಿಯೇ ಅಂತ ಕುಡಿಯಲು ನೀರಿನ ವ್ಯವಸ್ಥೆಯನ್ನು ಮಾಡಿ ಕರುಣೆಯನ್ನು ತೋರಿಸಿ.  ಗೇಟಿನ ಮುಂದೆ ಬಂದರೆ ಸಾಕು ನಮ್ಮನ್ನು ಓಡಿಸುತ್ತೀರಾ ಯಾವ ಕಾರಣಕ್ಕಾಗಿ ಬಂದಿದೀವಿ ಅಂತ ಸ್ವಲ್ಪ ಮಟ್ಟಿಗಾದರೂ ಯೋಚಿಸಿ ಕೆಲವರ ಮನೆಯ ಮುಂದೆ ನಮಗಾಗಿ ಅಂತ ಸದಾ ನೀರಿನ ವ್ಯವಸ್ಥೆಯನ್ನು ಮಾಡಿರುತ್ತಾರೆ ಇನ್ನೂ ಕೆಲವರು ನೀರನ್ನು ಕುಡಿಯಲು ಕೊಡುವ ಬದಲು ಆ ನೀರನ್ನೇ ನಮ್ಮ ಮೇಲೆ ಎರಚಿ ನಮ್ಮನ್ನು ಓಡಿಸುತ್ತಾರೆ.  ನಿಮ್ಮಂತೆಯೇ ನಾವೂ ಸಹ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದರೆ ಬಿರು ಬಿಸಿಲಿನಲ್ಲಿ ಬೀದಿಬೀದಿ ಅಲೆದಾಡುವ ಪ್ರಸಂಗ ಬರುತ್ತಿರಲಿಲ್ಲ. ಮನೆಯಲ್ಲಿ ಹಳಸಿದ ಅನ್ನ,ಒಣಗಿರುವ ರೊಟ್ಟಿ, ಕೊಳೆತ ಹಣ್ಣು ತರಕಾರಿಗಳನ್ನು ಒಂದು ಕವರಿನಲ್ಲಿ ಹಾಕಿ ಬೀದಿ ಬದಿಯಲ್ಲಿ ಎಸೆಯುತ್ತೀರ  ಹಸಿವೆಯನ್ನು ತಾಳಲಾರದೆ ಕವರಿನಲ್ಲಿರುವ ಆಹಾರವನ್ನು ತಿನ್ನುವುದರ ಜೊತೆಗೆ ಹಾನಿಕಾರಕ ಪ್ಲಾಸ್ಟಿಕ್ ನಮ್ಮ ದೇಹವನ್ನು ಸೇರಿ ಗಂಭೀರ ಖಾಯಿಲೆಯಿಂದ ಬಳಲಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದೇವೆ.  ಪ್ಲಾಸ್ಟಿಕ್ ಕವರಿನಲ್ಲಿ ಆಹಾರ ಪದಾರ್ಥಗಳನ್ನು ಗಂಟು ಕಟ್ಟಿ ಎಸೆಯುವ ಬದಲು ಯಾವುದಾದರೊಂದು ಕಲ್ಲಿನ ಮೇಲೆ ಅಥವಾ ಒಂದು ಎಲೆಯ ಮೇಲೆ ನಮಗಾಗಿ ಅಂತ ಮೀಸಲಿಟ್ಟಿರುವ ಆಹಾರವನ್ನು ಇಟ್ಟರೆ ಪ್ಲಾಸ್ಟಿಕ್ ಬಳಕೆ ಕಮ್ಮಿಯಾಗುವುದರ ಜೊತೆಗೆ ನಮ್ಮ ಜೀವವೂ ಸಹ ಉಳಿಯುತ್ತದೆ. ಬಾನಾಡಿಯಲ್ಲಿ ಸ್ವಚ್ಛಂದವಾಗಿ ಹಾರಾಡುವ ನಮ್ಮ ಗೆಳೆಯ ಗೆಳತಿಯರಿಗಾಗಿ ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ಅವರಿಗೂ ಸಹ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ. ದಯವಿಟ್ಟು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ ನಮ್ಮನ್ನು ಉಳಿಸಿ. ವಾಣಿ ಶಿವಕುಮಾರ್

“ಕರುಣೆ ತೋರಿಸಿ” ವಿಶೇಷ ಲೇಖನ ವಾಣಿ ಶಿವಕುಮಾರ್ Read Post »

ಇತರೆ, ಜೀವನ

“ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” ವಿಶೇಷ ಲೇಖನ ಡಾ. ಸುಮತಿ ಪಿ.

ಜೀವನಸಂಗಾತಿ ಡಾ. ಸುಮತಿ ಪಿ. “ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” “ಅತಿಯಾಸೆ ಗತಿ ಕೇಡು”ಎಂಬ ಮಾತಿನಂತೆ ಮನುಷ್ಯನಿಗೆ ಅತಿಯಾದ ಆಸೆಗಳಿದ್ದರೆ, ಒಂದು ಆಸೆ ಅಥವಾ ಬಯಕೆಯ ಈಡೇರಿಕೆಯ ನಂತರ ಇನ್ನೊಂದು ಆಸೆ ಗರಿಗೆದರಿ ಎದ್ದು ನಿಲ್ಲುತ್ತದೆ. ಅಂತಹ ಸಂದರ್ಭದಲ್ಲಿ ಮನುಷ್ಯನಿಗೆ ಸಂತೃಪ್ತಿ ಎನ್ನುವುದು ಸಿಗದೇ ಇರಬಹುದು. ಅದಕ್ಕೆ ಮನುಷ್ಯರಾದ ನಾವು ಸಂತಸದಿಂದ  ಜೀವನ ನಡೆಸಬೇಕಾದರೆ ಇದ್ದದ್ದರಲ್ಲಿ ತೃಪ್ತಿಯನ್ನು ಅನುಭವಿಸುವ ಗುಣ ನಮ್ಮದಾಗಬೇಕು. ಸಂಪತ್ತು ಎಂದರೆ ಶ್ರೇಷ್ಠವಾದದ್ದು,ಮೌಲ್ಯಯುತವಾದದ್ದು ಎಂದರ್ಥ. ಯಾವುದರಿಂದ ನಮಗೆ ಒಳಿತಾಗುತ್ತದೆಯೋ ಅದುವೇ ಸಂಪತ್ತು ಎನಿಸಿಕೊಳ್ಳುತ್ತದೆ.ಸಂತೃಪ್ತಿ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿನ ಪರಿಸ್ಥಿತಿಯಿಂದ ತೃಪ್ತನಾಗುವ ಸ್ಥಿತಿಯಾಗಿದೆ, ಸಂತೃಪ್ತಿ ಇದ್ದವರು ಜೀವನದಲ್ಲಿ ಆಂತರಿಕ ಶಾಂತಿಯನ್ನು ಹೊಂದಿರುತ್ತಾರೆ .ಆಗ ಅವರಲ್ಲಿ ಸಂತೃಪ್ತಿಯೇ ದೊಡ್ಡ ಸಂಪತ್ತಾಗಿ ವಿಜೃಂಭಿಸುತ್ತದೆ.ಸಂತೃಪ್ತಿ ಎಂದರೆ ಇದ್ದಹಾಗೆ ಜೀವನವನ್ನು ಸಾಗಿಸುವುದು ಎಂಬರ್ಥ ಬಂದಿದೆ. ಆದರೆ ನಿಜಾರ್ಥದಲ್ಲಿ ಸಂತೃಪ್ತಿಯೆಂದರೆ, ಸರಿಯಾದುದರಲ್ಲಿ, ಉದಾತ್ತವಾದುದರಲ್ಲಿ ನಾವು ನೆಲೆಗೊಳ್ಳುವುದಾಗಿದೆ.. ಸಂತೃಪ್ತಿಯು ಬಯಕೆಗಳ ಬಿರುಗಾಳಿಯಿಂದ ನಮ್ಮನ್ನು ರಕ್ಷಿಸುತ್ತದೆ. ನಮ್ಮದೇ ಜೀವನವನ್ನು ತೆಗೆದುಕೊಂಡರೆ, ನಾವು ಅನುಭವಿಸುವ ಸಂತೃಪ್ತಿಯೆಂಬುವುದು ನಮ್ಮ ಬದುಕಿನ ಅತ್ಯಂತ ಸಂತೋಷದ ಕ್ಷಣಗಳಾಗಿ , ಮನಸ್ಸು ಶಾಂತಿ ಸಮಾಧಾನದಿಂದ ಇರುತ್ತದೆ. ಕೆಲವರನ್ನು ನಾವು ಸ್ಥಿತಪ್ರಜ್ಞರು ಎನ್ನುತ್ತೇವೆ. ಸ್ಥಿತಪಜ್ಞರು ಶಾಂತವಾಗಿರುತ್ತಾರೆ. ಸಂತೃಪ್ತಿಯನ್ನು ಹೊಂದುವವರಾಗಿರುತ್ತಾರೆ. ಸಾಗರದ ನೀರನ್ನು ಕಲಕಲು ಪ್ರಯತ್ನಿಸಿದರೂ, ಸಾಗರ ತನ್ನದೇ ಲಯದಲ್ಲಿರುತ್ತದೆ. ಹಾಗೆಯೇ ಸ್ಥಿತಪ್ರಜ್ಞೆಯ  ವ್ಯಕ್ತಿಯೂ  ಸಂತೃಪ್ತ  ಮನಸ್ಸಿನಿಂದ ಧನಾತ್ಮಕ ಭಾವನೆ ಹೊಂದಿರುತ್ತಾನೆ. ಪ್ರಾಣಿಗಳಲ್ಲಿ ಮನುಷ್ಯ ಜನ್ಮ ಅತೀ ಶ್ರೇಷ್ಠವಾದದ್ದು.ಮನುಷ್ಯ ಜನ್ಮದಲ್ಲಿ ಬದುಕು ನಡೆಸುವಾಗ ಸುಖ ಕಾಣಬೇಕಾದರೆ ಸಂತೃಪ್ತಿ ಇರಬೇಕು.ಸಂತೃಪ್ತಿ ಎಂಬುದು ಮನುಷ್ಯನ ಜೀವನದಲ್ಲಿ ಮೂಡಬೇಕಾದ ತೃಪ್ತ ಭಾವನೆ. ‘ಪಾಲಿಗೆ ಬಂದದ್ದು ಪಂಚಾಮೃತ’ ಎಂಬಂತೆ ತನಗೆ ಸಿಕ್ಕಿದಷ್ಟು ಪಡೆದು, ತೃಪ್ತಿಯಿಂದ ಜೀವನ ಸಾಗಿಸುವುದು. ಎಲ್ಲಾ ಜನರು ಒಂದೇ ರೀತಿ ಇರುವುದಿಲ್ಲ. ಬೇರೆ ಬೇರೆ ಜನರ ಜೀವನ ರೀತಿ ಬೇರೆ ಬೇರೆ ಇರುತ್ತದೆ .ಆದುದರಿಂದ ತನ್ನನ್ನು ಇನ್ನೊಬ್ಬರೊಂದಿಗೆ ಹೋಲಿಸಿ ಕೀಳರಿಮೆಯಿಂದ ಶಾಂತಿ ನೆಮ್ಮದಿಯನ್ನು ಕಳೆದುಕೊಂಡರೆ ಬದುಕಲ್ಲಿ ಸಂತೃಪ್ತಿಯನ್ನು ಕಾಣಲು ಸಾಧ್ಯವಾಗದು. ಮನುಷ್ಯರು ಎಂದ ಮೇಲೆ ಒಬ್ಬರ ತರಹ ಇನ್ನೊಬ್ಬರು ಇರುವುದಿಲ್ಲ. ಕೆಲವರು ಯಾವಾಗಲೂ ಸಂತೋಷವಾಗಿರುತ್ತಾರೆ. ಇನ್ನು ಕೆಲವರು ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತಾರೆ. ಮತ್ತು ಕೆಲವರು ಹಿಂದೆ ನಡೆದ ಯಾವುದೋ ಕಹಿ ಘಟನೆಯನ್ನು ಮೆಲುಕು ಹಾಕುತ್ತಾ ಕೊರಗುತ್ತಿರುತ್ತಾರೆ. ಆದರೆ ಇರುವಷ್ಟು ದಿನ ನೆಮ್ಮದಿಯಾಗಿ ಬದುಕಬೇಕು ಎಂದರೆ  ಬದುಕಿನಲ್ಲೇ ಸಂತೋಷವನ್ನು ಕಾಣಬೇಕು. ಜೀವನದಲ್ಲಿ ಸಂತೋಷಕ್ಕೆ ಸಂತೃಪ್ತಿಯೇ ಮುಖ್ಯ ಎಂದು ನಾವು ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿಯು ಎಷ್ಟೇ ಸಂಪತ್ತನ್ನು ಹೊಂದಿದ್ದರೂ, ಅವನು ತೃಪ್ತನಾಗದ ಹೊರತು, ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ.ಮನುಷ್ಯ ಜೀವನದಲ್ಲಿ ಸಂತೃಪ್ತಿಯನ್ನು ಕಾಣಬೇಕಾದರೆ ತನ್ನ ಆಸೆಗಳಿಗೆ ಕಡಿವಾಳ ಹಾಕಲೇಬೇಕು “ಆಸೆಯೇ ದುಃಖಕ್ಕೆ ಮೂಲ”ವೆಂದು ಗೌತಮ ಬುದ್ಧ ತಿಳಿಸಿದಂತೆ,ಅತಿ ಆಸೆಯಿಂದ ಮಾನವ ಇತರರನ್ನು ನೋಡಿ, ತಾನು ಅವರಂತೆ ಆಗಬೇಕು ಎಂದು ಏನೇನೋ  ಮಾಡಲು ಸಾಗಿ, ಇರುವ ಸುಖ, ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಪ್ರತಿಯೊಬ್ಬನೂ  ಬೇರೆಯವರ ಸುಖವನ್ನೇ ಅಳೆಯುವುದು ಜಾಸ್ತಿ.ಸ್ವಾರ್ಥ ಮನೋಭಾವದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬದುಕುವ ಕನಸಲ್ಲಿ, ಇರುವ ಸುಖವನ್ನು ನಿರ್ಲಕ್ಷಿಸಿ, ಅತೃಪ್ತಿಯ ಬಾಳು ಸಾಗಿಸುವುದಕ್ಕಿಂತ ನಮಗಿಂತಲೂ ಕಷ್ಟದಲ್ಲಿರುವವರನ್ನು ಕಂಡು “ನಾವೇ ಅವರಿಗಿಂತ ಸುಖಿಗಳು “ಎನ್ನುವ ಭಾವನೆ ತಾಳುವುದೇ ಸಂತೃಪ್ತಿ.ಸಂತೃಪ್ತಿಯೆ ಬದುಕಿನ ಸಂಪತ್ತು. ಬದುಕಿನಲ್ಲಿ  ಸಂತೃಪ್ತಿ ಇದ್ದಾಗ ,ಸಕಾರಾತ್ಮಕ ದೃಷ್ಟಿಕೋನದಿಂದ ಶಾಂತಿ, ಸಹನೆ ,ನೆಮ್ಮದಿ, ತಾಳ್ಮೆ ಮುಂತಾದಂತಹ ಗುಣಗಳು ಬೆಳೆದು ಬದುಕಿನ ಸಂಪತ್ತಾಗಿ ವಿಜೃಂಭಿಸುತ್ತದೆ ಯಮರಾಜ ಯುಧಿಷ್ಠಿರನಿಗೆ ಅದ್ಭುತವಾದ ಪ್ರಶ್ನೆಗಳನ್ನು ಕೇಳಿದಂತಹ ಸಂದರ್ಭದಲ್ಲಿ ರಾಜನು ಅವುಗಳಿಗೆ ಸೂಕ್ತವಾದ ಉತ್ತರವನ್ನು ನೀಡುತ್ತಾನೆ ಎಂಬುವುದನ್ನು ನಾವು ಓದಿದ್ದೇವೆ.ಅದೇ ಅವನು ಕೇಳಿದ ಪ್ರಶ್ನೆಗಳಲ್ಲೊಂದು“ಶ್ರೇಷ್ಠ ಸಂತೋಷ ಯಾವುದು?”. ಯುಧಿಷ್ಠಿರ  ಅದಕ್ಕೆ ಕೊಟ್ಟ ಶ್ರೇಷ್ಠವಾದ ಉತ್ತರ “ತೃಪ್ತಿಯಿಂದ ಪಡೆದ ಸಂತೋಷವೇ ಶ್ರೇಷ್ಠ ಸಂತೋಷ”. ಆದ್ದರಿಂದ ತೃಪ್ತಿಯು ಯಾವುದೇ ಸಮಯದಲ್ಲಿ ಹೊಂದಬಹುದಾದ ಶ್ರೇಷ್ಠ ಸಂಪತ್ತು. ಒಳ್ಳೆಯ ಗುಣವನ್ನು ಅಭಿವೃದ್ಧಿಪಡಿಸುವ ಮೂಲಕ,ಉತ್ಸಾಹ ಮತ್ತು ಅಜ್ಞಾನದ ಗುಣಗಳನ್ನು ನಿಗ್ರಹಿಸುವ ಮೂಲಕ  ತೃಪ್ತರಾಗಿರುತ್ತೇವೆ.ಸಂತೃಪ್ತ ಜೀವನವು ಯಶಸ್ವಿ ಜೀವನವೆಂದರೆ ತಪ್ಪಾಗಲಾರದು ಜೀವನದ ಯಶಸ್ಸಿನ ಅಂಶವೆಂದರೆ ಸಂತೃಪ್ತಿ ಎಂದು ಹೇಳಬಹುದು. ನಮಗೆ ಜೀವನದಲ್ಲಿ ಸಂತೃಪ್ತಿ ಇಲ್ಲದಿದ್ದರೆ, ನಮಗೆ ಯಾವುದೇ ಗೆಲುವಿನ ಸಂತಸ ಸಿಗಲಾರದು. ನಮ್ಮಲ್ಲಿ ಹಣವಿರಬಹುದು, ಆಸ್ತಿಗಳಿರಬಹುದು,ಆದರೆ ಆಂತರಿಕ ತೃಪ್ತಿ ಇಲ್ಲ ಎಂದಾದಲ್ಲಿ. ಅದು ಸಂತಸದ ಯಶಸ್ವಿ ಜೀವನವಲ್ಲ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಕವಿಗಳು ಹೇಳುತ್ತಾರೆ. ಮನುಷ್ಯನಿಗೆ ಇಂದು ಎಷ್ಟೇ ಸುಖ. ಸಮೃದ್ಧಿ, ಸಂಪತ್ತು ಇದ್ದರೂ ಬದುಕಿನಲ್ಲಿ ಸಂತೃಪ್ತಿ ಇಲ್ಲವಾಗಿದೆ. ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ನಮಗೆ ಸಂತೃಪ್ತಿಯೇ ಬದುಕಿನ ದೊಡ್ಡ ಸಂಪತ್ತು ಎಂಬುದು ಒಪ್ಪಿಕೊಂಡು,ಅದನ್ನು ಪಡೆಯುವುದು ಕಷ್ಟವಾದರೂ  ಇಷ್ಟಪಟ್ಟು ಜೀವನದಲ್ಲಿ ಸಂತೃಪ್ತಿಯನ್ನು ಗಳಿಸಬೇಕಾಗುತ್ತದೆ.ಸಂತೃಪ್ತಿಯಿಂದಲೇ ನಾವು ಜೀವನದಲ್ಲಿ ಎದುರಿಸಬೇಕಾದ ಅನೇಕ ಸಮಸ್ಯೆಗಳಿಗೆ ಮುಕ್ತಿಯನ್ನು ಹಾಡಬಹುದು, ಸಂತೃಪ್ತಿ ಇದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು. ಆದುದರಿಂದ ಸಂತೃಪ್ತಿಯೇ ದೊಡ್ಡ ಸಂಪತ್ತು. ಸಂತೃಪ್ತಿ ಅನ್ನೋದು ಬದುಕಿನಲ್ಲಿ ಇರಬೇಕಾದ ಮೂಲಭೂತವಾದ ಅಂಶವಾಗಿದೆ. ಸಂತೃಪ್ತಿಯೇ ಯಶಸ್ವಿ ಬದುಕಿನ ಮೂಲ ಆಧಾರಸ್ತಂಭವೆಂದೇ ಹೇಳಬಹುದು. ಈ ಭೂಮಿಯ ಮೇಲಿನ ಬದುಕೆಂಬ ನಾಲ್ಕು ದಿನದ ಬಾಳು ಅದು ಗೋಳಾಗದೆ ಇರಬೇಕಾದರೆ ಬದುಕಿನಲ್ಲಿ ಸಂತೃಪ್ತಿಯನ್ನು ಕಾಣುವಂತಹ ಮನಸ್ಸು ನಮ್ಮದಾಗಬೇಕು. ಸಂತೃಪ್ತಿಯನ್ನೇ ನಮ್ಮ ಬದುಕಿನ ದೊಡ್ಡ ಸಂಪತ್ತನ್ನಾಗಿಸಬೇಕು. ಬದುಕಿನ ದಿನಗಳನ್ನು ಚಿಂತೆ, ದುಃಖ, ನಿರಾಸೆಯಿಂದ ಅತೃಪ್ತರಾಗಿ ಕಳೆಯದೆ ಶಾಂತಿ ಸಮಾಧಾನದಿಂದತೃಪ್ತ ಜೀವನ ನಡೆಸುವುದು ನಮ್ಮೆಲ್ಲರ ಕೈಯಲ್ಲಿದೆ ಅಲ್ಲವೇ? ಡಾ.ಸುಮತಿ ಪಿ

“ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” ವಿಶೇಷ ಲೇಖನ ಡಾ. ಸುಮತಿ ಪಿ. Read Post »

You cannot copy content of this page

Scroll to Top