ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ನಿಮ್ಮೊಂದಿಗೆ

ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು:(ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ) ಡಾ. ಯಲ್ಲಮ್ಮ ಕೆ

ಸಂಶೋಧನಾ ಸಂಗಾತಿ ಡಾ.ಯಲ್ಲಮ್ಮ ಕೆ. ಡಾ. ಯಲ್ಲಮ್ಮ ಕೆ ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು: [ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ] ಒಂದಾನೊಂದು ಕಾಲದಲ್ಲಿ.., ಒಂದು ಊರಲ್ಲಿ.., ಬಹಳ ಹಿಂದೆ, ದೂರದ ಒಂದು ಹಳ್ಳಿಯಲ್ಲಿ.., ಹಿಂದೆ ಕಾಲದಲ್ಲಿ ಒಬ್ಬ ರಾಜನಿದ್ದನಂತೆ.., ನಮ್ಮ ಅಜ್ಜ-ಅಜ್ಜಿ ಹೇಳ್ತಿದ್ದ ಕಥೆಯಿದು.., ಪುರಾತನ ಕಾಲದಲ್ಲಿ.., ತ್ರೇತಾಯುಗದಲ್ಲಿ.., ದ್ವಾಪರ ಯುಗದಲ್ಲಿ.., ಈ ಕಲಿಯುಗದ ಆರಂಭದಲ್ಲಿ.., ವೇದ ಪುರಾಣಗಳಲ್ಲಿ ಹೇಳಿದಂತೆ.., ಮಹರ್ಷಿಗಳು ವರ್ಣಿಸಿರುವಂತೆ.., ನಮ್ಮ ಜನಪದ ಅಥವಾ ಪೌರಾಣಿಕ ಕಥೆಗಳು ಆರಂಭಗೊಳ್ಳುವುದೇ ಹೀಗೆ! ಕೇಳುಗಳ [ಶ್ರೋತೃಗಳ] ಗಮನ ಸೆಳೆಯಲು ಕಾಲ ಮತ್ತು ಸ್ಥಳವನ್ನು ಅಸ್ಷಷ್ಟವಾಗಿಟ್ಟು ಕಲ್ಪನೆಗೆ ಅವಕಾಶ ಕೊಡುವಂತೆ; ಪುರಾತನ ಕಾಲದಲ್ಲಿ ಧರ್ಮವೇ ರಾಜ್ಯದ ಆಧಾರವಾಗಿದ್ದ ಯುಗದಲ್ಲಿ, ಒಂದು ಸಮೃದ್ಧ ರಾಜ್ಯವನ್ನು ಆಳುತ್ತಿದ್ದ ಧರ್ಮನಿಷ್ಠ ರಾಜನೊಬ್ಬನಿದ್ದನು.., ಆ ರಾಜನಿಗೆ ಎಲ್ಲವೂ ಇತ್ತು ಆದರೆ.., ಆದರೆ.., ಒಂದು ಚಿಂತೆ ಮಾತ್ರ ಅವನನ್ನು ಬಿಡದೆ ದಹಿಸುತ್ತಿತ್ತು.., ಎನ್ನುತ್ತಿರುವಾಗಲೇ ಇಡೀ ಕಥಾನಕವನ್ನು ನೀವು ಊಹಿಸಿಬಿಡುತ್ತೀರಿ.., ಚಿತ್ರದ ಮೊದಲರ್ಧವನ್ನು ನೋಡುತ್ತಿರುವಾಗಲೇ ನೀವು ಕ್ಲೈಮ್ಯಾಕ್ಸ್ ಅನ್ನು ಹೇಳಿಬಿಡುವಂತೆ.., ಕಥೆಗಳು ಆಗಲ್ಲ ಇಲ್ಲಿನ ಅನಿರೀಕ್ಷಿತ ತಿರುವುಗಳು ಓದುಗರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿಬಿಡುತ್ತವೆ. *_ಹಿನ್ನಲೆ:_*ಜೈನಧರ್ಮವು ಭಾರತದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ಇದರ ಹುಟ್ಟಿನ ಹಿನ್ನಲೆ ಕಿ.ಪೂ.ಆರನೇ ಶತಮಾನಕ್ಕೆ ಸೇರಿದೆ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಜೈನ ಪರಂಪರೆಯ ಪ್ರಕಾರ ಈ ಧರ್ಮವು ಅನಾದಿಕಾಲದಿಂದಲೂ ಅಸ್ತಿತ್ವದಲ್ಲಿದ್ದು ಇಪ್ಪತ್ನಾಲ್ಕು ತೀರ್ಥಂತಕರರ ಮೂಲಕ ಬೆಳೆದುಬಂದಿದ್ದು, ಕೊನೆಯ ತೀರ್ಥಂಕರರಾದ ವರ್ಧಮಾನ ಮಹಾವೀರರು ಜೈನಧರ್ಮಕ್ಕೆ ಸಂಘಟಿತ ರೂಪುನೀಡಿ ಪ್ರಚಾರ ಮತ್ತು ಪ್ರಸಾರ ಮಾಡಿದನೆಂದು ತಿಳಿಯಲಾಗಿದೆ. ವೈದಿಕ ಕಾಲಘಟ್ಟದಲ್ಲಿ ಯಜ್ಷ-ಯಾಗಗಳ ಅಧಿಕ್ಯ, ಪಶುಬಲಿ, ಬ್ರಾಹ್ಮಣರ ಪ್ರಾಬಲ್ಯ ಹಾಗೂ ವರ್ಣವ್ಯವಸ್ಥೆಯ ಕಾಠಿಣ್ಯತೆ ಸಮಾಜದಲ್ಲಿ ಅಸಮಾಧಾನವನ್ನುಂಟು ಮಾಡಿತ್ತು. ಇವುಗಳಿಗೆ ಪ್ರತಿರೋಧದ ಹಿನ್ನಲೆಯಲ್ಲಿ ಬೌದ್ಧ ಮತ್ತು ಜೈನಧರ್ಮಗಳು ಉದಯವಾದವು ಎನ್ನಬಹುದು.ಜೈನಧರ್ಮವು ಸರಳ ಆಚರಣೆ, ನೀತಿಪಾಠಗಳ ಮೂಲಕ ಜೀವನ ಮತ್ತು ಆತ್ಮಶುದ್ಧಿಗೆ ಮಹತ್ವ ನೀಡಿತು. ಸಾಮಾಜಿಕವಾಗಿ ನಗರೀಕರಣ, ವ್ಯಾಪಾರ ಮತ್ತು ವೈಶ್ಯವರ್ಗದ ವೃದ್ಧಿಯೂ ಜೈನಧರ್ಮದ ಬೆಳವಣಿಗೆಗೆ ಕಾರಣವಾಯಿತು. ಅಹಿಂಸೆ, ಅಪರಿಗ್ರಹ, ಅನೇಕಾಂತವಾದ ಹಾಗೂ ತ್ರಿರತ್ನಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ಯ್ರ  ಜೈನಧರ್ಮದ ಮೂಲ ತತ್ತ್ವಗಳಾಗಿವೆ. ಬೌದ್ಧ ಮತ್ತು ಜೈನಧರ್ಮಗಳೆರೆಡು ಶ್ರಮಣ ಪರಂಪರೆಯಿಂದ ಉದ್ಭಭವಿಸಿದ್ದು, ತಪಸ್ಸು, ಸಂಯಮ ಮತ್ತು ವೈರಾಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದವು. ಜೈನಧರ್ಮಕ್ಕೆ ಮಗಧ ಪ್ರದೇಶದ ರಾಜಾಶ್ರಯ ಮತ್ತು ವ್ಯಾಪಾರಿಗಳ ಬೆಂಬಲದಿಂದ ಇದು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಹರಡಿತೆನ್ನಬಹುದು.ಈ ರೀತಿಯಾಗಿ ವೈದಿಕ ಧರ್ಮದ ಜಟಿಲ ಆಚರಣೆಗಳಿಗೆ ವಿರುದ್ಧವಾಗಿ ಮಾನವೀಯತೆ, ಅಹಿಂಸೆ ಮತ್ತು ಆತ್ಮಸಾಧನೆಯನ್ನು ಕೇಂದ್ರವಾಗಿಟ್ಟುಕೊಂಡ ಒಂದು ಧರ್ಮವಾಗಿ ಬೆಳೆದು ಬಂದಿತು.ಕೊಲ್ಲದ ಧರ್ಮಕ್ಕೆ ಜಿನಾಗಮವೇ ತೌರುಮನೆಯಾಗಿದೆ:ಕ್ಷಮೆಯೇ ಧರ್ಮ, ಧರ್ಮಕ್ಕೆ ದಯವೇ ಮೂಲ, ದಯವೇ ಅಹಿಂಸೆ, ಅಹಿಂಸೆಯೇ ಶಾಂತಿ, ಶಾಂತಿಯೇ ಸುಖ, ಸುಖದ ಅನುಭವವೇ ಜ್ಞಾನ, ಜ್ಞಾನಿಯೇ ಆತ್ಮ. ಆದುದರಿಂದ ಆತ್ಮನಿರೀಕ್ಷಣೆಗೆ ಮೊದಲು ಕ್ಷಮಾಗುಣವನ್ನು ಹೊಂದಬೇಕು. ಅಧ್ಯಾತ್ಮರಸಾನುಭವಿಯಾಗಲು ಕ್ಷಮಾಗುಣಧಾರಿಯೇ ಆಗಬೇಕು. ಕ್ಷಮಾ ವೀರಸ್ಯ ಭೂಷಣಂ! *ರತ್ನಾಕರ ಕವಿ ಹೇಳಿರುವಂತೆ* : ಕ್ಷಮೆ ಮಾಳ್ಪಂತೆ ವಿರೋಧಮೇಂ ಕೊಡುವುದೇ ಸಂತೋಷಮಂ? ಜೀವನದಲ್ಲಿ ಸಂತೋಷವನ್ನು ಕಾಣಲು ಕ್ಷಮೆಯನ್ನು ತಾಳಬೇಕು ಎಂಬಿತ್ಯಾದಿ ಜೈನಧರ್ಮದ ಉದಾತ್ತ ತ್ತ್ವ ಧ್ಯೇಯಗಳನ್ನು ಪಾಲಿಸಿದರೆ ಪತಿತ ಪಾವನನಾಗಬಲ್ಲ, ಜೀವ ಜೀವನ್ಮುಕ್ತನಾಗಬಲ್ಲ, ನರ ನಾರಾಯಣನಾಗಬಲ್ಲ, ಬುದ್ಧನು ಸಿದ್ಧನು ಸಿದ್ಧನಾಗಬಲ್ಲ ಎಂಬ ವಿಚಾರಗಳಿಗೆ ಮಾರುಹೋಗಿ ಜನ ತಲೆಬಾಗಿ ಜೈನಧರ್ಮವನ್ನು ಶಿರೋಧಾರಣೆ ಮಾಡಿ ಅನುಸರಿಸಲಾರಂಭಿಸಿದರು.ಕರ್ನಾಟಕದಿ ಶ್ರವಣಬೆಳಗೊಳ, ಪುಲಿಗೆರೆ, ಕೊಪ್ಪಳ, ಬ್ರಹ್ಮಪುರಿ, ಬಳ್ಳಿಗಾವೆ, ತಾಲಗುಂದ, ಬನವಾಸಿ, ಐಹೊಳೆ, ಹುಂಚ, ಕಾರ್ಕಳ, ಮೂಡಬಿದ್ರೆ, ಗೇರುಸೊಪ್ಪೆ ಮುಂತಾದ ಕ್ಷೇತ್ರಗಳಲ್ಲಿ ಶಿಕ್ಷಣ ಮತ್ತು ವಿದ್ಯಾಕೇಂದ್ರಗಳಿದ್ದವು. ಕನ್ನಡದ ಆದಿಗ್ರಂಥ ಕವಿರಾಜಮಾರ್ಗಕಾರ, ಆದಿಕವಿ ಪಂಪ, ಪೊನ್ನ, ರನ್ನ, ಜನ್ನ, ಚಾವುಂಡರಾಯ, ಅಗ್ಗಳ, ಸಾಳ್ವ, ನಯಸೇನ, ನೇಮಿಚಂದ್ರ, ರತ್ನಾಕರ, ಆಂಡಯ್ಯ ಪ್ರಮುಖ ಕವಿಗಳು ಹಾಗೂ ಸಮಂತಭದ್ರರು, ಭಟ್ಟಾಕಲಂಕರು, ಪೂಜ್ಯಪಾದರು, ಸಿಂಹನಂದಿಗಳೇ ಮುಂತಾದ ಪ್ರಮುಖ ಆಚರ‍್ಯರುಗಳು ಬರೆದಿರುವ ಮಹಾಕಾವ್ಯಗಳು, ಪುರಾಣಗಳು, ಸಿದ್ಧಾಂತಗಳು ಅಷ್ಟಿಷ್ಟಲ್ಲ, ಹೀಗೆ ಕನ್ನಡ ಸರಸ್ವತಿಯನ್ನು ಜೈನರು ಅನೇಕ ಗ್ರಂಥಗಳಿಂದ ಅಲಂಕರಿಸಿದ್ದಾರೆ. ಧರ್ಮ ಪ್ರಸಾರದೊಂದಿಗೆ ಸಾಹಿತ್ಯ ಸೇವೆ ಗೈದವರಲ್ಲಿ ಜೈನಮಹಿಳೆಯರು ದಾನಚಿಂತಾಮಣಿಗಳೆನಿಸಿದ್ದಾರೆ. ಸಂಗೀತ, ನೃತ್ಯ ಪ್ರವೀಣರೆನಿಸಿ, ವೀರ ರಮಣಿಗಳೆನಿಸಿ, ಸ್ತ್ರೀ ಸಮುದಾಯಕ್ಕೆ ಆದರ್ಶಪ್ರಾಯರಾದ ಅತ್ತಿಮಬ್ಬೆ, ಮಲ್ಲಿಕಬ್ಬೆ, ಜಕ್ಕೆಯಬ್ಬೆ, ರಾಣೀ ಶಾಂತಲಾದೇವಿ ಮುಂತಾದವರು ಜೈನ ನಾರೀರತ್ನಗಳಾಗಿದ್ದಾರೆ..ಜೈನರೇ ಕನ್ನಡ ಭಾಷೆಯ ಆದಿಕವಿಗಳು, ಎಲ್ಲ ಪ್ರಾಚೀನ ಉತ್ತಮ ಕೃತಿಗಳು ಜೈನಕವಿಗಳದ್ದೆ ಆಗಿವೆ. ಕನ್ನಡ ಭಾಷೆಯ ಸೌಂಧರ‍್ಯವೂ, ಕಾಂತಿಯೂ ಹೆಚ್ಚಲು ಜೈನಕವಿಗಳೇ  ಕಾರಣ. ಪಂಪ, ರನ್ನ, ಪೊನ್ನರು ಕವಿಗಳಲ್ಲಿ ರತ್ನತ್ರಯರೇ ಆಗಿರುವರು. ಹದಿನಾಲ್ಕನೇ ಶತಮಾನದವರಗೆ ಕನ್ನಡ ಭಾಷೆಯ ಸಹಾಯಕ ಗ್ರಂಥಗಳಾದ ಛಂದಸ್ಸು, ಅಲಂಕಾರ, ವ್ಯಾಕರಣ, ಕೋಶ ಮೊದಲಾದ ಗ್ರಂಥಗಳು ಜೈನರಿಂದಲೇ ರಚಿತವಾದವು ಎಂದು ದಿ. ಆರ್. ನರಸಿಂಹಾಚರ‍್ಯರು ತಮ್ಮ ಕರ್ಣಾಟಕ ಕವಿಚರಿತೆಯಲ್ಲಿ ಬರೆದಿರುವರು; ಇದು ಜೈನರು ಕನ್ನಡ ಭಾಷೆಗೆ ನೀಡಿದ ಮಹತ್ತರ ಕೊಡುಗೆಯನ್ನು ಎತ್ತಿಹಿಡಿಯುತ್ತದೆ.ಕನ್ನಡ ಜೈನ ನೋಂಪಿ[ವ್ರತ]ಕಥೆಗಳು:ಜೈನಧರ್ಮದಲ್ಲಿ ಪರಿಪಾಲಿಸಲ್ಪಡುವ ನೋಂಪಿ[ವ್ರತ-ಉಪವಾಸ]ಗಳು ಮತ್ತು ಅವುಗಳಿಂದ ವ್ಯಕ್ತಿಗೆ ದೊರಕುವ ಆತ್ಮಶುದ್ಧಿ. ಸಂಯಮ ಹಾಗೂ ಕರ್ಮಕ್ಷಯದ ಫಲಗಳನ್ನು ವಿವರಿಸುವ ಧಾರ್ಮಿಕ-ನೈತಿಕ ಕಥಾನಕಗಳಾಗಿವೆ. ಈ ಕಥೆಗಳು ಜೈನಧರ್ಮದ ತಾತ್ವಿಕ ಅಂಶಗಳನ್ನು ಸರಳ ಕಥನರೂಪದಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಬಹುದು. ವಿಷಯ, ಪಾತ್ರ ಮತ್ತು ಉದ್ದೆಶಗಳ ಆಧಾರದ ಮೇಲೆ ನೋಂಪಿ ಕಥೆಗಳನ್ನು ಕೆಳಕಂಡ ವಿಧಗಳಲ್ಲಿ ವಿಂಗಡಿಸಬಹುದು:೧. ಪಾತ್ರಾಧಾರಿತ ವಿಂಗಡಣೆ: ಸ್ತ್ರೀ, ಪುರುಷ, ರಾಜ, ಯೋಧ, ವ್ಯಾಪಾರಿ, ಮಕ್ಕಳು ಮುಂತಾದ ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡ ಕಥೆಗಳು, ಇವುಗಳಲ್ಲಿ ಗೃಹಸ್ಥ ಜೀವನ ಮತ್ತು ಧರ್ಮಾಚರಣೆ ಪ್ರಮುಖವಾಗಿರುತ್ತದೆ.೨. ವಿಷಯಾಧಾರಿತ ವಿಂಗಡಣೆ: ಪಾಪದಿಂದ ಪಶ್ಚಾತ್ತಾಪಕ್ಕೆ ಹೋಗುವ, ದುಃಖದಿಂದ ಧರ್ಮದತ್ತ ಸಾಗುವ, ವೈರಾಗ್ಯ ಮತ್ತು ತ್ಯಾಗದ ಕಥೆಗಳು ಈ ವಿಭಾಗಕ್ಕೆ ಸೇರುತ್ತವೆ.೩. ಫಲಾಪೇಕ್ಷಾಧಾರಿತ ವಿಂಗಡಣೆ: ಐಹಿಕ ಫಲ[ಸಂತಾನ, ಆರೋಗ್ಯ, ಸಂಪತ್ತು] ಪಡೆಯುವ ಉದ್ದೇಶದ ಮತ್ತು ಆತ್ಮಶುದ್ಧಿ-ಮೋಕ್ಷದಂತಹ ಅಧ್ಯಾತ್ಮಿಕ ಫಲವನ್ನು ಗುರಿಯಾಗಿಟ್ಟುಕೊಂಡ ಕಥೆಗಳು. *೪. ಧರ್ಮತತ್ತ್ವಾಧಾರಿತ* *ವಿಂಗಡಣೆ:* ಅಹಿಂಸೆ, ಅಸ್ತೇಯ, ಬ್ರಹ್ಮರ‍್ಯೆ, ಅಪರಿಗ್ರಹ, ಕ್ಷಮೆ ಮುಂತಾದ ಜೈನತತ್ತ್ವಗಳನ್ನು ಬೋಧಿಸುವ ಕಥೆಗಳು.೫ *. ಸಾಹಿತ್ಯಿಕ ಸ್ವರೂಪದ ಆಧಾರಿತ* ವಿಂಗಡಣೆ: ಸರಳ ಜನಪದ ಶೈಲಿ, ಉಪದೇಶಾತ್ಮಕ, ಪುರಾಣಾಧಾರಿತ ಹಾಗೂ ರೂಪಕಾತ್ಮಕ ನೋಂಪಿಕಥೆಗಳು.೬. *ಗುರಿ ವಾಚಕರ ಆಧಾರಿತ* ವಿಂಗಡಣೆ: ಮಕ್ಕಳಿಗಾಗಿ, ಗೃಹಸ್ಥರಿಗಾಗಿ ಮತ್ತು ಸಾಧು-ಸಾಧ್ವಿಗಳಿಗೆ ಉದ್ದೇಶಿಸಿದ ಕಥೆಗಳು.ಈ ರೀತಿ ಜೈನನೋಂಪಿ ಕಥೆಗಳು ಧಾರ್ಮಿಕ ಆಚರಣೆಗೂ ಜೊತೆಗೆ ನೈತಿಕ ಜೀವನದ ಮಾರ್ಗದರ್ಶನ ನೀಡುವ ಕಾರಣದಿಂದ ವಿವಿಧ ವಿಧಗಳಲ್ಲಿ ವಿಂಗಡಿಸಬಹುದಾದ ಸಮೃದ್ಧ ಸಾಹಿತ್ಯ ಪರಂಪರೆಯಾಗಿದೆ ಎಂದು ಹೇಳಬಹುದು.ಕನ್ನಡ ಜೈನಸಾಹಿತ್ಯದಲ್ಲಿ ನೋಂಪಿಕಥೆಗಳು ತೀರ್ಥಂಕಕರರ ಜೀವನ, ಶ್ರಾವಕ-ಶ್ರಾವಿಕೆಯರ ತಪಸ್ಸು, ರಾಜರು ಮತ್ತು ಸಾಮಾನ್ಯ ಜನರು ನೋಂಪಿ ಪಾಲನೆಯ ಮೂಲಕ ಸತ್ಸಂಸ್ಕಾರಗಳಿಸಿದ ಘಟನೆಗಳನ್ನು ಒಳಗೊಂಡಿರುತ್ತವೆ. ವಿಶೇಷವಾಗಿ ಪರ್ಯುಷಣ [ಜೈನಧರ್ಮದ ಅತ್ಯಂತ ಪವಿತ್ರ ಹಾಗೂ ಮಹತ್ವದ ಧಾರ್ಮಿಕ ಆಚರಣೆಯಾಗಿದ್ದು, ಶ್ವೇತಾಂಬರರಲ್ಲಿ ಎಂಟುದಿನ, ದಿಗಂಬರರಲ್ಲಿ ಹತ್ತು ದಿನಗಳ ಕಾಲ – ಉಪವಾಸ, ಏಕಾಸನ, ನಿಯಮಿತ ಆಹಾರ ಆತ್ಮಪರಿಶೀಲನೆಯೊಂದಿಗೆ ಆತ್ಮಶುದ್ಧಿ, ಪಾಪಕ್ಷಮೆ ಯಾಚನೆ, ಸ್ವಯಂ ಸಂಯಮ ಸಾಧಿಸುವುದಾಗಿದೆ], ವರ್ಷೀತಪ [ಜೈನಧರ್ಮದ ಅತ್ಯಂತ ಕಠಿಣ ತಪಸ್ಸುಗಳಲ್ಲಿ ಒಂದಾಗಿದ್ದು, ಸುಮಾರು ಹದಿಮೂರು ತಿಂಗಳು, ಹದಿಮೂರು ದಿನಗಳ ಕಾಲ – ಒಂದು ದಿನ ಉಪವಾಸ ಅದರ ಮುಂದಿನ ದಿನ ಏಕಾಸನಗೈಯುತ್ತ ಕರ್ಮಕ್ಷಯ, ಇಂದ್ರಿಯ ನಿಗ್ರಹ ಹಾಗೂ ಆತ್ಮೋದ್ಧಾರ ಹೊದುವುದು ಮುಖ್ಯ ಉದ್ದೇಶವಾಗಿದೆ], ಏಕಾಸನ [ದಿನಕ್ಕ ಒಂದೇ ಸಮಯ, ಒಂದೇ ಸ್ಥಳದಿ ಆಸನ ಬದಲಿಸದೆ ಮಿತಆಹಾರ ಸೇವಿಸುವುದರೊಂದಿಗೆ ಮನಸ್ಸಿನ ಓಟಕ್ಕೆ ಅಥವಾ ಆಸೆಗೆ ಕಡಿವಾಣ ಹಾಕುವುದು, ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ], ಉಪವಾಸ[ಆಹಾರ ತ್ಯಾಗ: ಏಕೋಪವಾಸ– ಒಂದುದಿನ, ಅಠ್ಠಮ– ಮೂರುದಿನ, ಮಾಸಾಕ್ಷಣ ಮೂವತ್ತು ದಿನ ಬರೀ ನೀರು ಕುಡಿಯುತ್ತಾ.., ಅದೂ ಇಲ್ಲದೇ ನಡೆಸುವ ವ್ರತಾಚರಣೆಯಾಗಿದ್ದು, ದೇಹಕ್ಕಿಂತ ಆತ್ಮಕ್ಕೆ ಮಹತ್ತು ನೀಡುವುದು, ಕರ್ಮಬಂಧನ ಕಡಿಮೆಮಾಡಿಕೊಳ್ಳುವುದು ಇದರ ಮುಖ್ಯ ಉದ್ದೆಶವಾಗಿದೆ] ಈ  ಮೊದಲಾದ ನೋಂಪಿಗಳ ಕಥನಗಳು ಹೆಚ್ಚಾಗಿ ಕಂಡುಬರುತ್ತವೆ.ವೈದಿಕ – ಜೈನ ಪ್ರತಿರೋಧ:ಬಿಡಲಾರದ ನೋಂಪಿ[ವ್ರತ]ಗಳು– ಅಹಿಂಸಾತತ್ತ್ವಪರಿಪಾಲನೆಯಿಂದಲೇ ಮಾನವರಿಗೆ ಮುಕ್ತಿ:ಸೋಮಶರ್ಮಭಟ್ಟ ವೈದಿಕ ಕರ್ಮಗಳನ್ನು ತಪ್ಪದೆ ಆಚರಿಸುತ್ತಿದ್ದ ನಿಷ್ಠಧಾರ್ಮಿಕ ವ್ಯಕ್ತಿ. ಅವನಿಗೆ ಸದ್ಗುಣಸಂಪನ್ನೆಯಾದ ನಾಗಶ್ರೀ ಎಂಬ ಮಗಳಿದ್ದಳು. ಹೀಗೆ ಒಮ್ಮೆ ಆ ಊರಿಗೆ ಸರ‍್ಯಮಿತ್ರಾಚರ‍್ಯರೆಂಬ ಜೈನಮುನಿಗಳು ಬಂದು ಪ್ರತಿದಿನ ಪ್ರವಚನಗಳನ್ನು ನೀಡಿ ಅನೇಕ ಬಗೆಯ ಧರ್ಮೋಪದೇಶಗಳನ್ನು ನೀಡುತ್ತಿದ್ದರು. ಆ ಪ್ರವಚನಗಳನ್ನು ಕೇಳಿದ ನಾಗಶ್ರೀ ಪ್ರಭಾವಿತಳಾಗಿ ಗುರುಗಳಲ್ಲಿ ತನಗೂ ವ್ರತಗಳನ್ನು ನೀಡುವಂತೆ ಕೇಳಿಕೊಂಡಳು; ಚತುರೆ-ಬುದ್ಧಿವಂತೆಯಾದ ನಾಗಶ್ರೀ ವ್ರತಗಳನ್ನು ಪಾಲಿಸಬಲ್ಲಳು ಎಂದೆಣಿಸಿದ ಗುರುಗಳು– ಅಹಿಂಸೆ, ಸತ್ಯ, ಅಸ್ತೇಯ [ಕಳ್ಳತನ ಮಾಡದಿರುವುದು], ಬ್ರಹ್ಮರ‍್ಯ ಮತ್ತು ಅಪರಿಗ್ರಹ [ದುರಾಸೆಯನ್ನು ಮಾಡದಿರುವುದು] ವ್ರತಗಳನಿತ್ತರು. ಭಕ್ತಿ-ಭಾವದಿಂದ ಸ್ವೀಕರಿಸಿದ ನಾಗಶ್ರೀ ಮನೆಗೆ ಬಂದಳು. ವಿಷಯ ತಿಳಿದ ಸೋಮಶರ್ಮಭಟ್ಟ ಮಗಳೇ, ನಾವು ಬ್ರಾಹ್ಮಣರು, ಜಗತ್ತಿನಲ್ಲಿ ಶ್ರೇಷ್ಠರಾದವರು, ನಾವು ಜೈನರ ವ್ರತಗಳನ್ನು ಪರಿಗ್ರಹಿಸಬಾರದು, ವ್ರತಗಳನ್ನು ಮರಳಿಸುವಂತೆ ತಂದೆಯು ಸೂಚಿಸಲು, ನೀವೂ ನನ್ನ ಜೊತೆಬನ್ನಿ ಎಂದು ಮುನಿಗಳ ಬಳಿಗೆ ಕರೆದೊಯ್ಯುವಾಗ ದಾರಿ ಮಧ್ಯೆ ನಡೆದ ಘಟನಾವಳಿಗಳೂ ಕಥೆಗೆ ಮುಖ್ಯತಿರುವನ್ನು ನೀಡುತ್ತವೆ.ಅವು ಇಂತಿವೆ: ಬಂಧಿತ ಕೊಲೆಪಾತಕ–ಅಹಿಂಸಾ ವ್ರತ, ಬಂಧಿತ ಸುಳ್ಳುಗಾರ-ಜನರನ್ನು ವಂಚಿಸುವವ- ಸತ್ಯವ್ರತ, ಬಂಧಿತ ಕಳ್ಳ– ಅಸ್ತೇಯ ವ್ರತ, ಬಂಧಿತ ಮೋವಾಳಿ ಹೆಂಗಸು ಮತ್ತು ನಾಗಸೂರ ವರ್ತಕನ ಮಗ– ವ್ಯಭಿಚಾರ-ಪರಪುರುಷನ ಸ್ನೇಹ ತಪ್ಪು- ಬ್ರಹ್ಮಚರ‍್ಯೆ ವ್ರತ, ಬಂಧಿತ ದುರಾಸೆಯ ವ್ಯಕ್ತಿ– ಅಪರಿಗ್ರಹ ವ್ರತ, ಕೊನೆಗೆ ತಂದೆಯು ಮಗಳ ಎಲ್ಲ ವ್ರತಗಳನ್ನು ಆಚರಿಸಲು ಒಪ್ಪಿದ. ಮಗಳು ಮುನಿಗಳ ಬಳಿಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿದಳು; ಆಗ ಮುನಿಗಳು ಬ್ರಾಹ್ಮಣ ಧರ್ಮವಾದರೇನು? ಸೂಕ್ಷ್ಮವಾಗಿ ಅವಲೋಕಿಸಿದರೆ ಸತ್ಯಧರ್ಮವೇ ಧರ್ಮ! ಅಂತಹ ಧರ್ಮ ಆತ್ಮನಿಷ್ಟವಾದದ್ದು, ಧರ್ಮವನ್ನು ಜಾತಿಯಿಂದ ಪರಿಗಣಿಸಿದಾಗ ವ್ಯಕ್ತಿನಿಷ್ಟವಾಗಿ ರಾಗಾದ್ವೇಷಾದಿಗಳು ಉದ್ಭವಿಸುವುವು, ಈ ಪಂಚಾಣುವ್ರತಗಳು ಯಾವ ಧರ್ಮಕ್ಕೆ ತಾನೇ ವಿರೋಧ? ಜಗತ್ತಿನ ಸಕಲ ಜನರೂ ಅನುಸರಿಸಲು ಯೋಗ್ಯವಾದವುಗಳು; ಜಿನಪೂಜೆಗೆ ಅಡ್ಡಿಮಾಡಿದವರು ತಿರುಕರಾಗಿ ಅನ್ನಅನ್ನ ಎಂದು ಬಾಯಿ ಬಿಡಬೇಕಾಗುವುದು, ಜಿನಧರ್ಮವನ್ನು ದೂಷಿಸುವವರು ಕುಷ್ಠರೋಗಕ್ಕೆ ತುತ್ತಾಗುವರು, ಅನ್ನದಾನಕ್ಕೆ ಅಡ್ಡಿಮಾಡಿದವರು ಹಸಿವಿನಿಂದ ಕಂಗಾಲಾಗುವರು; ಬಡವನ ಸುಖ, ಹೇಡಿಯ ಕೋಪ, ಮುಗಿಲ ನೆಳಲು, ಪ್ರಿಯರ ಮುನಿಸು, ಮಹಾಮೂರ್ಖರ ತಪಸ್ಸು ಇವಾವೂ ಸ್ಥಿರವಲ್ಲ; ಶ್ರೀಶೇಣನು ದಾನಮಾಡಿದ ಮಹಾಪುಣ್ಯದಿಂದಲೇ ಮುಂದೆ ಶಾಂತಿನಾಥ ತೀರ್ಥಂಕರ ನಾಗಲಿಲ್ಲವೇ? ಆಹಾರ, ಅಭಯ, ಔಷಧಿ ಮತ್ತು ಶಾಸ್ತ್ರದಾನಗಳು ಗೃಹಸ್ಥರಿಗೆ ಅನಂತ ಸಿರಿಯ ವ್ಯವಸಾಯದಲ್ಲಿ ಬಿತ್ತಬೇಕಾದ ಗಟ್ಟಿ ಬೀಜಗಳಾಗಿವೆ ಎಂದು ಅನೇಕ ವಿಧದಿಂದ ಬೋಧಿಸಿದರು.ಪೂರ್ವಭವದ ಸ್ಮರಣೆ – ಜನ್ಮಾಂತರಗಳ ಕಥೆ:ಭಗವಾನ್ ಮಹಾವೀರ ತೀರ್ಥಂಕರರ ವಿಹಾರ ಮಗಧ ದೇಶದಲ್ಲಿ ನಡದಿತ್ತು, ರಾಜಗೃಹ ಅದರ ರಾಜಧಾನಿಯಾಗಿದ್ದು, ಶ್ರೇಣುಕನೆಂಬ ಮಹಾರಜ ರಾಜ್ಯಭಾರ ಮಾಡುತ್ತಿದ್ದನು. ಅದೇ ನಗರದಲ್ಲಿ ನಾಗದತ್ತನೆಂಬ ಧನಿಕ ಆತನ ಹೆಂಡತಿ ಭವದತ್ತೆ ದಂಪತಿಗಳಿಬ್ಬರೂ ಧರ್ಮಮಾರ್ಗದಲ್ಲೇ ನಡೆಯುತ್ತಿದ್ದರು. ಆದರೆ ಕಾಲಗರ್ಭದಲ್ಲಿ ಏನ್ ಅಡಗಿದೆಯೋ ಬಲ್ಲವರಾರು? ನಾಗದತ್ತ ಅಕಾಲಿಕ ಮರಣಕ್ಕೆ ತುತ್ತಾದ, ಹೆಂಡತಿಯ ಮೇಲಿನ ವ್ಯಾಮೋಹದಿಂದ ಮೃತ್ಯುವಶನಾದ ನಾಗದತ್ತ ಮರುಜನ್ಮದಿ ಕಪ್ಪೆಯಾಗಿ ಹುಟ್ಟಿದ. ತನ್ನ ಮನೆಯ ಹಿತ್ತಲಿನ ಬಾವಿಯೇ ಆವಾಸಸ್ಥಾನವಾಗಿತ್ತು. ದಿನದಿನವೂ ಸೊರಗುತ್ತಿತ್ತು, ಆ ಬಾವಿಯಿಂದ ಹೊರಬರಲಾರದೆ ತಳಮಳಿಸುತ್ತಿತ್ತು.ಒಂದು ದಿನ ಅಚಾನಕ್ಕಾಗಿ ಬಾವಿಯಿಂದ ನೀರು ಸೇದುವಾಗ ಬಿಂದಿಗೆಯೊಳಕ್ಕೆ ತೂರಿ ಹೊರಕ್ಕೆ ಬಂದುಬಿಟ್ಟಿತು.., ಕುಪ್ಪಳಿಸುತ್ತಾ ಕುಪ್ಪಳಿಸುತ್ತಾ ಮನೆಯೊಳಕ್ಕೆ ಸೇರಿಕೊಂಡಿತು, ಹೆಂಡತಿ ಭವದತ್ತೆಯನ್ನು ಕಂಡಕೂಡಲೇ ಪ್ರೀತಿಯಿಂದ ಆಕೆಯ ಮೇಲೆ ಜಿಗಿಯುತ್ತ ಜಿಗಿಯುತ್ತಾ ಹೋಯಿತು ಹೆದರಿದ ಆಕೆಯ ಮನೆಯಿಂದ

ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು:(ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ) ಡಾ. ಯಲ್ಲಮ್ಮ ಕೆ Read Post »

ಇತರೆ

“ಬಣ್ಣಗಳ ಹಬ್ಬ…. ಹೋಳಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡಪಾಟೀಲ್

ಬಣ್ಣದ ಸಂಗಾತಿ ವೀಣಾ ಹೇಮಂತ್‌ ಗೌಡಪಾಟೀಲ್ “ಬಣ್ಣಗಳ ಹಬ್ಬ…. ಹೋಳಿ”  ಒಂದು ಕ್ಷಣ ಕಣ್ಣು ಮುಚ್ಚಿಕೊಂಡು ಈ ಜಗತ್ತನ್ನು ಕಲ್ಪನೆ ಮಾಡಿಕೊಳ್ಳಿ ಎಲ್ಲವೂ ಕೇವಲ ಬಿಳಿ ಇಲ್ಲವೇ ಕೇವಲ ಕಪ್ಪು ಬಣ್ಣವನ್ನು ಹೊಂದಿದ್ದರೆ ಹೇಗಿರುತ್ತದೆ ಎಂದು???. ಬೆಳ್ಳನೆಯ ಮೋಡ, ಬೆಳ್ಳನೆಯ ವಿಶಾಲ ಸಮುದ್ರ, ಬೆಳ್ಳನೆಯ ಗಿಡ ಮರಗಳು, ಬೆಳ್ಳನೆಯ ರಸ್ತೆಗಳು, ಬೆಳ್ಳನೆಯ ದೇಹದ ಆಕೃತಿಗಳು ಅಬ್ಬಬ್ಬಾ ಯಾವುದೂ ಚೆನ್ನಾಗಿರುವುದಿಲ್ಲ. ಅಷ್ಟರಲ್ಲಿಯೇ ಕಪ್ಪು ಮತ್ತು ಬಿಳಿ ಎರಡು ಬಣ್ಣಗಳನ್ನು ಕೂಡಿಸಿದ ಬಣ್ಣ ತುಸು ಹೆಚ್ಚೇ ಮನಮೋಹಕ ಎನಿಸುತ್ತದೆ.ಆದರೆ ಹಲವಾರು ಬಣ್ಣಗಳನ್ನು ಹೊಂದಿರುವ ಈ ಪ್ರಕೃತಿ ಅತ್ಯಂತ ಸುಂದರ, ನಯನ ಮನೋಹರವಾಗಿರುತ್ತದೆ. ಬಣ್ಣವಿಲ್ಲದ ಬದುಕು ಬರಡು ಎನಿಸುತ್ತದೆ. ಆಕಾಶದಲ್ಲಿ ತಿಳಿ ನೀಲಿ ಮೋಡಗಳು ಮತ್ತು ಕಪ್ಪು ಮೋಡಗಳು, ಹಸಿರು ಹಾಸಿದ ಗಿಡಮರಗಳು, ಆಕಾಶದ ನೀಲಿಯನ್ನೇ ಹೊದ್ದ ತಿಳಿ ನೀಲ ಸಾಗರ, ಕಪ್ಪನೆಯ ಟಾರು ರಸ್ತೆಗಳು, ಬೆಳ್ಳನೆಯ ಬೆಳ್ಳಕ್ಕಿಗಳು, ವಿಧವಿಧ ಬಣ್ಣದ ಪಕ್ಷಿಗಳು, ಪ್ರಾಣಿಗಳು ಹೀಗೆ ಬಣ್ಣಮಯ ಲೋಕ ನಮ್ಮದು. ಈ ಬಣ್ಣ ಬಣ್ಣದ ಲೋಕವನ್ನು ಬಣ್ಣಿಸಲು ಪದಗಳು ಸಾಲದಾಗುತ್ತವೆ ಎಂದರೆ ಅದು ಅತಿಶಯೋಕ್ತಿಯೇನಲ್ಲ!! ಬಣ್ಣಗಳು ಕೂಡ ನಮ್ಮ ಮನಸ್ಸಿನ ಭಾವಗಳನ್ನು ಸೂಚಿಸುತ್ತವೆ. ನಮ್ಮ ಮನಸ್ಸು ಅತ್ಯಂತ ಉದಾಸ ಸ್ಥಿತಿಯಲ್ಲಿದ್ದಾಗ ಊದಾ ಬಣ್ಣದ ಗೋಡೆಗಳು ಇಷ್ಟವಾದರೆ ತಿಳಿ ನೀಲಿ ಮತ್ತು ತಿಳಿ ಹಸಿರು ಬಣ್ಣ ಕಣ್ಣಿಗೆ ಮತ್ತು ಮನಸ್ಸಿಗೆ ಹಿತವನ್ನು ನೀಡುತ್ತವೆ. ಕೆಂಪು ಗುಲಾಬಿಯ ಬಣ್ಣ ಪ್ರೀತಿಯ ದೋತಕವಾದರೆ ಬಿಳಿ ಶಾಂತಿಯ ಸೂಚಕ. ಹಳದಿ ಬಣ್ಣ ಸ್ನೇಹವನ್ನು ಸೂಚಿಸಿದರೆ ಹಸಿರು ಸಮೃದ್ಧಿಯ ಸಂಕೇತ. ಹಲವಿಧದ ಬಣ್ಣಗಳನ್ನು ತನ್ನ ಗರಿಗಳಲ್ಲಿ ಅಡಗಿಸಿಕೊಂಡಿರುವ ನವಿಲು ನಮ್ಮ ರಾಷ್ಟ್ರ ಪಕ್ಷಿ. ಬಣ್ಣಗಳು ಭಾವನೆಗಳನ್ನು ಅರಳಿಸುತ್ತವೆ…. ಅಂತೆಯೇ ಬಣ್ಣದ ಹಬ್ಬವು ಕೂಡ. ಕೆಲ ಹಬ್ಬಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳು ಪ್ರಮುಖ ಪಾತ್ರವನ್ನು ವಹಿಸಿದರೆ ಮತ್ತೆ ಕೆಲ ಹಬ್ಬಗಳಲ್ಲಿ ನಮ್ಮಲ್ಲಿ ಅಡಗಿ ಕುಳಿತಿರುವ ತುಂಟತನ, ಪೋಲಿತನಗಳನ್ನು ಹೊರ ಹಾಕುವ ಹಬ್ಬವಾಗಿರುತ್ತದೆ.ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಆಸುಪಾಸಿನಲ್ಲಿ ಜರುಗುವ ಈ ಬಣ್ಣದ ಹಬ್ಬ ನಮ್ಮ ಬದುಕಿಗೆ ನವ ಚೈತನ್ಯವನ್ನು ತರುತ್ತದೆ ಎಂದರೇ ಅಚ್ಚರಿಯೇನಲ್ಲ. ಪೌರಾಣಿಕ ಐತಿಹ್ಯಗಳ ಪ್ರಕಾರ ಶಿವನ ಪತ್ನಿಯಾದ ಸತಿ ದೇವಿಯು ತನ್ನ ತಂದೆ ದಕ್ಷ ರಾಜನು ನಡೆಸುತ್ತಿದ್ದ ಯಜ್ಞಕ್ಕೆ ಆಹ್ವಾನವಿಲ್ಲದೆ ಹೋಗುವುದು ಬೇಡ ಎಂಬ ಗಂಡನ ಆಣತಿಯನ್ನು ಮೀರಿ ತವರು ಮನೆಯ ಕಾರ್ಯಕ್ರಮವೆಂದು ಹೋಗಿ ಅಲ್ಲಿ ತನ್ನ ತಂದೆಯಿಂದಲೇ ಅವಮಾನಿತಳಾಗಿ ಯಜ್ಞ ಕುಂಡದಲ್ಲಿ ಹಾರಿ ಪ್ರಾಣ ಬಿಡುತ್ತಾಳೆ. ಪತ್ನಿಯನ್ನು ಕಳೆದುಕೊಂಡ ಮಹಾದೇವ ರೌದ್ರಾವೇಶದಿಂದ ಆಕೆಯ ದೇಹವನ್ನು ಹೊತ್ತು ತಿರುಗುತ್ತಿದ್ದಾಗ ಆತನ ಆವೇಶಕ್ಕೆ ಇಡೀ ಪ್ರಪಂಚ ನಡುಗುತ್ತಿತ್ತು. ಶಿವನ ಕೋಪವು ವೈಪರೀತ್ಯಕ್ಕೆ ತಿರುಗಬಾರದು ಎಂಬ ಕಾರಣದಿಂದ ಮಹಾವಿಷ್ಣು ತನ್ನ ಸುದರ್ಶನ ಚಕ್ರವನ್ನು ಬಳಸಿ ಸತಿ ದೇವಿಯ ದೇಹವನ್ನು ಚಿದ್ರಗೊಳಿಸಿದನು. ಈಗಾಗಲೇ ಸುಟ್ಟು ಹೋದ ಆಕೆಯ ದೇಹದ ಭಾಗಗಳು ಅಖಂಡ ಭಾರತದ 54 ಸ್ಥಳಗಳಲ್ಲಿ ಬೀಳಲ್ಪಟ್ಟು 54 ಶಕ್ತಿ ಪೀಠಗಳುಆವಿರ್ಭವಿಸಿದವು. ಮಹಾವಿಷ್ಣು ಶಿವನನ್ನು ಶಾಂತಗೊಳಿಸಿದ ನಂತರ ಇವನು ಉಗ್ರ ತಪಸ್ಸನ್ನು ಆಚರಿಸಲು ಹೊರಟು ಹೋದನು. ಅದಕ್ಕೂ ಮುನ್ನ ತಾರಕಾಸುರನು ಭೋಲಾಶಂಕರನ ಏಳು ದಿನದ ಮಗುವಿನಿಂದ ಮಾತ್ರ ತನಗೆ ಮರಣ ಬರಲಿ ಎಂದು ಬ್ರಹ್ಮದೇವನಿಂದ ವರ ಪಡೆದಿದ್ದನು. ಭಕ್ತ ಪ್ರಿಯ ಬ್ರಹ್ಮನು ತಥಾಸ್ತು ಎಂದು ಹೇಳಿಯೂ ಆಗಿತ್ತು. ನಂತರ ತಾರಕಾಸುರನ ಕೋಟಲೆಗಳು ಒಂದಲ್ಲ ಎರಡಲ್ಲ ಇಡೀ ಪೃಥ್ವಿಯ ಜನರನ್ನು ಆತ ಅತ್ಯಂತ ಕ್ರೂರವಾಗಿ ಕಾಡಲಾರಂಭಿಸಿದನು. ದೇವತೆಗಳಿಗೂ ಆತನ ಕಾಟದ ಬಿಸಿ ತಗುಲಿದಾಗ ಅವರೆಲ್ಲರೂ ಸೇರಿ ಬ್ರಹ್ಮ ಮತ್ತು ವಿಷ್ಣುವನ್ನು ಭೇಟಿಯಾಗಿ ತಮ್ಮ ಸಂಕಷ್ಟವನ್ನು ಹೇಳಿಕೊಂಡರು.ಇದೀಗ ಬ್ರಹ್ಮ ವಿಷ್ಣು ಮತ್ತು ದೇವತೆಗಳು ಸೇರಿ ಭೋಗ ತಪಸ್ಸಿನಲ್ಲಿ ನಿರತನಾದ ಶಿವನ ವಿವಾಹವನ್ನು ಹಿಮವಂತ ಮತ್ತು ಮೇನಾ ದೇವಿಯರ ಪುತ್ರಿ ಗಿರಿಜಾದೇವಿಯೊಂದಿಗೆ ಮಾಡುವ ಆಶಯಕ್ಕೆ ಬೆಂಬಲವಾಗಿ ಶಿವನನ್ನು ಎಚ್ಚರಿಸುವ ಮಹಾ ಕಾರ್ಯಕ್ಕೆ ಕಾಮದ ಅಧಿದೇವತೆಯಾದ ಮನ್ಮಥನಿಗೆ ಒಪ್ಪಿಸಿದರು. ಶಿವನನ್ನು ಎಚ್ಚರಗೊಳಿಸುವ ಈ ಮಹಾಮಣಿಹದಲ್ಲಿ ತನ್ನ ಪ್ರಾಣ ಹೋಗುವದೆಂಬ ಅರಿವಿದ್ದರೂ ಕೂಡ ಲೋಕ ಕಲ್ಯಾಣಕ್ಕಾಗಿ ಈ ಕಾರ್ಯವನ್ನು ಒಪ್ಪಿಕೊಂಡ ಕಾಮದೇವನು ತನ್ನ ಪತ್ನಿ ರತಿದೇವಿಯೊಂದಿಗೆ ಶಿವನು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಬಂದು ಅಲ್ಲೊಂದು ಸುಂದರ ಲೋಕವನ್ನು ಸೃಷ್ಟಿಸಿ ಪತ್ನಿಯೊಂದಿಗೆ ಮೋಹಕವಾಗಿ ನೃತ್ಯ ಮಾಡಿ ಶಿವನ ಮನಸ್ಸನ್ನು ತಣಿಸಲು ಪ್ರಯತ್ನಿಸಿದನು. ಕಾಮದೇವ ಮತ್ತು ರತಿದೇವಿಯರ ಸಾಕಷ್ಟು ಪ್ರಯತ್ನದ ನಂತರ ಕೂಡ ಶಿವ ಎಚ್ಚರಗೊಳ್ಳದೆ ಹೋದಾಗ ಅಂತಿಮ ಪ್ರಯತ್ನವಾಗಿ ಕಾಮದೇವನು ಪುಷ್ಪ ಬಾಣವನ್ನು ಶಿವನೆಡೆಗೆ ಬಿಟ್ಟನು. ಪುಷ್ಪಬಾಣ ಸೋಕಿದ ಶಿವನು ಎಚ್ಚರಗೊಂಡು ತನ್ನ ತಪಸ್ಸನ್ನು ಕೆಡಿಸಲು ಯತ್ನಿಸಿದ ಕಾಮದೇವನನ್ನು ತನ್ನ ಮೂರನೇ ಕಣ್ಣ ತೆರೆದು ಸುಟ್ಟುಬಿಟ್ಟನು. ಆಗ ಅಲ್ಲಿಯೇ ಇದ್ದ ರತಿ ದೇವಿಯು ಲೋಕ ಕಲ್ಯಾಣಕ್ಕಾಗಿ ದೇವತೆಗಳ ಆಗ್ರಹದ ಮೇರೆಗೆ ತನ್ನ ಪತಿ ಈ ಕಾರ್ಯಕ್ಕೆ ಎಳಸಿದನೆಂದು ತನಗೆ ಪತಿ ಭಿಕ್ಷೆ ನೀಡಬೇಕೆಂದು ಶಿವನನ್ನು ಕೇಳಿಕೊಂಡಳು. ಆಗ ಶಿವನು ಕಾಮದೇವನು  ಆಕೆಯ ಕಣ್ಣಿಗೆ ಮಾತ್ರ ಕಾಣುವಂತೆ ವರ ನೀಡಿ ಇಡೀ ಲೋಕದ ಪಾಲಿಗೆ ಮನ್ಮಥನು ಅನಂಗನಾಗಿ ಇರುವಂತೆ ವರ ನೀಡಿದನು. ಈ ಆನಂಗ ವ್ಯಕ್ತಿತ್ವವೇ ನಮ್ಮ ನಿಮ್ಮೊಳಗಿರುವ ಕಾಮ. ಕಾಮ ಎಂದರೆ ಕೇವಲ ದೈಹಿಕ ಲಾಲಸೆಯಲ್ಲ ಅದು ನಮ್ಮನಿಮ್ಮೊಳಗೆ ಅಡಗಿರುವ ಆಸೆಯ ಮೂರ್ತ ರೂಪ. ಅರಿಷಡ್ವರ್ಗಗಳಲ್ಲಿ ಒಂದಾಗಿರುವ ಈ ಕಾಮ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರುತ್ತದೆ. ಅಂತಹ ಕಾಮದ ಕೆಟ್ಟತನವನ್ನು, ಅತಿ ಆಸೆಯನ್ನು  ಪ್ರತಿವರ್ಷ ಶಿಶಿರ ಮಾಸದ ಹುಣ್ಣಿಮೆಯ ದಿನದಂದು ಕಟ್ಟಿಗೆಯ ರೂಪದಲ್ಲಿ ಸುಟ್ಟು ಹಾಕುವ ಮೂಲಕ ಕಾಮದಹನವನ್ನು ನಾವು ಆಚರಿಸುತ್ತೇವೆ. ಈ ಸಮಯದಲ್ಲಿ ಕೆಟ್ಟ ಕೆಟ್ಟ ಬೈಗುಳಗಳು, ಪೋಲಿ ಮಾತುಗಳನ್ನು ಕೂಡ ಆಡಿ ತೀಟೆ ತೀರಿಸಿಕೊಳ್ಳುವ ಸಂಪ್ರದಾಯ ಇದೆ. ಲಬೋ ಎಂದು ಬಾಯಿಗೆ ಕೈಯಿಟ್ಟು ಬಾಯಿ ಬಡೆದುಕೊಳ್ಳುವ ಆ ಮೂಲಕ ಕಾಮದಹನವನ್ನು ಆಚರಿಸುವ ಪ್ರಕ್ರಿಯೆ ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರಚಲಿತವಾಗಿದೆ. ನಾವು ಚಿಕ್ಕವರಿದ್ದಾಗ ನನ್ನ ಅಣ್ಣಂದಿರು ತಮ್ಮದೇ ಒಂದು ತಂಡ ಕಟ್ಟಿಕೊಂಡು ಮನೆ ಮನೆಯಲ್ಲಿ ಕಾಮಣ್ಣನ ಪಟ್ಟಿಯನ್ನು ಸಂಗ್ರಹಿಸಿ ಅದರ ಜೊತೆಗೆ ಉರುವಲುಗಳನ್ನು ಕೂಡ ಮನೆ ಮನೆಗಳಿಂದ ಪಡೆಯುತ್ತಿದ್ದರು. ಅವರೊಂದಿಗೆ ನಾವು ಚಿಕ್ಕ ಹೆಣ್ಣು ಮಕ್ಕಳು ಕೂಡ ಜೊತೆಗೂಡುತ್ತಿದ್ದೆವು. ಇದರ ಜೊತೆಗೆ  ಮನೆಯ ಹಿತ್ತಲಿನಲ್ಲಿ ಇರುತ್ತಿದ್ದ ಸಣ್ಣ ಪುಟ್ಟ ಮರದ ನಿರುಪಯುಕ್ತ ಪೀಠೋಪಕರಣಗಳ ತುಂಡುಗಳನ್ನು, ರಟ್ಟಿನ ಡಬ್ಬಿಗಳನ್ನು ಮತ್ತಿತರ ಉರುವಲು ಸಾಮಗ್ರಿಗಳನ್ನು ಕದ್ದು ಈ ಕಾಮ ದಹನದ ಕಾರ್ಯಕ್ಕೆ ಬಳಸುತ್ತಿದ್ದೆವು. ಹೀಗೆ ತಂದ ವಸ್ತುಗಳನ್ನು ಕಾಮದಹನಕ್ಕೆ ಸಜ್ಜಾಗಿದ ಅಂಗಳದಲ್ಲಿ ಸೇರಿಸಿ ಅದರ ಮೇಲೆ ತೆಂಗಿನ ಗರಿಗಳನ್ನು ಉದ್ದಕ್ಕೆ ಸೇರಿಸಿ ಮುಚ್ಚಿ ಬಿಡುತ್ತಿದ್ದೆವು. ಹುಣ್ಣಿಮೆಯ ದಿನ ರಾತ್ರಿ ಕಾಮನ ಪೂಜೆಯನ್ನು ಮಕ್ಕಳಲ್ಲಿ ಒಬ್ಬರು ಶಾಸ್ತ್ರೋಕ್ತವಾಗಿ ಮಾಡಿ ತಮಟೆಯ ಸದ್ದಿನ ನಡುವೆ ಕಾಮಣ್ಣನನ್ನು ಸುಡುವ ಮೂಲಕ ಆಚರಿಸುತ್ತಿದ್ದೆವು. ಮರುದಿನ ಮುಂಜಾನೆ ಈ ಕಾಮನನ್ನು ಸುಟ್ಟ ಕೆಂಡದಿಂದಲೇ ಪ್ರತಿ ಮನೆಯಲ್ಲಿಯೂ ಒಲೆ ಹಚ್ಚಿ ಅಡುಗೆ ಮಾಡುತ್ತಾರೆ ಹಾಗೆ ಒಲೆ ಇಲ್ಲದವರು ಕಾಮಣ್ಣನನ್ನು ಸುಡಲು ಬಳಸಿದ ಕಟ್ಟಿಗೆಯ ಕೆಂಡವನ್ನು ತಂದು ನೀರು ಕಾಯಿಸುವ ಒಲೆಗೆ ಹಾಕಿ ನೀರು ಕಾಯಿಸಿ ಆ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಈ ಕೆಲಸವನ್ನು ಮನೆಯ ಅಮ್ಮ,ಅಜ್ಜಿಯಂದಿರು ಮಾಡಿದರೆ… ಅಪ್ಪ ಹಿಂದಿನ ದಿನವೇ ಅಂಗಡಿಯಿಂದ ತಂದ ಬೇರೆ ಬೇರೆ ಬಣ್ಣಗಳನ್ನು ಬೇರೆ ಬೇರೆಯಾಗಿಯೇ ಬಕೀಟುಗಳಲ್ಲಿ ಕಲಸಿ ವಿವಿಧ ಬಾಟಲಿಗಳಿಗೆ ತುಂಬಿ ಕೊಡುತ್ತಿದ್ದರು. ತುಸು ಹಳೆಯದಾದ ಬಟ್ಟೆಗಳನ್ನು ತೊಟ್ಟ ಮಕ್ಕಳು ಬಣ್ಣದ ಬಾಟಲಿಗಳನ್ನು,ಪಿಚಕಾರಿಗಳನ್ನು ಹಿಡಿದುಕೊಂಡು ಬೇರೆಯವರ ಮೇಲೆ ಬಣ್ಣವನ್ನು ಎರಚುತ್ತಾ ಖುಷಿಯಿಂದ ಕೇಕೆ ಹಾಕುತ್ತಾ ಮನೆಯ ಸುತ್ತ ಬೇರೆ ಬೇರೆ ಓಣಿಗಳಲ್ಲಿ ಓಡಾಡಿ ಬಣ್ಣ ಎರಚಿ ಸಂಭ್ರಮಿಸುತಿದ್ದರು. ಇನ್ನು ತುಸು ದೊಡ್ಡವರು ಬಣ್ಣದ ಒಣ ಪುಡಿಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಸ್ನೇಹಿತರಿಗೆ ಮತ್ತು ಪರಿಚಿತರಿಗೆ ಬಣ್ಣವನ್ನು ಹಚ್ಚಿ ಖುಷಿಪಡುತ್ತಿದ್ದರು ಕೆಲವೊಮ್ಮೆ ಜಗಳವಾಡಿ ಮಾತು ಬಿಟ್ಟ ಸ್ನೇಹಿತರು ಕೂಡ ಹೋಳಿ ಹಬ್ಬದ ಈ ಸಮಯದಲ್ಲಿ ಒಬ್ಬರಿಗೊಬ್ಬರು ಬಣ್ಣ ಹಚ್ಚುವ ಮೂಲಕ ಮತ್ತೆ ಒಂದಾಗುತ್ತಿದ್ದರು. ಮಧ್ಯಾಹ್ನದವರಿಗೂ ಬಣ್ಣದ ಆಟವನ್ನು ಆಡಿ ಮನೆಗೆ ಬರುತ್ತಿದ್ದ ಮಕ್ಕಳಿಗೆ ಎಣ್ಣೆ ಹಚ್ಚಿ ಬಣ್ಣ ಹೋಗುವಂತೆ ತಿಕ್ಕಿ ಸ್ನಾನ ಮಾಡಲು ಹೇಳಿದರೆ ದೊಡ್ಡ ಮಕ್ಕಳು ಹತ್ತಿರದ ಹೊಳೆ ಹಳ್ಳಗಳಿಗೆ ಬಟ್ಟೆ ತೆಗೆದುಕೊಂಡು ಸ್ನಾನಕ್ಕೆ ಹೋಗುತ್ತಾರೆ. ಹೊಯ್ಕೊಂಡ ಬಾಯಿಗೆ ಹೋಳಗಿ ತುಪ್ಪ ಎಂಬಂತೆ ತಾಯಂದಿರು ಹೋಳಿಗೆಯನ್ನು ಮಾಡಿ ಮಿಂದು ಬಂದ ಮಕ್ಕಳಿಗೆ ಉಣಬಡಿಸುತ್ತಾರೆ. ಬದಲಾದ ಇಂದಿನ ಕಾಲಘಟ್ಟದಲ್ಲಿ ಹೋಳಿ ಹುಣ್ಣಿಮೆಯ ಸಂಭ್ರಮ ಮರೆಯಾಗಿದ್ದರೂ ಬಣ್ಣದ ಹಬ್ಬ ತನ್ನ ರಂಗನ್ನು ಉಳಿಸಿಕೊಂಡಿದೆ. ಆಧುನಿಕ ಯುಗದಲ್ಲಿ ಅನೇಕ ರೀತಿಯ ಬಣ್ಣದ ಪಿಚಕಾರಿಗಳು ಬಂದಿದ್ದು ಮಕ್ಕಳು ವಿವಿಧ ರಂಗುಗಳನ್ನು ಪರಸ್ಪರ ಎರಚಿ ಸಂತಸ ಪಡುತ್ತಾರೆ. ಉತ್ತರ ಭಾರತದಲ್ಲಿ ಹೋಳಿ ಹಬ್ಬವನ್ನು ಹೋಲಿಕಾದಹನ ಮಾಡುವ ಮೂಲಕ ಆಚರಿಸುತ್ತಾರೆ ಅವರ ಪ್ರಕಾರ ರಾಕ್ಷಸ ಹಿರಣ್ಯಕಶಿಪುವಿನ ಮಗ ಪ್ರಹ್ಲಾದನು ಹರಿಯೇ ಸರ್ವೋತ್ತಮ, ಹರಿಯೇ ಜಗದೋದ್ಧಾರಕ ಎಂದು ತನ್ನ ತಂದೆಯ ಆಜನ್ಮ ವೈರಿ ಹರಿಯನ್ನು ಪೂಜಿಸುವುದನ್ನು ಕಂಡು ಕೋಪದಿಂದ ತನ್ನ ಮಗನನ್ನು ಸಾಯಿಸಲು ಹಲವಾರು ಬಾರಿ ಪ್ರಯತ್ನಿಸಿದನು. ಅಂತಹ ಒಂದು ಪ್ರಯತ್ನದ ಅಂಗವಾಗಿ ತನ್ನ ಸೋದರಿ ಹೋಲಿಕಾಳಿಗೆ ವರವಾಗಿ ದೊರೆತ ಸುಡದ ಅಂಗವಸ್ತ್ರವನ್ನು ಧರಿಸಿ ಪ್ರಹ್ಲಾದನನ್ನು ಬೆಂಕಿಯ ಬಾಯಿಯಲ್ಲಿ ದೂಡಲು ಆಕೆಗೆ ಕೇಳಿಕೊಂಡನು. ಅಣ್ಣನ ಮಾತನ್ನು ಮೀರದ ಹೋಲಿಕ ತನ್ನ ಅಂಗವಸ್ತ್ರವನ್ನು ಧರಿಸಿ ಪುಟ್ಟ ಪ್ರಹ್ಲಾದನನ್ನು ಎತ್ತಿಕೊಂಡು ಬೆಂಕಿಯಲ್ಲಿ ಪ್ರವೇಶಿಸಿದಳು. ಆದರೆ ಯಾವ ಮಾಯದಲ್ಲಿಯೋ ಆಕೆಯ ಅಂಗವಸ್ತ್ರವು ಆಕೆಯ ದೇಹದಿಂದ ಬಿದ್ದು ಹೋಗಿ ಆಕೆ ಸಜೀವವಾಗಿ ದಹನಗೊಂಡಳು, ಆದರೆ ಪುಟ್ಟ ಮಗು ಪ್ರಹ್ಲಾದ ಸೋಜಿಗವೆಂಬಂತೆ ಪಾರಾದನು. ಈ ದಿನ ಹೋಲಿಕ ಎಂಬ ಕಾಮನೆಯನ್ನು ಸುಟ್ಟು ಹಾಕುವ ಆಚರಣೆಯನ್ನು ಉತ್ತರ ಭಾರತೀಯರು ಮಾಡುತ್ತಾರೆ. ಹೋಲಿ ಹಬ್ಬ ಉತ್ತರ ಭಾರತೀಯರ ಪಾಲಿಗೆ ಅತಿ ದೊಡ್ಡ ಹಬ್ಬವಾಗಿದ್ದು ಹಾಡು, ಕುಣಿತ, ನೃತ್ಯ ಸಂಗೀತಗಳ ಜೊತೆ ಜೊತೆಗೆ ಭಾಂಗ್ ಎಂಬ ನಶೆಯ ಪೇಯವನ್ನು ಕೂಡ ಅವರು ಸೇವಿಸಿ ಮತ್ತರಾಗುತ್ತಾರೆ. ಇತ್ತೀಚಿಗಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಹೋಲಿ ಪಾರ್ಟಿ ಎಂದು ಚಿತ್ರರಂಗದ ಎಲ್ಲರನ್ನೂ ಆಮಂತ್ರಿಸಿ ದೊಡ್ಡ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಇನ್ನು  ನರಸಿಂಹದೇವರ ದೇವಸ್ಥಾನವಿರುವ ಕಡೆಗಳಲ್ಲಿ ಹೋಳಿಹಬ್ಬವನ್ನು ಆಚರಿಸುವುದಿಲ್ಲ. ನರಸಿಂಹದೇವರ ದೇವಸ್ಥಾನವಿರುವ ಸುತ್ತಲ ಏಳು ಹಳ್ಳಿಗಳಲ್ಲಿ ಕಾಮದಹನ,ಬಾಯಿ ಬಡಿದುಕೊಳ್ಳುವ, ಕೆಟ್ಟ ಮಾತುಗಳನ್ನು ಹೇಳುವ ಯಾವುದೇ ಆಚರಣೆಗಳು ಇಲ್ಲ. ಜೊತೆಗೆ ಬಣ್ಣದ ಹಬ್ಬವು ಇಲ್ಲ. ಅದೆಷ್ಟೇ ಆಕರ್ಷಣೀಯವಾದರೂ ಬಣ್ಣದ ಈ ಹಬ್ಬವನ್ನು ಈ ಭಾಗಗಳಲ್ಲಿ ಆಚರಿಸುವುದಿಲ್ಲ. ಅಷ್ಟಾಗಿಯೂ ಆಚರಿಸಬೇಕೆಂಬ ಆಸಕ್ತಿಯುಳ್ಳವರು ತಮ್ಮ ಊರನ್ನು ಬಿಟ್ಟು ಬೇರೆ ಊರುಗಳಿಗೆ ಬಣ್ಣದ ಆಟ ಆಡಲು ತೆರಳುತ್ತಾರೆ. ಇನ್ನು ಕೆಲ ಪ್ರದೇಶಗಳಲ್ಲಿ ಹೋಳಿ ಹುಣ್ಣಿಮೆಯ ದಿನ ಕಾಮ ಮತ್ತು ರತಿದೇವಿಯರನ್ನು ವಿದ್ಯುಕ್ತವಾಗಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ನಾಲ್ಕು ದಿನಗಳ ಕಾಲ ಕಾಮ ರತಿದೇವಿಯರನ್ನು ಪೂಜಿಸಿ 4ನೇ ದಿನ ರಾತ್ರಿ ಕಾಮದಹನವನ್ನು ಮಾಡುತ್ತಾರೆ. ಐದನೆಯ ದಿನ ಬಣ್ಣದ ಹಬ್ಬವನ್ನು ರಂಗ ಪಂಚಮಿ ಎಂದು ಆಚರಿಸುತ್ತಾರೆ. ಜೀವಂತ ಕಾಮದೇವ ಮತ್ತು ರತಿದೇವಿಯರನ್ನು ಕೂಡ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ನೋಡಬಹುದು. ಕಣ್ಣು ಪಿಳುಕಿಸದೆ ಯಾವುದೇ ರೀತಿಯ ಚಟುವಟಿಕೆಗಳನ್ನು ಮಾಡದೆ ಅಲಂಕಾರಗೊಂಡ

“ಬಣ್ಣಗಳ ಹಬ್ಬ…. ಹೋಳಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡಪಾಟೀಲ್ Read Post »

ಇತರೆ, ರಂಗಭೂಮಿ

“ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ” ನಾಟಕದ ಒಂದು ರಿವ್ಯು ಗೊರೂರು ಅನಂತರಾಜು ಅವರಿಂದ.

ರಂಗ ಸಂಗಾತಿ ಗೊರೂರು ಅನಂತರಾಜು “ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ” ನಾಟಕದ ಒಂದು ರಿವ್ಯು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮೊನ್ನೆ ರಂಗಭೂಮಿ ಟ್ರಸ್ಟ್ ಕೊಡಗು ಕಲಾವಿದರು ಶ್ರೀ ಅಡ್ಡಂಡ ಕಾರ್ಯಪ್ಪ ರಚನೆಯ ನಿಜಮಹಾತ್ಮ ಬಾಬಾ ಸಾಹೇಬ ನಾಟಕ ಪ್ರದರ್ಶಿಸಿದರು. ಮೈಸೂರು ರಂಗಾಯಣ ನಿಕಟಪೂರ್ವ ನಿರ್ದೇಶಕರು ಶ್ರೀ ಅಡ್ಡಂಡ ಕಾರ್ಯಪ್ಪನವರು ಕೊಡಗು ಜಿಲ್ಲೆಯವರು. ಬಾಲ್ಯದಿಂದಲೂ ರಂಗಭೂಮಿ ಹಾಗೂ ಸಾಹಿತ್ಯದ ಬಗ್ಗೆ ತೀವ್ರವಾದ ಒಲವು ಬೆಳೆಸಿಕೊಂಡು ಇವರು ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ರಾಜ್ಯಾದ್ಯಂತ ಪ್ರದರ್ಶಿಸಿದ ಹೆಗ್ಗಳಿಕೆ ಇವರದು. ಇವರು ಈ ಹಿಂದೆ ಹಾಸನದಲ್ಲಿ ಪರ್ವ ಕಾದಂಬರಿಯನ್ನು ನಾಟಕವಾಗಿ  ಪ್ರದರ್ಶಿಸಿದ್ದರು. ಹಿಂದೆ ಇವರ ತಂಡದ ಟಿಪ್ಪು ನಿಜಕನಸುಗಳು ಮತ್ತು ಕರಿನೀರ ವೀರ ನಾಟಕಗಳನ್ನು ನೋಡಿ  ಬರೆದಿದ್ದೆ. ಇವರ ಇನ್ನೊಂದು ನಾಟಕ ಸತ್ಯವನ್ನೇ ಹೇಳುತ್ತೇನೆ. ಈ ನಾಟಕವು ಡಾ. ಅಂಬೇಡ್ಕರ್ ವಿಷಯದಲ್ಲಿ ಬಚ್ಚಿಟ್ಟ  ಸತ್ಯಗಳನ್ನು ಬಿಚ್ಚಿಡುವ ಪ್ರಯತ್ನ ಎಂದಿದ್ದಾರೆ.  ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಸ್ವಪ್ರಯತ್ನ ಸಾಧನೆಗಳಿಂದ ಮಾನವತಾವಾದಿಯಾಗಿ ಒಂದು ಅರ್ಥದಲ್ಲಿ ನಿಜಮಹಾತ್ಮರಾಗಿ ಬೆಳೆದಿದ್ದು ಅದ್ಭುತ ಯಶೋಗಾಥೆ. ಅವರ ವ್ಯಕ್ತಿತ್ವ, ವಿದ್ವತ್ತು, ನಾಯಕತ್ವ ಗುಣ, ಸಂಘಟನಾ ಸಾಮರ್ಥ್ಯ, ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಶ್ರಮ ಅದ್ವಿತೀಯ. ಬಾಬಾ ಸಾಹೇಬರ ಬಗ್ಗೆ ಸಾಮಾಜಿಕ ಕ್ರಾಂತಿ ಸೂರ್ಯ ಪುಸ್ತಕ ಬರೆದ ದತ್ತೋಪಂತ್ ಠೇಂಗಡಿ ಅವರ  ನಿರೂಪಣೆಯಲ್ಲಿ ತೆರೆದುಕೊಳ್ಳುತ್ತದೆ ನಾಟಕ. ಅವರ ಜೀವನವನ್ನು ರಾಜಕೀಯ ಕಥಾನಕಗಳಿಂದ ಹೊರತಂದು ರಾಷ್ಪ್ರೀಯತೆಯ ನೆಲೆಯಲ್ಲಿ ಪುನರ್ ಸ್ಥಾಪಿಸಿದೆ. ಅವರನ್ನು ಯಾವುದೋ ಒಂದು ರಾಜಕೀಯ ಚೌಕಟ್ಟಿಗೆ ಸೀಮಿತಗೊಳಿಸದೆ ಅವರ ನೈಜ ಸ್ವಭಾವಗಳಾದ ಚಿಕಿತ್ಸಕ ಬುದ್ಧಿ, ತಪ್ಪನ್ನು ಪ್ರಶ್ನಿಸುವ ವಿರೋಧಿಸುವ ಧೈರ್ಯ, ಸತ್ಯಕ್ಕಾಗಿ ಒಬ್ಬಂಟಿಯಾಗಲು ಸಿದ್ಧರಾಗುವ ಮಹಾ ಮಾನವತೆಯನ್ನು  ನೋಡಬಯಸುತ್ತದೆ.   ಬಾಬಾಸಾಹೇಬರ ಜೀವನದ ಅನೇಕ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ರಂಗದಲ್ಲಿ ತರಲಾಗಿದೆ. ಅವರ ವೈವಾಹಿಕ ಜೀವನ, ರಾಷ್ಪ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಅವರಿಗಿದ್ದ ನಿಲುವು, ಸಂವಿಧಾನ ಕರಡು ತಿದ್ದುಪಡಿಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ನಡೆದ ಚರ್ಚೆಗಳು, ಡಾ. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ನಡುವಿನ ಸಂಬಂಧ ಇವೆಲ್ಲವನ್ನು ಐತಿಹಾಸಿಕ ದಾಖಲೆಗಳನ್ನು ಇಟ್ಟುಕೊಂಡು ಪರದೆಯ ಮೇಲೆ ಸಾಕ್ಷ್ಯ ಚಿತ್ರಗಳನ್ನು ತೋರಿಸಿ ಪ್ರಸ್ತುತಿಪಡಿಸುತ್ತದೆ. ರಾಷ್ಪ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹಡ್ಗೆವಾರ್ ಮತ್ತು ಬಾಬಾ ಸಾಹೇಬರು ಒಂದೇ ಕಾಲಘಟ್ಟದಲ್ಲಿದ್ದವರು. ಇವರಿಬ್ಬರ ಭೇಟಿ  ವಿಚಾರ ವಿನಿಮಯ ಸಂಘದ ಶಿಬಿರಕ್ಕೆ ಭೇಟಿಯಿತ್ತ ಬಾಬಾ ಸಾಹೇಬರು ಅಲ್ಲಿ ಯಾರೂ ಜಾತಿಯಿಂದ ಗುರುತಿಸಿಕೊಳ್ಳದೇ ಹಿಂದೂಗಳಾಗಿ ಗುರುತಿಸಿಕೊಂಡಿದ್ದನ್ನು ವಿಶೇಷವಾಗಿ ಗಮನಿಸುತ್ತಾರೆ.ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಕಾನೂನುಬದ್ಧ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದ ಹಿಂದೂ ಕೋಡ್ ಬಿಲ್ ಅನ್ನು  ೧೯೫೧ರಲ್ಲಿ  ಸರಕಾರ ಮುಂದೂಡಿದ ಕಾರಣ ಬಾಬಾ ಸಾಹೇಬರು ನೆಹರು ಸಂಪುಟಕ್ಕೆ ರಾಜೀನಾಮೆ ನೀಡಿದರು. ೧೯೫೨ರ ಮೊದಲ ಲೋಕಸಭಾ ಚುನಾವಣೆಯಲ್ಲಿ ಅವರ ಸೋಲು  ಅಘಾತಕಾರಿ.  ೧೯೫೬ರ ಡಿಸೆಂಬರ್ ೬ರಂದು ಅಂಬೇಡ್ಕರ್ ಅಸ್ತಂಗತರಾದಾಗ ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ದೊರಕದಿರುವುದು ವಿಷಾದನೀಯ. ಈ ಅಂಶಗಳ ಮೇಲೆ ನಾಟಕ ಬೆಳಕು ಚೆಲ್ಲುತ್ತದೆ.೧೯೨೭ರಲ್ಲಿ ಮಹಾರಾಷ್ಟ್ರದ ಮಹಾಡ್ನಲ್ಲಿ ನಡೆದ ಚವದಾರ್ ಕೆರೆ ಸತ್ಯಾಗ್ರಹ ಮತ್ತು ೧೯೩೦ರಲ್ಲಿ ನಾಸಿಕ್‌ನ ಕಾಳಾರಾಮ ದೇವಸ್ಥಾನ ಪ್ರವೇಶ ಚಳುವಳಿ ಇವು ಅವರ ಸಾಮಾಜಿಕ ಹೋರಾಟಗಳ ಪ್ರಮುಖ ಮೈಲಿಗಲ್ಲು. ದೇವಸ್ಥಾನಕ್ಕೆ ಹೋಗಿಬರಬೇಕೆಂದು ಬಯಸುವ ಪತ್ನಿಯನ್ನು ಸಂಭಾಳಿಸುವ ಸನ್ನಿವೇಶವು ಮನ ಕಲಕುತ್ತದೆ.    ಸ್ವಾತಂತ್ರ್ಯ  ದೊರಕಿದ ಆರು ವರ್ಷಗಳ ಮೊದಲೇ ಬಾಬಾ ಸಾಹೇಬರು ಬರೆದ ಥಾಟ್ಸ್ ಆಫ್ ಪಾಕಿಸ್ಥಾನ (Thoughts of Pakisthan) ಕೃತಿಯನ್ನು ಪ್ರೇಕ್ಷಕರು ಓದಬೇಕೆಂದು ನಾಟಕದ ಮಧ್ಯಾಂತರದಲ್ಲಿ  ಬಂದು ನಾಟಕಕಾರರು ನಿವೇದಿಸುತ್ತಾರೆ. ಬಾಬಾಸಾಹೇಬರ ಬದುಕು ತೆರೆದ ಪುಸ್ತಕ. ಅವರು ಬದುಕನ್ನು ಅಕ್ಷರಗಳಲ್ಲಿ ಬರೆದಿಟ್ಟಿದ್ದಾರೆ. ಅದನ್ನು ನಾವು ಓದಬೇಕಷ್ಟೇ.  ಅವರು ಇದನ್ನು ಬರೆದಿದ್ದು ದೇಶ ವಿಭಜನೆಯ ಉದ್ದೇಶದಿಂದಲ್ಲ. ವಿಭಜನೆ ತರುವ ರಾಜಕೀಯ, ಸಾಮಾಜಿಕ ಮತ್ತು ಭೌಗೋಳಿಕ ಪರಿಣಾಮಗಳನ್ನು ಅದರಲ್ಲಿ ವಿಶ್ಲೇಷಿಸಿದ್ದರು. ಧರ್ಮದ ಆಧಾರದಲ್ಲಿ ದೇಶ ಒಡೆಯುವುದೇ ಆದರೆ ಸಂಪೂರ್ಣ ಪ್ರಜಾ ವಿನಿಮಯವಾಗಬೇಕು ಎಂಬುದು ಅವರ ನಿಲುವು. ಗಾಂಧೀಜಿಯವರು ಪ್ರಜಾ ವಿನಿಯಯ ಮಾಡಿಕೊಳ್ಳಬೇಕೆಂಬ ಅವರ ಬೇಡಿಕೆಯ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿ ಬಾಬಾ ಸಾಹೇಬರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವಂತೆ ಮಾಡುವ  ದೃಶ್ಯ ಯಾಕೋ  ಗಾಂಧೀ ಪಾತ್ರ ವ್ಯಂಗ್ಯವಾಗಿ ಗೋಚರಿಸಿತು. ಇತ್ತ ಸಾರ್ವಕರರು ಧರ್ಮಾಧಾರಿತ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಅಖಂಡ ಬಾರತ ಎಂಬ ರಾಷ್ಪ್ರ  ಕಲ್ಪನೆಯನ್ನು ಸ್ಫಷ್ಟವಾಗಿ ಪ್ರತಿಪಾದಿಸಿದರು. ಬಾಬಾ ಸಾಹೇಬರು ಮತ್ತು ಸಾವರ್ಕರರ ನಡುವೆ ರಾಷ್ಟ್ರ ಧರ್ಮ ಮತ್ತು ಭವಿಷ್ಯದ ಭಾರತದ ಕುರಿತ ಚರ್ಚೆಗಳು ಮುಖಾಮುಖಿ ಸಂಭಾಷಣೆಯಲ್ಲಿ ಅಭಿವ್ಯಕ್ತವಾಗುತ್ತದೆ. ಚುರುಕು ಮಾತುಗಳು, ದೃಶ್ಯದಿಂದ ದೃಶ್ಯಕ್ಕೆ ಬದಲಾಗುವ ಸನ್ನಿವೇಶಗಳು, ಎಲ್ಲೂ ಬಿಗಿ ತಪ್ಪದ ಕಥಾ ನಿರೂಪಣೆ, ಪಕ್ಕ ಲೈಟಿಂಗ್ಸ್ (ತೀರ್ಥಳ್ಳಿ ಶಿವಕುಮಾರ್) ನಾಟಕದ ಹೈಲೆಟ್ಸ್. ಸುಮಾರು ೨ ಗಂಟೆ ೧೦ ನಿಮಿಷದ ನಾಟಕದಲ್ಲಿ ಪ್ರಮುಖವಾಗಿ ಇಡೀ ನಾಟಕ ಆವರಿಸಿಕೊಂಡಿರುವ  ಬಾಬಾಸಾಹೇಬರ ಪಾತ್ರವನ್ನು ಅಜಿತ್‌ಕುಮಾರ್ ಸಮರ್ಥವಾಗಿ ನಿಭಾಯಿಸಿದರು. ನಾಟಕದ ಇತರ ಕಲಾವಿದರು ನಾಟಕದ ಹಲವಾರು ಪಾತ್ರಗಳನ್ನು ಹಂಚಿಕೊಂಡರು. ಅಶೋಕ್‌ಗೌಡ ಅವರು ಸುಧಾಮ, ಅರುಣ್‌ಚಂದ್ರ ಗುಹಾ ಪಾತ್ರಗಳನ್ನು, ಉಡುಪಿ ಸರ್ವೇಶ್ ಅವರು ರತ್ತು,  ಮೆಹಬೂಬ್ ಆಲಿಬೇಗ್ ಪಾತ್ರಗಳನ್ನು, ಶರಣು ಯಳವಾರ ಅವರು ಬೋನ್ಸಲೆ, ಮಹಾವೀರ್ ತ್ಯಾಗಿ ಪಾತ್ರಗಳನ್ನು ಶಿವಕುಮಾರ್ ಅವರು ಶಂಕರಾನಂದ ಶಾಸ್ತ್ರೀ ಗಾಯಕ್‌ವಾಡ್, ಹೆಚ್.ವಿ.ಕಾಮತ್ ಪಾತ್ರಗಳನ್ನು, ಮನೋಜ್ ಅವರು ಅಮಿನ್ ಚಂದ್ ಗಾಂಧಿ, ಮೌಲಾನ ಆಶ್ರತ್ ಮೊಹಾನಿ ಪಾತ್ರಗಳನ್ನು, ಮಧು ಎಂ. ಕೇಶವ ಬಲಿರಾಮ್ ಹೆಡಗೆವಾರ್, ಡಾ. ಬಾಬು ರಾಜೇಂದ್ರ ಪ್ರಸಾದ್ ಪಾತ್ರಗಳನ್ನು, ಶ್ರೇಯಸ್ ವೆಂಕಟೇಶ್ ವೀರಸಾವರ್‌ಕರ್ ಪಾತ್ರ ಹಾಗೂ ಸಚಿನ್‌ರಾಜ ಅವರು ದತ್ತೋಪಂಥ ಶೇಂಗಡಿ, ಟಿ.ಟಿ.ಕೃಷ್ಣಮಾಚಾರಿ ಪಾತ್ರಗಳನ್ನು ನಿಭಾಯಿಸಿದರು. ಇದೇ ಕಲಾವಿದರು ನಾಟಕದಲ್ಲಿ ಬಂದು ಹೋಗುವ  ಗಾಂಧಿ ಭಕ್ತರು, ಸ್ವಯಂ ಸೇವಕರು ದಲಿತರ ಪಾತ್ರಗಳನ್ನು ನಿರ್ವಹಿಸಿದರು.  ಅನಿತಾ ಕಾರ್ಯಪ್ಪರವರು ನಾಟಕದ  ಸ್ತ್ರೀ ಪಾತ್ರಗಳು ಡಾ. ಸವಿತ ಅಂಬೇಡ್ಕರ್, ರಮಾದೇವಿ ಮತ್ತು ರೇಣುಕಾ ರೇ ಪಾತ್ರಗಳಲ್ಲಿ ಅಭಿನಯಿಸಿದರು. ರಘುಪ್ರಸಾದ್ ನೀನಾಸಮ್ ಅವರಿಂದ ಸ್ಕ್ರೀನ್  ಮೇಲೆ ಮೂಡಿಬಂದ ದೃಶ್ಯ ಚಿತ್ರ ದಾಖಲೀಕರಣ ಗಮನಾರ್ಹ.  ಗೊರೂರು ಅನಂತರಾಜು

“ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ” ನಾಟಕದ ಒಂದು ರಿವ್ಯು ಗೊರೂರು ಅನಂತರಾಜು ಅವರಿಂದ. Read Post »

ಇತರೆ, ಶಿಕ್ಷಣ

“ಶಿಕ್ಷಕರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ?!” ವಿಶೇಷಬರಹ ಜಯಲಕ್ಷ್ಮಿ .ಕೆ

ಶಿಕ್ಷಣ ಸಂಗಾತಿ “ಕ್ಷಕರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ?!” ವಿಶೇಷಬರಹ ಜಯಲಕ್ಷ್ಮಿ .ಕೆ ಜಯಲಕ್ಷ್ಮಿ .ಕೆ “ಶಿಕ್ಷಕರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ?!” ಶಿಕ್ಷಕರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ?!!! ಒಮ್ಮೆ ದಿನಸಿ ಅಂಗಡಿಗೆ ಹೋಗಿದ್ದೆ. ಆಗ ಸರಕಾರಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ನನ್ನ ಪರಿಚಿತರೊಬ್ಬರು ಅಲ್ಲಿಗೆ ಬಂದು ನಾಲ್ಕು ಪುಟ್ಟ ಬ್ರಷ್ ಗಳನ್ನು ಕೊಂಡುಕೊಂಡರು. ಆ ಶಿಕ್ಷಕಿಯ ಮಕ್ಕಳು ಪಿ ಯು ಸಿ ಯಲ್ಲಿ ಓದುತ್ತಿದ್ದ ಕಾರಣ ನಾನು ಕುತೂಹಲದಿಂದ ಮತ್ತು ಬ್ರಷ್ ನ ಸೈಜ್ ಅವರು ಗಮನಿಸಿಲ್ಲ ವೇನೋ ಎಂಬ ಕಾಳಜಿಯಿಂದ ” ಇಷ್ಟು ಸಣ್ಣ ಬ್ರಷ್ ಯಾರಿಗೆ ” ಎಂದು ಕೇಳಿದೆ. ಅದಕ್ಕವರು ” ನಮ್ಮ ಶಾಲೆಯಲ್ಲಿ 4-5 ಮಕ್ಕಳಿದ್ದಾರೆ, ಅವರು ಹಲ್ಲು ಉಜ್ಜದೇ ಶಾಲೆಗೆ ಬರುತ್ತಾರೆ. ಅವರಿಗೆ ಬ್ರಷ್ ಪೇಸ್ಟ್ ಕೊಟ್ಟು ಶಾಲೆಯಲ್ಲಿಯೇ ಹಲ್ಲುಜ್ಜಿಸುತ್ತೇವೆ. ” ಎಂದರು! ನನಗೆ ಅಚ್ಚರಿ ಎನಿಸಿ ಇನ್ನೂ ಒಂದಷ್ಟು ಹೊತ್ತು ಅವರ ಶಾಲಾ ಮಕ್ಕಳ ಬಗ್ಗೆ ಕೇಳುತ್ತಾ ನಿಂತೆ. ” ಅಯ್ಯೋ ಮೇಡಂ, ಹಲ್ಲು ಉಜ್ಜಿಸೋದು, ಕೈ -ಕಾಲು ತೊಳೆಸೋದು ಇಷ್ಟೇ ಅಲ್ಲ…ನಾವು ಸೋಪ್ ಕೊಟ್ಟು ಅವರ ಸ್ಕೂಲ್ ಬ್ಯಾಗ್ ನನ್ನೂ ತೊಳೆಸಿ ಒಣ ಹಾಕಿಸುತ್ತೇವೆ. ಮಕ್ಕಳು ಶಾಲೆಗೆ ದೀರ್ಘ ಕಾಲ ಗೈರು ಹಾಜರಾದರೆ ಅವರ ಮನೆ ಹುಡುಕಿಕೊಂಡು ಹೋಗುತ್ತೇವೆ.. ಮಕ್ಕಳ ತಂದೆ ತಾಯಿಯರಿಂದ ಬಾಯಿಗೆ ಬಂದಂತೆ ಬೈಸಿಕೊಳ್ಳುತ್ತೇವೆ. ಕೆಲವೊಮ್ಮೆಅಂಥ ಮಕ್ಕಳ ಮನೆ ಮಂದಿ ‘ ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ನೀವು ಯಾರು? ” ಎಂದು ಶಿಕ್ಷಕರಾದ ನಮ್ಮನ್ನು ಓಡಿಸಿದ್ದೂ ಇದೆ ‘ ಎಂದರು. ಇಷ್ಟೆಲ್ಲಾ ಕಾಳಜಿ ತೋರುವ ಶಿಕ್ಷಕರು ಒಂದು ಏಟು ಕೊಟ್ಟರೆ ಮಾತ್ರ ತಕ್ಷಣ ಅದು ಸುದ್ದಿಯಾಗುತ್ತದೆ. ಶಿಕ್ಷಕರಿಗೆ “ರಾಕ್ಷಸ ” ಬಿರುದು ಪ್ರಾಪ್ತಿಯಾಗುತ್ತದೆ!! ಇದೇ ವರ್ಷ ಒಂದು ಸಂಘಟನೆಯ ವತಿಯಿಂದ ಸಮೂಹ ನೃತ್ಯ ಸ್ಪರ್ಧೆ ಆಯೋಜನೆಯಾಗಿತ್ತು. ಅಂದು ನೃತ್ಯ ಮಾಡಿದ ಮಕ್ಕಳು ಬಹುಮಾನ ವಿತರಣೆ ಆಗುವ ಮುನ್ನವೇ ಮನೆಗೆ ಹೋಗಿದ್ದರು. ಕಾರ್ಯಕ್ರಮ ಭಾನುವಾರ ಆಗಿದ್ದರೂ ನೃತ್ಯ ಕಲಿಸಿದ ಆ ಶಿಕ್ಷಕಿ ಮಕ್ಕಳನ್ನು ಕರೆ ತಂದು ಅವರಿಗೆ ಡ್ರೆಸ್ ಮಾಡಿಸಿ ( ಇಲ್ಲಿಯೂ ಡ್ರೆಸ್ ಜವಾಬ್ದಾರಿ ಕೂಡಾ ಶಿಕ್ಷಕರದ್ದೇ ) ಮತ್ತೆ ಸ್ಪರ್ಧೆ ಮುಗಿದ ಮೇಲೆ ಮನೆಗೆ ಹೋದರು. ಅವರ ಬಹುಮಾನಗಳನ್ನು ಸಂಚಾಲಕರ ಜಾಗ್ರತೆಯಿಂದ ತೆಗೆದು ಇರಿಸಿದ್ದರು. ಆ ನಂತರ ಒಂದು ರಾತ್ರಿ ಎಂಟು ಗಂಟೆಗೆ ಆ ಶಿಕ್ಷಕಿ ಮಕ್ಕಳ ಬಹುಮಾನ ಮತ್ತು ಪ್ರಶಂಸನಾ ಪತ್ರ ಸಂಗ್ರಹಿಸಿಕೊಂಡರು. ‘ ಶಾಲೆಯಿಂದ ಬರುವಾಗ ಬಸ್ ಸರಿಯಾಗಿ ಸಿಗದೆ ಇಷ್ಟು ಹೊತ್ತಾಯಿತು, ನಾಳೆ ಒಂದು ಸಭೆ ಇದೆ. ಅಲ್ಲಿ ಬಹುಮಾನ ಕೊಟ್ಟರೆ ಮಕ್ಕಳಿಗೆ ಖುಷಿಯಾಗುತ್ತದೆ ಎಂದು ಆಟೋ ಮಾಡಿಕೊಂಡು ಇಲ್ಲಿಗೆ ಬಂದೆ ” ಎಂದರು. ಮಕ್ಕಳ ಖುಷಿಗಾಗಿ ಶಿಕ್ಷಕರು ಪಾಠ -ಪ್ರವಚನ ಅಲ್ಲದೆ ಮಕ್ಕಳ ಎಷ್ಟೋ ಸೇವೆಗಳನ್ನು ಮುಕ್ತ ಮನಸಿನಿಂದ, ಮಕ್ಕಳ ಮೇಲಿನ ಪ್ರೀತಿಯಿಂದ ಮಾಡುತ್ತಾರೆ. ಅವು ಯಾವುವೂ ಬೆಳಕಿಗೆ ಬರುವುದಿಲ್ಲ.ಅದೇ ಶಿಕ್ಷಕಿ ಶಾಲೆಯ ಕೈ ತೋಟಕ್ಕೆ ಒಂದು ಬಕೆಟ್ ನೀರನ್ನು ಮಕ್ಕಳಲ್ಲಿ ತರಿಸಿ ಹಾಕಿದರೆ ಅದು ಮಹಾ ಅಪರಾಧವಾಗುತ್ತದೆ!!ಗುರುದೇವ ರವೀಂದ್ರನಾಥ ಟಾಗೋರ್ ರವರ ಶಿಕ್ಷಣದ ಪರಿಕಲ್ಪನೆಯಲ್ಲಿ ಕ್ರಿಯಾಶೀಲ ಚಟುವಟಿಕೆಗಳಿಗೆ ಮೊದಲ ಆದ್ಯತೆ. ಮಕ್ಕಳ ಪಾಲಿಗೆ” ಜೀವಂತ ಪ್ರಯೋಗಾಲಯಗಳು ” ಎನಿಸಿರುವ ಶಾಲಾ ಕೈತೋಟಗಳು ಅವರಲ್ಲಿ ಪರಿಸರ ಪ್ರೇಮ ಬೆಳೆಸುವ ಮೂಲ ತಾಣಗಳು. ಅಲ್ಲಿ ಗಿಡ ನೆಡುವ, ಗಿಡಗಳಿಗೆ ನೀರುಣಿಸುವ, ಕಳೆ ಗಿಡಗಳನ್ನು ಕೀಳುವುದೇ ಮೊದಲಾದ ಚಿಕ್ಕ-ಪುಟ್ಟ ಕೆಲಸಗಳನ್ನು ಮಾಡಿಸುವುದು ಖಂಡಿತ ಅಪರಾಧವಲ್ಲ. ಸಸಿಗಳ ಬಗ್ಗೆ ಅರಿವು ಪಡೆದುಕೊಳ್ಳಲು ಇದು ಸಹಕಾರಿ. ಇದರಿಂದ ಮಕ್ಕಳು ಚಿಕ್ಕ ಪುಟ್ಟ ಜವಾಬ್ದಾರಿ ಗಳನ್ನು ನಿಭಾಯಿಸುವುದನ್ನೂ ಕಲಿಯುತ್ತಾರೆ. ಇದು ಪರಿಸರ ವಿಜ್ಞಾನದ ಕಲಿಕೆಯೇ ಅಲ್ಲವೇ? ಅಲ್ಲದೆ ನೀರಿನ ಬಕೆಟ್ ಹಿಡಿದ ಮಾತ್ರಕ್ಕೆ ಮಕ್ಕಳ ಕೈ ಪೆನ್ನು ಹಿಡಿಯಲು ಆಗದಷ್ಟು ಒರಟಾ ಗುವುದೂ ಇಲ್ಲ ( ಸತತವಾಗಿ ಕೆಲಸ ಮಾಡಿಸುವುದಿಲ್ಲ ತಾನೇ)ನಾವು ಬಾಲ್ಯದಲ್ಲಿ ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾಗ ಶಾಲಾ ಕೈತೋಟಕ್ಕೆ ನೀರು ಹಾಕುವುದರ ಜೊತೆಗೆ ಎಲ್ಲ ಕೆಲಸಗಳನ್ನು ಕೂಡಾ ಕ್ರಾಫ್ಟ್ ಫಿರೀಡ್ ಗಳಲ್ಲಿ ಬಹಳ ಖುಷಿಯಾಗಿಯೇ ಮಾಡುತ್ತಿದ್ದೆವು. ಯಾವ ಪೋಷಕರು ಕೂಡಾ ಅದು ತಪ್ಪು ಎಂದು ದೂರುತ್ತಿರಲಿಲ್ಲ. ಆದರೆ ಇಂದು ಮಕ್ಕಳಿಂದ ಯಾವುದೇ ಶಾಲಾ ಕೆಲಸ ಮಾಡಿಸುವುದು ಕೂಡಾ ಅಪರಾಧ ಎನಿಸುತ್ತಿದೆ. ಶಿಕ್ಷಕರು ಮಾಡುವ ಎಲ್ಲ ಕೆಲಸಗಳಲ್ಲೂ ತಪ್ಪನ್ನೇ ಹುಡುಕುವ ಮನೋಭಾವ ಬದಲಾಗಬೇಕಿದೆ.ಇಂದಿನ ದಿನ ಗಳಲ್ಲಿ ಶಾಲೆಯಲ್ಲಾಗಲೀ ಮನೆಗಳಲ್ಲಾಗಲೀ ಮಕ್ಕಳು ಓದುವುದು ಬಿಟ್ಟು ಕಲಿಕೆಗೆ ಪೂರಕವಾಗುವ , ಬೇರೆ ಯಾವುದೇ ಉಪಯುಕ್ತ ಕೆಲಸ ಗಳನ್ನು ಮಾಡುವುದಿಲ್ಲ.ಯಾವುದೇ ಸಾಮಾನ್ಯ ಜ್ಞಾನ ಸುಮ್ಮನೆ ಬರುವುದಿಲ್ಲ.ಅದಕ್ಕೇ ಇರಬೇಕು ಪಿಯುಸಿ ಗೆ ಬಂದರೂ ಬಹಳಷ್ಟು ಮಕ್ಕಳಿಗೆ 5 ಹೂಗಳ ಹೆಸರು, ಐದು ಹಣ್ಣುಗಳ ಹೆಸರು, ಗಿಡ ಮರಗಳ ಹೆಸರು ಯಾವುದೂ ಗೊತ್ತಿಲ್ಲ. ಕರು ಎನ್ನುವಲ್ಲಿ ದನದ ಮರಿ ಎನ್ನುವವರು ಪಿಯುಸಿಯಲ್ಲಿದ್ದಾರೆ. ಶಿಕ್ಷಕರ ಕೊರತೆ, ಮೂಲಭೂತ ಸೌಲಭ್ಯಗಳ ಅಭಾವ, ಭೋದನೇತರ ಕೆಲಸ ಕಾರ್ಯಗಳ ಹೊರೆ, ಮಕ್ಕಳ ಗೈರುಹಾಜರಿ,ಅವರನ್ನು ಮರಳಿ ಶಾಲೆಗೆ ಕರೆತರಬೇಕಾದ ಜವಾಬ್ದಾರಿ, ಆಡಳಿತಾತ್ಮಕ ಕೆಲಸ – ಕಾರ್ಯ ಗಳ ಒತ್ತಡದ ಇವೆಲ್ಲವುಗಳ ನಡುವೆಯೂ ಮಕ್ಕಳನ್ನು ಪ್ರೀತಿ ಮಮತೆಯಿಂದ ನೋಡಿಕೊಳ್ಳುವ ಅದೆಷ್ಟೋ ಶಿಕ್ಷಕ – ಶಿಕ್ಷಕಿಯರಿದ್ದಾರೆ. ಅವರನ್ನು ಶಾಘನೆಗೈಯದೆ ಎಲ್ಲಿಯೋ ಯಾರೋ ಒಬ್ಬ ಶಿಕ್ಷಕ ಎಲ್ಲಿಯೋ ಮಾಡಿದ ತಪ್ಪನ್ನು ಮತ್ತೆ ಮತ್ತೆ ಭಿತ್ತರಿಸುತ್ತಾ ಮಕ್ಕಳು ಶಾಲೆಯಲ್ಲಿ ಬಿದ್ದರೂ, ಎದ್ದರೂ ” ಶಿಕ್ಷಕರಿಗೆ ಜವಾಬ್ದಾರಿ ಇಲ್ಲ ” ಎಂದು ಶಿಕ್ಷಕ ಕುಲವನ್ನು ಜರೆಯುವುದು ಎಷ್ಟು ಸರಿ? ಅವರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ? ಜಯಲಕ್ಷ್ಮಿ ಕೆ

“ಶಿಕ್ಷಕರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ?!” ವಿಶೇಷಬರಹ ಜಯಲಕ್ಷ್ಮಿ .ಕೆ Read Post »

ಇತರೆ

ಹಾಸ್ಯಬರಹ ಗೊರೂರು ಅನಂತರಾಜು ಅವರ ಲೇಖನಿಯಿಂದ “ನಿಮ್ಮಪ್ಪ ಏನಂತಾ ಕರೀತಾರೆ..ಈಡಿಯಟ್..ಸ್ಟುಪಿಡ್..!”

ಹಾಸ್ಯ ಸಂಗಾತಿ ಗೊರೂರು ಅನಂತರಾಜು “ನಿಮ್ಮಪ್ಪ ಏನಂತಾ ಕರೀತಾರೆ.. ಈಡಿಯಟ್..ಸ್ಟುಪಿಡ್..!” ಮುದ್ದಣ್ಣ: ಮನೋರಮೆ, ನೀನು ಯುಗಾದಿ ಹಬ್ಬಕ್ಕೆ ಮಾಡಿರುವ ಪಾಯಸ ತುಂಬಾ ರುಚಿಯಾಗಿದೆ ಕಣೆ.ಮನೋರಮೆ: ಅದಕ್ಕೆ ಬೆಕ್ಕು ಬಾಯಿ ಹಾಕಿರದೆ ಇದ್ದಿದ್ರೇ..ಚೆನ್ನಾಗಿರುತ್ತಿತ್ತು. ಮು: ರಾತ್ರಿ ಒಂಭತ್ತು ಗಂಟೇಲಿ ಎಲ್ಲಿಗ್ಹೊರಟೆ..?ಮ: ನರಕಕ್ಕೆ.. ಇಲ್ಲಿ ಮೂರ‍್ಹೊತ್ತು ನಿಮ್ಮತ್ರ ಜಗಳ ಆಡ್ಕೊಂಡು ಇರೋದಕ್ಕಿಂತ ಅಲ್ಲಿ ಇರೋದೆ ವಾಸಿ.ಮು: ನರಕದಲ್ಲಿರುವ ನಿನ್ನ ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು. ಸದ್ಯ ಸರ್ಕಾರದ ಉಚಿತ ಬಸ್ಸಿನಲ್ಲಿಯೇ ಸಾವಕಾಶವಾಗಿ ಹೋಗಿ ಬಾ. ಮ: ರೀ, ನೀವು ಈ ರೀತಿ ಜಗಳ ಆಡ್ತಿದ್ರೆ ಅಕ್ಕಪಕ್ಕ ಮನೆಯವರಿಗೆ ಕೇಳಿಸುತ್ತೆ..ಮು: ಸರಿ ಹಾಗಾದ್ರೇ, ಬೇರೆ ಯಾವ ರೀತಿ ಜಗಳ ಆಡಬೇಕು ಅಂತ ನೀನೇ ಹೇಳು. ದಿನಾ ರಾತ್ರಿ ಬಿಗ್ ಬಾಸ್ ಹಾಕ್ಕೊಂಡು ನೋಡ್ತ ಇರ‍್ತಿಯಲ್ಲಾ.. ಅದು ಅಕ್ಕಪಕ್ಕ ಮನೆಗೆ ಹಾಗೇ ಕೇಳಿಸುತ್ತೇ ತಾನೇ.. ಮ: ರೀ, ನಾನು ಮುಂದೆ ದಪ್ಪ ಆದ್ರೂ ನೀವು ಇದೇ ರೀತಿ ಪ್ರೀತಿ ಮಾಡ್ತೀರಾ..?ಮು: ಅದ್ಹೇಗೆ ಸಾಧ್ಯ..?ಮ: ತಾಳಿ ಕಟ್ಟುವ ವೇಳೆ ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿದ್ರಿ..!ಮು: ನಿನ್ನ ಕಷ್ಟಗಳಲ್ಲಿ ಭಾಗಿಯಾಗುತ್ತೇನೆ ಎಂದಷ್ಟೇ ಪ್ರಮಾಣ ಮಾಡಿದ್ದೇನೆ. ಆದರೆ ನೀನು ದಪ್ಪ ಆಗುವ ವಿಚಾರದಲ್ಲಿ ಮಾತು ಕೊಟ್ಟಿಲ್ಲ..ದಯವಿಟ್ಟು ಒಂದ್ಹೊತ್ತು ಊಟ ಬಿಟ್ಟು ಡಯಾಟ್ ಮಾಡು. ಐದು ವರ್ಷದಲ್ಲಿ ನೀನು ಗ್ಯಾರಂಟಿ ತೆಳ್ಳಗಾಗ್ತಿಯಾ.. ಮ: ರೀ, ನೀವು ಪಿಹೆಚ್‌ಡಿ ಮಾಡಿದ್ರಲ್ಲಾ. ನಿಮ್ಮನ್ನೀಗ ಡಾಕ್ಟರ್ ಅಂತ ಕರಿಲೋ ಫ್ರೊಫೆಸರ್ ಅಂತ್ಲೇ ಕರಿಲೋ..?ಮು: ನಿನ್ನಿಷ್ಟ ಬಂದಾಗೆ ಕರಿ..ಮ: ನಿಮ್ಮಪ್ಪ ಏನಂತ ಕರೀತಾರೆ..?ಮು: ಈಡಿಯಟ್.. ಸ್ಟುಪಿಡ್..! ಮ: ಏಳ್ರೀ ಹತ್ತು ಗಂಟೆಗ ಗೊರಕೆ ಹೊಡಿತ್ತಿದ್ದೀರಾ..ಮು: ಯಾಕೆ ನನ್ನನ್ನು ಎಬ್ಬಿಸಿದೆ..?ಮ: ರಾತ್ರಿ ಹತ್ತು ಗಂಟೆಗೆ ಸರಿಯಾಗಿ ನಿದ್ರೆ ಮಾತ್ರೆ ಕೊಡಿ ಅಂತ ಡಾಕ್ಟರ್ ಹೇಳಿದ್ರಲ್ಲಾ..! ಮು: ಇದೇ ತಿಂಗಳು ಇಪ್ಪತ್ತಕ್ಕೆ ನನ್ನ ಫ್ರೆಂಡ್ ಮಗನ ಮದುವೆ ಇದೆ. ನಾವಿಬ್ರೂ ಹೋಗಲೇಬೇಕು. ನನಗೆ ಅವರು ಆತ್ಮೀಯ ಮಿತ್ರರು. ಮರೆಯದೆ ನೆನಪು ಮಾಡು.ಮ: ಇವತ್ತು ತಾರೀಖು ಇಪ್ಪತ್ತೆರೆಡು..!ಮು: ಹಾಗಾದರೇ ನಾವು ಮದುವೆ ಫಂಕ್ಷನ್ ಮಿಸ್ ಮಾಡ್ಕೊಂಡ್ವಿ ಅಲ್ಲವಾ..?ಮ: ನೀವು ನಾನು ಮೊನ್ನೆ ಮದುವೆಗೆ ಹೋಗಿ ಗಡದ್ದಾಗಿ ತಿಂದು ಬಂದಿಲ್ವಾ..! ಮ: ಇದೇನ್ರೀ ಮನೆಗೆ ಇಷ್ಟು ಬೇಗ ಬಂದ್ರೀ..?ಮು: ನಮ್ಮ ಬಾಸ್ ನರಕಕ್ಕೆ ಹೋಗು ಅಂತ ಬೈದ್ರು.. ಅದಕ್ಕೆ ಇಲ್ಲಿಗೆ ಬಂದೆ. ಮ: ರೀ, ಒಂದು ನಿಮಿಷ ಬಂದು ಬಿಡ್ತಿನಿ. ಮನೇಲಿರಿ.ಮು: ಎಲ್ಲಿಗೆ ಹೋಗ್ತಿದ್ದಿಯಾ..?ಮ: ಪಕ್ಕದ್ಮನೆ ಪದ್ಮಕ್ಕನ ಮನೆಗೆ ಸಕ್ಕರೆ ಸಾಲ ತರ‍್ಲಿಕ್ಕೆ..ಮು: ಸಾಲ ಯಾಕೆ ತರಬೇಕು. ನಿನ್ನೆ ತಾನೇ ೨ ಕೆಜಿ ಸಕ್ಕರೆ ತಂದಿದ್ದೀನಲ್ಲ.ಮ: ಈಗ ನಾನು ಹೋಗ್ದೆ ಇದ್ರೇ ಅವಳೇ ಸಾಲ ಕೇಳ್ಕೊಂಡು ಇಲ್ಲಿಗೆ ಬಂದುಬಿಡ್ತಾಳೆ..! ಮ: ರೀ, ನೀವು ನನಗೆ ಮುತ್ತಿನ ಹಾರ ಕೊಡಿಸುತ್ತಿದ್ದಂತೆ ಕನಸು ಬಿತ್ತು.ಮು: ಹೌದಾ..! ಅದನ್ನು ಭದ್ರವಾಗಿ ಬೀರುನಲ್ಲಿ ಇಡು. ಮ: ರೀ, ನಮಗೆ ಮಕ್ಕಳಿಲ್ಲ. ಅದಕ್ಕೆ ನನ್ನ ತಾಯಿ ಮನೆಯಿಂದ ಕೊಟ್ಟ ಮನೆಯನ್ನು ಯಾರಾದ್ರೂ ಸನ್ಯಾಸಿಗೆ ಮಾರಿಬಿಡೋಣವೆಂದುಕೊಂಡಿದ್ದೇನೆ..ಮು: ಬಾಗಿಲು ತೆಗಿಮ: ಎಲ್ಲಿಗೆ ಹೋಗ್ತಿರಾ..?ಮು: ಸನ್ಯಾಸಿಯಾಗಲಿಕ್ಕೆ..! ಮ: ರೀ, ನಾಳೆ ನಿಮ್ಮ ಹ್ಯಾಪಿ ಬರ್ತಡೆ. ಏನ್ ಗಿಫ್ಟ್ ಕೊಡ್ಲಿ..?ಮು: ಡ್ಯೆವೋರ್ಸ್ ಕೊಟ್ಟುಬಿಡು.. ಗೊರೂರು ಅನಂತರಾಜು,

ಹಾಸ್ಯಬರಹ ಗೊರೂರು ಅನಂತರಾಜು ಅವರ ಲೇಖನಿಯಿಂದ “ನಿಮ್ಮಪ್ಪ ಏನಂತಾ ಕರೀತಾರೆ..ಈಡಿಯಟ್..ಸ್ಟುಪಿಡ್..!” Read Post »

ಇತರೆ, ಶಿಕ್ಷಣ

“ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ನಾಗರತ್ನ. ಹೆಚ್ ಗಂಗಾವತಿ

ವಿದ್ಯಾರ್ಥಿ ಸಂಗಾತಿ ನಾಗರತ್ನ. ಹೆಚ್ ಗಂಗಾವತಿ “ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ಪರೀಕ್ಷೆಗಳು ವಿದ್ಯಾರ್ಥಿಗಳ ಜ್ಞಾನ ಕೌಶಲ್ಯ ಮತ್ತು ವಿಷಯದ ಆಳವಾದ ತಿಳುವಳಿಕೆಯನ್ನು ಅಳೆಯುವ ಪ್ರಮುಖ ಶೈಕ್ಷಣಿಕ ಮೌಲ್ಯಮಾಪನ ಸಾಧನವಾಗಿದೆ ಇವು ಶಿಸ್ತು ,ಸಮಯ, ನಿರ್ವಹಣೆ ಮತ್ತು ಕಠಿಣ ಪರಿಶ್ರಮವನ್ನು ಉತ್ತೇಜಿಸುತ್ತವೆ. ವೈಯಕ್ತಿಕ ಬೆಳವಣಿಗೆಗೆ ಮತ್ತು ಮುಂದಿನ ಹಂತದ ಶಿಕ್ಷಣದ ಅಗತ್ಯವಾದ ತಾರ್ಕಿಕ ಚಿಂತನೆಗಳನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತವೆ ಅಷ್ಟೇ ಅಲ್ಲದೆ ಇದು ಕಲಿಕೆಯ ಪ್ರಕ್ರಿಯೆ ಪ್ರಮುಖ ಭಾಗವಾಗಿದೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಪ್ರಮುಖ ಸಾಧನವಾಗಿದೆ. ಪರೀಕ್ಷೆಗಳು ವಿದ್ಯಾರ್ಥಿ ಒಂದು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ವಿಷಯವನ್ನು ಕಲಿತಿದ್ದಾನೆ ಮತ್ತು ವಿಷಯವನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಿದ್ದಾನೆ ಎಂಬುದನ್ನು ನಿರ್ಣಯಿಸುವುದು ಹಾಗೂ ಕೇವಲ ಅಂಕ ಗಳಿಗಾಗಿ ಅಲ್ಲ ಬದಲಿಗೆ ವಿಷಯದ ಮೇಲಿನ ಹಿಡಿತವನ್ನು ಪರೀಕ್ಷಿಸುತ್ತದೆ. ಹಾಗೂ ಪರೀಕ್ಷೆಗಳು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವುದಷ್ಟೇ ಅಲ್ಲದೆ ಅವನ ಜ್ಞಾನವನ್ನು ಅಳೆಯುವಂತಹ ಒಂದು ಸಾಧನವು ಕೂಡ ಹೌದು. ಮತ್ತು ವಿದ್ಯಾರ್ಥಿಗೆ ಸಮಯವನ್ನು ಹಾಗೂ ಬರವಣಿಗೆ ಕೌಶಲ್ಯವನ್ನು ಯಾವ ರೀತಿ ಉಪಯೋಗ ಸುವಂತಹ ಕಲೆಯನ್ನ ಬಳಸುತ್ತದೆ ಮತ್ತು ಎಷ್ಟೇ ಸವಾಲುಗಳು ಇದ್ದರೂ ಸಹ ಪರೀಕ್ಷೆಯಲ್ಲಿ ಉತ್ತಮ ಬರೆಯಬೇಕು ಎಂಬ ಛಲವನ್ನ ಮೂಡಿಸುತ್ತದೆ. ಹಾಗೂ ವಿಷಯದ ಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ . ವೈಯಕ್ತಿಕ ಬೆಳವಣಿಗೆಗೆ ಮತ್ತು ಮುಂದಿನ ಹಂತದ ಶಿಕ್ಷಣಕ್ಕೆ ಅಗತ್ಯವಾದ ಜ್ಞಾನವನ್ನು ಬೆಳೆಸುತ್ತದೆ. ಕಲಿಕೆಯ ಗುಣಮಟ್ಟ ಮತ್ತು ವಿಷಯದ ಜ್ಞಾನದ ಮಟ್ಟವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪರೀಕ್ಷೆಗಳು ಸಹಾಯ ಮಾಡುತ್ತವೆ. ಓದಲು ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವುದಷ್ಟೇ ಅಲ್ಲದೆ ಪ್ರೇರಣೆಯನ್ನು ಒದಗಿಸುತ್ತದೆ ಪರೀಕ್ಷೆಯು ಕೇವಲ ಅಂಕಗಳಿಗಾಗಿ ಅಲ್ಲ ಬದಲಾಗಿ ಜ್ಞಾನವನ್ನು ಅಭಿವೃದ್ಧಿಪಡಿಸುವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಒಂದು ಪ್ರಕ್ರಿಯೆಯಾಗಿದೆ. ಹಾಗೂ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವುದರಿಂದ ತಪ್ಪದೇ ಸಮಯಕ್ಕೆ ಸರಿಯಾಗಿ ಹಾಜರಾಗುವುದು ಅಷ್ಟೇ ಮುಖ್ಯವಾಗಿರುತ್ತದೆ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಹಾಗಾಗಿ ಪರೀಕ್ಷೆಗಳು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ ಹಾಗೂ ಪರೀಕ್ಷೆಗಳು ವಿದ್ಯಾರ್ಥಿಯ ಜೀವನದಲ್ಲಿ ಮಹತ್ವವಾದಗಳು *ಉದಾಹರಣೆಗೆ*ಶಿಕ್ಷಣ ಎಷ್ಟು ಮುಖ್ಯ ಎನ್ನುವುದನ್ನು ನೋಡುವುದಾದರೆ ಹೀಗೆ ಒಂದು ಊರಿನಲ್ಲಿ ಗಿರೀಶ ಮತ್ತು ಹರೀಶ್ ಎನ್ನುವ ಇಬ್ಬರು ಗೆಳೆಯರಿದ್ದರು.ಇಬ್ಬರೂ ಓದಿದಲ್ಲಿ ಅಷ್ಟೇ ಜಾಣನಿದ್ದರೂ ಕೂಡ ಗಿರೀಶನಿಗೆ ಅನಾರೋಗ್ಯದ ಕಾರಣದಿಂದ ಪರೀಕ್ಷೆಯಲ್ಲಿ ಹಾಜರಾಗದೆ ಹಿಂದುಳಿದ ತೊಡಗಿದ ಆಗ ಹರೀಶನು ಆತನಿಗೆ ಉತ್ತಮ ಅಂಕ ಗಳಿಸಲು ತನಗೆ ತಿಳಿದಂತಹ ಎಲ್ಲಾ ಸಲಹೆಗಳನ್ನು ನಿತ್ಯವೂ ಹೇಳುತ್ತಾ ಬಂದನು ಆಗ ಆತನು ಕೂಡ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮತ್ತು ಅವರಿಬ್ಬರು ಕೂಡಿ ತಮ್ಮ ಗ್ರಾಮದಲ್ಲಿ ಇರುವಂತಹ ಅನಕ್ಷರಸ್ಥರನ್ನು ಸೇರಿಸಿನಿತ್ಯವೂ ಸಂಜೆ ಸಮಯದಲ್ಲಿ ಅವರುಗಳಿಗೆ ಉತ್ತಮ ಜ್ಞಾನವನ್ನು ನೀಡುತ್ತಾ ಬಂದರು ಆಗ ಊರಿಗೆ ಊರೇ ಸಾಕ್ಷರತಾ ಗ್ರಾಮವಾಗಿ ಪರಿವರ್ತನೆಗೊಂಡಿತು.ಅದಕ್ಕೆ ಹೇಳುವುದು *ವಿದ್ಯೆ ಕದಿಯಲಾರದ ಸಂಪತ್ತು*ಹೀಗೆ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪರೀಕ್ಷೆಗಳು ಅವರ ಜೀವನವನ್ನೇ ಬದಲಾಯಿಸುವಂತಹ ಮಹತ್ವದ ಪಾತ್ರವನ್ನು ವಹಿಸುತ್ತವೆ ಹೀಗಾಗಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಕೇವಲ ಅಂಕಗಳಿಗಾಗಿ ಅಷ್ಟೇ ಅಲ್ಲದೆ ಜ್ಞಾನಕ್ಕಾಗಿ ಓದುವುದು ಅಷ್ಟೇ ಮುಖ್ಯ ಸಮಯವನ್ನು ವ್ಯರ್ಥ ಮಾಡದೆ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಪರೀಕ್ಷೆಗಳು ಪ್ರಮುಖ ಸಾಧನಗಳಾಗಿವೆ. ನಾಗರತ್ನ. ಹೆಚ್ ಗಂಗಾವತಿ

“ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ನಾಗರತ್ನ. ಹೆಚ್ ಗಂಗಾವತಿ Read Post »

ಇತರೆ

“ವಿಶ್ವ  ಮಾತೃ ಭಾಷಾ ದಿನ” ಗಾಯತ್ರಿ ಸುಂಕದ

ಭಾಷಾ ಸಂಗಾತಿ “ವಿಶ್ವ  ಮಾತೃ ಭಾಷಾ ದಿನ” ಗಾಯತ್ರಿ ಸುಂಕದ ನಮ್ಮ ಜೀವನದಲ್ಲಿ  ತಾಯಿ, ತಾಯ್ನಾಡು, ಹೇಗೆ ಮುಖ್ಯವೋ ಹಾಗೆ ತಾಯಿ ನುಡಿ ಕೂಡ ಅಷ್ಟೇ ಮುಖ್ಯ.ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎನ್ನುವಂತೆ ನಮ್ಮ ಮಾತೃ ಭಾಷೆ ಶುರು ಆಗುವುದು ನಮ್ಮ ಮನೆಯಲ್ಲಿ.ಮಾತೃ ಭಾಷೆ ನಮ್ಮ ಭಾವನೆಗಳಿಗೆ ಕನ್ನಡಿ ಇದ್ದ ಹಾಗೆ.ನಾವು ಎಷ್ಟೇ ಬೇರೆ ಭಾಷೆಗಳಲ್ಲಿ ಪರಿಣಿತಿ ಇದ್ದರೂ. ನಮ್ಮ ಭಾವನೆಗಳು ಮಾತೃಭಾಷೆ ಮುಖಾಂತರ ಹೊರ ಬರುತ್ತವೆ.ನಮಗೆ ದುಃಖ ಬಂದಾಗ ಅಯ್ಯೋ ರಾಮ  ಅನ್ನುತ್ತವೆಯೋ ಹೊರತು ಬೇರೆ ಯಾವ ಶಬ್ದ ಗಳು ಬರುವುದಿಲ್ಲ.ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ದೇವರಿಗೆ ಬೇಡಿ ಕೊಳ್ಳಬೇಕಾದಾಗ. ಕೇವಲ ಮಾತೃಭಾಷೆಯಲ್ಲಿ ಬೇಡಿಕೊ, ದೇವರು ಒಲಿಯುತ್ತಾನೆ ಎನ್ನುತ್ತಿದ್ದರು. ಹೀಗಾಗಿಯೇ ಈಗಲೂ ದೇವರ ಮುಂದೆ ನಿಂತಾಗ ನಮ್ಮ ಪ್ರಾರ್ಥನೆಗಳು ನಮ್ಮ ಆಡು ಭಾಷೆಯಲ್ಲಿ ಹೊರ ಬರುತ್ತವೆ.ನಮ್ಮ ಮಾತೃಭಾಷೆ ನಮ್ಮನ್ನು ಪ್ರತಿನಿಧಿಸುತ್ತದೆ. ಲಂಬಾಣಿ ಭಾಷೆ, ಕೊಂಕಣಿ ಭಾಷೆ,  ತುಳು ಭಾಷೆ ಈಗಲೂ ಉಳಿಯಬೇಕಾದರೆ ಮುಖ್ಯ ಕಾರಣ ಎಂದರೆ ಅವು ಕೆಲ ಪ್ರದೇಶದ ಜನರ ಮಾತೃಭಾಷೆ  ಆಗಿವೆ. ಕೆಲವೊಂದು  ಮಾತೃ ಭಾಷೆಗಳು ಲಿಪಿ ಇಲ್ಲದೆ ಇದ್ದರೂ ಈಗಲೂ ತಮ್ಮ ಅಸ್ತಿತ್ವವನ್ನು ಉಳಿಸಿ ಕೊಂಡಿವೆ.ನಮಗೆ ಕೆಟ್ಟ  ಕನಸು ಬಿದ್ದರೆ ಅಮ್ಮ ಎಂದು ಕೂಗುತ್ತೇವೆ ಹೊರತು  ಬೇರೆ ಯಾವ. ಭಾಷೆ ನಮ್ಮನ್ನು ಕೈ ಹಿಡಿಯುವುದಿಲ್ಲ.ಬನ್ನಿಮಾತೃ ಭಾಷೆ ಯನ್ನೂ ಉಳಿಸಿ ಬೆಳೆಸೋಣ. ಗಾಯತ್ರಿ ಸುಂಕದ

“ವಿಶ್ವ  ಮಾತೃ ಭಾಷಾ ದಿನ” ಗಾಯತ್ರಿ ಸುಂಕದ Read Post »

ಇತರೆ, ಲಹರಿ

“ಒಡಲಿನ ನೋವಿಗೆ ಮಡಿಲಿನ  ಸಾಂತ್ವನ”        ಜಯಶ್ರೀ.ಜೆ.ಅಬ್ಬಿಗೇರಿ

ಲಹರಿ ಸಂಗಾತಿ “ಒಡಲಿನ ನೋವಿಗೆ ಮಡಿಲಿನ  ಸಾಂತ್ವನ”        ಜಯಶ್ರೀ.ಜೆ.ಅಬ್ಬಿಗೇರಿ  ಮೊನ್ನೆ ಪೇಟೆಯಲ್ಲಿ ಗೆಳತಿ ಸುಮತಿ ಬಹಳ ದಿನಗಳ ನಂತರ  ತನ್ನ ಮಗಳೊಂದಿಗೆ ಭೇಟಿಯಾದಳು. ಮುಖದಲ್ಲಿ ಮೊದಲಿದ್ದ ಗೆಲುವು ಕಾಣಲಿಲ್ಲ. ನಗೆಯೂ ಮುಖದಿಂದ ದೂರವೇ ಉಳಿದಿತ್ತು. ನಾನೇ ಒತ್ತಾಯಿಸಿ ಹೊಟೆಲ್ಲಿಗೆ ಕರೆದೊಯ್ದೆ. ಸದಾ ಉತ್ಸಾಹದ ಕಾರಂಜಿಯoತೆ ಚಿಮ್ಮುತ್ತಿದ್ದ ನೀನು ಇದೇಕೆ ಇಷ್ಟು ಸಪ್ಪಗಾಗಿ ಬಿಟ್ಟಿದ್ದಿಯಾ? ಎಂದಾಗ ಕಣ್ಣಂಚಿನಲ್ಲಿ ನೀರು ತಂದು ತನ್ನ ಪ್ರವರ ಬಿಚ್ಚಿಟ್ಟಳು. ಇಬ್ಬರೂ ದುಡಿತೀವಿ ಹೀಗಾಗಿ ಮನೆಯಲ್ಲಿ ಎಲ್ಲದಕ್ಕೂ ಆಳು. ಹಣಕ್ಕಂತೂ ಕೊರತೆಯಿಲ್ಲ.ಮುದ್ದಾದ ಮಗಳು ಮನೆಯಂಗಳದಲ್ಲಿ ನಲಿದಾಡ್ತಾಳೆ. ಇವರದೇ ಸಮಸ್ಯೆ ಆಗಿದೆ.ಎಂದಳು.  ಇಷ್ಟೆಲ್ಲಾ ಇರೋವಾಗ ನಿಮ್ಮ ಪತಿದೇವರದು ಏನು ಸಮಸ್ಯೆ  ಎಂದು ಕುತೂಹಲದಿಂದ ಪ್ರಶ್ನಿಸಿದೆ. ಅದಕ್ಕೆ ಸುಮತಿ,ಮೊದಲೆಲ್ಲ ಚೆನ್ನಾಗಿಯೇ ಇದ್ದ ರಮೇಶ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು  ಪಾರ್ಟಿ ಕ್ಲಬ್ ಪಬ್‌ನ್ನು ಮನರಂಜನೆಗೆoದು  ರೂಢಿಸಿಕೊಂಡು ಇತ್ತೀಚಿಗೆ ಅತಿಯೆನಿಸುವಷ್ಟು ಕುಡಿದು ಮನೆಗೆ ತಡರಾತ್ರಿ  ಬಂದು ಸುಮ್ಮನೆ ಮಲಗಿ ಬಿಡ್ತಾರೆ. ಮೊದಲೇ ಮಾತು ಕಮ್ಮಿ ಈಗಂತೂ ಮನೆಯಲ್ಲಿ ಮಾತಿಲ್ಲ ಕತೆಯಿಲ್ಲ.ದಿನಕ್ಕೆ ಒಂದೊ ಎರಡೊ ಮಾತನಾಡಿದರೆ ಹೆಚ್ಚು  ನಾನಾಗಲೇ ಮೇಲೆ ಬಿದ್ದು ಮಾತನಾಡಿಸಿದಾಗ ಹೂಂ ಹಾಂ ಅಷ್ಟೆ, ಸಿಟ್ಟಿಗೆದ್ದು ಜೋರಾಗಿ ಕಿರುಚಿದರೆ ಏನೂ ಪ್ರಯೋಜನವಿಲ್ಲ. ನನಗೇನಾಗಿಲ್ಲ ನಾನು ಇರೋದೆ ಹೀಗೆ ಮೊದಲಿನಿಂದ ಹೀಗೆ ಇದ್ದೀನಿ ನಿನಗೆ ಹಾಗೆನಿಸ್ತಿದೆ ಅಂತ ಹೇಳುತ್ತ ಜಾಗ ಖಾಲಿ ಮಾಡ್ತಾರೆ.ಸಂಬoಧಿಕರ ಮದುವೆ ಮುಂಜವಿಗoತೂ ಜಪ್ಪಯ್ಯ ಅಂದರೂ ಬರೋದಿಲ್ಲ.  ಮಗಳ ಜೊತೆ ಮಾತು ಅಷ್ಟಕ್ಕಷ್ಟೆ. ದೈಹಿಕ ಸುಖ ಬೇಕೆಂದಾಗ ಬಳಿ ಬರುತ್ತಾರೆ. ಇಂಥ ಮದುವೆಯಿಂದ ಪಡೆಯುತ್ತಿರುವದು ಏನೂ ಇಲ್ಲ. ನನ್ನಲ್ಲಿರುವ ಪ್ರೀತಿಯ ಭಾವನೆಗಳೆಲ್ಲ ಬತ್ತಿ ಹೋಗುತ್ತಿವೆ. ದಿನ ದಿನಕ್ಕೆ ಬದುಕು ಕ್ರೂರವೆನಿಸುತ್ತಿದೆ. ಏನು ಮಾಡಲೂ  ತೋಚುತ್ತಿಲ್ಲ. ಕೋರ್ಟ್ ಕಛೇರಿ ಮೆಟ್ಟಿಲು  ಹತ್ತಿದರೆ ಮನೆ ಮರ್ಯಾದೆ ಪ್ರಶ್ನೆ.ದಿನವೂ ವಿಷ ನುಂಗತಿದಿನಿ. ಮಗಳ ಮುಖ ನೋಡಿ ಅವರೊಂದಿಗೆ ದಿನ ದೂಡತಿದಿನಿ. ಎಂದಾಗ  ಮಗಳು ಸುಮತಿಯ ಕಣ್ಣೊರೆಸುತ್ತ ಅವ್ವಾ ,ಅಪ್ಪ ಮೊದಲಿನಿಂತೆ ಆಗ್ತಾರೆ ಬಿಡವ್ವ ನೀ ಆಳಬೇಡ ಎಂದಳು. ಸುಮತಿ ಮಗಳ ಕೆನ್ನೆಗೆ ಮುತ್ತಿಕ್ಕಿ ಕಿರುನಗೆ ಬೀರಿದಳು. ತಾಯಿಯ ಖಾಸಗಿ ಜಗತ್ತು ಹೆಣ್ಣುಮಕ್ಕಳಿಗೆ ಹೆಚ್ಚು ಅರ್ಥವಾಗುತ್ತದೆ.ತಾಯಿ ಮಗಳ  ನಡುವಿರುವ ಸಲುಗೆ, ಮುಕ್ತವಾಗಿ ಹಂಚಿಕೊಳ್ಳುವ ಮನದಾಳದ ಮಾತುಗಳು ಹೆಣ್ಣು ಹೆತ್ತ ತಾಯಂದಿರಿಗೆ ಅದರ ಸೌಖ್ಯ ತಿಳಿಯೋದು. ಹೆಣ್ಣು ಅಂದರೆ ಹುಣ್ಣು ಅಂತ ತಿಳಿಯೋ ಜನರೇ ಜಾಸ್ತಿ ಆದರೆ ಹೆಣ್ಣು ಮಕ್ಕಳು ತೋರುವ ಆತ್ಮೀಯತೆ ಆಪ್ತತೆ ಮನಸ್ಸಿಗೆ ಅತಿಯಾದ ಆನಂದ ಮತ್ತು ಹಿತ ನೀಡುವದಂತೂ ಖಚಿತ. ಎಷ್ಟೊ ಬಾರಿ ಗಂಡನೊoದಿಗೆ ಹಂಚಿಕೊಳ್ಳಲಾಗದ ಮನದ ದುಗುಡಗಳನ್ನುಅವ್ವನೊಂದಿಗೆ ಹಂಚಿಕೊoಡು ನಿರಾಳವಾಗಿ ಮತ್ತೆ ಜೀವನೋತ್ಸಾಹ ತುಂಬಿಕೊಳ್ಳುತ್ತಾಳೆ.  ರಶ್ಮಿಗೆ ತಾಯಿಯೇ ಜಗತ್ತು. ಮಗಳ ಬದುಕು ಹಸನಾಗಿರಲೆಂದು ಬಯಸುವ ತಾಯಿ ಮಗಳ ಬದುಕಿನಲ್ಲಿ ಸಣ್ಣ ಬಿರುಕು ಬಿಡುತ್ತಿದೆ ಎಂದು ತಿಳಿದರೆ ಎದೆ ಒಡೆದುಕೊಳ್ಳುತ್ತಾಳೆಂದು ರಶ್ಮಿ ಅತ್ತೆಯ ಮನೆಯಲ್ಲಿ ಕೊಡುವ ಕಿರುಕುಳಗಳನ್ನು ಗಂಡನ ವರ್ತನೆಯಲ್ಲಾದ ಬದಲಾವಣೆಯನ್ನು ಬಾಯಿಮುಚ್ಚಿ ಸಹಿಸಿಕೊಳ್ಳುತ್ತಿದ್ದಾಳೆ.ಕತ್ತಲ ಕೋಣೆಯಲ್ಲಿ ಕಣ್ಣಿರು ಹರಿಸುತ್ತಿದ್ದಾಳೆ. ಇದು ರಶ್ಮಿಯ ತಾಯಿಗೆ ತಿಳಿದಾಗ ದೇವರು ಒಳ್ಳೆಯವರನ್ನೇ ಪರೀಕ್ಷಿಸುತ್ತಾನೆ ಅಂತ ನೀನೇ ಹೇಳತಿದ್ದೆಲ್ಲವ್ವಾ ಈಗ ಕಷ್ಟದ ಕಾಲ ಮುಂದೊoದು ದಿನ ಸುಖ ಬಂದೇ ಬರುತ್ತದೆ. ಎಂದು ನೊಂದ ತಾಯಿಗೆ ಸಾಂತ್ವನದ ಮಾತುಗಳನ್ನಾಡುತ್ತ ಉಕ್ಕಿ ಬರುವ ದುಃಖವನ್ನು  ತಡೆಯುತ್ತಾಳೆ. ಹೆಣ್ಣಿಗೆ ತವರೆಂದರೆ ಪಂಚ ಪ್ರಾಣ ಅದರ ನಂಟನ್ನು ಕಳೆದುಕೊಳ್ಳಲು ಅವಳಿಷ್ಟ ಪಡುವದಿಲ್ಲ. ಮಗಳನ್ನು ತಮ್ಮನಿಗೋ ಅಣ್ಣನ ಮಗನಿಗೋ ಧಾರೆಯೆರೆದು ತವರನ್ನು ಉಳಿಸಿಕೊಳ್ಳಲು ಹಂಬಲಿಸುತ್ತಾಳೆ. ಹೀಗೆ ತವರನ್ನು ಉಳಿಸಿಕೊಳ್ಳಲು ಶಾಂತಮ್ಮ ಮಗಳನ್ನು ಅಣ್ಣನ ಮಗನಿಗೆ ಕೊಟ್ಟು ತನ್ನ ತವರನ್ನು ಉಳಿಸಿಕೊಳ್ಳುವಲ್ಲಿ ಗೆದ್ದಿದ್ದಳು. ಅಳಿಯ ಬೇರೊಬ್ಬಳೊಂದಿಗೆ ಅನೈತಿಕ ಸಂಬoಧದಲ್ಲಿ ತೊಡಗಿ ಮಗಳಿಗೆ ಕೊಡುವ ಚಿತ್ರ ಹಿಂಸೆ ಕಂಡು ಕಂಗಾಲಾಗಿದ್ದಾಳೆ. ತನ್ನ ಮಗಳ ಬಾಳನ್ನು ತಾನೇ ಹಾಳು ಮಾಡಿದನೆಂದು ನಿಂತ ನೆಲವೇ ಬಾಯಿ ಬಿಟ್ಟರೆ ಎಲ್ಲಿ ಹೋಗೋದು? ಎಂದು ಹಾಸಿಗೆ ಹಿಡಿದು ಕೊರಗುತ್ತಿರುವ ತಾಯಿಗೆ ಮದುವೆ ಅನ್ನೋದು ಸ್ವರ್ಗದಲ್ಲಾಗಿರುತ್ತದೆ ಇದರಲ್ಲಿ ನಿನ್ನದೇನು ತಪ್ಪಿಲ್ಲವ್ವಾ ಎಂದು ಶಾಂತಮ್ಮನಿಗೆ ಮಗಳು ಸವಿತಾ ತನ್ನ ದುಃಖವನ್ನೆಲ್ಲ ಮರೆಮಾಚಿ ಸುಖ ದುಃಖಗಳನ್ನು ಸಮನಾಗಿ ನೋಡಬೇಕೆಂದು, ಇಂದು  ದುಃಖವಾದರೆ ನಾಳೆ ಸುಖ ಎಂದು ತತ್ವಜ್ಞಾನಿಯಂತೆ ಮಾತನಾಡುತ್ತ ಬೇಗನೆ ಹುಷಾರಾಗುವಂತೆ ಸೂಚಿಸುತ್ತಾಳೆ. ಒಬ್ಬಳೇ ಮಗಳೆಂದು ತುಂಬಾ ಪ್ರೀತಿಯಿಂದ ಸಾಕಿ ಸಲುಹಿ ಮದುವೆ ಮಾಡಿ ಅಳಿಯನನ್ನು ಮನೆಗೆ ಕರೆ ತಂದ ರತ್ನಮ್ಮ ಅಳಿಯನಿಗೆ ದಿನನಿತ್ಯ ಹಾಲು ತುಪ್ಪ ಸುರಿದರೂ ಆತನ ದರ್ಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಮನೆಗೆ ಸಂಬoಧಿಕರು ಆಪ್ತ ಸ್ನೇಹಿತರು ಬಂದರoತೂ ದರ್ಪ ಅತಿರೇಕಕ್ಕೇರುತ್ತೆ. ಇದು  ಮಗಳಿಗೂ ನುಂಗಲಾರದ ತುತ್ತಾಗಿದೆ. ಎಷ್ಟೋಸಾರಿ ಆತನ ವರ್ತನೆಗೆ ತಾಯಿ ಮಗಳ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಅಪ್ಪ ದುರ್ವ್ಯಸನದಲ್ಲಿ ಮುಳುಗಿರದಿದ್ದರೆ ಅಳಿಯನ ದರ್ಪಕ್ಕೆ ಕಡಿವಾಣ ಹಾಕಬಹುದಿತ್ತೆನೋ ಎಂದು ಮನದಲ್ಲೇ ಮರ ಮರ ಮರಗುತ್ತಾಳೆ. ತನ್ನ ಒಡಲಿನಲ್ಲಿ ಬೆಂಕಿ ಇಟ್ಟುಕೊಂಡು ಕತ್ತಲಾದ ಬಾಳಿಗೆ ಬೆಳಕು ಬಂದೇ ಬರುತ್ತದೆಯೆಂದು ಭರವಸೆಯ ಮಾತನಾಡಿ ಅವ್ವನಿಗೆ ಸಂತೈಸುತ್ತಾಳೆ. ಚೈನಿ ಚೆನ್ನಪ್ಪನ ಹಾಗೆ ಡ್ರೆಸ್ ಮಾಡಿಕೊಂಡು ಮೈ ತುಂಬ ಧಿಮಾಕು ತುಂಬಿಕೊoಡು ನಯಾಪೈಸೆ ದುಡಿದು ತರಲಾರದೆ ಹೆಂಡತಿ ಕೂಲಿ ಮಾಡಿ ತಂದ ಹಣವನ್ನು ಲಪಟಾಯಿಸಿ ತನ್ನ ಶೋಕಿಗೆ ಬಳಸುತ್ತಾನೆ. ಭೀಮಪ್ಪ. ಓದೋ ಮಕ್ಕಳಿಗೆ ಊರೆಲ್ಲ ಸಾಲ ಮಾಡಿ ಸಾಲ ತೀರಿಸೋ ಚಿಂತೆಗೆ ಗಂಗವ್ವನ ಕೈಯಲ್ಲಿ ಬಿರುಕು ಬಿಟ್ಟ ಗಾಯಗಳಾಗಿದ್ದರೂ ದಿನ ಬೆಳಗಾದರೆ ಕೂಲಿ ತಪ್ಪುವದಿಲ್ಲ. ಅವ್ವನ ಪಾಡು ಕಂಡು ಮಮ್ಮಲ ಮರಗುವ ಹದಿನಾಲ್ಕರ ಪೋರಿ ಗೌರಿ ನಾನು ಓದಿ ನಿನ್ನ ಕಷ್ಟವನ್ನು ನೀಗಿಸುತ್ತೇನೆಂದು ತಾಯಿಯ ಕಂಗಳಲ್ಲಿ ಆಶಾ ಕಿರಣ ಮೂಡಿಸಿ ಮುಖದಲ್ಲಿ ನಗು ತುಂಬುತ್ತಾಳೆ. ಇವು ಕೆಲವು ಉದಾಹರಣೆಗಳಷ್ಟೆ ಇಂಥ ಒಡಲಿನ ನೋವುಗಳು ಸಮಾಜದಲ್ಲಿ ಭರಪೂರ ಎನ್ನುವಂತೆ ತುಂಬಿವೆ. ತಾನುರಿದು ಇತರರಿಗೆ ಬೆಳಕು ನೀಡುವ  ದೀಪದಂತೆ ದುಃಖದ ಬೆಂಕಿಯನ್ನು ತನ್ನ ಸೆರಗಲ್ಲಿ ಕಟ್ಟಿಕೊಂಡು ಒಡಲಲ್ಲಿ ಹುಟ್ಟಿ ಮಡಿಲಲ್ಲಿ ಬೆಳೆದ ಮಗಳು ತಾಯಿಗೆ ತಾಯಿಯಾಗಿ ಸಂತೈಸುವ ಪರಿ ಮಾನವ ಕುಲದ ಮನ ಕಲುಕುವಂಥದ್ದು . ತನ್ನಲ್ಲಿ  ನೋವಿದ್ದರೂ ಒಡಲಿನ ನೋವಿಗೆ ಮಡಿಲಿನ ಸಾಂತ್ವನ ಹೇಳುತ್ತ  ನಲಿವಿನ ಸಂತಸದ ಭರವಸೆ ತುಂಬುವ ಪರಿ ಮೆಚ್ಚುವಂಥದ್ದು. ಜಯಶ್ರೀ.ಜೆ.ಅಬ್ಬಿಗೇರಿ

“ಒಡಲಿನ ನೋವಿಗೆ ಮಡಿಲಿನ  ಸಾಂತ್ವನ”        ಜಯಶ್ರೀ.ಜೆ.ಅಬ್ಬಿಗೇರಿ Read Post »

ಇತರೆ

“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತರಾಜು

ಪ್ರವಾಸಿ ಸಂಗಾತಿ “ಗೊರೂರು ಅನಂತರಾಜು “ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನಾವು ಶಿರಸಿಯಿಂದ ಬನವಾಸಿ ಬಸ್ಸು ಹತ್ತಿದಾಗಲೇ ನಾಲ್ಕೂವರೆ ಆಗಿತ್ತು. ಶಾಲೆ ಬಿಡುವ ವೇಳೆ ಬಸ್ ರಷ್ ಆಗಿತ್ತು. ನುಗ್ಗಿ ಬಸ್ ಹತ್ತಿ  ಬನವಾಸಿಯಲ್ಲಿ ಇಳಿದಾಗ ಐದೂವರೆ ಆಗಿತ್ತು. ಕ್ಯಾಂಟಿನ್‌ನಲ್ಲಿ ಟೀ ಕುಡಿದು ಮೈಂಡ್ ಪ್ರೆಶ್ ಆಯಿತು. ಅಲ್ಲಿ ದೇವಾಲಯದ ದಾರಿ ಕೇಳಲು ನೀವು ಆಟೋದಲ್ಲಿ ಹೋಗಿ ಆರೂವರೆಗೆ ದೇವಸ್ಥಾನದ ಬಳಿಗೆಯೇ ಬಸ್ ಬರುತ್ತದೆ ಅಲ್ಲಿ ವಾಪಸ್ಸು ಹತ್ತಬಹುದು ಎಂದರು. ಎರಡು ಆಟೋದಲ್ಲಿ  ಮಧುಕೇಶ್ವರ ದೇವಸ್ಥಾನಕ್ಕೆ ಹೋದವು. ದೇವಸ್ಥಾನದ ಪ್ರವೇಶದ್ವಾರದಲ್ಲಿ ನಾವು ಐವರು ಎ.ಹೆಚ್.ಗಣೇಶ್, ಪುಟ್ಟಸ್ವಾಮಿಗೌಡರು, ಬೇಕ್ರೀ ರಾಜೇಗೌಡರು, ಪಟ್ನ ವೆಂಕಟೇಗೌಡರು ಪೋಟೋ ತೆಗೆಸಿಕೊಂಡವು.   ಅರ್ಚಕರು ನಿಮಗೆ ಗೈಡ್ ಬೇಕೆ ಎಂದರು. ಹೌದೆಂದು ಅವರಿಂದ ಅನೇಕ ಐತಿಹಾಸಿಕ ಮಾಹಿತಿ ಪಡೆದೆವು.  ಸಿರಸಿಯಿಂದ ಬನವಾಸಿಗೆ ೨೨ ಕಿ.ಮೀ. ದೂರದ ಪ್ರಯಣ. ನಾವು ಪ್ರಯಣಿಸಿದ್ದು ಸೊರಬ ರಸ್ತೆಯಲ್ಲಿ. ವರದಾ ನದಿ ದಂಡೆಯಲ್ಲಿ ಬನವಾಸಿ ಇದೆ. ಇದು ಶಿರಸಿ ತಾಲ್ಲೂಕಿಗೆ ಸೇರಿದೆ.  ಕ್ರಿ.ಶ. ೧ನೇ ಶತಮಾನದಲ್ಲಿ ಬಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು ಬನೌಸಿ ಇಂದು ಕರೆದಿದ್ದಾನೆ. ಕ್ರಿ.ಶ.೪ನೇ ಶತಮಾನದಲ್ಲಿ ಜಯಂತಿಪುರ ಅಥವಾ ವೈಜಯಂತಿ ಎಂದು ಕರೆಯಲಾಗುತ್ತಿತ್ತು. ಪಾಂಡವರು ತಮ್ಮ ವನವಾಸದ ಕೆ¯ ಕಾಲ ಇಲ್ಲೇ ಕಳೆದರೆಂದೂ ಧರ್ಮರಾಜನ ಅಶ್ವಮೇಧಯಾಗದ ಸಂದರ್ಭ ಸಹದೇವ ದಕ್ಷಿಣ ಭಾರತದ ದಿಗ್ವಿಜಯ ಕಾಲದಲ್ಲಿ ವನವಾಸಕಾ ನಗರವನ್ನು ಗೆದ್ದನೆಂದೂ ಮಹಾಭಾರತದಲ್ಲಿ ಬನವಾಸಿಯನ್ನು ವನವಾಸಕ ಎಂಬ ಉಲ್ಲೇಖವಿದೆ. ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಕೈಟಭರೆಂಬ ದೈತ್ಯರನ್ನು ವಿಷ್ಣು ಕೊಂದನೆAದು, ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಮತ್ತು ನದಿಯ ಇನ್ನೊಂದು ದಂಡೆಯಲ್ಲಿರುವ ಅವನಟ್ಟಿ ಅಥವಾ ಕುಪ್ಪತ್ತೂರಿನಲ್ಲಿ ಕೈಟಭೇಶ್ವರ ದೇವಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದರೂ ಈಗಿರುವಂತೆ ಆ ದೇವಾಲಯಗಳು ಅನಂತರ ಕಾಲದವು. ನಾನು ಹಾಸನದಲ್ಲಿ ನೋಡಿದ ದೇವಿ ಮಹಾತ್ಮೆ ನಾಟಕದಲ್ಲಿ ಈ ಎರಡು ಪಾತ್ರಗಳು ಬರುತ್ತವೆ. ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ  ಬೌದ್ಧ ಭಿಕ್ಷÄ ರಖ್ಖಿತ ಬನವಾಸಿ ಪ್ರಾಂತ್ಯಕ್ಕೆ ಬಂದಿದ್ದನೆAದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತದೆ.  ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ  ಸಿಂಹಳದ ಭೌದ್ಧ ಭಿಕ್ಷÄಗಳು ಧರ್ಮ ಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರAತೆ.  ಬನವಾಸಿ ಗೌತಮೀ ಪುತ್ರ ಸಾತಕರ್ಣಿಯ ನೇರ ಆಡಳಿತಕ್ಕೆ ಸೇರಿದ್ದು ಅವನು ತನ್ನ ಸೈನ್ಯದೊಡನೆ ವಿಜಯ ವೈಜಯಂತಿಯಲ್ಲಿ ಬೀಡುಬಿಟ್ಟಿದ್ದನೆಂದು ನಾಸಿಕದ ಶಾಸನ ಹೇಳುತ್ತದೆ.  ಬನವಾಸಿಯಲ್ಲಿ ದೊರಕಿದ ಸಾತವಾಹನ ದೊರೆ ವಾಸಿಷ್ಠೀ ಪುತ್ರ ಸಿವಸಿರಿ ಪುಳುಮಾವಿನ ಅನಂತರ ಬಂದ (ಕ್ರಿ.ಶ.೨ನೇ ಶತಮಾನ) ಶಿವಶ್ರೀ ಪುಳುಮಾವಿಯ ಶಾಸನ ಅವನ ರಾಣಿಯ ಸ್ಮಾರಕ ಶಿಲೆಯಾಗಿದ್ದು ಆ ಕಾಲದಲ್ಲಿ ಬನವಾಸಿಯ ಪ್ರಾಮುಖ್ಯವನ್ನು ಸೂಚಿಸುತ್ತದೆ. ಮುಂದೆ ಸಾತವಾಹನರ ಸಾಮಂತರೂ ಆ ವಂಶದ ಶಾಖೆಗೆ ಸೇರಿದವರೂ ಆದ ಚಟುಸಾತಕರ್ಣಿ ದೊರೆಗಳ ಕಾಲದಲ್ಲೂ ಬನವಾಸಿ ಪ್ರಮುಖ ನಗರವಾಗಿತ್ತು.  ಮಧುಕೇಶ್ವರ ದೇವಾಲಯದ ಕಂಬದಮೇಲೆ ರಾಷ್ಟçಕೂಟ, ಕಲ್ಯಾಣ ಚಾಳುಕ್ಯ, ವಿಜಯನಗರ ಮತ್ತು ಸೋದೆ ಅರಸರ ಹಲವಾರು ಶಾಸನಗಳು ದೇವಸ್ಥಾನದ ಜೀರ್ಣೋದ್ದಾರ ದಾನದತ್ತಿಗಳ ಬಗ್ಗೆ ತಿಳಿಸುತ್ತವೆ.  ಕನ್ನಡವನ್ನು ರಾಜ್ಯ ಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು.  ಈ ರಾಜ್ಯದ ಸ್ಥಾಪಕ ಮಯೂರಶರ್ಮ (ಕ್ರಿ.ಶ.೩೪೫-೩೬೫) ಈತನ ರಾಜಧಾನಿ ಬನವಾಸಿ. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ (೪೩೫-೪೫೫) ಉಚ್ಛಾçಯ ಸ್ಥಿತಿಯಲ್ಲಿತ್ತು. ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ ಆರಂಕುಶವಿಟ್ಟೊಡA ನೆನೆವುದೆನ್ನ ಮನಂ ಬನವಾಸಿ ದೇಶಮಂ  ಎಂದಿದ್ದಾನೆ. ಬನ ಮತ್ತು ವಾಸಿ ಪದಗಳಿಂದ ಬನವಾಸಿ ಎಂಬ ಹೆಸರು ಬಂದಿದ್ದು ಕ್ರಮವಾಗಿ ಕಾಡು ಮತ್ತು ವಸಂತ ಎಂಬ ಅರ್ಥ ಕೊಡುತ್ತದೆ. ಬನವಾಸಿ ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದು. ಕದಂಬರ ಕಾಲದ ಅನೇಕ ಬಾರಿ ನವೀಕರಿಸಿದ ಸುಂದರ ಮಧುಕೇಶ್ವರ ದೇವಾಲಯ ಪ್ರಾಚೀನ ಇತಿಹಾಸ ಮತ್ತು ಶಾಸನಗಳಿಂದ ಕೂಡಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯ. ಗರ್ಭಗುಡಿಯಲ್ಲಿ ಜೇನು ಬಣ್ಣದ ಲಿಂಗವಿದೆ.  ಇಲ್ಲಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ತಾಳಗುಂದ ಗುಂಡನೂರು ಚಂದ್ರವಳ್ಳಿ ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಬಗ್ಗೆ ಬೆಳಕು ಚೆಲ್ಲುತ್ತವೆ.  ಕನ್ನಡದ  ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ (ಕ್ರಿ.ಶ.೪೫೦) ಬೇಲೂರು ತಾ. ಹಲ್ಮಿಡಿ ಗ್ರಾಮದಲ್ಲಿ ದೊರಕಿದೆ. ರಾಜಾ ಶಾಂತಿವರ್ಮನ (ಕ್ರಿ.ಶ.೪೫೦) ಕಾಲದ ತಾಳಗುಂದದ ಶಾಸನವು ಬನವಾಸಿ ಕದಂಬರ ಸಾಮ್ರಾಜ್ಯದ ಹುಟ್ಟಿನ ಸಂಭವನೀಯ ವಿವರ ನೀಡುತ್ತದೆ. ತಾಳಗುಂದದ ನಿವಾಸಿ ಮಯೂರವರ್ಮನು ತನ್ನ ಅಜ್ಜ ಮತ್ತು ಗುರು ವೀರವರ್ಮನೊಂದಿಗೆ  ವೈದಿಕ ವಿದ್ಯಾರ್ಜನೆಗಾಗಿ ಕಂಚಿಗೆ ಹೋಗುತ್ತಾನೆ. ಅಲ್ಲಿ ಪಲ್ಲವರ ಕಾವಲು ಭಟರೊಂದಿಗೆ ಮನಸ್ತಾಪವಾಗಿ ಅವರಿಂದ ಅವಮಾನಿತನಾಗುತ್ತಾನೆ. ಇದರಿಂದ ಕೋಪಿತನಾಗಿ ಪ್ರತೀಕಾರದ ಪ್ರತಿಜ್ಞೆಗೈದು ಕಂಚಿಯನ್ನು ಬಿಟ್ಟು ವಾಪಸ್ಸು ಬಂದು ಶಸ್ತಾçಭ್ಯಾಸ ಪ್ರಾರಂಭಿಸುತ್ತಾನೆ.  ಸೈನ್ಯ ಕಟ್ಟಿ ಪಲ್ಲವರೊಂದಿಗೆ ದೀರ್ಘಕಾಲದ ಯುದ್ಧ ನಂತರ ಕದಂಬರು ಸ್ವತಂತ್ರ ರಾಜ್ಯ ಘೋಷಿಸಿ ಕದಂಬರನ್ನು ಹತ್ತಿಕ್ಕಲಾರದೆ ಪಲ್ಲವರು ಅವರ ಸ್ವತಂತ್ರ ರಾಜ್ಯವನ್ನು ಒಪ್ಪಬೇಕಾಯಿತು. ಅಂತಿಮವಾಗಿ ಬಾದಾಮಿಯ ಚಾಲುಕ್ಯರಿಂದ ಈ ಸಾಮ್ರಾಜ್ಯ ಪತನವಾಯಿತು. ಅಲ್ಲಿಂದ ಮುಂದೆ ಬಾದಾಮಿ ಚಾಲುಕ್ಯರು ನಂತರ ರಾಷ್ಟçಕೂಟರ  ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಈ ವಂಶ ಮುಂದುವರಿಯಿತು.     ದೇವಸ್ಥಾನದ ಆವರಣದಲ್ಲಿ ಇರುವ ಫಲಕದಲ್ಲಿ ದೇವಸ್ಥಾನ ಕುರಿತ್ತಾದ ಕೆಲವು ಐತಿಹಾಸಿಕ ಮಾಹಿತಿಗಳಿವೆ. ಕದಂಬರ ಕಾಲದ ಮಧುಕೇಶ್ವರ ದೇವಾಲಯ ಕಲ್ಯಾಣ ಚಾಲುಕ್ಯರಿಂದ ಸೋಂದಾ ಅರಸರ ಕಾಲದವರೆಗೆ ಅನೇಕ ವಾಸ್ತು ಸೇರ್ಪಡೆ ಬದಲಾವಣೆಗಳನ್ನು ಮಾಡುತ್ತಾ ಬಂದಿರುವುದು ಇಲ್ಲಿನ ವಾಸ್ತುಶೈಲಿ  ಮತ್ತು ದೊರಕಿರುವ ೧೨ ಶಾಸನಗಳಿಂದ ತಿಳಿಯಬಹುದಾಗಿದೆ.  ಕದಂಬರು ಶಾತವಾಹನರ ಶಿಲ್ಪಕಲಾಶೈಲಿಯನ್ನು ಅಳವಡಿಸಿಕೊಂಡರು. ಪೂರ್ವಾಭಿಮುಖವಾಗಿ ಇರುವ ದೇವಾಲಯದ ಚೌಕಾಕಾರ ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾ ಪಥವಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಮಧುಕೇಶ್ವರ ಲಿಂಗವಿದೆ. ಲಿಂಗವು ಜೇನುತುಪ್ಪದ ಬಣ್ಣದಲ್ಲಿದೆ. ಎಡಭಾಗದಲ್ಲಿ ಪಾರ್ವತಿ ದೇವಾಲಯವಿದೆ. ಪೂರ್ವಭಾಗದ ಗೋಡೆಗೆ ಅಂಟಿಕೊAಡAತೆ ಇರುವ  ೨ ಉಪಗುಡಿಗಳಲ್ಲಿ ಮಹಿಷಮರ್ದಿನಿ ಗಣೇಶನ ಶಿಲ್ಪಗಳಿವೆ ಮತ್ತು ದೊಡ್ಡ ಕಂಬಗಳಿರುವ ವಿಶಾಲ ಮಂಟಪವಿದೆ. ಈ ಎಲ್ಲಾ ರಚನೆಗಳು ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿವೆ. ಈ ಮಂಟಪದ ಮುಂಭಾಗದಲ್ಲಿ ತಿರುಗಣಿ ಯಂತ್ರದಿAದ ರಚಿತವಾದ  ಅಲಂಕೃತ ಕಂಬಗಳಿರುವ ನವರಂಗವಿದೆ. ಅದರಲ್ಲಿ ಕುಳಿತ ನಂದಿಯ ಶಿಲ್ಪವಿದೆ. ನಂದಿಯ ಒಂದು ಕಣ್ಣು ಮಧುಕೇಶ್ವರನನ್ನು ಇನ್ನೊಂದು ಕಣ್ಣು ಪಾರ್ವತಿಯನ್ನು ನೋಡುತ್ತಿದೆ ನೋಡಿ ಎಂದರು ಅರ್ಚಕರು. ನವರಂಗದ ಸುತ್ತಲೂ ಕಕ್ಷಾಸನವಿದ್ದು ನವರಂಗಕ್ಕೆ ಮೂರು ಪ್ರವೇಶದ್ವಾರಗಳಿವೆ. ಇವುಗಳು ಸಹ ಕಲ್ಯಾಣ ಚಾಲುಕ್ಯರ ಕಾಲದ ನಿರ್ಮಿತಿಗಳಾಗಿವೆ. ದೇವಾಲಯದ ಒಳಭಾಗದಲ್ಲಿ ಪ್ರಾಚೀನ ಶಿಲ್ಪಶೈಲಿಯ ಲಕ್ಷಣಗಳಿರುವ  ಆದಿಮಾಧವ ಮತ್ತು ಕಾರ್ತಿಕೇಯನ ಶಿಲ್ಪಗಳಿವೆ. ದೇವಾಲಯಕ್ಕೆ ಈಗಿರುವ  ಶಿಖರವು ವಿಜಯನಗರ ಸೋಂದಾ ಅರಸರ ಕಾಲಕ್ಕೆ ಸೇರಿದ್ದು ಸುಖನಾಸಿಯನ್ನು ಹೊಂದಿರುವ ಕದಂಬ ನಾಗರ ಶಿಖರವು ಪಿರಮಿಡ್ಡು ಆಕಾರದಲ್ಲಿ ಮೇಲಕ್ಕೇರುತ್ತದೆ.  ನಾಲ್ಕು ಮೂಲೆಗಳಲ್ಲಿ ನಂದಿ ವಿಷ್ಣುವಿನ ದಶಾವತಾರ ೧೨ ಆದಿತ್ಯರು, ದಿಕ್ಪಾಲಕರು, ನಾಗಬಂಧ ಮತ್ತು ಇತರ ದೇವತೆಗಳ ಗಾರೆ ಶಿಲ್ಪಗಳಿಂದ ಶಿಖರವನ್ನು ಅಲಂಕರಿಸಲಾಗಿದೆ. ನವರಂಗದ ಛಾವಣಿಯ ಸಮತಟ್ಟಾಗಿ ಅದರ ಅಂಚು ಇಳಿಜಾರಿನಿಂದ ಕೂಡಿದೆ. ದೇವಾಲಯದ ಮುಂಭಾಗ ದ್ವಜ ಸ್ಥಂಭವಿದೆ. ಪ್ರಾಕಾರದಲ್ಲಿರುವ ಉಪ ಗುಡಿಗಳಲ್ಲಿ ಸೋಂದಾ ಅರಸರ ಕಾಲದ ದಿಕ್ಪಾಲರು ದುಂಡಿರಾಜ, ಗಣಪತಿ ಚಿಂತಾಮಣಿ ನರಸಿಂಹ ಮತ್ತಿತರ ಶಿಲ್ಪಗಳಿವೆ. ಶಾಸನ ಸಹಿತ ನಾಗಶಿಲ್ಪ ಮತ್ತು ಅಲಂಕೃತ ಶಿಲಾ ಮಂಟಪದAತಿರುವ ಮಂಟಪವು ದೇವಾಲಯದಲ್ಲಿರುವ ಮುಖ್ಯ ರಚನೆಗಳಾಗಿವೆ. ಆಯತಾಕಾರದ ತೆಳು ಶಿಲಾ ಫಲಕದ ಮಧ್ಯದಲ್ಲಿ ಸುತ್ತಿಕೊಂಡAತೆ ಇರುವ ೫ ಹೆಡಗಳುಳ್ಳ ನಾಗಶಿಲ್ಪವಿದೆ. ಶಿಲಾಫಲಕದ ಎರಡೂ ಬದಿಯ ಅಂಚಿನಲ್ಲಿ ಕ್ರಿ.ಶ.೨ನೇ ಶತಮಾನಕ್ಕೆ ಸೇರುವ ಬ್ರಾಹ್ಮಿ ಲಿಪಿಯ ಪ್ರಾಕೃತ ಶಾಸನವಿದೆ. ಅದು ಹರಿತಪುತ್ರ ವಿನುಕಡೆ ಚುಟುಕುಲಾನಂದ ಶಾಕಕರ್ಣಿಯ ೧೨ನೇ ಆಳ್ವಿಕೆಯ ವರ್ಷದಲ್ಲಿ ಅವನ ಪುತ್ರಿ ಶಿವಸ್ಕಂದ ನಾಗಶ್ರೀಯು ಒಂದು ಕೆರೆ ಹಾಗೂ ವಿಹಾರದೊಂದಿಗೆ ಈ ಕಲಾತ್ಮಕ ನಾಗಶಿಲ್ಪವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾಗಿ ತಿಳಿಸುತ್ತದೆ. ಸಂಜಯAತಿಯ (ಬನವಾಸಿ) ನಿವಾಸಿ ಅಚಾರ್ಯ ದಾಮೋರಕನ ಶಿಷ್ಯ ನಾಟಕನೆಂಬ ಶಿಲ್ಪಿಯ ಈ ನಾಗಶಿಲ್ಪವನ್ನು ಕೆತ್ತಿದನೆಂದು ಶಾಸನವು ದಾಖಲಿಸಿದೆ.  ಸೋಂದಾ ಅರಸ ಸದಾಶಿವ ನಾಯಕನು (ಕ್ರಿ.ಶ.೧೬ನೇ ಶತಮಾನ) ನಿರ್ಮಿಸಿರುವ ಅತ್ಯಂತ ಸೂಕ್ಷö್ಮ ಕೆತ್ತನೆಗಳಿಂದ ಕೂಡಿದ ತ್ರಿಲೋಕ ಮಂಟಪವೆAದು ಕರೆಯಲಾಗುವ ಶಿಲೆಯು ನವರಂಗದಲ್ಲಿದೆ. ರಘುನಾಥ ನಾಯಕ (ಕ್ರಿ.ಶ.೧೬೨೮) ಕೊಡುಗೆಯಾಗಿ ನೀಡಿದ ಶಿಲಾಮಂಟಪದಲ್ಲಿ ಗಿಡ, ಬಳ್ಳಿ, ಪ್ರಾಣಿ  ಮತ್ತು ಜಾಮಿತಿಯ ಅಲಂಕರಣಿಗಳಿAದ ಕೂಡಿದ ಸೂಕ್ಷö್ಮ ಕೆತ್ತನೆಗಳಿವೆ. ಇಲ್ಲಿನ ಗಣೇಶನ ಅರ್ಧಬಾಗ ಮಾತ್ರ ಇರುವ ಮೂರ್ತಿ ಇದರ ಇನ್ನರ್ದ ವಾರಣಾಸಿಯಲ್ಲಿದೆಯಂತೆ.   ದೇವಾಲಯ ಸಮುಚ್ಛಯದ ಪೂರ್ವ ಭಾಗದಲ್ಲಿರುವ ಮುಖ್ಯ ಪ್ರವೇಶ ದ್ವಾರದಲ್ಲಿರುವ ಮೆಟ್ಟಿಲುಗಳ ಕೈಪಿಡಿ ಗೋಡೆಗಳನ್ನು ಎರಡು ಅಲಂಕೃತ ಆನೆಗಳ ಶಿಲ್ಪಗಳಿಂದ ಕೆತ್ತಲಾಗಿದೆ.  ಇಲ್ಲಿಯ ಕಲ್ಲಿನ ಮಂಚ ಪ್ರಧಾನ ಆಕರ್ಷಣೆಗಳಲ್ಲೊಂದು. ಬನವಾಸಿ ಪರಿಸರದಲ್ಲಿ ಸಾಮಾನ್ಯ ಅಲಂಕರಣೆಗಳ  ಆದಿಕದಂಬರೇಶ್ವರ, ಆದಿಮಧುಕೇಶ್ವರ, ಅಲ್ಲಮಪ್ರಭು  ದೇವಾಲಯಗಳಿವೆ. ನಾವು ದೇವಸ್ಥಾನದಿಂದ ಹೊರಬಂದಾಗ ಕತ್ತಲು ಆವರಿಸುತ್ತಿತ್ತು. ದೇವಾಲಯದ ಹೊರಬಾಗದಲ್ಲಿ ಎರಡು ರಥಗಳನ್ನು ಎತ್ತರಕ್ಕೆ ಮನೆ ನಿರ್ಮಿಸಿ ನಿಲ್ಲಿಸಲಾಗಿದೆ. ಈಗ ರಥೋತ್ಸವಕ್ಕೆ ಹೊಸ ರಥ ಬಳಸಲಾಗುತ್ತಿದ್ದು ಹಳೆಯ ರಥವನ್ನು ಸಂರಕ್ಷಿಸಲಾಗಿದೆ. ಹೊರಗಡೆ ಒಂದು  ಸುತ್ತು ಹಾಕಿ ನಡೆದುಕೊಂಡೆ ಬಸ್‌ಸ್ಟಾö್ಯಂಡ್‌ಗೆ  ಬಂದೆವು. ಕೆಲಹೊತ್ತಿಗೆ ಬಸ್ಸು ಬಂತು. ಹತ್ತಲು ಹೋದೆವು. ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಇಲ್ಲೇ ಇರಿ ಎಂದ ಕಂಡಕ್ಟರ್ ಮೇಡಂ ಹತ್ತಿಸಿಕೊಳ್ಳಲಿಲ್ಲ. ಕದಂಬ ಸೈನ್ಯ ಅಧ್ಯಕ್ಷರು ಬೇಕ್ರಿ ರಮೇಶ್ ನಮಗೆ ಬನವಾಸಿಯ ಗುತ್ಯಪ್ಪ ಮಾದರ್ ಕಪ್ಪಗೇರಿ ಅವರ ಪೋನ್ ನಂಬರ್ ನೀಡಿದ್ದರು. ನಾವು ಬಸ್ ಕಾಯುವಾಗ ಗುತ್ಯಪ್ಪರು ಪೋನ್ ಮಾಡಿ ನಮ್ಮನ್ನು ಗುರುತಿಸಿ   ಮಾತನಾಡಿಸಲು ಬಂದರು. ಅಷ್ಟರಲ್ಲಿ ದೇವಸ್ಥಾನದಿಂದ ಬಸ್ಸು ಬಂತು. ನಾಳೇ ಭುವನಗಿರಿಯಲ್ಲಿ ಭೇಟಿಯಾಗೋಣ ಎಂದು ಗುತ್ಯಪ್ಪರಿಗೆ ವಿಶ್ ಮಾಡಿ ಶಿರಸಿ ಬಸ್ಸು ಹತ್ತಿದವು. ಗೊರೂರು ಅನಂತರಾಜು, ಹಾಸನ.

“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತರಾಜು Read Post »

ಇತರೆ, ಜೀವನ

“ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್‌ ಗೌಡ ಪಾಟೀಲ್

ಜೀವನ ಸಂಗಾತಿ “ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್‌ ಗೌಡ ಪಾಟೀಲ್ ಮಕ್ಕಳು…..ತಾಯಿಯ ಪ್ರತಿಬಿಂಬ  ಬದುಕಿನಲ್ಲಿ ಈ ವಿಷಯವನ್ನು ಎಂದೂ ಮರೆಯಬಾರದು. ಯಾವುದನ್ನು ನೀವು ನಿಮ್ಮ ಸ್ವಂತ ತಾಯಿಗೆ ಬದುಕಿನಲ್ಲಿ ಕೊಡಲು ಸಾಧ್ಯವಿಲ್ಲವೋ ಅದನ್ನು ನೀವು ಕೂಡ ಪಡೆಯಲು ಸಾಧ್ಯವಿಲ್ಲ. ನಿಮ್ಮ ತಾಯಿಯೊಂದಿಗೆ ನೀವು ವರ್ತಿಸುವ ರೀತಿಯಲ್ಲಿ ಬದುಕು ನಿಮ್ಮೊಂದಿಗೆ ವರ್ತಿಸುತ್ತದೆ. ನಿಮ್ಮನ್ನು ಪ್ರೀತಿಸಿದ ಮೊದಲ ಹೃದಯ ನಿಮ್ಮ ತಾಯಿಯದಾಗಿರುತ್ತದೆ. ತಾಯಿಯ ಪ್ರೀತಿ ಶರತ್ತುಗಳನ್ನು ಹೊಂದಿರುವುದಿಲ್ಲ ಆದ್ದರಿಂದ ಎಂದಿಗೂ ನಿಮ್ಮ ತಾಯಿಯನ್ನು ಎಂದೂ ನಿರ್ಣಯಾತ್ಮಕವಾಗಿ ನೋಡಬೇಡಿ.ನಿಮ್ಮ ತಾಯಿ ಬದುಕಿನ ಎಂತೆಂತಹ ಯುದ್ಧಗಳಲ್ಲಿ ಹೋರಾಡಿರುವಳು ಎಂಬುದರ ಅರಿವು ನಿಮಗಿಲ್ಲ. ಆಕೆ ಮೌನವಾಗಿ ಸಹಿಸಿದ ನೋವುಗಳ ಕುರಿತು ನಿಮಗೆ ಗೊತ್ತಿಲ್ಲ. ತನ್ನ ಗಂಟಲುಬ್ಬಿಸುವ ನೋವನ್ನು ನುಂಗಿ ಕಣ್ಣೀರನ್ನು ಅಲ್ಲಿಯೇ ಇಂಗಿಸಿ ಕಿರುನಗೆ ನಕ್ಕ ಆಕೆಯ ನಗುವಿನ ಹಿಂದಿನ ಆಳವಾದ ಸತ್ಯದ ಅರಿವು ನಿಮಗಿಲ್ಲ.ಆರದ ಅದೆಷ್ಟೋ ಗಾಯಗಳು ಆಕೆಯ ಮನದಲ್ಲಿ ವಾಸವಾಗಿವೆ ಎಂಬುದರ ಅರಿವು ನಿಮಗೆ ಇಲ್ಲ.ಆಕೆಯ ಯೌವನವೆಲ್ಲ ತನ್ನ ಪತಿಯ ಬೇಕು ಬೇಡಗಳಿಗೆ ಸ್ಪಂದಿಸುತ್ತಾ ಮಕ್ಕಳ ಅಗತ್ಯಗಳನ್ನು ಪೂರೈಸುತ್ತಾ ಸಾಗಿರುತ್ತದೆ.ಮಕ್ಕಳ ಭವಿಷ್ಯವನ್ನು ರೂಪಿಸಲು ಅತ್ಯಗತ್ಯವಾದ ಆರೋಗ್ಯ, ಸಂಸ್ಕಾರ, ಶಿಕ್ಷಣ, ದೈನಂದಿನ ಅವಶ್ಯಕತೆಗಳನ್ನು ಪೂರೈಸುತ್ತಾ ತನಗೂ ಕೂಡ ತನ್ನದೇ ಆದ ಬದುಕಿದೆ ಎಂಬುದನ್ನು ಆಕೆ ಮರೆತುಬಿಟ್ಟಿರುತ್ತಾಳೆ.ಯೌವನದ ದಿನಗಳನ್ನು ಆಕೆ ಭಯ, ನಿರಾಶೆ ಮತ್ತು ಆರ್ಥಿಕ ತೊಂದರೆಗಳಿಂದ ಕಳೆದಿರುತ್ತಾಳೆ. ಹೆಣ್ಣೆಂಬ ಒಂದೇ ಕಾರಣಕ್ಕೆ ಆಕೆಯನ್ನು ಯಾರೂ ಅಷ್ಟಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಆಕೆಯ ಮನದಾಳದ ಮಾತಿಗೆ ಕಿವಿಯಾಗುವುದಿಲ್ಲ ಆಕೆಯನ್ನು ಪೋಷಿಸುತ್ತಾರೆಯೇ ಹೊರತು ಆಕೆಯ ಭಾವನೆಗಳನ್ನು ಲಕ್ಷಿಸುವುದಿಲ್ಲ…. ಎಲ್ಲವನ್ನು ಮಾಡಿಯೂ ಕೂಡ ಆಕೆ ಏನನ್ನೂ ಬಯಸದೇ ಹೋದರೂ ಆಕೆಯನ್ನು ಪರಿಗಣಿಸುವುದೇ ಇಲ್ಲ. ನಿಮ್ಮ ಹುಟ್ಟಿನಿಂದ ಹಿಡಿದು ತಾನು ನಿಮ್ಮೊಂದಿಗೆ ಇರುವ ಹಾಗೂ ಬದುಕಿರುವ ಪ್ರತಿ ಕ್ಷಣವು ನಿಮ್ಮ ಮನದ ಮಾತುಗಳಿಗೆ ಆಸೆಗಳಿಗೆ ಆಕಾಂಕ್ಷೆಗಳಿಗೆಕಿವಿಗೊಡುವ, ಅದಕ್ಕಾಗಿ ಹೋರಾಡುವವರು ತಾಯಿ.,ಬದುಕಿನ ಹೋರಾಟದ ಎಲ್ಲಾ ಕಷ್ಟಗಳಿಗೆ ಗುರಾಣಿಯಂತೆ ನಿಮ್ಮನ್ನು ರಕ್ಷಿಸಿ ಬೆಳೆಸುವ ಆಕೆಗೆ ತನ್ನದೇ ಆದ ವೈಯಕ್ತಿಕ ಸುಖ ಸಂತೋಷಗಳು ಇಲ್ಲವೇ ಇಲ್ಲ ಎಂದಲ್ಲ… ಆದರೆ ಅವೆಲ್ಲವೂ ನಿಮ್ಮನ್ನು ಕಾಳಜಿ ಮಾಡುವ ಆಕೆಗೆ ಕುಟುಂಬದ ಸಂತಸದಲ್ಲಿಯೇ ಸಾರ್ಥಕತೆಯನ್ನು ಕಾಣುವ ಆಕೆಯ ವಿಶಾಲ ಹೃದಯದ ಮೂಲೆಯಲ್ಲಿ ಅಡಗಿ ಕುಳಿತಿರುತ್ತವೆ.ಆದ್ದರಿಂದ ನಿಮ್ಮ ತಾಯಿಯೊಂದಿಗೆ ಮಾತನಾಡಿ… ಆಕೆಯ ಮಾತುಗಳಿಗೆ ಕಿವಿಯಾಗಿ ಬದುಕಿನಲ್ಲಿ ಆಕೆ ಅನುಭವಿಸಿದ ನೋವು ಯಾತನೆಗಳನ್ನು ಆಕೆಯ ಮಾತುಗಳಲ್ಲಿ ಆಲಿಸಿ.ತಾಯಿಯ ಕುರಿತಾದ ಭಾವನಾತ್ಮಕ ಮಾತುಗಳನ್ನು ಮುಂದಿನ ದಿನಕ್ಕಾಗಿ ಉಳಿಸಿಕೊಳ್ಳದಿರಿ. ನಿಮ್ಮ ತಾಯಿಯ ತಾಳ್ಮೆ, ಸಹನೆ, ಸಿಟ್ಟು, ಸೆಡವು, ಅದ್ವಿತೀಯ ಕಾರ್ಯವೈಖರಿಯನ್ನು ಪ್ರಶಂಶಿಸುವುದಾದರೆ ಅದು ಇಂದೇ ಆಗಲಿ…ಯಾರಿಗೆ ಗೊತ್ತು ಮುಂದೊಂದು ದಿನ ನೀವು ಅದನ್ನೆಲ್ಲಾ ಹೇಳುವ ಹೊತ್ತಿಗೆ ಆಕೆಯೇ ಇಲ್ಲವಾಗಿರಬಹುದು…. ಇದ್ದಾಗ ಸಿಗದ ಗೌರವವನ್ನು ಸತ್ತ ಮೇಲೆ ಪಡೆಯುವುದರಲ್ಲಿ ಯಾವ ಪುರುಷಾರ್ಥವಿದೆ…. ನೀವೇ ಹೇಳಿ.ಬಹುಶಹ ಆಕೆಯ ಕಂಗಳಲ್ಲಿ ಇಡೀ ಜಗತ್ತಿನ ಸುಖ ಸೌಲಭ್ಯಗಳು ತಕ್ಕಡಿಯ ಒಂದು ತಟ್ಟೆಯಲ್ಲಿ ತೂಗಿದರೆ ನಿಮ್ಮ ಒಂದು ಅಕ್ಕರೆಯ, ಕಾಳಜಿಯ ಮಾತು ಮತ್ತೊಂದು ತಟ್ಟೆಯಲ್ಲಿ ತೂಗುತ್ತದೆನಿಮ್ಮ ತಾಯಿಯ ಕುರಿತಾದ ನಿಮ್ಮ ಪ್ರೀತಿ ಮತ್ತು ಗೌರವ ನಿಮಗೆ ಆಶೀರ್ವಾದವಾಗಿ ಮರಳಿ ದೊರೆಯುತ್ತದೆ. ಬಹುಶಹ ನಿಮ್ಮಿಂದ ಆಕೆ ನಿರೀಕ್ಷಿಸುವುದು ಕೂಡ ಅದನ್ನೇ. ಮುಂದಿನ ಬದುಕಿನಲ್ಲಿ ನೀವು ಆಕೆಗೆ ಈ ಎಲ್ಲವನ್ನು ಕೊಡಲಿ ಎಂದೇನೂ ಆಕೆ ಇದೆಲ್ಲವನ್ನು ಮಾಡಿರುವುದಿಲ್ಲ ನಿಜ. ಮಕ್ಕಳಾಗಿ ನಿಮ್ಮನ್ನು ಹಾಗೆ ಬೆಳೆಸುವುದು ತನ್ನ ಕರ್ತವ್ಯ ಎಂದು ಆಕೆ ಭಾವಿಸಿದ್ದರೆ ಅದು ಆಕೆಯ ತಪ್ಪಲ್ಲ…. ಆದರೆ ಆಕೆ ನಿಮಗೆ ಕೊಡ ಮಾಡುವ ಪ್ರೀತಿ, ಅಕ್ಕರೆ, ಕಾಳಜಿ, ಕಠಿಣತೆ, ಶಿಸ್ತುಗಳು ನಿಮ್ಮನ್ನು ನೀವು ಈಗಿರುವ ವ್ಯಕ್ತಿಯಾಗಿ ರೂಪಿಸುವಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿರುತ್ತದೆ.ಆಕೆಯ ಪ್ರೀತಿ, ಮಮತೆಗಳು ನಿಮ್ಮನ್ನು ಆರೋಗ್ಯಕರ ಕೌಟುಂಬಿಕ ವ್ಯಕ್ತಿಯನ್ನಾಗಿ ಬೆಳೆಸಿದರೆ ಕಠಿಣತೆಯ ಮುಖವಾಡವನ್ನು ಹೊಂದಿರುವ ಶಿಸ್ತು ಪಾಲನೆಯು ನಿಮ್ಮನ್ನು ಓರ್ವ ಸಭ್ಯ ಹಾಗೂ ಕ್ರಿಯಾಶೀಲ ವ್ಯಕ್ತಿಯನ್ನಾಗಿ ರೂಪಿಸಿರುತ್ತದೆ. ಆಕೆ ನಿಮಗೆ ತೋರುವ ಕಾಳಜಿಪೂರ್ವಕ ನಡವಳಿಕೆ ನಿಮ್ಮನ್ನು ಓರ್ವ ಸಾಮಾಜಿಕ ವ್ಯಕ್ತಿಯನ್ನಾಗಿ ರೂಪಿಸಿದರೆ ಆಕೆಯ ಧಾರ್ಮಿಕ ನಂಬಿಕೆಗಳು ನಿಮ್ಮಲ್ಲಿ ಓರ್ವ ಆಶಾವಾದಿಯನ್ನು, ಭರವಸೆಯ ನಾಯಕನನ್ನು ಸೃಷ್ಟಿಸುತ್ತವೆಆದ್ದರಿಂದ ಮಕ್ಕಳೇ…. ತಾಯಿಯ ಕುರಿತು ನಿಷ್ಕಾಳಜಿ ಬೇಡ ಆಕೆ ಭೌತಿಕವಾಗಿ ಇರಲಿ ಅಥವಾ ಇಲ್ಲದೇ ಇರಲಿ ಆಕೆಯ ಆಶೀರ್ವಾದ ಶಾಂತಿಯಾಗಿ ನಿಮ್ಮನ್ನು ಆವರಿಸುತ್ತದೆ. ಆಂತರಿಕ  ಶಕ್ತಿಯಾಗಿ ನಿಮ್ಮಲ್ಲಿ ತುಂಬಿಕೊಂಡು ನಿಮ್ಮನ್ನು ಗಟ್ಟಿಯಾಗಿಸುತ್ತದೆನಿಮಗೆ ಕೇವಲ ಒಬ್ಬ ತಾಯಿ ಮಾತ್ರ ದೊರೆಯುತ್ತಾಳೆ ಹಾಗೂ ಆಕೆಗೆ ನೀವು ಏನನ್ನು ಕೊಡುವಿರೋ ಅದನ್ನೇ ನೀವು ಬದುಕಿನಲ್ಲಿ ಪಡೆಯುವಿರಿ ಎಂಬುದನ್ನು ನೆನಪಿಟ್ಟುಕೊಂಡು ಬದುಕಿನಲ್ಲಿ ತಾಯಿಯನ್ನು ಪ್ರೀತಿಸಿ ಗೌರವಿಸಿ ಆರಾಧಿಸಿ…… ತಾಯಿ ಅದಕ್ಕೂ ಹೆಚ್ಚಿನದನ್ನು ನಿಮ್ಮಿಂದ ನಿರೀಕ್ಷಿಸುವುದಿಲ್ಲ. ಏನಂತೀರಾ ಸ್ನೇಹಿತರೇ??  ವೀಣಾ ಹೇಮಂತ್ ಗೌಡ ಪಾಟೀಲ್

“ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

You cannot copy content of this page

Scroll to Top