ಧಾರಾವಾಹಿ ಸಂಗಾತಿ-14 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಅನಲ ಅಳಿಯನಾದ ಬಗೆ ಹೀಗೆ ಅನಲ ಅಳಿಯನಾದ ಬಗೆ ಹೀಗೆ‘ಮೇಧಾಶ್ವವನ್ನು ಯಾವ ಕಾರಣಕ್ಕೂ ಬಿಡಲಾರೆ. ನನ್ನ ಜೊತೆಗೆ ಹೋರಾಟ ಮಾಡಿಯೇ ಕುದುರೆಯನ್ನುಕರೆದೊಯ್ಯಬೇಕು ನೀನು. ಇದು ಖಚಿತ’ ಎಂಬ ನೀಲಧ್ವಜ ಉದ್ಘೋಷಿತ ಸಂದೇಶ ನನ್ನನ್ನು ಬಂದು ತಲುಪಿತು.ನನಗಾದದ್ದು ಅಚ್ಚರಿ.ಅಗ್ನಿಯ ಮಾತಿನಂತೆ ಯುದ್ಧವನ್ನು ನಿಲ್ಲಿಸಿದ್ದವನು ನೀಲಧ್ವಜ. ಕುದುರೆಯನ್ನವನು ಬಿಟ್ಟುಕೊಡುತ್ತಾನೆಎನ್ನುವುದು ನನಗಿದ್ದ ಸರಳ ಸಹಜ ಅಂದಾಜು. ಆದರೆ ಇದ್ದಕ್ಕಿದ್ದಂತೆಯೇ ಅವನು ಮನಸ್ಸು ಬದಲಾಯಿಸಿದ್ದ.ಮಾಹಿಷ್ಮತಿಯರಸನ ಮನ ತಕ್ಷಣ ಬದಲಾದುದಕೆ ಏನದು ಕಾರಣ ಎಂಬ ಮೂಲ ಮರ್ಮಲತೆಯನ್ನು ಹುಡುಕಿಹೊರಟನನಗೆ ತಿಳಿದುಬಂದದ್ದು ಜ್ವಾಲೆಯೆಂಬವಳ ಮಾತು.ಜ್ವಾಲೆ, ನೀಲಧ್ವಜನ ಪ್ರೀತಿಯ ರಾಣಿ. ಅರ್ಜುನನ ಕುದುರೆಯನ್ನು ಬಿಟ್ಟು ಕಳುಹಿಸಬೇಕು ಎಂದು ಮಂತ್ರಿಗಳಲ್ಲಿನೀಲಧ್ವಜ ಮಾತನಾಡುತ್ತಿದ್ದುದು ಅವಳಿಗೆ ತಿಳಿಯಿತಂತೆ. ಅವಳಿಗದು ಮೆಚ್ಚುಗೆಯಾಗಲಿಲ್ಲ. “ಹೆದರಿಕೆ ಅದೇತಕೆ!ಬಿಡದಿರು ಕುದುರೆಯನ್ನು. ನಿಲ್ಲಿಸದಿರು ಯುದ್ಧವನ್ನು. ಅರ್ಜುನನಿಗೆದುರಾಗಿ ನಿಂತು ಕದನವ ಮಾಡು” ಎಂಬ ಸಲಹೆಇತ್ತಳಂತೆ ತನ್ನೊಡೆಯನಿಗೆ. ಅದಾವ ಮಾಯೆಯಲ್ಲಿ ಅವಳ ಮಾತಿನ ಸುಳಿಗೆ ಸಿಲುಕಿದನೋ ಆ ನೀಲಧ್ವಜ! ಹಯವಬಿಟ್ಟುಕೊಡದಿರುವ ಛಲವ ಹೊತ್ತುಮೆರೆಯುತಿಹ ಸಂದೇಶವ ನನಗೆ ಕಳುಹಿಸಿಕೊಟ್ಟ.ಜ್ವಾಲೆಯ ಮನೋಭೂಮಿಕೆ ಹೊಸದೆನಿಸಿತು ನನಗೆ. ಸಾಮಾನ್ಯವಾಗಿ ಕ್ಷಾತ್ರಪುರುಷರು ಕಲಹದೆಡೆಗೆಕುತೂಹಲಿಗಳಾಗಿರುತ್ತಾರೆ. ಅವರ ಆಸಕ್ತಿಯದು ಸಹಜ. ಹೆಂಗಳೆಯರು ಯುದ್ಧ ಬೇಡವೆಂದು ಗಂಡಂದಿರನ್ನು ತಡೆಯುವಪ್ರಯತ್ನ ಮಾಡುತ್ತಾರೆ. ಕದನವಾದರೆ ತನ್ನವನಿಗೆ ಅದೇನಾದೀತೋ ಎಂಬ ಆತಂಕ ಅವರಲ್ಲಿರುತ್ತದೆ. ಆದರೆ ಈ ಜ್ವಾಲೆಯುದ್ಧದಿಂದ ವಿಮುಖನಾಗಿ ಶಾಂತಿಯೆಡೆಗೆ ಮನಸ್ಸು ಮಾಡಿದ ರಮಣನ ಮನಸ್ಸನ್ನು ಮತ್ತೆ ಕ್ರಾಂತಿಯೆಡೆಗೆ ಸೆಳೆಯುವಮನಸ್ಸು ಮಾಡಿದ್ದಳು. ರಮಣನ ಪ್ರಾಣದೆಡೆಗೆ ಅವಳಿಗೆ ಮಮಕಾರ ಭಾವ ಇರಲಿಲ್ಲವೇ?! ಗೊತ್ತಿಲ್ಲ.ಅವಳಿಗೆ ನನ್ನ ಮೇಲೇನಾದರೂ ದ್ವೇಷವಿತ್ತೇ! ನನಗೆ ಅರಿವಿಲ್ಲ. ನಾನ್ಯಾವತ್ತೂ ಅವಳಲ್ಲಿ ಮಾತನಾಡಿದ್ದಿಲ್ಲ.ಜಗಳ ಆಡಿದ್ದಿಲ್ಲ. ಹಾಗಿರುವಾಗ ನನ್ನ ಮೇಲೆ ಅವಳಿಗೆ ದ್ವೇಷ ಇರಲು ಸಾಧ್ಯವೇ! ತಿಳಿಯಲಿಲ್ಲ.ಇನ್ನೊಂದು ಬಗೆಯ ಯೋಚನೆ ಮೂಡಿತು ನನಗೆ ಆ ಕ್ಷಣದಲ್ಲಿ. ಯುದ್ಧ ಸಂಧಾನಕಾರನಾಗಿ ನಡೆದುಕೊಂಡವನುಅಗ್ನಿ. ಅವನು ನೀಲಧ್ವಜನ ಅಳಿಯ. ಮಾಹಿಷ್ಮತಿಯಲ್ಲಿಯೇ ನೆಲೆನಿಂತು ಆ ನಗರದ ಅಳಿಯನಂತೆ ಗುರುತಿಸಿಕೊಂಡವನು.ಮಗಳನ್ನು ಮದುವೆಯಾದ ಅಳಿಯನ ಮೇಲೇನಾದರೂ ಕೋಪ ಇರಬಹುದೇ ಜ್ವಾಲೆಗೆ?! ಎಂಬ ಆಲೋಚನೆ ನನ್ನಲ್ಲಿಉದಯಿಸಿತು.ಈ ಬಗೆಯ ಚಿಂತನೆ ನನ್ನಲ್ಲಿ ಮೂಡುವುದಕ್ಕೆ ಸಕಾರಣವಿತ್ತು. ನೀಲಧ್ವಜನ ಮಗಳು ಅಗ್ನಿಯನ್ನು ಪ್ರೀತಿಸಿಮದುವೆ ಆದವಳು.ನೀಲಧ್ವಜ ಜ್ವಾಲೆಯರ ಮಗಳು ಅಪ್ರತಿಮ ರೂಪವತಿಯಾಗಿದ್ದಳು. ಗುಣಶೀಲೆ ಎನಿಸಿಕೊಂಡಿದ್ದಳು. ಹೀಗಿದ್ದಚೆಲುವೆ ಯೌವ್ವನಾವಸ್ಥೆಯನ್ನು ತಲುಪಿದಾಗ ನೀಲಧ್ವಜನಲ್ಲಿ ಮಗಳ ಮದುವೆಯ ಯೋಚನೆ ಮೂಡಿತು. ಮೂರೂ ಲೋಕಗಳಲ್ಲಿ ಖ್ಯಾತಿ ಗಳಿಸಿದ, ವೀರರೆಂದು ಹೆಸರು ಪಡೆದ, ಸಿರಿವಂತರೆAದು ಗುರುತಿಸಿಕೊಂಡ ಪುರುಷರ ಚಿತ್ರವನ್ನುಅವಳೆದುರು ಹಿಡಿದು, “ಇವರಲ್ಲಿ ನಿನ್ನ ಪತಿಯಾಗುವವರು ಯಾರೆಂದು ನೀನೇ ಹೇಳು ಮುದ್ದು ಮಗಳೇ” ಎಂದ.ತಂದೆಯ ಮಾತಿನಂತೆ ಚಿತ್ರಪಟದೆಡೆಗೆ ಹರಿಣಿನೇತ್ರವನ್ನು ಹರಿಸಿದ ಸುಂದರಿಗೆ ಚೆಲುವನಾಗಿ ಕಂಡದ್ದು ಅಗ್ನಿದೇವ.ತಂದೆ ತಂದು ಕೈಗಿಟ್ಟಿದ್ದ ಚಿತ್ರಪಟದಲ್ಲಿ ಅಗ್ನಿ ಗಂಧರ್ವ ಯಕ್ಷ ದೇವತೆಗಳನ್ನು ತನ್ನ ಚೆಲುವಿನಿಂದಲೇ ಅಪಹಾಸ್ಯ ಮಾಡಿನಗುತ್ತಿದ್ದ. ಸಕಲ ಭೂಮಂಡಲದ ರಾಜಾಧಿರಾಜರನ್ನು ಮೀರುವಂತೆ ತೋರುತ್ತಿದ್ದ. ಮನ್ಮಥರಾಜ ವಸಂತರಾಜರನ್ನೂಮೀರಿದ ಸೌಂದರ್ಯವನ್ನು ಆವಾಹಿಸಿಕೊಂಡು ಕುಳಿತಿದ್ದ. ತಕ್ಷಣವೇ ನೀಲಧ್ವಜಕುವರಿಯ ಚಿತ್ತ ಚಿತ್ರಪಟದಲ್ಲಿದ್ದಅಗ್ನಿದೇವನ ಹೃದಯವನ್ನು ಕೂಡಿಕೊಂಡಿತು. “ಎನಗಿನ್ನು ಇವನೇ ರಮಣ” ಎಂದಳು ತಂದೆಯಲ್ಲಿ, ನಸುನಾಚಿಕೆತೋರುತ್ತ.ನಡೆಯಲಾರದ್ದರೆಡೆಗೆ, ಸಾಧ್ಯವಾಗದ್ದರ ಕಡೆಗೆ ಮಗಳು ಮನಸ್ಸು ಹರಿಸಿದ್ದಾಳೆ ಎನಿಸಿತು ನೀಲಧ್ವಜನಿಗೆ.ಅದನ್ನೇ ತನುಜೆಗೆ ಹೇಳಿದ. ತಂದೆಯ ಮಾತು ಅಪಥ್ಯವಾಯಿತು ಆ ಚೆಲುವೆಗೆ. ಜನಕನನ್ನು ಜರಿದವಳು ಅರಮನೆಯನ್ನುತೊರೆದುಹೋದಳು.ತಾರುಣ್ಯವೆಂದರೆ ಹಾಗೆಯೇ. ಹೃದಯ ಏನನ್ನು ಬಯಸುತ್ತದೆಯೋ ಅದು ದಕ್ಕದಾದಾಗ ನಿರಾಸೆ ಮೂಡುತ್ತದೆ;ಹಠ ಕುಡಿಯೊಡೆಯುತ್ತದೆ. ಪಡೆಯದಿರಲಾರೆ ಮನ ಬಯಸಿದ ಅನಲನನ್ನು ಎಂದುಕೊಂಡಳು ನೀಲಧ್ವಜಸುತೆ.ಅರಮನೆಯನ್ನು ತೊರೆದವಳು ನರ್ಮದಾ ತೊರೆಯ ತೀರವನ್ನು ಸೇರಿದಳು, ತೀರದಾಸೆಯನ್ನು ಎದೆಯಲ್ಲಿಹೊತ್ತುಕೊಂಡು. ನಾನಾ ವಿಧಗಳಲ್ಲಿ ಅಗ್ನಿದೇವನನ್ನು ಅರ್ಚಿಸಿದಳು.ಅವಳ ಪೂಜೆಯ ಸೊಗಸದು ಅಗ್ನಿಗೆ ಮೆಚ್ಚುಗೆಯಾಯಿತು. ಅವಳನ್ನು ಮದುವೆಯಾಗುವ ಇಚ್ಛೆ ಅವನಲ್ಲಿಯೂಮೂಡಿತು.ಬ್ರಾಹ್ಮಣ ವೇಷವನ್ನು ತಾಳಿದ ಅನಲ ಕಾಣಿಸಿಕೊಂಡದ್ದು ನೀಲಧ್ವಜನ ಆಸ್ಥಾನದಲ್ಲಿ. ಸಭೆಗೆ ಬಂದಭೂಸುರನನ್ನು ಸ್ವಾಗತಿಸಿದ ನೀಲಧ್ವಜ. ಬಂದ ಕಾರಣವನ್ನು ನಯವಾಗಿ ಕೇಳಿದ. “ಕನ್ಯೆಯನ್ನು ಬಯಸಿ ಬಂದಿದ್ದೇನೆ.ನಿನ್ನ ಸುತೆಯನ್ನು ಕೊಡು ಎನಗೆ. ರಾಜನಾಗಿರುವ ನೀನು ಬ್ರಾಹ್ಮಣನಾದ ನನಗೆ ಮಗಳನ್ನು ಮದುವೆಮಾಡಿಕೊಡಬಹುದು. ಶಾಸ್ತçದ ಅಭ್ಯಂತರವಿಲ್ಲ” ಎಂದ ಬ್ರಾಹ್ಮಣ ವೇಷದ ಅನಲ.ಮಗಳು ಅಗ್ನಿಯನ್ನು ಮದುವೆಯಾಗುವ ಮನಸ್ಸು ಮಾಡಿದ್ದಾಳೆ. ಏನು ಮಾಡಲಿ! ಎಂದು ಅಸಹಾಯಕತೆತೋರಿದ ನೀಲಧ್ವಜ. ತಕ್ಷಣವೇ ತಾನೇ ಅಗ್ನಿ ಎಂಬ ಸತ್ಯವನ್ನು ಅರುಹಿದ ಅನಲ.ನೀಲಧ್ವಜನ ಆಪ್ತಮಂತ್ರಿ ಪರೀಕ್ಷಿಸಿದ. ಅವನು ಅಗ್ನಿಯೆನ್ನುವುದು ಸಾಬೀತಾಯಿತು. ನೀಲಧ್ವಜನ ಸತಿಯೂಪರೀಕ್ಷೆ ಮಾಡಿದಳು. ವಿಪ್ರ ವೇಷವದು ನಕಲು. ನಿಜವಾಗಿಯೂ ಅಗ್ನಿಯವನು ಎನ್ನುವುದವರ ಅರಿವಿಗೆ ಬಂತು. ನೀಲಧ್ವಜಅಗ್ನಿಯಲ್ಲಿ “ಮಗಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ. ಆದರೆ ನೀನು ಇದೇ ನಗರದಲ್ಲಿ ಇರಬೇಕು” ಎಂದ. ಅಗ್ನಿಒಪ್ಪಿದ. ಅನಲ ನೀಲಧ್ವಜನ ಅಳಿಯ ಎನಿಸಿಕೊಂಡ.ಹೀಗೆ ಅಳಿಯನಾದ ಅಗ್ನಿಯ ಮೇಲೆ ರಾಣಿ ಜ್ವಾಲೆಗೆ ಏನಾದರೂ ಅಸಮಾಧಾನ ಇತ್ತೋ ಏನೋ! ಈಕಾರಣದಿಂದಲೇ ಅವನು ಏರ್ಪಡಿಸಿದ ಸಂಧಾನವದು ಅವಳಿಗೆ ಸಹ್ಯವಾಗಲಿಲ್ಲವೋ ಏನೋ! ನೀಲಧ್ವಜ ಸೇನೆಯೊಡನೆ ಮತ್ತೆ ಕದನ ಹೂಡುವುದೀಗ ಅನಿವಾರ್ಯವಾಗಿಬಿಟ್ಟಿತ್ತು ನಮಗೆ. ಕುದುರೆಯಕಾಲುಗಳು ಮಾಹಿಷ್ಮತಿ ನಗರವನ್ನು ತೊರೆದು ಮುಂದೆ ಚಲಿಸಬೇಕಾದರೆ ನಮ್ಮ ಕಾಲುಗಳು ಕದನರಂಗಕ್ಕಿಳಿಯಬೇಕಿತ್ತು. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಧಾರಾವಾಹಿ ಸಂಗಾತಿ-13 ಅರ್ಜುನ ಉವಾಚ ವಿಶ್ವನಾಥ ಎನ್ ನೇರಳೆಕಟ್ಟೆ ಕದನಾಂತರಂಗದಲ್ಲಿ ಅನಲ ನರ್ತನ ಕದನಾಂತರಂಗದಲ್ಲಿ ಅನಲ ನರ್ತನ ಪ್ರವೀರನೆಂಬ ವೀರ ಮೇಧಾಶ್ವವನ್ನು ಕಟ್ಟಿಹಾಕಿದ್ದಾನೆ ಎಂಬ ಸುದ್ದಿಯನ್ನು ನನ್ನಲ್ಲಿಗೆ ಹೊತ್ತುತಂದರು ಕುದುರೆಯ ಮೈಗಾವಲಿಗಿದ್ದ ಭಟರು. ಗೆಲ್ಲುವ ಸಾಮರ್ಥ್ಯವಿದ್ದರೆ ಆ ಪಾರ್ಥ ನನ್ನೆದುರು ಯುದ್ಧಕ್ಕೆ ಬರಲಿ ಎಂದಿದ್ದನಂತೆ ಪ್ರವೀರ. ನಗುವೂ ಬಂತು. ಕೋಪವೂ ಉಕ್ಕಿತು. ಇಂತಹ ಸಾಕಷ್ಟು ಯುದ್ಧಗಳನ್ನು ಕಾಣುವುದಕ್ಕಿದೆ ಮುಂದೆ ಎಂದು ಸಾಮರ್ಥ್ಯವನ್ನು ಮುಂದುಮಾಡಿಕೊಂಡೇ ಬಂದವ ನಾನು. ಹಾಗಿರುವಾಗ ಆ ಪ್ರವೀರ ಗೆಲ್ಲುವ ಸಾಮರ್ಥ್ಯ ಇದ್ದರೆ ಎಂಬ ಮಾತನ್ನು ಆಡಿದನಲ್ಲಾ ಎಂಬ ಯೋಚನೆ ನಗುವನ್ನು ಮೂಡಿಸಿತು. ಪಾಂಡವವೀರರಿಗೆ ಸೇರಿದ ಅಶ್ವವಿದು ಎಂದು ಅರಿವಾದ ಬಳಿಕವೂ ಶರಣು ಬರದೆ ಕುದುರೆಯನ್ನು ಕಟ್ಟುವ ಭಂಡಧೈರ್ಯ ತೋರಿದನಲ್ಲಾ ಎಂದು ಕೋಪ ಬಂತು. ಸೈನಿಕರನ್ನೆಲ್ಲಾ ಸನ್ನದ್ಧಗೊಳಿಸಿದೆ. ಚತುರಂಗ ಬಲಗಳೂ ಬಲಪಡೆದು ನಿಂತವು. ಮಾಹಿಷ್ಮತಿ ನಗರದ ಮೇಲೆ ಧಾಳಿಯಿರಿಸಿದೆವು. ಮೇಧಾಶ್ವವನ್ನು ಬಿಡಿಸಿಕೊಳ್ಳಬೇಕೆಂಬ ಉತ್ಸುಕತೆಯಲ್ಲಿದ್ದ ನಮ್ಮ ಕಡೆಯ ಸೈನಿಕರಲ್ಲಿ ಅಶ್ವಸದೃಶ ಶಕ್ತಿ ನೆಲೆಗೊಂಡಿತ್ತು. ನಮ್ಮ ಧಾಳಿಯ ಬಿರುಸಿಗೆ ಧೂಳೆದ್ದಿತು. ಜೊತೆಗೆ ವಾದ್ಯಗಳ ಆರ್ಭಟ. ಪ್ರವಾಹವೇ ಬಂತೇನೋ ಎನ್ನುವಂತೆ ಬೆದರಿದರು ಮಾಹಿಷ್ಮತಿ ಪಟ್ಟಣದ ಜನರು. ಉಕ್ಕಿದ ಕಡಲಿನ ಬಗೆಯಲ್ಲಿ, ಪ್ರಳಯ ಕಾಲದ ಕಾರ್ಮೋಡದ ತೆರದಲ್ಲಿ ಹೋಗಿ ಮುತ್ತಿದೆವು ಕುದುರೆಯನ್ನು ವಶಪಡಿಸಿಕೊಂಡಿದ್ದ ವೀರ ಪ್ರವೀರನನ್ನು. ಹುಚ್ಚು ಧೈರ್ಯ ಅವನದು ಎಂದುಕೊಂಡಿದ್ದೆ ಮೊದಲಿಗೆ, ಅವನು ಕುದುರೆಯನ್ನು ಕಟ್ಟಿಹಾಕಿದ ವಿಚಾರ ಕೇಳಿದಾಗ. ಆದರೆ ಈಗ ಸೇನೆಸಹಿತ ಅವನನ್ನು ಸುತ್ತುವರಿದಾಗ ಅವನ ನಿಜ ಪರಾಕ್ರಮ ನನ್ನರಿವಿಗೆ ಬಂತು. ನನ್ನನ್ನು ಕಂಡೊಡನೆಯೇ ರಥವನ್ನು ಭರದಿಂದ ಓಡಿಸಿಯಾನು ಎಂಬ ಅಂದಾಜು ನನ್ನದು. ಆದರೆ ಅವನು ಚಲಿಸದೆಯೇ ನಿಂತ. ಕೆಲವೊಮ್ಮೆ ಹಾಗೆಯೇ. ಏನು ಮಾಡಬೇಕೆಂದು ತೋಚದಾದಾಗಲೂ ಶರೀರಕ್ಕೊಂದು ಸ್ಥಿರತೆ ಒದಗುತ್ತದೆ. ಅಂತಹದ್ದೇ ಸ್ಥಿರತೆ ಆಗಿರಬೇಕಿದು ಎಂದುಕೊಂಡೆ. ಅಲ್ಲ! ನಿಜಬಗೆಯ ದಿಟ್ಟತನದಲ್ಲಿ ರಥದಲ್ಲಿಯೇ ಕುಳಿತಿದ್ದ ಪ್ರವೀರ. ವೀರರು ಸುತ್ತುವರಿದಾಗಲೂ ಅಂಜದೆ ಅಳುಕದೆ ತೇರಿನಲ್ಲಿ ಕುಳಿತಿದ್ದ ಅವನ ಆ ನಿಲುವು ಪರಮ ವೈರಾಗಿಯನ್ನು ನೆನಪಿಸುವಂತಿತ್ತು. ಯುದ್ಧದ ಅಂತಿಮ ಪರಿಣಾಮವನ್ನು ಮನಗಂಡ ತತ್ವಜ್ಞಾನಿಯಂತೆ ಕುಳಿತಿದ್ದನಾತ. ಏಕಾಂಗಿಯಾಗಿ ಹೋರಾಟಕ್ಕಿಳಿದ ಆತ ನಮ್ಮ ಸೈನಿಕರನ್ನೆಲ್ಲಾ ಸತತ ಬಾಣಪ್ರಯೋಗಗಳಿಂದ ಕೊಂದುಹಾಕಿದ. ಸತ್ವಯುತನಿವನು ಎನ್ನುವುದು ನನಗೆ ಖಚಿತವಾಯಿತು. ಹೀಗಿದ್ದಾಗಲೇ ನೀಲಧ್ವಜ ಸೇನೆಸಹಿತನಾಗಿ ನಮ್ಮನ್ನು ಎದುರಿಸುವುದಕ್ಕೆ ಬಂದ. ಒಂಟಿಯಾಗಿ ಹೋರಾಡುತ್ತಿದ್ದ ಪ್ರವೀರನಿಗೆ ಸಮಸ್ತ ಬಲವದು ದೊರಕಿದಂತಾಯಿತು. ಅವರ ಶಕ್ತಿಯುತವಾದ ಹೋರಾಟ ನಮ್ಮ ಸೇನೆಯನ್ನು ಕಳೆಗುಂದಿಸಿತು. ಸೇನೆಯ ಮುಂಚೂಣಿಯಲ್ಲಿದ್ದ ನಾನು ನಾಯಕತ್ವವನ್ನು ಸರಿಯಾಗಿ ನಿಭಾಯಿಸಲಾಗದೆ ಎಡವಿದೆ ಎಂಬ ಭಾವ ನನ್ನನ್ನು ಆವರಿಸಿತು. ನನ್ನ ಅಂತರಂಗದೊಳಗೆ ಯಾರೋ ಬೆಂಕಿ ಹಚ್ಚಿದ ಅನುಭವ. ಮೊದಲ ಯುದ್ಧದಲ್ಲಿಯೇ ಹೀಗಾದರೆ ಇನ್ನುಳಿದ ಕದನಗಳ ಗತಿಯೇನು ಎಂಬ ಯೋಚನೆ ಬಂತು. ಅಣ್ಣ ಧರ್ಮಜ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳದವನಾದೆನೇ ಎಂಬ ಅಳುಕು ಮೂಡಿತು. ಬಗೆಬಗೆಯ ಭಾವಗಳ ನೆಲೆವೀಡಾಗಿಹೋದ ನನ್ನ ಚಿತ್ತ ಯುದ್ಧದತ್ತ ಏಕಾಗ್ರವಾಗಲೇ ಇಲ್ಲ. ಸೋಲುತ್ತೇನೆ ಎಂಬ ಭಾವ ದೃಢವಾದಾಗಲೇ ‘ಇಲ್ಲ! ಏನೆಂದರೂ ಬಿಡಲಾರೆ’ ಎಂಬ ಛಲ ನಮ್ಮಲ್ಲಿ ಮೂಡುವುದು. ಯುದ್ಧದಲ್ಲಿಯೂ ಹೀಗೆಯೇ. ಬದುಕಿನಲ್ಲಿಯೂ ಹೀಗೆಯೇ. ಎದುರಿಗಿದ್ದ ಮಾಹಿಷ್ಮತಿ ಸೇನೆ ನನ್ನ ಪಾಲಿಗೆ ಒಗಟಿನಂತಾಗಿತ್ತು. ಬಿಡಿಸುತ್ತೇನೆ ಈ ಒಗಟನ್ನು ಕುದುರೆಯನ್ನು ಬಿಡಿಸುವುದಕ್ಕೋಸ್ಕರ ಎಂದುಕೊAಡೆ. ಕೋಪಾತಿರೇಕದ ಆ ಅವಸ್ಥೆಯಲ್ಲಿ ಬಿಲ್ಲಿಗೆ ಕೈಯ್ಯಿಕ್ಕಿದೆ. ಹೆದೆಯನ್ನು ಮಿಡಿದೆ. ಎದ್ದ ನಾದ ಮಾಹಿಷ್ಮತಿ ಸೇನೆಯನ್ನು ಯಮಪುರಿಗಟ್ಟುವ ಮರಣಶ್ರುತಿಯಾಯಿತು. ಮಳೆಗಾಲದ ಕೊನೆಕೊನೆಯಲ್ಲಿ ಹಠಹಿಡಿದು ಸುರಿವ ಮಳೆಯಂತೆ ಅಬ್ಬರಿಸಿದೆ. ನೀಲಧ್ವಜನ ಸೇನೆಯದು ದಿಕ್ಕೆಟ್ಟುಹೋಯಿತು. ಕಂಗೆಟ್ಟ ನೀಲಧ್ವಜ ಹೋಗಿ ಸಹಾಯ ಕೇಳಿದ್ದು ಅಗ್ನಿಯಲ್ಲಿ. ಅನಲ ನೀಲಧ್ವಜನ ಅಳಿಯ. ಅವನ ಮಗಳನ್ನು ಮದುವೆಯಾದವನು. ಮಾಹಿಷ್ಮತಿ ಪಟ್ಟಣದಲ್ಲಿಯೇ ನೆಲೆಸಿದ್ದವನು. ಮಾವನ ಕೋರಿಕೆಗೆ ಬೆಲೆಯಿತ್ತ ಅಗ್ನಿ, ನಮ್ಮಿಡೀ ಸೈನ್ಯವನ್ನು ಕರುಣೆಯಿಲ್ಲದೆಯೇ ದಹಿಸತೊಡಗಿದ. ಅನಲನ ಕೆನ್ನರ್ತನ ನಮ್ಮ ಕಡೆಯ ಸೈನಿಕರನ್ನು ಕಪ್ಪಗಾಗಿಸಿತು. ಅವನ ಚಲನೆ ನಮ್ಮವರನ್ನು ಅಚಲರಾಗಿಸಿತು. ಅವನ ತೇಜಸ್ಸು ಹೆಚ್ಚಿದಂತೆ ನಮ್ಮವರೆಲ್ಲಾ ತೇಜಶೂನ್ಯರಾದರು. ದೆಸೆದೆಸೆಗಳಲ್ಲಿ ಭೀಕರವಾದ ಹೊಗೆ. ದಿಕ್ಕುದಿಕ್ಕುಗಳಲ್ಲಿ ಅನಲ ಜ್ವಾಲೆ. ಯಾರಲ್ಲಿಯೂ ಭೇದ ತೋರದೆ ಎಲ್ಲರನ್ನೂ ಆಹುತಿಗೊಳ್ಳತೊಡಗಿದ ಅನಲ. ನನ್ನಲ್ಲಿ ಅತೀವ ಆತಂಕ ಮನೆಮಾಡಿತು. ಅಗ್ನಿಯ ಶಕ್ತಿಯೇನೆಂಬುದರ ಅರಿವಿತ್ತು ನನಗೆ. ಅವನ ಸಾಮರ್ಥ್ಯವನ್ನು ನಾನು ಕಂಡದ್ದು ಇದೇ ಮೊದಲೇನಲ್ಲ. ಅಂದು ಖಾಂಡವ ವನವನ್ನು ದಹಿಸಿದ ಅವನ ಉರಿಹಸಿವಿನ ತೀಕ್ಷ್ಣತೆಯನ್ನು ಸಾಮಿಪ್ಯದಿಂದ ದರ್ಶಿಸಿದವ ನಾನು. ಹಾಗಿರುವಾಗ ಅಗ್ನಿಯ ಈ ಬಗೆ ಹೀಗೆಯೇ ಮುಂದುವರಿದರೆ ಅಶ್ವಮೇಧದ ನೆಪದಲ್ಲಿ ಬಂದ ನಾವೆಲ್ಲರೂ ಅಗ್ನಿಯೊಡಲಿಗೆ ಮೇಧಾಶ್ವಗಳಾಗುವುದು ಖಚಿತ ಎನಿಸಿತು ನನಗೆ. ಶಕ್ತಿಯಿಂದ ಗೆಲ್ಲಲಾಗದ್ದನ್ನು ಯುಕ್ತಿಯಿಂದ ಗೆಲ್ಲಬೇಕು. ಇದು ಲೋಕರೂಢಿ. ಜಗದ ನಿಯಮ. ನುಡಿಯಿಂದ ಅನಲನನ್ನು ಮೆಚ್ಚಿಸಿ ಅವನನ್ನು ತೃಪ್ತಗೊಳಿಸುವ ತಂತ್ರ ಹೂಡಿದೆ. “ನೀನೇನೂ ನನಗೆ ಅಪರಿಚಿತನಲ್ಲ. ನಾನು ಗಾಂಡೀವಿ ಎನಿಸಿಕೊಳ್ಳಲು ಕಾರಣವಾದ ಗಾಂಡೀವ ಧನುಸ್ಸು ದೊರೆತದ್ದೇ ನಿನ್ನಿಂದ. ನನ್ನ ಮಡದಿ ದ್ರೌಪದಿ ನಿನ್ನಿಂದಲೇ ಉದಿಸಿಬಂದವಳು” ಎಂದೆಲ್ಲಾ ಹೇಳಿ ನನಗೂ ಅವನಿಗೂ ಇರುವ ಬಾಂಧವ್ಯದ ನೆನಪು ಮಾಡಿದೆ. ವೇದವ್ಯಾಸ ಮುನಿಗಳು ಹೇಳಿದ್ದಕ್ಕಾಗಿ, ಶ್ರೀಕೃಷ್ಣ ಸೂಚನೆ ಇತ್ತದ್ದಕ್ಕಾಗಿ ಈ ಯಾಗ; ಈ ಯುದ್ಧ. ಇಲ್ಲವಾದರೆ ಇದೆಲ್ಲಾ ಬೇಕಿರಲಿಲ್ಲ ಎಂದೆ. ಅಗ್ನಿ ತಂಪಾದ. ದಹಿಸುವುದನ್ನು ನಿಲ್ಲಿಸಿದ. ನನ್ನ ಮಾತಿನಲ್ಲಿದ್ದ ದೈನ್ಯತೆ ಅವನನ್ನು ದಯಾಪರನನ್ನಾಗಿಸಿತು. ಮಗಳನಿತ್ತ ಮಾವನಾದ ನೀಲಧ್ವಜನಲ್ಲಿ ಯುದ್ಧ ನಿಲ್ಲಿಸುವಂತೆ ಸೂಚಿಸಿದ. ಅಳಿಯ ಅಗ್ನಿಯ ಮಾತನ್ನು ಅಂಗೀಕರಿಸಿದ ನೀಲಧ್ವಜ. ಯುದ್ಧ ನಿಂತಿತು ಎಂದು ನಾನು ನಿರಾಳತೆ ಹೊಂದುವಷ್ಟರಲ್ಲಿ ನನ್ನನ್ನು ಮತ್ತೆ ಚಿಂತೆಗೀಡುಮಾಡುವ ಸುದ್ದಿಯೊಂದು ಬಂದು ತಲುಪಿತು… ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಅರ್ಜುನ ಉವಾಚ
ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅವರಅಂಕಣ
ಈ ವಾರ
ಪರಮಾತ್ಮನ ಪರಮ ಪಯಣವದು ಪ್ರಿಯಪುರದ ಕಡೆಗೆ…
ಅಂಕಣ ಸಂಗಾತಿ
ಸರಣಿ ಬರಹಗಳು
ಅರ್ಜುನ ಉವಾಚ
ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಕುದುರೆಗಾಗಿ ಕದನ ಕೋಲಾಹಲ
ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಅರ್ಜುನ ಉವಾಚ
ಭೀಮಸೇನನ ಅಂತರಂಗವನ್ನು ಅಲುಗಿಸಿತು ಆ ಅಶ್ವ!
ನಿರಾಸೆಯಾಗಿತ್ತು ಭೀಮನಿಗೆ. ಬಯಸಿದ್ದು ಸಿಗದಾದಾಗ ಆಗುವ ಸಹಜ ಭಾವವದು. ಕುದುರೆಯನ್ನು ತಂದೊಪ್ಪಿಸುತ್ತೇನೆಂದು ತಾನಾಡಿದ ವೀರನುಡಿ ಅದೆಲ್ಲಿ ಸುಳ್ಳಾಗುವುದೋ ಎಂಬ ಅಳುಕು ಅವನಲ್ಲಿ ಮೂಡತೊಡಗಿತ್ತು.

