ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಆಡುಭಾಷೆಯ ಸವಿ ಗೋದಾನ.

ಪುಸ್ತಕ ಸಂಗಾತಿ ಆಡುಭಾಷೆಯ ಸವಿ     ಗೋದಾನ. ಕನ್ನಡ ನುಡಿ’  ಯನ್ನು   ಮೂರು ರೀತಿಯಿಂದ ಅಭಿವ್ಯಕ್ತ    ಗೊಳಿಸಬಹುದೆಂದು ಗೊತ್ತಿರುವ ಸಂಗತಿ. ಅದು ಶಿಷ್ಟ, ಜಾನಪದ ಮತ್ತು ಆಡು ಭಾಷೆ.ನಾನು,ನೀವೂ ಸೇರಿದಂತೆ ಬರಹಗಾರ,ಬರಹಗಾರ್ತಿಯರು, ಅರಿತೋ ಅರಿಯದೆಯೋ,ಗ್ರಾಂಥಿಕ ಭಾಷೆಗೆ ಮರುಳಾಗಿಬಿಟ್ಟಿದ್ದೇವೆ.ಜನಪದ ಭಾಷೆಗೆ ಹತ್ತಿರ ವಾಗಿದ್ದ,ಅಡುಕನ್ನಡವನ್ನು ಜೀವಂತವಾಗಿಟ್ಟವರು ನಮ್ಮ ಗ್ರಾಮೀಣ ಜನಾಂಗ.ಅವರಿಗೆ ಶಿಷ್ಟ ಜನಗಳು ಮಾಡುತ್ತಿರುವ ಅನ್ಯಾಯ ಇದು ಎಂದೇ ಹೇಳಬಹುದು ಎಂದು ನಾನು ಇದೇ ಅಂಕಣದಲ್ಲಿ ಈ ‌ಮೊದಲೇ ಹೇಳಿದಂತೆ ನೆನಪು. ನಮ್ಮ ಓದು ,ಕತೆ,ವಸ್ತು,ಪಾತ್ರ,ವಾಕ್ಯ ರಚನೆ ಗಳ ಜೊತೆಗೆ ಭಾಷಾ ಸಂಪತ್ತಿನ ಕಡೆಗೂ ಜ್ಞಾನ ಹಾಯಿಸಿದಾಗ ಬಳಕೆಯಾದ ಭಾಷೆಯ ಪ್ರಭೇದ  ಗಮನಕ್ಕೆ ಬರುವಂತಾಗುತ್ತದೆ. ಆಗ ಮಾತ್ರ,ನಮ್ಮ ರಾಚನಿಕ ಕ್ರಿಯೆಯಲ್ಲಿ ಅದು ಪದ್ಯವೇಆಗಿರಲಿ,ಗದ್ಯವೇ ಆಗಿರಲಿ, ನಮ್ಮ ಆಯ್ಕೆಯ ಭಾಷೆ ಎಂತಹದು,  ಅದು ಎಷ್ಟು,ಹಿತ ಮತ್ತು  ಸಹ್ಯ  ಎನ್ನು ವುದರ ಕಡೆಗೆ ನಮ್ಮ ಒಲವು ಸಹಜವಾಗಿ ಬೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ಶೀಕಾಂತ  ಕಕ್ಕೇರಿಯವರು ರಚಿಸಿದ, ಮುನ್ಷಿ ಪ್ರೇಮಚಂದ ಅವರ ಕಾದಂಬರಿ,’ಗೋದಾನ ‘ ಆಧಾರಿತ ಅದೇ ಶೀರ್ಷಿಕೆಯ ನಾಟಕವನ್ನು ನೋಡಬೇಕಾಗುತ್ತದೆ.ಅಚ್ಚ ಹೈದರಾಬಾದ್ ಕರ್ನಾಟಕದ ಭಾಷೆಯಲ್ಲಿ ರಚಿತವಾಗಿರುವ ಇದು ೩೯೦ ಪುಟಗಳ,೪೩ ಪಾತ್ರಗಳ,೩೪ ದೃಶ್ಯಗಳ ( ಅಂಕಗಳು ಎಂದು ವಿಭಜನೆಯಿಲ್ಲ) ಸುದೀರ್ಘಾವಧಿಯ ನಾಟಕ. ಇದು ನನಗೆ ಖುಷಿ ನೀಡಲು ಕಾರಣವಾದ ಎರಡು ಸಂಗತಿಗಳನ್ನು ಹೇಳಿ ವಿಷಯ ಪ್ರವೇಶಿಸಲು ಇಷ್ಟಪಡುತ್ತೇನೆ ೧. ಗೋದಾನ ನಾಟಕದ ಭಾಷೆ, (ಮೇಲೆ ಹೇಳಿದ ಆಡು ಭಾಷೆ) .೨. ಶ್ರೀಕಾಂತ ಕಕ್ಕೇರಿಯವರ ಹೈದರಾಬಾದ್ ನಲ್ಲಿ ಹುಟ್ಟಿ ಬೆಳೆದವರು. ಪ್ರತಿಷ್ಟಿತ ನೃಪತುಂಗ ಶಾಲೆಯ ವಿದ್ಯಾರ್ಥಿ ಮತ್ತು ಉಸ್ಮಾನಿಯ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಪದವೀಧರರು. ರಾಯಚೂರು ಕಲಬುರ್ಗಿಗಳ ಇಂಜನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು.ಸಮುದಾಯ ಸಂಘಟನೆಯೊಂದಿಗೆ ಗುರುತಿಸಿ ಕೊಂಡವರು.ಉತ್ತಮ ನಾಟಕಕಾರರು,ನಟರೂ,ರಂಗತಜ್ಞರೂ ಹೌದು. ಇಷ್ಟೆಲ್ಲ ಹೇಳಿಯಾದ ಮೇಲೆ ಗೋದಾನ ನಾಟಕದ ವೈಶಿಷ್ಟ್ಯ ಕುರಿತು ಹೇಳಬೆಕಾಗಿಲ್ಲಎಂದು ಕೊಳ್ಳಲೇ ? ಆದರೂ ಪರಿಚಯಾತ್ಮಕ ವಾಗಿ ಒಂದೆರಡು ಮಾತು ಅಗತ್ಯ ಎನಿಸುತ್ತಿದೆ. ಹಾಗೆ ನೋಡಿದರೆ,  ನಮ್ಮಲ್ಲಿ   ದಲಿತ ಸಾಹಿತ್ಯ ತನ್ನದೇ ಆದ ನೆಲೆ ಕಂಡುಕೊಂಡಿದ್ದು ೧೯೭೦ ಸುಮಾರಿಗೆ ಎಂದು ಹೇಳಬಹುದು.ದಲಿತ ಜನಾಂಗದ ವಿರುದ್ದ ಆಗುತ್ತ ಬಂದಿರುವ, ಅನ್ಯಾಯ, ಅತ್ಯಾಚಾರದ ವಿರುದ್ಧ ಸಿಡಿದೆದ್ದು ನಡೆದ ಹೋರಾಟವನ್ನೇ ಕನ್ನಡ ಸಾಹಿತ್ಯ ಬಂಡಾಯ ಚಳುವಳಿ ಎಂದು ಗುರುತಿಸಲಾಯಿತು. ಮತ್ತು ಜನಾಂಗದ ವಿರುದ್ಧ ಉಂಟಾದ ದಬ್ಬಾಳಿಕೆಗಳು ಅಕ್ಷರರೂಪ ಪಡೆದುಬಂದ ಸಾಹಿತ್ಯವೇ ದಲಿತ ಸಾಹಿತ್ಯ ಎನಿಸಿಕೊಂಡಿತು.ಇನ್ನೂ ಹೇಳುವದಾದರೆ,ದಲಿತ ಸಾಹಿತ್ಯದ ಕುರುಹು ನಮಗೆ ೧೧ ನೆಯ ಶತಮಾನದಲ್ಲಿ ಸಿಗುತ್ತವೆ.ಕಲ್ಯಾಣ ಕ್ರಾಂತಿಯ ತಳಹದಿ,ದಲಿತ ಬಂಡಾಯ ಸಾಹಿತ್ಯದ ನಾಂದಿ ಎಂದೇ ಹೇಳಬಹುದು.ತೆಲುಗಿನ ವಿಪ್ಲವ ಸಂಘಟನಕಾರರಾದ,ಶ್ರೀ ವರವರರಾವ ಹೇಳಿದ ಮಾತೊಂದು ನೆನಪಿಗೆ ಬಂತು.” ವಿಪ್ಲವ ಸಂಘಟನೆಯ ಮೂಲ ಬೇರುಗಳನ್ನು ನಾವು  ಬಸವಣ್ಣನವರ ವಿಚಾರಧಾರೆ ಯಲ್ಲಿ ಕಾಣುತ್ತೇವೆ ” ಅಂದಿನ ದಿನಗಳಲ್ಲಿಯ ‘ಸಾಯುಧ ಪೋರಾಟ’ ವಿರಸಂ ಸ್ಥಾಪನೆ,ಜನನಾಟ್ಯಮಂಡಲಿ,ದಿಗಂಬರ ಕವಿಗಳು, ಹೀಗೆ ಎಲ್ಲವೂ ಆಂಧ್ರ-ತೆಲಂಗಾಣಗಳಲ್ಲಿ ನಡೆದ ಹೋರಾಟಗಳು ನೆನಪಿಗೆ ಬರುತ್ತವೆ..ಕನ್ನಡ ಸಾಹಿತ್ಯ ಸಂದರ್ಭಕ್ಕೆ ಬಂದಾಗ, ಕುವೆಂಪು,ಕಾರಂತ ಮುಂತಾದವರು ತಮ್ಮಕೃತಿಗಳಲ್ಲಿ ಈ ಶೋಷಣೆಯ ವಿರುದ್ದ ದನಿ ಎತ್ತಿ ದಲಿತ ಸಾಹಿತ್ಯಕ್ಕೆ ನಾಂದಿ ಹಾಡಿದರು. ನಂತರದ ದಿನಗಳಲ್ಲಿ ಬರಗೂರು ರಾಮಚಂದ್ರಪ್ಪ,ದೇವನೂರು ಮಹದೇವ,ಚೆನ್ನಣ್ಣ ವಾಲಿಕಾರನಂತವರು ಇದಕ್ಕೆ ಒಳ್ಳೆಯ ತಿರುವು ನೀಡಿದರು.   ಬಂಡಾಯ ಸಾಹಿತ್ಯ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿ ಇರುವಾಗ,ದಲಿತರು ಬರೆದದ್ದೇ ದಲಿತ ಸಾಹಿತ್ಯ ಎನ್ನುವ ವಾದವೂ ಕೇಳಿ ಬಂದಿತು. ಅದಿಲ್ಲಿ ಬೇಡ. ಮುನ್ಷಿ ಪ್ರೇಮಚಂದರ ‘ಗೋದಾನ’ವೂ  ಇದೇ ವಿಷಯವನ್ನು ಪ್ರತಿಪಾದಿಸಿರುವುದು ನೋಡಿದಾಗ ಇಂತಹ ಬದುಕು ಮತ್ತದರ ವಿರುದ್ಧದ ದನಿ ದೇಶಾದ್ಯಂತ ಒಕ್ಕೊರಲಿನಿಂದ  ಸಾಗಿ ಬಂದಿದೆ ಇಂದಿಗೂ ಅದು ಕೇಳಿ ಬರುತ್ತಲೇ ಇದೆ. ಎಂದೇ ಹೇಳಬಹುದು ಕ್ರಿ.ಶ.೧೯೩೬ ರಲ್ಲಿದ್ದ ದೇಶದ ಪರಿಸ್ಥಿತಿಗಳಾದ,ಜಮೀನುದಾರಿ, ವಸಾಹತು ಶಾಹಿ,ಹೊಸದನ್ನು ಒಪ್ಪಿ ಕೊಳ್ಳದ, ಹಳೆಯದನ್ನೂ ಬಿಡಲಿಚ್ಛಿಸದ,ಹಮ್ಮಿನ ವಿಲಾಸೀ ಜೀವನಕ್ಕೆ ಒಗ್ಗಿಹೋದ,ಊರ ಜಹಗೀರದಾರರುಗಳಾದ, ರಾಜಾಸಾಬ್, ಬಾಪುಸಾಬ್, ಅವರಿಗೆ ಸಾಲಕೊಟ್ಟು ಆ ಹಣದಲ್ಲಿಯೇ,ಜಹಗೀರದಾರಗಳೊಂದಿಗೆ, ವಿಲಾಸಿ ಜೀವನ ನಡೆಸುವ ಪಟ್ಟಣವಾಸಿಗಳು. ಜಹಗೀರದಾರರರ  ಬಾಲ ಬಡುಕರಾಗಿ,ಅವರ ಹೆಸರಿನಲ್ಲ ರೈತಾಪಿ ಜನಗಳ ಶೋಷಣೆ ಮಾಡುತ್ತ ಸಿರಿವಂತ ರಾಗಿ ಬೆಂದ ಮನೆಯ ಗಳ ಹಿರಿದು ಕೊಳ್ಳಲು ಸದಾ ಅತೀ ದುಷ್ಟ ಮತ್ತು ಅಮಾನವೀಯ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ,  ತಿಪ್ಪಣ್ಣಾಚಾರ,ವೆಂಕಪ್ಪ ಕುಲಕರ್ಣಿ,ಸೀನಪ್ಪ ಸೆಟ್ಟಿ ಹೀಗೆ  ಸ್ವಾತಂತ್ರ ಪೂರ್ವ ಬದುಕಿನ ಭರ್ಝರಿ  ವಸ್ತು ಮತ್ತು ಹಿನ್ನೆಲೆ ಗೋದಾನಕ್ಕಿದೆ. ನಾಟಕದ ಮುಖ್ಯ ಪಾತ್ರಧಾರಿ ನಿಂಗಪ್ಪನ ಸುತ್ತ ತಿರುಗುವ ಗೋದಾನ ನಾಟಕದ ಈ ನಾಯಕ ನನ್ನು ಶೋಷಿಸದವರೇ ಇಲ್ಲ ಎನ್ನುವುದು ಸರಿ .ಆದರೂ ಅವನು ತಾನು ನಂಬಿದ ಒಳ್ಳೆಯ ಗುಣಗಳನ್ನು ಎಂತಹ ಪರಿಸ್ಥಿತಿಯಲ್ಲೂ ರಾಜಿ ಮಾಡಿಕೊಳ್ಳದ ಉಸಿರಿರುವತನಕ ಮರ್ಯಾದೆಗೆ ಮಹತ್ವಕೊಟ್ಟ ವ್ಯಕ್ತಿ ನಿಂಗಪ್ಪ. ಅಂಕದ ಪರದೆ ಮೇಲೇರುತ್ತಿದ್ದಂತೆ ,ನಿಂಗಪ್ಪನ ಸಂಭಾಷಣೆಯೊಂದಿಗೇನೆ ನಾಟಕ ಆರಂಭವಾಗುತ್ತದೆ. ‘ನಿಂಗ ತಿಳಿಲಾರದ್ರಾಗ ತಲೀ ಹಾಕಾಕ ಬರಬ್ಯಾಡ,ಸುಮ್ಕ ನನ ಕೋಲು ಕೊಡು,ನಿನ್ನ ಕೆಲಸಾ ಏನೈತಿ ಆಟು ಮಾಡು,ನಾನು ನಾಕ ಮಂದ್ಯಾಗ ಓಡ್ಯಾಡತೀನಿ ಅಂತ ಜೀವಂತ ಅದೀನಿ.ಇಲ್ಲಾಂದ್ರ ನಮ್ಮ ಗತಿ ಏನಾಕ್ಕಿತ್ತೋ ಅಂತ ಆ ಶಿವಗss ಗೊತ್ತು.ಊರಾಗ ಇಷ್ಟು ಜನ ಅದಾರು,ಒಬ್ಬರ ಮ್ಯಾಗ ಜೋರು ಜಬರ ದಸ್ತಿ ಇಲ್ಲ. ಒಬ್ಬರ ಮ್ಯಾಗ ಯಾವ ಖಟ್ಲೇನೂ ಇಲ್ಲ.ಒಬ್ಬರ ಕೈ ಕೆಳಗ ದುಡಿತೀವಿ ಅಂದಮ್ಯಾಕ ಅವ್ರ ಕಾಲ ಹಿಡ್ಕೊಂಡು ಬದಕೊದೆ ಪಾಡss” ಇದು ಕಕ್ಕೇರಿಯವರಿಗೆ ಭಾಷೆಯ ಮೇಲಿರುವ ಬಿಸುಪು.ಇಡೀ 390 ಪುಟಗಳುದ್ದಕ್ಕೂ ಒಂದೇ ಹದ ಒಂದೇ ಸಂಯಮ. ಆಕಳ ಹೊಟ್ಟೆಯಲ್ಲಿ ಅಚ್ಛೇರು ಬಂಗಾರ ಎನ್ನುವ ಮಾತಿನಂತೆ, ಆಕಳ ಮಹತ್ವವನ್ನು ಪ್ರಾರಂಭದ ದೃಶ್ಯವೇ ನಮಗೆ ಮನನ ಮಾಡಿಕೊಡುತ್ತದೆ.ಹೆಚ್ಚು ಹಣ ಬರುವದೆಂದು ತಿಳಿದರೂ ಸವ್ಕಾರನಿಗೆ ಅದನ್ನು ಮಾರಲು,ನಿರಾಕರಿಸುವ ಲಕ್ಷ್ಮಣ ನಲ್ಲಿ ಗೋಸಂಪತ್ತಿನ ಮಹತ್ವತೆಯ  ಅರಿವಿದೆ. ‘ ಅಂವಗೆಲ್ಲಿ ಆಕಳಾ ಬೇಕಾಗೇತಿ,ಅದನ್ನ ಒಯ್ದು,ಯಾರೆರೆ ಆಫಿಸರರ್ಗೊಳಿಗೆ ಕಾಣಿಕಿ ಕೊಡತಾನ.ಅವ್ರಿಗೆ ಗೋ ಸೇವಾ ಮಾಡೋದೆಲ್ಲಿ ಬೇಕಾಗೇತಿ ? ಅವ್ರಿಗೆ ರಕ್ತ ಹೀರೊದೊಂದು ಗೊತ್ತೈತಿ.’………..ನಮಗೂ ಧರ್ಮ ಕರ್ಮ ಅನ್ನೋದು ಐತಿ……..ಅದರ ಸೇವಾ ಮಾಡತಿss,ಅದಕ್ಕ ಪ್ರೀತಿ ತೊರುಸ್ತಿss ಆಗ ಗೋಮಾತ ನಮಗ ಆಸೀರ್ವಾದ ಮಾಡ್ಯಾಳು’.ಗೋದಾನ ಶೀರ್ಷಿಕೆಗೆ ಶಿಖರ ಪ್ರಾಯದಂತಿರುವ ಈ ಮಾತಿನ ಸುತ್ತಮುತ್ತ ನಾಟಕ ದ ವಸ್ತು ತಿರುಗುತ್ತದೆ. ನಿಂಗಪ್ಪ, ಒಕ್ಜಲುತನ,ಗೇಣಿ,ಕಂದಾಯ,ಸಾಲ,ಜಮೀನು ಒತ್ತೆ,ಊರ ಜಹಗೀರದಾರ,ಮುಂತಾದವುಗಳ ಸುಳಿಯಲ್ಲಿ ಸಿಲುಕಿ ಗಿರಕಿ ಹೊಡೆಯುತ್ತ ತನ್ನ ಬಡತನದಲ್ಲಿ ಬೆಂದು ಬಸವಳಿದರೂ,ಮರ್ಯಾದೆಯನ್ನು,ರಕ್ಷಸಿಕೊಳ್ಲುತ್ತ,ಬೇರೆಯವರ ಕಷ್ಟ ಕೋಟಲೆಗಳನ್ನು,ತನ್ನದೆಂದೇ ತಿಳಿದು ಅವರಿಗೆ ಸಹಾಯ ಹಸ್ತ ಚಾಚುತ್ತ, ಸುಖವನ್ನು ಕಾಣದೆ ಕೊನೆಯುಸಿರೆಳೆಯುತ್ತಾನೆ ಅವನ ಕ್ಷಮೆ ಗುಣಕ್ಕೆ ಅನೇಕ ದೃಷ್ಟಾಂತಗಳು ನಾಟಕದ ಉದ್ದಕ್ಕೂ ಸಿಗುತ್ತವೆ . ತನ್ನ ಆಕಳಿಗೆ ಒಡಹುಟ್ಟಿದ ತಮ್ಮನೇ ವಿಷಹಾಕಿ ಕೊಂದರೂ ಅವನನ್ನು  ಕ್ಷಮಿಸುವ ದೊಡ್ಡ ಗುಣ,ಅಪರಾಧಿ ಭಾವನೆಯಿಂದ ಊರಿನಿಂದ ಪರಾರಿಯಾದ ತಮ್ಮನ ಹೆಂಡತಿ ದಯನೀಯ ಸ್ಥಿತಿ ಹೊಂದಿದಾಗ ಅವಳನ್ನು ರಕ್ಷಿಸುವುದು, ಸ್ವಂತ ಮಗನೇ ಪರರ ಹೆಣ್ಣನ್ನು.  ಮದುವೆಯಾಗಿ ತಂದು ಮನೆಯಲ್ಲಿ ಬಿಟ್ಟು ಓಡಿ ಹೋದಾಗ ಅರ್ಧ ಊರಿನ ಜನವೇ ಎದುರು ನಿಂತರೂ ಅವಳಿಗೆ ಆಶ್ರಯ ನೀಡಿ ರಕ್ಷಿಸುವುದು,  ಸಂಗತಿಗಳು ಬಹಳ ಪರಿಣಾಮಕಾರಿಯಾಗಿವೆ. ಇಡೀ ಊರು ಒಂದಾಗಿ ನಿಂಗಪ್ಪ ನನ್ನು ಶೊಷಿಸಿ ಅವನನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದರೂ ,ಎದೆ ಕೊಟ್ಟು ನಿಲ್ಲುವ ದೃಶ್ಯ ಮನ ಮಿಡಿಯುವಂತಿದೆ.ಹಾಗೆಯೇ ದಾನವ್ವನ ಪಾತ್ರ ಸಹ,ಇಡೀನಾಟಕದ ಜೀವಾಳವೆನ್ನುವಂತಿದೆ.ನಿಂಗಪ್ಪನನ್ನು ಪ್ರತಿ ಕಷ್ಟದ ಸಂದರ್ಭದಲ್ಲಿ ಅವನಿಗೆ ಹೆಗಲುಕೊಟ್ಟು ನಿಲ್ಲುವ ಮತ್ತು ಅವನಿಗೆ ಮೋಸ ಮಾಡಿದವರ ಜೊತೆ ಅವರು ಯಾರೇ ಇರಲಿ ಅವರೊಂದಿಗೆ ಜಗಳ ಕಾಯುವ ದಾನವ್ವನ ಪಾತ್ರವೂ ನಮ್ಮ ಮನ ಗೆಲ್ಕುವಂತೆ ಚಿತ್ರಿತವಾಗಿದೆ. ಅವಳ ಹೇಳುವ ಸಂಭಾಷಣೆಯನ್ನು ನಾಟಕಕಾರರು ಅಷ್ಟೇ ಹರಿತವಾಗಿ ರಚಿಸಿದ್ದಾರೆ.ಒಂದು ತುಣುಕು: ” ನಾ ಒಂದು ಕಾಳೂ ಕೊಡಾಂಗಿಲ್ಲ.ಒಂದು ಪೈ ದಂಡಾ ಕೊಡಾಂಗಿಲ್ಲ.ದಮ್ಮಿದ್ದವರು ಬಂದು ನನ್ನ ಕಡಿಂದ ವಸೂಲ ಮಾಡಲಿ.ಛಲೋ ಆಟಾ ಹೂಡ್ಯಾರss ದಂಡದ ನೆವಾ ಮಾಡಿss ನಮ್ಮ ಆಸ್ತಿನೆಲ್ಲಾ ಕಸಗೊಂಡು ಬ್ಯಾರೋರಿಗೆ ಕೊಟ್ಟ ಬಿಡಬೌದು ಅಂತ ವಿಚಾರ ಮಾಡಿರೇನೋ ? ನಮ್ಮ ಹೊಲಾ ತ್ವಾಟಾ ಎಲ್ಲ ಮಾರಿ ಮಸ್ತಿ ಮಾಡಬೌದ ಅನಕೊಂಡೀರೆನೋ ? ಆದ್ರ ಈ ದಾನವ್ವ ಜೀವಂತ ಇರೋತನ ಅದ್ಯಾವ್ದೂ ನಡಗುಡಾಂಗಿಲ್ಲ……” ಎನ್ಉವ ದಾನವ್ವ ನಮಗೆ ಹೋರಾಟದ ಬದುಕಿನ ಮಹಾನ ಮಹಿಳೆ ಎನಿಸುತ್ತಾಳೆ.  ಉಳಿದೆಲ್ಲ ಪಾತ್ರಗಳು ಪೂರಕ ಪಾತ್ರಗಳಾಗಿ ಶಹರಿನ ವಿಲಾಸೀ ಜೀವನವನ್ನು  ಆದಷ್ಟೂ ಬೇರೆಯವರ ಹಣದಲ್ಲಿ ಚೈನಿ ಮಾಡುವ ಪಾತ್ರಗಳಾಗಿ ,ಒಂದು ರೀತಿಯ ಒಣಹಮ್ಮಿನಲ್ಲಿ ಬದುಕುವಂತೆ ಕಾಣುತ್ತವೆ. ಕಕ್ಕೇರಿವರ ಒಂದು ವಿಶೇಷತೆ ಎಂದರೆ ಇಡೀ ನಾಟಕ,ಮತ್ತು ಮೂಲ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಒಂದು ಚೂರೂ ಮೂಲಕ್ಕೇ ಚ್ಯತಿ ಬಾರದಂತೆ ಮತ್ತು ನಮ್ಮ ಗ್ರಾಮೀಣ ಸಂಸ್ಕೃತಿಗೆ ಸರಿದೂಗುವಂತೆ ಮಾರ್ಪಾಟು ಮಾಡಿಕೊಂಡಿದ್ದು.ನಾಟಕದ ಎಲ್ಲಾ ವ್ಯವಹಾರಗಳು,  ಮತ್ತು ಘಟನೆಗಳು  ನಮ್ಮ ಊರಿನ ನಮ್ಮ ಕಣ್ಣೆದುರೇ ನಡೆಯತ್ತವೆ ಎಂಬಂತೆ ಹೆಣೆಯಲ್ಲಟ್ಟಿವೆ. ಅದಕ್ಕಾಗಿ ಅವರು ಪಟ್ಟ ಶ್ರಮ,ಭಾಷೆಯ ಬಳಕೆಯಲ್ಲಿ ಕಾಪಡಿಕೊಂಡು ಬಂದಿರುವ ಸಂಯಮ ಅಚ್ಚರಿ ಪಡುವಂತದ್ದು.ಅಚ್ಚುಕಟ್ಟಾದ ಮತ್ತು ದೀರ್ಘವಾಗಿದ್ದರೂ ಓದಿಸಿಕೊಂಡು ಹೋಗುವ ಶಕ್ತಿ ತುಂಬಿರುವ ನಾಟಕಕಾರರು ,ಓದುಗರ ಮನಸ್ಸಿನ ಮೇಲೆ  ದಟ್ಟ ಪರಿಣಾಮ ಬೀರುವ ಸಂವೇದನಾ ಶೀಲ ನಾಟಕವಾಗಿದೆ.ಇದರಿಂದಾಗಿ  ಸರ್ವ ರೀತಿಯಿಂದ  ಅಭಿನಂದನಾರ್ಹರಾಗುತ್ತಾರೆ. ಕೃತಿಗೆ ಬಹುಮೌಲಿಕ ಮುನ್ನುಡಿ ಬರೆದ ಸಿ.ಬಸವಲಿಂಗಯ್ಯ ನವರು ಒಂದು‌ಮಾತು ಹೇಳುತ್ತಾರೆ.’ ಮೂರು ನೆಲೆಯಲ್ಲಿ ಪಾತ್ರಗಳು,ಸಾಮಾಜಿಕ,ಆರ್ಥಿಕ, ಸಾಂಸ್ಕೃತಿಕ ನಡಾವಳಿಗಳಲ್ಲಿ ವಿಭಜನೆಗೊಂಡಿರುವುದು,……ಉತ್ತರ ಕರ್ನಾಟಕದಲ್ಲಿಯೇ ಹುಟ್ಟಿದೆ’ ಎಂಬ ಮಾತಿಗೆ ನಾನೂ ದನಿಗೂಡಿಸುತ್ತೇನೆ.. ಅವರೇ ಹೇಳುವಂತೆ ” ರಂಗ ಪ್ರಯೋಗಕ್ಕೆ ಅಳವಡಿಸುವಾಗ,ಕೆಲವು ದೀರ್ಘ ದೃಶ್ಯಗಳನ್ನು ಸಂಕ್ಷಿಪ್ತ ಗೊಳಿಸಿಕೊಳ್ಳುವುದು ಪ್ರೇಕ್ಷಕರ ಸಹನೆಯ ದೃಷ್ಟಿಯಿಂದ ಅವಶ್ಯಕವಾಗಿದೆ. ” ಎನ್ನುವ ವಿಚಾರಕ್ಕೆ ಎರಡು ಮಾತಿಲ್ಲ ಅದರ ರಂಗಪ್ರಯೋಗ ನೋಡುವ ಕುತೂಹಲ ನನಗೂ ಇದೆ. **************************************************************                         ಗೋನವಾರ ಕಿಶನ್ ರಾವ್

ಆಡುಭಾಷೆಯ ಸವಿ ಗೋದಾನ. Read Post »

ಪುಸ್ತಕ ಸಂಗಾತಿ

ಇ-ಬುಕ್ ಬಿಡುಗಡೆ

ಇ-ಬುಕ್ ಬಿಡುಗಡೆ ಮೂಚಿಮ್ಮ” ಕಥಾಸಂಕಲನ ಬಿಡುಗಡೆಯ ಕಾರ್ಯಕ್ರಮ ಕನ್ನಡದ ಯುವ ತಲೆಮಾರಿನ ಭರವಸೆಯ ಕಥೆಗಾರರಾಗಿ ಹೊರಹೊಮ್ಮುತ್ತಿರುವ ಡಾ.ಅಜಿತ್ ಹರೀಶಿ ಅವರ “ಮೂಚಿಮ್ಮ” ಕಥಾ ಸಂಕಲನ ಇಬುಕ್, ಆಡಿಯೋ ಬುಕ್ ಹಾಗೂ ಮುದ್ರಿತ ರೂಪದಲ್ಲಿ ಮೈಲ್ಯಾಂಗ್ ಪ್ರಕಾಶನ ಹೊರ ತಂದಿದೆ. ಅದರ ಬಿಡುಗಡೆ ಕಾರ್ಯಕ್ರಮ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ.ರವೀಂದ್ರ ಭಟ್ಟರು ಕನ್ನಡಕ್ಕೆ ಅಜಿತ್ ಒಬ್ಬ ಸೂಕ್ಷ್ಮ ಬರಹಗಾರರಾಗಿ ದಕ್ಕುತ್ತಿದ್ದಾರೆ. ಅವರ ಕೃತಿಗಳು ಇನ್ನಷ್ಟು ಸಮಾಜಮುಖಿಯಾದ ತಲ್ಲಣಗಳಿಗೆ ಕನ್ನಡಿ ಹಿಡಿಯುವಂತೆ ರೂಪುಗೊಳ್ಳಲಿ ಅನ್ನುವ ಆಶಯ ವ್ಯಕ್ತಪಡಿಸಿದರು. ಇನ್ನೊಬ್ಬ ಅತಿಥಿ ಸಾಹಿತಿ ಶ್ರೀ ಜೋಗಿಯವರು ಮಾತನಾಡಿ ಕನ್ನಡಕ್ಕೆ ಹೊಸ ಓದುಗರನ್ನು ಕರೆತರುವ ಯುವ ಬರಹಗಾರರು ಹೆಚ್ಚಬೇಕು. ಅಜಿತ್ ಅವರ ಕೃತಿಗಳಲ್ಲಿ ಆ ಸತ್ತ್ವವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಲೇಖಕ ಅಜಿತ್ ಹರೀಶಿ ಹಾಗೂ ಮೈಲ್ಯಾಂಗ್ ಸಂಸ್ಥೆಯ ಮುಖ್ಯಸ್ಥರಾದ ಪವಮಾನ್ ಅಥಣಿ ಅವರು ಹಾಜರಿದ್ದರು. ಮೂಚಿಮ್ಮ ಪುಸ್ತಕ ಇಬುಕ್, ಆಡಿಯೋ ಮತ್ತು ಪ್ರಿಂಟ್ ಮೂರೂ ಆವೃತ್ತಿಯಲ್ಲಿ www.mylang.in ಮೂಲಕ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಮ್ಮ,ವಸಂತ ಶೆಟ್ಟಿ,ಮೈಲ್ಯಾಂಗ್ ಬುಕ್ಸ್ ಪರವಾಗಿಬೆಂಗಳೂರು+91-9986026994vasant@mylang.in ********************************************************

ಇ-ಬುಕ್ ಬಿಡುಗಡೆ Read Post »

ಪುಸ್ತಕ ಸಂಗಾತಿ

“ನಮ್ಮ ಪಯಣ”

ಪುಸ್ತಕ ಸಂಗಾತಿ “ನಮ್ಮ ಪಯಣ” ಮಕ್ಕಳ ಮೂಲಕ ಇತಿಹಾಸ ಸೃಷ್ಠಿ.           ಒಬ್ಬ ಸಮರ್ಥ ಶಿಕ್ಷಕ ಅಕ್ಷರಗಳನ್ನು ಮಾತ್ರ ಕಲಿಸಲಾರ. ತಾನಿರುವ ಊರಿನ ಶಾಲೆಯ ಮತ್ತು ಸಮುದಾಯದ ಇತಿಹಾಸವನ್ನೂ ಸೃಷ್ಠಿಸಬಲ್ಲ ಎಂಬುದಕ್ಕೆ ಶಿಕ್ಷಕ ಗಂಗಪ್ಪ ಎಸ್.ಎಲ್ (ಗಂಗಾಧರ) ಅವರು ಸಂಪಾದಿಸಿದ “ನಮ್ಮ ಪಯಣ” ಎಂಬ ಕೃತಿಯೇ ಸಾಕ್ಷಿಯಾಗಿದೆ.        ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡ, ಹಳಿಯಾಳ ಮತ್ತು ಜೋಯಡಾ ತಾಲೂಕುಗಳ ಹಚ್ಚಹಸಿರಿನ ದಟ್ಟ ಕಾನನದ ಮಧ್ಯದಲ್ಲಿ ತಮ್ಮ ದನ-ಕರುಗಳನ್ನು ಸಾಕುತ್ತಾ ಬದುಕು ಸಾಗಿಸುತ್ತಿರುವ ಗೌಳಿಗರು ಆಧುನಿಕ ಜಗತ್ತಿನಿಂದ ದೂರವೇ ಉಳಿದಿದ್ದಾರೆ. ಅವರು ಎಂಬತ್ತು ತೊಂಬತ್ತು ವರ್ಷಗಳಿಂದ ಮಹಾರಾಷ್ಟçದ ಪಶ್ಚಿಮ ಘಟ್ಟಗಳ ದುರ್ಗಮ ಕಾಡುಗಳ ಮೂಲಕ ವಲಸೆ ಬಂದಿದ್ದಾರೆ. ಈ ನಿರ್ಲಕ್ಷಿತ ಸಮುದಾಯದವರು ಪಟ್ಟ ಪರಿಶ್ರಮ, ವ್ಯಥೆ, ಸಂಕೋಲೆಗಳನ್ನು ಆ ಗೌಳಿಗರ ಮಕ್ಕಳಿಂದಲೇ ಅವರ ಹಿರಿಯರನ್ನು ಸಂದರ್ಶಿಸಿ, ಸಂಗ್ರಹಿಸಿ ಮತ್ತು ಮರುಸೃಷ್ಠಿಸಿ ಅವರ ವಲಸೆಯ ಸಂದರ್ಭದಲ್ಲಾದ ಅನುಭವಗಳನ್ನು ಸಂಗ್ರಹಿಸಿದ್ದು ನಿಜವಾಗಲೂ ಅಭೂತಪೂರ್ವ ಕಾರ್ಯವಾಗಿದೆ.    ಉತ್ತರ ಕನ್ನಡ ಜಿಲ್ಲೆಯ (ಶಿರಸಿ ಶೈ.ಜಿ)   ಯಲ್ಲಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಕೇರಿ ಗೌಳಿವಾಡದ ಶಿಕ್ಷಕ ಶ್ರೀ ಗಂಗಪ್ಪ ಎಸ್.ಎಲ್ (ಗಂಗಾಧರ) ಅವರು ‘ಇಂಡಿಯಾ ಫೌಂಡೇಷನ್ ಫಾರ್ ದಿ ರ‍್ಟ್÷್ಸ ಬೆಂಗಳೂರು’ ಇವರ ಕಲಾಂತರ್ಗತ ಕಲಿಕೆ ಯೋಜನೆಯೊಂದಿಗೆ ಗೌಳಿಗರ ವಲಸೆಯ ಅನುಭವ ಕಥೆಗಳನ್ನು ದಾಖಲೀಕರಣ ಮಾಡಿದ್ದಾರೆ. ಎನ್.ಸಿ.ಎಫ್ ನ ಆಶಯವನ್ನೂ ಈಡೇರಿಸುವ ಮೂಲಕ ಆ ಸಮುದಾಯಕ್ಕೇ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ.       ‘ನಮ್ಮ ಪಯಣ’ ಕೃತಿಯಲ್ಲಿ ಒಟ್ಟು ಇಪ್ಪತ್ತೆಂಟು ಸಂದರ್ಶನ ರೂಪದ ಕಥೆಗಳಿವೆ. ಇವೆಲ್ಲವುಗಳನ್ನು ಅವರ ಶಾಲಾ ವಿದ್ಯಾರ್ಥಿಗಳು ಸಂಪನ್ಮೂಲ ಶಿಕ್ಷಕರು, ಸಾಹಿತಿಗಳ ಮಾರ್ಗದರ್ಶನದಲ್ಲಿ  ತಮ್ಮ ಹಿರಿಯರನ್ನು ಸಂದರ್ಶಿಸಿ ಕೆಲ ಪ್ರಶ್ನೆಗಳನ್ನು ಕೇಳುತ್ತ ಗೌಳಿಗರ ಇತಿಹಾಸದ ಹೆಜ್ಜೆ ಗುರುತುಗಳನ್ನು ಹುಡುಕುತ್ತಾ ಅವರೇ ಅನ್ವೇಷಿಸಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇಲ್ಲಿ ಮಾಹಿತಿಯನ್ನು ಕಲೆ ಹಾಕುವುದಕ್ಕಿಂತ ಅನ್ವೇಷಣೆಗೆ ಮತ್ತು ಸೃಜನಾತ್ಮಕತೆಗೆ ಮಹತ್ವ ಕಲ್ಪಿಸಲಾಗಿದೆ.       ಶತಾಯುಷಿ ಆರ್ಯವೇದ ವೈದ್ಯ ವಿಠ್ಠು ಯಮ್ಕರ್ ಅವರ ಚಾಕಚಕ್ಯತೆ, ‘ಕಣ್ಣೀರಧಾರೆಯ ಕಥೆ-ವ್ಯಥೆ’ ಯಲ್ಲಿ ಅಜ್ಜಿ ನಕಲಿ ನಿನ್ನು ಮಲಗೊಂಡೆ ಬಡತನದಲ್ಲಿ ಬಿದರಕ್ಕಿ ಉಂಡು, ಅತ್ತೆಯ ಕ್ರೂರತನದಿಂದ ವಿಚ್ಛೇದನ ಪಡೆದು ಮರು ಮದುವೆಯಾಗಿ ಈಗ ಗಂಡನಿಲ್ಲದೆ ಒಂಟಿ ಜೀವನವನ್ನು ಇಳಿವಯಸ್ಸಿನಲ್ಲಿ ಸಾಗಿಸುತ್ತಿದ್ದಾರೆ. ಇವರು ಹೇಳುವ ಕಥೆ ಓದುಗರ ಕಣ್ಣಲ್ಲಿ ನೀರು ತರಿಸದಿರಲಾರದು. ‘ಸಂಸಾರ ಭಾರ ಹೊತ್ತ ಗಟ್ಟಿಗಿತ್ತಿ’ ಯಲ್ಲಿ ಸಾವುಬಾಯಿ ಪಟಕಾರೆ ಹೆಣ್ಣುಮಕ್ಕಳ ಆಗಿನ ಸ್ಥಿತಿಗತಿಗಳನ್ನು ತೆರೆದಿಟ್ಟಿದ್ದಾರೆ. ನೆಲೆಯಿಲ್ಲದೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅಲೆದಾಟ ಸಾಮಾನ್ಯವಾಗಿ ಕಂಡುಬರುತ್ತದೆ. ಅವರ ವಿಶಿಷ್ಟ ಆಚರಣೆಗಳಾದ ದಸರಾ, ಸಿಲಂಗಾನ್, ರಾಖನ್ ಹಬ್ಬಗಳ ಆಚರಣೆ ಕಾಡು-ಮೇಡುಗಳಲ್ಲಿ ಕಾಡು ಪ್ರಾಣಿಗಳೊಂದಿಗೆ ಕಾದಾಡಿದ ವಿಭಿನ್ನ ಅನುಭವಗಳು ಅವರ ಧೈರ್ಯ, ಸಾಹಸ ಪ್ರವೃತ್ತಿಯನ್ನು ಈ ಕೃತಿ ತೆರೆದಿಡುತ್ತದೆ.   ಒಂದು ಜನಾಂಗದ ಆರ್ಥಿಕ ಸಾಮಾಜಿಕ, ಸ್ಥಿತಿಗತಿಗಳ ಬಗೆಗೂ ಈ  ಕೃತಿ ತೆರೆದಿಡುತ್ತದೆ. ಮುಗ್ಧ ಗೌಳಿಗರ ಪ್ರಾಮಾಣಿಕತೆ, ನಂಬಿಕೆ, ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಮರಗಳನ್ನು ದೇವರಂತೆ ಪೂಜಿಸುವ ಅವರ ವಿಶಿಷ್ಠ ಗುಣಗಳನ್ನು  ಈ ಕೃತಿ ಇತರ ಸಮಾಜಕ್ಕೆ ತರ‍್ಪಡಿಸುತ್ತದೆ. ಕೃತಿಯಲ್ಲಿ ಅಲ್ಲಲ್ಲಿ ಗೌಳಿಗರ ಭಾಷೆಯ ಕೆಲವು ಪದಗಳನ್ನು ಬಳಸಿಕೊಳ್ಳಲಾಗಿದೆ.      ಆಯ್.ಎಫ್.ಎ ಕಲಾ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿಯವರು ಕೃತಿ ಕುರಿತು. “ಜನಾಂಗದ ಕಥೆಗಳು , ವಯಕ್ತಿಕ ನೋವುಗಳು, ಲಿಂಗ ತಾರತಮ್ಯಗಳು ಮತ್ತು ಕೀಳರಿಮೆಗಳನ್ನು ವಿವಿಧ ಸ್ತರಗಳಲ್ಲಿ ಚಿಕ್ಕವರು ದೊಡ್ಡವರಿಗಾಗಿ ಇಲ್ಲಿ ಬರೆದಿದ್ದಾರೆ. ಸಾಂಸ್ಕೃತಿಕ ಪಲ್ಲಟಗಳಿಗೆ ಇಲ್ಲಿನ ಬರಹಗಳು ಮುಖಾಮುಖಿಯಾಗಿ ನಿಲ್ಲುತ್ತವೆ. ಕನ್ನಡದ ಸೊಗಡು ಇದೆ ಅಲ್ಲಾ? ಮಕ್ಕಳ ಕಲಿಕೆ ಸರ್ವತೋಮುಖವಾಗಲಿಲ್ಲವೇ? ಪಠ್ಯಪುಸ್ತಕಗಳು ನೀಡದ ಅನುಭವಗಳನ್ನು ಈ ಬರಹಗಳು ಕಟ್ಟಿಕೊಟ್ಟಿಲ್ಲವೇ? ಗಂಗಾಧರ ಅವರಂಥ ಶಿಕ್ಷಕರನ್ನು ಸರಕಾರಿ ಶಾಲೆಯಲ್ಲಿ ಭೇಟಿಯಾಗುವುದೇ ಒಂದು ಸಂತಸದ ಸಂಗತಿ.” ಎಂದು ಬರೆದಿದ್ದಾರೆ.    ಈ ಕೃತಿಯ ಬಿಡುಗಡೆಗೂ ಗೌಳಿ ಸಮುದಾಯದ ಮತ್ತು ಇತರರು ಸಾವಿರಾರು ಜನಸಂಖ್ಯೆಯಲ್ಲಿ ನೆರೆದಿದ್ದು ದಾಖಲೆಯೂ ಆಗಿದೆ. ಇಂತಹ ಎಲೆಮರೆಯಲ್ಲಿ ನಡೆಯುವ ಕಾರ್ಯವನ್ನು ಗುರುತಿಸುವ ಕಾರ್ಯವಾಗಬೇಕಿದೆ.            ಇನ್ನು ಕಥನಗಳಿಗೆ ತಕ್ಕಂತೆ ಸುಂದರವಾದ ರೇಖಾಚಿತ್ರಗಳನ್ನು ಯುವ ಕಲಾವಿದ ಜ್ಞಾನೇಶ್ವರ ರಚಿಸಿಕೊಟ್ಟಿದ್ದಾರೆ.  ಮುಖಪುಟವಂತೂ ಬಹು ಆಕರ್ಷಣೀಯವಾಗಿದೆ. ನೀವೊಮ್ಮೆ ಓದಲೇಬೇಕು.          ಜಾಗತಿಕ ಮಟ್ಟದಲ್ಲಿ ನಡೆಯುವ ವಲಸಿಗರ ಕಥೆಗಳಂತೆ ಗೌಳಿಗರ ವಲಸೆಯ ಅನುಭವವನ್ನು ಕಟ್ಟಿಕೊಡುತ್ತವೆ. ಹಾಗಾಗಿ ಇದೊಂದು ದಾಖಲಾರ್ಹವಾದ ಕೃತಿಯಾಗಿದೆ. ಆಯ್.ಎಫ್.ಎ ಬೆಂಗಳೂರು ಅವರ ಕಲಾಂತರ್ಗತ ಕಲಿಕೆ ನಮ್ಮ ಬೋಧನೆಯನ್ನು ಲವಲವಿಕೆಯಿಂದಿರುವAತೆ ಮಾಡುತ್ತದೆ. ವಿದ್ಯಾರ್ಥಿಗಳ, ಶಿಕ್ಷಕರ ಈ ಕಾರ್ಯಕ್ಕೆ ಅವರಿಗೊಂದು ಸಲಾಂ ಹೇಳೋಣ. ಗಂಗಾಧರ ಸರ್ – ಮೊ.ಸಂಖ್ಯೆ- ೯೯೦೨೮೯೩೫೩೨.                 “ನಮ್ಮ ಪಯಣ” ಗೌಳಿಗರ ವಲಸೆಯ ಅನುಭವ ಕಥೆಗಳು.                  ಸಂಪಾದಕರು : ಗಂಗಪ್ಪ ಎಸ್.ಎಲ್ (ಗಂಗಾಧರ)                 ಪುಟಗಳು : ೧೦೦.                  ಬೆಲೆ: ೮೦ ರೂಪಾಯಿ.   ****************************************************** ನಾಗರಾಜ ಎಂ ಹುಡೇದ

“ನಮ್ಮ ಪಯಣ” Read Post »

ಪುಸ್ತಕ ಸಂಗಾತಿ

“ಧ್ಯಾನಸ್ಥ ಕವಿತೆಗಳು”

ಪುಸ್ತಕ ಸಂಗಾತಿ “ಧ್ಯಾನಸ್ಥ ಕವಿತೆಗಳು”  “ಥಟ್ ಎಂದು ಬರೆದು ರಸೀದಿಯಲ್ಲ ಕವಿತೆ” ಶೀರ್ಷಿಕೆಯ ಕಾರಣಕ್ಕಾಗಿಯೇ ಸೆಳೆವ ಕವನ ಸಂಕಲನವಿದು. ರಸೀದಿ ಎನ್ನುವುದು ಯಾವುದೇ ವಸ್ತು ವಿಲೇವಾರಿಯಾಗಿದ್ದಕ್ಕೆ ನೀಡುವ ಸಾಕ್ಷö್ಯ. ಮತ್ತದು ವ್ಯವಹಾರದ ನಂಬಿಕೆ ಮತ್ತು ಅಪನಂಬಿಕೆಯನ್ನು ಬಿಂಬಿಸುತ್ತದೆ. ನಂಬಿಕಸ್ಥ ನಡವಳಿಕೆ ಎನ್ನುವ ಹೊತ್ತಿನಲ್ಲಿಯೇ ಅಪನಂಬಿಕೆಯ ಜಾಡು ಕೂಡ ಇದೆ ಎನ್ನುವುದನ್ನು ಸೂಚ್ಯವಾಗಿ ಸೂಚಿಸುತ್ತಿರುತ್ತದೆ. ಆದರೆ ಕವಿತೆಗಳು ಹಾಗಲ್ಲ ಎನ್ನುವ ನಂಬಿಕೆ ಸುಮಿತ್ ಮೇತ್ರಿಯದು. ಮತ್ತು ಇಲ್ಲಿನ ಕವಿತೆಗಳದ್ದು ಕೂಡ ಹೀಗಾಗಿಯೇ ಇವು ಎದೆಗಿಳಿಯುತ್ತವೆ. ಕಂಡದ್ದನ್ನು ಪ್ರಾಮಾಣಿಕವಾಗಿ ಇಷ್ಟೇ ನನಗೆ ಹೊಳೆದದ್ದು ಎನ್ನುತ್ತ ಮುಗ್ಧವಾಗಿ ನೋಡುತ್ತವೆ. ಕೆಲವೊಮ್ಮೆ ಸಿಡಿಮಿಡಿಗೊಳ್ಳುತ್ತವೆ. ನೋವುಗಳ ಹಿಡಿ ಹಿಡಿದು ಅನಾವರಣಗೊಳಿಸುತ್ತವೆ. ಮತ್ತೆ ಮತ್ತೆ ನಾನು ಹೇಳಲಿಕ್ಕೆ ಹೊರಟದ್ದು ಇದ್ದಲ್ಲ ಎನ್ನುತ್ತ ಗೋಜಲಿಗೆ ಬೀಳಿಸುತ್ತವೆ. ಹೀಗಾಗಿಯೆ ಇವರ ಕವಿತೆ ನಿರುದ್ಯೋಗಿ ದೇವರಂತೆ, ಉಲ್ಟಾ ಹೊಡೆಯುವ ವ್ಯಾಕರಣದ ಹಾಗೆ ಕಾಣಿಸುತ್ತದೆ. ಅಂತೆಯೇ, “ಕವಿತೆಗಳಿಗೆ ಮಾರುಕಟ್ಟೆ ಇಲ್ಲ” ಸ್ವಾಮಿ  ಹೆಣ್ಣು ಕೊಡುವ ಮಾತಂತು ಬಿಡಿ  ಹೊಟ್ಟೆ ತುಂಬುವುದಿಲ್ಲ”    ( ನಿರುದ್ಯೋಗಿ ದೇವರು) “ಸತ್ತವರಿಗೆ ಮಾತ್ರ ಬದುಕುವ ಅರ್ಹತೆ ಇಲ್ಲಿ ಜಾತಿಗಳಿಗಾಗಿ ಕೊಲೆಯಾಗುತ್ತದೆ ಕ್ಷಮಿಸಿ, ಜಾತಿಗಳು ಕೊಲೆಯಾಗುವುದಿಲ್ಲ ಮತಗಳಾಗುತ್ತವೆ” ಎನ್ನುವ ಕಟು ವಾಸ್ತವªನ್ನು ನಿರಾತಂಕವಾಗಿ ದಾಖಲಿಸುತ್ತವೆ. ಇಲ್ಲಿನ ಕವಿತೆಗಳಿಗೆ ಸ್ಪಷ್ಟವಾದ ಧ್ವನಿಯಿದೆ. ಅವು ನೋವುಗಳನ್ನು ಗುನುಗುತ್ತ ಸುಮ್ಮನೆ ಕೂರುವುದಿಲ್ಲ. ಕಾರಣಗಳನ್ನು ನೇರವಾಗಿ ಪ್ರಶ್ನಿಸುತ್ತವೆ. ಉತ್ತರ ಹುಡುಕುವ ಸಲುವಾಗಿ ನಿರಂತರ ಶ್ರಮಿಸುತ್ತವೆ. ನಿಮಗಾದರೂ ನಾಚಿಕೆಯಾಗಬೇಕಿತ್ತು ಎನ್ನುತ್ತವೆ. ವ್ಯವಸ್ಥೆಯಲ್ಲಿ ಲೋಪದೋಷಗಳನ್ನು ಹೆಕ್ಕಿ ತರುತ್ತವೆ. ಯಾರಲ್ಲಿ? ಬಾಯಾರಿದ ಪಾರಿವಾಳದ ಕತ್ತು ಹಿಸುಕಿ ಕೊಲ್ಲುವವರು. (ಬಿಸಿಲು ತೊಟ್ಟವರು) ಹಸಿವು ಯಾರಪ್ಪನ ಮನಿದು ತುಂಡು ರೊಟ್ಟಿ ಕೊಡು, ಹಸಿವು ಇಲ್ಲದೆ ಹೋಗಿದ್ದರೆ ಹುಟ್ಟುತ್ತಿತ್ತೆ ಕವಿತೆ? (ತುಂಡು ರೊಟ್ಟಿಯ ಕವಿತೆ) ಇನ್ನು ಇಲ್ಲಿ ಹಲವಾರು ಪ್ರೇಮದ ಸಾಲುಗಳಿವೆ. ಅವು ಯಾವುದು ದೈಹಿಕ ವಾಂಛೆಯ ಬಡಬಡಿಕೆಗಳಲ್ಲ. ಪ್ರೇಮವನ್ನು ದೈವತ್ವಕ್ಕೇರಿಸುವ ಅದು ಶರೀರದ ಆಚೆಗಿನದ್ದು ಎನ್ನುವ ಸಾಲುಗಳು ಮತ್ತೆ ಮತ್ತೆ ಹಿಡಿದು ನಿಲ್ಲಿಸುತ್ತವೆ “ಕ್ಷಮಿಸು ಭಗವಂತ ಅವಳಷ್ಟು ನಿನ್ನನ್ನು ಪ್ರೀತಿಸಲಾರೆ” (ಕ್ಷಮಿಸು ಭಗವಂತ) ಎನ್ನುವ ನಿಷ್ಕಾರಣ ಒಲವಿನ ಪ್ರೇಮದ ಜೊತೆಯಲ್ಲಿಯೆ “ರಾಧೆ ನನ್ನ ನೆನಪಿಗಾಗಿ ನವಿಲು ಗರಿಯೊಂದನಿಟ್ಟುಕೋ ನಿನಗೆ ಬೇಸರವಾದಾಗ ಮನದ ಮಿದುವಾಗಿ ನಿನಗೆ ಚೈತನ್ಯ ತಂದೇನು” ಎನ್ನುವ ಕೃಷ್ಣನ ನಿವ್ಯಾಜ್ಯ ಪ್ರೀತಿಯ ಘಮಲು ಇದೆ (ಆತ್ಮಸಖ) “ಕಾದ ಚಲುವೆಗೊಂದು ಕವಿತೆ” “ಪ್ರಿಯಕರನ ಉನ್ಮತ್ತತೆ” “ಬೆರಗು” ಮತ್ತು ಇತರೆ ಕವಿತೆಗಳು ಪ್ರೇಮದ ರೂಹನ್ನು ಕಟ್ಟಿಕೊಡುತ್ತವೆ. ಇಲ್ಲಿ ಗಾಲಿಬ್ ಇದ್ದಾನೆ, ಸಾಕಿ ಇದ್ದಾಳೆ, ಧುತ್ತೆಂದು ಎದುರಾಗುವ ರೂಪಕಗಳು ಘಕ್ಕನೆ ನಿಲ್ಲಿಸುವ ತಿರುಗುಗಳು ಈ ಕವಿತೆಗಳನ್ನು ಓದಲು ಪ್ರೇರೇಪಿಸುತ್ತವೆ.  ಬಹಳಷ್ಟು ಒಳ್ಳೆಯ ಕವಿತೆಗಳು ಓದಿಗೆ ದಕ್ಕುತ್ತವೆ. ಕವಿತೆಯ ಜಾಡನ್ನು ತಮ್ಮದಾಗಿಸಿಕೊಂಡ ಸುಮಿತ್ ಮೊದಲ ಸಂಕಲನದಲ್ಲಿಯೆ ತಮ್ಮ ಗಟ್ಟಿಯಾದ ಹೆಜ್ಜೆಯೊಂದನ್ನು ಊರಿದ್ದಾರೆ. “ಸೋಲಿನ ಬಗ್ಗೆ ಭಯಪಡಬೇಡ ಅಂತ ಹೇಳಾಗಿದೆ ಗಾಲಿಬ್ ಗಣಿತದ ಆರಂಭ ಸೊನ್ನೆಯಿಂದಲೇ ಅಲ್ವಾ” ಎನ್ನುವ ಭರವಸೆಯೊಂದಿಗೆ ಆರಂಭವಾಗಿರುವ ಇವರ ಈ ಕಾವ್ಯಯಾನ ಕಾಜಾಣ ಪ್ರಕಾಶನದಿಂದ ಬೆಳಕು ಕಂಡಿದೆ. ಕೇಶವ ಮಳಗಿ ಅರ್ಥವತ್ತಾದ ಮುನ್ನುಡಿ, ಕೆ.ವಿ ತಿರುಮಲೇಶರ ಬೆನ್ನುಡಿ ಈ ಹೊತ್ತಿಗೆಯ ಮೌಲ್ಯ ಹೆಚ್ಚಿಸಿದೆ. ****************************** ದೀಪ್ತಿ ಭದ್ರಾವತಿ

“ಧ್ಯಾನಸ್ಥ ಕವಿತೆಗಳು” Read Post »

ಪುಸ್ತಕ ಸಂಗಾತಿ

ಬಿಳಿ ಸಾಹೇಬನ ಭಾರತ

ಪುಸ್ತಕ ಸಂಗಾತಿ ಬಿಳಿ ಸಾಹೇಬನ ಭಾರತ ಪುಸ್ತಕ: ಬಿಳಿ ಸಾಹೇಬನ ಭಾರತಲೇಖಕರು: ಜಗದೀಶ್ ಕೊಪ್ಪಪ್ರಕಾಶನ: ಮನೋಹರ ಗ್ರಂಥಮಾಲೆ ‌ಬೆಲೆ: 90 ರೂಲಭ್ಯತೆ : ಸಂಗಾತ ಪುಸ್ತಕ, ಧಾರವಾಡ ಜಿಮ್ ಕಾರ್ಬೆಟ್ ಅವರ ಪುಸ್ತಕಗಳು ಎಷ್ಟು ಓದಿದರು ಮುಗಿಯದ ಕುತೂಹಲ ಭರಿತ ಪುಸ್ತಕಗಳು .ಈ ಪುಸ್ತಕ ಕಾರ್ಬೆಟ್ ಅವರ ಜೀವನದ ಮತ್ತಷ್ಟು ವಿಶೇಷ ಸಂಗತಿಗಳನ್ನು ಓದುಗರಿಗೆ ಪರಿಚಯಿಸುತ್ತವೆ . ಇದು ಶಿಕಾರಿ ,ಕಾಡಿನ ಅನುಭವದ ಹೊತ್ತಿಗೆ ಅಲ್ಲ ಪುಸ್ತಕ ಅವರ ವೈಯಕ್ತಿಕ ಬದುಕಿನ ಅನುರೂಪ ಮಾಹಿತಿ ನೀಡುತ್ತದೆ . ಇಲ್ಲಿ ಆತ್ಮೀಯತೆ ,ಮಾನವೀಯತೆ, ದಕ್ಷತೆ, ಪ್ರಮಾಣಿಕತೆ ಬಹು ಪ್ರಧಾನವಾಗಿ ಕಾಣುವ ಅಂಶಗಳು . ಪ್ರಾಮಾಣಿಕತೆ ,ದಕ್ಷತೆ ಸರಳತೆ ,ಮಾನವೀಯತೆ ಎಲ್ಲರಗೂ ಬೇಕು ಆದರೆ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಯಾರೂ ಸಿದ್ದರಿಲ್ಲ..!!!?? .ಬರಿಯ ಪುಸ್ತಕದ ಮಾತಾಗಿ ಇವು ಉಳಿಯುವಂತಾಗಿದೆ .ಹೀಗಿರುವಾಗ ಭಾರತವನ್ನು ಭಾರತೀಯರಿಗಿಂತ ಹೆಚ್ಚಿನದಾಗಿ ಪ್ರೀತಿಸಿ ,ಅವರಿಗೆ ಗೆಳಯನಾಗಿ ,ಕಾವಲಿಗಾರನಾಗಿ ,ಅವರೊಂದಿಗೆ ಕಾರ್ಮಿಕನಾಗಿ ,ವೈದ್ಯನಾಗಿ ,ಬಾಳಿ ಸಾರ್ಥಕ ಸಮರ್ಥ ಜೀವನ್ನು ಉಳಿಸಿಹೋದ ಜಿಮ್ ಕಾರ್ಬೆಟ್ ಅಸಮಾನ್ಯ ರಾಗಿ ಉಳಿಯುತ್ತಾರೆ ಸ್ಮೃತಿ ಪಟಲದಲ್ಲಿ . ಸರಳತೆಯನ್ನು ಅನಾಯಾಸವಾಗಿ ಪಾಲಿಸಿ ,ಮುಗ್ದ ಜನರ ಬದುಕಿಗಾಗಿ ಸದಾ ಚಿಂತಿಸಿ, ಅವರಿಗಾಗಿ ಬಂಡಯವನ್ನು ಹಾರಿಸಿದ ಜಿಮ್ ಕಾರ್ಬೆಟ್. ನೂರಾರು ಮರಗಳು ಒಂದೇ ದಿನದಲ್ಲಿ ರೈಲಿಗಾಗಿ ಧರೆಗುರುಳಿದಾಗ ಅತೀವ ನೋವನ್ನು ಅನುಭವಿಸುತ್ತಾರೆ .ಪಕ್ಷಿಗಳ ನೋವು ,ಬದುಕಿನ ಕುರಿತು ಬಾಲ್ಯದ ಆಸಕ್ತಿ ಮುಂದೆ ಅವರುಪರಿಸರದ ಕಾಳಜಿಯನ್ನು ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಲ್ಲಿ ಯಶಸ್ವಿಯಾಗುವಂತೆ ಮಾಡಿತ್ತದೆ …! ದಮನಕಾರಿ ಬ್ರಿಟಿಷ್ ರ ಬಗ್ಗೆ ನಾವು ಇತಿಹಾಸದಲ್ಲಿ‌ಓದಿರುತ್ತೇವೆ .ಆದರೆ ಇಲ್ಲಿ ಹಲವು ಮಾನವೀಯ ಬ್ರಿಟಿಷ್ ಅಧಿಕಾರಗಳು ಭಾರತೀಯರಿಗಾಗಿ ಶ್ರಮಿಸುವದನ್ನು ಕಾಣುತ್ತೇವೆ . ತನ್ನ ಮನೆಯನ್ನು ಮಿನಿ ಭಾತವನ್ನಾಗಿಸಿ ,ಸರ್ವಜನಿಕ ಆರೋಗ್ಯ ಕೆಂದ್ರವಾಗಿಸಿ ದಜಿಮ್ ಕಾರ್ಬೆಟ್ ಅವರ ಹೃದಯ ವೈಶಾಲ್ಯತೆಗೆ ಭಾರತ ಸೋತಿದೆ . ಭಾರತೀಯ ರ ನಂಬಿಕೆಗಳನ್ನು ಅಲ್ಲಗೆಳಯದೆ ,ಗೌರವಿಸಿ ಅವರನ್ನು ಪ್ರೀತಿಸಿದ ಬಿಳಿ ಸಾಹೇಬ ಅನನ್ಯ .ನಾವು ಭಾರತೀಯರು ಎನನ್ನು ಕಲಿಯುತ್ತೇವಯೊ ಗೊತ್ತಿಲ್ಲ ಆದರೆ ಏತೇಚ್ಛವಾದ ಮೂಢನಂಬಿಕಗೆಳು ಬಲವಾಗಿ ನಮ್ಮಲ್ಲಿ ನಮಗರಿಯದೆ ಬೇರೊರಿರುತ್ತವೆ .ಆದರೆ ಕಾರ್ಬೆಟ್ ಅವರ ಪುಸ್ತಕಗಳು ಸಾರಾಸಗಟಾಗಿ ಈ ನಂಬಿಕೆಗಳನ್ನು ತಳ್ಳಿಹಾಹುತ್ತವೆ . ತಾರ್ಕಿಕ ಆಲೋಚನೆಗೆ ಓದುಗನನ್ನು‌ ಇಳಿಸುತ್ತವೆ ಕಾಲ ,ಜಾಗ ,ಸಮಯ ಇವುಗಳು ಬಹಳ ಸರಳವಾಗಿ ಅವರು ನಡುದುಬರುತ್ತಾರೆ .”ಏಕಾಂತವಾಗಿ ಭಾರತದ ಕಾಡುಗಳಲ್ಲಿ ಸಂಚರಿಸಿ ಬೆಳದಿಂಗಳ “ಸುಬಗು, “ಕಾಶ್ಮಿರದಸೂರ್ಯೋದಯದ ” ಬೆಡಗನ್ನು ತಮ್ಮ ಹಲವು ಪುಸ್ತಕಗಳಲ್ಲಿ ಅವರು ವರ್ಣಿಸಿದ್ದಾರೆ . ತನಾಗಾಗಿ ಎನನ್ನು ಪಡೆಯದೆ ಬಡ ಭಾರತೀಯರಿಗಾಗಿ ಬದುಕಿ . ಇಳಿಯ ವಯಸ್ಸಿನಲ್ಲಿ ಅನಿವಾರ್ಯ ವಗಿ ಭಾತವನ್ನು ತೊರೆದು ಕೀನ್ಯಾದಲ್ಲಿ ಇಹಲೋಕ ತ್ಯಜಿಸಿದರು. ಇಂದಿಗೂ ಇವರು ನಿರ್ಮಿಸಿದ ಶಾಲೆ , ಮನೆಗಳು ಬಹು ಪ್ರೀತಿಸಿದ ಕಾಡು ಮನೆಯ ಮುಂದಿನ ಮಾವಿನ ಮರ ಎಲ್ಲವು ಅವರ ಇರುವಿಕೆಯನ್ನು ಸಾರುತ್ತವೆ ಎಂದು ಲೇಖಕರು ಹೇಳುತ್ತಾರೆ . ಲೇಖಕರು ಅಲ್ಲಿನ ಪರಿಸರದಲ್ಲಿ ಸಂಚರಿಸಿ ಸಲೂನ್ , ಟೀ ಅಂಗಡಿ ಎಲ್ಲದಕ್ಕೊ‌ ಕಾರ್ಬೆಟ್ ಅವರ ಹೆಸರು ಇರುವದು ತಿಳಿದಿದ್ದಾರೆ .ಇನ್ನೊ ಅಲ್ಲಿ ಜನಮಾನಸ ಅವರಿಗಾಗಿ ಕಾಯುತ್ತಿದೆ .” ಭಾರತವೇ ನನ್ನ ಪತ್ನಿ ಭಾರತೀಯರೇ ನನ್ನ ಮಕ್ಕಳು ” ಎಂದ ಬಿಳಿ ಸಾಹೇಬರನ್ನು ಹೇಗೆ ಮರೆಯಲು ಸಾದ್ಯ ಭಾರತೀಯರಿಗೆ . ಶಿಕಾರಿಗಾಗಿ ಕೋವಿ ಹೀಡಿದು ನರಭಕ್ಷಕ ರನ್ನು ಹೊಡೆದುರುಳಿಸಿ ತದನಂತರ ಕ್ಯಾಮರಾ ಹೀಡಿದು ವನ್ಯಸಂಕುಲವ ಜಗತ್ತಿಗೆ ಪರಿಚಯಿಸಿ , ನಂತರ ಲೇಖಕನಾಗಿ ಪರಿವರ್ತನೆ ಹೂಂದಿ ಯಶಸ್ಸುಕಂಡುತನ್ನ ನಿಸರ್ಗ ಪ್ರೇಮವನ್ನು ಜಗತ್ತಿಗೆ ಅನಾವರಣಗೂಳಿಸಿದ ಸರಳ ಜೀವಿ ಕಾರ್ಬೆಟ್ ಅವರ ಜೀವನದ ಹಲವು ಮಜಲುಗಳ ವಿವರಣೆ ಜೊತೆಗೆ ಅವರ ತಾಯಿಯ ಛಲ ,ಸಹೋದರಿ ಮ್ಯಾಗಿ ಯ ಮಮತೆ ಎಲ್ಲವು ಈ ಹೊತ್ತಿಗೆಯಲ್ಲಿ‌ ಕಾಣಸಿಗುತ್ತವೆ . ಕಾಲದೊಂಗಿ ಮತ್ತು ಚೋಟಿ ಹವಾಲ್ದನಿಯಲ್ಲಿ ಕಾಣುವ ಕರ್ಬೆಟ್ ನೆನಪುಗಳು ನೈನಿತಾಲ್ ನಿಂದ ಮರೆಯಾದದು ಏಕೆ ಎಂದು ಲೇಖಕರು ಬಹು ವಿಷಾದಿಸುತ್ತಾರೆ . ಇದು ಓದುಗರಿಗು ಕಾಡುವ ಪ್ರಶ್ನೆ . ********************* ರೇಶ್ಮಾಗುಳೇದಗುಡ್ಡಾಕರ್

ಬಿಳಿ ಸಾಹೇಬನ ಭಾರತ Read Post »

ಪುಸ್ತಕ ಸಂಗಾತಿ

ನಿರುತ್ತರ

ಪುಸ್ತಕ ಸಂಗಾತಿ ನಿರುತ್ತರ ನಿರುತ್ತರ-ಕವನ ಸಂಕಲನಪ್ರಕಾಶಕರು-ದೀಪ್ತಿ ಬುಕ್ ಹೌಸ್ ಮೈಸೂರುಪುಟಗಳು-೧೧೨ಬೆಲೆ-೧೦೦ರೂ ಅದೇ ಹಳೆಯ ಒಲೆಗೆ ಹೊಸ ಉರಿಯ ಹಾಕಿ ಪ್ರತಿದಿನ ನಾವೀನ್ಯದ ಬೆಳಕು ತೆರೆದಿದೆ ಬೆಳಕಿನ ಬದುಕು. … ಕವಿತೆ ಹುಟ್ಟುವುದೇ ಒತ್ತಡದಿಂದ ಎನ್ನುವುದು ನನ್ನ ನಂಬಿಕೆ. ಎಲ್ಲಾ ಸಾಂಗವಾಗಿ ಸಾಗುತ್ತಿದ್ದಾಗ ಸಾಲೊಂದೂ ಹೊಳೆಯದೆ ಕವಿತೆಯೆಂಬ ಈ ಚಂಚಲೆಯನ್ಮು ಹುಡುಕಿ ಗಾಬರಿಯಾಗುವುದು ನನಗೆ ಆಗಾಗ ಘಟಿಸುವ ಸಂಗತಿ. ಈ ಒತ್ತಡದಿಂದ ಹುಟ್ಟಿದ್ದನ್ನು ಪ್ರಮಾಣಬದ್ದವಾಗಿ ಬೆಳೆಸಿ ಅಕ್ಷರಗಳಲ್ಲಿ ಬೆಳೆಯಗೊಟ್ಟರೆ ಕವಿಯಾಗಿ ಗೆದ್ದಂತೆ. ಒಲಿದಂತೆ ಹಾಡುವೆ ಎನ್ನುವ ನನ್ನ ಮೊಂಡುವಾದಕ್ಕೆ ಹಿರಿಯರೊಬ್ಬರು ಏನನ್ನೇ ಮಾಡಿದರೂ ವೃತ್ತಿಪರಳಂತೆ ಮಾಡು.ಪ್ರೋಫೆಶನಲಿಸಮ್ ರೂಢಿಸಿಕೊ ಎನ್ನುವಾಗೆಲ್ಲ ಕವಿತೆಯಂತಹ ಮೆದು ಮೃದುಭಾವಕ್ಕೆ ವೃತ್ತಿಯೆಂಬ ಒರಟುತನವನ್ನು ಎಂದಾದರೂ ಹೊಂದಿಸಬಹುದೇ ಎನಿಸಿ ಅವರೆದುರುಗೆ ಹುಹು ಅಂತಂದು ಮತ್ತದೆ ಒಲಿಯುವ ಹಾಡುವ ಅಕ್ಷರ ಗಳಿಗಾಗಿ ಕಾಯುತ್ತಿದ್ದೆ. … ಈಗ ಐದು ವರ್ಷಗಳ ಹಿಂದೆ ದಸರಾ ಕವಿಗೋಷ್ಠಿಯಲ್ಲಿ ಪರಿಚಿತರಾದ ಪುಟ್ಟ ಸುಂದರಿ ಸಂಗೀತಾ ರವಿರಾಜ್ ತನ್ನ  ಕವನ ಸಂಕಲನ ನಿರುತ್ತರವನ್ನು ನನಗೆ ಕಳಿಸಿದ್ದಾರೆ. ಇಲ್ಲಿನ ಕವಿತೆಗಳ ಕುರಿತು ಬರೆಯಬೇಕೆಂದರೆ ನನಗೆ ಆ ವೃತ್ತಿಪರತೆಯ ನೆನಪಾಯಿತು. ಇಲ್ಲಿನ ಎಲ್ಲ ಕವಿತೆಗಳೂ ಸಾಧು,ಮೃದು. ಎಲ್ಲೂ ಘೋಷವಿಲ್ಲ.ರೋಷವಿಲ್ಲ ಕ್ರಾಂತಿಯಿಲ್ಲ,ಭೀತಿಯೂ ಈ ಕವಿತೆಗಳಿಗಿಲ್ಲ. ಇದೇನಿದ್ದರೂ ಪ್ರಳಯ ಸ್ವರೂಪಿ‌ಮಳೆ ಬಂದ ಮೇಲೆ  ಮೆಟ್ಟಿಲೇರುವ ಪುಟ್ಟ ಗುಬ್ಬಿಯಂತವು. ಇಲ್ಲಿನ ಮೊದಲ ಪದ್ಯ ನೇಪಥ್ಯ ಬಹುಶಃ ತರಂಗದಲ್ಲಿ ಓದಿದ್ದೆ ಅನಿಸಿತು. ಕತ್ತರಿಸಿ ಉತ್ತರಿಸಿ ಅರೆದು ತುರಿದು ಬಾಡಿಸಿ ಬೇಯಿಸಿ ಕುದಿಸಿ ಉಣ್ಣುವ ಅಡುಗೆ ಬರೀ ಅಷ್ಟರಿಂದಲೇ ರುಚಿಯಾಗ್ತದೆಯಾ. ಇಲ್ಲ. ಅದಕ್ಕೆ ಚಿಟಿಕೆ ಇಂಗು ಸಾಸಿವೆ ಕರಿಬೇವಿನ‌ ಒಗ್ಗರಣೆ ಬೇಕು.ಹೀಗೆ ಥರೆವಾರಿ ವಿಧಾನಗಳಲ್ಲಿ ತಯಾರಾದ ಅಡುಗೆ ಮುಗಿಯುವುದು ಕೊನೆಯ ಒಗ್ಗರಣೆಯಿಂದ. ಆದರೆ  ಒಗ್ಗರಣೆಯ ಆ ಕರಿಬೇವು ಮೆಣಸು ಸಾಸಿವೆ ಗಳು ಊಟದಲ್ಲಿ ಮೈಲಿಗೆ. ಅವನ್ನು ಎತ್ತಿಟ್ಟೇ ಉಣ್ಣುವುದು. ‘ತುರ್ತಿನ ದಾರಿಯಲ್ಲಿ ಹೊರಟವರಿಗೆ ಗಮ್ಯ ತಿಳಿಯಲೇ ಇಲ್ಲ. ‘ ಈ ಸಾಲುಗಳು ಅದನ್ನು ಧ್ವನಿಸುತ್ತವೆ. ಆದರೆ ಅದಕ್ಕೆ ಒಗ್ಗರಣೆ ಬೇಸರಿಸಿಕೊಂಡಿದೆಯೇ. ಇಲ್ಲ. ‘ತನ್ನ ಬೆಲೆ ನೆಲೆಯ ತಾನೇ ಭದ್ರಪಡಿಸಿಕೊಂಡಿದೆ ನಮ್ಮ ಕುಬ್ಜರಾಗಿಸಿದೆ.’ ನನ್ನ ದೇವರ ಮನೆಯಲ್ಲೊಂದು ಡುಮ್ಮಣ್ಣ ಜೇಡ ಪ್ರತಿ ದಿನವೂ ಫೋಟೋ ಹಿಂದೆ ಅವುಚಿರುತ್ತದೆ. ಅದೆಷ್ಟೋ ದೊಡ್ಡದಾದ ಬಾಗಿಲು ಹಿಡಿಕೆ ಫೋಟೋ ಎಲ್ಲವನ್ನೂ ತನ್ನ ಎಳೆಯಿಂದ ಬಂಧಿಸಿ ಎಲ್ಲವನ್ನೂ ಒಂದಾಗಿಸಿ ತನ್ನ ಹಸಿವಿಗೆ ಸಿಗಬಹುದಾದನ್ನು ಕಾಯುತ್ತದೆ.ಆದರೆ ನಾನು ಪ್ರತಿದಿನವೂ ಮೆಲ್ಲಗೆ ಅದನ್ನು ಪೊರಕೆಯೊಳಗೆ ಸೇರಿಸಿ ಆಚೆಕಡೆ ಬಿಟ್ಟು ಬರ್ತಿನಿ.ಮಾರನೆ ಬೆಳಗು ಅದಲ್ಲೇ ಪ್ರತ್ಯಕ್ಷ. ಸಂಗೀತ ಜೇಡನ ಸ್ವಗತ ಆಲಿಸಿದ್ದಾರೆ. ‘ನಿಮ್ಮ ಗೋಡೆಯ ತುಂಬಾ ನನ್ನ ಬಲೆಯ ಹಾಕಿ ಗಲೀಜು‌ಮಾಡುವ  ಉಮೇದಿಲ್ಲ ನನಗೆ’ ಅನ್ನುತ್ತಿದೆ ಅವರ ಜೇಡ. ‘ಮೂಲೆಮೂಲೆಯಲ್ಲೂ ನನ್ನ ಕರಾಮತ್ತು ಬೇಕಿದೆ ನನಗೆ ಈ ದಿನದ ತುತ್ತು’ ಆದರೆ ನಾವು ಹಾಗೇ ಬಿಡ್ತೀವಾ.ಗುಡಿಸಿ ಸೆಲಿಬೆ ತೆಗೆದು ಅದರ ಅರಮನೆಯನ್ನು  ನಿಮಿಷ ಮಾತ್ರದಲ್ಲಿ ಇಲ್ಲವಾಗಿಸುತ್ತೇವೆ.ಅದು ನಮ್ಮ ಅರ್ಜು. ಅವರ ಜೇಡ ಕೊನೆಯಲ್ಲಿ ಹೇಳುತ್ತಿದೆ. “ಬದುಕು ಸುಮ್ಮನೆ ಅಲ್ಲ ನೇಯಬೇಕು ತದನಂತರ ನೋಯಬೇಕು” ಇದು ಬಹುಶಃ ಆ ಜೇಡದ ಮನೆಯನ್ನು ಗುಡಿಸಿ ತೆಗೆದ ಹೆಣ್ಣಿನ ಮಾತೂ ಅಲ್ಲವೇ.? ಇದು ಬೆಸ್ಟು ಪದ್ಯ ಈ ಸಂಕಲನದಲ್ಲಿ. ನಾನು ಬದುಕಿಸುತ್ತೇನೆ  ಎನ್ನುತ್ತಾ ದಿನವೂ ಆಚೆ ಬಿಡುವ ಆ ಜೇಡಕ್ಕೆ ನಾನು ಉಪಕರಿಸುತ್ತಿದ್ದೇನೆಯೇ.? ಯಾಕೋ ನನ್ನ ಬಗ್ಗೆ ನನಗೇ ಅಸಮಧಾನ ಎನಿಸುತ್ತಿದೆ. ‘ಬಡವಿಯ ಸ್ವಗತ’ದ ಆರಂಭ ಬಹಳ ಸಾಧಾರಣ ಅನಿಸಿ ಇದು ಕವಿತೆಯಾಗಬಾರದಿತ್ತು ಎಂದುಕೊಳ್ಳುವಾಗಲೇ ಕೊನೆಯಲ್ಲಿ ಛಕ್ಕನೆ ಕಣ್ಣು ತುಂಬುವಂತಹ ಸಾಲುಗಳನ್ನಿಟ್ಟು ಗೆಲ್ಲುತ್ತಾರೆ ಕವಯಿತ್ರಿ. ಮಗು ಬಹಳ ಹೊತ್ತಿಂದ ಮಲಗಿದೆ.ಕೂಲಿಯಿಂದ ಓಡೋಡಿ ಬಂದ ಅಮ್ಮ ಅಯ್ಯೋ ಹಸಿವಾಯ್ತೇನೋ ಅಂತ ಎಬ್ಬಿಸ ಹೊರಟವಳು ಕ್ಷಣ ಕಾಲ ತಡೆಯುತ್ತಾಳೆ. “ಹಾಲಿಲ್ಲದ ಮನೆಯಲ್ಲಿ ನಿನ್ನನೇಳಿಸಿ ಏನು ಮಾಡಲಿ ಕಂದಾ ಮತ್ತೆ ಮಲಗು ಮಗುವೇ ಜೋ ಜೋಜೋ ಜೋ’ ಸಂಗೀತ ನಿತ್ಯವನ್ನೂ, ದಿನಚರಿಯನ್ನು ಕವಿತೆಯಾಗಿಸಿದ್ದಾರೆ.ಇಲ್ಲಿನ ಹೆಚ್ಚು ಕವಿತೆಗಳು ಮಳೆಯನ್ನೇ ಹಾಡಿವೆ.ಮಗುವನ್ನು ತೂಗಿವೆ. ಮನೆ ಮಲಗಿದ್ದಾಗ ತಾನೆದ್ದು ಒಲೆಗೆ ಬೆಂಕಿ ಮಾಡುತ್ತಾ ಮೆಲ್ಲಗೆ ಹೊಗೆಯಾಡಿ ಉರಿದಿವೆ. ಮುಟ್ಟಿದರೆ ಮುನಿ ಯನ್ನು ಮುಟ್ಟಿ ತಾನೂ ಹೀಗೇ ಅಲ್ಲವೇ ಅಂದುಕೊಂಡು ಸುಮ್ಮನೆ ಒಂದು ಘಳಿಗೆ ಮೌನವಾಗಿವೆ. ಯಾರ ಉಸಾಬರಿ ಇಲ್ಲದೆ ನೆಲದಲ್ಲಿ ಮಲಗಿರುವ ಈ ಮುದ್ದು ಮುಳ್ಳುಗಿಡ ಇವರಕ್ಕರೆಗೆ ಬಿದ್ದು ‘ಒಂದು ಕ್ಷಣ ಹಿಂತಿರುಗಿ ನೋಡುವ ಚಿತ್ತ ಮುಟ್ಟದೆ ಮುಂದೆ ಹೋಗಲು ಬಿಡದ ಸಂತ’ ಆಗಿದೆ. ಪತ್ತೆ ಇಲ್ಲದೇ ಇವರೊಟ್ಟಿಗೆ ಠು ಬಿಟ್ಟ ಕವಿತೆ ಮತ್ತೆ ವೈಯಾರವಾಡಿಕೊಂಡು ಇವರ ಬಳಿ ಬಂದಿದೆಯಂತೆ. ‘ಅಗಣಿತ ಪ್ರೀತಿ ತಾರೆ ಈ ಕವಿತೆ’ ಎನ್ನುವ ಸಂಗೀತ ಕೊರೊನಾ ಕಾಲದ ದುರ್ಭರ ಗಳನ್ನು ಕವಿತೆಯಾಗಿಸಿ ನೊಂದಿದ್ದಾರೆ. ಸಮಕಾಲೀನ ಕವಯಿತ್ರಿ ಸ್ಮಿತಾ ಅಮೃತರಾಜ್ ಅವರ ಮುನ್ನುಡಿಯಿರುವ ಈ ಸಂಕಲವನ್ನು ದೀಪ್ತಿ ಬುಕ್ ಹೌಸ್ ಮೈಸೂರು ಹೊರತಂದಿದೆ. ಒಟ್ಟು ಐವತ್ತು ಕವಿತೆಗಳು, ನೂರಹನ್ನೆರಡು ಪುಟಗಳಿರುವ ಈ ಸಂಕಲನದ ಮುಖಬೆಲೆ ನೂರು ರೂಪಾಯಿ. ತನ್ನ ವ್ಯಾಪ್ತಿಯಲ್ಲಿ ದಕ್ಕಿದ್ದನ್ನೂ ಸಿಕ್ಕಿದಷ್ಟನ್ನು ಅಕ್ಷರವಾಗಿಸಿ ಅಭಿವ್ಯಕ್ತಿಸಿ ನಿರಾಳವಾಗಿದ್ದಾರೆ ಸಂಗೀತ. ಮುಗ್ಧ ಭಾವದ ಈ ಪದ್ಯಗಳು ಓದುಗರ ಮನಸ್ಸನ್ನೂ ಮೃದುವಾಗಿಸುವುದರಲ್ಲಿ ಸಂದೇಹವಿಲ್ಲ. ***************************************** ನಂದಿನಿ ಹೆದ್ದುರ್ಗ

ನಿರುತ್ತರ Read Post »

ಪುಸ್ತಕ ಸಂಗಾತಿ

ನನ್ನ ಪ್ರೀತಿಯ ಭಾರತ

ಪುಸ್ತಕ ಸಂಗಾತಿ ನನ್ನ ಪ್ರೀತಿಯ ಭಾರತ ಪುಸ್ತಕ:  ನನ್ನ ಪ್ರೀತಿಯ ಭಾರತ ಲೇಖಕರು : ಜಿಮ್ ಕಾರ್ಬೆಟ್  ಕನ್ನಡಕ್ಕೆ : ಪ್ರೊ.ಆರ್.ಎಸ್.ವೆಂಕೋಬ್ ರಾವ್ ಪ್ರಕಾಶನ : ಚಾರು ಪ್ರಕಾಶನ ,ಬೆಂಗಳೂರು ಬೆಲೆ: 125 ಲಭ್ಯತೆ: ಸಂಗಾತ ಪುಸ್ತಕ ,ಧಾರವಾಡ ಜಿಮ್ ಕಾರ್ಬೆಟ್ ಹೆಸರು ಕನ್ನಡಿಗರಿಗೆ ಚಿರಪರಿಚಿತ ,ಪೂರ್ಣ ಚಂದ್ರ ತೇಜಸ್ವಿ ಅವರಿಂದ ಕಾಡಿನಕಥೆಗಳ ಸರಣಿಗಳ ಮೂಲಕ  ಮನೆಮಾತಾಗಿರುವ ಜೀಮ್ ಕಾರ್ಬೆಟ್ ಮತ್ತು ಅವರ ಬರಹ ನಾಲ್ಕು ಗೋಡೆಗಳ ನಡುವೆ ,ಕಾಂಕ್ರೀಟ್ ಸೀಮೆಯ ಯಲ್ಲೂ ಪುಸ್ತಕಗಳನ್ನು ಹೀಡಿದರೆ ಕಾಡಿನ ರೋಚಕತೆಯನ್ನು ಓದಗರಿಗೆ ಅನಾಯಾಸವಾಗಿ ಓದಗಿಸುತ್ತವೆ… !     ” ಪುಸ್ತಕ ನನ್ನ ಪ್ರೀತಿಯ ಭಾರತ ” ಶೀರ್ಷಿಕೆಯೇ  ಹೇಳುವಂತೆ ಬಿಳಿ ಸಾಹೇಬರು ಭಾರತದಲ್ಲಿ ಭಾರತೀಯನಾಗಿ ಕಂಡ ಅನುಭವಗಳ ಪಾಕ ಈ ಬರಹ. ಇಲ್ಲಿಯ ಮಾತು ಅಂದರೆ, ಕೃತಿಯೊಳಗೆ ಮುಗ್ದತೆ, ಮನವೀಯತೆ , ಸಹೃದಯವಂತಿಕೆಯ ಗಾಢತೆಯೇ ಆನಾವರಣಗೊಂಡಿದೆ.      ಜಿಮ್ ಕಾರ್ಬೆಟ್ ಒಬ್ಬ ಶಿಕಾರಿಕಾರನಾಗಿ ಮಾತ್ರ ಇಲ್ಲಿ ಕಾಣುವದಿಲ್ಲ. ಅವರಲ್ಲಿನ ಒಬ್ಬ  ಗೆಳೆಯ , ಕಾವಲುಗಾರ , ಹಳ್ಳಿಗ ,ಭಾರತೀಯ ಸಾಹೇಬನಾಗಿ ಹುದುಗಿದ ಅವರಲ್ಲಿನ ಹೃದಯವಂತಿಕೆ ,ಮಮತೆ ಹೀಗೆ ಹಲವಾರು ಪಾತ್ರಗಳಲ್ಲಿ ಕಾರ್ಬೇಟ್ ಓದುಗರಿಗೆ ಎದುರಾಗುತ್ತಾರೆ .    ಸಾಮಾನ್ಯರಲ್ಲಿನ ಅಸಾಮಾನ್ಯ ಶಕ್ತಿಯನ್ನು ಗುರಿತಿಸುವಲ್ಲಿ ಕಾರ್ಬೆಟ್ ಅವರು ಸಿಧ್ದ ಹಸ್ತರು. ಅವರ ಕಾಡಿನ ಬರಹಗಳಲ್ಲಿ ಸ್ಥಳೀಯ ವ್ಯಕ್ತಿಗಳನಡುವಿನ ಒಡನಾಟ ,ಸ್ನೇಹ ವನ್ನು  ಇಲ್ಲಿ ಕಾಣಬಹುದು ಇದು ಓದುಗರಲ್ಲಿ ಬೆರಗು ಮೂಡಿಸುತ್ತದೆ . ಇಲ್ಲಿ ಪ್ರಾಣಿ ಪರಿಸರದ ಕತೆ ಅಲ್ಲದೆ ನಿಷ್ಠಾವಂತ, ಪ್ರಾಮಾಣಿಕ ,ದಕ್ಷ  ಜನಸಾಮಾನ್ಯರೂಂದಿಗೆ ಬೆರೆತ ನ್ಯಾಯಾಧೀಶ……..  ಬಹುಮಾನಕ್ಕಾಗಿ ಮಕ್ಕಳನ್ನು ಹೊತ್ತು ತಂದು ಬಹುಮಾನ ನಿರಾಕರಿಸಿದ ಮೇಲ್ಜಾತಿ ಬಡ ಕೂಲಿಯವ….!!! ಹೀಗೆ ಹಲವಾರು ಪಾತ್ರಗಳು ಓದುಗರ ಮನದಲ್ಲಿ ಉಳಿಯುತ್ತವೆ . ಬಡತನ ,ಹಸಿವು , ಇದ್ದರು ಗುಣದಲ್ಲಿ ಅಗರ್ಭ ಶ್ರೀಮಂತರಾದ ಹೃದಯಗಳು ಇರುವದರಿಂದಲೇ ಶೀರ್ಷಿಕೆ ನನ್ನ ಪ್ರೀತಿಯ ಭಾರತವಾಗಿದೆ ಎಂದು ಊಹಿಸಬಹಿದು .         ಒಂದೆಡೆ ಹಸಿವಿನಿಂದ ಸಾಯುವ ಜನವಾದರೆ ಮತ್ತೊಂದೆಡೆ ಸಮೃದ್ಧ ಅರಣ್ಯ , ಕಾಡು ಮೃಗಗಳಿಗೆ ಆಹಾರ ವಾಗುವ ಬಡಜನ. ಅಂದಿನ ಭಾರತದ ಮಹಿಳೆಯ ಸ್ಥಿತಿ -ಗತಿಗಳು ,ಪ್ರಾದೇಶಿಕ ವಿವರ ಎಲ್ಲದರ ಬಗ್ಗೆ ಕೃತಿ ಮಾಹಿತಿ ನೀಡುತ್ತದೆ . ಪುಣ್ವನ ತಾಯಿ ಇಂದಿಗೊ ಹಲವು ರೂಪಕಗಳಲ್ಲಿ ಕಾಣುವಂತೆ ಚಿತ್ರತವಾಗಿದೆ,ಮಕ್ಕಳಿಗಾಗಿ ಪರಿತಪಿಸುವ ಎಳೆಯ ಕುಂತಿ ದಂಪತಿಗಳು .ತಪ್ಪಸಿಕೊಂಡು ಕಾಡಿನಲ್ಲಿ ಇದ್ದ  ಎಳೆಯ ಮಕ್ಕಳನ್ನು ಮುಟ್ಟದ  ಕಾಡು ಮೃಗಗಳು ! .ಈ ಕುರಿತು ಜಿಮ್ ಅವರ ಅಪರೂಪ ವಿವರಣೆ ಇದೆ .   ನ್ಯುಮೋನಿಯಾ ಕ್ಕೆ ತುತ್ತಾಗಿ ಪ್ರಾಣ ಬಿಟ್ಟ ಎಳೆಯ ಜಿಮ್ ಕಾರ್ಬೆಟ್ ಸ್ನೇಹಿತ ಅತನ ಅಸಮಾನ್ಯ ಪ್ರತಿಭೆಗೆ ಜಿಮ್ ಅವರು ಸೋತು ಹೋಗಿರುತ್ತಾರೆ . ಸ್ಥಳೀಯ ಜನರಲ್ಲಿ ಅವರಿಗೆ ಇದ್ದ  ಅದಮ್ಯಯ ಕಾಳಜಿ‌, ಅವರ ಮುಗ್ದತೆಯ ಬಗ್ಗೆ ಇದ್ದ ಸಹಾನುಭೂತಿ ಎಲ್ಲವನ್ನು ಪುಸ್ತಕ ಚಿತ್ರಸಿದೆ .      ಕೃತಿಯಲ್ಲಿನ ಕಾಡಿನ ವಿದ್ಯಮಾನಗಳಿಗೆ ಜಿಮ್  ಅವರ ವಿವರಣೆ ಇದೆ ಕಾಡಿನ ಮೊರೆತದ ಆಲಿಸುವಿಕೆ ಇದೆ ಕಾಡು ಎಂದರೆ ಬರಿ ಮರ ಅಲ್ಲ , ಮೃಗಗಳು ಅಲ್ಲ ಅದು ಮಮತೆ ನೆಲೆ. ಪುಸ್ತಕ ಹಲವರು ಮಾನವೀಯ ವೈವಿಧ್ಯಮಯ ಭಾರತವನ್ನು ಭಾವನಾತ್ಮಕ ಹಾಗೂ ಬೌದ್ಧಿಕ ನೆಲೆಯಲ್ಲಿ ದರ್ಶಿಸುತ್ತದೆ  ಓದುಗರನ್ನು .                       ***************************** ರೇಶ್ಮಾಗುಳೇದಗುಡ್ಡಾಕರ್

ನನ್ನ ಪ್ರೀತಿಯ ಭಾರತ Read Post »

ಪುಸ್ತಕ ಸಂಗಾತಿ

ಬೇಲಿಯೊಳಗಿನ ಬೆಳೆ –

ಪುಸ್ತಕ ಸಂಗಾತಿ ಬೇಲಿಯೊಳಗಿನ ಬೆಳೆ ಒಂದು ಅವಲೋಕನ ಬೇಲಿಯೊಳಗಿನ ಬೆಳೆ – ಪ್ರಬಂಧ ಸಂಕಲನ – ಡಾ. ಕೆ.ಚಿನ್ನಪ್ಪ ಗೌಡ – ಮದಿಪು ಪ್ರಕಾಶನ, ಮಂಗಳೂರು: ೨೦೨೦ ಪುಟ ೧೦೪, ಬೆಲೆ  ೯೦ ರೂ.  ಇದೊಂದು ‘ವಿಶಿಷ್ಟ’ ಸಪ್ತ ಪ್ರಬಂಧಗಳ ಸರಮಾಲೆ. ಯಾಕೆ ‘ವಿಶಿಷ್ಟ’ ಎಂದರೆ ಇಲ್ಲಿಯ ಏಳೂ ಲೇಖನಗಳು ‘ಪ್ರಬಂಧ’ ಎಂಬ ಒಂದೇ ಪ್ರಭೇದ ಸೂತ್ರಕ್ಕೆ ಒಳಪಡುವುದಿಲ್ಲ! ಇದನ್ನು ‘ಹರಟೆ’ ಎಂದು ಲೇಖಕರು ಕರೆದರೂ ಅದು ಹಳ್ಳಿ ಪಂಚಾಯ್ತಿಕಟ್ಟೆಯ ಸಮಯ ಕೊಲ್ಲುವ ಜಡಭರತರ ಹಾಳು ಹರಟೆಯಾಗದೆ ಓದುಗರ ಮನತಟ್ಟುವ, ಮುಟ್ಟುವ ಕಥನಗಳಾಗಿ ವಿಕಾಸಗೊಂಡಿದೆ. ಲೇಖಕರೇ ಹೇಳಿಕೊಳ್ಳುವಂತೆ “ಕೂಡೂರಿನ ನನ್ನ ಮನೆ ಮತ್ತು ವಿಟ್ಲದ ಆಸುಪಾಸಿನ ಜನರ ಬದುಕಿನ ಕೆಲವು ಸಾಂಸ್ಕೃತಿಕ ವಿವರಗಳನ್ನು ಈ ಬರಹಗಳಲ್ಲಿ ಸೃಜನಶೀಲವಾಗಿ ಸಂಘಟಿಸಿದ್ದೇನೆ…ನನ್ನ ಮನಸ್ಸಿನಲ್ಲಿ ಲುಪ್ತವಾಗದೆ ಸುಪ್ತವಾಗಿ ಅವಿತಿದ್ದ, ಆಗೊಮ್ಮೆ ಈಗೊಮ್ಮೆ ಜಿಗಿಯುತ್ತಿದ್ದ ನೆನಪುಗಳನ್ನು ಬಳಸಿ ಈ ಪ್ರಬಂಧಗಳನ್ನು ಕಟ್ಟಿದ್ದೇನೆ. ಈ ನೆನಪುಗಳು ನನಗೆ ಅಮೂಲ್ಯ…ನನ್ನ ಅನುಭವಗಳ ಮೇಲೆ ನನಗೆ ಪ್ರೀತಿ ಇದೆ, ವ್ಯಾಮೋಹವಿಲ್ಲ. ಹಿಂದಿನ ದಿನಗಳನ್ನು ವೈಭವೀಕರಿಸುವ ಉದ್ದೇಶ ನನಗಿಲ್ಲ.” ಲೇಖಕರಿಗಿರುವ ಈ ಎಚ್ಚರ ಇಲ್ಲಿನ ಪ್ರಬಂಧಗಳನ್ನು ನಾಸ್ಟಾಲ್ಜಿಕ್ ಆಗದಂತೆ, ಅಂದರೆ ವೃಥಾ ಗತಕಾಲಕ್ಕೆ ಹಂಬಲಿಸುವ ಗೀಳು ಆಗದಂತೆ ಕಾಪಾಡಿದೆ. ನಾನೂ ಇದೇ ಪರಿಸರದಲ್ಲಿ ಹುಟ್ಟಿ ಬೆಳೆದವನಾದುದರಿಂದ, ಲೇಖಕರ ಕೂಡೂರು ನನಗೂ ಆಪ್ತವಾದುದರಿಂದ, ಇದೆಲ್ಲದರ ಒಡನಾಟವೂ ನನಗಿದ್ದುದರಿಂದ ಈ ಮಾತನ್ನು ಗಟ್ಟಿಯಾಗಿ ಹೇಳಬಲ್ಲೆ ಯಾಕೆಂದರೆ ಈ ಅನುಭವಗಳಲ್ಲಿ ಹಲವನ್ನು ನಾನೂ ಕಂಡವನೇ!        ಶೀರ್ಷಿಕೆಯ ‘ಬೇಲಿ’ ಗತಕಾಲದ ನೆನಪುಗಳ ಬೆಳೆಯನ್ನು ಭದ್ರವಾಗಿ ಸಂರಕ್ಷಿಸಿಕೊಂಡು ಬಂದು ಕಟಾವಿಗೆ ಸಿದ್ಧವಾದ ಪಕ್ವತೆ ಸಾಧಿಸಿ ಪಾಕರಸಾಯನವಾಗಿ ನಮ್ಮ ಮುಂದೆ ತನ್ನನ್ನು ತಾನೇ ಅನಾವರಣಗೊಳಿಸಿಕೊಂಡಿದೆ. ಇಲ್ಲಿ ಗತಕಾಲವೆಂದರೆ ಬಾದರಾಯಣರಷ್ಟು ಹಿಂದೋಡದೆ ಕೇವಲ ‘ಸಂದ ಕಾಲ’ವಾಗಿ ಇಂದು-ನಿನ್ನೆಗಳನ್ನೂ ಒಳಗೊಂಡಿದೆ. ನಂಬಿದ ದೈವವೇ ‘ಬೇಲಿ’ಯಾಗಿ ನಂಬಿದವರನ್ನು ‘ಬೇಲಿಯೊಳಗಿನ ಬೆಳೆ’ಯಂತೆ ಪರಿಗಣಿಸಿ ದೈವ ಅಭಯ ನೀಡುವುದನ್ನು ಲೇಖಕರು ಹೀಗೆ ದಾಖಲಿಸುತ್ತಾರೆ: “ಬೇಲಿ ನಾನು. ಬೇಲಿಯೊಳಗಿನ ಬೆಳೆ ನೀವು. ಬಿತ್ತಿದ ಬೀಜ ನುಚ್ಚಾಗದಂತೆ ನೆಟ್ಟ ಸಸಿ ನಲುಗದಂತೆ ಕಂಬಳದ ಪೂಕರೆ ಮಾಲದಂತೆ ಬೋದಿಗೆ ಕಂಬ ಮುರಿಯದಂತೆ ನಂದಾದೀಪ ನಂದದಂತೆ ತೊಟ್ಟಿಲಿನ ಸರಪಳಿ ತುಂಡಾಗದಂತೆ ನಾನು ಸಾವಿರದ ಕಾಲದ ವರೆಗೆ ಕಾಯುತ್ತೇನೆ.” ಇದು ನಂಬಿದವರ ಪಾಲಿಗೆ ಒಂದು ಆಧಾರವಾಗಿ ಅವರ ಬಾಳನ್ನು ರೂಪಿಸಿದೆ ಎಂಬುದು ಸತ್ಯ.     ಕೊನೆಯ ಪ್ರಬಂಧ “ನೀವೇ ಯೋಚಿಸಿ ನೋಡಿ,’ ಪ್ರಚಲಿತ ಕೊರೊನಾ ಸಂಕಷ್ಟದ ಲಾಭ-ನಷ್ಟಗಳ ಲೆಕ್ಕಾಚಾರವನ್ನು ಕರಾರುವಾಕ್ಕಾಗಿ ನಡೆಸಿ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಗೀತೆಯನ್ನು ಬೋಧಿಸಿದ ಮೇಲೆ ಹೇಳುವ ಮಾತುಗಳ ಮಾರ್ಮಿಕತೆ –- ‘ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು’ (೧೮:೬೩) – ‘ನಾನು ಹೇಳಿದ್ದನ್ನೆಲ್ಲಾ ಚೆನ್ನಾಗಿ ಪರಾಂಬರಿಸಿ ಮತ್ತೆ ನಿನಗೆ ತೋಚಿದಂತೆ ಮಾಡು’ — ಎಂಬುದನ್ನು ಇಲ್ಲಿ ಓದುಗರಿಗೆ ಆರೋಪಿಸಿ ಅವರ ಜವಾಬ್ದಾರಿಯನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ. ಕನ್ನಡದಲ್ಲಿ ಪ್ರಬಂಧ ಸಾಹಿತ್ಯದ ಹುಟ್ಟು, ಬೆಳವಣಿಗೆ, ಉತ್ಕೃಷ್ಟ ಮಾದರಿಗಳು ಇತ್ಯಾದಿಗಳ ಬಗ್ಗೆ ಇಲ್ಲಿ ಉಲ್ಲೇಖಿಸದೆ ನೇರವಾಗಿ ಪ್ರಬಂಧಗಳೊಂದಿಗೆ ಮುಖಾಮುಖಿಯಾಗುವ ಪ್ರಯತ್ನವಷ್ಟೇ ನನ್ನದು. ಈ ಪ್ರಬಂಧಗಳ ಬಗ್ಗೆ ಲೇಖಕರೇ ಒಂದಿಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ. “ಬಹುಶಃ ನಾನು ನನ್ನದೇ ಪ್ರಬಂಧಗಳ ಬಗ್ಗೆ ಬರೆದದ್ದು ಹೆಚ್ಚಾಯಿತೋ ಏನೋ” ಎಂಬ ದಾಕ್ಷಿಣ್ಯವೂ ಅವರನ್ನು ಕಾಡಿದೆ! ‘ತರಂಗ’ ಯುಗಾದಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಈ ಸಂಕಲನದ ಮೊದಲ ಪ್ರಬಂಧ ‘ಕಾಗೆ ಕಾಲಿನ ಗೆಜ್ಜೆ’ಯ ಬಗ್ಗೆ ನಾನು ವೈಯಕ್ತಿಕವಾಗಿ ನೇರ ಚಿನ್ನಪ್ಪ ಗೌಡರಿಗೆ ಬರೆದ ಮಾತುಗಳನ್ನು, ಅಂತೆಯೇ ಇತರ ಓದುಗರ ಅಭಿಪ್ರಾಯಗಳನ್ನೂ ಲೇಖಕರು ಈ ಸಂಕಲನದಲ್ಲಿ ಉಲ್ಲೇಖಿಸುತ್ತಾರೆ. ಭೂತಕೋಲದ ಸಂದರ್ಭದಲ್ಲಿ ಭೂತ ಕಟ್ಟುವ ದೈವದ ಪಾತ್ರಿ ನೀಡುವ ಅಭಯ ಜನರು ನಂಬುವ ಭೂತದ್ದೋ, ಪಾತ್ರಿಯದ್ದೋ ಎಂಬ ಸಂದಿಗ್ಧ ಕೆಲವರನ್ನು ಕಾಡಿದೆ ಮತ್ತು ಈ ಕುರಿತು ಅವರು ಲೇಖಕರನ್ನು ಪ್ರಶ್ನಿಸಿಯೂ ಇದ್ದಾರೆ. ಇದಕ್ಕೆ ಭೂತಾರಾಧನೆಯ ಬಗ್ಗೆಯೇ ಕ್ಷೇತ್ರ ಕಾರ್ಯ ನಡೆಸಿ ಡಾಕ್ಟರೇಟ್ ಪದವಿ ಪಡೆದ ಜಾನಪದ ವಿದ್ವಾಂಸರೂ ಆಗಿರುವ ಚಿನ್ನಪ್ಪ ಗೌಡರು ಉತ್ತರಿಸುವುದು ಹೀಗೆ: “ಭೂತ ಇದೆ. ನಾನು ಎಷ್ಟೋ ಭೂತಗಳನ್ನು ನೋಡಿದ್ದೇನೆ. ಅವುಗಳನ್ನು ಕೆಲವರು ದೈವಗಳೆಂದೂ, ಈ ನೆಲದ ಸತ್ಯಗಳೆಂದೂ ಕರೆಯುತ್ತಾರೆ. ಅವುಗಳಿಗೆ ನಿತ್ಯ ಕೈಮುಗಿಯುತ್ತಾರೆ… ಇಷ್ಟೊಂದು ವಿಶ್ವಾಸವಿಟ್ಟು ಕಣ್ಣೆದುರಿನ ಭೂತಕ್ಕೆ ಕೈಮುಗಿಯುವಾಗ ಅದು ಇಲ್ಲ ಎಂದರೆ ಹೇಗೆ? … ಭೂತವನ್ನು ಪ್ರತಿನಿಧಿಸಿ, ಭೂತವೇ ಆಗಿಬಿಡುವ ಒಬ್ಬ ವ್ಯಕ್ತಿಯೇ ಇದ್ದಾನಲ್ಲ…ನೋಡಲು, ಮುಟ್ಟಲು, ಮಾತನಾಡಿಸಲು ಸಾಧ್ಯವಾಗುವ ‘ವ್ಯಕ್ತಿತ್ವ’ವನ್ನು ಅದಿಲ್ಲ, ಅದಲ್ಲ ಎಂದರೆ ಹೇಗೆ? ಹಾಗಾಗಿ ನನ್ನ ಮಟ್ಟಿಗೆ ಭೂತ ಇದೆ. ನಾನು ಆ ಸತ್ಯಗಳನ್ನು ಕಂಡಿದ್ದೇನೆ.” ನನ್ನ ವೈಯಕ್ತಿಕ ನಿಲುವೂ ಇದೇನೇ. ಈ ಕುರಿತು ನಾನು ಹೇಳಿದ್ದು: “ಅಗೋಚರ ಸತ್ಯದ ಸಾಕ್ಷಾತ್ಕಾರ ಭೂತದ ನಡೆಯಲ್ಲಿ, ನೇಮದ ಗುಂಗಿನಲ್ಲಿ ಕ್ಷಣಕಾಲ ವಿಜೃಂಬಿಸುವುದು ಸುಳ್ಳಲ್ಲ. ಸತ್ಯದರ್ಶನದ ವಿಧಿಯೇ ಹಾಗೆ… ಭಾವಕ್ಕೆ ತಿಳಿದರೂ, ಬುದ್ಧಿಗೆ ತರ್ಕಕ್ಕೆ ನಿಲುಕದ ಕಾರಣಿಕ ಅದು. ಒಂದು ಸಮುದಾಯಕ್ಕೆ, ಅದರ ಬದುಕಿಗೆ ಆಧಾರವಾಗಿ ನಿಂತು ಮುನ್ನೆಡೆಸುವ ಶಕ್ತಿ ಅದು. ಇದನ್ನು ಬೆರಗುಗಣ್ಣಿಂದ ನೋಡಿದರೇನೇ ಚೆಂದ… ದೈನಿಕದ ಬದುಕು ನಿಂತಿರುವುದು ನಂಬಿಕೆ, ವಿಶ್ವಾಸ, ಪ್ರೀತಿ, ಭಕ್ತಿ ಇತ್ಯಾದಿ ಸಂವೇದನೆಗಳ ಮೇಲೆ…” ಇಲ್ಲಿ ನಿಜವಾಗಿ ಕೆಲಸಮಾಡುವುದು ಕವಿ ಕೊಲೆರಿಜ್ ಹೇಳುವಂತೆ – willing suspension of disbelief – ಅಪನಂಬಿಕೆಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದರೆ ಮಾತ್ರ ಸತ್ಯ, ಸೌಂದರ್ಯ ದೃಗ್ಗೋಚರವಾಗುತ್ತದೆ. ಅದು ಅರಿವಾಗುವುದು ಅಂತರಂಗದ ಆರ್ದ್ರತೆಯಲ್ಲಿ, ತಲ್ಲೀನತೆಯಲ್ಲಿ ಹಾಗೂ ಭಾವಪರವಶತೆಯಲ್ಲಿ. ತರ್ಕದಿಂದ ಬದುಕನ್ನು ಅಳೆಯಲಾಗದು, ಅಳೆಯಬಾರದು. ಸ್ತ್ರೀರೂಪವನ್ನು ಮಜ್ಜೆ, ಮಾಂಸ, ರಕ್ತಗಳೆಂದು ವಿಚಿಕಿತ್ಸಕ ದೃಷ್ಟಿಯಿಂದ ನೋಡಿದರೆ ಎಷ್ಟು ಆಭಾಸವಾದೀತು! ನಾಗಚಂದ್ರ ಕವಿ ವರ್ಣಿಸಿದ್ದನ್ನು ಬುದ್ಧಿಯಿಂದಲ್ಲ, ಭಾವದಿಂದ, ರಸೈಕ ದೃಷ್ಟಿಯಿಂದ ಗ್ರಹಿಸಬೇಕು, ಅಲ್ಲವೇ?   ಸ್ತ್ರೀ ರೂಪಮೆ ರೂಪಂ ಶೃಂ ಗಾರಮೆ ರಸಮತುಳ ಸುರತ ಗಂಧಮೇ ಗಂಧಂ l ಸಾರಸ್ಪರ್ಶಂ ಗುರುಕುಚ ಭಾರಸ್ಪರ್ಶಂಗಳಪ್ರಶಬ್ದಮೇ ಶಬ್ದಂ ll “ಕಟ್ಟುವುದಾದರೆ ಕಾಗೆ ಕಾಲಿಗೆ ಗೆಜ್ಜೆ ಕಟ್ಟಬೇಕು. ಕೋಳಿಯ ಕಾಲಿಗೆ ಗೆಜ್ಜೆ ಕಟ್ಟಿದರೆ ಮನೆಹಿತ್ತಿಲು ಸುತ್ತು ಬಂದೀತು. ನಿನ್ನ ಕಾಲಿಗೆ ಗೆಜ್ಜೆ ಕಟ್ಟಿದ್ದೇನೆ. ನಾಲ್ಕು ಊರು ಹಾರಾಡು” ಎಂದು ತಾಯಿ ಉಳ್ಳಾಲ್ತಿ ದೈವ ಲೇಖಕರಿಗೆ ಬೂಳ್ಯ (ಪ್ರಸಾದ) ಕೊಟ್ಟು ಹರಸುವುದು ಒಂದು ರೋಚಕ ಘಟನೆ. ಇದು ವಾಸ್ತವ ಹಾಗೂ ದೈವದ ಮಾಯಕದ ಲೋಕದ ನಡುವಿನ ಸೇತುವಾಗಿ ಚಿನ್ನಪ್ಪ ಗೌಡರ ನಿಜಜೀವನದಲ್ಲೂ ನಡೆದದ್ದು ಕೇವಲ ಕಾಕತಾಳೀಯವಲ್ಲ ಎಂಬುದು ನನ್ನ ದೃಢ ನಂಬಿಕೆ. ಇದರ ವಿವರಗಳಿಗೆ ನೀವು ಪ್ರಬಂಧವನ್ನೇ ಓದಬೇಕು. ‘ಪಾಚಕ್ಕನ ಗಂಡಾಂತರ’ದಲ್ಲಿ ಲೇಖಕರು ‘ಕೆಟ್ಟ ದೃಷ್ಟಿ’ಯ ಬಗ್ಗೆ ಬರೆಯುತ್ತಾರೆ. ಇಲ್ಲಿಯೂ ನಂಬಿಕೆ-ಅಪನಂಬಿಕೆಗಳ ಮಧ್ಯೆ ಒಂದು ತೆಳು ರೇಖೆ ಮಾತ್ರ ಇದೆ. ಮಗುವಿಗೆ ದೃಷ್ಟಿಯಾಗುವುದು, ದೃಷ್ಟಿ ತೆಗೆಯುವುದು ಇತ್ಯಾದಿ ನಮ್ಮ ಸಾಮಾಜಿಕ ಜೀವನದಲ್ಲಿ ಜಾತಿ, ಮತಗಳ ಭೇದವಿಲ್ಲದೆ ಅನೂಚಾನವಾಗಿ ಲಾಗಾಯ್ತಿಂದ ನಡೆದು ಬಂದಿರುವುದು ಸತ್ಯ ತಾನೇ? ಇಲ್ಲಿ ಪಾಚಕ್ಕನ ಕೆಟ್ಟ ದೃಷ್ಟಿಯನ್ನು ಅವಳು ಅನುಭವಿಸಿರಬಹುದಾದ ಸಂಕಟಗಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಚಿನ್ನಪ್ಪ ಗೌಡರು ಗ್ರಹಿಸಿರುವುದು ಅವರ ಸೂಕ್ಷ್ಮ ಸಂವೇದನೆಗೆ ಸಾಕ್ಷಿ ಎಂದು ನಾನು ತಿಳಿಯುತ್ತೇನೆ. ಈ ಸಂವೇದನೆಯೇ ಲೇಖಕರ ಬಾಯಿಯಿಂದ ಈ ಮಾತುಗಳನ್ನು ಹೇಳಿಸಿದೆ: “ಪಾಚಕ್ಕನ ಮಾತುಗಳನ್ನು ಕೇಳಿದ ಮೇಲೆ ನನಗೆ ಅವಳು ಕೆಟ್ಟವಳು ಅಂತ ಅನಿಸಲಿಲ್ಲ. ಅವಳ ಮನಸ್ಸನ್ನು ಕೆಡಿಸಿ ಅವಳನ್ನು ಕೆಟ್ಟವಳನ್ನಾಗಿ ಮಾಡಿದ್ದು ಯಾರು ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿದೆ. ಅವಳ ಒಳದನಿಗೆ ಸಮಾಜ ಕಿವಿಗೊಡಲಿಲ್ಲ. ಲಿಂಗ ತಾರತಮ್ಯ ಅವಳ ಸಂವೇದನೆಯನ್ನು ಕೊಂದಿದೆ. ಜಾತಿ, ಹೆಣ್ಣು, ಬಡತನ ಮೊದಲಾದ ನೆಲೆಗಳ ಸಾಮಾಜಿಕ ಅಸಮಾನತೆಗಳು ಪಾಚಕ್ಕನನ್ನು ತೀವ್ರವಾಗಿ ಕಾಡಿವೆ. ಅವಳದಲ್ಲದ ತಪ್ಪಿಗೆ ಅವಳನ್ನು ಹೊಣೆಗಾರಳನ್ನಾಗಿ ಸಮಾಜ ಮಾಡಿದೆ. ಅವಳ ಸ್ವಾತಂತ್ರ್ಯವನ್ನು ಸಮಾಜ ಕಸಿದಿದೆ. ಅವಳ ಮನಸ್ಸನ್ನು ಕೆಡಿಸಿದ ಕೆಟ್ಟ ಸಮಾಜವನ್ನು ದುರಸ್ತಿಗೊಳಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ ಅಂತ ನನಗನ್ನಿಸಿದೆ ಪಾಚಕ್ಕನ ಮಾತುಗಳನ್ನು ಕೇಳಿ.” ಇಂತಹ ಒಂದು ಸಮಾಜಶಾಸ್ತ್ರೀಯ ದೃಷ್ಟಿ ಇನ್ನೂ ಅನೇಕ ಪ್ರಚಲಿತವಿರುವ ಸಾಮಾಜಿಕ ಅನಿಷ್ಟಗಳ ನಿವಾರಣೋಪಾಯವಾಗಿ ಇಂದಿನ ತುರ್ತು ಹಾಗೂ ಇಂದಿಗೂ ಪ್ರಸ್ತುತ ಕೂಡಾ ಎಂದು ನನಗೆ ಅನಿಸುತ್ತದೆ. ಇದಕ್ಕೆ ಪೂರಕವಾಗಿ ಒಂದು ಮಾತು. ನಾನು ಬಾಲ್ಯಕಾಲದಲ್ಲಿ ಕೇಳಿದಂತೆ ವಿಟ್ಲ ಪೇಟೆಯಿಂದ ಅನತಿದೂರದಲ್ಲಿ ‘ಅಪ್ಪೇರಿಪಾದೆ’ ಎಂಬ ಬೃಹತ್ ಶಿಲಾಹಾಸುಬಂಡೆ ಇತ್ತಂತೆ. ಅದಕ್ಕೆ ವಿಶಾಲವಾದ ಬಿಳಿ ಬಟ್ಟೆಯನ್ನು ಮುಚ್ಚಿ, ಪಾಚಕ್ಕನಂತೆ ಬಿರುದೃಷ್ಟಿಗೆ ಹೆಸರುವಾಸಿಯಾದ ಮಹಿಳೆಯೊಬ್ಬರಿಗೆ ತೋರಿಸಿದಾಗ ‘ಬೆಳಗಾಗಿ ಇಷ್ಟು ಹೊತ್ತಾದರೂ ಇವನಿನ್ನೂ ಎದ್ದಿಲ್ಲವೇ?’ ಎಂದು ಕುಚೋದ್ಯದ ಮಾತನಾಡಿದಾಗ ಅವಳ ಬಿರುನುಡಿಗೆ ಇಡೀ ಹಾಸುಬಂಡೆಯೇ ಚಿಟಿ ಚಿಟಿಲೆಂದು ಸಾವಿರ ಹೋಳಾಗಿ ಹೋಯಿತಂತೆ ಎಂಬುದನ್ನು ನಾನು ಕೇಳಿ ಬಲ್ಲೆ! ಇದು ಸತ್ಯವೋ ಸುಳ್ಳೋ ಎನ್ನುವುದಕ್ಕಿಂತಲೂ ಅಂತಹ ಒಂದು ಸಾಧ್ಯತೆಯನ್ನು ಗುರುತಿಸಿದ ಜನಮಾನಸಕ್ಕೆ ‘ಕಲ್ಪನಾ ದಾರಿದ್ರ್ಯ’ ಎಂದೂ ಬಾರದು ಎಂಬುದಷ್ಟೇ ಮುಖ್ಯ ಎಂದು ನನಗನಿಸುತ್ತದೆ. ಸೃಜನಶೀಲ ಮನಸ್ಸು ಕಲ್ಪನೆ-ವಾಸ್ತವಗಳ ನಡುವಿನ ವ್ಯಾವಹಾರಿಕ ರೇಖೆಯನ್ನು ನಿರಾಕರಿಸುತ್ತದೆ, ಅಥವಾ ನಿವಾರಿಸುತ್ತದೆ ಎಂದರೆ ಹೆಚ್ಚು ಸಮಂಜಸವಾಗಬಹುದೇನೋ! ‘ಪಾಚಕ್ಕನ ಗಂಡಾಂತರ’ ಈ ಮಾತಿಗೆ ಪುರಾವೆ ಇದ್ದಂತಿದೆ. ‘ಕಳೆಂಜಿಮಲೆ’ ವಿಟ್ಲದ ಸರಹದ್ದಿನ ಕಾಡು. ಇದು ವಿಟ್ಲವಾಸಿಗಳ ಭಾವಕೋಶದ ಒಂದು ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ನಾನೂ ಚಿಕ್ಕವನಾಗಿದ್ದಾಗ ಗೆಳೆಯರೊಂದಿಗೆ ಕಳೆಂಜಿಮಲೆಗೆ ಲಗ್ಗೆ ಇಟ್ಟವನೇ! ಅಲ್ಲಿಯ ಕಾಟು ಮಾವಿನ ಮರದ ಹಣ್ಣುಗಳನ್ನು, ಬೆಟ್ಟದ ನೆಲ್ಲಿಕಾಯಿ, ಪುನರ್ಪುಳಿ, ನೇರಳೆ, ಕುಂಟಲ ಹಣ್ಣುಗಳನ್ನು ಧಾರಾಳವಾಗಿ ತಿಂದವನೇ!! ಅಲ್ಲಿಯ ಬಕಾಸುರನ ಗುಹೆ, ನೆತ್ತರಕೆರೆ, ವಿಟ್ಲವೇ ಮಹಾಭಾರತದ ‘ಏಕಚಕ್ರ ನಗರ’ ಎಂಬ ನಂಬಿಕೆ ಇತ್ಯಾದಿಗಳಲ್ಲಿ “ಪುರಾಣ ಕಾವ್ಯಗಳು ಸ್ಥಳೀಯವಾಗುವ – ಥಿಯರಿ ಆಫ್ ಲೋಕಲೈಸೇಷನ್”ನ ಅದ್ಭುತವನ್ನು ಕಂಡವನೇ. ಚಿನ್ನಪ್ಪ ಗೌಡರು ಇವೆಲ್ಲವನ್ನೂ ಮನಮುಟ್ಟುವಂತೆ, ಅತಿರಂಜಕತೆಯ, ಅತಿಭಾವುಕತೆಯ ಅಪಾಯದ ಸೆಳೆತವನ್ನು ಮೀರಿ ವರ್ಣಿಸಿರುವುದು ನಿಜಕ್ಕೂ ಶ್ಲಾಘನೀಯ. ಕಾಡು ಮತ್ತು ಮನುಷ್ಯ ಸಮಾಜದ ನಡುವಿನ ಅವಿನಾಭಾವದ ನೆಂಟಿನ ಗಂಟನ್ನು ಸುಕ್ಕುಗಟ್ಟದಂತೆ ಬಿಡಿಸಲು ಚಿನ್ನಪ್ಪ ಗೌಡರು ಶಕ್ತರಾಗಿದ್ದಾರೆ. ಕಳೆಂಜಿಮಲೆ ಒಂದು ರಕ್ಷಿತಾರಣ್ಯ. ಇಲ್ಲಿ ಹೆಚ್ಚಾಗಿ ಹೆಂಗಸರು ಒಣಸೌದೆ ಆರಿಸಿ ಗಂಟು ಕಟ್ಟಿ ತಲೆಯ ಮೇಲೆ ಹೊತ್ತು ತಂದು ಮಾರಾಟ ಮಾಡುವುದೋ, ಸ್ವಂತಕ್ಕೆ ಬಳಸುವುದೋ ಸದಾ ನಡೆದೇ ಇತ್ತು. ಅಂತೆಯೇ ಕರ್ನಾಟಕದಿಂದ ಸಮೀಪದ ಕೇರಳಕ್ಕೆ ಅಕ್ಕಿ ಸಾಗಾಟ ನಿರ್ಬಂಧ ಇದ್ದ ಕಾಲದಲ್ಲಿ ಹಲವು ಸಾಹಸಿಗರು ರಾತ್ರಿ ಕಳೆಂಜಿಮಲೆ ದಾರಿಯಾಗಿ ಕೇರಳಕ್ಕೆ ಅಕ್ಕಿ ಸಾಗಾಟ ಮಾಡಿ ದುಡ್ಡು ಮಾಡಿದ್ದೂ, ಕಾನೂನುಪಾಲಕರೊಂದಿಗೆ ಎಗರಾಡಿದ್ದೂ  ಗೊತ್ತು. ಇದೆಲ್ಲಾ ನನ್ನ ಬಾಲ್ಯಕಾಲದ ನೆನಪುಗಳಲ್ಲಿ ಹುದುಗಿವೆ. ಕಳೆಂಜಿಮಲೆ ಒಂದು ರೀತಿಯಲ್ಲಿ ನಿಗೂಢವೂ ಆಗಿ ಜನಜೀವನಕ್ಕೆ ಸಹಾಯಕವಾಗಿಯೂ ಒದಗಿದ ಕಾಲವೊಂದಿತ್ತು. “ಈ ಕಳೆಂಜಿಮಲೆಯ ಒಡಲಲ್ಲಿ ಏನಿದೆ, ಏನಿಲ್ಲ ಎಂಬುದು ಸರಿಯಾಗಿ  ಯಾರಿಗೂ ಗೊತ್ತಿಲ್ಲ. ನಮ್ಮ ಊರಿನ ಸಂಸ್ಕೃತಿ ಮತ್ತು ಈ ಕಾಡಿನ ಪ್ರಕೃತಿಯ ನಡುವೆ ಸಂಘರ್ಷ ಮತ್ತು ಸಮನ್ವಯ ನಡೆಯುತ್ತಾ ಬಂದಿರುವುದಂತೂ ನಿಜ” ಎಂದು ಚಿನ್ನಪ್ಪ ಗೌಡರು ಗುರುತಿಸುತ್ತಾರೆ. ಇಂತಹ ಕಳೆಂಜಿಮಲೆಗೆ ಈಗ ಬಂದಿರುವ ದುಸ್ಥಿತಿಯನ್ನು ಲೇಖಕರು ಎಳೆ ಎಳೆಯಾಗಿ ಬಿಡಿಸಿ ವಿವರಿಸುವಾಗ ಅವರೊಂದಿಗೆ ಓದುಗರೂ ವಿಷಾದಯೋಗಕ್ಕೆ ಜಾರುತ್ತಾರೆ: “ರಕ್ಷಿತಾರಣ್ಯವಾಗಿದ್ದ ಈ ಕಳೆಂಜಿಮಲೆ ಈಗ ರಕ್ಷಣೆಯಿಲ್ಲದೆ ಬಳಲುತ್ತಿದೆ. ಪಶ್ಚಿಮ ಘಟ್ಟವೇ ಸೂರೆಹೋಗಿರುವಾಗ ಈ ಪುಟ್ಟ ಕಳೆಂಜಿಮಲೆ ಏನು ತಾನೇ ಮಾಡಲು ಸಾಧ್ಯ. ಬಕಾಸುರನ ಗುಹೆಯ ಬದಿಯಿಂದಲೇ

ಬೇಲಿಯೊಳಗಿನ ಬೆಳೆ – Read Post »

ಪುಸ್ತಕ ಸಂಗಾತಿ

ಆಕಾಶಕ್ಕೆ ಹಲವು ಬಣ್ಣಗಳು

ಪುಸ್ತಕ ಸಂಗಾತಿ ಆಕಾಶಕ್ಕೆ ಹಲವು ಬಣ್ಣಗಳು ಗಜಲ್ ಪ್ರೇಮಿಗಳ ಭಾವಬಾಂದಳದಿ ಮಾಸದ ಬಣ್ಣಗಳ ಮೂಡಿಸಿದ ಕೃತಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡಿರುವ ಶಹಾಪುರದ ಹಿರಿಯ ಲೇಖಕರಾದ  ಶ್ರೀ. ಸಿದ್ಧರಾಮ ಹೊನ್ಕಲ್ ಅವರು ಮೈಸೂರಿಗರಿಗೆ ಪರಿಚಿತರೇನೂ ಅಲ್ಲ. ಮೈಸೂರಿನಲ್ಲೇ ಹುಟ್ಟಿ, ಬೆಳೆದು ಕಳೆದ ಹದಿನೇಳು ವರ್ಷಗಳಿಂದ ಸಂಘಟನೆ ಹಾಗೂ ಕವನ ರಚನೆಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಹೊನ್ಕಲ್ ಅವರ ಪರಿಚಯವಾದುದು ಗಜಲ್ ಗಳಿಗೆಂದೇ ಮೀಸಲಾದ  ಗುಂಪೊಂದರಲ್ಲಿ. ಕಳೆದ ಒಂದೂವರೆ ವರ್ಷಗಳಿಂದ ಗಜಲ್ ಗುರುಗಳಾದ ಡಾ. ಗೋವಿಂದ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಗಜಲ್ ರಚನೆಯನ್ನು ಕಲಿಯುತ್ತಿರುವ ನಾನು ಕೆಲವು ತಿಂಗಳುಗಳ ಹಿಂದೆ  ‘ಗಜಲ್ ತೊರೆ ‘  ಗುಂಪಿಗೆ ಸೇರ್ಪಡೆಗೊಂಡ ನಂತರ ಮತ್ತೆ ಕಲಿಕಾರ್ಥಿಯಾಗಿ ಇತರ ಸದಸ್ಯರೊಡನೆ ಕಲಿಯುವ ಪ್ರಕ್ರಿಯೆ ಆರಂಭವಾಯಿತು. ಈ ಗುಂಪಿನಲ್ಲಿನ ಇತರೆಲ್ಲರ ಗಜಲ್ ಗಳನ್ನು ಓದಿ ಖುಷಿಪಡುವುದರ ಜೊತೆಗೆ ಪ್ರತಿದಿನವೂ ಗಜಲ್ ನ ವಿವಿಧ ರೀತಿಯ ರಚನೆಗಳ ಬಗ್ಗೆ ತಿಳಿಯುವ ಅವಕಾಶ ದೊರಕಿತು. ಕಾಲ ಕಳೆದಂತೆ ನನ್ನ  ರಚನೆಗಳೂ ಸೇರಿದಂತೆ ಇತರರ ಗಜಲ್ ಗಳನ್ನೂ ಪರಿಷ್ಕರಿಸುವ ಕೆಲಸದಲ್ಲಿ ನಿತ್ಯ  ತೊಡಗಿಸಿಕೊಳ್ಳಲು ಆರಂಭಿಸಿದೆ.ಈ ನನ್ನ ಕಾಯಕ ಗುಂಪಿನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇಂಥಹ  ಸಂದರ್ಭದಲ್ಲೇ ನನಗೆ ಹೊನ್ಕಲ್ ಅವರ ಪರಿಚಯವಾದದ್ದು…..ಅದೂ ವಿಚಿತ್ರ ಸನ್ನಿವೇಶವೊಂದರಲ್ಲಿ! ಆಗ ತಾನೇ ಗಜಲ್ ರಚನೆಯಲ್ಲಿ  ತೊಡಗಿದ್ದ ಹೊನ್ಕಲ್ ಅವರ ಗಜಲ್ ಒಂದರಲ್ಲಿ ಕಾಫಿಯಾಗಳ ಜೋಡಣೆ ತಪ್ಪಾಗಿದ್ದುದು ನನ್ನ ಗಮನಕ್ಕೆ ಬಂತು.’ ಹೇಳಲೋ ಬೇಡವೋ ‘ ಎಂಬ ದ್ವಂದ್ವದಲ್ಲಿ ಇದ್ದ ನಾನು ಕೊನೆಗೆ ಅವರ ತಪ್ಪು ಜೋಡಣೆಯ ಬಗ್ಗೆ ಗುಂಪಿನಲ್ಲಿ ತಿಳಿಸಿದೆ. ತಕ್ಷಣವೇ ಹೊನ್ಕಲ್ ಅವರಿಂದ ಬಂದ ಖಾರವಾದ  ಉತ್ತರ ” ಎಲ್ಲಾ ಸರಿಯಿದೆ. ಐ ನೋ ಬೆಟರ್ ದ್ಯಾನ್ ಯೂ….!”.  ಹೆದರಿದ ನಾನು ನನ್ನ ವಿಶ್ಲೇಷಣೆ ಸರಿಯಿದ್ದರೂ   ” ನನಗೆ ತಿಳಿದದ್ದನ್ನು ತಿಳಿಸಿದ್ದೇನೆ ಸರ್. ತಪ್ಪೆಂದೆನಿಸಿದರೆ ಕ್ಷಮಿಸಿ ” ಎಂದು ನೊಂದುಕೊಂಡೇ ಸಂದೇಶ ಕಳಿಸಿದೆ. ಆದರೆ ಗುಂಪಿನಲ್ಲಿ ನಮ್ಮೆಲ್ಲರಿಗೂ ಮಾತೃ ಸಮಾನರಾದ ಖ್ಯಾತ , ಹಿರಿಯ ಗಜಲ್ ಕಾರ್ತಿ ಶ್ರೀಮತಿ. ಪ್ರಭಾವತಿ ದೇಸಾಯಿ ಮೇಡಂ ಅವರು ನನ್ನ ನಿಲುವನ್ನು ಸಮರ್ಥಿಸಿ ಹೊನ್ಕಲ್ ಅವರಿಗೆ ಅವರ ರಚನೆಯ ತಪ್ಪುಗಳ ಬಗ್ಗೆ ಅರಿವು ಮೂಡಿಸಿದರು. ತಕ್ಷಣವೇ ಸೂಕ್ತ ತಿದ್ದುಪಡಿಗಳನ್ನು ಮಾಡಿದ ಹೊನ್ಕಲ್ ಅವರು ” ನೀವೇನೂ ಕ್ಷಮೆ ಕೇಳಬೇಕಿರಲಿಲ್ಲ ” ಎಂದು ಹೇಳಿ ನನ್ನ ಮನಸ್ಸಿನ ಉದ್ವೇಗವನ್ನು ಶಮನಗೊಳಿಸಿದರು. ಅಂದು ”ತಾನೇ ಸರಿಯೆಂ’ದು ದುಡುಕಿ ಗದರಿದವರೇ ಮುಂದೆ ಸಹೋದರ ಸಮಾನರಾದುದು ವಿಪರ್ಯಾಸ ! ಈ ಘಟನೆಯನ್ನು ಈಗಲೂ ಒಮ್ಮೊಮ್ಮೆ ನಾನು ನೆನೆದಾಗ ಮೊಗದಲ್ಲಿ ನಗು ಸುಳಿಯದೇ ಇರದು. ಇಲ್ಲಿಯವರೆಗೆ ಪ್ರವಾಸ ಕಥನಗಳು, ಕವನ ಸಂಕಲನಗಳೂ ಸೇರಿದಂತೆ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಸಿದ್ಧರಾಮ ಹೊನ್ಕಲ್ ಅವರ ಮೊದಲ ಗಜಲ್ ಸಂಕಲನ ” ಆಕಾಶಕ್ಕೆ ಹಲವು ಬಣ್ಣಗಳು” . ಆಕರ್ಷಕ ಮುಖಪುಟವನ್ನು ಹೊತ್ತಿರುವ ಈ ಸಂಕಲನದಲ್ಲಿ ಒಟ್ಟು ಐವತ್ತು ಗಜಲ್ ಗಳಿವೆ. ಪ್ರತೀ ಗಜಲ್ ನ ಆಶಯಕ್ಕೆ ಪೂರಕವಾದ ಚಿತ್ರವಿದೆ. ಅಚ್ಚುಕಟ್ಟಾದ ಮುದ್ರಣದಿಂದ ಇದು ಸಂಗ್ರಹಯೋಗ್ಯ ಕೃತಿಯಾಗಿದೆ. ಪ್ರೀತಿ ,ಪ್ರೇಮ , ವಿರಹ , ನೋವು …ಈ ಎಲ್ಲ  ಅಂಶಗಳನ್ನೊಳಗೊಂಡ ಗಜಲ್ ಗಳಷ್ಟೇ ಅಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲವು ಗಜಲ್ ಗಳೂ ಇದರಲ್ಲಿವೆ. ಉದಾಹರಣೆಗೆ : ಜಂಜಡದ ಬದುಕಿನಲಿ ಯಾರೂ ಕೈ ಹಿಡಿಯದಿರಬಹುದು ಸೋತೆನೆಂದು ಎಂದೆಂದಿಗೂ ನೀ ಹಿಂಜರಿಯಬೇಡ ಗೆಳೆಯ ಮತ್ತೊಂದು ಗಜಲ್ : ಮನಸ್ಸಿದ್ದಲ್ಲಿ ಮಾರ್ಗವಿರುತ್ತದಂತೆ ಮೊದಲು ಮನಸ್ಸಿಡುವುದು ನೀ ಕಲಿ ಗೆಳೆಯಾ ಭಾವನೆಗಳಿದ್ದಲ್ಲಿ ಮಾತ್ರ ಪ್ರೀತಿ ಹುಟ್ಟುವುದಂತೆ ಪ್ರೀತಿಸುವುದು ನೀ ಕಲಿ ಗೆಳೆಯಾ ಬಲಿತ ಪ್ರೀತಿ ಫಲಿಸದಿದ್ದರೂ, ಒಡನಾಟ ವ್ಯರ್ಥವಾದರೂ ಮತ್ತು ಅಗಲುವಿಕೆಯ ಸಂಕಟವಿದ್ದರೂ ಬಾಳಿನಲ್ಲಿ ಮುನ್ನಡೆಯಲೇಬೇಕೆಂಬ ಆಶಾಭಾವವಿರುವ ಗಜಲ್ ಓದುಗರ ಮನಗಳನ್ನು ತೇವಗೊಳಿಸುತ್ತದೆ. ಅದರ ಸಾಲುಗಳು ಇಂತಿವೆ : ಕೂಡುವ ಮಾತಿಗಿಂತ ಅಗಲುವ ಮಾತುಗಳೇ ಪದೇ ಪದೇ ಆಡುತ್ತಿಯೆಂದರೆ ನಿನಗೆ ಸಾಕೆನಿಸಿರಬಹುದು ಇನ್ನು ಮುಂದುವರಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಕಾರ್ಯಕಾರಣವಿಲ್ಲ ನೀ ನಡೆದುಬಿಡು ಇಷ್ಟು ದಿನ ನೀ ಕೊಟ್ಟ ಪ್ರೀತಿ ಪ್ರೇಮವ ಹಂಚಿಕೊಂಡ ಮಧುರ ಭಾವಗಳನೆಂದೂ ಮರೆಯಲಾರ ‘ಹೊನ್ನಸಿರಿಯು ಋಣ ಮುಗಿಯಿತೆಂದು ಮಸಣದಲ್ಲೇನೂ ಕೂಡುವುದಿಲ್ಲ ನೀ ಕಣ್ಮರೆಯಾಗಿಬಿಡು ಈ ಗಜಲ್ ನಲ್ಲಿ ‘ ಅವನ ‘ ಎಂಬುದರ ಬದಲು ‘ ನನ್ನ’ ಎಂದಿದ್ದರೆ ಸೂಕ್ತವಾಗಿತ್ತೆಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಕಾರಣ, ‘ ನಮ್ಮೀ ಬಾಂಧವ್ಯದಲಿ ‘ , ‘ ಮೈತ್ರಿಯಲಿ ಒಂದಾದೆವು’ ….ಎಂಬ ಪದಗಳ ಬಳಕೆ ಕೆಲವು ಸಾಲುಗಳಲ್ಲಿ ಇದೆ. ಈ ಭೂಮಿಯಲ್ಲಿ ಗೀತೆ ಕುರಾನ್ ಬೈಬಲ್ ಗುರುವಾಣಿ ಹೀಗೆ ಏನೆಲ್ಲಾ ಒಳ್ಳೆಯದು ಬಿತ್ತಿಹರು ‘ಹೊನ್ನಸಿರಿ ‘ ಈ ಸಾಮರಸ್ಯ ಸಮಾನತೆಯ ಹೊಸ ಹೂವು ಏಕೆ ಮತ್ತೆ ಮತ್ತೆ ಅರಳುತ್ತಿಲ್ಲ ಸಾಕಿ ಜಾತಿ ವೈಷಮ್ಯವನ್ನು ಸಾಧಿಸುತ ‘ ತಾನೇ ಮೇಲೆಂ’ದು ಬೀಗುವ ಮನುಜರ ಮನದ ತೋಟದಲ್ಲಿ ಎಂದು ಸಮಾನತೆಯ ಹೂವು ಅರಳುತ್ತದೆಂಬ ಪ್ರಶ್ನೆ ಓದುಗರನ್ನು ಕಾಡುವುದು ಮಾತ್ರ ಸುಳ್ಳಲ್ಲ. ವಾಸ್ತವದ ಕಟುಸತ್ಯಕ್ಕೆ ಕನ್ನಡಿ ಹಿಡಿದ ಗಜಲ್ ಇದಾಗಿದೆ. ಹತ್ತಿರವಿದ್ದೂ ಅಪರಿಚಿತರಂತೆ ದೂರವಾದವರ ಬಗ್ಗೆ ಕೇಳಿದ್ದೆ ದೂರವಿದ್ದೂ ಹತ್ತಿರವಾಗಿ ನಿನ್ನ ಸೇರುವಷ್ಟರಲಿ ನೀ ಕನಸಾದೆ ಈ ಪ್ರೀತಿ ಪ್ರೇಮ ವಿರಹ ಕಾಮದ ಬಗ್ಗೆ ಅನೇಕ ಕಥೆಗಳು ಗೊತ್ತು  ‘ಹೊನ್ನಸಿರಿ’ಯ ಈ ಅಲೌಕಿಕ ಪ್ರೀತಿ ಅರಿವಾಗುವಷ್ಟರಲಿ ನೀ ನಕ್ಷತ್ರವಾದೆ ಪ್ರೀತಿಸಿದ ಜೀವ ದೂರವಾದಾಗ, ಮರೆಯಾದಾಗ, ಕಾಣದಾದಾಗ, ಮಾಯವಾದಾಗ, ಕನಸಾದಾಗ, ಕೊನೆಗೆ ನಕ್ಷತ್ರವಾದಾಗ ಅಸಹಾಯಕತೆಯಲಿ ಬಳಲುವ ನೊಂದ ಮನದ ಭಾವಗಳು ಸ್ವಗತದಂತೆ ಈ ಗಜಲ್ ನಲ್ಲಿ ಮೂಡಿವೆ. ಸಹೋದರ ಸಿದ್ಧರಾಮ ಹೊನ್ಕಲ್ ಅವರ ‘ ಆಕಾಶಕ್ಕೆ ಹಲವು ಬಣ್ಣಗಳು ‘ ಗಜಲ್ ಸಂಕಲನವನ್ನು ಇಡಿಯಾಗಿ ಓದಿ ಮುಗಿಸುತ್ತಿದ್ದಂತೆ  ಕೆಲವು ಗಜಲ್ ಗಳ ರಚನೆಗೆ ಶರಣರ ವಚನಗಳ ಪ್ರಭಾವವಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಗಜಲ್ ಗಳು ಅಷ್ಟೇ ಪರಿಣಾಮಕಾರಿಯಾಗಿ ಓದುಗರ ಮೇಲೆ ಪ್ರಭಾವ ಬೀರಿ ಅವರನ್ನು ಚಿಂತನೆಗೆ ಹಚ್ಚಲು ಕಾರಣವಾಗುತ್ತವೆ. ಮುಂಬರುವ ದಿನಗಳಲ್ಲಿ ಅವರ ಲೇಖನಿಯಿಂದ ಇನ್ನಷ್ಟು ಸತ್ವಯುತ ಹಾಗೂ ಮೌಲ್ಯಯುತ ಗಜಲ್ ಗಳು ಮೂಡಿ ಬರಲಿ. ಸರ್ವಶಕ್ತನಾದ ಆ ಭಗವಂತನ ಆಶೀರ್ವಾದದಿಂದ ಅವರೆಲ್ಲಾ ಆಶೋತ್ತರಗಳು ಈಡೇರಲಿ ಎಂದು ಪ್ರಾರ್ಥಿಸುತ್ತೇನೆ. *********                          ಎ . ಹೇಮಗಂಗಾ

ಆಕಾಶಕ್ಕೆ ಹಲವು ಬಣ್ಣಗಳು Read Post »

You cannot copy content of this page

Scroll to Top