ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಬಣ್ಣದ ವೇಷ

ಕಥೆ ಪ್ರಜ್ಞಾ ಮತ್ತಿಹಳ್ಳಿ ನೀಲಕಮಲವೆಂದು ಚೆಂದನೆಯ ಸ್ಟಿಕ್ಕರ್ ಅಂಟಿಸಿಕೊಂಡು ಫಳಫಳ ಹೊಳೆಯುತ್ತಿದ್ದ ಸ್ಟೀಲು ತಾಟು ಢಮಾರ್ ಎಂಬ ದೊಡ್ಡ ಸಪ್ಪಳದೊಂದಿಗೆ ಗೋಡೆಗೆ ಮುಖ ಗುದ್ದಿಕೊಂಡು ನೆಲಕಪ್ಪಳಿಸುವುದು, ಅದೇ ಗೋಡೆಯ ಮೇಲೆ ನೇತಾಡುವ ಬಂಗಾರ ಬಣ್ಣದ ಗುಂಡು ಮೋರೆಯ ಗಡಿಯಾರ ಢಣ್ ಢಣ್ ಎಂದು ಒಂಭತ್ತು ಸಲ ಹೊಡೆದುಕೊಳ್ಳುವುದೂ ಏಕಕಾಲದಲ್ಲಿಯೇ ಘಟಿಸುವ ಮೂಲಕ ತಗ್ಗಿನಕೇರಿಯೆನ್ನುವ ಊರಿನಲ್ಲೇ ಹೆಚ್ಚು ತಗ್ಗಾಗಿರುವ ಆ ಕೇರಿಯಲ್ಲೊಂದು ಯುದ್ಧ ಘೋಷಣೆಯಾಗಿತ್ತು. ದುರವೀಳ್ಯವನ್ನು ತನ್ನ ಕುದಿಯುವ ಮನಸ್ಸಿನಲ್ಲಿಯೇ ತಯಾರಿಸಿಕೊಂಡ ನಾಗಲಕ್ಷ್ಮಿ ಹೆಡೆಯಾಡಿಸುವ ಘಟಸರ್ಪದಂತೆ ಧುಸ್ ಧುಸ್ ಉಸಿರು ಬಿಟ್ಟಳು. ಆದರೆ ರಣವೀಳ್ಯವನ್ನು ಇಸಿದುಕೊಳ್ಳಬೇಕಾಗಿದ್ದ ಆಕೆಯ ಎದುರು ಪಕ್ಷದ ಸೇನಾನಿ ಪದುಮಣ್ಣ ಅಂದರೆ ಆಕೆಯ ಗಂಡ ಆಸುಪಾಸಿನಲ್ಲೆಲ್ಲೂ ಇಲ್ಲದಿದ್ದ ಕಾರಣ ಬೋರಲು ಬಿದ್ದ ತಾಟಿನಿಂದ ಹೊರಬಿದ್ದು ಚೆಲ್ಲಾಪಿಲ್ಲಿಯಾದ ಅನ್ನದಗುಳಿನಷ್ಟೇ ಅನಾಥಳು ತಾನೆಂಬ ಭಾವ ಮೂಡಿದ್ದೇ ತಡ, ಅಳುಮಿಶ್ರಿತ ಕ್ರೋಧದ ಅಲೆಯೊಂದು ಅವಳ ನಾಭಿಯಾಳದಿಂದ ಹೊರಟು ಗಂಟಲಿನವರೆಗೆ ಬಂದಿತು. ಆಗ ಅವಳ ಧುಸ್ ಧುಸ್ ಸದ್ದು ಕೆಲವು ಬಿಕ್ಕುಗಳನ್ನು ಸೇರಿಸಿಕೊಂಡು ಹುಂ ಕ್ಕು ಕ್ಕು ಹುಂ ಕ್ಕು ಕ್ಕು ಎಂಬಂತಹ ವಿಚಿತ್ರ ಸಪ್ಪಳವಾಗಿ ಪರಿವರ್ತನೆ ಹೊಂದಿತು. ಅವಳ ಕೈಯಿಂದ ಬೀಸಿ ಒಗೆಯಲ್ಪಡುವ ಮೊದಲು ಪುಟ್ಟ ಪುಟ್ಟ ತುತ್ತುಗಳು ತುಂಬಿದ್ದ ತಾಟನ್ನು ಆವರೆಗೆ ಹೊತ್ತುಕೊಂಡಿದ್ದ ಟೀಪಾಯಿಯ ಮೇಲೆ ಕೂತಿದ್ದ ಮೊಬೈಲು ಈಗಷ್ಟೇ ಮುಗಿದ ಕರೆಯ ಸಲುವಾಗಿ ತನ್ನೊಳಗೆ ಹಚ್ಚಿಕೊಂಡಿದ್ದ ಬೆಳಕನ್ನು ಆರಿಸಿ ಕಪ್ಪಾಯಿತು.        ಎಂದೂ ಯಾವ ಕಾರಣಕ್ಕೂ ಅಳು ಎಂಬ ಕ್ರಿಯೆಯನ್ನೇ ಇಷ್ಟ ಪಡದ, ಅಳುವವರ ಸಮೀಪಕ್ಕೆ ಹೋಗಲಿಕ್ಕೂ ಇಚ್ಛೆಪಡದ, ತಾನೆಂಬೋ ತಾನು ತನ್ನ ಮನೆ, ಸಂಸಾರಗಳನ್ನು ತನ್ನಿಚ್ಛೆಯಂತೆಯೇ ನಡೆಸಬಲ್ಲ ಭಯಂಕರ ತಾಕತ್ತಿನವಳೆಂದು ಬಲವಾಗಿ ನಂಬಿಕೊಂಡಿದ್ದ ನಾಗಲಕ್ಷ್ಮಿಗೆ  ತನ್ನೊಳಗೆ ಉಕ್ಕುತ್ತಿರುವ ಭಾವನೆಯನ್ನು ಹೇಗೆ ನಿರ್ವಹಿಸಬೇಕೆಂದೇ ತಿಳಿಯದಂತಾಗಿ ಆವೇಶದ ನಡುಕ ಬರತೊಡಗಿತು. ತಾನೀಗ ಸೋತಿದ್ದೇನೆಂಬ ನಿರಾಶೆ, ಗೆಲ್ಲಲಾಗಲಿಲ್ಲವೆಂಬ ಹತಾಶೆ, ತನ್ನ ಸೋಲನ್ನು ತಾನೆಂದೂ ಸ್ವೀಕರಿಸಬಾರದೆಂಬ ಹಠ ಇವೆಲ್ಲ ಕೂಡಿದ ಪ್ರಳಯಾಗ್ನಿಯಂತಹ ಬೆಂಕಿಯೊಂದು ಒಡಲಲ್ಲಿ ಹುಟ್ಟಿದ್ದೇ ತಡ, ಹಲ್ಲು ಕಡಿಯುತ್ತ, ಚಪ್ಪಲಿ ಮೆಟ್ಟಿಕೊಂಡು ಬಾಗಿಲನ್ನು ಹಾಗೇ ಮುಂದಕ್ಕೆಳೆದುಕೊಂಡು ಹೊರಟುಬಿಟ್ಟಳು. ಕೆಂಡ ಕಾರುತ್ತಿದ್ದ ಅವಳ ಕಣ್ಣೊಳಗೆ ಗಂಡ ಪದುಮಣ್ಣನ ಚಿತ್ರ ಗಿರಿಗಿರಿ ತಿರುಗುತ್ತಿತ್ತು. ಅಲ್ಲೇ ಪಕ್ಕದ ಬೀದಿಯಲ್ಲಿ ಅಟ್ಟದ ಮೇಲಿರುವ ಅವನ ಆಫೀಸಿಗೆ ನುಗ್ಗಿ, ಕೇಸಿನ ಫೈಲುಗಳನ್ನು ಸುತ್ತಲೂ ರಾಶಿ ಹಾಕಿಕೊಂಡು ಕೂತಿರುವ ಅವನನ್ನು ಹಿಡಿದು ತನ್ನ ಸಿಟ್ಟಿಳಿಯುವ ತನಕ ಬಡಿಯಲೇಬೇಕೆಂದು ರೋಷದಿಂದ ಹೆಜ್ಜೆಗಳನ್ನು ಎತ್ತೆತ್ತಿ ಇಡತೊಡಗಿದಳು. ತನ್ನನ್ನು ಕಂಡ ಕೂಡಲೇ “ಅಕ್ಕಾ ಆರಾಮಾ” ಎಂದು ಹಲ್ಲು ಕಿರಿಯುತ್ತ, “ಯಾಕಕ್ಕ ಇಷ್ಟು ಮೈ ಬಂದದಲ್ಲ, ವಾಕಿಂಗೂ ಮಾಡೂದಿಲ್ವಾ ಹೆಂಗೆ, ಡಾಕ್ಟ್ದ್ರಿಗಾದರೂ ತೋರಸ್ಕಳಿ” ಎಂದೆಲ್ಲ ಬೊಗಳೆ ಬಿಡುತ್ತ ತನ್ನ ಬಳ್ಳಿ ಮೈಯನ್ನು ವಾಲಾಡಿಸುವ ವಲ್ಲರಿಯನ್ನು ಇವತ್ತು ಬಿಡಬಾರದು. ಕತೆ ಹೇಳಲು ಭೂಮಿಗಿಳಿದ ನೀಲಿ ಮೋಡದಂತೆ ಗಾಳಿಗೆ ಹಾರಾಡುವ ಅವಳ ಅಲೆಗೂದಲನ್ನು ಮುಷ್ಟಿಯಲ್ಲಿ ಹಿಡಿದು ದರದರ ಎಳೆಯಬೇಕು. ಎಷ್ಟು ಸೊಕ್ಕು ಆ ಚೋದಿಗೆ, ತಾನು ತೆಳ್ಳಗೆ ಬೆಳ್ಳಗೆ ಸುಂದರಿಯಾಗಿದ್ದೇನೆ ಅಂತಲೇ ಇಷ್ಟು ಉರಿಯುವುದಲ್ವ ಅವಳು. ಪಟಪಟ ಇಂಗ್ಲೀಷು ಮಾತಾಡ್ತೇನೆ ಅಂತ, ರೊಯ್ಯನೆ ಗಾಡಿ ಬಿಟ್ಟುಕೊಂಡು ಬೇಕೆಂದಲ್ಲಿ ಹೋಗಬಲ್ಲೆ ಅಂತ ಪೊಗರು ತುಂಬಿಕೊಂಡಿದೆ. ಆದ್ದರಿಂದಲೇ ನನ್ನ ಗಂಡ ರಾತ್ರಿ ಒಂಭತ್ತು ಹೊಡೆದರೂ ಕೇಸು, ಕೇಸು ಅಂತ ಅವಳ ಮಗ್ಗುಲಲ್ಲಿ ಕೂತೇ ಇರಲಿಕ್ಕೆ ಸಾಯ್ತಾನೆ. ತಾನು ಫೋನು ಮಾಡಿದರೆ ಆಂ, ಊಂ ಕೇಳ್ತಾ ಇಲ್ಲ, ನೆಟ್ ವರ್ಕ ಇಲ್ಲ ಅಂತ ಫೋನು ಇಡ್ತಾನೆ, ಬೋಳಿಮಗ, ಇವತ್ತು ಅವನ ಗ್ರಾಚಾರ ಬಿಡಿಸದಿದ್ರೆ ನಾನು ಆಟಕ್ಕೊಂದೇ ವೀರಭದ್ರ ಎಂದೆನಿಸಿಕೊಳ್ಳುವ ಗಪ್ಪತಿಯ ಮಗಳೇ ಅಲ್ಲ. ಹೀಗೆಂದು ಉರಿಯುತ್ತ, ಮತ್ತೆ ಮತ್ತೆ ಕೆದರಿ ಉರಿ ಹೆಚ್ಚಿಸಿಕೊಳ್ಳುತ್ತ ಸೀರೆ ಉಟ್ಟ ಅಗ್ನಿಕುಂಡದ ಹಾಗೆ ಹೊರಟ ನಾಗಲಕ್ಷ್ಮಿ ಉರುಫ್ ನಾಗಕ್ಕ ಮೊದಲಿನಿಂದಲೂ ಸಿಟ್ಟಿನ ಸ್ವಭಾವದವಳೇ.           ಗುಡ್ಡೇಮಠದ ಮಹಾಲಿಂಗೇಶ್ವರ ಯಕ್ಷಗಾನ ಮೇಳದಲ್ಲಿ ವೀರಭದ್ರನ ಪಾತ್ರ ಹಾಕುತ್ತಿದ್ದ ಗಪ್ಪತಿಯ ಏಕೈಕ ಮಗಳೇ ನಾಗಲಕ್ಷ್ಮಿ. ವರ್ಷದ ಎಂಟು ತಿಂಗಳು ಮೇಳದೊಂದಿಗೆ ತಿರುಗುತ್ತ ಉಳಿದ ನಾಕು ತಿಂಗಳಲ್ಲಿ ಕೊಟ್ಟೆ ಕೊನೆ, ಸೊಪ್ಪು-ಮಣ್ಣು ಎಂದು ಗೇಯುತ್ತ ಸಂಸಾರ ಮಾಡುತ್ತಿದ್ದ ಗಪ್ಪತಿಯ ಹೆಂಡತಿ ಗಂಗೆ ಮೂರು ಮಕ್ಕಳನ್ನು ಹೆತ್ತಿದ್ದಳಾದರೂ ಒಂದೂ ಉಳಿದಿರಲಿಲ್ಲ. ಕಡೆಗೆ ಯಾರೋ ಹಿರಿಯರು ನಾಗದೋಷವಿರಬಹುದೆಂದು ಸಲಹೆ ಕೊಟ್ಟ ಮೇಲೆ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಹರಕೆ ಹೇಳಿಕೊಂಡ ಮೇಲೆ ನಾಗಲಕ್ಷ್ಮಿ ಹುಟ್ಟಿದ್ದು. ಅಪರೂಪದ ಮಗಳು ಅಂತ ಅಪ್ಪ-ಅಮ್ಮ ಮುದ್ದು ಮಾಡಿದ್ದೇ ಮಾಡಿದ್ದು. ಅವಳು ಹೇಳಿದ ಮಾತನ್ನು ತೆಗೆದು ಹಾಕುತ್ತಲೇ ಇರಲಿಲ್ಲ. ಅಪ್ಪನ ಜೊತೆ ಆಟಕ್ಕೂ ಹೋಗಿ ಅವನ ವೀರಭದ್ರನ ಪಾತ್ರ ನೋಡಿ ಬರುತ್ತಿದ್ದ ನಾಗಲಕ್ಷ್ಮಿ ಮನೆಯಲ್ಲಿ ಅದೇ ಸಿಟ್ಟು-ಕೋಪ-ತಾಪಗಳನ್ನು ಅನುಕರಣೆ ಮಾಡುತ್ತಿದ್ದಳು. ತಮ್ಮ ಮಗಳು ದೈವಾಂಶ ಸಂಭೂತೆ ಅಂತಲೇ ಭಾವಿಸಿಕೊಂಡಿದ್ದ ಗಂಗೆ-ಗಣಪರು ಮಗಳಿಗೆ ಏನೆಂದರೆ ಏನೂ ಹೇಳುತ್ತಿರಲಿಲ್ಲ. ಅವರ ಕೊಂಡಾಟಗಳನ್ನೂ, ನಾಗಿಯ ಮೊಂಡಾಟ-ಭಂಡಾಟಗಳನ್ನು ಹತ್ತಿರದಿಂದ ಬಲ್ಲವರೆಲ್ಲ ಈ ನಮೂನಿ ಮಗಳನ್ನು ಬೆಳೆಸಿದ್ರೆ ನಾಳೆ ಆ ಕೂಸು ಸಂಸಾರ ಮಾಡದಾರೂ ಹೌದಾ? ಎಂದು ಮಾತಾಡಿಕೊಂಡರು. ಆಸುಪಾಸಿನಲ್ಲೆಲ್ಲೂ ಗಂಡು ಸಿಗದೇ ಗಪ್ಪತಿ ತನ್ನ ಮಗಳಿಗಾಗಿ ದೂರದ ಊರಿನ ಗಂಡುಗಳ ತಲಾಶೆಗೆ ಇಳಿದ. ಆಗ ಅವನ ಮೇಳದ ಭಾಗವತರೊಬ್ಬರು ಪದುಮಣ್ಣನ ಬಗ್ಗೆ ಹೇಳಿ ಗೋವಿನಂಥಾ ಸಾಧು ಮನುಷ್ಯ, ನಿನ್ನ ಮಗಳು ಹೇಳ್ದಾಂಗೆ ಕೇಳ್ಕಂಡು ಇರ್ತ ನೋಡು ಅಂತ ಶಿಫಾರಸು ಮಾಡಿದರು.             ನಮ್ಮ ಪದುಮಣ್ಣ ಇದ್ದಾನಲ್ಲ ಈತ ಶಾಲೆಗೆ ಕಾಲಿಟ್ಟ ಕ್ಷಣದಿಂದ ಅಂದರೆ ತನ್ನ ನಾಲ್ಕನೆಯ ವಯಸ್ಸಿನಿಂದಲೇ ದುಡಿಯಲಾರಂಭಿಸಿದ್ದಾನೆಂದರೆ ನೀವು ನಂಬಲೇಬೇಕು. ಅವನು ಶಾಲೆಗೆ ಹೋಗುವ ಕಾಲದಲ್ಲಿ ಅಂದರೆ ಈಗೊಂದು ಮೂವತ್ತು ವರ್ಷದ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ವತಿಯಿಂದ ಪ್ರತಿ ಮದ್ಯಾಹ್ನ ಉಪ್ಪಿಟ್ಟು ಕೊಡುತ್ತಿದ್ದರು. ದೊಡ್ಡಗಾತ್ರದ ಕಾಳಿನ ಜವೆಗೋಧಿಯಿಂದ ತಯಾರಿಸಿದ ಉಪ್ಪಿಟ್ಟು ಬಿಸಿಬಿಸಿಯಾಗಿ ರುಚಿಯಾಗಿರುತ್ತಿತ್ತು. ಹಾಜರಿ ಪುಸ್ತಕದಲ್ಲಿ ನಮೂದಿಸಿದ ಹುಡುಗರ ಸಂಖ್ಯೆಗನುಗುಣವಾಗಿ ಉಪ್ಪಿಟ್ಟು ಬರುತ್ತಿತ್ತು. ಆದರೆ ನಿಜವಾಗಿಯೂ ಹಾಜರಿರುತ್ತಿದ್ದವರು ಅದರ ಅರ್ಧದಷ್ಟು ಹುಡುಗರು ಮಾತ್ರ. ಆದ್ದರಿಂದ ಹುಡುಗರು ತಮಗೆ ಸಾಕೆನ್ನಿಸುವಷ್ಟು ಉಪ್ಪಿಟ್ಟು ಹಾಕಿಸಿಕೊಳ್ಳಬಹುದಿತ್ತು. ಪದುಮಣ್ಣ ಶಾಲೆಗೆ ಕಾಲಿಟ್ಟ ದಿನವೇ ದೊಡ್ಡದೊಂದು ಪ್ಲಾಸ್ಟಿಕ್  ಕವರಿನಲ್ಲಿ ಉಪ್ಪಿಟ್ಟು ಹಾಕಿಸಿಕೊಂಡ. ಸೀದಾ ಶಾಲೆಯ ಹೊರಗೆ ಬಂದ. ಅಲ್ಲಿ ರಸ್ತೆಯ ಪಕ್ಕದ ಕಾಲುವೆಗಳನ್ನು ಅಗೆಯುವ ಕೆಲಸದಲ್ಲಿ ತೊಡಗಿರುವ ಜನರು ಕೂತಿದ್ದರು. ಅವರೆದುರು ಘಮಘಮಿಸುವ ಉಪ್ಪಿಟ್ಟು ತೋರಿಸಿದ. ತಮ್ಮ ಡಬ್ಬಿಗಳಲ್ಲಿರುವ ತಂಗಳಿಗಿಂತ ಈ ಉಪ್ಪಿಟ್ಟು ತಿನ್ನುವುದು ಬಹಳ ಉತ್ತಮವೆಂದು ಭಾವಿಸಿದ ಅವರು ಎರಡು ರೂಪಾಯಿ, ಮೂರು ರೂಪಾಯಿ ಮುಂತಾಗಿ ಹಣ ಕೊಟ್ಟು ಉಪ್ಪಿಟ್ಟು ಕೊಂಡರು. ಹೀಗೆ ಶಾಲೆಗೆ ಹೋಗತೊಡಗಿದಂದಿನಿಂದಲೇ ಗಳಿಕೆ ಮಾಡಲಾರಂಭಿಸಿದ ಅದ್ಭುತ ಪ್ರತಿಭಾರತ್ನ ಆತ. ತನಗೆ ಅಯಾಚಿತವಾಗಿ ದೊರಕಿದ ಆಹಾರದ ಗಿರಾಕಿಗಳನ್ನು ಹಲವಾರು ವ್ಯಾಪಾರಗಳಿಗೆ ಆತ ಬಳಸಿಕೊಂಡ. ಅಂದರೆ ಅವನ ಮನೆಯಲ್ಲಿ ಮಾಡಿದ ದೋಸೆ, ರೊಟ್ಟಿ, ಕಡುಬು, ಪಲ್ಯಗಳೇನಾದರೂ ಆತನಿಗೆ ಇಷ್ಟವಾಗದಿದ್ದರೆ ಬೇರೆ ಹುಡುಗರಂತೆ ಆತ ರಗಳೆ ಮಾಡುತ್ತಿರಲಿಲ್ಲ. ಸುಮ್ಮನೆ ಒಂದು ಕವರಿನಲ್ಲಿ ಹಾಕಿಕೊಂಡು ಪಾಟಿಚೀಲದಲ್ಲಿರಿಸಿಕೊಂಡು ಶಾಲೆಗೆ ಬಂದು ಮಾರಿಬಿಡುತ್ತಿದ್ದ. ಕೆಲವು ಸಲ ತನ್ನ ಪಾಲಿನ ತಿಂಡಿಗಳು ಸಾಲದೆಂದು ಅನ್ನಿಸಿದಾಗ ಅಂದರೆ ಮಾರುಕಟ್ಟೆಯ ಬೇಡಿಕೆ ಹೆಚ್ಚಿದ್ದಾಗ ಅಡಿಗೆ ಮನೆಯಲ್ಲಿ ಹರಿದ ದೋಸೆ, ಉಳಿದ ರೊಟ್ಟಿ ಇತ್ಯಾದಿಗಳನ್ನು ಎಮ್ಮೆಗೆ ಹಾಕುವುದಕ್ಕಾಗಿ ತೆಗೆದಿರಿಸುವ ಅಕ್ಕಚ್ಚು ಪಾತ್ರೆಯಿಂದ ಎಗರಿಸಿಕೊಂಡು ತನ್ನ ಸ್ಟಾಕ್ ಶಾರ್ಟೇಜು ಸರಿಪಡಿಸಿಕೊಳ್ಳುತ್ತಿದ್ದ. ಇಂತಹ ಮಾರಾಟದಿಂದ ಗಳಿಸಿದ ಹಣವನ್ನು ಅವನೆಂದೂ ಪೋಲು ಮಾಡುತ್ತಿರಲಿಲ್ಲ. ಮನೆಯ ಪುರುಷ ಸದಸ್ಯರಿಗೆ ತಿಳಿಯದಂತೆ ಮಹಿಳೆಯರು ಕೈಗೊಳ್ಳುವ ಸಾಹಸಗಳಿಗೆ ಬಂಡವಾಳದಂತೆ ಕೈಕಡ ಕೊಡುತ್ತಿದ್ದ. ಅದಕ್ಕೆ ಬದಲಾಗಿ ಆ ಹೆಂಗಸರು ತಮಗೆ ಅನುಕೂಲವಾದಾಗ ಹೆಚ್ಚಿನ ಹಣವನ್ನು ಕೊಡುವುದಲ್ಲದೇ ಹಲವು ಬಗೆಯ ತಿಂಡಿ-ತೀರ್ಥಗಳನ್ನು ಬಡ್ಡಿಯಂತೆ ಕೊಡುತ್ತಿದ್ದರು. ಹೀಗೆ ಪದುಮಣ್ಣನ ವ್ಯಾಪಾರ-ವಹಿವಾಟುಗಳು ಬಾಲ್ಯದಲ್ಲೇ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದವು. ವಿಷಯ ಇಷ್ಟೇ ಆಗಿದ್ದರೆ ಪದುಮಣ್ಣನ ಬಗ್ಗೆ ಬರೆಯಬೇಕಾಗಿರಲಿಲ್ಲ. ಅವನು ತನ್ನ ಮಾರಾಟಪ್ರತಿಭೆಯನ್ನು ಮುಂದುವರೆಸಿಕೊAಡು ಅಪ್ರತಿಮ ವ್ಯವಹಾರಸ್ಥನಾಗಿ ಟಾಟಾ, ಅಂಬಾನಿಗಳಿಗೇ ಸೆಡ್ಡು ಹೊಡೆದು ಪದ್ಮವಿಭೂಷಣ ಇತ್ಯಾದಿ ಪಡೆದುಕೊಂಡು ಸುಖವಾಗಿ ಇರಬಹುದಿತ್ತು. ಆದರೆ ಪ್ರಾಥಮಿಕಶಾಲೆ ಬಿಟ್ಟು ಹೈಸ್ಕೂಲಿಗೆ ಬರುವಷ್ಟರಲ್ಲಿ ಪದುಮಣ್ಣ ದುಡಿಮೆಯ ದಾರಿಯನ್ನೇ ಬದಲಾಯಿಸಿಕೊಂಡಿದ್ದ. ಸರಕಿನಿಂದ ಸೇವಾ ಕ್ಷೇತ್ರಕ್ಕೆ ಶಿಫ್ಟ್ ಆಗಿದ್ದ. ಅಂದರೆ ಗೂಡ್ಸ್ ಟು ಸರ್ವಿಸ್ ಸೆಕ್ಟರ್.             ಪದುಮಣ್ಣನಿಂದ ಹಣಕಾಸಿನ ನೆರವು ತೆಗೆದುಕೊಳ್ಳುತ್ತಿದ್ದ ಹೆಂಗಸರು ಅವನನ್ನು ತಮ್ಮ ಒಳಗುಟ್ಟಿನ ಸಂಗತಿಗಳಿಗೆ ಆಪ್ತ ಸಲಹೆಗಾರನನ್ನಾಗಿ ಬಳಸಿಕೊಳ್ಳುತ್ತಿದ್ದರು. ಗಂಡಸರ ಗಮನಕ್ಕೆ ಬರದಂತೆ ಗುಟ್ಟಾಗಿ ಶೇಖರಿಸಿಕೊಂಡ ಗೋಡಂಬಿ, ದಾಲ್ಚಿನ್ನಿ, ಮುರುಗಲ ತುಪ್ಪ, ಆರಾರೋಟು, ಅರಿಶಿಣ ಪುಡಿ ಇತ್ಯಾದಿಗಳಿಗೆ ಸೂಕ್ತ ಗಿರಾಕಿಯ ಹೆಸರು ಸೂಚಿಸುವುದು, ಹೆಂಗಸರು ಮದುವೆಯಂತಹ ಕಾರ್ಯಗಳಿಗೆ ಹೋಗುವಾಗ ಎರವಲು ಚಿನ್ನ ಧರಿಸುವ ಆಸೆಪಟ್ಟರೆ ಯಾವ ಆಭರಣ ಯಾರ ಬಳಿಯಿದೆಯೆಂಬ ಮಾಹಿತಿ ನೀಡುವುದು, ಅವರ ಗುಪ್ತಧನಕ್ಕೆ ನಂಬಿಗಸ್ತ ಗಿರಾಕಿ ಹುಡುಕುವುದು ಹೀಗೆ ತನ್ನ ಹಳ್ಳಿಯ ಮಹಿಳಾ ಆರ್ಥಿಕತೆಯ ಕ್ಷೇತ್ರಕ್ಕೆ ಪದುಮಣ್ಣನದು ದೊಡ್ಡ ಕೊಡುಗೆಯಿದೆ. ಆದರೆ ಅವನ ಅಮೂಲ್ಯ ಸೇವೆಯ ಮಹತ್ವ ಅರ್ಥವಾಗದ ಅವನ ಶಿಕ್ಷಕರು ಅವನನ್ನು ಅಡ್ಡಕಸುಬಿಯೆಂದು ಅಪಮಾನಿಸಿ ಶಿಕ್ಷೆ ನೀಡುತ್ತಿದ್ದರು.           ಕಾಲೇಜು ಮೆಟ್ಟಿಲು ಹತ್ತುವಷ್ಟರಲ್ಲಿ ಪದುಮಣ್ಣನ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತಾರಗೊಂಡಿತು. ಇನ್ನೂ ಮೊಬೈಲುಗಳು ಬಂದಿರದ ಆ ಕಾಲದಲ್ಲಿ ಮಲೆನಾಡಿನ ಕೊಂಪೆಗಳಿAದ ಸುತ್ತುವರೆದ ಪಟ್ಟಣದಲ್ಲಿ ವಾಸಿಸುತ್ತಿದ್ದ ಆತ ಯಾವುದೇ ವ್ಯಕ್ತಿಯ ಯಾವುದೇ ರೀತಿಯ ಕೆಲಸಕ್ಕೆ ಒದಗಬಲ್ಲ ಸರ್ವೀಸ್ ಪ್ರೊವೈಡರ್ ಆಗಿದ್ದ. ತಾನು ಕಾಲೇಜಿಗೆ ಹೋಗುವ ದಾರಿಯಲ್ಲಿಯೇ ಕರೆಂಟು ಬಿಲ್ಲು ಕಟ್ಟುವುದು, ಔಷಧಿ ಗುಳಿಗೆ ತರುವುದು, ಬ್ಯಾಂಕಿನಿಂದ ದುಡ್ಡು ತಂದು ಕೊಡುವುದು, ಯಾರಿಗಾದರೂ ಮನಿಯಾರ್ಡರು ಮಾಡುವುದು, ದಿನಸಿ ಸಾಮಾನು ತಂದು ಕೊಡುವುದು ಇಂತಹ ನೂರಾರು ಕೆಲಸಗಳನ್ನು ತಕರಾರೆತ್ತದೆ ಮಾಡುತ್ತಿದ್ದ. ಪ್ರತಿ ಕೆಲಸಕ್ಕೂ ಪ್ರತಿಫಲವಾಗಿ ಏನಾದರೂ ಸಿಕ್ಕೇ ಸಿಗುತ್ತಿತ್ತು. ಇಂತಿಪ್ಪ ಪದುಮಣ್ಣ ವಕೀಲಿ ಪದವಿ ಪಡೆದುಕೊಂಡು ವೃತ್ತಿ ಆರಂಭಿಸಿದ. ದಿನದ ಇಪ್ಪತ್ನಾಲ್ಕು ತಾಸು ಕೂಡ ಕಕ್ಷಿದಾರರ ಮನೆಯ ಕಡೆಗೆ ಕಾಲಾಡಿಸುತ್ತ ಇರುವ ಪ್ರವೃತ್ತಿಯಿಂದಾಗಿ ಕೇಸುಗಳು ಜೋರಾಗೇ ಸಿಗುತ್ತಿದ್ದವು. ಅವನಿಂದ ಉಪಕೃತರಾದವರೊಬ್ಬರು ತಮ್ಮ ನೆಂಟರ ಪೈಕಿಯ ಭಾಗವತರಿಗೆ ಶಿಫಾರಸು ಮಾಡಿ ಮದುವೆ ಮಾಡಿಸಿದರು. ಹಾಗೆ ಅವನ ಜೀವನದಲ್ಲಿ ಪ್ರವೇಶ ಪಡೆದುಕೊಂಡವಳು ನಾಗಲಕ್ಷ್ಮಿ. ಅರ್ಥಾತ್ ನಾಗಕ್ಕ. ಆದರೇನು ಮಾಡೋಣ. ಆ ಮದುವೆ ಮಾಡಿಸಿದವರು ಅವರಿಬ್ಬರ ಸ್ವಭಾವಗಳನ್ನು ಹೋಲಿಕೆ ಮಾಡಿ ವಿಚಾರ ಮಾಡಿರಲೇ ಇಲ್ಲ. ಹೀಗಾಗಿ ಪದುಮಣ್ಣನ ವಿರುದ್ಧ ಸ್ವಭಾವದ ನಾಗಕ್ಕ ಅವನ ಕೈ ಹಿಡಿದು ಬಂದಳು. ಅವಳೋ ಪಕ್ಕಾ ಒಂಟಿಗೂಬೆ. ಜನರ ತಲೆ ಕಂಡರೇ ಅವಳಿಗಾಗದು. ಹೊರತಿರುಗಾಟವೆಂದರೆ ಮುಖ ಸಿಂಡರಿಸುತ್ತಾಳೆ. ಸದಾಕಾಲ ಬಾಗಿಲು ಹಾಕಿಕೊಂಡು ಒಳಗೇ ಇರುವ ಮನೆಗುಬ್ಬಿ. ತಾನು-ತನ್ನ ಗಂಡ ಇಬ್ಬರೇ ರಾಜ-ರಾಣಿಯರ ಹಾಗೆ ಬದುಕಬೇಕೆಂದು ಕನಸು ಕಂಡವಳು. ಅವಳಿಗೆ ಪದುಮಣ್ಣನ ವಿಶ್ವಕುಟುಂಬಿತನ ಕಂಡು ದಿಗಿಲಾಗಿಬಿಟ್ಟಿತು. ಅವನ ಹಿಂದೆ ಹಿಂಡುಗಟ್ಟಿಕೊಂಡು ಬರುವ ಕಕ್ಷಿದಾರರನ್ನು ಗೌ ಗೌ ಎಂದು ಕೂಗಿ ಓಡಿಸಿಬಿಟ್ಟಳು. ಯಕ್ಷಗಾನ, ತಾಳಮದ್ದಲೆ, ದೇವಕಾರ್ಯ, ಊರ ಸಮಾರಾಧನೆ ಅಂತೆಲ್ಲ ಊರೊಟ್ಟಿನ ಕೆಲಸಕ್ಕಾಗಿ ದಿನಾಲೂ ಹುಡುಕಿಕೊಂಡು ಬರುವ ಪುರಬಾಂಧವರಿಗೂ ಅವಳಿಂದ ಮಂಗಳಾರತಿ ಸಿಕ್ಕಿತು. ಆದರೆ ಪದುಮಣ್ಣನ ಪಾಡು ನೋಡಿ. ಈಗ ಬಂದ ಹೆಂಡತಿಗಾಗಿ ಲಾಗಾಯ್ತಿನಿಂದ ಮಾಡಿಕೊಂಡು ಬಂದ ಜೀವನವನ್ನು ಬದಲಾಯಿಸಿಕೊಳ್ಳಲಿಕ್ಕೆ ಸಾಧ್ಯವೆ? ಅದಕ್ಕಾಗಿ ಪದುಮಣ್ಣ ಮನೆಯಿಂದಾಚೆಗೆ ಇರುವುದೇ ಜಾಸ್ತಿಯಾಯಿತು. ಹೆಂಡತಿ ಬೈಯುತ್ತಾಳೆ

ಬಣ್ಣದ ವೇಷ Read Post »

ಕಥಾಗುಚ್ಛ

ಕಡಲಲೆಗಳ ಲೆಕ್ಕ

ಕಥೆ ಸುಧಾ ಹೆಚ್.ಎನ್ ರುಕ್ಮಿಣಮ್ಮ  ಕಡಲಿನ ಮಗಳು.  ಹುಟ್ಟಿದ್ದು, ಬೆಳೆದದ್ದು, ಪ್ರತಿ ಬೆಳಗು, ಪ್ರತಿರಾತ್ರಿ  ಕಳೆದದ್ದು  ಸಮುದ್ರದ ಜೊತೆಗೇ. ಮೀನುಗಳ ವ್ಯಾಪಾರ ಮಾಡುತ್ತಿದ್ದ ತಂದೆಯ, ಜೀವನದ ಜೊತೆಗಾರನಾದ  ಪಾಂಡುರಂಗನ ಮನೆಯಿದ್ದದ್ದು ಕಡಲತೀರದಲ್ಲೇ.  ತಮ್ಮ ಸುಮಾರು ಎಂಬತ್ತು ವರ್ಷದ ಜೀವಮಾನವನ್ನು     ಕಣ್ಣಳತೆಯಲ್ಲಿದ್ದ  ಅಗಾಧ ಸಮುದ್ರ,  ಅವಿರತವಾಗಿ  ಕೇಳಿಬರುತ್ತಿದ್ದ ಅಲೆಗಳ ಮೊರೆತ,  ಮೀನು….ಇತರೆ    ವಾಸನೆಯ ಜೊತೆಗೆ ಜೀವನ  ಸವೆಸಿದ್ದರು  ರುಕ್ಮಿಣಮ್ಮ.   ರುಕ್ಮಿಣಮ್ಮ ಮತ್ತು ಪಾಂಡುರಂಗಪ್ಪ   ಐವರು ಮಕ್ಕಳಿಗೆ ತಮ್ಮ ಕೈಲಾದ ಮಟ್ಟಿಗೆ ವಿದ್ಯಾಭ್ಯಾಸ ಕೊಡಿಸಿ, ಮದುವೆ ಮಾಡಿದ್ದರು. ಎಲ್ಲಾ ಮಕ್ಕಳು ದೂರ ದೂರದ ಊರುಗಳಲ್ಲಿ   ತಮ್ಮ,  ತಮ್ಮ ನೆಲೆ  ಕಂಡುಕೊಂಡಿದ್ದರು.      ಎಂಟು ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿ,  ದೇಹದ ಒಂದು ಭಾಗದ  ಸ್ವಾಧೀನ ಕಳೆದುಕೊಂಡಿದ್ದರು  ಪಾಂಡುರಂಗಪ್ಪ.   ಗಂಡನ ಅನಾರೋಗ್ಯದ  ಸಮಯದಲ್ಲಿ  ಅನಾವರಣಗೊಂಡ ಮಕ್ಕಳ   ನಡವಳಿಕೆ,  ಅಸಹಕಾರ, ಅಸಹನೆ,  ಲೆಕ್ಕಾಚಾರಗಳಿಂದ  ಬಹಳವಾಗಿ  ನೊಂದಿದ್ದರು ರುಕ್ಮಿಣಮ್ಮ.  ತಂದೆ-ತಾಯಿಯರ  ಕಷ್ಟಕಾಲದಲ್ಲಿ  ಹಡೆದ ಮಕ್ಕಳು ತಮ್ಮ  ಕರ್ತವ್ಯ ನಿರ್ವಹಿಸುವಾಗ ತಮ್ಮತಮ್ಮಲ್ಲೆ   ಸ್ಪರ್ಧೆ, ಜಿದ್ದಿಗೆ ಬಿದ್ದು ತೋರಿಸಿದ ಅನಾದರ, ಮಾಡಿದ ಅವಮಾನ   ರುಕ್ಮಿಣಮ್ಮನವರಿಗೆ ಜೀವನ ಕಲಿಸಿದ ಹೊಸ ಪಾಠವಾಗಿತ್ತು.       ಹಾಗೂ,  ಹೀಗೂ  ಪರಿಪಾಟಲು ಪಟ್ಟು ಆಸ್ಪತ್ರೆಯಿಂದ ಗಂಡನನ್ನು  ಮನೆಗೆ ಕರೆತಂದಿದ್ದರು  ರುಕ್ಮಿಣಮ್ಮ. ನಂತರ ವೈದ್ಯರ ಸಲಹೆಯಂತೆ ಪ್ರತಿ ದಿನ  ಮುಂಜಾನೆ , ಸಂಜೆ ಗಂಡನ  ಕೈ ಹಿಡಿದು  , ಸಮುದ್ರದ  ದಂಡೆಗೆ  ಕರೆದೊಯ್ದು ಬೆಚ್ಚಗಿನ ಮರಳಿನಲ್ಲಿ  ಮಲಗಿಸಿ, ಹಿತವಾಗಿ ಕೈ ಕಾಲು  ತಿಕ್ಕಿ , ಕಡಲ ಅಲೆಗಳಿಂದ ಸ್ನಾನ ಮಾಡಿಸುತ್ತಿದ್ದರು.   ಗಂಡನ ಬಗಲಲ್ಲಿ ಕುಳಿತು  ಸಮುದ್ರದಲೆಗಳ  ಲೆಕ್ಕ ಹಾಕುತ್ತಿದ್ದಾಗ,  ಪಾಂಡುರಂಗಪ್ಪ  ನಗುತ್ತಾ ” ಹುಚ್ಚು ರುಕ್ಮಿ”   ಎಂದು   ಪ್ರೀತಿಯಿಂದ ತಲೆಗೆ  ಮೊಟಕುತ್ತಿದ್ದರು.     ಮಕ್ಕಳೆಲ್ಲಾ   ಕಳುಹಿಸುತ್ತಿದ್ದ  ಅಷ್ಟಿಷ್ಟು ಹಣದಿಂದ  ಎಂಟು ವರ್ಷಗಳು ಜೀವನ ದೂಡಿದ್ದ  ಪಾಂಡುರಂಗಪ್ಪನವರು ತೀರಿಕೊಂಡಿದ್ದರು.       ಪಾಂಡುರಂಗಪ್ಪ ಸತ್ತು ಹನ್ನೊಂದು  ದಿನಗಳು  ಕಳೆದಿದ್ದವು.  ಐವರು ಮಕ್ಕಳು, ಹನ್ನೆರಡು  ಮೊಮ್ಮಕ್ಕಳು ಒಟ್ಟಿಗೆ ಕುಳಿತು ಎಂಟು  ವರ್ಷಗಳಿಂದ , ತಂದೆಯ  ಆಸ್ಪತ್ರೆ ಖರ್ಚು ,  ಇದುವರೆಗೆ  ತಾಯಿಗೆ ನೀಡಿದ ಹಣ,    ತಂದೆಯ ಮಣ್ಣು ,  ಶ್ರಾದ್ಧ,  ಮಾಡುವವರೆಗೆ ಆದ ಖರ್ಚುವೆಚ್ಚಗಳನ್ನು ಲೆಕ್ಕ ಹಾಕುತ್ತಾ ಕುಳಿತಿದ್ದರು.   ಪ್ರತಿಯೊಬ್ಬರು ತಾವು  ಮಾಡಿದ ವೆಚ್ಚಕ್ಕೆ ಸಾಕ್ಷಿಗಳನ್ನು  ನೀಡುತ್ತಿದ್ದರು.  ತಾಯಿಯಾದ ರುಕ್ಮಿಣಮ್ಮ   ಮಕ್ಕಳಿಗೆ   ತಾನೇನು ನೀಡಿದ್ದೇನೆ  ಎಂಬುದಕ್ಕೆ ಯಾವ ಲೆಕ್ಕ , ಸಾಕ್ಷಿ ನೀಡಲಾಗದೆ ಕುಳಿತಿದ್ದರು.      ಗಂಡನನ್ನು ಕಳೆದುಕೊಂಡು ಒಂಟಿಯಾಗಿದ್ದ ರುಕ್ಮಿಣಮ್ಮನನ್ನು ಯಾರ್ಯಾರು ಎಷ್ಟೆಷ್ಟು ದಿವಸ ಯಾರ್ಯಾರ ಮನೆಗಳಲ್ಲಿ ಇಟ್ಟುಕೊಳ್ಳಬೇಕು ಎಂಬುದರ  ಕುರಿತು   ಚರ್ಚೆಯಾಗತೊಡಗಿತ್ತು.  ಅವರುಗಳೆಲ್ಲಾ ವೇಳಾಪಟ್ಟಿಯನ್ನು ತಯಾರಿಸುತ್ತಾ ಪರಸ್ಪರರ ಅನುಕೂಲ, ಅನಾನುಕೂಲಗಳನ್ನು    ಹೇಳಿ ಕೊಳ್ಳತೊಡಗಿದ್ದರು.  ರುಕ್ಮಿಣಮ್ಮ ಬದುಕಿರುವ  ಜೀವಿ ಎಂದು ಅವರ್ಯಾರೂ ಭಾವಿಸಿದಂತೆ ಕಾಣಲಿಲ್ಲ.       ರುಕ್ಮಿಣಮ್ಮನವರಿಗೆ ಆ ಕ್ಷಣದಲ್ಲಿ ಅಗಾಧವಾದ , ಆಳವಾದ ,  ಲೆಕ್ಕ ಮಾಡಲಾಗದ   ಅಲೆಗಳ  ಕಡಲು ನೆನಪಾಯಿತು.   ಕುಳಿತಲ್ಲಿಂದ ಮೆಲ್ಲನೆ ಎದ್ದು  ಮನೆಯಿಂದ  ಹೊರಬಂದು ಕಡಲ ಕಡೆ ಹೆಜ್ಜೆ ಹಾಕಿದರು. ಕಡಲ ಮರಳು ತನ್ನ  ಆತ್ಮೀಯತೆಯ  ಸ್ಪರ್ಶದಿಂದ   ನೊಂದ ಮನಸ್ಸನ್ನು  ಸಂತೈಸಿತು. ರುಕ್ಮಿಣಮ್ಮ  ಕಡಲ ಅಲೆಗಳ ಲೆಕ್ಕ ಹಾಕುತ್ತಾ…… ಹಾಕುತ್ತಾ ………ಕಡಲೆಡೆಗೆ ಹೆಜ್ಜೆ ಹಾಕತೊಡಗಿದ್ದರು. *********   

ಕಡಲಲೆಗಳ ಲೆಕ್ಕ Read Post »

ಕಥಾಗುಚ್ಛ

ಅಬ್ಬರವಿಳಿದಾಗ

ಶೈಲಜಾ ಹಾಸನ್        ತಣ್ಣಗೆ ಗಾಳಿ ಬೀಸಿದಂತಾಗಿ ಮಾಧವಿ ನಡುಗಿದಳು. ಕೆರೆ ಏರಿ ಮೇಲೆ ಕುಳಿತಿದ್ದರಿಂದ ಕೆರೆಯ ಮೇಲಿಂದ ಹಾದು ಬರುತ್ತಿದ್ದ ಗಾಳಿ ಎದೆ ನಡುಗಿಸುವಂತಿತ್ತು. ಚಳಿ ಆಗುತ್ತಿದ್ದರೂ ಮಾಧವಿಗೆ ಮನೆಗೆ ಹೋಗುವ ಮನಸ್ಸು ಇರಲಿಲ್ಲ. ಏರಿ ಮೇಲೆ ಕುಳಿತು ಸಾಕಾದ ಮಾಧವಿ ನಿಧಾನವಾಗಿ ಕೆಳಗಿಳಿದು ನೀರಿಗೆ ಕಾಲು ಇಳಿಬಿಟ್ಟು ಚಪ್ಪಡಿ ಮೇಲೆ ಕುಳಿತಳು. ಕಾಲುಗಳೆರಡನ್ನು ನೀರಿನಲ್ಲಿ ಆಡಿಸುತ್ತಾ ಕಾಲಬೆರಳನ್ನು ಕಚ್ಚಲು ಬರುತ್ತಿದ್ದ ಮೀನುಗಳೊಡನೆ ಆಟವಾಡತೊಡಗಿದಳು. ಕೆಲವು ನಿಮಿಷಗಳಷ್ಟೆ ಆ ಆಟವೂ ಮುದ ನೀಡದೆ ಕಾಲುಗಳನ್ನು ಎತ್ತಿಕೊಂಡು ಮೇಲೆ ಇರಿಸಿಕೊಂಡಳು.      ಬಾನಿನಲ್ಲಿ ಬೆಳ್ಳಕ್ಕಿಗಳು ಸಾಲಾಗಿ ಶಿಸ್ತಿನ ಸಿಪಾಯಿಗಳಂತೆ ಹೋಗುತ್ತಿರುವುದನ್ನು ಕಂಡು ಎದ್ದು ನಿಂತವಳೇ “ಬೆಳ್ಳಿಕ್ಕಿ, ಬೆಳ್ಳಕ್ಕಿ ನನ್ನ ಉಂಗುರ ಕೊಡ್ತಿನಿ ನಿನ್ನ ಉಂಗುರ ಕೊಡು” ಎಂದು ಕೂಗಿದಳು.  ಯಾರಾದರೂ ಕೇಳಿಸಿಕೊಂಡರೇನೊ ಎಂದು ತಟ್ಟನೆ ನಾಚಿ ಸುತ್ತಲೂ ನೋಡಿದಳು. ಸ್ವಲ್ಪವೇ ದೂರದಲ್ಲಿ  ಬಟ್ಟೆಗೆ ಸೋಪು ಹಚ್ಚುತ್ತಿದ್ದ ಶಾಮಣ್ಣನ ಸೊಸೆ ” ಏನೇ ಮಾಧವಿ, ಉಂಗುರ ಕೇಳಿದಿಯಾ ಬೆಳ್ಳಕ್ಕಿಯಾ, ಸ್ವಲ್ಪ ದಿನ ಇರು, ಬೆಳ್ಳಕ್ಕಿಯಂತೆ ಮದ್ವೆ ಗಂಡು ಹಾರಿ ಬಂದು ಚಿನ್ನದುಂಗುರ ತೊಡಿಸುತ್ತಾನೆ.” ಎನ್ನುತ್ತಾ ನಕ್ಕಳು.   “ಥೂ ಹೋಗಕ್ಕ, ನಾನು ಚಿನ್ನದ ಉಂಗುರನೇ ಹಾಕಳಲ್ಲ, ಅದರಲ್ಲೂ  ಮದ್ವೆ ಗಂಡು ತೊಡಿಸುತ್ತಾನೆ ಅಂದ್ರೆ ನಂಗೆ ಬೇಡವೇ ಬೇಡಾ” ಮೂತಿ ಉಬ್ಬಿಸಿದಳು.   “ನೀನು ಬೇಡ ಅಂದ್ರೆ ನಿಮ್ಮಪ್ಪ ಕೇಳುತ್ತಾರಾ, ಆಗ್ಲೆ ಗಂಡು ಹುಡುಕುತ್ತಾ ಇದ್ದಾರೆ. ಈ ವರ್ಷವೇ ನಿಂಗೆ ಮದ್ವೆ ಕಣೇ” ಮಾಧವಿಯನ್ನು ರೇಗಿಸಿದಳು. ” ಥೂ ಎಲ್ಲಿಹೋದರೂ ಮದ್ವೆ ವಿಷಯನೇ, ಮೊದ್ಲು ನೀನು ಬಟ್ಟೆ ಒಗೆಯಕ್ಕ” ಸಿಡಾರನೇ ಸಿಡುಕಿ ಅಲ್ಲಿಂದ ಎದ್ದು ಮನೆಯತ್ತ ಹೊರಟಳು.    ಮನೆಗೆ ಹೊಗಲು ಮನಸ್ಸಾಗದೆ ಸೀದಾ ತೋಪಿನೊಳಗೆ ಹೆಜ್ಜೆ ಹಾಕಿ ಅಲ್ಲಿದ್ದ ಅವಳ ಮೆಚ್ಚಿನ ಮಾವಿನ ಮರವೇರಿ ಕುಳಿತುಕೊಂಡಳು. ಮರದಲ್ಲಿನ ಮಾವಿನ ಕಾಯಿಗಳು ಬಲಿತು ಮಾವಿನ ಸುವಾಸನೆ ಸುತ್ತಲೂ ವ್ಯಾಪಿಸಿತ್ತು. ಆ ವಾಸನೆಗೆ ಅರೆ ಕ್ಷಣ ಮೂಗರಳಿಸಿ ಕಂಪನ್ನು ಒಳಗೆಳೆದುಕೊಂಡಳು. ಮನೆಯೊಳಗೆ ರಾಶಿ ರಾಶಿ ಹಣ್ಣು ಬಿದ್ದಿದ್ದರೂ ತಿನ್ನುವ ಮನಸ್ಸಾಗಿರಲಿಲ್ಲ. ಮನದೊಳಗೆ ಕೊರೆಯುತ್ತಿದ್ದ ಸ್ಕೂಟಿ ವಿಷಯವೇ ಬೃಹದಾಕಾರವಾಗಿ ಎದ್ದು ಕುಣಿಯ ತೊಡಗಿತು. ಹೊಸ ಸ್ಕೂಟಿ ಓಡಿಸುತ್ತಾ ಕಾಲೇಜಿನ ದಾರಿ ಹಿಡಿದು ತಾನು ಹೋಗುತ್ತಿದ್ದರೆ ಎಲ್ಲರ ದೃಷ್ಟಿಯೂ ನನ್ನ ಮೇಲೆಯೇ, ಸ್ಕೂಟಿಯಿಂದ ಹೆಮ್ಮೆಯಿಂದ ಇಳಿದು ಸ್ಟಾಂಡಿನಲ್ಲಿ ನಿಲ್ಲಿಸಿ, ಬ್ಯಾಗ್ ತೆಗೆದುಕೊಂಡು ಹೆಗಲಿಗೇರಿಸಿಕೊಂಡು ಕ್ಲಾಸಿನೊಳಗೆ ಹೋಗುತ್ತಿದ್ದರೆ….ರೇ… ರಾಜ್ಯದಲ್ಲಿ ಮುಳುಗಿಹೋಗಿರುವಾಗಲೇ ಅಪ್ಪನ ಕೂಗು ” ಮಾಧವಿ, ಎಲ್ಲಿದ್ದಿಯಾ, ಕತ್ತಲೆ ಆಗ್ತಾ ಇದೆ, ಈ ತೋಪಿನಲ್ಲಿ ಕುಳಿತು ಕೊಂಡು ಏನು ಮಾಡ್ತಾ ಇದ್ದಿಯಾ,ಎದ್ದು ಬಾ ಮನೆಗೆ” ಅಪ್ಪನ ಜೋರು ಧ್ವನಿ ಕೇಳಿಸಿದಾಗ ಅತ್ತ ತಿರುಗಿ ” ಈ ಅಪ್ಪಾ ಇನ್ನೂ ಸ್ವಲ್ಪ ಹೊತ್ತು ಸುಮ್ಮನಿರಬಾರದಿತ್ತಾ, ನನ್ನ ಕನಸು ಅರ್ಧಕ್ಕೆ ನಿಂತು ಹೋಯಿತು ಎಂದು ಬೈಯ್ದುಕೊಳ್ಳುತ್ತಾ ಮರದಿಂದ  ಒಂದೇ ಸಲಕ್ಕೆ ಧುಮುಕಿದಳು.       ತೋಪಿನಿಂದ ಮನೆ ಒಂದು ಕೂಗಳತೆ ಅಂತರ. ಮಗಳು ಕೆರೆ ಏರಿ ಅಥವಾ ತೋಪು ಇವೆರಡು ಜಾಗದಲ್ಲಿಯೇ ಇರುತ್ತಾಳೆ ಅಂತ ಗೊತ್ತಿದ್ದ ಕೇಶವ ಕೆರೆ ಬಳಿ ಮಾಧವಿ ಇಲ್ಲ ಅಂತ ತಿಳಿದು ಕೊಂಡು ತೋಪಿನಲ್ಲಿಯೇ ಇರ ಬೇಕೆಂದು ಕೂಗು ಹಾಕಿದ್ದ.   ಮುಖ ದುಮ್ಮಿಸಿಕೊಂಡೇ ಮನೆಯೊಳಗೆ ಬಂದ ಮಾಧವಿ ಯಾರೊಂದಿಗೂ ಮಾತನಾಡದೆ ಕುರ್ಚಿ ಮೇಲೆ ಕುಳಿತು ಕೊಂಡಳು. ಮಗಳ ಮುದ್ದು ಮುಖ ನೋಡಿದ ವೇದಾ “ಮಾಧವಿ, ಊಟಾ ಮಾಡು ಬಾರೆ” ಕಕ್ಕುಲಾತಿಯಿಂದ ಕರೆದಳು. ಮಧ್ಯಾಹ್ನವೂ ಊಟಾ ಮಾಡದೆ ಹಸಿದಿರುವ ಮಗಳ ಬಗ್ಗೆ ಅಂತಃಕರಣದಿಂದ ಕರೆದಳು. ಮಾಧವಿ ಅಮ್ಮನ ಮುಖವನ್ನು ದುರು ದುರು ನೋಡುತ್ತಾ ತಟ್ಟನೆ ಎದ್ದವಳೇ ರೂಮಿನತ್ತ ನಡೆದು ಧಡಾರನೇ ಬಾಗಿಲು ತೆರೆದು ಒಳನಡೆದು ಬಿಟ್ಟಳು.      “ನೋಡ್ರಿ, ನೋಡ್ರಿ ಅವಳು ಹೇಗಾಡ್ತಾ ಇದ್ದಾಳೆ. ಬೆಳಗ್ಗೆಯಿಂದಲೂ ಏನೂ ತಿಂದಿಲ್ಲ. ಮಧ್ಯಾಹ್ನವೂ ಊಟಾ ಮಾಡಿಲ್ಲ.ಇವಳು ಹೀಗೆ ಹಸ್ಕೊಂಡಿದ್ರೆ ಹೇಗ್ರಿ ನನ್ನ ಗಂಟಲಲ್ಲಿ ಅನ್ನ ಇಳಿಯುತ್ತೆ” ವೇದಾ ನೊಂದುಕೊಂಡಳು.  “ನೋಡು ವೇದಾ, ಅವಳೇನೇ ಹಟ ಮಾಡಿದ್ರೂ ನಾನೂ ಅವಳನ್ನ ಕಾಲೇಜಿಗೆ ಕಳಿಸಲ್ಲ.ಸ್ಕೂಟಿಯನ್ನೂ ಕೊಡಿಸಲ್ಲ.ಅವಳು ಅಷ್ಟು ದೂರ ಗಾಡಿ ಓಡಿಸಿಕೊಂಡು ಕಾಲೇಜಿಗೆ ಹೋಗೋದನ್ನ ನನ್ನ ಕೈಲಿ ನೋಡೋಕೆ ಆಗಲ್ಲ ತಿಳಿತಾ.ನಾಳೆ ಗಂಡಿನ ಕಡೆಯವರು ಬರ್ತಾ ಇದ್ದಾರೆ. ಅವರ ಮುಂದೆ ರಾಮಾಯಣ ಮಾಡದೆ ಮರ್ಯಾದೆಯಿಂದ ಇರೋ ಹಾಗೆ ನಿನ್ನ ಮಗಳಿಗೆ ಬುದ್ದಿಹೇಳು.” ನಿರ್ಧಾರಿತವಾಗಿ ಕೇಶವ ನುಡಿದನು.      “ನಿಮ್ಮ ಅಪ್ಪ ಮಗಳ ಮಧ್ಯೆ ನನ್ನ ಸಂಕಟ ಕೇಳೊರು ಯಾರು? ಅವಳುಕಾಲೇಜಿಗೆ ಹೋಕ್ತಿನಿ ಅಂತ ಹಟ ಮಾಡ್ತಾಳೆ, ನೀವು ಮದ್ವೆ ಮಾಡ್ತಿನಿ ಅಂತ ಹಟ ಮಾಡ್ತಿರಾ, ನಾನು ಯಾರ ಕಡೆಗೆ ಹೇಳಲಿ. ಏನಾದ್ರೂ ಮಾಡಿ ಕೊಳ್ಳಿ, ನನ್ನ ಮಾತನ್ನ ಯಾರು ಕೇಳುತ್ತಿರಿ” ಜೋರಾಗಿಯೇ ಗೊಣಗಾಡುತ್ತಾ ಅಡುಗೆ ಮನೆ ಹೊಕ್ಕಳು. ಮಾಧವಿ ತನ್ನ ಹಟ ಬಿಡಲಿಲ್ಲ. ಅಂದು ಯಾರೂ ಮನೆಯಲ್ಲಿ ಊಟಾ ಮಾಡಲಿಲ್ಲ.    ಬೆಳಗ್ಗೆಯಿಂದಲೆ ಕೇಶವ ಸಡಗರದಿಂದ ಓಡಾಡುತ್ತಿದ್ದ. ಗಂಡಿನವರು ಬೆಳಗ್ಗೆ ಹನ್ನೊಂದು ಗಂಟೆಗೆ ಬರುತ್ತಾರೆ ಎಂದು ತಿಳಿಸಿದ್ದರಿಂದ ವೇದಳಿಗೆ ಬಂದವರಿಗೆ ತಿಂಡಿ ಮಾಡಿ ಸಿದ್ದವಾಗಿರಲು ತಿಳಿಸಿದ. ಮಗಳ ಕೋಪವನ್ನು ಲೆಕ್ಕಕ್ಕೆ ತೆಗೆದು ಕೊಳ್ಳದೆ ಪಾಪ ಅದು ಮಗು ಅದಕ್ಕೇನು ತಿಳಿಯುತ್ತದೆ. ಕಾಲೇಜು, ಸ್ಕೂಟಿ ಅಂತ ಕುಣಿಯುತ್ತೆ, ಬಂದ ವರ ಒಪ್ಪಿಕೊಂಡರೆ  ಮದುವೆಯಾಗಿ ಅವನ ಪ್ರೀತಿಯಲ್ಲಿ ಎಲ್ಲವನ್ನು ಮರೆಯುತ್ತಾಳೆ. ನಮಗೆ ತಾನೇ ಯಾರಿದ್ದಾರೆ, ಇರುವ ಒಬ್ಬಳೆ ಮಗಳು ಓದು, ಕಾಲೇಜು ಅಂತ ಯಾಕೆ ಕಷ್ಟ ಪಡ ಬೇಕು ಅನ್ನೋವ ಧೋರಣೆಯಲ್ಲಿ ಕೇಶವನಿದ್ದ.ವೇದಳಿಗೂ ಗಂಡನ ರೀತಿ ಸರಿ ಎನಿಸಿದರೂ ಮಾಧವಿಗೆ ಮದುವೆ ಇಷ್ಟವಿಲ್ಲವಿರುವುದು, ಅವಳಿಗೆ ಮುಂದೆ ಓದಲು ಆಸೆ ಇರುವುದು, ಬಸ್ಸಿನ ಸೌಕರ್ಯ ಇಲ್ಲದಿರುವ ಈ ಊರಿನಿಂದ ಪ್ರತಿ ದಿನ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗಲು ಮಗಳು ಬಯಸಿರುವುದು ಗೊತ್ತಿದ್ದ ವೇದ ಮಗಳ ಮನಸ್ಸನ್ನೂ ನೋಯಿಸಲಾರಳು. ಗಂಡನನ್ನು ಎದಿರು ಹಾಕಿಕೊಳ್ಳಲಾರಳು. ಇಬ್ಬರ ಮಧ್ಯೆ ಯಾರಿಗೂ ಹೇಳಲಾರದೆ ಒದ್ದಾಡಿ ಹೋಗುತ್ತಿದ್ದಾಳೆ.    ಅಮ್ಮನ ಬಲವಂತಕ್ಕೆ ಗಂಡಿನ ಮುಂದೆ ಕುಳಿತಿದ್ದ ಮಾಧವಿಯ ಮುದ್ದು ಮುಖಕ್ಕೆ ಮದುವೆಯ ಗಂಡು ಕ್ಲೀನ್ ಬೈಲ್ಡ್ ಆಗಿಬಿಟ್ಟಿದ್ದ. ನಾಳೆನೇ  ಮದ್ವೆ  ಅಂದರೂ ತಾಳಿ ಕಟ್ಟೊಕೆ ಸಿದ್ದವಾಗಿಬಿಟ್ಟ. ಆದರೆ ಮಾಧವಿ ಮಾತ್ರಾ ಕತ್ತೆತ್ತಿಯೂ ಹುಡುಗನತ್ತ ನೋಡಿರಲಿಲ್ಲ.     ಹುಡುಗ ತಂದೆ ” ಏನಮ್ಮ ನಮ್ಮ ಹುಡುಗ ಒಪ್ಪಿಗೆಯೇ ನಿನಗೆ, ಈಗ್ಲೇ ಸರಿಯಾಗಿ ನೋಡಿಕೊಂಡು ಬಿಡು, ಆಮೇಲೆ ನೋಡಿಲ್ಲ ಅಂತ  ಹೇಳಬೇಡ” ಕತ್ತು ಬಗ್ಗಿಸಿ ಕುಳಿತಿದ್ದ ಮಾಧವಿಯನ್ನು ಕೇಳಿದರು.    ಆಗಾ ಮಾಧವಿ ತಟ್ಟನೆ ” ಒಪ್ಗೆ ಇಲ್ಲ. ನನಗೆ ಮದ್ವೆ ಆಗೋಕೆ ಇಷ್ಟ ಇಲ್ಲ. ನಮ್ಮ ಅಪ್ಪನ ಬಲವಂತಕ್ಕೆ ಇಲ್ಲಿ ಕೂತಿದೀನಿ” ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಟ್ಟಳು. ಮನದೋಳಗಿನ ನಿರಾಶೆ, ಆಕ್ರೋಷ ತರಿಸಿ ಮಾಧವಿಗೆ ಹಾಗೆ ನುಡಿಯುವಂತೆ ಮಾಡಿ ಬಿಟ್ಟಿತ್ತು. ಈ ಅನಿರೀಕ್ಷಿತ ಘಟನೆಯಿಂದ ತಬ್ಬಿಬ್ಬಾದ ಗಂಡಿನವರು ದುರ್ದಾನ ತೆಗೆದುಕೊಂಡವರಂತೆ ಪೆಚ್ಚಾಗಿ ಬಿಟ್ಟರು.     ಹುಡುಗನ ತಂದೆ ಎದ್ದು ನಿಂತು ಕೇಶವನತ್ತ ತಿರುಗಿ ” ಅಲ್ಲ ಸ್ವಾಮಿ, ಹುಡುಗನನ್ನು ಕರೆಸುವ ಮುಂಚೆ ನಿಮ್ಮ ಮಗಳ ಒಪ್ಪಿಗೆ ತೆಗೆದು ಕೊಳ್ಳ ಬಾರದಿತ್ತೆ. ಹುಡುಗಿಗೆ ಮದ್ವೆ ಇಷ್ಟ ಇಲ್ಲ ಅಂದ ಮೇಲೆ ಹುಡುಗಿ ನೋಡಿ ಏನು ಪ್ರಯೋಜನ, ನಮ್ಮ ಸಮಯವೂ ಹಾಳೂ, ನಿಮ್ಮ ಸಮಯವೂ ಹಾಳೂ, ನಾವಿನ್ನೂ ಹೊರಡುತ್ತೆವೆ, ಮೊದ್ಲೂ ನಿಮ್ಮ ಹುಡುಗಿಗೆ ನಡವಳಿಕೆ ಕಲಿಸಿ, ಆಮೇಲೆ ಮದುವೆ ಮಾಡುವಿರಂತೆ” ಅಂತ ವ್ಯಂಗ್ಯವಾಗಿ ನುಡಿದು ನಡೀರಿ ಹೋಗೋಣ ಅಂತ ತನ್ನವರೊಂದಿಗೆ ಹೊರಟು ನಿಂತರು.    ” ದಯವಿಟ್ಟು ಕ್ಷಮಿಸಿ ಸ್ವಾಮಿ, ನನ್ನ ಮಗಳು ಇನ್ನೂ ಚಿಕ್ಕವಳು. ಏನೋ ಗೊತ್ತಾಗದೆ ಮಾತಾಡಿ ಬಿಟ್ಟಿದ್ದಾಳೆ. ನಾನು ಆಮೇಲೆ ಅವಳಿಗೆ ಬುದ್ದಿ ಹೇಳುತ್ತೆನೆ. ನೀವು ಬೇಸರ ಮಾಡಿ ಕೊಳ್ಳ ಬೇಡಿ. ಎಲ್ಲಾ ಹೆಣ್ಣು ಮಕ್ಕಳು ಮೊದ್ಲು ಮೊದ್ಲು  ಮದ್ವೆ ಬೇಡಾ ಅಂತಾ ತಾನೇ ಹೇಳೊದು, ಅವಕ್ಕೇನು ಗೊತ್ತಾಗುತ್ತೆ. ನಾವು ಕೊಂಚ ತಿಳಿಸಿ ಹೇಳಿದ್ರೆ ಒಪ್ಪಿಕೊಂಡು ಮದ್ವೆ ಆಗಿ ಸಂಸಾರ ಮಾಡ್ತರೆ. ದಯವಿಟ್ಟು ನೀವು ಕುಳಿತು ಕೊಳ್ಳಿ. ಅನುನಯದಿಂದ ಕೇಶವ ಅವರ ಕೋಪ ಇಳಿಸಲು ನೋಡಿದ.    ಅದ್ಯಾವುದಕ್ಕೂ ಜಗ್ಗದ ಅವರು “ಯಜಮಾನ್ರೆ , ಬಲವಂತಾಗಿ ನಿಮ್ಮ ಮಗಳನ್ನ ಸೊಸೆ ಮಾಡಿಕೊಳ್ಳುವ ದರ್ದು ನಮಗೇನು ಇಲ್ಲ. ನನ್ನ ಮಗನಿಗೆ ಹೆಣ್ಣುಕೊಡಲು ಕ್ಯೂ ನಿಂತಿದ್ದಾರೆ, ಹೆಚ್ಚು ಮಾತು ಬೇಡಾ, ನಾವಿನ್ನು ಬರ್ತಿವಿ” ಅಂದವರೆ  ಮತ್ಯಾವುದಕ್ಕೂ ಅವಕಾಶ ಕೊಡದೆ ತಮ್ಮವರನ್ನು ಏಳಿಸಿಕೊಂಡು ಹೋಗಿಯೇ ಬಿಟ್ಟಾಗ ಅವಮಾನ ತಾಳದೆ ಕೇಶವ ಕುಸಿದು ಕುಳಿತರೆ, ವೇದಾ ಬಾಯಿಗೆ ಸೆರಗುಹಚ್ಚಿ ಬಿಕ್ಕಳಿಸಿದಳು.   ಮಾಧವಿ ಮಾತ್ರ ಏನೂ ಆಗದವಳಂತೆ ಎದ್ದು ರೂಮಿನೊಳಗೆ ಹೋಗಿ ಬಟ್ಟೆ ಬದಲಿಸಿ ನೈಟ್ ಡ್ರಸ್ ಧರಿಸಿದಳು. ಗಂಡಿನವರು ಹೋಗಿದ್ದು ಒಳ್ಳೆಯದೇ ಆಯಿತು ಎಂದು ಕೊಂಡು ಹಾಯಾಗಿ ಹಾಸಿಗೆ ಮೇಲೆ ಉರುಳಿಕೊಂಡಳು. ಅಲ್ಲಿವರೆಗೂ ಕಾಡದಿದ್ದ ಹಸಿವು ಈಗಾ ಧುತ್ತನೆ ಕಾಡಿತು,  ಹೊಟ್ಟೆ ಹಸಿವು ಹೆಚ್ಚಾಗಿ ನೆನ್ನೆಯಿಂದ ತಿನ್ನದೆ ಇದ್ದದ್ದು ಈಗಾ ಕಾಡಲು ತೊಡಗಿದಾಗ ಎದ್ದು ಅಡುಗೆ ಮನೆಗೆ ಹೋಗಿ ಗಂಡಿನವರಿಗೆ ಮಾಡಿದ್ದ ಉಪ್ಪಿಟ್ಟು, ಕೇಸರಿಭಾತನ್ನು ತಟ್ಟೆಗೆ ತುಂಬಿಕೊಂಡು  ಹಾಲಿಗೆ ಬಂದು ಕುಳಿತು ಗಭ ಗಭನೆ ತಿನ್ನ ತೊಡಗಿದಳು.   ಗಂಡಿನವರಿಗೆ ಅವಮಾನ ಮಾಡಿ ಏನೂ ಆಗದವಳಂತೆ ಅವರಿಗಾಗಿ ಮಾಡಿದ್ದ ತಿಂಡಿಯನ್ನು ತಿನ್ನುತ್ತಿರುವ ಮಗಳನ್ನು ನೋಡಿ ಕೇಶವನಿಗೆ ಪಿತ್ತ ಕೆರಳಿತು.ಅಷ್ಟು ಒಳ್ಳೆಯ ಸಂಬಂಧವನ್ನು ತಾನೇ ಕೈಯಾರೆ ದೂರ ತಳ್ಳಿದ ಮಗಳ ಮೇಲೆ  ಮೊದಲೆ ಕ್ರೋಧ ಉಕ್ಕಿತ್ತು. ಈಗಾ ಆ ಕ್ರೋಧ ಮತ್ತಷ್ಟು ಹೆಚ್ಚಾಗಿ ಆವೇಶದಿಂದ ಮಗಳ ಬಳಿ ಬಂದವನೇ “ಹಾಳಾದವಳೆ ನಮ್ಮ ಹೊಟ್ಟೆ ಹುರಿಸೋಕೆ ಹುಟ್ಟಿದ್ದಿಯಾ. ಒಬ್ಳೆ ಮಗಳು ಅಂತ ಮುದ್ದು ಮಾಡಿ ಬೆಳೆಸಿದ್ದಕ್ಕೆ  ಒಳ್ಳೆ ಉಡುಗರೆ ಕೊಟ್ಟು ಬಿಟ್ಟೆ ನೀನು,ಯಾಕಾದ್ರೂ ನನ್ನ ಮಗಳಾಗಿ ಹುಟ್ಟಿದ್ಯೆ” ಎಂದು ಬೈಯುತ್ತಾ ಅವಳು ತಿನ್ನುತ್ತಿದ್ದ ತಟ್ಟೆಯನ್ನು ಕಿತ್ತೆಸೆದು ಮಗಳ ಬೆನ್ನಿಗೆ ದಪ ದಪನೇ ಗುದ್ದಿದ.   ಅಪ್ಪನ ಈ ಅನಿರೀಕ್ಷಿತ ಧಾಳಿಯಿಂದ ಕಂಗೆಟ್ಟು ಮಾಧವಿ ಜೋರಾಗಿ ಅಳತೊಡಗಿದಳು. ಅಪ್ಪನ ಹೊಡೆತ ಇದೇ ಮೊದಲು, ಈ ಆವೇಶ ರೋಷವೂ ಅವಳು ಕಂಡದ್ದು ಇದೇ ಮೊದಲು. ದಿಗ್ಭ್ರಾಂತಳಾಗಿ ಹೋದಳು ಮಾಧವಿ. ಅಪ್ಪ ಕೊಟ್ಟ ಏಟಿಗಿಂತ ಮನಸ್ಸಿಗೆ ನೋವಾಗಿದ್ದು ಅವನ ಮಾತುಗಳಿಂದ. ಮತ್ತಷ್ಟು ಹೊಡೆಯುವ ಉಮೇದಿನಲ್ಲಿದ್ದ ಕೇಶವನನ್ನು ತಡೆಯುತ್ತಾ ವೇದಾ “ಏನಾಯ್ತು ನಿಮಗೆ, ಯಾಕೀಗೆ ಆಡ್ತಾ ಇದ್ದಿರಾ, ಅವಳಂತೂ ಚಿಕ್ಕವಳು, ಗೊತ್ತಾಗದೆ ಏನೋ ಮಾತಾಡಿ ಬಿಟ್ಟಳು. ಅದನ್ನೆ  ಆ ಗಂಡಿನವರು ದೊಡ್ಡದು ಮಾಡಿ ಬಿಟ್ಟರು. ಅಂಥ ಮನೆಗೆ ಮಗಳನ್ನು ಕೊಟ್ಟರೆ ಮುಂದೆ ಬಾಳಿಸುತ್ತಾರಾ, ಅವರ ನಿಜವಾದ ಬಣ್ಣ ಈಗ್ಲೆ ಗೊತ್ತಾಗಿದ್ದು ಒಳ್ಳೆಯದಾಯ್ತು. ನೀವು ಅದಕ್ಕಾಗಿ ಮಗೂನಾ   ಹೊಡಿಬೇಡಿ, ನನ್ನಾಣೆ” ಅನ್ನುತ್ತಾ ಬಂದು ಮಗಳನ್ನು ರಕ್ಷಿಸಿಕೊಂಡಳು. ಪತ್ನಿಯ ವಿರೋಧ ಕಂಡು ಹಿಮ್ಮೆಟ್ಟಿದ ಕೇಸವ ತಪ್ತನಾಗಿ “ಹಾಳಾಗಿ ಹೋಗಿ ಇಬ್ಬರೂ” ಅಂತ ಪೂತ್ಕರಿಸಿ ಹೊರನಡೆದು ಬಿಟ್ಟ.  “ಮಾಧವಿ, ನೀನ್ಯಾಕೆ ಗಂಡಿನವರ ಮುಂದೆ ಅಂಗೆಲ್ಲ ಮಾತಾಡಿದೆ. ನಿಮ್ಮಪ್ಪ ನೋಡು

ಅಬ್ಬರವಿಳಿದಾಗ Read Post »

ಕಥಾಗುಚ್ಛ

ಕಥಾಯಾನ

ಮರಳಿನ ಕಥೆ ರಮೇಶ್ ನೆಲ್ಲಿಸರ ತುಂಗಾನದಿಯ ನೀರನ್ನು ಕುಡಿದೊ ಅಥವಾ ಬೆಳೆಗಳಿಗೆ ಹಾಯಿಸಿ ಬದುಕು ಕಟ್ಟಿಕೊಂಡವರು ಹಲವರಾದರೆ ತುಂಗೆಯ ಒಡಲ ಬಗೆದು ಮರಳು ತೆಗೆಯುವುದರ ಮೂಲಕ ಸಿರಿತನದ ಸುಪ್ಪತ್ತಿಗೆಯನ್ನು ಅನುಭವಿಸುತ್ತಿರುವವರು ಕೆಲವೇ ಕೆಲವರು, ರಾಜಕೀಯದ ವಾಸನೆ ತುಂಗೆಯ ಎಡಬಲದ ಮರಳು ಕ್ವಾರಿಗಳ ಪ್ರತಿ ಮರಳಿನ ಕಣದಲ್ಲಿ ಹಿಂದೆಯೂ ಇತ್ತು ಈಗಲೂ ಇದೆ. ಅಂದ ಹಾಗೆ ನಾನು ಹೇಳ ಹೊರಟಿದ್ದು ಈ ಮರಳು ಮಾಫಿಯಾದ ಕುರಿತು ಅಲ್ಲ!, ಈ ಮರಳು ದಂಧೆಗೆ ಅಂಟಿಕೊಂಡಿರುವ ಕೆಲಸಗಾರರ ಕುರಿತು, ಆಗ 2002-03 ರ ಸಮಯ ತೀರ್ಥಹಳ್ಳಿಯಿಂದ ಗಾಜನೂರು ಡ್ಯಾಮಿನ ಇಕ್ಕೆಲಗಳಲ್ಲಿಯೂ ಮರಳು ಕ್ವಾರಿಗಳ ಗಿಜಿಗಿಜಿ, ಪ್ರತಿ ಮರಳು ಕ್ವಾರಿಗಳಲ್ಲೂ ನೂರಾರು ಲಾರಿಗಳ ಸಾಲು, ಮರಳಿನ ಧೂಳಿಗೆ ಹಸಿರು ಬಿದಿರುಗಳ ಬಣ್ಣ ಮುಚ್ಚಿಹೋಗಿತ್ತು, ಪ್ರತಿ ಕ್ವಾರಿಯಲ್ಲೂ ಒಂದು ಟೀ- ಕಾಫಿ ಹಾಗೂ ಮೀನಿನ ಊಟದ ಹೋಟೆಲ್ಲುಗಳು. ಡ್ರೈವರ್ರುಗಳು ಲಾರಿಗಳನ್ನು ಲೋಡಿಗೆ ಬಿಟ್ಟು ಅರ್ಧರ್ಧ ಎಣ್ಣೆಯನ್ನು ಏರಿಸಿ ನೆರಳಿನ ಮರದ ಕೆಳಗೆ ಇಸ್ಪೀಟು ಎಲೆಗಳ ಆಟದಲ್ಲಿ ಮಗ್ನರಾಗುತ್ತಿದ್ದದ್ದು ಮಾಮೂಲು ನೋಟವಾಗಿತ್ತು, ಆಟದ ಮಧ್ಯಕ್ಕೆ ಜಗಳಗಳು ಎದ್ದು ಮಾರಿಮಾರಿಯಂತು ಸಾಮಾನ್ಯದ ದೃಶ್ಯ, ಮರಳು ಕ್ವಾರಿಯ ಮಾಲಿಕ ಯಾರೋ ಒಂದಿಷ್ಟು ಓದಿರುವ ಇಬ್ಬರು ಹುಡುಗರನ್ನು ಬಿಟ್ಟು ಮರಳಿನ ರಾಯಾಲ್ಟಿ ವಸೂಲಿ ಮಾಡುಸುತ್ತಿದ್ದರು. ಮರಳು ಕ್ವಾರಿಯ ಮಾಲಿಕರಿಗೂ ಲಾರಿಗಳ ಮಾಲಿಕರ ಒಳ ಒಪ್ಪಂದದಿಂದಾಗಿ ಸರ್ಕಾರದ ಪಾಲು ಸರ್ಕಾರಕ್ಕೆ ಮುಟ್ಟುವುದು ಅಷ್ಟಕಷ್ಟೆ!. ರಾತ್ರಿಹಗಲು ಮರಳು ನಗರಗಳ ಹೊಟ್ಟೆಯನ್ನು ಅನಾಮತ್ತಾಗಿ ಸೇರುತ್ತಲೇ ಇತ್ತು. ಮಂಡಗದ್ದೆಯ ನೆಲ್ಲಿಸರದ ಹದ್ದುಬಂಡೆಯ ಬಳಿ ಹೊಳೆಯ ಆಚೆ ಒಂದು ಮರಳು ಕ್ವಾರಿಯಿತ್ತು, ಅದು ಚಿಕ್ಕಮಗಳೂರಿಗೆ ಸೇರುತ್ತದೆಯಾದರೂ ಮರಳು ತುಂಬುವ ಲಾರಿಗಳು ಮತ್ತು ಅದರ ಮರಳು ಮಾತ್ರ ಶಿವಮೊಗ್ಗ ನಗರದ ಹೊಟ್ಟೆಗೆ ದಕ್ಕುತ್ತಿತ್ತು. ನಾವು ನೆಲ್ಲಿಸರದ ಮೀನುಗಾರಿಗೆ ಮರಳುಕ್ವಾರಿಯಿಂದ ಒಂದಿಷ್ಟು ಅನುಕೂಲವೇ ಇತ್ತು, ನಾವು ಹಿಡಿಯುವ ಮೀನಿಗೆ ಅರ್ಧ ನಶೆಯೇರಿದ ಡ್ರೈವರ್ರುಗಳು ಮತ್ತು ಮರಳು ಹೊರುವವರು ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುತ್ತಿದ್ದರಿಂದ ನಮಗೆ ಊರೂರು ತಿರುಗಿ ಮೀನು ಮಾರುವ ತಾಪತ್ರಯ ತಪ್ಪಿಹೋಗಿತ್ತು. ನಾನಾಗ ಪಿಯುಸಿ ಓದುತ್ತಿದ್ದೆ ಆಗಾಗ ಅಣ್ಣನ ಜೊತೆಗೆ ಕುಲಕಸುಬಾದ ಮೀನುಗಾರಿಕೆಗೆ ಹೋಗುತ್ತಿದ್ದೆ, ಆಗ ಮೀನು ಹಿಡಿದು ತೆಪ್ಪವನ್ನು ಮರಳಿನ ಮೇಲೆ ಎಳೆದು ಅಲ್ಲೆ ಕ್ವಾರಿಯಲ್ಲಿದ್ದ ಹೋಟೆಲ್ ನ ಬಳಿ ಹೋದರೆ ಸಾಕು ಮೀನಿಗಾಗಿ ಜನ ಮುತ್ತಿಕೊಳ್ಳುತ್ತಿದ್ದರು , ಆದರೆ ಮೀನೊ ಒಂದೋ ಎರಡೋ ಕೆಜಿ ಇರುತ್ತಿದ್ದವು,ಹೆಚ್ಚಿನ ಬೆಲೆಗೆ ಅವನು ಕೊಟ್ಟು ಹೋಟೆಲ್ಲಿನಲ್ಲಿ ತಿಂಡಿ ಕಾಫಿ ಮುಗಿಸುತ್ತಿದ್ದೆವು. ಅಣ್ಣ ಕೆಲವೊಮ್ಮೆ ಪರಿಚಯದ ಡ್ರೈವರ್ರುಗಳ ಜೊತೆ ಯಾವುದಾದರೂ ಲಾರಿಯನ್ನು ಹತ್ತಿಕೊಂಡು ಶಿವಮೊಗ್ಗಕ್ಕೆ ಹೋಗುತ್ತಿದ್ದ, ಮರಳು ಅನ್‍ಲೋಡ್ ಮಾಡಿ ಬರುವ ಬಾ ಎಂದು ಅವನನ್ನು ಕರೆಯುತ್ತಿದ್ದರು ನಾನು ಅವನು ಬರುವವರೆಗೆ ಅಲ್ಲೇ ಹೋಟೆಲ್‍ನಲ್ಲಿ ಕೂತಿರುತ್ತಿದ್ದೆ. ಹೀಗೆ ಹೀಗೆ ಕೂತಿರುವಾಗ ಹಲವು ಜನರು ಮಾತನಾಡಿಸುತ್ತಿದ್ದರು, ಅಣ್ಣನ ಪರಿಚಯದ ಡ್ರೈವರ್ರುಗಳು ಏನಾದರು ತಿಂಡಿ ಕೊಡಿಸುತ್ತಿದ್ದರು, ಹೀಗೆ ಬೇಸಿಗೆ ರಜೆಯಲ್ಲಿ ನನಗೂ ಹಲವರು ಪರಿಚಯವಾದರು ಅವರಲ್ಲಿ ರಾಜಣ್ಣ ಕೂಡ ಒಬ್ಬರು ಮಧ್ಯವಯಸ್ಕರಾದ ಅವರು ನನ್ನನ್ನು ಮಗನಂತೆಯೇ ಕಾಣುತ್ತಿದ್ದರು, ನನಗೋ ಅವರಿವರ ಕಥೆಗಳನ್ನು ಕೇಳುವುದು ಎಂದರೆ ಇಷ್ಟ. ಅವರ ಊರಿನ ಬಗ್ಗೆ ಹಾಗೂ ಮನೆಯವರ ಕುರಿತು ಕೇಳುತ್ತಿದ್ದೆ, ಪ್ರಾರಂಭದಲ್ಲಿ ಏನನ್ನೂ ಹೇಳದಿದ್ದರೂ ನಂತರ ಅವರಾಗೆ ಮಾತನಾಡುತ್ತಿದ್ದರು. ರಾಜಣ್ಣನ ಊರು ಗದಗದ ಬಳಿಯ ರೋಣದ ಬಳಿಯ ಯಾವುದೋ ಹಳ್ಳಿ, ಹದಿನಾರು ತುಂಬುವಾಗಲೇ ಅವರಿಗೆ ಮೊದಲನೇ ಮದುವೆಯಾಯ್ತಂತೆ, ಗಂಡ- ಹೆಂಡತಿ ಇಬ್ಬರೂ ಸಣ್ಣವರು ತಾಯಿ ಇರುವವರೆಗೆ ಎಲ್ಲವೂ ಸರಿಯಿತ್ತು , ಅಬ್ಬೇಪಾರಿ ತಿರುಗುತ್ತಿದ್ದ ಇವರು, ತಾಯಿ ಸತ್ತಾಗ ದುಡಿಯಲು ಹೋಗಲೇ ಬೇಕಾಯ್ತು! ಆದರೆ ಹೊಲದಲ್ಲಿ ಗೇಯಲು ಬರದು ಹಲವು ತಿಂಗಳುಗಳು ಹೀಗೆ ಕಳೆದವು ಹೆಂಡತಿಗೆ ಅದೇನು ಅನಿಸಿತೋ ಏನೋ ಗಾರೆ ಕೆಲಸದವನ ಜೊತೆ ಓಡಿ ಹೋದವಳ ಸುಳಿವೇ ಸಿಗಲಿಲ್ಲ, ಮರ್ಯಾದೆಗೆ ಅಂಜಿ ಸಿಕ್ಕಿದ ಲಾರಿಯನ್ನು ಹತ್ತಿ ಶಿವಮೊಗ್ಗಕ್ಕೆ ರಾಜಣ್ಣ ತಲುಪಿದ, ಅದೇ ಲಾರಿಯ ಕ್ಲೀನರ್ ಆಗಿ ಸೇರಿಕೊಂಡ ,ಮಂಡಿಗೆ ಅಡಿಕೆ ಸಾಗಿಸುವ ಲಾರಿ ಅದು ,ಅವನಿಂದಲೇ ರಾಜಣ್ಣ ಡ್ರೈವಿಂಗ್ ಮಾಡುವುದನ್ನೂ ಕಲಿತ. ಲಾರಿಯ ಮಾಲಿಕ ಅಲ್ಲಿಲ್ಲಿ ಸಾಲಮಾಡಿಕೊಂಡು ಫೈನಾನ್ಸ್ ನಿಂದ ಹಣ ಪಡೆದು ಲಾರಿ ಕೊಂಡಿದ್ದ, ಸರಿಯಾಗಿ ಲಾರಿಯ ಸಾಲದ ಕಂತನ್ನೂ ಕಟ್ಟದೆ ತಪ್ಪಿಸಿಕೊಂಡು ಓಡಾಡುತ್ತಿದ್ದ, “ಇಂದು ಒಮ್ಮೆಗೆ ಎಲ್ಲ ಸಾಲವನ್ನು ತೀರಿಸುತ್ತೇನೆ” ಎಂದು ಹೋದವನು ಹೆಣವಾಗಿಯೇ ಹಿಂದಿರುಗಿದ್ದು. ಶಿವಮೊಗ್ಗದ ತುಂಗಾ ಸೇತುವೆಯ ಮೇಲಿಂದು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಪಾಪ ಆತ. ಹೇಗೂ ಲಾರಿಯನ್ನು ಓಡಿಸಿ ಮಾಲಿಕರ ಮನೆಗೆ ಹಣ ಕೂಡಿಸಿಕೊಡುವುದು ಎಂದು ರಾತ್ರಿ – ಹಗಲು ದುಡಿಯುತ್ತಿದ್ದವನಿಗೆ ಮಾಲಿಕನ ಹೆಂಡತಿಯ ಜೊತೆಗೆ ಸಂಬಂಧವೂ ಬೆಳೆದೋಯ್ತು!, ಎಲ್ಲರಿಗೂ ವಿಷಯ ತಿಳಿದು ರಾಜಣ್ಣನನ್ನು ಓಡಿಸಿದರು. ಅದಾಗಲೇ ಶಿವಮೊಗ್ಗ ಬೆಳೆಯುತ್ತಿತ್ತು ಮರಳು ಲಾರಿಗಳು ಎಗ್ಗಿಲ್ಲದೆ ಓಡಾಡುವುದಕ್ಕೆ ಪ್ರಾರಂಭ ಮಾಡಿದವು, ರಾಜಣ್ಣ ಮಂಡ್ಲಿಯ ಹುಸೇನ್ ಸಾಬರ ಬಳಿ ಕೆಲಸಕ್ಕೆಂದು ಸೇರಿದನಂತೆ , ಒಂದೆರಡು ವರ್ಷದ ಬಳಿಕ ಸಾಬರೆ ಒಂದು ಹುಡುಗಿಯನ್ನು ಇವನಿಗೆ ಕಟ್ಟಿ ಸಕ್ರೆಬೈಲಿನಲ್ಲಿ ಒಂದು ಬಾಡಿಗೆ ಮನೆ ಗೊತ್ತುಮಾಡಿ ಬಿಟ್ಟರು, ರಾಜಣ್ಣ ಆಗಲೇ ಕುಡಿತದ ದಾಸನಾಗಿದ್ದ ಹೆಂಡತಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದ ಈ ನಡುವೆ ಒಂದು ಹೆಣ್ಣು ಮಗವೂ ಆಯಿತು, ಆದರೂ ರಾಜಣ್ಣ ಬದಲಾಗಲಿಲ್ಲ, ಈ ವಿಷಯ ಅದು ಹೇಗೋ ಹುಸೇನ್ ಸಾಬರಿಗೆ ತಿಳಿದು ಇವನಿಗೆ ನಾಲ್ಕು ಬಾರಿಸಿ ಬುಧ್ದಿ ಹೇಳಿ ಹೋದರು. ರಾಜಣ್ಣನಿಗೆ ಅವಮರ್ಯಾದೆ ಆದಂತಾಗಿ ಹೆಂಡತಿಗೂ ಮಗುವಿಗೂ ಕೂಡಿ ಹಾಕಿ ಮನಸೊ ಇಚ್ಚೆ ಹೊಡೆದ, ರಾತ್ರಿ ಬೆಳಗಾಗುವ ವರೆಗೆ ಇವನ ಹೆಂಡತಿ ಮಗುವಿನೊಂದಿಗೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಳು. ಪೋಲಿಸರು ರಾಜಣ್ಣನಿಗೆ ಒದ್ದು ನಾಲ್ಕಾರು ನಾಲ್ಕಾರು ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದವನಿಗೆ ಹುಸೇನ್ ಸಾಬರು ಕೈಬಿಡಲಿಲ್ಲ, ಡ್ರೈವರ್‍ಗಳು ಸಿಗುವುದೇ ಅಪರೂಪವಾಗಿದ್ದರಿಂದ ಮತ್ತೆ ಮರಳುಲಾರಿಯ ಪಯಣವೂ ಆರಂಭವಾಯಿತು, ಹೆಂಡತಿ-ಮಗುವನ್ನು ನೆನೆದು ಈಗಲೂ ಕಣ್ಣೀರಾಗುತ್ತಾರೆ. ದುಡಿದ್ದದ್ದು ಏನು ಮಾಡುತ್ತೀರಿ ಕೇಳಿದೆ? ಕುಡಿಯುವುದು, ತಿನ್ನುವುದು ಸಾಯಲೂ ಆಗದೆ ಬದುಕಲೂ ಆಗದೆ ಇದ್ದೇನೆ ಎಂದು ನಿಟ್ಟುಸಿರು ಬಿಟ್ಟರು. ರಾಜಣ್ಣನ ಹಾಗೆ ಕ್ವಾರಿಯ ಪ್ರತಿಯೊಬ್ಬರದು ಒಂದೊಂದು ಕಥೆ ಸಿಗಬಹುದು, ರಾತ್ರಿ- ಹಗಲು ಕೆಲಸ ಹಲವರು ಮನಗೇ ಹೋಗುತ್ತಿರಲಿಲ್ಲ, ಕ್ವಾರಿಯಲಿ ರಾತ್ರಿ ಕೈಬಳೆಗಳ ಸದ್ದು ಸಾಮಾನ್ಯವಾಯಿತು! , ಅಕ್ರಮ ಮರಳುಗಾರಿಕೆ ಆರಂಭವಾಗಿ ನದಿಯ ಒಡಲಿನಿಂದಲೇ ಮೋಟಾರುಗಳ ಮೂಲಕ ಮರಳು ತೆಗೆಯುವುದು ಆರಂಭವಾಯಿತು, ವರುಷಗಳು ಕಳೆದವು ರಾಜಣ್ಣ ಆತ್ಮಹತ್ಯೆ ಮಾಡಿಕೊಂಡ ಎಂದು ಯಾರೋ ಹೇಳಿದರು, ಏಕೆ? ಹೇಗೆ? ಯಾರ ಬಳಿಯೂ ಉತ್ತರವಿರಲಿಲ್ಲ, ಖಿನ್ನತೆಯೆಂಬ ಖಾಯಿಲೆ ರಾಜಣ್ಣನ ಅಂಗಾಂಗವೆಲ್ಲ ವ್ಯಾಪಿಸಿತ್ತು! ಈಗಲೂ ಮರಳು ಮಾಫಿಯಾದ ಸುದ್ಧಿಗಳು ಪೇಪರ್‍ನಲ್ಲಿ ಕಂಡಾಗ ಹಳೆಯ ನೆನಪುಗಳು ಒತ್ತರಿಸಿ ಬರುತ್ತದೆ. ತುಂಗೆಯ ಒಡಲ ಮರಳ ಬಗೆದು ಶ್ರೀಮಂತರಾಗುತ್ತಿರುವ ಜನರ ನಡುವೆ ಅವರಿಗಾಗಿಯೇ ಹಗಲಿರುಳು ದುಡಿದು ಅಳಿದು ಹೋಗುವವರು ಯಾರ ಲೆಕ್ಕಕ್ಕೂ ಸಿಗುತ್ತಿಲ್ಲ, ಅಂದ ಹಾಗೆ ಇವರ ಲೆಕ್ಕ ಯಾರಿಗೂ ಬೇಕಾಗಿಯೂ ಇಲ್ಲ… ************

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಕಾಲೋ ಜಗದ್ಭಕ್ಷಕಃ ಅನುಪಮಾ ರಾಘವೇಂದ್ರ ‘ಮಕ್ಕಳು ಮೊಮ್ಮಕ್ಕಳು ಜೊತೆಯಲ್ಲಿದ್ದರೆ ಇಳಿ ವಯಸ್ಸಿನಲ್ಲೂ ವಯಸ್ಸು ಇಳಿಯುತ್ತದೆ’ ಎಂದು ಎಲ್ಲೋ ಓದಿದ್ದು ನೆನಪಾಗಿ ನಸು ನಗು ಬಂತು. ಪಕ್ಕದಲ್ಲೇ ಕುಳಿತಿದ್ದ ಮೊಮ್ಮಗ ಕಿಶನ್ “ಏನಜ್ಜೀ….. ನಗ್ತಾ ಇದ್ದೀರಿ. ನಂಗೂ ಹೇಳಿ” ಎಂದ. “ಪುಟ್ಟಾ … ನೀನು ಹುಟ್ಟಿದ ಮೇಲೆ ಮೊದಲ ಸಲ ಇಷ್ಟು ದಿನ ಈ ಅಜ್ಜಿಯ ಮನೆಯಲ್ಲಿ ಉಳಿದುಕೊಂಡದ್ದಲ್ವಾ …… ನೀನಿಲ್ಲಿರಲು ಕೊರೋನಾ ಒಂದು ನೆಪವಾಯ್ತಲ್ಲಾ ಅಂತ ನೆನೆಸಿ ನಗು ಬಂತು” ಎಂದೆ. “ಹೌದಜ್ಜೀ …… ಹಳ್ಳಿ ಮನೆ ಅಂದ್ರೆ ಇಷ್ಟು ಚೆನ್ನಾಗಿರ್ತದಾ……? ತೋಟ, ಗುಡ್ಡೆ , ತೋಡು, ಕಾಡು …. ವಾಹ್ ಮಜವೇ ಮಜ. ಇಷ್ಟು ಸಲ ಬಂದಾಗಲೂ ಇದೆಲ್ಲ ನೋಡೇ ಇರ್ಲಿಲ್ಲ” ಎಂದ. “ಹೌದು ಪುಟ್ಟಾ… ಹಳ್ಳಿ ಎಂದರೆ ಅಮ್ಮನ ಮಡಿಲಿನ ಹಾಗೆ. ಹಚ್ಚ ಹಸಿರು…. ನಿತ್ಯ ನೂತನ…..” ಎಂದು ನಾನು ನನ್ನಷ್ಟಕ್ಕೇ ಬಡಬಡಿಸುತ್ತಲೇ ಇದ್ದೆ. ಕಿಶನ್ ಅಂಗಳದಲ್ಲಿ ಓಡಾಡುತ್ತಿದ್ದ ನವಿಲುಗಳ ಹಿಂಡನ್ನು, ಕಳ್ಳ ಹೆಜ್ಜೆ ಇಟ್ಟು ಹಿಂಬಾಲಿಸುತ್ತಾ ನಡೆದಿದ್ದ. ಹದಿನೆಂಟನೇ ವಯಸ್ಸಿನಲ್ಲಿ ಈ ಮನೆಗೆ ಕಾಲಿಟ್ಟವಳು ನಾನು. ನಮ್ಮ ಹಾಲಿನಂತಹ ಸಂಸಾರಕ್ಕೆ ಜೇನಾಗಿ ಬಂದವರು ಮಿಥುನ್, ಮೈಥಿಲಿ. ಮಗ ವೈದ್ಯನಾದ. ಮಗಳು ತನ್ನಿಚ್ಛೆಯಂತೆಯೇ ಇಂಜಿನಿಯರ್ ಆದಳು. ಮಗನ ಕೈ ಹಿಡಿದ ಶಮಾ ದಂತ ವೈದ್ಯೆ. ಅನಘಾ , ಅಮೋಘ ಮುದ್ದಾದ ಇಬ್ಬರು ಮಕ್ಕಳೊಂದಿಗೆ ನಗರದಲ್ಲಿ ವಾಸವಾಗಿದ್ದು , ವಾರಕ್ಕೊಮ್ಮೆ ಬಂದು ಹೋಗುತ್ತಿದ್ದಾರೆ. ಮೈಥಿಲಿಯ ಗಂಡ ಶ್ರೀರಾಮ ಬೆಂಗಳೂರಿನಲ್ಲಿ ಇಂಜಿನಿಯರ್. ಇತ್ತೀಚೆಗಷ್ಟೇ ಅಮೇರಿಕಾದ ಒಂದು ಒಳ್ಳೆಯ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿ ಅಲ್ಲಿಗೆ ಹೋಗಿ ಮನೆ ಮಾಡಿದ್ದಾನೆ . ಮೈಥಿಲಿಯೂ, ಮೊಮ್ಮಗ ಕಿಶನ್ ಇನ್ನೇನು ಸದ್ಯದಲ್ಲಿಯೇ ಅಲ್ಲಿಗೆ ಹೋಗುವವರಿದ್ದರು . ಹೋಗುವ ಮೊದಲು ಊರಿಗೆ ಬಂದವರು ಲಾಕ್ ಡೌನ್ ಕಾರಣದಿಂದ ಇಲ್ಲಿ ಉಳಿಯಬೇಕಾಯ್ತು.ಆರು ವರ್ಷ ವಯಸ್ಸಿನ ಕಿಶನ್ ಪ್ರಶ್ನೆಗಳ ಭಂಡಾರ. “ಅಜ್ಜೀ ಇಲ್ಲಿ ಹಾಲು ಯಾಕೆ ಇಷ್ಟು ರುಚಿಯಾಗಿದೆ…?” ಎಂದು ಕೇಳುತ್ತಾ ಚಪ್ಪರಿಸುತ್ತಾ ಹಾಲು ಕುಡಿಯುತ್ತಿರುವ ಮಗನನ್ನು ನೋಡಿ ಮೈಥಿಲಿಗೂ ಆಶ್ಚರ್ಯವಾಯ್ತು. ಬೆಂಗಳೂರಿನಲ್ಲಿ ಅವನಿಗೆ ಒಂದು ಲೋಟ ಹಾಲು ಕುಡಿಸುವುದೆಂದರೆ ಒಂದು ದೊಡ್ಡ ಸಾಧನೆ. “ಪುಟ್ಟಾ … ಇದು ನಮ್ಮ ದನದ ಹಾಲು. ಶುದ್ಧವಾಗಿರ್ತದೆ. ಅಲ್ಲಿ ಪ್ಯಾಕೆಟ್ ಹಾಲಿಗೆ , ಹಾಲು ಕೆಡದಂತೆ ಇಡಲು ಕೆಲವು ರಾಸಾಯನಿಕಗಳನ್ನು ಸೇರಿಸ್ತಾರೆ” ಎಂದೆ. ಕೊರೋನಾದಿಂದಾಗಿ ಹೊರಗಿನ ತರಕಾರಿ ಸಿಗದೆ ಹೋದರೂ ನಮಗೆ ತರಕಾರಿಗಳ ದಾರಿದ್ರ್ಯಬರಲೇ ಇಲ್ಲ. ಕಿಶನ್ ಗೆ ಇದೂ ಆಶ್ಚರ್ಯದ ಸಂಗತಿಯೇ…. “ಪೇಟೆಗೆ ಹೋಗದೇ ಇದ್ದರೂ ಇಷ್ಟೊಂದು ತರಕಾರಿ ಎಲ್ಲಿಂದ….?” ಹಲಸಿನ ಕಾಯಿ , ಹಲಸಿನ ಬೇಳೆ , ಬಾಳೆಕಾಯಿ , ಬಾಳೆದಂಡು , ಬಾಳೆ ಹೂ , ಬಸಳೆ , ನೆಲಬಸಳೆ, ತೊಂಡೆಕಾಯಿ, ಬೆಂಡೆಕಾಯಿ, ಬದನೆ , ಒಂದೆಲಗ , ವಿಟಮಿನ್ ಸೊಪ್ಪು……ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಾನು ದಿನಕ್ಕೊಂದು ಸೊಪ್ಪಿನ ತಂಬುಳಿ ಮಾಡುವುದನ್ನು ನೋಡಿದ ಕಿಶನ್ , ಬಹಳ ಅಸ್ಥೆಯಿಂದ ಕಮ್ಯೂನಿಸ್ಟ್ ಸೊಪ್ಪು ಕೊಯ್ದು ತಂದು ನನ್ನ ಬಳಿ ಹಿಡಿದಿದ್ದ. ಅಜ್ಜನೂ , ಮೊಮ್ಮಗನೂ ತೋಟ , ಗುಡ್ಡೆ ಎಂದು ಸುತ್ತೀ ಸುತ್ತಿ ಮಾವಿನ ಹಣ್ಣು , ಗೇರು ಹಣ್ಣು , ಕುಂಟಾಂಗಿಲ , ನೇರಳೆಹಣ್ಣು , ಮುಳ್ಳು ಹಣ್ಣು ಕೊಯ್ದು ತಿಂದು ಈಗ ಕಾಡಿನ ಹಣ್ಣುಗಳೆಲ್ಲ ಮೊಮ್ಮಗನಿಗೂ ಚಿರಪರಿಚಿತ. ಕೆರೆಯ ನೀರಿನಲ್ಲಿ ಆಟವಾಡುವಾಗ ಅವನ ಪುಟ್ಟ ತಲೆಯೊಳಗೆ “ಈ ನೀರು ಯಾಕೆ ಇಷ್ಟು ಚೆನ್ನಾಗಿದೆ…… ಹೇಗೆ ಇಷ್ಟು ತಂಪಾಗಿದೆ …” ನೂರೆಂಟು ಪ್ರಶ್ನೆಗಳು. ಬೆಂಗಳೂರಿನಲ್ಲಿ ದಿನವಿಡೀ ಶಾಲೆ ,ಟ್ಯೂಷನ್ ಎಂದು ಕಳೆದು ಹೋದರೂ ವಾರಂತ್ಯದಲ್ಲಿ ಮೊಬೈಲ್ , ಕಂಪ್ಯೂಟರ್ , ಟಿ.ವಿ. ಕಿಶನ್ ನ ಪ್ರಪಂಚವಾಗಿತ್ತು. ಇಲ್ಲಿ ಬಂದ ಮೇಲೆ ಗೂಡಿನಿಂದ ಹೊರಗೆ ಬಿಟ್ಟ ಹಕ್ಕಿಯಂತಾಗಿದ್ದ. ಟಿ.ವಿ. , ಕಂಪ್ಯೂಟರ್ ಗಳ ನೆನಪೇ ಇಲ್ಲ. ಮೊಬೈಲ್ ನೆನಪಾಗುತ್ತಿದ್ದುದು ವಿಡಿಯೋ ಕರೆ ಮಾಡಿ ಅಪ್ಪನ ಬಳಿ ಮಾತನಾಡಲು ಮಾತ್ರ. ಅಲ್ಲಿ ಪಿಜ್ಜಾ , ಬರ್ಗರ್ ಇಲ್ಲದೇ ವಾರ ಮುಗಿಯುತ್ತಿರಲಿಲ್ಲ. ಇಲ್ಲಿ ಅದ್ಯಾವುದರ ನೆನಪೂ ಅವನಿಗಿಲ್ಲ. ಆಶ್ಚರ್ಯವೆಂದರೆ ಯಾವಾಗಲೂ ಗಂಟು ನೋವೆಂದು ಎಣ್ಣೆ ಉಜ್ಜಿಸಿಕೊಳ್ಳುತ್ತಿದ್ದ ಯಜಮಾನರಿಗೆ ಈಗ ಹದಿನೈದು ದಿನಗಳಿಂದ ತನಗೆ ನೋವಿದೆ ಎಂಬುದೇ ಮರೆತು ಹೋಗಿತ್ತು. ನನ್ನ ಸೊಂಟ ನೋವೂ ಅಷ್ಟೇ……. ನಾವಿಬ್ಬರೂ ಮತ್ತೆ ಚಿಕ್ಕ ವಯಸ್ಸಿಗೆ ಕಾಲಿಡುತ್ತಿರುವ ಅನುಭವ. ಇದು ನಮ್ಮ ಜೀವನದಲ್ಲಿ ಕೊರೋನಾ ಪರಿಣಾಮದ ಒಂದು ಮುಖ .ಮಗ ಮಿಥುನ್ ನಗರದಲ್ಲಿ ಪ್ರಸಿದ್ಧ ವೈದ್ಯ. ಕೊರೋನಾ ಚಿಕಿತ್ಸೆಗಾಗಿ ಸಿದ್ಧರಾಗಿರುವ ವೈದ್ಯರ ತಂಡದಲ್ಲಿ ಅವನೂ ಒಬ್ಬ . ಸೊಸೆಯೂ , ಮೊಮ್ಮಕ್ಕಳೂ ನಗರದಲ್ಲೇ ಇದ್ದರೂ ಅವರಿಗೂ ಮಗನ ಭೇಟಿ ಇಲ್ಲ. ಪ್ರತಿ ದಿನ ಪ್ರತಿ ಕ್ಷಣ ಆತಂಕ. ನನ್ನ ಮನಸ್ಸು , ನಮ್ಮ ದೇಶ ಸೇವೆಗಾಗಿ ನಿಂತ ಸೈನಿಕರನ್ನು ಒಂದು ಕ್ಷಣ ನೆನೆಸಿಕೊಂಡಿತು. ಮಗ ಒಳ್ಳೆಯ ಕೆಲಸ ಮಾಡುತ್ತಿದ್ದಾನೆಂಬ ಸಮಾಧಾನವಿದ್ದರೂ, ಕೊರೋನಾದ ಕರಾಳ ಛಾಯೆಯನ್ನು ನೆನೆಸಿ ಕೈಕಾಲು ನಡುಗುತ್ತಿತ್ತು. ಈ ಸಮಯದಲ್ಲೇ ಹುಚ್ಚು ಮನಸ್ಸಿನ ಹತ್ತು ರೂಪಗಳ ಪರಿಚಯವಾಗಿದ್ದು. ಬೈಲಿನ ಮಾಲಿಂಗ ಬಂದು ಅಂಗಳದ ಬದಿಯಲ್ಲಿ ನಿಂತು “ಅಕ್ಕಾ” ಎಂದು ಕರೆದ. “ಹೋ…ಮಾಲಿಂಗಾ… ಏನು ವಿಶೇಷ….?” “ಎಂತ ಹೇಳುದು ಅಕ್ಕಾ… ಈ ಕೊರೋನಾ ಮಾರಿ ನಮ್ಮನ್ನು ಸರ್ವನಾಶ ಮಾಡಿತು” ಎಂದು ಗೋಳಾಡಿದ. “ಸಮಾಧಾನ ಮಾಡಿಕೋ ಮಾಲಿಂಗಾ…… ಏನಾಯ್ತು ಹೇಳು…..” ಎಂದೆ. “ನಾನು ದಿನಾ ಕೆಲಸಕ್ಕೆ ಹೋದರೆ ಮಾತ್ರ ನಮ್ಮ ಮನೆ ನಡೆಯುವುದು. ಈಗ ಒಂದು ತಿಂಗಳಾಯ್ತು ಕೆಲಸ ಇಲ್ಲದೆ. ರೇಶನ್ ಇಲ್ಲ. ವಯಸ್ಸಾದ ಅಮ್ಮನ ಔಷಧಿ ಮುಗಿದಿದೆ. ಮಗಳು ತುಂಬಿದ ಬಸುರಿ. ಹೆಂಡತಿಗೂ ಪ್ರೆಶರ್ ಹೆಚ್ಚು ಕಮ್ಮಿ ಆಗ್ತಾ ಇರ್ತದೆ. ಎಂತ ಮಾಡ್ಬೇಕು ಅಂತ ಗೊತ್ತಾಗ್ತಾ ಇಲ್ಲ.” ಎಂದು ಕಣ್ಣೀರಿಟ್ಟ. “ಹೌದು ಮಾಲಿಂಗ . ಹೆಚ್ಚಿನವರ ಸ್ಥಿತಿಯೂ ಹೀಗೇ ಇದೆ. ದೊಡ್ಡ ದೊಡ್ಡ ಬಿಸಿನೆಸ್ ನೆಲ ಕಚ್ಚಿದೆ. ವ್ಯಾಪಾರ , ವಹಿವಾಟುಗಳು ಏರುಪೇರಾಗಿವೆ. ಮಕ್ಕಳ ವಿದ್ಯಾಭ್ಯಾಸ ಎಲ್ಲ ಹಾಳಾಯ್ತು. ಕೊರೋನಾ ಯಾರನ್ನೂ ಬಿಟ್ಟಿಲ್ಲ…..” ಎಂದೆ. “ಅದೆಲ್ಲ ಹೋಗ್ಲಿ. ನನ್ನ ಮನೆ ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಪಂಚಾಯ್ತಿಂದ ಮನೆ ಕಟ್ಟಿಸಿ ಕೊಡ್ತಾರೆ ಅಂತ ಸುದ್ಧಿ ಇತ್ತು . ಇನ್ನು ಅದ್ಯಾವುದೂ ನಡೀಲಿಕ್ಕಿಲ್ಲ” ಎಂದ. ಅವನ ಪರಿಸ್ಥಿತಿ ನೆನೆದು ಸಂಕಟ ಆಯ್ತು. ಒಂದು ಬಾಳೆ ಗೊನೆ , ಸ್ವಲ್ಪ ತರಕಾರಿ, ಸ್ವಲ್ಪ ಅಕ್ಕಿ, ಸ್ವಲ್ಪ ಹಣ ಕೊಟ್ಟು “ಹೆದರ್ಬೇಡ. ಎಲ್ಲ ಒಳ್ಳೆದಾಗ್ತದೆ. ಒಂದು ಮಾತು ನೆನಪಲ್ಲಿಟ್ಟುಕೋ ಈ ಸಮಯ ಕಳೆದು ಹೋಗುವುದು” ಎಂದೆ. ಮಾಲಿಂಗ ಹೊರಟು ಹೋದ. ಇಷ್ಟನ್ನೂ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದ ಕಿಶನ್ ಗೆ ಒಂದು ಮಾತ್ರ ಅರ್ಥ ಆಗಿರಲಿಲ್ಲ. “ಅಜ್ಜೀ…. ಎಲ್ಲ ಗೊತ್ತಾಯ್ತು. ನೀವು ಕೊನೆಯಲ್ಲಿ ಹೇಳಿದ ಒಗಟು ಮಾತ್ರ ಅರ್ಥ ಆಗ್ಲಿಲ್ಲ” ಎಂದ. “ಒಗಟಾ… ನಾನು ಒಗಟು ಹೇಳಿಯೇ ಇಲ್ವಲ್ಲಾ” ಎಂದೆ. “ನೀವು ‘ಈ ಸಮಯ ಕಳೆದು ಹೋಗುವುದು’ ಅಂತ ಹೇಳಿದ್ರಲ್ಲಾ… ಅದೇನು…?” ಎಂದ. “ಹೋ ….. ಅದಾ…. ನೋಡು ಪುಟ್ಟಾ… ಕಾಲ ಎಲ್ಲವನ್ನೂ ಮರೆಸುತ್ತದೆ. ಅಲ್ವಾ……”ಎಂದೆ. “ಅಂದ್ರೇ…..?” ಪುಟ್ಟನ ರಾಗ. “ಈಗ ನೋಡು ನೀನೀಗ ಇಲ್ಲಿ ಎಷ್ಟು ಸಂತೋಷದಲ್ಲಿದ್ದೀಯ ? ಈ ಸಮಯ ಕಳೆದು ಹೋದರೆ……. ಮತ್ತೊಮ್ಮೆ ನಿನ್ನ ಜೀವನ ಯಾಂತ್ರಿಕ ಬದುಕಾಗ್ತದೆ . ಅಲ್ವಾ…..ಈಗ ಎಷ್ಟು ಸಾಧ್ಯವೋ ಅಷ್ಟು ಸಮಯವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೋ….. ಜೀವನದಲ್ಲಿ ನಿನಗೆ ಬೇಸರವಾದಾಗಲೆಲ್ಲ ಈ ಮಾತನ್ನು ನೆನೆಸಿಕೋ. ಮನಸ್ಸಿಗೆ ಸಮಾಧಾನವಾಗುತ್ತದೆ. ಕಷ್ಟದಲ್ಲಿರುವವರು ಈ ಮಾತನ್ನು ನೆನೆಸಿಕೊಂಡರೆ ‘ಈಗ ಕಷ್ಟ ಕಾಲ. ಈ ಕಾಲ ಕಳೆದು ಹೋದರೆ ಮುಂದೆ ಬರುವ ಕಾಲ ನಮಗೆಲ್ಲರಿಗೂ ಒಳ್ಳೆಯದನ್ನೇ ಮಾಡ್ತದೆ’ ಎಂಬ ಧನಾತ್ಮಕ ಚಿಂತನೆ ಮೂಡ್ತದೆ. ಕಾಲೋ ಜಗದ್ಭಕ್ಷಕಃ .ಅಂದರೆ ‘ಕಾಲ ಜಗತ್ತಿನ ಎಲ್ಲವನ್ನೂ ತಿಂದು ತೇಗುವವ’ ಎಂದರ್ಥ ಕಾಲವು ಎಲ್ಲವನ್ನೂ ಕಬಳಿಸುತ್ತಲೇ ಇರುತ್ತದೆ. ಜೀವನದಲ್ಲಿ ಅದೆಷ್ಟೋ ಸಿಹಿ – ಕಹಿ ಘಟನೆಗಳು ಸಂಭವಿಸಿರುತ್ತವೆ. ನಮ್ಮದು ಸಿಹಿಯನ್ನು ಮರೆಸಲು ಸಿದ್ಧವಿಲ್ಲದ , ಕಹಿಯನ್ನು ಮರೆಯಲು ಸಾಧ್ಯವಾಗದ ಮನಸ್ಥಿತಿ. ಆದರೆ ಸಮಯವು ಯಾವ ಬೇಧವನ್ನೂ ತೋರದೆ ಎಲ್ಲವನ್ನೂ ಮರೆಸುತ್ತದೆ” ಎಂದು ಒದರುತ್ತಲೇ ಇದ್ದೆ. ನನ್ನ ಮಾತು ಆರರ ವಯಸ್ಸಿನ ಕಿಶನ್ ಗೆ ಅರ್ಥವಾಗದ ಹಂತಕ್ಕೆ ತಲುಪಿದ್ದು ನನ್ನರಿವಿಗೆ ಬರುವ ಮೊದಲೇ ಕಿಶನ್ ಹೂವಿನ ಗಿಡದಲ್ಲಿ ಕುಳಿತಿದ್ದ ಪಾತರಗಿತ್ತಿಯ ಬೆನ್ನು ಹತ್ತಿದ್ದ. ಮರುದಿನ ಬೆಳಗ್ಗೆ ಅಪ್ಪನಿಗೆ ಕರೆ ಮಾಡಿ ಮಾತನಾಡುತ್ತಿದ್ದ ಕಿಶನ್ ಇಲ್ಲಿನ ವಿದ್ಯಮಾನಗಳನ್ನು ಬಹಳ ಉತ್ಸಾಹದಲ್ಲಿ ವರ್ಣಿಸುತ್ತಿದ್ದ. ಆಗ ಅಲ್ಲಿಂದ ಶ್ರೀರಾಮ “ಕಿಶೂ …….. ನಿನಗಲ್ಲಿ ಮಜವೋ ಮಜ ಅಲ್ವಾ… ನನಗಿಲ್ಲಿ ಯಾರಿಲ್ಲ. ತುಂಬ ಬೋರಾಗ್ತಿದೆ. ಅಳ್ಬೇಕು ಅನಿಸ್ತಿದೆ” ಎಂದ. ಕಿಶನ್ “ಅಪ್ಪಾ ಬೇಸರ ಮಾಡ್ಕೊಳ್ಬೇಡಿ. ಈ ಸಮಯವು ಕಳೆದು ಹೋಗ್ತದೆ” ಎಂದು ಮುದ್ದು ಮುದ್ದಾಗಿ ಹೇಳಿದಾಗ ನಮಗೆಲ್ಲ ನಗಬೇಕೋ ಅಳಬೇಕೋ ಎಂದರಿವಾಗದ ಪರಿಸ್ಥಿತಿ. ಹೌದಲ್ಲಾ…… ‘ಈ ಸಮಯವು ಕಳೆದು ಹೋಗುತ್ತದೆ’ ಕೊರೋನಾ ಮುಗಿದು ಎಲ್ಲೆಡೆ ಶಾಂತಿ ನೆಲೆಸುತ್ತದೆ. ಮಗಳು , ಮೊಮ್ಮಗ ಅಮೇರಿಕಾ ಹೋಗುತ್ತಾರೆ. ಮತ್ತೆ ಅವರನ್ನು ಕಾಣಲು ಅದೆಷ್ಟು ಕಾಲ ಕಾಯಬೇಕೋ….. ಮತ್ತೆ ಏಕಾಂಗಿತನ……. ಮತ್ತೆ ವಾರಕ್ಕೊಮ್ಮೆ ಬರುವ ಮಗ , ಸೊಸೆ, ಮೊಮ್ಮಕ್ಕಳ ನಿರೀಕ್ಷೆ…….. ಇದುವೇ ಜೀವನ . ಕಾಲಾಯ ತಸ್ಮೈ ನಮಃ ~~~~

ಕಥಾಯಾನ Read Post »

ಕಥಾಗುಚ್ಛ

ಗೂಡು ಅದೊಂದು ಸಾದಾರಣವಾದ ಕೆಂಪು ಹೆಂಚಿನ ಮನೆ. ಇತ್ತ ದೊಡ್ಡದೂ ಅಲ್ಲ,ಅತ್ತ ಚಿಕ್ಕದೂ ಅಲ್ಲ,ಅಂತಹುದು. ಮನೆಯ ಮುಂದೆ ಒಂದಷ್ಟು ದಾಸವಾಳ,ಕಣಗಿಲೆ.ನೀಲಿ ಗೊರಟೆ ಹೂವಿನ ಗಿಡಗಳು. ಪುಟ್ಟ ಕಾಂಪೋಂಡ್,ಹಿತ್ತಲಲಿ ಬಟ್ಟೆ ತೊಳೆಯುವ ಕಲ್ಲು,ಒಂದು ನುಗ್ಗೆ ಮರ,ಬಚ್ಚಲು ನೀರು ಹೋಗುವ ಚರಂಡಿಗೆ ಹೊಂದಿಕೊಂಡಂತೆ ಹರಡಿಕೊಂಡ ಬಸಳೆ ಬಳ್ಳಿ. ಆ ಮನೆಯಲ್ಲಿ ಇದ್ದವರು ಇಬ್ಬರೆ,ಅವನು-ಅವಳು. ಅವರ ಮದುವೆಯಾಗಿ ಎರಡು ವರ್ಷವಾಗಿತ್ತು.ಪ್ರಶಾಂತವಾಗಿ ಹರಿಯುವ ನದಿಯಂತೆ ಬದುಕು ಸಾಗುತ್ತಿತ್ತು.ಅವನು ಬೆಳಿಗ್ಗೆ ಬೇಗಗ ಏಳುತ್ತಿದ್ದ.ತಣ್ಣೀರ ಸ್ನಾನ ಮಾಡಿ ಅಂಗಳದ ಗಿಡಗಳಿಂದ ಹೂ ಬಿಡಿಸಿ ತಂದು ದೇವರ ಗೂಡಿನ ಪಟಗಳಿಗಿಟ್ಟು, ಗಟ್ಟಿಯಾಗಿ ಮಂತ್ರ ಹೇಳುತ್ತ ಪೂಜೆ ಮಾಡುತ್ತಿದ್ದ. ಅಷ್ಟರಲ್ಲವಳು ಬಚ್ಚಲು ಹಂಡೆಗೆ ಉರಿಹಾಕಿ,ಕಾಫಿಗಿಟ್ಟು ಕೆಲಸ ಶುರು ಮಾಡುತ್ತಿದ್ದಳು. ತಿಂಡಿ ತಿಂದವನು ಕ್ಯಾರಿಯರ್ ಹಿಡಿದು ಆಫೀಸಿಗೆ ಹೊರಟರೆ ಅವಳಿಗೆ ನಿರಾಳ. ಕೆಲಸವೆಲ್ಲ ಮುಗಿಸಿ, ಹಿತ್ತಲಿನ ನುಗ್ಗೆಮರದ ಕೆಳಗೆ ಕುಳಿತು ಕತೆ ಪುಸ್ತಕದೊಳಗೊ ಅಥವಾ ತವರಿನ ನೆನಪೊಳಗೊ ಮುಳುಗುತ್ತಿದ್ದಳುಆ ನೆನಪುಗಳೊಳಗೆ ಸುಖವಿತ್ತು.ತವರು ಮನೆಯ ಹಿತ್ತಲಿಗೆ ಆತುಕೊಂಡಂತೆ ಹರಿಯುತ್ತಿದ್ದ ಭದ್ರಾ ನದಿ,ವಿಶಾಲವಾದ ಮನೆಯಂಗಳದಲ್ಲಿನ ಮಾವಿನ ಮರ,ಸಂಪಿಗೆಮರ,ಸೀಬೆಮರ, ತೂಗುಹಲಗೆ ಉಯ್ಯಾಲೆ,ಕಾಡು ಗಿಡಗಳಪೊದೆ,ಮಲ್ಲಿಗೆ ಹಂದರ,ಎಲ್ಲ ಅಂದರೆ ಎಲ್ಲ ನೆನಪಾಗಿ ಕಾಡುತ್ತಿದ್ದವು! ಅವಳಿಗೆ ಮಾತು ಬೇಕಿತ್ತು. ಯಾವಾಗಲೂ ಗಲಗಲ ಅನ್ನುವ ಜನರು ಸುತ್ತ ಇರಬೇಕು ಅನಿಸುತ್ತಿತ್ತು. ಸೃಷ್ಠಿಯ ಪ್ರತಿ ವಸ್ತುವಿನಲ್ಲೂ ಅವಳಿಗೆ ಅಧಮ್ಯ ಕುತೂಹಲ. ಅವಳು ಎಲ್ಲವನ್ನೂ,ಎಲ್ಲರನ್ನೂ ಪ್ರೀತಿಸುತ್ತಿದ್ದಳು.ಅವನು ಆಫೀಸಿಗೆ ಹೋದ ತಕ್ಷಣ ಮನೆಯ ಎಲ್ಲ ಕಿಟಕಿ-ಬಾಗಿಲುಗಳನ್ನು ತೆರೆದು ಒಳಬರುತ್ತಿದ್ದ ಸೂರ್ಯನ ಬೆಳಕಿನಲ್ಲಿ ಮೀಯುತ್ತ,ಹಿತವಾದ ಗಾಳಿಗೆ ಮೈಯೊಡ್ಡಿ ಕನಸು ಕಾಣುತ್ತಿದ್ದಳು.. ಆದರವನು ಇದಕ್ಕೆ ತದ್ವಿರುದ್ದ. ಮೊದಲಿನಿಂದಲೂ ಅವನು ಮಿತಭಾಷಿ. ಆಡಿದರೂ ಅಗತ್ಯವಿದ್ದಷ್ಟು. ತನ್ನ ಆಫೀಸು,ಬೆಳಗಿನ ಪೂಜೆ,ಸಂಜೆಯ ಸಂಧ್ಯಾವಂದನೆಗಳಲ್ಲಿ ಕಳೆದು ಹೋಗುತ್ತಿದ್ದ. ರಜಾದಿನಗಳಲ್ಲಿ ಮನೆಯ ಎಲ್ಲ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಒಳಗಿನ ಧಗೆಯಲ್ಲಿ ಬೇಯುತ್ತಲೇ ನಿರಾಳವಾಗಿ ರಾಮಕೃಷ್ಣಪರಮಹಂಸರ ಪುಸ್ತಕಗಳನ್ನೊ ಭಗವದ್ಗೀತೆಯ ಸಾರವನ್ನೋ ಓದುತ್ತ ಕೂರುತ್ತಿದ್ದ. ಅವರಿಬ್ಬರೂ ಎರಡು ದೃವಗಳಾಗಿದ್ದರು. ಅವಳಿಗೆ ಅವನ ಬಗ್ಗೆ ವಿಚಿತ್ರ ಕುತೂಹಲ: ಅವನ ದೇವರ ಪೂಜೆ,ಆ ತನ್ಮಯತೆ,ಅಂತರ್ಮುಖತನ,ಪಾಪ-ಪುಣ್ಯಗಳ ಸ್ವರ್ಗ ನರಕಗಳ ಬಗೆಗಿನ ಅಪಾರ ನಂಬಿಕೆಗಳನ್ನು ಕಂಡು ಆಶ್ಚರ್ಯ! ಅವನಿಗೆ ಸಣ್ಣಪುಟ್ಟ ವಿಷಯಗಳಲ್ಲೂ ಅವಳು ಪಡೆಯುತ್ತಿದ್ದ ಸುಖದ ಬಗ್ಗೆ ತಿರಸ್ಕಾರ.ಅವಳ ಅತಿಯೆನಿಸುವಷ್ಟು ಪ್ರೀತಿ,ಜೋರಾಗಿ ಮಾತನಾಡಿದರೆ ಸಾಕು, ಕಣ್ಣು ತುಂಬಿ ಬರುವ ಸೂಕ್ಷ್ಮತೆ ಕಂಡು ಬೇಸರ. ಇಷ್ಟಿದ್ದರೂ ಅವರ ನಡುವೆ ಮಾತುಗಳಿಗೆ ನಿಲುಕದಪ್ರೀತಿಯಿತ್ತು. ಬದುಕು ಹೀಗೇ ಸಾಗುತ್ತಿರುವಾಗ, ಅದೊಂದು ದಿನನ ಆ ಗುಬ್ಬಚ್ಚಿಗಳು ಅವಳನ್ನು ಸೆಳೆದವು.ಅಡುಗೆ ಮನೆಯ ಪಕ್ಕದಲ್ಲಿದ್ದ ಸ್ಟೋರ್ ರೂಮಿನ ಸೂರಿನಲ್ಲಿ ಅವು ಗೂಡು ಕಟ್ಟಲು ಪ್ರಾರಂಬಿಸಿದ್ದವು. ಮೊದಮೊದಲು ಅವಳು ಅವುಗಳನ್ನು ಗಮನಿಸಿರಲಿಲ್ಲ. ಬರುಬರುತ್ತ ಅವುಗಳ ಕಿಚಕಿಚ ಶಬ್ದ ಜಾಸ್ತಿಯಾದಂತೆ ಅವಳ ಕಣ್ಣಿಗವು ಬಿದ್ದವು. ಬಂಗಾರದ ಬಣ್ಣದ ಒಣ ಹುಲ್ಲುಕಡ್ಡಿಗಳನ್ನು ಬಾಯಲ್ಲಿ ಕಚ್ಚಿತಂದು ಸೂರಿನಲ್ಲಿ ಸಿಗಿಸುತ್ತಿದ್ದವು..ಅವು ಕಿಟಕಿಯಲ್ಲಿ ಕೂತು ಅರ್ಥವಾಗದ ಬಾಷೆಯಲ್ಲಿ ಮಾತಾಡುವುದು,ಪುರ್ರನೆ ಹಾರಿಹೋಗಿ ಹುಲ್ಲು ತರುವುದು,ಕೊಕ್ಕಿನಿಂದ ೊಂದೊಂದೇ ಹುಲ್ಲು ಸೇರಿಸಿ ಕಲಾತ್ಮಕವಾಗಿ ಗೂಡು ಕಟ್ಟುವುದು,ಇವನ್ನೆಲ್ಲ ನೋಡುವುದು ಅವಳಿಗೆ ಹೊಸ ರೀತಿಯ ಅನುಭವ ಅನಿಸಿತು.ಆ ಪುಟ್ಟ ಹಕ್ಕಿಗಳ ಬದುಕು ಅದ್ಬುತವಾಗಿ ತೋರತೊಡಗಿತು. ಅವುಗಳ ನಿತ್ಯದ ಚಟುವಟಿಕೆಗಳನ್ನು ನೋಡುವುದರಲ್ಲಿ ಅವಳೆಷ್ಟು ತನ್ಮಯಳಾಗಿ ಬಿಟ್ಟಳೆಂದರೆ,ಅವನು ಆಫೀಸಿಗೆ ಹೋದ ತಕ್ಷಣ ಸ್ಟೋರಿನ ಬಾಗಿಲ ಬಳಿ ಬಂದು ಕೂರುತ್ತಿದ್ದಳು. ಪ್ರತಿನಿತ್ಯ ಅಕ್ಕಿಯ ಕಾಳುಗಳನ್ನುಅವುಗಳಿಗೋಸ್ಕರ ತಂದು ಹಾಕುವುದು,ಅದನ್ನು ತಿನ್ನುವಂತೆ ಹುಶ್ಹುಶ್ ಎಂದು ಸಂಕೇತದಲ್ಲಿ ಮಾತಾಡಿಸುವುದು ಮಾಮೂಲಿಯಾಗುತ್ತಾಹೋಯಿತು. ದಿನಕಳೆದಂತೆ ಗುಬ್ಬಚ್ಚಿಗಳ ಗೂಡು ಪೂರ್ಣವಾಯಿತು. ಸಂಜೆ ಅವು ಬಂದಾಗ ಸ್ಟೋರಿನ ಬಾಗಿಲು ಹಾಕಿದ್ದರೆ ಕೊಕ್ಕಿನಿಂದ ಕುಕ್ಕಿ ಶಬ್ದ ಮಾಡುತ್ತಿದ್ದವು. ಆಗವಳು ಓಡಿಹೋಗಿ ಬಾಗಿಲು ತೆಗೆದ ತಕ್ಷಣ ಗೂಡು ಸೇರುತ್ತಿದ್ದವು. ಬೆಳಿಗ್ಗೆ ಎದ್ದು ಕಿಟಕಿ ತೆಗೆಯುವುದು ಒಂದು ಕ್ಷಣ ತಡವಾದರೆ ಸಾಕು ಕಿಚಕಿಚ ಎಂದು ಹುಯಿಲೆಬ್ಬಿಸುತ್ತಿದ್ದವು. ಹೀಗವಳು ಗುಬ್ಬಚ್ಚಿಗಳ ಪ್ರಪಂಚದಲ್ಲಿಬೆರೆಯುತ್ತಹೋದಳು. ಹೀಗಿರುವಾಗ ಅವಳು ಎರಡು ತಿಂಗಳು ಮುಟ್ಟಾಗಲಿಲ್ಲ. ಆಸ್ಪತ್ರೆಯಲ್ಲಿ ಲೇಡಿ ಡಾಕ್ಕರ್ ನಗುತ್ತಾ ನೀವು ತಂದೆಯಾಗಲಿದ್ದೀರಿ ಅಂದಾಗ ಅವನ ಮುಖ ಅರಳಿತ್ತು. ಅವು ಅಷ್ಟೊಂದು ಸಂತೋಷ ಪಟ್ಟಿದ್ದನ್ನು ಈ ಎರಡು ವರ್ಷಗಳಲ್ಲಿ ಅವಳು ಒಮ್ಮೆಯೂ ನೋಡಿರಲಿಲ್ಲ..ಆಗಿನಿಂದ ಅವನು ಬದಲಾಗತೊಡಗಿದ. ಅವಳೊಡನೆ ಹೆಚ್ಚು ಮಾತಾಡತೊಡಗಿದ. ಕಣ್ಣಲ್ಲಿ ಕಣ್ಣಿಟ್ಟು ಅವಳ ಆರೈಕೆ ಮಾಡತೊಡಗಿದ. ಅವಳ ಆರೋಗ್ಯಕಾಗಿ ಕಂಡಕಂಡ ದೇವರುಗಳಿಗೆ ಅರ್ಚನೆ ಮಾಡಿಸತೊಡಗಿದ. ಅವನ ಪ್ರೀತಿಯ ನಡವಳಿಕೆ,ಗುಬ್ಬಚ್ಚಿಗಳ ಗೂಡು ಅವಳ ಬದುಕನ್ನು ಸುಂದರಗೊಳಿಸತೊಡಗಿದವು. ಒಂದು ಬಾನುವಾರ ಮದ್ಯಾಹ್ನ ಅವನು ಮನೆಯನ್ನು ಸ್ವಚ್ಚಗೊಳಿಸುತ್ತಿದ್ದ. ಒಂದು ಉದ್ದನೆಯ ಬಿದಿರು ಕಡ್ಡಿಗೆ ಪೊರಕೆ ಕಟ್ಟಿ ಸೂರಿನ ಜೇಡರ ಬಲೆಯನ್ನು ತೆಗೆಯಹತ್ತಿದ. ಸ್ಟೋರಿಗೆ ಬಂದಾಗ ಆ ಗುಬ್ಬಚ್ಚಿ ಗೂಡು ಅವನ ಕಣ್ಣಿಗೆ ಬಿತ್ತು. ಮನೆಯೊಳಗಿದಗದ ಗೂಡು ಅವನಿಗೆ ಅಸಹ್ಯವಾಗಿಯೂ ಅಪಶಕುನವಾಗಿಯೂ ಕಂಡಿತು. ಅದನ್ನು ತೆಗೆಯಲು ಪ್ರಯತ್ನಿಸಿದಾಗ ಅವಳು ತಡೆದಳು. ಆ ಗೂಡನ್ನು ಮುಟ್ಟದಂತೆ ಅವನನ್ನು ವಿನಂತಿಸಿದಳು. ಅದೇಕೋ ಅವನು ಅವಳ ಮಾತಿಗೆ ಕಿವಿಗೊಡದೆ ಗೂಡನ್ನು ಕೋಲಿನಿಂದ ತಳ್ಳಿದ. ತಳ್ಳಿದ ರಭಸಕ್ಕೆ ಗೂಡು ನೆಲಕ್ಕೆ ಬಿತ್ತು.ಅದರೊಳಗಿದ್ದ ಬಿಳಿಯ ಬಣ್ಣದ ಪುಟ್ಟಮೊಟ್ಟೆಗಳು ಒಡೆದು ಹೋದದ್ದನ್ನು ನೋಡಿದ ಅವಳು ಬಿಕ್ಕಿಬಿಕ್ಕಿ ಅಳ ತೊಡಗಿದಳು. ಅವನ ಯಾವ ಸಮಾಧಾನವೂ ಅವಳನ್ನು ಸಣತೈಸಲಾಗಲಿಲ್ಲ.಻ವನು ಕಳಚಿ ಬಿದ್ದ ಗೂಡು ,ಒಡೆದ ಮೊಟ್ಟೆಗಳನ್ನು ಹೊರಗೆಸೆದು ಬಂದರೂ ಅವಳ ಻ಳು ನಿಂತಿರಲಿಲ್ಲ.ಬೇಸಿಗೆಯ ಧಗೆಗೆ,ಅತ್ತ ಸುಸ್ತಿಗೆ ತಲೆ ಸುತ್ತಿದಂತಾಗಿ ಕೆಳಗೆ ಬಿದ್ದಳು. ಅವಳನ್ನು ಎತ್ತಿಕೊಂಡುಹೋಗಿ ಹಾಸಿಗೆಯಲ್ಲಿ ಮಲಗಿಸಿ,ಮುಖಕ್ಕೆ ನೀರು ಚುಮುಕಿಸಿದ.ಪ್ರಜ್ಞೆ ಮರಳಿದ ಅವಳ ಕಣ್ಣುಗಳಲ್ಲಿದ್ದ ಭಾವನೆಗಳನ್ನು ಅವನಿಂದ ಓದಲಾಗಲಿಲ್ಲ. ಅವಳ ಸೂಕ್ಷ್ಮ ಮನಸ್ಸಿಗೆ ಒಡೆದ ಮೊಟ್ಟೆಗಳ ಚಿತ್ರವನ್ನು ಮರೆಯಲಾಗಲಿಲ್ಲ. ಒಂದು,ಎರಡು,ಮೂರು..ಹೀಗೆ ದಿನಗಳು ಉರುಳುತ್ತ ಹೋದವು.ಅವಳಿಗ ಮಾತು ಕಡಿಮೆ ಮಾಡಿದ್ದಳು. ಅವನ ಪ್ರಶ್ನೆಗಳಿಗೆ ಮೌನವೊಂದೇ ಉತ್ತರವಾಗ ತೊಡಗಿತ್ತು. ಅವಳ ಶೂನ್ಯದತ್ತ ನೆಟ್ಟದೃಷ್ಠಿ, ಅನ್ಯಮನಸ್ಕತೆಯಿಂದಾಗಿ ಅವನ ಻ಸಹನೆ ಹೆಚ್ಚುತ್ತ ಹೋಯಿತು. ಮನಸ್ಸು ಸ್ಥಿಮಿತದಲಿಟ್ಟುಕೊಳ್ಳಲು ಮತ್ತಷ್ಟು ಪೂಜೆ-ಪುನಸ್ಕಾರಗಳಲ್ಲಿ ಹೊತ್ತು ಕಳೆಯ ತೊಡಗಿದ. ಅವನ ಮೌನಕ್ಕೆ ಅವಳಮೌನವೂ ಸೇರಿ ಆ ಮನೆಯಲ್ಲಿ ಶಬ್ದಗಳು ಕಳೆದುಹೋದವು. ಹೀಗಾಗಲೆ ಅವಳಿಗೆ ನಾಲ್ಕು ತಿಂಗಳು ತುಂಬುತ್ತ ಬಂದಿತ್ತು.ಒಂದು ಸಂಜೆ ಅವನು ಆಫೀಸಿನಿಂದ ಬಂದಾಗವಳು ಸ್ಟೋರ್ ರೂಮಿನ ಬಾಗಿಲಲ್ಲಿ ಬಿದ್ದಿದ್ದಳು. ಅವಳನ್ನು ಎತ್ತಕೊಂಡು ಆಸ್ಪತ್ರೆಗೆ ಓಡಿ ಹೋದ. ಡಾಕ್ಟರ್ ಅವಳಗೆ ಗರ್ಭಪಾತವಾಗಿದೆ, ತಕ್ಷಣಕ್ಕೆ ಮತ್ತೆ ಗರ್ಬಿಣಿಯಾದರೆ ಅಪಾಯವಿದೆ ಹುಶಾರಾಗಿ ನೋಡಿಕೊಳ್ಳಿ ಅಂದರು. ಒಂದಷ್ಟು ದಿನಗಳ ಆಸ್ಪತ್ರೆಯ ವಾಸದ ನಂತರ ಮತ್ತೆ ಮನೆಗೆಬಂದವಳೆಷ್ಟು ಕಂಗೆಟ್ಟಿದ್ದಳೆಂದರೆ ಯಾವಾಗಲೂ ಸೂರು ನಿಟ್ಟಿಸುತ್ತ ಮಲಗಿರುತ್ತಿದ್ದಳು. ಕಣ್ಣು ಬಿಟ್ಟರೆ ಸಾಕು ಅವನು ಗೂಡು ಕಿತ್ತೆಸೆದಂತೆ,ಸಂಜೆ ಗೂಡು ಕಾಣದೆ ತಾರಾಡುತ್ತಿದ್ದ ಗುಬ್ಬಚ್ಚಿಗಳ ದೃಶ್ಯವೇ ಕಾಣುತ್ತಿತ್ತು. ಹಗಲು-ರಾತ್ರಿ ಬಾಗಿಲುಕಿಟಕಿಗಳನ್ನು ಹಾಕಿಕೊಂಡೇ ಮಲಗಿರುತ್ತಿದ್ದಳು. ರಾತ್ರ ಅವನು ದೀಪ ಹಾಕಿದರೆ ಅವಳದನ್ನು ಆರಿಸಿ ಮಾತಾಡದೆ ಮಲಗುತ್ತಿದ್ದಳು. ಅವಳೀಗ ಕತ್ತಲನ್ನು ಆರಿಸಿಕೊಂಡಿದ್ದಳು. ಅವಳ ಪರಿಸ್ಥಿತಿಯನ್ನು ಕಂಡು ಅವನು ದಿಗ್ಬ್ರ್ರಮೆಗೊಳಗಾಗಿದ್ದ. ಻ವಳ ಈ ಸ್ಥಿತಿಗೆ ತಾನೇಕಾರಣವೇ ಎಂಬ ಪ್ರಶ್ನೆ ಅವನನ್ನ ಕಾಡತೊಡಗಿತು. ಪಾಪಪುಣ್ಯಗಳ ಭೀತಿಯಲ್ಲೇ ಬೆಳೆದವನಿಗೆ ತಾನು ಒಡೆದ ಮೊಟ್ಟೆಗಳಿಗೂ,ಅವಳ ಗರ್ಭಪಾತಕ್ಕೂ ಸಂಬಂದವಿರಬಹುದೆನಿಸಿ ಪಾಪಪ್ರಜ್ಞೆಯಲಿ ನರಳತೊಡಗಿದ. ಮಾತಾಡಲು ಪ್ರಾರಂಬಿಸಿದವನು ಮತ್ತೆ ಮೌನಿಯಾದ. ಆ ಪುಟ್ಟ ಮನೆಯೊಳಗೆ ಮಾತುಗಳಿಲ್ಲವಾಗಿ ವಿಷಾದದ ನೆರಳು ಆವರಿಸ ತೊಡಗಿತು. ಅವನೀಗ ಮನೆಯ ಎಲ್ಲ ಕೆಲಸಗಳನ್ನೂ ತಾನೇ ಮಾಡುತ್ತಾನೆ. ಬೆಳಿಗ್ಗೆ ಅವಳಿಗೆ ತಿಂಡಿ ಕೊಟ್ಟು ಆಫೀಸಿಗೆ ಹೋಗುತ್ತಾನೆ. ಹೋಗುವ ಮುಂಚೆ ಸ್ಟೋರಿನ ಕಿಟಕಿ ಬಾಗಿಲುಗಳನ್ನು ತೆರೆದಿಡುತ್ತಾನೆ. ಸಂಜೆ ತಿರುಗಿ ಬಂದವನು ಅವಳಿಗೆ ತಿನ್ನಲು ಏನಾದರು ಕೊಟ್ಟು ಸ್ಟೋರ್ ರೂಮಿಗೆ ಹೋಗುತ್ತಾನೆ,ತಾನೇ ಕಿತ್ತು ಹಾಕಿದ ಗೂಡಿನ ವಾರಸುದಾರ ಗುಬ್ಬಚ್ಚಿಗಳ ಹಾದಿ ಕಾಯುತ್ತಾನೆ. ಪ್ರತಿನಿತ್ಯವೂ ಅವನು ಹಾಕಿಟ್ಟ ಅಕ್ಕಿ ಕಾಳುಗಳು ಹಾಗೆ ಬಿದ್ದಿವೆ.ಓ! ದೇವರೆ ,ಮತ್ತೆ ಆಗುಬ್ಬಚ್ಚಿಗಳು ಬರಲಿ, ಈ ಮನೆಯೊಳಗೆ ಗೂಡು ಕಟ್ಟಲಿ ಎಂದು ಪ್ರಾರ್ಥಿಸುತ್ತಾನೆ.ಆದರೆ, ತೆರೆದ ಕಿಟಕಿಗಳು ತೆರೆದೇ ಇವೆ! ******** ಕು.ಸ.ಮಧುಸೂದನ

Read Post »

ಕಥಾಗುಚ್ಛ

ಕಥಾಯಾನ

ಕಕ್ಷೆ ಡಾ.ಅಜಿತ್ ಹರೀಶಿ [11:59 am, 31/05/2020] AJITH HARISHI: ‘ಹಲೋ, ಡಾಕ್ಟ್ರೇ, ನಮ್ಮನೆ ಕೆಂಪಿಗೆ ಹೆರಿಗೆ ನೋವು ಬಂದದ್ರಾ, ಈಗ್ಲೆ ಬತ್ರ?’ ಫೋನ್ ಎತ್ತಿದೊಡನೆ ಹೇಳಿ, ನನ್ನುತ್ತರಕ್ಕೆ ಕಾಯ್ದಿತ್ತು ಆ ಸ್ವರ. ‘ನಾ ಹೆರಿಗೆ ಡಾಕ್ಟರ್ ಅಲ್ಲ, ಮಾರಾಯ್ರ,’ ಅಂದೆ. ‘ಹೋಯ್, ನೀವು ನಮ್ ದನೀನ ಡಾಕ್ಟರ ಅಲ್ದ? ನಾ ಅವ್ರಿಗೆ ಫೋನು ಮಾಡಿದ್ದಾಗಿತ್ತು’. ಫೋನ್ ಕಟ್ ಆಗಿತ್ತು. ** ಆಗಷ್ಟೇ ಆಸ್ಪತ್ರೆ ಆರಂಭಿಸಿದ್ದ ದಿನಗಳು… ಹುಟ್ಟಿದೂರಿನಲ್ಲೇ ವೈದ್ಯವೃತ್ತಿ ಆರಂಭಿಸಿದ್ದರಿಂದ ಉಳಿದ ತೊಡಕುಗಳೇನೂ ಇರಲಿಲ್ಲ. ಹೊಸ ಉತ್ಸಾಹ, ಅಪರಿಮಿತ ಆತ್ಮವಿಶ್ವಾಸ ಎನ್ನಬಹುದಾಗಿದ್ದ ದಿನಗಳು. ಮನೆ ಬಾಗಿಲಿಗೇ ಸೇವೆ ಕೊಡುವ ಹುಮ್ಮಸ್ಸು ಬೇರೇ..! ಎಲ್ಲಾ ನನ್ನ ಸುತ್ತಲೇ ಸುತ್ತುತ್ತಿದೆ, ಅನಿಸುವಂತೆ ನಡೆಯುತ್ತಿತ್ತು. ಅಂತಹದ್ದೊಂದು ದಿನ… ಬಂತಲ್ಲ ಇನ್ನೊಂದು ಫೋನ್ ಕಾಲ್… “ಹಲೋ..” “ಹಲೋ..ನಾನು ವಾಸುದೇವ ರಾವ್, ಪಂಚಾಯತ್ ಮೆಂಬರ್ರು” “ಗೊತ್ತಾಯ್ತು ಹೇಳಿ ಸರ್” “ಗುಡ್, ಗುಡ್. ಹೊಸದಾಗಿ ಬಂದ್ರೂ ಆಗ್ಲೆ ನನ್ನ ಬಗ್ಗೆನೂ ತಿಳ್ಕೊಂಡು ಬಿಟ್ರಾ..” “ನಿಮಗೆ ನನ್ನ ಬಗ್ಗೆ ಗೊತ್ತಿಲ್ಲದಿರಬಹುದು.. ನಿಮ್ ಬಗ್ಗೆ ನಂಗೊತ್ತು “ ನಾನು ಸಣ್ಣವನಿದ್ದಾಗ ಅವರನ್ನು ನೋಡಿದ್ದೆ. ಅವರೂ ನನ್ನನ್ನು ನೋಡಿದ್ದರು. ಆದರೆ ನಮ್ಮ ಒಡನಾಟ ಕಡಿಮೆ ಇತ್ತು. “ಡಾಕ್ಟರೇ.. ಅರ್ಜೆಂಟ್ ನಿಮ್ಮ ಕಿಟ್ ತಗೊಂಡು ಬನ್ನಿ ಸೀರಿಯಸ್..” ಹಳ್ಳಿಗಳ ಸ್ಥಿರ ದೂರವಾಣಿ ಕರೆ ಕಟ್ಟಾಗೋದು ಹೊಸ ವಿಷಯವೇನಲ್ಲ. ಹಿರಿಯ ವೈದ್ಯರೊಬ್ಬರು ಹಿಡಿಕೆಯಿರುವ, ಆಯತಾಕಾರದ ತಮ್ಮ ಕಿಟ್ ಒಂದನ್ನು ನೀಡಿ ಪ್ರೀತಿಯಿಂದ ಶುಭ ಹಾರೈಸಿದ್ದರು. ಹಾಗಾಗಿ ಹೊಸಕಾಲದ ಬ್ಯಾಗ್ ಖರೀದಿಸದೇ ಅದರಲ್ಲೇ ಔಷಧ ಒಯ್ಯುತ್ತಿದ್ದೆ. ಅದಂತೂ ತಾನು ರೆಡಿ ಅಂತ ತೊಡೆ ಏರಿತ್ತು. ಅವಶ್ಯವಾಗಿ ಇರಬಹುದಾದ ತುರ್ತು ಔಷಧಗಳೆಲ್ಲ ಇದೆಯಾ ಅಂತ ಮತ್ತೊಮ್ಮೆ ಪರೀಕ್ಷಿಸಿ, ನನ್ನ ಮೆಚ್ಚಿನ ಕೆಂಪು ಬಣ್ಣದ ಕ್ಯಾಲಿಬರ್ ಬೈಕ್ ಏರಿದೆ. ಜೊತೆಗೆ ಪೆಟ್ರೋಲ್ ಟ್ಯಾಂಕ್ ನ ಮೇಲೆ, ಆಚೀಚೆ ಅಲ್ಲಾಡುವ ಹಿರಿಯರು ನೀಡಿದ ಔಷಧಗಳ ಪೆಟಾರಿ..! *   * “ಓಹ್ ..! ಬಂದ್ರಾ ಬನ್ನಿ..ಬನ್ನಿ.. ಆಸರಿಗೆ ಸದ್ಯ? , ಕಮಲೀ ನೀರು ಕಾಸೆ..” ಮಹಾಬಲರಂತೂ ಅರಾಮಿದ್ದಾರೆ ಅಂತ ಲೆಕ್ಕ ತೆಗೆದೆ. ಕಮಲ ಬಹುಷಃ ಹೆಂಡತಿಯಿರಬೇಕು ಅಂತ ಯೋಚನೆ ಸಾಗುತ್ತಿತ್ತು. ತಂದೆ ಅಥವಾ ತಾಯಿಗೆ ಆರಾಮಿಲ್ಲವೇನೋ.. ಇಲ್ಲಾ, ಅರ್ಜೆಂಟ್ ಅಂದರು ಎಂದರೆ ಮಗಳಿಗೆ..ಛೇ.! ಓ ಮನಸೇ ವಸಿ ನಿಲ್ಲಪ್ಪ ಅಂದೆ. ಹೆಬ್ಬಾಗಿಲಿಗೆ ಅಖಂಡವಾಗಿ ನಿಂತ ರಾಯರನ್ನು ದಾಟುವ ದಾರಿಯ ಸಾಧ್ಯತೆಯ ಬಗ್ಗೆಯೂ ಮನಸ್ಸು ಹುಡುಕುತ್ತಿತ್ತು. ಹತ್ತಿರವಾಗುತ್ತಿದ್ದಂತೆ ಸ್ವಲ್ಪ ಮನೆಯ ಪಕ್ಕಕ್ಕೆ ಜರುಗಿದರು. ಅವರು ಹಿಂಬಾಲಿಸಿ ಎನ್ನುವ ನೋಟದೊಂದಿಗೆ ಹೆಜ್ಜೆ ಹಾಕಿದರು.  “ನಮ್ಮ ಕಮಲಿಗೂ ಸರಿ ಅರಾಮಿಲ್ಲ .. ಆದರೂ ಮಾಡ್ತಾಳೆ ಪಾಪ. ಹಳ್ಳಿಯಲ್ಲಿ ಎಲ್ಲಾ ಹೀಗೆನೇ. ಸದ್ಯ ನಾವಿಬ್ಬರೇ, ಮಕ್ಕಳು ಪ್ಯಾಟೇಲಿ ಒದ್ತಾ ಇವೆ..!” ಅಲ್ಲಿಗೆ ಕೋಟ್ಯಾಧಿಪತಿ ಕ್ವಿಜ಼್ ನಿಂದ ಹೊರಬೀಳುವ ಸನಿಹಕ್ಕೆ ನಾನು ಬಂದಿದ್ದೆ. ಒಂದೇ ಲೈಫ್ ಲೈನ್ ಉಳಿದದ್ದು. ಆಡಿಯನ್ಸ್ ಪೋಲ್..! ಪಕ್ಕದ ಓರಿಯಲ್ಲಿರುವ ಮನೆಯ ಕೆಲಸದ ಆಳಿಗೆ ಅರಾಮಿಲ್ಲವೇನೋ ಅಂದುಕೊಂಡೆ. ನಿಜಕ್ಕೂ ಜನಸೇವಕ, ಅದಕ್ಕೇ ಇರಬೇಕು ಪದೇ ಪದೇ ಪಂಚಾಯತ್ ಚುನಾವಣೆಯಲ್ಲಿ ಆರಿಸಿ ಬರ್ತಾರೆ. “ಇನ್ನು ನನಗೂ ವಯಸ್ಸಾಯ್ತು, ಈ ಕೂಲಿಯವರ ನಂಬಿ ಏನೂ ಮಾಡ್ವಾಂಗಿಲ್ಲ. ಎರಡು ದಿನ ಕೆಲಸಕ್ಕೆ ಬಂದ್ರೆ ನಾಕು ದಿನ ರಜೆ ಮಾಡ್ತಾರೆ. ಇವತ್ತೂ ನಾನೇ ಒದ್ದಾಡುದೇಯಾ. ಪಂಚಾಯತ್ ಮೆಂಬರ್  ಮೀಟಿಂಗ್ ಬೇರೆ. ಮೊದ್ಲೆಲ್ಲಾ ಈ ಕೆಲಸದವ್ರು ಹತ್ತು ತಾಸು ಕೆಲಸ ಮಾಡ್ತಿದ್ರು. ಈಗ ಎಂಟು ತಾಸು ಅಷ್ಟೇಯಾ. ಮುಂದೆಲ್ಲಾ ಆರೇ ತಾಸೆನಾ?” ‘ಅಪರೂಪಕ್ಕೆ ಆಡಿಯನ್ಸ್ ಕೂಡ ತಪ್ಪಾಗುವುದುಂಟು ಮಾರ್ರೆ’ ಅಂತ ಗೋಳಿಬಜೆಯನ್ನು ಸಕತ್ತಾಗಿ ಮಾಡುವ ಬೈಂದೂರು ಮೂಲದ ಗೋಪಾಲ ಹೇಳಿದ ಮಾತು ನೆನಪಾಯ್ತು. ತರ್ಕವೆಂಬ ತಾಟಗಿತ್ತಿಯ ಹೆಡೆಮುರಿ ಕಟ್ಟಿ ಹಿಡಿದು ಕುಳ್ಳಿರಿಸಿದೆ. ಮನಸ್ಸು ಮುಗ್ಗರಿಸಿದ್ದು ಅವರಿಗೇನು ಗೊತ್ತಾಗಲಿಲ್ವಲ್ಲ ಸದ್ಯ.. * * “ಇಲ್ಲಿ ಬನ್ನಿ … ಕಮಲೀ ಬಿಸಿ ನೀರು, ಸಾಬೂನು ತಂದಿಡೇ..” ಕೊಟ್ಟಿಗೆಯಂತಹ ಮನೆ, ಅಲ್ಲಲ್ಲ ಕೊಟ್ಟಿಗೆಯೇ. ಕಿರಿಕಿರಿ ಕೊಡುವ ರೋಗಿಗೆ ಮಂಪರು ಹತ್ತುವ ಇಂಜೆಕ್ಷನ್ ನೀಡಲು ಹೋಗಿ, ತಾನೇ ಅಕಸ್ಮಾತ್  ಆಗಿ ಚುಚ್ಚಿಕೊಂಡ ವೈದ್ಯನಂತಾಗಿತ್ತು ನನ್ನ ಪರಿಸ್ಥಿತಿ. ಬವಳಿಕೆ ಬಂದಂತಾದರೂ ಸ್ವಲ್ಪ ಸುಧಾರಿಸಿಕೊಂಡೆ. “ನಾನು ದನದ ಡಾಕ್ಟ್ರಲ್ಲ ..!” “ನೀವು  …!” “ನಾನು ಅದೇ ಅಂದ್ಕಂಡೆ, ನಿಮ್ಮ ಮುಖಲಕ್ಷಣ ನೊಡಿಯೇ ಡೌಟ್ ಬಂತು”. ಮುಖದ ಗೆರೆಗಳ ಮೇಲೆ ಅಂದಾಜಿಸಿದ್ದ ರಾಯರು ಬಹು ದೊಡ್ಡ ಮುಜುಗರದಿಂದ ನನ್ನನ್ನು ಪಾರು ಮಾಡಿದ್ದರು. ಬರೀ ಮೆಂಬರ್ ಅಲ್ಲಾ ಇನ್ನೂ ಮೇಲಿನ ಹುದ್ದೆಗೆ ಹೋಗುವ ಪ್ರತಿಭೆ ಇದೆ ಅನ್ನಿಸಿತು. “ಬನ್ನಿ ಒಳಗೆ, ಒಳ್ಳೆದಾಯ್ತು ನೀವು ಬಂದದ್ದು. ದೇವರು ಕರಿಸಿದಾಂಗೆ ಬಂದ್ರಿ. ನಮ್ಮ ಕಮಲೀ ಅದೃಷ್ಟ , ಪ್ಯಾಟೆಗೆ ಹೊಂಟವಳು ಮಜ್ಜಾನ ಮೇಲೆ. ಚೊಲೋ ಆಯ್ತು. ಕೇಳ್ತ್ಯನೇ ಕಮಲೀ, ನಮ್ಮೂರಿಗೆ ಬಂದ ಹೊಸ ಡಾಕ್ಟ್ರು ನಿನ್ನ ನೋಡುಲೆ ಬಂಜ್ರು”. ಒಳಗಿನಿಂದ ಧ್ವನಿ…”ಯನಗೆಂತ ಸುಟ್ಟ ಅರ್ಜೆಂಟ್ ಇತ್ತಿಲ್ಲೆ…ಕಲಗಚ್ಚು ಕುಡಿಯ ಬದಲಿಗೆ ಅಡಿಕೆ ತೊಗರು ಕುಡದ ಎಮ್ಮೆಕರ ಬದಕ್ತ ಇಲ್ಯಾ ಹೇಳದೇ ಚಿಂತೆ. ಸುಮ್ಮನೆ ವಯಸ್ಸಾಗಿದ್ದೆಯಾ, ಯಾವುದು ಮೊದ್ಲು , ಯಾವುದು ಕಡಿಗೆ ಹೇಳ ಬುದ್ಧಿ ಇಲ್ಲೆ “…. ಒಗಟೊಗಟಾದ ವಿಷಯ ಒಡಚಿತಲ್ಲಾ ಅಂತ… ಸದ್ಯ ಕೊಟ್ಟಿಗೆಯಿಂದ ನನ್ನ ಹೊರಗೆ ಬಿಟ್ಟರಲ್ಲ ಅಂತ ನಿಟ್ಟುಸಿರು ಬಿಟ್ಟೆ.. ಕಮಲಮ್ಮನವರಿಗೆ ಕಾಲುನೋವಿಗೆ ಔಷಧೋಪಚಾರ ಹೇಳಿ, ಹೊರಬಂದೆ. ಬಂದ ದಾರಿಗೆ ಒಂದಿಷ್ಟು ಸುಂಕ ಸಿಕ್ಕಿತ್ತಾದರೂ, ಒಂದು ರೀತಿಯ ಅವಮಾನ, ನಾನು ಬೇರೆಯ ಆಡಳಿತ ಪ್ರದೇಶದ ಗೆರೆಯೊಳಗೆ ಬಂದೆನೆಂಬ ಸಂಕೋಚ! ಅವರಿಗೆ ಬೇಕಾದ್ದು ಎಮ್ಮೆಗೆ ಉಪಚಾರ, ಕರೆದದ್ದು ನನ್ನನ್ನು! ನಾನು ಮನುಷ್ಯರ ಡಾಕ್ಟರು, ನನ್ನ ವ್ಯಾಪ್ತಿಯೇನು? ಅಂತೆಲ್ಲಾ… ಲೆಕ್ಕ. * * ಆಮೇಲೊಂದು ದಿನ ನನ್ನ ಅದೇ ಲ್ಯಾಂಡು ಲೈನಿಗೆ ಫೋನು ಬಂತು. “ಹಲೋ..ಡಾಕ್ಟರ್ರಾ..?” ನನ್ನ ಹೆಂಡತಿಯ ಅಣ್ಣನ ಧ್ವನಿ ಅಂತ ಗೊತ್ತಾಗಿ ಹೋಯ್ತು. ಅವನೇ ಬೇಕಂತ ತಮಾಷೆ ಮಾಡ್ತಿದಾನಂತ ನನ್ನ ಊಹೆ. ‘ಹೌದು ಹೇಳಿ’,  ಅಂದೆ. “ನಮ್ಮ ಆಕಳು ಹೀಟಿಗೆ ಬಂದಿದೆ, ದಯವಿಟ್ಟು ಬೇಗ ಬಂದರೆ ಅನುಕೂಲ ಆಗ್ತಿತ್ತು. ಇನ್ಸಮೈನೇಷನ್ ಇವತ್ತಾದ್ರೆ..” ಅಂದ. ಒಂದಿಷ್ಟು ಆಕಳನ್ನು ಕಟ್ಟಿಕೊಂಡು ಡೈರಿಗೆ ಹಾಲು ಕೊಡ್ತಾನೆ. “ಹೀಟಿಗೆ ಬಂದವರನ್ನೆಲ್ಲಾ ಸಂಭಾಳಿಸ ಹೋದರೆ ನಿಮ್ಮ ತಂಗಿ ಬಡಿಗೆ ತಗಳ್ತಾಳೆ” ಅಂದೆ. “ಅಯ್ಯೋ ಬಾವನನಾ..? ಒಂದು ತಾಸು ಹಿಂದೆ ವೆಟರ್ನರಿ ಡಾಕ್ಟರಿಗೆ ಫೋನ್ ಮಾಡಿದ್ದೆ. ಹಾಗಾಗಿ ಮತ್ಯಾರು ಫೋನ್ ಮಾಡಿಲ್ಲ ಅಂತ ಅಂದ್ಕೊಂಡು ರೀಡಯಲ್ ಬಟನ್ ಒತ್ತಿದೆ” ಅಂದ. ಅತ್ತೆಯ ಫೋನು ಬಂದಿತ್ತು.  ಮಗಳೊಂದಿಗೆ ಮಾತಾಡಿ ರಿಸೀವರ್ ಕೆಳಗಿಟ್ಟ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಇವನ ಕರೆ ಬಂದಿತ್ತು, ಹೆಂಡತಿಯ ತೌರುಮನೆಯಿಂದ. ಮನಸ್ಸಿಗೆ ಮತ್ತೆ ಮೊರೆತ. ದನದ ಡಾಕ್ಟರೆಲ್ಲಿ, ನಾನೆಲ್ಲಿ?! * ಈ ಹೊಸದಾಗಿ ಬಂದ ಪಶು ವೈದ್ಯರು ಮತ್ತು ನನ್ನ ನಡುವೆ ನಡೆಯುವ ಸಂದರ್ಭಗಳು ಸರ್ವೇಸಾಮಾನ್ಯವಾಯ್ತು. ದನಕ್ಕೆ, ಎಮ್ಮೆಗೆ, ಕರುಗಳಿಗೆ, ಅವುಗಳ ಹೆರಿಗೆಗೆಲ್ಲಾ ಕರೆಗಳು. ಇತ್ತೀಚೆಗೆ ಮೊದಲೇ ಕೇಳಿ ಬಿಡ್ತೀನಿ, “ಯಾರಿಗೆ?” ಅಂತ. ಈ ವ್ಯವಸ್ಥೆಗೆ, ನಾನು ಒಗ್ಗಿಹೋಗಿರುವಾಗಲೇ ಒಂದು ದಿನ ನಾನು ಪೇಷಂಟ್ ನೋಡುತ್ತಿರುವಾಗ ಬಂತು ಸ್ಥಿರ ದೂರವಾಣಿ ಕರೆ. ಪೇಷಂಟ್ ನೋಡುತ್ತಾ ಇದ್ದುದರಿಂದ ಕರೆ ಹಾಗೇ ಬಡಿದುಕೊಳ್ಳುತ್ತಿತ್ತು. ಸ್ವಲ್ಪ ಉದ್ದದ ಕರೆಯಾದ ಮೇಲೆ ಫೋನ್ ಎತ್ತಿ ನನ್ನ ಹಲೋ ಮುಗಿಯುವುದರೊಳಗೆ, ಒಬ್ಬಾಕೆ ಧ್ವನಿ.. ‘ರೀ, ಬಸ್ಟಾಂಡಿನಲ್ಲಿ ಕಾಯ್ತಾ ಇದ್ದಿ, ಕರಕೊಂಡು ಹೋಗಲೆ ಬನ್ನಿ’ ಫೋನ್ ಕಟ್.. ನನಗೆ ವಿಷಯ ಏನೆಂದು ಅರ್ಥವಾಗುವುದರೊಳಗೆ ಉತ್ತರಕ್ಕೂ ಕಾಯದೆ ಫೋನ್ ಕುಕ್ಕಿದ ಆ ಹೆಣ್ಣಿನ ಧ್ವನಿ ಹೊಸದು. ನಾನು ರಿಸೀವ್ ಮಾಡಿದಾಗಲೇ ನನ್ನ ಹೆಂಡತಿಯೂ ಮನೆಯಲ್ಲೇ ರಿಸೀವ್ ಮಾಡಿದ್ದಾಳೆ. ಮನೆಯೊಳಗೆ ಒಂದು, ಕ್ಲಿನಿಕ್ ನಲ್ಲೊಂದು ರಿಸೀವರ್ ಇಟ್ಟುಕೊಂಡಿದ್ದರಿಂದ ಇದು ಹೊಸತೇನಲ್ಲ. ಯಾವ ಸಮಯಕ್ಕಾದರೂ ಕರೆ ಬರುವ ಸಂಭವನೀಯತೆಗಳು. ಅಚಾನಕ್ ಆ ದೂರವಾಣಿ ಕರೆಯ ಧ್ವನಿ, ವಿವರಗಳನ್ನು ಮನಸ್ಸಿನಲ್ಲಿ ತಾಳೆ ಹಾಕುತ್ತಾ ಪೇಷಂಟ್ ನೋಡಿ ಮುಗಿಯುವುದರೊಳಗೆ ಮತ್ತೊಂದು ಕರೆ ಬಂತು, ಹತ್ತಿರದಲ್ಲೇ ಇದ್ದ ಒಬ್ಬ ರೋಗಿಯ ವಿಸಿಟ್ ಗೆ.  ಕ್ಲಿನಿಕ್ ನ ಪೇಷಂಟ್ ಸರತಿಯೂ  ಮುಗಿದಿದ್ದರಿಂದ ನನ್ನ ರಥವನ್ನೇರಿ ಹೊರಟು ಹೋಗಿದ್ದೆ. ಹತ್ತಿರದ ಕೆಲವು ಪೇಷಂಟ್ ಗಳನ್ನು ಅವರ ಮನೆಗೆ ಹೋಗಿ ವಿಸಿಟ್ ಮಾಡುವ ರೂಢಿಯಿತ್ತು. ಆದ್ದರಿಂದ ಮನೆಯಲ್ಲಿ ಹೇಳುವ ಅಗತ್ಯವೂ ಇರದ ಕಾರಣ, ನಾನು ಸಹಜದಂತೆ ವಿಸಿಟ್  ಮುಗಿಸಿ ಬಂದೆ. ಕ್ಲಿನಿಕ್ ನ ಸಮಯವೂ ಮುಗಿದಿತ್ತು, ಊಟದ ಸಮಯವಾದ್ದರಿಂದ ಮನೆಯೊಳಗೆ ಅಡಿಯಿಡುತ್ತಿದ್ದಂತೆ ಬಾವ ಜಗುಲಿಯಲ್ಲಿ ಸ್ಥಿರಮುದ್ರೆಯಲ್ಲಿ ಕುಳಿತಿದ್ದ. ಅವನ ಆಗಮನ ಅನಿರೀಕ್ಷಿತ. ‘ಹೋ, ಬಾವ ಅರಾಮ… ಯಾವಾಗ ಬಂದೆ?’ ಅಂದವನಿಗೆ ಹೆಂಡತಿ ಪ್ರಧಾನಬಾಗಿಲಿಗೆ ಆತು ಗುಮ್ಮಳಂತೆ ನಿಂತಿದ್ದು ಕಂಡಿತು. ಕೆಂಪುಕಣ್ಣು, ಉರಿಮೂಗು ನೋಡಿದಾಗಲೇ ಗೊತ್ತಾಗಿದ್ದು, ಓಹ್ ಇಂದು ಗಂಗೆ ಧರೆಗಿಳಿದಿದ್ದಾಳೆಂದು. ಅದು ಯಾವ ಕಾರಣಕ್ಕೆಂದು ಮನಸ್ಸಿನ ಮೂಲೆಗಳಲ್ಲೆಲ್ಲಾ ಸರ್ರೆಂದು ಜಾಲಾಡಿದರೂ ಬಗೆಹರಿಯದ ಕಾರಣ ಅವರಿಬ್ಬರ ಮುಖ ನೋಡುವಂತಾಯಿತು. ನನ್ನ ಚಹರೆಯ ಪ್ರಶ್ನೆಯನ್ನು ಓದಿದವನಂತೆ,  ಬಾವ ‘ಸವಾರಿ ಎಲ್ಲಿಂದ ಬಂದಿದ್ದು?’ ಕೋರ್ಟ್‌ ನ ಕಟಕಟೆಯಲ್ಲಿ ನಿಂತ ಅಪರಾಧಿಯ ಸ್ಥಾನ ನನಗಿತ್ತು. ‘ಇಲ್ಲೆಯಾ, ವಿಸಿಟ್ ಗೆ ಹೋಗಿದ್ದೆ,’ ನನ್ನ ಸಹಜ ಉತ್ತರಕ್ಕೆ ಸಮಾಧಾನ‌ವಾಗದ ಮಡದಿಗೆ ದುಃಖ ಉಮ್ಮಳಿಸಿ ಬಂದಿತ್ತು. ವೃತ್ತಿಯಂತೇ ಮದುವೆಯೂ ಹೊಸತು. ದಾಂಪತ್ಯಕ್ಕಿನ್ನೂ ದಮ್ ಇಲ್ಲದ ಎಳಸಿನ ಕಾಲ. ಹಿರಿಯರು ನಿಶ್ಚಯಿಸಿದ ಮದುವೆಯಾದ್ದರಿಂದ ಒಬ್ಬರನ್ನೊಬ್ಬರು ಇನ್ನೂ ಪರಿಚಿತರಾಗುತ್ತಿರುವಾಗಲೇ ನಡೆದಿತ್ತು ಈ ಅಪಸ್ವರದ ಘಟನೆ. ಅವಳಿಗೇನಾಯ್ತು, ಅರ್ಥವಾಗದ ನನಗೆ, ಬಾವನ ಪ್ರಶ್ನೆ. ‘ಬಸ್ಟಾಂಡಿನಲ್ಲಿ ಯಾರು ಕಾಯುತ್ತಿದ್ದರು? ಎಲ್ಲಿಗೆ ಬಿಟ್ಟು ಬಂದದ್ದು? ಯಾರ ಫೋನಾಗಿತ್ತು? ಅದು’ …. ಓಹ್, ಈಗ ಸರಿಯಾಯ್ತು ಲೆಕ್ಕ… ಆ ಅಪರಿಚಿತ ಕರೆ… ಆ ಕರೆಯ ಬಗ್ಗೆ ಹೆಂಡತಿಯ ಮೂಲಕ ಅವನಿಗೆ ತಲುಪಿದ ವಿಷಯ. ಈ ತರಹದ ಗೊಂದಲಗಳಿಗೆ ಕಾರಣವಾದ ಆ ದೂರವಾಣಿಕರೆ! ಮೂಲ ಹೇಗೆ ಹುಡುಕುವುದು? ನನ್ನನ್ನು ಸಮರ್ಥನೆ ಮಾಡಿಕೊಳ್ಳಲು ಏನು ಮಾಡಲಿ?ಮತ್ತೆ ಮನಸ್ಸಿನ ಕಕ್ಷೆಯೊಳಗೆ ಸುತ್ತುತ್ತಿರುವ ಪ್ರಶ್ನೆ, ನಾನ್ಯಾಕೆ ಪದೇ ಪದೇ ಈ ದೂರವಾಣಿ ಕರೆಯೊಳಗೆ ಸಿಕ್ಕಿ ಬೀಳುವುದು? ಅನ್ನುವಾಗಲೇ ಥಟ್ಟನೆ ಒಂದು ವಿಚಾರ ಹೊಳೆದಿತ್ತು. ‘ಬಾವ, ನಂಗೂ ಆ ಫೋನ್ ವಿಷಯ ಬೇಕಿತ್ತು. ಯಾರದ್ದು ಎಂದು… ಒಮ್ಮೆ ಪ್ರಯತ್ನ ಪಡೋಣ… ಅನ್ನುತ್ತಾ ನಮ್ಮ ಗ್ರಾಮದ ಸ್ಥಿರದೂರವಾಣಿ ಕರೆಗಳ ಸಂಖ್ಯೆ ನಮೂದಿಸಿದ ಕೈಪಿಡಿ ಹೊರತೆಗೆದೆ. ನಮ್ಮೂರಿನ ಪಶುವೈದ್ಯರ ಕರೆಗಳು ನನಗೆ ಬರುತ್ತಿದ್ದವಲ್ಲ, ಎಮ್ಮೆ, ಹಸು, ಕರುಗಳ ಚಿಕಿತ್ಸೆಗೆಂದು. ಅವರನ್ನೇ ವಿಚಾರಿಸಲು ಅವರಿಗೇ ಫೋನು ಮಾಡಲು ಅವರ ಸಂಖ್ಯೆ ಹುಡುಕಿದೆ. ಹೆಸರಿನ ಪಟ್ಟಿಯಲ್ಲಿ ಪಶುವೈದ್ಯರ ಹೆಸರು. ಅರೆ! ಸ್ಥಿರ ದೂರವಾಣಿ ಸಂಖ್ಯೆ ನಂದು! ಆಹ್, ನನ್ನ ಹೆಸರು ತೆಗೆದೆ…., ಆ ಸಂಖ್ಯೆ ನನ್ನ ಮನೆಯ ಸ್ಥಿರ ದೂರವಾಣಿ ಸಂಖ್ಯೆಯ ಮೊದಲಿನ ಅಂಕೆಗಳೆ…. ಆದರೆ ಕೊನೆಯ ಅಂಕೆ ಅಲ್ಲ! ಅಂದರೆ ಬೇರೆಯವರ ದೂರವಾಣಿ ಸಂಖ್ಯೆ… ಓಹ್! ಇದೊಂದು ಹೊಸ ಅನ್ವೇಷಣೆಯಾಗಿ, ನನಗೆ ಪತ್ತೆದಾರಿ ಮಾಡುವ ಮನಸ್ಸು ಚುರುಕಾಯಿತು. ‘ನೀವಿಬ್ಬರೂ ಇಲ್ಲೆ ಈ ರಿಸೀವರ್ ಇಂದ ಕೇಳಿ. ನಾನು ವಿಚಾರಿಸುತ್ತೇನೆ.’ ಅನ್ನುತ್ತಾ, ನನ್ನ ಹೆಸರಿನ ಮುಂದೆ ನಮೂದಿಸಿದ್ದ ಸಂಖ್ಯೆಗೆ ಕರೆಯಿತ್ತೆ. ಫೋನ್

ಕಥಾಯಾನ Read Post »

ಅನುವಾದ, ಕಥಾಗುಚ್ಛ

ಕಥಾಯಾನ

ಒಂದು ವಿಶೇಷ ದಿನ ಮಲಯಾಳಂ ಮೂಲ: ಪೂನತಿಲ್ ಕುಞಬ್ದುಳ್ಳ ಕನ್ನಡಕ್ಕೆ ಚೇತನಾ ಕುಂಬ್ಳೆ ಹಲವು ವರ್ಷಗಳ ನಂತರ, ಅವನು ಚಂದ್ರಿಕಳ ಮನೆಗೆ ಬಂದ. ಕೇವಲ ಚಂದ್ರ ಎಂಬ ಹೆಸರು ಅವನಿಗಿದ್ದದ್ದರಿಂದ ಮಾತ್ರ ಚಂದ್ರಿಕ ಆತನನ್ನು ಧ್ಯಾನಿಸಿದ್ದಲ್ಲ.         ಅವನು ಸಿ.ಸಿ ಚಂದ್ರ. ಚಂದ್ರನ್ ಆಂಡ್ ಬ್ರದರ್ಸ್ ನ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ದ. ಅವರಿಗೆ ನೂರಾರು ಟ್ರಕ್ಕುಗಳೂ, ಹತ್ತಿ ಬಟ್ಟೆ ನೇಯುವ ಮೂರು ದೊಡ್ಡ ಮಿಲ್ಲುಗಳು ತಮಿಳುನಾಡಿನಲ್ಲಿವೆ. ವಿವಿಧ ವ್ಯಾಪಾರ ಸಂಘಟನೆಗಳ ನಾಯಕರನ್ನು ವಶೀಕರಿಸುವ ಮಾದಕ ವಸ್ತುಗಳಿವೆ. ಒಂದು ರಸತಂತ್ರ ಶಾಲೆ, ಎಲ್ಲೆಡೆಯೂ ವಿಷವನ್ನು ಬಿತ್ತರಿಸುವ ಒಂದು ಕಾರ್ಖಾನೆಯಿದೆ.    ಆಕೆಗೆ ಆತನಿಗಿಂತ ದೊಡ್ಡದಾದ ಸ್ನೇಹಿತರ ಬಳಗವೊಂದಿತ್ತು. ಅಲ್ಲಿ ಕವಿಗಳು, ಸಿನಿಮಾ ಹಾಡನ್ನು ಬರೆಯುವವರು,ಪಾಪದ ನಿರ್ಮಾಪಕರು, ನಟರು, ಚಿತ್ರಕಾರರು, ಎಂ.ಪಿ. ಡೆಪ್ಯೂಟಿ ಮಂತ್ರಿಗಳು, ಸೆಕ್ರೆಟರಿ, ಮಂತ್ರಿಗಳು ಹೀಗೆ ಎಲ್ಲ ವರ್ಗದವರೂ ಆಕೆಗೆ ಪರಿಚಿತರಾಗಿದ್ದರು.    ಆದರೂ ಚಂದ್ರಿಕಳಿಗೆ ಚಂದ್ರನ ಮೇಲೆ ಪ್ರೀತಿ. ಹಾಗೆ ಚಂದ್ರ ಅಕೆಯ ಮನೆಗೆ ಬಂದದ್ದು. ಕಾರಿನಿಂದಿಳಿದ ಚಂದ್ರ ಚಂದ್ರಿಕಳನ್ನು ನೋಡಿ ನಕ್ಕ. ಚಂದ್ರಿಕ ಆತನನ್ನು ಮನೆಯೊಳಗೆ ಆಹ್ವಾನಿಸಿದಳು. ಚಂದ್ರ ಮನೆಗೆ ಬಂದ ಸಂತೋಷಷದಲ್ಲಿ ಕ್ಷಣ ಹೊತ್ತು ಏನು ಹೇಳಬೇಕೆಂದೋ ಏನು ಮಾಡಬೇಕೆಂದೋ ಅವಳಿಗೆ ತೋಚದಾಯಿತು. ಆಕೆಯ ಬಹುದಿನಗಳ ಆಸೆಯೊಂದು ಈಡೇರಿದ ದಿನವಲ್ಲವೇ ಇಂದು.       ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ  ಚಂದ್ರಿಕಳ ಆರಾಧನಾ ಮೂರ್ತಿಯಾಗಿದ್ದ ಚಂದ್ರ. ಅಕೆಗೆ ಇತರ ಅನೇಕ ಸ್ನೆಹಿತರಿದ್ದರೂ, ವೈಟ್ ಲಿಫ್ಟರಾಗಿ ಮಾತ್ರ ಪ್ರಸಿದ್ಧನಾಗಿದ್ದ ಚಂದ್ರನನ್ನು  ಆರಾಧಿಸುತ್ತಿದ್ದಳು. ಚಂದ್ರನು ಅವಳೆದುರಿಗೆ ಬಂದಾಗಲೆಲ್ಲ ಆಕೆಗೆ ಗ್ರಹಣ ಬಡಿದಂತಾಗುತ್ತಿತ್ತು. ಮೂರು ವರ್ಷದೊಳಗೆ ಕಾಲೇಜಿನಾವರಣದ ವಿವಿಧ ಭಾಗಗಳಲ್ಲಿ ಅವರಿಬ್ಬರೂ ಭೇಟಿಯಾಗುತ್ತಿದ್ದರು. ಆದರೆ ಚಂದ್ರಿಕ ಚಂದ್ರನನ್ನು ನೋಡುತ್ತಿದ್ದಳಲ್ಲದೆ ಚಂದ್ರನು ಆಕೆಯನ್ನು ನೋಡುತ್ತಲೂ ಇರಲಿಲ್ಲ , ಗಮನಿಸುತ್ತಲೂ ಇರಲಿಲ್ಲ.          ಹಲವು ಹುಡುಗರು ಚಂದ್ರಿಕಳಿಗೆ ಪ್ರೇಮ ಪತ್ರ ಬರೆಯುತ್ತಿದ್ದ ಕಾಲ ಅದು. ಆದರೆ, ಚಂದ್ರಿಕ ಚಂದ್ರನ ಪ್ರೇಮ ಪತ್ರಕ್ಕಾಗಿ ಕಾಯುತ್ತಿದ್ದಳು. ಹಾಗೆ ಅವಳು ಚಂದ್ರನಿಗೆ ಅದೆಷ್ಟೋ ಪ್ರೇಮಪತ್ರಗಳನ್ನು ಬರೆದು ಕಳಿಸಿ ಉತ್ತರಕ್ಕಾಗಿ ಕಾದುಕುಳಿತರೂ ಅವನಿಂದ ಒಂದಕ್ಕೂ ಮರುಪತ್ರ ಬರಲೇ ಇಲ್ಲ.          ಕಾಲೇಜು ಜೀವನ ಮುಗಿಸಿ ಅವರಿಬ್ಬರೂ ತಮ್ಮದೇ ದಾರಿಯಲ್ಲಿ ಹೆಜ್ಜೆಹಾಕಿದರು. ಚಂದ್ರಿಕ ತನ್ನ ಕುಲಕಸುಬಿಗೆ ಸೇರಿದರೆ, ಚಂದ್ರ ತಮ್ಮ ಪೂರ್ವಜರು ನಡೆಸಿಕೊಂಡು ಬರುತ್ತಿರುವ ಕಂಪೆನಿಯಲ್ಲಿ ಸೇರಿಕೊಂಡನು.   ಚಂದ್ರನು ಕಂಪೆನಿಯ ಮ್ಯಾನೇಜಿಂಗ್ ಪಾರ್ಟ್ನರಾದಾಗ ಕ್ರಮೇಣ ಶ್ರೀಮಂತರಾದರು. ಬೇಕಾದಷ್ಟು ಆಸ್ತಿ ಪಾಸ್ತಿಗಳು ಕೈಸೇರಿದವು. ಚಂದ್ರಿಕ ಮನೆಗೆ ಬಂದಾಗ ಬಂಧುಬಳಗದವರ ಘನತೆ ಹೆಚ್ಚಿತು. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತ ಚಂದ್ರಿಕಳಿಗೆ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಹೊರಲು ಸಾಮರ್ಥಳಾಗಿದ್ದಳು. ಆದ್ದರಿಂದಲೇ ಆಕೆಯ ಅಮ್ಮ ಎಲ್ಲಾ ಜವಾಬ್ದಾರಿಗಳನ್ನೂ ಚಂದ್ರಿಕಳ ಹೆಗಲ ಮೇಲೆ ಹೊರಿಸಿ ತಾವು ನಿಶ್ಚಿಂತೆಯಿಂದ ವಿಶ್ರಾಂತಿ ಜೀವನಕ್ಕೆ ಕಾಲಿರಿಸಿದರು.    ಆಂಗ್ಲ ಭಾಷೆಯ ಪತ್ರಿಕೆಗಳನ್ನು ಓದುವ ಚಂದ್ರಿಕ ಪ್ರತಿದಿನ ಮೊದಲು ಸ್ಪೋರ್ಟ್ಸ್ ಕಾಲಂ ನೋಡುವಳು. ಕಾರಣ, ವೈಟ್ ಲಿಫ್ಟಿಂಗಲ್ಲಿ ಚಂದ್ರನು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದ ಕಾಲ ಅದಾಗಿತ್ತು.         ಹೀಗಿರುವಾಗ  ಒಂದುದಿನ ಚಂದ್ರನ ಕಾರು ಅಪಘಾತಕ್ಕೊಳಗಾಯಿತು. ಚಂದ್ರನು ಅಪ್ರಜ್ಞಾವಸ್ಥೆಯಲ್ಲಿ ತುಂಬ ದಿನ ಆಸ್ಪತ್ರೆಯಲ್ಲಿದ್ದ. ಪಕ್ಕದ ಕೋಣೆಯಲ್ಲೇ ಚಂದ್ರಿಕಳೂ ಅಪ್ರಜ್ಞಾವಸ್ಥೆಯಲ್ಲಿದ್ದಳು. ಪ್ರಜ್ಞೆ ಬಂದಾಗಷ್ಟೇ ಅವರಿಗೆ ತಿಳಿದದ್ದು ತಮ್ಮದೇ ಕಾರುಗಳು ಪರಸ್ಪರ ಢಿಕ್ಕಿ ಹೊಡೆದದ್ದೆಂದು.    ಮೊದಲು ಆಸ್ಪತ್ರೆ ಬಿಟ್ಟದ್ದು ಚಂದ್ರ. ಆತ ಚಂದ್ರಿಕಳನ್ನು ನೋಡಲು ಬಂದ. ಚಂದ್ರಿಕ ಗುಣಮುಖಳಾಗಿದ್ದರೂ ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ತಿಳಿಸಿದ್ದರು. ಚಂದ್ರ ಅವತ್ತು ಮೊದಲ ಬಾರಿ ಚಂದ್ರಿಕಳನ್ನು ನೋಡಿದ. ಪರಸ್ಪರ ಕ್ಷೇಮಾನ್ವೇಷಣೆಯ ನಂತರ ಚಂದ್ರ ಕೇಳಿದ”ನಿಮಗಾಗಿ ನಾನೇನಾದರೂ ಮಾಡಬೇಕೇ?” ಚಂದ್ರಿಕಳು ಆತನನ್ನು ಮನೆಗೆ ಆಹ್ವಾನಿಸಲು ಆತ ಒಪ್ಪಿಕೊಂಡ.        ಹಾಗೆ ಚಂದ್ರನು ಚಂದ್ರಿಕಳ ಮನೆಗೆ ತಲುಪಿದ್ದು. ಎಲ್ಲವೂ ಒಂದು ಕಾರು ಅಪಘಾತ ತಂದಿಟ್ಟ ಭಾಗ್ಯ.   ಕುಡಿಯಲು ಪಾನೀಯ , ಕಲ್ಲುಸಕ್ಕರೆ ಸೇರಿಸಿದ ಹಾಲು, ಬದಾಮ್, ಮೊಸರು, ಬೇಯಿಸಿದ ಗೋಧಿಕಾಳು, ಕಾಯಿಸಿದ ಜೋಳ, ಸೂಪು, ದೊಡ್ಡ ತಟ್ಪೆಯಲ್ಲಿ ನೂಡಲ್ಸ್, ಎಲ್ಲವೂ ಊಟದ ಮೇಜನ್ನು ಅಲಂಕರಿಸಿದ್ದವು.   ಅಲ್ಲಿ ಗಾಢವಾದ ಮೌನವೊಂದಾವರಿಸಿತ್ತು. ತಲೆ ವಸ್ತ್ರಧರಿಸಿದ ಕೆಲಸದಾಳು ಒಂದು ಮೂಲೆಯಲ್ಲಿ ಅಪರಾಧಿಯಂತೆ ನಿಂತಿದ್ದನು. ಅವರಿಬ್ಬರೂ ಊಟಕ್ಕೆ ಬಂದು ಕುಳಿತರು. ಚಂದ್ರನು ಪಾನೀಯವನ್ನೂ ಚಂದ್ರಿಕ ಬೇಯಿಸಿದ ಗೋಧಿಕಾಳನ್ನೂ ತಿಂದು ಟಿಷ್ಯೂ ಪೇಪರಲ್ಲಿ ಕೈ ಒರೆಸುತ್ತಾ ಇಬ್ಬರೂ ಮಲಗುವ ಕೊಠಡಿಗೆ ಹೋದರು. ಇಬ್ಬರೂ  ಮಂಚದಲ್ಲಿ ಅಕ್ಕ ಪಕ್ಕದಲ್ಲಿ ಕುಳಿತು ಮಾತನಾಡಲು ತೊಡಗಿದರು. ” ನಿನಗೇನು ಬೇಕು” ಚಂದ್ರನು ಕೇಳಲು “ಕೇಳಿದ್ದೆಲ್ಲ ಕೊಡುತ್ತೀಯಾ?” ಎಂದು ಆಕೆ ಮರುಪ್ರಶ್ನೆ ಎಸೆದಳು. ಆತ ಕೊಡುವೆನೆಂದು ಒಪ್ಪಿದಾಗ ಚಂದ್ರಿಕ “ನೀವು ವೈಟ್ ಲಿಫ್ಟರಲ್ಲವೆ ಆದ್ದರಿಂದ ನನ್ನನ್ನು ನೀವು ಎತ್ತಬೇಕು. ನಿಮ್ಮ ಕೈಗಳಲ್ಲಿ ಒಂದು ಪುಟ್ಟ ಹಕ್ಕಿಯಂತೆ ನಾನು ಕುಳಿತುಕೊಳ್ಳಬೇಕೆಂಬ ಆಸೆಯಿದೆ” ಎಂದಳು. ಅದಕ್ಕೆ ಚಂದ್ರನು, “ಆದರೆ, ಇಲ್ಲಿ ಸ್ಥಳ ಸಾಕಾಗುವುದಿಲ್ಲ. ನಾವು ಕಡಲ ತೀರಕ್ಕೆ ಹೋಗುವ , ಅಲ್ಲಿ ನಾನು ನಿನ್ನನ್ನು ಮೇಲಕ್ಕೆತ್ತುತ್ತೇನೆ ಅದಾಗಿರಬಹುದು ನನ್ನ ಕೊನೆಯ ವೈಟ್ ಲಿಫ್ಟಿಂಗ್.” ಎಂದೊಡನೆ ಚಂದ್ರಿಕ ಒಪ್ಪಿದಳು.     ಆಕೆ ಬೇಗ ಬಟ್ಪೆ ಬದಲಾಯಿಸಿದಳು. ಖದರಿನ ಬಟ್ಟೆ, ಪಾದರಕ್ಷೆ ಧರಿಸಿದಳು. ಅಮೇರಿಕದಿಂದ ಗೆಳೆಯ ಕೊಟ್ಟು ಕಳುಹಿಸಿದ ಒಂದು ನೀಳವಾದ ಸ್ಕಾರ್ಫ್ ಇತ್ತು. ಮರಣಿಸಿದ ಆತನ ನೆನಪಿಗಾಗಿ ಅವಳು ಯಾವಾಗಲೂ ಜಾಗ್ರತೆಯಿಂದ ಅದನ್ನು ತೆಗೆದಿರಿಸಿದ್ದಳು.   ಅವರಿಬ್ಬರೂ ಕಾರು ಹತ್ತಿ ಹೊರಟರು. ಕಡಲ ತೀರದಲ್ಲಿ ಜನ ಕಡಿಮೆಯಿದ್ದ ಸ್ಥಳಕ್ಕೆ ಕಾರು ವೇಗವಾಗಿ ಓಡುತ್ತಿತ್ತು. ಚಂದ್ರಿಕ  “ಚಂದ್ರ ಒಂದು ಹಾಡು ಹಾಡುತ್ತೀಯಾ?” ಕೇಳಿದಳು. ಚಂದ್ರನು ಹಾಡಲು ತೊಡಗಿದ. I tried to sleep to kill the pain When I wake it’s still the same Cause am living in this world you left behind I just like a broken piece of glass You have swept me aside to pass Leaving shetterd dreams in my heart to stay I am  just a fool to sit and cry Washing years before I die In this lonely world This world you left behind ಅವಳು ಹಾಡಿನ ಗುಂಗಿನಲ್ಲಿದ್ದಳು. ಓಡುತ್ತಿರುವ ಕಾರಿನಿಂದ ಅವಳ ಸ್ಕಾರ್ಫ್ ನ ತುದಿಯೊಂದು ಹೊರಗೆ ಗಾಳಿಗೆ ಹಾರುತ್ತಿತ್ತು. ಹಾರುತ್ತಾ ಹಾರುತ್ತಾ ಅದು ಹಿಂದಿನ ಚಕ್ರಕ್ಕೆ ಸಿಕ್ಕಿಕೊಂಡರೆ, ಮತ್ತೊಂದು ತುದಿ ಅವಳ ಕುತ್ತಿಗೆಯನ್ನು ಬಂಧಿಸಿತು. ಆಕಗೆ ಉಸಿರುಗಟ್ಟಿದಾಗಲೇ ಪರಿಸರ ಪ್ರಜ್ಞೆ ಬಂದದ್ದು. ಕೈಕಾಲುಗಳನ್ನು ಅಲುಗಾಡಿಸಲು ಅವಳಿಂದ ಸಾಧ್ಯವಾಗಲಿಲ್ಲ. “ಚಂದ್ರಾ… ರಕ್ಷಿಸು” ಎಂದರೂ ಆಕೆಯ ಕಂಠದಿಂದ ಸ್ವರ  ಹೊರಬರಲೇ ಇಲ್ಲ. ಕ್ಷಣದೊಳಗೆ ಆಕೆಯ ಜೀವ ಸಂಗೀತ ಸಾಗರದಲ್ಲಿ ವಿಲೀನವಾಯಿತು. ಇದನ್ನೊಂದೂ ತಿಳಿಯದೆ ಆಗಲೂ ಚಂದ್ರ ಹಾಡುತ್ತಲೇ ಇದ್ದ. I am  just a fool to sit and cry Washing years before I die In this lonely world This world you left behind ……

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

  ಸರಸ್ವತಿ ಜಿ. ಹರೀಶ್ ಬೇದ್ರೆ ಸರಸ್ವತಿ ಮುಂಜಾನೆ ಬೇಗನೇ ಎದ್ದು ಗಂಡ ಮಕ್ಕಳಿಗೆ ಕಾಫಿ ತಿಂಡಿ ಮಾಡಿಕೊಟ್ಟು  ಅಂಗಡಿಯ ಬಳಿ ಬರುವ ಹೊತ್ತಿಗೆ ಎಂಟು ಗಂಟೆಯಾಗಿತ್ತು. ಆಗಲೇ  ಸಾಮಾಜಿಕ ಅಂತರ ಬಳಸಿ ನಿಂತಿದ್ದ ಕ್ಯೂ ಹೆಚ್ಚುಕಮ್ಮಿ ಅರ್ಧ ಕಿ.ಮೀ.ಗಿಂತ ಉದ್ದವಿತ್ತು. ಅಂಗಡಿ ತೆರೆಯಲು ಇನ್ನೂ ಒಂದು ಗಂಟೆ ಬಾಕಿ ಇತ್ತು. ಅಯ್ಯೋ ಏನಪ್ಪಾ ಮಾಡುವುದು ಎಂದು ಗೊಣಗುತ್ತಲೇ ಸರತಿಯಲ್ಲಿ ನಿಂತಳು. ಕ್ಷಣಕ್ಷಣಕ್ಕೂ ಕ್ಯೂ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಯಿತು. ಜನರನ್ನು ನಿಯಂತ್ರಿಸಲು ಒಂದಿಬ್ಬರು ಪೋಲಿಸರು ಬಂದರು. ಅವರು ಹಿಂದೆ ಮುಂದೆ ಓಡಾಡುವಾಗ ಸರಸ್ವತಿಯನ್ನು ನೋಡಿ,  ಆಶ್ಚರ್ಯವನ್ನು ತಡೆದುಕೊಳ್ಳಲಾರದೆ ನಿಮಗೂ ಬೇಕಾ ಎಂದು ಕೇಳಿದರು. ಇವಳು ಬೇಕು ಎನ್ನುವಂತೆ ತಲೆ ಆಡಿಸಿದಳು. ಸರಿ ಸರಿ ಮೊದಲು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ ಎಂದು, ಇವರಿಗೆ ಯಾವಾಗ ಏನು ಸಿಗುತ್ತೆ ಗೊತ್ತು, ಹೊರಗಡೆ ಹೇಗೆ ಬರಬೇಕು ಗೊತ್ತಿಲ್ಲ ಮುಂತಾಗಿ ಹೇಳುತ್ತಾ ಮುಂದೆ ಸಾಗಿದರು.  ಪೋಲಿಸರಷ್ಟೇ ಅಲ್ಲದೆ ಆ ದಾರಿಯಲ್ಲಿ ಹೋಗಿ ಬರುವವರು ಸರಸ್ವತಿಯನ್ನು ವಿಚಿತ್ರವಾಗಿ ನೋಡುತ್ತಾ, ಅವಳು ಬಗ್ಗೆಯೇ ಹಗುರವಾಗಿ ಮಾತನಾಡುತ್ತಾ ಸಾಗುತ್ತಿದ್ದರು. ಇದನ್ನು ಗಮನಿಸಿದರೂ ಸರಸ್ವತಿ ಕ್ಯೂನಲ್ಲಿ ಅಂಗಡಿ ತೆರೆಯುವುದನ್ನೇ ಕಾಯುತ್ತಾ ನಿಂತಳು. ಒಂಬತ್ತು ಗಂಟೆಗೆ ಹತ್ತು ನಿಮಿಷ ಇರುವಾಗಲೇ ಅಂಗಡಿ ಬಾಗಿಲು ತೆರೆಯಿತು. ಅಲ್ಲಿಯವರೆಗೆ ಸಂಯಮದಿಂದ ನಿಂತಿದ್ದ ಜನ ಸಾಮಾಜಿಕ ಅಂತರ ಮರೆತು ನುಗ್ಗಿದರು.  ಅವರಂತೆ ನುಗ್ಗಲು ಸಾಧ್ಯವಾಗದೆ, ಏನು ಮಾಡಬೇಕೆಂದು ತಿಳಿಯದೆ ಅಂಗಡಿ ಹತ್ತಿರದಲ್ಲೇ ಕಾಯುತ್ತಾ ನಿಂತಳು. ಜನರ ನುಗ್ಗಾಟ ಪೋಲಿಸರ ಹಿಡಿತಕ್ಕೂ ಬರಲಿಲ್ಲ.  ಇವಳು ಅಲ್ಲೇ ಹಾಗೆ ಕಾಯುತ್ತಲೇ ಇದ್ದಳು. ಇದನ್ನು ಗಮನಿಸಿದ ಪೋಲಿಸರು, ನೀವು ಇಲ್ಲಿ ನಿಂತಿದ್ದರೆ ನಿಂತೇ ಇರುತ್ತೀರಿ, ಏನು ಬೇಕು ಹೇಳಿ ಹಣಕೊಡಿ ತಂದುಕೊಡುತ್ತೇವೆ ಎಂದರು.  ಸರಸ್ವತಿ ಹೇಳಿ ಹಣ ಕೊಟ್ಟಳು. ಪೋಲಿಸಿನವರು ತಂದುಕೊಟ್ಟಿದ್ದನ್ನು ಹಿಡಿದು ಮನೆಗೆ ಬಂದವಳೇ , ಮನೆಯಲ್ಲೇ ಆಸೆಯಿಂದ ದಾರಿ ಕಾಯುತ್ತಿದ್ದ ಗಂಡನ ಮುಂದೆ ಇಟ್ಟಳು. ಒಂದುವರೆ ತಿಂಗಳಿಂದ ಒಂದು ಹನಿಯೂ ಸಿಗದೆ ಸತ್ತೇ ಹೋಗುವವನಂತೆ ಆಗಿದ್ದ ಅವನ ಮುಖದಲ್ಲಿ ಜೀವಕಳೆ ಮೂಡಿತು. ಇದನ್ನು ಕಂಡ ಸರಸ್ವತಿಗೆ, ಕ್ಯೂನಲ್ಲಿ ನಿಂತಾಗ ಇವಳನ್ನು ಅಸಹ್ಯವಾಗಿ ನೋಡಿ, ಮಾತನಾಡಿದ ಜನರ ಎಲ್ಲಾ ವಿಚಾರಗಳು ಮರೆತು ಹೋಯಿತು. **********

ಕಥಾಯಾನ Read Post »

ಕಥಾಗುಚ್ಛ

ಮಕ್ಕಳ ಕಥೆ

“ಕತ್ತೆಗೊಂದು ಕಾಲ”  ಅದು ಗಿರಿಕಂದರ ಪರ್ವತ ಶ್ರೇಣಿಗಳ ನಾಡು. ಅಲ್ಲಿ ಜಯದೇವ ಅರಸನು ರಾಜ್ಯ ಆಳುತಿದ್ದನು. ಆತ ತನ್ನ ಆಸ್ಥಾನದಲ್ಲಿ ಕುದುರೆಗಳ ಜೊತೆಗೆ ಕತ್ತೆಗಳನ್ನು ಸಾಕಿದ್ದನು. ಎಲ್ಲ ರಾಜರು ಕುದುರೆ ಸಾಕುತಿದ್ದರೆ, ಈತ ಮಾತ್ರ ಎರಡನ್ನು ಸಾಕುತಿದ್ದನು. ಈ ಮಾತು ರಾಜ್ಯದ ಎಲ್ಲ ಜನರಿಗೆ ಅಷ್ಟೆ ಅಲ್ಲ, ಕುದುರೆಗಳಿಗೂ ಆಶ್ಚರ್ಯವಾಗಿತ್ತು.                ಒಂದು ದಿನ ಸೇವಕರು ಕುದುರೆ ಮತ್ತು ಕತ್ತೆ ಒಟ್ಟಿಗೆ ಬಯಲಲ್ಲಿ ಮೈಯಲು ಬಿಟ್ಟರು. ಆಗ ಮೈಯುತ್ತಾ ಕುದುರೆ ಒಮ್ಮೇಲೆ ಹುಂಕರಿಸುತ್ತಾ ಕತ್ತೆಗೆ, “ಏ.. ಕತ್ತೆ, ನಿನ್ನದೇನೆ ಇಲ್ಲಿ ಕೆಲಸ..?” ಎಂದು ತೆಗಳಿ ನಕ್ಕಿತು. ಆಗ ಕತ್ತೆ, “ಕುದುರೆಯಣ್ಣಾ, ನಾವು  ಏನಾದರೂ ರಾಜನಿಗೆ ಉಪಯೋಗ ಬರುತ್ತಿರಬಹುದು, ಆ ಕಾರಣವೇ ಆತ ನಮಗೆ ಸಾಕಿರಬೇಕಲ್ಲ..!” ಎಂದು ಹೇಳಿ  ಸುಮ್ಮನೆ ಹುಲ್ಲು ತಿನ್ನುವದು. ಆದರೆ ಕುದುರೆ ಸುಮ್ಮನಾಗದೆ, “ ಏ.. ಮುರ್ಖ ಕತ್ತೆ, ನಿನಗೆ ತಿನ್ನುವದನ್ನು ಬಿಟ್ಟು ಮತ್ತೇನು ಬರುತ್ತೆ ಹೇಳು. ನೋಡು, ಯುದ್ಧ ಮಾಡಲು ನಾವು ಹೋಗುತ್ತೇವೆ, ಪ್ರಯಾಣ ನಮ್ಮಿಂದಲೆ, ಓಟದ ಸ್ಪರ್ಧೆಯಾಗಲಿ ಹಬ್ಬ ಉತ್ಸವ ಆಗಲಿ ನಮ್ಮನ್ನೆ ಬಳಿಸುವರು. ನಿನ್ನ ಒಂದಾದರೂ ಉಪಯೋಗ ಹೇಳು ನೊಡೋಣ..” ಎಂದು ಮತ್ತೆ ಕೆಣಕಿತು. ಆಗ ಅದು, “ಕುದುರೆಯಣ್ಣಾ ನೀನು ಜಾಣ ಎಂಬುದು ನನಗೆ ಗೊತ್ತು. ಆದರೆ ಪ್ರತಿಯೊಂದು ಪ್ರಾಣಿಗಳು ಹುಟ್ಟಿದ್ದು, ಏನಾದರೂ ಮಾಡಲಿಕ್ಕೆ. ನಮಗೂ ಒಂದು ಕಾಲ ಬರುತ್ತೆ..” ಎಂದು ಹೇಳಿ ಕತ್ತೆ ದೊಡ್ಡಿಗೆ, ಕುದುರೆ ಲಾಯಕ್ಕೆ ಹೋದವು.              ಕೆಲ ದಿನಗಳ ನಂತರ ವೈರಿ ರಾಜನು ಯುದ್ಧ ಸಾರಿ ಹೊರಟಾಗ ಜಯದೇವನು ಪ್ರತಿ ಹಲ್ಲೆಗಾಗಿ ಅಶ್ವದಳದ ಸಿದ್ಧತೆ ಮಾಡಿಕೊಳ್ಳಿ ಎಂದು ಅಪ್ಪಣೆ ಕೊಟ್ಟನು. ಆಗ ಸೇವಕರು ಕುದುರೆಗಳಿಗೆ ಹೆಚ್ಚಿನ ಶಕ್ತಿದಾಯಕ ಆಹಾರ ಕೊಡಲು ಪ್ರಾರಂಭ ಮಾಡುತ್ತಾರೆ. ಕುದುರೆ ಲಾಯ ಮತ್ತು ಕತ್ತೆಯ ದೊಡ್ಡಿಯ ಮಧ್ಯ ತಂತಿಯ ಸಂರಕ್ಷಣೆ ಅಷ್ಟೆ. ಆಗ ಕತ್ತೆಯನ್ನು ನೋಡಿ ಕುದುರೆ, “ನೋಡಿದಿಯಾ ಕತ್ತೆ, ನಾವು ಯುದ್ಧಕ್ಕೆ ಹೊರಟಿದ್ದೇವೆ. ಅದಕ್ಕೆ ನಮಗೆ ಒಳ್ಳೊಳ್ಳೆ ರುಚಿಕರ ಚಂದಿ, ನಿನಗೆ ಬರಿ ಹುಲ್ಲು..” ಎಂದು ಹುಂಕರಿಸಿ ನಗುತ್ತದೆ. ಆಗ ಅದು ಮರು ಏನು ಮಾತನಾಡದೆ, “ಶುಭಾಶಯ ಕುದುರೆಯಣ್ಣಾ, ಗೆಲುವು ನಿನ್ನದಾಗಲಿ..” ಎಂದು ಶುಭ ಕೋರುತ್ತದೆ.          ಕುದುರೆ ರಣರಂಗದಲ್ಲಿ ಭೀಮ ಪರಾಕ್ರಮದಿಂದ ಕಾದಾಡಿ ಯುದ್ಧ ಗೆದ್ದು ಬರುತ್ತದೆ. ಅಲ್ಲಿಂದ ಓಡುತ್ತಾ ಓಡುತ್ತಾ ತನ್ನ ಲಾಯಕ್ಕೆ ಬರುವಾಗ ಮತ್ತೆ ಕತ್ತೆಯನ್ನು ನೋಡಿ, “ಎಲೇ.. ಕತ್ತೆ, ನಾವು ಯುದ್ಧ ಗೆದ್ದು ಬಂದೇವು. ವೈರಿ ಸೈನ್ಯ ಕಾಲಲ್ಲಿ ಹಾಕಿ ತುಳಿದೇವು. ಇದರಿಂದ ಸಂತೋಷನಾದ ರಾಜ, ನಾಳೆ ನಮ್ಮ ಮೆರವಣಿಗೆ ಇಟ್ಟಿದ್ದಾನೆ..” ಎಂದು ಜೋರಾಗಿ ಹೇಳಿತು. ಅದಕ್ಕೆ ಕತ್ತೆ, “ಗೆಲುವಿಗಾಗಿ ಶುಭಾಶಯ, ಕುದುರೆಯಣ್ಣಾ..”ಎಂದು ಹೇಳಿ ಸುಮ್ಮನೆ ಹುಲ್ಲು ತಿನ್ನುತ್ತದೆ. ಆದರೆ ಕುದುರೆ ಮಾತ್ರ ಸುಮ್ಮನಾಗುವದಿಲ್ಲ, “ಇಲ್ಲಾ, ನಮ್ಮ ರಾಜನು ಎಷ್ಟು ಮುರ್ಖನಿರಬಹುದು. ನಿಮ್ಮಂತಹ ಮೂರ್ಖ ಪ್ರಾಣಿಗಳನ್ನು ಕಟ್ಟಿಕೊಂಡು ಸುಮ್ಮನೆ ರಾಜ್ಯದ ವೆಚ್ಚ ಹೆಚ್ಚಿಗೆ ಮಾಡಿಕೊಳ್ಳುತಿದ್ದಾನೆ..” ಎಂದಾಗಲೂ ಕತ್ತೆ ಏನು ಮಾತನಾಡದೆ ಸುಮ್ಮನಿರುತ್ತದೆ.                     ಮರುದಿನ ರಾಜಧಾನಿಯಲ್ಲಿ ರಾಜನ ಮೆರವಣಿಗೆ ಆಗುತ್ತದೆ. ಅಲ್ಲಿ ಕುದುರೆಗಳ ಹೊಗಳಿಕೆ ಆಗುತ್ತದೆ. ಎಲ್ಲ ಜನರು ರಾಜ ಮತ್ತು ಕುದುರೆಗಳ ಮೇಲೆ ಪುಷ್ಪಾರ್ಪಣೆ ಮಾಡುತ್ತಾರೆ. ಅಂದು ರಾಜ ವೈರಿ ಮುಕ್ತನು ಆಗಿರುತ್ತಾನೆ. ಆದರೂ ಆತ ದೂರದ ಶತ್ರುಗಳಿಂದ ಯಾವ ತೊಂದರೆ ಆಗಬಾರದೆಂದು ಸಮೀಪದ ಎತ್ತರ ಪರ್ವತದ ಮೇಲೆ ಕೋಟೆ ಕಟ್ಟುವದಾಗಿ ಘೋಷಣೆ ಮಾಡುತ್ತಾನೆ. ಕೋಟೆ ಕಟ್ಟಬೇಕಾದರೆ ಕಲ್ಲು, ಮಣ್ಣು, ಕಟ್ಟಿಗೆ, ಸಿಮೇಂಟ್‍ಗಳಂತಹ ಭಾರವಾದ ವಸ್ತುಗಳನ್ನು ಮೇಲೆ ತಲುಪಿಸಬೇಕಿತ್ತು. ಕುದುರೆಗಳಿಂದ ಈ ಕಾರ್ಯ ಅಸಾಧ್ಯ ಎಂಬುದು ರಾಜನಿಗೆ ಮಾತ್ರ ಗೊತ್ತಿರುತ್ತದೆ. ಅದಕ್ಕಾಗಿ ಆತ, ‘ಕೋಟೆಯ ಕೆಲಸಕ್ಕೆ ಕತ್ತೆಗಳನ್ನು ಬಳಿಸಿಕೊಳ್ಳಿ..’ಎಂದು ಅಪ್ಪಣೆ ಕೊಡುತ್ತಾನೆ. ಎಲ್ಲ ಜನರಿಗೆ ಇದು ವಿಚಿತ್ರ ಅನಿಸುವದು, ಆದರೂ ಸೇವಕರು ಬಂದು ಕತ್ತೆಗಳನ್ನು ಒಯ್ಯುವಾಗ ಮತ್ತೆ ಕುದುರೆ ಕತ್ತೆಯನ್ನು ನೋಡಿ, “ಹೋಗು ಕತ್ತೆ ಹೋಗು.. ಅದು ನಿಮ್ಮಿಂದ ಆಗದ ಕೆಲಸ. ರಾಜನಿಗೆ ನಾಳೆಯಿಂದ ಮತ್ತೆ ನಮ್ಮನ್ನೆ ಕರೆಸಬೇಕಾಗುತ್ತದೆ..” ಎಂದು ನಸು ನಕ್ಕಿತು.             ಕತ್ತೆಗಳೆಲ್ಲಾ ಹೋಗಿ ಸಂಯಮದಿಂದ ಭಾರ ವಸ್ತುಗಳನ್ನು ಅತ್ಯಂತ ಕಾಳಜಿಯಿಂದ ಒಯ್ದು ಪರ್ವತದ ಮೇಲೆ ಚೆಲ್ಲುತ್ತವೆ. ಆ ದಿನ ಕತ್ತೆಗಳ ಶ್ರಮ ಮತ್ತು ಪ್ರಾಮಾಣಿಕತೆ ನೋಡಿ ರಾಜನಿಗೆ ಬಹಳ ಸಂತೋಷವಾಯಿತು. ಆಗ ಆತ, “ನಮ್ಮ ಕೋಟೆಯ ಕೆಲಸ ಮುಗಿಯುವ ವರೆಗೆ ಕುದುರೆಗಳ ಆಹಾರ ಕಡಿಮೆ ಮಾಡಿ ಕತ್ತೆಗಳಿಗೆ ಕೊಡಿ..” ಎಂದು ಸೇವಕರಿಗೆ ಅಪ್ಪಣೆ ಮಾಡುತ್ತಾನೆ. ಅಂದು ಕತ್ತೆಗೆ ಬಹಳ ದಣಿವು. ಅದು ಹುಲ್ಲು, ಚಂದಿ ತಿಂದು ಸುಮ್ಮನೆ ಮಲಗಿ ಬಿಟ್ಟಿತು. ಆದರೆ ಕುದುರೆ ಮಾತ್ರ ಅದನ್ನು ನೋಡಿ ಮೂಗು ಮುರಿಯುತ್ತಿತ್ತು. ಪ್ರತಿ ದಿನ ಕುದುರೆ ಕತ್ತೆಯನ್ನು ಏನಿಲ್ಲಾ ಒಂದು ಮಾತು ಹೇಳಿ ಹಿಯಾಳಿಸುತ್ತಿತ್ತು. ಆದರೆ ಅದು ಮಾತ್ರ ಕೋಟೆಯ ಕೆಲಸ ಮುಗಿಯುವ ವರೆಗೆ ಕುದುರೆಯ ಯಾವ ಮಾತಿನತ್ತ ಗಮನ ಕೊಡಲಿಲ್ಲ.              ಕತ್ತೆಗಳ ಪರಿಶ್ರಮದಿಂದ ಬ್ರಹತ್ ಕೋಟೆ ನಿರ್ಮಾಣ ಆಯಿತು. ಇದರಿಂದ ಸಂತೋಷನಾದ ರಾಜನು ಅಲ್ಲಿಯೆ ಪಟ್ಟಾಭಿಷೇಕ ಮಾಡಿಕೊಳ್ಳುವದಾಗಿ ಡಂಗುರು ಸಾರಿದನು. ಸುತ್ತಲಿನ ರಾಜರಿಗೆ ಆಮಂತ್ರಣ ಕಳುಹಿಸಿದನು. ರಾಜನ ಸಿಂಹಾಸನ ಕೂಡ ಕತ್ತೆಗಳೆ ಮೇಲಕ್ಕೆತ್ತಿ ಒಯ್ದವು. ಅಲ್ಲಿ ಬಂದವರೆಲ್ಲಾ ಕೋಟೆಯ ಅದ್ಭುತತೆ ಮಾತನಾಡುತ್ತಿದ್ದರು. ಇಷ್ಟು ಎತ್ತರ ರಾಜ ಭಾರವಸ್ತು ಹೇಗೆ ತಂದನು ಎಂದು ಆಶ್ಚರ್ಯ ಪಟ್ಟರು. ಆಗ ಜಯದೇವನು ಇದರ ಎಲ್ಲ ಶ್ರೇಯ ಕತ್ತೆಗಳಿಗೆ ಕೊಡುತ್ತಾನೆ. ಅಲ್ಲಿ ಬಂದ ರಾಜರು ಸಹ ಕತ್ತೆಗಳ ಕೆಲಸವನ್ನು ಮೆಚ್ಚುತ್ತಾರೆ. ಅಂದು ಮಾತ್ರ ಅಲ್ಲಿಯ ಭವ್ಯ ಕಾರ್ಯಕ್ರಮಕ್ಕೆ ಕತ್ತೆಗಳ ಉಪಸ್ಥಿತಿ ಇತ್ತು ಆದರೆ ಕುದುರೆಗಳನ್ನು ಕೆಳಗಡೆಯ ಮೈದಾನದಲ್ಲಿ ಕಟ್ಟಲಾಗಿತ್ತು.               ಮರುದಿನ ಕತ್ತೆ ಬಂದು ಕುದುರೆಗೆ, “ನೋಡಿದಿಯಾ ಕುದುರೆಯಣ್ಣಾ, ನಾನು ಅಂದು ಹೇಳಿದಂತೆ ಈ ಜಗತ್ತಿನಲ್ಲಿ ಪ್ರತಿಯೊಬ್ಬನಿಗೂ ಒಂದು ಒಳ್ಳೆಯ ಕಾಲ ಬರುತ್ತದೆ. ಅದಕ್ಕೆ ಕಾಯಬೇಕು ಅಷ್ಟೆ. ಆದರೆ ಎಲ್ಲಕ್ಕಿಂತ ಮಹತ್ವದ್ದು ನಮಗೆ ಸಿಕ್ಕ ಅವಕಾಶವನ್ನು ನಾವು ಪರಿಶ್ರಮದಿಂದ ಪ್ರಾಮಾಣಿಕವಾಗಿ ಮಾಡಬೇಕು. ಆವಾಗ ಎಲ್ಲರು ಜಯಕಾರ ಹಾಕುತ್ತಾರೆ..” ಎಂದು ವಿನಯದಿಂದ ಹೇಳಿತು. ಕುದುರೆಗೆ ತನ್ನ ತಪ್ಪಿನ ಅರಿವಾಯಿತು. ಮುಂದೆ ಅದು ತನ್ನ ಅಹಂಕಾರ ಬಿಟ್ಟು ಸ್ನೇಹದಿಂದ ಬಾಳುತ್ತದೆ. ********* ಮಲಿಕಜಾನ ಶೇಖ

ಮಕ್ಕಳ ಕಥೆ Read Post »

You cannot copy content of this page

Scroll to Top