ಬಣ್ಣದ ವೇಷ
ಕಥೆ ಪ್ರಜ್ಞಾ ಮತ್ತಿಹಳ್ಳಿ ನೀಲಕಮಲವೆಂದು ಚೆಂದನೆಯ ಸ್ಟಿಕ್ಕರ್ ಅಂಟಿಸಿಕೊಂಡು ಫಳಫಳ ಹೊಳೆಯುತ್ತಿದ್ದ ಸ್ಟೀಲು ತಾಟು ಢಮಾರ್ ಎಂಬ ದೊಡ್ಡ ಸಪ್ಪಳದೊಂದಿಗೆ ಗೋಡೆಗೆ ಮುಖ ಗುದ್ದಿಕೊಂಡು ನೆಲಕಪ್ಪಳಿಸುವುದು, ಅದೇ ಗೋಡೆಯ ಮೇಲೆ ನೇತಾಡುವ ಬಂಗಾರ ಬಣ್ಣದ ಗುಂಡು ಮೋರೆಯ ಗಡಿಯಾರ ಢಣ್ ಢಣ್ ಎಂದು ಒಂಭತ್ತು ಸಲ ಹೊಡೆದುಕೊಳ್ಳುವುದೂ ಏಕಕಾಲದಲ್ಲಿಯೇ ಘಟಿಸುವ ಮೂಲಕ ತಗ್ಗಿನಕೇರಿಯೆನ್ನುವ ಊರಿನಲ್ಲೇ ಹೆಚ್ಚು ತಗ್ಗಾಗಿರುವ ಆ ಕೇರಿಯಲ್ಲೊಂದು ಯುದ್ಧ ಘೋಷಣೆಯಾಗಿತ್ತು. ದುರವೀಳ್ಯವನ್ನು ತನ್ನ ಕುದಿಯುವ ಮನಸ್ಸಿನಲ್ಲಿಯೇ ತಯಾರಿಸಿಕೊಂಡ ನಾಗಲಕ್ಷ್ಮಿ ಹೆಡೆಯಾಡಿಸುವ ಘಟಸರ್ಪದಂತೆ ಧುಸ್ ಧುಸ್ ಉಸಿರು ಬಿಟ್ಟಳು. ಆದರೆ ರಣವೀಳ್ಯವನ್ನು ಇಸಿದುಕೊಳ್ಳಬೇಕಾಗಿದ್ದ ಆಕೆಯ ಎದುರು ಪಕ್ಷದ ಸೇನಾನಿ ಪದುಮಣ್ಣ ಅಂದರೆ ಆಕೆಯ ಗಂಡ ಆಸುಪಾಸಿನಲ್ಲೆಲ್ಲೂ ಇಲ್ಲದಿದ್ದ ಕಾರಣ ಬೋರಲು ಬಿದ್ದ ತಾಟಿನಿಂದ ಹೊರಬಿದ್ದು ಚೆಲ್ಲಾಪಿಲ್ಲಿಯಾದ ಅನ್ನದಗುಳಿನಷ್ಟೇ ಅನಾಥಳು ತಾನೆಂಬ ಭಾವ ಮೂಡಿದ್ದೇ ತಡ, ಅಳುಮಿಶ್ರಿತ ಕ್ರೋಧದ ಅಲೆಯೊಂದು ಅವಳ ನಾಭಿಯಾಳದಿಂದ ಹೊರಟು ಗಂಟಲಿನವರೆಗೆ ಬಂದಿತು. ಆಗ ಅವಳ ಧುಸ್ ಧುಸ್ ಸದ್ದು ಕೆಲವು ಬಿಕ್ಕುಗಳನ್ನು ಸೇರಿಸಿಕೊಂಡು ಹುಂ ಕ್ಕು ಕ್ಕು ಹುಂ ಕ್ಕು ಕ್ಕು ಎಂಬಂತಹ ವಿಚಿತ್ರ ಸಪ್ಪಳವಾಗಿ ಪರಿವರ್ತನೆ ಹೊಂದಿತು. ಅವಳ ಕೈಯಿಂದ ಬೀಸಿ ಒಗೆಯಲ್ಪಡುವ ಮೊದಲು ಪುಟ್ಟ ಪುಟ್ಟ ತುತ್ತುಗಳು ತುಂಬಿದ್ದ ತಾಟನ್ನು ಆವರೆಗೆ ಹೊತ್ತುಕೊಂಡಿದ್ದ ಟೀಪಾಯಿಯ ಮೇಲೆ ಕೂತಿದ್ದ ಮೊಬೈಲು ಈಗಷ್ಟೇ ಮುಗಿದ ಕರೆಯ ಸಲುವಾಗಿ ತನ್ನೊಳಗೆ ಹಚ್ಚಿಕೊಂಡಿದ್ದ ಬೆಳಕನ್ನು ಆರಿಸಿ ಕಪ್ಪಾಯಿತು. ಎಂದೂ ಯಾವ ಕಾರಣಕ್ಕೂ ಅಳು ಎಂಬ ಕ್ರಿಯೆಯನ್ನೇ ಇಷ್ಟ ಪಡದ, ಅಳುವವರ ಸಮೀಪಕ್ಕೆ ಹೋಗಲಿಕ್ಕೂ ಇಚ್ಛೆಪಡದ, ತಾನೆಂಬೋ ತಾನು ತನ್ನ ಮನೆ, ಸಂಸಾರಗಳನ್ನು ತನ್ನಿಚ್ಛೆಯಂತೆಯೇ ನಡೆಸಬಲ್ಲ ಭಯಂಕರ ತಾಕತ್ತಿನವಳೆಂದು ಬಲವಾಗಿ ನಂಬಿಕೊಂಡಿದ್ದ ನಾಗಲಕ್ಷ್ಮಿಗೆ ತನ್ನೊಳಗೆ ಉಕ್ಕುತ್ತಿರುವ ಭಾವನೆಯನ್ನು ಹೇಗೆ ನಿರ್ವಹಿಸಬೇಕೆಂದೇ ತಿಳಿಯದಂತಾಗಿ ಆವೇಶದ ನಡುಕ ಬರತೊಡಗಿತು. ತಾನೀಗ ಸೋತಿದ್ದೇನೆಂಬ ನಿರಾಶೆ, ಗೆಲ್ಲಲಾಗಲಿಲ್ಲವೆಂಬ ಹತಾಶೆ, ತನ್ನ ಸೋಲನ್ನು ತಾನೆಂದೂ ಸ್ವೀಕರಿಸಬಾರದೆಂಬ ಹಠ ಇವೆಲ್ಲ ಕೂಡಿದ ಪ್ರಳಯಾಗ್ನಿಯಂತಹ ಬೆಂಕಿಯೊಂದು ಒಡಲಲ್ಲಿ ಹುಟ್ಟಿದ್ದೇ ತಡ, ಹಲ್ಲು ಕಡಿಯುತ್ತ, ಚಪ್ಪಲಿ ಮೆಟ್ಟಿಕೊಂಡು ಬಾಗಿಲನ್ನು ಹಾಗೇ ಮುಂದಕ್ಕೆಳೆದುಕೊಂಡು ಹೊರಟುಬಿಟ್ಟಳು. ಕೆಂಡ ಕಾರುತ್ತಿದ್ದ ಅವಳ ಕಣ್ಣೊಳಗೆ ಗಂಡ ಪದುಮಣ್ಣನ ಚಿತ್ರ ಗಿರಿಗಿರಿ ತಿರುಗುತ್ತಿತ್ತು. ಅಲ್ಲೇ ಪಕ್ಕದ ಬೀದಿಯಲ್ಲಿ ಅಟ್ಟದ ಮೇಲಿರುವ ಅವನ ಆಫೀಸಿಗೆ ನುಗ್ಗಿ, ಕೇಸಿನ ಫೈಲುಗಳನ್ನು ಸುತ್ತಲೂ ರಾಶಿ ಹಾಕಿಕೊಂಡು ಕೂತಿರುವ ಅವನನ್ನು ಹಿಡಿದು ತನ್ನ ಸಿಟ್ಟಿಳಿಯುವ ತನಕ ಬಡಿಯಲೇಬೇಕೆಂದು ರೋಷದಿಂದ ಹೆಜ್ಜೆಗಳನ್ನು ಎತ್ತೆತ್ತಿ ಇಡತೊಡಗಿದಳು. ತನ್ನನ್ನು ಕಂಡ ಕೂಡಲೇ “ಅಕ್ಕಾ ಆರಾಮಾ” ಎಂದು ಹಲ್ಲು ಕಿರಿಯುತ್ತ, “ಯಾಕಕ್ಕ ಇಷ್ಟು ಮೈ ಬಂದದಲ್ಲ, ವಾಕಿಂಗೂ ಮಾಡೂದಿಲ್ವಾ ಹೆಂಗೆ, ಡಾಕ್ಟ್ದ್ರಿಗಾದರೂ ತೋರಸ್ಕಳಿ” ಎಂದೆಲ್ಲ ಬೊಗಳೆ ಬಿಡುತ್ತ ತನ್ನ ಬಳ್ಳಿ ಮೈಯನ್ನು ವಾಲಾಡಿಸುವ ವಲ್ಲರಿಯನ್ನು ಇವತ್ತು ಬಿಡಬಾರದು. ಕತೆ ಹೇಳಲು ಭೂಮಿಗಿಳಿದ ನೀಲಿ ಮೋಡದಂತೆ ಗಾಳಿಗೆ ಹಾರಾಡುವ ಅವಳ ಅಲೆಗೂದಲನ್ನು ಮುಷ್ಟಿಯಲ್ಲಿ ಹಿಡಿದು ದರದರ ಎಳೆಯಬೇಕು. ಎಷ್ಟು ಸೊಕ್ಕು ಆ ಚೋದಿಗೆ, ತಾನು ತೆಳ್ಳಗೆ ಬೆಳ್ಳಗೆ ಸುಂದರಿಯಾಗಿದ್ದೇನೆ ಅಂತಲೇ ಇಷ್ಟು ಉರಿಯುವುದಲ್ವ ಅವಳು. ಪಟಪಟ ಇಂಗ್ಲೀಷು ಮಾತಾಡ್ತೇನೆ ಅಂತ, ರೊಯ್ಯನೆ ಗಾಡಿ ಬಿಟ್ಟುಕೊಂಡು ಬೇಕೆಂದಲ್ಲಿ ಹೋಗಬಲ್ಲೆ ಅಂತ ಪೊಗರು ತುಂಬಿಕೊಂಡಿದೆ. ಆದ್ದರಿಂದಲೇ ನನ್ನ ಗಂಡ ರಾತ್ರಿ ಒಂಭತ್ತು ಹೊಡೆದರೂ ಕೇಸು, ಕೇಸು ಅಂತ ಅವಳ ಮಗ್ಗುಲಲ್ಲಿ ಕೂತೇ ಇರಲಿಕ್ಕೆ ಸಾಯ್ತಾನೆ. ತಾನು ಫೋನು ಮಾಡಿದರೆ ಆಂ, ಊಂ ಕೇಳ್ತಾ ಇಲ್ಲ, ನೆಟ್ ವರ್ಕ ಇಲ್ಲ ಅಂತ ಫೋನು ಇಡ್ತಾನೆ, ಬೋಳಿಮಗ, ಇವತ್ತು ಅವನ ಗ್ರಾಚಾರ ಬಿಡಿಸದಿದ್ರೆ ನಾನು ಆಟಕ್ಕೊಂದೇ ವೀರಭದ್ರ ಎಂದೆನಿಸಿಕೊಳ್ಳುವ ಗಪ್ಪತಿಯ ಮಗಳೇ ಅಲ್ಲ. ಹೀಗೆಂದು ಉರಿಯುತ್ತ, ಮತ್ತೆ ಮತ್ತೆ ಕೆದರಿ ಉರಿ ಹೆಚ್ಚಿಸಿಕೊಳ್ಳುತ್ತ ಸೀರೆ ಉಟ್ಟ ಅಗ್ನಿಕುಂಡದ ಹಾಗೆ ಹೊರಟ ನಾಗಲಕ್ಷ್ಮಿ ಉರುಫ್ ನಾಗಕ್ಕ ಮೊದಲಿನಿಂದಲೂ ಸಿಟ್ಟಿನ ಸ್ವಭಾವದವಳೇ. ಗುಡ್ಡೇಮಠದ ಮಹಾಲಿಂಗೇಶ್ವರ ಯಕ್ಷಗಾನ ಮೇಳದಲ್ಲಿ ವೀರಭದ್ರನ ಪಾತ್ರ ಹಾಕುತ್ತಿದ್ದ ಗಪ್ಪತಿಯ ಏಕೈಕ ಮಗಳೇ ನಾಗಲಕ್ಷ್ಮಿ. ವರ್ಷದ ಎಂಟು ತಿಂಗಳು ಮೇಳದೊಂದಿಗೆ ತಿರುಗುತ್ತ ಉಳಿದ ನಾಕು ತಿಂಗಳಲ್ಲಿ ಕೊಟ್ಟೆ ಕೊನೆ, ಸೊಪ್ಪು-ಮಣ್ಣು ಎಂದು ಗೇಯುತ್ತ ಸಂಸಾರ ಮಾಡುತ್ತಿದ್ದ ಗಪ್ಪತಿಯ ಹೆಂಡತಿ ಗಂಗೆ ಮೂರು ಮಕ್ಕಳನ್ನು ಹೆತ್ತಿದ್ದಳಾದರೂ ಒಂದೂ ಉಳಿದಿರಲಿಲ್ಲ. ಕಡೆಗೆ ಯಾರೋ ಹಿರಿಯರು ನಾಗದೋಷವಿರಬಹುದೆಂದು ಸಲಹೆ ಕೊಟ್ಟ ಮೇಲೆ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಹರಕೆ ಹೇಳಿಕೊಂಡ ಮೇಲೆ ನಾಗಲಕ್ಷ್ಮಿ ಹುಟ್ಟಿದ್ದು. ಅಪರೂಪದ ಮಗಳು ಅಂತ ಅಪ್ಪ-ಅಮ್ಮ ಮುದ್ದು ಮಾಡಿದ್ದೇ ಮಾಡಿದ್ದು. ಅವಳು ಹೇಳಿದ ಮಾತನ್ನು ತೆಗೆದು ಹಾಕುತ್ತಲೇ ಇರಲಿಲ್ಲ. ಅಪ್ಪನ ಜೊತೆ ಆಟಕ್ಕೂ ಹೋಗಿ ಅವನ ವೀರಭದ್ರನ ಪಾತ್ರ ನೋಡಿ ಬರುತ್ತಿದ್ದ ನಾಗಲಕ್ಷ್ಮಿ ಮನೆಯಲ್ಲಿ ಅದೇ ಸಿಟ್ಟು-ಕೋಪ-ತಾಪಗಳನ್ನು ಅನುಕರಣೆ ಮಾಡುತ್ತಿದ್ದಳು. ತಮ್ಮ ಮಗಳು ದೈವಾಂಶ ಸಂಭೂತೆ ಅಂತಲೇ ಭಾವಿಸಿಕೊಂಡಿದ್ದ ಗಂಗೆ-ಗಣಪರು ಮಗಳಿಗೆ ಏನೆಂದರೆ ಏನೂ ಹೇಳುತ್ತಿರಲಿಲ್ಲ. ಅವರ ಕೊಂಡಾಟಗಳನ್ನೂ, ನಾಗಿಯ ಮೊಂಡಾಟ-ಭಂಡಾಟಗಳನ್ನು ಹತ್ತಿರದಿಂದ ಬಲ್ಲವರೆಲ್ಲ ಈ ನಮೂನಿ ಮಗಳನ್ನು ಬೆಳೆಸಿದ್ರೆ ನಾಳೆ ಆ ಕೂಸು ಸಂಸಾರ ಮಾಡದಾರೂ ಹೌದಾ? ಎಂದು ಮಾತಾಡಿಕೊಂಡರು. ಆಸುಪಾಸಿನಲ್ಲೆಲ್ಲೂ ಗಂಡು ಸಿಗದೇ ಗಪ್ಪತಿ ತನ್ನ ಮಗಳಿಗಾಗಿ ದೂರದ ಊರಿನ ಗಂಡುಗಳ ತಲಾಶೆಗೆ ಇಳಿದ. ಆಗ ಅವನ ಮೇಳದ ಭಾಗವತರೊಬ್ಬರು ಪದುಮಣ್ಣನ ಬಗ್ಗೆ ಹೇಳಿ ಗೋವಿನಂಥಾ ಸಾಧು ಮನುಷ್ಯ, ನಿನ್ನ ಮಗಳು ಹೇಳ್ದಾಂಗೆ ಕೇಳ್ಕಂಡು ಇರ್ತ ನೋಡು ಅಂತ ಶಿಫಾರಸು ಮಾಡಿದರು. ನಮ್ಮ ಪದುಮಣ್ಣ ಇದ್ದಾನಲ್ಲ ಈತ ಶಾಲೆಗೆ ಕಾಲಿಟ್ಟ ಕ್ಷಣದಿಂದ ಅಂದರೆ ತನ್ನ ನಾಲ್ಕನೆಯ ವಯಸ್ಸಿನಿಂದಲೇ ದುಡಿಯಲಾರಂಭಿಸಿದ್ದಾನೆಂದರೆ ನೀವು ನಂಬಲೇಬೇಕು. ಅವನು ಶಾಲೆಗೆ ಹೋಗುವ ಕಾಲದಲ್ಲಿ ಅಂದರೆ ಈಗೊಂದು ಮೂವತ್ತು ವರ್ಷದ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ವತಿಯಿಂದ ಪ್ರತಿ ಮದ್ಯಾಹ್ನ ಉಪ್ಪಿಟ್ಟು ಕೊಡುತ್ತಿದ್ದರು. ದೊಡ್ಡಗಾತ್ರದ ಕಾಳಿನ ಜವೆಗೋಧಿಯಿಂದ ತಯಾರಿಸಿದ ಉಪ್ಪಿಟ್ಟು ಬಿಸಿಬಿಸಿಯಾಗಿ ರುಚಿಯಾಗಿರುತ್ತಿತ್ತು. ಹಾಜರಿ ಪುಸ್ತಕದಲ್ಲಿ ನಮೂದಿಸಿದ ಹುಡುಗರ ಸಂಖ್ಯೆಗನುಗುಣವಾಗಿ ಉಪ್ಪಿಟ್ಟು ಬರುತ್ತಿತ್ತು. ಆದರೆ ನಿಜವಾಗಿಯೂ ಹಾಜರಿರುತ್ತಿದ್ದವರು ಅದರ ಅರ್ಧದಷ್ಟು ಹುಡುಗರು ಮಾತ್ರ. ಆದ್ದರಿಂದ ಹುಡುಗರು ತಮಗೆ ಸಾಕೆನ್ನಿಸುವಷ್ಟು ಉಪ್ಪಿಟ್ಟು ಹಾಕಿಸಿಕೊಳ್ಳಬಹುದಿತ್ತು. ಪದುಮಣ್ಣ ಶಾಲೆಗೆ ಕಾಲಿಟ್ಟ ದಿನವೇ ದೊಡ್ಡದೊಂದು ಪ್ಲಾಸ್ಟಿಕ್ ಕವರಿನಲ್ಲಿ ಉಪ್ಪಿಟ್ಟು ಹಾಕಿಸಿಕೊಂಡ. ಸೀದಾ ಶಾಲೆಯ ಹೊರಗೆ ಬಂದ. ಅಲ್ಲಿ ರಸ್ತೆಯ ಪಕ್ಕದ ಕಾಲುವೆಗಳನ್ನು ಅಗೆಯುವ ಕೆಲಸದಲ್ಲಿ ತೊಡಗಿರುವ ಜನರು ಕೂತಿದ್ದರು. ಅವರೆದುರು ಘಮಘಮಿಸುವ ಉಪ್ಪಿಟ್ಟು ತೋರಿಸಿದ. ತಮ್ಮ ಡಬ್ಬಿಗಳಲ್ಲಿರುವ ತಂಗಳಿಗಿಂತ ಈ ಉಪ್ಪಿಟ್ಟು ತಿನ್ನುವುದು ಬಹಳ ಉತ್ತಮವೆಂದು ಭಾವಿಸಿದ ಅವರು ಎರಡು ರೂಪಾಯಿ, ಮೂರು ರೂಪಾಯಿ ಮುಂತಾಗಿ ಹಣ ಕೊಟ್ಟು ಉಪ್ಪಿಟ್ಟು ಕೊಂಡರು. ಹೀಗೆ ಶಾಲೆಗೆ ಹೋಗತೊಡಗಿದಂದಿನಿಂದಲೇ ಗಳಿಕೆ ಮಾಡಲಾರಂಭಿಸಿದ ಅದ್ಭುತ ಪ್ರತಿಭಾರತ್ನ ಆತ. ತನಗೆ ಅಯಾಚಿತವಾಗಿ ದೊರಕಿದ ಆಹಾರದ ಗಿರಾಕಿಗಳನ್ನು ಹಲವಾರು ವ್ಯಾಪಾರಗಳಿಗೆ ಆತ ಬಳಸಿಕೊಂಡ. ಅಂದರೆ ಅವನ ಮನೆಯಲ್ಲಿ ಮಾಡಿದ ದೋಸೆ, ರೊಟ್ಟಿ, ಕಡುಬು, ಪಲ್ಯಗಳೇನಾದರೂ ಆತನಿಗೆ ಇಷ್ಟವಾಗದಿದ್ದರೆ ಬೇರೆ ಹುಡುಗರಂತೆ ಆತ ರಗಳೆ ಮಾಡುತ್ತಿರಲಿಲ್ಲ. ಸುಮ್ಮನೆ ಒಂದು ಕವರಿನಲ್ಲಿ ಹಾಕಿಕೊಂಡು ಪಾಟಿಚೀಲದಲ್ಲಿರಿಸಿಕೊಂಡು ಶಾಲೆಗೆ ಬಂದು ಮಾರಿಬಿಡುತ್ತಿದ್ದ. ಕೆಲವು ಸಲ ತನ್ನ ಪಾಲಿನ ತಿಂಡಿಗಳು ಸಾಲದೆಂದು ಅನ್ನಿಸಿದಾಗ ಅಂದರೆ ಮಾರುಕಟ್ಟೆಯ ಬೇಡಿಕೆ ಹೆಚ್ಚಿದ್ದಾಗ ಅಡಿಗೆ ಮನೆಯಲ್ಲಿ ಹರಿದ ದೋಸೆ, ಉಳಿದ ರೊಟ್ಟಿ ಇತ್ಯಾದಿಗಳನ್ನು ಎಮ್ಮೆಗೆ ಹಾಕುವುದಕ್ಕಾಗಿ ತೆಗೆದಿರಿಸುವ ಅಕ್ಕಚ್ಚು ಪಾತ್ರೆಯಿಂದ ಎಗರಿಸಿಕೊಂಡು ತನ್ನ ಸ್ಟಾಕ್ ಶಾರ್ಟೇಜು ಸರಿಪಡಿಸಿಕೊಳ್ಳುತ್ತಿದ್ದ. ಇಂತಹ ಮಾರಾಟದಿಂದ ಗಳಿಸಿದ ಹಣವನ್ನು ಅವನೆಂದೂ ಪೋಲು ಮಾಡುತ್ತಿರಲಿಲ್ಲ. ಮನೆಯ ಪುರುಷ ಸದಸ್ಯರಿಗೆ ತಿಳಿಯದಂತೆ ಮಹಿಳೆಯರು ಕೈಗೊಳ್ಳುವ ಸಾಹಸಗಳಿಗೆ ಬಂಡವಾಳದಂತೆ ಕೈಕಡ ಕೊಡುತ್ತಿದ್ದ. ಅದಕ್ಕೆ ಬದಲಾಗಿ ಆ ಹೆಂಗಸರು ತಮಗೆ ಅನುಕೂಲವಾದಾಗ ಹೆಚ್ಚಿನ ಹಣವನ್ನು ಕೊಡುವುದಲ್ಲದೇ ಹಲವು ಬಗೆಯ ತಿಂಡಿ-ತೀರ್ಥಗಳನ್ನು ಬಡ್ಡಿಯಂತೆ ಕೊಡುತ್ತಿದ್ದರು. ಹೀಗೆ ಪದುಮಣ್ಣನ ವ್ಯಾಪಾರ-ವಹಿವಾಟುಗಳು ಬಾಲ್ಯದಲ್ಲೇ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದವು. ವಿಷಯ ಇಷ್ಟೇ ಆಗಿದ್ದರೆ ಪದುಮಣ್ಣನ ಬಗ್ಗೆ ಬರೆಯಬೇಕಾಗಿರಲಿಲ್ಲ. ಅವನು ತನ್ನ ಮಾರಾಟಪ್ರತಿಭೆಯನ್ನು ಮುಂದುವರೆಸಿಕೊAಡು ಅಪ್ರತಿಮ ವ್ಯವಹಾರಸ್ಥನಾಗಿ ಟಾಟಾ, ಅಂಬಾನಿಗಳಿಗೇ ಸೆಡ್ಡು ಹೊಡೆದು ಪದ್ಮವಿಭೂಷಣ ಇತ್ಯಾದಿ ಪಡೆದುಕೊಂಡು ಸುಖವಾಗಿ ಇರಬಹುದಿತ್ತು. ಆದರೆ ಪ್ರಾಥಮಿಕಶಾಲೆ ಬಿಟ್ಟು ಹೈಸ್ಕೂಲಿಗೆ ಬರುವಷ್ಟರಲ್ಲಿ ಪದುಮಣ್ಣ ದುಡಿಮೆಯ ದಾರಿಯನ್ನೇ ಬದಲಾಯಿಸಿಕೊಂಡಿದ್ದ. ಸರಕಿನಿಂದ ಸೇವಾ ಕ್ಷೇತ್ರಕ್ಕೆ ಶಿಫ್ಟ್ ಆಗಿದ್ದ. ಅಂದರೆ ಗೂಡ್ಸ್ ಟು ಸರ್ವಿಸ್ ಸೆಕ್ಟರ್. ಪದುಮಣ್ಣನಿಂದ ಹಣಕಾಸಿನ ನೆರವು ತೆಗೆದುಕೊಳ್ಳುತ್ತಿದ್ದ ಹೆಂಗಸರು ಅವನನ್ನು ತಮ್ಮ ಒಳಗುಟ್ಟಿನ ಸಂಗತಿಗಳಿಗೆ ಆಪ್ತ ಸಲಹೆಗಾರನನ್ನಾಗಿ ಬಳಸಿಕೊಳ್ಳುತ್ತಿದ್ದರು. ಗಂಡಸರ ಗಮನಕ್ಕೆ ಬರದಂತೆ ಗುಟ್ಟಾಗಿ ಶೇಖರಿಸಿಕೊಂಡ ಗೋಡಂಬಿ, ದಾಲ್ಚಿನ್ನಿ, ಮುರುಗಲ ತುಪ್ಪ, ಆರಾರೋಟು, ಅರಿಶಿಣ ಪುಡಿ ಇತ್ಯಾದಿಗಳಿಗೆ ಸೂಕ್ತ ಗಿರಾಕಿಯ ಹೆಸರು ಸೂಚಿಸುವುದು, ಹೆಂಗಸರು ಮದುವೆಯಂತಹ ಕಾರ್ಯಗಳಿಗೆ ಹೋಗುವಾಗ ಎರವಲು ಚಿನ್ನ ಧರಿಸುವ ಆಸೆಪಟ್ಟರೆ ಯಾವ ಆಭರಣ ಯಾರ ಬಳಿಯಿದೆಯೆಂಬ ಮಾಹಿತಿ ನೀಡುವುದು, ಅವರ ಗುಪ್ತಧನಕ್ಕೆ ನಂಬಿಗಸ್ತ ಗಿರಾಕಿ ಹುಡುಕುವುದು ಹೀಗೆ ತನ್ನ ಹಳ್ಳಿಯ ಮಹಿಳಾ ಆರ್ಥಿಕತೆಯ ಕ್ಷೇತ್ರಕ್ಕೆ ಪದುಮಣ್ಣನದು ದೊಡ್ಡ ಕೊಡುಗೆಯಿದೆ. ಆದರೆ ಅವನ ಅಮೂಲ್ಯ ಸೇವೆಯ ಮಹತ್ವ ಅರ್ಥವಾಗದ ಅವನ ಶಿಕ್ಷಕರು ಅವನನ್ನು ಅಡ್ಡಕಸುಬಿಯೆಂದು ಅಪಮಾನಿಸಿ ಶಿಕ್ಷೆ ನೀಡುತ್ತಿದ್ದರು. ಕಾಲೇಜು ಮೆಟ್ಟಿಲು ಹತ್ತುವಷ್ಟರಲ್ಲಿ ಪದುಮಣ್ಣನ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತಾರಗೊಂಡಿತು. ಇನ್ನೂ ಮೊಬೈಲುಗಳು ಬಂದಿರದ ಆ ಕಾಲದಲ್ಲಿ ಮಲೆನಾಡಿನ ಕೊಂಪೆಗಳಿAದ ಸುತ್ತುವರೆದ ಪಟ್ಟಣದಲ್ಲಿ ವಾಸಿಸುತ್ತಿದ್ದ ಆತ ಯಾವುದೇ ವ್ಯಕ್ತಿಯ ಯಾವುದೇ ರೀತಿಯ ಕೆಲಸಕ್ಕೆ ಒದಗಬಲ್ಲ ಸರ್ವೀಸ್ ಪ್ರೊವೈಡರ್ ಆಗಿದ್ದ. ತಾನು ಕಾಲೇಜಿಗೆ ಹೋಗುವ ದಾರಿಯಲ್ಲಿಯೇ ಕರೆಂಟು ಬಿಲ್ಲು ಕಟ್ಟುವುದು, ಔಷಧಿ ಗುಳಿಗೆ ತರುವುದು, ಬ್ಯಾಂಕಿನಿಂದ ದುಡ್ಡು ತಂದು ಕೊಡುವುದು, ಯಾರಿಗಾದರೂ ಮನಿಯಾರ್ಡರು ಮಾಡುವುದು, ದಿನಸಿ ಸಾಮಾನು ತಂದು ಕೊಡುವುದು ಇಂತಹ ನೂರಾರು ಕೆಲಸಗಳನ್ನು ತಕರಾರೆತ್ತದೆ ಮಾಡುತ್ತಿದ್ದ. ಪ್ರತಿ ಕೆಲಸಕ್ಕೂ ಪ್ರತಿಫಲವಾಗಿ ಏನಾದರೂ ಸಿಕ್ಕೇ ಸಿಗುತ್ತಿತ್ತು. ಇಂತಿಪ್ಪ ಪದುಮಣ್ಣ ವಕೀಲಿ ಪದವಿ ಪಡೆದುಕೊಂಡು ವೃತ್ತಿ ಆರಂಭಿಸಿದ. ದಿನದ ಇಪ್ಪತ್ನಾಲ್ಕು ತಾಸು ಕೂಡ ಕಕ್ಷಿದಾರರ ಮನೆಯ ಕಡೆಗೆ ಕಾಲಾಡಿಸುತ್ತ ಇರುವ ಪ್ರವೃತ್ತಿಯಿಂದಾಗಿ ಕೇಸುಗಳು ಜೋರಾಗೇ ಸಿಗುತ್ತಿದ್ದವು. ಅವನಿಂದ ಉಪಕೃತರಾದವರೊಬ್ಬರು ತಮ್ಮ ನೆಂಟರ ಪೈಕಿಯ ಭಾಗವತರಿಗೆ ಶಿಫಾರಸು ಮಾಡಿ ಮದುವೆ ಮಾಡಿಸಿದರು. ಹಾಗೆ ಅವನ ಜೀವನದಲ್ಲಿ ಪ್ರವೇಶ ಪಡೆದುಕೊಂಡವಳು ನಾಗಲಕ್ಷ್ಮಿ. ಅರ್ಥಾತ್ ನಾಗಕ್ಕ. ಆದರೇನು ಮಾಡೋಣ. ಆ ಮದುವೆ ಮಾಡಿಸಿದವರು ಅವರಿಬ್ಬರ ಸ್ವಭಾವಗಳನ್ನು ಹೋಲಿಕೆ ಮಾಡಿ ವಿಚಾರ ಮಾಡಿರಲೇ ಇಲ್ಲ. ಹೀಗಾಗಿ ಪದುಮಣ್ಣನ ವಿರುದ್ಧ ಸ್ವಭಾವದ ನಾಗಕ್ಕ ಅವನ ಕೈ ಹಿಡಿದು ಬಂದಳು. ಅವಳೋ ಪಕ್ಕಾ ಒಂಟಿಗೂಬೆ. ಜನರ ತಲೆ ಕಂಡರೇ ಅವಳಿಗಾಗದು. ಹೊರತಿರುಗಾಟವೆಂದರೆ ಮುಖ ಸಿಂಡರಿಸುತ್ತಾಳೆ. ಸದಾಕಾಲ ಬಾಗಿಲು ಹಾಕಿಕೊಂಡು ಒಳಗೇ ಇರುವ ಮನೆಗುಬ್ಬಿ. ತಾನು-ತನ್ನ ಗಂಡ ಇಬ್ಬರೇ ರಾಜ-ರಾಣಿಯರ ಹಾಗೆ ಬದುಕಬೇಕೆಂದು ಕನಸು ಕಂಡವಳು. ಅವಳಿಗೆ ಪದುಮಣ್ಣನ ವಿಶ್ವಕುಟುಂಬಿತನ ಕಂಡು ದಿಗಿಲಾಗಿಬಿಟ್ಟಿತು. ಅವನ ಹಿಂದೆ ಹಿಂಡುಗಟ್ಟಿಕೊಂಡು ಬರುವ ಕಕ್ಷಿದಾರರನ್ನು ಗೌ ಗೌ ಎಂದು ಕೂಗಿ ಓಡಿಸಿಬಿಟ್ಟಳು. ಯಕ್ಷಗಾನ, ತಾಳಮದ್ದಲೆ, ದೇವಕಾರ್ಯ, ಊರ ಸಮಾರಾಧನೆ ಅಂತೆಲ್ಲ ಊರೊಟ್ಟಿನ ಕೆಲಸಕ್ಕಾಗಿ ದಿನಾಲೂ ಹುಡುಕಿಕೊಂಡು ಬರುವ ಪುರಬಾಂಧವರಿಗೂ ಅವಳಿಂದ ಮಂಗಳಾರತಿ ಸಿಕ್ಕಿತು. ಆದರೆ ಪದುಮಣ್ಣನ ಪಾಡು ನೋಡಿ. ಈಗ ಬಂದ ಹೆಂಡತಿಗಾಗಿ ಲಾಗಾಯ್ತಿನಿಂದ ಮಾಡಿಕೊಂಡು ಬಂದ ಜೀವನವನ್ನು ಬದಲಾಯಿಸಿಕೊಳ್ಳಲಿಕ್ಕೆ ಸಾಧ್ಯವೆ? ಅದಕ್ಕಾಗಿ ಪದುಮಣ್ಣ ಮನೆಯಿಂದಾಚೆಗೆ ಇರುವುದೇ ಜಾಸ್ತಿಯಾಯಿತು. ಹೆಂಡತಿ ಬೈಯುತ್ತಾಳೆ







