2017 ರಲ್ಲಿ ಸೃಷ್ಟಿಯಾದ ಸಂಪತ್ತಿನ ಶೇ.73 ರಷ್ಟು ಪಾಲು ಶೇ.1 ರಷ್ಟು ಸಿರಿವಂತರು ಹಂಚಿಕೊಂಡಿದ್ದರೆ, ಭಾರತದ ಅತಿಬಡತನದಲ್ಲಿರುವ ಶೇ.50 ರಷ್ಟು ಜನಸಂಖ್ಯೆ (67 ಕೋಟಿ ಭಾರತೀಯರು) ಕೇವಲ ಶೇ.1ರಷ್ಟು ಸಂಪತ್ತು ಹೆಚ್ಚಳವನ್ನು ಕಂಡಿದ್ದಾರೆಂದು ವರದಿಯಾಗಿದೆ.
ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ
ವಿಶೇಷ ಲೇಖನ ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ ಆಶಾ ಸಿದ್ದಲಿಂಗಯ್ಯ ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಗುರುತಿಸ ಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಇಲ್ಲವೆ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ. ಸುಮಾರು 15 ಕಿ.ಮಿ. ಹಾಗೂ ಶಿರಾಳ ಕೊಪ್ಪದಿಂದ 4 ಕಿ.ಮಿ.ದೂರದಲ್ಲಿದೆ. ಇದೀಗ ಇದು ಪ್ರವಾಸಿ ತಾಣವಾಗಿಯೂ ಪ್ರಸಿದ್ದವಾಗಿದೆ. ಪರರ ಪಾಲಾಗಿದ್ದ ಇಲ್ಲಿರುವ ಕೌಶಿಕ ಮಹಾರಾಜರ ಕೋಟೆ ಹಾಗೂ ಅಕ್ಕನ ದೇವಸ್ಥಾನ ಇರುವ ಜಮೀನನ್ನು ಉಳಿಸಲು ಪ್ರಯತ್ನಿಸಿ, ಹೋರಾಟ ನಡೆಸಿ, ಯಶಸ್ವಿಯಾಗಿದ್ದು ಸಿರಿಗೆರೆಯ ಶ್ರೀಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು. ಇದನ್ನು ಇವರು ಉಳಿಸಿ ಕೊಟ್ಟ ನಂತರ ಸರಕಾರ ಇತ್ತ ಗಮನ ಹರಿಸಿ,ಅದರ ಅಭಿವೃದ್ದಿಗೆ ಮುಂದಾಗಿದೆ. ಇಂತಹ ಉಡುತಡಿಯಿಂದ ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯವರು ಮುಂದೆ ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ ಸಿದ್ಧರಾಮ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡರಲ್ಲದೇ, “ಚನ್ನಮಲ್ಲಿಕಾರ್ಜುನ” ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತಮ್ಮದೇ ಆದ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ. ಒಮ್ಮೆ ಅನುಭವ ಮಂಟಪದಲ್ಲಿ ಚರ್ಚೆ ನಡೆಯುತ್ತಿರುವಾಗ ಮಹಾದೇವಿಯ ಆಗಮನವಾಗುತ್ತದೆ. ಆಗ ಮಡಿವಾಳ ಮಾಚಿದೇವರು ಎದ್ದು ನಿಂತು ಬುದ್ಡಿ ಉಡುತಡಿಯ ಮಹಾದೇವಿ ಅಕ್ಕನವರು ಆಗಮಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ಬಸವಣ್ಣನವರು ಮಾಚಿದೇವರೇ ಮಹಾದೇವಿ ಯವರನ್ನು ಮರ್ಯಾದೆಯಿಂದ ಕರೆ ತನ್ನಿ ಎಂದು ಹೇಳಲು ಮಾಚಿದೇವರು ಆಕೆಗೆ ನಡೆ ಮುಡಿಯನ್ನು ಹಾಸುತ್ತಾರೆ. ಆಗ ಮಹಾದೇವಿಯು ಮಡಿಯನ್ನು ಸರಿಸಿ ಒಳಗೆ ಬರುತ್ತಾಳೆ. ಅಲ್ಲಿಂದ ಮುಂದೆ ಅಲ್ಲಮಪ್ರಭುದೇವರು ಮತ್ತು ಅಕ್ಕಮಹಾದೇವಿಯ ನಡುವೆ ಈ ರೀತಿ ಸಂಭಾಷಣೆ ನಡೆಯುತ್ತದೆ. ಅಕ್ಕ : ಪ್ರಭುದೇವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ, ಅಲ್ಲಮ : ನಿಲ್ಲು ತುಂಬು ಯೌವನದ ಸತಿ ನೀನು ಇತ್ತಲೇಕೆ ಬಂದೆಯವ್ವ. ಸತಿ ಎಂದರೆ ಮುನಿಯುವರು ನಮ್ಮ ಶರಣರು. ನಿನ್ನ ಪತಿಯ ಹೆಸರ ಹೇಳಿದರೆ ಬಂದು ಕುಳ್ಳಿರು ಅಲ್ಲವಾದರೆ ತೆರಳು ತಾಯೆ. ನಮ್ಮ ಶರಣರ ಸಂಘ ಸುಖದಲಿ ಸನ್ನಿಹಿತವ ಬಯಸುವೆಯಾದರೆ ನಿನ್ನ ಪತಿಯ ಹೆಸರ ಹೇಳಾ, ಎಲೆ ಅವ್ವಾ ಅಲ್ಲವಾದರೆ ನಿನಗೆ ಇಲ್ಲಿ ಸ್ಥಳವಿಲ್ಲ. ಅಕ್ಕ : ಹರನೇ ಗಂಡನಾಗಬೇಕೆಂದು ಅನಂತ ಕಾಲ ತಪಿಸಿದೆ ನೋಡಾ ! ಎನ್ನ ಜನ್ಮ ಜನ್ಮಾಂತರದ ಬಯಕೆ ಆ ಶಿವನೇ ಗಂಡನಾಗಬೇಕೆಂಬುದು ಅದು ಈ ಜನ್ಮದಲ್ಲಿ ಸಿದ್ದಿಸಿದೆ. ಗುರು ನನ್ನನ್ನು ಚನ್ನಮಲ್ಲಿಕಾರ್ಜುನನಿಗೆ ವಿವಾಹ ಮಾಡಿ ಕೊಟ್ಟಿದ್ದಾನೆ. ಗುರುವೇ ತೆತ್ತಿಗನಾದ, ಲಿಂಗವೇ ಮದುವಣಿಗನಾದ, ಆನು ಮದುವಣಗಿತ್ತಿಯಾದೆನು. ಈ ಭುವನವೆಲ್ಲವರಿಯಲು ಅಸಂಖ್ಯಾತರೆನ್ನ ತಾಯಿ ತಂದೆಗಳು, ಕೊಟ್ಟರು ಪ್ರಭುವಿನ ಮನೆಗೆ ಸಾದೃಶ್ಯವಪ್ಪ ವರನನ್ನು ನೋಡಿ, ಇದು ಕಾರಣ ಚೆನ್ನಮಲ್ಲಿಕಾರ್ಜುನನೇ ಗಂಡನೆನಗೆ ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧ ವಿಲ್ಲವಯ್ಯಾ ಪ್ರಭುವೇ. ಅಲ್ಲಮ : ಈ ಮಾತಿನ ಚಮತ್ಕಾರವನ್ನು ನಮ್ಮ ಶರಣರು ಮೆಚ್ಚಲಾರರು ಮಹಾದೇವಿ. ನಿನ್ನ ಚರಿತ್ರೆಯನ್ನು ಲೋಕ ತಿಳಿಯದೆಂದು ಭಾವಿಸಬೇಡ. ಲಗ್ನವಾದ ಕೌಶಿಕನ ಮೇಲೆ ತಪ್ಪನ್ನು ಹೊರೆಸಿ ಅರಮನೆಯನ್ನು ಬಿಟ್ಟು ನಿರ್ವಾಣ ಶರೀರಿಯಾಗಿ ಹೊರಟು ಬಂದಿರುವೆ ಎಂಬ ಮಾತು ನಿಜವೇ ? ಪತಿಯ ಮೇಲೆ ತಪ್ಪನ್ನು ಹೊರಿಸಿ ಬರುವ ಸತೀಧರ್ಮವನ್ನು ಈ ನಮ್ಮ ಶರಣರು ಮೆಚ್ಚಲಾರರು. ಅಕ್ಕ : ನನ್ನ ಮದುವೆಯ ಕತೆಯನ್ನು ಪ್ರಪಂಚ ಹೇಗಾದರೂ ತಿಳಿದು ಕೊಂಡಿರಲಿ. ನಾನು ಮೊದಲಿನಿಂದಲೂ ಚನ್ನಮಲ್ಲಿಕಾರ್ಜುನನಿಗೆ ಮೀಸಲು ಹೆಣ್ಣು. ಸಾವ ಕೆಡುವ ಗಂಡಂದಿರನೆಂದೂ ಬಯಸಿದವಳಲ್ಲ. ಸೀಮೆ ಇಲ್ಲದ ನಿಸ್ಸೀಮ ಚಲುವನಿಗೆ ಮಾತ್ರ ಒಲಿದವಳು. ನನ್ನ ಜೀವನದಲ್ಲಿ ಕೌಶಿಕನ ಪ್ರಸಂಗ ಒಂದು ದೈವ ಕೃಪೆಯಂತೆ ಬಂದಿತಷ್ಟೇ. ಸ್ತ್ರೀಯ ಸೌಂದರ್ಯದ ವ್ಯರ್ಥ ವ್ಯಾಮೋಹವನ್ನು ಬಿಡಿಸಲು ದಿಗಂಬರಳಾಗಿ ಅರಮನೆಯನ್ನು ತ್ಯಜಿಸಿ ಬಂದೆ. ಸೌಂದರ್ಯದ ಹಂಗನ್ನು ಹರಿದೊಗೆದು ಬಂದಂತಹವಳು. ಅಲ್ಲಮ : ನಿನ್ನ ದೇಹದ ಮೋಹ ನಿನಗಿನ್ನು ಹೋಗಿಲ್ಲ, ನಿನ್ನ ಸೌಂದರ್ಯದ ಮೋಹ ನಿನಗಿನ್ನೂ ಉಳಿದಿದೆಯಲ್ಲವೇ? ಅಕ್ಕ : ಇಲ್ಲ, ಆ ಭಾವ ನನಗೆ ಎಳ್ಳಷ್ಟೂ ಉಳಿದಿಲ್ಲ, ಕಾಯ ಕರ್ರನೆ ಕಂದಿದರೇನಯ್ಯ ? ಕಾಯ ಮಿರ್ರನೆ ಮಿಂಚಿದರೇನಯ್ಯ ? ಅಂತರಂಗ ಶುದ್ಧವಾದ ಬಳಿಕ ಚನ್ನಮಲ್ಲಿಕಾರ್ಜುನನಿಗೆ ಒಲಿದ ಅಂಗವು ಹೇಗಿದ್ದರೇನಯ್ಯ ಪ್ರಭುವೇ ? ಅಲ್ಲಮ : ಇದು ಬರಿಯ ಆಡಂಬರದ ಮಾತು, ಮಾತಿನಂತೆ ನಡೆ ಇಲ್ಲದವರನ್ನು ಗುಹೇಶ್ವರ ಲಿಂಗ ಮೆಚ್ಚುವವನಲ್ಲ. ಅಂತರಂಗದ ನಾಚಿಕೆ ಬಹಿರಂಗದಲ್ಲಿ ತಲೆದೋರುತ್ತಿದೆ. ಸೀರೆಯನ್ನಳಿದು ಕೂದಲನ್ನೇಕೆ ಮರೆಮಾಡಿ ಕೊಳ್ಳಬೇಕಾಗಿತ್ತು, ಈ ವರ್ತನೆ ಒಪ್ಪವಲ್ಲ ಗುಹೇಶ್ವರ ಲಿಂಗಕ್ಕೆ. ಅಕ್ಕ : ನಿಜ. ಒಂದರ ಹಂಗನ್ನು ಬಿಟ್ಟು , ಇನ್ನೊಂದರ ಹಂಗನ್ನು ನಾನು ಹೊಂದಿದ್ದೇನೆಂದು ನೀವು ಹೇಳುವ ಮಾತು ನಿಜ. ಆದರೆ ಅದು ನನಗಾಗಿ ಅಲ್ಲ, ನಿಮಗಾಗಿ ಅಂದರೆ ಜನರ ಹಂಗಿಗಾಗಿ ಇದನ್ನು ಅವಲಂಬಿಸಿದ್ದೇನೆ. ಫಲ ಒಳಗೆ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣ ಚನ್ನಮಲ್ಲಿಕಾರ್ಜುನನ ದೇವರ ದೇವನ ಒಳಗಾದವಳ. ಅಲ್ಲಮ : ಏನೂ ! ಫಲ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು ಎಂದೆಯಲ್ಲವೆ ನಾನು ಹೇಳುತ್ತೇನೆ ಕೇಳು, ಸಿಪ್ಪೆ ಒಪ್ಪಗೆಟ್ಟಾಗ ಹಣ್ಣಿನ ರಸ ಕೊಳಕಾಗುತ್ತದೆ ಅದನ್ನಾದರೂ ಮೆಚ್ಚುವುದು ಹೇಗೆ ? ಅಕ್ಕ : ಆ ಹಣ್ಣನ್ನು ನಾನು ಹಾಗೇ ಇಟ್ಟಿಲ್ಲ ಪ್ರಭುವೇ, ಎಂದೋ ಚನ್ನಮಲ್ಲಿಕಾರ್ಜುನನಿಗೆ ಸಮರ್ಪಿಸಿ ಬಿಟ್ಟಿದ್ದೇನೆ. ಅರಿಷಡ್ವರ್ಗಗಳನ್ನಳಿದು ನನ್ನ ದೇಹವನ್ನು ವ್ಯಾಪಿಸಿರುವ ಸಚ್ಛಿದಾನಂದಾತ್ಮಕವಾದ ರಸ ಅದು. ಸಿಪ್ಪೆ ಒಪ್ಪಗೆಟ್ಟರು ಕೊಳೆಯಲಾರದು, ನನ್ನ ಒಳ ಹೊರೆಗೆಲ್ಲವ ನಳಿದು ನನ್ನತನ ಒಂದೂ ಇಲ್ಲವೆಂದು ಎಂದೆಂದೂ ಅಳಿಯದ ಅಮರ ಪವಿತ್ರತೆಯನ್ನು ತಂದು ಕೊಟ್ಟಿದೆ ಪ್ರಭುವೆ. ಅಲ್ಲಮ : ಈ ಬಾಹ್ಯ ಬ್ರಹ್ಮದ ಬೆಡಗನ್ನು ನಾವು ಮೆಚ್ಚುವವರಲ್ಲ. ನಾ ಸತ್ತೆನೆಂದು ಹೆಣ ಕೂಗಿದುದುಂಟೆ ? ಬೈಚಿಟ್ಟ ಬಯಕೆ ಕರೆದುದುಂಟೆ ? ಹೆಪ್ಪಿಟ್ಟ ಹಾಲು ಸಿಹಿಯಪ್ಪುದೇ ? ಈ ಮಾತು ಒಪ್ಪವಲ್ಲ ಗುಹೇಶ್ವರ ಲಿಂಗದಲ್ಲಿ. ಅಕ್ಕ : ಸತ್ತ ಹೆಣ ಕೂಗಿದುದುಂಟು. ಮರೆತು ಒರಗಿ ಕನಸು ಕಂಡು ಅದನ್ನು ಹೇಳುವಲ್ಲಿ ಸತ್ತ ಹೆಣ ಎದ್ದಂತೆ ಆಯಿತು. ಹೆಪ್ಪಿಟ್ಟ ಹಾಲು ಗಟ್ಟಿ ತುಪ್ಪವಾಗಿ ಸಿಹಿಯಾಗಿತ್ತು. ಇದಕ್ಕೆ ತಪ್ಪು ಸಾಧಿಸಲೇಕೆ ಪ್ರಭುವೇ. ಅಲ್ಲಮ : ಅದೂ ಹೋಗಲಿ, ಅರಿಷಡ್ವರ್ಗಗಳಿಂದಲೇ ತುಂಬಿರುವ ಈ ಶರೀರದಲ್ಲಿದ್ದು ಅದನ್ನು ದಾಟಿದ್ದೇನೆ ಎಂದರೆ ಅದನ್ನಾದರೂ ನಂಬುವುದು ಹೇಗೆ ? ಅಕ್ಕ : ಕಾಮನ ಗೆದ್ದ ಠಾವನ್ನು ಹೇಳಬೇಕೆ ಪ್ರಭುವೇ ? ಕಾಮವನ್ನು ಗೆಲ್ಲುವುದಕ್ಕೆ ಆ ಕಾಮ ನನ್ನ ಮನಸ್ಸಿನಲ್ಲಿ ಎಂದೂ ಹುಟ್ಟಿಯೇ ಇಲ್ಲ. ಕೇಳಿ ಅಂಗದ ಭಂಗವ ಲಿಂಗ ಸುಖದಿಂದ ಗೆಲ್ಲಿದೆ. ಜೀವದ ಭಂಗವ ಶಿವಾನುಭವದಿಂದ ಗೆಲ್ಲಿದೆ. ಕರಗದ ಕತ್ತಲೆಯ ಬೆಳಗನ್ನುಟ್ಟು ಗೆಲ್ಲಿದೆ. ಜವ್ವನದ ಹೊರ ಮಿಂಚಿನಲ್ಲಿ ನಿಮ್ಮ ಕಣ್ಣಿಗೆ ಕಾಣುವ ಕಾಮನ ಸುಟ್ಟುರಿಯುವ ಭಸ್ಮವ ನೋಡಯ್ಯ. ಕಾಮನ ಕೊಂದು ಮನಸ್ಸಿಜನಾಗುಳಿದರೆ, ಮನಸಿಜನ ತಲೆ ಬರಹವ ತೊಡೆದೆನು. ಎನ್ನ ಮನಸ್ಸಿಜನ ಜನನಕ್ಕೆ ಅವಕಾಶವನ್ನೇ ಕಲ್ಪಿಸಿಕೊಟ್ಟಿಲ್ಲ. ಇದನ್ನು ತಮ್ಮಂತಹ ಕೆಲವರು ಮಾತ್ರವೇ ಅರ್ಥ ಮಾಡಿ ಕೊಳ್ಳಬಲ್ಲವರು ಪ್ರಭುವೇ. ಅಲ್ಲಮ : ನೋಡಿದೆಯಾ ಬಸವಣ್ಣ, ಮಹಾದೇವಿಯ ಈ ನಿಲುವನ್ನು ಲೋಕಕ್ಕೆ ಪ್ರಕಟ ಮಾಡಬೇಕೆಂದೇ ನಾನು ಇಷ್ಟು ನಿಷ್ಠುರನಾದೆ. ತಾಯೇ ನಿನ್ನ ಜ್ಞಾನ ಘನ, ನಿನ್ನ ವಿರತಿ ಘನ, ನೀನು ವೈರಾಗ್ಯ ನಿಧಿ. ನಿನ್ನನ್ನು ಪಡೆದ ಜಗತ್ತು ಪಾವನ. ಮಾಯೆ ನಿನ್ನ ಮುಟ್ಟಲಿಲ್ಲ, ಮರಹು ನಿನ್ನ ಸೋಂಕಲಿಲ್ಲ, ಕಾಮ ನಿನ್ನ ಕೆಡಿಸಲಿಲ್ಲ, ಮಹಾದೇವಿ ಅಕ್ಕ ನೀನು ವಿಶ್ವ ಸ್ತ್ರೀ ಕುಲದ ಜ್ಯೋತಿ. ದಿಟ್ಟ ಹೆಜ್ಜೆ, ಧೀರ ನುಡಿಯ ತಾಯಿ ನೀನು, ವಿನಯ ವಿಶ್ವಾಸಗಳ ರತ್ನಗಣಿ ನೀನು, ತಾಯೇ ಮಹಾದೇವಿ ನಿನ್ನ ಸ್ತ್ರೀ ಪಾದಗಳಿಗೆ ನಮೋ ನಮೋ ಎಂದೆನು. (ಅಲ್ಲಮಪ್ರಭು ಕೈ ಮುಗಿಯುವರು) ಬಸವಣ್ಣ : ಹೌದು ಪ್ರಭುವೇ, ಈಕೆ ನಮ್ಮೆಲ್ಲರ ಅಕ್ಕ. ನಮಗೆಲ್ಲರಿಗೂ ಗುರುವಾಗಬಲ್ಲ ಯೋಗ್ಯತೆಯುಳ್ಳವಳು. ಅಕ್ಕಮಹಾದೇವಿ ನಿನಗೆ ಶರಣು ಶರಣಾರ್ಥಿ. (ಬಸವಣ್ಣ ನವರು ಕೈಮುಗಿಯುವರು) ಅಕ್ಕ : ತಾವು ಹಾಗೆಲ್ಲಾ ಹೇಳಬಾರದು, ನಿಮ್ಮೆಲ್ಲರ ಕರುಣೆಯ ಶಿಶು ನಾನು, ನಿಮ್ಮೆದುರಿನಲ್ಲಿ ಅತಿ ಚಿಕ್ಕವಳು. ಚನ್ನಬಸವಣ್ಣ : ಇರಬಹುದು, ವಯಸ್ಸು ಅತಿ ಚಿಕ್ಕದೇ ಇರಬಹುದು. ಆದರೂ ನೀನು ಎಲ್ಲರಿಗೂ ಅಕ್ಕನಾಗಬಲ್ಲವಳು ತಾಯಿ. ಮಹಾದೇವಿ ಅಕ್ಕ ಹಿರಿತನ ಕೇವಲ ವಯಸ್ಸಿನಿಂದ ಮಾತ್ರವೇ ಬರುವುದಿಲ್ಲ. ಅಜ ಕಲ್ಪಕೋಟಿ ವರುಷದವರೆಲ್ಲರೂ ಹಿರಿಯರೇ ? ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ ? ನಡು ಮುರಿದು, ತಲೆ ನಡುಗಿ, ಮತಿಗೆಟ್ಟು ಒಂದನಾಡ ಹೋಗಿ ಒಂಭತ್ತನಾಳುವ ಅಜ್ಞಾನಿಗಳೆಲ್ಲರೂ ಹಿರಿಯರೇ ? ;ಅನುವನರಿದು, ಘನವ ಬೆರೆಸಿ, ಹಿರಿದು ಕಿರಿದೆಂಬ ಭೇದವ ಮರೆತು ಕೂಡಲ ಚನ್ನಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ ನಮ್ಮ ಮಹಾದೇವಿಯಕ್ಕಂಗಾಯಿತ್ತು. ಸಿದ್ದರಾಮ : ಅಹುದಹುದು ಮತ್ತೇನು, ಮರಹಿಂಗೆ ಹಿರಿದು ಕಿರಿದುಂಟಲ್ಲದೆ, ಅರಿವಿಂಗೆ ಹಿರಿದು ಕಿರಿದುಂಟೆ ಹೇಳಯ್ಯ ? ಜಾತಂಗೆ ಮರಣದ ಭಯ ಉಂಟಲ್ಲದೆ, ಅಜಾತಂಗೆ ಮರಣದ ಭಯವುಂಟೇ ಹೇಳಯ್ಯ? ಕಪಿಲಸಿದ್ಧ ಮಲ್ಲಿನಾಥನಲ್ಲಿ ಮಹಾದೇವಿಯಕ್ಕನ ನಿಲವಿಂಗೆ ಶರಣೆಂದು ಶುದ್ಧನಾದೆನು ಕಾಣಾ ಚನ್ನಬಸವಣ್ಣ. ಅಕ್ಕ : ಭಕ್ತಿ ಬಂಡಾರಿ ಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ. ಬಸವಣ್ಣ : ಶರಣು ತಾಯೇ ಶರಣು ಶರಣು. ಅಕ್ಕ : ಜ್ಞಾನ ನಿಧಿ ಚನ್ನಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ. ಚನ್ನಬಸವಣ್ಣ : ಶರಣು ತಾಯೇ ಶರಣು. ಅಕ್ಕ : ಧರ್ಮಯೋಗಿ ಸಿದ್ಧರಾಮಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ. ಸಿದ್ಧರಾಮ : ಶರಣು ತಾಯೇ ಶರಣು. ಅಕ್ಕ : ಎಲ್ಲಾ ಶರಣ ಶರಣೆಯರಿಗೂ ಶರಣು ಶರಣಾರ್ಥಿ. ಎಲ್ಲರೂ : ಶರಣು ತಾಯೇ ಶರಣು ಶರಣು ಎಂದು ಎಲ್ಲಾ ಶರಣರು ನಮಸ್ಕರಿಸುವರು ಆಗ ಬಸವಣ್ಣನವರು ಅಕ್ಕನನ್ನು ಅಂದಿನ ಅನುಭವಮಂಟಪದ ಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಹೇಳುವರು. ಆಗ ಅಕ್ಕನು ಶರಣರೊಂದಿಗೆ ಕುಳಿತು ಅಂದಿನ ಗೋಷ್ಠಿಯಲ್ಲಿ ಭಾಗವಹಿಸುವಳು. *********************
ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ Read Post »
ಮಕ್ಕಳ ಹಕ್ಕು,ಮೊದಲ ಹುಡುಗ
ಲೇಖನ ಮಕ್ಕಳ ಹಕ್ಕು,ಮೊದಲ ಹುಡುಗ ಅಂಜಲಿ ರಾಮಣ್ಣ ಈ ಸಂಪರ್ಕ ಸಂಖ್ಯೆಯೊಡನೆ ಮಾತು ನಿಂತು ಮೂರು ತಿಂಗಳಾಗಿತ್ತೇ?! ಗಮನಕ್ಕೇ ಬರಲಿಲ್ಲವಲ್ಲ. ಎಂದುಕೊಳ್ಳುತ್ತಲೇ ಬಂದಿದ್ದ ಆಡಿಯೋ ಸಂದೇಶವನ್ನು ತೆರೆದೆ “ ಲೇ ಲೇ ರಾಮಣ್ಣನ ಮಗಳೇ. . .” ಎಂದು ರಾಗವಾಗಿ ಹಾಡಿದ್ದ ಅವನು. ಆ ರಾಗಕ್ಕೆ ತಾಳವಾಗುವ ಮನಸ್ಸು ಇರಲಿಲ್ಲ. ಆದರೆ ಉತ್ತರಿಸುವುದು ಬೇಕಾಗಿತ್ತು. ಪ್ರಾಮಾಣಿಕವಾಗಿ ಹೇಳಿದೆ “ ಪಾಪ ಆ ಹುಡುಗಿ ಹತ್ತಿರ ಸೆಕ್ಶನ್ 94ರಲ್ಲಿ ಹೇಳಿರುವ ಯಾವ ದಾಖಲೆಯೂ ಇಲ್ಲ. ಏನು ಮಾಡೋದು ಅಂತ ಯೋಚಿಸ್ತಿದ್ದೀನಿ” ಎಂದೆ. ಪ್ರತಿ ಬಾರಿಯಂತೆ ಈಗ ಅವನು ಸಿಡುಕಲಿಲ್ಲ. “ನೀನೊಂದು ಗೂಬೆ’ ಎಂದು ದೂರಲಿಲ್ಲ. “ನಿನ್ನಿಂದ ರೊಮ್ಯಾಂಟಿಕ್ ಮಾತು impossible” ಎಂದು ಬೈಯಲಿಲ್ಲ. ಸಮಾಧಾನದಿಂದ “ಓಹ್ ಹೌದಾ. . .” ಎನ್ನುತ್ತಲೇ ಒಂದೆರಡು ಸಲಹೆಗಳನ್ನು ಕೊಟ್ಟ. ಸಲೀಂ ನನ್ನ ಜೀವದ ಅವಿಭಾಜ್ಯ ಅಂಗ. ಜೀವನವನ್ನು ಹಂಚಿಕೊಂಡವ. ಅಮೇರಿಕೆಯಲ್ಲಿ ಇದ್ದಾನೆ. ನಮ್ಮಿಬ್ಬರದು ಹುಟ್ಟಿದಾರಭ್ಯ ಏತಿ ಎಂದರೆ ಪ್ರೇತಿ ಎನ್ನುವ ಬಂಧ. ನನ್ನ ಯಾವ ಗುರಿಗಳೂ ಅವನದಲ್ಲ. ಅವನ ಯಾವ ಕನಸುಗಳೂ ನನ್ನನ್ನು ರೋಮಾಂಚನ ಗೊಳಿಸಿದ್ದೇ ಇಲ್ಲ. ಕಲ್ಪನೆಗಳನ್ನೂ ನಮ್ಮಿಬ್ಬರ ಸಾಮ್ಯತೆಯೇ ಇಲ್ಲ. ಅವನದ್ದು ಬೆಳಗ್ಗೆ ಒಂಭತ್ತರಿಂದ ಸಂಜೆ ಐದಕ್ಕೆ ನಿಗಧಿಗೊಂಡ ಶೈಲಿ. ನನ್ನದು ಹಿಡಿದ ಕೆಲಸ ಮುಗಿಸಿ, ತಕ್ಷಣವೇ ಮತ್ತೊಂದನ್ನು ತೆರೆದಿಟ್ಟುಕೊಂಡು ಕೂರುವ ಹೊತ್ತುಗತ್ತು ಇಲ್ಲದ ಅಭಿರುಚಿ. ಅಗಾಧ ವ್ಯತ್ಯಯಗಳಲ್ಲೂ ನನ್ನನ್ನು ಹುಚ್ಚನಂತೆ ಪ್ರೀತಿಸುತ್ತಾನೆ ಅವ. ಒಂದಷ್ಟು ವರ್ಷಗಳಿಂದ ಅವನ ಎಲ್ಲಾ ಮಾತುಗಳಿಗೂ ನನ್ನ ಉತ್ತರ ಮಕ್ಕಳ ನ್ಯಾಯ ಕಾಯಿದೆಯ ಸೆಕ್ಶನ್ಗಳೇ ಆಗಿರುತ್ತಿತ್ತು. ಇತ್ತ ಕಡೆಯಿಂದ ಹಂಚಿಕೆ ಎಂದರೆ POCSO ಕಾಯಿದೆಯ ಅರ್ಥೈಸುವುಕೆಯೇ ಆಗಿರುತ್ತತ್ತು. ಸಾಹಿತ್ಯ ಎಂದರೆ ಬಾಲ ಕಾರ್ಮಿಕ ನಿಷೇಧ ವಿಷಯ. ಕಣ್ಣೀರು ಎಂದರೆ ಬಾಲ್ಯ ವಿವಾಹದ ಪ್ರಕರಣಗಳು ನಗು ಎಂದರೆ ಮಕ್ಕಳು ನನಗೆ ಕೊಟ್ಟ ’ಪ್ರೇಮಪತ್ರಗಳು’. ಇವೆಲ್ಲವನ್ನೂ ಮೀರದ ಮಾತುಗಳು ಎಂದರೆ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ. ಹೇಳಿದ ಹೇಳಿದ ಹೇಳುತ್ತಲೇ ಇದ್ದ ಬುದ್ಧಿ ಮಾತನ್ನು. ಇವೆಲ್ಲವನ್ನೂ ಮೀರಿದ ಬದುಕು ಇದೆ ಎಂದು ನನಗೆ ಉಪದೇಶಿಸುತ್ತಿದ್ದ. ನನಗೋ ಇವುಗಳೇ ಬ್ರಹ್ಮಾಂಡ. ಪಾಪ ಅವನ ತಾಳ್ಮೆ ಕೈಕೊಟ್ಟಿತ್ತು. ಎಂಟು ತಿಂಗಳಿಂದ ಮಾತು ಕಡಿಮೆ ಮಾಡಿದ್ದ. ಮೂರು ತಿಂಗಳಿಂದ ಫೋನ್ ಸಂದೇಶಗಳನ್ನೂ ಬಂದು ಮಾಡಿದ್ದ. ನನ್ನ ಗಮನಕ್ಕೇ ಬಂದಿರಲಿಲ್ಲ ಎನ್ನುವುದು ಅಹಂಕಾರ ಎನಿಸಿದರೂ ಸತ್ಯ. ಅರೆ, ಈ ಬಾರಿ ಇವನು ಯಾಕೆ ಸಿಟ್ಟಾಗುತ್ತಿಲ್ಲ ಎನ್ನುವ ಗುಮಾನಿಯಿಂದಲೇ ಮಾತು ಮುಂದುವರೆಸಿದೆ. ಈ ವರ್ಷದ ಮಕ್ಕಳ ಸ್ನೇಹಿ ಸಪ್ತಾಹಕ್ಕೆ ಸಂಯೋಜಿಸಿದ್ದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದಾಗಲೂ ಉತ್ಸಾಹ ತೋರುತ್ತಿದ್ದ. ಹದಿಮೂರು ವರ್ಷದ ಆ ಹುಡುಗಿ ತುಂಬು ಗರ್ಭಿಣಿ ಸಾವು ಬದುಕಿನ ನಡುವೆ ಹೋರಾಡಿ ಮಗು ಕಳೆದುಕೊಂಡ ಘಟನೆಯನ್ನು ಹೇಳಿದಾಗಲೂ “ಸಾಕು ಮಾಡು ಗೋಳು” ಎನ್ನಲಿಲ್ಲ ಅವ. ಹತ್ತೊಂಬತ್ತೇ ವರ್ಷದ ಹುಡುಗ ತಾನು ಪ್ರೀತಿಸಿದವಳನ್ನು ಓಡಿಸಿಕೊಂಡು ಬಂದು ಮಕ್ಕಳ ನ್ಯಾಯ ಮಂಡಳಿಯ ಎದುರು ಆಪಾದಿತನಾಗಿ ನಿಂತಿದ್ದ ವಿಷಯ ಹೇಳಿದಾಗ “ಅಯ್ಯೋ ಪಾಪ” ಎಂದ. “ತನ್ನ ತಂದೆ ಕುಡಿದು ಬಂದು ಕಾಟ ಕೊಡುತ್ತಾನೆ. ತನಗೆ ರಕ್ಷಣೆ ಕೊಡಿ” ಎಂದು ರಾತ್ರಿ ಹನ್ನೆರಡು ಗಂಟೆಗೆ ಮನೆ ಬಿಟ್ಟು ಬಂದು ಕದ ತಟ್ಟಿದ ಹದಿನಾರರ ಬಾಲೆಯ ಕಥೆ, ಶಾಲೆಯಲ್ಲಿ ಟೀಚರ್ ತುಂಬಾ ಹೊಡೆಯುತ್ತಾರೆ ಎಂದು ಅಳುತ್ತಿದ್ದ ಎಂಟರ ಪೋರನ ಮಾತು ಯಾವುದಕ್ಕೂ ಅವನ ಆಸಕ್ತಿ ಕಡಿಮೆ ಆಗಲೇ ಇಲ್ಲ. ನನ್ನ ಅನುಮಾನ ಈಗ ಮಿತಿ ಇರದ ಆಶ್ಚರ್ಯವಾಗಿ ತಿರುಗಿತ್ತು. ಕೊನೆಗೂ ಬಾಯಿಬಿಡಿಸಿದೆ ಅವನ ಬದಲಾದ ಚರ್ಯೆಯ ಕಾರಣವನ್ನು! ಈಗ ಅವನು ಮಕ್ಕಳ ಹಕ್ಕುಗಳ ಬಗ್ಗೆ ಒಂದು ವರ್ಷದ ಡಿಪ್ಲೊಮಾ ತರಬೇತಿಗೆ ಸೇರಿದ್ದಾನೆ. ಅಮೇರಿಕೆಯಲ್ಲಿನ ಬೀದಿ ಮಕ್ಕಳ ಜೊತೆ ಸಂಪರ್ಕಕ್ಕೆ ಬಂದು ಅವರಿಗೆ ಮಾರ್ಗದರ್ಶಿ ಆಗಿದ್ದಾನೆ. ವಿಚ್ಚೇಧನ ಪಡೆದ ಕುಟುಂಬದ ಮಕ್ಕಳ ಮಾನಸಿಕ ಸ್ಥಿತಿಗೆ ಸ್ನೇಹಿತನಾಗಿ ಕೆಲಸ ಮಾಡುತ್ತಿದ್ದಾನೆ. ಅಪ್ರಾಯಸ್ಥ ಗರ್ಭಧಾರಣೆಯ ಕೆಡುಕುಗಳನ್ನು ಹರೆಯಕ್ಕೆ ತಿಳಿ ಹೇಳುವ ಗುರು ಆಗಿದ್ದಾನೆ. ಅವನು ಸೆಕೆಂಡ್ ಇನ್ನಿಂಗ್ನ್ಸ್ನಲ್ಲಿ ಜೀವನದ ಟೆಸ್ಟ್ ಮ್ಯಾಚ್ ಆಡಲು ಕಣಕ್ಕಿಳಿದಿದ್ದಾನೆ. ಅದಕ್ಕೇ ಅವನೀಗ ಹಗುರವಾಗಿದ್ದಾನೆ , ನನ್ನೊಡನೆ ನಿಜಾರ್ಥದಲ್ಲಿ ರೊಮ್ಯಾಂಟಿಕ್ ಆಗಿದ್ದಾನೆ! ಮಕ್ಕಳಿಗೆ ದೊರಕಲೇ ಬೇಕಾದ ಬದುಕನ್ನು ದಕ್ಕಿಸಿಕೊಡಲು ನಾನು ಇನ್ನೂ ದೂರ ಸಾಗಬೇಕಿದೆ ಜನ್ಮಜನ್ಮಗಳಲ್ಲಿ. ಆದರೆ ಸಲೀಂಗೆ ನಿಜದ ಬದುಕನ್ನು ಅರ್ಥ ಮಾಡಿಸಿಕೊಟ್ಟ ಸಾಧಕಳಾಗಿದ್ದೇನೆ. ಮಕ್ಕಳ ಪರವಾಗಿ ದನಿ ಎತ್ತಿ ನನ್ನ ಮೊದಲ ಹುಡುಗ ನನ್ನನ್ನು ಅಮ್ಮ ಮಾಡಿದ್ದಾನೆ. ಜಗತ್ತು ಆತಂಕದ ಪರಿಸ್ಥಿತಿಯಿಂದ ಹೊರಬರಬಹುದು ಎನ್ನುವ ಬೆಳಕಿನ ಕಿರಣ ಮೂಡಿದೆ. ಒಂದು ಸಣ್ಣ ಕನಕನ ಕಿಂಡಿ ಮಕ್ಕಳ ಬದುಕಿನಲ್ಲಿ ವಿಶ್ವರೂಪಿ ಬದಕನ್ನು ತೆರೆದಿಡಿಲಿ ಎನ್ನುವ ಆಶಯ ಈ ದಿನದ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಚರಣಾ ದಿನಕ್ಕೆ. ****************** ಚಿತ್ರ ಮತ್ತು ಲೇಖನ ಕೃಪೆ:ಅಸ್ಥಿತ್ವ ಲೀಗಲ್ ಬ್ಲಾಗ್ ಸ್ಪಾಟ್.ಕಾಂ
ಮಕ್ಕಳ ಹಕ್ಕು,ಮೊದಲ ಹುಡುಗ Read Post »
ಸಮಾಜ ಚಿಕಿತ್ಸಕ ಡಾ. ಜಗದೀಶ್
ನೆನಪು ಸಮಾಜ ಚಿಕಿತ್ಸಕ ಡಾ. ಜಗದೀಶ್ ಬಿ.ಡಿ.ಎಸ್. ಎಂಡಿಎಸ್ ಈಗ ನಿಮ್ಮ ಬಳಗಕ್ಕೆ ನಿಮ್ಮ ಸೇವೆಯೊಂದೆ ನೆನಪು…. ಅರಸೀಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಂತವೈದ್ಯರಾಗಿದ್ದ ಡಾ. ಜಗದೀಶ್, ಇಲ್ಲಿನ ಆಸ್ಪತ್ರೆಯಲ್ಲಿ ‘ಹಲ್ಲು ಡಾಕ್ಟರ್’ ಎಂದೇ ಪ್ರಸಿದ್ಧ. ಇವರು ವೈದ್ಯರಷ್ಟೇ ಅಲ್ಲದೆ, ಸಾಮಾಜಿಕ ಚಿಕಿತ್ಸಕರೂ, ಸ್ನೇಹಜೀವಿಯೂ ಆಗಿದ್ದರು. ಬಹಳಷ್ಟು ವರ್ಷಗಳ ಕಾಲ ಅರಸೀಕೆರೆಯಲ್ಲಿಯೇ ವೈವಿಧ್ಯ ಚಟುವಟಿಕೆಗಳಲ್ಲಿ ತೊಡಗಿ ನಿವೃತ್ತಿ ನಂತರ ಮೈಸೂರು ಸೇರಿದರು. ನಾನು ಬೆಂಗಳೂರು ವಾಸಿಯಾದೆ. ಅರಸೀಕೆರೆಯಲ್ಲಿದ್ದಷ್ಟು ಕಾಲ ನನ್ನ ಜೊತೆಯಲ್ಲಿ ಸಮಾಜಮುಖಿ ವಿಜ್ಞಾನ ಚಳುವಳಿಗೆ ಜೊತೆಯಾದ ಡಾ. ಜಗದೀಶ್, ನಾವೊಂದಿಷ್ಟು ಗೆಳೆಯರು ಅರಸೀಕೆರೆ ವಿಜ್ಞಾನ ಕೇಂದ್ರ ಸ್ಥಾಪಿಸಿದಾಗ ಅದರ ಅಧ್ಯಕ್ಷರಾಗಿ ತಮ್ಮ ವೃತ್ತಿ ಬದುಕಿನ ಮಧ್ಯೆ ಬಿಡುವಿನ ವೇಳೆಯಲ್ಲಿ ಕ್ರಿಯಾಶೀಲರಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಬೆಂಬಲ ನೀಡಿ ಸಕ್ರೀಯರಾಗಿದ್ದರು. ಖಾಸಗಿಯಾಗಿ ವೈದ್ಯ ವೃತ್ತಿಯಲ್ಲಿ ತೊಡಗಿ ಹಣಗಳಿಸುವ ಸಾಕಷ್ಟು ಅವಕಾಶಗಳು ಅವರಿಗಿದ್ದವು . ವಿಭಿನ್ನ ಹವ್ಯಾಸದ ಗುಂಗು ಹಿಡಿಸಿಕೊಂಡ ಅವರು ಸದಾ ನಮ್ಮ ಜೊತೆ ಚಾರಣ, ನಕ್ಷತ್ರವೀಕ್ಷಣೆ, ಪಕ್ಷಿವೀಕ್ಷಣೆ, ಮೊದಲಾದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ನಾವು ತೆರಳಿದ ಕಡೆಯೆಲ್ಲಾ ನಮ್ಮೊಂದಿಗೆ ಹೊರಡುತ್ತಿದ್ದರು. ಬಿಸಲೇ ಅರಣ್ಯ, ಎಡಕುಮೆರಿ, ಕೆಮ್ಮಣ್ಣುಗುಂಡಿ ಮುಂತಾದ ಪಶ್ಚಿಮಘಟ್ಟಗಳ ಚಾರಣಕ್ಕೆ ನಾವು ವಿದ್ಯಾರ್ಥಿಗಳು, ಸ್ನೇಹಿತರೊಂದಿಗೆ ಹೊರಡಲು ಯೋಜಿಸಿದಾಗ ಹೆಗಲಿಗೆ ಒಂದು ಕ್ಯಾಮೆರ, ಒಂದು ಟಾರ್ಚು, ಬೈನಾಕ್ಯುಲರ್, ರೆಕಾರ್ಡರ್, ಸಕಲ ಸಾಮಗ್ರಿಗಳೊಂದಿಗೆ ತಾವೂ ಅಣಿಯಾಗುತ್ತಿದ್ದರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಎಲ್ಲವನ್ನೂ ವಿವರಿಸುತ್ತ, ಮಕ್ಕಳ ಅಚ್ಚುಮೆಚ್ಚಿನ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸೂಕ್ತ ತಂಗುವ ವ್ಯವಸ್ಥೆ ಇಲ್ಲದಿದ್ದರೂ ಎಲ್ಲೆಂದರಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾ ಜತೆಗೂಡುತ್ತಿದ್ದರು. ನಮ್ಮ ವಿಜ್ಞಾನ ಕೇಂದ್ರ ಹೆಸರಿಗಷ್ಟೇ ವಿಜ್ಞಾನ ಕೇಂದ್ರವಾಗಿದ್ದರೂ , ಸಾಹಿತ್ಯ, ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಳ್ಳುತ್ತಿದ್ದವು. ವರ್ಷವಿಡೀ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಾನು ದಿಢೀರೆಂದು ಆಯೋಜಿಸಲು ಯೋಚಿಸುತ್ತಿದ್ದೆ. ಸಾಹಿತ್ಯಾಸಕ್ತನಾಗಿ ಇಂತಹ ಕಾರ್ಯಗಳನ್ನು ಎಷ್ಟೋ ಬಾರಿ ಏಕಮುಖಿಯಾಗಿ ತೀರ್ಮಾನ ಕೈಗೊಂಡು ನಂತರ ಡಾಕ್ಟರರಿಗೆ ತಿಳಿಸಿದರೂ ಅವರು ಬೇಸರಪಟ್ಟುಕೊಳ್ಳದೇ ನಗುತ್ತಲೇ ‘ಎಸ್ ಬಾಸ್’ ಎಂದು ಒಪ್ಪಿಬಿಡುತ್ತಿದ್ದರು. ಇಂತಹ ಕಾರ್ಯಕ್ರಮಕ್ಕೆ ಹಣದ ಅಗತ್ಯ ಉಂಟಾದಾಗ ಊರಿನ ಶ್ರೀಮಂತ ದಾನಿಗಳಿಂದ ಹಣ ಸಂಗ್ರಹಿಸಲು ಇವರನ್ನೇ ಮುಂದುಮಾಡುತ್ತಿದ್ದೆ. ಒಮ್ಮೆಯೂ ಬೇಸರಪಟ್ಟುಕೊಳ್ಳದೇ ಈ ಚಟುವಟಿಕೆಗಳಿಗೆ ಹಣ ಸಂಗ್ರಹಿಸುತ್ತಿದ್ದರು. ತಾವು ಕೆಲವೊಮ್ಮೆ ಮುಂಚೂಣಿಯಲ್ಲಿದ್ದುಕೊಂಡು , ಮತ್ತೆ ಕೆಲವೊಮ್ಮೆ ಹಿನ್ನೆಲೆಯಲ್ಲಿ ನಿಂತು ಪ್ರೋತ್ಸಾಹಿಸುತ್ತಿದ್ದರು. ನಾನು ನಾಟಕ ಅಕಾಡೆಮಿ ಸದಸ್ಯನಾಗಿದ್ದಾಗ ಗ್ರಾಮೀಣ ಪ್ರತಿಭೆಗಳನ್ನ ಒಟ್ಟುಗೂಡಿಸಿ ‘ಮಹಾಮಾಯಿ’ ನಾಟಕವನ್ನು ನಿರ್ಮಿಸಲು ರಂಗತರಬೇತಿ ಶಿಬಿರ ಆಯೋಜಿಸಿದಾಗ ಜಗದೀಶ್ ನೀಡಿದ ಸಹಾಯವನ್ನು ಮರೆಯಲಾರೆ. ಅಷ್ಟೇ ಅಲ್ಲ, ರೈತಸಂಘ, ದಲಿತಸಂಘದ, ಗೆಳೆಯರನ್ನ ಇವರ ಬಳಿ ಕಳಿಸಿದಾಗ ಅವರಿಗೆ ವಿಶೇಷ ಆಸಕ್ತಿಯಿಂದ ಹಲ್ಲಿನ ಚಿಕಿತ್ಸೆ ನೀಡಿ ಮಾರ್ಗದರ್ಶನ ಮಾಡುತ್ತಿದ್ದರು. ಬೇರೆ ಬೇರೆ ರೀತಿಯ ರೋಗಗಳಿಂದ ಬಳಲುವ ರೋಗಿಗಳಿಗೂ ಇವರು ತಮಗೆ ಪರಿಚಿತವಿದ್ದ ಡಾಕ್ಟರುಗಳನ್ನು ಸಂಪರ್ಕಿಸುವಂತೆ ಹೇಳಿ ಅವರಿಗೂ ಸಹಕಾರ ನೀಡುತ್ತಿದ್ದರು. ವಿದ್ಯಾರ್ಥಿಗಳು, ಸಹಾಯ ಕೇಳಿ ಬಂದವರು ಯಾರೂ ಬರಿಗೈಯಲ್ಲಿ ಹಿಂದಿರುಗಿಲ್ಲ. ನಮ್ಮ ನಂತರ ನಮ್ಮ ಶಿಷ್ಯರು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಕಾರ ಅಪೇಕ್ಷಿಸಿ ಹೋದಾಗ ಅವರಿಗೂ ಸಹಾಯ ಹಸ್ತ ಚಾಚಿದ್ದುಂಟು. ಶಾಲೆಗಳಲ್ಲಿ ‘ಹಲ್ಲಿನ ತಪಾಸಣೆ ಶಿಬಿರ’ಗಳನ್ನು ಏರ್ಪಡಿಸಿ ಮಕ್ಕಳಿಗೆ ಉಚಿತವಾಗಿ ಪೇಸ್ಟ್, ಬ್ರಶ್ ವಿತರಿಸುತ್ತಿದ್ದರು. ಅರಸೀಕೆರೆ ತಾಲೂಕಿನ ಯಾವುದೇ ಎನ್.ಎಸ್.ಎಸ್. ಕ್ಯಾಂಪುಗಳಿಗೆ ಇವರೇ ಸಂಪನ್ಮೂಲ ವ್ಯಕ್ತಿಗಳು. ದಂತಕ್ಷಯ, ಮೌಡ್ಯಗಳ ವಿರುದ್ಧ, ಸೂರ್ಯ-ಚಂದ್ರಗ್ರಹಣಗಳಂದು ವೈಜ್ಞಾನಿಕ ಸತ್ಯವನ್ನು ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸುತ್ತಾ ವಿವರಿಸುತ್ತಿದ್ದರು. ಪ್ರೊಫೆಸರ್ ಎಂ.ಡಿ.ಎನ್. ಒಮ್ಮೆ ಜಗದೀಶರನ್ನು ಭೇಟಿಯಾದಾಗ ‘ನಿಮ್ಮಂತವರು ರೈತರ ಪರವಾಗಿ ಯೂರೋಪ್ ಪ್ರವಾಸಕ್ಕೆ ಬರಬೇಕು’ ಎನ್ನುತ್ತಾ ಆಹ್ವಾನಿಸಿದ್ದರು. ಯಾವುದೇ ಯೋಚನೆ ಮಾಡದೇ ನಮ್ಮ ಜೊತೆ ಯೂರೋಪ್ ಪ್ರವಾಸಕ್ಕೆ ಬಂದೇಬಿಟ್ಟರು. ಸಿಟ್ಟು ಬಂದಾಗ ಇವರು ಆಡುವ ಮಾತುಗಳು ತೀರಾ ಅತಿರೇಕವೆಂದರೆ ಮುನಿಸಿಕೊಂಡ ಮಗುವಿನಂತೆ ಇರುತ್ತಿತ್ತು. ವ್ಯಕ್ತಿತ್ವ ಸದಾ ಸೀದಾ. ಇವರ ಸರಳತೆ , ಮೃದುತ್ವ, ಮಿತ ಭಾಷಿಕತೆ, ನಮ್ಮ ಜೊತೆ ಬೆರೆಯುವ ಗುಣ ಎಲ್ಲವೂ ವಿಶೇಷ. ನನ್ನಂತಹ ಒರಟನ ಜೊತೆ ಹೆಗಲಾಗಿ ಇವರು ಇದ್ದದ್ದು ನನಗೆ ಇಂದಿಗೂ ಸೋಜಿಗ. ಸದಾ ನಗುಮೊಗದ ಯಾವುದೇ ತಕರಾರುಗಳಿಲ್ಲದೆ ಜೀವಿಸಿದ ನೀವು ಇನ್ನಿಲ್ಲ ಎಂಬುದನ್ನು ನಂಬಲಾಗದು. ನಿಮ್ಮ ನೆನಪು ಮಾತ್ರ ಈಗ ನಮ್ಮೊಂದಿಗೆ. ಅಂತಿಮ ನಮನಗಳು ಡಾಕ್ಟರ್. ****************************************** ಡಾ. ಎಚ್.ಆರ್ .ಸ್ವಾಮಿ
ಸಮಾಜ ಚಿಕಿತ್ಸಕ ಡಾ. ಜಗದೀಶ್ Read Post »
ಗಜಲ್ ಕ್ಷೇತ್ರದ ಮೇರು ಪರ್ವತ ಗಾಲಿಬ್
ವಿಶೇಷ ಲೇಖನ ಗಜಲ್ ಕ್ಷೇತ್ರದ ಮೇರು ಪರ್ವತ ಗಾಲಿಬ್ ಸಿದ್ಧರಾಮ ಹೊನ್ಕಲ್ . ಇತ್ತೀಚಿನ ದಿನಗಳಲ್ಲಿ ನನಗೆ ಬಹುವಾಗಿ ಕಾಡಿ ನನ್ನಿಂದ ಮೂರು ಗಜಲ್ ಕೃತಿಗಳು ಹೊರಬರಲು ಕಾರಣ ಆದ ಗಜಲ್ ಸಾಹಿತ್ಯಕ್ಕೆ ಸಂಬಂಧಿಸಿದ ಗಜಲ್ ಸಾಹಿತ್ಯದ ಮೇರು ಪರ್ವತ ಗಾಲಿಬ್ ಕುರಿತ ನನ್ನ ಪುಟ್ಟ ಬರಹ. . ಗಾಲಿಬ್ ಹುಟ್ಟಿನಿಂದ ಸಾವಿನವರೆಗೆ ಆತನ ಬದುಕು ಬರಹ ಹವ್ಯಾಸ ಸುಖ ದುಃಖ ಸಾಲ ಸೋಲ ನೋವು ಅವಮಾನ ಸ್ವಾಭಿಮಾನ ಎಲ್ಲ ತಿಳಿದಾಗ ಅಂತಹ ಮಹತ್ವದ ಕಾವ್ಯ ಹುಟ್ಟಲು ಇದೇ ಭೂಮಿಕೆ ಕಾರಣ ಅನಿಸುತ್ತದೆ. ಗಜಲ್ ಕ್ಷೇತ್ರದ ಮೇರು ಪರ್ವತ ಅನ್ನುವಷ್ಟರ ಮಟ್ಟಿಗೆ ಬೆಳೆದ ಆತನ ಅಪ್ರತಿಮ ಗಜಲ್ ಕಾವ್ಯವನ್ನು, ಆತನ ವ್ಯಕ್ತಿತ್ವವನ್ನು ನಾವು ಅರಿಯಬಹುದಾಗಿದೆ. ನೂರು ತಲೆಮಾರಿನಿಂದ ನಡೆದು ಬಂದಿದೆ ಸೈನಿಕ ವೃತ್ತಿ ಕೀರ್ತಿ ಸ್ಥಾನ ಪಡೆಯಲೋಸುಗ ನಾನು ಕಾವ್ಯ ರಚಿಸಬೇಕಾದುದಿಲ್ಲ! ಮಹಾ ಆತ್ಮಾಭಿಮಾನಿಯಾದ ಗಾಲಿಬ್ ನ ಈ ಸಾಲುಗಳ ಮೂಲಕ ಆತನ ಕಾವ್ಯ ಧೋರಣೆಯ ಆಶಯದ ಅರಿವಾಗಬಹುದಾಗಿದೆ. ನಿನ್ನ ನೋಡಲೆಂದು ನನ್ನ ಕಣ್ಣೀರು ಸ್ವ ಪ್ರತಿಷ್ಠೆಯ ಚಿನ್ನವನ್ನು ಸಂಪೂರ್ಣ ತೊಳೆದು ಹಾಕಿದೆ! ಈಗ ಮಂಜು ಹನಿಯಂತಿರುವ ಪವಿತ್ರ ದೃಷ್ಟಿಯೊಂದು ಮಾತ್ರ ಉಳಿದಿದೆ! – ಗಾಲಿಬ್ @@@@ ನಿನ್ನ ಚೆಲುವಿನ ಮಿಂಚಿನ ಹೊಳಪಿನಿಂದಾಗಿ ನನ್ನ ದೃಷ್ಟಿ ಸುಟ್ಟು ಕೇವಲ ರೆಪ್ಪೆಯ ಕೂದಲು ಮಾತ್ರ ಉಳಿಯಿತು ಎಲ್ಲ ಸುಟ್ಟು ಬೂದಿಯುಳಿಯುವ ಹಾಗೆ… – ಗಾಲಿಬ್ @@@@ ಆಶೆಗಳ ತೋಟ ಬೇಸಿಗೆಯ ಬೇಟೆಯಾಗಿದೆ ಮತ್ತೆ ವಸಂತ ಬರಬಹುದು;ಆದರೆ ನನ್ನ ನಿರಾಶೆಗಳ ಸಿಟ್ಟು ಸಿರಿನೊಲು! ಗಾಲಿಬ್ ಉಳಿದಿಲ್ಲ ಪ್ರೆಯಸಿಯ ನೋಟದಚ್ಚರಿ,ಇಲ್ಲ ಸುರೆಯ ಸಹವಾಸ ಕೇಳು ಗಾಲಿಬ್ ನನ್ನ ಮಹಫಿಲ ದಿ ಉಳಿದಿಹದು ಬರಿ ಭಾಗ್ಯ ಚಕ್ರ – ಗಾಲಿಬ್ ಹೀಗೆ ಅನಂತ ಗಜಲ್ ಗಳ ಮೂಲಕ ಇಂದಿಗೂ ಗಜಲ್ ಅಂದ್ರೆ ಗಾಲಿಬ್ ಎನ್ನುವಂತೆ ಗಜಲ್ ಸಾಹಿತ್ಯ ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿರುವ ಗಾಲಿಬ್ ರ ರೋಚಕ ಬದುಕು ಅವರ ಬರಹದ ವೈವಿಧ್ಯಮಯತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.ಗಾಲಿಬ್ ಒಂದು ಹಂತದಲ್ಲಿ ಕಡು ಕಷ್ಟದಲ್ಲಿ ಇದ್ದಾಗ ಆತನ ಅಭಿಮಾನಿಗಳು ದೆಹಲಿಯ ಕಾಲೇಜು ಒಂದರಲ್ಲಿ ಬೋಧಕ ವೃತ್ತಿ ಖಾಲಿ ಇದೆ.ಅದನ್ನು ನೀವು ಮಾಡಿ.ನಿಮ್ಮ ಜೀವನ ನಿರ್ವಹಣೆಗೆ ಸಹಾಯ ಆಗುತ್ತದೆ ಎಂದು ತುಂಬಾ ಒತ್ತಾಯಿಸಿ ಆ ಆಡಳಿತ ಮಂಡಳಿಯವರ ಮನ ಒಲಿಸಿ ಆ ಹುದ್ದೆಗೆ ನೇಮಕಾತಿ ಕೊಡಿಸುತ್ತಾರೆ. ಒಂದು ದಿನ ಆ ಹುದ್ದೆಗೆ ಸೇರಲು ತಮ್ಮ ಮೇನೆಯಲ್ಲಿ ಕುಳಿತು ಕಾಲೇಜು ಮುಂದೆ ಹೋಗಿ ಇಳಿಯುತ್ತಾರೆ.ಸ್ವಲ್ಪ ಹೊತ್ತು ಕಾಯುತ್ತಾರೆ. ಇವರನ್ನು ಒಳ ಕರೆದೊಯ್ಯಲು ಯಾರು ಬರುವದಿಲ್ಲ. ಬೇಸತ್ತ ಗಾಲಿಬ್ ಅದೇ ಮೇನೆಯಲ್ಲಿ ಕುಳಿತು ಮನೆಗೆ ಮರಳುತ್ತಾರೆ. ಮರುದಿನ ಇವರನ್ನು ಹುಡುಕಿಕೊಂಡು ಬಂದ ಅಭಿಮಾನಿಗಳು ನಿನ್ನೆ ನೀವು ಕೆಲಸಕ್ಕೆ ಏಕೆ ಜ್ವಯಿನ್ ಆಗಲಿಲ್ಲ.ಹೋಗಲಿಲ್ಲವೇ? ಆಡಳಿತ ಮಂಡಳಿಯವರು ನಿಮಗಾಗಿ ಕಾದಿದ್ದರು ಅನ್ನುತ್ತಾರೆ.ಆಗ ಗಾಲಿಬ್ ರು ನನ್ನನ್ನು ಸ್ವಾಗತಿಸಲು ಯಾರು ಬಾಗಿಲಿಗೆ ಬರಲಿಲ್ಲ.ಹಾಗಾಗಿ ನಾ ಅಲ್ಲಿಯವರೆಗೆ ಹೋದವ ಹಿಂದೆ ಬಂದೆ ಅನ್ನುತ್ತಾರೆ. ನಿಮ್ಮನ್ನು ಸ್ವಾಗತಿಸಲು ನೀವು ಆ ಕಾಲೇಜಿಗೆ ಅತಿಥಿಯಾಗಿ ಹೋಗಿಲ್ಲ.ಕೆಲಸ ಮಾಡಲು ಹೋಗಿದ್ದು. ಕೆಲಸಗಾರನಿಗೆ ಯಾರು ಸ್ವಾಗತಿಸುವದಿಲ್ಲವೆಂದು ಸಹಜವಾಗಿ ಹೇಳುತ್ತಾರೆ.ನಾ ಮಾಡುವ ಕೆಲಸದಿಂದ ಅಲ್ಲಿ ನನಗೆ ಗೌರವ ಸಿಗುವದಿಲ್ಲವೆಂದರೆ ನಾನೇಕೆ ಅಂತಹ ಕೆಲಸ ಮಾಡಲಿ.ನನಗೆ ಗೌರವ ಸಿಗದ ಕೆಲಸ ಬೇಡ ಅಂತ ಆ ಕೆಲಸವೇ ಬೇಡ ಅಂತ ಬಿಟ್ಟುಕೊಟ್ಟು ತಮ್ಮ ಕಡುಕಷ್ಟದ ಜೀವನವೇ ಆಯ್ಕೆ ಮಾಡಿಕೊಳ್ಳುತ್ತಾರೆ.ಇದು ಗಾಲಿಬ್. ಇದು ಅವರ ಬದುಕಿನ ಒಂದು ನಡೆದ ಘಟನೆ ಅಂತ ಅವರ ಕುರಿತು ಬರೆದವರು ಉಲ್ಲೇಖಿಸುತ್ತಾರೆ.ಮೋಜು, ಮಸ್ತಿ,ರಸಿಕತೆ, ಕವಿತೆ ಸಾಲ ಸೋಲ ಸಾವುಗಳು ಹೀಗೆ ಅನೇಕ ಜಂಜಡಗಳಿಗೆ ಬಲಿಯಾದರು ಸಹ ಗಾಲಿಬ್ ತಮ್ಮ ಗಜಲ್ ರಚನೆಗಳ ಮೂಲಕ ಎಲ್ಲವನ್ನೂ ಮರೆತು ಹಗುರಾಗಿ ಅದ್ಭುತವಾದ ಗಜಲ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ನಮ್ಮ ಕಣ್ಣ ಮುಂದಿದೆ.ಇದು ಗಾಲಿಬ್ ಕುರಿತು ಕೃತಿಗಳಲ್ಲಿ ಗಮನಿಸಿದಾಗ ನನಗನಿಸಿದ ಒಂದು ಪುಟ್ಟ ಬರಹ ಅಷ್ಟೇ. ಇನ್ನೂ ಬಹಳ ಅವರ ಬಗ್ಗೆ ಓದಲಿದೆ.ಓದಿದಾಗ ಮತ್ತೆ ಹಂಚಿಕೊಳ್ಳುವೆ. (ಡಾ.ಪಂಚಾಕ್ಷರಿ ಹಿರೇಮಠ ಅವರು ೫೦ ವರ್ಷಗಳ ಹಿಂದೆ ಪ್ರಕಟವಾದ ಸಾಹಿತ್ಯ ಸೌಗಂಧ ಕೃತಿಯಲ್ಲಿ ಬರೆದ ಯುಗ ಪುರುಷ ಗಾಲಿಬ್ ಲೇಖನದ ಓದಿನಿಂದ ನನಗೆ ದಕ್ಕಿದ್ದು ಇದು) ಇದು ನನಗೂ ಅನ್ವಯಿಸುತ್ತದೆ. ಹತ್ತಾರು ತಲೆಮಾರಿನಿಂದ ನಡೆದು ಬಂದಿದೆ ಬಹುದೊಡ್ಡ ವ್ಯಾಪಾರಿ, ಒಕ್ಕಲುತನದ ವೃತ್ತಿ. ಕೀರ್ತಿ ಸ್ಥಾನ ಮಾನ ಪಡೆಯಲೋಸುಗ ನಾನು ಕಾವ್ಯರಚಿಸಬೇಕಾದುದಿಲ್ಲ! ಆತ್ಮತೃಪ್ತಿಗಾಗಿಯಷ್ಟೆ ಹೊನ್ನಸಿರಿ ************************************
ಗಜಲ್ ಕ್ಷೇತ್ರದ ಮೇರು ಪರ್ವತ ಗಾಲಿಬ್ Read Post »
‘ಅಮ್ಮನ ನಿರಾಳತೆ’
ವಸುಂಧರಾ ಕದಲೂರು ಬರೆಯುತ್ತಾರೆ
ಒಟ್ಟಿನಲ್ಲಿ ಹೊಟ್ಟೆ ತುಂಬಿದ ಮಗು ಒಂದಷ್ಟು ಹೊತ್ತು ತರಲೆ ಮಾಡದೇ ಆಡಿಕೊಂಡೋ, ಮಲಗಿಕೊಂಡೋ ಇದ್ದರೆ ಅಮ್ಮನಿಗೆ ಸಿಗುವ ನಿರಾಳತೆ ಇದೆಯಲ್ಲಾ ಅದಕ್ಕೆ ಬೆಲೆ ಕಟ್ಟಲಾಗದು.
ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ
ಪ್ರಬಂಧ ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ ಜಯಶ್ರೀ.ಜೆ. ಅಬ್ಬಿಗೇರಿ ಇಸ್ಲಾಂ ಧರ್ಮದ ಪ್ರಖ್ಯಾತ ಗುರು ‘ಸಾದಿ’ ಸಣ್ಣವರಿದ್ದಾಗ ತನ್ನ ತಂದೆಯೊಂದಿಗೆ ಮಸೀದಿಗೆ ಹೋಗಿದ್ದರು. ತಂದೆ ಮಕ್ಕಳು ಮಸೀದಿಯ ಮೇಲ್ವಿಚಾರಣೆ ನೋಡಿಕೊಳ್ಳಬೇಕಿತ್ತು. ಅಲ್ಲಿ ಪ್ರಾರ್ಥನೆಗೆ ಬಂದವರೆಲ್ಲ ನಿದ್ದೆಗೆ ಜಾರಿದ್ದರು. ಅದನ್ನು ಕಂಡ ಸಾದಿಗೆ ಆಶ್ಚರ್ಯವಾಯಿತು. ಆತ ತಂದೆಗೆ ತಿಳಿಸಿದ. ‘ನಮ್ಮಿಬ್ಬರನ್ನು ಬಿಟ್ಟು ಬಾಕಿಯವರೆಲ್ಲ ಮಲಗಿ ಬಿಟ್ಟಿದ್ದಾರೆ. ಆತನ ತಂದೆಗೆ ಕೋಪ ಬಂದಿತು.’ನಿನ್ನ ಕೆಲಸ ನೀನು ಮಾಡು. ಬೇರೆಯವರು ಏನು ಮಾಡುತ್ತಿದ್ದಾರೆಂದು ನೋಡುವುದು ನಿನ್ನ ಕೆಲಸವಲ್ಲ. ‘ಬೇರೆಯವರಲ್ಲಿ ತಪ್ಪು ಕಂಡು ಹಿಡಿಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಅದರ ಬದಲು ನಿನ್ನಲ್ಲಿರುವ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊ. ಬೇರೆಯವರಲ್ಲಿ ಹಲವು ತಪ್ಪುಗಳಿದ್ದು ಒಂದೇ ಒಂದು ಒಳ್ಳೆಯ ಗುಣವಿದ್ದರೂ ಅದರ ಮೇಲೆ ನಿನ್ನ ಗಮನವಿಡು.ಒಳ್ಳೆಯದರತ್ತ ಗಮನ ಹರಿಸುವುದರಿಂದ ಒಳ್ಳೆಯದೇ ಆಗುತ್ತದೆ.’ ಎಂದರು. ಸಂಪೂರ್ಣವಾಗಿ ಒಳ್ಳೆಯ ಗುಣಗಳು ತುಂಬಿರುವ ವ್ಯಕ್ತಿ ಸಿಗುವುದು ದುರ್ಲಭ. ಹಾಗಂತ ಸಂಪೂರ್ಣ ಕೆಟ್ಟ ಗುಣಗಳಿರುವ ವ್ಯಕ್ತಿ ಸಿಗುವುದು ಸುಲಭ ಅಂತಿಲ್ಲ. ಹಾಗಿದ್ದರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತವೆ ಅನ್ನುವುದು ಸೂರ್ಯನಷ್ಟೇ ಸ್ಪಷ್ಟ. ಈ ಸಂಗತಿಯನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ ಪ್ರತಿಯೊಬ್ಬ ವ್ಯಕ್ತಿ ಒಳ್ಳೆಯ ಮತ್ತು ಕೆಟ್ಟ ಗುಣಗಳ ಒಟ್ಟು ಮೊತ್ತ. ಹಾಗಾದರೆ ಒಳ್ಳೆಯ ಮತ್ತು ಕೆಟ್ಟ ವ್ಯಕ್ತಿ ಅಂತ ಹೇಗೆ ಗುರುತಿಸುತ್ತೇವೆ? ಯಾರಲ್ಲಿ ಒಳ್ಳೆಯ ಗುಣಗಳು ಹೆಚ್ಚಿವೆಯೋ ಅವರು ಒಳ್ಳೆಯವರು. ಹಾಗೆಯೇ ಕೆಟ್ಟ ಗುಣಗಳ ಪ್ರಮಾಣ ಹೆಚ್ಚಿದ್ದವರು ಕೆಟ್ಟವರು ಎಂದು ನಿರ್ಧರಿಸಲಾಗುತ್ತದೆ. ಉತ್ತಮವಾದುದನ್ನು ನಿರೀಕ್ಷಿಸಿದರೆ ಅದನ್ನು ಪಡೆಯಬಹುದು. ಇತರರಲ್ಲಿ ಒಳ್ಳೆಯ ಗುಣಗಳನ್ನು ಮಾತ್ರ ಕಾಣುತ್ತಿದ್ದರೆ ಇಡೀ ಜಗತ್ತೇ ಒಳ್ಳೆಯದಾಗಿ ಕಾಣಿಸುವುದು. ಒಳಿತು ಕೆಡುಕುಗಳಿಗಿಂತ ನೋಡುವ ದೃಷ್ಟಿ ಒಳ್ಳೆಯದಾಗಿರಬೇಕು. ಸಾಕಷ್ಟು ಕೆಡುಕುಗಳ ಮಧ್ಯೆಯೂ ಒಳ್ಳೆಯದನ್ನು ಹುಡುಕುವುದೇ ಒಳ್ಳೆಯತನ.ಮುಳ್ಳುಗಳ ನಡುವೆ ಅರಳಿ ನಿಂತ ಗುಲಾಬಿಯತ್ತ ಗಮನಿಸಬೇಕೇ ಹೊರತು ಮುಳ್ಳುಗಳೆಡೆಯಲ್ಲ.ಕಮಲದತ್ತ ದೃಷ್ಟಿ ನೆಡಬೇಕೇ ಹೊರತು ಕೆಸರಿನತ್ತ ಅಲ್ಲ. ತೊಂದರೆ ಮಧ್ಯದಲ್ಲಿ ಹೇಗೆ ಅವಕಾಶಗಳು ಅವಿತುಕೊಂಡಿರುತ್ತದೆಯೋ ಹಾಗೆಯೇ ಕೆಟ್ಟದರ ನಡುವೆಯೂ ಒಳ್ಳೆಯದು ಅಡಗಿರುತ್ತದೆ. ಅದನ್ನು ಹೆಕ್ಕಿ ತೆಗೆದು ಬೆಳೆಸುವುದೇ ಜಾಣತನ. ಯಾವುದರ ಬಗೆಗೆ ಮನಸ್ಸನ್ನು ಕೇಂದ್ರೀಕರಿಸುತ್ತೇವೆಯೋ ಅದನ್ನೇ ದಕ್ಕಿಸಿಕೊಳ್ಳುತ್ತೇವೆ. ಗಮನವನ್ನು ಸದಾ ಒಳ್ಳೆಯ ಗುಣಗಳತ್ತ ಹರಿಸಬೇಕು. ಯಾಂತ್ರಿಕವಾಗಿ ದಿನವನ್ನು ದೂಡುತ್ತಿದ್ದರೆ ಒಳಿತು ಕೆಡುಕುಗಳ ಫರಕು ಗೊತ್ತಾದರೂ ಬದಲಾಗುವುದು ವಿರಳ. ನಮ್ಮ ಅಭ್ಯಾಸಗಳು ನಮ್ಮನ್ನು ಇತರರಿಂದ ಬೇರೆಯಾಗಿಸುತ್ತವೆ. ಒಳಿತನ್ನು ಹುಡುಕುವುದು ಒಂದು ಒಳ್ಳೆಯ ಅಭ್ಯಾಸ. ಒಳ್ಳೆಯದು ಮಹತ್ತರವಾದ ಸ್ಪೂರ್ತಿ ನೀಡುತ್ತದೆ. ಚೈತನ್ಯವನ್ನು ತುಂಬುತ್ತದೆ. ಒಳ್ಳೆಯದನ್ನು ಗಂಭೀರವಾಗಿ ಪರಿಗಣಿಸಬೇಕು. ಅದನ್ನು ಮೆಚ್ಚಬೇಕು. ನೀರೆರದು ಪೋಷಿಸಬೇಕು. ನಿರ್ಲಕ್ಷಿಸಿದರೆ ಒಣಗಿದ ಬಳ್ಳಿಯಂತಾಗುತ್ತದೆ.ಕೆಟ್ಟದ್ದನ್ನು ಸಾಕುವುದೆಂದರೆ ಫಲ ಕೊಡದ ಮುತ್ತುಗದ ಗಿಡಕ್ಕೆ ಹತ್ತಾರು ವರ್ಷ ಪೂಜಿಸಿದಂತೆ. ಯಾವುದೇ ಪ್ರಯೋಜನವಿಲ್ಲ. ನಿರಾಸೆಯ ಹೊರತು ಮತ್ತೇನೂ ಲಭಿಸದು. ಒಳ್ಳೆಯ ಗುಣಗಳನ್ನು ಪೋಷಿಸದಿದ್ದರೆ ಪ್ರೋತ್ಸಾಹಿಸದಿದ್ದರೆ ಒಳ್ಳೆಯವರು ನಿರಾಶರಾಗಬಹುದು. ‘ಎಷ್ಟು ಒಳ್ಳೆಯವರಾಗಿದ್ದರೂ ಅಷ್ಟೇ ಇದೆ. ಯಾವುದೇ ಲಾಭವಿಲ್ಲ. ಮತ್ತಷ್ಟು ನೋವನ್ನು ಅನುಭವಿಸುವುದು ಯಾರಿಗೆ ಬೇಕಿದೆಯೆಂದು ನೊಂದ ಮನಸ್ಸು ಕೆಟ್ಟದ್ದರತ್ತ ವಾಲುತ್ತದೆ.’ ಅಂದರೆ ಕೆಟ್ಟವರು ಮೂಲತಃ ಕೆಟ್ಟವರಲ್ಲ. ಅವರು ಪರಿಸ್ಥಿತಿಯ ಕೂಸಾಗಿ ಕೆಟ್ಟವರಾಗಿರುತ್ತಾರೆ. ಬೇಕಂತಲೇ ಅಪರಾಧಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಯಾರಿಗೂ ಬೇಕಾಗಿರುವುದಿಲ್ಲ. ಒಳ್ಳೆಯದನ್ನು ಅಲ್ಲಗಳೆಯುವುದು ತುಚ್ಛವಾಗಿ ಕಾಣುವುದು ತಪ್ಪು. ಹಣ ಅಧಿಕಾರ ಅಂತಸ್ತಿನಿಂದ ಒಣ ಪ್ರತಿಷ್ಟೆಯಿಂದ ಪಡೆದ ಸುಳ್ಳು ಒಳ್ಳೆಯತನದ ಬಿರುದು ದೀಪದ ಬೆಳಕಿನಂತೆ ಎಣ್ಣೆ ಇರುವವರೆಗೆ ಮಾತ್ರ ಇರುತ್ತದೆ.ನಿಜವಾದ ಒಳ್ಳೆಯತನಕ್ಕೆ ಸಿಗುವ ಗೌರವ ಸೂರ್ಯನಂತೆ ಸೃಷ್ಟಿ ಇರುವವರೆಗೆ ಬೆಳಗುತ್ತದೆ. ಒಳ್ಳೆಯ ಸಮಾಜ ಕಟ್ಟಬೇಕೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಮೊದಲು ಅನ್ಯರ ಒಳಿತಿಗಾಗಿ, ನಂತರ ತನ್ನ ಒಳಿತಿಗಾಗಿ ದುಡಿಯುವ ಮನೋಭಾವ ಹೊಂದಿರಬೇಕು. ಯೋಚನೆಗಳು ಕಾರ್ಯಗಳು ಒಳ್ಳೆದಾದರೆ ಬದುಕು ಒಳ್ಳೆಯದಾಗುತ್ತದೆ. ಒಳ್ಳೆಯದನ್ನು ಗುರುತಿಸೋಣ ಒಳ್ಳೆಯದನ್ನು ಬೆಳೆಸೋಣ. ಒಳ್ಳೆಯ ಗುಣಗಳು ಮತ್ತೆ ಮತ್ತೆ ಚಿಗುರೊಡೆಯಲು ಪ್ರೋತ್ಸಾಹಿಸೋಣ. ಉದುರಿ ಹೋದ ಹೂಗಳು ತಮ್ಮ ಸುವಾಸನೆಯನ್ನು ಚೆಲ್ಲುತ್ತವೆ. ಒಳ್ಳೆಯ ಪುಸ್ತಕಗಳು ಒಳ್ಳೆಯ ವ್ಯಕ್ತಿಗಳು ಒಳ್ಳೆಯತನ ಕೂಡಲೇ ಅರ್ಥವಾಗುವುದಿಲ್ಲ. ಪುಸ್ತಕವನ್ನು ಮತ್ತೆ ಮತ್ತೆ ಓದಿದಾಗ ಮಾತ್ರ ಅದರ ಸತ್ಯ ಅರಿವಾಗುವುದು. ಹಾಗೆಯೇ ವ್ಯಕ್ತಿಗಳ ಮನಸ್ಸನ್ನು ಸ್ವಚ್ಛ ಮನಸ್ಸಿನಿಂದ ಅರಿಯಲು ಪ್ರಯತ್ನಿಸಿದರೆ ಮಾತ್ರ ಒಳ್ಳೆಯತನ ತಿಳಿಯುವುದು.ಸಾಕಷ್ಟು ಒಳ್ಳೆಯ ಗುಣಗಳು ಇರುವವರು ಸಿಗುವರು ಎಂದು ಕಾಯುವುದು ಬೇಡ. ಸಿಕ್ಕ ಜನರಲ್ಲಿಯೇ ಒಳ್ಳೆಯ ಗುಣಗಳನ್ನು ಗುರುತಿಸಿ ಪೋಷಿಸೋಣ. ಆಗ ಒಳ್ಳೆಯದು ಬಾಡದ ಹೂವಿನಂತೆ ನಗುತ್ತಿರುತ್ತದೆ. ============================================================= .
ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ Read Post »
ಜೀವ ಮಿಡಿತದ ಸದ್ದು
ನಮ್ಮ ಫ್ಲಾಟಿನ ಮನೆ; ನೆಲದ ಸ್ಪರ್ಶ ಮಣ್ಣ ಘಮ, ಮರಗಳ ಸ್ನೇಹ, ಬೆಕ್ಕು ನಾಯಿಗಳ ಸಾನಿಧ್ಯ ಇಲ್ಲದ ನೆಲೆಯಾದರೂ ಇಲ್ಲಿಯೂ ಜೀವಮಿಡಿತದ ಸದ್ದಿದೆ. ಮರಗಿಡಗಳ, ತಂಗಾಳಿಯ ಸ್ಪರ್ಶವಿದೆ, ವಿಧ ವಿಧ ಹಕ್ಕಿ ಹಾಡಿನ ನಿನಾದವಿದೆ.
ಶಾಲೆಯಲ್ಲಿ ಸಿಹಿ-ಕಹಿ
ಮಕ್ಕಳ ಅನುಭವ ಕಥನ ಶಾಲೆಯಲ್ಲಿ ಸಿಹಿ-ಕಹಿ ವಿಜಯಶ್ರೀ ಹಾಲಾಡಿ ವಿಜಿಯ ಬಾಲ್ಯದ ಆ ದಿನಗಳಳ್ಲಿ ಮತ್ತು ಅದಕ್ಕೂ ಹಿಂದೆಲ್ಲ ಮಕ್ಕಳನ್ನು ಶಾಲೆಗೆ ಕಳಿಸಿಯೇ ತೀರಬೇಕೆಂಬ ದೊಡ್ಡ ಆಸೆ ಮನೆಯವರಿಗೆ ಇರಲಿಲ್ಲ. ಹೆಚ್ಚು ಕೇಳಿದರೆ, ಮಕ್ಕಳು ಶಾಲೆಗೆ ಹೋಗುವುದೇ ಬೇಡ, ಮನೆಯಲ್ಲೇ ಕೆಲಸ ಮಾಡಿಕೊಂಡಿರಲಿ ಎಂದು ಬಹುತೇಕ ಹಿರಿಯರ ಅಭಿಪ್ರಾಯವಾಗಿತ್ತು. ಅವರ ಹಳ್ಳಿಯಲ್ಲಿ ದೂರ ದೂರ ಮನೆಗಳು. ರಸ್ತೆಯಿಂದ, ಬಸ್ಸಿನ ಸಂಪರ್ಕದಿಂದ ಬಹು ದೂರ ಕಾಡು, ಗುಡ್ಡ, ಬಯಲುಗಳಲ್ಲಿ ಹುದುಗಿದ ಮನೆಗಳೇ ಜಾಸ್ತಿ. ಶಾಲೆಗಳ ಸಂಖ್ಯೆಯೂ ಆಗ ಕಡಿಮೆಯಿತ್ತು. ಹಾಗಾಗಿ ಶಾಲೆಗೆ ಹೋಗಿಬರಲು ಸಣ್ಣ ಸಣ್ಣ ಮಕ್ಕಳಿಗೆ ತೊಡಕಾಗಿತ್ತು. `ಕಡ್ಡಾಯ ಶಿಕ್ಷಣ’ ಎಂಬ ಸರ್ಕಾರದ ಕಾನೂನೇ ಆಗ ಇರಲಿಲ್ಲ! ಇದೆಲ್ಲದರಿಂದಾಗಿ ಅಂದಿನ ದಿನಗಳಲ್ಲಿ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾದರು. ಇದು ನಿಜವಾಗಿಯೂ ಅಂತವರ ಬದುಕಿನಲ್ಲಾದ ನಷ್ಟ. ವಿಜಿಯ ಮನೆಯಲ್ಲಿ ಅವಳು ಶಾಲೆಗೆ ಹೋಗುವುದು ಬೇಡ ಎಂದೇನೂ ಅಜ್ಜಿ, ಅಪ್ಪಯ್ಯ, ಅಮ್ಮ ಯಾರ ಮನಸ್ಸಿನಲ್ಲಿಯೂ ಇರಲಿಲ್ಲ. ಆದರೆ ಎಲ್ಲಾ ಮನೆಗಳಂತೆಯೇ ಅವರ ಮನೆಯಲ್ಲಿಯೂ ಶಾಲೆ, ಮಾರ್ಕ್ಸ್ ಎಂದೆಲ್ಲ ಹಿರಿಯರ್ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಒಂದು ಲೆಕ್ಕಕ್ಕೆ ಇದು ಒಳ್ಳೆಯದೇ ಆಯಿತು. ಬೇಕಾದಷ್ಟು ಆಡಬಹುದಿತ್ತು; ಕಾಡು ಗುಡ್ಡಗಳಲ್ಲಿ ಓಡಿಯಾಡಬಹುದಿತ್ತು. ಬಿಸಿಲು, ಮಳೆಯೆನ್ನದೆ ಮನೆ ಸುತ್ತಮುತ್ತ ನಿಸರ್ಗದ ಮಧ್ಯೆ ಹೊಸ ಹೊಸ ಅನುಭವಗಳನ್ನು ಪಡೆಯಬಹುದಿತ್ತು. ಹಾಗೆ ವಿಜಿ ಮತ್ತು ಅವಳ ವಯಸ್ಸಿನ ಮಕ್ಕಳೆಲ್ಲ ಬೇಕಾದಷ್ಟು ಆಡಿ, ಓಡಿ, ದಣಿದು, ಮನೆಕೆಲಸಗಳನ್ನು ಮಾಡಿ ಕೊನೆಗೆ ಸಮಯ ಉಳಿದರೆ ಓದುತ್ತಿದ್ದರು! ಹೆಚ್ಚಿನ ಎಲ್ಲಾ ಮಕ್ಕಳೂ ಮೈಲಿಗಟ್ಟಲೆ ನಡೆದೇ ಶಾಲೆಗೆ ಬರುತ್ತಿದ್ದರು. ಹೈಸ್ಕೂಲಿನ ದಿನಗಳಲ್ಲಿ ಹೋಗಿ-ಬರುವ ಒಟ್ಟು ದೂರ ದಿನಕ್ಕೆ ಐದು ಮೈಲಿ ನಡಿಗೆಯಾದರೆ, ಬಸ್ಸಿನಲ್ಲಿ ಹತ್ತು ಕಿಲೋಮೀಟರ್ ಪ್ರಯಾಣಿಸಬೇಕಿತ್ತು ವಿಜಿ. ಅದೂ ಆ ಬಸ್ಸುಗಳಲ್ಲಿ ನಿಲ್ಲಲು ಜಾಗ ಸಿಕ್ಕಿದರೇ ಪುಣ್ಯ! ಇದ್ದದ್ದೇ ಕೆಲವು ಬಸ್. ಆ ಬಸ್ಸುಗಳೂ ಶಾಲೆಯ ಮಕ್ಕಳನ್ನು ಹತ್ತಿಸಿಕೊಳ್ಳದೆ ಬಿಟ್ಟುಹೋಗುತ್ತಿದ್ದವು. ಶಾಲೆ ಮಕ್ಕಳು ಟಿಕೆಟ್ಟಿಗೆ ಕೊಡುವ ದುಡ್ಡು ತೀರಾ ಕಡಿಮೆಯಾದ್ದರಿಂದ ಬಸ್ ಕಂಡಕ್ಟರ್ಗಳು ಇವರು ಹತ್ತುವ ಮುಂಚೆಯೇ `ರೈಟ್’ ಹೇಳುತ್ತಿದ್ದರು. ಹೀಗೆ ಶಾಲೆಗೆ ಹೋಗಿ ಬರುವುದೇ ಒಂದು ಸಾಹಸವಾಗಿತ್ತು. ಇದರಿಂದ ದೈಹಿಕವಾಗಿ ಹೆಚ್ಚು ಆಯಾಸವಾಗುತ್ತಿದ್ದುದರಿಂದರಾತ್ರಿ ಎಂಟು ಗಂಟೆಗೆಲ್ಲ ನಿದ್ದೆ ಎಳೆಯುತ್ತಿತ್ತು. ಹತ್ತನೇ ಕ್ಲಾಸಿನ ಪಬ್ಲಿಕ್ ಪರೀಕ್ಷೆಗೆ ಮಾತ್ರ ಮಕ್ಕಳು ಜಾಸ್ತಿ ಓದುತ್ತಿದ್ದರು. ಅಲ್ಲಿಯವರೆಗಿನ ಕ್ಲಾಸ್ಗಳಲ್ಲಿ ಓದುವ ಒತ್ತಡ ಅಷ್ಟಾಗಿ ಇದ್ದಿರಲಿಲ್ಲ. ನಮ್ಮ ವಿಜಿ ಓದುವುದರಲ್ಲಿ ಚುರುಕೇ. ಆದರೆ ಹಿರಿಯ ಪ್ರಾಥಮಿಕ ಶಾಲೆಗೆ ಹೋದಾಗ ಐದನೇ ತರಗತಿಗೆ ಇಂಗ್ಲಿಷ್ ಹೊಸದಾಗಿ ಸೇರಿಕೊಂಡಿತು. ಇಂಗ್ಲಿಷ್ ಪಾಠ ಚೆನ್ನಾಗಿ ಮಾಡಲಿಲ್ಲವೋ ಅಥವಾ ಇವಳಿಗೆ ಅರ್ಥವಾಗಲಿಲ್ಲವೋ ಒಟ್ಟಿನಲ್ಲಿ ಆ ವಿಷಯದಲ್ಲಿ ಸ್ವಲ್ಪ ಹಿಂದಿದ್ದಳು. ಆರನೆ ತರಗತಿಯಲ್ಲಿ ಹಿಂದಿ ಇತ್ತು. ಆ ಕ್ಲಾಸಿನಲ್ಲಿಯೂ ಅಷ್ಟೇ. ಹಿಂದಿ ಅಕ್ಷರಗಳನ್ನು ಬರೆಯುವುದು ಕಷ್ಟವೆನಿಸುತ್ತಿತ್ತು. ಏಳನೇ ತರಗತಿಗೆ ಹೋದ ಹೊಸದರಲ್ಲಿ ಒಂದಿನ ಯಾಕೋ ಏನೋ ಅಮ್ಮ ಚೆನ್ನಾಗಿ ಬಯ್ದರು. “ಆಟವೇ ಜಾಸ್ತಿ ಆಯಿತು ಇವಳದ್ದು, ಓದುವುದಿಲ್ಲ, ನೆಟ್ಟಗೆ ಮನೆಕೆಲಸ ಮಾಡುವುದಿಲ್ಲ” ಎಂದೆಲ್ಲ ಅವರು ನಿಜವನ್ನೇ ಹೇಳಿದ್ದರೂ, ವಿಜಿಗೆ ಅವಮಾನವಾದಂತಾಗಿ ಕಣ್ಣೀರು ಬಂತು. `ಈ ಸಲ ಚಂದ ಓದಿಯೇ ಓದಬೇಕು’ ಎಂದು ಮನಸ್ಸಿನಲ್ಲೇ ಚಾಲೆಂಜ್ ಹಾಕಿದಳು. ಅದಕ್ಕೆ ಸರಿಯಾಗಿ ಆ ವರ್ಷ ಹಿಂದಿ ಮೇಷ್ಟು ಚೆನ್ನಾಗಿ ಕಲಿಸುತ್ತಿದ್ದರು. ಆಗ ಕಿರುಪರೀಕ್ಷೆ ಬಂತು. ವಿಜಿ ಸವಾಲಾಗಿ ತೆಗೆದುಕೊಂಡು ಹಿಂದಿಯನ್ನು ಓದಿದಳು. ಮಾಷ್ಟು ಪೇಪರ್ ತಿದ್ದಿ ಕೊಟ್ಟಾಗ ಅವಳಿಗೆ ಹಿಂದಿಯಲ್ಲಿ ಇಪ್ಪತೈದಕ್ಕೆ ಇಪ್ಪತೈದು ಮಾರ್ಕ್ಸ್ ಬಂದಿತ್ತು! ಅವಳಿಗಾದ ಖುಷಿಗೆ ಲೆಕ್ಕವೇ ಇರಲಿಲ್ಲ. ನಾಲ್ಕೈದು ಜನರಿಗೆ ಇಪ್ಪತ್ತನಾಲ್ಕೂವರೆ ಮಾರ್ಕ್ಸ್ ಬಂದಿತ್ತು. ಆಗ ಮಾಷ್ಟು ಒಂದು ಮಾತು ಹೇಳಿದರು. “ವಿಜಯಶ್ರೀಗೆ ಅರ್ಧ ಅಂಕ ಕೂಡಾ ಕಳೆಯಲು ಆಗಲಿಲ್ಲ ನನಗೆ, ಯಾಕೆಂದರೆ ಅವಳು ಒಂದೂ ತಪ್ಪು ಮಾಡಿಲ್ಲ” ಎಂದು. ಈ ಮಾತು, ಸನ್ನಿವೇಶ ದೊಡ್ಡವಳಾದ ನಂತರವೂ ಅವಳಿಗೆ ಮರೆಯಲಿಲ್ಲ. ಅದಲ್ಲದೆ ಅಮ್ಮ ಬಯ್ದದ್ದು ಒಳ್ಳೆಯದೇ ಆಯಿತು ಅನಿಸಿತು. ಏಳನೇ ತರಗತಿಯಲ್ಲಿ ಅವಳು ಆ ವರ್ಷ ಕ್ಲಾಸಿಗೇ ಪ್ರಥಮ ಸ್ಥಾನದಲ್ಲಿ ಪಾಸಾದಳು. ಆದರೆ ಮತ್ತೆ ಹೈಸ್ಕೂಲಿಗೆ ಹೋದಾಗ ಅಲ್ಲಿನ ಹೊಸ ಪರಿಸರ ಹೊಂದಿಕೆಯಾಗದ್ದಕ್ಕೋ ಅಥವಾ ಉದಾಸೀನದಿಂದಲೋ ಎಂಟು, ಒಂಬತ್ತನೇ ತರಗತಿಯಲ್ಲಿ ಹೆಚ್ಚೇನೂ ಓದುತ್ತಿರಲಿಲ್ಲ. ಅವಳಿಗೆ ಶಾಲೆ ಎಂದರೆ ಸಾಕಷ್ಟು ಹೆದರಿಕೆಯೂ ಇತ್ತು. ಆದರೆ ಹತ್ತನೇ ತರಗತಿಯಲ್ಲಿದ್ದಾಗ ಮಾತ್ರ ಬೆಳಗಿನ ಜಾವ ಮೂರು ಗಂಟೆಗೆಲ್ಲ ಎದ್ದು ಚಿಮಣಿದೀಪ ಹತ್ತಿಸಿಕೊಂಡು ಹೊಗೆ ಕುಡಿಯುತ್ತಾ ಓದುತ್ತಿದ್ದಳು! ಕನ್ನಡ ಅವಳ ಪ್ರೀತಿಯ ವಿಷಯವಾಗಿತ್ತು. ನಾಲ್ಕನೇ ತರಗತಿಯಿಂದಲೇ ಮನೆಯಲ್ಲಿದ್ದ ಸಾಹಿತ್ಯದ ಪುಸ್ತಕಗಳನ್ನು ಓದಿದ್ದಳು. ಅದಲ್ಲದೆ ದೊಡ್ಡ ದೊಡ್ಡ ಕಾದಂಬರಿಗಳನ್ನೂ ಓದಿಬಿಟ್ಟಿದ್ದಳು! ಒಂದು ಸಲ ತರಗತಿಯಲ್ಲಿ ಕನ್ನಡ ಮಾಷ್ಟು ಈಗೊಂದು ಪದ್ಯ ಹೇಳುತ್ತೇನೆ, ಇದಕ್ಕೆ ಸರಿಯಾಗಿ ಅರ್ಥ ಹೇಳಿದವರಿಗೆ ನಾಕಾಣೆ (ಇಪ್ಪತೈದು ಪೈಸೆ) ಬಹುಮಾನ ಎಂದು ಘೋಷಿಸಿದರು. ಆ ಪದ್ಯ ಹೀಗಿತ್ತು. “ಮೇಲಕೆ ಹತ್ತಿರಿ ಮುಂದಕೆ ಬನ್ನಿರಿ ಎನ್ನುತ ಕಂಡಕ್ಟರ ಕರೆಯೇ; ಉಳಿದೆಲ್ಲ ಕಡೆಯೊಳು ಹಿಂದಕೆ ತಳ್ಳಿಸಿಕೊಂಡವನಾನಂದಕೆಣೆಯೆ!” ಸುಮಾರು ಮಕ್ಕಳು ಪ್ರಯತ್ನಿಸಿದರಾದರೂ ಸರಿಯಾದ ಅರ್ಥ ಹೇಳಲಾಗಲಿಲ್ಲ. ವಿಜಿ ಮಾತ್ರ ಸರಿಯಾದ ಉತ್ತರ ಕೊಟ್ಟಳು. ಆಗ ಅವಳಿಗೆ ಬಹುಮಾನವಾಗಿ ನಾಕಾಣೆ ದೊರಕಿತು. ಆ ದುಡ್ಡಿಗಿಂತ ಅಷ್ಟು ಬುದ್ಧಿವಂತ ಮಕ್ಕಳಿದ್ದ ತರಗತಿಯಲ್ಲಿ ತಾನೊಬ್ಬಳೇ ಉತ್ತರಿಸಿದ್ದು ವಿಜಿಗೆ ಹೆಮ್ಮೆಯೆನಿಸಿತ್ತು. ನಿಜವಾಗಿಯೂ ಅವರ ಶಾಲೆ ಸುತ್ತಲೆಲ್ಲ ಪ್ರಸಿದ್ಧವಾದ ಶಾಲೆಯಾಗಿತ್ತು. ಎ ಮತ್ತು ಬಿ ಎರಡು ವಿಭಾಗವಿದ್ದ ಅವರ ತರಗತಿಯಲ್ಲಿ ಬಹಳ ಬುದ್ಧಿವಂತ ವಿದ್ಯಾರ್ಥಿಗಳಿದ್ದರು. ಆಗೆಲ್ಲ ಖಾಸಗಿ ಶಾಲೆಗಳೆಂದರೆ ಏನೆಂದು ಜನರಿಗೆ ಗೊತ್ತೇ ಇರಲಿಲ್ಲ. ಇದ್ದದ್ದು ಸರ್ಕಾರಿ ಶಾಲೆಗಳು ಮಾತ್ರ. ಹತ್ತನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಬರೆದು ವಿಜಿ ತರಗತಿಗೆ ಐದನೇ ಸ್ಥಾನ ಪಡೆದುಕೊಂಡಿದ್ದಳು. ಹತ್ತನೇ ತರಗತಿಯಲ್ಲಿದ್ದಾಗ ನಡೆದ ಮತ್ತೊಂದು ಖುಷಿಯ ಘಟನೆ ಮರೆಯಲಾರದ್ದು. ಪ್ರತೀ ವರ್ಷದಂತೆ ಆ ವರ್ಷವೂ ಸ್ಪರ್ಧೆಗಳಿದ್ದವು. ಇಷ್ಟು ವರ್ಷ ಪ್ರಬಂಧ ಮುಂತಾದ ಬರವಣಿಗೆ ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಿದ್ದ ವಿಜಿ ಈ ವರ್ಷ ಭಾಷಣಕ್ಕೆ ಸೇರಿದಳು. ಕೊಟ್ಟ ವಿಷಯಕ್ಕೆತಾನೇ ಭಾಷಣ ಬರೆದುಕೊಂಡು ಮನೆಯಲ್ಲಿ ಪ್ರಾಕ್ಟೀಸ್ ಮಾಡಿಕೊಂಡು ಹೋದಳು. ಮೊದಲೆಲ್ಲ ಅವಳಿಗೆ ಭಾಷಣ ಎಂದರೇ ಭಯವಾಗುತ್ತಿತ್ತು. ಈ ಸಲ “ನನಗೆ ಭಯವೇನೂ ಇಲ್ಲ, ನಾನು ಚೆನ್ನಾಗಿ ಮಾತಾಡಬಲ್ಲೆ, ಗೆದ್ದು ತೋರಿಸುತ್ತೇನೆ” ಎಂದೆಲ್ಲ ತನಗೆ ತಾನೇ ಪುಸಲಾಯಿಸಿಕೊಂಡು ಹೆದರಿಕೆಯನ್ನು ಮೆಟ್ಟಿ ತುಂಬಾ ಚೆನ್ನಾಗಿ ಎದುರು ಕುಳಿತವರೆಲ್ಲರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಿದಳು. ಅವಳಿಗೇ ಮೊದಲ ಬಹುಮಾನ ಬಂತು. ಇಡೀ ಕಾಲೇಜಿನಲ್ಲಿ ಅವಳನ್ನು ಎಲ್ಲರೂ ಗಮನಿಸುವಂತಾಯಿತು. ಪಿ.ಯು.ಸಿ.ಯಲ್ಲಿ ಓದುತ್ತಿದ್ದ ಅವಳ ಊರಿನ ಗೆಳತಿಯರೂ ಕೂಡಾ “ವಿಜಯಶ್ರೀ ಅಡ್ಡಿಲ್ಲೆ. ಹೀಗೇ ಮಾತಾಡುವುದು ಕಮ್ಮಿ. ಆದರೆ ಸ್ಟೇಜ್ ಮೇಲೆ ಚಂದ ಮಾತಾಡ್ತಾಳೆ.” ಎಂದು ಅವಳೆದುರಿಗೇ ಹೇಳಿದಾಗ ಸಂಕೋಚವೆನಿಸಿದರೂ ಖುಷಿಯಾಯಿತು. ಈ ಪ್ರಸಂಗದಿಂದಾಗಿ ಮುಂದೆ ಅವಳಿಗೆ ಎಲ್ಲರೆದುರು ನಿಂತು ಮಾತಾಡಲು ಧೈರ್ಯ ಬಂದಿತು. ಆಗೆಲ್ಲ ಕೆಲವು ಶಿಕ್ಷಕರು ಮಕ್ಕಳಿಗೆ ವಿಪರೀತ ಹೊಡೆಯುತ್ತಿದ್ದರು. ಮಕ್ಕಳನ್ನು ಶಿಕ್ಷಿಸುವುದು ಅಪರಾಧ ಎಂಬ ಕಾನೂನು ಆಗ ಇತ್ತೋ ಇಲ್ಲವೋ ಗೊತ್ತಿಲ್ಲ. ಇಂತಹ ಕಹಿ ಘಟನೆಗಳು ವಿಜಿಗೆ ಎಂದಿಗೂ ಮರೆಯಲು ಸಾಧ್ಯವಾಗಿಲ್ಲ. ಅವಳ ಕಿರಿಯ ಪ್ರಾಥಮಿಕ ಏಕೋಪಾಧ್ಯಾಯ ಶಾಲೆಯ ಮಾಷ್ಟು ತುಂಬಾ ಒಳ್ಳೆಯವರು, ಶಿಸ್ತುಗಾರರು; ಆದರೆ ಅವರಿಗೆ ವಿಪರೀತ ಸಿಟ್ಟು. ಓದಲು, ಬರೆಯಲು ಬಾರದ ಮಕ್ಕಳಿಗೆ ಕೋಲಿನಿಂದ ಸರಿಯಾಗಿ ಹೊಡೆಯುತ್ತಿದ್ದರು. ಅದೂ ಅಲ್ಲದೆ ಅಂತಹ ಮಕ್ಕಳ ತಲೆಯನ್ನು ಹಿಡಿದು ಗೋಡೆಗೆ ಜಪ್ಪುವುದು, ಸ್ಲೇಟಿನಲ್ಲಿ ತಲೆಗೆ ಹೊಡೆಯುವುದನ್ನೂ ಮಾಡುತ್ತಿದ್ದರು. ಹಾಗೆ ಬೇರೆಯವರಿಗೆ ಹೊಡೆಯುವಾಗಲೇ ವಿಜಿಗೆ ತುಂಬಾ ಹೆದರಿಕೆಯಾಗಿ ಎದೆ ವೇಗವಾಗಿ ಹೊಡೆದುಕೊಳ್ಳುತ್ತಿತ್ತು; ಮುದುರಿ ಕೂರುತ್ತಿದ್ದಳು. ಹಾಗೆ ಹೊಡೆಸಿಕೊಂಡ ಮಕ್ಕಳ ಕುರಿತು “ಅಯ್ಯೋ ಪಾಪ” ಅಂದುಕೊಳ್ಳುತ್ತ ಕಣ್ಣು ಒರೆಸಿಕೊಳ್ಳುತ್ತಿದ್ದಳು. ಹಾಗೆ ಹೊಡೆಸಿಕೊಂಡ ಮಕ್ಕಳ ಅಸಹಾಯಕ ಸ್ಥಿತಿ ಕನಸಿನಲ್ಲೂ ಬಂದು ಕೆಲವೊಮ್ಮೆ ಕಾಡುತ್ತಿತ್ತು. ಹೈಸ್ಕೂಲಿನಲ್ಲಿ ರೇಖಾಗಣಿತ ಮಾಡುತ್ತಿದ್ದ ಕನ್ನಡ ಲೆಕ್ಚರರ್ ಕೂಡಾ ತುಂಬಾ ಸಿಟ್ಟಿನವರು. ಪಾಠವನ್ನು ಬಹಳ ಚೆನ್ನಾಗಿ ಮಾಡುತ್ತಿದ್ದರು; ಅವರ ಪಾಠದಿಂದಾಗಿಯೇ ರೇಖಾಗಣಿತ ಸುಲಭವಾಗಿತ್ತು ವಿಜಿಗೆ. ಆದರೆ ಅವರಿಗೆ ಎಷ್ಟು ಸಿಟ್ಟೆಂದರೆ, ಅವರು ತರಗತಿಗೆ ಬಂದೊಡನೆ ಮಕ್ಕಳೆಲ್ಲ ಗಪ್ಚಿಪ್ ಕೂರುತ್ತಿದ್ದರು. ವಿಜಿ ಮತ್ತು ಅವಳ ಕೆಲ ಗೆಳತಿಯರಂತೂ ಜೋರಾಗಿ ಉಸಿರಾಡಲೂ ಹೆದರುತ್ತಿದ್ದರು. ಅವರು ಹುಡುಗರಿಗೆ ಅಂದರೆ ಗಂಡುಮಕ್ಕಳಿಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರಾದರೂ ಹೆಣ್ಣುಮಕ್ಕಳು ತಪ್ಪು ಮಾಡಿದರೆ ಎಲ್ಲರೆದುರು ವ್ಯಂಗ್ಯವಾಗಿ ಏನಾದರೂ ಹೇಳಿ ಕಣ್ಣೀರು ಬರುವ ಹಾಗೆ ಮಾಡಿ ಸುಮ್ಮನಾಗುತ್ತಿದ್ದರು. ಒಂದು ಸಲ ಒಬ್ಬ ಹುಡುಗ ಸರಿಯಾಗಿ ಉತ್ತರಿಸದ ಕಾರಣಕ್ಕೆ ಭಯಂಕರ ಕೋಪಗೊಂಡು ಕೋಲಿನಲ್ಲಿ ಅವರು ಯಾವ ತರ ಹೊಡೆದರೆಂದರೆ ಉಳಿದ ಮಕ್ಕಳೆಲ್ಲ ಹೆದರಿಕೊಂಡರು. ಆ ಹುಡುಗನ ಕೈ ಕಾಲಿನಲ್ಲಿ ರಕ್ತ ಬರಲಾರಂಭಿಸಿತು. ಆ ದಿನ ಇಡೀ ಶಾಲೆಯಲ್ಲಿ ಇದೇ ವಿಷಯ ಒಳಗೊಳಗೇ ಗುಸುಗುಸು ಚರ್ಚೆಯಾಯಿತು. ಜೋರಾಗಿ ಮಾತಾಡುವ ಧೈರ್ಯ ಮಕ್ಕಳಿಗೆ ಇರಲಿಲ್ಲ. ಆ ಹುಡುಗನಿಗೆ ಮನೆಗೆ ನಡೆದುಕೊಂಡು ಹೋಗುವುದೇ ಕಷ್ಟವಾಯಿತು! ಆಮೇಲೆ ಸುಮಾರು ದಿನ ಅವನು ಶಾಲೆಗೆ ಬರಲಿಲ್ಲ. ಈ ಪ್ರಸಂಗ ವಿಜಿಗೆ ತುಂಬಾ ಕೆಡುಕೆನಿಸಿತು. ಶಾಲೆ ಎಂದರೆ ಏನೋ ಭಯ, ಆತಂಕ ಅವಳೊಳಗೆ ಸೇರಿಕೊಂಡಿತು. ಆಟದ ಬಯಲಲ್ಲಿ ಮಾತ್ರ ವಿಜಿ ಯಾವತ್ತೂ ಹಿಂದೆಯೇ ಇದ್ದಳು. ಅವಳು ತುಂಬಾ ಸಪೂರವಾಗಿ ದೇಹದಲ್ಲಿ ಶಕ್ತಿಯೂ ಕಮ್ಮಿ ಇದ್ದುದರಿಂದಲೋ ಏನೋ ಆಟವಾಡಿದರೆ, ಓಡಿದರೆ ಆಯಾಸವಾಗುತ್ತಿತ್ತು. ಥ್ರೋ ಬಾಲ್ ಆಡುವಾಗ ಚೆಂಡು ನೆಟ್ಪಾಸ್ ಆಗುತ್ತಿರಲಿಲ್ಲ. ಇದಂತೂ ತುಂಬಾ ಅವಮಾನವೆನಿಸುತ್ತಿತ್ತು ಅವಳಿಗೆ. ರಿಂಗ್ (ಟೆನ್ನಿಕಾಯ್ಟ್) ಮಾತ್ರ ಚೆನ್ನಾಗಿ ಆಡುತ್ತಿದ್ದಳು. ಸ್ವಲ್ಪ ಸಮಾಧಾನವೆಂದರೆ ಅವಳಂತೆಯೇ ಆಟಗಳಲ್ಲಿ ಹಿಂದೆ ಇದ್ದ ಹುಡುಗಿಯರೂ ಕೆಲವರಿದ್ದರು ಎಂಬುದು! ತುಂಬಾ ಚೆನ್ನಾಗಿ ಆಟವಾಡುವ ಕೆಲವು ದೊಡ್ಡಕಿದ್ದ ಹುಡುಗಿಯರನ್ನು ನೋಡಿ ಅವಳಿಗೆ ಆಶ್ಚರ್ಯ, ಮೆಚ್ಚುಗೆ ಎರಡೂ ಆಗುತ್ತಿತ್ತು. ತಾನು ಎಂದಿಗೂ ಅವರಷ್ಟು ಬಲಿಷ್ಠಳಾಗಲು ಸಾಧ್ಯವಿಲ್ಲ ಅನಿಸುತ್ತಿತ್ತು. ಹಾಗಾಗಿ ಚೆನ್ನಾಗಿ ಓದುವುದರ ಮೂಲಕ ಈ ಕೊರತೆಯನ್ನು ತುಂಬಿಕೊಳ್ಳಬೇಕು ಎಂದುಕೊಂಡು ಅದಕ್ಕಾಗಿ ಪ್ರಯತ್ನಿಸುತ್ತಿದ್ದಳು. ಒಂಬತ್ತನೆ ಕ್ಲಾಸಿನ ನಂತರ ದ್ವಿತೀಯ ಪಿ.ಯು.ಸಿ.ಯವರೆಗೆ ವಿಜಿ ಎದುರಿಸಿದ ಒಂದು ಸಮಸ್ಯೆಯೆಂದರೆ ಅದು ಉಡುಪಿನದ್ದು. ಅವರ ಊರು ಹಳ್ಳಿಯಾಗಿದ್ದಕ್ಕೋ ಅಥವಾ ಅವಳ ಪರಿಚಿತ ಹೆಣ್ಣುಮಕ್ಕಳ್ಯಾರೂ ಉಡುಗೆ ತೊಡುಗೆಯ ಬಗ್ಗೆ ಮಾತಾಡದೇ ಇದ್ದುದಕ್ಕೋ ಆ ಕುರಿತು ಹೆಚ್ಚಿನ ಜ್ಞಾನವೇ ಇರಲಿಲ್ಲ ಅವಳಿಗೆ. ಇದಲ್ಲದೆ ಅವರ ಊರಿನಲ್ಲಿ ಹೆಣ್ಣುಮಕ್ಕಳೇನಾದರೂ ಸ್ವಲ್ಪ ಆಧುನಿಕವಾಗಿ ಫ್ಯಾಷನ್ ಮಾಡಿಕೊಂಡರೆ ಆಡಿಕೊಂಡು ನಗುತ್ತಿದ್ದರು. ಮತ್ತು ಮೈಕೈ ತುಂಬಿಕೊಂಡು ದಪ್ಪ ಉದ್ದಕ್ಕಿರುವ ಹೆಣ್ಣುಮಕ್ಕಳಿಗೂ ವ್ಯಂಗ್ಯ ಮಾಡುತ್ತಿದ್ದರು! ಹಾಗಾಗಿ ತಾನು ತೋರ ಆಗುವುದು ಬೇಡವೆಂದು ವಿಜಿ ಆಗಾಗ ದೇವರಲ್ಲಿ ಪ್ರಾರ್ಥಿಸುತ್ತಿದ್ದಳು! ಆರಂಭದಲ್ಲಿ ಮಿಡಿ ಹಾಕುತ್ತಿದ್ದ ಅವಳು ಆಮೇಲೆ ಸ್ಕರ್ಟು ಹಾಕಿದರೂ ಅದರಿಂದ ಬೇಗನೆ ಉದ್ದಲಂಗಕ್ಕೆ ಜಿಗಿದಳು. ಏಕೆಂದರೆ ಒಂಬತ್ತನೇ ತರಗತಿಯ ಸಮಯಕ್ಕೆ ಆದ ದೈಹಿಕ ಬದಲಾವಣೆ ಅವಳಿಗೆ ಬಹಳಷ್ಟು ತೊಂದರೆ ತಂದುಕೊಟ್ಟಿತ್ತು. ಹಾಗೆ ಅವಳು ದೊಡ್ಡವಳಾದ ನಂತರದ ದಿನಗಳಲ್ಲಿ ಉದ್ದ ಲಂಗ ಹಾಕಿಕೊಳ್ಳುವುದೇ ಅತ್ಯಂತ ಸುರಕ್ಷಿತ ಅನಿಸುತ್ತಿತ್ತು. ಮಸುಕು ಬಣ್ಣದ ಪುಟಾಣಿ ಹೂಗಳಿರುವ, ಕಲೆಯಾದರೆ ಕೂಡಲೇ ಗೊತ್ತಾಗದ ಬಟ್ಟೆಯನ್ನು ಆರಿಸಿಕೊಳ್ಳುತ್ತಿದ್ದಳು! ಜಾಸ್ತಿ ನೆರಿಗೆಗಳನ್ನಿಡುವಂತೆ ಟೈಲರ್ಗೆ ಹೇಳಿ ಉದ್ದಲಂಗ ಮತ್ತು ಸಡಿಲ ಸಡಿಲವಾಗಿರುವ ಬ್ಲೌಸ್ ಹೊಲಿಸುತ್ತಿದ್ದಳು. ಆ ಉಡುಪು ಹೆಚ್ಚು ಆರಾಮದಾಯಕವೆನಿಸುತ್ತಿತ್ತು. ಹತ್ತನೇ ತರಗತಿ ಮುಗಿದ ನಂತರದ ರಜೆಯಲ್ಲಿ ಅಪ್ಪಯ್ಯ, ಅಮ್ಮನೊಂದಿಗೆ ಅವಳು
ಶಾಲೆಯಲ್ಲಿ ಸಿಹಿ-ಕಹಿ Read Post »









