
ಕಾವ್ಯ ಸಂಗಾತಿ
ಪರವಿನ ಬಾನು ಯಲಿಗಾರ
“ಬದುಕಿಬಿಡೋಣ ಹೀಗೆ”


ಉಳಿ ಪೆಟ್ಟು ತಿಂದ ಶಿಲೆ ,
ವಿಗ್ರಹವಾಗಿ ನಿತ್ಯ ಪೂಜೆ ಸ್ವೀಕರಿಸಿ ,
ಸಾವಿರಾರು ವರ್ಷಗಳಿಂದ ಜನರ ಪ್ರಾರ್ಥನೆ , ಕೋರಿಕೆ ,
ಕೇಳಿಸಿಕೊಳ್ಳುತ್ತಿರುವುದು …..
ಸಂಕಷ್ಟಗಳ ಪೆಟ್ಟು ಬಿದ್ದಾಗಲೇ
ಮನಸು ಮಾಗುವುದು ,
ಬಾಗುವುದು , ಸಾವಿರ ಜನರ ಕಷ್ಟಕ್ಕೆ
ಹೆಗಲಾಗುವುದು , ದೇಹಿ ಎಂದವರಿಗೆ
ಕೊಡುಗೈಯಾಗುವುದು…..
ಬೆಂಕಿ ತಾಗಿದರೆ ಬಂಗಾರ ಮತ್ತಷ್ಟು ಹೊಳೆಯುವುದು ,
ಹಣ್ಣು ಮಾಗಿದರೆ ರುಚಿಸುವುದು ,
ಅಕ್ಕಿ ಬೆಂದಾಗಲೇ ಹಸಿವು ತಣಿಸುವುದು ,
ಸಮಯ ಸರಿದಾಗಲೇ ಗಾಯಗಳು ಆರುವುದು …….
ಸವಾಲುಗಳು ಇದ್ದಾಗಲೇ ,
ನಡಿಯುವ ದಾರಿಯಲ್ಲಿ ದಣಿವಾಗದು ,
ಬದುಕಿನ ಪಯಣದಲ್ಲಿ ತಿರುವುಗಳಿದ್ದಷ್ಟು ಚಂದ , ಎತ್ತರದಿಂದ ಧುಮುಕಿದಾಗಲೇ ನದಿ ರಮಣೀಯ ಜಲಪಾತವಾಗುವುದು
ಸರಳ ಜೀವನಕ್ಕಿಂತ ,
ಸಂಘರ್ಷಿಸುವ ಜೀವನ ಬಲು ಸಾರ್ಥಕ ,
ಯಾರೋ ನಿರ್ಮಿಸಿದ
ರಾಜ ಮಾರ್ಗದಲ್ಲಿ ನಡೆಯುವುದಕ್ಕಿಂತ ,
ನಮ್ಮದೇ ಆದ ಕಾಲು ದಾರಿ ಸೂಕ್ತ …..
ಅಡೆ ತಡೆಗಳು ಬರುವುದು , ಎದುರಿಸುವ
ಸಾಮರ್ಥ್ಯ ಇದ್ದವರಿಗೆ ಮಾತ್ರ ,
ಹೋರಾಡುವ ಶಕ್ತಿವಂತರೇ
ಸಾಮ್ರಾಜ್ಯ ಕಟ್ಟುವರು ,
ಚರಿತ್ರೆ ಸೃಷ್ಠಿಸುವರು…..
ಇದ್ದು ಸತ್ತಂತೆ ಬದುಕುವುದಕ್ಕಿಂತ ,
ಸತ್ತು ಇದ್ದಂತೆ ಬದುಕಿದರೆ ,
ಅದುವೇ ಶ್ರೇಷ್ಠ ಬದುಕು ,
ಅರ್ಥಪೂರ್ಣ ಬದುಕು ……
——————
ಪರವಿನ ಬಾನು ಯಲಿಗಾರ
ಒಳ್ಳೆ ಸಾಹಿತ್ಯದ ಕಾವ್ಯ ಮೇಡಂ
ತುಂಬಾ ಚೆನ್ನಾಗಿದೆ ಮೇಡಂ
Super madam.
Kavan ತುಂಬಾ
ಚೆನ್ನಾಗಿದೆ