ಕಾವ್ಯ ಸಂಗಾತಿ
ಸುರೇಶ ತಂಗೋಡ ಅವರ ಕವಿತೆ,
ಸಿಹಿ ಸುಳ್ಳುಗಳು

ಸಾವಿರಾರು ರೂಪಾಯಿ
ಖರ್ಚು ಮಾಡಿ
ಬಾಂಡು ತಂದೆನಂದ್ರ್
ಅವ್ವ ಬೈತಾಳೆಂದು,
ನೂರು ರೂಪಾಯಿಗೆ ತಂದೆನವ್ವ
ಎಂದದ್ದು ನಾ ಹೇಳಿದ ಸುಳ್ಳು..
ಹೆಂಡತಿಗೆ ಒಡವಿ ಕೊಡಿಸಿ
ನೀವು ಹಬ್ಬಕ್ಕ ಏನು ತಗೋದಿಲ್ಲ ಏನ್?
ಎಂದು ಕೇಳಿದಾಗ
ನಂಗ್ಯಾಕ ಬಟ್ಟೆ ಬಹಳ ಅದಾವ
ಅಂದದ್ದು ನಾ ಹೇಳಿದ ಸುಳ್ಳು…
ಮಗ ಬೈಕ್ ಬೇಕು ಎಂದಾಗ
ಬೈಕ್ ಹೋಡಿದ್ರೆ ಬೆನ್ನು ನೋಯಿತ್ತೆ
ಎಂದು,
ಸೈಕಲ್ ಕೊಡಿಸಿದ್ದು
ಮಗನಿಗೆ ನಾ ಹೇಳಿದ ಮೊದಲ ಸುಳ್ಳು..
ಮಗಳಿಗೆ ಮದುವೆ ಮಾಡುವಾಗ
ಇರೋ ಬರೋ ಆಸ್ತಿ-ಹಣ
ಕೂಡಿಸಿ ಒಂದೊಳ್ಳೆ ಸಂಬಂಧ ನೋಡಿ
ಇನ್ನೇನು ಗಂಡನ ಮನೆಗೆ ಕಳುಹಿಸುವಾಗ
ತನ್ನಿಂದ ತಾನೇ ಗೊತ್ತಿಲ್ಲದೇ
ಜಾರಿದ ಕಣ್ಣೀರು ಯಾಕೆ?
ಎಂದ ಮಗಳಿಗೆ
ಕಣ್ಣಾಗ ಧೂಳ್ ಬಿದ್ದೀರಬೇಕೆಂದಿದ್ದು
ನಾ ಹೇಳಿದ ಸಿಹಿ ಸುಳ್ಳು…
ಕ್ಷಮಿಸಿ ನನ್ನ ಸುಳ್ಳುಗಳು
ನನ್ನವರ ಸಂತೋಷಕ್ಕೆ
ಬೇರೆವರ ನೋವಿಗಲ್ಲ.
ಸುರೇಶ ತಂಗೋಡ

Super