ಸ್ನೇಹ ಸಂಗಾತಿ
ʼಸ್ನೇಹದ ಕಡಲಲ್ಲಿʼ
ಸ್ನೇಹದ ವಿಶಿಷ್ಟವಾದ ಸ್ನೇಹದ ಬಗ್ಗೆ ಬರೆಯುತ್ತಾರೆ
ಶಾರದಾ ಜೈರಾಂ ಬಿ.

ಸ್ನೇಹ ಪದ ಚಿಕ್ಕದು ಆದರೆ ಅದರ ವ್ಯಾಪ್ತಿ ಹಿರಿದಾದುದು, ಮನುಷ್ಯ ಮನುಷ್ಯರ ನಡುವೆ ಸೌಹಾರ್ದ ಸಂಬಂಧ ಬೆಳೆಸುವ ಸಂಪರ್ಕ ಸೇತು ಸ್ನೇಹ.
ಒಂದು ಕಿರುನಗೆ ಈ ಸ್ನೇಹ ಮೂಡಲು ಮುನ್ನುಡಿ ಬರೆಯುವುದು ಸ್ನೇಹದ ಬಗೆ ಹಲವು ಆದರೆ ಅದರ ಭಾವ ಒಂದೇ ಹಿಂದೆ, ಇಂದು, ಮುಂದೆ ಎಂದೆಂದಿಗೂ ಬದಲಾಗದು ಬದುಕಿಗೆ ಭರವಸೆ ತುಂಬುವ ಬಂಧವದು.
ತಾಯಿ ಮಡಿಲ ಮಕ್ಕಳ ನೋಡಿ ಯಾರಾದರೇನಂತೆ ನೋಡಿದೊಡನೆ ನಗೆ ಬೀರುವವು ಕಂದಮ್ಮಗಳು.ನಿಷ್ಕಪಟ ನಿರ್ಮಲ ನಗೆ ಮಗುವಿನದು ಅಪರಿಚಿತರು ಕೂಡಾ ಆ ನಗೆಯ ಮೋಡಿಗೆ ಸಿಲುಕಿ ನಗೆ ಬೀರಬೇಕು ಅಂಥಾದ್ದು ಆದರೆ ಬೆಳೆಯುತ್ತಾ ಆ ಮುಗ್ದ ನಗು ಮಾಸದಂತೆ ಕಾಪಾಡಿಕೊಳ್ಳೋಣ ಮಕ್ಕಳಿಂದ ಕಲಿಯುವುದು ಸಾಕಷ್ಟಿದೆ ಮಣ್ಣಿನದ್ದೆ ಆಗಲಿ ಮಾಣಿಕ್ಯವಾಗಲಿ ಆಡುತ್ತಾ ಆ ಕ್ಷಣ ಸಂಭ್ರಮಿಸುವ ಮಕ್ಕಳ ಸ್ವಭಾವ ನಮ್ಮ ಬದುಕಿಗೆ ಪಾಠವಲ್ಲವೇ?
ಬಾಲ್ಯದ ಸ್ನೇಹ ಆಟದಲ್ಲಿ ಗೆಲ್ಲಬೇಕು ಎಂಬ ಪೈಪೋಟಿ ಇದ್ದರು ಸೋತಾಗ ಮೂಡುವ ಕೋಪ ಎನ್ನುವುದು ಕ್ಷಣಿಕವಷ್ಟೇ ಮತ್ತೆ ಒಟ್ಟುಗೂಡಿ ಆಡಿ ನಲಿಯುವ ದಿನಗಳು.
ಬದುಕಿನ ವಿವಿಧ ಘಟ್ಟಗಳಲ್ಲಿ ಹಲವರ ಪರಿಚಯ ಸ್ನೇಹವಾಗಿರುತ್ತದೆ, ಕೆಲವೊಂದು ಕ್ಷಣಿಕ, ಉಳಿದವು ಬಿಡಿಸದ ಬಂಧವಾಗಿ ನಮ್ಮೊಂದಿಗೆ ಬೆಸೆದು ಬಂದಂತವು.
ಸ್ನೇಹ ಎಲ್ಲ ಸಂಬಂಧಗಳಿಗೂ ಮಿಗಿಲಾದ ಭಾವ ಅಲ್ಲಿ ಅಸೂಯೆ ಇರದು,ಪರಸ್ಪರ ಒಳಿತನ್ನೇ ಬಯಸುತ್ತದೆ.ಕಷ್ಟಕ್ಕೆ ಕರಗುವ ಹೆಗಲಾಗುವ, ನೋವಿಗೆ ಸ್ಪಂದಿಸುವ ಸಾಂತ್ವನ ಹೇಳಿ ತಬ್ಬುವ,ಸೋತಾಗ ನಿನ್ನೋಂದಿಗೆ ನಾನಿದ್ದೇನೆ ನಿನ್ನಿಂದ ಸಾಧ್ಯ ಎಂದು ಭರವಸೆ ಮೂಡಿಸುವ, ಗೆಲುವು ಕಂಡು ತನ್ನ ಗೆಲುವೆಂಬಂತೆ ಸಂಭ್ರಮಿಸುವ.ಅದೇನೋ ಯಾರೊಂದಿಗೂ ಹೇಳಲಾಗದ ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ ಸ್ನೇಹದ ಶಕ್ತಿ ಅದು.
ಸ್ನೇಹಕ್ಕೆ ಮಾದರಿಯಾದ ಕೃಷ್ಣ ಕುಚೇಲರ ಬಂಧವೇ ನೋಡಿ ಏನೂ ಕೇಳದೇ ಸ್ನೇಹಿತನ ಸುಖ ನೋಡಿ ಸಂಭ್ರಮಿಸಿದ ಸುಧಾಮ,ಅರಿತು ಎಲ್ಲ ನೀಡಿದ ಕೃಷ್ಣ ಹೇಳದಿದ್ದರೂ ಹೃದಯದ ಮಾತು ಹೃದಯ ಆಲಿಸುತ್ತದೆ ಪರಿಹರಿಸುತ್ತದೆ ಅಲ್ಲವೇ.
ಉತ್ತಮ ಸ್ನೇಹ ಸಣ್ಣದೊಂದು ಮಾತಿನಿಂದ ಪ್ರಾರಂಭವಾಗಿ ಮಾತಿಗೆ ಮಾತು ಪೋಣಿಸಿ ಕೊನೆಯಿರದ ಸರಮಾಲೆಯ ಹಾದಿ ಪದಗಳಿಗೆ ತಡಕಾಡಬೇಕಿಲ್ಲ ಹೊತ್ತು ಸರಿದು ಹೋಗುವುದು ತಿಳಿಯುವುದಿಲ್ಲ.ಆ ಸಾಂಗತ್ಯವೇ ಹಾಗೇ ಸದಾ ಬೆನ್ನಿಗಿರುವ ಆಪ್ತತೆಯ ಸಂಬಂಧ.
ಶುಭಮಂಗಳ ಚಿತ್ರದ ಗೀತೆ
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ..ಎಂಬ ಸಾಲಿನಂತೆ ಸದಾ ನೆನಪಾಗುವ,ನೆನಪಾಗಿ ಕಾಡುವ ಮತ್ತೆ ಮತ್ತೆ ಆ ದಿನಗಳು ಸಾಧ್ಯವಾದರೆ ಬರಲಿ ಎಂಬ ಉತ್ಕಟ ಬಯಕೆ ಮೂಡಿಸುವುದು ಸ್ನೇಹ.
ಕಡಲಿಗೂ ಕೊನೆಯಿದೆಯಂತೆ ಆದರೆ ಸ್ನೇಹ ನಮ್ಮೊಂದಿಗೆ ನಮ್ಮ ನಂತರವೂ ಪ್ರೀತಿಸುವ ಜೀವಗಳಲ್ಲಿ ಸದಾ ಹಸಿರಾದ ಹೊಸತನದ ನವಿರು ಹರುಷದ ತಂಪೆರೆವ ತಂಗಾಳಿಯ ಆಹ್ಲಾದತೆಯ ಭಾವವದು.
ಇಂದಿನ ದಿನಗಳಲ್ಲಿ ಅವಶ್ಯಕತೆಗೆ ಬೆಸೆಯುವ ಬಂಧ ಸ್ನೇಹ ಎಂದು ಕರೆಲಾಗದು, ಸ್ವಾರ್ಥ ಇರದ ಎಷ್ಪೇ ವರುಷಗಳು ಉರುಳಿದರು ಹಳತಾಗದೇ ಹಳಸದೇ ಹೊಚ್ಚ ಹೊಸ ಭಾವಗಳ ಮೂಡಿಸುತ ನಮ್ಮೊಂದಿಗೆ ಸಾಗಿ ಬರುವ ಸಂವೇದನಾಶೀಲ ವ್ಯಕ್ತಿತ್ವವೇ ಸ್ನೇಹ.
ಆಪ್ತ ಗೆಳತಿ ಲತಾಳ ಹುಟ್ಟುಹಬ್ಬಕ್ಕೆ ಹಾರೈಸಿದೆ ಇಂದು ಹೌದು ನನ್ನ ಅವಳ ಸ್ನೇಹ ಇಪ್ಪತ್ತನಾಲ್ಕು ತುಂಬಿ ಇಪ್ಪತ್ತೈದನೇ ವರುಷ ಆಯಿತು ಎಂದು ನೆನೆದು ಎದೆ ತುಂಬಿದ ಅನುಭವ.ತರಬೇತಿಗೆ ಹಾಜರಾಗುವ ದಿನ ಪ್ರಾಂಶುಪಾಲರ ಕೊಠಡಿಯಲ್ಲಿಟ್ಟಿದ್ದ ಅಸ್ಥಿ ಪಂಜರ ನೋಡಿ ಓಡಿ ಬಂದು ನನಗೆ ಡಿಕ್ಕಿ ಹೊಡೆದು ತಬ್ಬಿದಾಗ ಇಬ್ಬರ ಮೊಗದಲ್ಲಿ ನಗೆ ಮಲ್ಲಿಗೆ ಅರಳಿತು, ಅಂದಿನಿಂದ ಎದುರಾದಗಲೆಲ್ಲಾ ಮುಗುಳ್ನಗೆ ಬೀರುತಾ ಸ್ನೇಹಿತೆಯರಾದೇವು ಶಾರೂ ಬೇಗ ಬೇಗ ರೆಡಿ ಆಗು ಎಂದು ಹೇಳುತ್ತಾ ಅವಸರಿಸುತ್ತಿದ್ದಳು ಲತಾ ಈಗಲೂ ನೆನೆದರೆ ನಗುವೇ ಬದಲಾಗಿಲ್ಲ ನಾನು ಈಗಲೂ ನಿಧಾನವೇ ಪ್ರಧಾನ ಎಂಬಂತೆ ಸಿದ್ದಳಾಗುವೆ.ಆಗಂತ ನಾವೇನೂ ದಿನವೂ ಮಾತನಾಡುವುದಿಲ್ಲ ಏನೇ ಹಂಚಿಕೊಳ್ಳಬೇಕೆಂದಾಗ ನೆನಪಾಗುವ ಜೀವ, ತರಬೇತಿ ಸಮಯದಲ್ಲಿ ಮನೆಯವರಿಂದ ದೂರ ಇದ್ದಾಗ ಗೆಳತಿಯಾಗಿ, ಅಕ್ಕನಂತೆ, ಅಮ್ಮನಂತೆ ಅಕ್ಕರೆಯಿಂದ ಸಲಹಿ ತಪ್ಪು ತಿದ್ದಿ,ಸದಾ ಜೊತೆಗಿದ್ದ ಗೆಳೆತನ ನಮ್ಮದು.ಅದು ಮಾಸದೆ ಮನದಲಿ ಸದಾ ಹಸಿರು ಅವಳ ಸ್ನೇಹದ ಒಲವು ಸ್ನೇಹವೇ ಹಾಗೇ ಪ್ರತಿಫಲ ಬಯಸದ ಉಲ್ಲಾಸದ ಉಸಿರು ಈ ಉಸಿರ ಕೊನೆಯವರೆಗೂ.
ಶಾರದಜೈರಾಂ.ಬಿ

Beautiful….