ಹಂಸಪ್ರಿಯ ಅವರ ಕವಿತೆ ʼಸಂದಿಗ್ದʼ

ಸಂದಿಗ್ದ

ವೈಶಾಖ ಪೂರ್ಣಿಮೆ ದಿನ ಸಿದ್ದಾರ್ಥ
ಗೌತಮ  ಜ್ಞಾನೋದಯ ಹೊಂದಿ
ಬುದ್ಧ ನಾದ
ಭೋದಿವೃಕ್ಷ ದಡಿಯಲಿ.

ಭೋದಿವೃಕ್ಷ
ಭರತ ಖಂಡದ ಋಷಿ -ಮುನಿ
ಸಾಧು – ಸಂತರ ಧ್ಯಾನದ ತಾಣ.
ದೈತ್ಯಕಾರ ; ಟೊಂಗೆ – ಟಿಸಿಲು ಮೈಚಾಚಿ
ಬೇರುಗಳು ಪಾತಳಿಕ್ಕಿಳಿದು,
ಬಿರುಬಿಸಿಲು – ಬಿರುಗಾಳಿ,
ಬರಸಿಡಿಲು – ಘನಮಳೆ
ಪ್ರಳಯ – ಪ್ರವಾಹಗಳಿಗೂ
ಜಗ್ಗದೆ – ಬಗ್ಗದೆ
ಭೂಮ್ಯಾಕಾಶ  ಏಕಾದಂತೆ ಬೆಳೆದು ನಿಂತಿದೆ ವೃಕ್ಷ
ಇದಕ್ಕಿನ್ನೊಂದು ಹೆಸರು
 “ಆಲ”.
ಸನಾತನತೆಯ ಸಂಕೇತ “ಭೋದಿವೃಕ್ಷ “
ಇದರಡಿಯಲ್ಲಿಯೇ ಹುಟ್ಟಿದ್ದು
ನಾನಾಧರ್ಮ – ಮತ – ಸಿದ್ಧಾನ್ತ – ತರ್ಕಗಳು.
ವೇದ – ಉಪನಿಷತ್ – ಪುರಾಣಗಳು
ರಾಮಾಯಣ – ಮಹಾಭಾರತ ಮಹಾಕಾವ್ಯಗಳು
ಭೋದಿಸಿದ್ದು
ಸರ್ವಜನೋ ಸುಖಿನೋ ಭವಂತು.
ಬಯಸಿದ್ದು
ಸಕಲ ಚರಾಚರ ಜೀವಿಗಳ ಲೇಸು.

ಇದರಡಿಯಲ್ಲಿಯೇ
ಹುಟ್ಟಿ, ಬೆಳೆದದ್ದು
ಈರ್ಷೆ- ಅಹಂಕಾರ – ಭಯ
ತಾಮಸ – ತಾರತಮ್ಯ
ಉದರ ಪೋಷಣೆಗಾಗಿ  ಶೋಷಣೆ.

ಸಂದಿಗ್ದತೆ
ಹುಟ್ಟಿದ್ದು  ಹೀಗೆ…
ಆಲದ  ಹಣ್ಣು  ತಿಂದು
ಹಕ್ಕಿ – ಪಕ್ಷಿಗಳು
ಉಗುಳಿಯೋ – ಇಕ್ಕೆಯಾಕಿಯೋ
ಮನೆಯ ಮಾಳಿಗೆಯ ಬಿರುಕಿನಲಿ
ಬೀಜ ಬಿದ್ದು
ಹುಟ್ಟಿ  ಬೆಳೆದು ಹೆಮ್ಮರವಾಗಿ ಬೆಳೆಯುವ ತವಕ..

ಕುರುಕ್ಷೇತ್ರ  ಯುದ್ಧದಿ ಅರ್ಜುನ
ಬಂಧು – ಬಾಂಧವರೊಡನೆ,
ಯುದ್ಧ ಮಾಡಬೇಕೋ? ಬೇಡವೋ?
ಎಂಬ ಸಂದಿಗ್ದತೆಯಂತೆ
ಮನೆಯ  ಮಾಳಿಗೆ  ಮೇಲಿನ
ಆಲದ  ಗಿಡವ
ಬೆಳೆಯಲು ಬಿಡುವುದೋ?
ಚಿವುಟಿ  ಹಾಕುವುದೋ?


One thought on “ಹಂಸಪ್ರಿಯ ಅವರ ಕವಿತೆ ʼಸಂದಿಗ್ದʼ

Leave a Reply

Back To Top