ಪುಸ್ತಕ ಸಂಗಾತಿ
ಶಾರದಾ ಜೈರಾಂ ಬಿ.
ಡಾ.ಅಮ್ಮಸಂದ್ರ ಸುರೇಶ್
ʼಅಗ್ನಿಕುಂಡದಿಂದ ಬಂದ ಚೇತನʼ


ಅಗ್ನಿಕುಂಡದಿಂದ ಬಂದ ಚೇತನ
ಸಾಮಾಜಿಕ ಕಾದಂಬರಿ ಕರ್ತೃ ಡಾ.ಅಮ್ಮಸಂದ್ರ ಸುರೇಶ್ ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರದವರು.ಈಗ ಮೈಸೂರಿನಲ್ಲಿ ನೆಲೆಸಿ ವೃತ್ತಿಯಲ್ಲಿ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಪತ್ರಿಕೋದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.ಹಲವಾರು ಜನಪ್ರಿಯ ಸಾಹಿತ್ಯೇತರ ಕೃತಿಗಳನ್ನು ಬರೆದು ಪ್ರಶಸ್ತಿಗಳನ್ನು ಪಡೆದಿದ್ದಾರೆ.ಅವರ ಸೃಜನಶೀಲ ಸಾಹಿತ್ಯ ಕೃಷಿಯ ಮೊದಲ ಕೃತಿ ಅಗ್ನಿ ಕುಂಡದಿಂದ ಬಂದ ಚೇತನ ಕಾದಂಬರಿ.ಅದ್ರಿ ಪ್ರಕಾಶನ ಹೊರತಂದಿದೆ.ಮುನ್ನುಡಿಯ ಮೊದಲ ಸಾಲೇ Each one of Us is an artist of our days ಐರಿಸ್ ಕವಿಯಾದ ಜಾನ್ ಒ ಡೊನೋಯಿ ಅವರ ಸಾಲಿನೊಂದಿಗೆ ಪ್ರಾರಂಭವಾಗುತ್ತದೆ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ.ಸಿ.ನಾಗಣ್ಣ ಅವರು ಬರೆಯುತ್ತಾರೆ ಇದು ಸುರೇಶ್ ಅವರ ಮೊದಲ ಕಾದಂಬರಿ ಆದರೂ ಪಾತ್ರಗಳ ರಚನೆಯಲ್ಲಿ, ಸನ್ನಿವೇಶ ಸೃಷ್ಟಿಯಲ್ಲಿ, ಕಥಾಹಂದರ ನಿರ್ಮಾಣದಲ್ಲಿ ಮತ್ತು ಸಂಭಾಷಣೆಯನ್ನು ನಿಭಾಯಿಸುವಲ್ಲಿ ಕೃತಿಕಾರರು ನಿಸ್ಪ್ರಹತೆಯನ್ನು ಮೆರೆದಿದ್ದಾರೆ.ಎಲ್ಲಕ್ಕಿಂತ ಮುಖ್ಯವಾಗಿ ಆರಂಭದಿಂದ ಕೊನೆಯವರೆಗೂ ಅಂತಃಕರಣದ ತಂತು ಸುದೃಢವಾಗಿ ತನ್ನ ಕಾಯ೯ ನಿವ೯ಹಿಸುವಂತೆ ನೋಡಿಕೊಂಡಿದ್ದಾರೆ.
ಇನ್ನು ಕಾದಂಬರಿಯ ಬಗ್ಗೆ ಹೇಳಬೇಕೆಂದರೆ ಶೀರ್ಷಿಕೆಗೆ ತಕ್ಕಂತೆ ಮುಖಪುಟ ಹಾಗೇಯೇ ಕಥಾವಸ್ತು ಕೂಡಾ ಬದುಕಿನ ಸಂಕಷ್ಟಗಳ ಸರಮಾಲೆಯ ಬೇಗೆಗೆ ಕರಗದೆ ಚೇತನ ಎಂದರೆ ಜೀವಂತಿಕೆ, ಉತ್ಸಾಹಭರಿತವಾಗಿ ಬದುಕಿ ತನ್ನಂತೆ ಸಂಕಷ್ಟಗಳಿಗೆ ಒಳಗಾದವರ ಜೊತೆ ನಿಲ್ಲುವ ಸಮಾಜಮುಖಿ ಬದುಕು ನಡೆಸುವ ಕಥಾನಾಯಕಿ ಪಾತ್ರ ಮನದಾಳದಲ್ಲಿ ನೆಲೆಯೂರುತ್ತದೆ.
ಕಾದಂಬರಿ ಪ್ರಾರಂಭವಾಗುವುದೇ ಕಥಾನಾಯಕಿಯ ತಂದೆ ಹನುಮಂತಯ್ಯನವರ ಪಾತ್ರದಿಂದ ಕೆಳಮಧ್ಯಮ ವಗ೯ಕ್ಕೆ ಸೇರಿದ ನೇಕಾರ ಸಮುದಾಯ,ಅವರ ಪತ್ನಿ ವೆಂಕಟಮ್ಮ ಪತಿಗೆ ತಕ್ಕ ಸತಿ ಈ ದಂಪತಿಗಳ ಹದಿನಾಲ್ಕು ಮಕ್ಕಳಲ್ಲಿ ಬದುಕುಳಿದ ಎಂಟು ಮಂದಿ ಮಕ್ಕಳಲ್ಲಿ ನಾಲ್ಕು ಗಂಡು, ನಾಲ್ಕು ಗಂಡು, ನಮ್ಮ ಕಥಾನಾಯಕಿ ಏಳನೆಯವಳು.ಹೆಣ್ಣು ಹುಟ್ಟಿತೆಂದರೆ ಮದುವೆ ಮಾಡಿದರೆ ತಮ್ಮ ಜವಾಬ್ದಾರಿ ಕಡಿಮೆಯಾದಂತೆ ಎಂದು ಅಂದುಕೊಳ್ಳುವ ಪೋಷಕರಂತೆ ಇಲ್ಲೂ ಕೂಡಾ ಓದುವ ಅಭಿಲಾಷೆ ಹೊಂದಿದ್ದ ಕಥಾನಾಯಕಿ ಚೇತನಾಳಿಗೆ ಅದಕ್ಕೆ ಅವಕಾಶ ಕೊಡದೆ ಎಸ್ಎಸ್ಎಲ್ ಸಿ ಮುಗಿದ ನಂತರ ಮದುವೆ ಮಾಡಲು ತರಾತುರಿಯಲ್ಲಿ ವರನ ಅನ್ವೇಷಣೆ ನಡೆಸಿ,ಚೇತನಾಳ ಅಕ್ಕ ಕಮಲಾಳ ಪತಿ ಉಗ್ರಯ್ಯನ ಚಿಕ್ಕಪ್ಪನ ಮಗ ಜಗದೀಶ ಎಂಟನೇ ತರಗತಿ ಓದಿದ್ದಾನೆ ಆದರೇನಂತೆ ಸ್ವಂತ ಸೀರೆ ನೇಯುವ ಮಗ್ಗ ಇದೆ ಎಂದು ಜೀವನ ನಿರ್ವಹಣೆಗೆ ತೊಡಕಾಗದು ಎಂದು ಚರ್ಚಿಸಿ ಜಗದೀಶ್ ನೊಂದಿಗೆ ಮದುವೆ ಮಾಡುತ್ತಾರೆ ಆದರೆ ಮದುವೆ ಹೆಣ್ಣಾದಾ ಚೇತನಾಳನ್ನು ಒಂದು ಮಾತು ಅಥವಾ ಒಪ್ಪಿಗೆಯಾ ಎಂದು ಅವಳ ಅಭಿಪ್ರಾಯ ಕೇಳದೆ ಮದುವೆ ಮಾಡುತ್ತಾರೆ ತನ್ನ ತಂದೆಯ ಆರ್ಥಿಕ ಪರಿಸ್ಥಿತಿ ಅರಿತ ಚೇತನಾ ಮದುವೆ ಒಪ್ಪಿಗೆ ಇರದಿದ್ದರು ಪ್ರತಿರೋದ ತೋರದೆ ಪರಿಸ್ಥಿತಿಗೆ ತಲೆಬಾಗಿ,ತಾಳಿಗೂ ಕೊರಳೊಡ್ಡಿ ಭವಿಷ್ಯತ್ತಿನ ದಿನಗಳಿಗೆ ಕತ್ತಲೆ ಆವರಿಸುವುದು ಅರಿಯದೆ ತಲೆಬಾಗಿ ಹೊಸ ಜೀವನಕ್ಕೆ ಅಡಿ ಇಡುತ್ತಾಳೆ.
ಅಮ್ಮಸಂದ್ರ ಸುರೇಶ್ ಅವರು ಮೂಲತಃ ಅಮ್ಮಸಂದ್ರ ಊರಿನವರಾದ ಕಾರಣ ಈ ಸತ್ಯ ಘಟನೆ ಆಧಾರಿತ ಕಾದಂಬರಿ ತುಮಕೂರಿನ ಸುತ್ತ ಮುತ್ತಲಿನ ಪ್ರದೇಶಗಳ ವಿವರಣೆಯೊಂದಿಗೆ ಬರೆಯುತ್ತಾರೆ ಓದುತ್ತಿದ್ದಂತೆ ಪಾತ್ರಗಳ ರೂಪು ನಮ್ಮ ಮನದಲ್ಲಿ ಮೂಡುವಂತ ನಿರೂಪಣೆ ಶೈಲಿ
ಚೇತನಾಳ ಸುಂದರ ರೂಪವೇ ಅವಳ ಸುಖಸಂಸಾರ ನೆಮ್ಮದಿ ಕಳೆದುಕೊಳ್ಳಲು ಕಾರಣವಾಗುವುದು ವಿಪರ್ಯಾಸವೇ ಸರಿ.
ಅವಳಿಗಿಂತ ಕಡಿಮೆ ವಿಧ್ಯಾಭ್ಯಾಸ, ಸಾಮಾನ್ಯ ರೂಪಿನ ಜಗದೀಶ ಕೀಳರಿಮೆಯಿಂದ ತನ್ನ ಮನೋವಿಕಾರ ಸ್ವಭಾವದಿಂದ ಸಂದೇಹ ಅಸ್ತ್ರವಾಗಿ ಬಳಸಿಕೊಂಡು ವಿನಾಕಾರಣ ಅವಳನ್ನು ಅನುಮಾನದಿಂದಲೇ ಸದಾ ನೋಡುತ್ತಾ,ತನ್ನ ಕುಡಿತದ ಚಟವನ್ನು ಮುಂದುವರಿಸಿಕೊಂಡು ಕೆಟ್ಟ ಬೈಗುಳ, ಮಾನಸಿಕ ದೈಹಿಕ ಹಲ್ಲೆಗೆ ಮುಂದಾಗುತ್ತಾನೆ.ಇದೆಲ್ಲವನ್ನು ತನ್ನ ಎರಡು ಒಡಲಕಂದಗಳಿಗಾಗಿ ಸಹಿಸಿ ಬಾಳ್ವೆ ನಡೆಸಿದರೂ ಅಷ್ಟಕ್ಕೂ ಸುಮ್ಮನಾಗದೆ ಮನೆಯ ತಂದೆ, ತಾಯಿ, ಅಣ್ಣ,ಊರಿನ ಹಿರಿಯರು ಮತ್ತು ಚೇತನಾಳ ತಂದೆ, ತಾಯಿ, ಅಣ್ಣಂದಿರ ಉಪದೇಶಗಳಿಗೆ ಕಿವಿಗೊಡದೆ ತನ್ನ ಮನೋವಿಕಲತೆಯನ್ನು ಮುಂದುವರೆಸಿ ಚೇತನಾಳ ಮೇಲೆ ಆಸಿಡ್ ಹಾಕುವ ಅಮಾನವೀಯ ಕೃತ್ಯಕ್ಕೂ ಕೈ ಹಾಕುತ್ತಾನೆ.ಆಸಿಡ್ ದಾಳಿಗೆ ತುತ್ತಾದ ಚೇತನಾ ಬದುಕಿದ ಬಗೆ ಹೇಗೆ,ಸುತ್ತಲಿನ ಸಮಾಜವನ್ನು ಎದುರಿಸಿದ ರೀತಿ,ತನ್ನ ಮಕ್ಕಳನ್ನು ಒಂದು ಗೌರವಯುತ ಜೀವನ ನಡೆಸುವಂತೆ ಸಫಲಳಾದದ್ದು.ತನ್ನಂತೆ ಶೋಷಣೆಗೆ ಒಳಗಾದವರ ಬದುಕಿಗೆ ಪ್ರೇರಕ ಶಕ್ತಿ ಆಗಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡಬೇಕು ಪೋಷಕರಾದವರು ಜವಾಬ್ದಾರಿ ಕಳೆದುಕೊಳ್ಳಲು ಆತುರ ಬೀಳದೇ ಅವಳ ಮನದ ಭಾವನೆಗಳಿಗೂ ಬೆಲೆ ಕೊಡಬೇಕೆಂದು ಹೇಳುವ ಮೂಲಕ ಕಾದಂಬರಿಕಾರರಾದ ಅಮ್ಮಸಂದ್ರ ಸುರೇಶ್ ಅವರ ಸಾಮಾಜಿಕ ಕಳಕಳಿಯ ಮನೋಭಾವ, ಹೆಣ್ಣಿನ ಬಗ್ಗೆ ಗೌರವ ಭಾವನೆ , ತುಸು ಪ್ರೀತಿ ಕಡಿಮೆಯಾದರು ಸಹಿಸುವಳು ಆದರೆ ಸಮಾಜದಲ್ಲಿ ಅವಳನ್ನು ನಡೆಸಿಕೊಳ್ಳುವ ರೀತಿ ಗೌರವಯುತ ಆಗಿರಬೇಕು ಎಂಬ ಅವರ ಆದಶ೯ದ ಮನೋಭಾವ ವ್ಯಕ್ತವಾಗುತ್ತದೆ.
ಹಿರಿಯರ ಒತ್ತಡಕ್ಕೆ ಎದುರು ಹೇಳದೇ ಕೊರಳೊಡ್ಡಿ ಭವಿಷ್ಯತ್ತಿನ ದಿನಗಳ ಸಂಕಷ್ಟಗಳ ಸರಮಾಲೆಯ ಬೇಗೆಯಲ್ಲಿ ಬೆಂದು ಬೂದಿಯಾಗದೆ ಕಲ್ಲಿದ್ದಿಲಿನಂತೆ ಹೊಳೆವ ಬದುಕು ಕಟ್ಟಿಕೊಂಡ ಸಾಹಸದ, ಕೆಚ್ಚೆದೆಯ ಹೆಣ್ಣಾಗಿ ಚೇತನ ಕಥಾನಾಯಕಿ ಕಾದಂಬರಿ ಓದಿದ ನಂತರವೂ ಕಾಡುವ, ಪ್ರಶ್ನೆಗಳಿಗೆ ಉತ್ತರ ಹುಡುಕುವಂತೆ ಯೋಚನೆಗೆ ಹಚ್ಚುವ ಆ ಸಂಘರ್ಷದ ಹಾದಿಯನ್ನು ಗೆಲುವಿನ ಹಾದಿಯನ್ನಾಗಿ ಮಾಡಿಕೊಂಡ ಬಗೆ ಅರಿಯಲು ಕಾದಂಬರಿ ಓದಿಯೇ ತಿಳಿಯಬೇಕು.
ಅಸಹಾಯಕ ಹೆಣ್ಣಿಗೆ ಧೈರ್ಯ ತುಂಬುವ ನಿನ್ನೊಂದಿಗೆ ಇದ್ದೇನೆ ಎಂಬ ಭಾವ ಮೂಡಿಸುವ ಕಥಾಹಂದರ ಹಾಗೇಯೇ ಸರಾಗವಾಗಿ ಓದಿಸಿಕೊಂಡು ಹೋಗುವ ಬರಹ ಶೈಲಿ ಮೆಚ್ಚುವಂಥದ್ದು.
ಎಲ್ಲ ಸಮಸ್ಯಗಳಿಗೂ ಸಾವೇ ಪರಿಹಾರವಲ್ಲ ಬದುಕಿ ತೋರಿಸುವುದು ಎಂಬುದನ್ನು ಕಥಾನಾಯಕಿ ಪಾತ್ರದ ಮುಖಾಂತರ ಸಮಾಜಕ್ಕೂ ಉತ್ತಮ ಸಂದೇಶ ನೀಡಿದಂತಿದೆ.
ಓದುವಾಗ ಅಲ್ಲಲ್ಲಿ ಅರಿಯದೇ ಕಣ್ಣಿನಿಂದ ನೀರು ಜಾರಿಸುತ್ತದೆ, ತುಸು ಯೋಚಿಸುವಂತೆ ಮಾಡುತ್ತದೆ ಕಾದಂಬರಿಯ ಬರಹ ಶೈಲಿ ಪಾತ್ರಗಳ ಮೂಲಕ ಬದುಕಿನ ಮೌಲ್ಯಗಳನ್ನು ಅನಾವರಣಗೊಳಿಸಿದ್ದಾರೆ ಇನ್ನಷ್ಟು ಮತ್ತಷ್ಟು ಬರೆಯುತ್ತಿರಿ ಅಭಿನಂದನೆಗಳು ಸರ್.
ಶಾರದ ಜೈರಾಂ.ಬಿ
