
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
*ಅಕ್ಕಮಹಾದೇವಿ ವಚನ*

*ಬಂಜೆ ಬೇನೆಯನರಿವಳೆ?*
*ಮಲತಾಯಿ ಮುದ್ದ ಬಲ್ಲಳೆ?*
*ನೊಂದ ನೋವ ನೋಯದವರೆತ್ತ ಬಲ್ಲರು?*
*ಚೆನ್ನಮಲ್ಲಿಕಾರ್ಜುನನಿರಿದಲಗು ಒಡಲಲ್ಲಿ ಮುರಿದು*
*ಹೊರಳುವೆನ್ನಳಲನು ನೀವೆತ್ತ* *ಬಲ್ಲಿರೇ, ಎಲೆ ತಾಯಿಗಳಿರಾ!*
ಇದು ಅಕ್ಕ ಮಹಾದೇವಿ ಅವರು ತಮ್ಮ ಬದುಕಿನಲ್ಲಿ ಅನುಭವಿಸಿದ ನೋವು ಅದರ ಕಹಿ ಘಟನೆಗಳ ಅನಾವರಣ ವಿಮರ್ಶೆ.
ಅಕ್ಕಮಹಾದೇವಿ ಅವರು ತಮ್ಮ ಜೀವನದಲ್ಲಿ ನಡೆದ ಬದುಕಿನ ಘಟನೆಗಳನ್ನು ‘ಬಂಜೆಯ ಬೇನೆ’ ಹಾಗೂ ‘ಮಲತಾಯಿಯ ಮುದ್ದು’ ಎಂಬ ಎರಡು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸುತ್ತಾರೆ .
*ಬಂಜೆ ಬೇನೆ ಅರಿವಳೇ*
————————–
ಈ ಲೌಕಿಕ ಜೀವನದಲ್ಲಿ ಮದುವೆ ಆದರೂ, ಮಡಿಲಲ್ಲಿ ಮಗು ಕಾಣದ
ಬಂಜೆಯಾದವಳಿಗೆ , ತನ್ನ ಹೆರಿಗೆಯ ನೋವು ಅದರ ಸಂಕಟ. ಹಿಂಸೆ ಹಾಗೂ ತೀವ್ರತೆ ಇವು ಯಾವುವೂ, ಬಂಜೆ ಆದವಳಿಗೆ ಅರಿವಿಗೆ ಬಾರವು .ಹಾಗೂ ಆ ಹೆರಿಗೆ ನೋವಿನ ಸಂಕಟ
ತಿಳಿಯವು.ಹಾಗೇ ನನ್ನ ಒಳಗಿನ ಭಾವ ತುಮುಲ , ಅರಿವಿನ ಭಾವದ ಗಂಡನಾದ ಚೆನ್ನಮಲ್ಲಿಕಾರ್ಜುನನನ್ನು ಅರಿಯದವರಿಗೆ ಹೇಗೆ ಅರಿವಿಗೆ ಬಂದಿತು .ಆ ಸಂಕಟ ,ಆ ನೋವು, ಅದು ಅರಿತವರಿಗೆ ಮಾತ್ರ ಗೊತ್ತು ಎನ್ನುವರು ಅಕ್ಕ.
*ಮಲತಾಯಿ ಮುದ್ದ ಬಲ್ಲಳೇ*
ಈ ಜಗತ್ತಿನಲ್ಲಿ ಅಪಾರವಾದ ಪ್ರೇಮವನ್ನು ಗೆದ್ದಿರುವಳು, ತಾಯಿ ಆಗಿದ್ದಾಳೆ.ತಾಯಿಯ ಪ್ರೀತಿ, ಮಮತೆ ಯನ್ನು ನಾವು ಇತರ ಸಂಬಂಧಿಕರಲ್ಲಿ ಕಾಣಲಾರೆವು .
ಕಂಡರೂ ಕೂಡಾ ಅದು ಡಾಂಭಿಕವಾದುದು .
ಆ ಪ್ರೀತಿಯು ಮಲತಾಯಿ ತೋರುವ ಪ್ರೀತಿಯಂತೆ ಆ ಮಲತಾಯಿಯು, ತನ್ನ ಸವತಿಯ ಮಕ್ಕಳನ್ನು ಮುದ್ದುಮಾಡಲು ತಿಳಿಯಳು.
ತಾನೂ ಒಬ್ಬಳು ತಾಯಿಯಾದರೂ, ತನ್ನಂತೆಯೇ ಇರುವ ಇನ್ನೊಬ್ಬ ತಾಯಿಯ ಕಷ್ಟಗಳನ್ನು ಆಕೆಯ ನೋವನ್ನು ಅರಿಯಳು.ಆ ತಾಯಿಯ ಮಕ್ಕಳ ಸುಖ- ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಹಿಂದೇಟು ಹಾಕುವಳು. ಹಾಗೇಯೇ ನನ್ನ ಜೀವನದ ಬದುಕು ಕೂಡಾ ಮಲತಾಯಿ ಮಕ್ಕಳನ್ನು ನೋಡಿಕೊಳ್ಳುವಂತೆ ಆಗಿದೆ ಎನ್ನುವರು ಅಕ್ಕ.
*ನೊಂದ ನೋವ ನೋಯದವರೆತ್ತ ಬಲ್ಲರು*
.ನಾನು ಅನುಭವಿಸಿದ ನೋವು ಅದು ಅನುಭವಿಸಿದವರಿಗೆ ಮಾತ್ರ ಅರಿವಾಗುವುದು ಎನ್ನುವರು ಅಕ್ಕ . ನೊಂದವರಿಗಲ್ಲದೆ ನೋವು ಅರ್ಥವಾಗುವುದು . ನೋಯದವರಿಗೆ ಅದು ಹೇಗೆ ಅರ್ಥವಾದೀತು . ನೋಯಿಸುವವರಿಗೂ ಕೂಡಾ ಅರ್ಥವಾಗದು ಎನ್ನುವರು ಅಕ್ಕ.
೧೨ ನೇ ಶತಮಾನದಲ್ಲಿ ಇರುವ ಅವತ್ತಿನ ಸಾಮಾಜಿಕ ಕಟ್ಟಳೆಗಳನ್ನು ಮೀರಿ ನಡೆಯುವ ಹಾಗಿರಲಿಲ್ಲ ಅಕ್ಕನವರಿಗೆ .
ಒಲ್ಲದ ಗಂಡ ಕೌಶಿಕನನ್ನು ದಿಟ್ಟವಾಗಿ ವಿರೋಧಿಸಿ ನಡೆದ, ಮೊದಲ ಹೆಣ್ಣು ಅಕ್ಕಮಹಾದೇವಿ ಅವರು ಆಗಿದ್ದಾರೆ.
ಚೆನ್ನಮಲ್ಲಿಕಾರ್ಜುನನನ್ನು ಹುಡುಕಿಕೊಂಡು ಕದಳಿಗೆ
ಹೊರಟು ಹೋಗಲು ಒಪ್ಪಿದ ಅಕ್ಕಳ ಭಾವ ತುಂಬೆಲ್ಲ , ಚೆನ್ನಮಲ್ಲಿಕಾರ್ಜುನನನ್ನು ಕಾಣುವ, ಹುಡುಕುವ, ಮನದ ಒಳಗಿನ ಆಂತರಿಕ ಭಾವದ ಚಟಪಟಿಕೆ, ಅರಿತವರಿಗೆ ಮಾತ್ರ ಅರಿವಿಗೆ ಬರುವುದು .
ಅಕ್ಕನದು ಸಮಾಜಕ್ಕೆ ವ್ಯತಿರಿಕ್ತವಾದ, ಅಸಹಜವಾದ ಪ್ರೇಮ ಹಾಗೂ ದಾಂಪತ್ಯ ಪರಿಕಲ್ಪನೆ. ಈ ಪರಿಕಲ್ಪನೆಯ ಸ್ಪರ್ಶ ಸುಖವನ್ನು ಕಾಣುತ್ತ, ಚೆನ್ನಮಲ್ಲಿಕಾರ್ಜುನನನ್ನು ಹುಡುಕುತ್ತ ಹೋಗುವ ಕದಡಿಯ ಮಾರ್ಗವು , ವೈರಾಗ್ಯದ ಮತ್ತು ಅಧ್ಯಾತ್ಮಿಕ ಅರಿವಿನ ಜ್ಞಾನದ ಮಾರ್ಗ.ಅದನ್ನು ಬನ್ನಿಸಲು ಆಗದು .ಆ ಸ್ಪರ್ಶ ಜ್ಞಾನ ಅನುಭವಿಸಿದವರಿಗೆ ಮಾತ್ರ ಅರಿವಾಗುವುದು ಎನ್ನುವರು ಅಕ್ಕ .
*ಚೆನ್ನಮಲ್ಲಿಕಾರ್ಜುನನಿರಿದಲಗು ಒಡಲಲ್ಲಿ ಮುರಿದು*
ಅಕ್ಕಮಹಾದೇವಿಯವರ ಮನಃಸ್ಥಿತಿಯ ಒಳಹೊರಗಾಗಲೀ ಅದೇ ಸ್ಥಿತಿಯಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಅರಸಿಕೊಂಡು ಹೊರಡುವ ಅಕ್ಕಳ ತೀವ್ರವಾದ ಮಾನಸಿಕ ತುಡಿತವನ್ನಾಗಲೀ ಕದಳಿಯ ಪಯಣದ ದಾರಿಯುದ್ದಕ್ಕೂ,
ಅಕ್ಕ ಚೆನ್ನಮಲ್ಲಿಕಾರ್ಜುನನನ್ನೇ ಜ್ಞಾನಿಸುತ್ತ ಸಾಗುವ ಅಕ್ಕನವರ ಕದಡಿಯ ಮಾರ್ಗ ಮಧ್ಯದಲ್ಲಿ ಸಾಗುವ ಅವಳ ಕಾಯದಲ್ಲಿ
ಒಳಗೆ ನಾಟಿದ ಅಲಗಿನಂತೆ .
ಆ ಅಲುಗಿನ ಒಂದು ಸಣ್ಣ ತುಂಡನ್ನು ದೇಹದಲ್ಲೇ
ಇಟ್ಟು ಕೊಂಡು ಸಾಗುವ ಅಕ್ಕನವರ ,ಮೂಕ ರೋಧನ
ಇತರರಿಗೆ ಎಂದಿಗೂ ಅರಿವಾಗದು.
ಅಂದು ಅನುಭವಿಸಿದ ಕಾಮುಕಪುರುಷರಿಂದ ಒದಗಿದ ಅವಮಾನ, ಹಿಂಸೆ ,ಸಂಕಟ ನೋವು ,ಚಟಪಟಿಕೆ, ಹಸಿವು , ಬಾಯಾರಿಕೆ,ಬಳಲಿಕೆ, ವಿಲಕ್ಷಣ ವಾದ ಪ್ರಶ್ನೆಗಳು ಜೀವಮಾನದುದ್ದಕ್ಕೂ ಆಕೆ ಅನುಭವಿಸಿದ ಅನುಭವಗಳನ್ನಾಗಲೀ ಅಕ್ಕಳು ಚೆನ್ನಮಲ್ಲಿಕಾರ್ಜುನನನ್ನು ಕಾಣದೇ ಹೆಜ್ಜೆ ಹೆಜ್ಜೆಗೂ ಅನುಭವಿಸುವ ಯಾತನೆ, ಸಂಕಟ, ದುಃಖ ಅಸಹಾಯಕತೆಗಳನ್ನಾಗಲೀ ಅವತ್ತೀನ ಕಾಲ ಘಟ್ಟದಲ್ಲಿ , ಯಾರೂ ಕೂಡಾ ಅರ್ಥ ಮಾಡಿಕೊಳ್ಳಲಿಲ್ಲ .
*ಹೊರಳುವೆನ್ನಳಲನು ನೀವೆತ್ತ* *ಬಲ್ಲಿರೇ , ಎಲೆ ತಾಯಿಗಳಿರಾ*
ಅಕ್ಕ ಮಹಾದೇವಿ ಯವರದು ಚೆನ್ನಮಲ್ಲಿಕಾರ್ಜುನನೊಂದಿಗಿನ ಅಲೌಕಿಕ ಪ್ರೇಮ ಹಾಗೂ ಅಲೌಕಿಕ ದಾಂಪತ್ಯ. ಅದರ ಮಹತ್ವ, ಅದರ ಆಳ-ಹರಹುಗಳು ಅಕ್ಕಮಹಾದೇವಿಗಲ್ಲದೇ ಜಗತ್ತಿನಲ್ಲಿರುವ ಯಾವ ಮಹಿಳೆಯರಿಗೆ ಅರಿವಾಗದು. ಬಂಜೆಯಾದವಳು ಹೇಗೆ ಬೇನೆ ಅರಿಯಳೋ ಹಾಗೇ ಮಲತಾಯಿ ಮುದ್ದ ಅರಿಯಳು .
ಈ ಲೋಕದಲ್ಲಿ ಪ್ರತಿಯೊಬ್ಬರಿಗೂ, ಇತಿ ಮಿತಿಗಳು ಇರುವುದು ಸಹಜ. ಚೆನ್ನಮಲ್ಲಿಕಾರ್ಜುನ ಅಕ್ಕಮಹಾದೇವಿಯವರಲ್ಲಿ ಹುಟ್ಟಿಸಿದ ಪ್ರೇಮಕಾಮಗಳು, ಅಕ್ಕಮಹಾದೇವಿಯವರ ದೇಹಕ್ಕೆ ಅಲಗಿನಂತೆ ಇರಿಯುತ್ತಿವೆ. ಅಥವಾ ಆಯುಧದ ತುಣುಕೊಂದು ತುಂಡಾಗಿ ದೇಹದೊಳಗೆ ಉಳಿದುಕೊಂಡು ಸಿಡಿಯುತ್ತ ಹಿಂಸಿಸುವ ಹಾಗೆ ಚೆನ್ನಮಲ್ಲಿಕಾರ್ಜುನ ತನ್ನಲ್ಲಿ ಉದಿಸುವಂತೆ ಮಾಡಿದ ‘ಪ್ರೇಮ’ ಅಲಗಿನ ತುಣುಕಿನಂತೆ ದೇಹದೊಳಗೆ ಉಳಿದುಕೊಂಡು ತನ್ನನ್ನು ಹಿಂಸಿಸುತ್ತಿರುವ ನೋವನ್ನು ಈ ಲೋಕದಲ್ಲಿ ಇರುವ ಮಹಿಳೆಯರು ಹೇಗೆ ತಿಳಿಯಬಲ್ಲರು ಎಂಬುದು ಅಕ್ಕನ ಪ್ರಶ್ನೆ.ಇದು ಅಕ್ಕಮಹಾದೇವಿ ಯವರಿಗೆ ಮಾತ್ರ ಎದುರಾದ ಸಮಸ್ಯೆ.
ಡಾ ಸಾವಿತ್ರಿ ಕಮಲಾಪೂರ
