ಪುಸ್ತಕ ಸಂಗಾತಿ
ಶಬಾನಾ ಅಣ್ಣಿಗೇರಿ(ಸಂಪಾನಾ) ಅವರ ಕೃತಿ
ʼಕಡಲಚಿಪ್ಪುʼ
ಒಂದುಅವಲೋಕನ
ಡಾ.ವೈ ಎಂ ಯಾಕೊಳ್ಳಿ


ಪುಸ್ತಕದ ಹೆಸರು- ಕಡಲ ಚಿಪ್ಪು
ಲೇಖಕರ ಹೆಸರು- ಶಬಾನಾ ಅಣ್ಣಿಗೇರಿ ( ಸಂಪನಾ)
ಪ್ರಕಾಶನ-ಬಾಣಗೆರೆ ಪ್ರಕಾಶನ ಬೆಂಗಳೂರು
ಪ್ರಕಟಣಾ ವರ್ಷ- ೨೦೨೪
ಬೆಲೆ-೧೦೦ರೂ
ಪುಟಗಳು- ೭೭
ಲೇಖಕಿಯ ಮೊಬೈಲ್ ಸಂಖ್ಯೆ-೯೦೦೮೬೮೭೩೬೯
ಕನ್ನಡದಲ್ಲಿ ಈಚೆಗೆ ಚುಟುಕು ಕಾವ್ಯ ಬರೆಯುವವರ ಸಂಖ್ಯೆಕಡಿಮೆಯೇನಿಲ್ಲ. ಇದಕ್ಕೆ ಎರಡು ಕಾರಣಗಳನ್ನು ಹುಡುಕಬಹುದು.
೧ ಚುಟುಕು ನಾಲ್ಕೆ ಸಾಲಿನ ರಚನೆಯಾಗಿರುವದು
೨ ಏನನ್ನಾದರೂ ನಾಲ್ಕು ಸಾಲಿನಲ್ಲಿ ಬರೆದರೂ ಚುಟುಕಾಗುತ್ತದೆ ಎಂಬ ಭ್ರಮೆಯಲ್ಲಿ ಬರಹಗಾರರು ಇರುವದು.
ಮೊದಲಿನೆಯದು ಕಾವ್ಯಕ್ಕೆ ಒಳ್ಳೆಯ ಕಾರಣವಾದರೆ ಎರಡನೆಯದು ಅಂಥ ಒಳ್ಳೆಯ ಬೆಳವಣಿಗೆಯೇನಲ್ಲ. ಆದರೆ ಅಪಾರವಾದ ಕಾವ್ಯ ಸಂಸಾರವೇ ಅವರದಾಗಿರು ವಾಗ ಅವರನ್ನು ತಡೆಯಲು ನಾವು ಯಾರು? ಎಂದು ದಂಡಿ ಮಹಾಶಯನೆ ಹೇಳಿರುವದರಿಂದ ಬರೆದುದನ್ನು ಗಮನಿಸಿತ್ತ ಸಾಗುವುದೇ ನಮಗಿರುವ ಏಕಮಾತ್ರ ದಾರಿ.
ಚುಟುಕು ಸಾಹಿತ್ಯ ಕನ್ನಡದಲ್ಲಿ ಪ್ರಾರಂಭವಾದಾಗ ಅಂದರೆ ದಿನಕರ ದೇಸಾಯಿ, ಎಂ. ಅಕಬರಲಿ ಮೊದಲಾದವರ ಕಾಲಕ್ಕೆ ನಾಲ್ಕು ಸಾಲಿನ ಸಮಪಾದಗಳು ,ಒಂದು ಸಂದೇಶವನ್ನು ಕೊಡುವ ರಚನೆ ಎಂಬ ಲಕ್ಷಣ ಹೊಂದಿತ್ತು.ಆದರೆ ಬರು ಬರುತ್ತ ಚುಟುಕಿನಲ್ಲಿ ಸಾಕಷ್ಟು ಬಗೆಯ ಪ್ರಯೋಗಗಳು ನಡೆದವು.ಅದು ಪದಮಿತಿಯನ್ನು ಸಮಪಾದ ನಿಯಮವನ್ನು ಮರಿದು ‘ಹನಿ’ ಎಂಬ ಕಾವ್ಯಪ್ರಕಾರವಾಗಿ ಡುಂಡೀರಾಜ್ ,ಸಿ.ಪಿ.ಕೆ, ಬಿ .ಆರ್ ಲಕ್ಷ್ಮಣರಾವ್ ಮೊದಲಾದವರಿಂದ ಪ್ರಯೋಗಕ್ಕೊಳ ಗಾಯಿತು.ಅಲ್ಲಿ ನಾಲ್ಕು ಸಾಲಿನ ನಿಯತ ರಚನೆಯಾಗಿ ಉಳಿಯಲಿಲ್ಲ..ಐದಾರು ಸಾಲುಗಳೂ ಹನಿ ಕಾವ್ಯ ಎನಿಸಿದವು .ಕೊನೆಗೊಂದು ಅರ್ಥಪೂರ್ಣ ಪಂಚ್ ಇರಬೇಕು ಎನಿಸಿತು..ನಂತರ ಎರಡು ಸಾಲಿನ ದ್ವಿಪದಿ, ಮೂರು ಸಾಲಿನ, ಹೈಕು, ನಾಲ್ಕು ಸಾಲಿನ ರುಬಾಯಿ, ತನಗ, ಐದು ಸಾಲಿನ ಪಂಚ ಪದಿ, (ಎಂ.ಡಿ. ಚಿತ್ತರಗಿ) ಏಳೆಂಟು ಸಾಲಿನ ತೊಟ್ಟು ( ಬಸವರಾಜ ಸಾದರ)ರಚನೆಗಳೂ ಆಗಿ ಹೀಗೆ ಅನೇಕ ಪದ್ಯ ಪ್ರಯೋಗಗಳು ಈ ಚುಟುಕು ಪದ್ಯ ಪ್ರಕಾರದಲ್ಲಿ ನಡೆದಿವೆ.ಇಂದು ಹನಿ , ಚುಟುಕು ಎರಡೂ ಪ್ರಕಾರದಲ್ಲಿ ಬರೆಯುವವರಿದ್ದಾರೆ.
ಹೀಗೆ ಬರೆಯುವವರ ಸಾಲಿಗೆ ಹೊಸ ಸೇರ್ಪಡೆ ಶಬಾನಾ ಅಣ್ಣಿಗೇರಿ ಯವರು.ಅವರ ಚುಟುಕು ಸಂಕಲನ “ಕಡಲ ಚಿಪ್ಪು” ಈಚೆಗೆ ಪ್ರಕಟವಾಗಿದೆ.ಕನ್ನಡದಲ್ಲಿ ಕವಯಿತ್ರಿಯಂದೂ ವಿಮರ್ಶಕಿ ಯಂದೂ ಹೆಸರಾಗುತ್ತಿರುವ ಯುವ ಲೇಖಕಿ ಶಬಾನಾ ಅಣ್ಣಿಗೇರಿ ಅವರು.ಸಂಪನಾ ಕಾವ್ಯನಾಮದಿಂದ ತಾವು ಬರೆದ ೧೯೪ ರಷ್ಟು ಚುಟುಕುಗಳನ್ನು ಇಲ್ಲಿ ಸಂಕಲನವಾಗಿಸಿ ಪ್ರಕಟಿಸಿದ್ದಾರೆ.ಕಳೆದ ಹದಿನೆಂಟು ವರ್ಷಗಳಿಂದ ಬರೆದ ಚುಟುಕುಗಳನ್ನು ಸಂಕಲನದಲ್ಲಿ ಸೇರಿಸಿದ್ದಾರೆ.ಇವೆಲ್ಲ ನಾಲ್ಕು ನಿಯತ ಸಾಲಿನ ನಿಯತ ನಿಯಮವನ್ನು ಪಾಲಿಸಿರುವದರಿಂದ ಉತ್ತಮ ಚುಟುಕುಗಳಾಗಿ ಹೊರಹೊಮ್ಮಿವೆ.
ಶಬಾನಾ ವೃತ್ತಿಯಿಂದ ಪ್ರಾಥಮಿಕ ಶಾಲಾ ಉಪಾಧ್ಯಾಯ ರು. ಕನ್ನಡ ಸಾಹಿತ್ಯದ ನಿಷ್ಟಾವಂತ ಓದುಗ ಮತ್ತು ಬರಹಗಾರ ರಾಗಿ ಕಳೆದ ಎರಡು ದಶಕಗಳಿಂದ ಬರೆಯುತ್ತ ಬಂದಿದ್ದಾರೆ.ನಾಲ್ಕು ಕವನ ಸಂಕಲನ ತಂದಿದ್ದಾರೆ.ಅವರ ಇನ್ನೊಂದು ವಿಶೇಷತೆ ಈಚೆಗೆ ಅವರು ಬರೆಯುತ್ತಿರುವ ಪುಸ್ತಕ ಪರಿಚಯದ ವಿಮರ್ಶಾ ಲೇಖನಗಳು.ತಾವು ಓದಿದ ಪುಸ್ತಕಗಳನ್ನು ಅತ್ಯತ್ತಮವಾಗಿ ಗ್ರಹಿಸಿ ತಮ್ಮ ಗ್ರಹಿಕೆಯ ವಿವರಗಳನ್ನು ಉತ್ತಮಲೇಖನವಾಗಿಸುವ ನಿಟ್ಡಿನಲ್ಲಿ ಅವರ ವಿಮರ್ಸೆ ಬೆಳೆಯುತ್ತಲಿದೆ.ಅವರು ಬರೆದ “ನಿಕಷ” ಎಂಬ ವಿಮರ್ಶಾ ಸಂಕಲನ ವೂ ಪ್ರಕಟವಾಗಿದೆ.ತಾವು ನೆಲೆಸಿರುವ ಖಾನಾಪೂರ ತಾಲೂಕಿನ ನಿಸರ್ಗ ಸಿರಿಯನ್ನು ಕುರಿತು ಬರೆದ ಪುಸ್ತಕ “ಖಾನಾಪೂರ ಸಿರಿ” ಎಂಬುದು ಸಾಗರದಾಚೆಯೂ ಓದುಗರಿಗೆ ಪರಿಚಿತವಾಗಿದೆ. ಹೀಗೆ ಶಬಾನಾ ಅವರ ಬೆಳವಣಿಗೆ ನಿಜಕ್ಕೂ ಅವರ ಕುರಿತು ಹೆಮ್ಮೆಯನ್ನು ಹೆಚ್ಚಿಸುವಂತಿದೆ.ಹಲವಾರು ಸಾಹಿತ್ಯ ಪ್ರಶಶ್ತಿಗಳನ್ನು ಅವರು ಪಡೆದಿದ್ದಾರೆ.
ಇನ್ನು ಕಡಲ ಚಿಪ್ಪು ಎಂಬ ಸುಂದರ ಹೆಸರುಹೊತ್ತಿರುವ ಈ ಸಂಕಲನ ಕೆಲವಾದರೂ ಮುತ್ತಿನಂತಹ ಚುಟುಕುಗಳನ್ನು ಒಳಗೊಂಡಿರುವದನ್ನು ಓದುಗರು ಗುರುತಿಸಲೇ ಬೇಕಿದೆ.ಇವಕ್ಕೆ ಕವಯಿತ್ರಿ ಯೇ ” ಅಂತರಾಳದಿಂದ ಬಂದ ಮುತ್ತುಗಳು ” ಎಂಬ ಟ್ಯಾಗ್ ಲೈನ್ ನೀಡಿರುವ ದು ಅರ್ಥಪೂರ್ಣವಾಗಿದೆ. ಇಲ್ಲಿನ ಕೆಲವು ಉತ್ತಮ ಚುಟುಕುಗಳನ್ನು ಅವುಗಳಲ್ಲಿರುವ ಕಾವ್ಯ ವಿಶೇಷವನ್ನು ಹಿರಿಯರೂ , ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿರುವ ಶ್ರೀ ಎಲ್. ಎಸ್ .ಶಾಸ್ತ್ರಿಯವರು ಮುನ್ನುಡಿಯಲ್ಲಿ ಗುರುತಿಸಿದ್ದಾರೆ. ಇವು ಎಲ್ಲವೂ ಶಿರ್ಷಿಕೆಗಳನ್ನು ಹೊಂದಿರುವ ಚುಟುಕುಗಳಾಗಿವೆ.
ಕವಿಯ ಹೃದಯವೆ ಕಡಲಾಳ. ಅವನ/ಅವಳ ಎದೆಯಲ್ಲಿ ರುವ ಅನಂತ ಭಾವಗಳು ಮುತ್ತಾಗಿ ಹೊರಬರುತ್ತವೆ ಎನ್ನುವ ಶಬಾನಾ ಅವರು
ಕಡಲಾಳದ ಚಿಪ್ಪು
ಹೊರಬರಲು ತವಕಿಸುತಿತ್ತು
ನನ್ನ ಎದೆಗೆ ಸೋಕಿ
ಮುತ್ತಿಡಲು ತವಕಿಸುತಿತ್ತು
ಎನ್ನುತ್ತಾರೆ.ನಿಜ .ಅದು ಕವಿಯ ಎದೆಗೆ ಮಾತ್ರವಲ್ಲ ಓದುಗನ ಎದೆಗೂ ಮುತ್ತಿಟ್ಟಾಗಲೇ ಸಾರ್ಥಕ ಕಾವ್ಯ ಆಗುತ್ತದೆ.ಅಂಥ ಸಾರ್ಥಕ ಸಾಲುಗಳು ಈ ಸಂಕಲನದಲ್ಲಿ ಸಾಕಷ್ಟಿವೆ.
ಪದಗಳನ್ನು ಅರ್ಥವತ್ತಾಗಿ ಸಮಯೋಚಿತವಾಗಿ ದುಡಿಸಿಕೊಳ್ಳುವದರಲ್ಲಿ ಚುಟುಕು ಕಾವ್ಯದ ಹುರುಳು ಅಡಗಿರುತ್ತದೆ.ಇಲ್ಲಿ ಕವಿಯತ್ರಿ ಭಿಕಾರಿ- ಬಿಕರಿ ಪದಗಳನ್ನು ದುಡಿಸಿಕೊಂಡ ರೀತಿ ನೋಡಿ.
ಬಿಕರಿಗಿಟ್ಟ ಕನಸುಗಳನ್ನು
ನೀ ಕೊಳ್ಳಬಹುದೆಂಬ ಆಸೆಯಿತ್ತು
ನೀ ನೀಡಿದ ನೋವಿನಿಂದ
ಆ ಆಸೆ ಭಿಕಾರಿಯಾಯಿತ್ತು
ಎನ್ನುವ ಚುಟುಕಿನಲ್ಲಿ ಬಿಕರಿ ಮತ್ತಿ ಭಿಕಾರಿ ಪದಗಳ ಸಮರ್ಥ ಜೋಡನೆ,ನಿರಿಕ್ಷಿತ ಫಲ ಕೊಡದ ಪ್ರೇಮದ ನೋವಾಗಿ ಹರಿದಿದೆ. ಕೇವಲ ನಾಲ್ಕು ಸಾಲಿನ ಈ ಕಾವ್ಯ ಮನದಾಳದ ನಿರಾಶೆಯನ್ನು ಕಾವ್ಯ ವಾಗಿಸುವಲ್ಲಿ ಸಾರ್ಥಕ್ಯ ಪಡೆದಿದೆ. ಪ್ರೀತಿ ಇಂಥಿಂಥವರ ನಡುವೆಯೇ ಹುಟ್ಟಬೇಕು ಎಂದೇನಿಲ್ಲ ಎಂಬ ಅರ್ಥವನ್ನು ಸಾರುವ
ಅರಮನೆಯಲ್ಲಿ ಅರಳಿದ
ಗುಲಾಬಿಗೂ
ಹೊರಗಿನ ದುಂಬಿಯ
ಆಕರ್ಷಣೆ ಇತ್ತು
ಎಂಬ ರಚನೆಯಾಗಿಸಿದ್ದಾರೆ.ನಿಜಕ್ಕೂ ಓದಿದೊಡನೆಯೆ ಅನೇಕ ಕಥೆಗಳನ್ನು ನೆನಪಿಸುವ ಶಕ್ತಿ ಇರುವ ಮಹತ್ವಪೂರ್ಣ ಚುಟುಕು ಇದು. ಸಹಜವಾಗಿಯೇ ಪ್ರೀತಿಯ ಮಹತ್ವ ಸಾರುವ, ಪ್ರೀತಿಯ ನಿರಾಸೆ ಮಾಡಿದ ನೋವು ಸಾರು ವ ಹಲವಾರು ಉತ್ತಮ ರಚನೆಗಳು ಈ ಸಂಕಲನದಲ್ಲಿವೆ. ಪ್ರೀತಿ ಪರಸ್ಪರರನ್ನು ಕಾಯುವ ಜ್ಯೋತಿ ಎನ್ನುವುದಕ್ಕೆ
ನಿನ್ನ ಕಣ್ಗಳಲಿ
ತುಂಬಿರಲಿ ಪ್ರೀತಿ
ಅದೆ ನನಗಾಗುತಿರಲಿ
ಬಾಳುವ ರೀತಿ
ಪ್ರತಿ ಮುಂಜಾವು
ಹೊಸ ಹುಟ್ಟಿಗೆ ಮುನ್ನುಡಿ
ನೀನಾಗಿಹೆ
ನನ್ನ ಬಾಳ ಕನ್ನಡಿ
ಎಂಬಂತಹ ಚುಟುಕುಗಳನ್ನು ಉಲ್ಲೇಖಿಸಬಹುದಾ ದರೆ, ಇನ್ನು ಪ್ರೀತಿಯ ನೈರಾಶ್ಯಕ್ಕೆ
ನಮ್ಮಿಬ್ಬರಲ್ಲಿದೆ ಪ್ರೀತಿ ಅಪಾರ
ಅಡ್ಡಿಯಾಗಿದೆ ಜಾತಿಯತೆಯ ಕಂದರ
ನಾವಾಗಿದ್ದೇವೆ ದೂರದೂರ
ಒಂದಾದರೆ ನಮ್ಮ ಬಾಳು ಸುಂದರ
ಹಸಿಯಾಗಿದೆ ಮನ
ನಿನ್ನ ಬರುವಿಕೆಗಾಗಿ
ಹುಸಿ ಕನಸು ನೀಡಿದ
ನಿನ್ನ ನೆನಪಾಗಿ
ಮೊದಲ ಚುಟುಕಿನಲ್ಲಿ ಪ್ರೇಮದ ಒಗ್ಗೂಡುವಿಕೆಗೆ ಇರುವ ಆತಂಕ ಅಡ್ಡಿಗಳ ಪ್ರಸ್ತಾಪ ಇದ್ದರೆ ಎರಡನೆಯ ಚುಟಕಿನಲ್ಲಿ ಅಪಾರ ನಿರಿಕ್ಷೆ ಇದೆ. ಮತ್ತೂ ಕೈಗೂಡದಿರುವ ನಿರಾಶೆಯೂ ಇದೆ.
ಕವಿ ಸಮಾಜ ಜೀವಿ .ಆತನ ಮನದಲ್ಲಿ ಹಲವಾರು ಭಾವಗಳು ಇವೆ . ಅವನು ಎಲ್ಲ ಬಗೆಯ ಅನುಭವಗಳನ್ನು ಕಾವ್ಯವಾಗಿಸಿದಾಗಲೆ ಅವನ/ಅವಳ ಕವಿತೆಗೆ ವ್ಯಾಪ್ತಿ ಪ್ರಾಪ್ತವಾಗುತ್ತದೆ..ಇಲ್ಲಿನ ಚುಟುಕುಗಳ ವ್ಯಾಪ್ತಿ ಕೂಡಾ ದೊಡ್ಡದಾಗಿದೆ.ಸಮಾಜದ ಎಲ್ಲ ನಡೆಗಳನ್ಬೂ ಸೂಕ್ಷ್ಮವಾಗಿ ಗಮನಿಸಿದ ಕವಯಿತ್ರಿ ಅಂಥ ಸಂಗತಿಗಳನ್ನು ಚುಟುಕಾಗಿಸುವಲ್ಲಿ ಯಶ ಕಂಡಿದ್ದಾರೆ. ವಾಹನ ಸವಾರರು ವೇಗದ ಮಿತಿಯಲ್ಲಿ ವಾಹನ ಓಡಿಸದಿದ್ದರೆ ಅವರಿಗಾಗುಉಊವ ದುರ್ಗತಿಯನ್ನು
ವೇಗದ ಸವಾರಿಯಲ್ಲಿರಲಿ
ನಲವತ್ತರ ಮಿತಿ
ಇಲ್ಲದಿರೆ ನಿನಗಾಗುವದು
ನೂರಾ ಎಂಟೇ ಗತಿ
ಎನ್ನುವಲ್ಲಿ ಆರೋಗ್ಯ ಇಲಾಖೆ ಬಳಸುವ ಆಕ್ಷಿಡೆಂಟ್ ವಾಹನ ಮತ್ತು ವೇಗದ ಮಿತಿಗೆ ಇರುವ ಕಿಲೋಮಿಟರಗಳ
ಮಿತಿ ಎರಡನ್ನು ಚೆನ್ನಾಗಿ ಸಮ್ನಿಶ್ರಣ ಮಾಡಿ ಚುಟುಕು ಹೆಣೆದಿದ್ದಾರೆ .
ಈ ಸಂಕಲನದ ಅತ್ಯುತ್ಕೃಷ್ಟ ಚುಟುಕುಗಳಲ್ಲಿ ಒಂದು ಅವ್ವನ ಮಹತ್ವ ಸಾರುವ ಚುಟುಕು.ಅದು ಹೀಗಿದೆ.
ನನ್ನ ಜೀವನದಲ್ಲಿ
ಒಂದೂ ಕಷ್ಟ ಇರುತ್ತಿರಲಿಲ್ಲ
ನನ್ನ ಹಣೆ ರಹ
ಬರೆವ ಅಧಿಕಾರ ನನ್ನ ತಾಯಿಗೆ ಇದ್ದರೆ
ಬಹಳ ಅರ್ಥಪೂರ್ಣವಾಗಿ ಅವ್ವನೆಂಬ ಜೀವದ ಕಾರುಣ್ಯ ಗುಣವನ್ನು ಈ ಚುಟುಕು ವರ್ಣಿಸಿದೆ. ಹಡೆದ ಎಲ್ಲಮಕ್ಕಳ ಹಣೆವರಹ ಬರೆಯುವ ಅವಕಾಶ ಅವರನ್ನು ಹೆತ್ತವಳಿಗಿದ್ದರೆ ಹೇಗಿರುತ್ತಿತ್ತು ಎಂಬ ಊಹೆ ನಿಜಕ್ಕೂ ಸಾರ್ಥಕ ಕವಿತೆಯಾಗಿದೆ.
ಇಲ್ಲಿನ ಎಲ್ಲ ರಚನೆಗಳೂ ಉತ್ತಮ ರಚನೆಗಳೇನಲ್ಲ. ಕೇವಲವಪದಗಳ ಕೆಳಗೆ ಪದ ಜೋಡಿಸಿ ಚುಟುಕು ಎಂದು ಹೆಸರಿಸುವ ಒಂದೆರಡು ರಚನೆಗಳೂ ಇಲ್ಲಿವೆ ಸಂಕಲನದ ಕೊನೆಯಲ್ಲಿ ಐದಾರು ಸಾಲಿನ ರಚನೆಗಳನ್ನು ಸೇರಿಸಿ ಚುಟುಕು ಎನ್ನಲು ಸಾದ್ಯವಾಗದ ಭಾವ ಉಂಟಾಗುತ್ತದೆ.ಕೆಲವು ಪ್ರಸಿದ್ಧ ಹೇಳಿಕೆಗಳನ್ನು ಚುಟುಕಾಗಿಸುವ ಅವಸರವೂ ಇದೆ..ಇಂಥ ಎಲ್ಲ ಮಿತಿಗಳನ್ನು ಮುಂದಿನ ಸಂಕಲನಗಳಲ್ಲಿ ಶಬಾನಾ ಅವರು ದಾಟುತ್ತಾರೆ ಎಂಬ ಭರವಸೆ ಅವರ ಬೆಳವಣಿಗೆಯನ್ನು ನೋಡುತ್ತಲಿರುವ ಎಲ್ಲರಿಗೂ ಖಂಡಿತವಾಗಿ ಇದೆ.
ತೂಕವಿಲ್ಲದ
ನೋಟಿಗಾಗಿ
ತೂಕವಿದ್ದ
ಸಂಬಂಧ ಗಳೇ ಮಾಯ
ಕೊನೆ ಗೊತ್ತಿರದ ದಾರಿಯಲಿ
ಪಯಣಿಸುತ್ತಿದ್ದೆ
ಕೊನೆಯಲ್ಕಿಯಾದರೂ ನೀ
ಸಿಗಬಹಯದೆಂಬ ಆಸೆಯಿಂದ
ನನ್ನ ಸುಖಗಳ
ಒಡೆಯ ನೀನು
ನಿನ್ನ ದುಃಖಗಳ
ಒಡತಿ ನಾನು..
ಮುಂತಾದ ಅರ್ಥಪೂರ್ಣ ರಚನೆಗಳನ್ನು ನೀಡಿರುವ ಕವಯತ್ರಿ ಇನ್ನೂ ಉತ್ತಮ ಕಾವ್ಯ ರಚಿಸಲಿ ಅವು ಸಂಕಲನಗಳಾಗಿ ಹರಿಯುತ್ತಿರಲಿ ಎಂದು ಆಶಿಸುತ್ತೇನೆ.
ವೈ.ಎಂ.ಯಾಕೊಳ್ಳಿ

;