“ಸಮಾಜದಲ್ಲಿ ಆದ-ಆಗುತ್ತಿರುವ ಬದಲಾವಣೆಗಳ ಸಾಧಕ ಬಾಧಕಗಳು.” ವಿಶೇಷ ಲೇಖನ ಡಾ. ಸುಮತಿ ಪಿ.

ಬದಲಾವಣೆ ಸಮಾಜದ ನಿಯಮ.ಜೀವನವೆಂಬುದು ನಿಂತ ನೀರಲ್ಲ,ಸದಾ ಹರಿಯುವ ನೀರಿನಂತೆ ಆಗಾಗ ಬದಲಾವಣೆಗಳಿಗೆ ಹೊಂದಿಕೊಂಡು ಬದುಕಬೇಕಾಗುತ್ತದೆ.
ಬದಲಾಗುವ ಪರಿಸ್ಥಿತಿಗೆ ತಕ್ಕಂತೆ, ಸಮಾಜದಲ್ಲಿ ಬದಲಾವಣೆಗಳು ಆಗಿಯೇ ಆಗುತ್ತವೆ. ಆದರೆ ಒಂದು ವ್ಯವಸ್ಥೆಗೆ ಹೊಂದಿಕೊಂಡಂತಹ ಜೀವನ ,ಹೊಸ ಬದಲಾವಣೆಗೆ ಹೊಂದಿಕೊಂಡು ಹೋಗುವುದು ಮೊದಮೊದಲಿಗೆ ಕಷ್ಟವಾದರೂ, ಮತ್ತೆ ಅಭ್ಯಾಸವಾಗಿ ಬಿಡುತ್ತದೆ. ಹಾಗಾಗಿ ಬದಲಾವಣೆ ಎಂಬುದು ಸದಾ ಕಾಲ ಆಗುತ್ತದೆ,ಆಗುತ್ತಲೇ ಇರಬೇಕು ಕೂಡ .

ಸಮಾಜದಲ್ಲಿ ಬದಲಾವಣೆಗಳು ಉಂಟಾದಾಗ, ಅದರ ಪರ ವಿರುದ್ಧ ಸಲಹೆಗಳು, ಟೀಕೆ ಟಿಪ್ಪಣಿಗಳು ಇದ್ದದ್ದೆ. ಯಾವುದೇ ಒಂದು ನಿಯಮ ಜಾರಿಗೆ ಬರುವಾಗ ಅದರಲ್ಲಿ ಒಳಿತುಗಳು ಮತ್ತು ಕೆಡುಕುಗಳು ಅಥವಾ ಸಾಧಕ ಭಾದಕಗಳು ಸಾಮಾನ್ಯ. ಯಾವುದೇ ಒಂದನ್ನು ನಾವು ಪಡೆಯಬೇಕಾದರೆ ಇನ್ನೊಂದನ್ನು ತ್ಯಜಿಸಬೇಕಾಗಿ ಬರುತ್ತದೆ. ಹಾಗಾಗಿ ಬದಲಾವಣೆಯ ಸಾಧಕಗಳನ್ನು ನಾವು ಅನುಭವಿಸಬೇಕಾದರೆ ಅದರ ಬಾದಕಗಳನ್ನು ಸಹಿಸಿಕೊಳ್ಳಲೇಬೇಕಾಗುತ್ತದೆ .

ಬದಲಾವಣೆ ಎಂದರೆ ನಮ್ಮ ಸಂಸ್ಕೃತಿ, ಸಂಸ್ಕಾರ, ಜೀವನ ಕ್ರಮ,ಬದುಕು ಇವುಗಳಲೆಲ್ಲ ಉಂಟಾಗುವಂತಹ ವೈಪರಿತ್ಯ ಅಥವಾ ವ್ಯತ್ಯಾಸ. ಅದನ್ನು ಧನಾತ್ಮಕವಾಗಿ ಸ್ವೀಕರಿಸಿ, ಮುಂದುವರೆದರೆ ಬದಲಾವಣೆಗಳು ಸಾಧಕವೇ ಆಗಿಬಿಡುತ್ತವೆ. ಆದರೆ ಅದರಿಂದಾಗುವ ಒಂದೆರಡು ಸಮಸ್ಯೆಗಳನ್ನು ಬೆಟ್ಟದಷ್ಟು ಎಂದು ತಿಳಿದರೆ ಬದಲಾವಣೆ ಬಾಧಕವಾಗಿಯೇ ಪರಿಣಮಿಸುತ್ತದೆ.
ಇಂದಿನ ಸಮಾಜದಲ್ಲಿ ಉಂಟಾಗುವ ಬದಲಾವಣೆಯಿಂದ,ನಮ್ಮ ಜೀವನದ ಅನೇಕ ಸ್ತರದಲ್ಲಿ ಸಾಧಕ ಬಾದಕಗಳನ್ನು ನಾವು ಕಾಣಬಹುದು .

*ಜೀವನಕ್ರಮ:* ಸಮಾಜದ ಬದಲಾವಣೆಯಿಂದ ಮನುಷ್ಯನ ಜೀವನ ಕ್ರಮದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಮನುಷ್ಯನ ಜೀವನ ಕ್ರಮ ಮೊದಲಿಗಿಂತಲೂ ಇದೀಗ ಬಹಳಷ್ಟು ಪ್ರಗತಿಯನ್ನು ಸಾಧಿಸಿದೆ. ಬಹಳಷ್ಟು ಕಷ್ಟ ಪಡುತ್ತಿದ್ದ ಜನ ಇದೀಗ ಸರಾಗವಾಗಿ ಯಾವುದೇ ಕಷ್ಟಗಳಿಲ್ಲದೆ, ಬೆಳಗಿನಿಂದ ರಾತ್ರಿಯವರೆಗಿನ ಎಲ್ಲಾ ಚಟುವಟಿಕೆಗಳನ್ನು ಯಾವುದೇ ತ್ರಾಸವಿಲ್ಲದೆ, ಯಂತ್ರಗಳ ಸಹಾಯದಿಂದ ಮಾಡುತ್ತಿದ್ದಾರೆ .ಇದು ಸಾಧಕವಾದರೂ ಸಹ, ಕೆಲವೊಂದು ರೀತಿಯಲ್ಲಿ ಬಾದಕವಾಗಿ ಮನುಷ್ಯನ ದೇಹಕ್ಕೆ ವ್ಯಾಯಾಮ ಸಿಗದೇ, ಅನೇಕ ರೋಗಗಳಿಗೆ ಆಹ್ವಾನ ನೀಡುತ್ತಿದೆ.
ಶೈಕ್ಷಣಿಕವಾಗಿ ಬದಲಾವಣೆ ಕಂಡಿದ್ದರಿಂದ ಇಂದಿನ ಸಮಾಜದಲ್ಲಿ ಹೆಚ್ಚೆಚ್ಚು ಜನರು ಶಿಕ್ಷಣವನ್ನು ಪಡೆದು, ವೈಜ್ಞಾನಿಕ ದೃಷ್ಟಿಕೋನವನ್ನು ಇಟ್ಟುಕೊಂಡು, ತಮ್ಮ ಮೂಲ ಸಂಸ್ಕೃತಿಯನ್ನು ಮರೆತು, ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬೆಳೆದು, ಸಹಕಾರ, ಸಹಾಯ, ಸಾಮರಸ್ಯ ಮುಂತಾದ ಗುಣಗಳು ದ್ವೇಷ , ಅಸೂಯೆ,ಮೋಸ ವಂಚನೆಗಳಾಗಿ ಪರಿವರ್ತಿತವಾಗುತ್ತಿವೆ. ಜನ್ಮ ನೀಡಿದ
ತಂದೆ ತಾಯಿಗಳನ್ನು ಅನಾಥಾಶ್ರಮಕ್ಕೊ ಅಥವಾ ಮನೆಯಿಂದ ಹೊರಕ್ಕೊ ಹಾಕುವಂತಹ ಪರಿಸ್ಥಿತಿ ಬಂದಿದೆ ಎಂದಾದರೆ ಇದು ಬದಲಾವಣೆಯ ಬಾಧಕವಲ್ಲದೆ ಇನ್ನೇನು?

ಸಮಾಜದ ಬದಲಾವಣೆಯಿಂದ ಮನುಷ್ಯನ ದೃಷ್ಟಿಕೋನ ಬದಲಾಗುತ್ತಿದೆ .ಪ್ರತಿಯೊಬ್ಬನು ಹಣ, ಅಂತಸ್ತು, ಅಧಿಕಾರದ ಲಲಾಸೆಯಿಂದ ಅದರ ಹಿಂದೆ ಓಡುತ್ತಿದ್ದಾನೆಯೇ ಹೊರತು ಮಾನವೀಯ ಮೌಲ್ಯಗಳ ಕಡೆಗೆ ಗಮನಹರಿಸುತ್ತಿಲ್ಲ. ತನ್ನ ಆರೋಗ್ಯ, ಕುಟುಂಬದ ಕಡೆಗೆ ಒಲವು ಕಡಿಮೆಯಾಗಿ, ವ್ಯಾವಹಾರಿಕ ದೃಷ್ಟಿಕೋನ ಬೆಳೆಯುವುದರಿಂದ, ಕುಟುಂಬದಲ್ಲಿ ಒಡಕು ಉಂಟಾಗುತ್ತಿದೆ.ಶಾಂತವಾದ ಜೀವನದಲ್ಲಿ ತೊಡಕು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಕುಟುಂಬದಲ್ಲಿ ವಿಘಟನೆಗಳು, ವಿಚ್ಛೇದನಗಳು,ಕೋಪ -ತಾಪಗಳು, ರೋಷ ದ್ವೇಷ,ಮೋಸ, ವಂಚನೆ,ಮತ್ಸರ ಇವುಗಳೆಲ್ಲ ಜಾಸ್ತಿಯಾಗಿ ಸಣ್ಣ ಸಣ್ಣ ಕಾರಣಕ್ಕೂ ಕೊಲೆಗಳು ನಡೆಯುತ್ತಿವೆ. ಮಾನವೀಯತೆ ಮರೆಯಾಗುತ್ತಿದೆ ಕ್ರೂರಿ ಸ್ವಭಾವ ವಿಜೃಂಭಿಸುತ್ತಿದೆ.

ಸಮಾಜದ ಆರ್ಥಿಕ ಚಟುವಟಿಕೆಗಳಲ್ಲಿ ಸಹ ಆದ ಬದಲಾವಣೆಗಳಿಂದ ಬಹಳಷ್ಟು ಅನಾಹುತಗಳು ನಡೆಯುತ್ತಿವೆ.ತಾಂತ್ರಿಕವಾಗಿ ಬಹಳಷ್ಟು ಮುಂದುವರೆದಿರುವ ಸಮಾಜದ ಜನತೆ ಇವತ್ತು ಇಡೀ ಜಗತ್ತನ್ನು ತನ್ನ ಕೈಯಲ್ಲಿ ಆಡಿಸುವಂತಹ ಸಾಮರ್ಥ್ಯವನ್ನು ಪಡೆದಿದೆ.ಆದರೆ ಇದರ ಇನ್ನೊಂದು ಮಗ್ಗುಲಲ್ಲಿ ಅಷ್ಟೇ ಅನಾಹುತಗಳು ನಡೆಯುತ್ತಿವೆ. ಆನ್ಲೈನ್  ಗೇಮ್, ರೀಲ್ಸ್,ಡಿಜಿಟಲ್ ಪೇಮೆಂಟ್ ಮುಂತಾದಂತಹ ಸವಲತ್ತುಗಳಿಂದ ಜೀವನದಲ್ಲಿ ಎಲ್ಲವೂ ಸುಲಭವಾಗಿ ಬಿಟ್ಟಿದೆಯಾದರೂ, ಒಂದೇ ಸೆಕೆಂಡಿನಲ್ಲಿ ವಿಶ್ವದ ಜನರ ನಡುವೆ ವ್ಯಾಪಾರವನ್ನು ಕುದುರಿಸಬಹುದಾದರೂ,ಸಂಪರ್ಕ ಕಲ್ಪಿಸಬಹುದಾದರೂ, ಅಷ್ಟೇ ಆ ವ್ಯವಸ್ಥೆಯಲ್ಲಿ ಭಾದಕಗಳು ಕಾಣಿಸಿಕೊಳ್ಳುತ್ತಿವೆ. ಎಷ್ಟೋ ಸಲ ಜನ ಇಂತಹ ವ್ಯವಹಾರಗಳಲ್ಲಿ ಮೋಸಕ್ಕೆ ಒಳಗಾಗಿ ತಮ್ಮ ಹಣ ಆಸ್ತಿಯನ್ನು ಕಳೆದುಕೊಂಡು, ಕೆಟ್ಟ ಚಟಗಳನ್ನು ಅಂಟಿಸಿಕೊಂಡು,  ಸಮಾಜಘಾತುಕ ಕ್ರಿಯೆಗಳಲ್ಲಿ ತೊಡಗಿಸಿಕೊಂಡು, ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದಲ್ಲದೆ ,ಕೊನೆಗೊಂದು ದಿನ ಇದು ಆತ್ಮಹತ್ಯೆಯಂತಹ ಅವಸಾನದಲ್ಲಿ ಕೊನೆಗೊಳ್ಳುತ್ತಿರುವುದು ಬೇಸರದ ಸಂಗತಿ

ಒಟ್ಟಿನಲ್ಲಿ ಹೇಳುವುದಾದರೆ ಬದಲಾವಣೆಗಳಿಂದ ಸಾಕಷ್ಟು ಸಾಧಕಗಳು ಇದ್ದರೂ,ನಾವಿಂದು ಅದರ ಬಾದಕಗಳನ್ನೇ ಹೆಚ್ಚು ಅನುಭವಿಸುತ್ತಿರುವುದರಿಂದ ಬದಲಾವಣೆಗಳಿಗೆ ಹೊಂದಿಕೊಳ್ಳಲು ಭಯವಾಗುತ್ತಿದ್ದು, ಮನಸ್ಸು ಭೀತಿಗೊಳ್ಳುತ್ತದೆ. ಅಲ್ಲದೆ ಇನ್ನೊಂದು ಮಗ್ಗುಲಲ್ಲಿ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದ ಲಫಂಗ ಜನರು ಮುಗ್ಧ ಜನರನ್ನು ಮೋಸ ವಂಚನೆಗೆ ಬಲಿ ಬೀಳಿಸಿ, ತಾವು ಐಶಾರಾಮಿ ಜೀವನವನ್ನು ನಡೆಸುತ್ತಾ, ಮುಗ್ದ ಜೀವಗಳನ್ನು ಬಲಿ ತೆಗೆದುಕೊಳ್ಳುವುದು ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ಸಂಗತಿ.

ಸಮಾಜದಲ್ಲಿನ ಬದಲಾವಣೆಗಳಿಂದ ಒಳಿತುಗಳಿಗಿಂತ ಕೆಡುಕುಗಳೇ ಜಾಸ್ತಿ ಆಗುತ್ತಿವೆ. ಅದರ ಬಾದಕಗಳಿಗೆ ಬಲಿ ಬೀಳದೆ ,ಎಚ್ಚರಿಕೆಯಿಂದ ಇದ್ದುಕೊಂಡು,  ಅದರ ಪೂರ್ಣ ಪ್ರಯೋಜನವನ್ನು ಪಡೆಯುವುದು ಪ್ರಜ್ಞಾವಂತ ನಾಗರಿಕನ ಲಕ್ಷಣವಾಗಿದೆ. ಹಾಗಾಗಿ ಬದಲಾವಣೆ ಎಂಬುದು ಸದಾ ಆಗುತ್ತಲೇ ಇರುತ್ತದೆ. ಅದು ಸಾಮಾಜಿಕ ಜೀವನದ ಯಾವುದೇ ಸ್ತರದಲ್ಲಿ ಇರಬಹುದು. ಆದುದರಿಂದ ಬದಲಾವಣೆಗೆ ತಕ್ಕಂತೆ ನಾವು ಬದಲಾಗುತ್ತಾ, ಅದರ ಪ್ರಯೋಜನವನ್ನು ಪಡೆಯುತ್ತಾ ಬದುಕುವುದು ನಮ್ಮ ಜಾಣತನ.


Leave a Reply

Back To Top