ಜಯಶ್ರೀ ಎಸ್ ಪಾಟೀಲ ಅವರ ಕವಿತೆ “ಮುಗಿಲಿಗೆ ಏಣಿ”

ಮನದ ತೋಟದಿ ಆಸೆಗಳು ಅರಳಿವೆ
ನಿತ್ಯವೂ ಹೊಸ ಕನಸುಗಳು ಕಂಡಿವೆ
ಅಂತರಂಗದ ಭಾವಗಳು ಮೂಡಿವೆ
ಬಯಸಿದ ಬಯಕೆಗಳು ಚಿಗುರಿವೆ

ನಭದ ನಕ್ಷತ್ರಗಳ ಚುಂಬಿಸುವಾಸೆ
ಚಂದಿರನ ಮೇಲೆ ನಿಲ್ಲುವ ಮಹದಾಸೆ
ಕಾಮನಬಿಲ್ಲಿನ ತುದಿ ಏರುವ ಆಸೆ
ಮುಗಿಲಿಗೆ ಏಣಿಯ ಹಾಕುವ ಆಸೆ

ಪಡೆಯಲಾಗದ ಹೆಬ್ಬಯಕೆಗಳನು
ಕಷ್ಟಪಟ್ಟು ಪಡೆಯಬೇಕೆಂಬ ಹಂಬಲ
ನಿಲುಕಲಾರದ ದೂರದ ಗುರಿಗಳನು
ಬಿಡದೆ ಬೆಂಬೆತ್ತಿ ಜಯಿಸುವ ಛಲ

ಮೆಟ್ಟಿಲು ಏರುವಲ್ಲಿ ಪರಿಶ್ರಮವಿರಲು
ಆತ್ಮ ಶ್ರದ್ಧೆ ಭಕ್ತಿ ಸ್ಫೂರ್ತಿ ತುಂಬಿರಲು
ಕಾಯಕದಲಿ ಸತತ ಪ್ರಯತ್ನವಿರಲು
ಸಂತಸವು ಸಾಧನೆಯ ಗರಿ ಮೂಡಲು

ಇಟ್ಟ ಗುರಿಯತ್ತ ಹೆಜ್ಜೆ ಹಾಕಿದಾಗ
ಬಯಸಿದ ಬಯಕೆಗಳು ಒಲಿದಾಗ
ಮನವು ಖುಷಿಯಲಿ ಕುಣಿವುದಾಗ
ನಲಿದು ಮುಗಿಲಿಗೆ ಹಾರುವುದಾಗ

ಮನುಜನ ಆಸೆಗಳಿಗೆ ಮಿತಿಯಿಲ್ಲ
ಇನ್ನೂ ಬೇಕೆನ್ನುವ ದುರಾಸೆ ಸಲ್ಲ
ಆಶಾಕುದುರೆ ಏರಿ ಬೀಳುವ ಭಯವಿಲ್ಲ
ಮಿತಿಯ ಅರಿವಿದ್ದರೆ ಚೆಂದ ಜಗವೆಲ್ಲ


Leave a Reply

Back To Top