ಸುವಿಧಾ ಹಡಿನಬಾಳ ಅವರ ಕವಿತೆ,ಅಣ್ಣಾ ಬಸವಣ್ಣಾ….

ಅಣ್ಣಾ ಬಸವಣ್ಣಾ ನೀನೆಂದೆ ಅಂದು
ದಯವೇ ಧರ್ಮದ ಮೂಲ ಎಂದು
ಕೋಮು ದ್ವೇಷ , ಕ್ರೌರ್ಯ ಧರ್ಮದ
ಮೂಲಸೆಲೆ ಎಂಬಂತೆ ತೋರುತಿದೆ
ಜಗದ ತುಂಬ ಕಲಿಯುಗದಲಿಂದು!

ಕಾಯಕವೆ ಕೈಲಾಸ ಎಂದವನು ನೀನು
ಸುಖದ ಲೋಲುಪತೆಯಲಿ ಯಂತ್ರ
ಮಾನವವರಂತೆ ಬುದ್ಧಿ ಶೂನ್ಯ ಭಾವ
ವಿಹೀನರಾಗಿ ಕಟ್ಟುತ್ತಿದ್ದೇವೆ ಅಹಮಿಕೆಯ
ಗೋಡೆ ನಮ್ಮ ನಡುವೆಯೇ ನಾವು!

ದೇಹವೇ ದೇಗುಲವೆಂದು ಜಂಗಮದ
ಹಿರಿಮೆಯ ಸಾರಿದವ ನೀನು
ಸ್ಥಾವರ ದೇಗುಲ ಕಟ್ಟಿ ಮೂರ್ತಿ
ನಿಲಿಸಿ ಮಾನವೀಯತೆ ಮರೆತು
ನಡೆವ ಡಾಂಭಿಕರು ಮೃಗಗಳು ನಾವು

ಜಾತಿ ಹೀನನ ಮನೆಯ ಜ್ಯೋತಿ ತಾ
ಹೀನವೇ? ಎಂದು ಜಾತಿ ಗೋಡೆಯ
ಕೆಡಹಿ ನುಡಿದಂತೆ ನಡೆದವ ನೀನು
ಜಾತಿ ಹೆಸರಲಿ ಮರ್ಯಾದಾ ಹತ್ಯೆ
ರಾಜಕೀಯ ಮುನ್ನೆಲೆಗೆ ತಂದವರು ನಾವು!

ಸ್ವಾತಂತ್ರ್ಯಸಮತೆ ಮಮತೆಯ ಪ್ರತಿಮೆ ನೀನು
ಪ್ರಜಾಪ್ರಭುತ್ವದ ಹೆಸರಲಿ ಅಸಮಾನತೆ
ಬೀಜ ಬಿತ್ತಿ ಸ್ವಾತಂತ್ರ್ಯ ಹರಣ ಮಾಡಿ
ದೇಶ ಒಡೆಯುವ ಖಳನಾಯಕರು
ಜನನಾಯಕರು ಹೆಚ್ಚುತಿಹರಿಂದು

ಅಣ್ಣಾ ಬಸವಣ್ಣಾ ನೀ ಹಿಂದೆಂದಿಗಿಂತ
ಪ್ರಸ್ತುತ ಲೋಕಗುರು ಕಾಯಕಯೋಗಿ ನಮಗಿಂದು
ನಿನ್ನ ಅನುಭಾವದ ಬೆಳಕಲ್ಲಿ ನಡೆದು
ಸುತ್ತಲಿನ ಕತ್ತಲೆಯ ಕಳೆವ ಕಳಕಳಿ ನಮದು…


suvidha

Leave a Reply

Back To Top