ಕಾಶ್ಮೀರ ದಲ್ಲಾದ ಉಗ್ರರ ದಾಳಿಗೆ ದೇಶದ ಎಲ್ಲಾ ಜನರು ಅನುಭವಿಸಿದ ಕೋಪ , ಅಸಹನೆ , ವೇದನೆಗಳಂಥ ಭಾವನೆಗಳು ನೋಡಿದ್ರ ನಮ್ಮೊಳಗಿನ ಮನುಷ್ಯ ಸಹಜ ಪ್ರೀತಿಯ ಅರಿವಾಗತದ . ಹಂಗೆ ಉಗ್ರರ ನಡೆಗೆ ಎಲ್ಲರೂ ಖಂಡಿಸುವಾಗ ಕೆಟ್ಟದ್ದನ್ನು ಯಾರು ಒಪ್ಪಿಕೊಳ್ಳಲಾರರು ಎಂಬ ಸತ್ಯದ ಅನಾವರಣವಾಗ್ತತ.

ಕಾಶ್ಮೀರ ಅನ್ನುವ ಒಂದು ರಾಜ್ಯದ ಬಗ್ಗೆ ನಾನು ಸಣ್ಣವಳಿದ್ದಾಗ ಪುಸ್ತಕ ದಾಗ ಓದಿದಷ್ಟೆ ಗೊತ್ತು. ಸ್ವಲ್ಪ ತಿಳುವಳಿಕೆ ಬಂದಮ್ಯಾಲ ಇತಿಹಾಸ ಮತ್ತು ಸಮಾಜ ಜ್ಞಾನ ದ ಪುಸ್ತಕದಾಗ ಕಾಶ್ಮೀರ ಅನ್ನೊ ಪ್ರದೇಶ ಪಾಕಿಸ್ತಾನ ದವರು ಮತ್ತು ಭಾರತದವರು ಇಬ್ಬರು ನಮಗ ಬೇಕು ಅಂತ ಯಾವಾಗ್ಲೂ ಜಗಳ ಆಡತಿರತಾರ ಎಂಬೊದಿಷ್ಟು ತಿಳಿತು.
ಮತ್ತ ಒಂದಿಷ್ಟು ಕಾಶ್ಮೀರ ದ ಬಗ್ಗೆ ತಿಳದಿದ್ದ ಅಂದ್ರ ಸಿನಿಮಾಗಳಿಂದ.ಅದರಲೆಲ್ಲ ನೆರೆ ದೇಶದವ್ರು ನಮ್ಮ ದೇಶದವಿರಿಗಿ ಹ್ಯಾಂಗ ಹ್ಯಾಂಗ್ ಸತಾಯಿಸ್ತಾರ , ನಮ್ಮ ಯೋಧರು ಅವ್ರಿಗಿ ಹ್ಯಾಂಗ್ ಸಾಯಿಸ್ತಾರ ಇತ್ಯಾದಿ ನೋಡಿ ಮನಸ್ಸಿನಾಗ ನಮ್ಮ ಕಾಶ್ಮೀರ ಯಾವತ್ತಿಗೂ ನೆರೆ ದೇಶಕ್ಕ ಕೊಡಬಾರದು ಎಂಬೋ ದೇಶ ಪ್ರೇಮ ಮನಸ್ಸಿನಾಗ ಬಂದಿದ್ದು ಖರೆ.

ಮತ್ತ ಓದೋ ಹವ್ಯಾಸ ಶುರು ಆದಮ್ಯಾಲ ಪತ್ರಿಕೆ ಗಳಲೆಲ್ಲ ಕಾಶ್ಮೀರ ದ ಸುದ್ದಿ ಓದಿ ಅಲ್ಲಿ ಜನ ಹ್ಯಾಂಗ ಬದುಕ್ತಾರಪ್ಪ ಎಂದು ಚಿಂತಿ ಆಗತಿತ್ತು. ಮತ್ತ ಸಹನಾ ವಿಜಯಕುಮಾರ ಅವರ ‘ ಕಶಿರ ‘ ಕಾದಂಬರಿ ಓದಿದ್ದ ಮ್ಯಾಲಂತೂ ಅಲ್ಲಿನ ಮುಸ್ಲಿಮ್ ರ ಮ್ಯಾಲ ಸಿಟ್ಟು ಬಂದಿದ್ದಂತೂ ಸುಳ್ಳಲ್ಲ.

ಇದಿಷ್ಟು ಕಾಶ್ಮೀರ ದ ಬಗ್ಗೆ ನಾನು ಓದಿ ಕೇಳಿ ತಿಳದುಕೊಂಡದ್ದು. ಈಗ ನಾನು ನೋಡುವ ಓದುವ ಕೇಳುವ ವಿಷಯ ವಸ್ತು ಗಳು ಯಾವವು ನಿಜ ಯಾವವು ಸುಳ್ಳು ಎಂದು ಅರಗಿಸಿಕೊಳ್ಳಲಾರದಷ್ಟು ಚರ್ಚೆಗಳು ನನ್ನ ಮನಸ್ಸು ಮಿದುಳು ಸುತ್ತುವರೆದುಕೊಂಡು ಬಿಟ್ಟಾವ.

ಉದಾ , ನಾವು ಸಣ್ಣವರಿದ್ದಾಗ ಗಾಂಧಿಜಿ ನಮ್ಮ ದೇಶಕ್ಕೆ ಸ್ವತಂತ್ರ ತಂದು ಕೊಟ್ಟ ಮಾಹಾನುಭಾವ ಎಂದು ಓದಿದ್ದೆವು , ಆದರಿಸಿ ಪೂಜಿಸಿದ್ದೆವು .ಪಠ್ಯ ಪುಸ್ತಕ ದಲ್ಲೆಲ್ಲ ಅದೇ ಓದ್ತಿದ್ದೆವು. ಈಗ ಗಾಂಧಿಜಿಯನ್ನು ಹಳೆಯುವ ತೆಗಳುವ ಒಂದು ಗುಂಪು . ಅವರಿಂದಲೇ ಸ್ವಾತಂತ್ರ್ಯ ಸಿಗ್ತು ಎಂದು ಓದಿ ನಂಬಿದ್ದ ನಾವೆಲ್ಲ ಈಗ ಅವರಿಂದಲೇ ದೇಶ ವಿಭಜನೆ ಆಯ್ತು ಎಂಬುದು ಕೇಳಬೇಕಾಗ್ಯಾದ. ಗಾಂಧಿಜಿಗೆ ಕೊಂದ ಗೋಡ್ಸೆ ಆಗ ದೇಶ ದ್ರೋಹಿ ಆಗಿದ್ದವನು ಈಗ ಕೆಲವರಿಗೆ ಅವ ದೇಶ ಪ್ರೇಮಿ , ಹೀರೋ.

ದೇಶದ ಜನರೆಲ್ಲ ಶಾಂತಿ ನೆಮ್ಮದಿಯಿಂದ ಇರಲಿ ಅಂತ ಪಾಕಿಸ್ತಾನ , ಬಾಂಗ್ಲಾದೇಶ ಅಂತ ವಿಭಜನೆ ಮಾಡಿದ್ದ ಅಂದಿನವರ ನಡೆ ಈಗ ಆಕ್ರೋಶ ಕ್ಕ ಕಾರಣ ಆಗ್ತಿದೆ.
ಚೀನಾ ಇಂಡಿಯಾ ಭಾಯಿ ಭಾಯಿ ಅಂತ ಚಿಕ್ಕವರಿದ್ದಾಗಿಂದ ಕೇಳಿ ಬೆಳೆದಿದ್ದ ನಾವು ಈಗ ಎರಡು ದೇಶಗಳು ಬದ್ದ ವೈರಿಗಳು ಎಂಬೊದು ಅರಗಿಸಿಕೊಳ್ಳಬೆಕಾಗ್ಯಾದ.

ಇವೆಲ್ಲ ಹೇಳಲಿಕ್ಕ ಕಾರಣ ಅಂದ್ರ ನಿಜ ಅನ್ನೊದು ಯಾವಾಗ್ಲೂ ಬೂದಿ ಮುಚ್ಚಿದ ಕೆಂಡ ಇದ್ದಂಗ . ಅದನ್ನು ನಾವು ಯಾವಾಗ್ಲೂ ನಮ್ಮ ಇಷ್ಟಕ್ಕ ತಕ್ಕಂತೆ ಬದಲಾಯಿಸ್ತ ಬರತಿದ್ದಿವಿ.
ಈಗ ಮುಂದಿನ ಪಿಳಿಗಿಗೆ ನಿಜವಾದ ಇತಿಹಾಸ ಯಾವದು ಎಂಬೋದೆ ಒಂದು ಯಕ್ಷ ಪ್ರಶ್ನೆ ಆಗಿರತದ. ಪುಸ್ತಕದಾಗ ಇದ್ದದ್ದೇ ಖರೆ ಅನ್ಕೋಬೇಕು ಅಂದ್ರ, ಒಂದೊಂದು ಸರ್ಕಾರ ಬಂದಾಗ ಒಂದೊಂದು ನಮೂನ ಪುಸ್ತಕ ರಚಿಸಲತಾರ. ಮಕ್ಕಳು ಯಾವದು ನಿಜ ಯಾವದು ಸುಳ್ಳು ಅಂತ ನಿರ್ದರಿಸಲಕ್ಕ ಆಗದಂಗ ಆಗ್ಯದ. ಅದಕ್ಕ ತಕ್ಕಂಗ ಸಿನಿಮಾಗಳು , ತೆರೆ ಮ್ಯಾಲೆ ನೋಡಿ ನಿಜ ಅಂತ ನಂಬಿ ಬಿಡೋದು. ನಾವೆಲ್ಲ ಸ್ವತಃ ಬುದ್ದಿ ಕಳಕೊಂಡು ನಮಗ ಆಡಿಸೋರ ಕೈಗೊಂಬೆಗಳಾಗತಿದ್ದಿವಿ.

ನಮ್ಮ ದೇಶದಲ್ಲಿ ದೇಶಾಭಿಮಾನ , ಧರ್ಮಾಭಿಮಾನ ನಿಜವಾದ್ದೊ ಅಥವಾ ಅನುಕರಣೆಯೋ ಅರ್ಥ ಆಗವಲ್ದು.ಭಾರತ ದೇಶದಲ್ಲಿ ಇರೋ ಎಲ್ಲಾ ಪ್ರಜೆಗಳಿಗೂ ದೇಶದ ಬಗ್ಗೆ ಅಭಿಮಾನ ಇರ್ಲೆಬೇಕು. ಆದ್ರೆ ನಮಗೆ ಮಾತ್ರ ಅಭಿಮಾನ ಇದೆ ಅವರಿಗಿಲ್ಲ(ಮುಸ್ಲಿಂ) ಎಂಬೋದು ಕೇವಲ ನಿರ್ದರಿತ ವಿಷಯ.ಅದನ್ನು ನಾವು ನಂಬಿ ಮತ್ತೊಬ್ಬರಿಗಿ ನಂಬಿಸಿ ಕ್ಲೇಶ ಸೃಷ್ಟಿಸ್ತಿರೋದು ವಿಪರ್ಯಾಸ.

ಕಾಶ್ಮೀರ ದ ಬಗ್ಗೆ ನನಗೂ ಮೊದಲು ನಾನು ಕೇಳಿದ ಓದಿದ ನೋಡಿದ ವಿಷಯಗಳಿಂದ ಅಲ್ಲಿನ ಜನರು ನಮ್ಮ ದೇಶದ ವಿರೋಧಿಗಳು ಅಂತಲೆ ಅನ್ನಕೊಂಡಿದ್ದೆ.ಆದ್ರೆ ನನ್ನ ನಿರ್ದಾರ ಬದಲಾದದ್ದು ನಾನು ಆ ರಾಜ್ಯಕ್ಕೆ ಪ್ರವಾಸಕ್ಕಾಗಿ ಹೋದಾಗ.
ಕಾಶ್ಮೀರ ಪ್ರವಾಸಕ್ಕ ಹೋಗಬೇಕು ಅಂಬೋದು ನನ್ನ ಬಾಳ ದಿನಗಳ ಆಸೆ ಇತ್ತು.ಮುಖ್ಯ ಕಾರಣ ಅಂದ್ರ ಅಲ್ಲಿ ಬಿಳೊ ಬರ್ಫ ಬಗ್ಗೆ ಕೂತುಹಲ.ಗುಡ್ಡ ಗಿಡಗಳೆಲ್ಲ ಹತ್ತಿ ಹಂಗ ಮೆತ್ತೊಕೊಂಡ ಹಿಮದ ಬಗ್ಗೆ ಬಹಳ ಕೂತುಹಲ. ಅಲ್ಲಿಗಿ ಹೋಗಬೆಕಂದ್ರ ಒಂದು ಆತಂಕನು ಇರತಿತ್ತು.ಅಲ್ಲಿ ಯಾವಾಗ್ಲೂ ದಂಗೆ ಗೋಲಿಬಾರಗಳು ಇರತವ , ನಾವು ಹೋದಾಗ ಏನಾರ ಆದ್ರ ಅಂತ ಆತಂಕ ಒಂದು ಕಡಿ , ಈಗ ಮೊದಲಿನಂಗ ಇಲ್ಲ ಸೆಕ್ಯೂರಿಟಿ ಬಾಳ ಟೈಟ್ ಮಾಡ್ಯಾರ , ಏನು ಚಿಂತಿ ಇಲ್ಲ ಆರಾಮ ಹೋಗಿ ಬರಬಹುದು ಅಂತ ಅಲ್ಲಿಗಿ ಹೋಗಿ ಬಂದವರ ಮಾತು ಕೇಳಿ ಪ್ರವಾಸ ಹೋಗಲಿಕ್ಕ ತಯ್ಯಾರ ಆದ್ವಿ.
ನಾವು ಹೋಗಿದ್ದು ಅಮರನಾಥ ಯಾತ್ರಾ ಸಮಯದಾಗ ಆಗ ಯಾವಾಗಿಗಿಂತ ಹೆಚ್ಚೆ ಸೆಕ್ಯೂರಿಟಿ ಇತ್ತು.

ಕಾಶ್ಮೀರ ದ ಬಗ್ಗೆ ನನಗಿದ್ದ ಎಲ್ಲಾ ಪೂರ್ವಾಪರ ಆಲೋಚನೆಗಳು ಅಲ್ಲಿಗಿ ಹೋದಮ್ಯಾಲೆನೆ ಬದಲಾಗಿದ್ದು. ನಾವು ಅಂದಕೊಂಡಷ್ಟು ಅಲ್ಲಿನ ಜನ ಕೆಟ್ಟವರಲ್ಲ ಅನ್ನೊದು ಅವರೊಂದಿಗೆ ಒಡನಾಡಿದ ಮ್ಯಾಲೆನೆ ಗೊತ್ತಾಗಿದ್ದಿದ್ದು. ಅವರು ನಮ್ಮ ಜೊತೆ ಸೌಜನ್ಯ ದಿಂದ ಪ್ರೀತಿಯಿಂದ ನಡಕೊಂಡದ್ದು ನಾಟಕ ಅಂತ ನನ್ನ ಮನಸ್ಸು ಒಪ್ಪಲ್ಲ.

ಅಲ್ಲಿನ ಜನರಿಗಿ ಇರೊದು ಬದುಕೋ ಚಿಂತಿ ಮಾತ್ರ. ಅವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರದಿದ್ದಾಗ ಅವರು ಅಮಿಷಕ್ಕೆ ಒಳಪಟ್ಟಿರಬಹುದು.ನೆರೆ ರಾಜ್ಯದ ಆಮಿಷಗಳ ಆಸೆಗೆ ಬಲಿಯಾಗಿರಬಹುದು.ಅಥವಾ ತಮ್ಮ ಧರ್ಮದ ಅಭಿಮಾನಕ್ಕೆ ಒಳಗಾಗಿ ಅವರ ಪ್ರಲೋಭನೆಗೆ ಒಳಪಟ್ಟಿರಬಹುದು.ಅವರಲ್ಲಿನ ಮೌಡ್ಯ , ಅನಕ್ಷರತೆ , ದೇವರ ಬಗೆಗಿನ ನಂಬಿಕೆ ಗಳನ್ನು ಬಳಸಿಕೊಂಡು ಅಮಾಯಕರನ್ನು ದಾಳಗಳಾಗಿ ಉಪಯೋಗಿಸಿರಬಹುದು.

ಈಗ ಅಲ್ಲಿನ ಪರಿಸ್ಥಿತಿ ಬದಲಾಗ್ಯಾದ , ಜನ ವಿದ್ಯಾವಂತ ರಾಗ್ತಿದ್ದಾರೆ.ನಾನು ಅಲ್ಲಿ ಬಹಳಷ್ಟು ಜನರೊಂದಿಗಿ ಮಾತನಾಡಿದ್ದಾಗ ಜನರಲ್ಲಿ ಮೊದಲಿನ ಆತಂಕ ದೂರವಾದ ಬಗ್ಗೆ ಅವರಿಗೆ ಸಮಾಧಾನವಿತ್ತು.ಮಾಡಲು ಕೆಲಸ ಕೆಲಸಕ್ಜೆ ತಕ್ಕ ಕೂಲಿ ಇದ್ರೆ ಮನುಷ್ಯ ಕೆಟ್ಟವನಾಗಲಾರ. ಆಸೆ ಒಮ್ಮೊಮ್ಮೆ ಕೆಟ್ಟ ದಾರಿಗೆ ಎಳಿಬಹುದು.ಆದ್ರೆ ಅದರಲ್ಲಿನ ಸಾಧಕ ಭಾದಕಗಳ ಪರಿಣಾಮ ಎದುರಿಸಲೇ ಬೇಕಾಗ್ತದ.

ಕಾಶ್ಮೀರ ದಲ್ಲಿ ಪ್ರವಾಸೋದ್ಯಮ ದ ಚೇತರಿಕೆಯಿಂದ ಅಲ್ಲಿನ ಜನರಿಗೆಲ್ಲ ಉದ್ಯೋಗವಕಾಶಗಳು ಸಿಕ್ಕಿ ಅವರೆಲ್ಲ ಸಂತೋಷವಾಗೆ ಇದ್ದಾರೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತಮ್ಮ ಆಸಕ್ತಿ ಕಳೆದುಕೊಂಡಿದ್ದಾರೆ ಅಂತ ನಮ್ಮ ಟ್ಯಾಕ್ಸಿ ಡೈವರ್ ಹೇಳ್ದ.
ಗರಿಗೆದರಿದ ಪ್ರವಾಸೋದ್ಯಮ , ಕೈತುಂಬ ಕೆಲಸ ಮತ್ತು ಹಣದಿಂದ ಇದು ಸಾದ್ಯ ಆಗಿರಬಹುದು.

ಆದರೆ ಇತ್ತಿಚೆಗೆ ಪ್ರವಾಸಿಗರ ಮೇಲಾದ ಭಯೋತ್ಪಾದನೆ ದಾಳಿಯಿಂದ ಮತ್ತೆ ಕಾಶ್ಮೀರ ದ ಜನರನ್ನು ಅನುಮಾನದಿಂದ ನೊಡುವಂತಾಗ್ಯದ.ಆದ್ರ ಆ ಸಂದರ್ಭದಾಗ ಸಂತ್ರಸ್ತ ಜನರಿಗಿ ಸಹಾಯ ಮಾಡಿದವ್ರೂ ಅದೇ ಧರ್ಮದವ್ರು ಅನ್ನದು ಮರಿಬಾರದು.ನಾನು ಕಾಶ್ಮೀರ ದಾಗ ನೋಡಿದ ಮುಸ್ಲಿಂ ರೆಲ್ಲ ಈ ರೀತಿ ಸಹಾಯ ಮನೊಭಾವನೆ ಉಳ್ಳವ್ರೆ ಆಗಿದ್ರು. ಪ್ರತಿಯೊಂದು ಇಂತಹ ದುರ್ಘಟನೆ ಗಳಲ್ಲಿ ಇಡೀ ಒಂದು ಸಮುದಾಯವನ್ನೆ ನಿಂದಿಸುವ ನಮ್ಮ ಮನಸ್ಥಿತಿ ನಿಲ್ಲಬೇಕು.ನಮ್ಮದೇ ಐದು ಬೆರಳು ಒಂದೇ ಸಮ ಇರಲಾರವೂ , ನಮ್ಮ ಧರ್ಮದ ಲ್ಲಿ ಎಲ್ಲರೂ ಒಳ್ಳೆಯವರೇ ಇರಲಾರರು. ಕೆಲವೆ ಕೆಲವು ಸಮಾಜ ಘಾತುಕರಿಂದ ಇಡೀ ಒಂದು ಸಮುದಾಯವನ್ನು ನಿಂದಿಸುವದು ವಿಪರ್ಯಾಸ.

ಹಾಗಂತ ಸಮಾಜಘಾತ ಕೆಲಸಗಳನ್ನು ನಾನು ಬೆಂಬಲಿಸುವದಿಲ್ಲ.ಅವರು ಯಾರೆ ಇರಲಿ , ಯಾವದೇ ಧರ್ಮದವರಾಗಿರಲಿ ಸಮಜಘಾತುಕರು , ದೇಶದ್ರೋಹಿಗಳು ಶಿಕ್ಷಾರ್ಹರು.

ಇಂತಹ ಘಟನೆಗಳು ಘಟಿಸಿದಾಗಲೆಲ್ಲ ನಾವು ನಾವೇ ಕಚ್ಚಾಡಿ ಸಂದರ್ಭ ಮತ್ತಷ್ಟು ಹದಗೆಡಸುತ್ತೆವೆ . ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ , ಒಬ್ಬರ ತಪ್ಪನ್ನು ನೇರವಾಗಿ ಟೀಕಿಸುವ ಸ್ವಾತಂತ್ರ್ಯ ಇದೆ. ಹೊರತಾಗಿ ಒಂದಿಡೀ ಸಮುದಾಯವನ್ನು ಟೀಕಿಸಿ ಅವಹೇಳನ ಮಾಡುವದು ತಪ್ಪು. ನಿಜಾಂಶ ಪೂರ್ಣವಾಗಿ ನಮಗ್ಯಾರಿಗೂ ಗೊತ್ತಿರಲ್ಲ. ಅಲ್ಲಿ ಇಲ್ಲಿ ಓದಿ , ಕೇಳಿ ನೋಡಿ ನಮ್ಮದಿಷ್ಟು ಸೇರಿಸಿ ನಮಗೆ ತಿಳಿದದ್ದನ್ನೆ ಸಮರ್ಥಿಸಿಕೊಂಡು ಒಂದು ರೀತಿ ಹಠವಾದಿಯಾಗ್ತಿದ್ದೆವೆ.

ಈಗ ಸದ್ಯ ಪ್ರವಾಸಕ್ಕೆ ಹೋಗಿ ಖುಷಿಯಾಗಿ ಕಾಲಕಾಳೆಯಬೇಕಾಗಿದ್ದವ್ರು ಆತಂಕವಾದಿಗಳ ಬಂದೂಕಿಗೆ ಗುರಿಯಾದದ್ದು ತೀವ್ರ ದುಃಖದ ವಿಷಯ. ಈ ದುಃಖ ದಿಂದ ನಾವೆಲ್ಲರೂ ವಿಷಾದಗೊಂಡಿದ್ದೆವೆ.ಇಂತಹ ಸಮಾಜಘಾತುಕರಿಗೆ ಯಾವ ಧರ್ಮದಲ್ಲೂ ಕ್ಷಮೆ ಇರಲಾರದು.

ಯಾವಾಗ್ಲೂ ಒಂದೇ ಸಿದ್ದಾಂತಕ್ಕ ಜೋತು ಬೀಳೊದು ಕ್ಲೀಷೆ ಆಗತದ.ಸಿದ್ದಾಂತಗಳು ಕೇವಲ ಮನುಷ್ಯ ನ ಅಭಿಪ್ರಾಯಗಳು. ಅವೇ ಸತ್ಯ ಆಗಿರಲು ಸಾದ್ಯ ಇಲ್ಲ.ನಮ್ಮ ಸುತ್ತಲಿನ ಸಮಾಜದಿಂದ ನಮಗಾದ ಅನುಭವದಿಂದ ನಾವು ಒಳ್ಳೆದು ಕೆಟ್ಟದು ಎಂಬ ನಿರ್ಣಯಕ್ಕ ಬರತೀವಿ. ಪ್ರತಿಯೊಬ್ಬರ ಅನುಭವಗಳು ಬೇರೆ ಬೇರೆ.ಆ ಸಂದರ್ಬಗಳು ಬೇರೆ ಬೇರೆ ಆಗಿರತಾವ.ಅದಕ್ಕ ಯಾವದೇ ಒಂದು ಸಂದಭವನ್ನು ಒಂದು ವ್ಯಕ್ತಿಯನ್ನು ಗುರಿಯಾಗಿಸಿ ಇಡೀ ಒಂದು ಸಮಾಜ ಒಂದು ಸಮುದಾಯದ ಬಗ್ಗೆ ಪೂರ್ವಾಗ್ರಹ
ಪೀಡಿತರಾಗಿ ಪದೇ ಪದೇ ಟೀಕಿಸುವದು ಸಮಂಜಸವಾಗಲಾರದು.

ನಮ್ಮ ಸೋಷಿಯಲ್ ಮೀಡಿಯಾದಾಗ ಒಬ್ಬರ ವಿಚಾರ ಟೀಕಿಸಿ ಮಾತಾಡುವಾಗ ಭಾಷೆಯ ಮ್ಯಾಲ ಹಿಡಿತನೆ ಇಲ್ದಂಗ ವರ್ತಿಸತಿದ್ದಾರ.ತಮ್ಮ ಅನಿಸಿಕೆ ಸರಿ ಇದ್ರ ಅದನ್ನು ಮತ್ತೊಬ್ಬರಿಗಿ ತಿಳಿಸೋ ಭರದಲ್ಲಿ ನಿಂದಿಸೋದು , ಅಶ್ಲೀಲ ಅನ್ನಿಸೊ ಪದ ಬಳಸೋದು ಮತ್ತ ಎದುರಿನವರಿಗಿ ದೇಶ ದ್ರೋಹಿ ಪಟ್ಟ ಕೊಡೊವರೆಗೆ ಟೀಕಿಸತಾರ.ಇದರಿಂದ ಪ್ರಯೋಜನ ಏನು. ..ಏನು ಇಲ್ಲ. ಮತ್ತ ಹೆಚ್ಚುವ ಮನಸ್ಥಾಪ.ಕೋಮುದ್ವೇಶ.
ಹಾಗಂತ ತಪ್ಪು ನೋಡಕೊಂಡು ವಿರೋಧಿಸದೆ ಸುಮ್ನ ಇರಬೇಕು ಅಂತಲ್ಲ.ಖಂಡಿಸಲೇಬೇಕು.ಆದ್ರ ಅತೀರೇಕದಿಂದ ವರ್ತಿಸಿ ನಮ್ಮ ಮಾತಿನಿಂದ ಎಲ್ಲಾ ಸರಿ ಆಗತದ ಎಂಬ ಆಲೋಚನೆ ಒಳ್ಳೆದಲ್ಲ.

ಎಷ್ಟೋ ಶತಮಾನಗಳಿಂದ ನಮ್ಮ ದೇಶ ಬಹುತ್ದದ ಸಂಸ್ಕತಿ ಹೊಂದಿರುವಂಥದ್ದು.
ಸಾಮರಸ್ಯ ದಿಂದ ಬದುಕಿದ್ರೆ ಮಾತ್ರ ನೆಮ್ಮದಿ. ತಪ್ಪನ್ನು ಖಂಡಿಸುವಂತೆ , ಒಳ್ಳೆತನಕ್ಕೂ ಪ್ರಶಂಸೆ ಮಾಡಲೇಬೇಕು.


2 thoughts on “

  1. ಸ್ವಂತ ಖುಷಿಯ ಸ್ವಾರ್ಥ ದೊಳಗೆ ಸಿಲುಕಿರುವ ಸಾಹಿತ್ಯದ ಪ್ರಸ್ತುತತೆಯಲ್ಲಿ ಸ್ವದೇಶದ ಪ್ರಸ್ತುತತೆಯ ಚಿಂತನಾ ಲೇಖನ ಸಮಾಧಾನ ಕೊಟ್ಟಿತು.
    ಬೇಂದ್ರೆ ಕಾವ್ಯ ಬಂದಿಖಾನೆಯಲ್ಲೂ ಬ್ರಿಟೀಷರನ್ನು ಕಂಗೆಡಿಸಿ ಆತಂಕವನ್ನು ಹುಟ್ಟಿಸಿತ್ತು.
    ಹೀಗೇ…ಸಾಹಿತ್ಯ ಕೇವಲ ಕಲಿಕೆ, ಖ್ಯಾತಿಗಾಗದೇ ಪರಾರ್ಥವಾದಾಗ
    ಸಾರ್ಥಕವಾಗುತ್ತದೆ. ಜ್ಯೋತಿಯವರೆ ನಿಮ್ಮ ಅಪರೂಪದ ಪ್ರಸ್ತುತ ಚಿಂತನಾರ್ಹ ಲೇಖನಕಾಗಿ ಅಭಿನಂದನೆಗಳು…

Leave a Reply

Back To Top