ಬಸವ ಜಯಂತಿ
ಡಾ.ಶಶಿಕಾಂತ ಪಟ್ಟಣ ರಾಮದುರ್ಗ
ʼಕ್ರಾಂತಿಪುರುಷ ಬಸವಣ್ಣʼಅವರಬಗ್ಗೆ ವಿಶೇಷ ಲೇಖನ


ಕ್ರಾಂತಿಪುರುಷ ಬಸವಣ್ಣ
—————————————-
ಕಾಲ – ಹನ್ನೆರಡನೆಯ ಶತಮಾನ
ಜನನ -1131 -1167
ಜನ್ಮ ಸ್ಥಳ – ಇಂದಿನ ವಿಜಯಪುರ ಜಿಲ್ಲೆಯ ಬಾಗೇವಾಡಿ ( ಬಸವನ ಬಾಗೇವಾಡಿ )
ತಂದೆ ತಾಯಿ – ತಂದೆ ಮಾದರಸ -ತಾಯಿ ಮಾದಲಾಂಬಿಕೆ
ಅಕ್ಕ – ಅಕ್ಕ ನಾಗಮ್ಮ ಅಣ್ಣ ದೇವರಾಜ
ಒಟ್ಟು ವಚನಗಳು 1414
ವಚನಾಂಕಿತ – ಕೂಡಲ ಸಂಗಮದೇವ
ಜನನ ಮತ್ತು ಬಾಲ್ಯ
————————————————–
ಹನ್ನೆರಡನೆಯ ಶತಮಾನದ ಕ್ರಾಂತಿಕಾರಿ ಸಮಾಜವಾದಿ ಚಿಂತಕ ಬಸವಣ್ಣ . ಇವರು ಹುಟ್ಟಿದ್ದು ಬಸವನ ಬಾಗೇವಾಡಿಯ ಬ್ರಾಹ್ಮಣರ ಅಗ್ರಹಾರದ ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ 1131 ರಲ್ಲಿ ಜನ್ಮ ತಾಳಿದರು . ಬಸವಣ್ಣನವರ ಹುಟ್ಟಿನ ಬಗ್ಗೆ ಅನೇಕ ಚರ್ಚೆಗಳಿವೆ 1105 ಎಂತಲೂ 1134 ಎಂತಲೂ ಸಂಶೋಧಕರು ದಾಖಲಿಸುತ್ತಾರೆ. 1105 ರಲ್ಲಿ ಬಸವಣ್ಣನವರು ಹುಟ್ಟಿದ್ದರೆ , ಕಲ್ಯಾಣಕ್ಕೆ 1155 ರಲ್ಲಿ ಬರುವವರೆಗೆ ಎಲ್ಲಿ ಇದ್ದರು ಎಂದು ಹುಡುಕಬೇಕು, 1131 ರಿಂದ 1134 ಬಸವಣ್ಣನವರು ಹುಟ್ಟಿರಬಹುದು ಎಂದು ಅನೇಕ ಸಂಶೋಧಕರು ಅಭಿಮತಕ್ಕೆ ಬರುತ್ತಾರೆ. ಅದೇ ರೀತಿ ಬಸವಣ್ಣನವರ ಐಕ್ಯವನ್ನು ಕೆಲವರು 1196 ಎಂದು ನಮೂದಿಸುತ್ತಾರೆ ,ಅದು ಸಂಪೂರ್ಣ ಸುಳ್ಳು ,1167 ರಲ್ಲಿ ಕಲ್ಯಾಣ ಕ್ರಾಂತಿ ಜರಗುತ್ತದೆ, ಚಾಲುಕ್ಯರ ಜಟ್ಟಿಗಳಿಂದ ಬಿಜ್ಜಳನ ಕೊಲೆಯಾದದ್ದು 1167 ರಲ್ಲಿ, 1183 ರಲ್ಲಿ ಇಡೀ ಕಳಚೂರಿ ಆಡಳಿತ ಮತ್ತು ಸಾಮ್ರಾಜ್ಯ ಅಂತ್ಯಗೊಳ್ಳುತ್ತದೆ. 1167 ರಿಂದ 1196 ರವರೆಗೆ ಬಸವಣ್ಣನವರು ಎಲ್ಲಿ ಇದ್ದರು ಎಂಬುದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ. ಬಸವಣ್ಣನವರ ಚರಿತ್ರೆಯನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೆ ಇತಿಹಾಸ , ಮತ್ತು ಚಾರಿತ್ರಿಕ ಹಿನ್ನಲೆಯಲ್ಲಿ ನೋಡುವುದು ಅತ್ಯಂತ ಮಹತ್ವದ್ದು. ಹೀಗಾಗಿ ಬಸವಣ್ಣನವರು ಬದುಕಿದ ಕಾಲವನ್ನು 1131 ರಿಂದ 1167 ಎಂದು ತೀರ್ಮಾನಿಸಬಹುದು.
ತನ್ನ ಎಂಟನೆಯ ವಯಸ್ಸಿನಲ್ಲಿ ತನಗೆ ನೀಡಬಹುದಾದ ಉಪನಯನವನ್ನು ತನಗಿಂತ ಹಿರಿಯ ಅಕ್ಕ ನಾಗಮ್ಮನಿಗೆ ಏಕೆ ಕೊಡಲು ಸಾಧ್ಯವಿಲ್ಲ ಎಂದು ಉಪನಯನವನ್ನು ತಿರಸ್ಕರಿಸಿ ಮನೆ ಬಿಟ್ಟು ಕೂಡಲ ಸಂಗಮಕ್ಕೆ ಬಂದು ಅಧ್ಯಯನ ಮಾಡಿ ಮುಂದೆ ಸಹೋದರ ಮಾವ ಬಲದೇವನ ಸಹಾಯದಿಂದ ಬಿಜ್ಜಳನ ಮಂಗಳವೆಡೆಗೆ ಕರಣಿಕ ವೃತ್ತಿ ಕೈಕೊಂಡು ಮುಂದೆ ಬಿಜ್ಜಳನ ಸಲಹೆಯಂತೆ ಕಲ್ಯಾಣಕ್ಕೆ ಬಂದು ಅರ್ಥ ಸಚಿವ ಹುದ್ದೆ ಅಲಂಕರಿಸಿ ಮಾವನ ಮಗಳಾದ ಗಂಗಾಂಬಿಕೆಯನ್ನು ಮದುವೆಯಾದನು .ಅಕ್ಕ ನಾಗಮ್ಮ ಅಳಿಯ ಚೆನ್ನಬಸವಣ್ಣನವರ ಮತ್ತು ಎಲ್ಲ ತಳ ಸಮುದಾಯದ ಬೇರೆ ಬೇರೆ ಕಾಯಕ ಮಾಡುವ ಶರಣರನ್ನು ಒಗ್ಗೂಡಿಸಿ ಅನುಭವ ಮಂಟಪವನ್ನು ಕಟ್ಟಿದರು . ಬಿಜ್ಜಳನ ಸಾಕು ತಂಗಿ( ಮಂತ್ರಿ ಸಿದ್ಧರಸ ಪದ್ಮಗಂಧಿಯ ಮಗಳು ) ನೀಲಲೋಚನೆಯನ್ನು ಬಿಜ್ಜಳನ ಆಗ್ರಹಕ್ಕೆ ಮಣಿದು ಮದುವೆಯಾದರು.
ಸಾರ್ವಕಾಲಿಕ ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣ ಜಗವು ಕಂಡ ಶ್ರೇಷ್ಠ ಸಮಾಜವಾದಿ .ಸಂಸತ್ತಿನ ಪಿತಾಮಹ ಎಂದು ಪಾಶ್ಚಿಮಾತ್ಯರು ಬಸವಣ್ಣನವರ ಕಾರ್ಯ ಸಾಧನೆ ವರ್ಣಿಸುತ್ತಾರೆ. ಬಸವಣ್ಣವರನ್ನು ಕಿಂಗ್ ಮಾರ್ಟಿನ್ ಲೂಥೆರ್ ಎಂದು ಸರ್ ಆರ್ಥರ್ ಮೈಲ್ಸ್ ಹೇಳುತ್ತಾರೆ (The Land of Lingam page 111 – 1933 )
ಧಾರ್ಮಿಕ ಕ್ರಾಂತಿ
———————————-
ಬಾಲ್ಯದಲ್ಲಿಯೇ ಬಸವಣ್ಣ ಕಂದಾಚಾರಣೆ ಮೂಡ ಸಂಪ್ರದಾಯಗಳ ವಿರುದ್ಧ ಬಂಡೆದ್ದನು.
ಧರ್ಮವೆನ್ನುವುದು ಪುರೋಹಿತರ ಸುಲಿಗೆಯ ಮಾರ್ಗವಾಗಿತ್ತು. ಹಲವು ದೇವರೆನ್ನುವ ಹುಸಿ ಕಲ್ಪನೆ ನೀಡಿ ಬಡವರ ಮುಗ್ಧರ ಶೋಷಣೆಗೆ ಮುಂದಾದ ಅರ್ಚಕರ ಪೂಜಾರಿಗಳ ದಳ್ಳಾಳಿತನಕ್ಕೆ ಕೊನೆ ಹೇಳಿದರು ಬಸವಣ್ಣ.
ಬಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು. ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವರಲಿದ್ದಾನೆಯೇ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧ ಎಂದು ಅಂದಿನ ಕೊಳಕು ವ್ಯವಸ್ಥೆಯ ವಿರುದ್ಧ ದಂಗೆ ಎದ್ದು ಪ್ರತಿ ಸಮಾಜವನ್ನು ಕಟ್ಟಿದರು ಬಸವಣ್ಣ.
ಇಷ್ಟ ಲಿಂಗದ ಜನಕ ಬಸವಣ್ಣ
——————————————–
ಆದಿಯಲ್ಲಿ ನೀನೇ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗ.
ಆದಿಯಲ್ಲಿ ನೀನೇ ಲಿಂಗವಾದ ಕಾರಣ ನಿನ್ನಿಂದ ಹುಟ್ಟಿತ್ತು ಜಂಗಮ
ಆದಿಯಲ್ಲಿ ನೀನೇ ಜಂಗಮವಾದ ಕಾರಣ ನಿನ್ನಿಂದ ಹುಟ್ಟಿತ್ತು ಪಾದೋದಕ ಪ್ರಸಾದ
ಆದಿಯಲ್ಲಿ ನೀನೇ ಪ್ರಸಾದಿಯಾದ ಕಾರಣ
ಗುಹೇಶ್ವರ ಲಿಂಗದಲ್ಲಿ ಚಂದಯ್ಯಂಗೆ ಲಿಂಗದ ನಿಜವ ತಿಳುಹಿಸ ಸಂಗನಬಸವಣ್ಣ..
ಇಲ್ಲಿ ಅಲ್ಲಮರು ಇಷ್ಟಲಿಂಗದ ಜನಕ ಬಸವಣ್ಣ ಎಂದು ಹೇಳುವುದಲ್ಲದೆ ,ಗುರು ಲಿಂಗ ಜಂಗಮ ಪ್ರಸಾದಿ ಮಹತ್ವವನ್ನು ಹೇಳಿದವ ಸಂಗನಬಸವಣ್ಣಾ ಎಂದಿದ್ದಾರೆ.
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು*
——————————————————–
ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು,
ಹುಸಿ ಹುಸಿ ಈ ನುಡಿಯ ಕೇಳಲಾಗದು.
ಆದಿ ಲಿಂಗ, ಅನಾದಿ ಬಸವಣ್ಣನು!
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ
ಕೂಡಲಚೆನ್ನಸಂಗಮದೇವಾ,
ಚೆನ್ನ ಬಸವಣ್ಣ
ಲಿಂಗಾಯತ ಧರ್ಮ ಎನ್ನುವದಕ್ಕಿಂತಲೂ ಅದೊಂದು ಅರಿವಿನ ಆಂದೋಲನ. ಪ್ರಜ್ಞೆಯ ಪ್ರಸಾರ. ಅನುಭಾವದ ಅನುಸಂಧಾನ.
ವಾಸ್ತವಿಕ ನೆಲೆಗಟ್ಟಿನಲ್ಲಿ ವಚನಕಾರರು ಬದುಕಿನ ಎಲ್ಲಾ ಆಯಾಮಗಳನ್ನು ನೋಡಿ ಚಿಂತಿಸಿ ಪರಿಹಾರ ಕಂಡವರು.
ಧರ್ಮದ ಭೀತಿ ಮತ್ತು ಭಯ ತೆಗೆದು ಹಾಕಿ ದಯವೇ ಧರ್ಮದ ಮೂಲ ಎಂದು ಸಾರಿದ ಅಪ್ಪ ಬಸವಣ್ಣ ನೆಲ ಮೂಲ ಸಂಸ್ಕೃತಿ ನಾಯಕ.ದಲಿತ ಅಸ್ಪ್ರಶ್ಯ ದಮನಿತ ಶೋಷಿತ ಕಾರ್ಮಿಕ ಮಹಿಳೆಯರ ಪರವಾಗಿ ಧ್ವನಿ ಎತ್ತಿದ ಬಂಡುಕೋರ. ಬಸವ ಪೂರ್ವ ಯುಗದ ಸಂಪ್ರದಾಯಿಗಳ ಅತೀವ ಆಚರಣೆ ಮತ್ತು ಧಾರ್ಮಿಕ ಕಟ್ಟು ಪಾಡು ಜನರಲ್ಲಿ ಜಿಗುಪ್ಸೆ ಉಂಟು ಮಾಡಿತ್ತು.
ಬಸವಣ್ಣ ಇಷ್ಟ ಲಿಂಗದ ಜನಕ ಎನ್ನುವ ಚೆನ್ನ ಬಸವಣ್ಣ. ಲಿಂಗಾಯತ ಎಂಬ ಹೊಸ ಸಮ ಸಮಾಜ ಕಟ್ಟುವ ಚಳುವಳಿಯ ದಿಟ್ಟ ನಾಯಕ ಬಸವಣ್ಣ. ಬಸವಣ್ಣ ಕೈಕೊಂಡ ಸಮಗ್ರ ಅಭಿವೃದ್ಧಿ ಕ್ರಾಂತಿಗಳ ಒಟ್ಟು ದಾಖಲಾತಿ ಮೇಲಿನ ವಚನದಲ್ಲಿ ಅಡಕವಾಗಿದೆ.
ಲಿಂಗಾಯತ ಧರ್ಮವು ಹಿಂದುಯೇತರ ಅವೈದಿಕ ಸ್ವತಂತ್ರ ಧರ್ಮ,ಬುದ್ಧನಿಂದ ಆಗದ ಅಂತರ ಜಾತಿ ವಿವಾಹ ಬಸವಣ್ಣನವರು ನೆರವೇರಿಸಿದರು .ಶತಮಾನದ ಜಾತಿ ಶೋಷಣೆ ದಬ್ಬಾಳಿಕೆ ಮೋಸ ಸುಲಿಗೆಗೆ ಬಸವಣ್ಣನವರು ಕೊನೆ ಹಾಡಿದರು . ದೇವರು ಮತ್ತು ಭಕ್ತನ ಮಧ್ಯೆ ಇರುವ ಪುರೋಹಿತರ ದಲ್ಲಾಳಿತನಕ್ಕೆ ಏಟು ಬಿತ್ತು. ಬಸವ ಪೂರ್ವದಲ್ಲಿ ದಲಿತರು ಮಹಿಳೆಯರು ಪಂಚಮರು ಪ್ರಾಣಿಗಳಿಗಿಂತ ಕೀಳಾಗಿ ಬದುಕಿದ್ದರು.ಅವರಿಗೆ ಧಾರ್ಮಿಕ ಸಾಮಾಜಿಕ,ಆರ್ಥಿಕ ರಾಜಕೀಯ ಹಕ್ಕು ಸಿಕ್ಕಿರಲಿಲ್ಲ .ಬಸವಣ್ಣ ಆಗಮನದಿಂದ ಎಲ್ಲರೂ ಎಲ್ಲಾರೀತಿಯ ಬಂಧನದಿಂದ ಮುಕ್ತವಾದರು . ಕರ್ಮಲತೆಯ ಜನಿವಾರ ಕಿತ್ತು ಸನಾತನಿಗಳಿಗೆ ಸವಾಲು ನೀಡಿದ ಬಸವಣ್ಣ ಮನುವಾದಿಗಳಿಗೆ ನಡುಕ ಹುಟ್ಟಿಸಿದನು . ಬಸವಣ್ಣ ವರ್ಗ ವರ್ಣ ಲಿಂಗ ಆಶ್ರಮ ಬೇಧಗಳನ್ನು ಕಿತ್ತು ಸರ್ವಕಾಲಿಕ ಸಮಾನತೆಯ ಸಮಾಜವನ್ನು ಸುಂದರಗೊಳಿಸಿದರು.
ವೇದ ಶಾಸ್ತ್ರ ಆಗಮಗಳನ್ನು ಧಿಕ್ಕರಿಸಿದ ಮಹಾ ಸಮಾಜವಾದಿ ಸಮತೆಯ ಹರಿಕಾರ ಕ್ರಾಂತಿಕಾರಿ ಬಸವಣ್ಣನವರ ವಿಚಾರಧಾರೆ ಇಂದು ಇಡೀ ಜಗತ್ತಿಗೆ ಮಾದರಿಯಾಗಿದೆ.
“ವೇದಕ್ಕೆ ಒರೆ ಕಟ್ಟುವೆ ಶಾಸ್ತ್ರಕ್ಕೆ ನಿಗಳನಿಕ್ಕುವೆ
ಆಗಮದ ಮೂಗ ಕೊಯ್ಯುವೆ ,
ನೋಡಯ್ಯ ಮಹಾದಾನಿ ಕೂಡಲ ಸಂಗಮದೇವ ,
ಮಾದರ ಚೆನ್ನಯ್ಯನ ಮನೆ ಮಗ ನಾನಯ್ಯ,”
ವೇದಗಳಲ್ಲಿರುವ ವಿಷಯಗಳನ್ನು ಒಪ್ಪದ ಬಸವಣ್ಣ ಅವುಗಳಿಗೆ ಚರ್ಮದ ಒರೆ ಕಟ್ಟಿ ಹಾಕುವೆನು.ಶಾಸ್ತ್ರಕ್ಕೆ ನಿಗಳ ಅಂದರೆ ಕೀಲಿ ಹಾಕುವುದು ಅಂತ. ಆಗಮದ ಮೂಗ ಕೊಯ್ಯುವೆ., ಲಿಂಗ ಸಮಾಜ ಸಾಕ್ಷಿಯಾಗಿ ತಾನು ಮಾದಾರ ಚೆನ್ನಯ್ಯನ ಮಗನು ಎಂದು ಅತ್ಯಂತ ಕಿಂಕರ ಭಾವದಿಂದ ಆತ್ಮ ನಿವೇದನೆ ಮಾಡಿಕೊಳ್ಳುತ್ತಾನೆ ಬಸವಣ್ಣ.
ಓದಿದನು ಬಸವೇಶ
ವೇದದೊಳಿಗಿನ ಹುಸಿಯಾ ,
ಭೇದ ಬೇಧನೆ ಬಿಚ್ಚಿಟ್ಟ ,
ಜನಪದಕೆ ತೈದುಂಡ ಜೀವಿ ಬಸವಣ್ಣ.
ವೇದಗಳಲ್ಲಿರುವ ಅಸತ್ಯವನ್ನು ಬಸವಣ್ಣ ಬಯಲಿಗೆಳೆದನು. ಬಸವಣ್ಣನವರು ತಮ್ಮ 70 ವಚನಗಳಲ್ಲಿ 89 ಸಲ ವೇದಗಳನ್ನು ಖಂಡಿಸಿದ್ದಾನೆ ತಿರಸ್ಕರಿಸಿದ್ದಾನೆ.ವೇದ ಆಗಮ ಶಾಸ್ತ್ರ ನಂಬಿದ ಸನಾತನರು ಅಸ್ಪ್ರಶ್ಯ ನೀತಿ ಪಾಲಿಸಿ ದಲಿತರನ್ನು ಪಂಚಮರನ್ನು ಪ್ರಾಣಿಗಳಂತೆ ಕೀಳಾಗಿ ಕಂಡಿದ್ದರು. ಆಗ ಬಸವಣ್ಣ ಪಂಚಮರ ದಲಿತರ ಮನೆಯಲ್ಲಿ ಪ್ರಸಾದ ಸ್ವೀಕರಿಸಿ ವೈದಿಕರಿಗೆ ಹೀಗೆ ಸವಾಲೆಸೆದನು.
ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ !
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ !
ಆಗಮ ಹೆರತೊಲಗಿ ಅಗಲಿದ್ದಿತಯ್ಯಾ !
ನಮ್ಮ ಕೂಡಲಸಂಗಯ್ಯನು
ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.
ಪ್ರಾಣಿ ಬಲಿ ಅಂದಿನ ಕರಾಳ ವ್ಯವಸ್ಥೆಯ ಪ್ರಮುಖ ಅಂಗವಾಗಿತ್ತು. ಹಬ್ಬಕ್ಕೆ ತಂದ ಹೋತು ಕುರಿಯನ್ನು ವೇದ ಸಾಕ್ಷಿಯಾಗಿ ಕೊಯ್ಯುತ್ತಿದ್ದರು..
ಪ್ರಾಣಿ ಹಿಂಸೆ ಮಹಾಪಾಪವೆಂದು ಮನಗಂಡ ಶರಣರು ದೇವರ ಹೆಸರಲ್ಲಿ ಪ್ರಾಣಿ ಬಲಿ ಮಾಡೋದನ್ನು ಉಗ್ರವಾಗಿ ಖಂಡಿಸಿ ಪ್ರತಿಭಟಿಸಿದರು.
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ ಅಳು, ಕಂಡಾ !
ವೇದವನೋದಿದವರ ಮುಂದೆ ಅಳು, ಕಂಡಾ !
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ !
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.
ಸಮಾಜವನ್ನೇ ಲಿಂಗ ಸ್ವರೂಪವಾಗಿ ಕಂಡು ಅಲ್ಲಿರುವ ಸಕಲ ಜೀವಾತ್ಮಗಳಿಗೆ ಲೇಸನ್ನೇ ಬಯಸುವ ಪರಿಶುದ್ಧ ಆಚರಣೆಯೇ ಜೀವನ .
ಕಾಯಕ ದಾಸೋಹ ತತ್ವವ ಮರೆತು ಬೇರೆಯಲ್ಲ ಬೋಧೆ ಮಾಡುವದರ ವಿರುದ್ಧ ಬಸವಣ್ಣ ತನ್ನ ಆಕ್ರೋಶ ವ್ಯಕ್ತ ಪಡಿಸಿದ್ದಾನೆ .
ಆದಿ ಪುರಾಣ ಅಸುರರಿಗೆ ಮಾರಿ,
ವೇದಪುರಾಣ ಹೋತಿಂಗೆ ಮಾರಿ,
ರಾಮಪುರಾಣ ರಕ್ಕಸರಿಗೆ ಮಾರಿ,
ಭಾರತಪುರಾಣ ಗೋತ್ರಕ್ಕೆ ಮಾರಿ.
ಎಲ್ಲಾ ಪುರಾಣ ಕರ್ಮಕ್ಕೆ ಮೊದಲು,
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ
ಕೂಡಲಸಂಗಮದೇವಾ.
ಸಾಮಾಜಿಕ ಸೇವೆ ನಿರ್ವಹಣೆಗೆ ಪ್ರತಿಯಿಲ್ಲ ಅದಕ್ಕಿಂತ ಶ್ರೇಷ್ಠ ಕಾರ್ಯ ಇನ್ನೊಂದಿಲ್ಲ ಎನ್ನುವುದು ಬಸವಣ್ಣನವರ ನಿಲುವು .
ಸನಾತನ ವ್ಯವಸ್ಥೆ ಜಿಡ್ಡುಗಟ್ಟಿ ಮಲೀನವಾಗಿ ಮೃತಪ್ರಾಯ ಪರಿಸ್ಥಿತಿಯಲ್ಲಿ ಬಸವಣ್ಣ ಭಾರತ ದೇಶಕ್ಕೆ ಅದರಲ್ಲೂ ದಕ್ಷಿಣ ಭಾರತದ ಮೂಲನಿವಾಸಿಗಳ ಆಶಾ ದೀಪವಾಗಿ ಬಂದನು ಬಸವಣ್ಣ .
ಶರಣರ ಕ್ರಾಂತಿ ರಸಿಯಾ ,ಫ್ರೆಂಚ್ ಕ್ರಾಂತಿಗೆ ಬಿನ್ನವಾದ ಕ್ರಾಂತಿ. ಇಲ್ಲಿ ರಾಜ್ಯ ಭೂಮಿ ಹೆಣ್ಣು ಹೊನ್ನು ಮಣ್ಣಿಗಾಗಿ ಯುದ್ಧ ನಡೆದಿಲ್ಲ .ಅರಸೊತ್ತಿಗೆ ಖಜಾನೆ ಅಧಿಕಾರದ ಕ್ಷಿಪ್ರ ಕ್ರಾಂತಿಯಲ್ಲ . ಒಬ್ಬ ಸಮಾಜವಾದಿ ಚಿಂತಕ ಹೇಳಿದಂತೆ Karl Marx has taught us the dignity of labour but Basavanna has taught us dignity and divinity of labour ,ಎಂದು ಬಸವಣ್ಣನವರ ಕಾರ್ಯ ಮುಕ್ತ ಕಂಠದಿಂದ ಹೊಗಳಿದ್ದಾನೆ. ಅಂದಿನ ಜಿಡ್ಡು ಗಟ್ಟಿದ ಸಮಾಜಕ್ಕೆ ಬಸವಣ್ಣನವರು ಹೊಸ ಚೇತನ ನೀಡಿದರು . ಬತ್ತಿ ಹೋಗಿದ್ದ ಬದುಕಿಗೆ ಭರವಸೆ ಆದನು ಬಸವಣ್ಣ .
ಬಸವ ಪೂರ್ವ ಯುಗದಲ್ಲಿ ದಲಿತರಿಗೆ ಪಂಚಮರಿಗೆ ಹೊಲೆಯರಿಗೆ ಮಂದಿರ, ದೇವಾಲಯಗಳಲ್ಲಿ ಪ್ರವೇಶವಿರಲಿಲ್ಲಾ.ಬ್ರಾಹ್ಮಣರ ಹೊರತು ಪಡಿಸಿ ಇನ್ನೊಬ್ಬರಿಗೆ ಪೂಜಿಸುವ ಅಧಿಕಾರವಿರಲಿಲ್ಲ . ಅವರನ್ನು ಪಶುಗಳಂತೆ ಕಾಣುವ ಕಾಲವದು.ನಾಯಿ ಬೆಕ್ಕು ಆಕಳು ಕುರಿಗಳನ್ನೂ ಮುಟ್ಟುವ ಬ್ರಾಹ್ಮಣರು ಮನುಷ್ಯರನ್ನು ಮುಟ್ಟುತ್ತಿರಲಿಲ್ಲ .ಇಂತಹ ಅಸಮಾನತೆ ಕೊನೆಗಾಣಿಸಲು ಬಸವಣ್ಣನವರು ಇಷ್ಟ ಲಿಂಗವನ್ನು ಕಂಡು ಹಿಡಿದರು .
ನಿರಾಕರ ನಿರ್ಗುಣ ನಿರಹಂಕಾರ ಕುರುಹನ್ನು ತಮ್ಮ ಕರಸ್ಥಲಕ್ಕೆ ಕೊಟ್ಟರು ಬಸವಣ್ಣನವರು.
ಶರಣರ ಅರಿವೇ ಗುರು ಆಚಾರವೇ ಲಿಂಗ ಶರಣರ ಅನುಭಾವವೇ ಜಂಗಮ ,ಇಂತಹ ಒಂದು ಸರಳ ಸುಂದರ ಸಿದ್ಧಾಂತವೇ ಶರಣ ಸಾಹಿತ್ಯ ಜಗತ್ತಿನಲ್ಲಿ ಇನ್ನೊಂದು ಇಲ್ಲವೆಂದೆನ್ನಬಹುದು.
ಬಸವಣ್ಣನವರು ಸ್ಥಾಪಿಸಿದ ಸಾರ್ವಕಾಲಿಕ ಸಮಾನತೆ
————————————————————————
ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು
ಮೊಗ್ಗು ಮಲ್ಲಿಗೆ ಅರಳ್ಯಾವ/
ಮೊಗ್ಗು ಮಲ್ಲಿಗೆ ಅರಳ್ಯಾವ /
ಯಾಲಕ್ಕಿ ಗೊನೆ ಬಾಗಿ ಹಾಲ ಸುರಿದಾವ.
ಬಸವ ಪೂರ್ವಯುಗದಲ್ಲಿ ಅಸಮಾನತೆಯ ಬಿಸಿಲು ಬೇಗೆ ಬಸವಣ್ಣನವರ ಆಗಮನದಿಂದ
ಸಮತೆಯ ತಂಪು ಬೆಳದಿಂಗಳಾಯಿತು ,ಯಾಲಕ್ಕಿ ಗೊನೆ ಸಂತೋಷದಿಂದ ಬಸವಣ್ಣವರ ಆಗಮನಕ್ಕೆ ಬಾಗಿ ತನ್ನ ಹಾಲನ್ನು ಸುರಿಸಿತು ಎಂದು ಜಾನಪದ ಕವಿ ಹೇಳುತ್ತಾನೆ.
ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗ ಬಹುದು ಎಂದು ಬಸವಣ್ಣವರು ಸಾರಿದರು. ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದರು.
ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾ ವಾದಿ ಎಂದೂ ಕರೆಯಲಾಗುತ್ತದೆ. ಮಾನವಿಯತೆ. ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದರು.
ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೂ ಎಂದರೆ ನರಕ ಎಂದು ಸಾರುವ ಮೂಲಕ ತಮ್ಮ ಮಾನವತಾವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು.
ಬಸವಣ್ಣನವರ ಪ್ರೇರಣೆಯಿಂದ ದಲಿತರ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ನಡೆದ ಅನುಲೋಮ ವಿವಾಹ ಕಲ್ಯಾಣದ ಕ್ರಾಂತಿಗೆ ಮುನ್ನುಡಿಯಾಯಿತು. ಇವರು ಷಟ್ ಸ್ಥಲ ವಚನ, ಕಾಲಜ್ಞಾನ ವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಬೇರೆ ಬೇರೆ ಪ್ರಕಾರದ ಸಾಹಿತ್ಯವು ಗ್ರಂಥಗಳಲ್ಲಿ ದಾಖಲಾಗಿವೆ. ಇವರನ್ನು ಕುರಿತಂತೆ ಕನ್ನಡ, ತೆಲುಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ.
ಬೆಳಗಾವಿ ಜಿಲ್ಲೆಯ ಅರ್ಜುನವಾಡದ ಶಿಲಾಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗಣಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ.
ಒಟ್ಟು ಬರೆದ ವಚನ 1414 ಇವುಗಲ್ಲದೆ ಅನೇಕ ಸ್ವರ ವಚನಗಳು ಲಭ್ಯ ಎಂದು ಹೇಳಲಾಗಿದೆ
ಇವರ ಅನೇಕ ಹೆಚ್ಚಿನ ವಚನಗಳು ಪರಿಷ್ಕರಣೆಗೆ ಒಳಪಡುವುದು ಅತ್ಯಗತ್ಯವಾಗಿದೆ .
ಷಟಸ್ಥಲ ವಚನಗಳು ಹೆಚ್ಚು ಮೌಲಿಕ ಮತ್ತು ಲಿಂಗಾಯತ ಧರ್ಮದ ತಿರುಳು.
ಬಸವಣ್ಣನವರ ಕಾಯಕ ಮತ್ತು ಕಾಯಕ ಸಮಾನತೆ ( Collection of wealth )
———————————————————————————————–
“ದೇವ ಸಹಿತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡಡೆ
ನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆ
ನಿಮ್ಮ ರಾಣಿವಾಸದಾಣೆ.”
ಹೀಗೆ ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆಯನ್ನು ಕಾಣುತ್ತಾರೆ. ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ.
“ಮನೆ ನೋಡಾ ಬಡವರು, ಮನ ನೋಡಾ ಘನ ಸಂಪನ್ನರು
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.
ಕೂಡಲಸಂಗನ ಶರಣರು ಸ್ವತಂತ್ರ ಧೀರರು.”
ಎಂದು ಬಸವಣ್ಣನವರು ಕಾಯಕಜೀವಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರ ವ್ಯಕ್ತಿತ್ವವನ್ನು ಕುರಿತು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಅವರು ಘನಮನದವರೂ ಪರಿಶುದ್ಧ ರೂ ಸ್ವತಂತ್ರ ಧೀರರೂ ಆಗಿದ್ದಾರೆ.
“ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ
ಸೇವೆಯುಳ್ಳನ್ನಕ್ಕರ”
ಎಂದು ಆಯ್ದಕ್ಕಿ ಲಕ್ಕಮ್ಮ ಕಾಯಕದ ಮಹತ್ವ ವ್ಯಕ್ತಪಡಿಸುತ್ತಾಳೆ.
“ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದರೂ ಕಾಯಕದಿಂದಲೇ ವೇಷ ಪಾಶ ಹರಿವುದು
ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು”
ಎಂದು ನುಲಿಯ ಚಂದಯ್ಯನವರು ಕಾಯಕದ ಮಹತ್ವವನ್ನು ಸಾರಿದ್ದಾರೆ. ಗುರು-ಲಿಂಗ-ಜಂಗಮಕ್ಕೆ ಕಾಯಕವೇ ಆಧಾರವಾಗಿದೆ ಎಂದು ಮನ ತುಂಬುಗುವಂತೆ ಹೇಳಿದ್ದಾರೆ.
“ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದರೂ ಮರೆಯಬೇಕು
ಲಿಂಗಪೂಜೆಯಾದರೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದರೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು.”
ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ.
“ಆವ ಕಾಯಕವಾದರೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ.”
ಹುಲ್ಲಿನ ಹೊರೆ ಹೊರುವ ಕಾಯಕದ ಸೋಮಯ್ಯ ಬದುಕೆಂಬುದು ಜೈವಿಕ ಪ್ರಕ್ರಿಯೆ ಎಂದು ಹೀಗೆ ಸೂಚಿಸುತ್ತಾನೆ. ಆ ಮೂಲಕ ಸಾವನ್ನು ಗೆಲ್ಲುತ್ತಾನೆ. ದೇವರ ಹಂಗಿಗೆ ಒಳಗಾಗದೆ ದೇವರನ್ನು ಆರಾಧಿಸುವ ಕ್ರಮವನ್ನು ನಮಗೆ ಕಲಿಸಿಕೊಟ್ಟಿದ್ದಾನೆ. ಜನಸಾಮಾನ್ಯರು ಶರಣಸಂಕುಲ ಸೇರಿ ಹೀಗೆ ಆತ್ಮಸ್ಥೈರ್ಯ ಪಡೆದು ಅಸಾಮಾನ್ಯರಾಗುವಲ್ಲಿ ಬಸವಣ್ಣನವರ ಅಪಾರ ಶ್ರಮ ಅಡಗಿದೆ. ಅಂತೆಯೆ ಶರಣರಿಗೆ ಬದುಕೆಂಬುದು ದುಃಖದ ಆಗರವೆಂದು ಅನಿಸುವುದಿಲ್ಲ. ಶರಣರು ಸವಾಲನ್ನು ಎದುರಿಸುತ್ತ ಆನಂದವನ್ನು ಅನುಭವಿಸುವವರು.
“ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ
ಆಸೆಯೆಂಬುದು ಭವದ ಬೀಜ
ನಿರಾಸೆಯೆಂಬುದು ನಿತ್ಯಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ.”
ಎಂದು ಉರಿಲಿಂಗಪೆದ್ದಿಗಳ ಮುಣ್ಯಸ್ತ್ರೀ ಕಾಳವ್ವೆ ಹೇಳುತ್ತಾಳೆ. ಕಾಯಕದಲ್ಲಿ ಮುಕ್ತಿ ಕಾಣುವ ಪರಿ ಇದು. ಒಬ್ಬ ದಲಿತ ಮಹಿಳೆ ಶರಣಸಂಕುಲದೊಳಗೆ ಬಂದು ಇಷ್ಟೊಂದು ಮಹತ್ತರವಾದ ವಿಚಾರವನ್ನೊಳಗೊಂಡ ವಚನರಚನೆ ಮಾಡಿದ್ದಾಳೆಂದರೆ ಬಸವಣ್ಣನವರು ಜಗತ್ತಿನಲ್ಲಿ ಮೊದಲ ಬಾರಿಗೆ ಯಾವ ರೀತಿ ವಯಸ್ಕರ ಶಿಕ್ಷಣದ ವ್ಯವಸ್ಥೆ ಮಾಡಿರಬಹುದು ಎಂಬುದರ ಕುರಿತು ಸಂಶೋಧನೆಯಾಗಬೇಕಿದೆ. ಶರಣರ ವಚನಗಳು ಮತ್ತು ತತ್ತ್ವ ಕೂಡ ಕಾಯಕದ ಉತ್ಪತ್ತಿಯಾಗಿವೆ ಎಂಬುದನ್ನು ಮರೆಯಬಾರದು. ವಚನಗಳು ಅನನ್ಯವಾಗಿರುವುದು ಇದೇ ಕಾರಣದಿಂದ. ಅನೇಕ ವಚನಕಾರರು ತಮ್ಮ ಕಾಯಕಗಳ ಅನುಭದ ಮೂಲಕವೇ ಅನುಭವಿಯಾಗಿದ್ದಾರೆ. ಅವರ ವಚನಗಳಲ್ಲಿನ ಪ್ರತಿಮೆ, ಪ್ರತೀಕ ಮತ್ತು ಸಂಕೇತಗಳು ಅವರವರ ಕಾಯಕಗಳ ಅನುಭವದ ಮೂಲಕವೇ ಸೃಷ್ಟಿಯಾಗಿವೆ. ಕಾಯಕದ ವಸ್ತುಗಳು ಪಾರಿಭಾಷಿಕ ಪದಗಳು ಹೀಗೆ ಕಾವ್ಯ ಪ್ರತಿಮೆಗಳಾಗುತ್ತಲೇ ತತ್ತ್ವವನ್ನು ಸ್ಫುರಿಸತೊಡಗುತ್ತವೆ.
ದಾಸೋಹ ( Distribution of wealth )
———————————————————–
ಕಾಯಕ ಹೇಗೆ ಕಡ್ಡಾಯವೋ ಹಾಗೆ ದಾಸೋಹವೂ ಕೂಡ, ಶರಣರು ದಾನವನ್ನು ವಿರೋಧಿಸಿದರು ಅಲ್ಲಿ ಕೊಡುವವನು ದೊಡ್ಡವ ಇಸಿದುಕೊಳ್ಳುವವ ಸಣ್ಣವನಾಗುತ್ತಾನೆ.
ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ, ದಾಸೋಹ ಕೇವಲ ಹಂಚುವುದು ವಿನಿಯೋಗಿಸುವುದು ಅಲ್ಲ, ಅದು ಒಳಗೊಳ್ಳುವಿಕೆ .ಶರಣರ ಸಾಮಾಜಿಕ ಸಿದ್ಧಾಂತಗಳಲ್ಲಿ ಕಾಯಕದಂತೆ ದಾಸೋಹವೂ ಒಂದು ಮಹತ್ವದ ಮೌಲ್ಯ. ಕಾಯಕ ಮತ್ತು ದಾಸೋಹ ಒಂದೇ ನಾಣ್ಯದ ಎರಡು ಮುಖಗಳಂತೆ ಒಂದಕ್ಕೊಂದು ಪೂರಕವಾಗಿವೆ. ಕಾಯಕಕ್ಕೆ ಹೇಗೆ ನಿಯಮಗಳಿವೆಯೋ ದಾಸೋಹಕ್ಕೂ ನಿಯಮಗಳಿವೆ. ಮೋಸಮಾಡಿ, ಕಳವುಮಾಡಿ ತಂದ ಧನವನ್ನು ದಾಸೋಹಕ್ಕೆ ಸ್ವೀಕರಿಸುವುದಿಲ್ಲ. ಶ್ರಮಪಟ್ಟು ದುಡಿದು, ಸದಾಚಾರದಿಂದ ಗಳಿಸಿ, ಅಹಂಕಾರ ತೊರೆದು ಸಮರ್ಪಣಾಭಾವದಿಂದ ಅರ್ಪಿಸಿದಾಗ ಮಾತ್ರ ಅಂತಹ ಧನ ದಾಸೋಹಕ್ಕೆ ವಿನಿಯೋಗವಾಗುತ್ತದೆ. ಅಲ್ಲಮಪ್ರಭು ದಾಸೋಹದ ವ್ಯಾಖ್ಯೆಯನ್ನು ಸೊಗಸಾಗಿ ಹೇಳಿದ್ದಾರೆ. “ಸೋಹಂ- ಎಂಬುದಕ್ಕೆ ದಾಸೋಹವ ಮಾಡದಿರ್ದಡೆ ಅತಿಗಳೆವೆ ನೋಡಾ ಗುಹೇಶ್ವರಾ (ವ:75)” ಎಂದು ಹೇಳಿದ್ದಾರೆ. ಇದೇ ವಿಷಯದ ಬಗೆಗೆ ಸಿದ್ಧರಾಮಯ್ಯ ತಮ್ಮ ವಚನವೊಂದರಲ್ಲಿ ದಾಸೋಹದ ವ್ಯಾಖ್ಯೆಯನ್ನು ಇನ್ನೂ ಸ್ಪಷ್ಟಪಡಿಸಿದ್ದಾರೆ: ಸೋಹಂ-ಎಂಬುದು ಅಂತರಂಗದ ಮದ ಮತ್ತು `ಶಿವೋಹಂ’ ಎಂಬುದು ಬಹಿರಂಗದ ಮದ. “ಈ ದ್ವಂದ್ವವನಳಿದು ದಾಸೋಹಂ ಎಂದೆನಿಸಯ್ಯಾ” ಎಂದು ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಕೇಳಿಕೊಂಡಿದ್ದಾರೆ. ದಾಸೋಹವೆಂದರೆ, ಅನ್ನದಾಸೋಹ ಮಾತ್ರವಲ್ಲ. ಬಸವಣ್ಣನವರು ತಮ್ಮ ವಚನಗಳಲ್ಲಿ ವಿವಿಧ ದಾಸೋಹಗಳ ಪರಿಚಯ ನೀಡಿದ್ದಾರೆ. ಭಕ್ತಶ್ರೇಷ್ಠನಾದವನು ಭಕ್ತಿದಾಸೋಹ ಮಾಡಬಹುದು, ಯುಕ್ತನಾದವನು ಯುಕ್ತಿ ದಾಸೋಹವ ಮಾಡಬಹುದು. ಐಕ್ಯಸ್ಥಲವ ಸಾಧಿಸಿದವನು ಮಮಕಾರ ದಾಸೋಹವ ಮಾಡಬಹುದು. ಎಲ್ಲ ವಿಷಯದಲ್ಲಿಯೂ ದಾಸೋಹವಿದೆಯೆಂದು ವಿವರಿಸಿದ್ದಾರೆ.
ಅರಿವಿನ ಅಗಾಧತೆ ಅದನ್ನು ಹಂಚಿಕೊಳ್ಳುವುದು ನಿಜವಾದ ತ್ರಿವಿಧ ದಾಸೋಹ. ಎಲ್ಲವನ್ನೂ ಗೆಲ್ಲ ಬಹುದು ಆದರೆ ತನ್ನನ್ನು ತಾನು ಗೆಲ್ಲುವುದು ನಿಜದ ಘನ.
ತನುವ ಗೆಲಲರಿಯದೆ, ಮನವ ಗೆಲಲರಿಯದೆ
ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು.
ತನುವ ದಾಸೋಹಕ್ಕೆ ಸವೆಸಿ, ಮನವ ಲಿಂಗಧ್ಯಾನದಲ್ಲಿ ಸವೆಸಿ
ಧನವ ಜಂಗಮದಲ್ಲಿ ಸವೆಸಿ ಗೆಲ್ಲಬಲ್ಲಡೆ,
ಸಂಗನಬಸವಣ್ಣನಲ್ಲದೆ ಮತ್ತಾರನೂ ಕಾಣೆ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣಂಗೆ
ನಮೋ ನಮೋ ಎನುತಿರ್ದೆನು.
-ಅಲ್ಲಮಪ್ರಭು (ಸ.ವ.ಸಂ.2,ವ:1230)
ಈ ವಚನವು ದಾಸೋಹದ ಪರಿಕಲ್ಪನೆಯನ್ನು ಹೊಸರೀತಿಯಲ್ಲಿ ಕಟ್ಟಿಕೊಡುತ್ತದೆ. ವೈರಿಗಳನ್ನು ಗೆಲ್ಲಬಹುದು, ಸಾಮ್ರಾಜ್ಯವನ್ನು ಗೆಲ್ಲಬಹುದು. ಆದರೆ ತನು-ಮನ- ಘನವನ್ನು ಗೆಲ್ಲುವುದು ಸುಲಭವಲ್ಲ
ಮಾರ್ಕ್ಸ್ ಮತ್ತು ಬಸವಣ್ಣ
——————————–
ಬಸವಣ್ಣ ಮತ್ತು ಮಾರ್ಕ್ಸ್ ನಡುವಿನ ಹೋಲಿಕೆಯನ್ನು ಸಮಂಜಸವೇ ಎಂಬ ಪ್ರಶ್ನೆ ಮೂಡುತ್ತದೆ.. ಬಸವಣ್ಣ ಮತ್ತು ಮಾರ್ಕ್ಸ್ ನಡುವೆ 687 ವರ್ಷಗಳ ಅಂತರವಿದೆ. ಬಸವಣ್ಣ 1131 ರಲ್ಲಿ ಜನಿಸಿದರೆ ,ಮಾರ್ಕ್ಸ್ ಕ್ರಿ.ಶ. 1818 ರಲ್ಲಿ ಜನಿಸಿದ್ದಾರೆ. ಮಾರ್ಕ್ಸ್ ಅವರನ್ನು ಹೊಸ ಸಿದ್ಧಾಂತ , ಹೊಸ ಆರ್ಥಿಕ ಚಿಂತನೆಗಳ ಜನಕನೆಂದು ಕರೆಯುತ್ತಾರೆ. ಬಸವಣ್ಣ ರಾಜಕೀಯ-ಆರ್ಥಿಕ, ಸಾಮಾಜಿಕ ನೈತಿಕ ವೈಚಾರಿಕ ಸಾಹಿತ್ಯಿಕ ಅನುಭಾವ ಬದುಕನ್ನು ಕಲ್ಪಿಸಿದ ಮಾನವ ಧರ್ಮದ ಸ್ಥಾಪಕನೆಂದು ಕರೆಯುತ್ತಾರೆ. ಶತಮಾನಗಳ ನಡುವಿನ ಅಂತರದಿಂದಾಗಿ ಹಂಚಿಹೋದ ಈ ಇಬ್ಬರು ಮಾನವತಾವಾದಿಗಳ ನಡುವಿನ ಹೋಲಿಕೆ ಅಥವಾ ವೈರುಧ್ಯಗಳ ಕಾರಣದಿಂದಾಗಿ ಬಸವಣ್ಣ ಅಥವಾ ಮಾರ್ಕ್ಸ್ ’ ಕೊಂಚ ಅಭಾಸವಾಗಿಯೇ ಕಂಡುಬರುತ್ತದೆ. ಬಸವಣ್ಣ ಅಥವಾ ಮಾಕ್ರ್ಸ’ ಇಬ್ಬರನ್ನೂ ಒಂದೇ ಸಮಪಾತಳಿಯ ಮೇಲಿಟ್ಟು ನೋಡುವುದನ್ನು ಕಂಡು ಮಾರ್ಕ್ಸ್ ವಾದಿಗಳು ನಗಬಹುದು. ಮಾರ್ಕ್ಸ್ ಎಷ್ಟೊಂದು ಆಧುನಿಕ ಮತ್ತು ಬಸವಣ್ಣ ಎಷ್ಟೊಂದು ಹಳೆಯ !! ಹಾಗಿದ್ದರೆ ಈ ಇಬ್ಬರು ವ್ಯಕ್ತಿತ್ವದ ನಡುವೆ ಯಾವ ಹೋಲಿಕೆ ಇದೆ? ಒಬ್ಬ ಮಾರ್ಕ್ಸ್ ವಾದಿ ಬಸವಣ್ಣನನಿಂದ ಏನನ್ನು ಕಲಿಯಬಹುದು? ಬಸವಣ್ಣ ಮಾರ್ಕ್ಸ್ ವಾದಿಗೆ ಏನನ್ನು ಬೋಧಿಸಬಹುದು? ಏನೇ ಆದರೂ ಇಬ್ಬರ ನಡುವಿನ ಹೋಲಿಕೆಯು ಆಕರ್ಷಕ ಮತ್ತು ಬೋಧನೆ ಪ್ರಧಾನವಾಗಿರುತ್ತದೆ. ಮಾರ್ಕ್ಸ್ ವಾದಿಗಳು ತಮ್ಮ ಪೂರ್ವಗ್ರಹಗಳನ್ನು ಬದಿಗಿಟ್ಟು ಬಸವಣ್ಣ ಏನನ್ನು ಹೇಳಿದ? ಯಾವುದಕ್ಕೆ ಬದ್ಧನಾಗಿದ್ದ ಎಂದು ಅಧ್ಯಯನ ಮಾಡಿದರೆ ಅವರ ನಿಲುವುಗಳು ಸ್ಪಷ್ಟವಾಗುತ್ತದೆ.
ಮಾರ್ಕ್ಸ್ ಪದಾರ್ಥವಾದಿ (Materialism ) ಬಸವಣ್ಣ ಪ್ರಸಾದವಾದಿ.
—————————————————————————————
ಕಾರ್ಲ್ ಮಾರ್ಕ್ಸ್ ಮನುಷ್ಯ ತಾನು ಗಳಿಸಿದ್ದರ ಆದಾಯಕ್ಕೆ ತಾನೇ ಒಡೆಯನಾಗುತ್ತಾನೆ. ಹಣ ಆಸ್ತಿ ಗಳಿಕೆ ಕಾರ್ಮಿಕ ಶ್ರಮಿಕನಿಗೆ ಸಲ್ಲುತ್ತದೆ.ಆದರೆ ಬಸವಣ್ಣ ತಾನು ಗಳಿಸಿದ ಆದಾಯದಲ್ಲಿ ವ್ಯಕ್ತಿ ಎಲ್ಲವನ್ನೂ ತಾನೇ ಇಟ್ಟುಕೊಳ್ಳದೆ ಲಿಂಗ ಜಂಗಮ ಸಮಾಜಕ್ಕೆ ಹಂಚಬೇಕು.ನಾಡಿನ ಅಭಿವೃದ್ಧಿಗೆ ಬಂದ ಆದಾಯದಲ್ಲಿ ಕೆರೆ ಕಟ್ಟೆ ಭಾವಿಗಳಿಗೆ ವಿನಿಯೋಗಿಸಬೇಕು. ಮತ್ತು ಕಾಯಕ ಪರಿ ಶುದ್ಧವಾಗಿರಬೇಕು, ” ತನುವ ನೋಯಿಸಿ ಮಾನವ ಬಳಲಿಸಿ ಕಾಯಕದಿಂದ ಬಂದ ಕಾರೆಯ ಸೊಪ್ಪಾದರೂ ಲಿಂಗಾರ್ಪಿತ ” . ಸುಂಕದ ವ್ಯವಸ್ಥೆಯು ಅಂದು ಅತ್ಯಂತ ಸುಂದವಾಗಿ ಹೆಣೆದಿದ್ದರು ಆರ್ಥಿಕ ಮಂತ್ರಿ ಬಸವಣ್ಣ. ಕಾಯಕ ಆದಾಯ ಸಂಪನ್ಮೂಲಗಳ ಕ್ರೋಢೀಕರಣವಾದರೆ (Collection of Wealth ) ದಾಸೋಹವು ಹಂಚಿ ತಿನ್ನುವ ಅಥವಾ ಸಂಪನ್ಮೂಲಗಳ ವಿನಿಯೋಗವೆಂದೇ ಹೇಳಬಹುದು.(Distribution of Wealth ).
ಬಸವಣ್ಣ ಮತ್ತು ಕಾರ್ಲ ಮಾರ್ಕ್ಸ್ ಬೇರೆ ಬೇರೆ ಕಾಲ ಘಟ್ಟದಲ್ಲಿ ಕಂಡು ಬಂದರೂ ಅವರಿಬ್ಬರ ಮಧ್ಯೆ ಇರುವ ಸಮತೆಯ ಸಂಘರ್ಷ ಒಂದೆ.
ಬದಲಾವಣೆಗಾಗಿ ಕಮ್ಯುನಿಷ್ಟರು ಕಿರಿದಾದ, ಕ್ಷಿಪ್ರವಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅದೆಂದರೆ 1) ಹಿಂಸೆ 2) ಪ್ರೊಲೆಟೇರಿಯೇಟ್ ಸರ್ವಾಧಿಕಾರ ಇವೆರಡರ ಹೊರತಾಗಿ ಬೇರೆ ಯಾವುದೇ ಮಾರ್ಗವು ಹೊಸ ವ್ಯವಸ್ಥೆಯನ್ನು ರೂಪಿಸುವುದಿಲ್ಲ ಎಂದು ಕಮ್ಯುನಿಷ್ಟರು ನಂಬುತ್ತಾರೆ.
ಆದರೆ ಬಸವಣ್ಣ ಅಹಿಂಸೆ ಪ್ರೀತಿ ಮತ್ತು ಗಣಾಚಾರ ತ್ಯಾಗದಿಂದ ಸಮಗ್ರವಾದ ಕ್ರಾಂತಿಯನ್ನು ಪರಿಚಯಿಸಿದನು.
ಬಸವಣ್ಣ ಜಗತ್ತಿನ ಮೊಟ್ಟ ಮೊದಲ ಸಮಾಜವಾದಿ ಚಳುವಳಿಯ ಹರಿಕಾರ, ,ಶ್ರಮಿಕರ ಕಾರ್ಮಿಕರ ಪ್ರತಿನಿಧಿ , ಬಡವರ ಅಸ್ಪ್ರಶ್ಯರ ದಲಿತರ ಆಶಾಕಿರಣ , ಮಹಿಳೆಯರ ದುರ್ಬಲರ ದಾರಿ ದೀಪವಾಗಿ ನಿಲ್ಲುತ್ತಾನೆ. ವರ್ಗ ವರ್ಣ ಲಿಂಗ ಆಶ್ರಮ ಭೇದ ಬುಡಮಟ್ಟದಿಂದ ಕಿತ್ತೊಗೆದ ಕಾರಣೀಕರ್ತನು.
ಲಿಂಗ ಒಂದು ವಸ್ತು ಅಲ್ಲ ಅದು ಸಮಷ್ಟೀಯ ಪ್ರತೀಕ .ಲಿಂಗವ ಪೂಜಿಸಿ ಫಲವೇನು ? ಎರೆದರೆ ನೆನೆಯದು ಮರೆದರೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ, ಜಂಗಮಕ್ಕೆ ಎರೆದರೆ ಸ್ಥಾವರ ನೆನೆಯಿತ್ತು ,ಮರದ ಬಾಯಿ ಬೇರೆಂದು ಕೆಳಕ್ಕೆ ನೀರೆರದರೆ ಮೇಲೆ ಪಲ್ಲವಿಸಿತ್ತು ,ಲಿಂಗದ ಬಾಯಿ ಜಂಗಮ ಅಂತ ಸಕಲ ಪಡಿ ಪದಾರ್ಥ ನೀಡು ಎಂದಿದ್ದಾರೆ ಬಸವಣ್ಣ. ಬಸವಣ್ಣನವರು ಜಂಗಮ ಚೇತನವನ್ನು ಗೌರವಿಸಿದ ಆದರಿಸಿದ ಸಮಾಜ ವಿಜ್ಞಾನಿ .
ಅನುಭವ ಮಂಟಪ ( Spiritual Parliament )
———————————————————-
ಬಸವಣ್ಣನವರು ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ತಂದು ‘ಅನುಭವ ಮಂಟಪ’ವನ್ನು ಸ್ಥಾಪಿಸಿದರು. ಅನುಭವ ಮಂಟಪ ೧೨ನೇ ಶತಮಾನದಲ್ಲಿ ಎಲ್ಲಾ ಧರ್ಮದ ಶರಣರು, ಕವಿಗಳು ಮತ್ತು ತತ್ವಜ್ಞಾನಿಗಳು ಸೇರುತ್ತಿದ್ದ ಒಂದು ಸಾಮಾಜಿಕ-ಧಾರ್ಮಿಕ ಸಂಸತ್ತು. ಇದರಲ್ಲಿ ಎಲ್ಲಾ ಜಾತಿಯ ಎಲ್ಲಾ ವೃತ್ತಿಯ ಸಾಮಾನ್ಯ ಜನರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು ಹಾಗೂ ತಮ್ಮ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದರು. ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾಗಿದ್ದವರು ಅಲ್ಲಮ ಪ್ರಭುಗಳು. ಅಕ್ಕಮಹಾದೇವಿ ಅನುಭವ ಮಂಟಪಕ್ಕೆ ಬಂದಾಗ ಅಲ್ಲಮ ಪ್ರಭು ಅವಳ ಜೊತೆ ಸಂವಾದ ನಡೆಸಿದರು, ಮೊಳಿಗೆ ಮಾರಯ್ಯ ಕಾಶ್ಮೀರದ ಮಹಾರಾಜ ಅವರು ಕಲ್ಯಾಣದ ಅನುಭವ ಮಂಟಪದ ಸಮಾನತೆ ಮತ್ತು ಧಾರ್ಮಿಕ ಆಚರಣೆಗಳನ್ನು ಕಂಡು ಮನಸೋತು ಕಲ್ಯಾಣದಲ್ಲಿಯ ಕಟ್ಟಿಗೆ ಮಾರುವ ಕಾಯಕ ಕೈಗೊಂಡರು.
ಬಸವ ಪೂರ್ವ ಯುಗದಲ್ಲಿ ಅನುಭವ ಮಂಟಪದಂತಹ ಸುಂದರ ಪ್ರಜಾತಾಂತ್ರಿಕ ಸಂಸ್ಥೆಯು ಕಂಡು ಬಂದಿಲ್ಲ.
ಮಂಡೆ ಮಾಸಿದಡೆ ಮಹಾಮಜ್ಜನವ ಮಾಡುವುದು
ಮಂಡೆ ಮಾಸಿದಡೆ ಮಹಾಮಜ್ಜನವ ಮಾಡುವುದು
ವಸ್ತ್ರ ಮಾಸಿದಡೆ ಮಡಿವಾಳಂಗಿಕ್ಕುವುದು
ಮನದ ಮೈಲಿಗೆಯ ತೊಳೆಯಬೇಕಾದರೆ
ಕೂಡಲ ಚೆನ್ನಸಂಗನ ಶರಣರ ಅನುಭಾವವ ಮಾಡುವುದು.
ಜಾತಿ ವರ್ಗ ವರ್ಣ ರಹಿತ ಆದರೆ ಧರ್ಮ ಸಹಿತವಾದ ಕಲ್ಯಾಣ ರಾಜ್ಯವನ್ನು ಕಟ್ಟಲು ಒಂದು ಸಾಧನವನ್ನಾಗಿ ಧರ್ಮಪಿತರು ಅನುಭವ ಮಂಟಪವನ್ನು ಕಟ್ಟಿದರು. ಅನುಭವ ಮಂಟಪ ದೇವಾಲಯವಲ್ಲ. ದೇವಾಲಯಗಳನ್ನು ದೇವರನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿದರೆ, ಅನುಭವ ಮಂಟಪ ನಾಲ್ಕು ಗೋಡೆಗಳ ಮಧ್ಯೆ ಇದ್ದ ದೇವರನ್ನು ಬಂಧಮುಕ್ತಗೊಳಿಸಿತು. ದೇವಾಲಯಗಳು ಕೆಲವರಿಗೆ ದರ್ಶನಾವಕಾಶ ಪೂಜಾ ಹಕ್ಕು ನೀಡಿದರೆ ಮತ್ತೆ ಕೆಲವರನ್ನು ಈ ಸೌಲಭ್ಯಗಳಿಂದ ವಂಚಿಸಿದವು. ಆದರೆ ಅನುಭವ ಮಂಟಪ ಕೆಲವರ ಕಪಿಮುಷ್ಟಿಯಲ್ಲಿದ್ದ ಧರ್ಮ ದೇವರನ್ನು ಎಲ್ಲರ ಸಂಪತ್ತನ್ನಾಗಿ ಮಾಡಲು ಹೋರಾಡಿತು.
ವಿಶ್ವಗುರು ಬಸವಣ್ಣನವರು ರೂಪಿಸಿದ ಅನುಭವ ಮಂಟಪವನ್ನು ನೆನಪಿಗೆ ತರುವ ಇನ್ನಿತರ ಸಂಸ್ಥೆಗಳೆಂದರೆ ಪ್ಲೇಟೋನ ಅಕಾಡೆಮಿ, ಮೊಗಲ್ ಚಕ್ರವರ್ತಿ ಅಕ್ಬರ ರೂಪಿಸಿದ ದಿನ್-ಇ-ಲಾಹಿ ಮತ್ತು ಆಧುನಿಕ ಪಾರ್ಲಿಮೇಂಟ್. ಆದರೆ ಅನುಭವ ಮಂಟಪ ಇವೆಲ್ಲಕ್ಕಿಂತಲೂ ಬೇರೆಯೆ.
ಪ್ಲೇಟೋನ ಅಕಾಡೆಮಿಯಲ್ಲಿ ಬಗೆಬಗೆಯ ವಿಷಯಗಳ ಚರ್ಚೆ ನಡೆಯುತ್ತಿದ್ದುದು ನಮಗೆ ಗೋಚರವಾಗುತ್ತದೆ. ಆದರೆ ಅಕಾಡೆಮಿಯಲ್ಲಿ ಸಮಾವೇಶವಾಗುತ್ತಿದ್ದವರು ಕೇವಲ ತಾರ್ಕಿಕರು (Logicians) ಮತ್ತು ತತ್ವಜ್ಞಾನಿಗಳು. ಅನುಭವ ಮಂಟಪದಲ್ಲಿ ಸಮಾವೇಶವಾಗುತ್ತಿದ್ದವರು ಅನುಭಾವಿಗಳು ಮತ್ತು ದಾರ್ಶನಿಕರು. ಅಕಾಡೆಮಿಯ ಚರ್ಚೆಯ ಉದ್ದೇಶ ಕೇವಲ ಜ್ಞಾನ. ಅನುಭವ ಮಂಟಪದ ಉದ್ದೇಶ ಅರಿವನ್ನು ಆಚರಣೆಗೆ ಇಳಿಸುವುದು. ಅಲ್ಲಿ ಚರ್ಚೆಯು ಬೌದ್ಧಿಕ ಕುಸ್ತಿ, ಇಲ್ಲಿ ಅಂತರಂಗ-ಬಹಿರಂಗ ಸುದ್ಧಿಗೆ ಸಾಧನ. ಅಲ್ಲಿ ತಾರ್ಕಿಕ, ಕೂದಲು ಸೀಳುವ ವಿಶ್ಲೇಷಣೆ, ಇಲ್ಲಿ ತತ್ವವನ್ನು ತಿಳಿದು ಆನಂದಿಸುವ ಪ್ರಯತ್ನ. ಅಲ್ಲಿ ಸಮಸ್ಯೆ ತಿಳಿಯಲು ಚರ್ಚೆ; ಇಲ್ಲಿ ಸಮಸ್ಯೆಗೆ ಪರಿಹಾರ ನೀಡಲು ಚರ್ಚೆ. ಅರಿಸ್ಟಾಟಲ್, ಸೋಕ್ರಟೀಸ್, ಪ್ಲೇಟೋ ಮುಂತಾದವರು ಬೇರೆ ಬೇರೆ ಪರಿಕಲ್ಪನೆ (Concept)ಗಳನ್ನು ತಿಳಿಸಲು ಚರ್ಚಿಸಿ ಪುಸ್ತಕ ಬರೆದು ಹೋದರು. ಶರಣರು ಒಂದು ಆದರ್ಶ ಸಮಾಜ ಕಟ್ಟಿ, ಸಾಹಿತ್ಯವನ್ನು ಬಿಟ್ಟು ಹೋದರು.
ಪ್ರಜಾಪ್ರಭುತ್ವದ ಜೀವಾಳ ಪಾರ್ಲಿಮೆಂಟು; ಇದರ ಜೀವಾಳ ವಿಚಾರ, ವಾಕ್, ಆಚಾರ ಸ್ವಾತಂತ್ರ್ಯ. ಸಮುದಾಯಿಕ ಚಿಂತನೆ ಲೋಕಸಭೆಯ ವಿಶೇಷ. ಈ ಎರಡೂ ಅಂಶಗಳಲ್ಲಿ ಅನುಭವ ಮಂಟಪ ಲೋಕಸಭೆಯನ್ನು ಹೋಲುತ್ತದೆ. ಪ್ರತಿಯೊಬ್ಬ ಶರಣ ಸದಸ್ಯನಿಗೂ ವಿಚಾರ ಸ್ವಾತಂತ್ರ್ಯವಿತ್ತು; ತನಗೆ ಸರಿಕಂಡುದನ್ನು ಪ್ರತಿಪಾದಿಸುವ ವಾಕ್ ಸ್ವಾತಂತ್ರ್ಯವಿತ್ತು ಮತ್ತು ತನಗೆ ಸಮ್ಮತವಾದ ಆಚಾರವನ್ನು ಅಳವಡಿಸಿಕೊಳ್ಳಲವಕಾಶವಿದ್ದಿತು. ಶರಣರು ಧಾರ್ಮಿಕ, ಸಾಮಾಜಿಕ, ಆರ್ಥಿಕ ಸಮಸ್ಯೆಗಳೆಲ್ಲವನ್ನು ಮುಕ್ತಮನದಿಂದ ಚರ್ಚಿಸುತ್ತಿದ್ದರು. ಆದರೆ ಲೋಕಸಭಾ ಸದಸ್ಯರಿಗೆ ಭಿನ್ನವೆಂಬಂತೆ ತಾವು ನಂಬಿದ್ದನ್ನು; ಆಡಿದ್ದನ್ನು ಬದುಕಿನಲ್ಲಿ ಆಳವಡಿಸಿಕೊಂಡಿದ್ದರು; ಸಚ್ಚಾರಿತ್ರವಂತರಾಗಿದ್ದರು. ಉತ್ತಮ ನಡೆ-ನುಡಿಗಳನ್ನು ಸಂಗಮಿಸಿಕೊಂಡು, ಅತ್ಮಾನುಭವಿಗಳಾಗಿದ್ದರು, ದಾರ್ಶನಿಕರಾಗಿದ್ದರು. ಹೀಗಾಗಿ ಅನುಭವ ಮಂಟಪವು ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಅಗಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನುಭವ ಮಂಟಪವನ್ನು ವಿಶ್ವಸಂಸ್ಥೆ (UNO)ಗೂ ಹೋಲಿಸಬಹುದು, ಲೋಕಸಭೆ ತನ್ನ ದೇಶದ ಸಮಸ್ಯೆ, ಆಗು ಹೋಗುಗಳನ್ನು ಕುರಿತು ಚಿಂತನೆ ಮಾಡಿದರೆ ವಿಶ್ವರಾಷ್ಟ್ರ ಸಂಸ್ಥೆ ಮಾನವ ಜನಾಂಗದ ಆಗು ಹೋಗು, ಸಮಸ್ಯೆಗಳನ್ನು ಚಿಂತಿಸುತ್ತದೆ. ಹಾಗೆ ಅನುಭವ ಮಂಟಪದ ಚರ್ಚೆ ಒಂದು ಜಾತಿ ಒಂದು ಮತ ಒಂದು ಪಂಥಕ್ಕೆ ಸೀಮಿತವಾಗಿ ಸಾಗದೆ ಮಾನವ ಜನಾಂಗದ ಸಮಸ್ಯೆಗಳನ್ನು ಕುರಿತು, ಚಿಂತಿಸಿದುದನ್ನು ಶೂನ್ಯ ಸಂಪಾದನೆಯಲ್ಲಿ ಕಾಣುತ್ತೇವೆ.
ಷಟಸ್ಥಲ ಬಸವಣ್ಣನವರು ಅನ್ವೇಷಿತ ಶರಣರ ಕೊಡುಗೆ.
————————————————————————-
ಹುಟ್ಟಿನಿಂದ ಲಿಂಗಾಯತನಾದವನೇ ಆಗಲಿ, ಭವಿತನಕ್ಕೆ ಹೇಸಿ ಲಿಂಗವನ್ನು ಆಯತ ಮಾಡಿಕೊಂಡವನೇ ಆಗಲಿ, ತನ್ನ ಸಾಧನೆಯ ಮೊದಲನೆಯ ದಿನವೇ ಗುರಿ ಮುಟ್ಟಲಾರ. ಅವನು ಗುರಿ ಮುಟ್ಟಲು ದೀರ್ಘ, ಸತತ ಮತ್ತು ಶ್ರಮದಾಯಕ ಪ್ರಯತ್ನ ಮಾಡಬೇಕು. ವಚನಕಾರರು ಆಧ್ಯಾತ್ಮಿಕ ಸಾಧನೆಯಲ್ಲಿ ಆರು ಸ್ಥಲ ಅಥವಾ ಲಕ್ಷಣಗಳನ್ನು ಗುರುತಿಸಿದ್ದಾರೆ. ಷಟ್ಸ್ಥಲ ಎಂದು ಪರಿಭಾಷೆಯಲ್ಲಿ ಕರೆಯಲಾಗುವ ಅವುಗಳನ್ನುಳ್ಳ ಸಾಧಕನನ್ನು ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂದು ಅನುಕ್ರಮವಾಗಿ ಕರೆಯಲಾಗುವುದು. ಮೊದಲು ಭಕ್ತನೆನಿಸಿಕೊಂಡು, ಕ್ರಮೇಣ ಆಧ್ಯಾತ್ಮಿಕ ಸಾಧನೆಯ ಮೂಲಕ ಐಕ್ಯನೆನಿಕೊಳ್ಳುತ್ತಾನೆ. ಅವನು ಐಕ್ಯನಾಗಿದ್ದಾನೆ ಎನ್ನುವುದೂ ಒಂದೇ, ಆಧ್ಯಾತ್ಮಿಕ ಜೀವನದ ಧೈಯವಾದ ಲಿಂಗಾಂಗ ಸಾಮರಸ್ಯವನ್ನು (ಮೋಕ್ಷವನ್ನು) ಸಾಧಿಸಿಕೊಂಡಿದ್ದಾನೆ ಎನ್ನುವುದೂ ಒಂದೇ.
ಷಟ್ಸ್ಥಲ ಪದದಲ್ಲಿ “ಷಟ್” ಅಂದರೆ ಆರು “ಸ್ಥಲ” ಅಂದರೆ ಹಂತ. ಭವಿಯು (ಮಾನವ) ತನ್ನ ಹುಟ್ಟು ಸಾವುಗಳೆಂಬ ಭವಚಕ್ರವನ್ನು ಭೇದಿಸಿ ದೇವರಲ್ಲಿ ಒಂದಾಗಲು 12 ನೇ ಶತಮಾನದ ಶರಣರು ಆಚರಿಸಿ ಸೂಚಿಸಿದ ಆರು ಹಂತಗಳ ಪಥವೇ “ಷಟ್ಸ್ಥಲ”.
ಭಕ್ತ
ಮಹೇಶ
ಪ್ರಸಾದಿ
ಪ್ರಾಣಲಿಂಗಿ
ಶರಣ
ಐಕ್ಯ
ಆರ್ಥಿಕ ವಿಕೇಂದ್ರೀಕರಣ ಮತ್ತು ಸಂಪತ್ತು ಸಂಗ್ರಹ ಶೇಖರಣೆ ವಿರೋಧ
————————————————————————————–
ಶರಣರು ಹಾಸಿ ದುಡಿದು ಹಂಚಿ ತಿಂದರು, ತನಗೆ ಬೇಕಾದಷ್ಟು ಹಣ ಧನ ಕಾಳು ಮಾತ್ರ ಇಟ್ಟು ಕೊಂಡು ಉಳಿದ ಆದಾಯದ ಸಮಾಜದ ಅಭಿವೃದ್ಧಿಗೆ ಮರಳಿ ನೀಡುವ ದಾಸೋಹ ಪದ್ದತಿಯು ಸಾರ್ವಕಾಲಿಕ ಅನುಪಮವಾದದ್ದು. ಕಾಗೆಯೊಂದಗಳ ಕಂಡರೆ ಕರೆಯದೆ ತನ್ನ ಬಳಗವನ್ನು , ಸ್ವಾರ್ಥ ವಿಮೋಚನೆ ಸಾಂಘಿಕ ಬದುಕು ಶರಣರು ಕಲಿಸಿ ಕೊಟ್ಟ ದಿವ್ಯ ಸಂದೇಶವಾಗಿದೆ , ದಾಸೋಹ ಸೂತ್ರವೆಂಬ ಆರ್ಥಿಕ ವಿಕೇಂದ್ರೀಕರಣವನ್ನು ಪ್ರತಿಪಾದಿಸಿ ಅನುಷ್ಟಾನಗೊಳಿಸಿದರು ಕಲ್ಯಾಣ ಶರಣರು. ಇದಕ್ಕೆ ಪೂರಕವಾಗಿ ಸಂಪತ್ತು ಶೇಖರಣೆಯ ವಿರುದ್ಧ ಸಮರ ಸಾರಿದರು. ಇದಕ್ಕೆ ದಿಟ್ಟ ಪ್ರೇರಣೆ ಬಸವಣ್ಣ , ಕಲ್ಯಾಣದಲ್ಲಿ ಆಯ್ದಕ್ಕಿ ಮಾರಯ್ಯ ಒಮ್ಮೆ ಹೆಚ್ಚಿನ ಅಕ್ಕಿಯನ್ನು ತಂದಾಗ ” ಆಸೆಯೇನೆಂಬುದು ಅರಸಿಂಗಲ್ಲದೆ ಶಿವ ಭಕ್ತರಿಗುಂಟೆ ಮಾರಯ್ಯ , ಈಸಕ್ಕಿಯಾಸೆ ನಿನಗೇತಕ್ಕೆ ಮಾರಯ್ಯನೋಪ್ಪ ಅಮರೇಶ್ವರ ಲಿಂಗಕ್ಕೆ ದೂರು ” ಎಂದು ಎಚ್ಚರಿಸುವುದಲ್ಲದೆ ,ಮಾಡಿ ನೀಡಿ ಹೋದಿಹೆನೆಂದರೆ ಕೈಲಾಸವೇನು ಕೈ ಕೂಲಿಯೇ ” ? ಎಂದು ಇಡೀ ಕೈಲಾಸದ ಪರಿಕಲ್ಪನೆಯ ನಂಬಿಕೆಯನ್ನು ಟೀಕಿಸಿದ್ದಾಳೆ.
ಯಾವುದೇ ಪಶು ಪಕ್ಷಿ ಕೀಟ ಪ್ರಾಣಿಗಳಿಗಿರದ ಸಂಗ್ರಹದ ಬುದ್ಧಿ ಮನುಷ್ಯನಿಗೇಕೆ ಎನ್ನುತ್ತಾರೆ ಬಸವಣ್ಣನವರು
ಮುಹೂರ್ತ ಪಂಚಾಗ ಜ್ಯೋತಿಷ್ಯ ರಾಮಲು ವಿದ್ಯೆ ಮಾಟ ವಿರೋಧಿಸಿದರು ಬಸವಣ್ಣ
————————————————————————————————————–
ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆ
ತಪ್ಪಿತ್ತು ಗಣಪದವಿ, ಲಿಂಗಕ್ಕೆ ದೂರ.
ಒಬ್ಬರಿಗಾಳಾಗಿ, ಒಬ್ಬರನೋಲೈಸುವ
ನಿರ್ಬುದ್ಧಿಮನುಜರನೇನೆಂಬೆ,
ಕೂಡಲಸಂಗಮದೇವಾ !
ಒಳ್ಳೆಯ ಕಾರ್ಯವನ್ನು ಮಾಡುವಾಗ ಮುಹೂರ್ತ ಗಳಿಗೆ ಸಮಯ ನೋಡುವವರಿಗೆ ಚಾಟಿ ಏಟು ಬೀಸುವ ಬಸವಣ್ಣ , ಅಷ್ಟಮಿ, ನವಮಿ, ಸಂಕಷ್ಟಿ, ನಕ್ಷತ್ರ, ತಿಥಿ, ವಾರ ಎಂದು ವಿಚಾರಿಸುವವರನ್ನು ತರಾಟೆಗೆ ತೆಗೆದುಕೊಳ್ಳುವ ಬಸವಣ್ಣ ಇಂತಹ ದ್ವಂದ್ವ ಮನಸ್ಸಿನ ಕಾರ್ಯದಿಂದ ಗಣಪದವಿ ಮಹತ್ತರ ಹುದ್ದೆ ತಪ್ಪುವುದು, ಲಿಂಗಕ್ಕೆ ದೂರು ಜಂಗಮಕ್ಕೆ ದೂರು ಒಬ್ಬರಿಗೆ ಆಳಾಗಿ ಇದ್ದು ಇನ್ನೊಬ್ಬರನ್ನು ಓಲೈಸುವ ನಿರ್ಬುದ್ಧಿಯ ಮನುಜರನ್ನು ನಂಬುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾಳೆ ಬರುವುದು ನಮಗಿಂದೇ ಬರಲಿ ,ಇಂದು ಬರುವುದು ನಮಗೀಗಲೇ ಬರಲಿ ಇದಕ್ಕಾರಂಜುವರು ಇದಕ್ಕಾರು ಅಳಕುವರು ಎಂದು ಪ್ರಶ್ನಿಸುತ್ತಾನೆ ಬಸವಣ್ಣ.
ಬಸವಣ್ಣನವರ ಐಕ್ಯದ ಕುರಿತು ಹಲವು ಊಹಾಪೋಹಗಳು .
—————————————————————————-
ಶರಣರ ಬಾಳು ಮರಣದಲ್ಲಿ ಕಾಣು ಎಂಬ ಗಾದೆಯಂತೆ .ಶರಣರು ಹುಟ್ಟು ಸಾವನ್ನು ಅತ್ಯಂತ ಸಹಜವಾಗಿ ಕಂಡಿದ್ದರು.ಶರಣರಿಗೆ ಸಾವಿಲ್ಲ ಶರಣರು ಸಾವನ್ನು ಅರಿಯರು. ಕಲ್ಯಾಣ ಕ್ರಾಂತಿಯ ನಂತರ ಶರಣರು ಬೇರೆ ಬೇರೆ ಪ್ರದೇಶಗಳಿಗೆ ಚದುರಿದರು. ಅವರ ಭೌತಿಕ ದೇಹದ ಮುಕ್ತಿಗಾಗಿ ಹಲವಾರು ಹಲವು ಬಗೆಯ ಸಮಾಧಿಯನ್ನು ಬಯಸಿದ್ದರು. ಕೆಲವರು ಭೂ ಸಮಾಧಿ ಕೆಲವರು ಜಲ ಸಮಾಧಿ ಇನ್ನು ಕೆಲವರು ಬಯಲು ಸಮಾಧಿಯನ್ನು ಅರಸಿದ್ದರು.ಇದರಲ್ಲಿ ಕೊನೆಗಳಿಗೆಯ ಹಠಾತ್ ಯುದ್ಧ ಹಿಂಸೆ ವಿಪ್ಲವದಿಂದ ಶರಣರು ಕಂಗೆಟ್ಟಿದ್ದರು. ಬಸವಣ್ಣ ನೀಲಾಂಬಿಕೆ ಹಡಪದ ಅಪ್ಪಣ್ಣ ,ಗಂಗಾಂಬಿಕೆ ಇವರು ಜಲಸಮಾಧಿಯನ್ನು ಅರಸಿದರು. ಅಕ್ಕನಾಗಮ್ಮ ಚೆನ್ನಬಸವಣ್ಣ ಮಾಚಿದೇವ ಕಲ್ಯಾಣಮ್ಮ ಕಕ್ಕಯ್ಯ ನುಲಿಯ ಚೆಂದಯ್ಯ ಮುಂತಾದ ಶರಣರು ಭೂ ಸಮಾಧಿಯನ್ನು ಬಯಸಿದ್ದರು .ಅಲ್ಲಮ ಅಕ್ಕ ಮಹಾದೇವಿ ಮುಂತಾದ ಕೆಲವೇ ಕೆಲ ಶರಣರು ಬಯಲು ಸಮಾಧಿಯನ್ನು ಹೊಂದಿದರು. ಜಲ ಸಮಾಧಿಯೆಂದಾಕ್ಷಣ ಅದು ಬಸವಣ್ಣನವರ ಆತ್ಮ ಹತ್ಯೆಯೇ ? ಇನ್ನು ಕೆಲ ಸಾಹಿತಿಗಳು ಬಸವಣ್ಣನವರ ಕೊಲೆ ಎಂದು ನಿರೂಪಿಸಲು ಯತ್ನಿಸಿದ್ದಾರೆ.ಅವು ಸತ್ಯಕ್ಕೆ ದೂರವಾದ ಸಂಗತಿಗಳು. ಐಕ್ಯವೆಂಬುದು ಮುಕ್ತಿ ಬಸವಣ್ಣನವರು ಯಾವುದಕ್ಕೂ ವಿಚಲಿತರಾಗದ ಸಹಜ ಶಿವಯೋಗ ಬದುಕನ್ನು ಕಂಡವರು. ಬದುಕಿನ ಒಳ ಹಾಗು ಹೊರ ಪಯಣದಲ್ಲಿ ತೃಪ್ತ ಭಾವವ ಕಂಡವರು. ಆದರೆ ಸಮತೆಯ ಸಾಮ್ರಾಜ್ಯವನ್ನೇ ಕಟ್ಟಿ ಸದಾ ಮನುಕುಲದ ಏಳ್ಗೆ ಯನ್ನು ಬಯಸಿದ್ದ ಬಸವಣ್ಣನವರ ಕನಸು ನುಚ್ಚು ನೂರಾಗಿದ್ದು ಜಾತಿಕರ್ಮಠರ ಕುತಂತ್ರದಿಂದ ಬಿಜ್ಜಳನ ಪಲ್ಲಟಗೊಳಿಸುವ ತಂತ್ರಗಾರಿಕೆಯಿಂದ ಬಸವಣ್ಣನವರು ಕೈಕೊಂಡ ಹರಳಯ್ಯನವರ ಮಗ ಹಾಗು ಮಧುವರಸ ಲಾವಣ್ಯಳ ಕಲ್ಯಾಣ ಮಹೋತ್ಸವವನ್ನು ಏರ್ಪಡಿಸಿದ್ದನ್ನೇ ನೆಪ ಮಾಡಿ ದುರುಳ ಬಿಜ್ಜಳನಿಗೆ ಚಾಡಿ ಹೇಳಿ ಶರಣರನ್ನು ಹತ್ಯೆ ಗೈಯಲು ಸಂಚು ರೂಪಿಸಿದರು. ಕಲ್ಯಾಣವು ಕಟುಕರ ಕೇರಿಯಾಗಿದ್ದನ್ನು ಕೇಳಿ ಮುಮ್ಮಲ ಮರಗಿದರು. ಶರಣರ ಅನುಭಾವದ ಸುಗ್ಗಿಯನ್ನು ಬಸವಣ್ಣ ತಮ್ಮ ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ
ಬಿತ್ತು ಬೆಳೆಯಿತ್ತು ,ಕೆಯ ಕೊಯಿತ್ತು
ಮುರಿಯಿತ್ತು ಕುತ್ತುರಿಯೊಟ್ಟಿತ್ತು ,ಅಳೆಯಿತ್ತು ತುಂಬಿತ್ತು
ಕೂಡಲ ಸಂಗಮದೇವಯ್ಯಾ ಮೇಟಿ ಕಿತ್ತಿತ್ತು (ಕಣಜ ) ಹಾಳಾಯಿತ್ತಯ್ಯಾ .
ಬಿತ್ತಿದ್ದನ್ನು ಬೆಳೆದೆವು ಬೆಳೆದ ಫಲ ತೆನೆ ಕೊಯ್ದೆವು ,ಮುರಿದ ತೆನೆ ಕೂಡಿ ಹಾಕಿದೆವು ,ಇಲ್ಲಿ ವಚನಗಳ ರಾಶಿಯ ಬಗ್ಗೆ ಸಾಂಕೇತಿಕವಾಗಿ ಹೇಳುತ್ತಾರೆ ಬಸವಣ್ಣ .ಕೂಡಿಟ್ಟ ಕಾಳುಗಳನ್ನು ಅಳೆದೆನು ಬಳ್ಳದಿಂದ ತುಂಬಿದೆವು ಗೋಣಿಯ ಚೀಲವ ,ಆದರೆ ಕೂಡಲ ಸಂಗಮದೇವಯ್ಯ ಕಣದಲ್ಲಿ ಹೂಡಿದ್ದ ಮೇಟಿ ಮುರಿಯಿತ್ತು ಕಣಜ ಹಾಳಾಯಿತ್ತು ಎಂದು ತಮ್ಮ ನೋವನ್ನು ಮಾತ್ರ ತೋಡಿಕೊಂಡರು.ಶರಣರ ವೈಚಾರಿಕ ಕ್ರಾಂತಿಯ ಫಲವಾಗಿ ಬಹು ದೊಡ್ಡ ಸಂಖ್ಯೆಯಲ್ಲಿ ವಚನಗಳ ರಚನೆ ಮಾಡಿ ಅವುಗಳನ್ನು ಮುಂದಿನ ಜನಾಂಗಕ್ಕೆ ನೀಡಬೇಕೆನ್ನುವ ಅವರ ಕನಸು ಛಿದ್ರಗೊಳ್ಳ ಹತ್ತಿತು .ಹಡಪದ ಅಪ್ಪಣ್ಣನವರ ಮುಂದೆ ವಚನಗಳ ರಕ್ಷಣೆಗೆ ಸೂಚನೆ ನೀಡಿ ವಿಚಾರ ಪತ್ನಿಯಾದ ನೀಲಾಂಬಿಕೆಯವರನ್ನು ಕರೆ ತರಲು ಹೇಳಿದರು. ನೀಲಮ್ಮ ಹಡಪದ ಅಪ್ಪಣ್ಣ ಕೂಡಲ ಸಂಗಮಕ್ಕೆ ಬರುವ ಮುನ್ನವೇ ಬಸವಣ್ಣನವರು ಐಕ್ಯವಾದರು .
ತನುವ ನೋಯಿಸಿ ಮನ ಬಳಲಿಸಿ
ನಿಮ್ಮ ಪದವಿಡಿದವರೊಳರೆ ? ಈ ನುಡಿ ಸುಡುಹಿಡುದೇ?
ಕೂಡಲ ಸಂಗಮದೇವಾ
ಶಿವ ಭಕ್ತರ ನೋವೇ ಅದು ಲಿಂಗದ ನೋವು.
ಎಂದು ಲಿಂಗಪ್ರೇಮಿ ಜಂಗಮ ಸಾಧಕ ಬಸವಣ್ಣ ತಾನು ಮರ್ತ್ಯಲೋಕದಲ್ಲಿ ಮಾಡಿದ ಕಾರ್ಯವು ಮುಗಿಯಿತು “ಬೆಟ್ಟಕ್ಕೆಬೆಳ್ಳ ಬೊಗಳಿದರೇನು ಕರೆದು ಕೋ ಸಂಗಮನಾಥ ಕರೆದುಕೊ ” ಸೈದ್ಧಾಂತಿಕ ಬೆಟ್ಟಕ್ಕೆ ನಾಯಿ ಬೊಗಳಿದರೇನು ಎಂದು ನಿಶ್ಚಲ ಮನಸ್ಸಿನಿಂದ ಯೋಗ ಮರಣವನ್ನು ಸ್ವೀಕರಿಸಿ ಕೂಡಲ ಸಂಗಮದಲ್ಲಿ ಬಯಲೊಳಗೆ ಬಯಲಾದರು ಬಸವಣ್ಣನವರು. ಬಸವಣ್ಣ ಕಲ್ಯಾಣದ ಕೇಂದ್ರ ಬಿಂದು ಬಸವಾಕ್ಷರ ಮಂತ್ರವಾಯಿತು . ಬಸವ ಶಕ್ತಿ ಪರುಷವಾಯಿತು ನಿತ್ಯ ನೆನುವಿನ ಅರಿವಾದನು ಬಸವಣ್ಣ .
ಇದನ್ನು ಮಡಿವಾಳ ಮಾಚಿದೇವರು ಹೀಗೆ ಹೇಳಿದ್ದಾರೆ.
ಬಸವಣ್ಣನ ನೆನೆದೆನ್ನ ತನು ಬಯಲಾಯಿತ್ತು.
ಬಸವಣ್ಣನ ನೆನೆದೆನ್ನ ಮನ ಬಯಲಾಯಿತ್ತು.
ಬಸವಣ್ಣನ ನೆನೆದೆನ್ನ ಭಾವ ಬಯಲಾಯಿತ್ತು.
ಕಲಿದೇವಯ್ಯ ನಿಮ್ಮ ಶರಣ, ಮಹಾಮಹಿಮ ಸಂಗನಬಸವಣ್ಣನ ನೆನೆನೆನೆದು,
ಎನ್ನ ಸರ್ವಾಂಗ ಲಿಂಗವಾಯಿತ್ತೆಂದರಿದೆನಯ್ಯಾ.
ಅಲ್ಲಮರು” ಮಹಾ ಮಣಿಹ ಸಂಗನ ಬಸವ ಎನಗೆಯು ಗುರು ನಿನಗೂ ಗುರು ಜಗಕ್ಕೆಲ್ಲ ಗುರು ಕಾಣ ಗುಹೇಶ್ವರ ” ಎಂದಿದ್ದಾರೆ .
ಅಕ್ಕ ಮಹಾದೇವಿ “ದೇವಲೋಕಕ್ಕೂ ಬಸವಣ್ಣನೇ ದೇವರು ಮರ್ತ್ಯಲೋಕಕ್ಕೂ ಬಸವಣ್ಣನೇ ದೇವರು ,ಪಾತಾಳಲೋಕಕ್ಕೂ ಬಸವಣ್ಣನೇ ದೇವರು ನಿನಗೂ ಎನಗೂ ನಮ್ಮ ಬಸವಣ್ಣನೇ ದೇವರು ಚೆನ್ನ ಮಲ್ಲಿಕಾರ್ಜುನ “ಎಂದಿದ್ದಾಳೆ.
ಬಸವಣ್ಣ ಮೊದಲಾದ ಮಹಾಭಕ್ತರೆಲ್ಲರೂ ಕಂಡರಯ್ಯಾ.
ಮಹಾ ಕೈಲಾಸವೆಂಬ ಬೆಳ್ಳಿಯ ಬೆಟ್ಟವನೇರಿ,
ಒಳ್ಳೆಯ ಪದದಲ್ಲಿ ತಲ್ಲೀಯರಾದಿಹೆವೆಂದು, ಬಲ್ಲತನವ ಮಚ್ಚಿ ಇರಲಾಗಿ,
ಆ ಬೆಳ್ಳಿಯ ಬೆಟ್ಟ ಕಲ್ಲೋಲವಾಗಲಾಗಿ,
ಅಲ್ಲಿರ್ದವರನೆಲ್ಲಿಯೂ ಕಾಣೆ. ಇವರಿಗಿನ್ನೆಲ್ಲಿಯ ಮುಕ್ತಿ ?
ಜಲ್ಲೆಯನಡರ್ದು ಎಲ್ಲೆಯ ಪಾಯಿಸುವನಂತೆ,
ಇವರೆಲ್ಲರೂ ಬಲ್ಲಹರೆ, ಬಲ್ಲಹ ಚೆನ್ನಬಸವಣ್ಣನಲ್ಲದೆ ?
ಇವರೆಲ್ಲರನೊಲ್ಲೆನೆಂದೆ,
ಬಲ್ಲರ ಬಲ್ಲಹನೆ ನಿಃಕಳಂಕ ಮಲ್ಲಿಕಾರ್ಜುನಾ.
ಕಲ್ಯಾಣವು ಅರುಹಿನ ಮಹಾಮನೆಯಾಯಿತು ಅಲ್ಲಿ ಅಸಂಖ್ಯಾತ ಶರಣರು ಅನುಭಾವಿಗಳು ಕೈಲಾಸವೆಂಬ ಬೆಳ್ಳಿಯ ಬೆಟ್ಟವನ್ನು ಕಂಡರು, ಅನುಭವದ ತುತ್ತ ತುದಿಯಲ್ಲಿ ತಮ್ಮ ಪಾರಮಾರ್ಥಿಕ ಸಂತಸವನ್ನು ಆನಂದವನ್ನುಅನುಭವಿಸುವಾಗ ಬೆಟ್ಟ ಅಲುಗಾಡಿತ್ತು ,ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು ,ಬಿಜ್ಜಳನ ಮಗ ಸೋವಿದೇವ ಅರಾಜಕತೆ ಉಂಟು ಮಾಡಿದನು .ಜನರು ಶರಣರು ಚದುರಿದರು ಕಲ್ಯಾಣದಲ್ಲಿ ಯಾರನ್ನು ಕಾಣಲಾಗಲಿಲ್ಲ ,ಕೊನೆಗೆ ಚೆನ್ನ ಬಸವಣ್ಣ ಸಾರಥ್ಯ ವಹಿಸಿ ಅನುಭವದ ಬೀಜಗಳನ್ನುವಚನಗಳನ್ನು ಕಾಯ್ದಿಟ್ಟು ಕೆಲವೇ ಕೆಲ ಶರಣರೊಂದಿಗೆ ದುರ್ಗಮ ಕಾಡಿನೊಳಗೆ ಪ್ರಯಾಣ ಬೆಳೆಸಿ ಬೇರೆ ಬೇರೆ ಕಡೆಗೆ ಅವುಗಳ ರಕ್ಷಣೆಗೈದರು ಶರಣರು ಕಲ್ಯಾಣದ ರಕ್ತ ಸಿಕ್ತ ನೋವನ್ನು ಹೊರ ಹಾಕಿದ್ದಾರೆ ಎಂದು ಮೋಳಿಗೆ ಮಾರಯ್ಯ ತಮ್ಮ ಅಳಲನ್ನು ತೋಡಿಕೊಂಡಿದ್ದಾನೆ. .
ಬಸವಣ್ಣನವರ ಪತ್ನಿ ನೀಲಾಂಬಿಕೆಯಂತೂ ತನ್ನನ್ನು ಮಾಂಸ ಶರೀರದಿಂದ ಮಂತ್ರ ಶರೀರವನ್ನು ಮಾಡಿದರು ಬಸವಣ್ಣ ಎಂದಿದ್ದಾಳೆ.
ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು.
ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು.
ವ್ರತವಳಿದ ಪ್ರಪಂಚಿ ಎಂದರೆನ್ನ ಎಮ್ಮಯ್ಯನವರು.
ಸಂಸಾರ ಬಂಧವ ಹರಿದು ನಿಃಸಂಸಾರಿಯಾದೆನಯ್ಯ.
ಸಂಗಯ್ಯ, ಎಮ್ಮಯ್ಯನವರ ಕರುಣದಿಂದ ಆನು ಪರಮಪ್ರಸಾದಿಯಾದೆನಯ್ಯ.
ನೀಲಮ್ಮಳು ಬದುಕಿನ ಸಾರ್ಥಕತೆಯು ಬಸವಣ್ಣನವರಿಂದ ಪೂರ್ಣಗೊಂಡಿತು ಎನ್ನುವ ತೃಪ್ತ ಭಾವ ಕಾಣುತ್ತೇವೆ.
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಭಕ್ತಿಯ.
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಜ್ಞಾನವ.
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ವೈರಾಗ್ಯವ.
ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ,
ನಿಮಗೂ ಎನಗೂ ಬಸವಣ್ಣನೆ ಶಿವಪಥಿಕನಯ್ಯಾ.
ಸಿದ್ಧರಾಮ ಶರಣರು ಬಸವಣ್ಣನವರಿಂದ ಭಕ್ತಿಯ ಕಂಡೆನು ಜ್ಞಾನವನ್ನು ಅರಿದೆನು ವೈರಾಗ್ಯವ ಅನುಭವಿಸಿದೆನು ಅಷ್ಟೇ ಅಲ್ಲ ಕರುಣಿ ಕಪಿಲ ಸಿದ್ಧಮಲ್ಲಿನಾಥನನ್ನು ಬಸವಣ್ಣನಲ್ಲಿ ಕಂಡೆನು ,ಬಸವಣ್ಣ ತನಗೂ ಕಪಿಲ ಸಿದ್ಧ ಮಲ್ಲಿನಾಥನಿಗೂ ಶಿವ ಪಥಿಕನಯ್ಯಾ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಚೆನ್ನಬಸವಣ್ಣ ತಮ್ಮ ಗುರು ಬಸವಣ್ಣನವರ ಬಗ್ಗೆ ಅಭಿಮಾನದ ಮಾತಗಳನ್ನಾಡುತ್ತಾ ಜಂಗಮ ಸಾಧಕ ಬಸವಣ್ಣ ಸ್ವಯಮ ಲಿಂಗವಾದನು ಎಂದಿದ್ದಾರೆ.
ಬಸವಣ್ಣನ ಶೃಂಗದಲ್ಲಿ ತುಂಬುರ ನಾರದರು,
ಬಸವಣ್ಣನ ಲಲಾಟದಲ್ಲಿ ವೀರಗಣಂಗಳು,
ಬಸವಣ್ಣನ ನಯನದಲ್ಲಿ ಸೂರ್ಯಚಂದ್ರರು,
ಬಸವಣ್ಣನ ಕರ್ಣದಲ್ಲಿ ಗಂಗೆವಾಳುಕಸಮರುದ್ರರು,
ಬಸವಣ್ಣನ ನಾಸಿಕದಲ್ಲಿ ವಾಯು, ಬಸವಣ್ಣನ ದಂತದಲ್ಲಿ
ಭೃಂಗೀಶ್ವರದೇವರು,
ಬಸವಣ್ಣನ ಕೊರಳಲ್ಲಿ ಈರೇಳು ಭುವನಂಗಳು,
ಬಸವಣ್ಣನ ಅಂಡದಲ್ಲಿ ಅಷ್ಟಷಷ್ಟಿ ತೀರ್ಥಂಗಳು,
ಬಸವಣ್ಣನ ಬಲದೊಡೆಯಲ್ಲಿ ಅಜ, ಹರಿ, ಸರಸ್ವತಿ, ಪಂಚನದಿ, ಮಹಾಗಂಗೆ,
ಬಸವಣ್ಣನ ಮಣಿಪಾದದಲ್ಲಿ ದೇವಲೋಕದ ದೇವಗಣಂಗಳು,
ಬಸವಣ್ಣನ ಕಿರುಗೊಳಗಿನಲ್ಲಿ ಸಮಸ್ತಸಮುದ್ರಂಗಳು.
ಈ ಸಪ್ತಸಮುದ್ರಂಗಳೊಳಗಿಹ ಸಕಲಪ್ರಾಣಿಗಳಿಗೆ ಸಂಕೀರ್ಣತೆಯಾದೀತೆಂದು,
ಬಾಲದಂಡದಲೆತ್ತಿ ತಡಿಗೆ ಸೇರಿಸಿದನು ನಮ್ಮ ಬಸವಣ್ಣನು-ಇದು ಕಾರಣ,
ನಾಗಲೋಕದ ನಾಗಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.
ಮತ್ರ್ಯಲೋಕದ ಮಹಾಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.
ದೇವಲೋಕದ ದೇವಗಣಂಗಳ ಕೊಂಬುದು ಬಸವಣ್ಣನ ಪ್ರಸಾದ.
ರುದ್ರಲೋಕದ ರುದ್ರಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.-
ಇಂತು ನಮ್ಮ ಬಸವಣ್ಣನ ಪ್ರಸಾದವನುಂಡುಟ್ಟು ಕೊಂಡು ಕೊಟ್ಟು
ಅನ್ಯದೈವಂಗಳ ಹೊಗಳುವ ಕುನ್ನಿಗಳನೇನೆಂಬೆ
ಕೂಡಲಚೆನ್ನಸಂಗಮದೇವಾ.
ಸಮಗ್ರ ಪರಿಪೂರ್ಣ ಧಾರ್ಮಿಕ ಮೌಲ್ಯಗಳನ್ನು ಸ್ಥಾಪಿಸಿದ ಬಸವಣ್ಣ ದೇವಲೋಕ ಮರ್ತ್ಯಲೋಕ ನಾಗಲೋಕ ಹೀಗೆ ಎಲ್ಲರಿಗು ಅರುಹಿನ ಪ್ರಸಾದವನ್ನಿತ್ತ ಶ್ರೇಷ್ಠ ಚಿಂತಕ .ಇಂತಹ ಮಹಾಜ್ಞಾನಿ ಬಸವಣ್ಣನವರು ಕೊಟ್ಟ ಅರುಹಿನ ಮಾರ್ಗ ಬಿಟ್ಟು ಮತ್ತೆ ಅನ್ಯ ದೈವಗಳನ್ನು ಆರಾಧಿಸುವ ಕುನ್ನಿಗಳನ್ನು ನಾನು ನಂಬುವದಿಲ್ಲ ಎಂದಿದ್ದಾರೆ ಚೆನ್ನಬಸವಣ್ಣ . ಕಲ್ಯಾಣ ಕ್ರಾಂತಿಯು ಬಯಲು ಶೂನ್ಯ ನಿಷ್ಪತ್ತಿ ಎಂಬ ಪಾರಮಾರ್ಥಿಕ ಪದಗಳನ್ನು ಪ್ರಾಪಂಚಿಕ ಬದುಕಿನಲ್ಲಿ ಸಹಜದತ್ತವಾಗಿ ತೋರಿ ಆ ಬಯಲಿನಲ್ಲಿಯೇ ಬಯಲಾದರೂ ನಮ್ಮ ಕಲ್ಯಾಣ ನಾಡಿನ ಶರಣರು .
ಅವರ ಕೆಲ ವಚನಗಳ ವಿಶ್ಲೇಷಣೆ ಇಲ್ಲಿ ಮಾಡಲು ಇಚ್ಛಿಸಿದ್ದೇನೆ
ಹಾಡಿದಡೆನ್ನೊಡೆಯನ ಹಾಡುವೆ,
ಬೇಡಿದಡೆನ್ನೊಡೆಯನ ಬೇಡುವೆ,
ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ.
ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರಗೊಡ್ಡಿ ಬೇಡುವೆ.
ವಿಶ್ವಗುರು ಬಸವಣ್ಣನವರು
ವಿಶ್ವ ಗುರು ಕ್ರಾಂತಿ ಪುರುಷ ಬಸವಣ್ಣ ಭಾರತ ನೆಲದಲ್ಲಿ ಒಂದು ಅಭೂತ ಪೂರ್ವ ಕ್ರಾಂತಿ ಮಾಡಿದರು. ಹನ್ನೆರಡನೆಯ ಶತಮಾನದಲ್ಲಿ ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಮುಕ್ತ ಸಮ ಸಮಾಜದ ಕಟ್ಟುವ ಕನಸು ಕಂಡವನು ಬಸವಣ್ಣ. ಗುರು ಲಿಂಗ ಜಂಗಮ ಮತ್ತು ಸಮಷ್ಟಿಯ ಸಂಪೂರ್ಣ ಅಭಿವೃದ್ಧಿ ವಿಕಾಸ ಕಡೆಗೆ ಗಮನ ಹರಿಸಿ ಅರಿವೆ ಗುರು ಆಚಾರವೇ ಲಿಂಗ ಅನುಭಾವ ಜಂಗಮ ಎಂಬ ದಿಟ್ಟ ನಿರ್ಧಾರ ಕೈಗೊಂಡು ವ್ಯಕ್ತಿ ಕೇಂದ್ರಿತ ಧರ್ಮದ ಆಚರಣೆ ವಿರೋಧಿಸಿ ಸಮಷ್ಟಿಯ ಸಮಗ್ರ ಅಭಿವೃದ್ಧಿ ವಿಕಾಸ ಕಡೆಗೆ ಚಿಂತಿಸಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಮಹಾ ಘೋಷಣೆ ಮಂತ್ರವಾಯಿತು. ಬಸವಣ್ಣನಿಗೆ ಸಮಾಜ ಜಂಗಮವೆ ಮುಖ್ಯ . ಒಂದು ಅರ್ಥದಲ್ಲಿ ಜಂಗಮ ತನ್ನ ಲಿಂಗ ಒಡೆಯ ಎಂಬ ಅರ್ಥದಲ್ಲಿ ಹೇಳುವ ಪ್ರಾಮಾಣಿಕ ಭಾವಗಳ ಕಾರಣಿ ಪುರುಷ
ಹಾಡಿದಡೆನ್ನೊಡೆಯನ ಹಾಡುವೆ,
ಬಸವಣ್ಣ ಅಂದಿನ ಕಪೋಲ ಕಲ್ಪಿತ ದೇವರನ್ನು ಕಲ್ಲು ಮಣ್ಣು ಲೋಹದಿಂದ ಮಾಡಿದ ದೇವರನ್ನು ಸ್ತುತಿಸದೆ ತನಗೆ ಒಡೆಯನಾದ ಸಂಗಮನಾಥ ಎಂಬ ಜಂಗಮ ಚೈತನ್ಯದ ಬಗ್ಗೆ ಹಾಡುವೆ ಎಂದು ಹೇಳಿ ತನಗೆ ಸಮಾಜದ ರೂಪದಲ್ಲಿರುವ ಒಡೆಯ ದೇವರ ಬಗ್ಗೆ ಅತೀವ ಗೌರವ ನೀಡಿ ಅತ್ಯಂತ ಸಂತಸ ಸಂಭ್ರಮದಿಂದ ಹಾಡುವೆ ಎಂದು ಹೇಳಿದ್ದಾರೆ. ಇಲ್ಲಿ ಒಡೆಯ ಅಂದ್ರೆ ಸಮಾಜ. ಕಲ್ಯಾಣ ದೇವರಿಗೆ ಮೊರೆ ಹೋಗುವ ಪ್ರಸಂಗ ಬಂದರೆ ತಾವು ಸಮಾಜದ ಮೊರೆ ಹೋಗುವೆ .ಸಮಾಜದ ಘನತೆ ಕೀರ್ತಿಯ ಬಗ್ಗೆ ಹಾಡುವೆ ಗುಣ ಗಾನ ಮಾಡುವೆ ಎಂದಿದ್ದಾನೆ.
ಬೇಡಿದಡೆನ್ನೊಡೆಯನ ಬೇಡುವೆ,
ನನಗೆ ಏನಾದರೂ ಬೇಡುವದಿದ್ದರೆ ಅಂದ್ರೆ ಇಲ್ಲಿ ಭಿಕ್ಷೆ ಬೇಡುವ ಅರ್ಥದಲ್ಲಿ ತೆಗೆದುಕೊಳ್ಳದೆ ಕೆಲಸ ಕಾರ್ಯ ಮಾಡಲು ಸಮಾಜವನ್ನು ಕೇಳುವೆ ಎಂದು ಹೇಳಿ ಸಮಾಜ ತನ್ನ ಸಲುಹುವ ಹಿರಿತನ ಹೊಂದಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಬಸವಣ್ಣ. ನಾನು ಯಾರನ್ನೂ ಬೇಡುವದಿಲ್ಲ ಆದರೆ ಅಂತಹ ಪ್ರಸಂಗ ಬಂದರೆ ವಿಗ್ರಹಗಳ ರೂಪದಲ್ಲಿರುವ ಜಡ ದೇವರನ್ನು ಬೇಡುವದಿಲ್ಲ ಆದರೆ ಅದರ ಬದಲಾಗಿ ಜೈವಿಕ ವಿಕಾಸಕ್ಕೆ ಪೂರಕವಾಗುವ ಜಂಗಮ ರೂಪದ ಒಡೆಯನನ್ನು ಬೇಡುವೆ ಕೆಲಸ ಮಾಡುವ ಅವಕಾಶಕ್ಕಾಗಿ ಬೇಡುವೆ ಎಂದಿದ್ದಾರೆ ಬಸವಣ್ಣನವರು.
ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ.
ನನ್ನ ಒಡೆಯನಿಗೆ ತಾನು ಹೊರೆವ ಒಡಲ ಅಂದ್ರೆ ಹೊಟ್ಟೆ ಉಪ ಜೀವನಕ್ಕಾಗಿ ಸಮಾಜಕ್ಕೆ ಸಮುದಾಯಕ್ಕೇ ತನ್ನ ಹಸಿವು ನೀಗಿಸುವ ನಿಟ್ಟಿನಲ್ಲಿ ಕೆಲಸ ಕೊಡಲು ಮನವಿ ಮಾಡಿ ತನ್ನ ಬಡತನವನ್ನು ನಿರ್ಮೂಲನೆ ಮಾಡಲು ಬಿನ್ನೈಸುವೇ ಎಂದಿದ್ದಾರೆ.
ಇಲ್ಲಿ ಕರುಣೆ ಅಥವಾ ಕನಿಕರ ಭಾವದಿಂದ ಕೇಳದೆ ಧನ್ಯತಾ ಭಾವದಿಂದ ಹಾಗು ಕಾಯಕ ನಿಷ್ಟೆಯಿಂದ ಸಮಾಜವನ್ನು ಹಕ್ಕಿನಿಂದ ಕೇಳಿ ತನ್ನ ಬಡತನ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಒಡೆಯ ರೂಪದ ಸಮಾಜ ಕೇಳಿ ಕೊಳ್ಳುವ ನಿರ್ಧಾರಕ್ಕೆ ಬಸವಣ್ಣ ಮುಂದಾಗುತ್ತಾರೆ.
ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರಗೊಡ್ಡಿ ಬೇಡುವೆ.*
ಇಡಿ ಜಗತ್ತೇ ಒಂದು ಸುಂದರ ಬಾಳಿಗೆ ವೇದಿಕೆ ಅದನ್ನು ಸಲುಹುವವ ಸೃಷ್ಟಿಕರ್ತ ಆತ ಮಹಾದಾನಿ . ಗಾಳಿ ಬಿಸಿಲು ಮಳೆ ನೀರು ಭೂಮಿ ಹಸಿರು ಬೆಳೆ ಹೀಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಹೀಗಿದ್ದಾಗ ತನ್ನ ಒಡಲ ಹಸಿವು ಬಡತನ ಆರ್ಥಿಕ ಮುಗ್ಗಟ್ಟನಿಂದ ಬಳಲುವುದು ಏತಕ್ಕೆ. ಮಹಾದಾನಿ ಕೂಡಲಸಂಗಮದೇವ ತನ್ನ ಒಡೆಯ ಜಂಗಮ ಸಮಾಜ ತನ್ನ ಅಭಿವೃದ್ಧಿ ಶರಣರ ಕಾಳಜಿ ಮಾಡುವ ದಿವ್ಯ ಸ್ಪಂದನ ಮತ್ತು ನಿರಂತರ ಪ್ರಕ್ರಿಯೆ ಎಂದು ಸೂಚ್ಯವಾಗಿ ಪರಿಸರದ ಮೇಲೆ ಕಾಳಜಿ ಪ್ರೀತಿ ನಂಬಿಕೆ ವಿಶ್ವಾಸ ಇಟ್ಟು ಅಂತಹ ದಿವ್ಯ ಪ್ರಭೆ ಸಮಾಜ ಸ್ವರೂಪದ ಕೂಡಲಸಂಗಮದೇವ ಈತನಿಗೆ ಅತ್ಯಂತ ಪ್ರಾಮಾಣಿಕ ಭಕ್ತಿಯಿಂದ ತನ್ನ ನಿವೇದನೆಯನ್ನು ಸೆರಗೊಡ್ಡಿ ಬೇಡಿಕೊಳ್ಳುವ ಅತ್ಯಂತ ವೈಚಾರಿಕ ಪರಿಪೂರ್ಣ ಮಾನವ ಸಂಬಂಧಗಳ ನಿರ್ವಹಣೆ ಕುರಿತು ಸೆರಗೊಡ್ಡಿ ಬೇಡಿಕೊಳ್ಳುವ ಬಸವಣ್ಣ ಎಂತಹ ಅನುಪಮ ನಿರಂಜನ ಜಂಗಮಪ್ರೇಮಿ ಎಂದು ತಿಳಿಯುತ್ತದೆ.
ಇಲ್ಲಿ ಬಸವಣ್ಣ ತಾನು ಸಮಷ್ಟಿಯ ಚಲನಶೀಲತೆಯನ್ನು ಕಾಪಾಡುವ ಹೊಣೆಗಾರಿಕೆ ಮತ್ತು ಅದರಿಂದ ಸಿಗುವ ಕಾರ್ಯದಿಂದ ಸಕಲ ರೀತಿಯಲ್ಲೂ ಸಂಪತ್ತು ಧನ ಕಾಳು ದೊರೆತು ಬಡತನ ರೇಖೆಗಿಂತ ಕೆಳಗಿರುವ ಜನರು ತಮ್ಮ ತಮ್ಮ ಕಾಯಕದಿಂದ ತಮ್ಮ ತಮ್ಮ ಸಮಸ್ಯೆಗೆ ಬಡತನ ನಿರ್ಮೂಲನೆ ಮಾಡುವ ಸರಳ ಸೂತ್ರ ನೀತಿಯನ್ನು ಹೇಳಿದ್ದಾರೆ ಎನ್ನಲಾಗಿದೆ. ಅದುವೇ ಕಾಯಕ ಮತ್ತು ದಾಸೋಹ.
ಭಕ್ತಿ ಎಂಬ ಪೃಥ್ವಿಯ ಮೇಲೆ ,ಗುರುವೆಂಬ ಬೀಜುಂಕರಿಸಿ
ಲಿಂಗವೆಂಬ ಎಲೆಯಾಯಿತ್ತು ವಿಚಾರವೆಂಬ ಹೂವಾಯಿತ್ತು.
ಆಚಾರವೆಂಬ ಕಾಯಾಗಿತ್ತು ,ನಿಷ್ಪತ್ತಿಯೆಂಬ ಹಣ್ಣಾಯಿತ್ತು .
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸಂಗಮದೇವ ತನಗೆಬೇಕೆಂದು ಎತ್ತಿಕೊಂಡ
ಬಸವಣ್ಣನವರು.
ಈ ವಚನವನ್ನು ನಾವು ಮತ್ತೆ ಮತ್ತೆ ಅವಲೋಕಿಸುವುದು ಅಗತ್ಯವಾಗಿದೆ. ಗುರುವೆಂಬ ಬೀಜ ಎಂದರೆ ಏನು ?. ಬಸವ ಪೂರ್ವ ಯುಗದ ಗುರು ಪದ್ದತಿಯನ್ನು ಭೌತಿಕ ಗುರುವಿನಿಂದ ಭೌದ್ಧಿಕ ಗುರುವಿಗೆ ಮಾರ್ಪಾಡುಗೊಳಿಸಿ. ಪ್ರತಿಯೊಬ್ಬ ವ್ಯಕ್ತಿಯ ಅರಿವಿನ ಆಳವನ್ನು ಜಾಗೃತಗೊಳಿಸಿ .ಅಂತಹ ಅರಿವನ್ನು ಗುರುವಾಗಿಸಿಕೊಂಡರು ನಮ್ಮ ಶರಣರು. ಪೃಥ್ವಿ ಇದು ಧೃಢತೆ ಹಾಗು ಸಂಚಲನದ ಗಟ್ಟಿಮುಟ್ಟಾದ ಸಂಕೇತವಾಗಿದೆ. ಇಂತಹ ಮನವುಳ್ಳ ಭಕ್ತನ ಮನದಲ್ಲಿ ಅರಿವೆಂಬ ಗುರುವು ಬೀಜವಾಗಿ ಉಂಕರಿಸಿ ಪಂಚ ಮಹಾಭೂತಗಳ ಶಕ್ತಿಯಿಂದಾಗಿ ಪಂಚೇಂದ್ರಿಯ ಮೂಲಕ ಸಮಷ್ಟಿಯನ್ನು ಗ್ರಹಿಸುವ ಅರಿವಿನ ಅನುಸಂಧಾನಕ್ಕೆ ಲಿಂಗವೆಂಬುದು ಸಾಧನವಾಗಿದೆ. ಅರಿವಿನ ಬೀಜ ಬಿದ್ದಲ್ಲಿ ಲಿಂಗವೆಂಬ ಎಲೆಯು ವಿಕಸಿತಗೊಂಡಿತು .ಸಸ್ಯದ ಸಮಗ್ರ ಬೆಳವಣಿಗೆಯಲ್ಲಿ ಎಲೆ ಮತ್ತು ಬೇರು ಪ್ರಮುಖ ಪಾತ್ರ ವಹಿಸುತ್ತವೆ. ಎಲೆಯು ಸೂರ್ಯ ಕಿರಣಗಳಿಂದ ದ್ಯುತಿ ಸಂಶ್ಲೇಷಣೆಗೆ ಕಾರಣವಾಗಿ (PHOTO SYNTHESIS ) ಸಸ್ಯಕ್ಕೆ ಬೇಕಾದ ಆಹಾರವನ್ನು ತಯಾರಿಸುವ ಘಟಕವಾಗಿದೆ,
ಎಲೆಯು ಮೂಡಿದ ಮೇಲೆ ಆಲೋಚನೆಗಳು ಸದ್ವಿಚಾರಗಳು ಹುಟ್ಟಿಕೊಳ್ಳುತ್ತವೆ. ಈವಿಚಾರಗಳ ಅರಳುವಿಕೆಯನು ಬಸವಣ್ಣ ಹೂವಾಗಿ ಕಂಡಿದ್ದಾರೆ.ವಿಚಾರ ಮತ್ತು ಆಚಾರಗಳ ಸಮನ್ವಯತೆಯೇ ಶರಣ ಸಂಸ್ಕೃತಿಯ ಜೀವಾಳ. ಹೀಗಾಗಿ ವಿಚಾರವೆಂಬ ಹೂವು ಆಚಾರವೆಂಬ ಕಾಯಾಗಿ ಪರಿವರ್ತನೆಗೊಳ್ಳುತ್ತದೆ. ನಂತರ ಪರಿಪೂರ್ಣತೆ ಎಂಬ ನಿಷ್ಪತ್ತಿ ಎಂಬ ಹಣ್ಣಾಗಿ ರೂಪಗೊಳ್ಳುತ್ತದೆ. ಆ ಹಣ್ಣು ಕೂಡಲ ಸಂಗಮದೇವವೆಂಬ ಜಂಗಮ ಸಮಾಜವು ತನಗೆ ಬೇಕೆಂದು ಆಯ್ಕೆ ಮಾಡಿಕೊಳುತ್ತದೆ. ಸೃಷ್ಟಿಯೊಳಗಿನ ಸಸಿಯ ಬೆಳವಣಿಗೆಯನ್ನು ಭಕ್ತನ ಅಂತರಂಗದ ವಿಕಾಸಕ್ಕೆ ಹೋಲಿಸಿ ಸುಂದರವಾಗಿ ವಿವರಣೆ ನೀಡುವ ಬಸವಣ್ಣನವರು ಸಾರ್ವಕಾಲಿಕ ಗುರು .
ಬಯಲ ರೂಪ ಮಾಡಬಲ್ಲಾತನೆ ಶರಣನು .
ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯ್ದಿದ್ದಡೆ ಎಂತು ಶರಣನೆಂಬೆ ?
ಆ ರೂಪ ಬಯಲು ಮಾಡಲರಿಯ್ದಿದ್ದಡೆ ಎಂತು ಲಿಂಗಾನುಭಾವಿಯೆಂಬೆ ?
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೇ
ಕೂಡಲಸಂಗಮದೇವ.
ಬಸವಣ್ಣನವರು. ಸಮಗ್ರ ವಚನ ಸಂಪುಟ ಸಂಖ್ಯೆ 923 ಪುಟ 243
ಬಸವಣ್ಣನವರ ಐಕ್ಯನ ಜ್ಞಾನಿಸ್ಥಲ ವಚನ . ಬಯಲ ಅಂದರೆ ಸೃಷ್ಟಿ ಸಮಷ್ಟಿ ಬ್ರಹ್ಮಾಂಡ .ಇಂತಹ ಬಯಲನ್ನು ಒಂದು ರೂಪ ಮಾಡಬಲ್ಲಾತನೆ ಶರಣನು.
ಕರಸ್ಥಲಕ್ಕೆ ಅರಿವಿನ ಕುರುಹಾಗಿ ಪಡೆದು ಅಂಗ ಲಿಂಗ ಸಂಧಾನ ನಡೆಸುವ ಅರಿವಿನದ್ಯೋತಕವಾದ ಶಿವಾನುಭ ಕ್ರಿಯೆ. ಸಮಷ್ಟಿಯ ಭಾವವನ್ನು ಅಂಗೈಯಲ್ಲಿ ಅರಿವಿನ ಕುರುಹಾಗಿ ಮಾಡಬಲ್ಲವನೆ ಶರಣನು. ಶರಣ ಪರಿಪೂರ್ಣತೆಯ ಸಂಕೇತ ಪ್ರತಿನಿಧಿ. ಅನ್ಯ ಧರ್ಮದಲ್ಲಿ ಇದಕ್ಕೆ ಪರ್ಯಾಯ ಪದಗಳಿಲ್ಲ.ಭಿಕ್ಷು ಮಾಂಕ್ ಫಕೀರ ಮುನಿ ಇವು ಶರಣ ಪದಕ್ಕೆ ಸಮಬಾರವು.
ಕರಸ್ಥಲದ ರೂಪವನ್ನು ಮತ್ತೆ ಬಯಲ ಮಾಡಬಲ್ಲಾತನೆ ಲಿಂಗಾನುಭಾವಿ . ಬಯಲ ರೂಪಗೊಂಡ ಕರಸ್ಥಲದ ಲಿಂಗವು ಬ್ರಹ್ಮಾಂಡವೆಂದು ತಿಳಿದು ನಡೆಯುವವನೇ ಲಿಂಗಾನುಭಾವಿ. ಅಂದರೆ ವಸ್ತಿ ಸಮಷ್ಟಿಯ ಮಧ್ಯದ ನೇರ ಕೊಂಡಿ ಭಕ್ತ. ಅಂತರಂಗ ಬಹಿರಂಗಗಳ ಸಮಾಗಮಕ್ಕೆ ಕೇಂದ್ರ ಬಿಂದುವೇ ಇಷ್ಟಲಿಂಗ ಅರಿವಿನ ಕುರುಹು. ಆದರೆ ಅರಿವನ್ನು ಕೇವಲ ಕುರುಹು ರೂಪದಲ್ಲಿ ಬಂದಿಸಲ್ಪಟ್ಟರೆ ಆಡು ಆಚರಣೆ ಸಂಪ್ರದಾಯ ಪೂಜೆಯಾಗುತ್ತದೆ.ಕಾರಣ ಲಿಂಗವೆಂಬ ರೂಪವನ್ನು ಸಮಷ್ಟಿಯೆಂದು ತಿಳಿದು ಅದರ ರೂಪವನ್ನು ಬಯಲು ಮಾಡಬಲ್ಲಾತ ಲಿಂಗಾನುಭಾವಿ.ಲಿಂಗವೆಂಬ ರೂಪದ ರಹಸ್ಯವನ್ನು ಹೊರ ಹಾಕುವವನು ತಿಳಿಯುವವನು ಬಯಲು ಮಾಡುವವನು ಲಿಂಗಾನುಭಾವಿಯಾಗುತ್ತಾನೆ.
ಬಯಲ ರೂಪ ಮಾಡಲರಿಯ್ದಿದ್ದಡೆ ಎಂತು ಶರಣನೆಂಬೆ ?-ಬಯಲ ಸಮಷ್ಠಿ ಸೃಷ್ಟಿಯನ್ನು ರೂಪಮಾಡಲರಿಯದವನು ಅದನ್ನು ಸಂಕೇತವಾಗಿ ಕಾಣದವನು
ಹೇಗೆ ಶರಣನಾಗಬಲ್ಲ ಇದು ಬಸವಣ್ಣನವರ ಪ್ರಶ್ನೆಯಾಗಿದೆ, ಸೃಷ್ಟಿಯೊಳಗಿನ ಚರಾಚರ ಜೀವಿಗಳು ಕಾಡು ಗುಡ್ಡ ಬೆಟ್ಟ ನದಿ ಸರೋವರಸಮುದ್ರ ಮುಗಿಲು ಮೋಡ ಕಣವಿ ಹೀಗೆ ಬೇರೆ ಬೇರೆ ಚಿತ್ರಣಗಳಿದ್ದರೂ ನಮ್ಮ ಅರಿವಿಗೆ ಸರಳವಾಗಿ ಗೋಚರಿಸಲೆಂದೇ ಅಪ್ಪ ಬಸವಣ್ಣನವರು ಅಗಮ್ಯ ಅಗೋಚರ ಅಪ್ರತಿಮ ಅಪ್ರಮಾಣ ಕುರುಹಾಗಿ ರೂಪವಾಗಿ ಕರಸ್ಥಲಕೆ ಲಿಂಗವಾಗಿ ಕೊಟ್ಟರು.ಲಿಂಗವೆಂಬ ರೂಪದಲ್ಲಿ ಬಯಲ ಕಾಣುವವನೆ ಶರಣನು.
ಆ ರೂಪ ಬಯಲು ಮಾಡಲರಿಯ್ದಿದ್ದಡೆ ಎಂತು ಲಿಂಗಾನುಭಾವಿಯೆಂಬೆ ?
ಕರಸ್ಥಲಕ್ಕೆ ಚುಳುಕಾದ ಇಷ್ಟಲಿಂಗವನ್ನು ಧ್ಯಾನಕ್ಕೆ ಅಧ್ಯಾತ್ಮಕ್ಕೆ ಪ್ರಾರ್ಥನೆ ಪೂಜೆಗೆ ಮಾತ್ರ ಸೀಮಿತಗೊಳಿಸಿದರೆ ಅದು ಅಪರಾಧವಾಗುತ್ತದೆ.
ಲಿಂಗವು ಸಮಷ್ಟಿಯ ಪ್ರತೀಕವಾದ ಕಾರಣ ಭಕ್ತನಿಗೆ ಸಮಷ್ಟಿಯನ್ನು ಕಾಪಾಡುವ ರಕ್ಷಿಸುವ ಹೊಣೆಗಾರಿಕೆಯಿರುತ್ತದೆ. ಕೈಯೊಳಗಿನ ಲಿಂಗವೆಂಬ ರೂಪವು ಸಮಷ್ಟಿಯೆಂದು ಅದರ ರಹಸ್ಯವನ್ನು ಬಿಚ್ಚುಡುವವನು ಬಯಲು ಮಾಡುವವನೇ ನಿಜವಾದ ಲಿಂಗಾನುಭಾವಿ. ಲಿಂಗ ನಿರುಪಾಧಿತ ಯೋಗ ಮಾರ್ಗದ ಗಟ್ಟಿ ಮುಟ್ಟಾದ ಸಂಕೇತ . ಆ ಕುರುಹಿನ ಉದ್ದೇಶವನ್ನು ಬಯಲು ಮಾಡುವುದೆ ಲಿಂಗಾನುಭಾವಿಯ ಶಿವಯೋಗದ ನಿರಂತರ ಪ್ರಯತ್ನವಾಗಿರುತ್ತದೆ.
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೇ ಕೂಡಲಸಂಗಮದೇವ.
ಬಯಲ ಮತ್ತು ರೂಪ, ಬ್ರಹ್ಮಾಂಡ ಮತ್ತು ಪಿಂಡಾಂಡ .ವ್ಯಕ್ತಿ ಮತ್ತು ಸಮಷ್ಟಿ ಇವು ಅಂಗ ಲಿಂಗದ ಪ್ರತೀಕಗಳು. ಅಂಗ ಲಿಂಗ ಒಂದಾಗಿ ಜಂಗಮ ಸಮಾಜಕ್ಕೆ
ದುಡಿಯ ಬಲ್ಲವನೇ ಭಕ್ತನು .ಇಂತಹ ಉಭಯ ಭಾವ ದ್ವಂದ್ವಗಳನ್ನು ಕಳೆದು ನಿಜ ಪರಮಸುಖ ಪಡೆಯುವುದೇ ಶಿವಯೋಗವಾಗಿದೆ.
ಅಲ್ಲಿ ಶಬ್ದ ಸ್ಪರ್ಶ ರೂಪ ರಸ ಗಂಧ ಗೌಣವಾಗುತ್ತವೆ. ಅಂತಃಚಕ್ಷುವಿನ ಮೂಲಕ ನಮ್ಮ ಒಳಗಣ ಪಯಣಕ್ಕೆ ಹೋದಾಗ ಮಾತ್ರ ಇಂತಹ ಅನುಭವ ಬರುತ್ತದೆ.
ಉಭಯ ಭಾವ ಒಂದೇ ಎಂದು ತಿಳಿದರೆ ಸೃಷ್ಟಿಕರ್ತನಲ್ಲಿ ಮತ್ತೆ ಬೇರೆ ತೆರಹು ಸ್ಥಾನವುಂಟೆ ಎಂದು ಬಸವಣ್ಣನವರು ತನ್ನೊಳಗಿನ ಪಾರಮಾತ್ಮನನ್ನು ಕೇಳಿಕೊಳ್ಳುತ್ತಾರೆ.ಇದನ್ನು ಪ್ರತಿಯೊಬ್ಬ ಭಕ್ತ ಅನುಭವಿಸಬೇಕು ಆಗ ಮಾತ್ರ ಲಿಂಗಾನುಭಾವದ ಸಾರ್ಥಕತೆ ಅರಿವಾಗುವುದು.
ತನುವಿಡಿದು ದಾಸೋಹವ ಮಾಡಿ,
ಗುರುಪ್ರಸಾದಿಯಾದ ಬಸವಣ್ಣ..
ಮನವಿಡಿದು ದಾಸೋಹವ ಮಾಡಿ,
ಲಿಂಗಪ್ರಸಾದಿಯಾದ ಬಸವಣ್ಣ.
ಧನವಿಡಿದು ದಾಸೋಹವ ಮಾಡಿ,
ಜಂಗಮಪ್ರಸಾದಿಯಾದ ಬಸವಣ್ಣ.
ಇಂತೀ ತ್ರಿವಿಧವಿಡಿದು ದಾಸೋಹವ ಮಾಡಿ,
ಸದ್ಗುರು ಚೆನ್ನಮಲ್ಲಿಕಾರ್ಜುನಯ್ಯಾ,ನಿಮ್ಮ ಶರಣ ಬಸವಣ್ಣ ಸ್ವಯಂಪ್ರಸಾದಿಯಾದನಯ್ಯಾ.
ಅಕ್ಕ ಮಹಾದೇವಿ
ಅಕ್ಕ ಮಹಾದೇವಿಯ ವಚನದಲ್ಲಿ ಬಸವಣ್ಣ ಗುರುವಾದ ಲಿಂಗವಾದ ಜಂಗಮನಾದ ಪ್ರಸಾದಿಯಾದ ಮಹಾಮನೆಗೆ ವಿಳಾಸವದನು ,ತನ್ನ ಚೆನ್ನ ಮಲ್ಲಿಕಾರ್ಜುನನಿಗೆ ದೇವರಾದನು ಎಂದೆನ್ನುತ್ತಾಳೆ
ಸತ್ಯ ಸಮತೆ ಶಾಂತಿ ವಿಶ್ವ ಪ್ರೇಮವನ್ನು ಹೇಳಿ, ಕಾಯಕ ದಾಸೋಹದ ಸೂತ್ರವನ್ನುಕಲಿಸಿಕೊಟ್ಟು , ತಾನು ಬಂದ ಕಾರ್ಯವನ್ನು ಮುಗಿಸಿ ಮಹಾಮನೆಗೆ ಮುಕುಟ ಮಣಿಯಾದನು ಬಸವಣ್ಣ ಜನಪದಕೆ ಉಸಿರಾದನು .
ಆಕರಗಳು
ಕಣಜ
ವಚನ ಸಂಚಯ
ಬಸವ ಭಕ್ತಿಯ ಬೀಜ -2023 ಸಂ. ಡಾ ಶಶಿಕಾಂತ ಪಟ್ಟಣ
ಕಿಚ್ಚಿನಲ್ಲಿ ಕೈ ಹಾಕಿ ಹೆಕ್ಕಿದರು ವಚನಗಳ 2023 ಸಂ. ಡಾ ಶಶಿಕಾಂತ ಪಟ್ಟಣ
ನುಡಿದರೆ ಮುತ್ತಿನ ಹಾರದಂತಿರಬೇಕು 2023 ಸಂ ಡಾ ಶಶಿಕಾಂತ ಪಟ್ಟಣ
ವಿಳಾಸವದನು ಬಸವಣ್ಣ -2022 ಡಾ ಶಶಿಕಾಂತ ಪಟ್ಟಣ
ವಚನ ಸಿರಿ ಭಾಗ 1-2022 ಸಂಪಾದನೆ – ಡಾ ಶಶಿಕಾಂತ ಪಟ್ಟಣ
ವಚನ ಸಿರಿ ಭಾಗ 2-2022 ಸಂಪಾದನೆ – ಡಾ ಶಶಿಕಾಂತ ಪಟ್ಟಣ
ದಾಸೋಹ ತತ್ವ – ಬಯಲು ಬ್ಲಾಗ್ January 10, 2021 ಡಾ. ಬಸವರಾಜ ಸಬರದ
———————————————————————————

ಡಾ ಶಶಿಕಾಂತ ಪಟ್ಟಣ ರಾಮದುರ್ಗ
Translate to English
ಬಸವ ಜಯಂತಿಯ ದಿವಸ ಮೂಡಿಬಂದ
ತಮ್ಮ ” ಕ್ರಾಂತಿಪುರುಷ ಬಸವಣ್ಣ ” ಸುಧೀರ್ಘ ವಾದ ಲೇಖನ ಅತ್ಯಂತ ಮೌಲಿಕವಾದದ್ದು…
ವೈಚಾರಿಕತೆಯ ಹೊಳಹುಗಳಿoದ ಕೂಡಿದ್ದು…
ಎಲ್ಲದಕ್ಕಿಂತ ಹೆಚ್ಚಾಗಿ ಎಲ್ಲರಿಗೂ ಸದಾಕಾಲ ಉಪಯುಕ್ತವಾಗುವಂತಹ ಲೇಖನ
ಸುಧಾ ಪಾಟೀಲ
ಅರ್ಥಪೂರ್ಣ ಲೇಖನ ಸರ್
ವಚನ ಸಾಹಿತ್ಯದ ಭಂಡಾರವೇ ಆಗಿರುವ ಶಶಿಕಾಂತ್ ಪಟ್ಟಣ ಅವರ ಬಸವಣ್ಣನವರ ಬಗ್ಗೆ ಲೇಖನ ಮನಮುಟ್ಟುವಂತಿದೆ
ನಳಿನಿ
ಸುಂದರ ಲೇಖನ ಸರ್
ಔಚಿತ್ಯಪೂರ್ಣ ಲೇಖನ
ಬಸವಣ್ಣನವರ ಚರಿತ್ರೆಯನ್ನು ೇಖನದ ಮೂಲಕ* ಅರ್ಥಪೂರ್ಣವಾಗಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದೀರಿ
ಬಸವಣ್ಣ ಜಂಗಮ ಲಿಂಗ ಸುಂದರ ಲೇಖನ ಸರ್
Good Article