ವೈಚಾರಿಕ ಸಂಗಾತಿ
ಶಾರದಜೈರಾಂ.
ಮಾನವೀಯತೆ ಮರೆಯಾಗುತ್ತಿದೆಯೇ?

ಪ್ರತಿದಿನವೂ ಹೊಸದನ್ನು ಕಲಿಯುತ್ತಲೇ ಇರುತ್ತೇವೆ ಬದುಕು ಕೊನೆಯಾದಗಲೇ ಕಲಿಕೆ ನಿಲ್ಲುವುದು.ಆದರೂ ಕಲಿತ ಮನುಜರ ವರ್ತನೆಗಳ ಕಂಡು ಮನ ಅಂತರ್ಮುಖಿಯಾಗಿ ಯೋಚಿಸುತ್ತದೆ ಏಕೆ ಹೀಗೆ ನಾನು,ನನ್ನ ಕುಟುಂಬ ಸುಖವಾಗಿದ್ದರೆ ಸಾಕು ಸಮಾಜದ ಹಿತ ನನಗೇಕೆ ಎಂಬ ಧೋರಣೆ ಮೈಗೂಡಿಸಿಕೊಂಡಿದ್ದಾರಲ್ಲ. ದಿನವೂ ಬಸ್ಸಿನಲ್ಲಿ ಪ್ರಯಾಣಿಸುವಾಗ ಆಗುವ ಅನುಭವಗಳು ತರತರನಾದವು ಒಂದು ದಿನ ಬಸ್ಸು ತುಂಬ ಜನ ಸೀಟೊಂದರಲ್ಲಿ ಮಗಳು, ಒಬ್ಬ ತಾಯಿ, ಮೊಮ್ಮಗ ನಾಲ್ಕು ವರ್ಷ ಇರಬೇಕು.ನಾನು ಆ ಸೀಟ್ ಬಳಿ ಹೋದಾಗ ಮಗು ಅಲ್ವ ಸ್ವಲ್ಪ ಸರಿಯಿರಿ ಎಂದೇ ತಕ್ಷಣ ಅವರಿಂದ ಬಂದ ಉತ್ತರ ನಾವು ಮಗುವಿಗೂ ಟಿಕೆಟ್ ಪಡೆದಿದ್ದೇವೆ ಎಂಬ ಧೋರಣೆಯ ನುಡಿ.ಆಯಿತು ಟಿಕೆಟ್ ಪಡೆದರು ಪರ್ವಾಗಿಲ್ಲ ಚಿಕ್ಕ ಮಗನಾ ಮೇಲೆ ಕುಳ್ಳಿರಿಸಿಕೊಳ್ಳಬಹುದಲ್ವ ಎಂದೆ ಇಲ್ಲ ನಮಗೆ ಭಾರವಾಗುತ್ತದೆ ಹಾಗಾಗಿ ನಾವು ಟಿಕೆಟ್ ಪಡೆದಿದ್ದೇವೆ ಪುನಃ ಅದೇ ಉತ್ತರ ಹೇಳಿದರು.ನನಗ್ಯಾಕೆ ಇಲ್ಲದ ಉಸಾಬರಿ ಎಂದು ಸುಮ್ಮನಾಗುವ ಜಾಯಮಾನ ನನ್ನದಲ್ಲ ಆ ವೇಳೆಗೆ ಹಿಂದಿನ ಸೀಟಲ್ಲಿ ಕುಳಿತಿದ್ದ ಹಿರಿಯ ವ್ಯಕ್ತಿ ನೀವು ಕುಳಿತುಕೊಳ್ಳಿ ಮಗು ಅದು ಜಾಗ ಇದೆ ಎಂದರು ಆಗ ನಾನು ಅವರು ಟಿಕೆಟ್ ಪಡೆದಿದ್ದಾರೆ ಅಂತೆ ಪರ್ವಾಗಿಲ್ಲ ನನಗೆ ನಿಲ್ಲಲು ಸಾಮರ್ಥ್ಯ ಇದೆ ಆದರೆ ವೃದ್ಧರು,ಮಗುವಿನ ತಾಯಿ, ಗರ್ಭಿಣಿ ಬಂದಾಗಲೂ ಈ ತರ ವರ್ತಿಸಬೇಡಿ ಸ್ವಲ್ಪ ಮಾನವೀಯತೆ ಮೈಗೂಡಿಸಿಕೊಂಡರೆ ಸೂಕ್ತ ಎಂದೆ ನಾನು ಸಹ ಶಿಕ್ಷಕಿ ನಿಮ್ಮಿಂದ ಕಲಿಯುವ ಅಗತ್ಯತೆ ಇಲ್ಲ ಎಂದಾಗ ಸುಶಿಕ್ಷಿತರಾಗಿ ಹೀಗೆ ವರ್ತಿಸುವಾಗ ಮಕ್ಕಳಿಗೆ ಇನ್ನೇನು ಭೋದಿಸುವರು ಎಂದು ಮನದಲ್ಲೇ ಅಂದುಕೊಂಡೆ.
ಯಥಾಪ್ರಕಾರ ಮಾರನೇ ದಿನ ಕರ್ತವ್ಯಕ್ಕೆ ಬಸ್ಸಿನಲ್ಲಿ ಪಯಣ ಇಂದು ಸಹ ಬಸ್ಸು ಜನರಿಂದ ತುಂಬಿದೆ ನಾನು ನಿಂತ ಸೀಟಿನಲ್ಲಿ ಕುಳಿತ ಹಿರಿಯ ಜೀವ ಬಾ ಮಗು ಕುಳಿತಿಕೋ ಎಂದು ಕರೆದರೂ ಆಗ ನಾನು ಅಜ್ಜಿ ಆ ಸೀಟಲ್ಲಿ ಮೂವರಷ್ಟೇ ಕೂರಲು ಸಾಧ್ಯ ಪರ್ವಾಗಿಲ್ಲ ಎಂದೆ ನಿನ್ನ ಕೈಯಲ್ಲಿ ಇರುವ ಬ್ಯಾಗ್ ಕೊಡು ಎಂದು ಪಡೆದು ಇಟ್ಟುಕೊಂಡರು.ಮತ್ತೆ ಸರಿದು ನನ್ನ ಸಹೋದ್ಯೋಗಿಗೆ ಜಾಗ ಕೊಟ್ಟರು ಅದರಲ್ಲೇ ಕುಳಿತುಕೊಳ್ಳಲು.ಅಜ್ಜಿ ನನ್ನನ್ನು ಕರೆಯುವೆಯಲ್ಲ ಜಾಗ ಎಲ್ಲಿದೆ ಅಂದಾಗ ಅಜ್ಜಿ ನುಡಿದ ಮಾತು ಬಂದು ಹೋಗುವ ನಾವೆಲ್ಲ ತಾತ್ಕಾಲಿಕ ಪ್ರಯಾಣಿಕರೆ ಅದರ ನಡುವೆ ಅನುಸರಿಸಿಕೊಂಡು ಹೋಗಬೇಕು ಮಗು ಯಾರಿಲ್ಲಿ ಶಾಶ್ವತ ನಾನು ಮುಂದಿನ ನಿಲ್ದಾಣದಲ್ಲಿ ಇಳಿದಿವೆ, ನೀನು ಆದಕ್ಕೂ ಮುಂದೆ ಇಳಿವೆ ಹೀಗೆ ಅವರವರ ನಿಲ್ದಾಣ ಬಂದಾಗ ಇಳಿಯುವವರೇ ಹೋಗುವಾಗ ಹೊತ್ತೊಯ್ಯುವುದು ಏನಿಲ್ಲ ಸಹಾಯಕ್ಕೆ ಆದ ನೆನಪ ಇರುವವರೊಡನೆ ಬಿಟ್ಟು ಹೋಗುವುದೇ ಬದುಕು ಎಂದಾಗ ಅಜ್ಜಿ ಯೊಳಗೆ ಒಬ್ಬ ಬುದ್ದನ ಕಂಡಂತೆ ಆಯಿತು ಹಾಗೇಯೇ ಮನವು ಈ ಎರಡು ಘಟನೆಗಳ ತುಲನೆ ಮಾಡಿತು ಇಲ್ಲಿ ಓದಿ ಪಾಠ ಕಲಿಸುವ ಶಿಕ್ಷಕಿ ಮತ್ತು ಅನಕ್ಷರಸ್ಥೆ ಅಜ್ಜಿ ಯಾರು ಉತ್ತಮರು ಮಾನವೀಯ ಗುಣಗಳ ಭೋದಿಸುವುದಕ್ಕೂ ಅದನ್ನು ಮೈಗೂಡಿಸಿಕೊಂಡ ಅಜ್ಜಿ ನನಗೆ ಜ್ಞಾನೋದಯ ಮೂಡಿಸಿದ ಬುದ್ದನಂತೆ ಕಂಡದ್ದರಲ್ಲಿ ಉತ್ಪ್ರೇಕ್ಷೆಯಲ್ಲ.ಇಲ್ಲಿ ಶಿಕ್ಷಕಿಯ ತಪ್ಪು ಎಂದು ಹೇಳುತ್ತಿಲ್ಲ ಆ ರೀತಿ ಕೆಲವೊಮ್ಮೆ ಅರಿಯದೇ ನಾವು ಮಾಡಿರಬಹುದು ಆದರೆ ಯಾವ ಶಾಲೆಯಿಂದ ಕಲಿಯದೇ ಬದುಕಿನಿಂದ ಕಲಿತ ಪಾಠ ಆನುಸರಿಸಿದ ಅಜ್ಜಿ ಶ್ರೇಷ್ಠ ಅಲ್ಲವೇ.
ನನಗೆ ಸೀಟು ಸಿಕ್ಕಾಗ ವಯೋವೃದ್ಧ ನಿಂತಿದ್ದರೆ ಸೀಟು ಬಿಟ್ಟುಕೊಡುವೆ.ಕೆಲವೊಮ್ಮೆ ಸುತ್ತಲೂ ನೋಡುವಾಗ ಕಾಲೇಜಿನ ತರುಣರು ಮೊಬೈಲ್ ನೋಡುತ್ತಾ ತಮ್ಮ ಪಾಡಿಗೆ ತಾವು ಕುಳಿತಿರುತ್ತಾರೆ.ಅವೆಲ್ಲ ಹೇಳಿಸಿಕೊಳ್ಳುವಂತಹವೇ ತಾನಾಗೇ ಮೈಗೂಡಿಕೊಳ್ಳಬೇಕಾದ ಗುಣಗಳು ಅಲ್ಲವೇ.
ನಾನು ನನ್ನ ಮಗಳು ಎಂದು ಹೇಳುತ್ತಿಲ್ಲ ಆ ಗುಣ ಮೆಚ್ಚುಗೆ ಆಗಿದ್ದಕ್ಕೆ ಹೇಳುತ್ತಿದ್ದೇನೆ ಚಿಕ್ಕವಳಿದ್ದಾಗ ಸ್ಕೂಲ್ ಬ್ಯಾಗ್ ತುಂಬಿದಾಗ ನನ್ನಿ ಏಕೆ ಮೂರು ಪೆನ್ಸಿಲ್ ಇಟ್ಟಕೊಂಡಿದ್ದೀಯಾ ಎಂದು ಕೇಳಿದರೆ ಅಮ್ಮ ಪರೀಕ್ಷೆ ಅಲ್ವಾ ಯಾರಾದರೂ ಬಿಟ್ಟು ಬಂದಿದ್ದರೆ ಅವರಿಗೆ ಕೊಡುವೆ ಎಂದಾಗ ನಿಜಕ್ಕೂ ಖುಷಿಯಾಗೋದು.ಆಟೋದಲ್ಲಿ ಹೋಗುವಾಗ ಸಹ ಅಷ್ಟೇ ಅಮ್ಮ ಅವರೊಂದಿಗೆ ಚೌಕಾಸಿ ಮಾಡಬೇಡ ಕೇಳಿದ ಹಣ ಕೊಟ್ಟುಬಿಡು ಎನ್ನುವಾಗ ಅವರ ದಿನದ ದುಡಿಮೆಗೆ ಕಷ್ಟಪಡುತ್ತಾರೆ ಆವರ ಬಳಿ ಚೌಕಾಸಿ ಏಕೆ ಎನ್ನುವ ಮಗಳ ನುಡಿಗೆ ಅಭಿಮಾನದಿಂದ ಎದೆ ತುಂಬಿದ ಅನುಭವ.ಇಂದಿನ ಮಕ್ಕಳಿಗೆ ಸಕಲ ಸೌಲಭ್ಯ ಒದಗಿಸಿ ಮುದ್ದು ಮಾಡುವ ಪೋಷಕರು ಅವರ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಎಡವುತ್ತಿದ್ದಾರೆ ಮಕ್ಕಳೆಂಬ ಮೋಹದಿಂದ ನಮ್ಮಂತೆ ಕಷ್ಟಪಡದಿರಲಿ ಎಂಬ ಭಾವದಲ್ಲಿ ಬರೀ ಸುಖವೇ ಕಂಡಾಗ ಕಷ್ಟದ ಅನುಭವ ಆಗದೇ ಸುಖದ ಬೆಲೆ ತಿಳಿಯುವುದಾದರೂ ಹೇಗೆ ಹಾಗಾಗಿಯೇ ಸಣ್ಣ ವಿಷಯಗಳನ್ನು ಬಗೆಹರಿಸುವ ಸ್ವಸಾಮರ್ಥ್ಯದ, ಆತ್ಮವಿಶ್ವಾಸ ಕುಂಠಿತವಾಗುತ್ತಿದೆ,ಅದರ ಬದಲಿಗೆ ಅವರ ಸಾಮರ್ಥ್ಯ,ಯೋಚನಾಲಹರಿ ಒರೆಗೆ ಹಚ್ಚಿ ತಪ್ಪಾದರೆ ತಿದ್ದಿ ದಾರಿ ತೋರಿ ಬೆಳೆಸುವುದು ಸೂಕ್ತವಲ್ಲವೇ.
ನಾವು ಹೇಳುವುದಕ್ಕಿಂತ ಹೆಚ್ಚಾಗಿ ನಾವು ಮಾಡುವುದನ್ನು ನೋಡಿ ಅನುಸರಿಸುತ್ತಾರೆ ಮಕ್ಕಳು ಎಂಬುದು ನೂರಕ್ಕೆ ನೂರರಷ್ಟು ನಿಜ ನಮ್ಮ ವರ್ತನೆಗಳು ಮಕ್ಕಳಲ್ಲಿ ಪ್ರತಿಫಲಿಸುತ್ತವೆ ಹಾಗಾಗಿ ನಮ್ಮ ನಡೆ ನುಡಿ ಸರಿಯಿದೆಯಾ ಎಂದು ಆತ್ಮಾವಲೋಕನ ಮಾಡಿಕೊಳ್ಳೋಣ.
ಶಾರದಜೈರಾಂ.ಬಿ
