ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
“ಪಶ್ಚಾತಾಪ”

ಅಮ್ಮ ಪ್ಲೀಸ್ ಇದನ್ನು ಬೆನ್ನಿಂದ ಇಳಿಸಮ್ಮ ನನಗೆ ತುಂಬಾ ಭಾರ ಆಗ್ತಿದೆ, ನನಗಿದನ್ನ ಹೊರಕ್ಕೆ ಆಗ್ತಿಲ್ಲಮ್ಮ ಎಷ್ಟೊಂದು ನೋವಾಗ್ತಿದೆ, ಈ ಮಾಸ್ಕ್ ಬೇರೆ ಉಸಿರು ಕಟ್ಟಿದಂಗಾಗ್ತಿದೆ ನೋಡಮ್ಮ ಎಷ್ಟು ಬೆವೆತು ಹೋಗಿದ್ದೇನೆ,ನನಗೆ ಯಾವುದೂ ಬೇಡವೆಂದು ರೋಧಿಸುತ್ತಿದ್ದ ಮಗನನ್ನು ಹೇಗೆ ಸಮಾಧಾನಿಸಬೇಕೆಂದು ದಿಕ್ಕು ತೋಚದ ಅಮ್ಮ ಜಾನಕಿಗೆ ಒಳ ಮನಸ್ಸು ಚುಚ್ಚತೊಡಗಿತ್ತು. ದೇವರೇ ಇಂದಿನ ಈ ಸಂಕಷ್ಟಕ್ಕೆ ನಾವೇ ಕಾರಣಕರ್ತರು ಎಂದು ಮೂಕರೋದನಗೆ ಒಳಗಾಗಿ ಮೌನದ ಮೊರೆ ಹೋಗಿ ಮಗನ ತಲೆಯನ್ನು ನೇವರಿಸುತ್ತಾ ನಾವು ಮಾಡಿದ ತಪ್ಪಿಗೆ ಮುಂದಿನ ಪೀಳಿಗೆ ಅನುಭವಿಸುವಂತಾಯ್ತಲ್ಲ, ಗಿಡ ಮರ ಬೆಳೆಸಿ ಹಸಿರೇ ಉಸಿರು ಎಂದು ತಿಳಿದಿದ್ದರೆ ನನ್ನ ಮಗುವಿಗೀಗತಿ ಬರುತ್ತಿರಲಿಲ್ಲ ಎಂದು ಯೋಚಿಸುತ್ತಾ ಹಳೆಯ ನೆನಪುಗಳತ್ತ ಜಾರಿದಳು ಜಾನಕಿ.
ತಾತ ಕಥೆ ಹೇಳಿಂದು ಪೀಡಿಸುತ್ತಿದ್ದ ಪುಟ್ಟ ಜಾನಕಿಯನ್ನು ತನ್ನ ವಿಶಾಲ ಎದೆ ಮೇಲೆ ಮಲಗಿಸಿಕೊಂಡು ಅವಳ ತಲೆಯ ಮೇಲೆ ಕೈ ಆಡಿಸುತ್ತಾ ಒಂದೂರಲ್ಲಿ ತಿಮ್ಮಕ್ಕ ಎನ್ನುವ ಹಳ್ಳಿ ಹೆಣ್ಣು ಮಗಳೊಬ್ಬಳಿದ್ದಳು.ಚಿಕ್ಕ ವಯಸ್ಸಿನಲ್ಲಿ ಅವಳಿಗೆ ವಿವಾಹವಾಯಿತು.ಎಷ್ಟು ವರ್ಷಗಳಾದರೂ ಮಕ್ಕಳಾಗದಿದ್ದಾಗ ಒಂದು ಮಗುವನ್ನು ದತ್ತು ಪಡೆದರಂತೆ,ಸ್ವಲ್ಪ ದಿನಗಳ ತರುವಾಯ ಮಗುವನ್ನು ಅವರು ಮರಳಿ ಕೇಳಿದಾಗ ಈ ದಂಪತಿಗಳ ಕರುಳೇ ಕೈಗೆ ಬಂದಂತಾಗಿ,ಇನ್ಮೇಲೆ ಯಾವ ಮಗುವನ್ನು ಸಾಕುವುದಿಲ್ಲ ಬದಲಾಗಿ ಮರಗಳನ್ನು ಸಾಕುತ್ತೇನೆ ಎಂದು ನಿಶ್ಚಯಿಸಿ ತನ್ನ ಪತಿಯೊಡಗೂಡಿ ನೂರಾರು ಗಿಡಗಳನ್ನು ನೆಟ್ಟು ಬಹದೂರದಿಂದ ಹೊತ್ತೊಯ್ದು ನೀರು ಹಾಕಿ ಮರಗಳನ್ನು ಸಾಕಿ,ನಮ್ಮ ರಾಜ್ಯಕ್ಕೆ ನಮ್ಮ ದೇಶಕ್ಕೆ ದೊಡ್ಡ ಆಸ್ತಿಯನ್ನು ನೀಡಿರುವ ಸಾಲುಮರದ ತಿಮ್ಮಕ್ಕ ಎಂತಹ ಪುಣ್ಯದ ಕೆಲಸ ಮಾಡಿದ್ದಾಳೆ ಎನ್ನುವಷ್ಟರಲ್ಲಿ ಜಾನಕಿ ನಿದ್ದೆ ಹೋಗಿದ್ದರೂ …..ಆ ಕಥೆ ಮಾತ್ರ ಅವಳ ಅಂತಃಚಕ್ಷುವಿನಲ್ಲಿ ಎಚ್ಚರವಾಗಿದ್ದು,ಮನಃಪಟಲದಲ್ಲಿ ಅಚ್ಚಳಿಯದಂತೆ ಉಳಿದಿತ್ತು.
ಆದರೆ ಬೆಳೆಯುತ್ತಾ ಹೋದಂತೆಲ್ಲಾ ತಾತ ಬಿತ್ತಿ ಜಾನಕಿಯಿಂದ ಬಯಸಿದ್ದ ನೀತಿ ಎಲ್ಲಾ ಅದೆಲ್ಲಿ ಮಾಯವಾಗಿತ್ತೋ…? ಆಡಂಬರದ ಮನೆಯ ಫರ್ನಿಚರ್ಗಾಗಿ ಯಾವುದೇ ಅಳುಕಿಲ್ಲದೆ ಕಡಿಸಿದ ಮರಗಳು ಎಷ್ಟೋ.. ನಾನು ನಾಶ ಮಾಡುತ್ತಿರುವುದು ಮರವನ್ನಲ್ಲ ಮನುಕುಲವನ್ನ..ಪ್ರಕೃತಿ ಮಾತೆಯ ಮೌನವೇದನೆಗೆ ಆ ತಾಯಿಯ ರೋದನೆ ಆಕ್ರಂದನಗಳಿಗೆ ನಾವೇ ಕಾರಣವಾದೆವಲ್ಲ,ಆಕೆಯ ಹಸಿರಿಲ್ಲದ ಒಡಲು ಬರಡಾದ ಮಡಿಲಾಗಲು ಈ ಸ್ಥಿತಿಗೆ ತಂದು ನಮ್ಮ ತಪ್ಪುಗಳಿಗೆ ಸಾಕ್ಷಿಭೂತವಾಯಿತಲ್ಲ. ನಾವು ಹುಟ್ಟು ಹಬ್ಬದ ದಿನ, ಗೃಹಪ್ರವೇಶ, ವಾರ್ಷಿಕೋತ್ಸವದ ದಿನಗಳಂದು ಐಷಾರಾಮಿಯಾಗಿ ವೈಭವದಿಂದ ಕಾರ್ಯಕ್ರಮಗಳನ್ನು ನಡೆಸಿ ದುಂದು ವೆಚ್ಚ ಮತ್ತು ಆಹಾರ ಪದಾರ್ಥಗಳನ್ನು ವ್ಯಯ ಮಾಡಿ ಢಾoಬಿಕತನವನ್ನು ಮೆರೆಯುವುದಕ್ಕಿಂತ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಬಂದವರಿಗೆ ಒಂದೊಂದು ಗಿಡಗಳ ಬಳುವಳಿ ನೀಡಿದ್ದರೆ ,ಇಂದು ಆ ಗಿಡಗಳೆಲ್ಲ ಸಹಸ್ರಾರು ಮರಗಳಾಗಿ ಪ್ರತಿ ಮನೆಗಳಲ್ಲಿ ಕಂಗೊಳಿಸುತ್ತಿತ್ತಲ್ಲ! ಎಂತಹ ತಪ್ಪು ಮಾಡಿಬಿಟ್ಟೆ, ವೃಕ್ಷದ ಮೌಲ್ಯವನ್ನೇ ತಿಳಿಯದೆ ನನ್ನಂತೆ ಎಲ್ಲರೂ ವರ್ತಿಸಿದ್ದರ ಫಲವಾಗಿ ಇಂದು ಉಸಿರಾಡಲು ಗಾಳಿ ಇಲ್ಲದಂತಾಗಿ ಮಾಸ್ಕ್ ಆಕ್ಸಿಜನ್ ಕಿಟ್ ಇಲ್ಲದ ಜೀವನವಿಲ್ಲದಂತಾಯಿತು, ಎಂದು ಮಮ್ಮಲ ಮರುಗಿದ ಮನಸ್ಸು ನೋವಿನಿಂದ ಹಿಡಿದಂತಾಗಿ, ಪಶ್ಚಾ ತಾಪದಿಂದ ನರಳಿ, ತನ್ನ ಮಗನನ್ನು ಸಂತೈಸುತ್ತಾ, ಆಮ್ಲಜನಕದ ಕಿಟ್ ಬೆನ್ನಿನ ಮೇಲೆ ಅದರ ಮಾಸ್ಕ್ ಮೂಗಿನ ಮೇಲೆ ಇಲ್ಲದಿದ್ದರೆ ಜೀವನವೇ ಇಲ್ಲಪ್ಪ, ಉಸಿರಾಡಲು ಗಾಳಿ ಬೇಕೆಂದರೆ ಈ ಕಿಟ್ ಹೊರಲೇಬೇಕು, ಮುಂದೆ ಹೀಗಾಗದಂತಿರಲು ಹೆಚ್ಚು ಹೆಚ್ಚು ಗಿಡಗಳನ್ನು ನೆಡಲೇಬೇಕು ಎಂಬ ನಾಲ್ಕು ಮಾತುಗಳನ್ನು ಆಡುವಷ್ಟರಲ್ಲಿ ಪಶ್ಚಾತಾಪದಿಂದ ಅವಳ ಬಾಯಲ್ಲಿ ಮಾತು ಸಿಕ್ಕಿ ಹಾಕಿಕೊಂಡಂತಾಯಿತು.
ಇದನ್ನು ಕೇಳಿದ ಆ ಪುಟ್ಟ ಕಂದ ಸ್ನೇಹಿತರೊಡಗೂಡಿ ಪುಟ್ಟ ಪುಟ್ಟ ಗಿಡಗಳನ್ನು ನೆಡುವ ತಯಾರಿಯಲ್ಲಿ ಇರುವುದ ಕಂಡು, ಜಾನಕಿಗೆ ತನ್ನ ಪ್ರಾಣವಾಯುವೇ ಮರುಕಳಿಸಿದಂತಾಯಿತು.
—————
ಶೋಭಾ ಮಲ್ಲಿಕಾರ್ಜುನ

ಇದು ತುಂಬಾ ಸತ್ಯವಾದ ಮಾತು ಮೇಡಂ