ಸುಜಾತಾ‌ ರವೀಶ್ “ಪುತಿನ ಮಿತ್ರಾವಲೋಕನ”ಮುಂದುವರೆದ ಭಾಗ.

 ಕಳೆದ ಲೇಖನದಲ್ಲಿ ಪು ತಿ‌ನ  ಅವರ ಸಮಗ್ರ ಕಾವ್ಯದಲ್ಲಿ ಅವರು ತಮ್ಮ ಓರಿಗೆ ಯ ಮಿತ್ರ ಕವಿಗಳ ಬಗ್ಗೆ ಬರೆದ ಕೆಲವು ಕವನಗಳನ್ನು ಪರಿಚಯಿಸಿದ್ದೆ . ಅದರ ಮುಂದಿನ ಭಾಗ ಈ ಲೇಖನ.

ಇಂದು ಮಾರ್ಚ್ 17 ಕನ್ನಡದ ಇಬ್ಬರು ದಿಗ್ಗಜ ಸಾಹಿತಿಗಳ ಜನ್ಮದಿನವೂ ಹೌದು. ಪುತಿನ ಹಾಗೂ ಡಿವಿಜಿ ಇಬ್ಬರ ಜನ್ಮದಿನವೂ ಇಂದು ಆಗಿರುವುದರಿಂದ ಪುತಿನ ಅವರು ಡಿವಿಜಿಯವರ ಬಗ್ಗೆ ಬರೆದ ಒಂದು ಕವನ ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬಗ್ಗೆ ಬರೆದ ಮತ್ತೊಂದು ಕವನ
ಇವೆರಡರ ಪರಿಚಯ ಈ ಲೇಖನದಲ್ಲಿ ಮಾಡುತ್ತಿದ್ದೇನೆ.

“ಆದಿಯಿರದ ಕೊನೆ ಇರದದಾವುದೋ  ಹಾದು ಹೋದುದೀ ಜೀವದೊಳು
ಓದುಗ ನೋನೋಡೆನ್ನುವ ಪರಿ ಕವಿ  ನಾದಿಸುವನೊಳಗೆ ಬೆರಗಿನೊಳು”

ಎನ್ನುವ ಪುತಿನ ಅವರು ತಮ್ಮ “ಎಂಬತ್ತರ ನಲುಗು” ಕವನ ಸಂಕಲನದಲ್ಲಿ ಡಿವಿಜಿಯವರನ್ನು ಕರ್ಮಯೋಗಿ ಎಂದು ಬಣ್ಣಿಸುತ್ತಾ ಅವರ ಬಗ್ಗೆ ಹೀಗೆ ಹೇಳುತ್ತಾರೆ .

ಆತ್ಮದಿಂದಾತ್ಮವನ್ನು ಮೇಲಕೆತ್ತಲು ಬೇಕು
ಆತ್ಮವನ್ನು ಕೆಳಗೊತ್ತಿ ಇಡಲಾಗದು
ಆತ್ಮವೇ ಆತ್ಮಕ್ಕೆ ನೆಂಟನಂತೊದಗುವುದು
ಆತ್ಮವೇ ಆತ್ಮಕ್ಕೆ ಹಗೆಯಪ್ಪುದು

ಯಾರು ತನ್ನನ್ನು ತಾನು ಗೆಲ್ಲುವನೊ ಆತನಿಗೆ
ತೀರ ಹತ್ತಿರ ಬಂದುವಪ್ಪುದಾತ್ಮ
ಯಾರು ತನ್ನೊಳಗಾತ್ಮವಿಲ್ಲದೊಲು  ಬಾಳುವನೊ
ವೈರಿಯಾತನಿಗಾತ್ಮ ತಾನಪ್ಪುದು

ಆತ್ಮಕ್ಕೆ ಆತ್ಮದಿಂದಲೇ ಉನ್ನತಿಯೂ ಅವನತಿಯೂ ಸಾಧ್ಯ .ನೆಂಟನೂ ಆ ಆತ್ಮಕ್ಕೆ ಆತ್ಮವೇ ಹಾಗೆ ವೈರಿಯೂ ಸಹ . ತನ್ನನ್ನು ತಾನು ಗೆಲ್ಲಬಲ್ಲವನನ್ನು ಆತ್ಮ ತಾನೇ ಹತ್ತಿರ ಬಂದು ಅಪ್ಪುವುದು.  ಆತ್ಮ ಜ್ಞಾನವಿಲ್ಲದೆ ಬಾಳುವವನಿಗೆ ಆತ್ಮ ವೈರಿಯಾಗಿ ಕಾಡುವುದು . ಹೀಗೆ ಹೇಳಿದ ಭಗವದ್ಗೀತೆಯ ಸೂಕ್ತಿಯನ್ನು ಬರೀ ತಮ್ಮ ಕಾವ್ಯದಲ್ಲಷ್ಟೇ ಅಲ್ಲದೆ ಜೀವನದಲ್ಲಿ ಅಳವಡಿಸಿಕೊಂಡ ಕರ್ಮಯೋಗಿ ಡಿವಿಜಿ ಅವರು . ಅದನ್ನೇ ಈ ಸಾಲುಗಳಲ್ಲಿ ಹೀಗೆ ಹೇಳುತ್ತಾರೆ ನೋಡಿ

ಅಂದು ಗೀತಾಚಾರ್ಯರಿಂತೊರೆದ ಸೂಕ್ತಿಯನು
ಇಂದು ಬಾಳೊಳು ತಂದ ಧೀರಾತ್ಮನಿವನು
ತನ್ನಿಂದ ತಾನೆದ್ದು ತನ್ನ ಗೆದ್ದವನೀತ ಉನ್ನತರೊಳುನ್ನತನು ಪ್ರೇಮ ನಿಷ್ಪಪ್ತ ದೈವವನು ನಂಬಿಯೂ ಪುರುಷ ಪ್ರಯತ್ನವನು
ಸೇವೆ ಎಂದೆಣಿಸಿದವ ಸತ್ಕರ್ಮಸಕ್ತ  

ಎಂತಹ ಸಮಂಜಸ ನುಡಿಗಳು!.ಗೀತೆಯನ್ನು ಓದುವುದು ಅರ್ಥಮಾಡಿಕೊಳ್ಳುವುದಷ್ಟೇ ಅಲ್ಲದೆ ತನ್ನ ಬಾಳಿನಲ್ಲಿ ಅಳವಡಿಸಿಕೊಂಡ ಧೀರಾತ್ಮ ಎನ್ನುತ್ತಾರೆ.  ತನ್ನನ್ನೇ ತಾನು ಗೆದ್ದು ಬಂದ ಪ್ರೇಮಜೀವಿ; ಉನ್ನತರಲ್ಲಿ ಅತಿ ಉನ್ನತನು ಎಂದು ಹೊಗಳುತ್ತಾರೆ . ಪೂರ್ಣ ಪ್ರಮಾಣದ ದೈವ ನಂಬಿಕೆ ಇದೆ ಆದರೆ ಅವನನ್ನೇ ನಂಬಿ ಕೈ ಚೆಲ್ಲಿ ಕೂರಬಾರದು . ವಿಧಿ ಬರಹಕ್ಕೆ ತಕ್ಕ ಪುರುಷಪ್ರಯತ್ನ ಸೇರಿದರೆ ಸಫಲತೆ ಎಂದು ಸಾರಿದವರು ಡಿವಿಜಿ . ಅದನ್ನೇ ಪುತಿನ ಅವರು ಇಲ್ಲಿ ಸ್ಮರಿಸುತ್ತಾರೆ . ಡಿವಿಜಿ ಅವರು ಬಾಳಿದ ಶೈಲಿ ಹಾಕಿಕೊಟ್ಟ ಮಾದರಿ ಎಲ್ಲರಿಗೂ ಅನುಸರಣೀಯ .

ಕವಿತೆಯ ಮುಂದಿನ ಸಾಲುಗಳನ್ನು ನೋಡಿದರೆ

ನಕ್ಕು ನಲಿಸುವ ಸರಸಿ ಬಿಕ್ಕಿ ಮರಗುವ ಕರುಣಿಂ
ಸೊಕ್ಕಿದವರನು ತಾನು ಧಿಕ್ಕರಿಪ ಧೃತಿಮಾನ್
ದುಕ್ಕ ಸೊಗಗಳು ದೈವವಿಕ್ಕುವ ಹಸಾದವೆನೆ
ದಿಕ್ಕುಗೆಡದಂದದಲಿ ತಾಳಿದ ಸಹಿಷ್ಣು

ಡಿವಿಜಿಯವರು ಬಾಳಿದ ರೀತಿಯನ್ನು ಬಾಳಿನ ಪುಟಗಳನ್ನು ಈ  ನಾಲ್ಕು ಸಾಲುಗಳಲ್ಲಿ ಹೀಗೆ ಬಿಚ್ಚಿಡುತ್ತಾರೆ. ತುಂಬಾ ಸರಳ ಜೀವಿ ತಾವೂ ನಕ್ಕು ಸುತ್ತಲಿರುವವರನ್ನು ನಗಿಸುವಂತಹ ಹಾಸ್ಯಮಯಿ. ಹಾಗೆಯೇ ಬೇರೆಯವರ ದುಃಖಕ್ಕೆ ತಾನು ಕಣ್ಣೀರಾಗಿ ದುಖಿಸುತ್ತಿದ್ದ ಕರುಣಿ . ಜಂಬ ಸೊಕ್ಕು ತೋರಿದವರನ್ನು ನಿರ್ಲಕ್ಷಿಸಿ ಧಿಕ್ಕರಿಸುತ್ತಿದ್ದ ಧೃತಿವಂತ.  ದುಃಖವಿರಲಿ ಸುಖವಿರಲಿ ದೈವದ ಪ್ರಸಾದವೆಂದು ಸಮಾನ ಮನಸ್ಸಿನಿಂದ ಸ್ವೀಕರಿಸುತ್ತಿದ್ದ ಸಹಿಷ್ಣು ಎಂದು ಡಿವಿಜಿಯವರನ್ನು ಬಣ್ಣಿಸುತ್ತಾರೆ .

ಕಣ್ಣೀತ ಕಿರಿಯರಿಗೆ ಹೆಣ್ಣು ತಾತ್ವಿಕ ಜನಕೆ
ತಿಣ್ಣ ಬುದ್ದಿಯ ಕುಶಲ ಹೃದಯ ಜೀವಿ
ಮಣ್ಣು  ವಿಣ್ ಒಟ್ಟಾಗಿ ಸೃಜಿಸಿತೀ “ಡಿ.ವಿ. ಜಿ”ಯ
ಕನ್ನಡವು ಸಾರಮತಿಯೀತನಿಂದೆಂಬೆ

ಹಿರಿಯರಿಗೆ ಬುದ್ಧಿ ಹೇಳುವ ಕಣ್ಣಾಗಿ ತಾತ್ವಿಕ ಜನಕ್ಕೆ ಹೆಣ್ಣಿನಂತೆ ಸಹಕಾರಿಯಾದ ಶ್ರೇಷ್ಠ ಬುದ್ಧಿಯ ಹೃದಯವಂತ ಎನ್ನುತ್ತಾ ಕನ್ನಡದ ಸಾರಮತಿ ಈ ಡಿವಿಜಿ ಎಂದು ಕೊಂಡಾಡುತ್ತಾರೆ .  

ಕವಿತೆಯ ಕಡೆಯ ಸಾಲುಗಳು

ನಾಡು ನುಡಿ ರೂಢಿಗಳ ತ್ರೈಮೌಲ್ಯಕಳವಡಿಸಿ
ಹೊಸ ನೋಟ ತಂದನೀತ
ಹಾಡು ನುತಿಗಳಿಂದರ್ಚಿವುದಚ್ಚರಿಯೆ
ಈತನಂ ಪ್ರೀತ ಜನ ಜಾತ

ಹೀಗೆ ನುಡಿದಂತೆ ನಡೆದು ನಡೆದಂತೆ ನುಡಿದ ಈ ಭವ್ಯ ವ್ಯಕ್ತಿತ್ವದ ಉನ್ನತ ಮೌಲ್ಯಗಳ ಪ್ರತಿಪಾದಕರನ್ನು ಜನ ಹಾಡು ಸ್ತುತಿಗಳಿಂದ ಆರಾಧಿಸುವುದು ನಿಜಕ್ಕೂ ಆಶ್ಚರ್ಯ ಅಲ್ಲವೇ ಅಲ್ಲ . ಈತ ಸರ್ವಜನರಿಗೂ ಪ್ರಿಯ ಜನರಿಂದಲೇ  ಜನಿಸಿದವ ಎಂದು ಹೇಳುತ್ತಾರೆ .  ನಿಜಕ್ಕೂ ತುಂಬಾ ಸುಂದರ ಸೂಕ್ತ ಸಾಲುಗಳು.  ಈ ಸಮಯದಲ್ಲಿ ಡಿ ವಿ ಜಿಯವರ ಬಗ್ಗೆ ಕೇಳಿದ ಘಟನೆ ನೆನಪಿಸಿಕೊಳ್ಳಲು ಇಷ್ಟಪಡುವೆ.  ಅವರಿಗೆ 1ಲಕ್ಷ ರೂ. ಮೌಲ್ಯದ ಬಹುಮಾನವನ್ನು ವೇದಿಕೆಯ ಮೇಲೆ ಸನ್ಮಾನಿಸಿ ಕೊಟ್ಟ ತಕ್ಷಣವೇ ಅದನ್ನು ಗೋಖಲೆ ಸಂಸ್ಥೆಗೆ ದಾನ ಮಾಡಿದರು.  ಆದರೆ ಮನೆಯಲ್ಲಿ  ಅಹನ್ಯಹನಿ ತಾಪತ್ರಯವಿತ್ತು. ಯಾರಿಗೆ ತಾನೆ ಈ ರೀತಿಯ ಧಾರಾಳ ಮನಸ್ಸು ಬರುತ್ತದೆ.  ಅದಕ್ಕಾಗಿಯೇ ಇವರೆಲ್ಲರನ್ನು ಮಹಾನ್ ಪುರುಷರು ಎನ್ನುವುದು ಸಾಧಕನೆನ್ನುವುದೂ ಹಿರಿಯರೆಂದು ಗೌರವಿಸಿ ಕೊಂಡಾಡುವುದು .

ಮುಂದೆ ತಮ್ಮ ಪ್ರೀತಿಯ ಗೆಳೆಯ ಗೊರೂರು ರಾಮಸ್ವಾಮಿ ಅಯ್ಯಂಗಾರರ ಬಗ್ಗೆ ಕವನವನ್ನು ಬರೆಯುತ್ತಾರೆ ಅವರ ನಿಧನಾನಂತರ .ತಮ್ಮ ಹಾಗೂ ಗೊರೂರರ ಮಧ್ಯೆ ಇದ್ದ ಸ್ನೇಹವನ್ನು ಅನರ್ಘ್ಯ ಸ್ನೇಹ ಎಂದು ಬಣ್ಣಿಸುತ್ತಾ ತಮ್ಮ ಮೊದಲ ಪ್ರಥಮ ಪ್ರಕಟಿತ ಗದ್ಯಕೃತಿ ರಾಮಾಚಾರಿ ನೆನಪು ಪುಸ್ತಕವನ್ನು ರಾಮಸ್ವಾಮಿ ಅಯ್ಯಂಗಾರರು ಪ್ರತಿಮಾಡಿ ಪ್ರಕಟಣೆಗೆ ನೆರವಾದರು ಎಂದು ಸ್ಮರಿಸಿಕೊಳ್ಳುತ್ತಾರೆ .ಅದೇ “ಎಂಬತ್ತರ ನಲುಗು” ಕಾವ್ಯ ಕವನ ಸಂಕಲನದ “ಆಪ್ತ ಗೆಳೆಯನಿಗೆ ಕಂಬನಿ” ತಮ್ಮ ಸ್ನೇಹಿತನಿಗಾಗಿ ಮಿಡಿದ ಹೃದಯದ ಶೋಕಗೀತೆ .

ಗೊರೂರರನ್ನು ಕನ್ನಡಾಂಬೆಯ ಸುಪುತ್ರ ಎಂದು ಹೇಳಿ ಅವರು ಸ್ವರ್ಗಕ್ಕೆ ಸರಿದಾಗ ಕನ್ನಡ ದೇವಿಯ ಮೊಗದ ಮೇಲೆ ನಗೆಯ ಕಳೆ ನಂದಿತು ಎನ್ನುತ್ತಾರೆ.ತಮ್ಮ ಮೈತ್ರಿಯನ್ನು ಮುಂಜಾನೆಯ ಹೊಳೆ ತಂಪಿಗೆ  ಸಂಪಿಗೆ ಸುರಗಿ ಜಾಲಾರಿ ಕಂಪಿಗೆ,  ಕಂಪಿನ ಪರಿಮಳಕ್ಕೆ ಹೋಲಿಸುತ್ತಾ ಅವರ ಅಗಲಿಕೆಯನ್ನು ದುಗುಡದಿಂದ ನೆನೆಯುತ್ತಾರೆ .

ಮರಮರಳಿ ಸತ್ತು ಹುಟ್ಟದವರಾರು
ಹುಟ್ಟಿದ ಊರನೆ ಉನ್ನತಿಗೆ
ಏರಿಸಿದೀತನೆ ಪುಣ್ಯವಂತನೈ
ಧನ್ಯನೀತ_ ಪಾತ್ರನು ನುತಿಗೆ
 

ಹುಟ್ಟಿದವರೆಲ್ಲ ಸಾಯಲೇಬೇಕು . ಹುಟ್ಟಿ ಸಾಯುವ ನಡುವೆ ಮಾಡುವ ಕಾರ್ಯಗಳಿಂದ ಮಾತ್ರ  ಜನರ ನೆನಪಿನಲ್ಲಿ ಉಳಿಯುವುದು. ಅಂತಹ ಪುಣ್ಯದ ಕೆಲಸವನ್ನು ಮಾಡಿದವರು ಗೊರೂರರು. ತಮ್ಮ ಹುಟ್ಟಿದ ಹಳ್ಳಿ ಗೊರೂರಿನ ಹೆಸರನ್ನು ಉನ್ನತಿಗೇರಿಸಿ ವಿಶ್ವವಿಖ್ಯಾತವಾಗಿಸಿದವರು. ಆದ್ದರಿಂದ ಅವನು ಪುಣ್ಯವಂತ ಧನ್ಯ ಸ್ತುತ್ಯಾರ್ಹ ಎಂದು ಹೇಳುತ್ತಾರೆ .

ಹೀಗೆ ಪುಣ್ಯದ ಕೆಲಸ ಮಾಡಿ ಪೂರ್ವಕರ್ಮವನ್ನು ಸವಿಸಿದ  ತನ್ನ ಗೆಳೆಯ ಮತ್ತೆ ಮತ್ತೆ ಜನ್ಮಾಂತರದ ಜಾಲಕ್ಕೆ ಸಿಲುಕಿ ಹುಟ್ಟುವವನಲ್ಲ .  ಅಕಸ್ಮಾತ್ ಹಾಗೆ ಜನಿಸಿದರೂ ಸುತ್ತ ಎಲ್ಲ ಜನಕ್ಕೂ ಮುದನೀಡುತ್ತ ಬಾಳುವವ ಎಂದು ಹೇಳುವ ಸಾಲುಗಳಲ್ಲಿ ಗೆಳೆಯನ ಬಗೆಯ ಅಕ್ಕರೆಯ ಸಕ್ಕರೆ ಎಷ್ಟು ಹದ ಮಿಳಿತವಾಗಿದೆ ನೋಡಿ.

ಹಾಗೆ  ಸಾಗುತ್ತಾ ಹೋದಂತೆ ವೃದ್ಧಾಪ್ಯ ಸವೆಸುತ್ತಾ ಇರುವಾಗ ವೃದ್ಧಾಪ್ಯದ ಚಿಂತೆಗಳ ಜತೆಗೆ ಸಮಕಾಲೀನ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ದುಃಖವು ಜೊತೆಜೊತೆಯಲ್ಲೇ ಬರುತ್ತದೆ . ಈ ಸಂಗತಿಯ ಬಗ್ಗೆ ಶತಾಯುಷಿ ಶ್ರೀ ಪ್ರೊಫೆಸರ್ ವೆಂಕಟಸುಬ್ಬಯ್ಯ ಅವರು ತಮ್ಮ ಭಾಷಣದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ . ಅದನ್ನೇ ಪುತಿನ ಅವರ ಮಾತಿನಲ್ಲೇ ಕೇಳಿ

ಮಿತ್ರ ಹಾನಿ ತಟ್ಟಿಹುದೀ ಮನಕೆ
ಮುಪ್ಪಿನ ಹಾನಿಯ ಬೆಳೆಸುತ್ತಾ
ನಾಲ್ಕಿಪ್ಪತ್ತರ ಗೆಳೆತನದೈಸಿರಿ
ತೀರಿ ಹೋಗೆ ಪರಿತಪಿಸುತ್ತ.

ಅವರಿಬ್ಬರದೂ 4ಇಪ್ಪತ್ತು ಅಂದರೆ ಎಂಬತ್ತು ವರ್ಷದ ಗೆಳೆತನವಂತೆ.  ಹಾಗಾಗಿ ಗೆಳೆಯನ ಅಗಲಿಕೆ ಅವರ ಮನಸ್ಸಿಗೆ ತಟ್ಟಿದ ಘಾಸಿ ಅನೂಹ್ಯ . ಹಾಗಾಗಿಯೇ ಅವರ ಪರಿತಪಿಸುವಿಕೆಯ ಆಳವೂ ಹೆಚ್ಚು.

ನೆನೆವೆನು ನಗುವೆನು ಇನ್ನೆಂದಿಗು ಇವ ಗೋಚರಿಸಲು ಹಂಬಲಿಸುವೆನು
ನನ್ನೊಳಗನರಿತು ಒಲಿದವರೆಲ್ಲರು
ಹೋದರೆತ್ತಲೋ ಹಲುಬುವೆನು

ನಮ್ಮ ಆತ್ಮಕ್ಕೆ ಹತ್ತಿರವಾದ ಮನಸ್ಸಿಗೆ ಪ್ರಿಯರಾದ ನಮ್ಮನ್ನು ಚೆನ್ನಾಗಿ ಅರಿತವರು ಒಬ್ಬೊಬ್ಬರಾಗಿ ನಮ್ಮನ್ನು ಬಿಟ್ಟು ಅಗಲು ತ್ತಿರುತ್ತಾರೆ. ಅವರು ಮತ್ತೆ ಮತ್ತೆ ನಮ್ಮ ಕಣ್ಮುಂದೆ ಬರಲಿ. ಅವರ ಸಾಂಗತ್ಯ ಸಿಗಲಿ ಎಂಬ ಹಂಬಲಿಕೆ ಕನವರಿಕೆ ಅದು ನಿರಂತರ.
ಆದರೆ ಹೋದವರ್ಯಾರೂ ಮರಳಿ ಬಾರರು ಅವರೊಡನೆ ಕಳೆದ ಕ್ಷಣಗಳ  ಸ್ಮರಣೆಯ ಬೆಳಕಲ್ಲೇ ನಾವು ದಿನದೂಡಬೇಕಾಗಿರುತ್ತದೆ.  

ಒಲವಿನ ಗೆಳೆಯನನ್ನು ನೆನೆಸುತ್ತಾ ಸುರಿಸುವ ಕಂಬನಿಯಲ್ಲಿ ಮಿತ್ರತ್ವದ ಗಾಢತೆಯನ್ನು ಅಗಲುವಿಕೆಯ ಪರಿತಾಪವನ್ನು ತುಂಬಾ ಚೆನ್ನಾಗಿ ಬಣ್ಣಿಸಿರುವ ಕವನ ಇದು .

“ಕಲೆಯು ನಿಡಿದು ಕಾಲವೋ ಕಿರಿದು” ಎಂದು ಸಾರುತ್ತಾ “ನಡೆದಷ್ಟೇ ದಾರಿ ಪಡೆದಷ್ಟೇ ಭಾಗ್ಯ” ಎನ್ನುವ ವೇದಾಂತವನ್ನ ಸಾರುವ  ಪುತಿನ ಅವರ ಈ ಸಾಲುಗಳೊಂದಿಗೆ ಒಂದು ಅಲ್ಪವಿರಾಮ.

ಚಿತ್ತವ ಹಗುರಾಗಿಸಿ ಉಫ್ ಎನ್ನುತ ಎತ್ತೆತ್ತಲೋ ಕವಿ ತೂರುವನು
ಹತ್ತುವೆಡೆಯೊಳಚ್ಚಯನೆ  ಸಮೆವನು
ಹೊತ್ತೊಡನಮೃತಕೆ ಹೋರುವನು


Leave a Reply

Back To Top