ತೃಪ್ತಿ ಸುರೇಶ್. ಪಳ್ಳಿ ಅವರ ಕವಿತೆ-‘ಮತ್ತೆ ಮುಗುಳ್ನಕ್ಕಿದೆ’

ಹಸಿರು ಸಿರಿಯು ಯಾಕೊ ಮೌನವಾಗಿದೆ
ತನ್ನ ನೋವನ್ನು ಯಾರಲ್ಲೂ ಹೇಳಲಾಗದೆ
ಆದರೂ ಎದ್ದು ನಿಂತಿದೆ ಕಾಯ ಮರೆಯದೆ
ಮತ್ತೆ ಮುಗುಳ್ನಕ್ಕಿದೆ ಯಾರನ್ನೂ ದೂರದೆ

ಯಾರ ಸ್ವಾರ್ಥಕ್ಕೆ ಬಲಿ ಆಯಿತೊ ಈ ಶರೀರ
ಯಾರ ಬದುಕಿಗೆ ನೀಡಿತೊ ಬೆಚ್ಚಗಿನ ಕುಟೀರ
ತಮ್ಮ ಕೆಲಸವ ಮುಗಿಸಿ ನಡೆದರೆಲ್ಲರೂ ದೂರ
ಆದರೆ ಮತ್ತೆ ಎದ್ದು ನಿಲ್ಲಲು ಪಡೆಯಿತದು ವರ

ಬಿತ್ತರಿಸಿದೆ ನೋಡಿ ಮಾನವ ಬದುಕಿನ ಛಾಯೆ
ಉತ್ತರವ ನೀಡುತ ಚಿಗುರಿದೆ ಪ್ರಕೃತಿ ಮಾಯೆ
ಕುಸಿದು ಬಿದ್ದರೆ ತೋರುವರಾರು ನಿನಗೆ ದಯೆ
ಏಳು ಮೇಲೇಳು ಮುಂದುವರೆಸು ನಿನ್ನ ಕ್ರಿಯೆ

ಕಷ್ಟ ಎಲ್ಲರ ಬದುಕಿನಲ್ಲಿ ಸಹಜ ಬಹುಮಾನ
ನಿತ್ಯ ಸಿಗುವುದೆ ಹೊಗಳಿಕೆಯೆಂಬ ವರಮಾನ
ಸಾಯುವ ಮರಕ್ಕೂ ಸಿಕ್ಕಿತು ಹೊಸ ಜೀವನ
ನಿಸರ್ಗವೆ ಪ್ರೇರಣೆ ನಡೆ ಮುಂದೆ ಓ ಚೇತನ


Leave a Reply

Back To Top